Wednesday, August 1, 2018

ಇಂದಿನ ಇತಿಹಾಸ History Today ಆಗಸ್ಟ್ 01

ಇಂದಿನ ಇತಿಹಾಸ History Today ಆಗಸ್ಟ್ 01 

2018: ನವದೆಹಲಿ/ ಗಾಜಿಯಾಬಾದ್: ಗೋಲ್ಡನ್ ಬಾಬಾ ಎಂದೇ ಖ್ಯಾತರಾಗಿರುವ ಬಂಗಾರದ ಬಾಬಾ ಸುಧೀರ್ ಮಕ್ಕರ್ ಮತ್ತೆ ತಮ್ಮ ಸುಪ್ರಸಿದ್ದ ಕನ್ವರ್ ಯಾತ್ರೆಗೆ ಸಜ್ಜಾದರು. ಈ ಬಾರಿ ಬಾಬಾ ಅಂದಾಜು ೬ ಕೋಟಿ ರೂಪಾಯಿ ಮೌಲ್ಯದ ೨೦ ಕಿ.ಗ್ರಾಂ. ಚಿನ್ನಾಭರಣ ಧರಿಸಿಕೊಂಡು ಕನ್ವರ್ ಯಾತ್ರೆ ನಡೆಸಲಿದ್ದು,  ಇದು ಅವರ ೨೫ನೆಯ ಹಾಗೂ ಕೊನೆಯ ಕನ್ವರ್ ಯಾತ್ರೆ.  ವರ್ಷದಿಂದ ವರ್ಷಕ್ಕೆ ಬಾಬಾ ಅವರು ಯಾತ್ರೆ ಕಾಲದಲ್ಲಿ ಧರಿಸುವ ಚಿನ್ನಾಭರಣದ ಪ್ರಮಾಣ ಏರುತ್ತಲೇ ಇದೆ. ೨೦೧೬ರಲ್ಲಿ ಅವರು ೧೨ ಕಿಲೋ ಗ್ರಾಂ ಚಿನ್ನಾಭರಣ ಧರಿಸಿ ಕನ್ವರ್ ಯಾತ್ರೆ ನಡೆಸಿದ್ದರು. ಕಳೆದ ವರ್ಷ ಅವರು ೧೪.೫ ಕಿ.ಗ್ರಾಂ ಚಿನ್ನಾಭರಣ ಧರಿಸಿ ಯಾತ್ರೆ ನಡೆಸಿದ್ದರು. ಈ ಚಿನ್ನಾಭರಣದಲ್ಲಿ ೨೧ ಚಿನ್ನದ ನಾಣ್ಯಗಳು, ೨೧ ದೇವತೆಗಳ ಲಾಕೆಟ್ ಗಳು, ಕೈ ಕಡಗಗಳು, ಚಿನ್ನದ ಜಾಕೆಟ್ ಇತ್ಯಾದಿ ಸೇರಿವೆ.  ಬಾಬಾ ಎಸ್ ಯುವಿ ಕಾರಿನಲ್ಲಿ ಕುಳಿತು ತಮ್ಮ ಯಾತ್ರೆ ನಡೆಸುತಾರೆ. ಅವರ ಈ ಯಾತ್ರೆಯಲ್ಲಿ ಪೊಲೀಸರಲ್ಲದೆ ಅಂಗರಕ್ಷಕರೂ ಇರುತ್ತಾರೆ.  ಈ ಬಾರಿ ಬಾಬಾ ಅವರು ಧರಿಸಲಿರುವ ಹೊಸ ಚಿನ್ನದ ಸರ ೨ ಕಿಗ್ರಾಂ ತೂಕವಿದ್ದು ಶಿವನ ಲಾಕೆಟ್ ಹೊಂದಿದೆ. ಕತ್ತು ನೋವು ಬರುವುದರ ಜೊತೆಗೆ ಒಂದು ಕಣ್ಣಿನ ದೃಷ್ಟಿ ಮಂದವಾಗಿರುವುದರಿಂದ ನಾನು ಈ ಬಾರಿ ಹೆಚ್ಚು ಚಿನ್ನ ಧರಿಸುವುದಿಲ್ಲ. ಇದು ನನ್ನ ೨೫ನೆಯ ವರ್ಷದ ಹಾಗೂ ಕೊನೆಯ ಕನ್ವರ್ ಯಾತ್ರೆ ಎಂದು ಬಾಬಾ ಹೇಳುತ್ತಾರೆ. ಚಿನ್ನಾಭರಣಗಳ ಜೊತೆಗೆ ಅಂದಾಜು ೨೭ ಲಕ್ಷ ರೂಪಾಯಿ ಬೆಲೆಯ ರೊಲೆಕ್ಸ್ ವಾಚನ್ನೂ  ಬಾಬಾ ಧರಿಸುತ್ತಾರೆ. ಹರದ್ವಾರದಿಂದ ದೆಹಲಿಯವರೆಗೆ ೨೦೦ ಕಿಮೀ ದೂರ ಸಾಗುವ ಕನ್ವರ್ ಯಾತ್ರೆಯಲ್ಲಿ, ಬಾಬಾ ಅವರ ಸ್ವಂತ ವಾಹನಗಳಾದ ಬಿಎಂಡಬ್ಲ್ಯೂ, ಮೂರು ಪಾರ್ಚುನರ್‌ಗಳು, ಎರಡು ಆಡಿ ಮತ್ತು ಎರಡು ಇನ್ನೋವಾ ಕಾರುಗಳೂ ಸಾಗುತ್ತವೆ. ಯಾತ್ರೆಗಾಗಿ ಅವರು ಹಲವಾರು ಬಾರಿ ಹಮ್ಮರ್, ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಗಳನ್ನು ಬಾಡಿಗೆಗೆ ಪಡೆದು ಬಳಸಿದ್ದಾರೆ.  ‘ನನ್ನ ಚಿನ್ನ ಮತ್ತು ಕಾರುಗಳ ವ್ಯಾಮೋಹ ಸಾಯುವುದಿಲ್ಲ. ೧೯೭೨-೭೩ರಲ್ಲಿ ಚಿನ್ನದ ಬೆಲೆ ತೊಲೆಗೆ (೧೦ ಗ್ರಾಮ್) ೨೦೦ ರೂ ಇದ್ದಾಗ ನಾನು ಚಿನ್ನಾಭರಣಗಳನ್ನು ಧರಿಸಲು ಆರಂಭಿಸಿದೆ ಎಂಬುದು ನನ್ನ ನೆನಪು. ಆಗ ನಾನು ೪ ತೊಲೆಯಷ್ಟು ಚಿನ್ನಾಭರಣ ಧರಿಸಿ ಯಾತ್ರೆ ಗೈದಿದ್ದೆ. ಕ್ರಮೇಣ ನನ್ನ ಬಳಿ ಬಂಗಾರ ಹೆಚ್ಚಿತು. ನಾನು ಸಾಯುವವರೆಗೂ ಚಿನ್ನಾಭರಣಗಳನ್ನು ನನ್ನ ಬಳಿಯೇ ಇಟ್ಟುಕೊಳ್ಳುವೆ. ಈ ಜಗತ್ತನ್ನು ತ್ಯಜಿಸುವಾಗ ನನ್ನ ಯಾರಾದರೂ ಒಬ್ಬ ಪ್ರಿಯ ಶಿಷ್ಯನಿಗೆ ಅವುಗಳನ್ನು ಹಸ್ತಾಂತರಿಸುವೆ ಎಂದು ಮಕ್ಕರ್ ಹೇಳುತ್ತಾರೆ.  ಆಧ್ಯಾತ್ಮದೆಡೆಗೆ ವಾಲುವ ಮುನ್ನ ಮಕ್ಕರ್ ಅವರು ದೆಹಲಿಯ ಗಾಂಧಿ ನಗರ ಮಾರುಕಟ್ಟೆಯಲ್ಲಿ ಒಬ್ಬ ಯಶಸ್ವೀ ಬಟ್ಟೆ ಹಾಗೂ ಆಸ್ತಿ ವ್ಯವಹಾರಗಾರರಾಗಿದ್ದರು. ಈಗ ಅವರು ಗಾಜಿಯಾಬಾದಿನ ಇಂದಿರಾಪುರದಲ್ಲಿ ಬಹುಮಹಡಿಗಳ ಬೃಹತ್ ಐಷಾರಾಮೀ ಫ್ಲಾಟ್ ಹೊಂದಿದ್ದಾರೆ.  ಬಾಬಾ ಅವರ ಆರಂಭದ ಬದುಕು ಅತ್ಯಂತ ಕಷ್ಟಮಯವಾಗಿತ್ತು. ಆರನೇ ವಯಸ್ಸಿನಲ್ಲಿ ಅವರು ಹರಿದ್ವಾರದಲ್ಲಿ ಬದುಕಿನ ದಾರಿ ಹುಡುಕುತ್ತಾ ಗುರುಕುಲ ಸೇರಿದ್ದರು. ರಸ್ತೆ ಬದಿಯಲ್ಲಿ ಗುಲಾಬಿ ಹೂ ಮತು ಬಟ್ಟೆ ಮಾರಾಟ ಮಾಡಿ ಅವರು ಬದುಕು ಸಾಗಿಸಿದ್ದರು.  ಬಳಿಕ ಭಗವಾನ್ ಶಿವನ ಕೃಪೆಯಿಂದ ನನ್ನ ವಹಿವಾಟು ಬೆಳೆಯಿತು. ನಾನು ಜೀನ್ಸ್, ಶರ್ಟ್ ಮತ್ತು ಜಾಕೆಟ್ ಗಳನ್ನು ’ಬಿಟ್ಟು ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡಿದೆ. ಆಸ್ತಿ ವಹಿವಾಟೂ ಬೆಳೆಯಿತು. ನಾನು ಸಂಪೂರ್ಣವಾಗಿ ಶಿವನ ಭಕ್ತನಾದೆ ಎಂದು ಬಾಬಾ ಹೇಳುತ್ತಾರೆ.  ವಾರ್ಷಿಕ ಕನ್ವರ್ ಯಾತ್ರೆಯಲ್ಲಿ ಬಾಬಾ ಅತ್ಯಂತ ಜನಪ್ರಿಯರಾದ ಕೇಂದ್ರ ವ್ಯಕ್ತಿಯಾಗಿದ್ದಾರೆ.  ಮಕ್ಕಳು, ಮಹಿಳೆಯರು, ಯುವಕರು ಅವರ ಯಾತ್ರೆಯಲ್ಲಿ ಪಾಲ್ಗೊಳ್ಳಲು ದುಂಬಾಲು ಬೀಳುತ್ತಾರೆ. ಅವರ ವಿಡಿಯೋಗಳನ್ನು ಮಾಡುವುದು, ಅವರ ಜೊತೆಗೆ ಸೆಲ್ಫೀ ತೆಗೆದುಕೊಳ್ಳುವುದು ಮತ್ತು ಅವರ ಆಶೀರ್ವಾದಕ್ಕಾಗಿ ಪಾದ ಮುಟ್ಟಿ ನಮಸ್ಕರಿಸುವುದೇ ಇತ್ಯಾದಿ ಚಟುವಟಿಕೆಗಳು ಅವರ ಯಾತ್ರೆಯುದ್ದಕ್ಕೂ ನಡೆಯುತ್ತಲೇ ಇರುತ್ತವೆ.

2018: ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ತನ್ನ ನೀತಿ ರೆಪೋದರವನ್ನು ಎರಡನೇ ನೇರ ಸಭೆಯಲ್ಲೂ ಹೆಚ್ಚಿಸಿದ್ದು, ಪರಿಣಾಮವಾಗಿ ಗೃಹಸಾಲಗಳು ದುಬಾರಿಯಾಗುವ ಸಾಧ್ಯತೆಗಳಿವೆ. ನಿರೀಕ್ಷೆಯಂತೆ ರಿಸರ್ವ್ ಬ್ಯಾಂಕಿನ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ತನ್ನ ಎರಡನೇ ಸಭೆಯಲ್ಲಿ ರಿಸರ್ವ್ ಬ್ಯಾಂಕ್ ಹಣದುಬ್ಬರವನ್ನು ಉಲ್ಲೇಖಿಸಿ ರಿವರ್ಸ್ ರೆಪೋ ದರವನ್ನು ೨೫ ಮೂಲ ಪಾಯಿಂಟ್ ಗಳಷ್ಟು ಅಂದರೆ ಶೇಕಡಾ ೬.೫೦ಕ್ಕೆ ಏರಿಸಲು ನಿರ್ಧರಿಸಿತು. ಆದರೆ ತನ್ನ ’ತಟಸ್ಥ ನಿಲುವನ್ನು ಕಾಯ್ದುಕೊಂಡಿತು. ಜೂನ್ ತಿಂಗಳಲ್ಲಿ ರೆಪೋ ದರ ಅಥವಾ ಹಣದ ಮಾನದಂಡ (ಬೆಂಚ್ ಮಾರ್ಕ್) ಸಾಲ ದರವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಮೊತ್ತ ಮೊದಲ ಬಾರಿಗೆ ೨೫ ಮೂಲ ಪಾಯಿಂಟಿನಷ್ಟು ಅಂದರೆ ಶೇಕಡಾ ೬.೨೫ಕ್ಕೆ ಏರಿಸಲಾಗಿತ್ತು.  ಮರುಖರೀದಿ ದರ ಅಥವಾ ರೆಪೋ ದರ ಅಂದರೆ ನಿಧಿ ಕೊರತೆಯಾದ ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕುಗಳಿಗೆ ರಿಸರ್ವ್ ಬ್ಯಾಂಕ್ ನೀಡುವ ಹಣಕ್ಕೆ ವಿಧಿಸುವ ದರವಾಗಿದೆ. ರಾಷ್ಟ್ರದೊಳಗಿನ ವಾಣಿಜ್ಯ ಬ್ಯಾಂಕುಗಳಿಂದ ಆರ್ ಬಿಐ ಪಡೆಯುವ ಹಣಕ್ಕೆ ನೀಡಲಾಗುವ ದರವೇ ರಿವರ್ಸ್ ರೆಪೋ ದರವಾಗಿದ್ದು ಇದನ್ನು ಶೇಕಡಾ ೬.೨೫ಕ್ಕೆ ಹೊಂದಾಣಿಕೆ ಮಾಡಲಾಯಿತು. ಎಂಪಿಸಿಯ ಐವರು ಸದಸ್ಯರು ದರ ಏರಿಕೆಗೆ ಮತ ನೀಡಿದರು. ಪ್ರಮುಖ ನೀತಿ ದರವನ್ನು ಏರಿಸಿದರೂ, ತನ್ನ ತಟಸ್ಥ ನೀತಿಯನ್ನು ಮುಂದುವರೆಸಲು ಆರ್ ಬಿಐ ನಿರ್ಧರಿಸಿತು.  ವಾರ್ಷಿಕ ಗ್ರಾಹಕ ಹಣದುಬ್ಬರವು ಜೂನ್ ತಿಂಗಳಲ್ಲಿ ಶೇಕಡಾ ೫ಕ್ಕೆ ಮುಟ್ಟಿದ್ದು, ರಿಸರ್ವ್ ಬ್ಯಾಂಕಿನ ಶೇಕಡಾ ೪ರ ಗುರಿಯನ್ನು ಮೀರಿತ್ತು. ಜಾಗತಿಕ ಕಚ್ಚಾ ತೈಲ ಬೆಲೆ ಈ ವರ್ಷ ಶೇಕಡಾ ೨೦ರಷ್ಟು ಏರಿದ್ದು, ಮೇ ತಿಂಗಳಲ್ಲಿ ಬ್ಯಾರೆಲ್ ಒಂದರ ದರ ೮೦ ಡಾಲರ್ ದಾಟಿತ್ತು. ೨೦೧೪ರ ಬಳಿಕ ಇದೇ ಅತ್ಯಂತ ಹೆಚ್ಚಿನ ದರವಾಗಿತ್ತು.  ಇದು ಭಾರತದ ಆಮದು ಬಿಲ್ ಗಳಲ್ಲಿ ಅತ್ಯಂತ ಬೃಹತ್ತಾದ ಇಂಧನ ದರವನ್ನು ದಾಖಲೆ ಮಟ್ಟಕ್ಕೆ ಹೆಚ್ಚಿಸಿತ್ತು. ಪರಿಣಾಮವಾಗಿ ಆಮದು ಹಣದುಬ್ಬರದ ಭೀತಿ ತಲೆದೋರಿತ್ತು. ದೇಶೀಯ ಹಣದುಬ್ಬರದ ಅಸ್ಥಿರತೆಯ ಮೇಲೆ ಮುಂಬರುವ ತಿಂಗಳುಗಳಲ್ಲಿ ಎಚ್ಚರಿಕೆಯೊಂದಿಗೆ ನಿಗಾ ಇಡಬೇಕಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿತು.  ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ ಪಿ) ಏರಿಸಲು ಸರ್ಕಾರವು ಕೈಗೊಂಡಿರುವ ನಿರ್ಧಾರ ಸೇರಿದಂತೆ ಹಲವಾರು ಅಂಶಗಳು ಗಮನಿಸಿ ರಿಸರ್ವ್ ಬ್ಯಾಂಕ್ ತನ್ನ ಹಣದುಬ್ಬರ ಸ್ಥಿತಿಗತಿಯನ್ನು ನಿರ್ಣಯಿಸಿದೆ.  ೨೦೧೮-೧೯ರ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ ೪.೬, ೨೦೧೮-೧೯ರ ಉತ್ತರಾರ್ಧದಲ್ಲಿ ಶೇಕಡಾ ೪.೮ ಮತ್ತು ೨೦೧೯-೨೦ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ ೫.೦ ಹಣದುಬ್ಬರವನ್ನು ರಿಸರ್ವ್ ಬ್ಯಾಂಕ್ ನಿರೀಕ್ಷಿಸಿತು.

