Tuesday, August 28, 2018

ಇಂದಿನ ಇತಿಹಾಸ History Today ಆಗಸ್ಟ್ 28

ಇಂದಿನ ಇತಿಹಾಸ History Today ಆಗಸ್ಟ್ 28

2018: ಜಕಾರ್ತ: ಇಂಡೋನೇಷ್ಯದಲ್ಲಿ ನಡೆದ ೨೦೧೮ರ ಏಷ್ಯನ್ ಕ್ರೀಡಾಕೂಟದ ೮೦೦ ಮೀಟರ್ ಫೈನಲ್‌ನಲ್ಲಿ ಭಾರತದ ಅಥ್ಲೆಟಿಕ್ ಮನಜಿತ್ ಸಿಂಗ್ ಅವರು ತಮ್ಮ ಸಹ ಕ್ರೀಡಾಪಟು ಜಿನ್ಸನ್ ಜಾನ್ಸನ್ ಅವರನ್ನು 2ನೇ ಸ್ಥಾನಕ್ಕೆ ತಳ್ಳಿ ಇನ್ನೊಂದು ಸ್ವರ್ಣ ಪದಕವನ್ನು ದೇಶಕ್ಕೆ ತಂದು ಕೊಟ್ಟರು.  ಈ ಸಾಹಸ ಪ್ರದರ್ಶಿಸುವಲ್ಲಿ ಮನಜಿತ್ ಸಿಂಗ್ ಅವರು 1982ರಲ್ಲಿ ದೆಹಲಿಯಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಚಾರ್ಲ್ಸ್ ಬೊರೋಮಿಯೊ ಅವರು ಸ್ವರ್ಣ ಪದಕ ಗೆಲ್ಲುವ ಮೂಲಕ ಸಾಧಿಸಿದ ದಾಖಲೆಯನ್ನು ಪುನಃಸ್ಥಾಪಿಸಿದರು. ಇದೇ ಸ್ಪರ್ಧೆಯಲ್ಲಿ ಜಿನ್ಸನ್ ಜಾನ್ಸನ್ ದೇಶಕ್ಕೆ ಬೆಳ್ಳಿ ಪದಕವನ್ನು ತಂದು ಕೊಟ್ಟರು. ಇದಕ್ಕೆ ಮುನ್ನ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ರಜತ ಪದಕ ಗೆಲ್ಲುವ ಮೂಲಕ ಪಿ.ವಿ. ಸಿಂಧು ಇತಿಹಾಸ ನಿರ್ಮಿಸಿದರು. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊತ್ತ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಸಿಂಧು ಪಾತ್ರರಾದರು. ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಮೇಜರ್ ಫೈನಲ್ ನಲ್ಲಿ ೨ನೇ ಅತ್ಯುತ್ತಮ ಸ್ಥಾನ ಪಡೆದರು ಮತ್ತು ವೈಯಕ್ತಿಕ ಬೆಳ್ಳಿ ಪದಕವನ್ನು ಬಗಲಿಗೆ ಹಾಕಿಕೊಂಡರು. ಚೀನೀ ತೈಪೇಯಿಯ ಥಾಯ್- ಟ್ಜು - ಇಂಗ್ ಅವರಿಂದ ೩೪ ನಿಮಿಷಗಳ ಅಂತರದಲ್ಲಿ ೧೩-೨೧ ಮತ್ತು ೧೬-೨೧ ಅಂತರದಲ್ಲಿ ಸಿಂಧು ಪರಾಭವಗೊಂಡರು. ಆದರೆ ಫೈನಲ್ ವರೆಗೆ ಬರುವ ಮೂಲಕ ಸಿಂಧು ಅವರು ಇತಿಹಾಸ ನಿರ್ಮಿಸಿದರು. ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಈವರೆಗೆ ಭಾರತೀಯರು ಯಾರೂ ಫೈನಲ್ ವರೆಗೆ ಬಂದಿರಲಿಲ್ಲ. ಇದಕ್ಕೆ ಮುನ್ನ ಭಾರತವು ಕೇಂದ್ರೀಯ ಏಷ್ಯಾದ ದೇಶೀ ಕುಸ್ತಿಯ (ರೆಸ್ಲಿಂಗ್) ಕುರಾಶ್ ನಲ್ಲಿ ಎರಡು ಪದಕಗಳನ್ನು ಗೆದ್ದಿತು. ಪಿಂಕಿ ಬಲ್ಹಾರ ಮತ್ತು ಮಲಪ್ರಭಾ ಯಲ್ಲಪ್ಪ ಜಾಧವ್ ಅವರು ಮಹಿಳಾ ೫೨ ಕೆಜಿ ಕೆಟಗರಿಯ ಕುರಾಶ್ ನಲಿ  ಬೆಳ್ಳಿ ಮತ್ತು ಕಂಚಿನ ಪದಕವನ್ನು ಗೆದ್ದುಕೊಂಡರು. ೧೯ರ ಹರೆಯದ ಪಿಂಕಿ ಉಜ್ಬೆಕಿಸ್ಥಾನದ ಗುಲ್ನೋರ್ ಸುಲೇಮನೋವ ಅವರಿಂದ ಪರಾಭವಗೊಂಡು ರಜತ ಪದಕಕ್ಕೆ ತೃಪ್ತಿ ಪಡಬೇಕಾಯಿತು. ಗುಲ್ನೋರ್ ಸ್ವರ್ಣ ಪದಕ ಗೆದ್ದರು. ಕ್ರೀಡಾಕೂಟದ ೯ನೇಯ ದಿನ ತಾವೇ ಸ್ಥಾಪಿಸಿದ್ದ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ ನೀರಜ್ ಚೋಪ್ರಾ ಅವರು ಭಾರತಕ್ಕೆ ಸ್ವರ್ಣ ಪದಕ ತಂದು ಕೊಟ್ಟಿದ್ದರು.

