Sunday, May 28, 2023

PARYAYA: ನೂತನ ಸಂಸತ್‌ ಭವನ ದೇಶಕ್ಕೆ ಅರ್ಪಣೆ

 ನೂತನ ಸಂಸತ್‌ ಭವನ ದೇಶಕ್ಕೆ ಅರ್ಪಣೆ

ವೇದಘೋಷ, ಸರ್ವ ಪಂಥ ಪ್ರಾರ್ಥನೆ, ಮಂತ್ರಗಳ ಪಠಣ, ಲೋಕಸಭಾಧ್ಯಕ್ಷರ ಪೀಠದ ಬಲಭಾಗದಲ್ಲಿ ʼರಾಜದಂಡʼ (ಸೆಂಗೋಲ್)‌ ಪ್ರತಿಷ್ಠಾಪನೆಯ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ೨೦೨೩ ಮೇ ೨೮ರ ಭಾನುವಾರ ಸಂಸತ್ತಿನ ನೂತನ ಕಟ್ಟಡವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶಕ್ಕೆ ಅರ್ಪಿಸಿದರು.. 

ಇತರ ದೇಶಗಳ ಪ್ರಗತಿಗೆ ಪ್ರೇರಣೆ ನೀಡುವ ಸ್ವಾವಲಂಬಿ ಮತ್ತು ಅಭಿವೃದ್ಧಿ ಹೊಂದಿದ ಭಾರತದ ಉದಯವನ್ನು ಗುರುತಿಸುವ "ಅಮರ" ಕ್ಷಣ ಇದು ಎಂದು ಪ್ರಧಾನ ಮಂತ್ರಿ ಸಮಾರಂಭವನ್ನು ಬಣ್ಣಿಸಿದರು.

ಪ್ರಧಾನಿ ಮೋದಿಯವರು 'ಸೆಂಗೊಲ್'ಗೆ ಸಾಷ್ಟಾಂಗ ನಮಸ್ಕಾರ ಮಾಡಿ ಬಳಿಕ ಅದನ್ನು ಲೋಕಸಭಾಧ್ಯಕ್ಷರ ಪೀಠದ ಬಲಬದಿಯಲ್ಲಿ ಪ್ರತಿಷ್ಠಾಪಿಸಿದರು.

ʼಸೆಂಗೋಲ್‌ʼ ಹಸ್ತಾಂತರವು ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಚೋಳ ರಾಜವಂಶದಲ್ಲಿ ನೂತನ ದೊರೆಗೆ ಅಧಿಕಾರ ಹಸ್ತಾಂತರವನ್ನು ಸಂಕೇತಿಸುತ್ತದೆ. ತಮಿಳುನಾಡಿನ 21 ಅಧೀನಂ ಪ್ರಧಾನ ಅರ್ಚಕರು 'ಸೆಂಗೊಲ್' ನ್ನು ಪವಿತ್ರಗೊಳಿಸಿ ಪ್ರಧಾನಿಗೆ ಹಸ್ತಾಂತರಿಸಿದರು. ಪ್ರಧಾನಿಯವರು ಅದನ್ನು ವಿಧ್ಯುಕ್ತ ಮೆರವಣಿಗೆಯಲ್ಲಿ ನೂತನ ಕಟ್ಟಡಕ್ಕೆ ಕೊಂಡೊಯ್ದು ಲೋಕಸಭೆ ಸ್ಪೀಕರ್ ಕುರ್ಚಿಯ ಬಲಭಾಗದಲ್ಲಿ ಚಪ್ಪಾಳೆ ಮತ್ತು 'ಮೋದಿಮೋದಿಘೋಷಣೆಗಳ ನಡುವೆ ಸ್ಥಾಪಿಸಿದರು.