2018: ನವದೆಹಲಿ: ಸುಪ್ರೀಂ ಕೋರ್ಟ್ ಕೊಲೀಜಿಯಂ ವ್ಯವಸ್ಥೆಯಲ್ಲೂ ನ್ಯಾಯಾಧೀಶರನ್ನು ನೇಮಿಸುವಾಗ ಸ್ವಜನ ಪಕ್ಷಪಾತ ನಡೆಯುತ್ತದೆ ಎಂಬುದಕ್ಕೆ ಕೇಂದ್ರ ಸರ್ಕಾರ ಸಾಕ್ಷ್ಯಾಧಾರ ನೀಡಿದೆ. ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಿಗೂ ಹಾಲಿ ನ್ಯಾಯಮೂರ್ತಿಗಳಿಗೂ ಸಂಬಂಧಗಳಿರುವ ಪ್ರಕರಣಗಳನ್ನು ಕೇಂದ್ರ ಸರ್ಕಾರ ಉಲ್ಲೇಖಿಸಿತು. ಅಲಹಾಬಾದ್ ಹೈಕೋರ್ಟಿಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಮಾಡಲಾದ ೩೩ ಶಿಫಾರಸುಗಳ ಪೈಕಿ ೧೧ ಪ್ರಕರಣಗಳಲ್ಲಿ ಈ ರೀತಿಯ ಸಂಬಂಧಗಳಿರುವುದು ಬಹಿರಂಗಕ್ಕೆ ಬಂದಿತು. ಅಲಹಾಬಾದ್ ಹೈಕೋರ್ಟ್ ಕೊಲೀಜಿಯಂ ಕಳೆದ ಫೆಬ್ರವರಿಯಲ್ಲಿ ೩೩ ವಕೀಲರನ್ನು ನ್ಯಾಯಮೂರ್ತಿಗಳ ಹುದ್ದೆಗೆ ನೇಮಿಸುವ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಅವುಗಳನ್ನು ಸಂಪೂರ್ಣ ಪರಿಶೀಲನೆಗೆ ಒಳಪಡಿಸಿ, ಬಳಿಕ ತನ್ನದೇ ಶಿಫಾರಸುಗಳೊಂದಿಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಕಳುಹಿಸಿತು.  ಅವರ ತೀರ್ಪುಗಳು, ಕಾನೂನು ವಲಯದಲ್ಲಿ ಅವರ ಘನತೆ, ವೈಯಕ್ತಿಕ ಹಾಗೂ ವೃತ್ತಿಪರ ಕ್ಷಮತೆಗಳನ್ನು ಆಧರಿಸಿ ಪಟ್ಟಿಯಲ್ಲಿರುವ ಅಭ್ಯರ್ಥಿಗಳ ಪರಿಶೀಲನೆ ನಡೆಸಲಾಗಿದೆ. ಆದರೂ, ಅಪರೂಪವೆಂಬಂತೆ, ಹಾಲಿ ಮತ್ತು ನಿವೃತ್ತ ನ್ಯಾಯಮೂರ್ತಿಗಳ ಜೊತೆಗೆ ಈ ಅಭ್ಯರ್ಥಿಗಳಿಗೆ ಇರುವ ಸಂಬಂಧಗಳನ್ನು ಸರ್ಕಾರ ಎತ್ತಿ ತೋರಿಸಿದೆ. ಇಂತಹ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ ಕೊಲೀಜಿಯಂ ಮರುಪರಿಶೀಲಿಸಿ ಇತರ ಸಮರ್ಥ ವಕೀಲರಿಗೆ ಅವಕಾಶ ಮಾಡಿಕೊಡಬಹುದು ಎಂದು ಸರ್ಕಾರ ಅಭಿಪ್ರಾಯ ವ್ಯಕ್ತ ಪಡಿಸಿತು. ಅಲಹಾಬಾದ್ ಹೈಕೋರ್ಟ್ ಕೋಲೀಜಿಯಂ ಎರಡು ವರ್ಷಗಳ ಹಿಂದೆ ಕೂಡಾ ಇಂತಹದೇ ಶಿಫಾರಸು ಸಲ್ಲಿಸಿತ್ತು. ಆಗ ಪಟ್ಟಿ ಮಾಡಲಾಗಿದ್ದ ೩೦ ವಕೀಲರ ಪೈಕಿ ೧೧ ವಕೀಲರ ಹೆಸರುಗಳನ್ನು ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ)  ಟಿ.ಎಸ್.  ಠಾಕೂರ್ ತಿರಸ್ಕರಿಸಿ ೧೯ ಮಂದಿಯ ಹೆಸರುಗಳನ್ನು ಮಾತ್ರ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.  ೨೦೧೬ರ ಪಟ್ಟಿಯಲ್ಲೂ ನ್ಯಾಯಮೂರ್ತಿಗಳು ಮತ್ತು ರಾಜಕಾರಣಿಗಳ ಸಮೀಪ ಸಂಬಂಧಿಗಳ ಹೆಸರುಗಳಿದ್ದವು.  ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಹಲವರು ಕೊಲೀಜಿಯಂ ಸದಸ್ಯರಿಗೆ ನಿಕಟ ಸಂಬಂಧಿಗಳು ಎಂಬುದನ್ನು ಪತ್ರಿಕಾ ಸಮೂಹವೊಂದು ಇತ್ತೀಚೆಗೆ ವರದಿ ಮಾಡಿತ್ತು.

2018: ನವದೆಹಲಿ: ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ದಲಿತ ಸಂಘಟನೆಗಳು ಕರೆಕೊಟ್ಟಿರುವ ರಾಷ್ಟ್ರವ್ಯಾಪಿ ಬಂದ್ ಗೆ ಮುಂಚಿತವಾಗಿಯೇ ಕೇಂದ್ರ ಸಚಿವ ಸಂಪುಟವು ಸುಪ್ರೀಂಕೋರ್ಟ್ ತೀರ್ಪನ್ನು ತಿರಸ್ಕರಿಸಿ ಕಾನೂನನ್ನು ಕಠಿಣ ಮೂ ವಿಧಿಗಳ ಸಹಿತವಾಗಿ ಊರ್ಜಿತಗೊಳಿಸುವ ತಿದ್ದುಪಡಿ ಮಸೂದೆಗೆ ತನ್ನ ಒಪ್ಪಿಗೆ ನೀಡಿತು. ಮಸೂದೆಯನ್ನು ಸಂಸತ್ತಿನ ಹಾಲಿ ಮುಂಗಾರು ಅಧಿವೇಶನದಲ್ಲಿಯೇ ಮಂಡಿಸಲಾಗುವುದು. ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು ಈ ವರ್ಷ ಮಾರ್ಚ್ ತಿಂಗಳಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಕಾಯ್ದೆಯ ಅಡಿಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ತತ್ ಕ್ಷಣ ಬಂಧಿಸುವ ವಿಧಿಯನ್ನು ರದ್ದು ಪಡಿಸಿತ್ತು. ಇದು ದಲಿತ ಸಮೂಹಗಳ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಗಿತ್ತು. ಮಸೂದೆಯು ಕಲ್ಪಿಸಿದ್ದ ರಕ್ಷಣೆಗಳನ್ನು ಸುಪ್ರೀಂಕೋರ್ಟ್ ತೀರ್ಪು ದುರ್ಬಲಗೊಳಿಸಿದೆ ಎಂದು ದಲಿತ ಸಂಘಟನೆಗಳು ಆಪಾದಿಸಿದ್ದವು. ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಏಪ್ರಿಲ್ ೨ರಂದು  ಮಧ್ಯ ಮತ್ತು ಉತ್ತರ ಭಾರತದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ೯ ಜನರ ಸಾವಿಗೆ ಕಾರಣವಾಗಿದ್ದವು. ದಲಿತ ಸಮೂಹಗಳು ಆಗಸ್ಟ್ ೯ರಂದು ಎರಡನೇ ಪ್ರತಿಭಟನೆಗೆ ಕರೆಕೊಟ್ಟು, ಸುಪ್ರೀಂಕೋರ್ಟ್ ತೀರ್ಪನ್ನು ತಿರಸ್ಕರಿಸಲು ಸರ್ಕಾರ ತತ್ ಕ್ಷಣ ಮಧ್ಯಪ್ರವೇಶ ಮಾಡಿ ಸಂಸತ್ತಿನ ಹಾಲಿ ಅಧಿವೇಶನದಲ್ಲಿಯೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದವು.
ಬಿಜೆಪಿಯ ಮಿತ್ರ ಪಕ್ಷವಾದ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್ ಅವರು ಸುಪ್ರೀಂಕೋರ್ಟ್ ಆದೇಶವನ್ನು ತಿರಸ್ಕರಿಸಲು ಹೊಸ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದ್ದಲ್ಲದೆ, ದಲಿತ ಮತ್ತು ಬುಡಕಟ್ಟು ಸಮೂಹಗಳ ಬೇಡಿಕೆಯನ್ನು ಬೆಂಬಲಿಸಿದ್ದರು.  ಮಸೂದೆಯಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಪರಿಶೀಲಿಸಲು ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಚಿವ ಸಮಿತಿಯೊಂದನ್ನು ಈ ಮೊದಲೇ ರಚಿಸಲಾಗಿತ್ತು.  ಕಾಯ್ದೆಯಲ್ಲಿದ್ದ ಕಠಿಣ ಜಾಮೀನು ವಿಧಿಗಳನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸಿ ನಡೆದ ಹೋರಾಟದ ನೇತೃತ್ವ ವಹಿಸಿದ ದಲಿತ ಸಂಘಟನೆಗಳು ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ದಲಿತ ಸಂಸತ್ ಸದಸ್ಯರು ಮತ್ತು ಶಾಸಕರಿಗೆ ಪತ್ರಗಳನ್ನೂ ಬರೆದಿದ್ದವು.  ಸಂಸತ್ ಅಧಿವೇಶನ ಆರಂಭವಾಗುವ ವೇಳೆಯಲ್ಲೇ ನಡೆದಿದ್ದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟಕ್ಕೆ (ಎನ್ ಡಿಎ) ಸೇರಿದ ದಲಿತ ಸಂಸತ್ ಸದಸ್ಯರ ಸಭೆಯೂ ಈ ಬೇಡಿಕೆಯನ್ನು ಪುನರುಚ್ಚರಿಸಿತ್ತು. ಸಭೆಯು ಈ ವರ್ಷ ಜುಲೈ ತಿಂಗಳಲ್ಲಿ ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷರಾಗಿ ನ್ಯಾಯಮೂರ್ತಿ ಎ ಕೆ ಗೋಯೆಲ್ ಅವರನ್ನು ನೇಮಿಸಿದ ಸರ್ಕಾರದ ಕ್ರಮದ ಬಗೆಗೂ ಸಭೆ ಆಕ್ಷೇಪ ವ್ಯಕ್ತ ಪಡಿಸಿತ್ತು.  ನ್ಯಾಯಮೂರ್ತಿ ಗೋಯೆಲ್ ಮತ್ತು ನ್ಯಾಯಮೂರ್ತಿ ಯು ಯು ಲಲಿತ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಎಸ್ ಸಿ / ಎಸ್ ಸಿ ಕಾಯ್ದೆಯಲ್ಲಿ ಬಂಧನಗಳಿಗೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ವಿಧಿಗಳನ್ನು ಅಳವಡಿಸುವಂತೆ ಆದೇಶ ನೀಡಿತ್ತು.  ಬಳಿಕ ತನ್ನ ಆದೇಶವನ್ನು ಸಮರ್ಥಿಸಿದ್ದ ಸುಪ್ರೀಂಕೋರ್ಟ್ ಸಂಸತ್ತು ಕೂಡಾ ವ್ಯಕ್ತಿಯೊಬ್ಬನನ್ನು ನ್ಯಾಯೋಚಿತ ಕಾರ್‍ಯವಿಧಾನಗಳಿಲ್ಲದೆ ಬಂಧಿಸಲು ಅವಕಾಶ ನೀಡಲಾಗದು ಮತ್ತು ದೂರುಗಳನ್ನು ಪೂರ್ವಭಾವಿಯಾಗಿಯೇ ಪರಿಶೀಲಿಸಲು ಆದೇಶಿಸುವ ಮೂಲಕ ತಾನು ಮುಗ್ಧರ ಬದುಕು ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ರಕ್ಷಿಸಿರುವುದಾಗಿ ಹೇಳಿತ್ತು.

2018: ಲಕ್ನೋ: ದೇಶದ ಅತಿ ಉದ್ದದ ಹೆದ್ದಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣಗೊಂಡಿದ್ದ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಎಸ್ ಯುವಿಯಲ್ಲಿ ಪ್ರಯಾಣ ಮಾಡುತ್ತಿದ್ದ ನಾಲ್ಕು ಮಂದಿ ತಮ್ಮ ಕಾರು ಬುಧವಾರ ಬೆಳಗ್ಗೆ ಹೆದ್ದಾರಿಯಲ್ಲಿ ಬಾಯ್ದೆರೆದು ನಿಂತಿದ್ದ ೫೦ ಅಡಿ ಆಳದ ಹೊಂಡಕ್ಕೆ ಬಿದ್ದು ಅಪಾಯದಲ್ಲಿ ಸಿಲುಕಿಕೊಂಡರೂ, ಅದೃಷ್ಟವಶಾತ್ ಪಾರಾದರು. ಆಗ್ರಾದಿಂದ ೧೬  ಕಿಮೀ ದೂರದಲ್ಲಿರುವ ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ಹೆದ್ದಾರಿಯ ಡೌಕಿ ಪ್ರದೇಶದ ವಾಜಿದ್ ಪುರ ಪುಲಿಯಾ ಸಮೀಪ ಈ ದುರ್ಘಟನೆ ಘಟಿಸಿತು.  ಇಲ್ಲಿಗೆ ಬಂದಿರುವ ಮಾಹಿತಿ ಪ್ರಕಾರ, ಕಾರಿನಲ್ಲಿದ್ದ ನಾಲ್ವರೂ ವ್ಯಕ್ತಿಗಳು ಕನೌಜ್ ನಿಂದ ಮುಂಬೈಯತ್ತ ಪಯಣ ಹೊರಟಿದ್ದರು. ಮಾರ್ಗ ಮಧ್ಯೆ ಅರಿವಿಲ್ಲದೆ ಸರ್ವೀಸ್ ರಸ್ತೆಯಲ್ಲಿ ಸಾಗಿದ ಅವರಿಗೆ ಆಗ್ರಾ ಮತ್ತು ಸುತ್ತುಮುತ್ತಣ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಯ ಪರಿಣಾಮವಾಗಿ ರಸ್ತೆಯ ಒಂದು ಬದಿ ಬಾಯ್ದೆರೆದು ಅಲ್ಲಿ ದೊಡ್ಡ ಕುಳಿ ಬಿದ್ದಿದ್ದುದು ಗೊತಾಗದೆ ವಾಹನ ಸಹಿತವಾಗಿ ಅದರೊಳಕ್ಕೆ ಬಿದ್ದರು.  ಚಾಲಕ ಬ್ರೇಕ್ ಹಾಕಿದರೂ ವಾಹನ ಹೊಂಡಕ್ಕೆ ಜಾರಿತು. ವಾಹನದಲ್ಲಿದ್ದ ಎಲ್ಲ ನಾಲ್ವರೂ ಸುರಕ್ಷಿತರಾಗಿದ್ದಾರೆ ಎಂದು ಆಗ್ರದಲ್ಲಿನ ಡೋಕಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ನಿತಿನ್ ಕಸನಾ ಹೇಳಿದರು.  ತಾವು ಮುಂಬೈಯಿಂದ ಕಾರು ಖರೀದಿಸಿ ವಾಪಸ್ ಗೂಗಲ್ ಮೂಲಕ ರಸ್ತೆ ಅರಸುತ್ತಾ ಹೊರಟಿದ್ದೆವು. ಇಂಟರ್ ನೆಟ್ ಸಂಪರ್ಕ ತಪ್ಪಿದಾಗ ನಾವು ಸರ್ವೀಸ್ ರಸ್ತೆಗೆ ತೆರಳಿದ್ದೆವು ಎಂದು ಕಾರಿನ ಚಾಲಕ ರಚಿತ್ ಕುಮಾರ್ ನುಡಿದರು.
ಮುಂದಿದ್ದ ಮಾರ್ಗ ಬಿರುಕು ಬಿಟ್ಟಿರುವುದು ಕಾಣುತ್ತಿದ್ದಂತೆಯೇ ನಾನು ಬ್ರೇಕ್ ಹಾಕಿದೆ. ಆದರೂ ಕಾರು ಹೊಂಡದೊಳಕ್ಕೆ ಜಾರಿತು ಎಂದು ಅವರು ನುಡಿದರು. ದುರ್ಘಟನೆ ಬಗ್ಗೆ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ತತ್ ಕ್ಷಣವೇ ಸ್ಥಳಕ್ಕೆ ಕ್ರೇನನ್ನು ತರಿಸಲಾಯಿತು.  ರಕ್ಷಣಾ ಕಾರ್ಯಾಚರಣೆ ವೇಳೆಯಲ್ಲಿ ಕಾರನ್ನು ಸುತ್ತಿದ್ದ ಕ್ರೇನ್ ವೈರ್ ಜಾರಿ ಕಾರು ಪುನಃ ಹೊಂಡಕ್ಕೆ ಬಿತ್ತು. ಆದರೆ ಅದೃಷ್ಟವಶಾತ್ ಸ್ಥಳೀಯರು ಅದಾಗಲೇ ಕಾರಿನ ಒಳಗೆ ಇದ್ದವರನ್ನು ರಕ್ಷಿಸಿದ್ದರು. ದುರ್ಘಟನೆಯ ವಿವರ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ರೈಲ್ವೇಯ ಸಮಾಲೋಚನಾ ಸಂಸ್ಥೆ ರೈಟೆಸ್ ಲಿಮಿಟೆಡ್ ಗೆ ಘಟನೆ ಬಗ್ಗೆ ತನಿಖೆ ನಡೆಸಿ ೧೫ ದಿನಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.  ರಸ್ತೆಯನ್ನು ನಿರ್ಮಿಸಿದ ಸಂಸ್ಥೆಯೇ ದುರಸ್ತಿಯನ್ನು ತನ್ನ ವೆಚ್ಚದಲ್ಲೇ ಮಾಡಲಿದೆ ಎಂದು ಉತ್ತರ ಪ್ರದೇಶ ಎಕ್ಸ್ ಪ್ರೆಸ್ ವೇ ಇಂಡಸ್ಟ್ರಿಯಲ್ ಡೆವಲಪ್ ಮೆಂಟ್ ಅಥಾರಿಟಿಯ (ಯುಪಿಇಐಡಿಎ) ಅಧ್ಯಕ್ಷ ಅವನೀಶ್ ಅವಸ್ಥಿ ಹೇಳಿದರು.  ಸರ್ಕಾರವು ರಸ್ತೆ ನಿರ್ಮಾಣ ಸಂಸ್ಥೆಗೆ ದುರಸ್ತಿ ಕೆಲಸ ಮಾಡುವಂತೆ ಸೂಚಿಸಿದೆ. ರಾಜ್ಯದಲ್ಲಿ ಭಾರಿ ಮಳೆಯ ಬಳಿಕ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಸರ್ಕಾರ ರಸ್ತೆ ನಿರ್ಮಾಣ ಸಂಸ್ಥೆಗಳಿಗೆ ಸೂಚಿಸಿದೆ ಎಂದು ಅವರು ನುಡಿದರು.  ಆಗ್ರಾ-ಲಕ್ನೋ ಎಕ್ಸ್ ಪ್ರೆಸ್ ಹೆದ್ದಾರಿಯು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು.  ಯುಪಿಇಐಡಿಎ ಕೇವಲ ೨೩ ತಿಂಗಳುಗಳ ದಾಖಲೆ ಅವಧಿಯಲ್ಲಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ಹೆದ್ದಾರಿಯನ್ನು ನಿರ್ಮಿಸಿತ್ತು. ಅಖಿಲೇಶ್ ಯಾದವ್ ಅವರು ೨೦೧೬ರ ನವೆಂಬರ್ ೨೧ರಂದು ರಸ್ತೆಯನ್ನು ಉದ್ಘಾಟಿಸಿದ್ದರು.  ಈ ರಸ್ತೆಯು ರಾಷ್ಟ್ರದ ಅತ್ಯಂತ ನಿಯಂತ್ರಿತ ಉದ್ದದ ಗ್ರೀನ್ ಫೀಲ್ಡ್ ಎಕ್ಸ್ ಪ್ರೆಸ್ ಹೆದ್ದಾರಿಯಾಗಿದ್ದು, ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನಗಳು ತುರ್ತು ಸಂದರ್ಭಗಳಲ್ಲಿ ಇದರಲ್ಲಿ ಇಳಿಯಬಹುದು ಮತ್ತು ಗಗನಕ್ಕೆ ಏರಬಹುದು. ಭಾರತದ ಅತ್ಯಂತ ಉದ್ದದ ಆರು ಮಾರ್ಗಗಳ ಹೆದ್ದಾರಿ ಎಂಬುದಾಗಿ ಪರಿಗಣಿತವಾಗಿರುವ ಈ ಹೆದ್ದಾರಿಯ ಎರಡು ನಗರಗಳ ನಡುವಣ ಪಯಣದ ಅವಧಿಯನ್ನು ಏಳು ಗಂಟೆಯಿಂದ ಮೂರೂವರೆ ಗಂಟೆಗಳಿಗೆ ಇಳಿಸಿದೆ. ಆದರೆ ಈ ರಸ್ತೆಯಲ್ಲಿನ ಅಪಘಾತಗಳು ಕಳವಳಕ್ಕೆ ಕಾರಣವಾಗಿದೆ.  ಮಾಹಿತಿ  ಹಕ್ಕು ಕಾರ್ಯಕರ್ತ ಕೆ.ಸಿ. ಜೈನ್ ಅವರು ಪಡೆದುಕೊಂಡಿರುವ ಮಾಹಿತಿಯ ಪ್ರಕಾರ ೨೦೧೭ರ ಆಗಸ್ಟ್ ನಿಂದ ೨೦೧೮ರ ಮಾರ್ಚ್ ವರೆಗಿನ ಅವಧಿಯಲ್ಲಿ ಸಂಭವಿಸಿದ ೮೫೩ ಅಪಘಾತಗಳಲ್ಲಿ ಕನಿಷ್ಠ ೧೦೦ ಮಂದಿ ಅಸು ನೀಗಿದ್ದಾರೆ. ಅಪಘಾತಗಳಿಗೆ ಮುಖ್ಯ ಕಾರಣ ಚಾಲಕರು ಅತಿವೇಗದಿಂದ ವಾಹನಗಳನ್ನು ಚಲಾಯಿಸುವುದು ಎಂದು ಮಾಹಿತಿ ತಿಳಿಸಿತ್ತು.  ಆಗ್ರಾದಲ್ಲಿ ಗ್ವಾಲಿಯರ್ ರಸ್ತೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೨ರಲ್ಲಿನ ಆಂತರಿಕ ರಿಂಗ್ ರಸ್ತೆಯಲ್ಲಿ ಆಳವಾದ ಕುಳಿಗಳು ಕಂಡು ಬಂದ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆಗೆ ಆಜ್ಞಾಪಿಸಿದ್ದರು.