2018: ಮುಂಬೈ: ಭೀಮಾ - ಕೋರೆಗಾಂವ್ ಹಿಂಸಾಚಾರದ ಹಿನ್ನೆಲೆಯಲ್ಲಿ ಮಹಾರಾಷ್ಟ್ರ, ತೆಲಂಗಾಣ, ಹರಿಯಾಣ ಮತ್ತು ಗೋವಾ ಸೇರಿದಂತೆ ದೇಶಾದ್ಯಂತ ಹಲವಾರು ದಲಿತ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಕೀಲರ ಮನೆಗಳ ಮೇಲೆ ವಿವಿಧ ಪೊಲೀಸ್ ತಂಡಗಳು ನಸುಕಿನಲ್ಲೇ ದಾಳಿ ನಡೆಸಿ ಹಲವರನ್ನು ಬಂಧಿಸಿದವು. ಮುಂಬೈಯಲ್ಲಿ ವೆರ್ನೋನ್ ಗೋನ್ಸಾಲ್ವೆಸ್, ದೆಹಲಿಯಲ್ಲಿ ಗೌತಮ್ ನವಲಖ, ಹರಿಯಾಣದಲ್ಲಿ ಸುಧಾ ಭಾರಧ್ವಾಜ್ ಮತ್ತು ಹೈದರಾಬಾದಿನಲ್ಲಿ ಕವಿ, ಪತ್ರಕರ್ತ ವರ ವರ ರಾವ್ ಅವರನ್ನು ಬಂಧಿಸಲಾಯಿತು. ಆನಂದ ಟೆಲ್ತುಂಬ್ಡೆ ಮತ್ತು ಸುರೇಂದ್ರ ಗಡ್ಲಿಂಗ್ ಸೇರಿದಂತೆ ಹಲವಾರು ಮಂದಿ ಸಾಮಾಜಿಕ ಕಾರ್ಯಕರ್ತರನ್ನು ಮಾವೋವಾದಿಗಳ ಜೊತೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು. ೨೦೧೭ರ ಡಿಸೆಂಬರ್ ೩೧ರಂದು ನಡೆದಎಲ್ಗರ್ ಪರಿಷದ್ಗೆ ಮಾವೋವಾದಿ ನಕ್ಸಲೀಯರ ಸಂಪರ್ಕಗಳು ಇರುವ ಬಗ್ಗೆ ಪುಣೆ ಪೊಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದರು.  ’ಎಲ್ಗರ್ ಪರಿಷದ್ ಬಳಿಕ ಭೀಮಾ - ಕೋರೆಗಾಂವ್ ಪ್ರದೇಶದಲ್ಲಿ ವ್ಯಾಪಕ ಹಿಂಸಾಚಾರಗಳು ಸಂಭವಿಸಿದ್ದವು. ದೆಹಲಿ, ಮುಂಬೈ, ರಾಂಚಿ, ಗೋವಾ ಮತ್ತು ಹೈದರಾಬಾದಿನಲ್ಲಿ ಸಾಮಾಜಿಕ ಕಾರ್ಯಕರ್ತರು, ವಕೀಲರು, ಬರಹಗಾರರು ಮತ್ತು ಪತ್ರಕರ್ತರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದರು.. ಈದಿನ ನಸುಕಿನಿಂದಲೇ ವಿವಿಧೆಡೆಗಳಲ್ಲಿ ದಾಳಿ ಹಾಗೂ ಶೋಧ ಕಾರ್ಯಾಚರಣೆ ಆರಂಭವಾಯಿತು ಎಂದು ಮೂಲಗಳು ತಿಳಿಸಿದವು. ಸಾಮಾಜಿಕ ಕಾರ್ಯಕರ್ತರಾದ ಅರುಣ್ ಫೆರೇರಿಯ, ಸುಸಾನ್ ಅಬ್ರಹಾಮ್ಸ್ ಮತ್ತು ವೆರ್ನೋನ್ ಗೋನ್ವಾಲ್ವೆಸ್ ಅವರ ಮನೆಗಳ ಮೇಲೆ ಮುಂಬೈಯಲ್ಲಿ ಪುಣೆ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿ, ಅವರನ್ನು ಪ್ರಶ್ನಿಸಿದರು. ಪುಣೆಯ ಸ್ವರಗೇಟ್ ಪೊಲೀಸ್ ಠಾಣೆಯಿಂದ ದಾಳಿ ಆದೇಶ ಬಂತು ಎಂದು ಮೂಲಗಳು ಹೇಳಿದವು. ಏನಿದ್ದರೂ ಠಾಣೆಯಲ್ಲಿದ್ದ ಇನ್ ಸ್ಪೆಕ್ಟರ್ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ತಿಳಿಸಿದರು. ಭಾರಧ್ವಾಜ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೫೩ಎ (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆ ಇತ್ಯಾದಿ ನೆಲೆಯಲ್ಲಿ ವೈರತ್ವ ಬೆಳೆಸುವುದು), ೫೦೫ (ಬಹಿರಂಗ ಕಿರುಕುಳಕ್ಕಾಗಿ ಹೇಳಿಕೆಗಳನ್ನು ನೀಡುವುದು), ೧೧೭ (ಸಾರ್ವಜನಿಕರನ್ನು ಅಥವಾ ೧೦ಕ್ಕಿಂತ ಹೆಚ್ಚು ಅಪರಾಧ ಎಸಗಲು ಪ್ರಚೋದಿಸುವುದು) ಮತ್ತು ೧೨೦ರ (ಸೆರೆವಾಸಕ್ಕೆ ಅರ್ಹವಾದ ಅಪರಾಧವನ್ನು ಮುಚ್ಚಿಡುವುದು) ಅಡಿಯಲ್ಲಿ ದೋಷಾರೋಪ ಮಾಡಲಾಯಿತು. ಪುಣೆ ಅಪರಾಧ ಶಾಕೆಯು ಥಾಣೆಯ ಚಯಾಯಿಯಲ್ಲಿ ವಕೀಲರೊಬ್ಬರನ್ನು ಬಂಧಿಸಲಾಗಿದೆ ಎಂದು ಸುದ್ದಿ ಮೂಲಗಳು ಹೇಳಿದವು. ಪತ್ರಕರ್ತ ವರವರ ರಾವ್ ಅವರನ್ನು ಹೈದರಾಬಾದಿನಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು. ರಾಷ್ಟ್ರವ್ಯಾಪಿ ದಾಳಿಗಳ ಬಗ್ಗೆ ಅಧಿಕೃತ ಹೇಳಿಕೆ ನೀಡಲು ಪುಣೆ ಪೊಲೀಸರು ನಿರಾಕರಿಸಿದರು.  ’ ಕ್ಷಣಕ್ಕೆ ನಾನು ಏನು ಹೇಳಲೂ ಸಾಧ್ಯವಿಲ್ಲ ಎಂದು ಪುಣೆ ವಲಯ ೨ರ ಡಿಸಿಪಿ ಡಾ. ಬಚ್ಚನ್ ಸಿಂಗ್ ಹೇಳಿದರು. ರಾಷ್ಟ್ರವ್ಯಾಪಿ ದಾಳಿಗಳಿಗೆ ಕೇಂದ್ರ ಸರ್ಕಾರವನ್ನು ಹೊಣೆಯಾಗಿಸಿರುವ ದಲಿತ ನಾಯಕ ಪ್ರಕಾಶ್ ಅಂಬೇಡ್ಕರ್ ಅವರು ಕೇಂದ್ರವು ರಾಜಕೀಯ ವ್ಯವಸ್ಥೆಯನ್ನೇ ಕುಲಗೆಡಿಸುತ್ತಿದೆ ಎಂದು ಆಪಾದಿಸಿದರು. ’ ಸರ್ಕಾರದ ವಿರುದ್ಧ ದನಿ ಎತ್ತುತ್ತಿರುವವರು ಎನ್ ಜಿಒಗಳು. ದಾಳಿ ಮೂಲಕ ಸಮೂಹದ ಬಾಯಿ ಮುಚ್ಚಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಅವರು ನುಡಿದರು. ಪೊಲೀಸರು ರಾಂಚಿ ಮೂಲಕ ಕಾರ್ಯಕರ್ತ ಸ್ತಾನ್ ಸ್ವಾಮಿ ಮನೆಯ ಮೇಲೂ ದಾಳಿ ನಡೆಸಿ ಕಂಪ್ಯೂಟರುಗಳು, ಸಿಡಿಗಳು, ಸಿಮ್ ಕಾರ್ಡುಗಳು ಮತ್ತು ದಾಖಲೆಗಳನ್ನು ವಶ ಪಡಿಸಿಕೊಂಡರು.  ಸ್ವಾಮಿ ಅವರು ಖ್ಯಾತ ಬರಹಗಾರ, ಸಾಮಾಜಿಕ ಕಾರ್ಯಕರ್ತ ಮತ್ತು ಬುಡಕಟ್ಟು ಹಕ್ಕುಗಳ ವಕೀಲರಾಗಿದ್ದಾರೆ. ರಾಜಸ್ಥಾನ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತೆ ಕವಿತಾ ಶ್ರೀವಾಸ್ತವ ಅವರುಮೋದಿ ಸರ್ಕಾರವು ಮುಂಚೂಣಿಯ ಮಾನವ ಹಕ್ಕುಗಳ ಕಾರ್ಯಕರ್ತರ ಮೇಲೆ ರಾಷ್ಟ್ರವ್ಯಾಪಿ ದಾಳಿ ನಡೆಸುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿದೆ ಎಂದು ಟೀಕಿಸಿದರು.  
2018: ಅಲಪ್ಪುಳ
: ಕೇರಳದ ಸಚಿವರು, ರಾಜಕೀಯ ನಾಯಕರ ದಂಡೇ ಈದಿನ ಮುಂಡು ಉಟ್ಟುಕೊಂಡು
ಕೈಗಳಲ್ಲಿ ಪೊರಕೆ ಹಿಡಿದು ಜಲಪ್ರಳಯದಿಂದ ತತ್ತರಿಸಿದ ಕೇರಳದ ರಸ್ತೆಗಳು, ಮನೆ ಮನೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಇಳಿದ ದೃಶ್ಯ ಅಲಪ್ಪುಳ ಜಿಲ್ಲೆಯಲ್ಲಿ ಕಾಣಿಸಿತು.  ೩೦೦ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡ ಶತಮಾನದ ಭೀಕರ ದುರಂತಕ್ಕೆ ಈಡಾದ ಕೇರಳದಲ್ಲಿ ಅಲಪ್ಪುಳ ಜಿಲ್ಲೆಯ ಕುಟ್ಟನ್ನಾಡಿನಲ್ಲಿ ೬೦,೦೦೦ಕ್ಕೂ ಹೆಚ್ಚು ಸ್ವಯಂ ಸೇವಕನ ಬೃಹತ್ ಪಡೆಯೇ ಈದಿನ ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು. ಎಲ್ಲ ರಂಗಗಳ ಜನರೂ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ರಾಜ್ಯ ಪುನರ್ ನಿರ್ಮಾಣದ ಬೃಹತ್ ಸವಾಲನ್ನು ಹೇಗೆ ನಿಭಾಯಿಸುವಿರಿ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರುನಾವೆಲ್ಲರೂ ಸರಳವಾಗಿ ಒಟ್ಟಾಗಿ ಅದನ್ನು ಮಾಡುತ್ತೇವೆ. ಮನೆ ಮಾಲೀಕರು ತಮಗೆ ತಾವೇ ಇದನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಸಾಧ್ಯವಿದೆಯೇ?’ ಎಂದು ಪ್ರತಿಪ್ರಶ್ನೆ ಕೇಳಿದ್ದರು. ಲೋಕೋಪಯೋಗಿ ಸಚಿವ ಜಿ. ಸುಧಾಕರನ್ ಅವರು ಕೊಳೆ ತುಂಬಿದ್ದ ಮಹಡಿಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದುದನ್ನು ಕಂಡಾಗ ನಿವಾಸಿಗಳಿಗೆ ರಾಜ್ಯ ಆಡಳಿತವು ತನ್ನ ಭರವಸೆಯನ್ನು ಕೃತಿಗಿಳಿಸಿದೆ ಎಂಬುದು ಅರಿವಿಗೆ ಬಂತು. ವಾಸ್ತವವಾಗಿ ಇತರ ರಾಜ್ಯಗಳ ಸಚಿವರೂ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಳ್ಳಲು ಕುಟ್ಟನ್ನಾಡಿಗೆ ಬಂದಿದ್ದರು.  ಸಚಿವರು, ಎಲೆಕ್ಟೀಷಿಯನ್ನರು, ಪ್ಲಂಬರ್ ಗಳು, ಹಾವು ಹಿಡಿಯುವವರು, ಆಡಳಿತದ ಅಧಿಕಾರಿಗಳು ಮತ್ತು ಇತರರನ್ನು ಒಳಗೊಂಡ ಸ್ವಯಂ ಸೇವಕರ ಪಡೆ ಮುಂದಿನ ಮೂರು ದಿನಗಳ ಕಾಲ ಪಟ್ಟಣದಲ್ಲಿ ವಾಸ್ತವ್ಯ ಹೂಡಿ ಸ್ವಚ್ಛತಾ ಕಾರ್ಯವನ್ನು ಮುಂದುವರೆಸಲಿದೆ. ರಾಜ್ಯದಲ್ಲಿ ಬೃಹತ್ ಪ್ರಮಾಣದಲ್ಲಿ ಸ್ವಚ್ಛತಾ ಕಾರ್ಯ ನಡೆಯಲಿರುವ ಮೊದಲ ಪ್ರವಾಹ ಪೀಡಿತ ಪ್ರದೇಶ ಇದು. ಎರ್ನಾಕುಲಂನಲ್ಲಿ ಸ್ವಯಂ ಸೇವಕರು ಹಗಲಿರುಳೂ ಮನೆಗಳ ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿದ್ದರೂ, ದಕ್ಷಿಣದ ಕಡೆಯಲ್ಲಿ ಸ್ವಚ್ಛತೆಯ ಅಭಿಯಾನಕ್ಕೆ ಚಾಲನೆ ಸಿಕ್ಕಿದ್ದು ಕುಟ್ಟನ್ನಾಡಿನ ಬೃಹತ್ ಸ್ವಚ್ಛತಾ ಅಭಿಯಾನದೊಂದಿಗೆ. ಅಭಿಯಾನವನ್ನು ಅಲಪ್ಪುಳದ ಎಸ್ ಡಿವಿ ಸ್ಕೂಲ್ ಮೂಲಕ ನಿಯಂತ್ರಿಸಲಾಗುತ್ತಿದೆ. ಇಲ್ಲಿ ಜಿಲ್ಲಾ ಅಧಿಕಾರಿಗಳು ಸ್ವಯಂ ಸೇವಕರಿಗೆ ಮಾರ್ಗದರ್ಶನಗಳನ್ನು ಮಾಡುತ್ತಿದ್ದಾರೆ. ಆಡಳಿತವು ಸೋಮವಾರ ಸಂಜೆ ಜಿಲ್ಲಾಧಿಕಾರಿ ಎಸ್. ಸುಹಾಸ್ ನೇತೃತ್ವದಲ್ಲಿ ಸಭೆ ನಡೆದ ಬಳಿಕ ಕಾರ್ಯಯೋಜನೆಯನ್ನು ಸಿದ್ಧ ಪಡಿಸಲಾಗಿತ್ತು. ಕವಿ, ವಕೀಲ ಹಾಗೂ ಬಿಗಿ ಮಾತಿನ ಸಚಿವ ಸುಧಾಕರನ್ ಸ್ವಚ್ಛತಾ ಕಾರ್ಯಕ್ಕೆ ನಿರ್ದೇಶನ ನೀಡುವಲ್ಲಿ ನೇತೃತ್ವ ವಹಿಸಿದ್ದರು. ಕೆಲಸ ಹೇಗನ್ನಿಸುತ್ತದೆ ಎಂಬುದಾಗಿ ಕೇಳಲಾದ ಪ್ರಶ್ನೆಗೆ ಸಚಿವರುನಾನು ಸಾಧಾರಣ ವ್ಯಕ್ತಿಯಲ್ಲವೇ? ನಾನು ಇದೇ ಸ್ಥಳದ ವ್ಯಕ್ತಿ. ನನಗೆ ಪ್ರತಿಯೊಂದು ಸ್ಥಳದ ಪರಿಚಯ ಇದೆ. ಇಲ್ಲಿನ ಪ್ರತಿಯೊಂದು ರಸ್ತೆಯೂ ಗೊತ್ತಿದೆ. ನಾನು ದೆಹಲಿಯಲ್ಲಿ ಕುಳಿತುಕೊಂಡು ಕೇರಳದ ಬಗ್ಗೆ ಮಾತನಾಡುತ್ತಿರುವ ಕೇಂದ್ರದ ಕೆಲವು ಸಚಿವರಂತೆ ಅಲ್ಲ. ನೀವು ಸಚಿವರಾಗಿದ್ದರೆ, ನೀವು ನಿಮ್ಮ ಕೈಗಳಿಗೆ ಕೆಸರು ಮೆತ್ತಿಸಿಕೊಂಡು ಜನರಿಗೆ ನೆರವಾಗಬೇಕು ಎಂದು ಉತ್ತರಿಸಿದರು. ಪುನ್ನಮಡ ಸರೋವರದಲ್ಲಿನ ನೆಹರೂ ಟ್ರೋಫಿ ಬೋಟ್ ರೇಸ್ ಪ್ರದೇಶದಲ್ಲಿ ಬೃಹತ್ ಸ್ವಚ್ಛತಾ ಕಾರ್ಯಾಚರಣೆ ಮುಗಿದ ಬಳಿಕ ಇನ್ನು ರಸ್ತೆ ಸಂಪರ್ಕ ಸಾಧ್ಯವಾಗದ ಕಡೆಗೆ ಪರಿಹಾರ ಸಾಮಗ್ರಿ ಕಳುಹಿಸುವ ಕೆಲಸವನ್ನೂ ತಂಡ ನಿರ್ವಹಿಸಿತು. ಕೇರಳದ ವಿತ್ತ ಸಚಿವ ಥಾಮಸ್ ಇಸಾಕ್ ಅವರುಶೇಕಡಾ ೯೦ರಷ್ಟು ಸ್ವಯಂ ಸೇವಕರು ಅಭಿಯಾನಕ್ಕಾಗಿ ಆನ್ ಲೈನ್ ಮೂಲಕ ತಮ್ಮ ಹೆಸರು ನೋಂದಾಯಿಸಿದ್ದು, ಕುಟ್ಟನ್ನಾಡ್ ತಲುಪಿದ್ದಾರೆ. ಅವರಲ್ಲಿ ಬಹುತೇಕ ಮಂದಿ ವಿದ್ಯಾರ್ಥಿಗಳು ಮತ್ತು ಯುವ ವೃತ್ತಿ ನಿರತರು. ರಾಜ್ಯವಷ್ಟೇ ಅಲ್ಲ, ಹೊರರಾಜ್ಯಗಳಿಂದಲೂ ಇನ್ನಷ್ಟು ಸ್ವಯಂಸೇವಕರು ಬರುವ ಭರವಸೆ ನಮಗಿದೆ ಎಂದು ನುಡಿದರು. ಕೇರಳದ ರಸ್ತೆಗಳಿಗೆ ಹೊರೆಯಂತೆ ಕಾಣುತ್ತಿದ್ದ ಟಿಪ್ಪರ್ ಲಾರಿಗಳು ಕಳೆದವಾರ ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದವು. ಜಲಾವೃತ ಪ್ರದೇಶಗಳಿಂದ ಜನರನ್ನು ರಕ್ಷಿಸಿ ಒಯ್ಯುವಲ್ಲಿ ಟಿಪ್ಪರುಗಳು ಅಸಾಧಾರಣೆ ಸೇವೆ ಸಲ್ಲಿಸಿದ್ದವು. ಈದಿನ ಇದೇ ಟಿಪ್ಪರ್ ಲಾರಿಗಳು ಸ್ವಯಂ ಸೇವಕರನ್ನು ಸ್ವಚ್ಚತಾ ಕಾರ್ಯಕ್ಕಾಗಿ ಜನರನ್ನು ಹೊತ್ತು ತರುವ ಕಾರ್ಯದಲ್ಲಿ ನಿರತವಾಗಿದ್ದವು. ಕೇರಳ ಅಗ್ನಿಶಾಮಕದ ದಳವು ತನ್ನ ಹೈ ಪ್ರೆಷರ್ ವಾಟರ್ ಜೆಟ್ ಗಳ ಮೂಲಕ ಪ್ರಾರಂಭಿಕ ಸ್ವಚ್ಛತೆಯನ್ನು ಮಾಡಿತು. ಪಂಚಾಯತ್ ಕಾರ್ಯದರ್ಶಿಗಳು ಇಲ್ಲವೇ ಅಧಿಕಾರಿಗಳು ಪ್ರತಿಯೊಂದು ಪ್ರದೇಶದಲ್ಲೂ ಸ್ವಚ್ಛತಾ ಕಾರ್ಯದ ಮೇಲುಸ್ತುವಾರಿ ನೋಡಿಕೊಂಡರು.

