Monday, August 6, 2018

ಇಂದಿನ ಇತಿಹಾಸ History Today ಆಗಸ್ಟ್ 06

ಇಂದಿನ ಇತಿಹಾಸ History Today ಆಗಸ್ಟ್ 06

2018: ನ್ಯೂಯಾರ್ಕ್:  ಪೆಪ್ಸಿಕೊ ಕಂಪೆನಿಯ ಭಾರತೀಯ ಮೂಲದ ಸಿಇಒ ಇಂದ್ರಾ ನೂಯಿ ಅವರು ಅಮೆರಿಕದ ಆಹಾರ ಮತ್ತು ಪಾನೀಯ ತಯಾರಿಕಾ ದೈತ್ಯ ಸಂಸ್ಥೆಯನ್ನು ೧೨ ವರ್ಷ ಮುನ್ನಡೆಸಿದ ಬಳಿಕ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎಂದು ಕಂಪೆನಿಯು ಪ್ರಕಟಿಸಿತು. ೬೨ರ ಹರೆಯದ ನೂಯಿ ಅವರು ಕಂಪೆನಿಯಲ್ಲಿನ ತಮ್ಮ ೨೪ ವರ್ಷಗಳ ಸೇವೆಯ ಬಳಿಕ ಅಕ್ಟೋಬರ್ ೩ರಂದು ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ೨೦೧೯ರ ಆದಿಯವರೆಗೂ ಅವರು ಕಂಪೆನಿಯ ಅಧ್ಯಕ್ಷರಾಗಿ ಮುಂದುವರೆಯುತ್ತಾರೆ.  ಅಧ್ಯಕ್ಷ ರಮೋನ್ ಲಗುವರ್ಟ ಅವರನ್ನು ನೂಯಿ ಅವರ ಉತ್ತರಾಧಿಕಾರಿಯನ್ನಾಗಿ ಆಡಳಿತ ಮಂಡಳಿ ಆಯ್ಕೆ ಮಾಡಿದೆ. ಲಗುವರ್ಟ ಅವರನ್ನು ಆಡಳಿತ ಮಂಡಳಿಗೂ ಆಯ್ಕೆ ಮಾಡಲಾಗಿದೆ.  ‘ಭಾರತದಲ್ಲಿ ಬೆಳೆದ ನಾನು, ಇಂತಹ ಅಸಾಧಾರಣ ಕಂಪೆನಿಯನ್ನು ಮುನ್ನಡೆಸಬಹುದೆಂದು ಊಹೆ ಕೂಡಾ ಮಾಡಿರಲಿಲ್ಲ ಎಂದು ನೂಯಿ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಹೆಚ್ಚು ಪುಷ್ಟಿದಾಯಕ ಉತ್ಪನ್ನಗಳನ್ನು ಮಾಡುವುದರ ಜೊತೆಗೆ ಸುಸ್ಥಿರ ನಿರ್ವಹಣೆಯ ನಮ್ಮ ತತ್ವ ಮತ್ತು ಉದ್ದೇಶದ ಜೊತೆಗೆ ಪರಿಸರದಲ್ಲಿ ನಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ ಮತ್ತು ನಾವು ಸೇವೆ ಸಲ್ಲಿಸುವ ಎಲ್ಲ ಸಮುದಾಯಗಳ ಏಳ್ಗೆ ಸಾಧಿಸುತ್ತಾ ಜನರ ಬದುಕಿನಲ್ಲಿ ಅರ್ಥವತ್ತಾದ ಪರಿಣಾಮ ಬೀರಲು ನಾವು ಶ್ರಮಿಸಿದ್ದೇವೆ’ ಎಂದು ನೂಯಿ ಹೇಳಿದರು.  ‘ಪೆಪ್ಸಿಕೊ ಇಂದು ಅತ್ಯಂತ ಬಲಾಢ್ಯ ಸ್ಥಾನದಲ್ಲಿ ನಿಂತಿದ್ದು, ಉಜ್ವಲ ಭವಿಷ್ಯದೊಂದಿಗೆ ತನ್ನ ಬೆಳವಣಿಗೆಯನ್ನು ಮುಂದುವರೆಸಿದೆ ಎಂದು ಅವರು ನುಡಿದರು.  ಕಂಪೆನಿಯಲ್ಲಿ ೨೨ ವರ್ಷಗಳ ಸೇವೆ ಸಲ್ಲಿಸಿರುವ ಲಗುವರ್ಟ ಅವರು ಕಳೆದ ಸೆಪ್ಟೆಂಬರಿನಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದು, ಜಾಗತಿಕ ಕಾರ್ಯಾಚರಣೆ, ಕಾರ್ಪೋರೇಟ್ ತಂತ್ರ, ಸಾರ್ವಜನಿಕ ನೀತಿ ಮತ್ತು ಸರ್ಕಾರಿ ವ್ಯವಹಾರಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ. ಅದಕ್ಕೂ ಮುನ್ನ ಲಗುವರ್ಟ ಅವರು ಐರೋಪ್ಯ ಮತ್ತು ಸಬ್ ಸಹರಾ ಆಫ್ರಿಕಾ ವಿಭಾಗಗಳ ನಾಯಕತ್ವ ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ನೂಯಿ ನಿರ್ಗಮನ ಬಳಿಕ ಪೆಪ್ಸಿಕೊದ ಇತರ ಹಿರಿಯ ನಾಯಕತ್ವ ತಂಡದಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ ಎಂದು ಕಂಪೆನಿ ತಿಳಿಸಿತು. ಪೆಪ್ಸಿಕೊ ಷೇರು ಬೆಲೆಗಳು ಪ್ರಕಟಣೆ ಬಳಿಕ ಸ್ವಲ್ಪ ಇಳಿದವು ಎಂದು ವರದಿಗಳು ಹೇಳಿವೆ.

2018: ದೇವರಿಯಾ  (ಉ.ಪ್ರ): ಬಿಹಾರದ ಮುಜಾಫ್ಫರಪುರ ಬಾಲಿಕಾ ಧಾಮದಲ್ಲಿ ಬಾಲಕಿಯರ ಲೈಂಗಿಕ ಶೋಷಣೆಯ ಸುದ್ದಿ ಇನ್ನೂ ಹಸಿ ಹಸಿಯಾಗಿರುವಾಗಲೇ ಅದೇ ಮಾದರಿಯಲ್ಲಿ ಬಾಲಕಿಯರನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ ಘಟನೆ ಉತ್ತರ ಪ್ರದೇಶದ ದೇವರಿಯಾ ಪಟ್ಟಣದಲ್ಲೂ ನಡೆದಿರುವುದು ಬೆಳಕಿಗೆ ಬಂದಿತು. ಘಟನೆಗೆ ಸಂಬಂಧಿಸಿದಂತೆ ಬಾಲಿಕಾಧಾಮವನ್ನು ನಡೆಸುತ್ತಿದ್ದ ಗಿರಿಜಾ ತ್ರಿಪಾಠಿ, ಆಕೆಯ ಪತಿ ಮೋಹನ್ ತ್ರಿಪಾಠಿ ಮತ್ತು ಬಾಲಿಕಾಧಾಮದ ಸೂಪರಿಂಟೆಂಡೆಂಟ್ ಕಾಂಚನ್ ಲತಾ - ಈ ಮೂವರನ್ನು ಪೊಲೀಸರು ಬಂಧಿಸಿದರು. ಲೈಂಗಿಕ ಜಾಲದಲ್ಲಿ ಸಿಲುಕಿದ್ದ ೨೪ ಬಾಲಕಿಯರನ್ನು ರಕ್ಷಿಸಲಾಯಿತು. ಬಾಲಿಕಾಧಾಮದಲ್ಲಿದ್ದ ಇನ್ನೂ ೧೮ ಮಂದಿ ಬಾಲಕಿಯರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.  ‘ಸ್ಟೇಷನ್ ರಸ್ತೆಯಲ್ಲಿನ ಮಾ ವಿಂಧ್ಯಾವಾಸಿನಿ ಮಹಿಳಾ ಪ್ರಕಿಶನ್ ಏವಂ ಸಮಾಜ ಸೇವಾ ಸಂಸ್ಥಾನ ಹೆಸರಿನ ಬಾಲಿಕಾ ಆಶ್ರಯಧಾಮದ ಒಟ್ಟು ೨೪ ಬಾಲಕಿಯರನ್ನು ರಕ್ಷಿಸಲಾಗಿದೆ. ಬಾಲಿಕಾ ಧಾಮದಲ್ಲಿ ೪೨ ಮಂದಿ ಬಾಲಕಿಯರಿದ್ದರು. ೧೮ ಮಂದಿ ಕಣ್ಮರೆಯಾಗಿದ್ದಾರೆ. ಬಾಲಿಕಾಧಾಮಕ್ಕೆ ನಾವು ಬೀಗಮುದ್ರೆ ಹಾಕಿದ್ದೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಕನಯ್ ಹೇಳಿದರು. ಬಿಹಾರದ ಮುಜಾಫ್ಫರಪುರ ಬಾಲಿಕಾ ಧಾಮದಲ್ಲಿ ನಡೆದ ಬಾಲಕಿಯರ ಲೈಂಗಿಕ ಶೋಷಣೆ ಪ್ರಕರಣ ಜನಾಕ್ರೋಶಕ್ಕೆ ತುತ್ತಾಗಿರುವ ಹೊತ್ತಿನಲ್ಲೇ ಉತ್ತರ ಪ್ರದೇಶದ ಪ್ರಕರಣ ಬೆಳಕಿಗೆ ಬಂದಿದೆ. ಮುಜಾಫ್ಫರಪುರ ಆಶ್ರಯಧಾಮದಲ್ಲಿನ ೪೨ ಬಾಲಕಿಯರ ಪೈಕಿ ೩೪ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದದ್ದು ವೈದ್ಯಕೀಯ ಪರೀಕ್ಷೆಯಿಂದ ದೃಢ ಪಟ್ಟಿತ್ತು. ಉತ್ತರ ಪ್ರದೇಶದ ಲೈಂಗಿಕ ಶೋಷಣೆ ಪ್ರಕರಣದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಉತ್ತರ ಪ್ರದೇಶ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಸಚಿವ ರೀಟಾ ಬಹುಗುಣ ಜೋಶಿ ಅವರು ’ಬಾಲಿಕಾ ಆಶ್ರಯಧಾಮ ನಡೆಸುತ್ತಿದ್ದ ಸರ್ಕಾರೇತರ ಸಂಘಟನೆಯ (ಎನ್ ಜಿಒ) ಮಾನ್ಯತೆಯನ್ನು ಒಂದು ವರ್ಷದ ಹಿಂದೆಯೇ ರದ್ದು ಪಡಿಸಲಾಗಿತ್ತು ಮತ್ತು ಅದಕ್ಕೆ ಒದಗಿಸಲಾಗುತ್ತಿದ್ದ ಹಣಸಹಾಯವನ್ನೂ ನಿಲ್ಲಿಸಲಾಗಿತ್ತು. ಈವರೆಗೂ ಅದು ಊರ್ಜಿತದಲ್ಲಿ ಇದ್ದದ್ದು ಹೇಗೆ ಮತ್ತು ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.  ದೇವರಿಯಾ ಪಟ್ಟಣದ ಬಾಲಿಕಾ ಆಶ್ರಯಧಾಮದ ೧೦ರ ಹರೆಯದ ಬಾಲಕಿಯೊಬ್ಬಳು ಅಲ್ಲಿಂದ ತಪ್ಪಿಸಿಕೊಂಡು ಪರಾರಿಯಾದ ಬಳಿಕ ಅಲ್ಲಿ ನಡೆಯುತ್ತಿರುವ ಲೈಂಗಿಕ ಶೋಷಣೆಯ ವಿವರಗಳು ಬೆಳಕಿಗೆ ಬಂದಿವೆ. ಆಕೆ ಮಹಿಳಾ ಪೊಲೀಸ್ ಠಾಣೆಗೆ ಬಂದು ಆಶ್ರಯಧಾಮದ ಬಾಲಕಿಯರ ದುರವಸ್ಥ್ತೆಯನ್ನು ಠಾಣೆಯಲ್ಲಿ ವಿವರಿಸಿದ್ದಳು.  ‘ಹಲವಾರು ಬಾರಿ ಬಿಳಿಯ, ಕರಿಯ ಐಷಾರಾಮೀ ಕಾರುಗಳು ಅಲ್ಲಿಗೆ  (ಬಾಲಿಕಾಧಾಮಕ್ಕೆ) ಬರುತ್ತಿದ್ದವು ಮತ್ತು ಬಾಲಕಿಯರನ್ನು ಕಾರಿನಲ್ಲಿ ಒಯ್ಯಲಾಗುತ್ತಿತ್ತು. ಮರುದಿನ ಬೆಳಗ್ಗೆ ಬರುವಾಗ ಅವರು ಅಳುತ್ತಾ ಬರುತ್ತಿದ್ದರು ಎಂದು ಬಾಲಕಿ ಆಪಾದಿಸಿದಳು.  ಪ್ರತಿದಿನವೂ ಸಂಜೆ ೪ ಗಂಟೆ ವೇಳೆಗೆ ಕೆಲವು ವ್ಯಕ್ತಿಗಳು ಮ್ಯಾನೇಜರ್ ಜೊತೆಗೆ ಬಂದು ಕೆಲವು ಬಾಲಕಿಯರನ್ನು ಕರೆದುಕೊಂಡು ಹೋಗುತ್ತಿದ್ದರು ಎಂದು ಬಾಲಕಿ ಪೊಲೀಸರಿಗೆ ತಿಳಿಸಿರುವುದಾಗಿ ದೇವರಿಯಾ ಪೊಲೀಸ್ ವರಿಷ್ಠಾಧಿಕಾರಿ ನುಡಿದರು.  ದೇವರಿಯಾ ಬಾಲಕಿಯರ ಆಶ್ರಯಧಾಮದ ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಣೆ ನೀಡಿರುವ ೧೦ರ ಹರೆಯದ ಬಾಲಕಿ ಬಿಹಾರದ ಬೆಟ್ಟಯ್ಯ ಪಟ್ಟಣದವಳಾಗಿದ್ದು, ಸಹಿಸಲಾಗದ ಕೆಲಸದ ಹೊರೆಯಿಂದ ಬೇಸತ್ತು ತಾನು ಅಲ್ಲಿಂದ ತಪ್ಪಿಸಿಕೊಂಡಿರುವುದಾಗಿ ಆಕೆ ಪೊಲೀಸರಿಗೆ ತಿಳಿಸಿದಳು. ಆಶ್ರಯಧಾಮವನ್ನು ನಡೆಸುತ್ತಿದ್ದ ಗಿರಿಜಾ ತ್ರಿಪಾಠಿ, ಆಕೆಯ ಪತಿ ಮೋಹನ್ ತ್ರಿಪಾಠಿ ಮತ್ತು ಸೂಪರಿಂಟೆಂಡೆಂಟ್ ಕಾಂಚನ್ ಲತಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಏನಿದ್ದರೂ ಗಿರಿಜಾ ತ್ರಿಪಾಠಿ ವರದಿಗಾರರ ಜೊತೆ ಮಾತನಾಡುತ್ತಾ ಎಲ್ಲ ಆರೋಪಗಳನ್ನೂ ನಿರಾಕರಿಸಿದರು. ಕಳೆದ ಮೂರು ವರ್ಷಗಳಿಂದ ಬರಬೇಕಾದ ಹಣಕಾಸಿನ ನೆರವು ಬಂದಿಲ್ಲ. ಆದ್ದರಿಂದ ಕೈಯಿಂದಲೇ ಹಣ ವೆಚ್ಚ ಮಾಡಿ ಬಾಲಿಕಾಧಾಮವನ್ನು ನಡೆಸುತ್ತಿದ್ದೇನೆ ಎಂದು ಆಕೆ ಪ್ರತಿಪಾದಿಸಿದರು.  ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೇವರಿಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಲಕ್ನೋದಲ್ಲಿನ ಉತ್ತರ ಪ್ರದೇಶ ಪೊಲೀಸ್ ಕೇಂದ್ರ ಕಚೇರಿ ನಿರ್ದೆಶನ ನೀಡಿತು. ‘ಪ್ರಕರಣದ ಸಮಗ್ರ ತನಿಖೆ ನಡೆಸಲಾಗುವುದು ಮತ್ತು ಸ್ಥಳೀಯ ಆಡಳಿತ ತತ್ ಕ್ಷಣವೇ ಕ್ರಮ ಆರಂಭಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೂ ಸಹಕರಿಸುತ್ತಿದೆ. ಕಾನೂನಿಗೆ ಅನುಗುಣವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಎಡಿಜಿ ಆನಂದ ಕುಮಾರ್ ಲಕ್ನೋದಲ್ಲಿ ತಿಳಿಸಿದರು.  ಮಹಿಳಾ ವೈದ್ಯರಿಂದ ಮಕ್ಕಳ ಪರೀಕ್ಷೆ ನಡೆಸಲಾಗುವುದು ಮತ್ತು ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸಲಾಗುವುದು ಎಂದು ಆನಂದ ನುಡಿದರು.  ಸಿಬಿಐ ತನಿಖೆಯಲ್ಲಿ ಅಕ್ರಮಗಳು ಕಂಡು ಬಂದಿದ್ದ ಹಿನ್ನೆಲೆಯಲ್ಲಿ ಆಶ್ರಯಧಾಮದ ನೋಂದಣಿಯನ್ನು ೨೦೧೭ರ ಜೂನ್ ತಿಂಗಳಲ್ಲಿ ಅಮಾನತುಗೊಳಿಸಲಾಗಿತ್ತು. ಅಲ್ಲಿದ್ದ ಬಾಲಕಿಯರನ್ನು ಬೇರೆ ಕಡೆಗೆ ಸ್ಥಳಾಂತರಿಸುವಂತೆ ಆಡಳಿತವು ಆದೇಶವನ್ನೂ ನೀಡಿತ್ತು. ಆದರೆ ಮ್ಯಾನೇಜರ್ ಬಾಲಿಕಾಧಾಮವನ್ನು ನಡೆಸುತ್ತಿದ್ದರು ಮತ್ತು ನೋಂದಣಿ ಅಮಾನತು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ಕೊಟ್ಟಿದೆ ಎಂದು ಹೇಳಿದರು. ಕೋರ್ಟ್ ಆದೇಶದ ಪ್ರತಿಯನ್ನು ಹಾಜರು ಪಡಿಸಲು ಆಕೆ ಅಶಕ್ತಳಾದಾಗ, ಆಡಳಿತವು ಬಾಲಕಿಯರನ್ನು ಸ್ಥಳಾಂತರಿಸಲು ತಂಡವೊಂದನ್ನು ಕಳುಹಿಸಿತು. ಆದರೆ ಮ್ಯಾನೇಜರ್ ಸಹಕರಿಸಲಿಲ್ಲ ಎಂದು ಆನಂದ ಹೇಳಿದರು.
ಬಂಧಿತ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೫೩ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನುಡಿದರು. ಆಶ್ರಯಧಾಮದಲ್ಲಿ ೪೨ ಮಂದಿ ಬಾಲಕಿಯರು ಇದ್ದ ಬಗೆಗಿನ ದಾಖಲೆಗಳಿವೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ನುಡಿದರು.  ಪ್ರಕರಣವು ವಿಪಕ್ಷಗಳಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ಧ ದಾಳಿಗೆ ಹೊಸ ಅಸ್ತ್ರವನ್ನು ಒದಗಿಸಿದೆ. ಕಾಂಗ್ರೆಸ್ ಪಕ್ಷವು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರೆ,ಸಮಾಜವಾದಿ ಪಕ್ಷವು ಹಾಲಿ ಸರ್ಕಾರವು ಮಹಿಳೆಯರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಗಂಭೀರವಾಗಿಲ್ಲ ಎಂದು ದೂರಿತು.

