Tuesday, November 20, 2018

ಇಂದಿನ ಇತಿಹಾಸ History Today ನವೆಂಬರ್ 20

ಇಂದಿನ ಇತಿಹಾಸ History Today ನವೆಂಬರ್ 20
2018: ನವದೆಹಲಿ: ತಮ್ಮ ಮೇಲಿನ  ಭ್ರಷ್ಟಾಚಾರ ಆರೋಪಗಳ ಕುರಿತ ಕೇಂದ್ರೀಯ ಜಾಗೃತಾ ಆಯೋಗದ (ಸಿವಿಸಿ) ವರದಿ ಬಗ್ಗೆ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ಅವರ ಗೌಪ್ಯ ಪ್ರತಿಕ್ರಿಯೆ ಮತ್ತು ಸಿವಿಸಿ ತನಿಖಾ ವರದಿ ವೆಬ್ ಸೈಟ್ ಒಂದರಲ್ಲಿಸೋರಿಕೆ ಆದುದಕ್ಕೆ ಕೆಂಡಾಮಂಡಲ ಸಿಟ್ಟಿಗೆದ್ದ ಸುಪ್ರೀಂಕೋರ್ಟ್ಕಕ್ಷಿದಾರರು ಯಾರೂ ವಿಚಾರಣೆಗೆ ಯೋಗ್ಯರಲ್ಲ ಎಂದು ಝಾಡಿಸಿ, ಪ್ರಕರಣವನ್ನು ನವೆಂಬರ್ ೨೯ಕ್ಕೆ ಮುಂದೂಡಿತು. ಅಲೋಕ್ ವರ್ಮ ಅವರು ತಮ್ಮ  ಪ್ರತಿಕ್ರಿಯೆಯನ್ನು  ಹಿಂದಿನ ದಿನ ಮೊಹರಾದ ಲಕೋಟೆಯಲ್ಲಿ ಸುಪ್ರೀಂಕೋರ್ಟಿನ ಪ್ರಧಾನ ಕಾರ್ಯದರ್ಶಿಯವರಿಗೆ ಸಲ್ಲಿಸಿದ್ದರು. ಭಾರತದ ಮುಖ್ಯ ನ್ಯಾಯಮೂರ್ತಿರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಕೆ ಕೌಲ್ ಹಾಗೂ ಕೆ.ಎಂ ಜೋಸೆಫ್ ಅವರನ್ನು ಒಳಗೊಂಡ ಪೀಠವು ಸಿಬಿಐ ನಿರ್ದೇಶಕರ ಪ್ರತಿಕ್ರಿಯೆಯನ್ನು ಪ್ರಕಟಿಸಿರುವ ಸುದ್ದಿ ಪೋರ್ಟಲ್  ವರದಿಯ ನಕಲನ್ನು ವರ್ಮ ಪರ ವಕೀಲ  ಫಾಲಿ ಎಸ್. ನಾರಿಮನ್ ಅವರಿಗೆ ಹಸ್ತಾಂತರಿಸಿತು 
ಮಾಧ್ಯಮದಲ್ಲಿ ಸೋರಿಕೆಯಾದ ವರದಿಯನ್ನು ಪರಿಶೀಲಿಸಿದ  ನಾರಿಮನ್ ಅವರು ತಾವುದಿಗ್ಭ್ರಮೆ; ಹಾಗೂಆಘಾತ ಗೊಂಡಿರುವುದಾಗಿ ಪೀಠಕ್ಕೆ ತಿಳಿಸಿದರು. ’ನಾನು ವಿಚಲಿತನಾಗಿದ್ದೇನೆ ಎಂದೂ ಅವರು ಹೇಳಿದರುವರದಿ ಹೇಗೆ ಸೋರಿಕೆಯಾಯಿತೋ ಗೊತ್ತಿಲ್ಲ. ಮಾಧ್ಯಮಗಳು ಮುಕ್ತ ಹಾಗೂ ಜವಾಬ್ದಾರಿಯುತವಾಗಿರಬೇಕು. ಆದ್ದರಿಂದ ಮಾಧ್ಯಮವನ್ನು ಮತ್ತು ಅದರ ಪತ್ರಕರ್ತರನ್ನು ನ್ಯಾಯಾಲಯಕ್ಕೆ ಕರೆಸಬೇಕು ಎಂದು  ಹಿರಿಯ ವಕೀಲರು ಪೀಠಕ್ಕೆ ಮನವಿ ಮಾಡಿದರು.  "ನಿಮ್ಮಲ್ಲಿ ಯಾರೂ ವಿಚಾರಣೆಗೆ ಅರ್ಹರಾಗಿದ್ದಾರೆಂದು ನಾವು ಭಾವಿಸುವುದಿಲ್ಲ. ವಿಚಾರಣೆ ನಡೆಸಲು ಸಾಧ್ಯವಿಲ್ಲ. ಸೋರಿಕೆಯಾಗಿರುವುದರಿಂದ ಮಾಹಿತಿ ದಾಖಲಿಸಲು ಸಾಧ್ಯವಿಲ್ಲ್ಲ" ಎಂದು ಹೇಳಿದ ಪೀಠ, ಪ್ರಕರಣವನ್ನು ನವೆಂಬರ್ ೨೯ಕ್ಕೆ ಮುಂದೂಡಿತುಘಟನೆಯಿಂದ ಗೊಂದಲಕ್ಕೆ ಈಡಾದ ನಾರಿಮನ್ಇದನ್ನು