Friday, March 31, 2023

PARYAYA: ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ… ಆತ್ಮ ನಿರ್ಭರ ಗ್ರಾಮ ಪಂಚಾಯಿತಿ...

 ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ… ಆತ್ಮ ನಿರ್ಭರ ಗ್ರಾಮ ಪಂಚಾಯಿತಿ..!


ಇವರು 

ಶ್ರೀ ವೆಂಕಟೇಶ ಮೂರ್ತಿಅರಸೀಕೆರೆ  ತಾಲೂಕಿನ ಕೊರವಂಕ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು.

ಅಂದು ಭಾನುವಾರ. 2023ರ ಫೆಬ್ರುವರಿ 12. ಬೆಳಗ್ಗೆ ಚಹಾ ಕುಡಿಯುತ್ತಾ ʼಪ್ರಜಾವಾಣಿʼ ಪತ್ರಿಕೆ ಕೈಗೆತ್ತಿಕೊಂಡರು.

ಪತ್ರಿಕೆ ಓದುತ್ತಾ ಸಾಪ್ತಾಹಿಕ ಪುರವಣಿ ಕಡೆಗೆ ಗಮನ ಹರಿಸಿದರು. ಅಲ್ಲಿ ಆತ್ಮ ನಿರ್ಭರ ಗ್ರಾಪಂ ಕಟ್ಟಲು ಕೈಪಿಡಿʼ ಎಂಬ ಬರಹದ ಕಡೆಗೆ ಅವರ ಗಮನ ಹರಿಯಿತು. ಪೂರ್ತಿಯಾಗಿ ಅದನ್ನು ಓದಿದರು. ಅದು ʼ21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯತಿʼ ಪುಸ್ತಕದ ಬಗೆಗಿನ ಬರಹ. ಓದಿ ಮುಗಿಸುತ್ತಿದ್ದಂತೆ ಈ ಪುಸ್ತಕವನ್ನು ಕೊಳ್ಳಲೇಬೇಕು ಎಂದು ಅನಿಸಿತು.  ಕೂಡಲೇ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿನ ಸಂಪೂರ್ಣ ಸ್ವರಾಜ್‌ ಸಂಸ್ಥೆಯ ವಿಳಾಸವನ್ನು ಗುರುತು ಹಾಕಿಕೊಂಡು, ಅಲ್ಲಿಗೆ ದೌಡಾಯಿಸಿದರು. ಪುಸ್ತಕದ ಒಂದು ಪ್ರತಿಯನ್ನು ಕೊಂಡು ಕೊಂಡು ಮನೆಗೆ ವಾಪಸಾದರು. ಮನೆಗೆ ವಾಪಸಾಗುತ್ತಲೇ ಅದರ ಪುಟಗಳನ್ನು ತಿರುವಿ ಹಾಕುತ್ತಾ ಹೋದರು.


ಪುಸ್ತಕವನ್ನು ಓದುತ್ತಿದ್ದಂತೆಯೇ ಅವರಿಗೆ ಮನಸ್ಸಿಗೆ ಬಂದ ಯೋಚನೆ- ʼನಾನು ಯಾಕೆ ಅರಸೀಕೆರೆ  ತಾಲೂಕಿನಲ್ಲಿ ಇರುವ ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಈ ಪುಸ್ತಕದ ಒಂದೊಂದು ಪ್ರತಿಯನ್ನು ಕೊಡಬಾರದು?”. ವೆಂಕಟೇಶ ಮೂರ್ತಿ ಅವರು ತಡ ಮಾಡಲಿಲ್ಲ. ಸಂಪೂರ್ಣ ಸ್ವರಾಜ್‌ ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಟ್ರಸ್ಟಿ ಡಾ. ಶಂಕರ ಕೆ. ಪ್ರಸಾದ್‌ ಅವರನ್ನು ಸಂಪರ್ಕಿಸಿದರು. ಅರಸೀಕೆರೆ  ತಾಲೂಕಿನ ನಲ್ವತ್ತನಾಲ್ಕು ಗ್ರಾಮ ಪಂಚಾಯಿತಿಗಳಿಗೆ ಬೇಕಾಗುವಷ್ಟು ಪುಸ್ತಕಗಳನ್ನು ಖರೀದಿಸಿದರು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳ ಮೂಲಕ ಎಲ್ಲ ಗ್ರಾಮ ಪಂಚಾಯಿತಿಗಳಿಗೂ ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡಿದರು.