2018: ನವದೆಹಲಿ: ರಾಷ್ಟ್ರದಲ್ಲಿ ನೌಕರಿ ಅಭಾವ ಇದೆ ಎಂಬುದಾಗಿ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನೀಡಿದ ಹೇಳಿಕೆಯ ಜಾಡು ಹಿಡಿದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.  ‘ಮೀಸಲಾತಿ ಕೊಡಬಹುದು, ಆದರೆ ನೌಕರಿ ಪ್ರಮಾಣವೇ ಕಡಿಮೆಯಾಗುತ್ತಿರುವುದರಿಂದ ಮೀಸಲಾತಿಯು ನೌಕರಿಯ ಖಾತರಿ ನೀಡುವುದಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದರು.  ಸಚಿವ ಗಡ್ಕರಿ ಅವರನ್ನು ’ಅದ್ಭುತ ಪ್ರಶ್ನೆ ಕೇಳಿದ್ದಕ್ಕಾಗಿ ವ್ಯಂಗ್ಯವಾಗಿ ತಿವಿದ ರಾಹುಲ್ ಗಾಂಧಿ ಅವರು, ’ಅತ್ಯದ್ಭುತ ಪ್ರಶ್ನೆ ಗಡ್ಕರಿ ಜಿ. ಪ್ರತಿಯೊಬ್ಬ ಭಾರತೀಯನೂ ಇದೇ ಪ್ರಶ್ನೆ ಕೇಳುತ್ತಿದ್ದಾನೆ ಎಂದು ಟ್ವೀಟ್ ಮಾಡಿ ಅದಕ್ಕೆ ಗಡ್ಕರಿ ಹೇಳಿಕೆ ಕುರಿತ ವರದಿಯನ್ನು ಜೋಡಿಸಿದರು. ಮೀಸಲಾತಿಗಾಗಿ ಒತ್ತಾಯಿಸಿ ಮಹಾರಾಷ್ಟ್ರದಲ್ಲಿ ಮರಾಠಾ ಸಮುದಾಯ ಮತ್ತು ಇತರ ಸಮುದಾಯಗಳು ನಡೆಸುತ್ತಿರುವ ಚಳವಳಿ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಿತಿನ್ ಗಡ್ಕರಿ ಅವರು ಈ ಹೇಳಿಕೆ ನೀಡಿದ್ದರು.  ‘ಮೀಸಲಾತಿ ಕೊಟ್ಟೆವೆಂದೇ ಭಾವಿಸಿ. ಆದರೆ ನೌಕರಿಗಳೇ ಇಲ್ಲ. ಮಾಹಿತಿ ತಂತ್ರಜ್ಞಾನದ ಪರಿಣಾಮವಾಗಿ ಬ್ಯಾಂಕುಗಳಲ್ಲಿ ಉದ್ಯೋಗಗಳೇ ಕಡಿಮೆಯಾಗಿವೆ. ಸರ್ಕಾರಿ ನೇಮಕಾತಿಗಳೂ ಸ್ಥಗಿತಗೊಂಡಿವೆ. ಕೆಲಸ ಎಲ್ಲಿದೆ?’ ಎಂದು ಗಡ್ಕರಿ ಪ್ರಶ್ನಿಸಿದ್ದರು.  ‘ಮೀಸಲಾತಿಗೆ ಸಂಬಂಧಿಸಿದ ಸಮಸ್ಯೆ ಏನೆಂದರೆ, ಹಿಂದುಳಿದಿರುವಿಕೆ ರಾಜಕೀಯ ಹಿತಾಸಕ್ತಿಯಾಗುತ್ತಿರುವುದು. ಪ್ರತಿಯೊಬ್ಬರೂ ನಾನು ಹಿಂದುಳಿದವ ಎಂದು ಹೇಳುತ್ತಿದ್ದಾರೆ. ಬಿಹಾರದಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರು ಪ್ರಬಲರಾಗಿದ್ದಾರೆ. ಅವರು ರಾಜಕೀಯದಲ್ಲಿ ಪ್ರಾಬಲ್ಯ ಗಳಿಸುತ್ತಾರೆ ಮತ್ತು ಅವರು ತಾವು ಹಿಂದುಳಿದವರು ಎಂದು ಹೇಳುತ್ತಾರೆ ಎಂದು ಹಿರಿಯ ಬಿಜೆಪಿ ನಾಯಕ  ಹೇಳಿದ್ದರು.  ‘ಆದ್ದರಿಂದ ಒಂದು ಚಿಂತನೆ ಏನೆಂದರೆ ಬಡ ವ್ಯಕ್ತಿ ಬಡವನೇ, ಆತನಿಗೆ ಜಾತಿ, ಮತ, ಭಾಷೆ ಇಲ್ಲ. ಯಾವುದೇ ಧರ್ಮವಾಗಿರಲಿ, ಮುಸ್ಲಿಮನಿರಲಿ, ಹಿಂದು ಇರಲಿ ಅಥವಾ ಮರಾಠಾ (ಜಾತಿ) ಇರಲಿ, ಎಲ್ಲ ಸಮುದಾಯಗಳಲ್ಲೂ ಉಡಲು ಬಟ್ಟೆ, ಉಣ್ಣಲು ಆಹಾರ ಇಲ್ಲದ ಒಂದು ವರ್ಗ ಇದ್ದೇ ಇರುತ್ತದೆ ಎಂದು ಗಡ್ಕರಿ ಹೇಳಿದ್ದರು.  ಪ್ರತಿಯೊಂದು ಸಮುದಾಯದಲ್ಲಿನ ಬಡವರಲ್ಲಿ ಬಡವರನ್ನು ನಾವು ಪರಿಗಣಿಸಬೇಕು ಎಂಬ ಚಿಂತನೆಯೂ ಇದೆ ಎಂದೂ ಗಡ್ಕರಿ ನುಡಿದಿದ್ದರು.

2018: ನವದೆಹಲಿ: ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯಾಗಿ ಸರ್ಕಾರವು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾದಳ (ಸಂಯುಕ್ತ) ಸದಸ್ಯ ಹರಿವಂಶ ನಾರಾಯಣ ಸಿಂಗ್ ಅವರನ್ನು ಸೂಚಿಸಬಹುದು ಎಂದು ಸುದ್ದಿ ಸಂಸ್ಥೆ ವರದಿ ಮಾಡಿತು. ಮಿತ್ರರಾದ ಭಾರತೀಯ ಜನತಾ ಪಕ್ಷ ಮತ್ತು ನಿತೀಶ್ ಕುಮಾರ್ ನಡುವಣ ಬಾಂಧವ್ಯ ಇತ್ತೀಚಿನ ದಿನಗಳಲ್ಲಿ ಹದಗೆಡುತ್ತಿದೆ ಎಂಬ ವರದಿಗಳ ಮಧ್ಯೆ, ಹಿರಿಯ ಪತ್ರಕರ್ತ ಮತ್ತು ೨೦೧೪ರಿಂದ ರಾಜ್ಯಸಭೆಯಲ್ಲಿ ಜನತಾದಳ (ಸಂಯುಕ್ತ) ಸದಸ್ಯರಾಗಿರುವ ಹರಿವಂಶ ನಾರಾಯಣ ಸಿಂಗ್ ಅವರ ಹೆಸರು ರಾಜ್ಯಸಭಾ ಉಪಸಭಾಪತಿ ಸ್ಥಾನಕ್ಕೆ ಕೇಳಿ ಬಂದಿತು.
ವರದಿಗಳ ಪ್ರಕಾರ ತೃಣಮೂಲ ಕಾಂಗ್ರೆಸ್ ಸದಸ್ಯ ಸುಖೇಂದು ಶೇಖರ್ ರಾಯ್ ಅವರು ವಿರೋಧ ಪಕ್ಷಗಳ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಯಿತು. ೨೦೧೨ರಿಂದ ಕಾಂಗ್ರೆಸ್ ನಾಯಕ ಪಿಜೆ ಕುರಿಯನ್ ಅವರು ಹೊಂದಿರುವ ಸ್ಥಾನಕ್ಕೆ ಆಯ್ಕೆಯಾಗಲು ೧೨೩ ಸಂಸತ್ ಸದಸ್ಯರ ಬೆಂಬಲದ ಅಗತ್ಯವಿದೆ.  ಒಂದು ಅವಧಿಯ ಹೊರತಾಗಿ, ಕಾಂಗ್ರೆಸ್ ಪಕ್ಷವೇ ಹೊಂದಿದ್ದ ರಾಜ್ಯಸಭೆಯ ನಂಬರ್ ೨ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಲಿದೆ.

2018: ನವದೆಹಲಿ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್ ಸಿಬಿಸಿ) ಸಾಂವಿಧಾನಿಕ ಸ್ಥಾನಮಾನ ನೀಡುವ ಮಸೂದೆಗೆ ಸಂಸತ್ತು ಈದಿನ ಅಂಗೀಕಾರ ನೀಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ’ಐತಿಹಾಸಿಕ ಎಂಬುದಾಗಿ ಶ್ಲಾಘಿಸಿದರು. ಲೋಕಸಭೆಯು ಮಾಡಿದ ತಿದ್ದುಪಡಿಗಳ ಸಹಿತವಾಗಿ ರಾಜ್ಯಸಭೆಯು ಮಸೂದೆಯನ್ನು ಹಾಜರಿದ್ದ ಸದಸ್ಯರ ಪೈಕಿ ಮೂರನೇ ಎರಡಕ್ಕೂ ಹೆಚ್ಚು ಮತಗಳ ಬಹುಮತದೊಂದಿಗೆ ಅಂಗೀಕರಿಸಿತ್ತು. ಸಂವಿಧಾನ ತಿದ್ದುಪಡಿ ಮಸೂದೆ ಅಂಗೀಕಾರಕ್ಕೆ ಹಾಜರಿರುವ ಸದಸ್ಯರ ಪೈಕಿ ಮೂರನೇ ಎರಡರಷ್ಟು ಮತಗಳು ಇರಲೇಬೇಕು.  ‘ಇದು ನಮ್ಮ ರಾಷ್ಟ್ರಕ್ಕೆ ಚಾರಿತ್ರಿಕ ಘಳಿಗೆ. ಸಂಸತ್ತು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಸಂವಿಧಾನ (೧೨೩ನೇ ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿದೆ. ಇದು ಭಾರತದಾದ್ಯಂತ ಒಬಿಸಿ ಸಮುದಾಯಗಳ ಸಬಲೀಕರಣಕ್ಕೆ ಕಾಣಿಕೆ ನೀಡಲಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದರು. ಮಸೂದೆಯ ಅಂಗೀಕಾರದಿಂದ ಹಿಂದುಳಿದ ವರ್ಗಗಳ ಜನರಿಗೆ ತಮ್ಮ ವಿರುದ್ಧದ ದೌರ್ಜನ್ಯಗಳ ವಿರುದ್ಧ ಹೋರಾಡಲು ಅನುಕೂಲವಾಗುವುದು ಮತ್ತು ಇದು ಅವರಿಗೆ ತ್ವರಿತ ನ್ಯಾಯದ ಖಾತರಿ ನೀಡುವುದು ಎಂದು ಸರ್ಕಾರ ಭಾವಿಸಿದೆ. ಒಬಿಸಿ ಆಯೋಗಕ್ಕೆ ಸಂವಿಧಾನಿಕ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ೧೯೮೦ರಷು ಹಿಂದಿನಿಂದಲೇ ಇತ್ತು.