ನಾವು ನಿರೀಕ್ಷಿಸಿರಲಿಲ್ಲ. ಇದರಿಂದ ನಾನು ವಿಚಲಿನಾಗಿದ್ದೇನೆ. ಇದಕ್ಕಾಗಿ ನಾನು ಇಡೀ ರಾತ್ರಿ ಕಾರ್ ನಿರ್ವಹಿಸಿದ್ದೇನೆ ಎಂದು ಹೇಳಿದರುತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ವಿಶೇಷ ಸಿಬಿಐ ನಿರ್ದೇಶಕ ರಾಕೇಶ್ ಅಸ್ತಾನ ಜೊತೆಗೆ ಸಿಬಿಐ ನಿರ್ದೇಶಕ ಅಲೋಕ್ ವರ್ಮ ಘರ್ಷಣೆಗೆ ಇಳಿದ ಬಳಿಕ ಕೇಂದ್ರ ಸರ್ಕಾರವು ಉಭಯ ಅಧಿಕಾರಿಗಳನ್ನು ಕರ್ತವ್ಯ ಮುಕ್ತಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು. ಕೇಂದ್ರ ಸರ್ಕಾರವು ತಮ್ಮನ್ನು ಕರ್ತವ್ಯ ಮುಕ್ತಗೊಳಿಸಿ ಕಡ್ಡಾಯವಾಗಿ ರಜೆಯಲ್ಲಿ ಕಳುಹಿಸಿದ್ದನ್ನು ಪ್ರಶ್ನಿಸಿ ವರ್ಮ ಸುಪ್ರೀಂಕೋರ್ಟಿನಲ್ಲಿ ೩೪ ಪುಟಗಳ ಅರ್ಜಿ ಸಲ್ಲಿಸಿದ್ದರು ಮಧ್ಯೆ ಸಿಬಿಐ ಹಿರಿಯ ಅಧಿಕಾರಿ ಎಂ.ಕೆ. ಸಿನ್ಹ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಸಚಿವ ಹರಿಭಾಯಿ ಪಾರ್ಥಿಭಾಯಿ ಚೌಧರಿ ಮತ್ತು ಸಿವಿಸಿಯ ಕೆ.ವಿ. ಚೌಧರಿ ಅವರು ಅಸ್ತಾನ ವಿರುದ್ಧದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಸುಪ್ರೀಂಕೋರ್ಟಿಗೆ ತಿಳಿಸಿ, ಪ್ರಕರಣವನ್ನು ಇನ್ನಷ್ಟು ಗೋಜಲುಗೊಳಿಸಿದ್ದರುಕೇಂದ್ರ ಸಚಿವರು ಆರೋಪಗಳನ್ನು ಆಧಾರರಹಿತ ಮತ್ತು ದುರುದ್ದೇಶಪೂರಿತ ಎಂದು ತಳ್ಳಿಹಾಕಿದರೆ, ಇತರ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

2018: ತಿರುವನಂತಪುರಂ: ಕೇರಳ ವಿಧಾನಸಭೆಯ ವಿರೋಧಿ ನಾಯಕ ರಮೇಶ ಚೆನ್ನಿತ್ತಲ ಮತ್ತು ಮಾಜಿ ಮುಖ್ಯಮಂತ್ರಿ ಒಮ್ಮನ್ ಚಾಂಡಿ  ನೇತೃತ್ವದಲ್ಲಿ ಸಂಯುಕ್ತ ಪ್ರಜಾತಾಂತ್ರಿಕ ರಂಗ (ಯುಡಿಎಫ್) ಕಾರ್ಯಕರ್ತರು ಜಿಲ್ಲಾಧಿಕಾರಿ ಪಿ.ಬಿ. ನೂಹು ಅವರು ಜಾರಿಗೊಳಿಸಿದ್ದ ಪ್ರತಿಬಂಧಕಾಜ್ಞೆಯನ್ನು ನೀಲಕ್ಕಲ್ನಲ್ಲಿ ಮಧ್ಯಾಹ್ನ ಉಲ್ಲಂಘಿಸಿದರು. ಯುಡಿಎಫ್ ಕಾರ್ಯಕರ್ತರು ರಸ್ತೆಯಲ್ಲಿ ಧರಣಿ ನಡೆಸಿದ ಪರಿಣಾಮವಾಗಿ ನೀಲಕ್ಕಲ್ನಲ್ಲಿ ಶಬರಿಮಲೈಯತ್ತ ಸಾಗುವ ಮುಖ್ಯ ರಸ್ತೆಯಲ್ಲಿ ನಾಟಕೀಯ ದೃಶ್ಯಗಳು ಕಂಡು ಬಂದವು.  