2018: ನವದೆಹಲಿ: ಅಸ್ಸಾಮಿನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಕರಡು ಮತು ೨೦೧೯ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ದೆಹಲಿಗೆ ಬಂದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ಪ್ರಮುಖರಾದ ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವಾರು ವಿಪಕ್ಷ ನಾಯಕರನ್ನು ಭೇಟಿ ಮಾಡಿದರು.  ಎನ್ ಆರ್ ಸಿ ವಿಚಾರದಲ್ಲಿ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಿದ ಮಮತಾ, ಆಡಳಿತಾರೂಢ ಪಕ್ಷವು ೨೦೧೯ರಲ್ಲಿ ತಾನು ಗೆಲ್ಲುವ ಅವಕಾಶಗಳ ಬಗ್ಗೆ ಚಿಂತಿತವಾಗಿದೆ ಏಕೆಂದರೆ ಇಡಿ ವಿಪಕ್ಷ ಸಮುದಾಯವು ಅವರನ್ನು ಪರಾಭವಗೊಳಿಸಲು ಒಂದಾಗುತ್ತಿವೆ ಎಂದು ಹೇಳಿದರು.  ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಹೊರಬಂದ ಮಮತಾ ಬ್ಯಾನರ್ಜಿ ಸುದ್ದಿಗಾರರ ಜೊತೆ ಮಾತನಾಡುತ್ತಾ ’ನಮ್ಮ ಬಾಂಧವ್ಯ ಹಲವಾರು ವರ್ಷಗಳಷ್ಟು ಹಳೆಯದು. ನಾವು ರಾಜಕೀಯ, ಎನ್ ಆರ್ ಸಿ ಬಗ್ಗೆ ಮತ್ತು ೨೦೧೯ರ ಚುನಾವಣೆಯಲ್ಲಿ ಹೇಗೆ ಜೊತೆಯಾಗಿ ಹೋರಾಡಬಹುದು ಎಂಬ ಬಗ್ಗೆ ಚರ್ಚಿಸಿದೆವು’ ಎಂದು ನುಡಿದರು.  ತಮ್ಮ ’ಅಂತರ್ಯುದ್ಧ ಹೇಳಿಕೆ ಬಗ್ಗೆ ಬಿಜೆಪಿ ತಮ್ಮ ಮೇಲೆ ದಾಳಿ ನಡೆಸುತ್ತಿರುವುದನ್ನು ಉಲ್ಲೇಖಿಸಿದ ಬ್ಯಾನರ್ಜಿ ’ಅವರ ಪ್ರತಿಯೊಂದು ಹೇಳಿಕೆಗಳಿಗೂ ಉತ್ತರ ಕೊಡಲು ನಾನು ಬಿಜೆಪಿಯ ಸೇವಕಿ ಅಲ್ಲ. ನಾನು ಇದನ್ನು (ಅಂತರ್ಯುದ್ಧ ಹೇಳಿಕೆ) ಹೇಳಿಲ್ಲ. ನನ್ನ ಕಾಳಜಿ ಎನ್ ಆರ್ ಸಿ ಪಟ್ಟಿಯಿಂದ ಬಿಟ್ಟು ಹೋಗಿರುವ ೪೦ ಲಕ್ಷ ಮಂದಿಯ ಬಗೆಗೆ ಮಾತ್ರ. ತಾವು ೨೦೧೯ರಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಗೊತ್ತಾಗಿರುವುದರಿಂದ ಬಿಜೆಪಿ ರಾಜಕೀಯವಾಗಿ ಉದ್ವಿಗ್ನಗೊಂಡಿದೆ ಎಂದು ಮಮತಾ ಹೇಳಿದರು. ದೆಹಲಿಯಲ್ಲಿ ವಿಪಕ್ಷ ನಾಯಕರನ್ನು ಭೇಟಿ ಮಾಡುವ ಮುನ್ನ ಮಮತಾ ಬ್ಯಾನರ್ಜಿ ಅವರು ’ನಾನು ಪ್ರಧಾನಿ ಹುದ್ದೆಗಾಗಿ ಪೈಪೋಟಿ ನಡೆಸುತ್ತಿಲ್ಲ. ಪ್ರಧಾನಿ ಹುದ್ದೆಗೆ ಅಭ್ಯರ್ಥಿಯನ್ನು ಎಲ್ಲ ವಿರೋಧ ಪಕ್ಷಗಳು ಸಾಮೂಹಿಕವಾಗಿ ಆಯ್ಕೆ ಮಾಡುತ್ತವೆ ಎಂದು ನುಡಿದರು. ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ದೆಹಲಿಯಲ್ಲಿ ಎರಡನೇ ದಿನವನ್ನು ಕಳೆದ ಬ್ಯಾನರ್ಜಿ ಕಾಂಗ್ರೆಸ್, ಟಿಡಿಪಿ, ವೈಎಸ್ ಆರ್ (ಕಾಂಗ್ರೆಸ್), ಡಿಎಂಕೆ, ಆರ್ ಜೆಡಿ ಮತ್ತು ಜೆಡಿ (ಎಸ್) ನಾಯಕರನ್ನು ಭೇಟಿ ಮಾಡಿ ಕೋಲ್ಕತದಲ್ಲಿ ತಾವು ಹಮ್ಮಿಕೊಂಡಿರುವ ಜನವರಿ ೧೯ರ ರ್‍ಯಾಲಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು.  ಟಿಎಂಸಿ ಮುಖ್ಯಸ್ಥೆ ಬಿಜೆಪಿಯ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರನ್ನೂ ಅವರ ಕೊಠಡಿಯಲ್ಲಿ ಭೇಟಿ ಮಾಡಿದರು. ಅಡ್ವಾಣಿ ಅವರ ಜೊತೆಗಿನ ತಮ್ಮ ಬಾಂಧವ್ಯ ಹಲವು ವರ್ಷಗಳಷ್ಟು ಹಳೆಯದು ಎಂದು ನುಡಿದ ಅವರು ಅಡ್ವಾಣಿ ಅವರನ್ನು ಆರೋಗ್ಯ ವಿಚಾರಿಸುವ ಸಲುವಾಗಿ ಭೇಟಿ ಮಾಡಿದೆ ಎಂದು ಹೇಳಿದರು.  ಎನ್ ಡಿಎ ಯ ಅಂಗಪಕ್ಷವಾಗಿರುವ ಶಿವಸೇನೆಯ ಸಂಜಯ್ ರಾವತ್ ಅವನ್ನು ಭೇಟಿ ಮಾಡಿದ ಮಮತಾ ಜನವರಿ ೧೯ರ ರ್‍ಯಾಲಿಗೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರನ್ನು ಆಹ್ವಾನಿಸಿದರು. ‘ಮೊದಲ ಆದ್ಯತೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಎಲ್ಲ ವಿರೋಧ ಪಕ್ಷಗಳನ್ನು ಒಗ್ಗೂಡಿಸುವುದು. ನಾನು ಯಾವುದೇ ಹುದ್ದೆಗಾಗಿ ಪಐಪೋಟಿ ನಡೆಸುತ್ತಿಲ್ಲ. ಎಲ್ಲ ಪಕ್ಷಗಳು ಒಟ್ಟಾಗಿ ಕೆಲಸ ಮಾಡಬೇಕು ಎಂಬುದು ನನ್ನ ಕಾಳಜಿ. ಎಲ್ಲ ರಾಜಕೀಯ ಪಕ್ಷಗಳೂ ಒಟ್ಟಾಗಿ ಕುಳಿತು ನಿರ್ಧರಿಸಬೇಕು ಎಂದು ಅವರು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.  ಸಂಸತಿನ ಟಿಎಂಸಿ ಕಚೇರಿಯಲ್ಲಿ ಈದಿನ ವಿಪಕ್ಷ ನಾಯಕರು ಮಮತಾ ಅವರನ್ನು ಭೇಟಿ ಮಾಡಲು ಜೇನ್ನೊಣಗಳಂತೆ ಸುತ್ತುತ್ತಿದ್ದರು. ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಅಹ್ಮದ್ ಪಟೇಲ್ ಅವರ ಜೊತೆಗೂ ಮಮತಾ ಮಾತನಾಡಿದರು.  ಬಿಜೆಪಿಯಿಂದ ಅಮಾನತುಗೊಂಡಿರುವ ಸಂಸತ್ ಸದಸ್ಯ ಕೀರ್ತಿ ಆಜಾದ್ ಅವರು ಮಮತಾ ಅವರನ್ನು ಮಹಾನ್ ನಾಯಕಿ ಎಂದು ಶ್ಲಾಘಿಸಿದರು. ವಿಪಕ್ಷಗಳನ್ನು ಒಗ್ಗೂಡಿಸಲು ಅವರು ಮಾಡುತ್ತಿರುವ ಯತ್ನಗಳು ಶ್ಲಾಘನೀಯ ಎಂದು ಆಜಾದ್ ಹೇಳಿದರು.  ಸೆಂಟ್ರಲ್ ಹಾಲ್ ನಲ್ಲಿ ಮಮತಾ ಅವರು ಇತರ ವಿಪಕ್ಷ ನಾಯಕರನ್ನು ಭೇಟಿ ಮಾಡಿ ರ್‍ಯಾಲಿಗೆ ಆಮಂತ್ರಿಸಿದರು. ವಿದ್ಯುನ್ಮಾನ ಮತಯಂತ್ರ (ಇವಿಎಂ) ಅಕ್ರಮದ ಹಿನ್ನೆಲೆಯಲ್ಲಿ ಹಳೆಯ ಬ್ಯಾಲೆಟ್ ಪೇಪರ್ ವ್ಯವಸ್ಥೆ ಜಾರಿಗೆ ತರುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಲು ಜಂಟಿ ನಿಯೋಗ ಕಳುಹಿಸಲು ಮಮತಾ ವಿಪಕ್ಷ ನಾಯಕರನ್ನು ಆಗ್ರಹಿಸಿದರು. ಜನತಾದಳ (ಎಸ್) ಮುಖ್ಯಸ್ಥ ಎಚ್.ಡಿ. ದೇವೇಗೌಡ ಅವನ್ನೂ ಭೇಟಿ ಮಾಡಿದ ಮಮತಾ, ರ್‍ಯಾಲಿಗೆ ಆಹ್ವಾನಿಸಿದರು. ಅಸ್ಸಾಮಿಗೆ ತಮ್ಮ ನಿಯೋಗಗಳನ್ನು ಕಳುಹಿಸುವ ಮೂಲಕ ಕೇಂದ್ರದ ಮೇಲೆ ಒತ್ತಡ ಹೇರುವಂತೆ ಮಮತಾ ಮನವಿ ಮಾಡಿದರು.


2018: ನವದೆಹಲಿ: ಇಮ್ರಾನ್ ಖಾನ್ ಅವರು ಆಗಸ್ಟ್ ೧೧ರಂದು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣ
ವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಭಾರತದ ಕೆಲವು ಪ್ರಮುಖ ಕ್ರಿಕೆಟಿಗರನ್ನು ಆಹ್ವಾನಿಸಲಾಗಿದೆ ಎಂದು ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ವಕ್ತಾರ ಫವಾದ್ ಚೌಧರಿ ಅವರು ಇಲ್ಲಿ ಹೇಳಿದರು. ಮಾಜಿ ಕ್ರಿಕೆಟಿಗರಾದ ಸುನಿಲ್ ಗಾವಸ್ಕರ್, ಕಪಿಲ್ ದೇವ್, ನವಜೋತ್ ಸಿಂಗ್ ಸಿಧು ಮತ್ತು ಬಾಲಿವುಡ್ ನಟ ಆಮೀರ್ ಖಾನ್ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಪಾಕಿಸ್ತಾನ ಸುಪ್ರೀಂಕೋರ್ಟಿನ ಹೊರಭಾಗದಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಚೌಧರಿ ನುಡಿದರು.  ೬೫ರ ಹರೆಯದ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ (ಪಿಟಿಐ) ಪಕ್ಷವು ಜುಲೈ ೨೫ರಂದು ಪಾಕಿಸ್ತಾನ ರಾಷ್ಟ್ರೀಯ ಅಸೆಂಬ್ಲಿಗೆ ನಡೆದ ಚುನಾವಣೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ್ದು, ಇತರ ಸಣ್ಣ ಗುಂಪುಗಳ ಬೆಂಬಲದೊಂದಿಗೆ ಸರ್ಕಾರ ರಚಿಸಲು ಸಿದ್ಧತೆ ನಡೆಸುತ್ತಿದೆ. ಖಾನ್ ಅವರು ಆಗಸ್ಟ್ ೧೧ರಂದು ತಾವು ಪ್ರಮಾಣವಚನ ಸ್ವೀಕರಿಸುವುದಾಗಿ ಪ್ರಕಟಿಸಿದ್ದರು. ಪಕ್ಷದ ಅಧಿಕಾರಿಯೊಬ್ಬರು ಇದಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಸಮಾರಂಭಕ್ಕೆ ಆಹ್ವಾನಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ್ದರು. ಆದರೆ ಈವರೆಗೂ ಯಾರಿಗೂ ಆಮಂತ್ರಣ ಕಳುಹಿಸಲಾಗಿಲ್ಲ.  ಪಾಕಿಸ್ತಾನ ವಿದೇಶಾಂಗ ಕಚೇರಿಯ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕ ವಿದೇಶೀ ಗಣ್ಯರನ್ನು ಆಹ್ವಾನಿಸಬೇಕೆ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಚೌಧರಿ ಅವರು ಟ್ವೀಟ್ ಮಾಡಿದ್ದರು.  ಪ್ರಮಾಣವಚನ ಸಮಾರಂಭದಲ್ಲಿ ಅಂತಾರಾಷ್ಟ್ರೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂಬ ಮಾಧ್ಯಮ ಊಹೆಗಳು ಸರಿಯಲ್ಲ. ನಾವು ವಿಷಯದ ಬಗ್ಗೆ ವಿದೇಶಾಂಗ ಕಚೇರಿಯ ಅಭಿಪ್ರಾಯವನ್ನು ಕೋರಿದ್ದೇವೆ. ಅದು ಬಂದ ಬಳಿಕ ಅದಕ್ಕೆ ಅನುಗುಣವಾಗಿ ನಿರ್ಧರಿಸಲಾಗುವುದು ಎಂದು ಅವರು ಟ್ವೀಟ್ ಮಾಡಿದ್ದರು.


2017:  ಇಸ್ಲಾಮಾಬಾದ್‌ : ಪಾಕಿಸ್ಥಾನದ ಮಾಜಿ ಪೆಟ್ರೋಲಿಯಂ ಸಚಿವ ಶಾಹೀದ್‌ ಖಾನ್‌ ಅಬ್ಟಾಸಿ ಅವರು ನವಾಜ್‌ ಷರೀಫ್ ಅವರ ಉತ್ತರಾಧಿಕಾರಿಯಾಗಿ, ಪಾಕಿಸ್ಥಾನದ 18ನೇ ಪ್ರಧಾನಿಯಾಗಿ ಆಯ್ಕೆಯಾದರು. ಪನಾಮಾ ಗೇಟ್‌ ಹಗರಣದಲ್ಲಿ ಭ್ರಷ್ಟರೆಂದು ಸುಪ್ರೀಂ ಕೋರ್ಟ್‌ ನಿಂದ ಘೋಷಿಸಲ್ಪಟ್ಟ  ಪ್ರಧಾನಿ ನವಾಜ್‌ ಷರೀಫ್ ಹುದ್ದೆಗೆ ಅನರ್ಹರಾದ ನಾಲ್ಕು ದಿನಗಳ ಬಳಿಕ ಪಾಕ್‌ ಸಂಸದರು ಅಬ್ಟಾಸಿ ಅವರನ್ನು ನೂತನ ಪ್ರಧಾನಿಯನ್ನಾಗಿ ಈದಿನ ಆಯ್ಕೆ ಮಾಡಿದರು. ಪಿಎಂಎಲ್‌ಎನ್‌ ನಾಯಕ ಶಾಹೀದ್‌ ಅಬ್ಟಾಸಿ ಅವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಮತದಾನದಲ್ಲಿ 221 ಮತಗಳನ್ನು ಪಡೆದು ಪ್ರಧಾನಿ ಹುದ್ದೆಗೆ ಆಯ್ಕೆಯಾದರು. ಹಾಗಿದ್ದರೂ ಅಬ್ಟಾಸಿ ಅವರು ತತ್ಕಾಲೀನ ಪ್ರಧಾನಿ ಆಗಿದ್ದಾರೆ. ಪಂಜಾಬ್‌ ಮುಖ್ಯಮಂತ್ರಿಯಾಗಿರುವ ನವಾಜ್‌ ಷರೀಫ್ ಅವರ ಸಹೋದರ ಶಹಬಾಜ್‌ ಷರೀಫ್ ಅವರು ಒಕ್ಕೂಟ ಸರಕಾರದ ಅಧಿಕಾರವನ್ನು ಔಪಚಾರಿಕವಾಗಿ ವಹಿಸಿಕೊಳ್ಳುವ ತನಕದ ಅವಧಿಗೆ ಅಬ್ಟಾಸಿ ತತ್ಕಾಲೀನ ಪ್ರಧಾನಿಯಾಗಿರುತ್ತಾರೆ.  ಅಬ್ಟಾಸಿ ಅವರನ್ನು ತತ್ಕಾಲೀನ ಪ್ರಧಾನಿಯನ್ನಾಗಿ ಆಯ್ಕೆ ಮಾಡುವುದು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬಹುಮತ ಹೊಂದಿರುವ ಪಿಎಂಎಲ್‌ಎನ್‌ಗೆ ಏನೇನೂ ಕಷ್ಟವಾಗಲಿಲ್ಲ.  ನವಾಜ್‌ ಷರೀಫ್ ಅವರ ಸಹೋದರ, ವಿಶಾಲ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿಯಾಗಿರುವ ಶಹಬಾಜ್‌ ಸಂಸದೀಯ ಚುನಾವಣೆಯನ್ನು ಗೆದ್ದ ಬಳಿಕವಷ್ಟೇ ಪಿಎಂಎಲ್‌ಎನ್‌ ಸಂಸದರು ಅವರನ್ನು ದೇಶದ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಬಹುದು. 

2017: ಮುಂಬಯಿ : ಕಾರು ಉತ್ಪಾದನೆಯ  ಭಾರತದ ಅತೀ ದೊಡ್ಡ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಎಲ್ಲರ
ನಿರೀಕ್ಷೆಗೂ ಮೀರಿ ಜುಲೈ ತಿಂಗಳ ಮಾರಾಟದಲ್ಲಿ  ಶೇ.20.6ರ ವೃದ್ಧಿಯನ್ನು ಸಾಧಿಸುವ ಮೂಲಕ ಹೊಸ ವಿಕ್ರಮವನ್ನೇ ದಾಖಲಿಸಿತು. ಅಂತೆಯೇ ಈದಿನದ ವಹಿವಾಟಿನಲ್ಲಿ ಮೋಟಾರು ವಾಹನ ಉತ್ಪಾದಕ ಕಂಪೆನಿಗಳು ಬಹುವಾಗಿ ವಿಜೃಂಭಿಸಿದವು. ಇಂದಿನ ವಹಿವಾಟಿನ ಕೊನೇ ತಾಸಿನಲ್ಲಿ ನಡೆದ ಬಿರುಸಿನ ಖರೀದಿಯ ಬಲದಲ್ಲಿ  ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ದಿನಾಂತ್ಯದ ಹೊಸ ಎತ್ತರದ ದಾಖಲೆಯನ್ನು ಮಾಡಿದವು. ಸೆನ್ಸೆಕ್ಸ್‌  60.23 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ಹೊಸ ಎತ್ತರವಾಗಿ 32,575.17 ಅಂಕಗಳ ಮಟ್ಟವನ್ನು ತಲುಪಿದರೆ, ನಿಫ್ಟಿ ಸೂಚ್ಯಂಕ 37.55 ಅಂಕಗಳ ಏರಿಕೆಯೊಂದಿಗೆ 10,114.65 ಅಂಕಗಳ ದಿನಾಂತ್ಯದ ಹೊಸ ಎತ್ತರವನ್ನು ತಲುಪಿತು. ಇಂದು ವ್ಯವಹಾರಕ್ಕೆ ಒಳಪಟ್ಟ ಶೇರುಗಳ ಪೈಕಿ 1,046 ಶೇರುಗಳು ಮುನ್ನಡೆ ಸಾಧಿಸಿದವು; 1,627 ಶೇರುಗಳು ಹಿನ್ನಡೆಗೆ ಗುರಿಯಾದವು; 165 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ. ಆಟೋ ಶೇರುಗಳ ಪೈಕಿ ಮಾರುತಿ ಸುಜುಕಿ ಇಂದು ಹೊಳೆದು ವಿಜೃಂಭಿಸಿತು. ಈಶರ್‌ ಮೋಟರ್‌, ಹೀರೋ ಮೋಟೋ ಕಾರ್ಪ್‌ ಶೇರುಗಳು ಮಾರುತಿಯನ್ನು ಅನುಸರಿಸಿದವು. ಇದೇ ವೇಳೆ ಇಂಡಿಯಾ ಬುಲ್ಸ್‌ ಹೌಸಿಂಗ್‌ ಟಾಪ್‌ ಗೇನರ್‌ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಹಾಗಿದ್ದರೂ ಲೂಪಿನ್‌, ಒಎನ್‌ಜಿಸಿ, ಬ್ಯಾಂಕ್‌ ಆಫ್ ಬರೋಡ ಕೆಳಮುಖವಾದವು. 