2018: ನವದೆಹಲಿ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಒದಗಿಸುವ ಮಸೂದೆಗೆ ರಾಜ್ಯಸಭೆ ತನ್ನ ಸರ್ವಾನುಮತದ ಅಂಗೀಕಾರ ನೀಡಿತು. ಈ ಸಂದರ್ಭದಲ್ಲಿ ಹಲವಾರು ಸದಸ್ಯರು ಜಾತಿ ಗಣತಿ ವಿವರಗಳನ್ನು ಬಹಿರಂಗಗೊಳಿಸುವಂತೆ ಮತ್ತು ಅದಕ್ಕೆ ಅನುಗುಣವಾಗಿ ಮೀಸಲಾತಿಯನ್ನು ಅನುಷ್ಠಾನಗೊಳಿಸುವಂತೆ ಸರ್ಕಾರವನ್ನು ಆಗ್ರಹಿಸಿದರು.  ಸಂವಿಧಾನ (೧೨೩ನೇ ತಿದ್ದುಪಡಿ) ಮಸೂದೆ ೨೦೧೭ರ ಮೇಲೆ ನಡೆದ ಚರ್ಚೆಯ ವೇಳೆಯಲ್ಲಿ ಸದಸ್ಯರು ಈ ಬೇಡಿಕೆಯನ್ನು ಮುಂದಿಟ್ಟರು. ಲೋಕಸಭೆಯಲ್ಲಿ ಆಗಸ್ಟ್ ೨ರಂದು ಮಸೂದೆಯನ್ನು ಹೊಸ ಹಾಗೂ ಪರ್‍ಯಾಯ ತಿದ್ದುಪಡಿಗಳೊಂದಿಗೆ ಅಂಗೀಕರಿಸುವ ಮೂಲಕ ಈ ಹಿಂದೆ ರಾಜ್ಯಸಭೆಯಲ್ಲಿ ಮಸೂದೆಗೆ ಮಾಡಲಾಗಿದ್ದ ತಿದ್ದುಪಡಿಗಳನ್ನು ರದ್ದು ಪಡಿಸಲಾಗಿತ್ತು.  ಲೋಕಸಭೆಯಲ್ಲಿ ತರಲಾದ ತಿದ್ದುಪಡಿಗಳ ಸಹಿತವಾಗಿ ಮೇಲ್ಮನೆಯು ಈದಿನ ೧೫೬ ಮತಗಳೊಂದಿಗೆ ಮಸೂದೆಯನ್ನು ಅಂಗೀಕರಿಸಿತು. ಮಸೂದೆಗೆ ವಿರುದ್ಧವಾಗಿ ಶೂನ್ಯಮತಗಳು ಬಿದ್ದವು. ಸದನದಲ್ಲಿ ಹಾಜರಿದ್ದ ಸದಸ್ಯರ ಪೈಕಿ ಮೂರನೇ ಎರಡಕ್ಕಿಂತಲೂ ಹೆಚ್ಚಿನ ಮತಗಳೂ ಸಂವಿಧಾನ ತಿದ್ದುಪಡಿ ಮಾಡಲು ಅಗತ್ಯವಾಗಿದ್ದು, ಈದಿನ ಮಸೂದೆಯ ಪರವಾಗಿ ಹಾಜರಿದ್ದ ಎಲ್ಲ ಸದಸ್ಯರ ಬೆಂಬಲ ಮಸೂದೆಗೆ ಲಭಿಸಿತು.  ಕಳೆದ ವರ್ಷ ಜುಲೈ ೩೧ರಂದು ರಾಜ್ಯಸಭೆಯು ಮಸೂದೆಯಲ್ಲಿ ಸಾಕಷ್ಟು ತಿದ್ದುಪಡಿಗಳನ್ನು ಮಾಡಿ ಕೆಳಮನೆಗೆ ವಾಪಸ್ ಕಳುಹಿಸಿತ್ತು. ಲೋಕಸಭೆಯು ಕಳೆದ ವಾರ ಈ ತಿದ್ದುಪಡಿಗಳಿಗೆ ಪರ್‍ಯಾಯವಾಗಿ ಕೆಲವು ತಿದ್ದು ಪಡಿಗಳನ್ನು ಮತ್ತು ಹೊಸದಾಗಿ ಇನ್ನೂ ಕೆಲವು ತಿದ್ದುಪಡಿಗಳನ್ನು ಮಾಡಿ ಮೂರನೇ ಎರಡಕ್ಕಿಂತಲೂ ಹೆಚ್ಚು ಮತಗಳ ಬೆಂಬಲದೊಂದಿಗೆ ಸರ್ವಾನುಮತದಿಂದ ಅಂಗೀಕರಿಸಿತ್ತು. ಸದನದ ಪರಿಗಣನೆಗಾಗಿ ಮಸೂದೆಯನ್ನು ಈದಿನ ರಾಜ್ಯಸಭೆಯಲ್ಲಿ ಮಂಡಿಸಿದ ಸಮಾಜ ಕಲ್ಯಾಣ ಮತ್ತು ಸಬಲೀಕರಣ ಸಚಿವ ಥಾವರ್ ಚಂದ್ ಗೆಹ್ಲೋಟ್ ಅವರು ’ಮಸೂದೆಯು ಹಿಂದುಳಿದ ವರ್ಗಗಳ ಜನರಿಗೆ ದೌರ್ಜನ್ಯಗಳ ವಿರುದ್ಧ ಹೋರಾಡಲು ನೆರವಾಗುವುದು ಮತ್ತು  ಅವರಿಗೆ ತ್ವರಿತ ನ್ಯಾಯದ ಖಾತರಿ ನೀಡುವುದು ಎಂದು ಹೇಳಿದರು.  ಮಸೂದೆಯು ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರಿಗೆ ನ್ಯಾಯ ಒದಗಿಸುವುದು. ಇದು ಸಮಯದ ಅಗತ್ಯವಾಗಿದೆ ಎಂದು ಸಚಿವರು ನುಡಿದರು.  ವಿರೋಧ ಪಕ್ಷಗಳು ಮುಂದಿಟ್ಟ ಸಲಹೆಗಳನ್ನು ಪ್ರಸ್ತಾಪಿಸಿದ ಸಚಿವರು ’ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವು (ಎನ್ ಸಿಬಿಸಿ) ಮಹಿಳಾ ಪ್ರಾತಿನಿಧ್ಯವನ್ನೂ ಹೊಂದಿರುತ್ತದೆ ಎಂದು ಹೇಳಿದರು.  ಅದು ರಾಜ್ಯ ಸರ್ಕಾರಗಳ ಹಕ್ಕುಗಳ ಮೇಲೆ ಅತಿಕ್ರಮಣ ಮಾಡುವುದಿಲ್ಲ ಏಕೆಂದರೆ ರಾಜ್ಯಗಳು ತಮ್ಮದೇ ಆದ ಹಿಂದುಳಿದ ವರ್ಗಗಳ ಆಯೋಗಗಳನ್ನು ಹೊಂದಿರುತ್ತವೆ ಎಂದು ಸಚಿವರು ವಿವರಿಸಿದರು. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ರಾಜ್ಯ ಸರ್ಕಾರಗಳ ಜೊತೆ ಯಾವುದೇ ಸಂಬಂಧ ಇರುವುದಿಲ್ಲ. ಅದು ಕೇಂದ್ರ ಸರ್ಕಾರದ ಜೊತೆಗೆ ಮಾತ್ರವೇ ಸಂಬಂಧ ಹೊಂದಿರುತ್ತದೆ ಎಂದು ಅವರು ನುಡಿದರು.  ರಾಜ್ಯ ಸರ್ಕಾರಗಳು ಒಬಿಸಿ ಜನರ ತನ್ನದೇ ಜಾತಿ ಪಟ್ಟಿಯನ್ನು ಹೊಂದಿರುತ್ತದೆ, ಕೇಂದ್ರವು ತನ್ನದೇ ಪಟ್ಟಿಯನ್ನು ಹೊಂದಿರುತ್ತದೆ. ಎನ್ ಸಿಬಿಸಿಯು ನಿರ್ದಿಷ್ಟ ಜಾತಿಯನ್ನು ಪಟ್ಟಿಗೆ ಸೇರಿಸುವ ಅಥವಾ ಕಿತ್ತುಹಾಕುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಮಾತ್ರವೇ ಶಿಫಾರಸು ಮಾಡುತ್ತದೆ ಎಂದು ಸಚಿವರು ಹೇಳಿದರು.  ‘ಇದು ಅತ್ಯಂತ ಮಹತ್ವದ ವಿಷಯ. ಇತರ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಬೇಕೆಂಬ ಬೇಡಿಕೆ ೧೯೮೦ರಷ್ಟು ಹಿಂದಿನಿಂದಲೇ ಇತ್ತು. ಸಂಸತ್ತು ಹಲವಾರು ಬಾರಿ ಈ ವಿಷಯದ ಬಗ್ಗೆ ಚರ್ಚೆಯನ್ನೂ ನಡೆಸಿತ್ತು. ಸ್ಥಾಯೀ ಸಮಿತಿಯಲ್ಲೂ ಈ ಬಗ್ಗೆ ಚರ್ಚೆಯಾಗಿತ್ತು ಎಂದು ನುಡಿದ ಗೆಹ್ಲೋಟ್, ಮಸೂದೆಯನ್ನು ತುರ್ತಾಗಿ ಅಂಗೀಕರಿಸುವಂತೆ ಸದಸ್ಯರನ್ನು ಆಗ್ರಹಿಸಿದರು.  ಸಂಸತ್ತು ಅಂಗೀಕರಿಸಿದರೆ, ಸರ್ಕಾರವು ತತ್ ಕ್ಷಣವೇ ಆಯೋಗವನ್ನು ರಚಿಸುವುದು ಎಂದೂ ಸಚಿವರು ಹೇಳಿದರು.
 2018: ನವದೆಹಲಿ : ಸಂವಿಧಾನದ 35 ವಿಧಿಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲಿನ ವಿಚಾರಣೆಯನ್ನು 6 ಆಗಸ್ಟ್ 2018 ಸೋಮವಾರ ಸುಪ್ರೀಂ ಕೋರ್ಟ್ ಆಗಸ್ಟ್ 27ಕ್ಕೆ ಮುಂದೂಡಿತು.ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳು ಇರುವ ಪೀಠ ಆಲಿಸಬೇಕಾಗಿದೆ. ಈದಿನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಲಭ್ಯರಿಲ್ಲ. ಆದ್ದರಿಂದ ಪೀಠವು ಪ್ರಕರಣದ   ಅಹವಾಲು ಆಲಿಸಲಾಗದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹೇಳಿದರು. ಸಂವಿಧಾನದ 35 ವಿಧಿಯ ಸಾಂವಿಧಾನಿಕ ಸಿಂಧುತ್ವ ಕುರಿತಾಗಿ ಸುಪ್ರೀಂ ಕೋರ್ಟಿನಿಂದ ಇವತ್ತು ಯಾವ ರೀತಿಯ ತೀರ್ಪು ಬರುವುದೆಂಬ ಬಗ್ಗೆ ಇಡಿಯ ದೇಶವೇ ಕಾತರದಿಂದಿತ್ತು.  ಸಂವಿಧಾನದ 35 ವಿಧಿಯು ಜಮ್ಮು ಕಾಶ್ಮೀರದ "ಕಾಯಂ ನಿವಾಸಿಗಳ'' ವ್ಯಾಖ್ಯಾನ ಮಾಡುವ ಅಧಿಕಾರವನ್ನು ರಾಜ್ಯವಿಧಾನ ಸಭೆಗೆ ನೀಡುತ್ತದೆ ಮಾತ್ರವಲ್ಲದೆ ಕಾಯಂ ನಿವಾಸಿಗಳಿಗೆ ವಿಶೇಷ ಹಕ್ಕನ್ನು ಕೂಡ ನೀಡುತ್ತದೆ.  ಈದಿನ ವಿಚಾರಣೆ ಕೈಗೊಳ್ಳಬೇಕಿದ್ದ ಸುಪ್ರಿಂ ಕೋರ್ಟಿನ ಮೂವರು ನ್ಯಾಯಮೂರ್ತಿಗಳ ಪೈಕಿ ಒಬ್ಬರು ಗೈರಾಗಿರುವ ಕಾರಣ, ವಿಚಾರಣೆಯನ್ನು ಪೀಠವು ಆಗಸ್ಟ್ 27ಕ್ಕೆ ನಿಗದಿ ಪಡಿಸಿತು.  

