Friday, August 31, 2018

ದೇಶಾದ್ಯಂತ ಎಲ್ಲ ನಿರ್ಮಾಣ ಚಟುವಟಿಕೆಗಳಿಗೆ ಸುಪ್ರೀಂ ತಡೆ

ದೇಶಾದ್ಯಂತ ಎಲ್ಲ ನಿರ್ಮಾಣ ಚಟುವಟಿಕೆಗಳಿಗೆ ಸುಪ್ರೀಂ ತಡೆ

ನವದೆಹಲಿ: ಘನ ತ್ಯಾಜ್ಯ ನಿರ್ವಹಣಾ ನೀತಿ ರೂಪಿಸುವವರೆಗೆ ದೇಶಾದ್ಯಂತ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳು ನಡೆಯದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ.

ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರ, ಮಧ್ಯಪ್ರದೇಶ ಉತ್ತರಾಖಂಡ ಮತ್ತು ಚಂಡೀಗಢ ಸೇರದಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ನಿರ್ಮಾಣ ಚಟುವಟಿಕೆಗಳು ನಡೆಯುವಂತಿಲ್ಲ ಎಂದು 31 ಆಗಸ್ಟ್ 2018ರ ಶುಕ್ರವಾರ ಸುಪ್ರೀಂಕೋರ್ಟ್ ನೀಡಿದ ಆದೇಶ ತಿಳಿಸಿದೆ.

ಯಾವ ರಾಜ್ಯಗಳು ಈವರೆಗೂ ಘನ ತ್ಯಾಜ್ಯ ನಿರ್ವಹಣಾ ನೀತಿಯನ್ನು ರೂಪಿಸಿಲ್ಲವೇ ಅಂತಹ ಯಾವುದೇ ರಾಜ್ಯ ನಿರ್ಮಾಣ ಚಟುವಟಿಕೆ ನಡೆಸುವಂತಿಲ್ಲ ಎಂದು ನ್ಯಾಯಮೂರ್ತಿ ಮದನ್ ಬಿ. ಲೋಕೂರ್ ನೇತೃತ್ವದ ಸುಪ್ರೀಂಕೋರ್ಟ್ ಪೀಠ ಹೇಳಿತು.

ಘನತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಸರ್ಕಾರಗಳು ಅನಾಸಕ್ತಿ ತೋರುತ್ತಿರುವ ಬಗ್ಗೆ ಗರಂ ಆದ ಸುಪ್ರೀಂಕೋರ್ಟ್ ಈ ಕಠಿಣ ಕ್ರಮ ಕೈಗೊಂಡಿದೆ.

ಎಲ್ಲ ರೀತಿಯ ನಿರ್ಮಾಣ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ ಸುಪ್ರೀಂಕೋರ್ಟ್ ಪೀಠ ಮಧ್ಯಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ ಮತ್ತು ಚಂಡೀಗಢ ಈ ನಾಲ್ಕು ರಾಜ್ಯಗಳಿಗೆ ಪೀಠದ ಆದೇಶ ಪಾಲಿಸದೇ ಇದ್ದುದಕ್ಕಾಗಿ ಮತ್ತು ಘನ ತ್ಯಾಜ್ಯ ನಿರ್ವಹಣಾ ನೀತಿ ರೂಪಿಸದೇ ಇದ್ದುದಕ್ಕಾಗ ತಲಾ 3 ಲಕ್ಷ ರೂಪಾಯಿಗಳ ದಂಡ ಮತ್ತು ಪ್ರಕರಣದಲ್ಲಿ ವಕೀಲರ ಮೂಲಕ ಪ್ರತಿನಿಧಿಸದೇ ಇದ್ದುದಕ್ಕಾಗಿ ಆಂಧ್ರಪ್ರದೇಶಕ್ಕೆ 5 ಲಕ್ಷ ರೂಪಾಯಿಗಳ ದಂಡ ವಿಧಿಸಿತು.

ಪ್ರಕರಣದ ಮುಂದಿನ ವಿಚಾರಣೆಯನ್ನು ಪೀಠವು ಅಕ್ಟೋಬರ್ 9ಕ್ಕೆ ನಿಗದಿ ಪಡಿಸಿತು.

No comments:

Post a Comment