2017: ಹೈದರಾಬಾದ್‌: ಅಣ್ವಿಕ ಜೀವಶಾಸ್ತ್ರಜ್ಞ ಡಾ.ಪುಷ್ಪ ಮಿತ್ರ ಭಾರ್ಗವ(89) ತಮ್ಮ
ಹೈದರಾಬಾದ್‌ ನಿವಾಸದಲ್ಲಿ ನಿಧನರಾದರು. ಹತ್ತಿಯಿಂದ ಬದನೆವರೆಗಿನ ಕುಲಾಂತರಿ ಬೆಳೆಯನ್ನು ದೇಶದಲ್ಲಿ ಪರಿಚಯಿಸಿದ್ದರ  ವಿರುದ್ಧ ಭಾರ್ಗವ ಅವರು ದನಿ ಎತ್ತಿದ್ದರು. ಈ ಬೆಳೆಗಳಿಂದ ಆರೋಗ್ಯಕ್ಕೆ ಹಾನಿಯಾಗುವ ಸಂಭವವಿದ್ದು ಕನಿಷ್ಠ 10 ವರ್ಷಗಳ ಪರೀಕ್ಷೆ ಅಗತ್ಯ ಎಂದಿದ್ದರು. ಕುಲಾಂತರಿ ಬೀಜ ಪೂರೈಸುವ ಬಹುರಾಷ್ಟ್ರೀಯ ಕಂಪನಿಗಳನ್ನು ವಿರೋಧಿಸುತ್ತಿದ್ದರು. ದೇಶದಲ್ಲಿ ಸರ್ಕಾರ ಕುಲಾಂತರಿ ಬೆಳೆಗೆ ಸಮ್ಮತಿ ನೀಡುವುದಕ್ಕೆ ಸುಮಾರು 15 ವರ್ಷಗಳ ಕಾಲ ವಿರೋಧ ವ್ಯಕ್ತಪಡಿಸಿದ್ದರು. ’ಇತ್ತೀಚೆಗೆ ಮೂತ್ರಪಿಂಡ ಸಮಸ್ಯೆಗೆ ಒಳಗಾಗಿದ್ದ ಡಾ.ಪಿಎಂ ಭಾರ್ಗವ ಅವರು ಈದಿನ ಬೆಳಗ್ಗೆಯಿಂದ  ಜ್ವರದಿಂದ ನರಳುತ್ತಿದ್ದರು. ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ’ ಎಂದು ಸಿಸಿಎಂಬಿ ನಿರ್ದೇಶಕ ರಾಕೇಶ್‌ ಮಿಶ್ರಾ ತಿಳಿಸಿದರು. ಜೀವವಿಜ್ಞಾನದಲ್ಲಿನ ಸಂಶೋಧನೆ ಹಾಗೂ ಸಮಾಜಕ್ಕೆ ಅದರ ಪ್ರಯೋಜನ ವಿಸ್ತರಿಸಲು ಅನುವಾಗುವ ನಿಟ್ಟಿನಲ್ಲಿ 1977ರಲ್ಲಿ ಕೋಶ ಮತ್ತು ಅಣ್ವಿಕ ಜೀವ ವಿಜ್ಞಾನ ಕೇಂದ್ರ(Cellular and Molecular Biology –CCMB) ಸ್ಥಾಪಿಸಿದರು. ರಾಷ್ಟ್ರದಲ್ಲಿ ವಿಜ್ಞಾನವನ್ನು ಪಸರಿಸುವಲ್ಲಿ ಡಾ.ಪಿಎಂ ಭಾರ್ಗವ ಅವರ ಕಾರ್ಯ ಪ್ರಾಮುಖ್ಯತೆ ಪಡೆದಿದೆ.  ಭಾರತ ಸರ್ಕಾರದಿಂದ ಪದ್ಮಭೂಷಣ ಸೇರಿದಂತೆ ನೂರಾರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜಸ್ತಾನದ ಅಜ್ಮೀರ್‌ನಲ್ಲಿ ಜನಿಸಿದ ಭಾರ್ಗವ ಅವರು ಲಖನೌ ಹಾಗೂ ವಾರಣಸಿಯಲ್ಲಿ ವ್ಯಾಸಂಗ ನಡೆಸಿದ್ದರು. ಇಂಗ್ಲೆಂಡ್‌ ಹಾಗೂ ಫ್ರಾನ್ಸ್ ಪ್ರಮುಖ ಸಂಸ್ಥೆಗಳಲ್ಲಿ ಸಂಶೋಧನೆ ನಡೆಸಿದ್ದರು.

2017:  ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷ ಸ್ಥಾನಕ್ಕೆ ಅರವಿಂದ್ ಪನಗರಿಯಾ ಅವರು  ರಾಜೀನಾಮೆ
ನೀಡಿದರು. ಮತ್ತೆ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಾಗಿ ಅವರು ಪ್ರಕಟಿಸಿದರು. ಇದೇ ತಿಂಗಳ 31ರವರೆಗೆ ನೀತಿ ಆಯೋಗದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಲಿರುವ ಅವರು, ಸೆಪ್ಟೆಂಬರ್‌ನಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಮತ್ತೆ ಕಾರ್ಯಾರಂಭ ಮಾಡಲಿದ್ದಾರೆ. ‘ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ನನ್ನ ರಜೆ ಮುಗಿದಿದೆ. ಸೆಪ್ಟೆಂಬರ್ 5ರಂದು ಮತ್ತೆ ಸೇರಿಕೊಳ್ಳಲು ನಿರ್ಧರಿಸಿದ್ದೇನೆ’ ಎಂದು ಅವರು ತಿಳಿಸಿದರು. ಪನಗರಿಯಾ ಅವರನ್ನು ನೀತಿ ಆಯೋಗದ ಉಪಾಧ್ಯಕ್ಷರನ್ನಾಗಿ 2014ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು. ಏಷ್ಯಾ ಅಭಿವೃದ್ಧಿ ಬ್ಯಾಂಕ್, ವಿಶ್ವ ಬ್ಯಾಂಕ್, ಐಎಂಎಫ್‌ನಲ್ಲಿ ಕಾರ್ಯನಿರ್ವಹಿಸಿದ ಅನುಭವವಿರುವ ಪನಗರಿಯಾ ಅವರನ್ನು 2012ರಲ್ಲಿ ಪದ್ಮ ಭೂಷಣ ನೀಡಿ ಗೌರವಿಸಲಾಗಿತ್ತು.
2016: ನವದೆಹಲಿ: ಮಾಜಿ ಮುಖ್ಯಮಂತ್ರಿಗಳಿಗೆ ಜೀವನ ಪರ್ಯಂತ ಸರ್ಕಾರಿ ಬಂಗಲೆ ಹೊಂದುವ ಹಕ್ಕು ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪರಿಣಾಮವಾಗಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಉತ್ತರ ಪ್ರದೇಶದ 6 ಮಂದಿ ಮಾಜಿ ಮುಖ್ಯಮಂತ್ರಿಗಳು ಎರಡು ತಿಂಗಳ ಒಳಗಾಗಿ ತಮ್ಮ ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸಬೇಕಾಗಿ ಬಂದಿತು. ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಆರು ಮಂದಿ ಮಾಜಿ ಮುಖ್ಯಮಂತ್ರಿಗಳಿಗೆ 2 ತಿಂಗಳ ಒಳಗಾಗಿ ಸರ್ಕಾರಿ ಬಂಗಲೆ ತೆರವುಗೊಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತು. ಮಾಧ್ಯಮ ವರದಿಗಳ ಪ್ರಕಾರ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಗಳಾದ ಕಲ್ಯಾಣ್ ಸಿಂಗ್ (ಬಿಜೆಪಿ), ಎನ್.ಡಿ. ತಿವಾರಿ (ಕಾಂಗ್ರೆಸ್) ಅವರ ಹೆಸರುಗಳೂ ಸುಪ್ರೀಂಕೋರ್ಟ್ ಆದೇಶದಲ್ಲಿ ಪ್ರಸ್ತಾಪಿಸಲ್ಪಟ್ಟಿವೆ ಎಂದು ಹೇಳಲಾಯಿತು. ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಸ್ತುತ ಕೇಂದ್ರ ಗೃಹ ಸಚಿವರಾದ ರಾಜನಾಥ್ ಸಿಂಗ್ ಅವರೂ ಸರ್ಕಾರಿ ಬಂಗಲೆಗಳನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಲಾಯಿತು.

2016: ನವದೆಹಲಿ: ಮಾಜಿ ಮುಖ್ಯಮಂತ್ರಿಗಳು ಜೀವನ ಪರ್ಯಂತ ಸರ್ಕಾರಿ ವಸತಿ ಸವಲತ್ತಿಗೆ ಅರ್ಹರಲ್ಲ ಎಂದು ಸುಪ್ರೀಂಕೋರ್ಟ್ ಈದಿನ ಮಹತ್ವದ ತೀರ್ಪು ನೀಡಿತು. ನ್ಯಾಯಮೂರ್ತಿ ಅನಿಲ್.ಆರ್. ದವೆ ನೇತೃತ್ವದ ತ್ರಿಸದಸ್ಯ ಪೀಠವು 2004 ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುತ್ತಾಇಂತಹ ಯಾವುದೇ ಸರ್ಕಾರಿ ವಸತಿಯನ್ನು ಎರಡು ಅಥವಾ ಮೂರು ತಿಂಗಳಲ್ಲಿ ಖಾಲಿ ಮಾಡಬೇಕು. ಜೀವನ ಪರ್ಯಂತ ಸರ್ಕಾರಿ ವಸತಿ ಸವಲತ್ತು ಹೊಂದುವ ಹಕ್ಕು ಅವರಿಗೆ ಇಲ್ಲಎಂದು ಹೇಳಿತು. ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಮತ್ತು ಎಲ್. ನಾಗೇಶ್ವರ ರಾವ್ ಅವರು ಪೀಠದ ಇತರ ಇಬ್ಬರು ಸದಸ್ಯರಾಗಿದ್ದು, ಉತ್ತರ ಪ್ರದೇಶದ ಸರ್ಕಾರೇತರ (ಎನ್ಜಿಒ) ಸಂಘಟನೆ ಲೋಕ ಪ್ರಹರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ತೀರ್ಪು ನೀಡಿತು. ಮಾಜಿ ಮುಖ್ಯಮಂತ್ರಿಗಳು ಮತ್ತು ಇತರ ಅನರ್ಹ ಸಂಘಟನೆಗಳಿಗೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡುವುದರ ವಿರುದ್ಧ ನಿರ್ದೇಶನ ನೀಡುವಂತೆ ಲೋಕ ಪ್ರಹರಿ ತನ್ನ ಅರ್ಜಿಯಲ್ಲಿ ಮನವಿ ಮಾಡಿತ್ತು. ಅಲಹಾಬಾದ್ ಹೈಕೋರ್ಟಿನ ನಿರ್ದೇಶನದ ಹೊರತಾಗಿಯೂ ಉತ್ತರ ಪ್ರದೇಶ ಸರ್ಕಾರವುಮಾಜಿ ಮುಖ್ಯಮಂತ್ರಿಗಳ ವಸತಿ ಮಂಜೂರಾತಿ ನಿಯಮಗಳು, 1997’ ಎಂಬ ಕಾನೂನನ್ನು ರಚಿಸಿ ಮಾಜಿ ಮುಖ್ಯಮಂತ್ರಿಗಳಿಗೆ ಸರ್ಕಾರಿ ವಸತಿಗಳನ್ನು ಮಂಜೂರು ಮಾಡಿಕೊಳ್ಳಲು ವ್ಯವಸ್ಥೆ ಮಾಡಿಕೊಂಡಿದೆ ಎಂದು ಲೋಕ ಪ್ರಹರಿ ಆಪಾದಿಸಿತ್ತು. ಕಾನೂನು ಸಂವಿಧಾನ ಬಾಹಿರ ಮತ್ತು ಅಕ್ರಮ ಎಂಬುದಾಗಿ ಎನ್ಜಿಒ ಅರ್ಜಿಯಲ್ಲಿ ಪ್ರತಿಪಾದಿಸಿತ್ತು. 2014 ನವೆಂಬರ್ 27ರಂದು ವಿಚಾರಣೆ ಬಳಿಕ ತೀರ್ಪನ್ನು ಕಾಯ್ದಿರಿಸಲಾಗಿತ್ತು.

2016: ನವದೆಹಲಿ: ಸೋಹ್ರಾಬುದೀನ್ ಶೇಖ್ ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೆ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾ ಗೊಳಿಸಿತು. ನಿವೃತ್ತ ಸರ್ಕಾರಿ ಅಧಿಕಾರಿ ಮತ್ತು ಸಾಮಾಜಿಕ ಕಾರ್ಯಕರ್ತ ಹರ್ಷ್ ಮಂದಿರ್ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಜಸ್ಟೀಸ್ ಎಸ್..ಬೋಬಡೆ ಮತ್ತು ಜಸ್ಟೀಸ್ ಅಶೋಕ್ ಭೂಷಣ್ ಅವರಿದ್ದ ಪೀಠವು ಅರ್ಧ ಗಂಟೆ ವಿಚಾರಣೆ ನಡೆಸಿದ ನಂತರ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿತು. ಬಾಂಬೆ ಹೈಕೋರ್ಟ್ ಸೊಹ್ರಾಬುದ್ದೀನ್ ಪ್ರಕರಣದಲ್ಲಿ ಅಮಿತ್ ಷಾ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ತೀರ್ಪನ್ನು ಪ್ರಶ್ನಿಸಿ ಹರ್ಷ್ ಮಂದಿರ್ ಮೇಲ್ಮನವಿ ಸಲ್ಲಿಸಿದ್ದರು.
 2016: ನವದೆಹಲಿ: ಉದ್ದೀಪನ ಮದ್ದು ಸೇವನೆ ಪ್ರಕರಣದಲ್ಲಿ ತಾತ್ಕಾಲಿಕವಾಗಿ ಅಮಾನತಿನಲ್ಲಿದ್ದ ಕುಸ್ತಿಪಟು ನರಸಿಂಗ್ ಯಾದವ್ಗೆ ರಾಷ್ಟ್ರೀಯ ಉದ್ದೀಪನ ನಿಗ್ರಹ ಘಟಕ (ನಾಡಾ) ಶಿಸ್ತು ಸಮಿತಿ ಕ್ಲೀನ್ ಚಿಟ್ ನೀಡಿತು. ಮೂಲಕ ನರಸಿಂಗ್ ರಿಯೋ ಕನಸು ಜೀವಂತವಾಯಿತು. ಪ್ರಕರಣದ ವಿಚಾರಣೆ ನಡೆಸಿದ ನಾಡಾದ ಶಿಸ್ತು ಸಮಿತಿ ಈದಿನ ತನ್ನ ತೀರ್ಪು ಪ್ರಕಟಿಸಿ, ನರಸಿಂಗ್ ಯಾದವ್ ಯಾವುದೇ ತಪ್ಪೆಸಗಿಲ್ಲ ಅವರು ಪಿತೂರಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿತು. ಸಮಿತಿಯು ವಿಚಾರಣೆ ಪೂರ್ಣ ಗೊಳಿಸಿದ್ದು, ನಾಡಾದ ಉದ್ದೀಪನ ಮದ್ದು ನಿಯಮಾವಳಿ 10.4 ಪ್ರಕಾರ ನರಸಿಂಗ್ ಪರವಾಗಿ ತೀರ್ಪು ನೀಡಲಾಯಿತು. ನರಸಿಂಗ್ ವ್ಯವಸ್ಥಿತ ಪಿತೂರಿಗೆ ಬಲಿಯಾಗಿದ್ದಾರೆ. ಇದರಲ್ಲಿ ಅವರ ತಪ್ಪಿಲ್ಲ ಎಂದು ನಾಡಾದ ಮಹಾ ನಿರ್ದೇಶಕ ನವೀನ್ ಅಗರ್ವಾಲ್ ತಿಳಿಸಿದರು. ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿರುವುದಕ್ಕೆ ಸಂಬಂಧಿಸಿದಂತೆ ಸದ್ಯ ತಾತ್ಕಾಲಿಕ ಅಮಾನತಿನಲ್ಲಿರುವ 26 ವರ್ಷದ ನರಸಿಂಗ್ ಮತ್ತು ಅವರ ಪರ ವಕೀಲರು ನಾಡಾ ಶಿಸ್ತು ಸಮಿತಿ ಎದುರು ತಮ್ಮ ವಾದ ಮಂಡಿಸಿದ್ದರು ನಾಡಾ ಪರ ವಕೀಲರು ನರಸಿಂಗ್ಗೆ ಶಿಕ್ಷೆಯಾಗಬೇಕು ಎಂದು ವಾದ ಮಂಡಿಸಿದ್ದರು. ತೀರ್ಪಿನ ಕಾರಣ ಉದ್ದೀಪನ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೂ ನರಸಿಂಗ್ಗೆ ಒಲಿಂಪಿಕ್ಸ್ ಅವಕಾಶ ಇನ್ನೂ ಜೀವಂತವಾಗಿ ಉಳಿಯಿತು. ನಾಡಾದಿಂದ ಕ್ಲೀನ್ಚಿಟ್ ದೊರೆತರೆ ನರಸಿಂಗ್, ಪರ್ವೀನ್ ರಾಣಾ ಬದಲಿಗೆ ಮತ್ತೆ ರಿಯೋದಲ್ಲಿ ಸ್ಪರ್ಧೆಗಿಳಿಯುವುದಕ್ಕೆ ತಾನು ಯಾವುದೇ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಸ್ಪಷ್ಟಪಡಿಸಿತ್ತು. ಕುಸ್ತಿ 74 ಕೆಜಿ ವಿಭಾಗದ ಕೋಟಾ ಸ್ಥಾನಕ್ಕೆ ಭಾರತೀಯ ಕುಸ್ತಿ ಒಕ್ಕೂಟ (ಡಬ್ಲ್ಯುಎಫ್) ಸದ್ಯ ನರಸಿಂಗ್ ಬದಲು ದೆಹಲಿ ಪೈಲ್ವಾನ್ ಪರ್ವೀನ್ ರಾಣಾರನ್ನು ಹೆಸರಿಸಿತ್ತು. ಈಗ ರಾಣಾ ಬದಲು ನರಸಿಂಗ್ಗೆ ಮತ್ತೆ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಯಿತು.