ಇಷ್ಟಕ್ಕೂ ಪ್ರಜಾವಾಣಿಯ ಆ ಲೇಖನದಲ್ಲಿ ಇದ್ದುದಾದರೂ ಏನು? ಪೂರ್ತಿ ಲೇಖನವನ್ನೇನೂ ಇಲ್ಲಿ ಹೇಳುವುದಿಲ್ಲ. ಆದರೆ ಆದರೆ ಸಾರಾಂಶ ಇಷ್ಟು: “ಈ ಕೃತಿ ಯಾರಿಗಾಗಿ ಎನ್ನುವ ಪ್ರಶ್ನೆಗೆ ಲೇಖಕರು ಆರಂಭದಲ್ಲೇ ಸ್ಪಷ್ಟ ಉತ್ತರ ನೀಡಿದ್ದಾರೆ. ಗ್ರಾಮದ ಅಭಿವೃದ್ಧಿಯ ಜವಾಬ್ದಾರಿ ಹೊತ್ತ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನೇ ಈ ಕೃತಿಯ ಮೊದಲ ಓದುಗರನ್ನಾಗಿ ಲೇಖಕರು ಆಯ್ಕೆ ಮಾಡಿದ್ದಾರೆ. ಜೊತೆಗೆ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಪಿಡಿಒ ಹಾಗೂ  ಕಾರ್ಯದರ್ಶಿಗಳಿಗೂ ಇದು ಮಾರ್ಗದರ್ಶಿಯಾಗಬಲ್ಲುದು. ಜೊತೆಗೆ ಇಲ್ಲಿರುವ ವಿಷಯಗಳನ್ನು ಅರಿತರೆ ಗ್ರಾಮದ ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳು ಹಾಗೂ ತನ್ನ ಗ್ರಾಮಕ್ಕೆ ಸಿಗಬೇಕಾದ ಸವಲತ್ತುಗಳ ಬಗ್ಗೆ ಸ್ಥಳೀಯ ಸರ್ಕಾರಕ್ಕೆ ಆಗ್ರಹಿಸಬಹುದಾಗಿದೆ.”

ಪ್ರಜಾವಾಣಿ ಅಷ್ಟೇ ಅಲ್ಲ, ವಿಜಯ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲೂ ಈ ಪುಸ್ತಕದ ಬಗ್ಗೆ ವಿವರಗಳು ಬಂದಿವೆ. ಪುಸ್ತಕದ ಬಗ್ಗೆ ವಿವರ ಆ ಪುಸ್ತಕ ರೂಪುಗೊಂಡದ್ದರ ಹಿಂದಿನ ಶ್ರಮ, ಅದರಲ್ಲಿ ವಿವರಿಸಿರುವ ವಿವಿಧ ವಿಚಾರಗಳ ಬಗ್ಗೆ ಈ ಪತ್ರಿಕೆಗಳು ಬರೆದಿವೆ. ಭಾರತವು ಆತ್ಮ ನಿರ್ಭರ ಆಗಬೇಕಿದ್ದರೆ ಹೇಗೆ ಮೊದಲು ಗ್ರಾಮಗಳು ಆತ್ಮ ನಿರ್ಭರ ಆಗಬೇಕು, ಗ್ರಾಮದ ಅಭ್ಯುದಯಕ್ಕೆ ಪಂಚಾಯಿತಿಗಳು ಹೇಗೆ ಕೆಲಸ ಮಾಡಬಹುದು, ನವೀನ ತಂತ್ರಜ್ಞಾನಗಳನ್ನು ಬಳಸಬಹುದು ಎಂಬಿತ್ಯಾದಿ ವಿವರಗಳು ಪುಸ್ತಕದಲ್ಲಿ ಇರುವ ಬಗ್ಗೆ ಉಲ್ಲೇಖಿಸಿವೆ.