ನಾಲ್ವರು ಶಾಸಕರಿಗೆ ತಮ್ಮ ವಾಹನಗಳಲ್ಲಿ ಪಂಪಾದತ್ತ ಸಾಗಲು ಅನುಮತಿ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಚಂದ್ರ ಹೇಳಿದರು. ಆದರೆ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ ಯುಡಿಎಫ್ ಪೂರ್ತಿ ಗುಂಪಿಗೆ ಶಬರಿಮಲೈಯತ್ತ ಸಾಗಲು ಅನುಮತಿ ನೀಡಬೇಕು ಎಂದು ಚೆನ್ನಿತ್ತಲ ಆಗ್ರಹಿಸಿದರು. ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನಕಾರರು ಮತ್ತು ಯುಡಿಎಫ್ ನಾಯಕರು ರಸ್ತೆಯಲ್ಲಿ ಧರಣಿ ಕುಳಿತರುಪ್ರತಿಬಂಧಕಾಜ್ಞೆಯನ್ನು ತತ್ ಕ್ಷಣ ರದ್ದು ಪಡಿಸಬೇಕು ಎಂದು ಚಾಂಡಿ ಒತ್ತಾಯಿಸಿದರು. ಯುಡಿಎಫ್ ನಾಯಕರಾದ ಎಂ.ಕೆ. ಮುನೀರ್, ಎನ್. ಕೆ. ಪ್ರೇಮಚಂದ್ರನ್, ಪಿ.ಜೆ. ಜೋಸೆಫ್, ದೇವರಾಜನ್ ಮತ್ತು ಇತರರು ಪ್ರದರ್ಶನಕಾರರನ್ನು ಉದ್ದೇಶಿಸಿ ಮಾತನಾಡಿ ಸರ್ಕಾರ ಮತ್ತು ಪೊಲೀಸರನ್ನು ಟೀಕಿಸಿದರು.  ಯಾತ್ರಾರ್ಥಿ ವಿರೋಧಿ ಪ್ರತಿಬಂಧಕಾಜ್ಞೆಯನ್ನು ತಾವು ಉಲ್ಲಂಘಿಸಬಯಸಿರುವುದಾಗಿ ಚೆನ್ನಿತ್ತಲ ನುಡಿದರು. ಶಬರಿಮಲೈ ಸಲುವಾಗಿ ಯುಡಿಎಫ್ ಕೇರಳ ರಾಜ್ಯಾದ್ಯಂತ ಪ್ರತಿಭಟನೆ ಆರಂಭಿಸುವುದು ಎಂದು ಚಾಂಡಿ ನುಡಿದರು. ಪೂರ್ತಿ ಯುಡಿಎಫ್ ತಂಡವು ಕೆಎಸ್ ಆರ್ಟಿಸಿ ಹವಾನಿಯಂತ್ರಿತ ಬಸ್ಸಿನಲ್ಲಿ ಪಂಪಾದತ್ತ ಮುಂದುವರೆದ ಕಾರಣ ಪ್ರತಿಭಟನಕಾರರಲ್ಲಿ ಯಾರನ್ನೂ ಪ್ರತಿಬಂಧಕಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ಬಂಧಿಸಲಿಲ್ಲ. ಕಾರ್ಯಕರ್ತರು ವಾಹನದ ಒಳಗಿನಿಂದ ಘೋಷಣೆಗಳನ್ನು ಕೂಗಿ ತಮ್ಮ ನಾಯಕರಿಗೆ ಜೈಕಾರ ಹಾಕಿದರು.

2018: ನವದೆಹಲಿ: ಪ್ರಮುಖ ಭದ್ರತಾ ಲೋಪದ ಪ್ರಕರಣ ಒಂದರಲ್ಲಿ  ದೆಹಲಿ ಸಚಿವಾಲಯದಲ್ಲೇ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಲೆ ವ್ಯಕ್ತಿಯೊಬ್ಬ ಮೆಣಸಿನಪುಡಿ ಎರಚಿ ದಾಳಿ ನಡೆಸಿದ ಘಟನೆ ಘಟಿಸಿತು. ದಾಳಿ ನಡೆಸಿದ ವ್ಯಕ್ತಿಯನ್ನು ನರೈನಾ ನಿವಾಸಿ ಅನಿಲ್ ಶರ್ಮ ಎಂಬುದಾಗಿ ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಯಿತು. ಸಚಿವಾಲಯದ ಮೂರನೇ ಮಹಡಿಯಲ್ಲಿ ಮುಖ್ಯಮಂತ್ರಿಯ ಕೊಠಡಿಯ ಹೊರಗೆ ಕೇಜ್ರಿವಾಲ್ ಅವರು ಮಧ್ಯಾಹ್ನದ ಭೋಜನಕ್ಕಾಗಿ ಹೊರಟಿದ್ದಾಗ ಖಾರದ ಪುಡಿ ದಾಳಿ ನಡೆಯಿತು. ಕೇಜ್ರಿವಾಲ್ ತನ್ನ ಸಮೀಪಕ್ಕೆ ಬಂದಿದ್ದಾಗ, ಮುಖ್ಯಮಂತ್ರಿಯ ಮುಂದೆ ಅಹವಾಲು ಹೇಳಿಕೊಳ್ಳಬೇಕಾಗಿದೆ ಎಂದು ಬಾಗಿದ ಶರ್ಮ, ಕೇಜ್ರಿವಾಲ್ ಮೇಲೆ ಖಾರದ ಪುಡಿ ಪೊಟ್ಟಣವನ್ನು ತೂರಿದ್ದಾನೆ. ದಿಢೀರ್ ದಾಳಿ ಪರಿಣಾಮವಾಗಿ ಸಚಿವಾಲಯದಲ್ಲಿ ಕೋಲಾಹಲ ಉಂಟಾಗಿ, ಗದ್ದಲದ ಮಧ್ಯೆ ಕೇಜ್ರಿವಾಲ್ ಅವರ ಕನ್ನಡಕ ಒಡೆಯಿತುಖಾರದ ಪುಡಿ ದಾಳಿ  ಮಧ್ಯಾಹ್ನ .೧೦ರಿಂದ .೧೫ರ ಸಮಯದಲ್ಲಿ ನಡೆಯಿತು. ದಾಳಿ ನಡೆಸಿದ ಶರ್ಮ ದೆಹಲಿ ಸಚಿವಾಲಯದಲ್ಲಿ ಆಪ್ ಸಂಚಾಲಕ ಕೇಜ್ರಿವಾಲ್ಗಾಗಿ ಅವರ ಕಚೇರಿಯ ಹೊರಭಾಗದಲ್ಲಿ ಕಾದಿದ್ದ. ಕೇಜ್ರಿವಾಲ್ ಅವರು ಕಚೇರಿಯಿಂದ ಹೊರಕ್ಕೆ ಬಂದು ಅವನತ್ತ ಬರುತ್ತಿದ್ದಂತೆಯೇಆಪ್ ಹಿ ಸೆ ಉಮೀದ್ ಹೈ ಎಂದು ಹೇಳುತ್ತಾ ಅವರ ಪಾದ ಮುಟ್ಟಲು ಯತ್ನಿಸಿದ. ಶರ್ಮ ಕೈಯಲ್ಲಿ ಒಂದು ಪತ್ರವಿತ್ತು ಮತ್ತು ಇನ್ನೊಂದು ಕೈಯಲ್ಲಿ ಮೆಣಸಿನಪುಡಿ ಇತ್ತು. ಆತ ಖಾರದ ಪುಡಿಯನ್ನು ಗುಟ್ಕಾ ಪೊಟ್ಟಣದಲ್ಲಿ ತುಂಬಿ ಇಟ್ಟಿದ್ದಕೇಜ್ರಿವಾಲ್ ಅವರು ಪಾದ ಮುಟ್ಟದಂತೆ ಶರ್ಮನನ್ನು ತಡೆದರು. ಬಾಗಿದ್ದ ಶರ್ಮ ಮೇಲೇಳುತ್ತಾ ಕೇಜ್ರಿವಾಲ್ ಮುಖದತ್ತ ಖಾರದ ಪುಡಿ ಎರಚಿದ. ಖಾರದ ಪುಡಿ ಎರಚುವ ಮುನ್ನನೀವೊಬ್ಬರೇ ನನ್ನ ಭರವಸೆ ಎಂದು ಹೇಳಿದ. ದಾಳಿ ಘಟನೆಯ ಬೆನ್ನಲ್ಲೇ ಶರ್ಮನನ್ನು ಬಂಧಿಸಲಾಯಿತುದಾಳಿಯನ್ನು ಟೀಕಿಸಿದ ಆಪ್ ವಕ್ತಾರ ರಾಘವ ಛಢಾ ಅವರುಇಂದು ಮುಖ್ಯಮಂತ್ರಿಯವರ ಕನ್ನಡ ನೆಲದ ಮೇಲೆ ಬಿದ್ದು ಒಡೆಯಿತು. ಆದರೂ ಇದು ಒಪ್ಪಲಾಗದಂತಹ ಭದ್ರತಾ ಲೋಪ. ದಾಳಿಕೋರ ಹೆಚ್ಚು ಅಪಾಯಕಾರಿ ಶಸ್ತ್ರ ಹೊಂದಿದ್ದರೆ ಏನಾಗುತ್ತಿತ್ತು ಎಂದು ಕಲ್ಪಿಸಿಕೊಳ್ಳಿ. ದುರಂತವನ್ನು ಯಾರು ತಪ್ಪಿಸಲು ಸಾಧ್ಯವಿತ್ತು? ಎಂದು ಪ್ರಶ್ನಿಸಿದರು.  ಆಮ್ ಆದ್ಮಿ ಪಕ್ಷವು (ಆಪ್) ದಾಳಿಯನ್ನು ಖಂಡಿಸಿ, ದೆಹಲಿ ಪೊಲೀಸರಿಂದ ಗಂಭೀರ ಭದ್ರತಾ ಲೋಪವಾಗಿದೆ ಎಂದು ಹೇಳಿದೆ. ’ದೆಹಲಿಯಲ್ಲಿ ಮುಖ್ಯಮಂತ್ರಿ ಕೂಡಾ ಸುರಕ್ಷಿತರಲ್ಲ ಎಂದು ಆಪ್ ಟ್ವೀಟ್ ಮಾಡಿತು. ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಅವರ ಮೇಲೆ ಇದೇ ಮಾದರಿಯ ದಾಳಿಗಳು ನಡೆದಿರುವುದು ಇದೇ ಮೊದಲಲ್ಲ. ಹಿಂದೆ ಚುನಾವಣಾ ಪ್ರಚಾರ ಕಾಲದಲ್ಲಿ ಅವರ ಮೇಲೆ ಶಾಯಿ ಎರಚಿದ, ಕಪಾಳಕ್ಕೆ ಹೊಡೆದ ಮತ್ತು ಚಪ್ಪಲಿ\, ಬೂಟು ತೂರಿದ ಘಟನೆಗಳು ಘಟಿಸಿದ್ದವು. ಆಪ್ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್ ಮತ್ತು ರಾಘವ ಛಡಾ ಅವರು ಘಟನೆ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿ ಇನ್ನಷ್ಟು ವಿವರ ನೀಡಿದರು. ’ಬಿಜೆಪಿ ಇಂತಹ ದಾಳಿಗಳನ್ನು ವ್ಯವಸ್ಥೆ ಮಾಡುತ್ತಿದೆ ಎಂದು ಅವರು ಆಪಾದಿಸಿದರು.  ‘ಯಾವನೇ ಒಬ್ಬ ವ್ಯಕ್ತಿ ಸಚಿವಾಲಯಕ್ಕೆ ನಡೆದುಕೊಂಡು ಬಂದು ಮುಖ್ಯಮಂತ್ರಿಯ ಮೇಲೆ ದಾಳಿ ನಡೆಸಲು ಹೇಗೆ ಸಾಧ್ಯ? ಅರವಿಂದ ಕೇಜ್ರಿವಾಲ್ ಅವರು ಹಿಂದೆಯೂ ಇಂತಹ ಅನೇಕ ದಾಳಿಗಳನ್ನು ಎದುರಿಸಿದ್ದಾರೆ. ಇದೊಂದು ಗಂಭೀರ ಭದ್ರತಾ ಲೋಪ. ದಾಳಿಕೋರನಿಗೆ ಬಿಜೆಪಿ ಜೊತೆಗೆ ಸಂಪರ್ಕ ಇರಬಹುದು ಎಂಬುದು ನನ್ನ ಗುಮಾನಿ. ಅಪರಾಧಿಗಳಿಗೆ ಸಂಪೂರ್ಣ ರಕ್ಷಣೆ ಕೊಡುತ್ತಿರುವ ಬಿಜೆಪಿಗೂ ದಾಳಿಗೂ ನೇರ ಸಂಪರ್ಕ ಇದೆ. ದೆಹಲಿ ಮುಖ್ಯಮಂತ್ರಿಯ ಮೇಲೆ ದಾಳಿ ನಡೆಸುತ್ತಿರುವ ಪುಂಡ ಶಕ್ತಿಗಳಿಗೆ ಬಿಜೆಪಿಯ ಬೆಂಬಲವಿದೆ. ಅವರು ಮುಖ್ಯಮಂತ್ರಿಯ ಮೇಲೆ ಸಿಗ್ನೇಚರ್ ಸೇತುವೆ ಉದ್ಘಾಟನೆ ಕಾಲದಲ್ಲೂ ದಾಳಿ ನಡೆಸಲು ಯತ್ನಿಸಿದ್ದರು. ಬಿಜೆಪಿಗೆ ಆಮ್ ಆದ್ಮಿ ಪಕ್ಷವನ್ನು ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಇಂತಹ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದು ಸೌರಭ್ ಭಾರದ್ವಾಜ್ ಆಪಾದಿಸಿದರುಮುಖ್ಯಮಂತ್ರಿ ಕೇಜ್ರಿವಾಲ್ ಮೇಲೆ ದಾಳಿ ನಡೆಸಲು ಸಮಾಜವಿರೋಧಿ ಶಕ್ತಿಗಳನ್ನು ಪ್ರಚೋದಿಸುವ ಪರಿಸರವನ್ನೂ ಕೇಂದ್ರದ ಬಿಜೆಪಿ ಸರ್ಕಾರವು ಸೃಷ್ಟಿಸುತ್ತಿದೆ. ತಮಗೆ ರಕ್ಷಣೆ ಸಿಗುತ್ತದೆ ಎಂಬುದು ದಾಳಿಕೋರರಿಗೆ ಗೊತ್ತಿರುತ್ತದೆ ಎಂದು ಅವರು ನುಡಿದರು.  ‘ವ್ಯಕ್ತಿಯೊಬ್ಬ ಕೈಯಲ್ಲಿ ಏನನ್ನೋ ಹಿಡಿದುಕೊಂಡು ಮುಖ್ಯಮಂತ್ರಿ ಕೊಠಡಿಯತ್ತ ಸಾಗಿದ್ದನ್ನು ನಾವು ನೋಡಿದ್ದೇವೆ. ಆತನನ್ನು ತಡೆಯಲು ಯಾವುದೇ ಪ್ರಯತ್ನ ನಡೆಯಲಿಲ್ಲ. ಸಂಪೂರ್ಣ ಘಟನಾವಳಿಯನ್ನು ನಾನು ಕಂಡಿದ್ದೇನೆ. ಮುಖ್ಯಮಂತ್ರಿ ಕಚೇರಿಯಲ್ಲೇ ಇಂತಹ ಘಟನೆ ಘಟಿಸುವುದು ನಾಚಿಕೆಗೇಡು ಎಂದು ಛಡಾ ಹೇಳಿದರುಪೊಲೀಸರು ಸ್ವತಂತ್ರ ತನಿಖೆ ನಡೆಸಿದರೆ ನನ್ನ ಹೇಳಿಕೆ ದಾಖಲಿಸುವೆ ಎಂದು ಅವರು ನುಡಿದರು.