ಇದೇ ಸಂದರ್ಭದಲ್ಲಿ ಪ್ರಧಾನಿಯವರು ಸ್ಮಾರಕ ಅಂಚೆ ಚೀಟಿ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನೆನಪಿಸುವ ೭೫ ರೂಪಾಯಿಗಳ ನಾಣ್ಯವನ್ನು ಬಿಡುಗಡೆ ಮಾಡಿದರು. ಕೇವಲ ಮೂರು ವರ್ಷಗಳ ಅವಧಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಿದ ಕೆಲಸಗಾರರನ್ನೂ ಪ್ರಧಾನಿ ಈ ಸಂದರ್ಭದಲ್ಲಿ ಸನ್ಮಾನಿಸಿದರು.

ನೂತನ ಸಂಸತ್‌ ಭವನದ ಉದ್ಘಾಟನಾ ಸಮಾರಂಭದ ಕ್ಷಣಗಳ ವಿಡಿಯೋ ಇಲ್ಲಿದೆ. ಇನ್ನೊಂದು ವಿಡಿಯೋ ನೂತನ ಕಟ್ಟದ ವಿಶೇಷತೆಗಳನ್ನು ತೋರಿಸುತ್ತದೆ.

ಸುಮಾರು ೨೦ಕ್ಕೂ ಹೆಚ್ಚು ವಿರೋಧ ಪಕ್ಷಗಳು ಸಮಾರಂಭವನ್ನು ಬಹಿಷ್ಕರಿಸಿದ್ದವು. ಆದರೆ ಎನ್‌ ಡಿಎ ಅಂಗಪಕ್ಷಗಳು ಹಾಗೂ ಬಿಜೆಪಿಯ ಮಿತ್ರ ಪಕ್ಷಗಳು ಮತ್ತು ಇತರ ಕೆಲವು ವಿರೋಧ ಪಕ್ಷಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದವು. ಕರ್ನಾಟಕದ ಮಾಜಿ ಪ್ರಧಾನಿ ಜಾತ್ಯತೀತ ಜನತಾದಳದ ನಾಯಕ ಎಚ್.ಡಿ. ದೇವೇಗೌಡ ಅವರೂ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.



ಇದನ್ನೂ ಓದಿ: 

ಸ್ವಾಮೀ ಕೇವಲ ʼಪ್ರಭುʼ ಆಗಲು ಬಯಸಬೇಡಿ, ʼಪ್ರಬುದ್ಧʼರಾಗಿ!


PARYAYA: ನೂತನ ಸಂಸತ್‌ ಭವನ ದೇಶಕ್ಕೆ ಅರ್ಪಣೆ:   ನೂತನ ಸಂಸತ್‌ ಭವನ ದೇಶಕ್ಕೆ ಅರ್ಪಣೆ ವೇದಘೋಷ, ಸರ್ವ ಪಂಥ ಪ್ರಾರ್ಥನೆ, ಮಂತ್ರಗಳ ಪಠಣ, ಲೋಕಸಭಾಧ್ಯಕ್ಷರ ಪೀಠದ ಬಲಭಾಗದಲ್ಲಿ ʼ ರಾಜದಂಡ ʼ (ಸೆಂಗೋಲ್)‌ ಪ್ರತಿಷ್ಠಾಪನ...

Tuesday, May 23, 2023

PARYAYA: ಸ್ವಾಮೀ ಕೇವಲ ʼಪ್ರಭುʼ ಆಗಲು ಬಯಸಬೇಡಿ, ʼಪ್ರಬುದ್ಧʼರಾಗಿ!

 ಸ್ವಾಮೀ ಕೇವಲ ʼಪ್ರಭುʼ ಆಗಲು ಬಯಸಬೇಡಿ, ʼಪ್ರಬುದ್ಧʼರಾಗಿ!


ಟೈಮ್ಸ್‌ ನೌ ಪ್ರಧಾನ ಸಂಪಾದಕ ರಾಹುಲ್‌ ಶಿವಶಂಕರ್‌ ಅವರು ಮಾಡಿರುವ ಟ್ವೀಟ್‌ ಇದು. ಪತ್ರಿಕೆಯೊಂದರ ಪ್ರಧಾನ ಸಂಪಾದಕರಾಗಿ ಅವರು ಮಾಡಿರುವ ಈ ಟ್ವೀಟ್‌ ಹಿಂದೆ ʼರಾಜಕೀಯʼ ಇದ್ದೀತು ಎಂಬ ಭಾವಿಸಲು ಸಾಧ್ಯವಿಲ್ಲ.

