Wednesday, August 22, 2018

ಕೊಡಗು ಸಂಪರ್ಕಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಿ


ಕೊಡಗು ಸಂಪರ್ಕಕ್ಕೆ ಇಚ್ಛಾಶಕ್ತಿ ಪ್ರದರ್ಶಿಸಿ


ಪ್ರಾಕೃತಿಕ ಮುನಿಸೋ ಅಥವಾ ನಮ್ಮದೇ ಸ್ವಯಂಕೃತಾಪರಾಧವೋ ವಿಶ್ಲೇಷಿಸುತ್ತಾ ಕೂರುವ ಸಮಯ ಇದಲ್ಲ. ಜಲಪ್ರಳಯಕ್ಕೆ ಆಹುತಿಯಾಗಿರುವ ಕೊಡಗಿನಲ್ಲಿ ಮನೆಗಳ ಜೊತೆಗೆ ಬದುಕನ್ನೂ ಕಟ್ಟಬೇಕಿದೆ. ಭೂ ಕುಸಿತದ ದೊಡ್ಡ ಬಲಿಪಶು ಮಂಗಳೂರು-ಮಡಿಕೇರಿ ರಾಜ್ಯ ಹೆದ್ದಾರಿ. ಆದರೆ ಈಗ  ಸೆಕೆಂಡ್ ಗೇರ್ ನಲ್ಲಿ ಡ್ರೈವ್ ಮಾಡುತ್ತಾ ಘಾಟ್ ಏರುತ್ತಿದ್ದ, ನ್ಯೂಟ್ರಲ್ ಗೇರ್ ನಲ್ಲಿ ಘಾಟ್ ಇಳಿಯುತ್ತಿದ್ದ ದಿನಗಳು ಮತ್ತೆ ಬರುತ್ತವೋ ಇಲ್ಲವೋ ಗೊತ್ತಿಲ್ಲ. ಅಷ್ಟರ ಮಟ್ಟಿಗೆ ಸರಿಪರಿಸಲಾಗದ ಹಂತವನ್ನು ರಾಜ್ಯ ಹೆದ್ದಾರಿ ತಲುಪಿಬಿಟ್ಟಿದೆ. ಸಂಪಾಜೆ  ಘಾಟ್ ಉದ್ದಕ್ಕೂ ಬರುವ ಮದೆನಾಡು, ಜೋಡುಪಾಲ, ದೇವರಕೊಲ್ಲಿ, ಕೊಯನಾಡು, ಸಂಪಾಜೆ, ಚೆಂಬು  ಮತ್ತು ಪೆರಾಜೆ ಭಾಗದ ಜನರು ಈಗ ವಿಚಿತ್ರ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

ಭೌಗೋಳಿಕವಾಗಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ  ಭಾಗದ  ಜನರು ಈಗ ಭೂ ಕುಸಿತದಿಂದಾಗಿ ಕೊಡಗು ಜಿಲ್ಲೆಯಿಂದ ಬೇರ್ಪಟ್ಟಂತಹ ಸ್ಥಿತಿಯಲ್ಲಿದ್ದಾರೆ. ವಾಣಿಜ್ಯ ವಹಿವಾಟಿಗೆ ಪಕ್ಕದ ಸುಳ್ಯ ತಾಲೂಕನ್ನು ನೆಚ್ಚಿಕೊಂಡಿದ್ದರೂ  ಉಳಿದ ಪ್ರತೀ ಕೆಲಸಕ್ಕೂ ತಾಲೂಕು ಮತ್ತು ಜಿಲ್ಲಾ ಕೇಂದ್ರವಾದ ಮಡಿಕೇರಿಗೆ ಬರಲೇಬೇಕಿದೆ.‌ ಆದರೆ ಸುಲಭವಾಗಿ ಮುಕ್ಕಾಲು ಗಂಟೆಯಲ್ಲಿ ತಲುಪುತ್ತಿದ್ದ ಮಾರ್ಗವೇ ಇಲ್ಲದಾಗಿ ಹೋಗಿದೆ.