2016: ಗಿಲ್ಗಿಟ್/ಜಿನೀವಾ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಬಾಲಿಸ್ತಾನ ಪ್ರಾಂತ್ಯದಲ್ಲಿ ಚೀನಾದ ಪ್ರಾಬಲ್ಯ ಹೆಚ್ಚುತ್ತಿರುವುದಕ್ಕೆ ಸ್ಥಳೀಯರ ವಿರೋಧವಿದ್ದು, ಪಾಕಿಸ್ತಾನದ ವಿರುದ್ಧ ಅಸಮಾಧಾನ ಹೆಚ್ಚಾಗುತ್ತಿರುವುದು ಬೆಳಕಿಗೆ ಬಂದಿತು. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಚೀನಾ 3000 ಕಿ.ಮೀ. ಉದ್ದದ ಆರ್ಥಿಕ ಕಾರಿಡಾರ್ಗಾಗಿ ಸುಮಾರು 40 ಬಿಲಿಯನ್ ಡಾಲರ್ ಬಂಡವಾಳ ಹೂಡುತ್ತಿದೆ. ಇದು ರಸ್ತೆ, ರೈಲು ಮಾರ್ಗ ಮತ್ತು ಪೈಪ್ಲೈನ್ಗಳನ್ನು ಒಳಗೊಂಡಿರುತ್ತದೆ. ಆದರೆ ಯೋಜನೆಯಿಂದ ನಮಗೆ ಏನೂ ಲಾಭವಾಗುತ್ತಿಲ್ಲ ಎಂದು ಪಿಒಕೆ ಜನರು ಅಸಮಧಾನ ವ್ಯಕ್ತಪಡಿಸಿದರು. ಯೋಜನೆಯನ್ನು ಜಾರಿಗೊಳಿಸಲು ಚೀನಾದ ಕೆಲಸಗಾರರು ಪಿಒಕೆಗೆ ಆಗಮಿಸಿದ್ದಾರೆ. ಇದರಿಂದಾಗಿ ಸ್ಥಳೀಯರಿಗೂ ಸಹ ಉದ್ಯೋಗಾವಕಾಶ ದೊರೆಯುತ್ತಿಲ್ಲ. ಜತೆಗೆ ಪಾಕಿಸ್ತಾನ ಯೋಜನೆಗಾಗಿ ನಮ್ಮ ಸ್ಥಳವನ್ನು ಬಲವಂತವಾಗಿ ವಶಕ್ಕೆ ಪಡೆಯುತ್ತಿದೆ. ನಮಗೆ ಪರಿಹಾರ ನೀಡುತ್ತಿಲ್ಲ, ಯೋಜನೆ ಕುರಿತು ಪಾಕಿಸ್ತಾನ ನಮಗೆ ತಿಳಿಸಿಲ್ಲ, ನಮ್ಮನ್ನು ವಿಶ್ವಾಸಕ್ಕೆ ಪಡೆಯದೆ ಯೋಜನೆ ರೂಪಿಸಲಾಗುತ್ತಿದೆ. ಯೋಜನೆ ಪೂರ್ಣಗೊಂಡ ನಂತರ ಚೀನಾದಿಂದ ಬರುವ ಟ್ರಕ್ಗಳನ್ನು ಲೆಕ್ಕ ಹಾಕುತ್ತಾ ಕೂರಬೇಕು ಅಷ್ಟೇ ಎಂದು ಪಾಕ್ ಆಕ್ರಮಿತ ಕಾಶ್ಮೀರದ ಅಬ್ದುಲ್ ರೆಹಮಾನ್ ಬುಖಾರಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾರೆ. ಯೋಜನೆಯ ಭಾಗವಾಗಿ 60 ಆರ್ಥಿಕ ವಲಯಗಳನ್ನು ಸ್ಥಾಪಿಸಲಾಗುತ್ತಿದೆ. ಆದರೆ ಗಿಲ್ಗಿಟ್ ಬಾಲಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಂದೂ ಆರ್ಥಿಕ ವಲಯ ಸ್ಥಾಪಿಸಲಾಗುತ್ತಿಲ್ಲ. ಮೂಲಕ ನಮಗೆ ಅನ್ಯಾಯ ಮಾಡಲಾಗುತ್ತಿದೆ. ಯೋಜನೆಯ ಭಾಗವಾಗಿ ಪಿಒಕೆಯಲ್ಲಿ ಬಂಡವಾಳ ಹೂಡಿಕೆಯಾಗುತ್ತಿಲ್ಲ ಎಂದು ಕಾಶ್ಮೀರ ನ್ಯಾಷನಲ್ ಪಕ್ಷದ ನಾಯಕ ಮೊಹಮ್ಮದ್ ನಯೀಮ್ ಖಾನ್ ತಿಳಿಸಿದರು.

2016: ಬೆಂಗಳೂರು/ಮೈಸೂರು: ರಾಕೇಶ್ ಸಿದ್ದರಾಮಯ್ಯ ಅವರ ಅಂತ್ಯಸಂಸ್ಕಾರವನ್ನು ನಿರಂಜನಾನಂದ ಸ್ವಾಮಿ ನೇತೃತ್ವದಲ್ಲಿ ಕುರುಬ ಸಂಪ್ರದಾಯದಂತೆ ರಾಕೇಶ್ ಸಿದ್ದರಾಮಯ್ಯ ಅವರ ಪುತ್ರ ಧವನ್ ರಾಕೇಶ್ ನೆರವೇರಿಸಿದರು. ಟಿ. ಕಾಟೂರಿನ ಫಾರ್ಮ್ ​ಹೌಸ್ನಲ್ಲಿ ಅಂತ್ಯಸಂಸ್ಕಾರ ನೆರವೇರಿತುಬೆಲ್ಜಿಯಂ ಪ್ರವಾಸದಲ್ಲಿರುವ ವೇಳೆ ಅನಾರೋಗ್ಯದಿಂದ ನಿಧನರಾದ ರಾಕೇಶ್ ಸಿದ್ದರಾಮಯ್ಯ ಅವರ ಪಾರ್ಥಿವ ಶರೀರ ಬೆಳಗ್ಗೆ 9.05 ಸುಮಾರಿಗೆ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಬಳಿಕ ಅಲ್ಲಿಂದ ವಿಶೇಷ ವಿಮಾನದಲ್ಲಿಯೇ ಮೈಸೂರಿಗೆ ತರಲಾಯಿತು. ರಾಕೇಶ್ ಪತ್ನಿ ಸ್ಮಿತಾ, ತಾಯಿ ಪಾರ್ವತಿ ಹಾಗೂ ಸಿಎಂ ಸಿದ್ದರಾಮಯ್ಯ ನವರು ಜೊತೆಯಲ್ಲೇ ಆಗಮಿಸಿದರು. ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಸಿದ್ದರಾಮಯ್ಯನವರು ಬಿಕ್ಕಳಿಸಿ ಅತ್ತರುವಿಮಾನ ನಿಲ್ದಾಣಕ್ಕೆ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳು ಆಗಮಿಸಿದ್ದರು. ಅಂತಿಮ ದರ್ಶನಕ್ಕಾಗಿ ವಿಮಾನನಿಲ್ದಾಣಕ್ಕೇ ಆಗಮಿಸಿದ ಸಾವಿರಾರು ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಯಿತು.

2016: ಕೊಲ್ಹಾಪುರ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸಾಹಸಿ ಜೋಡಿಯೊಂದು 1000 ಅಡಿ ಎತ್ತರದಲ್ಲಿ ರೋಪ್ವೇಗೆ ಜೋತು ಬಿದ್ದು ಜೋಡಿ ಮದುವೆಯಾದರು. ಮೂಲಕ ವಿಭಿನ್ನವಾಗಿ ತಮ್ಮ ಮದುವೆ ಸಂಭ್ರಮವನ್ನು ಆಚರಿಸಿಕೊಂಡರು. ಈ ಘಟನೆ ನಡೆದದ್ದು, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ. ಪರ್ವತಾರೋಹಿಯಾಗಿರುವ ಜೈದೀಪ್ ಜಾಧವ್ (30) ವಿಶೇಷವಾಗಿ ಮದುವೆಯಾಗಬೇಕು, ಅದು ಹೆಚ್ಚು ದಿನ ನೆನಪಿನಲ್ಲುಳಿಯಬೇಕು ಎಂದು ಬಯಸಿದ್ದರು. ಹಾಗಾಗಿ ಕಣಿವೆಯಲ್ಲಿ ಎರಡು ಬೆಟ್ಟಗಳ ನಡುವೆ ಕಟ್ಟಿದ್ದ ರೋಪ್ ವೇಗೆ ಜೋತು ಬಿದ್ದು ಜೈದೀಪ್ ಜಾಧವ್ ರೇಷ್ಮಾ ಪಾಟೀಲ್ ಅವರನ್ನು ವರಿಸಿದರು. ವಧು ಮತ್ತು ವರರಿಗೆ ಸುರಕ್ಷತಾ ಸಾಧನಗಳನ್ನು ತೊಡಿಸಿದ ನಂತರ ರೋಪ್ ವೇ ಮೂಲಕ ಕಣಿವೆಯ ಮಧ್ಯೆ ಕಳುಹಿಸಲಾಯಿತು. ನಂತರ ಪುರೋಹಿತರನ್ನೂ ರೋಪ್ ವೇ ಮಧ್ಯೆ ಕಳುಹಿಸಲಾಯಿತು. ಪುರೋಹಿತರು ಅಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯವನ್ನು ನಡೆಸಿಕೊಟ್ಟರು. ವಧು ವರರು ಅಷ್ಟು ಎತ್ತರದಲ್ಲೇ ಪರಸ್ಪರ ಹಾರ ಬದಲಿಸಿಕೊಂಡರು ಮತ್ತು ಜೈದೀಪ್ ಆಕಾಶದಲ್ಲೇ ತಮ್ಮ ಸಂಗಾತಿಗೆ ಮಂಗಳ ಸೂತ್ರವನ್ನೂ ಕಟ್ಟಿದರು. ಕೊಲ್ಹಾಪುರ ಬಳಿ ಪಶ್ಚಿಮ ಘಟ್ಟ ಸರಣಿಯ ವಿಶಾಲಗಧ್ ಮತ್ತು ಪನ್ಹಲಾ ಬೆಟ್ಟಗಳ ನಡುವೆ ಕಟ್ಟಲಾಗಿರುವ ರೋಪ್ ವೇ ಜೈದೀಪ್ ಮತ್ತು ರೇಷ್ಮಾ ಪಾಟೀಲ್ ಅವರ ಮದುವೆಗೆ ಸಾಕ್ಷಿಯಾಯಿತು. ಇವರ ಮದುವೆಗೆ ಸುಮಾರು 1200 ಜನರು ಬೆಟ್ಟದ ತುದಿಯಲ್ಲಿ ನಿಂತು ಆಶಿರ್ವಾದ ಮಾಡಿದರು.

2016: ಬೈರೂತ್: ಸಿರಿಯಾದ ಅಲೆಪ್ಪೋ ನಗರದ ಬಳಿ ರಷ್ಯಾದ ಮಿಲಿಟರಿ ಹೆಲಿಕಾಪ್ಟರನ್ನು ಹೊಡೆದುರುಳಿಸಲಾಗಿದ್ದು, ಘಟನೆಯಲ್ಲಿ ಹೆಲಿಕಾಪ್ಟರಿನಲ್ಲಿದ್ದ ಐವರು ಸಾವನ್ನಪ್ಪಿದರು ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿತು. ಅಲೆಪ್ಪೋ ನಗರದ ಬಳಿ ಸಿರಿಯಾ ಸರ್ಕಾರಿ ಪಡೆಗಳೊಂದಿಗೆ ಸಿರಿಯಾ ವಿರೋಧಿ ಪಡೆಗಳು ಮತ್ತು ಇಸ್ಲಾಮಿಕ್ ಉಗ್ರರು ಯುದ್ಧ ನಡೆಸುತ್ತಿದ್ದಾರೆ. ಪ್ರದೇಶಕ್ಕೆ ಆಹಾರ ಮತ್ತು ಔಷಧಿಗಳನ್ನು ತಲುಪಿಸಿ ವಾಪಸ್ಸಾಗುತ್ತಿದ್ದ ಮೀ-8 ಹೆಲಿಕ್ಯಾಪ್ಟರ್ ಮೇಲೆ ನೆಲದಿಂದ ದಾಳಿ ನಡೆಸಲಾಗಿದೆ. ನಂತರ ಹೆಲಿಕಾಪ್ಟರ್ ಪತನವಾಯಿತು. ಹೆಲಿಕಾಪ್ಟರಿನಲ್ಲಿ ಮೂವರು ಸಿಬ್ಬಂದಿ ಮತ್ತು ಇಬ್ಬರು ಅಧಿಕಾರಿಗಳು ಪ್ರಯಾಣಿಸುತ್ತಿದ್ದರು. ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಹೆಲಿಕಾಪ್ಟರಿನಲ್ಲಿ ಇದ್ದವರೆಲ್ಲರೂ ಮೃತರಾಗಿದ್ದಾರೆ. ಹೆಲಿಕಾಪ್ಟರ್ ಮೇಲೆ ದಾಳಿ ನಡೆದ ನಂತರ ಜನವಸತಿ ಪ್ರದೇಶದಿಂದ ದೂರ ಹೆಲಿಕಾಪ್ಟರನ್ನು  ಕೊಂಡೊಯ್ಯುವಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದ್ದಾರೆ. ಆದರೆ ಹೆಲಿಕಾಪ್ಟರ್ ಮೇಲೆ ದಾಳಿ ನಡೆಸಿದವರು ಯಾರು ಎಂಬುದು ಇನ್ನೂ ತಿಳಿದು ಬಂದಿಲ್ಲ ಎಂದು ರಷ್ಯಾ ರಕ್ಷಣಾ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತು.

2016: ಅಹಮದಾಬಾದ್: ಅನಿರೀಕ್ಷಿತ ಬೆಳವಣಿಗೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾಗೆ ಪತ್ರ ಬರೆದರು. ಆನಂದಿ ಬೆನ್ ಅವರ ಪತ್ರ ತಲುಪಿದ್ದು, ಪಕ್ಷದ ಸಂಸದೀಯ ಮಂಡಳಿಯ ಸಭೆಯಲ್ಲಿ ಆನಂದಿ ಬೆನ್ ಅವರ ಇಂಗಿತದ ಕುರಿತು ಚರ್ಚೆ ನಡೆಸಿ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಪತ್ರಿಕ್ರಿಯೆ ನೀಡಿದರು. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆನಂದಿ ಬೆನ್ ಪಟೇಲ್ ಅವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ಮೂಲಕ ಆನಂದಿ ಬೆನ್ ಗುಜರಾತ್ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಗೌರವಕ್ಕೂ ಪಾತ್ರರಾಗಿದ್ದರು. ಹಲವು ವರ್ಷಗಳಿಂದ 75 ವರ್ಷ ತುಂಬಿದವರು ತಮ್ಮ ಹುದ್ದೆಗೆ ಸ್ವಯಂ ನಿವೃತ್ತಿ ಘೋಷಿಸುತ್ತಿದ್ದಾರೆ. ಇದೊಂದು ಸಂಪ್ರದಾಯವಾಗಿ ಮುಂದುವರೆದಿದೆ. ಮುಂದಿನ ನವೆಂಬರ್ನಲ್ಲಿ ನನಗೂ 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಬಯಸಿದ್ದೇನೆ. 2 ತಿಂಗಳ ಹಿಂದೆಯೇ ನಾನು ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದೆ. ಜತೆಗೆ ಇಂದು ನಾನು ಪತ್ರ ಬರೆದು ರಾಜೀನಾಮೆ ನೀಡಲು ಬಯಸಿರುವುದಾಗಿ ತಿಳಿಸಿದ್ದೇನೆ ಎಂದು ಆನಂದಿಬೆನ್ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡರು. ಕಳೆದ 2 ವರ್ಷಗಳಲ್ಲಿ ಗುಜರಾತ್ನಲ್ಲಿ ಸಾಕಷ್ಟು ಬದಲಾವಣೆಗಲಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಹೆಣಗುವಂತಾಗಿದೆ. ಜತೆಗೆ ಪಟೇಲ್ ಸಮುದಾಯ ಮೀಸಲಾತಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ ಸಹ ನಡೆಸಿತ್ತು. ಇತ್ತೀಚೆಗೆ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣ ಗುಜರಾತ್ ಸರ್ಕಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು.

2016: ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಾವು ಜೋರಾಗಿದ್ದು, ಇದೀಗ ನಿಯತಕಾಲಿಕೆ ನ್ಯೂಯಾರ್ಕ್ ಟೈಮ್ಸ್ ತನ್ನ ಮುಖಪುಟದಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲೇನಿಯಾ ಅವರ ನಗ್ನ ಪೋಟೋವನ್ನು ಪ್ರಕಟಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿ ಮಾಡಿತು. ಚಿತ್ರದ ಜತೆಗೆಇಂತಹ ರಾಷ್ಟ್ರದ ಸಂಭಾವ್ಯ ಪ್ರಥಮ ಮಹಿಳೆಯನ್ನು ನೀವೆಂದೂ ನೋಡಿರಲಾರಿರಿಎನ್ನುವ ಅಡಿ ಬರಹ ನೀಡಲಾಗಿತ್ತು. ಪೋಟೋ ಇಂದು ನಿನ್ನೆಯದಲ್ಲ. ಮೆಲೇನಿಯಾ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಸಂದರ್ಭ, ಅಂದರೆ 1990ರಲ್ಲಿ ನಗ್ನ ಫೋಟೋವನ್ನು ಕ್ಲಿಕ್ಕಿಸಲಾಗಿತ್ತು. ಇದೇ ಫೋಟೋವನ್ನು 1995ರಲ್ಲಿ ಯೂರೋಪ್ ಮ್ಯಾಗಝಿನ್ವೊಂದರಲ್ಲಿ ಪ್ರಕಟಿಸಲಾಗಿತ್ತು. ಚಿತ್ರವನ್ನು ಪ್ರೆಂಚ್ ಛಾಯಾಚಿತ್ರಗಾರ ಕ್ಲಿಕ್ಕಿಸಿದ್ದರು. ಕುರಿತು ಪ್ರತಿಕ್ರಿಯಿಸಿದ ಟ್ರಂಪ್, ಮೆಲೇನಿಯಾ ಯಶಸ್ವಿ ಮಾಡೆಲ್ ಆಗಿದ್ದರು. ಅವರ ಫೋಟೋಗಳು ಪ್ರಮುಖ ಮ್ಯಾಗಝೀನ್ಗಳ ಮುಖಪುಟಗಳಲ್ಲಿ ಹಿಂದೆ ರಾರಾಜಿಸಿವೆ ಎಂದು ತಿಳಿಸಿದ್ದಾರೆ.
1998 ರಲ್ಲಿ ಈಕೆಗೆ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ಫ್ಯಾಶನ್ ವೀಕ್ನಲ್ಲಿ ಪರಿಚಯವಾದರು. ನಂತರ ಅವರು 2005ರಲ್ಲಿ ಫ್ಲೊರಿಡಾದ ಪಾಮ್ ಬಿಚ್ ಮಾರ್ಚ್--ಲಾಗೊ ರೆಸಾರ್ಟ್ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾಗಿದ್ದರು. 
2016: ಮೀರತ್: ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಯಿ-ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದು, 7 ಜನ ಪೊಲೀಸರನ್ನು ಸೇವೆಯಿಂದ ಅಮಾನತು ಗೊಳಿಸಲಾಯಿತು. ಅತ್ಯಾಚಾರ ಸಂದರ್ಭದಲ್ಲಿ ಪೊಲೀಸರ ತುರ್ತು ಸೇವೆ ಕರೆಗೆ ಯಾವುದೇ ಉತ್ತರ ಸಿಗದೆ ಅಮಾನುಷವಾಗಿ ಯಾತನೆ ಅನುಭವಿಸಿದ ತಾಯಿ-ಮಗಳ ಪ್ರಕರಣದಲ್ಲಿ ಉತ್ತರ ಪ್ರದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಳಿಸಿದ ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. 300 ಜನ ಟಾಸ್ಕ್ಫೋರ್ಸ್ ಪೊಲೀಸರನ್ನು ಪ್ರಕರಣ ಭೇದಿಸಲು ನಿಯೋಜಿಸಲಾಗಿದ್ದು, ಶಂಕಿತರನ್ನು ಬಂಧಿಸಿ ಕರೆತಂದರು. ಅತ್ಯಾಚಾರಕ್ಕೊಳಗಾದ ತಾಯಿ-ಮಗಳಿಗೆ ಸುಮಾರು 200 ಕ್ಕೂ ಹೆಚ್ಚು ಅಪರಾಧಿಗಳ ಫೋಟೊ ತೋರಿಸಲಾಗಿದ್ದು, ಕೆಲವರ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು. ದುಷ್ಕರ್ವಿುಗಳ ಪತ್ತೆಗೆ 24 ಗಂಟೆಗಳ ಕಾಲಾವಕಾಶ ನೀಡಿದ್ದ ಉತ್ತರ ಪ್ರದೇಶ ಸರ್ಕಾರ ಅತ್ಯಾಚಾರ ನಡೆದ 100 ಮೀಟರ್ ಅಂತರದೊಳಗೆ ಪೊಲೀಸ್ ಚೌಕಿ ಇದ್ದರೂ ನೆರವಿಗೆ ಬರುವಲ್ಲಿ ವಿಫಲರಾದುದಕ್ಕಾಗಿ ಅಮಾನತು ಶಿಕ್ಷೆ ನೀಡಿತು. ಬಂಧುವೊಬ್ಬರ 13 ನೇ ದಿನದ ಅಪರ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ತೆರಳುತ್ತಿದ್ದ ಕುಟುಂಬದ ಮೇಲೆ ದರೋಡೆಕೋರರರು ಹೆದ್ದಾರಿಯಲ್ಲಿ ದಾಳಿ ಮಾಡಿ ಕಾರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದರು.