2017: ಶ್ರೀನಗರ: ಅಮರನಾಥ ಯಾತ್ರಿಗಳ ಮೇಲಿನ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಂಕಿತ ಉಗ್ರರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಮ್ಮು ಕಾಶ್ಮೀರದ ವಿಶೇಷ ತನಿಖೆ ತಂಡ ಎಲ್‌ಇಟಿ ಉಗ್ರ ಸಂಘಟನೆಗೆ ಸೇರಿದ ಮೂವರು ಉಗ್ರರನ್ನು ಬಂಧಿಸಿದೆ ಎಂದು  ಜಮ್ಮು ಕಾಶ್ಮೀರ ಪೊಲೀಸ್‌ ಮಹಾ ನಿರ್ದೇಶಕ ಮುನೀರ್‌ ಖಾನ್‌ ತಿಳಿಸಿದರು. ಈ ಬಂಧಿತ ಆರೋಪಿಗಳು  ಭಯೋತ್ಪಾದಕರಿಗೆ ನೆರವು ನೀಡಿದ್ದರು. ಇವರ ವಿರುದ್ಧದ ವಿಚಾರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಮುನೀರ್‌ ಖಾನ್‌ ತಿಳಿಸಿದರು. ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರು ಇದ್ದ ಬಸ್‌ನ ಮೇಲೆ ಜುಲೈ9 ರಾತ್ರಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ 15 ಜನರು ಮೃತರಾಗಿದ್ದರು.
2017: ಲಖನೌ: ಅನ್ಸರ್‌ಉಲ್ಲಾ ಬಾಂಗ್ಲಾ ಟೀಮ್‌ (ಎಬಿಟಿ) ಭಯೋತ್ಪಾದಕ ಸಂಘಟನೆಗೆ ಸೇರಿದ ಬಾಂಗ್ಲಾದೇಶ
ಮೂಲದ ಶಂಕಿತ ಉಗ್ರ ಅಬ್ದುಲ್ಲಾ ಎಂಬಾತನನ್ನು ಭಯೋತ್ಪಾದಕ ನಿಗ್ರಹ ಪಡೆಯ (ಎಟಿಎಸ್‌) ಪೊಲೀಸರು ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಬಂಧಿಸಿದರು. ಅಬ್ದುಲ್ಲಾ ಒಂದು ತಿಂಗಳಿಂದ ಮುಜಾಫರ್‌ನಗರದ ಚರ್ತವಾಲ್‌ ಪ್ರದೇಶದಲ್ಲಿ ವಾಸಿಸುತ್ತಿದ್ದ. ಇದಕ್ಕೂ ಮುನ್ನಾ ಈತ 2011ರಿಂದ ಸಹರಾನ್‌ಪುರದಲ್ಲಿ ವಾಸವಿದ್ದ. ನಕಲಿ ದಾಖಲೆಗಳನ್ನು ನೀಡಿ ಈತ ಆಧಾರ್‌ ಕಾರ್ಡ್‌ ಮತ್ತು ಪಾಸ್‌ಪೋರ್ಟ್ ಅನ್ನೂ ಮಾಡಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದರು. ಅಬ್ದುಲ್ಲಾ ಬಂಧನದ ಬಳಿಕ ಭಾರತದಲ್ಲಿ ಎಬಿಟಿ ನಂಟಿರುವ ಜಾಲಗಳ ಪತ್ತೆಕಾರ್ಯ ಮುಂದುವರಿದಿದೆ ಎಂದು ಎಟಿಎಸ್‌ ಅಧಿಕಾರಿಗಳು ಹೇಳಿದರು.
2017: ಉಳ್ಳಾಲ: ಭೂಗತ ಪಾತಕಿ ಚೋಟಾ ರಾಜನ್‌ ಸಹಚರ ವಿನೇಶ್ ಶೆಟ್ಟಿ (44) ಎಂಬಾತನನ್ನು ದಕ್ಷಿಣ ಕನ್ನಡ
ಜಿಲ್ಲೆಯ ಕೊಣಾಜೆ ಪೊಲೀಸರು ಬಂಧಿಸಿದರು. ಜೋಡಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ವಿನೇಶ್ ಶೆಟ್ಟಿ ಜಾಮೀನಿನ ಮೇಲೆ ಬಿಡುಗಡೆಗೊಂಡು ವಿಚಾರಣೆಗೆ ಹಾಜರಾಗದೆ ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಕೊಣಾಜೆ ಪೊಲೀಸರು ಮುಂಬೈಯಲ್ಲಿ ಆತನನ್ನು ವಶಕ್ಕೆ ಪಡೆದರು. ವಿನೇಶ್‌ ಉಡುಪಿಯ ಶಿರ್ವ ನಿವಾಸಿ. 2003ರಲ್ಲಿ ಕಪ್ಪು ಕಲ್ಲು ಕೋರೆ ಮಾಲೀಕ ವೇಣುಗೋಪಾಲ ನಾಯಕ್ ಮತ್ತು ಅವರ ಚಾಲಕ ಸಂತೋಷ್ ಎಂಬವರನ್ನು ಮುಡಿಪು ಇರಾ ಕ್ರಾಸ್ ಸಮೀಪ ಕೊಲೆಗೈಯ್ಯಲಾಗಿತ್ತು. ಪ್ರಕರಣ ಸಂಬಂಧ ಒಬ್ಬ ಮಹಿಳೆ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಆರೋಪಿ ಶೆಟ್ಟಿ 2015ರವರೆಗೂ ವಿಚಾರಣೆಗೆ ಹಾಜರಾಗುತ್ತಿದ್ದ. ಬಳಿಕ ತಲೆಮರೆಸಿಕೊಂಡಿದ್ದ. ವಿನೇಶ್ ವಿರುದ್ದ ವಾರಂಟ್ ಜಾರಿಯಾಗಿತ್ತು. ವಿನೇಶ್ ವಿರುದ್ಧ ಮುಂಬೈ, ದಾವಣೆಗೆರೆ, ಪುಣೆ, ಹೈದರಬಾದ್, ಮಂಗಳೂರಿನಲ್ಲಿ ಕೊಲೆ, ಅಕ್ರಮ ಶಸ್ತ್ರಾಸ್ತ್ರ ಸಾಗಣೆ, ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಪ್ರಕರಣಗಳಿದ್ದು, ಈತ ಮುಂಬೈಯಲ್ಲಿ ಚೋಟಾ ಶಕೀಲ್ ಸಹಚರನಾಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸರು ತಿಳಿಸಿದರು.

2017: ಬೆಂಗಳೂರು: ದಕ್ಷಿಣ ಭಾರತದಬಹುಭಾಷಾ ನಟಿ ಪ್ರಿಯಾಮಣಿ ಇದೇ  ಆಗಸ್ಟ್‌ 23ರಂದು ಬಹುಕಾಲದ
ಗೆಳೆಯ  ಮುಸ್ತಫಾ ರಾಜಾ ಅವರನ್ನು ವಿವಾಹವಾಗಲಿದ್ದಾರೆ. ಮುಂಬೈ ಮೂಲದ ಮುಸ್ತಫಾ ರಾಜಾ ಅವರೊಂದಿಗೆ ಪ್ರಿಯಾಮಣಿ ಕಳೆದ ಮೇ 27ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪ್ರಿಯಾಮಣಿ ಅವರು ಸರಳವಾಗಿ ರಿಜಿಸ್ಟರ್‌ ಮ್ಯಾರೇಜ್‌ ಆಗಲಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದವು. ಈ ವೇಳೆ ಪ್ರಿಯಾಮಣಿ ಕುಟುಂಬವರ್ಗ ಮತ್ತು ಆಪ್ತರು ಮಾತ್ರ ಉಪಸ್ಥಿತರಿರುವರು ಎನ್ನಲಾಯಿತು. ಆಗಸ್ಟ್‌ 24ರಂದು ಬೆಂಗಳೂರಿನ ಪಂಚತಾರ ಹೊಟೇಲ್‌ನಲ್ಲಿ ಆರತಕ್ಷತೆ ನಡೆಯಲಿದೆ. ಈ ವೇಳೆ  ನಾಲ್ಕು ಭಾಷೆಗಳ ಸಿನಿಮಾರಂಗದ ಗಣ್ಯರು ಆಗಮಿಸಲಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು.


2016: ರಿಯೋ ಡಿ ಜನೈರೋ: ಭಾರತೀಯ ಪುರುಷರ ಹಾಕಿ ತಂಡವು ರಿಯೋ ಒಲಿಂಪಿಕ್ಸ್ನಲ್ಲಿ ಐರ್ಲೆಂಡ್ ತಂಡವನ್ನು 3-2 ಗೋಲುಗಳ ಅಂತರದಿಂದ ಸೋಲಿಸುವ ಮೂಲಕ ಶುಭಾರಂಭ ಮಾಡಿತು. ಗೆಲುವಿನ ಮೂಲಕ ಭಾರತ ತಂಡ 12 ವರ್ಷಗಳ ನಂತರ ಒಲಿಂಪಿಕ್ಸ್ನಲ್ಲಿ ಮೊದಲ ಜಯ ದಾಖಲಿಸಿತು.
ರೂಪಿಂದರ್ ಪಾಲ್ ಸಿಂಗ್ ಎರಡು ಮತ್ತು ಕನ್ನಡಿಗ ರಘುನಾಥ್ ಗಳಿಸಿದ ಒಂದು ಗೋಲಿನ ಸಹಾಯದಿಂದ ಭಾರತ ತಂಡ ಐರ್ಲೆಂಡ್ ವಿರುದ್ಧ ಗೆಲುವು ಸಾಧಿಸಿತು. ಪ್ರಥಮಾರ್ಧದ ವೇಳೆಗೆ 2-0 ಅಂತದಿಂದ ಮುನ್ನಡೆ ಕಾಯ್ದುಕೊಂಡಿದ್ದ ಭಾರತ ತಂಡ ದ್ವಿತೀಯಾರ್ಧದಲ್ಲೂ ಸಹ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿ ಪಂದ್ಯದಲ್ಲಿ ಜಯ ದಾಖಲಿಸಿತು. ರಘುನಾಥ್ 15ನೇ ನಿಮಿಷದಲ್ಲಿ ಗೋಲು ಗಳಿಸಿ ಭಾರತಕ್ಕೆ ಉತ್ತಮ ಆರಂಭ ದೊರಕಿಸಿಕೊಟ್ಟರು. ನಂತರ ರೂಪಿಂದರ್ ಪಾಲ್ ಸಿಂಗ್ 27 ಮತ್ತು 49ನೇ ನಿಮಿಷದಲ್ಲಿ ಗೋಲು ಗಳಿಸಿ ಮುನ್ನಡೆಯನ್ನು ಹಿಗ್ಗಿಸಿದರು. ಐರ್ಲೆಂಡ್ ಪರ ಜಾನ್ ಜೆರ್ಮನ್ 45ನೇ ನಿಮಿಷ ಮತ್ತು ಕಾನರ್ ಹಾರ್ಟೆ 56ನೆ ನಿಮಿಷದಲ್ಲಿ ಗೋಲು ಗಳಿಸಿದರು. ಪೇಸ್-ಬೋಪಣ್ಣ ಜೋಡಿಗೆ ಸೋಲು: ಭಾರತ ಟೆನಿಸ್ನಲ್ಲಿ ಮೊದಲ ದಿನವೇ ನಿರಾಸೆ ಅನುಭವಿಸಿತು. 7ನೇ ಒಲಿಂಪಿಕ್ಸ್ನಲ್ಲಿ ಪ್ರತಿನಿಧಿಸಿತ್ತಿರುವ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಜೋಡಿ ಡಬಲ್ಸ್ ಪಂದ್ಯದಲ್ಲಿ ಪೋಲೆಂಡ್ ಲೂಕಜ್ ಕುಬತ್ ಮತ್ತು ಮಾರ್ಕಿನ್ ಮಟೋಸ್ಕಿ ಜೋಡಿ ವಿರುದ್ಧ 4-6, 6-7 ನೇರ ಸೆಟ್ಗಳ ಅಂತರದಿಂದ ಸೋಲನುಭವಿಸಿ ಟೂರ್ನಿಯಿಂದ ನಿರ್ಗಮಿಸಿದರು.

2016: ನವದೆಹಲಿ: ದೇಶದಲ್ಲಿ ಅನೇಕರು ಗೋರಕ್ಷಣೆಗೆ ಮುಂದಾಗುತ್ತಾರೆ ಆದರೆ, ಗೋರಕ್ಷಣೆ ಹೆಸರಲ್ಲಿ ತಮ್ಮ ಅಕ್ರಮ ದಂಧೆ ಮುಚ್ಚಿಕೊಳ್ಳಲು ಹೋರಾಟಕ್ಕೆ ಮುಂದಾಗುತ್ತಾರೆ ಅಂಥವರ ವಿರುದ್ಧ ಸಿಟ್ಟು ಬರುತ್ತದೆ. ರಸ್ತೆಯಲ್ಲಿ ಪ್ಲಾಸ್ಟಿಕ್ ಎಸೆಯದಿರಿ, ಇದನ್ನು ತಿನ್ನುವ ಗೋವುಗಳ ಪ್ರಾಣಕ್ಕೆ ಕುತ್ತು ತರುವ ಕೆಲಸ ಮಾಡದಿರಿ ಎಂದು ಮೋದಿ ಇಲ್ಲಿ ಹೇಳಿದರು. ದೆಹಲಿಯ ಇಂದಿರಾಗಾಂಧಿ ಒಳಾಂಗಣ ಮೈದಾನದಲ್ಲಿ ನಡೆದ ಮೈ ಗವರ್ವೆಂಟ್ ವೇದಿಕೆಯಲ್ಲಿ ಪಿಎಮ್ಒ ಆಪ್ ಉದ್ಘಾಟಿಸಿದ ಪ್ರಧಾನಿ ಮೋದಿ ಮೈ ಗವರ್ವೆಂಟ್ ಎಂಬುದು ಸಾರ್ವಜನಿಕರ ವೇದಿಕೆಯಾಗಿದ್ದು, ಕೇವಲ ಮತದಾನದಿಂದ ಪ್ರಜಾಪ್ರಭುತ್ವ ದೊರೆಯುವುದಿಲ್ಲ, ಆಡಳಿತ ಸರ್ಕಾರಕ್ಕೆ ಮಾರ್ಗದರ್ಶನ ನೀಡಿ, ಸರಿಯಾದ ಮಾಹಿತಿ ವಿನಿಮಯ ಮಾಡಿಕೊಂಡಲ್ಲಿ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರುಅಭಿವೃದ್ಧಿ ಮತ್ತು ಆಡಳಿತ ಎಂಬುದು ಒಂದು ದಾರಿಯಲ್ಲಿ ನಡೆದರೆ ಮಾತ್ರ ಜನರು ಹಾಗೂ ಸರ್ಕಾರದ ನಡುವಿನ ಬಾಂಧವ್ಯ ಗಟ್ಟಿಗೊಳ್ಳುವುದು. ರೈತರಿಗೆ ತಂತ್ರಜ್ಞಾನದ ಮೂಲಕ ಹತ್ತಿರವಾಗಿ ಉತ್ತಮ ಆಡಳಿತ ನಡೆಸಬಹುದು. ಆರೋಗ್ಯ, ನೈರ್ಮಲ್ಯ, ಪ್ರವಾಸೋದ್ಯಮ, ಜವಳಿ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರ ಅವಿರತ ಪ್ರಯತ್ನ ನಡೆಸಿದೆ. ವಿದೇಶದಲ್ಲಿರುವ ಭಾರತೀಯರು ಪ್ರತಿವರ್ಷ ಭಾರತದ ಐದು ಕುಟುಂಬಗಳ ವಿದೇಶಿ ಪ್ರವಾಸದ ಜವಾಬ್ದಾರಿ ಹೊರಬೇಕು ಎಂದು ಅವರು ಸಲಹೆ ಮಾಡಿದರು. ಇದಕ್ಕೂ ಮುನ್ನ ನಡೆದ ಕಾರ್ಯಕ್ರಮದಲ್ಲಿ ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸುವ ಜನರಿಗಾಗಿ ಮುಕ್ತ ವೇದಿಕೆಯೆ ಮೈಗವ್ ಆಗಿದೆ ಎಂದು ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಸಚಿವರು ಕೇಂದ್ರ ಸರ್ಕಾರ ಎರಡು ವರ್ಷದ ಹಿಂದೆಯೆ ಮೈಗವ್ ವೇದಿಕೆ ಸ್ಥಾಪಿಸಿ ದೇಶದ ನಾಗರಿಕರಿಂದ ಮುಕ್ತ ವಿಚಾರಗಳು ಮತ್ತು ಮಾಹಿತಿ ವರ್ಗಾವಣೆಗೆ ಅವಕಾಶ ಕಲ್ಪಿಸಿತ್ತು ಎಂದು ಮೈಗವ್ ಜತೆ ಉತ್ಸಾಹಿ ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಿಕೆ ಎಂಬ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡುತ್ತಾ ಹೇಳಿದರು. ಮೈಗವ್ ಎಂಬುದು ಮುಕ್ತ ವೇದಿಕೆಯಾಗಿದ್ದು, ಸಾರ್ವಜನಿಕರು ತಮ್ಮ ಸಾಧನೆ ಬಗ್ಗೆ ಇಲ್ಲಿ ಹೇಳಿಕೊಳ್ಳಬಹುದಾಗಿದೆ. ಸಂಜೆ 5 ಗಂಟೆ ನಂತರ 2 ಸಾವಿರ ಜನರ ಮಧ್ಯೆ ಸಂವಾದ ನಡೆಸಲಿರುವ ದೇಶದ ಪ್ರಧಾನಿ ನರೇಂದ್ರ ಮೋದಿ ಪ್ರಥಮ ಬಾರಿಗೆ ಟೌನ್ ಹಾಲ್ ಮಾದರಿ ಕಾರ್ಯಕ್ರಮವನ್ನು ದೆಹಲಿಯ ಇಂದಿರಾಗಾಂಧಿ ಒಳಾಂಗಣ ಮೈದಾನದಲ್ಲಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ್ದರು. ಸ್ವಚ್ಛ ಗಂಗಾ ಅಭಿಯಾನ, ಹೆಣ್ಣ ಶಿಶು ಶಿಕ್ಷಣ, ಡಿಜಿಟಲ್ ಇಂಡಿಯಾ, ಆಹಾರ ಮತ್ತು ಆರೋಗ್ಯ ಭದ್ರತೆ ಯೋಜನೆಗಳು ವೇದಿಕೆಯಲ್ಲಿರುವ ಪ್ರಮುಖ ಯೋಜನೆಗಳಾಗಿವೆ. 3.52 ಕೋಟಿ ಸದಸ್ಯರು ನೊಂದಾವಣೆಯಾಗಿದ್ದು, ಹಲವಾರು ಯೋಜನೆಗಳ ಬಗ್ಗೆ ಜನಾಭಿಪ್ರಾಯ ವ್ಯಕ್ತವಾಗಿದೆ.