ಇಷ್ಟೆಲ್ಲಾ ಹೇಳುವುದಕ್ಕೆ ಕಾರಣವೂ ಇದೆ. ಭಾಗದ ಮಂದಿ ಬಹಳಷ್ಟು ಜನ ದಿನನಿತ್ಯದ ವಹಿವಾಟಿನ ಜೊತೆಗೆ ಸರ್ಕಾರಿ ನೌಕರರು, ಖಾಸಗಿ ನೌಕರರು ಮತ್ತು ವಿದ್ಯಾರ್ಥಿಗಳು ಪ್ರತಿ ನಿತ್ಯ ಮಡಿಕೇರಿಗೆ ಬಂದು ಹೋಗುತ್ತಿದ್ದವರು. ಆದರೆ ರಸ್ತೆ ಹಾಳಾಗಿರುವ ಸ್ಥಿತಿಯನ್ನು ನೋಡಿ ಇವರೆಲ್ಲರೂ ಈಗ ತಲೆಯ ಮೇಲೆ ಕೈ ಹೊತ್ತು ಕೂರುವಂತಾಗಿದೆ. ರಾಜ್ಯ  ಸರ್ಕಾರದ ಪ್ರಕಾರ ಸುಳ್ಯ, ಸಂಪಾಜೆ ಭಾಗದಿಂದ ಮಡಿಕೇರಿ ತಲುಪಲು ಇದೊಂದೇ ಮಾರ್ಗ. ಆದರೆ ಸರ್ಕಾರಕ್ಕೆ, ಲೋಕೋಪಯೋಗಿ ಇಲಾಖೆಯ ಆದಿಕಾರಿಗಳಿಗೆ ತಿಳಿಯದೇ ಇರುವ ಎರಡು ಮೂರು ರಸ್ತೆ ಮಾರ್ಗಗಳಿವೆ. ಅದನ್ನು ಸಂಚಾರ ಯೋಗ್ಯವನ್ನಾಗಿಸಿದರೆ  ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದೇ ವೇತನ ಕಡಿತದ ಭೀತಿಯಲ್ಲಿರುವ ನೌಕರರು, ತರಗತಿಗೆ ಹಾಜರಾಗಲಾರದೇ ಹಾಜರಾತಿ ಕೊರತೆಯ ಭಯದಲ್ಲಿರುವ ವಿದ್ಯಾರ್ಥಿಗಳು ಕೊಂಚ ನಿಟ್ಟುಸಿರು ಬಿಡಬಹುದೇನೋ.

ಆದರೆ ಇದು ಸಾಧ್ಯವಾಗಬೇಕಾದರೆ ಇಲ್ಲಿಸರ್ಕಾರದ ಇಚ್ಛಾಶಕ್ತಿ ಕಾರ್ಯರೂಪಕ್ಕೆ ಬರಲೇಬೇಕಿದೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಹೆಚ್. ಡಿ. ಕುಮಾರಸ್ವಾಮಿ, ಲೋಕೋಪಯೋಗಿ ಸಚಿವರಾದ ಹೆಚ್. ಡಿ. ರೇವಣ್ಣ, ಕೇಂದ್ರ ಸಚಿವರಾದ  ಡಿ.ವಿ. ಸದಾನಂದ ಗೌಡ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ. ಮಹೇಶ್, ಅರಣ್ಯ ಸಚಿವರಾದ  ಆರ್. ಶಂಕರ್, ಮೈಸೂರು ಕೊಡಗು ಸಂಸದರಾದ ಪ್ರತಾಪಸಿಂಹ ಮತ್ತು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಇವರೆಲ್ಲರ ಇಚ್ಛಾಶಕ್ತಿ ಕೆಲಸ ಮಾಡಿದರೆ ಆರು ತಿಂಗಳು ಅಥವಾ ವರ್ಷದ ಬಳಿಕ ಪರಿಹಾರವಾಗಬಹುದಾಗಿರುವ ಸಮಸ್ಯೆಗೆ ತಕ್ಷಣ ಪರಿಹಾರ ದೊರೆಯಲಿದೆ.