2018: ಕೋಲ್ಕತ: ಭಾರತದಲ್ಲಿ ಹಾಲಿ ಪರಿಸ್ಥಿತಿ ತುರ್ತುಸ್ಥಿತಿಗಿಂತಲೂ ಅಪಾಯಕಾರಿಯಾಗಿದೆ ಎಂದು ಬರಹಗಾರ್ತಿ ಅರುಂಧತಿ ರಾಯ್ ಹೇಳಿದರು. ಕನಿಷ್ಠ ರಾಜ್ಯಗಳಲ್ಲಿ ನಡೆದ ಪೊಲೀಸ್ ದಾಳಿಯಲ್ಲಿ ನಾಗರಿಕ ಹಕ್ಕುಗಳ ಕಾರ್ಯಕರ್ತರು ಮತ್ತು ವಕೀಲರನ್ನು ಬಂಧಿಸಿದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ರಾಯ್, ೭೦ರ ದಶಕದಲ್ಲಿ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿ ಕಾಲದ ಪರಿಸ್ಥಿತಿಗಿಂತಲೂ ಈಗಿನ ಸ್ಥಿತಿ ಹೆಚ್ಚು ಗಂಭೀರವಾಗಿದೆ ಎಂದು ನುಡಿದರು. ‘ಈಗ ಅನಾವರಣಗೊಳ್ಳುತ್ತಿರುವ ಘಟನಾವಳಿಗಳು ಪ್ರಜಾಪ್ರಭುತ್ವವನ್ನು ಮುಗಿಸುವ ಮತ್ತು ರಾಷ್ಟ್ರವನ್ನು ಹಿಂದೂ ರಾಷ್ಟ್ರವನ್ನಾಗಿ ಪರಿವರ್ತಿಸುವ ಉದ್ದೇಶದೊಂದಿಗೆ ಘಟಿಸುತ್ತಿವೆ ಎಂದು ಅವರು ಹೇಳಿದರು. ‘ ಹೊತ್ತಿನಲ್ಲಿ ಇದು ಅತಿಶಯವಾದ ಹೇಳಿಕೆ ಅನ್ನಿಸಬಹುದು. ಆದರೆ ಸಂಭಾವ್ಯತೆ ಈಗ ತುರ್ತು ಪರಿಸ್ಥಿತಿಗಿಂತಲೂ ಹೆಚ್ಚು ಗಂಭೀರ ಹಾಗೂ ಅಪಾಯಕಾರಿಯಾದ್ದಾಗಿದೆ. ಈಗ ಸರ್ಕಾರವೇ ಅಲ್ಪಸಂಖ್ಯಾತರು, ದಲಿತರು, ಕ್ರೈಸ್ತರು, ಮುಸ್ಲಿಮರು ಮತ್ತು ಎಡಪಂಥೀಯರು ಮತ್ತು ಸರ್ಕಾರವು ತನ್ನ ಮಾಧ್ಯಮ ಪ್ರತಿನಿಧಿಗಳ ಮೂಲಕ ಒಪ್ಪದ ವ್ಯಕ್ತಿಗಳ ವಿರುದ್ಧ, ಗುಂಪುದಾಳಿಗಳು, ದ್ವೇಷಭಾಷಣಗಳ ಮೂಲಕ ಕಾನೂನು ಸುವ್ಯವಸ್ಥೆ ಸಮಸ್ಯೆಯನ್ನು ಸೃಷ್ಟಿಸುತ್ತಿದೆ ಎಂದು ರಾಯ್ ನುಡಿದರು. ನಿರ್ದಿಷ್ಟ ಸಿದ್ಧಾಂತವನ್ನು ಒಪ್ಪದ ಪ್ರತಿಯೊಬ್ಬನನ್ನೂ ಅಪರಾಧಿಯನ್ನಾಗಿ ಮಾಡಲಾಗುತ್ತಿದೆ ಅಥವಾ ಬಲಪಂಥೀಯ ಕಟ್ಟಾವಾದಿಗಳಿಂದ ಕೊಲೆ ಮಾಡಿಸಲಾಗುತ್ತಿದೆ ಎಂದು ಅವರು ಹೇಳಿದರು. ಬಂಧನಗಳ ಬಗ್ಗೆ ಪ್ರತಿಕ್ರಿಯಿಸಿದ ಅವರುವಕೀಲರು, ಬುದ್ಧಿಜೀವಿಗಳು ಮತ್ತು ದಲಿತ ಕಾರ್ಯಕರ್ತರ ಬಂಧನ ಹಾಗೂ ಗುಂಪುಹತ್ಯೆ ನಡೆಸುತ್ತಿರುವವರು, ದೇಷ ಭಾವನೆಹರಡುವ ಕ್ರಿಮಿನಲ್ಗಳನ್ನು ಬಂಧಿಸದೇ ಇರುವ ಕ್ರಮವು ಭಾರತೀಯ ಸಂವಿಧಾನದ ಆಶಯಗಳ ಮೇಲಿನ ನಿರಂತರ ಸೈದ್ಧಾಂತಿಕ ದಾಳಿಯಾಗಿದೆ ಎಂದು ಹೇಳಿದರು.


2018: ಹೈದರಾಬಾದ್: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ವ್ಯವಸ್ಥೆ ತರಲು ಸಂವಿಧಾನ ತಿದ್ದುಪಡಿ ಮಾಡುವ ಸಲುವಾಗಿ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಸರ್ಕಾರವು ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆ ಇದೆ ಅಥವಾ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಹಾಗೆ ಮಾಡುವ ಸಂಭವ ಇದೆ ಎಂದು ತೆಲಂಗಾಣದ ಬಿಜೆಪಿ ನಾಯಕ ಕೃಷ್ಣ ಸಾಗರ ರಾವ್ ಅವರು ಇಲ್ಲಿ ಸುಳಿವು ನೀಡಿದರು. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಜನತಾ ಪ್ರಾತಿನಿಧ್ಯ ಕಾಯ್ದೆಗೆ ತಿದ್ದುಪಡಿ ಮಾಡಲು ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸುವ ಅಥವಾ ಉದ್ದೇಶಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವ ಸಾಧ್ಯತೆಗಳಿವೆ ಎಂದು ತೆಲಂಗಾಣ ಬಿಜೆಪಿ ವಕ್ತಾರ ರಾವ್ ಹೇಳಿದರು. ‘ಬಿಜೆಪಿಯ ಏಕಕಾಲಕ್ಕೆ ಚುನಾವಣೆ ನಡೆಸುವುದರ ಪರವಾಗಿದೆ. ನಾವು ಈಗಲೂ ಬಗ್ಗೆ ಯತ್ನಿಸುತ್ತಿದ್ದೇವೆ. ಪ್ರಯತ್ನ ಬಿಟ್ಟುಕೊಟ್ಟಿಲ್ಲ  ಎಂದು ರಾವ್ ನುಡಿದರು. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ವಿಧಾನಸಭಾ ಚುನಾವಣೆಗಳನ್ನು ಹಿಂದೂಡುವ ತಮ್ಮ ಇಂಗಿತವನ್ನು ಪ್ರಕಟಿಸುತ್ತಿರುವುದರಿಂದ ಸಾಧ್ಯತೆ ಇನ್ನಷ್ಟು ಸ್ಪಷ್ಟವಾಗುತ್ತಿದೆ ಎಂದು ಕೃಷ್ಣ ಸಾಗರ ರಾವ್ ಹೇಳಿದರು. ಏನಿದ್ದರೂ ವಿಧಾನಸಭಾ ಚುನಾವಣೆಯನ್ನು ಹಿಂದೂಡುವ ಸಾಧ್ಯತೆಗಳು ಇಲ್ಲ ಎಂಬುದು ಬಿಜೆಪಿಯ ಭಾವನೆ ಎಂದು ಅವರು ನುಡಿದರು.ತೆಲಂಗಾಣದಲ್ಲಿ ಮುಂದಿನ ವರ್ಷ ಏಪ್ರಿಲ್- ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆಯ ಜೊತೆಗೇ ಚುನಾವಣೆ ನಡೆಯಬೇಕಾಗಿದೆ.

2017: ರೋಹ್ಟಕ್/ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿತನಾದ ಡೇರಾ ಸಚ್ಚಾ ಸೌದಾದ ಸ್ವಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಪ್ ಸಿಂಗ್ ಅವರು ರೋಹ್ಟಕ್ ಜೈಲಿನಲ್ಲಿಯೇ 20 ವರ್ಷ ಜೈಲು ಶಿಕ್ಷೆ ಹಾಗೂ 30 ಲಕ್ಷ ರೂಪಾಯಿ ದಂಡ ವಿಧಿಸಿದರುಅತ್ಯಾಚಾರ ಪ್ರಕರಣದ ಕುರಿತಂತೆ ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ತೀರ್ಪು ಓದಲು ಆರಂಭಿಸಿದಾಗ ಡೇರಾ ಮುಖ್ಯಸ್ಥ ರಾಮ್ ರಹೀಮ್ ಸಿಂಗ್ ತನ್ನ ತಪ್ಪನ್ನು ಕ್ಷಮಿಸುವಂತೆ ಹೇಳಿ ಕುಸಿದು ಬಿದ್ದ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿತು.  ರೋಹ್ಟಕ್ ಜೈಲಿನಲ್ಲಿಯೇ ಅತ್ಯಾಚಾರಿ ರಾಮ್ ರಹೀಮ್ ಗೆ ನ್ಯಾಯಾಧೀಶರು ಶಿಕ್ಷೆಯನ್ನು ಪ್ರಕಟಿಸಿದರು. ಜೈಲಿನ ಸುತ್ತ 17 ಸಾವಿರ ಪೊಲೀಸ್ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಮೊದಲಿಗೆ ಸುನಾರಿಯ ಜೈಲಿನಲ್ಲಿ  ರಾಮ್ ರಹೀಮ್ ಪರ ವಕೀಲರು ವಾದ ಮಂಡಿಸಿದ್ದರು. ವಕೀಲರಾದ ಎಸ್ ಕೆ ಗಾರ್ಗ್ ನರ್ವಾನ್ ಬಾಬಾ ಪರ ವಾದಿಸಿದ್ದರು. ಎರಡೂ ಕಡೆಯ ವಕೀಲರಿಗೆ ನ್ಯಾಯಾಧೀಶರು ತಲಾ 10 ನಿಮಿಷ ವಾದ ಮಂಡಿಸಲು ಅವಕಾಶ ಕಲ್ಪಿಸಿದ್ದರು. ರಾಮ್ ರಹೀಮ್ ವಯಸ್ಸು, ಆರೋಗ್ಯ ಪರಿಗಣಿಸಿ ಕಡಿಮೆ ಶಿಕ್ಷೆ ಕೊಡಿ ಎಂದು ರಾಮ್ ರಹೀಮ್ ಸಿಂಗ್ ಪರ ವಕೀಲ ಗಾರ್ಗ್ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದರು. ಅತ್ಯಾಚಾರಿ ರಾಮ್ ರಹೀಮ್ ಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್(ಸಿಬಿಐ) ಪರ ವಕೀಲರು ಪ್ರತಿ ವಾದ ಮಂಡಿಸಿದ್ದರು. ರಾಮ್ ರಹೀಮ್ ಸಿಂಗ್ ಗೆ ಐಪಿಸಿ ಸೆಕ್ಷನ್ 376(ಅತ್ಯಾಚಾರ), 506(ಜೀವ ಬೆದರಿಕೆ), 511 ಅಡಿ ನ್ಯಾಯಾಧೀಶರಾದ ಜಗದೀಪ್ ಸಿಂಗ್ ಅವರು ಗರಿಷ್ಠ (2 ಅತ್ಯಾಚಾರ ಪ್ರಕರಣಗಳು ಸೇರಿ 20ವರ್ಷ) ಜೈಲು ಶಿಕ್ಷೆಯನ್ನು ವಿಧಿಸಿದರು. ಅತ್ಯಾಚಾರ ಪ್ರಕರಣದಲ್ಲಿ  20 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಯಾವುದೇ ವಿಶೇಷ ಸೌಲಭ್ಯ ಕೊಡುವಂತಿಲ್ಲ ಎಂದು ಕೋರ್ಟ್ ಜೈಲು ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿತು.  ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಕಠಿಣ ಜೈಲುಶಿಕ್ಷೆಯನ್ನು ನ್ಯಾಯಾಧೀಶರು ಪ್ರಕಟಿಸಿದ ಬಳಿಕ ಗುರ್ಮೀತ್ ರಾಮ್ ರಹೀಮ್ ಸಿಂಗ್ ಕಟಕಟೆಯಲ್ಲಿಯೇ ಅಳುತ್ತಾ ಕುಸಿದು ಬಿದ್ದು ನಾಟಕವಾಡಿರುವ ಘಟನೆ ನಡೆದಿತ್ತು, ಬಳಿಕ ಕೋರ್ಟ್ ಹಾಲ್ ನಿಂದ ಹೊರಗೆ ಬರಲು ನಿರಾಕರಿಸಿದ್ದ. ಕೊನೆಗೆ ಪೊಲೀಸರು ರಾಮ್ ರಹೀಮ್ ನನ್ನು ಬಲವಂತವಾಗಿ ಕೋರ್ಟ್ ಹಾಲ್ ನಿಂದ ಹೊರಗೆ ಕರೆ ತಂದಿರುವುದಾಗಿ ವರದಿ ತಿಳಿಸಿತು. ಸಿರ್ಸಾ ಆಶ್ರಮದಲ್ಲಿ ಸುಮಾರು 36ಸಾವಿರ ರಾಮ್ ರಹೀಮ್ ಸಿಂಗ್ ಅನುಯಾಯಿಗಳು ಜಮಾವಣೆಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿತು.