2015: ಜಮ್ಮು/ ಚಂಡೀಗಢ: ಶಸ್ತ್ರಾಸ್ತ್ರರಹಿತರಾಗಿದ್ದ ತನ್ನ 44 ಮಂದಿ ಸಹೋದ್ಯೋಗಿಗಳ ಪ್ರಾಣರಕ್ಷಿಸಲು ದಿಟ್ಟ ಹೋರಾಟ ನಡೆಸಿದ ಬಿಎಸ್​ಎಫ್ ಯೋಧ ರಾಕಿ ಬುಧವಾರ 05-08-2015ರಂದು  ಉಧಂಪುರದಲ್ಲಿ ಉಗ್ರಗಾಮಿಗಳ ಗುಂಡಿಗೆ ಬಲಿಯಾಗುವ ಮುನ್ನ ತನ್ನ ಬಳಿ ಇದ್ದ 40 ಬುಲೆಟ್​ಗಳ ಸಂಪೂರ್ಣ ಮ್ಯಾಗಝಿನ್​ನ್ನು ಖಾಲಿ ಮಾಡಿದ್ದರು. ಬಿಎಸ್​ಎಫ್ ಯೋಧರ ತುಕಡಿಯ ಮೇಲೆ ದಾಳಿ ನಡೆಸಿದ ಉಗ್ರಗಾಮಿಗಳನ್ನು ದಿಟ್ಟವಾಗಿ ಎದುರಿಸಿದ 25ರ ಹರೆಯದ ರಾಕಿ, ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಉಗ್ರಗಾಮಿಗಳನ್ನು ಸುಮಾರು 20 ನಿಮಿಷ ತಡವಾಗಿ ಬಂದ ಭದ್ರತಾ ಪಡೆಗಳ ಆಗಮನದವರೆಗೂ ತನ್ನೊಡನೆ ನಿರಂತರ ಹೋರಾಟ ನಡೆಸುತ್ತಾ ಕಾಲ ಕಳೆಯುವಂತೆ ಹಿಡಿದಿಟ್ಟುಕೊಂಡಿದ್ದರು. ಉಗ್ರಗಾಮಿಗಳು ಕೇವಲ ತನ್ನೊಂದಿಗೆ ಹೋರಾಟ ನಡೆಸುತ್ತಾ ಕಾಲ ಕಳೆಯುವಂತೆ ಮಾಡಿದ್ದ ರಾಕಿ, 44 ಮಂದಿ ಬಿಎಸ್​ಎಫ್ ಸಿಬ್ಬಂದಿ ಇದ್ದ ಬಸ್ಸಿನತ್ತ ಗ್ರೇನೇಡ್ ಹಾರಿಸಲು ಉಗ್ರಗಾಮಿಗಳಿಗೆ ಅವಕಾಶವಾಗದಂತೆ ನೋಡಿಕೊಂಡಿದ್ದರು. ಈ ಘಟನೆಯಲ್ಲಿ ಒಬ್ಬ ಉಗ್ರಗಾಮಿ ಸ್ಥಳದಲೇ ಹತನಾಗಿದ್ದು, ಇನ್ನೊಬ್ಬನನ್ನು ಬಳಿಕ ಜೀವಂತವಾಗಿ ಸೆರೆ ಹಿಡಿಯಲಾಗಿತ್ತು. ಉಗ್ರಗಾಮಿ ದಾಳಿ ಘಟನೆಯಲ್ಲಿ ರಾಕಿಯ ಸಹೋದ್ಯೋಗಿ, ಬಸ್ ಚಾಲಕ ಸುಭೇಂದು ರಾಯ್ ಕೂಡಾ ಹತನಾಗಿದ್ದು, ಉಗ್ರರು ಬಸ್ ಚಲಿಸದಂತೆ ಮಾಡಲು ಟೈರ್​ಗಳನ್ನು ತೂತುಮಾಡಿ ಬಳಿಕ ಬಸ್ಸಿನೊಳಗಿದ್ದ ಬಿಎಸ್​ಎಫ್ ಸಿಬ್ಬಂದಿಯತ್ತ ಗುರಿ ಇಟ್ಟಿದ್ದರು. ರಾಕಿಯ ದಿಟ್ಟತನವು ಬಿಎಸ್​ಎಫ್ ಉನ್ನತ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಅತ್ತ ಹರಿಯಾಣದಲ್ಲಿನ ರಾಕಿಯ ಹುಟ್ಟೂರು ರಾಮಗಢ ಮಜ್ರಾ ಗ್ರಾಮದಲ್ಲಿ ಸುದ್ದಿ ತಿಳಿದ ಬಳಿಕ ವಿಷಣ್ಣತೆ ಮನೆ ಮಾಡಿತ್ತು.

2015: ಇಸ್ಲಾಮಾಬಾದ್: ಉಧಂಪುರದಲ್ಲಿ ಹಿಂದಿನ ದಿನ ನಡೆದ ದಾಳಿ ವೇಳೆಯಲ್ಲಿ ಜೀವಂತವಾಗಿ ಸೆರೆ ಹಿಡಿಯಲಾದ ಎಲ್​ಇಟಿ ಭಯೋತ್ಪಾದಕ ಪಾಕಿಸ್ತಾನ ಮೂಲದವನು ಎಂಬ ಭಾರತದ ಹೇಳಿಕೆಯನ್ನು ಪಾಕಿಸ್ತಾನ ಈದಿನ ನಿರಾಕರಿಸಿತು. ಇಂತಹ ಆಪಾದನೆಗಳಿಂದ ದೂರ ಉಳಿಯುವಂತೆಯೂ ಅದು ಭಾರತವನ್ನು ಆಗ್ರಹಿಸಿತು. ‘ನಾವು ಕೂಡಾ ಮಾಧ್ಯಮ ವರದಿಗಳನ್ನು ನೋಡಿದ್ದೇವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಟಿಪ್ಪಣಿ ನೀಡಲೂ ನಾನು ಇಷ್ಟ ಪಡುವುದಿಲ್ಲ. ಭಾರತೀಯ ಅಧಿಕಾರಿಗಳು ಮಾಧ್ಯಮಗಳಲ್ಲಿ ಮಾಡಲಾಗುತ್ತಿರುವ ಪ್ರತಿಪಾದನೆ ಸಂಬಂಧಿತ ಮಾಹಿತಿಯನ್ನು ನಮ್ಮ ಜೊತೆಗೆ ಹಂಚಿಕೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಪಾಕಿಸ್ತಾನಿ ವಿದೇಶಾಂಗ ಕಚೇರಿಯ ವಕ್ತಾರ ಸೈಯದ್ ಖಾಜಿ ಖಲಿಯುಲ್ಲಾ ಭಾರತದಲ್ಲಿ ಭಯೋತ್ಪಾದಕನ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು. ‘ಪಾಕಿಸ್ತಾನದ ವಿರುದ್ಧ ತತ್ ಕ್ಷಣದ ಆಪಾದನೆಗಳನ್ನು ಮಾಡುವುದು ಸರಿಯಲ್ಲ ಎಂದು ನಾವು ಹಲವಾರು ಸಲ ಹೇಳಿದ್ದೇವೆ. ಇಂತಹ ವಿಚಾರಗಳೆಲ್ಲಾ ವಸ್ತುಸ್ಥಿತಿಯನ್ನು ಆಧರಿಸಿರಬೇಕು. ಪಾಕಿಸ್ತಾನದ ವಿರುದ್ಧ ಯಾವಾಗಲೇ ಆಗಲಿ ಏನಾದರೂ ಆಪಾದನೆ ಮಾಡುವಾಗ ಸಮರ್ಪಕ ಸಾಕ್ಷ್ಯಾಧಾರ ಇರಬೇಕು ಎಂದು ನಾವು ನಿರೀಕ್ಷಿಸುತ್ತೇವೆ’ ಎಂದು ಅವರು ನುಡಿದರು. ‘ಭಾರತದ ಪ್ರತಿಪಾದನೆ ತಳರಹಿತವಾದ್ದು. ಇಂತಹ ಆಪಾದನೆಗಳನ್ನು ಮಾಡುವುದರಿಂದ ದೂರ ಉಳಿಯುವಂತೆ ನಾವು ಮತ್ತೆ ಮತ್ತೆ ಭಾರತಕ್ಕೆ ಸೂಚಿಸಿದ್ದೇವೆ’ ಎಂದು ಅವರು ಹೇಳಿದರು.  ಬಂಧಿತ ವ್ಯಕ್ತಿ ಉಸ್ಮಾನ್ ಖಾನ್ (ಮೊಹಮ್ಮದ ನವೀದ್ ಯಾಕುಬ್) ಪಾಕಿಸ್ತಾನ ಮೂಲದವನು ಎಂದು ರಾಷ್ಟ್ರೀಯ ಮಾಹಿತಿ ಮತ್ತು ನೋಂದಣಿ ಪ್ರಾಧಿಕಾರದ (ಎನ್​ಎಡಿಆರ್​ಎ) ದಾಖಲೆಯು ಹೇಳಿದೆ ಎಂಬುದಾಗಿ ಎಕ್ಸ್​ಪ್ರೆಸ್ ಟ್ರಿಬ್ಯೂನ್​ನಲ್ಲಿ ಬಂದಿರುವ ವರದಿಯಂತೂ ಸಂಪೂರ್ಣ ನಿರಾಧಾರ ಎಂದು ಪಾಕಿಸ್ತಾನದ ಸರ್ಕಾರಿ ಮೂಲಗಳು ಹೇಳಿವೆ.
2015: ಬೆಂಗಳೂರು: ಉತ್ತಮ ನಿರ್ವಹಣೆ ತೋರಿದ ಕರ್ನಾಟಕದ ಕ್ರೀಡಾಪಟುಗಳು ಲಾಸ್ ಏಂಜಲಿಸ್​ನಲ್ಲಿ ಇತ್ತೀಚೆಗೆ ನಡೆದ ವಿಶೇಷ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಒಟ್ಟು 10 ಪದಕ ಗೆಲ್ಲುವ ಮೂಲಕ ಗಮನಾರ್ಹ ನಿರ್ವಹಣೆ ತೋರಿದರು. ಆಗಸ್ಟ್್ 3ರಂದು ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ 275 ಸದಸ್ಯರನ್ನೊಳಗೊಂಡ ಭಾರತ ತಂಡ ಒಟ್ಟು (47 ಸ್ವರ್ಣ, 54ಬೆಳ್ಳಿ, 72ಕಂಚು) 173 ಪದಕ ತನ್ನದಾಗಿಸಿಕೊಂಡಿತು. ಕರ್ನಾಟಕದ ಕ್ರೀಡಾಪಟುಗಳು ಬಹುತೇಕ ಸ್ವಿಮಿಂಗ್ ಹಾಗೂ ಸ್ಕೇಟಿಂಗ್​ನಲ್ಲಿ ಪದಕ ಜಯಿಸಿದ್ದು, ಇವುಗಳಲ್ಲಿ 1 ಸ್ವರ್ಣ, 3ಬೆಳ್ಳಿ, 6 ಕಂಚು ಪದಕಗಳು ಒಳಗೊಂಡಿವೆ. ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಪದಕ ಸಂಖ್ಯೆ ಏರಿಕೆ ಕಂಡಿದ್ದು, ಅಥೆನ್ಸ್​ನಲ್ಲಿ ನಡೆದ 2011ರ ವಿಶೇಷ ಒಲಿಂಪಿಕ್ಸ್​ನಲ್ಲಿ ಭಾರತ 156 ಪದಕ (56 ಚಿನ್ನ, 48 ಬೆಳ್ಳಿ, 52 ಕಂಚು) ಜಯಿಸಿತ್ತು. ದೆಹಲಿಯ ರಣ್​ವೀರ್ ಸಿಂಗ್ ಸೈನಿ ಗಾಲ್ಪ್​ನಲ್ಲಿ ಸ್ವರ್ಣ ಪದಕ ಗೆದ್ದ ಮೊದಲ ಭಾರತೀಯ ಎನಿಸಿದರೆ, ರೋಲರ್ ಸ್ಕೇಟಿಂಗ್​ನಲ್ಲಿ 10ಚಿನ್ನ, 17ಬೆಳ್ಳಿ ಮತ್ತು 12 ಕಂಚು ಒಳಗೊಂಡಂತೆ 39ಪದಕ ಲಭಿಸಿವೆ. ಪೂಲನ್ ದೇವಿ ಪವರ್ ಲಿಫ್ಟಿಂಗ್​ನಲ್ಲಿ 1 ಸ್ವರ್ಣ, 3 ಕಂಚು ಪದಕ ಜಯಿಸಿದ್ದರೆ, ಸೋನಾಕ್ಷಿ ಕಂಚು ಜಯಿಸಿದರು.