ಕೊರವಂಕದ ವೆಂಕಟೇಶ ಮೂರ್ತಿಯವರ ಹಾಗೆ ಹತ್ತಾರು ಮಂದಿ ಇದೀಗ ಈ ಪುಸ್ತಕದ ಬಗ್ಗೆ ಗಮನಿಸುತ್ತಿದ್ದಾರೆ. ಗದಗದಲ್ಲಿ ಇತ್ತೀಚೆಗೆ ನಡೆದ ʼಸ್ವಯಂ ಆಡಳಿತದ ದೇಶೀ ಮಾದರಿಗಳುʼ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು ಈ ಪುಸ್ತಕದ ಬಗ್ಗೆ ಕುತೂಹಲದಿಂದ ವಿಚಾರಿಸಿದರು. ಬಹಳಷ್ಟು ಮಂದಿ ಪುಸ್ತಕಗಳಿಗಾಗಿ ʼಆರ್ಡರ್‌ʼ ನೀಡಿದರು. ಬಹಳಷ್ಟು ಮಂದಿ ಕುತೂಹಲದಿಂದ ಪುಸ್ತಕದ ಬಗ್ಗೆ ವಿಚಾರಿಸುತ್ತಿದ್ದಾರೆ. ವಾಟ್ಸಪ್‌ ಸಂದೇಶಗಳನ್ನೂ ಕಳುಹಿಸುತ್ತಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಅವರು ಕೂಡಾ ಇತ್ತೀಚೆಗೆ ತಮ್ಮನ್ನು ಭೇಟಿ ಮಾಡಿದ್ದ ಡಾ. ಶಂಕರ ಪ್ರಸಾದ್‌ ಅವರ ಜೊತೆಗೆ ಪುಸ್ತಕದ ಬಗ್ಗೆ ಕುತೂಹಲದಿಂದ ವಿಚಾರಿಸಿದರು.


ಹೌದು, ವಿವಿಧ ವಲಯಗಳಲ್ಲಿ ಇದೀಗ ಈ ʼಆತ್ಮ ನಿರ್ಭರ ಗ್ರಾಮ ಪಂಚಾಯಿತಿʼ ಪುಸ್ತಕ ಸದ್ದಿಲ್ಲದೆಯೇ ಸುದ್ದಿ ಮಾಡುತ್ತಿದೆ. ಡಾ. ಶಂಕರ ಪ್ರಸಾದ್‌ ಅವರು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೂ ಪುಸ್ತಕವನ್ನು ಅರ್ಪಿಸಿದ್ದಾರೆ. ಮುಖ್ಯಮಂತ್ರಿಯಿಂದಲೂ ಈ ಸಾಹಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸಧ್ಯಕ್ಕೆ ಈ ಪುಸ್ತಕದ ಕನ್ನಡ ಆವೃತ್ತಿ ಲಭ್ಯವಿದೆ. ಪುಸ್ತಕದ ಇಂಗ್ಲಿಷ್‌ ಮತ್ತು ಹಿಂದಿ ಆವೃತ್ತಿಗಳನ್ನು ಶೀಘ್ರದಲ್ಲೇ ಹೊರ ತರುವ ನಿಟ್ಟಿನಲ್ಲೂ ಕೆಲಸ ನಡೆಯುತ್ತಿದೆ.

ಪುಸ್ತಕದ ಕನ್ನಡ ಆವೃತ್ತಿಯ ಪ್ರತಿಗಳನ್ನು  ಸಂಪೂರ್ಣ ಸ್ವರಾಜ್‌ ಫೌಂಡೇಶನ್ನಿನ ವೆಬ್‌ ಸೈಟ್‌ ಮೂಲಕ (ಲಿಂಕ್:‌ https://www.sampoornaswaraj.org/) ಖರೀದಿಸಬಹುದು. ಭಾರತ ಆತ್ಮ ನಿರ್ಭರ ಆಗಬೇಕು ಎಂಬುದಾಗಿ ನೀವು ಬಯಸುತ್ತಿದ್ದರೆ, ಪಂಚಾಯತಿಯನ್ನು ಮೊದಲು ಆತ್ಮ ನಿರ್ಭರವನ್ನಾಗಿ ಮಾಡುವತ್ತ ಗಮನಿಸಿ. ಅದಕ್ಕೆ ಮಾರ್ಗದರ್ಶಿ ಈ ಪುಸ್ತಕ- ಈಗಲೇ ಕೊಂಡುಕೊಳ್ಳಿ.