2017: ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ಧ ಸದ್ಯ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಎಸಿಬಿ ಅಧಿಕಾರಿಗಳ ಭರವಸೆ ಹಿನ್ನೆಯಲ್ಲಿ ಹೈಕೋರ್ಟ್ ಏಕ ಸದಸ್ಯಪೀಠ ಮಧ್ಯಂತರ ಆದೇಶವನ್ನೇ ಮುಂದುವರೆಸಿ ಆಗಸ್ಟ್ 30ಕ್ಕೆ ವಿಚಾರಣೆಯನ್ನು ಮುಂದೂಡಿತು. ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಎಫ್ಐಆರ್ ರದ್ದು ಮಾಡುವಂತೆ ಕೋರಿ ಬಿಎಸ್ ವೈ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಮುಂದಿನ ಆದೇಶದವರೆಗೂ ಬಿಎಸ್ ವೈ ಅವರನ್ನು ಬಂಧಿಸದಂತೆ ಹಾಗೂ ವಿಚಾರಣೆಗೆ ಒಳಪಡಿಸದಂತೆ ಎಸಿಬಿ ಅಧಿಕಾರಿಗಳಿಗೆ ಸೂಚನೆ ನೀಡಿತು.

2017: ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ತೀರ್ಪು ಪ್ರಕಟವಾದ 3 ದಿನಗಳ ಬಳಿಕ ಅತ್ಯಾಚಾರ ಪ್ರಕರಣದಲ್ಲಿ ಶಾಮೀಲಾಗಿರುವ  ಮತ್ತೊಬ್ಬ ಸ್ವಘೋಷಿತ ದೇವಮಾನವ ಅಸಾರಾಮ್ ಬಾಪು ವಿರುದ್ಧದ ನಿಧಾನಗತಿಯ ವಿಚಾರಣೆಯ ಬಗ್ಗೆ ಸುಪ್ರೀಂಕೋರ್ಟ್ ಗುಜರಾತ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಅಸಾರಾಮ್ ಬಾಪು ರೇಪ್ ಆಪಾದನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿದ್ದರೂ ಕೂಡಾ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಿರುವ ಯುವತಿಯನ್ನು ಯಾಕೆ ವಿಚಾರಣೆಗೆ ಗುರಿಪಡಿಸಿಲ್ಲ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿತು. ಬಗ್ಗೆ ಗುಜರಾತ್ ಸರ್ಕಾರ ಕೂಡಲೇ ಪ್ರಮಾಣಪತ್ರ ಸಲ್ಲಿಸಬೇಕೆಂದು ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು. ಯಾಕೆ ವಿಚಾರಣೆಯನ್ನು ವಿಳಂಬ ಮಾಡಲಾಗುತ್ತಿದೆ? ಯಾಕೆ ನೀವಿನ್ನೂ ಸಂತ್ರಸ್ತೆಯನ್ನು ಪರೀಕ್ಷೆಗೊಳಪಡಿಸಿಲ್ಲ ಪ್ರಕರಣದ ಪ್ರಗತಿ ಕುರಿತ ವರದಿ ಸಲ್ಲಿಸಿ ಎಂದು ಸುಪ್ರೀಂಕೋರ್ಟ್ ಸೂಚಿಸಿತು.

2017: ನವದೆಹಲಿ: ಕಳೆದ 2 ತಿಂಗಳಿನಿಂದ ಡೋಕ್ಲಾಮ್ ಗಡಿಯಲ್ಲಿ ಭಾರತ ಮತ್ತು ಚೀನಾ ಸೇನೆ ಮಧ್ಯೆ ಉಲ್ಬಣವಾಗಿ ಮುಂದುವರಿದಿದ್ದ ಬಿಕ್ಕಟ್ಟು ಕೊನೆಗೂ ಅಂತ್ಯ ಕಂಡಿತು. ಉಭಯ ರಾಷ್ಟ್ರಗಳ ರಾಜತಾಂತ್ರಿಕ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಸೇನೆಯನ್ನು ಹಿಂತೆಗೆದುಕೊಳ್ಳಲು ಒಪ್ಪಿಗೆ ಸೂಚಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿತು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಅಧಿಕೃತ ಮಾಧ್ಯಮ ಹೇಳಿಕೆಯನ್ನು ಟ್ವೀಟ್ ಮಾಡಿದ್ದು, ಡೋಕ್ಲಾಮ್ ಗಡಿಯಲ್ಲಿನ ಸೇನೆಯನ್ನು ವಾಪಸ್ ತೆಗೆದುಕೊಳ್ಳಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ ಎಂದು ತಿಳಿಸಿದರು. ಡೋಕ್ಲಾಮ್ ಬಿಕ್ಕಟ್ಟು ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ರಾಜತಾಂತ್ರಿಕವಾಗಿ ಮಾತುಕತೆ ನಡೆಸಿದ್ದವು.   ಮಾತುಕತೆ ಹಿನ್ನೆಲೆಯಲ್ಲಿ ನಾವು ನಮ್ಮ ದೃಷ್ಟಿಕೋನದ ಬಗ್ಗೆ ವಿವರಿಸಿ ಹೇಳಿದ್ದೇವೆ. ಅಲ್ಲದೇ ನಮ್ಮ ಕಾಳಜಿ ಮತ್ತು ಆಸಕ್ತಿ ಬಗ್ಗೆಯೂ ಚೀನಾ ಜೊತೆ ಹಂಚಿಕೊಂಡಿರುವುದಾಗಿ ಪತ್ರಿಕಾ ಪ್ರಕಟಣೆ ವಿವರಿಸಿತು.
2017: ನವದೆಹಲಿ: ಡಿಸೆಂಬರ್ ವೇಳೆಗೆ ರೂ. 1000 ಮುಖಬೆಲೆಯ ಹೊಸ ನೋಟು ಚಲಾವಣೆಗೆ ಬರಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್ಬಿಐ) ಮೂಲಗಳು ತಿಳಿಸಿದವು. ರೂ. 200 ಮುಖಬೆಲೆಯ ಹೊಸ ನೋಟು ಆಗಸ್ಟ್ 25ರಂದು ಚಲಾವಣೆಗೆ ಬಂದಿತ್ತು. ಇದರ ಬೆನ್ನಲ್ಲೇ ರೂ. 1000 ಮುಖಬೆಲೆಯ ಹೊಸ ನೋಟು ಚಾಲ್ತಿಗೆ ಬರುವ ಸುದ್ದಿ ತಿಳಿದುಬಂದಿತು. ಹೊಸ ನೋಟಿನ ಮುದ್ರಣಕ್ಕೆ ಸಿದ್ಧತೆ ಆರಂಭವಾಗಿದೆ ಎಂದು ಮೂಲಗಳ ಹೇಳಿಕೆ ಉಲ್ಲೇಖಿಸಿ ಡಿಎನ್ಎಇಂಡಿಯಾ ವೆಬ್ಸೈಟ್ ವರದಿ ಮಾಡಿತು. ಮೈಸೂರು ಮತ್ತು ಸಾಲ್ಬೊನಿಯಲ್ಲಿರುವ ನೋಟು ಮುದ್ರಣಾಲಯಗಳು ರೂ. 1000 ಮುಖಬೆಲೆಯ ನೋಟಿನ ಮುದ್ರಣಕ್ಕೆ ಸಿದ್ಧವಾಗುತ್ತಿವೆ. ಹೊಸ ನೋಟು ಹೆಚ್ಚಿನ ಭದ್ರತಾ ಗುಣಲಕ್ಷಣಗಳನ್ನು ಹೊಂದಿರಲಿದೆಎಂದು ಆರ್ಬಿಐನ ನೋಟು ಮುದ್ರಣ ವಿಭಾಗಕ್ಕೆ ಸಂಬಂಧಿಸಿದ ಅಧಿಕಾರಿಯೊಬ್ಬರು ತಿಳಿಸಿದರು. ರೂ. 2000 ಮುಖಬೆಲೆಯ ನೋಟಿನ ಮುದ್ರಣವನ್ನು ಆರು ತಿಂಗಳ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಸದ್ಯ ರೂ. 200 ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತಿದೆ. ಮುಂದಿನ ಹಂತದಲ್ಲಿ ರೂ. 1000 ಮುಖಬೆಲೆಯ ನೋಟುಗಳನ್ನು ಮುದ್ರಿಸಲಾಗುತ್ತದೆಎಂದು ಅವರು ತಿಳಿಸಿದರು.
  

2016: ನವದೆಹಲಿ: ಇಂಧನ ಟ್ಯಾಂಕಿನ ಬದಲು ಗಾಳಿಯಿಂದ ಆಮ್ಲಜನಕವನ್ನು ಪಡೆದುಕೊಳ್ಳುವ ಸ್ಕ್ರಾಮ್ ಜೆಟ್ ರಾಕೆಟ್  ಎಂಜಿನನ್ನು  ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಶ್ರೀಹರಿಕೋಟದಲ್ಲಿ ಯಶಸ್ವಿಯಾಗಿ ಪರೀಕ್ಷಿಸಿತು. ಎಜಿನ್ ಬಳಕೆಯಿಂದ ರಾಕೆಟ್ ಉಡಾವಣೆ ವೆಚ್ಚ 10 ಪಟ್ಟು ತಗ್ಗಲಿದೆ. ಎಂಜಿನ್ನಿನ  ಯಶಸ್ವೀ ಉಡಾವಣೆಯೊಂದಿಗೆ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ಕೇವಲ 2 ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಯಾಯಿತು. ಅಮೆರಿಕ ಮತ್ತು ಆಸ್ಟ್ರೇಲಿಯಾ ಮಾತ್ರವೇ ತಂತ್ರಜ್ಞಾನದ ಪರೀಕ್ಷೆಯನ್ನು ಈವರೆಗೆ ಮಾಡಿವೆ.
 
2016: ಹೈದರಾಬಾದ್ : ರಿಯೊ ಒಲಿಂಪಿಕ್ಸ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ಪಿವಿ ಸಿಂಧು, ಸಾಕ್ಷಿ 
ಮಲಿಕ್, ದೀಪಾ ಕರ್ಮಾಕರ್ ಮತ್ತು ಸಿಂಧು ಅವರ ಕೋಚ್ ಪುಲ್ಲೇಲ ಗೋಪಿಚಂದ್ ಅವರಿಗೆ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯು ಕಾರನ್ನು ಹಸ್ತಾಂತರಿಸಿದರು. ಹೈದರಾಬಾದಿನಲ್ಲಿರುವ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ನಡೆದ ಸಮಾರಂಭದಲ್ಲಿ ಸಚಿನ್ ಕ್ರೀಡಾಪಟುಗಳಿಗೆ ಕಾರನ್ನು  ಹಸ್ತಾಂತರಿಸಿದರು. ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಚಾಮುಂಡೇಶ್ವರ್‍‍ನಾಥ್ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದು, ಅದನ್ನು ಹಸ್ತಾಂತರಿಸುವ ಕಾರ್ಯವನ್ನು ಸಚಿನ್ ಮಾಡಿದರು.
2016: ನವದೆಹಲಿ: ಬಹುಶ: ಜಗತ್ತಿನ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹಿರಿಮೆಗೆ ಇದೀಗ ಇಂಡೋನೇಶ್ಯಾದ ಮಾಹ್ ಗೋತೊ ಎಂಬ 145 ಪ್ರಾಯದ ವೃದ್ಧ ಪಾತ್ರರಾದರು. ಈ ಹಿಂದೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹಿರಿಮೆಗೆ ಫ್ರೆಂಚ್ ಮಹಿಳೆ ಜೆನ್ನ್ ಕಾಲ್ಮೆಂಟ್ ಪಾತ್ರರಾಗಿದ್ದರು. 122 ಪ್ರಾಯವಾಗಿದ್ದ ಅವರು 1977ರಲ್ಲಿ ತೀರಿಕೊಂಡಿದ್ದರು. ಇದೀಗ ಲಭಿಸಿರುವ ದಾಖಲೆಗಳ ಪ್ರಕಾರ ಪ್ರಪಂಚದ ಅತ್ಯಂತ ಹಿರಿಯ ವ್ಯಕ್ತಿ ಎನ್ನುವ ಪಟ್ಟ 1870 ಜನಿಸಿದ ಮಾಹ್ ಗೋತೊ ಅವರಿಗೆ ಲಭಿಸುತ್ತದೆ.
2016: ಅಮೆರಿಕದಲ್ಲಿ ನಡೆದ ಐತಿಹಾಸಿಕ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಗೆಲುವಿನ ದಡ ಮುಟ್ಟಿಸಲು ವಿಫಲವಾದ ಮಹೇಂದ್ರ ಸಿಂಗ್ ಧೋನಿ ಅತ್ಯಂತ ಅನುಭವದ ಅಂತಾರಾಷ್ಟ್ರೀಯ ಕ್ಯಾಪ್ಟನ್ ಎಂಬ ನೂತನ ದಾಖಲೆ ಬರೆದರು., ನಾಯಕನಾಗಿ ಧೋನಿ 325 ಪಂದ್ಯಗಳನ್ನು ಆಡಿದ ಗೌರವಕ್ಕೆ ಭಾಜನರಾಗಿದ್ದಾರೆ. ಮೂಲಕ ವಿಶ್ವ ಕ್ರಿಕೆಟಿನಲ್ಲಿ ಅತೀ ಹೆಚ್ಚಿನ ಪಂದ್ಯಗಳನ್ನು ನಾಯಕನಾಗಿ ಮುನ್ನಡೆಸಿದ ಕೀರ್ತಿ ಧೋನಿ ಅವರಿಗೆ  ಸಂದಿತು..