೧೯೭೫ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರು ಪಾರ್ಲಿಮೆಂಟ್‌ ಅನೆಕ್ಸ್‌ (ಸಂಸದೀಯ ಸೌಧ) ಇದನ್ನು ಉದ್ಘಾಟಿಸಿದರು. ಆಗ ಫಕ್ರುದ್ದೀನ್‌ ಅಲಿ ಅಹಮದ್‌ ಅವರು ರಾಷ್ಟ್ರಪತಿ ಆಗಿದ್ದರು.

೧೯೮೭ರಲ್ಲಿ ಆಗಿನ ಪ್ರಧಾನಿ ರಾಜೀವ ಗಾಂಧಿ ಅವರು ಸಂಸತ್‌ ಗ್ರಂಥಾಲಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದರು.

ಈ ಎರಡೂ ಅಂಶಗಳನ್ನು ರಾಹುಲ್‌ ಶಿವಶಂಕರ್‌ ತಮ್ಮ ಟ್ವೀಟಿನಲ್ಲಿ ಬರೆದಿದ್ದಾರೆ.

೨೦೨೩ರ ಮೇ ೨೮ರ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ನೂತನ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆಯೇ ಕಾಂಗ್ರೆಸ್‌ ಮೊದಲ್ಗೊಂಡು ವಿವಿಧ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಹರಿಹಾಯ್ದಿವೆ. ರಾಷ್ಟ್ರಪತಿಯವರಿಂದ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಬೇಕು, ಪ್ರಧಾನಿ ಮೋದಿಯಲ್ಲ ಎಂದು ಆಗ್ರಹಿಸುತ್ತಿದ್ದಾರೆ.

ಅದಕ್ಕೆ ಬಿಜೆಪಿ ಜಗ್ಗಲು ಸಿದ್ದವಿಲ್ಲ. ಇಂದಿರಾಗಾಂಧಿ ಮತ್ತು ರಾಜೀವ್‌ ಗಾಂಧಿ ಅವರು ಸಂಸತ್‌ ಕಟ್ಟಡಕ್ಕೆ ಸಂಬಂಧಿಸಿದಂತೆ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿರುವಾಗ ಮೋದಿಯವರು ಏಕೆ ಈ ಕಾರ್ಯ ಮಾಡಬಾರದು ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ.

ರಾಹುಲ್‌ ಶಿವಶಂಕರ್‌ ಅವರ ತಮ್ಮ ಬಳಿ ಆಧಾರ ಇಲ್ಲದೇ ಟ್ವೀಟ್‌ ಮಾಡಲು ಸಾಧ್ಯವಿಲ್ಲ. ಆದರೆ ಅವರು ಅದಕ್ಕೆ ಸಂಬಂಧಿಸಿದ ವಿಡಿಯೋವನ್ನಾಗಲೀ ಫೊಟೋವನ್ನಾಗಲೀ ಪ್ರಕಟಿಸಿಲ್ಲ.

ಇಂದಿರಾ ಗಾಂಧಿಯವರು ಉದ್ಘಾಟನೆ ಮಾಡಿದ ವಿಡಿಯೋ, ಫೊಟೋ ಇಲ್ಲದೇ ಇದ್ದರೂ ರಾಜೀವ ಗಾಂಧಿಯವರು ಶಿಲಾನ್ಯಾಸ ನೆರವೇರಿಸಿದ ಸಂದರ್ಭದ ವಿಡಿಯೋ ಇಲ್ಲಿದೆ.

ಆಗಲೂ ಈ ಕಾರ್ಯಗಳನ್ನು ರಾಷ್ಟ್ರಪತಿಯವರಿಂದಲೇ ಮಾಡಿಸಬಹುದಾಗಿತ್ತಲ್ಲ?