ವಿಡಿಯೋ ನೋಡಲು ಈ ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:


PARYAYA: ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ… ಆತ್ಮ ನಿರ್ಭರ ಗ್ರಾಮ ಪಂ...:   ಸದ್ದಿಲ್ಲದೆ ಸುದ್ದಿ ಮಾಡುತ್ತಿದೆ… ಆತ್ಮ ನಿರ್ಭರ ಗ್ರಾಮ ಪಂಚಾಯಿತಿ..! ಇವರು ಶ್ರೀ ವೆಂಕಟೇಶ ಮೂರ್ತಿ . ಅರಸೀಕರೆ ತಾಲೂಕಿನ ಕೊರವಂಕ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ...

Saturday, March 25, 2023

PARYAYA: ಕಾವೇರಿಗಾಗಿ ಭಗೀರಥ ಹೋರಾಟ…!

 ಕಾವೇರಿಗಾಗಿ ಭಗೀರಥ ಹೋರಾಟ…!


ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಕಾವೇರಿ ನೀರು ಕೆಲ ಸಮಯದಿಂದ ಜೋರಾಗಿ ಸದ್ದು ಮಾಡುತ್ತಿದೆ. ಬ್ಯಾಟರಾಯನಪುರ ಶಾಸಕ ಶ್ರೀ ಕೃಷ್ಣ ಭೈರೇಗೌಡ ಅವರು ಇಲ್ಲಿ ಬೆಂಗಳೂರಿನಲ್ಲಿಯೇ ಅತಿ ದೊಡ್ಡದಾದ ಬೃಹತ್‌ ನೀರಿನ ಟ್ಯಾಂಕ್‌ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದಾರೆ.

ನಾಗವಾರದ ಬಳಿಕ ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದವರೆಗಿನ ಈ ಪ್ರದೇಶದಲ್ಲಿ ಅಂದರೆ ಥಣಿಸಂದ್ರ, ರಾಮಕೃಷ್ಣ ಹೆಗಡೆ ನಗರ, ಶಬರಿ ಬಡಾವಣೆ, ರಾಮಕೃಷ್ಣ ಹೆಗಡೆ ನಗರ, ಎಂಸಿಎಸಿಎಚ್‌, ಶಿವರಾಮ ಕಾರಂತ ನಗರ, ಸೆಂಟ್ರಲ್‌ ಎಕ್ಸೈಸ್‌ ಬಡಾವಣೆ, ಸಂಪಿಗೆ ಹಳ್ಳಿ, ಜಕ್ಕೂರು, ಭಾರತೀಯ ಸಿಟಿ, ಚೊಕ್ಕನಹಳ್ಳಿ, ವಿನಾಯಕ ನಗರ, ಕೋಗಿಲು, ಬಾಗಲೂರು ಸೇರಿದಂತೆ ಈ ಪ್ರದೇಶದಲ್ಲಿ ಅಭಿವೃದ್ಧಿ ಜೋರಾಗಿದೆ. ಮೂಲಭೂತ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲೂ ಸಾಕಷ್ಟು ಕ್ರಮಗಳಾಗುತ್ತಿವೆ.

ಇಲ್ಲಿ ನೀರಿನ ಸಮಸ್ಯೆ ಮಾತ್ರ ಬಹಳ ವರ್ಷಗಳಿಂದ ಕಾಡುತ್ತಿದ್ದು ಬಹುತೇಕ ಜನರಿಗೆ ಕೊಳವೆ ಬಾವಿ ನೀರೇ ಜೀವನಕ್ಕೆ ಆಧಾರವಾಗಿದೆ. ಈ ಹಿನ್ನೆಲೆಯಲ್ಲೇ ಈ ಪ್ರದೇಶ ಅಂದರೆ ಬ್ಯಾಟರಾಯನಪುರ ಕ್ಷೇತ್ರದ ಶಾಸಕರಾದ ಶ್ರೀ ಕೃಷ್ಣ ಭೈರೇಗೌಡ ಅವರು ಇಲ್ಲಿಗೆ ಕಾವೇರಿ ನೀರನ್ನು ತರುವ ಮೂಲಕ ಶಾಶ್ವತ ಪರಿಹಾರ ತರಬೇಕು ಎಂಬ ಪ್ರಯತ್ನಕ್ಕೆ ಕೈ ಹಾಕಿದರು.