  
2018: ನವದೆಹಲಿ: ಅಮೃತಸರ ಬಾಂಬ್ ಸ್ಫೋಟ ಘಟನೆಯ ಎರಡು ದಿನಗಳ ಬಳಿಕ ದೆಹಲಿ ಪೊಲೀಸರು ರಾಜಧಾನಿಯಲ್ಲಿ ಕಟ್ಟೆಚ್ಚರ ಘೋಷಿಸಿ,  ಶಂಕಿತ ಜೈಶ್--ಮೊಹಮ್ಮದ್ (ಜೆಇಎಂ) ಭಯೋತ್ಪಾದಕರಿಬ್ಬರ ಭಾವಚಿತ್ರಗಳನ್ನು ಬಿಡುಗಡೆ ಮಾಡಿ, ಅವರ ಬಂಧನಕ್ಕಾಗಿ ಬಲೆ ಬೀಸಿದರು. ಶಂಕಿತ ಭಯೋತ್ಪಾದಕರು ದೆಹಲಿಯಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ ಎಂಬ ಹಿನ್ನೆಲೆಯಲ್ಲಿ ಅತಿಥಿಗೃಹಗಳು, ಹೊಟೇಲ್ ಗಳು, ಪೇಯಿಂಗ್ ಗೆಸ್ಟ್ ಹೋಮ್ಗಳು ಸೇರಿದಂತೆ ವಿದೇಶೀ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಂಗುವ ಜಾಗಗಳನ್ನು ಪೊಲೀಸರು ಜಾಲಾಡಿದರು. ದೆಹಲಿ ಪೊಲೀಸರು ಬಿಡುಗಡೆ ಮಾಡಿರುವ ಚಿತ್ರದಲ್ಲಿ ಇರುವ ಇಬ್ಬರು ವ್ಯಕ್ತಿಗಳು ಮೈಲುಗಲ್ಲೊಂದರ ಬಳಿ ನಿಂತಿದ್ದು, ಮೈಲುಗಲ್ಲಿನಲ್ಲಿ ಫಿರೋಜ್ ಪುರ ಕಿಮೀ ಮತ್ತು ದೆಹಲಿ ೩೬೦ ಕಿಮೀ ಎಂಬುದಾಗಿ ಬರೆದಿತ್ತು.  ಪಂಜಾಬಿನ ಫಿರೋಜ್ ಪುರ ಅಮೃತಸರದಿಂದ ೧೩೩ ಕಿಮೀ ದೂರದಲ್ಲಿದೆ. ಅಮೃತಸರದಲ್ಲಿ ಮೋಟಾರ್ ಸೈಕಲ್ ನಲ್ಲಿ ಬಂದಿದ್ದ ಇಬ್ಬರು ಯುವಕರು ನಿರಂಕಾರಿ ಧಾರ್ಮಿಕ ಸಮಾವೇಶದಲ್ಲಿ ಗ್ರೆನೇಡ್ ದಾಳಿ ನಡೆಸಿ ಮೂವರನ್ನು ಕೊಂದು ೨೦ ಮಂದಿಯನ್ನು ಗಾಯಗೊಳಿಸಿದ್ದರು. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪೊಲೀಸರು ಶಂಕಿತ ಭಯೋತ್ಪಾದಕರ ಭಾವಚಿತ್ರ ಇರುವ ಪೋಸ್ಟರುಗಳನ್ನು ದೆಹಲಿಯಾದ್ಯಂತ ಹಚ್ಚಿದ್ದು, ಸಾಮಾಜಿಕ ಮಾಧ್ಯಮಗಳಲ್ಲೂ ಪ್ರಕಟಿಸಿ ಅವರು ಎಲ್ಲಾದರೂ ಕಂಡು ಬಂದಲ್ಲಿ ತತ್ ಕ್ಷಣವೇ ಪೊಲೀಸರಿಗೆ ತಿಳಿಸುವಂತೆ ಕೋರಿದರು.

