Thursday, August 16, 2018

ಇಂದಿನ ಇತಿಹಾಸ History Today ಆಗಸ್ಟ್ 16

ಇಂದಿನ ಇತಿಹಾಸ History Today ಆಗಸ್ಟ್ 16

2018: ನವದೆಹಲಿ: ಭಾರತೀಯ ರಾಜಕಾರಣದ ಉತ್ತುಂಗ ವ್ಯಕ್ತಿತ್ವ, ಅಜಾತಶತ್ರು, ಭಾರತ ರತ್ನ, ಮಹಾನ್ ಮುತ್ಸದ್ಧಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಈದಿನ ಸಂಜೆ ನಗರದ ಏಮ್ಸ್ ಆಸ್ಪತ್ರೆಯಲ್ಲಿ ತಮ್ಮ 93ರ ಹರೆಯದಲ್ಲಿ ನಿಧನರಾದರು. ತೀವ್ರ ಅಸ್ವಸ್ಥತೆಯ ಕಾರಣ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ವಾಜಪೇಯಿ ಅವರು ಈದಿನ ಸಂಜೆ 05.05 ನಿಮಿಷಕ್ಕೆ ಕೊನೆಯುಸಿರು ಎಳೆದರು ಎಂದು ಆಸ್ಪತ್ರೆಯ ವೈದ್ಯಕೀಯ ಬುಲೆಟಿನ್ ತಿಳಿಸಿತು. ’ಭಾರತದ ಮಾಜಿ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ೨೦೧೮ರ ಆಗಸ್ಟ್ ೧೬ರ ಸಂಜೆ ೦೫:೦೫ ಗಂಟೆಗೆ ನಿಧನರಾದರು ಎಂಬ ಬೇಸರದ ಸುದ್ದಿಯನ್ನು ಅತ್ಯಂತ ದುಃಖದೊಂದಿಗೆ ನಾವು ನೀಡುತ್ತಿದ್ದೇವೆಎಂದು ಏಮ್ಸ್ ವೈದ್ಯಕೀಯ ಬುಲೆಟಿನ್ ಹೇಳಿತು.  ’ದುರದೃಷ್ಟಕರವಾಗಿ ಕಳೆದ ೩೬ ಗಂಟೆಗಳಿಂದ ಆರೋಗ್ಯ ತೀವ್ರ ವಿಷಮಿಸಿದ್ದರಿಂದ ತೀವ್ರ  ನಿಗಾ ಘಟಕದಲಿ ಜೀವರಕ್ಷಕ ವ್ಯವಸ್ಥೆಯ ಅಡಿಯಲ್ಲಿದ್ದ ವಾಜಪೇಯಿ ಅವರನ್ನು ರಕ್ಷಿಸಲು ನಡೆಸಿದ ಸರ್ವ ಯತ್ನಗಳ ಹೊರತಾಗಿಯೂ ನಾವು ಅವರನ್ನು ಈದಿನ ಕಳೆದುಕೊಂಡಿದ್ದೇವೆಎಂದು ಏಮ್ಸ್ ಮಾಧ್ಯಮ ಮತ್ತು ಪ್ರೋಟೋಕಾಲ್ ವಿಭಾಗದ ಮುಖ್ಯಸ್ಥರಾದ ಡಾ. ಆರತಿ ವಿಜ್ ಅವರ ಪ್ರಕಟಣೆ ತಿಳಿಸಿತುಭಾರತೀಯ ಜನತಾ ಪಕ್ಷದ ನಾಯಕನನ್ನು ಜೂನ್ ೧೧ರಂದು ಮೂತ್ರನಾಳದ ಸೋಂಕಿನ ಕಾರಣಕ್ಕಾಗಿ ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (ಏಮ್ಸ್) ದಾಖಲು ಮಾಡಲಾಗಿತ್ತು. ಮೂತ್ರ ವಿಸರ್ಜನೆ ಪ್ರಮಾಣ ಇಳಿತ ಮತ್ತು ಹೃದಯ ದಟ್ಟಣೆ ಸಮಸ್ಯೆಯೂ ಅವರನ್ನು ಕಾಡುತ್ತಿತ್ತು. ಬುಧವಾರ ರಾತ್ರಿ ವಾಜಪೇಯಿ ಅವರ ದೇಹಸ್ಥಿತಿ ವಿಷಮಿಸಿದ್ದರಿಂದ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಜೀವ ರಕ್ಷಕ ವ್ಯವಸ್ಥೆ ಅಳವಡಿಸಲಾಗಿತ್ತುಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪಕ್ಷದ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಹಲವಾರು ಕೇಂದ್ರ ಸಚಿವರು ಈದಿನ ಮುಂಜಾನೆಯಿಂದಲೇ ವಾಜಪೇಯಿ ಅವರನ್ನು ಭೇಟಿ ಮಾಡಿದ್ದರು. ಅರವಿಂದ ಕೇಜ್ರಿವಾಲ್ ಅವರು ತಮ್ಮ ಹುಟ್ಟು ಹಬ್ಬದ ಆಚರಣೆ ಮಾಡದಂತೆ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದರುವಾಜಪೇಯಿ ಅವರ ಆರೋಗ್ಯ ಸುಧಾರಿಸಲೆಂದು ಅಭಿಮಾನಿಗಳು ದೇಶಾದ್ಯಂತ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಆಸ್ಪತ್ರೆಯ ಹೊರಗೆ ಭಾರಿ ಪ್ರಮಾಣದಲ್ಲಿ ಪಕ್ಷ ಕಾರ್ಯಕರ್ತರು, ಅಭಿಮಾನಿಗಳು ಸುದ್ದಿ ತಿಳಿಯುತ್ತಿದಂತೆಯೇ ಜಮಾಯಿಸಿದರು. ತಮ್ಮ ತಲೆಮಾರಿನ ಇತರ ಹಲವರಂತೆ ವಾಜಪೇಯಿ ಅವರೂ ೧೯೪೨ರಲ್ಲಿ ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ತಮ್ಮ ೧೮ನೇ ವಯಸ್ಸಿನಲ್ಲಿಯೇ ರಾಜಕೀಯಕ್ಕೆ ಧುಮುಕಿದ್ದರು. ಕಾಲದಲ್ಲಿ ಕ್ವಿಟ್ ಇಂಡಿಯಾ ಚಳವಳಿ ದೇಶದಲ್ಲಿ ಜೋರಾಗಿ ನಡೆಯುತ್ತಿತ್ತು.  ಅಜೀವ ಪರ್ಯಂತ ಅವಿವಾಹಿತರಾಗಿದ್ದ ವಾಜಪೇಯಿ ಅವರು ೧೯೫೭ರಲ್ಲಿ ಭಾರತದ ಎರಡನೇ ಮಹಾ ಚುನಾವಣೆಯಲ್ಲಿ ಮೊತ್ತ ಮೊದಲ ಬಾರಿಗೆ ಉತ್ತರ ಪ್ರದೇಶದ ಬಲರಾಂ ಪುರ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಸಂಸತ್ತಿನಲ್ಲಿ ವಾಜಪೇಯಿ ಅವರು ಮಾಡಿದ ಚೊಚ್ಚಲ ಭಾಷಣ ಗೆಳೆಯರು, ಸಹೋದ್ಯೋಗಿಗಳು ಮಾತ್ರವೇ ಅಲ್ಲ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನೂ ಅಪಾರವಾಗಿ ಆಕರ್ಷಿಸಿತು. ನೆಹರೂ ಅವರು ದೇಶಕ್ಕೆ ಬೇಟಿ ನೀಡಿದ್ದ ವಿದೇಶೀ ಗಣ್ಯರಿಗೆ ವಾಜಪೇಯಿ ಅವರನ್ನು ಪರಿಚಯಿಸುತ್ತಾ ಯುವಕ ಒಂದು ದಿನ ರಾಷ್ಟ್ರದ ಪ್ರಧಾನಿಯಾಗುತ್ತಾರೆಎಂದು ಹೇಳಿದ್ದರು. ಬಳಿಕ ಸಂಸತ್ತಿನಲ್ಲಿ ೧೨ ಬಾರಿ ಸದಸ್ಯರಾದ ವಿಶಿಷ್ಠ  ಕೀರ್ತಿಗೆ ವಾಜಪೇಯಿ ಪಾತ್ರರಾಗಿದ್ದರು. ಲೋಕಸಭೆಯ ಸದಸ್ಯರಾಗಿ ೧೦ ಬಾರಿ ಮತ್ತು ರಾಜ್ಯಸಭೆಯ ಸದಸ್ಯರಾಗಿ ಬಾರಿ ಆಯ್ಕೆಯಾಗಿದ್ದ ಅವರು ೧೯೮೪ರಲ್ಲಿ ಒಂದೇ ಒಂದು ಬಾರಿ ಗ್ವಾಲಿಯರ್ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಮಾಧವರಾವ್ ಸಿಂಧಿಯಾ ಎದುರು ಲಕ್ಷ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ೧೯೯೧ರಿಂದ ೨೦೦೯ರವರೆಗೆ ಲಕ್ನೋ ಕ್ಷೇತ್ರವನ್ನು ೧೦, ೧೧, ೧೨, ೧೩ ಮತ್ತು ೧೪ನೇ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದ ವಾಜಪೇಯಿ ಬಲರಾಂ ಪುರ ಲೋಕಸಭಾ ಕ್ಷೇತ್ರವನ್ನು ಎರಡನೇ ಮತ್ತು ನಾಲ್ಕನೇ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದರು. ಗ್ವಾಲಿಯರ್ ಕ್ಷೇತ್ರವನ್ನು ೫ನೇ ಹಾಗೂ ನವದೆಹಲಿ ಕ್ಷೇತ್ರವನ್ನು ೬ನೇಮತ್ತು ೭ನೇ ಲೋಕಸಭೆಯಲ್ಲೂ ಅವರು ಪ್ರತಿನಿಧಿಸಿದ್ದರು. ೧೯೬೨ ಮತ್ತು ೧೯೮೬ರಲ್ಲಿ ಅವರು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ೨೦೦೫ರಲ್ಲಿ ವಾಜಪೇಯಿ ಅವರು ಮುಂಬೈಯಲ್ಲಿ ನಡೆದ ಪಕ್ಷದ ಸಮಾವೇಶದಲ್ಲಿ ಚುನಾವಣಾ ರಾಜಕೀಯಕ್ಕೆ ತಮ್ಮ ನಿವೃತ್ತಿಯನ್ನು ಘೋಷಿಸಿದ್ದರು. ೪೭ ವರ್ಷ ಕಾಲ ಸಂಸತ್ ಸದಸ್ಯರಾಗಿದ್ದ ವಾಜಪೇಯಿ ಅವರು ೧೯೯೬ರಿಂದ ೨೦೦೪ರ ನಡುವಣ ಅವಧಿಯಲ್ಲಿ ಮೂರು ಬಾರಿ ನಿರಂತರ ಅವಧಿಗೆ ಪ್ರಧಾನಿಯಾಗಿದ್ದರು. ಮೊದಲ ಬಾರಿಗೆ ೧೩ ದಿನ, ಬಳಿಕ ೧೯೯೮-೧೯೯೯ರ ಅವಧಿಯಲ್ಲಿ ಎರಡನೇ ಬಾರಿಗೆ ೧೩ ತಿಂಗಳು ಮತ್ತು ೧೯೯೯-೨೦೦೪ರ ಅವಧಿಯಲ್ಲಿ ಮೂರನೇ ಬಾರಿಗೆ ಪೂರ್ಣಾವಧಿ ಪ್ರಧಾನಿಯಾಗಿದ್ದರು. ವಾಜಪೇಯಿ ಅವರು ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಪ್ರಥಮ ಬಿಜೆಪಿ ನಾಯಕರಾಗಿದ್ದರು ಮತ್ತು ಐದು ವರ್ಷದ ಅವಧಿ ಪೂರ್ಣಗೊಳಿಸಿದ ಮೊತ್ತ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದರು. ೧೯೫೧ರಲ್ಲಿ ಸ್ಥಾಪನೆಯಾದ ಜನಸಂಘದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಾಜಪೇಯಿ ಅವರು ಪಕ್ಷದ ಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ನಿಧನರಾದಾಗ ಅತ್ಯಂತ ವಿಚಲಿತರಾಗಿದ್ದರು. ದೀನದಯಾಳ ಉಪಾಧ್ಯಾಯರು ನಿಧನರಾದ ಬಳಿಕ ೧೯೬೮ರಲ್ಲಿ ಅವರ ಪಕ್ಷದ ಅಧ್ಯಕ್ಷರಾಗಿದ್ದರು. ವಾಜಪೇಯಿ ಅವರು ೨೦೦೯ರಲ್ಲಿ ಪಾರ್ಶ್ವವಾಯು ಹೊಡೆತಕ್ಕೆ ತುತ್ತಾಗಿದ್ದರು. ಪರಿಣಾಮವಾಗಿ ಅವರ ಅರವಿನ ಸಾಮರ್ಥ್ಯ ಕುಸಿದಿತ್ತು. ಬಳಿಕ ಅವರು ಬುದ್ದಿ ಮಾಂದ್ಯತೆಗೆ ಒಳಗಾಗಿದ್ದರು.  ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ಕೇಂದ್ರ ಸರ್ಕಾರವು ದಿನಗಳ ಶೋಕಾಚರಣೆಯನ್ನು ಘೋಷಿಸಿತು. ಇಂದಿನಿಂದ ಏಳು ದಿನಗಳ ಕಾಲ ದೇಶಾದ್ಯಂತ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗುವುದು ಮತ್ತು ವಾಜಪೇಯಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸಲಾಗುವುದು ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿತು.  ಬೆಳಗ್ಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಗೃಹ ಸಚಿವ ರಾಜನಾಥ್ ಸಿಂಗ್, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ವಾಜಪೇಯಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ವಾಜಪೇಯಿ ನಿಧನಕ್ಕೆ ತೀವ್ರ ದುಃಖ ವ್ಯಕ್ತ ಪಡಿಸಿದರು. ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರೂ ಅಟಲ್ ನಿಧನಕ್ಕೆ ಶೋಕ ವ್ಯಕ್ತ ಪಡಿಸಿದರು.
2016: ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಮತ್ತೆ  ಹಿಂಸಾಚಾರ ಮತ್ತೆ ಭುಗಿಲೆದ್ದಿತು. ಈದಿನ  ನಡೆದ ಪ್ರತಿಭಟನೆಯಲ್ಲಿ 5 ನಾಗರಿಕರು ಸಾವನ್ನಪ್ಪಿ, 15 ಕ್ಕೂ ಹೆಚ್ಚು ಜನ ಗಾಯಗೊಂಡರು. ಬಡಗಮ್ ಜಿಲ್ಲೆಯ ಮಾಗಾಂವ್ ಪ್ರದೇಶದಲ್ಲಿ ಪ್ರತಿಭಟನೆ ಆರಂಭಿಸಿದ ಪ್ರತ್ಯೇಕತಾವಾದಿಗಳು ಭದ್ರತಾ ಪಡೆ ಮೇಲೆ ಕಲ್ಲು ತೂರಾಟ ಆರಂಭಿಸಿದರು. ಪರಿಸ್ಥಿತಿ ಕೈ ಮೀರುವುದನ್ನು ಹತ್ತಿಕ್ಕಲು ಭದ್ರತಾ ಪಡೆ ಗುಂಡಿನ ದಾಳಿ ನಡೆಸಿತು. ಯಾವುದೇ ಸಂಪರ್ಕ ಸಾಧನವಿಲ್ಲದೆ ನಲುಗಿದ್ದ ಜಮ್ಮು ಕಾಶ್ಮೀರದ ಕೆಲ ಜಿಲ್ಲೆಗಳಲ್ಲಿ ಕೆಲವು ದಿನದ ಹಿಂದೆ ಕರ್ಫ್ಯೂ ಸಡಿಲಿಸಲಾಗಿತ್ತು. ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯಲು ಸಾಮಾಜಿಕ ಜಾಲತಾಣ ಬಳಕೆ ಮಾಡಿ ಕುಖ್ಯಾತಗೊಂಡಿದ್ದ ಹಿಜ್ಬುಲ್ ಉಗ್ರ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಕಾಶ್ಮೀರದ ಪ್ರತ್ಯೇಕತಾವಾದಿಗಳು ಜುಲೈ 8 ರಿಂದ ಉಗ್ರ ಪ್ರತಿಭಟನೆ ನಡೆಸುತ್ತಿದ್ದು, ಸತತ 38 ದಿನದಿಂದ ಕಾಶ್ಮೀರದ ಹಲವು ಜಿಲ್ಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿದೆ. ಈ ವರೆಗೂ 64 ಜನ ಮೃತಪಟ್ಟಿದ್ದು, 5 ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