ಈಗ ಏಕೆ ಎಲ್ಲಿಲ್ಲದ ಹಾಹಾಕಾರ?

ದೇಶವು ಸ್ವಾತಂತ್ರ್ಯ ಅಮೃತ ಮಹೋತ್ಸವದ ಹೊತ್ತಿನಲ್ಲಿ ಮಹಾನ್‌ ಸಂಭ್ರಮದ ದಿನಕ್ಕೆ ಸಾಕ್ಷಿಯಾಗಲು ಎಲ್ಲರೂ ಪಕ್ಷಬೇಧವಿಲ್ಲದೆ ಸಜ್ಜಾಗಬೇಕಾದ ಕ್ಷಣದಲ್ಲಿ ಇಂತಹ ಕ್ಷುಲ್ಲಕ ರಾಜಕೀಯ ಬೇಕಾಗಿತ್ತೇ?

ನಮ್ಮ ರಾಜಕಾರಣಿಗಳು ಪ್ರಭುಗಳಾಗಲು ಮಾತ್ರ ಬಯಸುತ್ತಾರೆ, ಪ್ರಬುದ್ಧರಾಗಲು ಅಲ್ಲ ಎಂಬುದನ್ನು ಇದು ಸೂಚಿಸುತ್ತದೆ ಅಷ್ಟೆ.

ಇದನ್ನೂ ಓದಿ: 

ಸಂಸತ್ತಿನ ಹೊಸ ಕಟ್ಟಡಕ್ಕೆ ಡಿ.೧೦ರಂದು ಪ್ರಧಾನಿ ಅಡಿಗಲ್ಲು


PARYAYA: ಸ್ವಾಮೀ ಕೇವಲ ʼಪ್ರಭುʼ ಆಗಲು ಬಯಸಬೇಡಿ, ʼಪ್ರಬುದ್ಧʼರಾಗಿ!:   ಸ್ವಾಮೀ ಕೇವಲ ʼ ಪ್ರಭು ʼ ಆಗಲು ಬಯಸಬೇಡಿ, ʼ ಪ್ರಬುದ್ಧ ʼ ರಾಗಿ! ಟೈಮ್ಸ್‌ ನೌ ಪ್ರಧಾನ ಸಂಪಾದಕ ರಾಹುಲ್‌ ಶಿವಶಂಕರ್‌ ಅವರು ಮಾಡಿರುವ ಟ್ವೀಟ್‌ ಇದು. ಪತ್ರಿಕೆಯೊಂದರ...

Monday, May 22, 2023

PARYAYA: ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

 ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..

ಕೆಲವು ವ್ಯಕ್ತಿಗಳು ಹಾಗೆ. ಯಾವುದೋ ಸಂದರ್ಭದಲ್ಲಿ ಪರಿಚಯವಾಗುತ್ತಾರೆ. ಬದುಕಿನುದ್ದಕ್ಕೂ ಮರೆಯದೆ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತು ಬಿಡುತ್ತಾರೆ. ವೃತ್ತಿ ಜೀವನದಲ್ಲಿ ಪರಿಚಿತರಾಗುವ ಮಂದಿಯಲ್ಲಿ ಹೀಗೆ ಮನಸ್ಸಿನೊಳಗೆ ನಿಂತು ಬಿಡುವ ಮಂದಿ ಬಲು ಅಪರೂಪ. ಅಂತಹ ಅಪರೂಪದ ಒಬ್ಬ ವ್ಯಕ್ತಿ ಸೂರ್ಯ ನಾರಾಯಣ ಪಂಜಾಜೆ ಸಂಕ್ಷಿಪ್ತದಲ್ಲಿ ಎಸ್‌ ಎನ್‌ ಪಂಜಾಜೆ.

ಸುಮಾರು ಒಂದೂವರೆ ದಶಕಕ್ಕೂ ಹಿಂದಿನ ಕಥೆ ಅದು. ಪ್ರಜಾವಾಣಿ ಕಚೇರಿಯಲ್ಲಿ ನಾನು ಇದ್ದಾಗ ಪಂಚೆ, ಶರಟು ಹಾಕಿಕೊಂಡಿದ್ದ ಆ ವ್ಯಕ್ತಿ ಬಂದಿದ್ದರು.