2015 ಲಂಡನ್: ಚಿಟ್ಟೆಗಳು ಹಾರುವ ಮುನ್ನ ತಮ್ಮ ‘ಯಾನ ಸ್ನಾಯು’ಗಳನ್ನು 'ವಿ' (V) ಆಕಾರಕ್ಕೆ ತಂದುಕೊಳ್ಳುವುದನ್ನು ಗಮನಿಸಿದ್ದೀರಾ? ಈ ತಂತ್ರವನ್ನು ಬಳಸಿ ಸೌರ ಫಲಕಗಳಿಂದ ಪಡೆಯುವ ವಿದ್ಯುಚ್ಚಕ್ತಿಯನ್ನು ಶೇಕಡಾ 50ರಷ್ಟು ಹೆಚ್ಚಿಸಿಕೊಳ್ಳಬಹುದು ಎಂಬುದನ್ನು ಪತ್ತೆ ಹಚ್ಚಿರುವುದಾಗಿ ಭಾರತೀಯ ಮೂಲದ ವಿಜ್ಞಾನಿ ತಪಸ್ ಮಲಿಕ್ ಪ್ರಕಟಿಸಿದರು. ಸೌರ ಇಂಧನ ಉತ್ಪಾದನೆ ಹೆಚ್ಚಿಸುವ ಈ ನೂತನ ತಂತ್ರಜ್ಞಾನವು ಸೌರವಿದ್ಯುತ್ ಉತ್ಪಾದನೆ ವೆಚ್ಚವನ್ನೂ ಗಣನೀಯ ಪ್ರಮಾಣದಲ್ಲಿ ಇಳಿಸಬಲ್ಲುದು. ಚಿಟ್ಟೆಗಳು ಹಾರುವ ಮುನ್ನ ಬಿಸಿ ಮಾಡಿಕೊಳ್ಳುವ ಸಲುವಾಗಿ ತಮ್ಮ ‘ಯಾನ ಸ್ನಾಯು’ಗಳನ್ನು ‘ವಿ’ ಅಕಾರಕ್ಕೆ ತಂದುಕೊಳ್ಳುತ್ತವೆ.  ‘ಎಂಜಿನಿಯರಿಂಗ್​ನಲ್ಲಿ ಬಯೋಮಿಮಿಕ್ರಿ ಹೊಸದೇನಲ್ಲ. ಆದರೆ ಈ ಸಂಶೋಧನೆಯು ಸೌರ ವಿದ್ಯುತ್ ವೆಚ್ಚವನ್ನು ಈ ಹಿಂದೆಂದೂ ಆಗದ ಪ್ರಮಾಣದಲ್ಲಿ ಇಳಿಸುವಂತಹ ಮಾರ್ಗವನ್ನು ತೋರಿಸಿಕೊಟ್ಟಿದೆ’ ಎಂದು ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿದ ಬ್ರಿಟನ್​ನ ವಿಜ್ಞಾನಿ ತಪಸ್ ಮಲಿಕ್ ಹೇಳಿದರು. ಮೋಡಭರಿತ ವಾತಾವರಣದಲ್ಲಿ ’ಕ್ಯಾಬೇಜ್ ಬಿಳಿ ಚಿಟ್ಟೆಗಳು’ ಇತರ ಚಿಟ್ಟೆಗಳಿಗಿಂತ ಮೊದಲೇ ಆಕಾಶದಲ್ಲಿ ಹಾರುತ್ತವೆ. ಹೀಗೆ ಹಾರಲು ಈ ಕೀಟವು ಸೂರ್ಯನ ಬಿಸಿಲಿನಿಂದ ತನ್ನ ’ಯಾನ ಸ್ನಾಯು’ವನ್ನು ಹೆಚ್ಚು ಬಿಸಿಮಾಡಿಕೊಳ್ಳಲು ಈ ತಂತ್ರವನ್ನು ಬಳಸುತ್ತದೆ. ಮೊದಲೇ ಹೆಚ್ಚು ಮೋಡವಿದ್ದಾಗ ಇತರ ಚಿಟ್ಟೆಗಳಿಗಿಂತ ಹೆಚ್ಚು ಬೇಗನೇ ಹಾರುವ ಸಾಮರ್ಥ್ಯ ಈ ಜಾತಿಯ ಚಿಟ್ಟೆಗಳಿಗೆ ಬರುವುದು ಈ ವಿಶಿಷ್ಟ ತಂತ್ರದಿಂದಲೇ ಎಂಬುದನ್ನು ಭಾರತೀಯ ವಿಜ್ಞಾನಿ ತಮ್ಮ ಅಧ್ಯಯನದಿಂದ ಕಂಡುಕೊಂಡಿದ್ದಾರೆ.  ಚಿಟ್ಟೆಗಳ ದೇಹದ ಭಾಗಗಳ ವಿಶಿಷ್ಟ ವಿನ್ಯಾಸವು ರೆಕ್ಕೆಗಳ ಮೇಲೆ ಬೀಳುವ ಸೂರ್ಯನ ಕಿರಣವು ಹೆಚ್ಚು ಪರಿಣಾಮಕಾರಿಯಾಗಿ ಪ್ರತಿಫಲಿಸುವಂತೆ ಮಾಡುತ್ತದೆ. ಇದರಿಂದ ಯಾನ ಸ್ನಾಯುಗಳು ಬಲು ಬೇಗನೇ ಬಿಸಿಯಾಗುತ್ತವೆ. ಸೌರ ಇಂಧನ ಉತ್ಪಾದನೆ ಹೆಚ್ಚಿಸಲು ಚಿಟ್ಟೆಗಳ ರೆಕ್ಕೆಗಳನ್ನೇ ಹೋಲುವಂತಹ ಹೊಸ ಹಗುರವಾದ ಪ್ರತಿಫಲನ ಸಾಮರ್ಥ್ಯ ವಸ್ತುವನ್ನು ಹೇಗೆ ಬಳಸಬಹುದು ಎಂಬ ಬಗ್ಗೆ ವಿಜ್ಞಾನಿಗಳ ತಂಡ ಅಧ್ಯಯನ ಮಾಡಿತು. ತನ್ನ ದೇಹದ ಶಾಖವನ್ನು ಹೆಚ್ಚಿಸಿಕೊಳ್ಳಲು ಚಿಟ್ಟೆಗಳು ತಮ್ಮ ರೆಕ್ಕೆಗಳನ್ನು 17 ಡಿಗ್ರಿ ಕೋನಕ್ಕೆ ಬಾಗಿಸುತ್ತವೆ. ಇದರಿಂದ ರೆಕ್ಕೆಯನ್ನು ಸಮತೋಲನ ಸ್ಥಿತಿಯಲ್ಲಿ ಇಟ್ಟುಕೊಂಡದ್ದಕ್ಕಿಂತ 7.3 ಡಿಗ್ರಿ ಸೆಂಟಿಗ್ರೇಡ್​ನಷ್ಟು ಹೆಚ್ಚು ಶಾಖ ಚಿಟ್ಟೆಗೆ ಲಭಿಸುತ್ತದೆ ಎಂಬುದನ್ನು ವಿಜ್ಞಾನಿಗಳು ಪತ್ತೆ ಮಾಡಿದರು. ವಿಜ್ಞಾನಿಗಳ ತಂಡದ ಅಧ್ಯಯನವು ಸೈಂಟಿಫಿಕ್ ರಿಪೋರ್ಟ್ಸ್ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

2015: ಒಟ್ಟಾವ: ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿ ಕೆನಡಾದ  ಒಟ್ಟಾವ ನಗರದ ಬಾನಂಗಳಲ್ಲಿ, ಪಕ್ಷಿಗಿಂತ ತಾನೇನು ಕಡಿಮೆ ಎನ್ನುವಂತೆ, ಅದೂ ಕೈ ಕೈ ಹಿಡಿದು ಗುಂಪು ಗುಂಪಾಗಿ ಜೇಡನ ಬಲೆಯಂತೆ ತಲೆಕೆಳಗಾಗಿ ‘ಡೈವ್’ ಮಾಡುವ ಮೂಲಕ 164 ಮಂದಿ ಅಂತಾರಾಷ್ಟ್ರೀಯ ಡೈವರ್ ಗಳ ತಂಡ  2015ರ ಜುಲೈ 31ರ ಶುಕ್ರವಾರ ವಿಶ್ವದಾಖಲೆ ನಿರ್ಮಿಸಿತು.ಈ  ಡೈವರ್ ಗಳು  ಬಾನಂಗಳದಿಂದ ಭೂಮಿಯ ಕಡೆಗೆ ತಲೆಕೆಳಗಾಗಿ, ಒಬ್ಬರಿಗೊಬ್ಬರು ಕೈ ಕೈ ಹಿಡಿದುಕೊಂಡು ಸಾಗುವ ಮೂಲಕ ಅಪೂರ್ವ ಸಾಹಸವನ್ನು ಪ್ರದರ್ಶಿಸಿದರು. ಈ ಮೂಲಕ ಇವರು 2012ರಲ್ಲಿ 138 ಸ್ಕೈ ಡೈವರ್​ಗಳು ಮಾಡಿರುವ ದಾಖಲೆಯನ್ನು ಬದಿಗಟ್ಟಿದರು. ತಂಡ ನೀಡಿರುವ ಮಾಹಿತಿಯ ಪ್ರಕಾರ 19,700 ಅಡಿ ಎತ್ತರದಿಂದ ಸ್ಕೈ ಡೈವಿಂಗ್ ಮಾಡಿ ಈ ಸಾಧನೆ ಮೆರೆದರು. ಇನ್ನೂ ಒಂದು ಅಚ್ಚರಿ ಸಂಗತಿ ಏನೆಂದರೆ ಈ ಮಹಾನುಭಾವರು ಗಂಟೆಗೆ 240 ಕಿಲೋ ಮೀಟರ್ ಸ್ಪೀಡ್​ನಲ್ಲಿ ಭೂಮಿಯತ್ತ ಸಾಗಿದರು.. ಈ ಹಿಂದಿನ ದಾಖಲೆಯನ್ನು ಮುರಿಯಲಿಕ್ಕೆಂದೇ ಈ ಸಾಧಕರು ಹೆಚ್ಚೂ ಕಡಿಮೆ 13 ಭಾರಿ ಇದೇ ರೀತಿ ಜಿಗಿಯುವ ಪ್ರಯತ್ನ ನಡೆಸಿ ಯಶಸ್ವಿಯಾದರು. ಭೂಮಿಗೆ ಬಂದು ನಿಲ್ಲುತ್ತೇವೆ ಎನ್ನುವ ಕ್ಷಣದ 5 ನಿಮಿಷಕ್ಕೂ ಮುನ್ನ ಪ್ಯಾರಾಚೂಟ್ ಮೂಲಕ ವೇಗ ನಿಯಂತ್ರಿಸಿ ಸುರಕ್ಷಿತವಾಗಿ ಭೂಮಿಗಿಳಿದರು. ದಾಖಲೆ ಬ್ರೇಕ್ ಮಾಡಲಿಕ್ಕೆಂದೇ 13 ಭಾರಿ ಈ ಸಾಧನೆ ಮಾಡಿರುವ ತಂಡಕ್ಕೆ ಬೆನ್ನೆಲುಬಾಗಿ ನಿಂತ ಆಯೋಜಕರಲ್ಲಿ ಒಬ್ಬರಾದ ಮಹಾನ್ ಕ್ರೇಜಿ ರೂಕ್ ನೆಲ್ಸನ್. ‘ಯಶಸ್ಸಿನತ್ತ ಮುಖ ಮಾಡಿಕೊಂಡಿರುವ ಸಮರ್ಥ ತಂಡದಿಂದ ಮಾತ್ರ ಇಂಥ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಅದನ್ನೀಗ ಈ ತಂಡ ಮಾಡಿದೆ. ಏನನ್ನೂ ಸಾಧಿಸಿ ತೋರಿಸಲು ಸಾಧ್ಯ ಎನ್ನುವುದಕ್ಕೆ ಈ ತಂಡವೇ ಸಾಕ್ಷಿ’ ಎಂದು ಹೇಳಿದರು.  ತಂಡಕ್ಕೆ ಕಂಡ ಕಂಡವರನ್ನೆಲ್ಲ ಸೇರಿಸಿಕೊಂಡಿರಲಿಲ್ಲ. ಇದಕ್ಕೆಂದೇ ಸ್ಪೇನ್, ಆಸ್ಟ್ರೇಲಿಯಾ, ಅಮೆರಿಕಗಳಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಸಮರ್ಪಕ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡು ತರಬೇತಿ ನೀಡಿ, ಬಳಿಕ ಎಲ್ಲಾ ರೀತಿಯಿಂದಲು ಸಮರ್ಥರೆನಿಸುವವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು.

2015: ಸ್ಯಾಂಟಿಯಾಗೊ: ಮನುಷ್ಯರಲ್ಲಿ ಗಡ್ಡೆ ನಿರೋಧಿ ಸ್ಪಂದನೆಯನ್ನು ಹೆಚ್ಚಿಸುವ ಮೂಲಕ ಕ್ಯಾನ್ಸರ್ ಕೋಶಗಳ ಮೇಲೆ ದಾಳಿ ನಡೆಸುವಂತಹ ಹೊಸ ‘ಪ್ರತಿರಕ್ಷಾ ಚಿಕಿತ್ಸೆ’ಯನ್ನು (ಇಮ್ಯೂನೊಲಾಜಿಕಲ್ ಥೆರೆಪಿ) ಚಿಲಿಯ ಸ್ಯಾಂಟಿಯಾಗೊ ನಗರದಲ್ಲಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಸಂಶೋಧಕರು ಪ್ರಕಟಿಸಿದರು. ‘ಚಿಕಿತ್ಸೆಯು ಇನ್ನೂ ಕ್ಲಿನಿಕ್​ಪೂರ್ವ ಹಂತದಲ್ಲಿದೆ’ ಎಂದು ಇದನ್ನು ಕಂಡು ಹಿಡಿದಿರುವ ಸ್ಯಾಂಟಿಯಾಗೊ ವಿಶ್ವವಿದ್ಯಾಲಯದ ಸಂಶೋಧಕ ಕ್ಲಾಡಿಯೊ ಅಕ್ಯುನಾ ಹೇಳಿದರು. ಶೀಘ್ರದಲ್ಲೇ ಈ ಚಿಕಿತ್ಸೆಗೆ ಅಮೆರಿಕದಲ್ಲಿ ಪೇಟೆಂಟ್ ಪಡೆಯಲಾಗುವುದು ಎಂದು ಅವರು ಹೇಳಿರುವುದಾಗಿ ಕ್ಷಿನ್​ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು. ‘ಕ್ಯಾನ್ಸರ್ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳಿಗಾಗಿ ಲಸಿಕೆ ತಯಾರಿಸುವುದು ಈ ಚಿಕಿತ್ಸೆಯ ಗುರಿ. ಇದು ಕ್ಯಾನ್ಸರ್ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳ ಕ್ಯಾನ್ಸರ್ ಗಡ್ಡೆಗಳ ವಿರುದ್ಧ ಪ್ರತಿರಕ್ಷಾ ಸ್ಪಂದನೆಯನ್ನು ವರ್ಧಿಸಲು ಅನುಕೂಲ ಮಾಡಿಕೊಡುತ್ತದೆ. ಕ್ಯಾನ್ಸರ್ ಸ್ಥಿತಿಯಿಂದ ಹಿಂದಕ್ಕೆ ತರಲಾದೀತು ಎಂದು ನಾವು ನಿರೀಕ್ಷಿಸುವುದಿಲ್ಲ ಆದರೆ ಪರ್ಯಾಯದ ಕೊಡುಗೆ ನೀಡುತ್ತಿದ್ದೇವೆ’ ಎಂದು ಅಕ್ಯುನಾ ಹೇಳಿದರು. ‘ಮುಂದಿನ ಹಂತಗಳಿಗೆ ಹೋಗುವ ಮುನ್ನ ನಾವು ಪೇಟೆಂಟ್ ಅನುಮೋದನೆಗಾಗಿ ಕಾಯುವ ಅಗತ್ಯವಿದೆ. ನಮ್ಮ ಯೋಜನೆಯು ದೀರ್ಘಾವಧಿಯಲ್ಲಿ ರೋಗಿಗಳ ಬದುಕಿನ ಗುಣಮಟ್ಟವನ್ನು ಸುಧಾರಿಸುವತ್ತ ಗಮನ ಹರಿಸಿದೆ. ಮತ್ತು ಪರಂಪರಾಗತ ಚಿಕಿತ್ಸೆಗಳಿಗೆ ಪೂರಕವಾದ ಚಿಕಿತ್ಸೆಯನ್ನು ಸೃಷ್ಟಿಸುವ ಉದ್ದೇಶ ಹೊಂದಿದೆ’ ಎಂದು ಅವರು ನುಡಿದರು. ಈ ಹೊಸ ಚಿಕತ್ಸೆಯು ಇಂತಹ ಇತರ ಚಿಕಿತ್ಸೆಗಳಿಗೆ ಹೋಲಿಸಿದರೆ ಜಾಗತಿಕ ವೈದ್ಯಕೀಯ ವೆಚ್ಚವನ್ನು ಶೇಕಡಾ 70ರಷ್ಟು ಇಳಿಸಲಿದೆ. ‘ಈ ಪ್ರತಿರಕ್ಷಾ ಚಿಕಿತ್ಸೆಯು ಉಲ್ಬಣ ಹಂತಕ್ಕೆ ತಲುಪಿದ ಸ್ತನ, ಚರ್ಮ, ಶ್ವಾಸಕೋಶ, ಗರ್ಭಾಶಯ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ರೋಗಿಗಳಿಗೆ ವ್ಯಾಪಕ ಮಟ್ಟದಲ್ಲಿ ಲಭಿಸಲಿದೆ’ ಎಂದು ಅಕ್ಯುನಾ ಹೇಳಿದರು. ‘ಈ ಪ್ರತಿರಕ್ಷಾ ಚಿಕಿತ್ಸೆಯಲ್ಲಿ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ. ಒಮ್ಮೆ ಮಾರುಕಟ್ಟೆಗೆ ಬಂದರೆ ಇದರ ಬೆಲೆ 750 ಡಾಲರ್​ಗಳಿಗಿಂತ ಹೆಚ್ಚಾಗದು’ ಎಂದು ಅವರು ನುಡಿದರು. ವಿಶ್ವ ಆರೋಗ್ಯ ಸಂಘಟನೆಯ (ಡಬ್ಲ್ಯೂಎಚ್​ಒ) ಪ್ರಕಾರ ಜಗತ್ತಿನಲ್ಲಿ ಪ್ರತಿವರ್ಷ 1 ಕೋಟಿ ಜನರಲ್ಲಿ ಹೊಸದಾಗಿ ಕ್ಯಾನ್ಸರ್ ತಗುಲಿದ ಪ್ರಕರಣಗಳು ವರದಿಯಾಗುತ್ತಿವೆ. 2012ರಲ್ಲಿ ಕ್ಯಾನ್ಸರ್ ರೋಗಕ್ಕೆ 82 ಲಕ್ಷ ಮಂದಿ ಬಲಿಯಾಗಿದ್ದಾರೆ.