2016: ತುಮಕೂರು: ಬೆಂಗಳೂರಿನ ಆಮ್ನೆಸ್ಟಿ ಇಂಟರ್ ನ್ಯಾಶನಲ್ ಕಾಲೇಜಿನಲ್ಲಿ ಸೇನೆ ವಿರೋಧಿ ಘೋಷಣೆ ಕೂಗಿದ ಬೆನ್ನಲ್ಲೇ ತುಮಕೂರಿನಲ್ಲಿ ಗೃಹ ಸಚಿವ ಡಾ.ಪರಮೇಶ್ವರ್ ಅವರ ಒಡೆತನದ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಘಟನೆ ಘಟಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬನ ವಿರುದ್ಧ ಎಫ್ಐಆರ್ ದಾಖಲಾಯಿತು. ಸಚಿವ ಪರಮೇಶ್ವರ್ ಒಡೆತನದ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜ್ ಆವರಣದ ಮುಂಭಾಗದಲ್ಲಿ ಆಗಸ್ಟ್ 14ರ ಮಧ್ಯರಾತ್ರಿ ಉತ್ತರ ಭಾರತದ ಮೂಲದ ಮೂವರು ವಿದ್ಯಾರ್ಥಿಗಳು ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ್ದರು. ಈ ಘಟನೆ ಸಂಬಂಧ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ತಿಲಕ್ ಪಾರ್ಕ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.. ಬಂಧಿತ ಮೂವರು ವಿದ್ಯಾರ್ಥಿಗಳಲ್ಲಿ ಓರ್ವ ಕಾಶ್ಮೀರದ ತನೀಶ್ ಅಹ್ಮದ್ ಭಟ್ ಹಾಗೂ ಇನ್ನಿಬ್ಬರು ಬಿಹಾರ ಮೂಲದ ಪ್ರವೀಣ್ ಕುಮಾರ್ ಮತ್ತು ಮಂಜಿತ್ ಕುಮಾರ್ ಎಂದು ಹೇಳಲಾಯಿತು. ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಡಿಯೋ ಮತ್ತು ಆಡಿಯೋ ಟೇಪ್​ಗಳೀಗಾಗಿ  ಹುಡುಕಾಟವನ್ನೂ ಪೊಲೀಸರು ನಡೆಸಿದರು.  ಸೆಕ್ಯುರಿಟಿ ಗಾರ್ಡ್ ಗೆ ಜೀವ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಕುಮಾರ್ ವಿರುದ್ಧ ಎಫ್ಐಆರ್ ದಾಖಲಿಸಿ ಕೋರ್ಟ್ ಗೆ ಹಾಜರುಪಡಿಸಲಾಯಿತು.. ಆದರೆ ಇನ್ನಿಬ್ಬರ ವಿರುದ್ಧ ಎಫ‍್ಐಆರ್ ದಾಖಲಿಸಲಾಗಿಲ್ಲ ಎಂದು ವರದಿ ವಿವರಿಸಿತು.  ದೇಶ ವಿರೋಧಿ ಘೋಷಣೆ ಕೂಗಿರುವ ದುಷ್ಕರ್ವಿುಗಳನ್ನು ಬಂಧಿಸುವಂತೆ ಆಗ್ರಹಿಸಿ ಎಸ್​ಎಸ್​ಐಟಿ ಕಾಲೇಜು ಮುಂಭಾಗ ಎಬಿವಿಪಿ ಪ್ರತಿಭಟನೆಗೆ ಎಚ್ಚೆತ್ತುಕೊಂಡ ಕಾಲೇಜು ಪ್ರಾಂಶುಪಾಲರು, ರಾತ್ರಿ ರಂಪಾಟ ಮಾಡಿದ ಕಾಶ್ಮೀರಿ ಯುವಕ ತನೀಶ್ ಅಹ್ಮದ್ ಭಟ್ ಹಾಗೂ ಜತೆಗಿದ್ದ ಬಿಹಾರಿ ಮೂಲದ ಪ್ರವೀಣ್ ಸಿಂಗ್, ಮೋಹಿತ್ ಸಿಂಗ್, ಅಭಿಷೇಕ್ ಸಿಂಗ್ ಪೈಕಿ ಪ್ರವೀಣ್ ಸಿಂಗ್​ನನ್ನು ಕಾಲೇಜಿನಿಂದ ಅಮಾನತುಗೊಳಿಸಿತು. 14ರ ತಡರಾತ್ರಿ ಮಂಜಿಲ್ ಕುಮಾರ್ ಎಂಬವರ ಹುಟ್ಟುಹಬ್ಬ ಆಚರಿಸಿ ಕಾಲೇಜು ಆವರಣದಿಂದ ಹಾಸ್ಟೆಲ್​ಗೆ ಮರಳುವ ಸಂದರ್ಭದಲ್ಲಿ ಈ ಘಟನೆ ನಡೆಸಿತ್ತು. ಸ್ನೇಹಿತರೆಲ್ಲ ತಂಡ ಮದ್ಯದ ಬಾಟಲ್ ಹಿಡಿದು ಹಾಸ್ಟೆಲ್ ಪ್ರವೇಶಿಸುವಾಗ ತಡೆದ ಸೆಕ್ಯುರಿಟಿಗಾರ್ಡ್ ಜತೆ ವಿದ್ಯಾರ್ಥಿಗಳು ಗಲಾಟೆ ಮಾಡಿದರು. ಈ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾಗಿ ಸೆಕ್ಯುರಿಟಿಗಾರ್ಡ್ ಪೊಲೀಸರಿಗೆ ಹೇಳಿಕೆ ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡನ್ ಮುರಳೀಧರ್ ತುಮಕೂರು ಠಾಣೆಯಲ್ಲಿ ದೂರು ದಾಖಲಿಸಿದ್ದರು.