ನಾಲ್ಕೈದು ವರ್ಷಗಳ ಹಿಂದೆ ಅಂದರೆ ೨೦೧೮-೧೯ರ ಸುಮಾರಿಗೆ ಜಿಕೆವಿಕೆಯಿಂದ ಈ ಪ್ರದೇಶಕ್ಕೆ ಕಾವೇರಿ ನೀರು ಒದಗಿಸಲು ನೀರಿನ ಪೈಪ್‌ ಲೈನ್‌ ಹಾಕಿಸಿದರು. ಹಾಗೆಯೇ ಇಲೊಂದು ಬೃಹತ್‌ ನೀರಿನ ಟ್ಯಾಂಕ್‌ ನಿರ್ಮಿಸಿ ಅದರ ಮೂಲಕ ಕಾವೇರಿ ನೀರನ್ನು ಈ ಪ್ರದೇಶಕ್ಕೆ ಹರಿಸಬೇಕು ಎಂಬ ಯೋಜನೆ ಹಾಕಿಕೊಂಡು ಕಾರ್ಯ ಪ್ರವೃತ್ತರಾದರು. ಜಾಗವನ್ನೂ ಚೊಕ್ಕನಹಳ್ಳಿ ಪ್ರದೇಶದಲ್ಲಿ ಗುರುತಿಸಿ, ಜಲಮಂಡಳಿಗೆ ಜಾಗವನ್ನೂ ಮಂಜೂರು ಮಾಡಿಸಿಕೊಂಡರು.

ಈ ಬೃಹತ್‌ ನೀರಿನ ಟ್ಯಾಂಕಿಗೆ ಕಾವೇರಿ ನದಿಯಿಂದ ನೀರು ತರಲು, ಇಲ್ಲಿಂದ ಬಡಾವಣೆಗಳಿಗೆ ಅಪಾರ್ಟ್‌ಮೆಂಟುಗಳಿಗೆ ನೀರು ಹರಿಸಲು ಕೊಳವೆಗಳ ಜಾಲವನ್ನೂ ನಿರ್ಮಿಸಿದರು. ಆದರೆ ಈ ಪ್ರದೇಶದ ಜನರ ದುರಾದೃಷ್ಟ. ಜಿಕೆವಿಕೆಯಿಂದ ಹಾಕಿದ ಕೊಳವೆಯ ಮೂಲಕ ಬಾಲಾಜಿ ಕೃಪಾ ಬಡಾವಣೆಯವರೆಗೆ ನೀರು ಸರಾಗವಾಗಿ ಬರಲಿಲ್ಲ.


ಜಲಮಂಡಳಿ ಅಧಿಕಾರಿಗಳಿಗೆ ಜನ ಮಾಡಿದ ಮನವಿಗಳೆಲ್ಲ ನೀರ ಮೇಲಣ ಹೋಮವಾದವು. ಒಂದಿಲ್ಲ ಒಂದು ಕಾರಣದಿಂದ ಅಧಿಕಾರಿಗಳು ಕೊಟ್ಟ ಭರವಸೆ ಈಡೇರಲಿಲ್ಲ. ಜನ ಸಹಜವಾಗಿ ಸಿಟ್ಟಿಗೆದ್ದರು. ಚುನಾವಣೆ ಬಹಿಷ್ಕಾರದ ಬಗ್ಗೆ ಮಾತನಾಡತೊಡಗಿದರು. ಈ ವಿಚಾರ ಸಹಜವಾಗಿಯೇ ಪತ್ರಿಕೆ ಹಾಗೂ ಟಿವಿ ಮಾಧ್ಯಮಗಳಲ್ಲೂ ಪ್ರತಿಫಲಿಸಿದವು.

ಆದರೆ ಈ ಪ್ರದೇಶಕ್ಕೆ ಕಾವೇರಿ ಹರಿಸುವ ಭಗೀರಥ ಪ್ರಯತ್ನ ನಡೆಸಿದ್ದ ಶಾಸಕ ಶ್ರೀ ಕೃಷ್ಣ ಭೈರೇಗೌಡರು ಹೇಳುವ ಪ್ರಕಾರ ಸಮಸ್ಯೆಯ ಮೂಲ ಕಾರಣ ಬೇರೆಯೇ ಆಗಿತ್ತು. ಈ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ನೀರಿನ ಟ್ಯಾಂಕಿಗಾಗಿ ಗುರುತಿಸಲಾಗಿದ್ದ ಸರ್ಕಾರಿ ಜಾಗ ಭೂ ವಿವಾದಕ್ಕೆ ಸಿಕ್ಕಿಹಾಕಿಕೊಂಡಿತ್ತು. ಈ ಸರ್ಕಾರಿ ಜಾಗವನ್ನು ಕಬಳಿಸಲು ಇಲ್ಲಿ ನಿರಂತರ ಯತ್ನ ನಡೆದಿತ್ತು. ಈ ವಿವಾದ ಕೋರ್ಟ್‌ ಮೆಟ್ಟಿಲನ್ನು ಕೂಡಾ ಏರಿತ್ತು. ಈ ಸಿಕ್ಕುಗಳು ಕಾಮಗಾರಿಯನ್ನು ವಿಳಂಬಗೊಳಿಸಿದವು.