2016: ನವದೆಹಲಿ : ಸಾಧಿಸಿ ತೋರಿಸುವ ರಾಜಕೀಯ ಮಾರ್ಗವನ್ನು ಬಿಜೆಪಿ ತೋರಿಸಿದೆ ಎಂದು ಹೇಳಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ‘ಬಿಜೆಪಿ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳು, ಬಡವರ ಪರವಾಗಿ ಹಾಗೂ ಉತ್ತಮವಾಗಿ ಆಡಳಿತ ನೀಡುವ ಕೇಂದ್ರ ಸರ್ಕಾರದ ಅಜೆಂಡಾ ಜಾರಿಗೆ ಕೆಲಸ ಮಾಡಬೇಕುಎಂದು ಕರೆ ನೀಡಿದರು. ದೇಶದ ಶೇಕಡ 51ರಷ್ಟು ಭೂಪ್ರದೇಶ, ಶೇಕಡ 37ರಷ್ಟು ಜನಸಂಖ್ಯೆ ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಇದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭಿಸಿದ 80 ಜನಕಲ್ಯಾಣ ಕಾರ್ಯಕ್ರಮಗಳ ಪೈಕಿ 65 ಕಾರ್ಯಕ್ರಮಗಳನ್ನು ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತರುತ್ತಿವೆ. ಹಾಗಾಗಿ ಕೇಂದ್ರದ ಯೋಜನೆಗಳ ಯಶಸ್ಸಿನಲ್ಲಿ ರಾಜ್ಯಗಳ ಪಾತ್ರ ದೊಡ್ಡದು ಎಂದು ಷಾ ವಿವರಿಸಿದರು.

2016: ಢಾಕಾ : ಢಾಕಾದ ಹೋಲಿ ಆರ್ಟಿಸನ್ ಕೆಫೆಯಲ್ಲಿ ಜುಲೈ 1 ರಂದು ನಡೆದಿದ್ದ ಉಗ್ರರ ದಾಳಿಯ ಸಂಚುಕೋರ ಮತ್ತು ಇತರ ಇಬ್ಬರು ಉಗ್ರರು ಭದ್ರತಾ ಪಡೆಗಳ ಜಂಟಿ ತಂಡ ಹಿಂದಿನ ದಿನ (ಆ.27) ನಡೆದ ಗುಂಡಿನ ಘರ್ಷಣೆಯಲ್ಲಿ ಹತರಾದರು.   ಕೆನಡಾ ಮೂಲದ ಬಾಂಗ್ಲಾದೇಶ ನಿವಾಸಿ ತಮೀಮ್ಅಹಮ್ಮದ್ಚೌಧರಿ ಮತ್ತು ಇತರ ಇಬ್ಬರು ಇಸ್ಲಾಮಿಕ್ಉಗ್ರರು  ನಗರದ ಹೊರವಲಯ ದಲ್ಲಿರುವ ಕಟ್ಟಡವೊಂದರಲ್ಲಿ ಅವಿತುಕೊಂಡಿದ್ದರು. ‘ನಾರಾಯಣಗಂಜ್ ಪಿಕೆಪಾರ್ಹದಲ್ಲಿರುವ ಕಟ್ಟಡವೊಂದರಲ್ಲಿ ಉಗ್ರರು ಅವಿತುಕೊಂಡಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಬೆಳಿಗ್ಗೆ ಕಟ್ಟಡವನ್ನು ಸುತ್ತುವರಿದು ನಂತರ ಎನ್ಕೌಂಟರ್ನಡೆಸಿದರು ಎಂದು ಉಗ್ರರ ನಿಗ್ರಹ ಪಡೆಯ ಹೆಚ್ಚುವರಿ ಸಹಾಯಕ ಆಯುಕ್ತ ಸನೋವರ್ಹುಸೇನ್ತಿಳಿಸಿದರು. ಬೆಳಿಗ್ಗೆ ಪೊಲೀಸರು ನಡೆಸಿದ ಎನ್ಕೌಂಟರ್ನಲ್ಲಿ ತಮೀಮ್ಚೌಧರಿ ಹತನಾಗಿದ್ದಾನೆಎಂದು ಪೊಲೀಸ್ಇಲಾಖೆ ವಕ್ತಾರ ಜಲಾಲುದ್ದೀನ್ಹೇಳಿದರು. ಉಗ್ರರ ನಿಗ್ರಹ ಪಡೆ, ಅಂತರರಾಷ್ಟ್ರೀಯ ಅಪರಾಧ ದಳ ಮತ್ತು ಪೊಲೀಸರ ಜಂಟಿ ತಂಡ ಕಟ್ಟಡವನ್ನು ಸುತ್ತುವರಿದು ನಂತರ ದಾಳಿ ನಡೆಸಿತು’  ಎಂದು ಎಸ್ಪಿ ಹೇಳಿರುವುದನ್ನುದಿ ಡೈಲಿ ಸ್ಟಾರ್‌’ ವರದಿ ಮಾಡಿತು.

2016: ನವದೆಹಲಿ: ಹಾಕಿ ಮಾಂತ್ರಿಕ ದಿವಂಗತ ಮೇಜರ್ ಧ್ಯಾನ್ ಚಂದ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿ ಮಾಜಿ ಹಾಕಿ ಆಟಗಾರರು ದೆಹಲಿಯ ಜಂತರ್ ಮಂತರಿನಲ್ಲಿ  ಪ್ರತಿಭಟನೆ ನಡೆಸಿದರು.

2016: ನವದೆಹಲಿ: ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಮರಳುತ್ತಿದ್ದ ಭಾರತ ಮಹಿಳಾ ಹಾಕಿ ತಂಡದ ರೈಲು ಟಿಕೆಟ್ ದೃಢಪಡದೇ ರೈಲಿನ ನೆಲಹಾಸಿನಲ್ಲಿ ಕುಳಿತು ಪ್ರಯಾಣಿಸಬೇಕಾದ ನಾಚಿಕೆಗೇಡಿನ ದುಸ್ಥಿತಿ ಎದುರಿಸಿದರು.

2016: ನವದೆಹಲಿ: ಮುಸ್ಲಿಮ್ ಸಮುದಾಯಕ್ಕೆ ಭಗವದ್ಗೀತೆ ಸಾರ ತಿಳಿಯಪಡಿಸುವ ನಿಟ್ಟಿನಲ್ಲಿ ಹಿಂದುಗಳ ಪವಿತ್ರ ಗ್ರಂಥದ ಉರ್ದು ಅವತರಣಿಕೆಯನ್ನು ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಇಸ್ಕಾನ್ ಲೋಕಾರ್ಪಣೆಗೊಳಿಸಿತು.

2016: ಮುಂಬೈ: ಮುಂಬೈನ ಪ್ರಸಿದ್ಧ ಹಾಜಿ ಅಲಿ ದರ್ಗಾಕ್ಕೆ ಮಹಿಳೆಯರಿಗೂ ಪ್ರವೇಶ ಕಲ್ಪಿಸಬೇಕು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಭೂಮಾತಾ ಬ್ರಿಗೇಡಿನ ಹೋರಾಟಗಾರ್ತಿ ತೃಪ್ತಿ ದೇಸಾಯಿ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

2016: ನವದೆಹಲಿ: ಸಂಸತ್ತಿನಲ್ಲಿ ಸರಕು ಮತ್ತು ಸೇವಾ ತೆರಿಗೆಗಳ (ಜಿಎಸ್ ಟಿ) ಮಸೂದೆ ಅಂಗೀಕಾರಗೊಂಡ ಕೆಲವು ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು   ಮಸೂದೆ ಅಂಗೀಕಾರದ ಶ್ರೇಯಸ್ಸನ್ನು ಸರ್ವಾನುಮತದಿಂದ ಅನುಮೋದಿಸಿದ ಎಲ್ಲ ಪಕ್ಷಗಳಿಗೂ ನೀಡಿದರು. ಎಲ್ಲ ಪಕ್ಷಗಳೂ ಒಟ್ಟಾಗಿ ಕೆಲಸ ಮಾಡಿದರೆ ದೊಡ್ಡ ಕೆಲಸಗಳನ್ನು ಹೇಗೆ ಮಾಡಬಹುದು ಎಂಬುದಕ್ಕೆ ಇದು ನಿದರ್ಶನ ಎಂದು ಮೋದಿ ತಮ್ಮ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ಹೇಳಿದರು.

2016: ವಾಷಿಂಗ್ಟನ್: ಭೂಮಿಯ ವಾತಾವರಣಕ್ಕೆ ಹೋಲಿಕೆಯಾಗುವಂತಹ ವಾತಾವರಣವನ್ನು ಹೊಂದಿರುವ ಶನಿ ಗ್ರಹದ ಅತ್ಯಂತ ದೊಡ್ಡ ಉಪಗ್ರಹ ಟೈಟಾನ್ ಗೆ ಜಲಾಂತರ್ಗಾಮಿ ನೌಕೆಯನ್ನು ಕಳುಹಿಸಲು ನಾಸಾ ಸಿದ್ಧತೆ ನಡೆಸಿತು. ಟೈಟನ್ ನ ಅತ್ಯಂತ ದೊಡ್ಡ ಸಾಗರವಾದ ಕಾರ್ಕೇನ್ ಮರೆಯಲ್ಲಿ ಸಂಶೋಧನೆ ನಡೆಸಲು ನಾಸಾ ಉದ್ದೇಶಿಸಿದ್ದು, ಅದಕ್ಕಾಗಿ ವಿಶೇಷ ಜಲಾಂತರ್ಗಾಮಿ ನೌಕೆಯನ್ನು ಕಳುಹಿಸಲು ನಾಸಾ ಸಿದ್ಧತೆ ಆರಂಭಿಸಿತು. ಎಲ್ಲ ಅಂದುಕೊಂಡಂತೆ ಆದರೆ 2038ರಲ್ಲಿ ನಾಸಾ ಜಲಾಂತರ್ಗಾಮಿ ನೌಕೆಯನ್ನು ಟೈಟಾನ್ ಗೆ ಕಳುಹಿಸಲಿದೆ ಎಂದು ನಾಸಾ ಮೂಲಗಳು ತಿಳಿಸಿದವು.

2016: ಜೈನ ಗುರು ತರುಣ್ ಸಾಗರ್ ಅವರನ್ನು ಅಪಮಾನ ಮಾಡಿ ಜೈನ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ, ಗಾಯಕ ಮತ್ತು ಆಮ್ ಆದ್ಮಿ ಪಕ್ಷದ ಮುಖಂಡ ವಿಶಾಲ್ ದದ್ಲಾನಿ, ಇದೀಗ ಜೈನ ಸಮುದಾಯದ ಬಳಿ ಕ್ಷಮೆಯಾಚಿಸಿ, ರಾಜಕೀಯಕ್ಕೆ ನಿವೃತ್ತಿ ಹೇಳಿದರು.

2016: ‘ಮಾನ್ಯ ಪ್ರಧಾನ ಮಂತ್ರಿಗಳೆ ನನಗೆ ಒಲಿಂಪಿಕ್ಸ್ ನಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸಿ, ದೇಶಕ್ಕೆ ಪದಕ್ಕೆ ತರುವ ಆಸೆ. ಆದರೆ ನಮಗೆ ಅಭ್ಯಾಸ ಮಾಡಲು ಸೂಕ್ತ ಮೈದಾನವಿಲ್ಲ. ದಯಮಾಡಿ ನೀವು ನಮಗೊಂದು ಕ್ರೀಡಾಂಗಣವನ್ನು ದಯಪಾಲಿಸಬೇಕುಎಂದು ಒಂಭತ್ತನೆ ತರಗತಿ ಓದುತ್ತಿರುವ ಓರ್ವ ವಿದ್ಯಾರ್ಥಿನಿ ಪ್ರಧಾನಿ ನರೆಂದ್ರ ಮೋದಿ ಅವರಿಗೆ ಪತ್ರ ಬರೆದಳು. ಪ್ರಧಾನಮಂತ್ರಿಯವರ ಕಚೇರಿ ಇದಕ್ಕೆ ಸ್ಪಂದಿಸಿ ಆಕೆ ಓದುತ್ತಿರುವ ಶಾಲೆಗೆ ಮೈದಾನವೊಂದನ್ನು ಮಂಜೂರು ಮಾಡಿತು ಎಂದು ವರದಿಗಳು ತಿಳಿಸಿದವು.