2016: ಲಾಹೋರ್: ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಮತ್ತು ಜಮಾತ್ ಉದ್ ದವಾ ಉಗ್ರ ಸಂಘಟನೆಯ ಅಧ್ಯಕ್ಷ ಹಫೀಜ್ ಸಯೀದ್ ಮೇಲಿನ ಮಾಧ್ಯಮ ನಿರ್ಬಂಧವನ್ನು ಪಾಕಿಸ್ತಾನ ಸರ್ಕಾರ ತೆರೆಮರೆಯಲ್ಲಿ ಹಿಂಪಡೆದಿದ್ದು, ಭಾರತದ ವಿರುದ್ಧ ಟಿವಿ ಮಾಧ್ಯಮಗಳಲ್ಲಿ ಮಾತನಾಡಲು ಹಫೀಜ್ ಸಯೀದ್​ಗೆ ಅವಕಾಶ ಮಾಡಿಕೊಟ್ಟಿದೆ. ಕಾಶ್ಮೀರ ಕಣಿವೆಯಲ್ಲಿ ಹಿಂಸಾಚಾರ ಪ್ರಾರಂಭವಾದ ದಿನದಿಂದಲೂ ಹಫೀಜ್ ಸಯೀದ್ ಪಾಕಿಸ್ತಾನದ ಖಾಸಗಿ ಟಿವಿ ವಾಹಿನಿಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಟಿವಿ ವಾಹಿನಿಗಳಲ್ಲಿ ಹಫೀಜ್ ಕಾಶ್ಮೀರದ ವಿರುದ್ಧ ಮತ್ತು ಭಾರತ ಸರ್ಕಾರದ ವಿರುದ್ಧ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾನೆ ಮತ್ತು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ನಿರಂತರವಾಗಿ ಬೆಂಬಲ ಸೂಚಿಸುತ್ತಿದ್ದಾನೆ. ಪಾಕಿಸ್ತಾನ ಹಫೀಜ್ ವಿರುದ್ಧ ಹೇರಿದ್ದ ಮಾಧ್ಯಮ ನಿರ್ಬಂಧವನ್ನು ಸಡಿಲಿಸುವ ಮೂಲಕ ಭಾರತದ ವಿರುದ್ಧ ವಾಗ್ದಾಳಿ ನಡೆಸಲು ಹಫೀಜ್ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ವರದಿಗಳು ತಿಳಿಸಿವೆ. ಹಫೀಜ್ ಇತ್ತೀಚೆಗೆ ಕೆಲವು ಟಿವಿ ಚಾನಲ್​ಗಳ ಚರ್ಚಾ ಕಾರ್ಯಕ್ರಮದಲ್ಲೂ ಸಹ ಭಾಗವಹಿಸಿ ಭಾರತದ ವಿರುದ್ಧ ವಿಷ ಕಾರುತ್ತಿದ್ದಾನೆ ಎಂದು ವರದಿ ಹೇಳಿತು. ಪಾಕಿಸ್ತಾನ ವಿದ್ಯುನ್ಮಾನ ಮಾಧ್ಯಮಗಳ ನಿಯಂತ್ರಣ ಪ್ರಾಧಿಕಾರ ಕಳೆದ ವರ್ಷ ನವೆಂಬರ್​ನಲ್ಲಿ ಹಫೀಜ್ ಸಯೀದ್ ಮತ್ತು ಜಮಾತ್ ಉದ್ ದವಾ ಸಂಘಟನೆಗೆ ಸೇರಿದ ಕಾರ್ಯಕ್ರಮಗಳ ವರದಿ ಮಾಡುವುದನ್ನು ನಿಷೇಧಿಸಿತ್ತು. ಆದರೆ ಪ್ರಸ್ತುತ ಕಳೆದ ಒಂದು ತಿಂಗಳಿಂದ ಹಫೀಜ್ ಎಲ್ಲಾ ಟಿವಿ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೂ ಸಹ ಪ್ರಾಧಿಕಾರ ಮಾತ್ರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈಮಧ್ಯೆ ಭಾರತಕ್ಕೆ ತಕ್ಕ ಪಾಠ ಕಲಿಸಲು ಕಾಶ್ಮೀರಕ್ಕೆ ಪಾಕಿಸ್ತಾನದಿಂದ ಸೇನೆಯನ್ನು ಕಳುಹಿಸಿ ಎಂದು ಜಮಾತ್ ಉದ್ ದವಾ ಮುಖ್ಯಸ್ಥ ಹಫೀಜ್ ಸಯೀದ್ ಹೇಳಿರುವ ವರದಿಗಳೂ ಬಂದವು. ಪಾಕಿಸ್ತಾನದ ಮಾಧ್ಯಮಗಳ ವರದಿ ಪ್ರಕಾರ 26/11 ದಾಳಿಯ ರೂವಾರಿ ಸಯೀದ್, ಪಾಕ್ ಸೇನಾಧಿಕಾರಿ ಜನರಲ್ ರಹೀಲ್ ಶರೀಫ್ ಅವರಲ್ಲಿ ಈ ರೀತಿಯ ಬೇಡಿಕೆಯನ್ನೊಡ್ಡಿದ್ದಾನೆ ಎನ್ನಲಾಯಿತು. ಕಾಶ್ಮೀರದಲ್ಲಿನ ಪ್ರತಿಭಟನೆಯನ್ನು ಭಾರತ ಹತ್ತಿಕ್ಕಲು ಪ್ರಯತ್ನಿಸಿದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ ಎಂದು ಸಯೀದ್ ಕಳೆದ ತಿಂಗಳು ಎಚ್ಚರಿಕೆ ನೀಡಿದ್ದ. ಲಾಹೋರ್ ನಲ್ಲಿ ಈದಿನ ಮಾತನಾಡಿದ ಸಯೀದ್, ಈ ಬಾರಿ ಕಾಶ್ಮೀರದ ಜನರು ಬೀದಿಗಿಳಿದಿದ್ದಾರೆ. ಪ್ರತಿಭಟನೆಗಳು ಜನಾಂದೋಲನವಾಗಿ ಮಾರ್ಪಟ್ಟಿವೆ. ಕಾಶ್ಮೀರದಲ್ಲಿರುವ ಸಂಘಟನೆಗಳೆಲ್ಲ ಒಂದಾಗಿವೆ. ಹುರಿಯತ್‍ನ ಎಲ್ಲ ವಿಭಾಗಗಳು ಒಗ್ಗಟ್ಟಾಗಿ ನಿಂತಿವೆ. ಮುತ್ತಹಿದಾ ಜಿಹಾದ್ ಕೌನ್ಸಿಲ್ ನ ಎಲ್ಲ ಸಂಘಟನೆಗಳು ಒಟ್ಟಾಗಿ ಬಂದು ಸೇರಿವೆ. ಕಾಶ್ಮೀರದಲ್ಲಿ ಸಾವಿಗೀಡಾದ ಜೀವದ ಬೆಲೆ ವ್ಯರ್ಥವಾಗುವುದಿಲ್ಲ ಎಂದು ಹೇಳಿದ.

2016: ರಾಂಚಿ: ಸ್ವಾತಂತ್ರ್ಯ ದಿನದಂದು ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಹುತಾತ್ಮರಾಗಿದ್ದ ಸಿಆರ್​ಪಿಎಫ್ ಕಮಾಂಡಂಟ್  ಪ್ರಮೋದ್ ಕುಮಾರ್ ಅವರ ಅಂತ್ಯಕ್ರಿಯೆ ಈದಿನ ತವರೂರಾದ ಜಾರ್ಖಂಡ್​ನ ಜಂತರದಲ್ಲಿ ನೆರವೇರಿತು. ಬೆಳಗ್ಗೆ ಜಂತರಕ್ಕೆ ತಲುಪಿದ ಹುತಾತ್ಮ ಪ್ರಮೋದ್ ಕುಮಾರ್ ಅವರ ಪಾರ್ಥೀವ ಶರೀರವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿತ್ತು. ಆಗಸ್ಟ್ 15ರಂದು  ಸ್ವಾತಂತ್ರ್ಯ ದಿನಾಚರಣೆಯ ಎರಡು ಗಂಟೆ ಮೊದಲು ಶ್ರೀನಗರದಲ್ಲಿ ನಡೆದ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಸಿಆರ್​ಪಿಎಫ್ ಕಮಾಂಡಂಟ್  ಪ್ರಮೋದ್ ಕುಮಾರ್ ಹುತಾತ್ಮನಾಗಿ ಒಂಭತ್ತು ಮಂದಿ ಯೋಧರು ಗಾಯಗೊಂಡಿದ್ದರು.