2018: ನವದೆಹಲಿ: ಛತ್ತೀಸ್ಗಢದ ೭೨ ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಮತ್ತು ಅಂತಿಮ ಹಂತದ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಶೇಕಡಾ ೭೧.೯೩ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿತು. ನವೆಂಬರ್ ೧೨ರಂದು ಮಾವೋವಾದಿ ನಕ್ಸಲೀಯ  ಪ್ರಾಬಲ್ಯದ ೧೮ ಕ್ಷೇತ್ರಗಳಲ್ಲಿ ಭದ್ರತಾ ಪಡೆಗಳ ಸರ್ಪಗಾವಲಿನಲ್ಲಿ ನಡೆದ ಮೊದಲ ಹಂತದ ಮತದಾನದ ವೇಳೆಯಲ್ಲಿ ಅಲ್ಲಲ್ಲಿ ಹಿಂಸಾಚಾರ ಸಂಭವಿಸಿತ್ತು. ಚುನಾವಣೆ ಕಾಲದಲ್ಲಿ ಸಂಭವಿಸಿದ ಪ್ರತ್ಯೇಕ ಗುಂಡಿನ ಘರ್ಷಣೆಗಳಲ್ಲಿ ಮಂದಿ ಮಾವೋವಾದಿಗಳನ್ನು ಹತ್ಯೆಗೈಯಲಾಗಿತ್ತು. ಕಮಾಂಡೋ ಬೆಟಾಲಿಯನ್ ಫಾರ್ ರೆಸಲೂಟ್ ಆಕ್ಷನ್ (ಕೋಬ್ರಾ) ಪಡೆಯ ಐವರು ಯೋಧರು ಗಾಯಗೊಂಡಿದ್ದರು. ಮೊದಲ ಹಂತದಲ್ಲಿ ಶೇಕಡಾ ೭೦ರಷ್ಟು ಮತದಾರರು ಮತ ಚಲಾಯಿಸುವ ಮೂಲಕ ಮಾವೋವಾದಿಗಳ ಹಿಂಸಾಚಾರಕ್ಕೆ ತಕ್ಕ ಉತ್ತರ ನೀಡಿದ್ದರು. ೧೫ ವರ್ಷಗಳಿಂದ ರಾಜ್ಯವನ್ನು ಆಳುತ್ತಿರುವ ಬಿಜೆಪಿ ಮತ್ತು ವಿರೋಧಿ ಕಾಂಗ್ರೆಸ್ ಛತ್ತೀಸ್ಗಢದಲ್ಲಿ ಪರಂಪರಾಗತ ಪ್ರತಿಸ್ಪರ್ಧಿಗಳಾಗಿದ್ದು, ಬಾರಿ ಅಜಿತ್ ಅವರ ನೂತನ ಜನತಾ ಕಾಂಗ್ರೆಸ್ ಛತ್ತೀಸ್ ಗಢ ಮತ್ತು ಮಾಯಾವತಿ ಅವರ ಬಿಎಸ್ ಪಿ ಕಣಕ್ಕೆ ಇಳಿದ ಪರಿಣಾಮವಾಗಿ ಬಹುತೇಕ ಕಡೆ ತ್ರಿಕೋಣ ಸ್ಪರ್ಧೆ ಏರ್ಪಟ್ಟಿತ್ತು.   ಎರಡನೇ ಮತ್ತು ಅಂತಿಮ ಹಂತದ ಚುನಾವಣೆಯಲ್ಲಿ  ಈದಿನ ಸಂಜೆ ಗಂಟೆಯವರೆಗೆ ಶೇಕಡಾ ೭೧.೯೩ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗವು ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿತು. ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ ಶೇಕಡಾ ೭೪.೭೧ರಷ್ಟು ಮತದಾನವಾದಂತಾಯಿತು.  ೨೦೧೩ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ ೭೭.೪೨ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿತುಮತದಾನ ಮುಗಿದರೂ ಜನರ ಕ್ಯೂ: ೧೯ ಜಿಲ್ಲೆಗಳ ೭೨ ಕ್ಷೇತ್ರಗಳಲ್ಲಿ ಅಧಿಕೃತವಾಗಿ ಸಂಜೆ ಗಂಟೆಗೆ ಮತದಾನ ಮುಕ್ತಾಯಗೊಂಡರೂ ಬಹಳಷ್ಟು ಮತಗಟ್ಟೆಗಳಲ್ಲಿ ಇನ್ನೂ ಮತದಾರರ ಉದ್ದನೆಯ ಕ್ಯೂಗಳೂ ಕಂಡು ಬಂದವು ಎಂದು ವರದಿಗಳು ಹೇಳಿದವು.

2018: ನವದೆಹಲಿ: ೧೯೮೪ರ ಸಿಖ್ ವಿರೋಧಿ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿ ದಂತೆ ದೆಹಲಿ ಪಟಿಯಾಲಾ ಹೌಸ್ ಕೋರ್ಟ್, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣ ಪ್ರಕಟಿಸಿತು. ಇಬ್ಬರಲ್ಲಿ ಓರ್ವ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿತು.. ಗಲಭೆ ವೇಳೆ ಇಬ್ಬರು ಸಿಖ್ ಪುರುಷರನ್ನು ಕೊಲೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಯಶ್ಪಾ ಲ್ ಸಿಂಗ್ಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಮತ್ತೋರ್ವ ಅಪರಾಧಿ ನರೇಶ್ ಶೆರಾವತ್ಗೆ ಜೀವಾವಧಿ ಶಿಕ್ಷೆ ವಿಧಿ ಸಲಾಯಿತು.  