ʼಯಕ್ಷಗಾನಕ್ಕೊಂದು ಅಕಾಡೆಮಿ ಬೇಕು. ಸಂಗೀತ, ನಾಟಕ, ಸಾಹಿತ್ಯಕ್ಕೆಲ್ಲ ಅಕಾಡೆಮಿಗಳಿವೆ. ಯಕ್ಷಗಾನಕ್ಕೆ ಏಕಿಲ್ಲ? ಹೀಗಾಗಿ ನಾವೊಂದು ವಿನೂತನ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಖಂಡಿತ ಬರಬೇಕು.ʼ ಎಂದು ಆತ್ಮೀಯವಾಗಿ ಮಾತನಾಡಿ, ಆಗ್ರಹಿಸಿ ಹೋಗಿದ್ದರು.

ಆದಿನ, ಮಹಾತ್ಮಾ ಗಾಂಧಿ ರಸ್ತೆಯ ಗಾಂಧಿ ಪ್ರತಿಮೆ ಬಳಿಗೆ ಹೋದರೆ ಯಾವುದೇ ಪ್ರತಿಭಟನೆ, ಘೋಷಣೆಗಳ ಸದ್ದಿಲ್ಲ. ಆದರೆ ಬರೇ ಚೆಂಡೆಯ ಸದ್ದು ಕೇಳುತ್ತಿತ್ತು. ಪಂಜಾಜೆ ಮತ್ತು ಅವರು ಕೆಲವು ಗೆಳೆಯರು ಗಾಂಧಿ ಪ್ರತಿಮೆಯ ಬಳಿ ನಿಂತುಕೊಂಡು ಚೆಂಡೆ ಭಾರಿಸುತ್ತಿದ್ದರು. ಪಕ್ಕದಲ್ಲಿ ದೊಡ್ಡ ಬ್ಯಾನರ್.‌ ʼಯಕ್ಷಗಾನಕ್ಕೂ ಅಕಾಡೆಮಿ ಬೇಕು..ʼ

ಘೋಷಣೆಗಳಿಲ್ಲದೆ ಕಲೆಯ ಪ್ರದರ್ಶನದ ಮೂಲಕವೇ ಯಕ್ಷಗಾನಕ್ಕೆ ಅಕಾಡೆಮಿ ಬೇಕು ಎಂಬ ಕೂಗು ಹಾಕಿದ್ದು ನಿಜಕ್ಕೂ ಪಂಜಾಜೆಯವರ ವಿಶಿಷ್ಟತೆಯಾಗಿತ್ತು. ಅದಾದ ಬಳಿಕ ಸರ್ಕಾರ ಈ ಬೇಡಿಕೆಯನ್ನು ಒಪ್ಪಿಕೊಂಡಿತು.

ಯಕ್ಷಗಾನವನ್ನು ನಾಡಿನಿಂದ ವಿದೇಶದವರೆಗೂ ಒಯ್ಯುವುದಕ್ಕೆ ಕೂಡಾ ಪಂಜಾಜೆ ತಮ್ಮದೇ ಆದ ರೀತಿಯಲ್ಲಿ ಪ್ರಯತ್ನಗಳನ್ನು ನಡೆಸಿದ್ದರು.   ರಾಜ್ಯದ ಹಲವೆಡೆ ಅಖಿಲ ಭಾರತ ಯಕ್ಷಗಾನ ಬಯಲಾಟ, ಯಕ್ಷಗಾನಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ್ದರು.

ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕನ್ಯಾನದವರಾದ ಎಸ್.‌ ಎನ್.‌ ಪಂಜಾಜೆ ೧೯೮೦ರ ದಶಕದಲ್ಲಿ ಬೆಂಗಳೂರಿಗೆ ತೆರಳಿ ಯಕ್ಷಗಾನ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಯಕ್ಷಗಾನ ಪಾತ್ರಧಾರಿಯಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ಸಂಘಟಕರಾಗಿದ್ದ ಅವರನ್ನು ಉಡುಪಿಯಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರದ ವತಿಯಿಂದ ನಡೆದ ಮೊದಲ ಸಮಗ್ರ ಯಕ್ಷಗಾನ ಸಾಹಿತ್ಯ ಸಮ್ಮೇಳನದಲ್ಲಿ ಗೌರವಿಸಲಾಗಿತ್ತು.

ಬೆಂಗಳೂರಿನಲ್ಲಿ ವೇಷಭೂಷಣ, ಪ್ರಸಾಧನ ನಿರ್ವಹಿಸುತ್ತಾ ಯಕ್ಷಗಾನ ಬೆಳೆಸಿದವರಲ್ಲಿ ಅವರು ಒಬ್ಬರು.

ಪರಿಚಿತರಾದ ಬಳಿಕ ನಿರಂತರವಾಗಿ ಆತ್ಮೀಯ ಸಂಪರ್ಕದಲ್ಲಿದ್ದ ಪಂಜಾಜೆ ಕೆಲಸ ಸಮಯದ ಹಿಂದೆ ಸಿಕ್ಕಿದ್ದಾಗ ಅವರ ಮನೆಗೊಮ್ಮೆ ಸಕುಟುಂಬ ಸಮೇತರಾಗಿ ಬರಬೇಕು. ಒಂದು ಇಡೀದಿನ ಒಟ್ಟಿಗೆ ಕಾಲ ಕಳೆಯಬೇಕು ಎಂದು ಹಾರೈಸಿದ್ದರು.

ಬರುತ್ತೇನೆ ಎಂದು ಒಪ್ಪಿಕೊಂಡರೂ ಹೋಗಲು ಸಾಧ್ಯವಾಗಿರಲಿಲ್ಲ.

ಇನ್ನು ಅದೆಲ್ಲಿ ಸಾಧ್ಯ?

ಪಂಜಾಜೆ ೨೦೨೩ ಮೇ ೨೨ರ ಸೋಮವಾರ ದೈವಾಧೀನರಾಗಿದ್ದಾರೆ. ಕ್ಷಮಿಸಿ ಪಂಜಾಜೆ.

ಪಂಜಾಜೆ ಅವರ ಪತ್ನಿ ಮನೋರಮಾ, ಪುತ್ರ ಕೈಲಾಸ ಭಟ್‌ ಸೇರಿದಂತೆ ಕುಟುಂಬವರ್ಗ, ಗೆಳೆಯರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಕೋರುವೆ.

-ನೆತ್ರಕೆರೆ ಉದಯಶಂಕರ

ಅಮೆರಿಕದಲ್ಲಿ ʼಅಕ್ಕʼ ಸಮ್ಮೇಳನಕ್ಕೆ ಅವರು ಚೆಂಡೆಯ ಸದ್ದನ್ನು ಒಯ್ದ ಬಗ್ಗೆ ʼಪರ್ಯಾಯʼ ಪ್ರಕಟಿಸಿದ್ದ ಲೇಖನ ಇಲ್ಲಿದೆ:

'ಅಕ್ಕಅಂಗಳದಲ್ಲಿ 'ಯಕ್ಷವೈಭವ...! Yaksha Vaibhava in Akka Conference...! 


PARYAYA: ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ..:   ಕ್ಷಮಿಸಿ ಪಂಜಾಜೆ ನಿಮ್ಮ ಮನೆಗೆ ಬರಲಾಗಲಿಲ್ಲ.. ಕೆಲವು ವ್ಯಕ್ತಿಗಳು ಹಾಗೆ. ಯಾವುದೋ ಸಂದರ್ಭದಲ್ಲಿ ಪರಿಚಯವಾಗುತ್ತಾರೆ. ಬದುಕಿನುದ್ದಕ್ಕೂ ಮರೆಯದೆ ಮನಸ್ಸಿನಲ್ಲಿ ಅಚ್...