2015: ಮುಂಬೈ: ಯಾಕುಬ್ ಮೆಮನ್ ಪತ್ನಿಯನ್ನು ರಾಜ್ಯಸಭೆಗೆ ನಾಮಕರಣ ಮಾಡಬೇಕು ಎಂಬುದಾಗಿ ಒತ್ತಾಯಿಸಿದ್ದಕ್ಕಾಗಿ ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಉಪಾಧ್ಯಕ್ಷ ಮೊಹಮ್ಮದ್ ಫರೂಖ್ ಘೋಸಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಯಿತು. ಗಲ್ಲಿಗೇರಿಸಲ್ಪಟ್ಟ 1993ರ ಮುಂಬೈ ಸರಣಿ ಸ್ಪೋಟದ ಅಪರಾಧಿ ಯಾಕುಬ್ ಮೆಮನ್ ಪತ್ನಿಯನ್ನು ರಾಜ್ಯಸಭೆಯ ಸದಸ್ಯರಾಗಿ ನಾಮಕರಣ ಮಾಡಬೇಕು ಎಂಬುದಾಗಿ ಪಕ್ಷಾಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನು ಆಗ್ರಹಿಸುವ ಮೂಲಕ ಘೋಸಿ ವಿವಾದ ಹುಟ್ಟುಹಾಕಿದ್ದರು. ನಾಗಪುರ ಕೇಂದ್ರೀಯ ಸೆರೆಮನೆಯಲ್ಲಿ ಯಾಕುಬ್​ನನ್ನು ಗಲ್ಲಿಗೇರಿಸಿದ ಎರಡು ದಿನಗಳ ಬಳಿಕ ಈ ಹೇಳಿಕೆ ನೀಡಿದ ಘೋಸಿ ‘ಮೆಮನ್ ಪತ್ನಿ ರಹೀನ್ ಅಸಹಾಯಕಳಾಗಿದ್ದಾಳೆ’ ಎಂದು ಬಣ್ಣಿಸಿದ್ದರು. ‘ರಹೀನ್ ಬಹುವರ್ಷಗಳ ಕಾಲ ಸೆರೆಮನೆಯಲ್ಲಿದ್ದಳು. ಆಕೆ ಅದೆಷ್ಟು ತೊಂದರೆ ಅನುಭವಿಸಿರಬಹುದು. ಇಂದು ರಹೀನ್ ಅಸಹಾಯಕಳಾಗಿದ್ದಾಳೆ. ಇಂತಹ ಹಲವಾರು ಮುಸ್ಲಿಮರು ರಾಷ್ಟ್ರದಲ್ಲಿ ಇದ್ದಾರೆ. ಅವರಿಗಾಗಿ ನಾವು ಹೋರಾಡಬೇಕು. ರಹೀನ್​ಳನ್ನು ರಾಜ್ಯಸಭೆಗೆ ನಾಮಕರಣ ಮಾಡುವ ಮೂಲಕ ಆಕೆ ದುರ್ಬಲರು ಮತ್ತು ಅಸಹಾಯಕ ಜನರ ಧ್ವನಿಯಾಗುವಂತೆ ಮಾಡಬೇಕು’ ಎಂದು ಘೋಸಿ ಹೇಳಿದ್ದರು. ಆದರೆ ಈ ಬೇಜವಾಬ್ದಾರಿ ಹೇಳಿಕೆ ನೀಡುವ ಮುನ್ನ ಘೋಸಿ ಪಕ್ಷದ ಜೊತೆ ಸಮಾಲೋಚಿಸಿಲ್ಲ. ತಾವು ಇದರಿಂದ ದೂರ ಉಳಿಯುವುದಾಗಿ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಅಬು ಅಸಿಮ್​ಅಜ್ಮಿ ಹೇಳಿದ್ದರು.

2015: ಕೋಲ್ಕತ: ಬಂಗಾಳ ಕೊಲ್ಲಿಯಲ್ಲಿ ಎದ್ದ ‘ಕೊಮೆನ್’ ಚಂಡಮಾರುತದ ಪರಿಣಾಮವಾಗಿ ಹಿಂದಿನ ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಕೋಲ್ಕತ ನಗರದ ಹಲವಾರು ಪ್ರದೇಶಗಳು ಜಲಾವೃತಗೊಂಡು, ವಾಹನ ಸಂಚಾರ, ಜನಜೀವನ ಅಸ್ತವ್ಯಸ್ತಗೊಂಡಿತು. ಹಿಂದಿನ ದಿನ ರಾತ್ರಿಯಿಂದ ಈದಿನ ಬೆಳಗಿನ 8.30 ಗಂಟೆಯವರೆಗೆ 117.4 ಮಿ.ಮೀ. ಮಳೆ ಬಿದ್ದಿರುವುದನ್ನು ಹವಾಮಾನ ಕಚೇರಿ ದಾಖಲಿಸಿತು.

2015: ನವದೆಹಲಿ: ಮುಂಬೈ ಸರಣಿ ಸ್ಪೋಟದ ಪಾತಕಿ ಯಾಕುಬ್ ಮೆಮನ್​ನನ್ನು ಗಲ್ಲಿಗೇರಿಸಿದ್ದಕ್ಕೆ ಪ್ರತೀಕಾರವಾಗಿ ಭಾರತದ ಮೇಲೆ ದಾಳಿ ನಡೆಸುವುದಾಗಿ ಭೂಗತಪಾತಕಿ ದಾವೂದ್ ಇಬ್ರಾಹಿಂನ ಬಂಟ ಛೋಟಾ ಶಕೀಲ್ ಬಹಿರಂಗ ಬೆದರಿಕೆ ಹಾಕಿರುವುದಾಗಿ ವರದಿಗಳು ತಿಳಿಸಿದವು. ಯಾಕುಬ್ ಕುಣಿಕೆಗೆ ಕೊರಳೊಡ್ಡಿದ ಬಳಿಕ ದೆಹಲಿಯ ಆಂಗ್ಲಪತ್ರಿಕೆಯೊಂದಕ್ಕೆ ಶಕೀಲ್ ಕರೆ ಮಾಡಿ, ಯಾಕುಬ್ ಓರ್ವ ಮುಗ್ಧ. ಆತನ ಸೋದರ ಮಾಡಿದ ಅಪರಾಧಕ್ಕಾಗಿ ನೀವು ಶಿಕ್ಷೆ ನೀಡಿದ್ದನ್ನು ಖಂಡಿಸುತ್ತೇವೆ. ಇದು ಕಾನೂನಿನ ಹತ್ಯೆಯೂ ಹೌದು. ಇದರ ಪರಿಣಾಮ ನೀವು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ ಎಂದು ವರದಿಗಳು ತಿಳಿಸಿದವು. ಭಾರತದ ಭರವಸೆಯ ಮೇಲೆ ವಿಶ್ವಾಸವಿಟ್ಟು ದಾವೂದ್ ಭಾರತಕ್ಕೆ ಮರಳಿದಲ್ಲಿ ಆತನಿಗೂ ಯಾಕುಬ್​ಗೆ ಆದ ಗತಿಯೇ ಆಗುತ್ತಿತ್ತು. ದಾವೂದ್ ಆಗಲಿ ಅಥವಾ ಇತರೆ ಆರೋಪಿಗಳಾಗಲಿ ಯಾವುದೇ ಕಾರಣಕ್ಕೂ ಭಾರತಕ್ಕೆ ಮರಳುವುದಿಲ್ಲ ಎಂದು ಶಕೀಲ್ ಹೇಳಿದ್ದಾನೆ ಎಂದು ವರದಿ ಹೇಳಿತು.
2015: ಬೊಗೋಟ: ಕೊಲಂಬಿಯಾದಲ್ಲಿ ಸೇನೆಗೆ ಸೇರಿದ ವಿಮಾನವೊಂದು ಪತನಗೊಂಡು 12 ಜನರು ಮೃತರಾದರು. ತಾಂತ್ರಿಕ ಕಾರಣಗಳಿಂದ ವಿಮಾನ ಪತನವಾಗಿದೆ ಎಂದು ಕೊಲಂಬಿಯಾ ಅಧ್ಯಕ್ಷ ಜುವಾನ್ ಮನ್ಯುಯಲ್ ಸಂಟೋಸ್ ತಿಳಿಸಿದರು. ಇದು ಸೇನೆಯ ಸರಕು ಸಾಗಾಟ ವಿಮಾನವಾಗಿದ್ದು, ಎಂಜಿನ್​ನಲ್ಲಿ ತಾಂತ್ರಿಕ ತೊಂದರೆ ಕಂಡು ಬಂದ ಕಾರಣ ಪತನವಾಗಿದೆ. ಕೊಲಂಬಿಯಾದ ರಾಜಧಾನಿ ಬೊಗೋಟದಿಂದ ಸುಮಾರು 800 ಕಿ.ಮೀ. ಈಶಾನ್ಯಕ್ಕೆ ಲಾಸ್ ಪಲೋಮಾಸ್ ಪ್ರದೇಶದಲ್ಲಿ ಪತನವಾಗಿದೆ. ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲಾ 12 ಜನರು ಮೃತರಾಗಿದ್ದಾರೆ ಎಂದು ಅಧ್ಯಕ್ಷರು ತಮ್ಮ ಹೇಳಿಕೆಯಲ್ಲಿ ತಿಳಿಸಿದರು.

2015: ಇಂಪಾಲ
ಮ್ಯಾನ್ಮಾರ್ ಗಡಿ ಪ್ರದೇಶವಾದ ಮಣಿಪುರದ ಖೇಂಜಾಯ್ ವಲಯದಲ್ಲಿ ಭೂಕುಸಿತ ಸಂಭವಿಸಿ,ಕನಿಷ್ಠ  21ಕ್ಕೂ ಹೆಚ್ಚು ಮಂದಿಸಾವನ್ನಪ್ಪಿದರು. ಪರ್ವತ ತಪ್ಪಲು ಪ್ರದೇಶಗಳಲ್ಲಿ ವಾಸವಿದ್ದ ಮನೆಗಳ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದರಿಂದಾಗಿ 21ಕ್ಕೂ ಹೆಚ್ಚು ಮಂದಿ ಪ್ರಾಣಕಳೆದುಕೊಂಡರು. ಸಾಕಷ್ಟು ಮಂದಿಗೆ ಗಾಯವಾಗಿದ್ದುಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಕಳೆದೊಂದು ವಾರದಿಂದ ಅಲ್ಲಲ್ಲಿ ಭೂಕುಸಿತಸಂಭವಿಸುತ್ತಲೇ ಇದ್ದವು ಎಂದು ಸ್ಥಳೀಯ ಮಾಧ್ಯಮಗಳು ವರದಿಮಾಡಿದವು. ಮುಂಬೈ - ಪುಣೆ ಎಕ್ಸ್​ಪ್ರೆಸ್ ಮಾರ್ಗದಲ್ಲಿನ ಖಂಡಾಲ ಸುರಂಗ ಮಾರ್ಗದಬಳಿಯೂ ಭೂಕುಸಿತ ಸಂಭವಿಸಿ ಸಂಚಾರಕ್ಕೆ ಅಡಚಣೆ ಉಂಟಾಯಿತು.

2015: ನವದೆಹಲಿ: ಭಾರತದ ಜನಪ್ರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾಗೆ ದೇಶದ ಪ್ರತಿಷ್ಠಿತ ಖೇಲ್ ರತ್ನ ಪ್ರಶಸ್ತಿ ನೀಡುವ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸು ಮಾಡಿದೆ. 2014ರಲ್ಲಿ ನಡೆದ ಇಂಚಾನ್ ಏಷ್ಯನ್ ಗೇಮ್ಸ್​ನಲ್ಲಿ ಸಾನಿಯಾ ಮಿಕ್ಸೆಡ್ ಡಬಲ್ಸ್​ನಲ್ಲಿ ಸಾಕೆತ್ ಮೈನಿ ಜತೆಗೂಡಿ ಆಡುವ ಮೂಲಕ ಸ್ವರ್ಣ ಪದಕವನ್ನೂ, ಮಹಿಳಾ ಡಬಲ್ಸ್​ನಲ್ಲಿ ಪ್ರಾರ್ಥನಾ ಥೋಂಬ್ರೆ ಜತೆಗೂಡಿ ಕಂಚಿನ ಪದಕವನ್ನು ಗೆದ್ದುಕೊಂಡಿದ್ದರು. ಅಮೆರಿಕ ಓಪನ್ ಗ್ರಾಂಡ್ ಸ್ಲಾಂ ಟೂರ್ನಿಯ ಮಿಶ್ರ ಡಬಲ್ಸ್​ನಲ್ಲಿ ಕಳೆದ ವರ್ಷ ಬ್ರುನೊ ಸಾರೆಸ್ ಜತೆಗೂಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಅಂತೆಯೇ ಈ ವರ್ಷವೂ ಉತ್ತಮ ಪ್ರದರ್ಶನ ನೀಡುವ ತೋರುವ ಮೂಲಕ ಪ್ರಶಸ್ತಿ ಬಾಚಿಕೊಂಡಿದ್ದಾರೆ. ಸಾನಿಯಾ ಮಿರ್ಜಾ 2004ರಲ್ಲೇ ಅರ್ಜುನ ಪ್ರಶಸ್ತಿಗೂ, 2006ರಲ್ಲಿ ಪದ್ಮಶ್ರೀ ಪ್ರಶಸ್ತಿಗೂ ಭಾಜನರಾಗಿದ್ದರು.

2015: ವಾಷಿಂಗ್ಟನ್: ಸೌರಶಕ್ತಿಯಿಂದ ಕಾರ್ಯನಿರ್ವಹಿಸುವ ಡ್ರೋನ್ ಒಂದನ್ನು ಸಾಮಾಜಿಕ ಅಂತರ್ಜಾಲ ತಾಣ ಫೇಸ್​ಬುಕ್ ಅಭಿವೃದ್ಧಿಪಡಿಸಿದ್ದು, ಅಂತರ್ಜಾಲ ಲಭ್ಯವಿಲ್ಲದ ಪ್ರದೇಶಗಳಲ್ಲಿ ಈ ಸೌಲಭ್ಯ ಕಲ್ಪಿಸಲು ಬಳಸಲು ನಿರ್ಧರಿಸಿದೆ. ಲೇಸರ್ ಕಿರಣಗಳ ಮೂಲಕ ಭೂಮಿಗೆ ಅಂತರ್ಜಾಲವನ್ನು ‘ಅಖಿಲಾ’ ಎಂಬ ಡ್ರೋನ್ ರವಾನಿಸಲಿದೆ. ಇದು ಭೂಮಿಯಿಂದ 60 ಸಾವಿರದಿಂದ 90 ಸಾವಿರ ಅಡಿ ದೂರದಲ್ಲಿ ಹಾರಾಡುತ್ತದೆ. ಹೀಗಾಗಿ ವಾತಾವರಣದಲ್ಲಿನ ಬದಲಾವಣೆಯಿಂದಾಗಿ ಸೇವೆಯ ಮೇಲೆ ಪರಿಣಾಮ ಉಂಟಾಗುವುದಿಲ್ಲ. ಈ ಯೋಜನೆಯನ್ನು ಹಲವು ತಿಂಗಳುಗಳ ಹಿಂದೆಯೇ ಘೋಷಿಸಿದ್ದ ಫೇಸ್​ಬುಕ್, ಈಗ ಡ್ರೋನ್ ನಿರ್ಮಾಣವನ್ನು ಪೂರೈಸಿದೆ. ಈ ವರ್ಷಾಂತ್ಯಕ್ಕೆ ಪ್ರಾಯೋಗಿಕ ಸೇವೆ: ಬೋಯಿಂಗ್ 737 ವಿಮಾನದ ರೀತಿಯ ರೆಕ್ಕೆಗಳನ್ನೇ ಹೊಂದಿರಲಿದ್ದು, ಒಂದು ಕಾರ್​ಗಿಂತಲೂ ಕಡಿಮೆ ತೂಕವಿರಲಿದೆ. ಒಮ್ಮೆ ಹಾರಾಟ ಆರಂಭಿಸಿದರೆ ಮೂರು ತಿಂಗಳು ಸತತವಾಗಿ ಇಂಟರ್​ನೆಟ್ ಸೇವೆ ಒದಗಿಸಲಿದೆ. ಪ್ರತಿ ಸೆಕೆಂಡಿಗೆ 10 ಗಿಗಾಬೈಟ್​ಗಳವರೆಗಿನ ಬ್ಯಾಂಡ್​ವಿಡ್ತ್ ವೇಗದಲ್ಲಿ ದತ್ತಾಂಶ ವರ್ಗಾವಣೆ ಈ ಡ್ರೋನ್ ಮೂಲಕ ಸಾಧ್ಯವಿದೆ. ಇನ್ನೂ ಅಂತರ್ಜಾಲ ಲಭ್ಯವಿಲ್ಲದ ಹಿಂದುಳಿದ ಪ್ರದೇಶಗಳಿಗೆ ಉಚಿತವಾಗಿ ಇಂಟರ್​ನೆಟ್ ಒದಗಿಸುವುದು ಫೇಸ್​ಬುಕ್ ಉದ್ದೇಶವಾಗಿದೆ. ಈ ವರ್ಷಾಂತ್ಯದಲ್ಲಿ ಅಮೆರಿಕದಲ್ಲಿ ಡ್ರೋನ್ ಪ್ರಾಯೋಗಿಕ ಹಾರಾಟ ನಡೆಸಲಾಗುತ್ತದೆ.

2008: ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯಲ್ಲಿ ಈದಿನ ಬೆಳಗಿನ ಜಾವ ಚಲಿಸುತ್ತಿದ್ದ ಸಿಕಂದರಾಬಾದ್-ಕಾಕಿನಾಡ ಗೌತಮಿ ಎಕ್ಸ್ ಪ್ರೆಸ್ಸಿನ ಎಸ್-9 ಮತ್ತು 10 ಬೋಗಿಗಳಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿ ಕನಿಷ್ಠ 32 ಮಂದಿ ಸಜೀವ ದಹನಗೊಂಡರು. ಅನೇಕ ಪ್ರಯಾಣಿಕರು ಗಾಯಗೊಂಡರು.

2007: 1998ರ ಕೊಯಮತ್ತೂರು ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಾಲಯ ಈದಿನ ತೀರ್ಪು ಪ್ರಕಟಿಸಿ, ನಿಷೇಧಿತ ಅಲ್- ಉಮ್ಮಾ ಸಂಘಟನೆಯ ಸ್ಥಾಪಕ ಎಸ್. ಎ. ಬಾಷಾ ತಪ್ಪಿತಸ್ಥ ಎಂದು ಘೋಷಿಸಿತು. ಪ್ರಕರಣದ 166 ಆರೋಪಿಗಳ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶ ಕೆ. ಉತ್ತರಾಪತಿ ಕೇರಳ ಮೂಲದ ಸಂಘಟನೆ ಪಿಡಿಪಿಯ ಮುಖ್ಯಸ್ಥ ಅಬ್ದುಲ್ ನಾಸರ್ ಮದನಿಯನ್ನು ಆರೋಪಗಳಿಂದ ಮುಕ್ತಗೊಳಿಸಿದರು. ಬಾಷಾ ಜೊತೆಗೆ ಅಲ್- ಉಮ್ಮಾದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅನ್ಸಾರಿ, ಬಾಷಾನ ಪುತ್ರ ಸಿದ್ದಿಕ್ ಅಲಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶರು ಹೇಳಿದರು. ಒಟ್ಟು 166 ಆರೋಪಿಗಳಲ್ಲಿ 71 ಜನರ ಮೇಲೆ ಕ್ರಿಮಿನಲ್ ಪಿತೂರಿಯ ಆರೋಪ ಸಾಬೀತಾಗಿದ್ದು, ಇತರ 82 ಜನರ ಮೇಲಿನ ಇತರ ಆರೋಪಗಳು ಸಾಬೀತಾದವು. ಮದನಿ ಮೇಲಿದ್ದ ಕ್ರಿಮಿನಲ್ ಪಿತೂರಿ, ಪ್ರಚೋದನಕಾರಿ ಭಾಷಣ ಮತ್ತು ಕೇರಳದಿಂದ ಕೊಯಮತ್ತೂರಿಗೆ ಸ್ಫೋಟಕಗಳನ್ನು ಸಾಗಿಸಿದ ಆರೋಪಗಳು ಸಾಬೀತಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದರು. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ಫೆಬ್ರುವರಿ 14 ರಂದು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುವ ಸ್ವಲ್ಪ ಮೊದಲು ಕೊಯಮತ್ತೂರು ನಗರದಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. 19 ಕಡೆ ಸಂಭವಿಸಿದ ಸ್ಫೋಟಗಳಲ್ಲಿ 58 ಜನರು ಬಲಿಯಾಗಿ, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಅಡ್ವಾಣಿಯವರನ್ನು ಕೊಲೆ ಮಾಡುವ ಉದ್ದೇಶದಿಂದ ಸರಣಿ ಬಾಂಬ್ ಸ್ಫೋಟ ನಡೆಸಲಾಗಿತ್ತು ಎಂದು ಪ್ರಕರಣದ ಬಗ್ಗೆ ತನಿಖೆ ನಡೆಸಿದ ತಮಿಳುನಾಡಿನ ವಿಶೇಷ ತನಿಖಾ ದಳ ವಾದಿಸಿತ್ತು.