 2015: ನವದೆಹಲಿ: ಲಲಿತ್ ಮೋದಿ, ವ್ಯಾಪಂ ಮತ್ತು ಕಪ್ಪು ಹಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಉಂಟಾದ ಕೋಲಾಹಲದ ಮಧ್ಯೆ ರಾಜ್ಯಸಭಾ ಕಲಾಪಗಳನ್ನು  ಎರಡು ಬಾರಿ ಮುಂದೂಡಿ ಮೂರನೇ ಬಾರಿ ಇಡೀ ದಿನಕ್ಕೆ ಮುಂದೂಡಲಾಯಿತು. ಮೊದಲಿಗೆ ಕಲಾಪವನ್ನು ಕೋಲಾಹಲದ ಮಧ್ಯೆ 12 ಗಂಟೆಗೆ ಮುಂದೂಡಲಾಯಿತು. ಸದನ ಮತ್ತೆ ಸಮಾವೇಶಗೊಂಡಾಗಲೂ ಕೋಲಾಹಲ ಮುಂದುವರೆದ ಕಾರಣ ಕಲಾಪವನ್ನು ಮತ್ತೆ 2 ಗಂಟೆಗೆ ಮುಂದೂಡಲಾಯಿತು.

2015: ನವದೆಹಲಿ: ಲಂಚ ತೆಗೆದುಕೊಳ್ಳುವುದಷ್ಟೇ ಅಲ್ಲ, ಲಂಚ ಕೊಡುವುದನ್ನೂ ಅಪರಾಧ ಎಂದು ಸಾರಲು ಭ್ರಷ್ಟಾಚಾರ ತಡೆ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಕೋಲಾಹಲ ಮತ್ತು ಅಡ್ಡಿ ಆತಂಕಗಳ ಮಧ್ಯೆ ಸರ್ಕಾರವು ಈದಿನ ರಾಜ್ಯಸಭೆಯಲ್ಲಿ ಮಂಡಿಸಿತು. 2013ರಲ್ಲಿ ಮಂಡನೆಯಾಗಿ ಬಳಿಕ ಸಂಸದೀಯ ಸಮಿತಿಗೆ ಕಳುಹಿಸಲ್ಪಟ್ಟಿದ್ದ ಈ ಮಸೂದೆಯು ಲಂಚ ನೀಡುವುದನ್ನೂ ನಿರ್ದಿಷ್ಟ ಅಪರಾಧವನ್ನಾಗಿ ಮಾಡುತ್ತದೆ. ನಿವೃತ್ತ ನೌಕರರನ್ನೂ ಮಸೂದೆ ಈ ಕಾಯ್ದೆಯ ವ್ಯಾಪ್ತಿಗೆ ತರುತ್ತದೆ. ಆದರೆ ಹಾಲಿ ಅಥವಾ ಮಾಜಿ ಸರ್ಕಾರಿ ಅಧಿಕಾರಿಗಳನ್ನು ವಿಚಾರಣೆಗೆ ಗುರಿಪಡಿಸಲು ಪೂರ್ವಾನುಮತಿ ಪಡೆದುಕೊಳ್ಳುವುದನ್ನು ಅಗತ್ಯವನ್ನಾಗಿಸುವ ವಿವಾದಾತ್ಮಕ ವಿಧಿಯೊಂದನ್ನು ಮಸೂದೆಗೆ ಸೇರ್ಪಡೆ ಮಾಡಲಾಗಿದೆ.  ‘ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ ಎಂಬ ತನ್ನ ವಚನದಂತೆ ಆಡಳಿತದಲ್ಲಿ ಹೆಚ್ಚು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲು ಸರ್ಕಾಋ ಬದ್ಧವಾಗಿದೆ’ ಎಂದು ಪ್ರಧಾನಿಯವರ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಮಸೂದೆಯನ್ನು ಮಂಡಿಸುತ್ತಾ ಹೇಳಿದರು. ಏನಿದ್ದರೂ, ವಿರೋಧ ಪಕ್ಷಗಳ ಕೋಲಾಹಲದ ಕಾರಣ ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳಲಾಗಲಿಲ್ಲ. ಸದನ ಕಲಾಪ ಸುಸೂತ್ರವಾಗಿದ್ದಾಗ ಮಸೂದೆ ಮೇಲೆ ಚರ್ಚೆ ನಡೆಸಬಹುದು ಎಂದು ಸಚಿವರು ನುಡಿದರು.

2015: ನವದೆಹಲಿ: ಆಧಾರ್ ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಬೇಕೆ ಅಥವಾ ಬೇಡವೇ ಎಂಬ ಬಗೆಗಿನ ತನ್ನ ಆದೇಶವನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿತು. ‘ಖಾಸಗಿತನದ ಹಕ್ಕು ಮೂಲಭೂತ ಹಕ್ಕೇ ಅಥವಾ ಅಲ್ಲವೇ? ಎಂಬ ಪ್ರಶ್ನೆಯನ್ನು ವಿಶಾಲ ಸಂವಿಧಾನ ಪೀಠಕ್ಕೆ ಒಪ್ಪಿಸಬೇಕು ಎಂದು ಕೇಂದ್ರವು ಕೋರಿತ್ತು. ‘ಖಾಸಗಿತನದ ಹಕ್ಕು ಮೂಲಭೂತ ಹಕ್ಕೆ ಅಥವಾ ಅಲ್ಲವೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದ್ದರಿಂದ ಆಧಾರ್ ಯೋಜನೆಯ ಸಿಂಧುತ್ವ ಸಂಬಂಧಿತ ಪ್ರಕರಣವನ್ನು ಐವರು ನ್ಯಾಯಮೂರ್ತಿಗಳ ವಿಶಾಲ ಪೀಠಕ್ಕೆ ಒಪ್ಪಿಸಬೇಕು’ ಎಂದು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಹಿಂದಿನ ದಿನ ಕೋರಿದ್ದರು. ಸುಪ್ರೀಂ ಕೋರ್ಟ್​ನ ವಿಶಾಲ ಪೀಠಗಳು ಈ ಹಿಂದೆ ನೀಡಿದ್ದ ತೀರ್ಪುಗಳ ಪ್ರಕಾರ ಖಾಸಗಿತನವು ಸಂವಿಧಾನದ 21ನೇ ವಿಧಿಯಡಿ ಬರುವ ಸ್ವಾತಂತ್ರ್ಯ ಭಾಗವಲ್ಲ. ಹೀಗಾಗಿ ಖಾಸಗಿತನಕ್ಕೆ ಸಂವಿಧಾನದಲ್ಲಿ ಎಲ್ಲಿಯೂ ಜಾಗ ಲಭಿಸಿಲ್ಲ ಎಂದು ರೋಹ್ಟಗಿ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ವಾದಿಸಿದ್ದರು. ಏನಿದ್ದರೂ ಬದುಕು ಮತ್ತು ವೈಯಕ್ತಿ ಸ್ವಾತಂತ್ರ್ಯ ಖಾತರಿ ನೀಡುವ ಸಂವಿಧಾನದ 21ನೇ ವಿಧಿಯಲ್ಲಿ ಖಾಸಗಿತನ ಒಳಗೊಳ್ಳುವುದಿಲ್ಲವಾದರೆ ಈ ವಿಧಿಯಲ್ಲಿ ಇನ್ನೇನು ಉಳಿಯಿತು ಎಂದು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ ಮತ್ತಿ ಸಿ. ನಾಗಪ್ಪನ್ ಅವರ ಜೊತೆಗೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಪ್ರಶ್ನಿಸಿದ್ದರು.

2015: ಕೋಲ್ಕತ: ಬಹುಕೋಟಿ ಶಾರದಾ ಹಗರಣಕ್ಕೆ ಸಂಬಂಧಿಸಿದಂತೆ, ಪಶ್ಚಿಮ ಬಂಗಾಳದ ಸಾರಿಗೆ ಸಚಿವ ಮದನ್ ಮಿತ್ರ ಅವರ ಜಾಮೀನು ಅರ್ಜಿಯನ್ನು ಕಲ್ಕತ್ತ ಹೈಕೋರ್ಟ್  ತಿರಸ್ಕರಿಸಿತು. ಹಿರಿಯ ವಕೀಲ, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಅವರು ಮಿತ್ರ ಪರವಾಗಿ ಕೋಲ್ಕತ ಹೈಕೋರ್ಟ್​ನಲ್ಲಿ ಹಾಜರಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಶಾರದಾ ವಂಚನೆ ಹಗರಣದ ತನಿಖೆಯನ್ನು ಪ್ರಸ್ತುತ ಸಿಬಿಐ ನಡೆಸುತ್ತಿದೆ. ಮದನ್ ಮಿತ್ರ ಅವರು ಪ್ರಕರಣದಲ್ಲಿ ನೇರವಾಗಿ ಷಾಮೀಲಾಗಿಲ್ಲ. ಆದರಿಂದ ಅವರ ವಿರುದ್ಧ ಸೆಕ್ಷನ್ 409ರ ಅಡಿ ದಾಖಲಿಸಲಾಗಿರುವ ಪ್ರಕರಣ ಅವರಿಗೆ ಅನ್ವಯಿಸುವುದಲ್ಲ ಎಂದು ಸಿಬಲ್ ವಾದಿಸಿದರು. ಆದರೆ ಮಿತ್ರ ಅವರು ಬಿಡುಗಡೆಯಾದರೆ ಸಾಕ್ಷಿದಾರರ ಮೇಲೆ ಪ್ರಭಾವ ಬೀರುವ ಹಾಗೂ ಸಾಕ್ಷ್ಯನಾಶ ಮಾಡಿಸುವ ಸಾಧ್ಯತೆಗಳಿವೆ ಎಂದು ಸಿಬಿಐ ವಕೀಲರು ವಾದಿಸಿದರು. ಹೆಚ್ಚಿನ ವಿಚಾರಣೆಗಾಗಿ ಅವರನ್ನು ಇನ್ನಷ್ಟು ಕಾಲ ವಶಕ್ಕೆ ನೀಡಬೇಕು ಎಂದು ಅವರು ಹೇಳಿದರು. ಸಿಬಿಐ ಡಿಸೆಂಬರ್ 12ರಂದು ಮಿತ್ರ ಅವರನ್ನು ಬಂಧಿಸಿತ್ತು.

2015: ನವದೆಹಲಿ: ‘ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ಅವರಿಗೆ ನಾನು ಯಾವುದೇ ಅನುಕೂಲ ಮಾಡಿಕೊಟ್ಟಿಲ್ಲ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು  ಸಂಸತ್ತಿನಲ್ಲಿ ಸ್ಪಷ್ಟ ಪಡಿಸಿದರು. ಲೋಕಸಭೆಯಲ್ಲಿ ಹೇಳಿಕೆ ನೀಡಿದ ಸಚಿವೆ ’ಲಲಿತ್ ಮೋದಿ ಅವರಿಗೆ ಪ್ರವಾಸಿ ದಾಖಲೆಗಳನ್ನು ನೀಡುವಂತೆ ಇಂಗ್ಲೆಂಡ್ ಸರ್ಕಾರವನ್ನು ನಾನು ಕೋರಿದುದನ್ನು ತೋರಿಸುವ ಒಂದೇ ಒಂದು ಟಿಪ್ಪಣಿ, ಪತ್ರ ಅಥವಾ ಇ-ಮೇಲ್ ಇದ್ದರೆ ಹಾಜರುಪಡಿಸಿ’ ಎಂದು ಅವರು ಸವಾಲು ಹಾಕಿದರು. ಸುಷ್ಮಾ ಸ್ವರಾಜ್ ಅವರು ಲಲಿತ್ ಮೋದಿ ಅವರಿಗೆ ಪ್ರವಾಸಿ ದಾಖಲೆಗಳನ್ನು ಒದಗಿಸಲು ನೆರವಾಗಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವ ವಿರೋಧ ಪಕ್ಷಗಳು ಪ್ರಸಕ್ತ ಮುಂಗಾರು ಅಧಿವೇಶನವನ್ನು ಅಸ್ತವ್ಯಸ್ತಗೊಳಿಸಿತ್ತು. ಹಲವಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡು 2010ರಲ್ಲಿ ರಾಷ್ಟ್ರವನ್ನು ತ್ಯಜಿಸಿರುವ ಲಲಿತ್ ಮೋದಿ ಅವರಿಗೆ ಕಳೆದ ವರ್ಷ ಪತ್ನಿಗೆ ವೈದ್ಯಕೀಯ ಚಿಕಿತ್ಸೆ ಕೊಡಿಸುವ ಸಲುವಾಗಿ ಲಂಡನ್​ನಿಂದ ಪೋರ್ಚುಗಲ್​ಗೆ ಪ್ರಯಾಣಿಸಲು ಅವಕಾಶ ಒದಗಿಸಲಾಗಿತ್ತು. ಲಲಿತ್ ಮೋದಿಗೆ ಪ್ರವಾಸಿ ದಾಖಲೆಗಳನ್ನು ನೀಡಲು ಇಂಗ್ಲೆಂಡ್ ಸರ್ಕಾರ ನಿರ್ಧರಿಸಿದರೆ ಭಾರತ ಜೊತೆಗಿನ ಬಾಂಧವ್ಯದ ಮೇಲೇನೂ ದುಷ್ಪರಿಣಾಮವಾಗುವುದಿಲ್ಲ ಎಂಬ ಏಕೈಕ ಭರವಸೆಯನ್ನು ತಾನು ಇಂಗ್ಲೆಂಡ್ ಸರ್ಕಾರಕ್ಕೆ ನೀಡಿದ್ದುದಾಗಿ ಸುಷ್ಮಾ ಹೇಳಿದರು.  ‘ನಿಮ್ಮ ನಿಯಮಾವಳಿಗಳನ್ನು ಅನುಸರಿಸಿ’ ಎಂದು ನಾನು ಅವರನ್ನು ಒತ್ತಾಯಿಸಿದ್ದೇನೆ. ಅವರ ನಿರ್ಣಯಗಳ ಮೇಲೆ ಯಾವುದೇ ಪ್ರಭಾವ ಬೀರುವಂತಹ ಸೂಚನೆ ನೀಡಿಲ್ಲ’ ಎಂದು ನುಡಿದ ವಿದೇಶಾಂಗ ಸಚಿವೆ ’ಮಾನವೀಯ ನೆಲೆಯಲ್ಲಿ ನಾನು ವರ್ತಿಸಿದ್ದೇನೆ’ ಎಂದು ಹೇಳಿದರು. ‘ಲಲಿತ್ ಮೋದಿ ಪತ್ನಿ ಯಾವುದೇ ಕ್ರಿಮಿನಲ್ ಪ್ರಕರಣ ಎದುರಿಸುತ್ತಿಲ್ಲ. ಕ್ಯಾನ್ಸರ್​ಗೆ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ತನ್ನ ಪತಿಯ ಬೆಂಬಲದಿಂದ ಆಕೆಯನ್ನು ಏಕೆ ವಂಚಿತರನ್ನಾಗಿ ಮಾಡಬೇಕು?’ ಸುಷ್ಮಾ ಪ್ರಶ್ನಿಸಿದರು. ‘ನನ್ನ ಸ್ಥಾನದಲ್ಲಿ ಇದ್ದಿದ್ದರೆ ನೀವು ಏನು ಮಾಡುತ್ತಿದ್ದಿರಿ ಎಂಬುದಾಗಿ ನಾನು ಸೋನಿಯಾ ಗಾಂಧಿ ಅವರನ್ನು ಕೇಳಬಯಸುತ್ತೇನೆ’ ಎಂದು ಸುಷ್ಮಾ ಹೇಳಿದರು. ಬಹುತೇಕ ವಿಪಕ್ಷಗಳ ಜೊತೆ ಸೋನಿಯಾ ಗಾಂಧಿ ಅವರೂ ಈದಿನ ಸಂಸತ್ ಕಲಾಪಗಳನ್ನು ಬಹಿಷ್ಕರಿಸಿದ್ದರು. ಸುಷ್ಮಾ ಸ್ವರಾಜ್, ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ಅವರನ್ನು ಲಲಿತ್ ಮೋದಿ ಜೊತೆಗೆ ಹೊಂದಿರುವ ನಿಕಟ ಬಾಂಧವ್ಯದ ಹಿನ್ನೆಲೆಯಲ್ಲಿ ಮತ್ತು ವ್ಯಾಪಂ ಹಗರಣದ ಹಿನ್ನೆಲೆಯಲ್ಲಿ ಸಚಿವ ಸ್ಥಾನಗಳಿಗೆ ಕಿತ್ತು ಹಾಕಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಗ್ರಹಿಸಿದ್ದವು.