2016: ಪಟ್ನಾ: ಬಿಹಾರ ವಿಧಾನಸಭೆ ನಡೆಸಿದ ವಿಶೇಷ ಅಧಿವೇಶನದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಮಸೂದೆ ತಿದ್ದುಪಡಿ ಕಾಯ್ದೆ ಅಳವಡಿಸಿಕೊಳ್ಳಲು ಅನುಮೋದನೆ ನೀಡಿತು. ಇದರೊಂದಿಗೆ ಜಿಎಸ್​ಟಿ ಮಸೂದೆಗೆ ಅನುಮೋದನೆ ನೀಡಿದ ದೇಶದ ಎರಡನೇ ರಾಜ್ಯವೆಂಬ ಹೆಗ್ಗಳಿಕೆಗೆ ಬಿಹಾರ ಪಾತ್ರವಾಯಿತು. ಅಸ್ಸಾಮ್ ರಾಜ್ಯವು ಜಿಎಸ್ ಟಿ ಮಸೂದೆಗೆ ಅನುಮೋದನೆ ನೀಡಿದ ಮೊದಲ ರಾಜ್ಯ. ಬಿಜೆಪಿಯೇತರ  ಆಡಳಿತವಿರುವ ಪ್ರಥಮ ರಾಜ್ಯ ಜಿಎಸ್​ಟಿ ಮಸೂದೆಗೆ ಅಸ್ತು ಎಂದಿರುವುದು ಕೇಂದ್ರ ಸರ್ಕಾರದ ನೀತಿಗೆ ಇನ್ನಷ್ಟು ಬಲ ತಂದು ಕೊಟ್ಟಿತು. ಸಂವಿಧಾನದ 122 ನೇ ತಿದ್ದುಪಡಿ ಅನ್ವಯ ಲೋಕಸಭೆಯಲ್ಲಿ ಆಗಸ್ಟ್ 8 ರಂದು 443 ಸದಸ್ಯರ ಸಮ್ಮುಖದಲ್ಲಿ ತಿದ್ದುಪಡಿ ಮಸೂದೆಗೆ ಅಂಗೀಕಾರ ಲಭಿಸಿತ್ತು. ಏಪ್ರಿಲ್ 1, 2017 ರೊಳಗೆ ಹೊಸ ಆಡಳಿತ ತೆರಿಗೆ ಜಾರಿ ಮಾಡಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಕಳೆದ ವಾರ ಘೋಷಿಸಿದ್ದರು. ಸಂವಿಧಾನ ನಿಬಂಧನೆಯಂತೆ ಜಿಎಸ್​ಟಿ ಅಧಿಕೃತ ಜಾರಿಗೆ ಕನಿಷ್ಠ ಶೇಕಡಾ 50ರಷ್ಟು ರಾಜ್ಯ ವಿಧಾನಸಭೆಗಳು ಮಸೂದೆ ಅಂಗೀಕರಿಸಬೇಕು. ದೇಶಾದ್ಯಂತ ಏಕರೂಪ ತೆರಿಗೆ ಜಾರಿಗೊಳಿಸಲು, ರಾಜ್ಯಗಳ ಲೆವಿ ಅಂತರ್ಗತಗೊಳಿಸಲು ಮತ್ತು ವಿವಿಧ ತೆರಿಗೆ ನಿಷೇಧಿಸಿ ಜಿಎಸ್​ಟಿ ಅಳವಡಿಸಿಕೊಂಡು ಸರಕು ಸಾಗಣೆ ನೀತಿಯಲ್ಲಿ ಮಹತ್ತರ ಬದಲಾವಣೆ ತರಲು ಜಿಎಸ್​ಟಿ ಕಾಯ್ದೆ ರೂಪಿಸಲಾಗಿದೆ.

2016: ಲಿಮಾ: ಪೆರುವಿನ ಕೋಲ್ಕ ಕಣಿವೆಯಲ್ಲಿ ಬೆಳಗಿನ ಜಾವ ಸಂಭವಿಸಿದ 5.2 ರ ತೀವ್ರತೆಯ ಭೂಕಂಪಕ್ಕೆ 50 ಮನೆ ಕುಸಿದು 9 ಜನ ಸಾವನ್ನಪ್ಪಿ 40 ಜನ ಗಂಭೀರವಾಗಿ ಗಾಯಗೊಂಡರು ಎಂದು ಅರೆಕ್ವಿಪ ಪ್ರದೇಶದ ಗವರ್ನರ್ ಯಮಿಲಾ ಒಸೊರಿಯೊ ಪೆರು ರೆಡಿಯೋ ವಾಹಿನಿಯಲ್ಲಿ ಪ್ರಕಟಿಸಿದರು.
ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಜನ ಮನೆ, ಆಹಾರವಿಲ್ಲದೆ ಪರದಾಡುತ್ತಿದ್ದಾರೆಂದು ಸ್ಥಳೀಯ ಮಾಧ್ಯಮಗಳ ವರದಿ ಮಾಡಿದವು.  ಪೆರುವಿನಲ್ಲಿ ಭೂಕಂಪ ಸಾಮಾನ್ಯ ಸಂಗತಿಯಾಗಿದೆ. ಆದರೆ ಈ ಬಾರಿ ಜನವಸತಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪ ಜನಜೀವನ ಅಸ್ತವ್ಯಸ್ತಗೊಳಿಸಿತು. ಹಾನಿಯಿಂದ ತತ್ತರಿಸಿದ್ದ ಜನತೆಗೆ ಕೆಲಹೊತ್ತಿನ ಬಳಿಕ ಮತ್ತೆ ಎರಡು ಬಾರಿ ಮರುಕಂಪನದ ಅನುಭವವಾಯಿತು ಎಂದು ವರದಿ ತಿಳಿಸಿತು. 
2016: ಬೆಂಗಳೂರು:
 ಕಾಶ್ಮೀರ ಕುರಿತ ಸಂವಾದದಲ್ಲಿ ಭಾರತೀಯ ಸೇನೆಯ ವಿರುದ್ಧವೇ ಘೋಷಣೆ ಕೂಗಿದ
ಪ್ರಕರಣಕ್ಕೆ ಸಂಬಂಧಿಸಿ ಶೀಘ್ರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಬಿವಿಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತು.  ಪ್ರತಿಭಟನಾಕಾರರು ರಾಜಭವನ ಮಾರ್ಗವಾಗಿ ಸಾಗುವಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದು, ಘರ್ಷಣೆ ಸ್ವರೂಪಕ್ಕೆ ತಿರುಗಿದ್ದರಿಂದ  ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು. ಭಾರಿ ಸಂಖ್ಯೆಯಲ್ಲಿ ಪ್ರತಿಭಟನಾಕಾರರು ಇದ್ದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿನ ಸಂಚಾರ ಅಸ್ತವ್ಯಸ್ತಗೊಂಡಿತು. ಬೆಳಗ್ಗೆ 11 ಗಂಟೆ ಸುಮಾರಿಗೆ ಪ್ರತಿಭಟನೆ ಆರಂಭಗೊಂಡಿದ್ದು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಯುವಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ ಅಮ್ನೆಸ್ಟಿ ಇಂಡಿಯಾ ಮತ್ತು ಯುನೈಟೆಡ್ ಥಿಯಾಲಜಿಕಲ್ ಕಾಲೇಜು ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿಗಳು ಒತ್ತಾಯಿಸಿದರು. ಪ್ರತಿಭಟನಾ ನಿರತ ಕೆಲವು ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರ ವಿರುದ್ಧವೂ ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ವಾಹನವನ್ನು ಅಡ್ಡಹಾಕಿ, ಪೊಲೀಸರ ವಿರುದ್ಧವೂ ಕಿಡಿ ಕಾರಿದ ಘಟನೆಯೂ ನಡೆಯಿತು.