2016: ವಾಷಿಂಗ್ಟನ್: ಪಾಕಿಸ್ತಾನದ ಪಡೆಗಳು ಬಲೂಚಿಸ್ತಾನದಲ್ಲಿ ಸುನಾಮಿಯಂತೆ ಮಾನವ ಹಕ್ಕುಗಳ ಉಲ್ಲಂಘನೆ ನಡೆಸುತ್ತಿವೆ ಎಂದು ಬಲೂಚ್ ಪ್ರಮುಖ ನಾಯಕ ಬ್ರಹುಮ್ಡಗ್‌ ಬುಕ್ತಿ ಆರೋಪ ಮಾಡಿದರು.  ಬಲೂಚ್‌ ರಾಷ್ಟ್ರೀಯ ಚಳವಳಿಗೆ ಭಾರತವೂ ಸೇರಿದಂತೆ ಅಂತರರಾಷ್ಟ್ರೀಯ ಸಮುದಾಯವು ಸಹಕಾರ ನೀಡಬೇಕು ಎಂದು ಬಲೂಚ್‌ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಬುಗ್ತಿ ಮನವಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಬಲೂಚಿಸ್ತಾನದ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವುದಕ್ಕೆ ಅವರು ಕೃತಜ್ಞತೆ ಸಲ್ಲಿಸಿದರು. ಪಾಕಿಸ್ತಾನದೊಂದಿಗೆ ಇನ್ನು ಹೆಚ್ಚು ಕಾಲ ಇರಲು ನಾವು ಬಯಸುವುದಿಲ್ಲಬಲೂಚಿಸ್ತಾನದ ಪ್ರತ್ಯೇಕತೆಯ ಬಗ್ಗೆ ವಿಶ್ವಸಂಸ್ಥೆ ಮೇಲ್ವಿಚಾರಣೆಯಲ್ಲಿ ಜನಮತಗಣನೆ ನಡೆಯಲಿ’ ಎಂದು ಅವರು ಒತ್ತಾಯಿಸಿದರು. ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಲು ಸಿದ್ಧಆದರೆಬಲೂಚ್‌  ಸ್ವಾತಂತ್ರ್ಯ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

 2015: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನವದೆಹಲಿಯಲ್ಲಿ 1965ರ ಭಾರತ- ಪಾಕಿಸ್ತಾನ ಸಮರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ‘1965ನೇ ವರ್ಷದ ಸಮರದ 50ನೇ ವರ್ಷಾಚರಣೆ ಸಂದರ್ಭದಲ್ಲಿ ನಾನು ನಮ್ಮ ತಾಯ್ನಾಡಿಗಾಗಿ ಹೋರಾಡಿದ ಎಲ್ಲಾ ಧೈರ್ಯಶಾಲಿ ಯೋಧರಿಗೂ ತಲೆಬಾಗುತ್ತೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದರು. ‘ನಮ್ಮ ಸಶಸ್ತ್ರ ಯೋಧರ ಧೈರ್ಯ ಮತ್ತು ಶೌರ್ಯ ಸ್ಪೂರ್ತಿದಾಯಕ. ಪ್ರತಿಯೊಂದು ಅಡ್ಡಿ ಆತಂಕ ಎದುರಾದಾಗಲೂ ಅವರು ಭಾರತದ ಏಕತೆ ಮತ್ತು ಸಮಗ್ರತೆಯನ್ನು ರಕ್ಷಿಸಿದ್ದಾರೆ’ ಎಂದು ಪ್ರಧಾನಿ ಹೇಳಿದರು. ಈ ಮಧ್ಯೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಮರ ಜ್ಯೋತಿ ಜವಾನ್​ಗೆ ತೆರಳಿ ಹುತಾತ್ಮ ಯೋಧರ ಸ್ಮಾರಕದಲ್ಲಿ ತಮ್ಮ ಶ್ರದ್ಧಾಂಜಲಿ ಸಲ್ಲಿಸಿದರು.
2015: ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಮತ್ತೆ ನಡೆಸಿದ ಕದನ ವಿರಾಮ ಉಲ್ಲಂಘನೆಗೆ ಮೂವರು ನಾಗರಿಕರು ಹತರಾಗಿ, ಇತರ 16 ಮಂದಿ ಗಾಯಗೊಂಡರು.  ಆರ್.ಎಸ್.ಪುರ ವಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಭಾರಿ ಪ್ರಮಾಣದಲ್ಲಿ ಅಪ್ರಚೋದಿತ ಗುಂಡುದಾಳಿ ಮತ್ತು ಫಿರಂಗಿ ದಾಳಿ ನಡೆಸಿದವು. ಪಾಕಿಸ್ತಾನದ ಕಡೆಯ ಫಿರಂಗಿದಾಳಿಗೆ ಭಾರತೀಯ ಗಡಿ ಭದ್ರತಾ ಪಡೆಗಳು (ಬಿಎಸ್​ಎಫ್) ಸೂಕ್ತ ಉತ್ತರ ನೀಡಿದವು. ಈಮಧ್ಯೆ, ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಯು ಭಾರತದ ಹೈಕಮೀಷನರ್ ಅವರನ್ನು ಕರೆಸಿ ಕದನ ವಿರಾಮ ಉಲ್ಲಂಘನೆಗಾಗಿ ಪ್ರತಿಭಟನೆ ಸಲ್ಲಿಸಿದರು. ಸಿಯಾಲ್ ಕೋಟ್ ವರದಿಯ ಪ್ರಕಾರ ಕಾಶ್ಮೀರದ ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಗಳಲ್ಲಿ ಪಾಕಿಸ್ತಾನದ  ಕನಿಷ್ಠ 9 ನಾಗರಿಕರು ಮೃತರಾಗಿ, ಇತರ ಹಲವರು ಗಾಯಗೊಂಡರು ಎಂದು ಪಾಕಿಸ್ತಾನದ ‘ಡಾನ್’ ವರದಿ ಮಾಡಿತು.

2015: ನವದೆಹಲಿ: ಜಾಗತಿಕ ಮಟ್ಟದಲ್ಲಿ ತೈಲ ಹಾಗೂ ವಸ್ತುಗಳ ಬೆಲೆ ಕುಸಿತವು ಭಾರತಕ್ಕೆ ಲಾಭದಾಯಕ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನವದೆಹಲಿಯಲ್ಲಿ ಹೇಳಿದರು. ಜಾಗತಿಕ ತೈಲ ಹಾಗೂ ಸಾಮಗ್ರಿಗಳ ಬೆಲೆ ಕುಸಿತವು ಸಾರ್ವಜನಿಕ ವೆಚ್ಚಕ್ಕಾಗಿ ಹಣ ಉಳಿತಾಯ ಮಾಡುವುದು ಎಂದು ಅವರು ಹೇಳಿದರು..

2015: ಮುಂಬೈ: ಪ್ರಮುಖ ಬೆಳವಣಿಗೆಯೊಂದರಲ್ಲಿ ಮುಂಬೈ ಪೊಲೀಸರು ಶೀನಾ ಬೋರಾ ದೇಹವನ್ನು ಹುಗಿಯಲಾಗಿದ್ದ ಜಾಗದಲ್ಲಿ ಅಗೆದು ಕೆಲವು ಎಲುಬುಗಳು, ತಲೆಬುರುಡೆ ಮತ್ತು ಸೂಟ್​ಕೇಸ್ ಪತ್ತೆ ಮಾಡಿದರು. ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿನ ಪೆನ್​ನಲ್ಲಿ ಠಿಕಾಣಿ ಹೂಡಿದ  ಪೊಲೀಸರು ಇನ್ನಷ್ಟು ಅವಶೇಷಗಳಿಗಾಗಿ ಶೋಧ ನಡೆಸಲು ಕಾದರು. 2012ರ ಮೇ ತಿಂಗಳಲ್ಲಿ ರಾಯಗಢ ಪೊಲೀಸರು ತಲೆಗೂದಲು, ಹಲ್ಲು ಮತ್ತು ಕೆಲವು ಎಲುಬು ಮಾದರಿಗಳನ್ನು ಮುಂಬೈಯ ಜೆಜೆ ಆಸ್ಪತ್ರೆಗೆ ಕಳುಹಿಸಿದ್ದರು. 2013ರ ಡಿಸೆಂಬರ್​ನಲ್ಲಿ ಆಸ್ಪತ್ರೆಯು ಮೃತ ವ್ಯಕ್ತಿಯ ವಯಸ್ಸು ಮತ್ತು ಲಿಂಗ ಮತ್ತು ಸಾವಿನ ಕಾರಣ ಪತ್ತೆಗೆ ಈ ಅವಶೇಷಗಳು ಸಾಕಾಗುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿತ್ತು. ರಾಯಗಢ ಪೊಲೀಸರು ಬಳಿಕ
ಆಸ್ಪತ್ರೆಯ ಪತ್ರಕ್ಕೆ ಉತ್ತರಿಸಿರಲೇ ಇಲ್ಲ. ಶುಕ್ರವಾರ ಅವಶೇಷಗಳನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಯಿತು.  ಈ ಮಧ್ಯೆ ಇಂದ್ರಾಣಿಯ ಮಾಜಿ ಗಂಡನ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 31ರವರೆಗೆ ನ್ಯಾಯಾಲಯವು ವಿಸ್ತರಿಸಿತು.
2015: ರಾಯಪುರ: ಮಾವೋವಾದಿ ನಕ್ಸಲೀಯರ ಸಂದೇಶ ವಾಹಕರಾಗಿ ಕೆಲಸ ಮಾಡುತ್ತಾ ಅವರಿಗೆ ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡು ಪೂರೈಸುತ್ತಿದ್ದುದಕ್ಕಾಗಿ ಇಬ್ಬರು ವ್ಯಾಪಾರಿಗಳು ಸೇರಿದಂತೆ 13 ಮಂದಿಗೆ ವಿಶೇಷ ನ್ಯಾಯಾಲಯವೊಂದು 7 ವರ್ಷಗಳ ಕಠಿಣ ಸಜೆ ವಿಧಿಸಿತು. ವ್ಯಾಪಾರಿ ನೀರಜ್ ಛೋಪ್ರಾ, ಸಂಬಂಧಿ ಧರ್ಮೇಂದ್ರ ಛೋಪ್ರಾ, ಮೊಹ್​ಪಾಲ್ ಯಾನೆ ಸಂತೋಷ ಧ್ರುವ, ಬಲಿರಾಮ್ ಉಸೆಂಡಿ, ಚೈತ್ರಂ ದರ್ರೊ, ಫೋಲ್​ಸಿಂಗ್ ನಾಗ್, ಸುಖನಾಥ್ ನರೇಟಿ, ಬದ್ರಿ ಗವಡೆ, ಮೋಹನ್ ಸಿಂಗ್ ಧ್ರುವ, ರಾಮ್ ಕುಮಾರ್ ಮಾಂಡವಿ, ದಶರಥ ಮಾಂಡವಿ, ಲಕ್ಷ್ಮಣ್ ಉಸೆಂಡಿ ಮತ್ತು ರವಿ ಕಡಿಯಂ ಅವರಿಗೆ ವಿಶೇಷ ನ್ಯಾಯಾಧೀಶ ಅಬ್ದುಲ್ ಝುಹೀದ್ ಖುರೇಷಿ ಶಿಕ್ಷೆ ವಿಧಿಸಿದ್ದಾರೆ ಎಂದು ಪಬ್ಲಿಕ್ ಪ್ರಾಸೆಕ್ಯೂಟರ್ ಸುರೇಶ ಪ್ರಸಾದ್ ಶರ್ಮಾ ಹೇಳಿದರು. ಎಲ್ಲಾ ಆರೋಪಿಗಳೂ ಮಾವೋವಾದಿ ಸಂದೇಶವಾಹಕರಾಗಿ ಕೆಲಸ ಮಾಡುತ್ತಾ ಅವರಿಗಾಗಿ ಶಸ್ತ್ರಾಸ್ತ್ರ, ಮದ್ದುಗುಂಡು ಸರಬರಾಜು ಸರಬರಾಜು ಮಾಡುತ್ತಿದ್ದುದು ಸಾಬೀತಾಗಿದೆ ಎಂದು ಅವರು ಹೇಳಿದರು. ರಾಜ್ಯ ಗುಪ್ತಚರ ಶಾಖೆ ಮತ್ತು ಪೊಲೀಸರು ಕಳೆದ ವರ್ಷ ಜನವರಿ ಮತ್ತು ಫೆಬ್ರುವರಿಯಲ್ಲಿ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಗೆ ರಾಯಪುರ ಮತ್ತು ಬಸ್ತಾರ್ ಪ್ರದೇಶದ ಪ್ರತ್ಯೇಕ ಸ್ಥಳಗಳಿಂದ ಸಾಗಣೆ ಮತ್ತು ಹಣಕಾಸು ಬೆಂಬಲ ನೀಡುತ್ತಿದ್ದುದಕ್ಕಾಗಿ 13 ಜನರನ್ನು ಬಂಧಿಸಿದ್ದರು. 2014ರ ಜನವರಿ 15ರಂದು ಮೊಹ್​ಪಾಲ್, ಬಲಿರಾಂ ಮತ್ತು ಚೈತ್ರಮ್ ಅವರನ್ನು ರಾಯಪುರದಿಂದ ಕಂಕೇರ್​ಗೆ ನಕ್ಸಲೀಯರಿಗಾಗಿ ಶಸ್ತ್ರಾಸ್ತ್ರಗಳನ್ನು ಒಯ್ಯತ್ತಿದ್ದಾಗ ಅಭಂಪುರ್ ಪ್ರದೇಶದಲ್ಲಿ ಬಂಧಿಸಿದ್ದರು.