2015: ನವದೆಹಲಿ: ಲೋಕಸಭೆಯಿಂದ 25 ಮಂದಿ ಕಾಂಗ್ರೆಸ್ ಸದಸ್ಯರನ್ನು ಅಮಾನತುಗೊಳಿಸಿದ ಕ್ರಮವನ್ನು ಪ್ರತಿಭಟಿಸಿ ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ವಿವಿಧ ವಿರೋಧ ಪಕ್ಷಗಳ ನಾಯಕರು ಸಂಸತ್ ಭವನ ಸಮುಚ್ಚಯದಲ್ಲಿ ಮೂರನೇ ದಿನವಾದ ಈದಿನ ಕೂಡಾ ತಮ್ಮ ಪ್ರತಿಭಟನೆ ಮುಂದುವರೆಸಿದರು. ನಾಗಾ ಒಪ್ಪಂದವನ್ನು ಟೀಕಿಸಿದ ಸೋನಿಯಾ ಗಾಂಧಿ, ಈ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಸಂಸತ್ ಸದಸ್ಯರನ್ನು ಅಮಾನತು ಗೊಳಿಸಿದ್ದನ್ನು ಖಂಡಿಸಿದ ರಾಹುಲ್ ಗಾಂಧಿ ‘ಸಂಸತ್ತಿನಲ್ಲಿ ನಮ್ಮ ಸ್ವರವನ್ನು ದಮನಿಸಲಾಗುತ್ತಿದೆ’ ಎಂದು ಆಪಾದಿಸಿದರು. ನಾಗಾ ಬಂಡುಕೋರರ ಜೊತೆಗೆ ಮಾಡಿಕೊಂಡ ಒಪ್ಪಂದಕ್ಕೆ ಸಂಬಂಧಿಸಿದಂತೆಯೂ ಪ್ರಧಾನಿಯವರ ಮೇಲೆ ದಾಳಿ ಮಾಡಿದ ರಾಹುಲ್ ಮಣಿಪುರ, ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಈ ಮೂರು ರಾಜ್ಯಗಳ ಧ್ವನಿಗಳನ್ನು ದಮನಿಸಲಾಗಿದೆ ಎಂದು ದೂರಿದರು.
2015: ಪಣಜಿ: ಅಮೆರಿಕದ ಕಂಪನಿ ಲೂಯಿಸ್ ಬರ್ಗರ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾದ ಮಾಜಿ ಕಾಂಗ್ರೆಸ್ ಸಚಿವ ರ್ಚಚಿಲ್ ಅಲ್ಮೆಲೊ ಅವರನ್ನು ಬಂಧಿಸಲಾಯಿತು. ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಅವರಿಗೆ ಕೋರ್ಟ್ ಮಧ್ಯಂತರ ಜಾಮೀನು ನೀಡಿ ಕೆಲವೇ ಗಂಟೆಗಳ ಅವಧಿಯಲ್ಲಿ ಅಲ್ಮೆಲೊ ಅವರನ್ನು ಬಂಧಿಸಲಾಯಿತು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಅಲ್ಮೆಲೊ ಲೋಕೋಪಯೋಗಿ ಖಾತೆ ಸಚಿವರಾಗಿದ್ದರು. 2010ರಲ್ಲಿ ಸಿದ್ಧಗೊಂಡ ನೀರು ಮತ್ತು ಒಳಚರಂಡಿ ಯೋಜನೆಗೆ ಸಂಬಂಧಿಸಿದಂತೆ ಅಮೆರಿಕದ ಕಂಪನಿಯಿಂದ ಲಂಚ ಪಡೆದಿದ್ದಾರೆ ಎನ್ನುವ ಆರೋಪ ಅವರ ಮೇಲಿದೆ. ಈಮೊದಲೇ ಕ್ರೈ ಬ್ರಾಂಚ್  ಅಲ್ಮೆಲೊ ಅವರನ್ನು ವಿಚಾರಣೆಗೊಳಪಡಿಸಿತ್ತು. ತನಿಖೆ ಇನ್ನೂ ಮುಗಿದಿಲ್ಲವಾದ ಹಿನ್ನೆಲೆಯಲ್ಲಿ ತಡರಾತ್ರಿ ಹಠಾತ್ತಾಗಿ ಬಂಧಿಸಲಾಯಿತು.
 2008: ಸರ್ಕಾರವು ಭಯೋತ್ಪಾದನಾ ಸಂಘಟನೆಯೆಂದು ಗುರುತಿಸಿದ ಭಾರತ ವಿದ್ಯಾರ್ಥಿ ಇಸ್ಲಾಮಿಕ್ ಚಳವಳಿಯ (ಸಿಮಿ) ಮೇಲಿನ ನಿಷೇಧವನ್ನು ರದ್ದುಪಡಿಸಿದ ದೆಹಲಿ ಹೈಕೋರ್ಟ್ ನ್ಯಾಯಮಂಡಳಿ ತೀರ್ಪನ್ನು ಸುಪ್ರೀಂಕೋರ್ಟ್ ತಡೆಹಿಡಿಯಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಎ.ಕೆ. ಮಾಥೂರ್ ಅವರನ್ನೊಳಗೊಂಡ ನ್ಯಾಯಪೀಠವು, ಸರ್ಕಾರದ ತುರ್ತು ಅರ್ಜಿ ಆಧರಿಸಿ ನ್ಯಾಯಮಂಡಳಿಯ ತೀರ್ಪನ್ನು ಅಮಾನತ್ತಿನಲ್ಲಿ ಇಡಲು ಆದೇಶಿಸಿತು.

2007: `ಕೃಷಿ ರಂಗದ ಪುನಶ್ಚೇತನಕ್ಕೆ ಪ್ರತಿಯೊಂದು ರಾಜ್ಯದ ಭೌಗೋಲಿಕ ವೈಶಿಷ್ಟ್ಯಕ್ಕೆ ಪೂರಕವಾಗುವಂತಹ ವಿಶಿಷ್ಟ ಕೃಷಿ ನೀತಿ ರೂಪಿಸಿ, ರೈತರಿಗಾಗಿ `ಹವಾಮಾನ ಸಾಕ್ಷರತೆ' ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು' ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಭಿಪ್ರಾಯಪಟ್ಟರು. ರಾಷ್ಟ್ರಪತಿಯಾದ ಬಳಿಕ ನವದೆಹಲಿಯಲ್ಲಿ ಮೊತ್ತ ಮೊದಲ ಅಧಿಕೃತ ಸಮಾರಂಭದಲ್ಲಿ ಅವರು ಈ ಮಾತು ಹೇಳಿದರು. ಅವರು ಪಾಲ್ಗೊಂಡಿದ್ದುದು ಕೃಷಿ ವಿಜ್ಞಾನ ರಾಷ್ಟ್ರೀಯ ಅಕಾಡೆಮಿ ಸಭೆ.

2007: ಇರಾಕಿನಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಬಾಂಬ್ ಸ್ಫೋಟ ಘಟನೆಗಳಲ್ಲಿ ಒಟ್ಟು 37 ಮಂದಿ ಮೃತರಾಗಿ 50ಕ್ಕೂ ಅಧಿಕ ಮಂದಿ ಗಾಯಗೊಂಡರು. ತಲ್ ಅಫಾರ್ ಸಮೀಪದ ಶಿಯಾ ಗ್ರಾಮದಲ್ಲಿ ಮಾನವ ಬಾಂಬ್ ಸ್ಫೋಟಿಸಿ 28 ಮಂದಿ ಸಾವಿಗೀಡಾದರು. ಸ್ಫೋಟಕ ತುಂಬಿದ್ದ ಟ್ರಕ್ ಚಲಾಯಿಸುತ್ತಿದ್ದ ವ್ಯಕ್ತಿ ಈ ಸ್ಫೋಟ ನಡೆಸಿದ್ದ. ಉತ್ತರ ಬಾಗ್ದಾದಿನಲ್ಲಿ ಅಲ್- ಖೈದಾ ಪ್ರಬಲರಾಗಿರುವ ಪ್ರದೇಶದ ಮೇಲೆ ಅಮೆರಿಕದ ವಾಯುಪಡೆ ದಾಳಿ ನಡೆಸಿದ್ದರಿಂದ ಕನಿಷ್ಠ ಎಂಟು ಮಂದಿ ಸಾವಿಗೀಡಾದರು.

2007: ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೊಂದು ಐತಿಹಾಸಿಕ ಸಾಧನೆ ಮಾಡುವ ಮೂಲಕ ಗಮನ ಸೆಳೆದರು. ವಿಶ್ವ ಮಹಿಳಾ ಟೆನಿಸ್ ಸಂಸ್ಥೆ (ಡಬ್ಲ್ಯುಟಿಎ) ಬಿಡುಗಡೆ ಮಾಡಿದ ಹೊಸ ರ್ಯಾಂಕಿಂಗ್ ಪಟ್ಟಿಯಲ್ಲಿ ಅವರು ಮೂವತ್ತನೇ ಸ್ಥಾನ ಪಡೆದುಕೊಂಡರು. ಮುತ್ತಿನ ನಗರಿಯ ಬೆಡಗಿ ಇದರೊಂದಿಗೆ ಮೊದಲ ಮೂವತ್ತನೇ ಶ್ರೇಯಾಂಕದೊಳಗೆ ಪದಾರ್ಪಣೆ ಮಾಡಿದ ಭಾರತದ ಪ್ರಥಮ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆ ಪಡೆದರು. 1987ರಲ್ಲಿ ರಮೇಶ್ ಕೃಷ್ಣನ್ ಅವರು 23ನೇ ಶ್ರೇಯಾಂಕ ಪಡೆದುಕೊಂಡಿದ್ದರು. ಸ್ಯಾನ್ ಡಿಯಾಗೊ ಚಾಂಪಿಯನ್ ಶಿಪ್ ನ ಮೊದಲ ಸುತ್ತಿನಲ್ಲಿ ಸೋಲು ಅನುಭವಿಸಿದ ಬಳಿಕವೂ ಡಬಲ್ಸಿನಲ್ಲಿ ಸಾನಿಯಾ ಅವರು 26ನೇ ಸ್ಥಾನ ಉಳಿಸಿಕೊಂಡರು.

2007: ಕರ್ನಾಟಕದ ಹೆಮ್ಮೆಯ ಆಟಗಾರ ರೋಹನ್ ಬೋಪಣ್ಣ ಅವರು ಪುರುಷರ ಡಬಲ್ಸಿನಲ್ಲಿ 92ನೇ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ನಂತರ ಡಬಲ್ಸಿನಲ್ಲಿ ಮೊದಲ ನೂರು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದ ಖ್ಯಾತಿ ಕೊಡಗಿನ ಹುಡುಗನದಾಯಿತು. ಇಂಗ್ಲೆಂಡ್ ಹಾಗೂ ಸ್ಪೇನಿನಲ್ಲಿ ನಡೆದ ಪುರುಷರ ಚಾಲೆಂಜರ್ ಟೆನಿಸ್ ಚಾಂಪಿಯನ್ ಶಿಪ್ ನ ಡಬಲ್ಸ್ ವಿಭಾಗದಲ್ಲಿ ಪಾಕಿಸ್ತಾನದ ಅಸಿಮ್ ಉಲ್ ಹಕ್ ಖುರೇಶಿ ಅವರೊಂದಿಗೆ ಜೊತೆಗೂಡಿ ಆಡಿದ ಬೋಪಣ್ಣ ಜಯಗಳಿಸಿ ಹೊಸ ದಾಖಲೆ ಬರೆದಿದ್ದರು.

2007: 1998ರ ಕೊಯಮತ್ತೂರು ಸರಣಿ ಸ್ಫೋಟ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಇನ್ನೂ ಐವರನ್ನು ತಪ್ಪಿತಸ್ಥರೆಂದು ಘೋಷಿಸಿತು. ವಿಶೇಷ ನ್ಯಾಯಾಧೀಶ ಕೆ. ಉಥಿರಾಪತಿ ಅವರು ಸರಬ್ದುದೀನ್, ಸಿಕಂದರ್, ಮೀರ್ ಶಬೀರ್ ಅಹ್ಮದ್, ಅಯ್ಯಪ್ಪನ್ ಹಾಗೂ ಉಬೈದುರ್ ರೆಹಮಾನ್ ಅವರನ್ನು ಸಣ್ಣ ಅಪರಾಧಕ್ಕಾಗಿ ತಪ್ಪಿತಸ್ಥರೆಂದು ಘೋಷಿಸಿದರು. ಸ್ಫೋಟದ ಸಂಚಿನಂತಹ ಗುರುತರ ಆರೋಪ ಇವರ ಮೇಲೆ ಇಲ್ಲದ ಕಾರಣ ಜಾಮೀನು ಅರ್ಜಿ ಸಲ್ಲಿಸುವಂತೆ ಈ ಐವರಿಗೆ ನ್ಯಾಯಾಧೀಶರು ಸೂಚಿಸಿದರು. ಆಗಸ್ಟ್ 1ರಂದು ನ್ಯಾಯಾಲಯ, ಸರಣಿ ಸ್ಫೋಟ ಪ್ರಕರಣದ 167 ಆರೋಪಿತರಲ್ಲಿ 153 ಜನ ತಪ್ಪಿತಸ್ಥರೆಂದು ಘೋಷಿಸಿತ್ತು. ಕೇರಳ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷ ಅಬ್ದುಲ್ ನಾಸೇರ್ ಮದನಿ ಸೇರಿದಂತೆ 8 ಜನರನ್ನು ಆರೋಪದಿಂದ ಮುಕ್ತಗೊಳಿಸಲಾಗಿತ್ತು. 1998ರ ಫೆಬ್ರುವರಿ 14ರಂದು ಲೋಕಸಭಾ ಚುನಾವಣೆ ಪ್ರಚಾರದ ಅಂಗವಾಗಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಅವರು ಕೊಯಮತ್ತೂರಿನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡುವ ಕೆಲವೇ ನಿಮಿಷಗಳ ಮುನ್ನ, ಈ ಸರಣಿ ಸ್ಫೋಟಗಳು ಸಂಭವಿಸಿದ್ದವು. 58 ಜನ ಮೃತರಾಗಿ 250 ಜನ ಗಾಯಗೊಂಡಿದ್ದರು.