2016: ನವದೆಹಲಿ: ಪಾಕಿಸ್ತಾನ ಒಂದು ನರಕವಿದ್ದಂತೆ, ಪಾಕಿಸ್ತಾನಕ್ಕೆ ಹೋಗುವುದೆಂದರೆ ನರಕ ಪ್ರವೇಶ ಪಡೆದಂತೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವಾಗ್ದಾಳಿ ನಡೆಸಿದರು.  ಪ್ರಧಾನಿ ನರೇಂದ್ರ ಮೋದಿಯವರು ಪಿಓಕೆ (ಪಾಕ್ ಆಕ್ರಮಿತ ಕಾಶ್ಮೀರ) ಮತ್ತು ಬಲೂಚಿಸ್ತಾನದ ಸ್ವಾತಂತ್ರ್ಯ ಚಳವಳಿಗೆ ಬೆಂಬಲ ನೀಡುವುದಾಗಿ ಘೋಷಿಸಿದ ನಂತರ ಅವರ ಮಾತಿಗೆ ಸಮ್ಮತಿ ಸೂಚಿಸುತ್ತ ಮಾತನಾಡಿದ ಪರಿಕ್ಕರ್, ಪಾಕಿಸ್ತಾನಕ್ಕೆ ನೈತಿಕತೆಯಿಲ್ಲ. ದೊಡ್ಡ ನಷ್ಟ ಉಂಟು ಮಾಡಲು ಆಗದೆ ಸಿಕ್ಕ ಅವಕಾಶದಲ್ಲೆ ಹಾನಿ ಉಂಟು ಮಾಡುವ ರಾಷ್ಟ್ರವೆಂದು ಕುಟುಕಿದರು. ಪಾಕಿಸ್ತಾನ ವಕ್ತಾರ ಸರ್ತಾಜ್ ಅಜೀಜ್ ಮೋದಿಯವರು ತಮ್ಮ ಮಾತಿನ ಮೂಲಕ ಅಂತಾರಾಷ್ಟ್ರೀಯ ಸಮುದಾಯ ಸೆಳೆಯಲು ಯತ್ನಿಸುತ್ತಿದ್ದಾರೆ, ಪಿಓಕೆ ಬಿಕ್ಕಟ್ಟು ಕಳೆದ ಐದು ವರ್ಷದಿಂದ ನಡೆಯುತ್ತಿರುವ ಸಮಸ್ಯೆ ಎಂದಿದ್ದಾರೆ. ಪಿಓಕೆ ಸಮಸ್ಯೆ ಕುರಿತು ಮಾತನಾಡಲು ಭಾರತದ ವಕ್ತಾರ ಎಸ್. ಜೈಶಂಕರ್​ಗೆ ಪಾಕಿಸ್ತಾನ ವಕ್ತಾರ ಚೌಧರಿ ಇಸ್ಲಾಮಾಬಾದಿಗೆ ಆಹ್ವಾನ ನೀಡಿದ್ದು, ಈ ಬಗ್ಗೆ ಪರಿಕ್ಕರ್ ಕಟುವಾಗಿ ಪ್ರತಿಕ್ರಿಯಿಸಿದರು.

2008: ಕಾದಂಬರಿ ಆಧಾರಿತ ಚಿತ್ರಗಳ ನಿರ್ದೇಶಕ ಎಂದೇ ಹೆಸರಾದ ಕೆ.ವಿ.ಜಯರಾಂ (58) ಬೆಂಗಳೂರಿನಲ್ಲಿ ನಿಧನರಾದರು. ಮೂವತ್ತಮೂರು ವರ್ಷ ಕನ್ನಡ ಚಿತ್ರರಂಗದಲ್ಲಿ ಜಯರಾಂ ಸಂಕಲನಕಾರ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಕೊಡುಗೆ ನೀಡಿದ ಜಯರಾಂ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಲ್ಲದೆ 10 ಸಿನಿಮಾಗಳನ್ನು ನಿರ್ಮಿಸಿದ್ದರು.

2007: ಅಮೆರಿಕದಲ್ಲಿ ಉದ್ಭವಿಸಿದ ಸಾಲದ ಬಿಕ್ಕಟ್ಟು ಟೋಕಿಯೊ, ಸಿಡ್ನಿ, ಹಾಂಕಾಂಗ್ ಹಾಗೂ ಮುಂಬೈ ಷೇರುಪೇಟೆ ಮೇಲೆ ತೀವ್ರ ಸ್ವರೂಪದ ಪ್ರಭಾವ ಬೀರಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ 643 ಅಂಶಗಳಷ್ಟು ಕುಸಿತ ದಾಖಲಿಸಿದ್ದರಿಂದ ಹೂಡಿಕೆದಾರರಿಗೆ ಅಂದಾಜು ರೂ 1,70,000 ಕೋಟಿ ರೂಪಾಯಿ ಮೊತ್ತದಷ್ಟು (ಮಾರುಕಟ್ಟೆ ಮೌಲ್ಯ) ನಷ್ಟ ಉಂಟಾಯಿತು. ಸಂವೇದಿ ಸೂಚ್ಯಂಕದ ಈ ಕುಸಿತವು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಅತಿ ದೊಡ್ಡದು. ಕುಸಿತದಲ್ಲಿ ಕೊಚ್ಚಿ ಹೋದ ಮಾರುಕಟ್ಟೆ ಮೌಲ್ಯದ ಲೆಕ್ಕದಲ್ಲಿ ಎರಡನೆ ಅತಿದೊಡ್ಡ ಹಿನ್ನಡೆ.

2007: ಪೆರುವಿನಲ್ಲಿ ಆಗಸ್ಟ್ 15ರ ಸಂಜೆ ಸ್ಥಳೀಯ ಕಾಲಮಾನ ಸಂಜೆ 6.41ಕ್ಕೆ ಸಂಭವಿಸಿದ ಭೂಕಂಪದಲ್ಲಿ ಸತ್ತವರ ಸಂಖ್ಯೆ 337ಕ್ಕೆ ಏರಿದ್ದು ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸರ್ಕಾರ ದೃಢಪಡಿಸಿತು. ಭೂಕಂಪದ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ರಿಕ್ಟರ್ ಮಾಪಕದಲ್ಲಿ 7.9 ಪ್ರಮಾಣದಲ್ಲಿದ್ದ ಭೂಕಂಪ ಪೆರುವಿನ ಹಲವು ನಗರಗಳನ್ನು ನಡುಗಿಸಿತು. ಎರಡು ಬಾರಿ ಪ್ರಬಲ ಕಂಪನ ಸಂಭವಿಸಿದಾಗ ಹಲವು ಮನೆ ಮತ್ತು ಕಟ್ಟಡಗಳು ಉರುಳಿದವು. ಎರಡೂ ಕಂಪನಗಳು ತಲಾ 20 ಸೆಕೆಂಡುಗಳ ಕಾಲ ನಡೆದವು. ಭಯಭೀತರಾದ ಜನರು ರಾತ್ರಿಯನ್ನು ಬೀದಿಯಲ್ಲೇ ಕಳೆದರು. ಪೆರುವಿನ ದಕ್ಷಿಣ ತೀರದ ನಗರಗಳಾದ ಪಿಸ್ಕೊ, ಚಿಂಚಾ ಹಾಗು ಸುತ್ತಮುತ್ತಲಿನ ಪ್ರದೇಶಗಳು ಹೆಚ್ಚಿನ ಹಾನಿಗೆ ಒಳಗಾದವು. ರಾಜಧಾನಿ ಲಿಮಾದಿಂದ 300 ಕಿ.ಮೀ ದೂರದಲ್ಲಿರುವ ಕರಾವಳಿ ನಗರ ಇಕಾದಲ್ಲಿರುವ ಸೆನ್ಸರ್ ಡಿ ಲುರೆನ್ ಇಗರ್ಜಿ (ಚರ್ಚ್) ಕುಸಿದು ಬಿದ್ದಿತು.