2015: ನವದೆಹಲಿ: ಟೋಲ್ ಅಡೆತಡೆಗಳನ್ನು ತೆಗೆದುಹಾಕಬೇಕೆಂಬ ತಮ್ಮ ಬೇಡಿಕೆಯನ್ನು ಸರ್ಕಾರವು ಅಂಗೀಕರಿಸದ ಕಾರಣಕ್ಕಾಗಿ ಅಕ್ಟೋಬರ್ 1ರಿಂದ ಅನಿರ್ದಿಷ್ಟ ಕಾಲ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಆರಂಭಿಸಲಾಗುವುದು ಎಂದು ಟ್ರಕ್ ಚಾಲಕ - ಮಾಲೀಕರು ಪ್ರಕಟಿಸಿದರು.
2015: ನವದೆಹಲಿ: ತಮ್ಮ ವಿರುದ್ಧ ಹೂಡಲಾಗಿದ್ದ ಅತ್ಯಾಚಾರ ಪ್ರಕರಣ ಸುಳ್ಳೆಂದು ಸಾಬೀತಾದ ಕಾರಣ, ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆರೋಪಿತರಿಗೆ ನ್ಯಾಯಾಲಯ ಅನುವು ಮಾಡಿಕೊಟ್ಟಿತು. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರದ ಸುಳ್ಳು ಆರೋಪಗಳು ದಾಖಲಾಗುತ್ತಿರುವ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಈ ತೀರ್ಮಾನ ಹೆಚ್ಚಿನ ಮಹತ್ವಪಡೆದುಕೊಂಡಿತು. ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರು ದೆಹಲಿಯ ಮುಖರ್ಜಿ ನಗರದ ನಿವಾಸಿಯೊಬ್ಬರ ವಿರುದ್ಧ ದೂರು ದಾಖಲಿಸಿದ್ದರು. ಆದರೆ ಪ್ರಕರಣದ ವಿಚಾರಣೆ ವೇಳೆ ತಮ್ಮ ಸಮ್ಮತಿಯ ಮೇಲೆಯೇ ತಮ್ಮಿಬ್ಬರ ನಡುವೆ ಲೈಂಗಿಕ ಸಂಬಂಧ ಬೆಳೆದಿದ್ದಾಗಿ ಮಹಿಳೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಯನ್ನು ಪರಿಗಣಿಸಿದ ನ್ಯಾಯಾಲಯ, ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿತು. ಇದೇ ವೇಳೆ ಅತ್ಯಾಚಾರದ ಸುಳ್ಳು ಆರೋಪದಿಂದಾಗಿ ಆ ವ್ಯಕ್ತಿ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದಾನೆ. ಜತೆಗೆ ಸಾರ್ವಜನಿಕವಾಗಿ ಅವಮಾನಿತನಾಗಿದ್ದಾನೆ. ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆ ವ್ಯಕ್ತಿಗೆ ಅವಕಾಶ ಮಾಡಿಕೊಡುತ್ತಿರುವುದಾಗಿ ನ್ಯಾಯಾಧೀಶರು ತಮ್ಮ ತೀರ್ಪಿನಲ್ಲಿ ತಿಳಿಸಿದರು. ಪ್ರಕರಣದ ವಿಚಾರಣೆ ವೇಳೆ ದೂರುದಾರರೇ ತಟಸ್ಥರಾಗಿ, ಆರೋಪಿಯನ್ನು ಖುಲಾಸೆಗೊಳಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಗೌರವಪೂರ್ಣವಾಗಿ ಆರೋಪದಿಂದ ಖುಲಾಸೆಗೊಳ್ಳಲು ಆರೋಪಿತರಿಗೆ ಅವಕಾಶ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರುದಾರರ ನಡತೆಯನ್ನು ಗಂಭೀರವಾಗಿ ಪರಿಗಣಿಸುವುದು ಅನಿವಾರ್ಯವಾಗಿದೆ. ಆದ್ದರಿಂದ, ದೂರುದಾರರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಆರೋಪಿತರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.

2015: ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಪ್ರಕರಣದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಹೆಚ್ಚುವರಿ ಆಪಾದಿತರನ್ನಾಗಿ ಕರೆಸಲು ಸಮನ್ಸ್ ಹೊರಡಿಸುವಂತೆ ಕೋರಿ ಜಾರ್ಖಂಡ್​ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ಮಾಡಿರುವ ಮನವಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯ ಸೆಪ್ಟೆಂಬರ್ 2ರಂದು ನಡೆಸುವುದಾಗಿ ಪ್ರಕರಣದ ವಿಚಾರಣೆ ಕಾಲದಲ್ಲಿ ನ್ಯಾಯಾಲಯ ತಿಳಿಸಿತು. ಉದ್ಯಮಿ, ಮಾಜಿ ಸಂಸತ್ ಸದಸ್ಯ ನವೀನ್ ಜಿಂದಾಲ್, ಮಧುಕೋಡಾ ಮತ್ತು ಇತರ 13 ಮಂದಿ ವಿರುದ್ಧ ಹೊರಿಸಲಾಗಿರುವ ಆಪಾದನೆಗಳಿಗೆ ಸಂಬಂಧಿಸಿದಂತೆ ವಾದಗಳ ಆರಂಭಕ್ಕೆ ವಿಶೇಷ ನ್ಯಾಯಾಲಯವು ಅಕ್ಟೋಬರ್ 15ನೇ ದಿನಾಂಕವನ್ನು ನಿಗದಿ ಪಡಿಸಿತು.

2015: ಟ್ರಿಪೋಲಿ:: ಆಫ್ರಿಕಾದ ವಲಸಿಗರಿದ್ದ ದೋಣಿಯೊಂದು ಮುಳುಗಿದ ಪರಿಣಾಮ 200 ಮಂದಿ ಮೃತರಾದರು.  ವಲಸಿಗರು ಇಟಲಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಲಿಬಿಯಾದ ಸಮುದ್ರದಲ್ಲಿ ಮುಳುಗಿದ್ದಾಗಿ ಲಿಬಿಯಾದ ಅಧಿಕಾರಿಗಳು ತಿಳಿಸಿದರು. ದೋಣಿಯಲ್ಲಿ ಸುಮಾರು 400 ಮಂದಿ ಪ್ರಯಾಣಿಸುತ್ತಿದ್ದರು. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ತುಂಬಿಕೊಂಡಿದ್ದೇ ದೋಣಿ ಮುಳುಗಲು ಕಾರಣವೆಂದು ಹೇಳಲಾಯಿತು. ಸುಮಾರು 200 ಜನರನ್ನು ರಕ್ಷಿಸಲಾಯಿತು. ಇವರ ಪೈಕಿ 147 ಮಂದಿಯನ್ನು ಅಕ್ರಮ ವಲಸಿಗರ ಆಶ್ರಯ ತಾಣದಲ್ಲಿ ಇರಿಸಿ, ಸೂಕ್ತ ಚಿಕಿತ್ಸೆ ಕೊಡಿಸಲಾಯಿತು ಎಂದು ಟ್ರಿಪೋಲಿಯ  ಅಧಿಕಾರಿಗಳು ಹೇಳಿದರು.

2015: ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಯಾವುದಾದರೂ ಬಾಹ್ಯ ಬೆದರಿಕೆ ಇದ್ದರೆ ಅದು ಭಾರತದಿಂದ ಮಾತ್ರ ಎಂದು ಪಾಕಿಸ್ತಾನದ ಸಂಸದೀಯ ರಕ್ಷಣಾ ಸಮಿತಿ ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿತು. ಇತ್ತೀಚೆಗೆ ಪಾಕ್​ನ ಸೇನಾಪಡೆಯ ಜಾಯಿಂಟ್ ಸ್ಟಾಫ್ ಕೇಂದ್ರ ಸ್ಥಾನಕ್ಕೆ ಸಂಸದೀಯ ರಕ್ಷಣಾ ಸಮಿತಿ ಸದಸ್ಯರು ಭೇಟಿ ಕೊಟ್ಟ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಅಪಾಯ ಇರುವ ಬಗ್ಗೆ ಸೇನಾಧಿಕಾರಿಗಳು ಆತಂಕವನ್ನು ಹಂಚಿಕೊಂಡರು. ಪಾಕಿಸ್ತಾನದ ರಕ್ಷಣಾ ವ್ಯವಸ್ಥೆಯಲ್ಲಿ ಜಾಯಿಂಟ್ ಸ್ಟಾಫ್ ಉನ್ನತ ರಕ್ಷಣಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುವುದರ ಜತೆಗೆ ಅಣ್ವಸ್ತ್ರಗಳ ಭದ್ರತೆ ಹಾಗೂ ನಿರ್ವಹಣೆಯ ಹೊಣೆಯನ್ನು ನಿಭಾಯಿಸುತ್ತಿರುವುದಾಗಿ ಮುಷಾಯಿದ್ ಹುಸೇನ್ ನೇತೃತ್ವದ ಸಂಸದೀಯ ಸಮಿತಿಗೆ ಲೆಫ್ಟಿನೆಂಟ್ ಜನರಲ್ ರಶದ್ ಮೆಹಮೂದ್ ಮಾಹಿತಿ ನೀಡಿದರು. ಕಳೆದ ಕೆಲವಾರು ವರ್ಷಗಳಲ್ಲಿ ಭಾರತ ಸುಮಾರು 100 ಶತಕೋಟಿ ಡಾಲರ್ ಮೊತ್ತದ ಶಸ್ತ್ರಾಸ್ತ್ರಗಳನ್ನು ಖರೀದಿಸಿದೆ. ಇವುಗಳ ಪೈಕಿ ಶೇ.80ರಷ್ಟು ಶಸ್ತ್ರಾಸ್ತ್ರಗಳು ಪಾಕಿಸ್ತಾನವನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲೆಂದೇ ಮೀಸಲಾಗಿದೆ. ಇದರ ಜತೆಗೆ ಮುಂದಿನ 5 ವರ್ಷಗಳ ಅವಧಿಯಲ್ಲಿ ಶಸ್ತ್ರಾಸ್ತ್ರಗಳ ಖರೀದಿಗಾಗಿ ಭಾರತ ಈಗಾಗಲೆ ಸಾಕಷ್ಟು ಹಣವನ್ನು ವ್ಯಯಿಸುತ್ತಿರುವುದಾಗಿ ಹೇಳಿದರು. ಈ ಮಧ್ಯೆ ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ 3ನೇ ಅತಿದೊಡ್ಡ ಅಣ್ವಸ್ತ್ರಗಳ ದಾಸ್ತಾನು ಹೊಂದಿರುವ ರಾಷ್ಟ್ರವಾಗಲಿರುವುದಾಗಿ ಅಮೆರಿಕದ ತಜ್ಞರು ವರದಿ ನೀಡಿದರು. ಈ ವರದಿಯ ಪ್ರಕಾರ ಪ್ರತಿ ವರ್ಷ 20 ಅಣ್ವಸ್ತ್ರಗಳನ್ನು ಖರೀದಿಸಿ, ದಾಸ್ತಾನು ಮಾಡಿಕೊಳ್ಳುತ್ತಿದೆ. ಭಾರತ ಕೂಡ ಅಣ್ವಸ್ತ್ರ ಬಲಾಢ್ಯ ರಾಷ್ಟ್ರವಾಗಿರುವುದು ಇದಕ್ಕೆ ಕಾರಣ. ಪಾಕಿಸ್ತಾನದ ಬಳಿ ಸಂಸ್ಕರಿತ ಯುರೇನಿಯಂ ದಾಸ್ತಾನು ಹೆಚ್ಚಾಗಲಿರುವ ಕಾರಣ ಮುಂಬರುವ ದಿನಗಳಲ್ಲಿ ಪಾಕಿಸ್ತಾನದ ಅಣ್ವಸ್ತ್ರ ಬಲ ಮತ್ತಷ್ಟು ವೃದ್ಧಿಸುವುದು ನಿಶ್ಚಿತವೆಂದು ತಜ್ಞರು ಅಭಿಪ್ರಾಯಪಟ್ಟರು..

2015: ಬ್ಯಾಂಕಾಕ್: ಸಮುದ್ರದ ತೆರೆ ಬಂದು ಅಪ್ಪಳಿಸುವಾಗಲೇ ಒಂದು ರೀತಿಯ ಭಯ ಸಾಮಾನ್ಯ. ಅದೇ ರೀತಿ ಭಯ ಹುಟ್ಟಿಸುವ ಮಾಹಿತಿಯನ್ನು ಇದೀಗ ನಾಸಾ ಹೊರಗೆಡವಿದೆ. ಅದೇನೆಂದರೆ, ಸಮುದ್ರ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆಯಂತೆ. ಕಳೆದ ನೂರು ವರ್ಷಗಳ ಅವಧಿಯಲ್ಲಿ ಒಂದು ಮೀಟರ್​ನಷ್ಟು ಹೆಚ್ಚಿದೆ ಎಂದು ಹೇಳಿದೆ. ಈ ಕುರಿತು ಪ್ರತಿಕ್ರಿಯಿಸಿರುವ ವಿಜ್ಞಾನಿ ಚಾರ್ಲೆಸ್ ಬೊಲ್ಡೆನ್ ಇದು ಪ್ರಕೃತಿಯ ಸಾಮಾನ್ಯ ಪ್ರಕ್ರಿಯೆ ಎಂದು ಹೇಳಿದರು. ಇದಾದ ಬಳಿಕ ನಾಸಾ ವಿಜ್ಞಾನಿಗಳು ಇದಕ್ಕೆ ಪ್ರತಿಯಾಗಿ ಮತ್ತೆ ವಾದ ಮಂಡಿಸಿದ್ದು, 1992ರಿಂದ ಈಚೆ ಸಾಗರ ನೀರಿನ ಮಟ್ಟ ಹೆಚ್ಚೂಕಡಿಮೆ 8 ಸೆಂ.ಮೀ.ನಷ್ಟು ಹೆಚ್ಚಿದೆ. ಇದಕ್ಕೆ ಕಾರಣ ತಿಳಿದುಕೊಳ್ಳುವ ನಿಟ್ಟಿನಲ್ಲಿ ನಡೆಸಿದ ಅಧ್ಯಯನದಿಂದ ಬಿಸಿ ನೀರು ಹೆಚ್ಚುತ್ತಿರುವುದು ಮತ್ತು ಹಿಮ ಕರಗುತ್ತಿರುವುದು ಎನ್ನುವುದು ತಿಳಿದಿದೆ ಎಂದರು. ಏಷ್ಯಾದ ಸಮುದ್ರ ತೀರದಲ್ಲಿ ಹೆಚ್ಚೂಕಡಿಮೆ 150 ಮಿಲಿಯನ್ ಜನರು ಸಮುದ್ರ ನೀರಿನ ಮಟ್ಟದಿಂದ ಕೇವಲ ಒಂದು ಮೀಟರ್ ಎತ್ತರದಲ್ಲಿ ವಾಸವಿದ್ದಾರೆ. ಇದು ಮುಂಬರುವ ದಿನಗಳಲ್ಲಿ ಅಪಾಯ ತಂದೊಡ್ಡುವ ಸಾಧ್ಯತೆ ಇದೆ ಎನ್ನುವುದು ಎಚ್ಚರಿಕೆಯ ಸಂದೇಶ ಎನ್ನಲಾಯಿತು.