ಕಟ್ಟ ಕಡೆಗೂ ೨೦೨೩ ಮಾರ್ಚ್‌ ೨೪ರ ಶುಕ್ರವಾರ ಈ ನೀರಿನ ಟ್ಯಾಂಕಿಗಾಗಿ ಭೂಮಿ ಪೂಜೆ ನಡೆಸುವ ಅವಕಾಶ ಒದಗಿ ಬಂತು. ಜಾಗ ಕಬಳಿಸುವ ಸಲುವಾಗಿ ಸೃಷ್ಟಿಸಲಾಗಿದ್ದ ದಾಖಲೆಗಳೆಲ್ಲವೂ ನಕಲಿ ಎಂಬುದಾಗಿ ಫೋರೆನ್ಸಿಕ್‌ ಲ್ಯಾಬ್‌ ವರದಿಗಳಿಂದ ಖಚಿತವಾಗಿ ಆ ವರದಿಗಳನ್ನು ಆಧರಿಸಿ ನ್ಯಾಯಾಲಯ ಜಲಮಂಡಳಿ ಪರವಾಗಿ ನ್ಯಾಯಾಲಯ ತೀರ್ಪು  ಕೊಟ್ಟಿದೆ.

ಇದನ್ನು ಆಧರಿಸಿಯೇ ಭೂಮಿ ಪೂಜೆ ನೆರವೇರಿಸಿದ ಈ ಸಂದರ್ಭದಲ್ಲಿ ಕೃಷ್ಣ ಭೈರೇಗೌಡ ಅವರು ʼಕಾವೇರಿ ನೀರು ತರಲು ನಡೆಸಿದ ಈ ʼಭಗೀರಥʼ ಹೋರಾಟದ ಕಥೆಯನ್ನು ಸವಿಸ್ತಾರವಾಗಿಯೇ ಬಿಚ್ಚಿಟ್ಟರು. ಸಂಭ್ರಮದ ವಾತಾವರಣದಲ್ಲಿ ಭೂಮಿ ಪೂಜೆ ನೆರವೇರಿಸಿದರು. ಈ ಟ್ಯಾಂಕ್‌ ಸಾಮರ್ಥ್ಯ ೬೫ ಎಂಎಲ್‌ ಡಿ ಆಗಿದ್ದು (ದಿನಕ್ಕೆ ೬೫೦ ಲಕ್ಷ ಲೀಟರ್), ಇದನ್ನು  ೧೫ ಎಂಎಲ್‌ ಡಿಯಷ್ಟು ಹೆಚ್ಚಿಸುವ ಅವಕಾಶಗಳಿವೆ. ಇದು ಆಸು ಪಾಸಿನ ಸುಮಾರು ಒಂದು ಲಕ್ಷ ಜನರ ನೀರಿನ ಸಮಸ್ಯೆ ನಿವಾರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.

ಓದಿರಿ: ಬಾಲಾಜಿ ಕೃಪಾ ಬಡಾವಣೆಗೆ ‘ಕಾವೇರಿ’ ಆಗಮನ

PARYAYA: ಕಾವೇರಿಗಾಗಿ ಭಗೀರಥ ಹೋರಾಟ…!:   ಕಾವೇರಿಗಾಗಿ ಭಗೀರಥ ಹೋರಾಟ…! ಬೆಂಗಳೂರಿನ ರಾಮಕೃಷ್ಣ ಹೆಗಡೆ ನಗರ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ಕಾವೇರಿ ನೀರು ಕೆಲ ಸಮಯದಿಂದ ಜೋರಾಗಿ ಸದ್ದು ಮಾಡುತ್ತಿದೆ. ಬ್ಯಾಟ...