ಮಾರ್ಗ 1: ಕಲ್ಲುಗುಂಡಿ - ಬಾಲಂಬಿ- ದಬ್ಬಡ್ಕ- ಚೆಟ್ಟಿಮಾನಿ- ಮಡಿಕೇರಿ ರಸ್ತೆ
ಮಾರ್ಗ 2: ಅರಂತೋಡು-ಮರ್ಕಂಜ- ಎಲಿಮಲೆ- ಸುಬ್ರಮಣ್ಯ- ಕಡಮಕಲ್- ಗಾಳಿಬೀಡು- ಮಡಿಕೇರಿ ರಸ್ತೆ
ಮಾರ್ಗ 3: ಸುಳ್ಯಕಲ್ಲಪ್ಪಳ್ಳಿಪಾಣತ್ತೂರುಕರಿಕೆಭಾಗಮಂಡಲಮಡಿಕೇರಿ ರಸ್ತೆ
ಪೈಕಿ ಕಲ್ಲುಗುಂಡಿ- ಬಾಲಂಬಿ - ದಬ್ಬಡ್ಕ- ಚೆಟ್ಟಿಮಾನಿ ರಸ್ತೆ ಮುಖಾಂತರ ಸುಳ್ಯದಿಂದ ಮಡಿಕೇರಿಗೆ ಇರುವ ದೂರ ಕೇವಲ 72 ಕಿಲೋ ಮೀಟರ್. ಈಗಾಗಲೇ ಮಾರ್ಗದಲ್ಲಿ ಕಲ್ಲುಗುಂಡಿಯಿಂದ ದಬ್ಬಡ್ಕದವರೆಗೂ ಡಾಂಬರ್ ರಸ್ತೆ ಇದ್ದು ಕಾಂತಬೈಲು ಸಮೀಪ  ಅರಣ್ಯ ಇಲಾಖೆಯ ತಕರಾರು ಪಕ್ಕಕ್ಕಿಟ್ಟು ಎರಡು ಕಡೆ ಸಣ್ಣ ಸೇತುವೆಗಳು ನಿರ್ಮಾಣವಾದರೆ ಸುಲಭವಾಗಿ ಚೆಟ್ಟಿಮಾನಿ ಮೂಲಕ  ಮಡಿಕೇರಿಯನ್ನು ಕಾರು, ಜೀಪ್, ವ್ಯಾನ್, ಮಿನಿಬಸ್ ಗಳ ಮುಖಾಂತರ  ಒಂದೂವರೆ ಗಂಟೆಯಲ್ಲಿ ತಲುಪಬಹುದಾಗಿದೆ. ಇಲ್ಲಿ ಸ್ವಲ್ಪ ರಾಜಕೀಯ ಇಚ್ಛಾಶಕ್ತಿ ಕೆಲಸ ಮಾಡಿದರೆ  ಬೇಸಿಗೆಯಲ್ಲಿ ಮಡಿಕೇರಿಯಿಂದ ದಬ್ಬಡ್ಕದವರೆಗೂ ಓಡಾಡುವ ಕೆಎಸ್ ಆರ್ ಟಿಸಿ ಬಸ್ ಫುಲ್ ಟೈಮ್ ಚೆಟ್ಟಿಮಾನಿ ಮಾರ್ಗವಾಗಿ ಓಡಾಡಬಹುದಾಗಿದೆ. ಸಾಲದ್ದಕ್ಕೆ ರಸ್ತೆ ಲೋಕೋಪಯೋಗಿ ರಸ್ತೆಯಾಗಿದ್ದು, ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಮಸ್ಯೆ ಬಗೆಹರಿದರೆ ಜನರ ಸಮಸ್ಯೆಯೂ ಬಗೆಹರಿಯುತ್ತದೆ. ಮಾರ್ಗ ರೆಡಿಯಾದರೆ ಸುಳ್ಯ -ಮಡಿಕೇರಿ ನಡುವಿನ ಪ್ರಯಾಣದ ಅವಧಿ ಕೇವಲ ಒಂದೂವರೆ ಗಂಟೆ.