2007: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಕಾಯ್ದೆ ತಿದ್ದುಪಡಿ ವಿರೋಧಿಸಿ ಕರೆ ನೀಡಲಾಗಿದ್ದ ಬಂದ್ ಗೆ ಕರ್ನಾಟಕದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ಎಲ್ಲ ಜಿಲ್ಲೆಗಳ ಎಪಿಎಂಸಿ ಯಾರ್ಡ್ಡುಗಳು ಬಂದ್ ಆಚರಿಸಿದವು. ರಾಜ್ಯ ವಿಧಾನ ಮಂಡಲದ ಉಭಯ ಸದನಗಳು ಸೂಕ್ತ ರೀತಿಯಲ್ಲಿ ಚರ್ಚೆ ಮಾಡದೇ ಎಪಿಎಂಸಿ ತಿದ್ದುಪಡಿ ಮಸೂದೆ ಅಂಗೀಕರಿಸಿವೆ. ತಿದ್ದುಪಡಿಯು ರೈತರಿಗೆ ಮಾರಕವಾಗಲಿದೆ ಎಂದು ಆರೋಪಿಸಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್ ಕೆ ಸಿ ಸಿ ಐ) ಅನಿರ್ದಿಷ್ಟ ಕಾಲದ ಬಂದ್ ಗೆ ಕರೆ ನೀಡಿತ್ತು. ಒಟ್ಟು 144 ಬೃಹತ್ ಮಾರುಕಟ್ಟೆ, 350 ಉಪ ಮಾರುಕಟ್ಟೆ ಮತ್ತು 700ಕ್ಕೂ ಅಧಿಕ ಚಿಲ್ಲರೆ ಮಾರುಕಟ್ಟೆಗಳು ಬಂದ್ ಆಚರಿಸಿದವು.

2007: ಗಣಪತಿಭಟ್ ಹಾಸಣಗಿ, ಬಿ.ಪಿ. ರಾಜಮ್ಮ, ಎಂ.ಎಸ್. ಶೀಲಾ, ಎಂ. ವೆಂಕಟೇಶ ಕುಮಾರ್, ಚಿತ್ರನಟ ಶ್ರೀಧರ್ ಸೇರಿದಂತೆ 17 ಮಂದಿ ಕಲಾವಿದರು ಮತ್ತು ಬೆಂಗಳೂರಿನ ರಾಜಾಜಿನಗರದ ಕುಮಾರವ್ಯಾಸ ಮಂಟಪ ಸಂಸ್ಥೆಯನ್ನು 2007-08ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಬೆಂಗಳೂರಿನಲ್ಲಿ ಅಕಾಡೆಮಿಯ ಅಧ್ಯಕ್ಷ ರಾಜಶೇಖರ ಮನ್ಸೂರ್ ಅವರು ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದರು. ವಾಷರ್ಿಕ ಪ್ರಶಸ್ತಿಗಳ ವಿಭಾಗಗಳಲ್ಲಿ ಸಂಗೀತ ಮತ್ತು ನೃತ್ಯ ಪ್ರಕಾರಗಳಲ್ಲಿ ಪ್ರಶಸ್ತಿ ಪುರಸ್ಕೃತರ ವಿವರ ಈ ರೀತಿ ಇದೆ: ಕರ್ನಾಟಕ ಸಂಗೀತ: ಡಾ. ರತ್ನಾ ಶಿವಶಂಕರ್, ಬೆಂಗಳೂರು (ಹಾಡುಗಾರಿಕೆ); ಬಿ.ಜಿ. ಶ್ರೀನಿವಾಸ, ಬೆಂಗಳೂರು (ಕೊಳಲು); ಕೆ.ಜೆ. ವೆಂಕಟೇಶಾಚಾರ್, ಮೈಸೂರು (ಪಿಟೀಲು). ಹಿಂದೂಸ್ಥಾನಿ ಸಂಗೀತ: ಗಣಪತಿಭಟ್ ಹಾಸಣಗಿ, ಉತ್ತರಕನ್ನಡ (ಗಾಯನ); ಎಂ. ವೆಂಕಟೇಶ ಕುಮಾರ್, ಧಾರವಾಡ (ಗಾಯನ); ಅಕ್ಕಮಹಾದೇವಿ ಹಿರೇಮಠ, ಧಾರವಾಡ (ಪಿಟೀಲು). `ಭರತನಾಟ್ಯ: ನಿರ್ಮಲಾ ಮಂಜುನಾಥ್ (ಬೆಂಗಳೂರು); ಚಿತ್ರನಟ ಶ್ರೀಧರ್ (ಬೆಂಗಳೂರು); ಕೆ.ಜಿ. ಕುಲಕರ್ಣಿ (ಹಾವೇರಿ); ಕುಮುದಿನಿರಾವ್ (ಧಾರವಾಡ). ಸುಗಮ ಸಂಗೀತ: ನಾರಾಯಣ ಢಗೆ (ರಾಯಚೂರು). ಕಥಾಕೀರ್ತನ: ಬಿ.ಪಿ. ರಾಜಮ್ಮ ಹಾಗೂ ಡಾ. ಎಂ.ಕಿರಣ್ ಕುಮಾರ್ (ಬೆಂಗಳೂರು). ಗಮಕ ವಾಚನ: ಕೆ. ಜಯಮ್ಮ (ಹಾಸನ); ಎಂ.ಆರ್. ಸತ್ಯನಾರಾಯಣ (ಬೆಂಗಳೂರು). ಸಂಘ ಸಂಸ್ಥೆ: ಕುಮಾರವ್ಯಾಸ ಮಂಟಪ, ರಾಜಾಜಿನಗರ ಬೆಂಗಳೂರು.

2007: ಕಾಶ್ಮೀರದಲ್ಲಿ ಉಗ್ರರ ಗುಂಡಿನ ದಾಳಿಗೆ ತುತ್ತಾದ ಕರ್ನಾಟಕದ ಕರ್ನಲ್ ವಿ.ವಸಂತ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಲ ಸೇನಾ ಗೌರವದೊಂದಿಗೆ ಬೆಂಗಳೂರಿನಲ್ಲಿ ನೆರವೇರಿತು.

2007: ಡೇರಾ ಸಚ್ಚಾ ಸೌದಾ ಧಾರ್ಮಿಕ ಪಂಗಡದ ಗುರು ಬಾಬಾ ಗುರ್ಮಿತ್ ರಾಮ್ ಸಿಂಗ್ ಅವರ ವಿರುದ್ಧ ಎರಡು ಕೊಲೆ ಹಾಗೂ ಒಂದು ಮಾನಭಂಗ ಮೊಕದ್ದಮೆಯನ್ನು ಕೇಂದ್ರ ತನಿಖಾ ದಳ (ಸಿಬಿಐ) ದಾಖಲಿಸಿತು. ಡೇರಾದ ವ್ಯವಸ್ಥಾಪಕ ರಂಜಿತ್ ಸಿಂಗ್ ಮತ್ತು ಸಿರ್ಸಾ ಮೂಲದ ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣ ಹಾಗೂ ಶಿಷ್ಯೆಯೊಬ್ಬಳ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆಗಳನ್ನು ಹೂಡಲಾಗಿದೆ ಎಂದು ಸಿಬಿಐ ವಕೀಲ ರಾಜನ್ ಗುಪ್ತಾ ಪ್ರಕಟಿಸಿದರು. ಕೆಲ ದಿನಗಳ ಹಿಂದೆ ಡೇರಾ ಗುರು ಅವರು ಸಿಖ್ ಗುರು ಗೋವಿಂದ್ ಸಿಂಗ್ ಅವರಂತೆ ಪೋಷಾಕುಗಳನ್ನು ಧರಿಸಿ ಪ್ರಚಾರ ಗಿಟ್ಟಿಸಿದ್ದರು. ಇದಕ್ಕೆ ಸಿಖ್ ಸಮುದಾಯದವರು ಪ್ರತಿಭಟನೆ ವ್ಯಕ್ತಪಡಿಸಿದ್ದರಿಂದ ಅಲ್ಲಲ್ಲಿ ಗಲಭೆಗಳು ಉಂಟಾಗಿ ಒಬ್ಬ ಸತ್ತು 50 ಜನರು ತೀವ್ರವಾಗಿ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಂಜಾಬ್ ಪೊಲೀಸ್ ಡೇರಾ ಗುರುವಿನ ವಿರುದ್ಧ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿತ್ತು.

2007: ಗಿನ್ನೆಸ್ ಪುಸ್ತಕದಲ್ಲಿ ಸ್ಥಾನ ಪಡೆಯುವ ಸಲುವಾಗಿ ಒರಿಸ್ಸಾದ `ಭುವನೇಶ್ವರದ ಸ್ಟ್ರಾಂಗ್ ಮ್ಯಾನ್' ಎಂದೇ ಹೆಸರು ಪಡೆದ ಕೇಶವ್ ಸ್ವೇನ್ ಭುವನೇಶ್ವರದಲ್ಲಿ ತನ್ನ ಬಲ ಮೊಣಕೈಯ ಸಹಾಯದಿಂದ ಒಂದು ನಿಮಿಷದಲ್ಲಿ 72 ತೆಂಗಿನಕಾಯಿಗಳನ್ನು ಒಡೆದು ನೂತನ ದಾಖಲೆ ನಿರ್ಮಿಸಿದರು. ಮಣ್ಣು ಮತ್ತು ಸಿಮೆಂಟಿನಿಂದ ನಿರ್ಮಿಸಿದ 3 ಅಡಿ ಎತ್ತರ ಮತ್ತು 20 ಅಡಿ ಉದ್ದದ ಗೋಡೆಯಲ್ಲಿ ಸಾಲಾಗಿ ತೆಂಗಿನಕಾಯಿಗಳನ್ನು ಇರಿಸಲಾಗಿತ್ತು. ಕೇಶವ್ ಒಂದು ನಿಮಿಷದಲ್ಲಿ ಒಟ್ಟು 72 ತೆಂಗಿನಕಾಯಿಗಳನ್ನು ಒಡೆಯುವಲ್ಲಿ ಯಶಸ್ವಿಯಾದರು.

2006: ಅಮೆರಿಕಕ್ಕೆ ಸಡ್ಡು ಹೊಡೆದು ನಿಂತ ಕ್ಯೂಬಾದ ಕಮ್ಯೂನಿಸ್ಟ್ ನಾಯಕ ಫಿಡೆಲ್ ಕ್ಯಾಸ್ಟ್ರೋ 47 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿಯನ್ನು ಸಹೋದರ ರೌಲ್ ಅವರಿಗೆ ತಾತ್ಕಾಲಿಕವಾಗಿ ಬಿಟ್ಟುಕೊಟ್ಟರು. ಕರುಳಿನ ಶಸ್ತ್ರಚಿಕಿತ್ಸೆ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದರು.

2006: ಅರಿಶಿಣ ಮತ್ತು ಈರುಳ್ಳಿಯ ರಸಾಯನಗಳಿಂದ ಸಿದ್ಧಪಡಿಸಿದ ಗುಳಿಗೆ ಕರುಳು ಕ್ಯಾನ್ಸರ್ ನಿಯಂತ್ರಣಕ್ಕೆ ಉತ್ತಮ ಔಷಧ ಎಂಬುದು ಬೆಳಕಿಗೆ ಬಂದಿದೆ ಎಂದು ಹ್ಯೂಸ್ಟನ್ ಜಾನ್ ಕಾಪ್ ಕಿನ್ಸ್ ವಿಶ್ವವಿದ್ಯಾಲಯ ಔಷಧ ಶಾಲೆಯ ವ್ಯವಸ್ಥಾಪಕ ನಿರ್ದೇಶಕ ಫ್ರಾನ್ಸಿಸ್ ಪ್ರಕಟಿಸಿದರು. ಈ ಔಷಧವನ್ನು 6 ತಿಂಗಳ ಕಾಲ ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ ಎಂದು ಅವರು ಹೇಳಿದರು.

2006: ಮಾಹಿತಿ ತಂತ್ರಜ್ಞಾನದಲ್ಲಿ ಉತ್ತಮ ಸಾಧನೆ ಮಾಡಿರುವ ಬೆಂಗಳೂರಿನ ವಿಪ್ರೊ ಸಂಸ್ಥೆಗೆ 2004-05ರ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ರಫ್ತು ಪ್ರಶಸ್ತಿ ಲಭಿಸಿತು.

2001: ಕಲ್ಯಾಣ ಕುಮಾರ್ ನಿಧನ.

1997: `ವಿಮಾನಯಾನ ದೈತ್ಯರು' ಎಂದೇ ಹೆಸರಾಗಿದ್ದ ಬೋಯಿಂಗ್ ಕಂಪೆನಿ ಮತ್ತು ಮೆಕ್ ಡೊನ್ನೆಲ್ ಡಗ್ಲಾಸ್ ಕಾರ್ಪೊರೇಷನ್ನುಗಳು ಪರಸ್ಪರ ವಿಲೀನಗೊಂಡು ಜಗತ್ತಿನ ಅತಿದೊಡ್ಡ ವಿಮಾನಯಾನ ಸಂಸ್ಥೆಯನ್ನು ಹುಟ್ಟುಹಾಕಿದವು.

1996: ಅಟ್ಲಾಂಟಾ ಒಲಿಂಪಿಕ್ಸ್ ನಲ್ಲಿ 200 ಮೀಟರ್ ಓಟದ ಸ್ವರ್ಣಪದಕವನ್ನು ಅಮೆರಿಕದ ಮೈಕೆಲ್ ಜಾನ್ಸನ್ ಗೆದ್ದುಕೊಂಡರು. ಈ ಸಾಧನೆಯಿಂದ ಒಂದೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 200 ಮತ್ತು 400 ಮೀಟರ್ ಓಟಗಳೆರಡರಲ್ಲೂ ಸ್ವರ್ಣಗೆದ್ದ ಪ್ರಪ್ರಥಮ ಅಥ್ಲೆಟ್ ಎಂಬ ಕೀರ್ತಿ ಅವರಿಗೆ ಲಭಿಸಿತು.

1981: ನಡುರಾತ್ರಿ 12.01 ಗಂಟೆಗೆ ಎಮ್ ಟಿವಿ (ಮ್ಯೂಸಿಕ್ ಟೆಲಿವಿಷನ್) ತನ್ನ ಚೊಚ್ಚಲ ಪ್ರಸಾರ ಆರಂಭಿಸಿತು.

1957: ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಎಂಬ ಸ್ವತಂತ್ರ ಸಂಸ್ಥೆಯನ್ನು ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಈದಿನ ಉದ್ಘಾಟಿಸಿದರು. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಭಾರತೀಯ ಪ್ರಕಾಶನ ಸಂಸ್ಥೆಯಾಗಿದ್ದು, ಇತರ ಪ್ರಕಾಶಕರ ನಡುವೆ ಸ್ಪರ್ಧೆ ಏರ್ಪಡದಂತೆ ಮಾಡುವ ಸಲುವಾಗಿ ಪ್ರಾರಂಭಗೊಂಡಿತು.

1936: ಅಡಾಲ್ಫ್ ಹಿಟ್ಲರನಿಂದ ಬರ್ಲಿನ್ನಿನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಉದ್ಘಾಟನೆಗೊಂಡಿತು. ಗ್ರೀಸಿನಿಂದ ಒಲಿಂಪಿಕ್ ಕ್ರೀಡಾಜ್ಯೋತಿಯನ್ನು ತಂದ ಮೊತ್ತ ಮೊದಲ ಒಲಿಂಪಿಕ್ ಕ್ರೀಡಾಕೂಟ ಇದಾಗಿತ್ತು.

1932: ಭಾರತೀಯ ಚಿತ್ರನಟಿ ಮೇಹ್ಜಬೀನ್ ಬಕ್ಸ್ (1932-1972) ಜನ್ಮದಿನ. ಮೀನಾಕುಮಾರಿ ಎಂದೇ ಜನಪ್ರಿಯರಾಗಿದ್ದ ಇವರಿಗೆ `ಪಾಕೀಜಾ' ಸಿನಿಮಾದ ಪಾತ್ರ ಅದ್ಭುತ ಖ್ಯಾತಿಯನ್ನು ತಂದುಕೊಟ್ಟಿತು.

1931: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಮಹಾತ್ಮಾ ಗಾಂಧೀಜಿಯವರ ರಾಷ್ಟ್ರಧ್ವಜದ ವಿನ್ಯಾಸವನ್ನು ಕೆಲವು ಬದಲಾವಣೆಗಳೊಂದಿಗೆ ಅಂಗೀಕರಿಸಿತು. (ಈ ತ್ರಿವರ್ಣ ಧ್ವಜದ ಕೇಸರಿ ಬಣ್ಣವು ಶೌರ್ಯ ಹಾಗೂ ಬಲಿದಾನ, ಬಿಳಿ ಬಣ್ಣವು ಶಾಂತಿ ಹಾಗೂ ಸತ್ಯ, ಹಸಿರು ಬಣ್ಣವು ವಿಶ್ವಾಸ ಹಾಗೂ ಶಕ್ತಿಯನ್ನು ಮತ್ತು ಚಕ್ರವು ಜನ ಸಮೂಹದ ಕಲ್ಯಾಣವನ್ನು ಸಂಕೇತಿಸುತ್ತವೆ.)

1914: ಖ್ಯಾತ ಕನ್ನಡ ಸಾಹಿತಿ ನಂಜುಂಡಾರಾಧ್ಯ (ಅಮರವಾಣಿ) ಅವರು ಗಂಗಾಧರಯ್ಯ- ವೀರಮ್ಮ ದಂಪತಿಯ ಪುತ್ರನಾಗಿ ಕೋಲಾರ ಜಿಲ್ಲೆಯ ಗೌರಿ ಬಿದನೂರು ತಾಲ್ಲೂಕಿನ ಗುಂಡ್ಲ ಹಳ್ಳಿಯಲ್ಲಿ ಜನಿಸಿದರು. ಕನ್ನಡ, ಹಿಂದಿ, ತೆಲುಗು, ಸಂಸ್ಕೃತ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ನಂಜುಂಡಾರಾಧ್ಯ 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

1882: ಭಾರತದ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಪುರುಷೋತ್ತಮದಾಸ್ ಟಂಡನ್ (1882-1962) ಜನ್ಮದಿನ.

1849: ಬ್ರಿಟಿಷ್ ಸಂಸತ್ತು ಕಾನೂನಿನ ಮೂಲಕ `ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ'ಯನ್ನು (ಜಿಐಪಿ) ಸ್ಥಾಪಿಸಿತು. ಈಗ ಇದು `ಸೆಂಟ್ರಲ್ ರೈಲ್ವೇ' ಆಗಿದೆ.

1833: ಇಂಗ್ಲೆಂಡಿನಲ್ಲಿ `ಗುಲಾಮೀ ಪದ್ಧತಿ' ರದ್ದುಗೊಂಡಿತು. ಇದು ವಿಲಿಯಂ ವಿಲ್ಬೆರ್ ಫೋರ್ಸ್ ನಡೆಸಿದ 40 ವರ್ಷಗಳ ಹೋರಾಟದ ಫಲಶ್ರುತಿ.

1790: ಅಮೆರಿಕದ ಮೊದಲ ಜನಗಣತಿ.

1774: ಜೋಸೆಫ್ ಪ್ರೀಸ್ಲೆ ಅವರಿಂದ ಪ್ರಾಣವಾಯು ಆಮ್ಲಜನಕದ ಸಂಶೋಧನೆ

No comments:

Post a Comment