2007: ಬಾಹ್ಯಾಕಾಶ ಉಡುಗೆಯಲ್ಲಿ ಸಣ್ಣ ರಂಧ್ರ ಕಾಣಿಸಿಕೊಂಡ ಕಾರಣ ಗಗನಯಾತ್ರಿ ರಿಕ್ ಮಾಸ್ಟ್ರಷಿಯೊ ಬಾಹ್ಯಾಕಾಶ ನಡಿಗೆಯನ್ನು ಅನಿವಾರ್ಯವಾಗಿ ಮೊಟಕುಗೊಳಿಸಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಸೆಸ್) ಹಿಂದಿರುಗಿದರು. ಮೂರು ಬಾರಿ ಬಾಹ್ಯಾಕಾಶ ನಡಿಗೆ ಕೈಗೊಂಡಿದ್ದ ರಿಕ್ ಮಾಸ್ಟ್ರಷಿಯೊ ಅವರು ಧರಿಸಿದ್ದ ಕೈಗವುಸಿನಲ್ಲಿ ಸಣ್ಣ ರಂಧ್ರ ಕಾಣಿಸಿತು. ಮುನ್ನೆಚ್ಚರಿಕೆ ಕ್ರಮವಾಗಿ ಕೂಡಲೇ ರಿಕ್ ಐಎಸ್ಸೆಸ್ಸಿಗೆ ಮರಳಿದರು. ಗಗನಯಾತ್ರಿಗಳನ್ನು ಒಳಗೊಂಡ ಎಂಡೆವರ್ ವ್ಯೋಮನೌಕೆ ಐಎಸ್ಸೆಸ್ ತಲುಪಿದ ಬಳಿಕ ಬಳಿಕ ಗಗನಯಾತ್ರಿಗಳು ಮೂರು ಬಾರಿ ವ್ಯೋಮನಡಿಗೆ ಕೈಗೊಂಡರು. ರಿಕ್ ಜೊತೆ ವ್ಯೋಮನಡಿಗೆ ಕೈಗೊಂಡ ಕ್ಲೇ ಆಂಡರ್ ಸನ್ ತಮ್ಮ ಕೆಲಸ ಯಶಸ್ವಿಯಾಗಿ ಪೂರ್ತಿಗೊಳಿಸಿದರು.

2007: ಭಾರತಕ್ಕೆ ಯುರೇನಿಯಂ ಮಾರಾಟ ಮಾಡಲು ತೀರ್ಮಾನಿಸಿದ ಒಂದು ದಿನದ ಬಳಿಕ ಆಸ್ಟ್ರೇಲಿಯಾ ಸರ್ಕಾರವು `ಭಾರತ ಮುಂದೆ ಯಾವುದೇ ಅಣ್ವಸ್ತ್ರ ಪರೀಕ್ಷೆ ನಡೆಸುವುದಿಲ್ಲವೆಂಬ ಅಂತಾರ್ರಾಷ್ಟ್ರೀಯ ಕಾನೂನಿಗೆ ಬದ್ಧವಾಗಿರುವ ಭರವಸೆ ನೀಡಬೇಕು' ಎಂದು ಹೊಸ ಷರತ್ತು ವಿಧಿಸಿತು.

2007: ಈ ಮೊದಲು ದೇಶಿ ಹೆಲಿಕಾಪ್ಟರಿಗೆ ಅಳವಡಿಸಿದ್ದ ಫ್ರಾನ್ಸ್ ನಿರ್ಮಿತ ಎಂಜಿನ್ನಿಗಿಂತ ಹೆಚ್ಚು ದಕ್ಷತೆಯುಳ್ಳ, ಹೊಸ `ಶಕ್ತಿ' ಎಂಜಿನನ್ನು ಭಾರತ್ ಏರೋನಾಟಿಕ್ಸ್ ಲಿಮಿಡೆಟ್ (ಎಚ್ ಎಎಲ್) ಸಿದ್ಧಪಡಿಸಿರುವುದಾಗಿ ಎಚ್ ಎಎಲ್ ಅಧ್ಯಕ್ಷ ಅಶೋಕ್ ಕೆ. ಬವೇಜಾ ಬೆಂಗಳೂರಿನಲ್ಲಿ ಪ್ರಕಟಿಸಿದರು. ದೇಶಿ ನಿರ್ಮಿತ `ಧ್ರುವ' ಹೆಲಿಕಾಪ್ಟರಿಗೆ ಈ ಮೊದಲು ಫ್ರಾನ್ಸಿನ ಟರ್ಬೊಮಿಕಾ ಕಂಪೆನಿಯ ಎಂಜಿನ್ ಅಳವಡಿಸಲಾಗಿತ್ತು. ಟರ್ಬೊಮಿಕಾ ಕಂಪೆನಿಯ ಸಹಯೋಗದಲ್ಲೇ ಹೊಸ ಎಂಜಿನ್ ಆವಿಷ್ಕರಿಸುವ ಕಾರ್ಯವನ್ನು ಎಚ್ ಎಎಲ್ 2003ರಿಂದ ಕೈಗೊಂಡಿತ್ತು. ಇದರ ಫಲವಾಗಿ ಈ ಹಿಂದೆ ಬಳಸುತ್ತಿದ್ದ ಟಿಎಂ 333-2ಬಿ2 ಎಂಜಿನ್ನಿನಿಂದ ಪಡೆಯುತ್ತಿದ್ದ 800 ಕಿಲೋ ವ್ಯಾಟ್ ಶಕ್ತಿಯ ಬದಲು, ಶಕ್ತಿ ಎಂಜಿನ್ನಿನಿಂದ 1000 ಕಿಲೋ ವ್ಯಾಟ್ ಶಕ್ತಿ ಪಡೆಯಲು ಸಾಧ್ಯವಾಗಿದೆ. ಹೆಲಿಕಾಪ್ಟರ್ ಭೂಮಿಯ ಮೇಲೆ ಎತ್ತರದಲ್ಲಿ ಹಾರುವಾಗ ಹೊಸ ಎಂಜಿನ್ ಮೊದಲಿನ ಎಂಜಿನ್ನಿಗಿಂಗ ಶೇ 150 ಪಟ್ಟು ಅಧಿಕ ಸಾಮರ್ಥ್ಯವನ್ನು ಹೊಂದಿರುತ್ತದೆ. ವಿವಿಧ ಪ್ರದೇಶಗಳಲ್ಲಿನ ಹವಾಮಾನ ವೈಪರೀತ್ಯ ಸಂದರ್ಭದಲ್ಲೂ `ಶಕ್ತಿ ಎಂಜಿನ್' ಕಾರ್ಯದಕ್ಷತೆ ಸಮರ್ಪಕವಾಗಿದೆ ಎಂದು ಬವೇಜಾ ತಿಳಿಸಿದರು.

2006: ಇಂಫಾಲದ ಇಸ್ಕಾನ್ (ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ) ದೇಗುಲ ಆವರಣದಲ್ಲಿ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡು ಕನಿಷ್ಠ ಐವರು ಮೃತರಾಗಿ ಇತರ 30ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2006: ಪದವಿಪೂರ್ವ ಪಠ್ಯಕ್ರಮದಲ್ಲಿ ಅಯೋಧ್ಯೆ ವಿವಾದ, 2002ರ ಗುಜರಾತ್ ಗಲಭೆ ಮತ್ತು 1984ರ ಸಿಖ್ ನರಮೇಧದ ಇತಿಹಾಸವನ್ನು ಸೇರ್ಪಡೆ ಮಾಡಲು ಎನ್ಸಿಇಆರ್ಟಿ ನಿರ್ಧರಿಸಿತು.

2000: ಮೆಲ್ಬೋರ್ನಿನ ಕೊಲೊನಿಯಲ್ ಇಂಡೋರ್ ಸ್ಟೇಡಿಯಮ್ಮಿನಲ್ಲಿ ಮೊತ್ತ ಮೊದಲ ಒಂದು ದಿನದ ಒಳಾಂಗಣ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಯಿತು. ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕ ನಡುವೆ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ 94 ರನ್ನುಗಳ ಜಯ ಗಳಿಸಿತು.

1965: ಕಾಶ್ಮೀರ ರೇಖೆ ದಾಟಿದ ಭಾರತೀಯ ರಕ್ಷಣಾ ಪಡೆಗಳಿಂದ ಎರಡು ಪಾಕಿಸ್ತಾನಿ ಶಿಬಿರಗಳ ವಶ.

1960: ಸೈಪ್ರಸ್ ಸ್ವತಂತ್ರ ಗಣರಾಜ್ಯವಾಯಿತು. ಆರ್ಚ್ ಬಿಷಪ್ ಮಕಾರಿಯೋಸ್ ಮೊದಲ ಅಧ್ಯಕ್ಷರಾದರು.