ಇನ್ನು ಅರಂತೋಡು - ಅಡ್ತಲೆ- ಮರ್ಕಂಜ- ಎಲಿಮಲೆ- ಸುಬ್ರಹ್ಮಣ್ಯ- ಕಡಮಕಲ್ - ಗಾಳಿಬೀಡು - ಮಡಿಕೇರಿ ರಸ್ತೆಯಲ್ಲಿ ಕುಕ್ಕೆಸುಬ್ರಹ್ಮಣ್ಯದವರೆಗೆ ಯಾವುದೇ ಸಮಸ್ಯೆ ಇಲ್ಲ. ಇಲ್ಲಿ ಸುಬ್ರಹ್ಮಣ್ಯದಿಂದ ಕಡಮಕಲ್ ಮತ್ತು ಗಾಳಿಬೀಡು ನಡುವೆ ಅರಣ್ಯ ಇಲಾಖೆ ಅಳವಡಿಸಿರುವ ಗೇಟ್ ತೆರವುಗೊಳಿಸಿ ಇರುವ ರಸ್ತೆಯನ್ನು ಕೊಂಚ ಅಗಲೀಕರಣ ಮಾಡಿದರೆ ಸುಬ್ರಮಣ್ಯದಿಂದ ಮಡಿಕೇರಿಗೆ ಇರುವ ದೂರ ಕೇವಲ 38 ಕಿಲೋ ಮೀಟರ್.

ಇನ್ನು ಮೂರನೇಯ ಮಾರ್ಗವಾಗಿ ಸುಳ್ಯ - ಕಲ್ಲಪ್ಪಳ್ಳಿ, ಪಾಣತ್ತೂರು- ಕರಿಕೆ - ಮಡಿಕೇರಿ ರಸ್ತೆ ಇದೆಯಾದರೂ ಇಲ್ಲಿ ನೂರೈವತ್ತು ಕಿಲೋ ಮೀಟರ್ ಗಳಿಗೂ ಹೆಚ್ಚು ದೂರ ಪ್ರಯಾಣ ಮಾಡಬೇಕಾಗುತ್ತದೆ. ಇದಕ್ಕಿಂತ ಸುಲಭ ಮಾರ್ಗಗಳನ್ನು ಕೂಡಲೇ ಸಂಚಾರ ಯೋಗ್ಯವನ್ನಾಗಿಸಿದರೆ  ಮಂಗಳೂರು- ಮಡಿಕೇರಿ ರಾಜ್ಯ ಹೆದ್ದಾರಿ ರೆಡಿಯಾಗುವವರೆಗೂ ಭಾಗದ ಜನರ ಬವಣೆ ತಪ್ಪಲಿದೆ.

ಇಲ್ಲಿ ಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವರು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಅರಣ್ಯ ಸಚಿವರು, ಸಂಸದರಿಗೆ ಭಾಗದ ರಸ್ತೆಗಳ ಪರಿಚಯ ಹೊಸದಾಗಿ ಮಾಡಿಕೊಡಬೇಕಾಗಬಹುದು. ಆದರೆ ಅಂದಿನ ಕೊಡಗು- ಮಂಗಳೂರು ಸಂಸದರಾಗಿದ್ದ ಇಂದಿನ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರಿಗೆ, ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯನವರಿಗೆ ಮಾರ್ಗಗಳ ಇಂಚಿಂಚೂ ಪರಿಚಯ ಇದೆ‌. ಹೀಗಾಗಿ ಜನತೆಯ ಹಿತದೃಷ್ಟಿಯಿಂದ ಆದಷ್ಟು ಶೀಘ್ರ ಸಂಬಂಧಪಟ್ಟವರು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಇದು ಕೇವಲ ಸಮಸ್ಯೆ ಮಾತ್ರ ಅಲ್ಲ‌. ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಜಲ ಪ್ರವಾಹದಿಂದಾಗಿ ಎದುರಾಗಿರುವ ಸಮಸ್ಯೆಯ ಮತ್ತೊಂದು ಮಜಲು.

(
ಕೊಡಗು ಪರಿಸ್ಥಿತಿಯ ವಿಡಿಯೋಗಳನ್ನು ಗಮನಿಸಿ)

ಕೃಪೆ: ವಿಟ್ಲ ಸುದ್ದಿಗಳು ವಾಟ್ಸ್ ಆಪ್ ಗ್ರೂಪ್

No comments:

Post a Comment