Friday, May 19, 2023

ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

 ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

ನವದೆಹಲಿ: ಚಲಾವಣೆಯಲ್ಲಿ ಇರುವ ಎಲ್ಲ 2000 ರೂಪಾಯಿ ನೋಟುಗಳನ್ನು ತತ್‌ ಕ್ಷಣ ಚಲಾವಣೆಯಿಂದ ಹಿಂಪಡೆಯುವುದಾಗಿ 2023 ಮೇ 19ರ  ಶುಕ್ರವಾರ ಭಾರತೀಯ ರಿಸರ್ವ ಬ್ಯಾಂಕ್‌ (ಆರ್‌ ಬಿಐ) ಘೋಷಿಸಿದೆ. ನೋಟುಗಳು ಸೆಪ್ಟೆಂಬರ್ 30 ರವರೆಗೆ ಕಾನೂನುಬದ್ಧವಾಗಿ ಮುಂದುವರಿಯುತ್ತದೆ.

ನೋಟುಗಳನ್ನು ಬದಲಾಯಿಸಿಕೊಳ್ಳಲು ಸಾರ್ವಜನಿಕ ಸದಸ್ಯರಿಗೆ ಸಾಕಷ್ಟು ಸಮಯವನ್ನು ಒದಗಿಸಲು ಮತ್ತು ನೋಟು ಹಿಂತೆಗೆತದ ಪ್ರಕ್ರಿಯೆಯನ್ನು ಪೂರೈಸಿಕೊಳ್ಳುವ ಸಲುವಾಗಿ ಲ್ಲ ಬ್ಯಾಂಕುಗಳು 2023 ಸೆಪ್ಟೆಂಬರ್ 30 ರವರೆಗೆ ರೂ 2000ದ ಬ್ಯಾಂಕ್‌ ನೋಟುಗಳ ಠೇವಣಿ ಮತ್ತು ವಿನಿಮಯ ಸೌಲಭ್ಯವನ್ನು ಒದಗಿಸುತ್ತವೆ ಎಂದು ಆರ್‌ ಬಿಐ (RBI) ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಬ್ಯಾಂಕುಗಳಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನೀಡಲಾಗಿದೆ. ತಕ್ಷಣವೇ ಜಾರಿಗೆ ಬರುವಂತೆ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಆರ್‌ಬಿಐ ಬ್ಯಾಂಕ್‌ಗಳಿಗೆ ಸೂಚಿಸಿದೆ.

“2000 ರೂ ಮುಖಬೆಲೆಯ ಬ್ಯಾಂಕ್‌ ನೋಟುಗಳಲ್ಲಿ ಸುಮಾರು 89% ರಷ್ಟನ್ನು ಮಾರ್ಚ್ 2017 ರ ಮೊದಲು ಬಿಡುಗಡೆ ಮಾಡಲಾಗಿತ್ತು. ಅವುಗಳ ಅಂದಾಜು ಜೀವಿತಾವಧಿ 4-5 ವರ್ಷಗಳು.

ಚಲಾವಣೆಯಲ್ಲಿರುವ ಈ ಬ್ಯಾಂಕ್‌ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018 ರ ಪ್ರಕಾರ ಗರಿಷ್ಠ 6.73 ಲಕ್ಷ ಕೋಟಿಗಳಿಂದ (ಚಲಾವಣೆಯಲ್ಲಿರುವ ನೋಟುಗಳ 37.3%) ರೂ 3.62 ಲಕ್ಷ ಕೋಟಿಗೆ ಇಳಿದಿದೆಇದು ಮಾರ್ಚ್ 31, 2023 ರಂದು ಚಲಾವಣೆಯಲ್ಲಿರುವ ನೋಟುಗಳ ಕೇವಲ 10.8% ರಷ್ಟಿದೆ. ಇವುಗಳನ್ನು ಸಾಮಾನ್ಯವಾಗಿ ವಹಿವಾಟುಗಳಿಗೆ ಬಳಸಲಾಗುವುದಿಲ್ಲ ಎಂಬುದನ್ನು ಸಹ ಗಮನಿಸಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ “ಕ್ಲೀನ್ ನೋಟ್ ಪಾಲಿಸಿ”ಗೆ ಅನುಗುಣವಾಗಿ ಚಲಾವಣೆಯಿಂದ ರೂ 2000 ಮುಖಬೆಲೆಯ ನೋಟುಗಳನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. 2000 ರೂಪಾಯಿ ಮುಖಬೆಲೆಯ ನೋಟುಗಳು ಕಾನೂನುಬದ್ಧವಾಗಿ ಸೆಪ್ಟೆಂಬರ್‌ 30 ರವರೆಗೆ ಮುಂದುವರಿಯಲಿವೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆ ತಿಳಿಸಿದೆ.