2008: ಪುದುಚೇರಿಯ ಕೈಗಾರಿಕೆ ಹಾಗೂ ವಿದ್ಯುತ್ ಖಾತೆ ಸಚಿವ ವೈದ್ಯಲಿಂಗಂ ಅವರನ್ನು ಪುದುಚೇರಿಯ ನೂತನ ಮುಖ್ಯಮಂತ್ರಿಯಾಗಿ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷವು ಆಯ್ಕೆ ಮಾಡಿತು. ರಂಗಸ್ವಾಮಿ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ಕ್ಷಣಗಳಲ್ಲಿ ಸಭೆ ಸೇರಿದ ಶಾಸಕರು ವೈದ್ಯಲಿಂಗಂ ಅವರನ್ನು ಮುಖ್ಯಮಂತ್ರಿಯಾಗಿ ಒಮ್ಮತದಿಂದ ಆರಿಸಿದರು.

2007: ಕ್ರೋಯೇಷಿಯಾದಲ್ಲಿ ನಡೆದ ವಿಶ್ವಕಪ್ ಶೂಟಿಂಗ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದ ಮಾನವ್ ಜಿತ್ ಸಿಂಗ್ ಸಂಧು ಅವರು ಪ್ರತಿಷ್ಠಿತ `ರಾಜೀವ್ ಗಾಂಧಿ ಖೇಲ್ ರತ್ನ' ಪ್ರಶಸ್ತಿಗೆ ಆಯ್ಕೆಯಾದರು. ಬೆಂಗಳೂರಿನ `ಟಾಟಾ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿ'ಯಲ್ಲಿ ತರಬೇತಿ ಪಡೆಯುತ್ತಿರುವ ಪಿಎಸ್ ಪಿಬಿ ಆಟಗಾರ ಚೇತನ್ ಆನಂದ್ ಅವರು ಬ್ಯಾಡ್ಮಿಂಟನ್ ರಂಗದಲ್ಲಿ ಈ ವರ್ಷ ತೋರಿದ ಸಾಧನೆಗಾಗಿ `ಅರ್ಜುನ' ಪ್ರಶಸ್ತಿಗೆ ಆಯ್ಕೆಯಾದರು.

2007: ಮಾತೆ ಮಹಾದೇವಿ ಅವರ `ಬಸವ ವಚನ ದೀಪ್ತಿ' ವಚನ ಸಂಗ್ರಹದ ಮೇಲೆ ರಾಜ್ಯ ಸರ್ಕಾರ ಹೇರಿದ ನಿಷೇಧವನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್ ವಚನಗಳ ಅಂಕಿತನಾಮ `ಕೂಡಲಸಂಗಮದೇವ' ವನ್ನು `ಲಿಂಗದೇವ' ಎಂದು ಬದಲಾಯಿಸುವ ಅಧಿಕಾರ ಲೇಖಕರಿಗಿಲ್ಲ ಎಂದು ಹೇಳಿತು. `ಬಸವಣ್ಣನವರು ಕನಸಿನಲ್ಲಿ ಬಂದು ವಚನಗಳ ಅಂಕಿತ ನಾಮವನ್ನು `ಲಿಂಗದೇವ' ಎಂದು ಬದಲಾಯಿಸುವಂತೆ ತಿಳಿಸಿದ್ದರು ಎಂಬ ಮಾತೆ ಮಹಾದೇವಿ ಅವರ ಹೇಳಿಕೆ ನಂಬಿಕೆಗೆ ಯೋಗ್ಯವಲ್ಲ' ಎಂದು ನ್ಯಾಯಮೂರ್ತಿಗಳಾದ ಸಿ.ಕೆ.ಠಕ್ಕರ್ ಮತ್ತು ಮಾರ್ಕಾಂಡೇಯ ಖಟ್ಜು ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಪಟ್ಟಿತು. ಮಾತೆಮಹಾದೇವಿ ಸಂಪಾದಿಸಿ 1995ರಲ್ಲಿ ಪ್ರಕಟಿಸಿದ್ದ ಪರಿಷ್ಕೃತ ವಚನಗಳ ಸಂಗ್ರಹವನ್ನು ರಾಜ್ಯ ಸರ್ಕಾರ ನಿಷೇಧಿಸಿತ್ತು. ರಾಜ್ಯ ಸರ್ಕಾರದ ನಿರ್ಧಾರವನ್ನು 1998ರಲ್ಲಿ ಎತ್ತಿಹಿಡಿದಿದ್ದ ಹೈಕೋರ್ಟ್ ` ಈ ರೀತಿ ಅಂಕಿತನಾಮದ ಬದಲಾವಣೆ ಸಮರ್ಥನಿಯ ಅಲ್ಲ' ಎಂದು ಹೇಳಿತ್ತು.

2007: ಬೆಂಗಳೂರು ನಗರದ ಪ್ರತಿಷ್ಠಿತ ಬಡಾವಣೆಯಾದ ಕೋರಮಂಗಲದ ಫೋರಂ ಸಮೀಪದಲ್ಲಿ ಬಿಗ್ ಬಜಾರ್ ಮಳಿಗೆ ಇರುವ ಕಟ್ಟಡ ಸೇರಿದಂತೆ ಹಲವು ಮಾಲ್ಗಳ ನಿರ್ಮಾಣಕ್ಕೆ 8.11 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವುದನ್ನು ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಪತ್ತೆ ಹಚ್ಚಿತು. `ಇಲ್ಲಿನ ಪ್ರತಿಷ್ಠಿತ `ಮಾಲ್' ಗಳು ಸೇರಿ ಸುಮಾರು 325 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ಒತ್ತುವರಿಯಾಗಿದೆ' ಎಂದು ರಾಮಸ್ವಾಮಿ ತಿಳಿಸಿದರು.

2007: ಸೇನಾ ಮುಖ್ಯಸ್ಥರಾಗಿದ್ದುಕೊಂಡೇ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ಉದ್ದೇಶಿಸಿದ ಪಾಕಿಸ್ಥಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ನಿಲುವನ್ನು ವಿರೋಧಿಸಿ ಮಾಹಿತಿ ತಂತ್ರಜ್ಞಾನ ಸಚಿವ ಇಷಾಕ್ ಖಾಕ್ವಾನಿ ರಾಜೀನಾಮೆ ನೀಡಿದರು.

2007: ದಕ್ಷಿಣ ಆಫ್ರಿಕಾದ ಮಾಜಿ ಟೆಸ್ಟ್ ಕ್ರಿಕೆಟಿಗ ರಾಯ್ ಮೆಕ್ ಲೀನ್ (77) ಜೋಹಾನ್ಸ್ ಬರ್ಗಿನಲ್ಲಿ ನಿಧನರಾದರು. ನಲವತ್ತು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿದ್ದ ಮೆಕ್ ಲೀನ್ 30ಕ್ಕೂ ಹೆಚ್ಚು ಸರಾಸರಿಯಲ್ಲಿ ರನ್ ಗಿಟ್ಟಿಸಿದ್ದರು. 1955ರರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇನಿಂಗ್ಸ್ ಒಂದರಲ್ಲಿ ಅಜೇಯ 76 ರನ್ ಗಳಿಸುವ ಮೂಲಕ ತಮ್ಮ ತಂಡವನ್ನು ಅವರು ಗೆಲ್ಲಿಸಿಕೊಟ್ಟಿದ್ದರು. 1960ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡ ತಂಡದ ಪರವಾಗಿ ಉತ್ತಮ ಪ್ರದರ್ಶನನ ನೀಡಿದ ಮೆಕ್ ಲೀನ್ 1961ರಲ್ಲಿ ವಿಸ್ಡನ್ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದರು. ರಗ್ಬಿ ಆಟಗಾರರಾಗಿಯೂ ಹೆಸರು ಮಾಡಿದ್ದರು.

2006: ಒರಿಸ್ಸಾ ರಾಜ್ಯದ ಅಂಗುಲ್ ಜಿಲ್ಲೆಯು ತಲ್ಚೇರಿನಲ್ಲಿ ಸ್ಥಾಪಿಸಲಾಗಿರುವ ದೇಶದ ಅತಿ ದೊಡ್ಡ ಉಷ್ಣವಿದ್ಯುತ್ ಸ್ಥಾವರವನ್ನು ಪ್ರಧಾನಿ ಮನಮೋಹನ್ ಸಿಂಗ್ ದೇಶಕ್ಕೆ ಸಮರ್ಪಿಸಿದರು. ಮಳೆಯ ಕಾರಣದಿಂದ ಸ್ಥಾವರ ಸ್ಥಳಕ್ಕೆ ತೆರಳಲು ಅಸಾಧ್ಯವಾದ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರನ್ಸ್ ಮೂಲಕ ಈ ಕಾರ್ಯವನ್ನು ಅವರು ರಾಜಧಾನಿ ಭುವನೇಶ್ವರದಿಂದಲೇ ನೆರವೇರಿಸಿದರು.

2006: ಹತ್ತನೇ ದಕ್ಷಿಣ ಏಷ್ಯಾ ಫೆಡರೇಷನ್ (ಎಸ್ ಎಎಫ್) ಕ್ರೀಡಾಕೂಟ ಮುಕ್ತಾಯ. 118 ಚಿನ್ನ, 69 ಬೆಳ್ಳಿ, 47 ಕಂಚಿನ ಪದಕ ಸೇರಿ ಒಟ್ಟು 234 ಪದಕಗಳನ್ನು ತಮ್ಮ ಉಡಿಗೆ ಹಾಕಿಕೊಳ್ಳುವ ಮೂಲಕ ಭಾರತ ಪದಕ ಪಟಿಯಲ್ಲಿ ಅಗ್ರಸ್ಥಾನ ಗಳಿಸಿತು. ಪಾಕಿಸ್ಥಾನವು 43 ಚಿನ್ನ, 44 ಬೆಳ್ಳಿ, 71 ಕಂಚು ಸೇರಿ 158 ಪದಕ ಗೆದ್ದರೆ, ಶ್ರೀಲಂಕೆಯು 37 ಚಿನ್ನ, 63 ಬೆಳ್ಳಿ, 78 ಕಂಚು ಸೇರಿ 178 ಪದಕ ಗೆದ್ದುಕೊಂಡಿತು.

2001: ಇಂಟೆಲ್ ಕಾರ್ಪೊರೇಷನ್ ತನ್ನ ಅತಿ ವೇಗದ `ಪೆಂಟಿಯಮ್ 4' ಮೈಕ್ರೊಪ್ರೊಸೆಸರನ್ನು ಬಿಡುಗಡೆ ಮಾಡಿತು. ಹೊಸ ಪೆಂಟಿಯಮ್ 4 ಸೆಕೆಂಡಿಗೆ ಎರಡು ಶತಕೋಟಿ ಸೈಕಲಿನಷ್ಟು ಅಂದರೆ ಎರಡು ಗಿಗ್ಹರ್ಟ್ ಸಾಮರ್ಥ್ಯ ಹೊಂದಿದೆ.

1996: ವಿಚ್ಛೇದನಾ ಡಿಕ್ರಿ ಜಾರಿಯೊಂದಿಗೆ ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಮತ್ತು ರಾಜಕುಮಾರಿ ಡಯಾನಾ ಅವರ 15 ವರ್ಷಗಳ ದಾಂಪತ್ಯ ಕೊನೆಗೊಂಡಿತು.

1971: ಅಮೆರಿಕದ ಈಜುಗಾರ್ತಿ ಜಾನೆಟ್ ಇವಾನ್ಸ್ ಜನ್ಮದಿನ. ನಾಲ್ಕು ಒಲಿಂಪಿಕ್ ಸ್ವರ್ಣ ಪದಕಗಳನ್ನು ಗೆದ್ದ ಈಕೆ ಈಜುಗಾರಿಕೆಯಲ್ಲಿನ ತನ್ನ ವೇಗದಿಂದಾಗಿ ಖ್ಯಾತಿ ಪಡೆದವರು.

1963: ವಾಷಿಂಗ್ಟನ್ ಡಿ.ಸಿ.ಯಲ್ಲಿ ನಡೆದ ಶಾಂತಿಯುತ ನಾಗರಿಕ ಹಕ್ಕುಗಳ ರ್ಯಾಲಿಯಲ್ಲಿ 2 ಲಕ್ಷ ಮಂದಿ ಪಾಲ್ಗೊಂಡರು. ಲಿಂಕನ್ ಸ್ಮಾರಕದ ಎದುರು ನಡೆದ ರ್ಯಾಲಿಯನ್ನು ಉದ್ದೇಶಿಸಿ ಡಾ. ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಭಾಷಣ ಮಾಡಿದರು. ಅವರ ಭಾಷಣ `ನನಗೆ ಕನಸಿದೆ' ಭಾಷಣ ಎಂದೇ ಖ್ಯಾತಿ ಪಡೆಯಿತು.

1801: ಫ್ರೆಂಚ್ ಆರ್ಥಿಕ ತಜ್ಞ ಹಾಗೂ ಗಣಿತ ತಜ್ಞ ಆಂಟೋನಿ-ಆಗಸ್ಟಿನ್ ಕೊರ್ನೊ (1801-1877) ಜನ್ಮದಿನ. ಗಣಿತ-ಅರ್ಥಶಾಸ್ತ್ರವನ್ನು ರೂಪಿಸಿದ ಮೊದಲಿಗರಲ್ಲಿ ಈತನೂ ಒಬ್ಬ.

No comments:

Post a Comment