1956: ಬೆಂಗಳೂರಿನ ರೆಸಿಡೆನ್ಸಿಯಲ್ಲಿ ನಡೆದ ಮೈಸೂರು ಶಾಸನ ಸಭೆಯ ಕಾಂಗ್ರೆಸ್ ಪಕ್ಷದ ಸಭೆಯು ತಮ್ಮ ನಾಯಕತ್ವಕ್ಕೆ ಕೆ. ಹನುಮಂತಯ್ಯ ಅವರು ನೀಡಿದ ರಾಜೀನಾಮೆಯನ್ನು ಸರ್ವಾನುಮತದಿಂದ ಅಂಗೀಕರಿಸಿ ಹಾಲಿ ಮಂತ್ರಿಮಂಡಳದ ಸಚಿವ ಕಡಿದಾಳ್ ಮಂಜಪ್ಪ ಅವರನ್ನು ಬಹುಮತದೊಂದಿಗೆ ನಾಯಕನನ್ನಾಗಿ ಆರಿಸಿತು. ಮತ್ತೆ ಸ್ಪರ್ಧಿಸಿದ ಮುಖ್ಯಮಂತ್ರಿ ಹನುಮಂತಯ್ಯ ಸೋತರು.

1946: ಕಾಂಗ್ರೆಸ್ ಸದಸ್ಯರನ್ನು ಮಾತ್ರ ಸೇರಿಸಿಕೊಂಡು ತನ್ನ ಎಕ್ಸಿಕ್ಯೂಟಿವ್ ಕೌನ್ಸಿಲನ್ನು ಪುನರ್ರಚಿಸಲು ವೈಸ್ ರಾಯ್ ಕೈಗೊಂಡ ತೀರ್ಮಾನವನ್ನು ಪ್ರತಿಭಟಿಸಲು ಮುಸ್ಲಿಂ ಲೀಗ್ ಭಾರತದಲ್ಲಿ `ನೇರ ಕಾರ್ಯಾಚರಣೆ' ದಿನ ಆಚರಿಸಿತು. ಕ್ಯಾಬಿನೆಟ್ ಮಿಷನ್ ಯೋಜನೆಯ ಪ್ರಸ್ತಾವಗಳನ್ನು ತಿರಸ್ಕರಿಸಿದ ಕಾಂಗ್ರೆಸ್ ನೂತನ ಸಂವಿಧಾನ ರಚನೆಯ ಉದ್ದೇಶಕ್ಕಾಗಿ ಸಂವಿಧಾನ ಸಭೆ ಸೇರುವ ಪ್ರಸ್ತಾವ ಮುಂದಿಟ್ಟಿತ್ತು. ಆದರೆ ಕ್ಯಾಬಿನೆಟ್ ಮಿಷನ್ ಯೋಜನೆಯ ಪ್ರಸ್ತಾವಗಳನ್ನು ಅಂಗೀಕರಿಸಿ ವೈಸ್ ರಾಯ್ ಅವರು ಕಾಂಗ್ರೆಸ್ಸನ್ನು ಹೊರತು ಪಡಿಸಿ ಪ್ರಾಂತೀಯ ಸರ್ಕಾರ ರಚಿಸಬೇಕು ಎಂದು ಮುಸ್ಲಿಂ ಲೀಗ್ ಬಯಸಿತು. ಈ ಪ್ರಸ್ತಾವ ಸ್ವೀಕೃತಗೊಳ್ಳದೇ ಹೋದ್ದರಿಂದ ಮುಸ್ಲಿಂಲೀಗ್ ಪ್ರಸ್ತಾವಗಳಿಗೆ ತಾನು ನೀಡಿದ್ದ ಸಮ್ಮತಿಯನ್ನು ಹಿಂತೆಗೆದುಕೊಂಡು `ನೇರ ಕಾರ್ಯಾಚರಣೆ'ಗೆ ಕರೆ ನೀಡಿತು. ಈ ಕಾರ್ಯಾಚರಣೆ ಬಹುತೇಕ ಕಡೆಗಳ್ಲಲಿ ಶಾಂತಿಯುತವಾಗಿ ನಡೆದರೂ ಕಲ್ಕತ್ತದಲ್ಲಿ (ಇಂದಿನ ಕೊಲ್ಕತ್ತಾ) ಕೋಮು ಗಲಭೆಗಳು ಭುಗಿಲೆದ್ದು 5000ಕ್ಕೂ ಹೆಚ್ಚು ಜನ ಸತ್ತು 15,000 ಜನ ಗಾಯಗೊಂಡರು.

1941: ಸಾಹಿತಿ ವೆಂಕಟಪ್ಪ ಬಿ. ಜನನ.

1936: ಬರ್ಲಿನ್ನಿನಲ್ಲಿ 11ನೇ ಒಲಿಂಪಿಕ್ಸ್ ಕ್ರೀಡಾಕೂಟ ಮುಕ್ತಾಯಗೊಂಡಿತು.

1931: ಸಾಹಿತಿ ಮೈ.ಸು.ಶೇ. ಜನನ.

1929: ಆಕಾಶವಾಣಿ ಈರಣ್ಣ ಎಂದೇ ಖ್ಯಾತರಾದ ಸಾಹಿತಿ, ನಾಟಕಕಾರ, ಪತ್ರಿಕೋದ್ಯಮಿ, ಅಂಕಣಕಾರ ಎ.ಎಸ್. ಮೂರ್ತಿ ಅವರು ಕಲಾ ಮಂದಿರದ ಸ್ಥಾಪಕ ಅ.ನ. ಸುಬ್ಬರಾಯರು- ಗೌರಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು. ನಾಟಕಗಳ ಮೂಲಕವೇ ಜನಪ್ರಿಯತೆ ಗಳಿಸಿದ ಮೂರ್ತಿ ಅವರ ಬಗಲಿಗೆ ನಾಟಕ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಗೋರೂರು ಪ್ರಶಸ್ತಿ, ಸಂದೇಶ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ರಂಗ ನಿರಂತರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿವೆ.

1908: ಮಹಾತ್ಮಾ ಗಾಂಧಿ ಅವರ ನೇತೃತ್ವದಲ್ಲಿ 3000 ಮಂದಿ ಭಾರತೀಯರು ಜೊಹಾನ್ನೆಸ್ ಬರ್ಗ್ ನ ಹಮೀದಾ ಮಸೀದಿಯ್ಲಲಿ `ನೋಂದಣಿ ಸರ್ಟಿಫಿಕೇಟು'ಗಳನ್ನು ಸುಟ್ಟು ಹಾಕಿದರು. (ಎಂಟು ವರ್ಷ ಮೇಲ್ಪಟ್ಟ ಪ್ರತಿ ಪುರುಷ, ಮಹಿಳೆ, ಮಗು ಈ ಸರ್ಟಿಫಿಕೇಟ್ ಹೊಂದಿರಬೇಕಾದುದು ಕಡ್ಡಾಯವಾಗಿತ್ತು). ಹೊಸ ವಲಸೆ ಕಾಯ್ದೆಯನ್ನು ಆಗಸ್ಟ್ 16ರ ಒಳಗಾಗಿ ತಿದ್ದುಪಡಿ ಮಾಡದೇ ಇದ್ದರೆ ಭಾರತೀಯರು ಸ್ವಯಂ ಇಚ್ಛೆಯಿಂದ ಪಡೆದ ಈ ಸರ್ಟಿಫಿಕೇಟುಗಳನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿ ಪರಿಣಾಮ ಎದುರಿಸುವರು ಎಂದು ಘೋಷಿಸಿ ಗಾಂಧೀಜಿ ಅವರು ಜನರಲ್ ಜಾನ್. ಸಿ. ಸ್ಮಟ್ಸ್ ಅವರಿಗೆ ಸಂದೇಶ ಕಳುಹಿಸಿದ ಬಳಿಕ ಈ ಘಟನೆ ನಡೆಯಿತು.

1886: ಶ್ರೀ ರಾಮಕೃಷ್ಣ ಪರಮಹಂಸರು ತಮ್ಮ 50ನೇ ವಯಸ್ಸಿನಲ್ಲಿ ಕಲ್ಕತ್ತದಲ್ಲಿ ದಿವಂಗತರಾದರು.

No comments:

Post a Comment