ಚಲಾವಣೆಯಲ್ಲಿರುವ 2,000 ರೂಪಾಯಿ ನೋಟು ವಾಪಸ್:‌ ಆರ್‌ ಬಿಐ

Monday, May 1, 2023

PARYAYA: ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

 ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..

ಹೌದು. ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ. ಇದು ಬೆಂಗಳೂರಿನ ಗಿರಿನಗರದ ಮೂಲ ದೇವರಾದ ಮಹಾಗಣಪತಿಯ ರಥೋತ್ಸವ.
ಬೆಂಗಳೂರಿನ ಗಿರಿನಗರದಲ್ಲಿ ಮಹಾಗಣಪತಿ ರಥೋತ್ಸವ ಏಪ್ರಿಲ್‌ ೨೬ರಿಂದ ಮೇ ೦೧ರವರೆಗೆ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯಿತು.

ಕರ್ನಾಟಕದ ಪಶ್ಚಿಮ ಕರಾವಳಿಯ ಅದರಲ್ಲೂ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆ ಹಾಗೂ ಕೇರಳದಲ್ಲಿ ನಡೆಯುವ ಮಾದರಿಯಲ್ಲಿ ಜಾತ್ರೆ ಹಾಗೂ ರಥೋತ್ಸವ ಇಲ್ಲಿನ ಆಸುಪಾಸಿನ ಭಕ್ತಾದಿಗಳನ್ನು ವಿಶೇಷವಾಗಿ ಆಕರ್ಷಿಸಿತು.

ಕೇರಳ, ದಕ್ಷಿಣ ಕನ್ನಡ, ಉಡುಪಿ ದೇವಾಲಯಗಳ ಮಾದರಿಯ  ದರ್ಶನಬಲಿ, ದೇವನೃತ್ಯ, ರಂಗಪೂಜೆ, ಮತ್ತು ವಿಶೇಷವಾಗಿ ಚೆಂಡೆ ವಾದನ, ಕೊಂಬು ಕಹಳೆಯೊಂದಿಗೆ ಮಹಾರಥೋತ್ಸವ ಜರುಗಿತು.


ದೇವಾಲಯದ ಅಷ್ಟಬಂಧ ಬ್ರಹ್ಮಕಲಶೋತ್ಸವ ಕೂಡಾ ೨೦೨೨ರಲ್ಲಿ ಕೇರಳ, ಕರ್ನಾಟಕದ ಪಶ್ಚಿಮ ಕರಾವಳಿ ಮಾದರಿಯಲ್ಲೇ ನೆರವೇರಿತ್ತು.


ಏಪ್ರಿಲ್‌ ೩೦ರಂದು ನಡೆದ ಮಹಾಗಣಪತಿ ದೇವರ ರಥೋತ್ಸವ ಸಂಭ್ರಮದ ವಿಡಿಯೋಗಳು ಇಲ್ಲಿವೆ.


PARYAYA: ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ..:   ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ.. ಹೌದು. ಬೆಂಗಳೂರಿನಲ್ಲಿ ಕೇರಳ ಮಾದರಿ ರಥೋತ್ಸವ. ಇದು ಬೆಂಗಳೂರಿನ ಗಿರಿನಗರದ ಮೂಲ ದೇವರಾದ ಮಹಾಗಣಪತಿಯ ರಥೋತ್ಸವ. ಬೆಂಗಳೂರ...