2007: ವಿವಾದಕ್ಕೆ ಒಳಗಾಗಿದ್ದ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆನಿಯಂತ್ರಣ) ಮಸೂದೆಗೆ (2007) ವಿಧಾನಸಭೆ ತನ್ನ ಒಪ್ಪಿಗೆ ನೀಡಿತು. ಈ ಹಿಂದೆ ವಿಧಾನಸಭೆಯಿಂದ ಅಂಗೀಕಾರವಾಗಿದ್ದ ಈ ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ತಿದ್ದುಪಡಿ ತರಲು ನಿರ್ಧರಿಸಿ ಸದನ ಸಮಿತಿ ರಚಿಸಲಾಗಿತ್ತು. ಈ ವಿಧೇಯಕದ ಮೂಲಕ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಸೇರಿದಂತೆ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಶಿಕ್ಷಕರ ವರ್ಗಾವಣೆಯನ್ನು ನಿಯಂತ್ರಿಸಲಾಗುವುದು. ವಿಧೇಯಕ ಪ್ರಕಾರ ಪ್ರತಿ ಶಿಕ್ಷಕ ಕನಿಷ್ಠ ಐದು ವರ್ಷಕಾಲ ಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಈ ಹಿಂದೆ ಗ್ರಾಮೀಣ ಸೇವೆ ಮಾಡದ ಶಿಕ್ಷಕರು ಕೂಡ ಕನಿಷ್ಠ ಐದು ವರ್ಷಕಾಲ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಶಿಕ್ಷಕ ನೇಮಕವಾದ ಜೇಷ್ಠತಾ ಘಟಕದಿಂದ ಮತ್ತೊಂದು ಜೇಷ್ಠತಾ ಘಟಕಕ್ಕೆ ವರ್ಗಾವಣೆ ಮಾಡುವುದನ್ನು ಮಸೂದೆ ನಿಷೇಧಿಸುವುದು.

2006: ಗಾಂಧಿವಾದಿ, ಹಿರಿಯ ಸ್ವಾತಂತ್ರ್ಯ ಯೋಧೆ ಮಹಾದೇವಿ ತಾಯಿ (101) ಅವರು ಬೆಂಗಳೂರಿನ ಕುಮಾರಕೃಪಾ ರಸ್ತೆಯ ವಲ್ಲಭ ನಿಕೇತನ ಆಶ್ರಮದಲ್ಲಿ ನಿಧನರಾದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ದೊಡ್ಡಪ್ಪನ ಮಗಳಾದ ಮಹಾದೇವಿ ತಾಯಿ ಅವರು ಆಚಾರ್ಯ ವಿನೋಬಾ ಭಾವೆ ಅವರ ಆಶ್ರಮದ ಪ್ರಭಾವಕ್ಕೆ ಒಳಗಾಗಿದ್ದರು. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲ್ಲೂಕಿನ ದೊಡ್ಮನೆ ಕುಟುಂಬದ ಕೃಷ್ಣಯ್ಯ ಸುಬ್ಬಯ್ಯ ಹೆಗಡೆ ಅವರ ಮಗಳಾಗಿ ಮಹಾದೇವಿ ತಾಯಿ 1906ರಲ್ಲಿ ಜನಿಸಿದ್ದರು. `ವಿಶ್ವನೀಡಂ' ಟ್ರಸ್ಟ್ ಸಂಸ್ಥಾಪಕರೂ ಆಗಿದ್ದ ಅವರು ಮಹಾತ್ಮಾ ಗಾಂಧೀಜಿ ಅವರ ಅನುಯಾಯಿಯಾಗಿ 1930ರಲ್ಲಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದ್ದರು. ವಿನೋಬಾ ಭಾವೆ ಅವರ ಭೂದಾನ ಪಾದಯಾತ್ರೆ ಸಂದರ್ಭದಲ್ಲಿ ಇಡೀ ರಾಜ್ಯ ಸುತ್ತಿ ಚಳವಳಿಗೆ ಬಲ ತಂದಿದ್ದರು.

2006: ಹಿರಿಯ ಬಿಜೆಪಿ ನಾಯಕ, ಪರಿಶಿಷ್ಟ ಜಾತಿ/ವರ್ಗಗಳ ರಾಷ್ಟ್ರೀಯ ಆಯೋಗದ ಅಧ್ಯಕ್ಷ ಸೂರಜ್ ಭಾನ್ ಹೃದಯಾಘಾತದಿಂದ ನವದೆಹಲಿಯಲ್ಲಿ ನಿಧನರಾದರು. ಎನ್ ಡಿಎ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಭಾನ್, 1999ರಲ್ಲಿ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು.

2006: ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ತಂಪು ಪಾನೀಯಗಳಲ್ಲಿ ಕೀಟನಾಶಕ ಅಂಶಗಳು ಕಂಡು ಬಂದ ವರದಿಗಳ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳ ಕ್ಯಾಂಟೀನುಗಳಲ್ಲಿ ತಂಪು ಪಾನೀಯಗಳನ್ನು ನಿಷೇಧಿಸಿದರು.

2006: ಪಾಠಕ್ ವರದಿ ಸೋರಿಕೆ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ಮಾಜಿ ಸಚಿವ ಕೆ. ನಟವರ್ ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ರಾಜ್ಯಸಭೆಯಲ್ಲಿ `ಹಕ್ಕುಚ್ಯುತಿ' ಮಂಡಿಸಲು ನೋಟಿಸ್ ಕಳುಹಿಸಿದರು.

1999: ಮಾಜಿ ಕೇಂದ್ರ ಸಚಿವ ಕಲ್ಪನಾಥ ರಾಯ್ (58) ನಿಧನರಾದರು.

1998: ಶ್ವೇತಭವನದ ಮಾಜಿ ಸಿಬ್ಬಂದಿ ಮೋನಿಕಾ ಲೆವಿನ್ ಸ್ಕಿ ಅವರು ಅಧ್ಯಕ್ಷ ಕ್ಲಿಂಟನ್ ಅವರ ಜೊತೆಗೆ ತನಗಿದ್ದ ಸಂಬಂಧದ ಬಗ್ಗೆ ಗ್ರ್ಯಾಂಡ್ ಜ್ಯೂರಿ ಎದುರು ಎಂಟೂವರೆ ಗಂಟೆಗಳ ಕಾಲ ವಿಚಾರಣೆಯಲ್ಲಿ ವಿವರಿಸಿದರು.

1986: ಶ್ಯಾಮಜಿ ಮತ್ತು ಮಣಿ ಚಾವ್ಲಾ ದಂಪತಿಯ ಮಗುವಾಗಿ ಭಾರತದ ಮೊತ್ತ ಮೊದಲ ಪ್ರಣಾಳಶಿಶು `ಹರ್ಷ' ಜನಿಸಿತು. ಮುಂಬೈಯ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಹಾಸ್ಪಿಟಲ್ ನ ಡಾ. ಇಂದಿರಾ ಹಿಂದುಜಾ ಅವರು ಮೂರು ವರ್ಷಗಳ ಕಾಲ ನಡೆಸಿದ ಸಂಶೋಧನೆಯ ಫಲವಾಗಿ ಈ ಸಾಧನೆ ಸಾಧ್ಯವಾಯಿತು.

1970: ಕೆವಿನ್ ಮರ್ಫಿ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿ ದಾಟಿದ ಮೊತ್ತ ಮೊದಲ ಬ್ರಿಟಿಷ್ ವ್ಯಕ್ತಿಯಾದರು. ಅವರು ಕಡಲ್ಗಾಲುವೆಯನ್ನು ಕ್ರಮಿಸಲು 35 ಗಂಟೆ 10 ನಿಮಿಷಗಳನ್ನು ತೆಗೆದುಕೊಂಡರು.

1956: ಕಛ್, ಸೌರಾಷ್ಟ್ರ, ಗುಜರಾತ್, ಮಹಾರಾಷ್ಟ್ರ, ವಿದರ್ಭ ಮತ್ತು ಮರಾಠಾವಾಡಗಳನ್ನು ಒಳಗೊಂಡ ಸಮ್ಮಿಶ್ರ ಮುಂಬಯಿ ಪ್ರಾಂತ್ಯವನ್ನು ರಚಿಸಲು ಸೂಚಿಸುವ ನಿರ್ಣಯವನ್ನು ಕಾಂಗ್ರೆಸ್ ಸಂಸದೀಯ ಮಂಡಳಿ ಈದಿನ ಅಂಗೀಕರಿಸಿತು. ನಿರ್ಣಯವನ್ನು ಮತಕ್ಕೆ ಹಾಕಿದಾಗ ಎಸ್. ವಿ. ಗಾಡ್ಗೀಳ್ ಒಬ್ಬರ ಮತ ಮಾತ್ರ ಇದಕ್ಕೆ ವಿರುದ್ಧವಾಗಿ ಬಿದ್ದಿತು.

1948: ಸಾಹಿತಿ ಕೆ.ಆರ್. ಕೃಷ್ಣಯ್ಯ ಜನನ.

1947: ಸಾಹಿತಿ ಎಸ್. ಸತ್ಯವತಿ ಜನನ.

1945: ಎರಡನೇ ಜಾಗತಿಕ ಸಮರದ ಸಂದರ್ಭದಲ್ಲಿ ಜಪಾನಿನ ಹಿರೋಷಿಮಾ ಮೇಲೆ ಅಮೆರಿಕ ಅಣುಬಾಂಬನ್ನು ಎಸೆಯಿತು. ಯುದ್ಧದಲ್ಲಿ ಮೊತ್ತ ಮೊದಲನೆಯ ಅಣ್ವಸ್ತ್ರ ಬಳಕೆ ಇದು. `ಎನೋಲಾ ಗೇ' ಹೆಸರಿನ ಬಿ-29 ಸೂಪರ್ ಫೋರ್ ಟ್ರೆಸ್ ಬಾಂಬರ್ ಹಿರೋಷಿಮಾ ಪಟ್ಟಣದ ಮೇಲೆ ಬೆಳಿಗ್ಗೆ 8.15ರ ವೇಳೆಗೆ ಬಾಂಬನ್ನು ಬೀಳಿಸಿತು. ಪಟ್ಟಣದಿಂದ 1900 ಅಡಿಗಳಷ್ಟು ಎತ್ತರದಲ್ಲೇ ಬಾಂಬ್ ಸ್ಫೋಟಗೊಂಡಿತು. ಪಟ್ಟಣದ ಮೂರನೇ ಎರಡರಷ್ಟು ಭಾಗ ಧ್ವಂಸವಾಯಿತು. ಅಂದಾಜು 3.5 ಲಕ್ಷ ಜನರ ಪೈಕಿ 1.4 ಲಕ್ಷ ಜನ ಅಸುನೀಗಿದರು.

1944: ಸಾಹಿತಿ ಗಂಗಾಧರ ನಂದಿ ಜನನ.

1926: ಅಮೆರಿಕದ ಈಜುಗಾರ್ತಿ ಗೆರ್ ಟ್ರೂಡ್ (ಕರೋಲಿನ್) ಎಡರ್ಲೆ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಮೊತ್ತ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು ಫ್ರಾನ್ಸಿನ ಕೇಪ್ ಕ್ರಿಸ್- ನೆಝ್ ನಿಂದ ಇಂಗ್ಲೆಂಡಿನ ಡೋವರ್ ವರೆಗಿನ 35 ಮೈಲು (56 ಕಿಮೀ) ದೂರವನ್ನು 14 ಗಂಟೆ 31 ನಿಮಿಷಗಳಲ್ಲಿ ಕ್ರಮಿಸಿ ಪುರುಷರ ದಾಖಲೆಯನ್ನು ಮುರಿದರು.

1904: ಕರ್ನಾಟಕದಲ್ಲಿ ವಿದ್ಯುತ್ತಿನ ಮೂಲ ನೆಲೆ ಶಿವನ ಸಮುದ್ರ. ಕೋಲಾರ ಚಿನ್ನದ ಗಣಿ, ಭದ್ರಾವತಿ ಕಬ್ಬಿಣದ ಕಾರ್ಖಾನೆಗೆ ವಿದ್ಯುತ್ ಒದಗಿಸುವ ಸಲುವಾಗಿ ಶಿಂಷಾ ಹೈಡ್ರೋ ಎಲೆಕ್ಟ್ರಿಕ್ ಪವರ್ ಸ್ಟೇಷನ್ ದಿವಾನ್ ಶೇಷಾದ್ರಿ ಅಯ್ಯರ್ ಅವರ ಕಾಲದಲ್ಲಿ ಈದಿನ ಆರಂಭವಾಯಿತು. ಇಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿರುವುದನ್ನು ಬ್ರಿಟಿಷರು ನಂಬಲಿಲ್ಲ. ಇದೆಲ್ಲ ಬರೀ ಬುರುಡೆ ಎಂದು ಅವರು ಹೇಳಿದ್ದರು. ಶಿಂಷಾ ಪವರ್ ಸ್ಟೇಷನ್ನಿನಿಂದ ವಿದ್ಯುತ್ತು ನೇರವಾಗಿ ಕನಕಪುರದ ಕಾನಕಾನಹಳ್ಳಿ ಎಲೆಕ್ಟ್ರಿಕ್ ಗ್ರಿಡ್ ಗೆ ಬಂದು ನಂತರ ಬೆಂಗಳೂರು ನಗರಕ್ಕೆ ಸರಬರಾಜು ಆಗುತ್ತಿತ್ತು. ಆನಂದರಾವ್ ಸರ್ಕಲ್ಲಿನಲ್ಲಿ ವಿದ್ಯುತ್ತಿನ ಮುಖ್ಯ ಕಚೇರಿ ಇತ್ತು. ಪ್ರತಿದಿನ ರಾತ್ರಿ 9ಕ್ಕೆ ಸರಿಯಾಗಿ ಒಂದು ಸೆಕೆಂಡ್ ಕಾಲ ಇಡೀ ಬೆಂಗಳೂರನ್ನು ಕತ್ತಲು ಮಾಡುತ್ತಿದ್ದರು.

1884: ಸಾಹಿತಿ, ವಿದ್ವಾಂಸ ಪಂಡಿತ ಮಹಾದೇವ ಪೂಜಾರ (6-8-1884ರಿಂದ 5-1-1962) ಅವರು ಧಾರವಾಡ ಜಿಲ್ಲೆಯ ಬಂಕಾಪುರದ ಬಡ ಅರ್ಚಕ ಮನೆತನದಲ್ಲಿ ಈದಿನ ಜನಿಸಿದರು

No comments:

Post a Comment