ದೆಹಲಿಯ ಮಹಿಪಾಲ್ ಪುರದಲ್ಲಿ ಯಶ್ಪಾಲ್ ಹಾಗೂ ನರೇಶ್, ಹರ್ದೇವ್ ಸಿಂಗ್ ಹಾಗೂ ಅವತಾರ್ ಸಿಂಗ್ ಎಂಬ ಇಬ್ಬರು ಸಿಖ್ರನ್ನು ಕೊಲೆ ಮಾಡಿದ ಆರೋ ನವೆಂಬರ್ ೧೫ರಂದು ಸಾಬೀತಾ ಗಿತ್ತು. ೨೦೧೫ರಲ್ಲಿ ಪ್ರಕರಣದ ತನಿಖೆ ಯನ್ನು ಎಸ್ಐಟಿ ಕೈಗೆತ್ತಿಕೊಂಡ ನಂತರ ಈಗ ಮೊದಲನೇ ಶಿಕ್ಷೆ ಪ್ರಕಟ ವಾಯಿತು.  ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ನಂತರ ಸಿಖ್ ವಿರೋ ಧಿ ದಂಗೆ ಭುಗಿಲೆದ್ದಿತ್ತು. ವೇಳೆ ನೂರಾರು ಸಿಖ್ರನ್ನು ಹತ್ಯೆಗೈಯ ಲಾಗಿತ್ತು. ಅಲ್ಲದೇ, ಹಲವಾರು ಮಹಿ ಳೆಯರ ಮೇಲೆ ಅತ್ಯಾಚಾರ ಕೂಡ ಮಾಡಲಾಗಿತ್ತು. ಇನ್ನು ಸಿಖ್ ಆಸ್ತಿ ಪಾಸ್ತಿಯನ್ನು ಸುಟ್ಟು ಹಾಕಿ ಇಡೀ ದೆಹಲಿಯನ್ನೇ ನರಕಸದೃಶ್ಯ ಸ್ಥಿತಿಗೆ ತರಲಾಗಿತ್ತು. ದಂಗೆಯ ಹಿಂದೆ ಕಾಂಗ್ರೆಸ್ ಪಕ್ಷದ ಕೈವಾಡ ಇದೆ ಅನ್ನೋದು ಸಂತ್ರಸ್ತರ ಆರೋಪವಾ ಗಿದೆ. ಅಂದಿನ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್, ಹಿರಿಯ ಕಾಂಗ್ರೆ ಸ್ಸಿಗ ಕಮಲ್ನಾಥ್ ವಿರುದ್ಧ ದಂಗೆಯ ನೇತೃತ್ವ ವಹಿಸಿದ್ದ ಆರೋಪ ಕೂಡ ಕೇಳಿ ಬಂದಿತ್ತು.  ಯಶಪಾಲ್ ಸಿಂಗ್ ಹಾಗೂ ನರೇಶ್ ಶೇರಾವತ್ ದೆಹಲಿಯ ಮಹಿ ಪಾಲಪುರದಲ್ಲಿ ಇಬ್ಬರು ಸಿಖ್ ಯುವಕರ ಮೇಲೆ ಹಲ್ಲೆ ನಡೆಸಿ ದ್ದರು. ನವೆಂಬರ್ , ೧೯೮೪ರಂದು ಇಬ್ಬರೂ ಮೃತಪಟ್ಟಿದ್ದರು.

2018: ನವದೆಹಲಿ: ಆಡ ಳಿತಾರೂಢ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಅತ್ಯಂತ ಹಿರಿಯ ನಾಯಕಿ ವಿದೇ ಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾವು ಸ್ಪರ್ಧಿಸುವು ದಿಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದರು. ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಮಧ್ಯಪ್ರದೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಆರೋಗ್ಯ ದಲ್ಲಿ ಏರುಪೇರು ಆಗುತ್ತಿದ್ದು, ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಚಿವೆ ಸುಶ್ಮಾ ಸ್ವರಾಜ್ ಘೋಷಿಸಿದರು.
ಕುರಿತು ಪಕ್ಷ ನಿರ್ಧರಿಸುತ್ತದೆ. ಆದರೆ, ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಿ ರಲು ಮಾನಸಿಕವಾಗಿ ಸಿದ್ಧವಾಗಿದ್ದೇನೆ ಎಂದು ೬೬ರ ಹರೆಯದ ಸುಷ್ಮಾ ಇಂದೋರ್ನಲ್ಲಿ ತಿಳಿಸಿದರು.  ಮಧ್ಯಪ್ರದೇಶದ ವಿಧಿಶಾ ಕ್ಷೇತ್ರವನ್ನು ಸುಷ್ಮಾ ಸ್ವರಾಜ್ ಪ್ರತಿನಿಧಿಸುತ್ತಿದ್ದು, ಇತ್ತೀಚೆಗೆ ಸಂಸತ್ನಲ್ಲಿ  ಗೈರಾಗುತ್ತಿರುವ ಕುರಿತು ಸಾಕಷ್ಟು ಮಾತು ಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಕೇಂದ್ರ ಸಚಿವೆ ತಮ್ಮ ನಿರ್ಧಾರ ಪ್ರಕಟಿಸಿದರು.  ೨೦೧೬ರಲ್ಲಿ ಕಿಡ್ನಿ ಕಸಿಗೆ ಒಳಗಾಗಿದ್ದ ಸು? ಸ್ವರಾಜ್ ಕೆಲವು ತಿಂಗಳ ಕಾಲ ಕಚೇರಿ ಕೆಲಸದಿಂದ ದೂರ ಉಳಿದಿದ್ದರುಪಕ್ಷ ಸುಷ್ಮಾ ಸ್ವರಾಜ್ ಅವರನ್ನು ರಾಜ್ಯಸಭೆಯ ಮೂಲಕ ಸಂಸತ್ಗೆ ಮರಳಿ ಕರೆತರಲಿದೆ ಎಂದು ಪಕ್ಷದ ಮೂಲಗಳು ಹೇಳಿದವು.  ಸುಷ್ಮಾ ಅವರು ತಮ್ಮ ಮೊನಚು ಹಾಗೂ ಕೌಶಲ ಪೂರ್ಣ ಮಾತುಗಳಿಗೆ ಹೆಸರಾದವರು. ಬಿಜೆಪಿ ಹಿರಿಯ ನಾಯಕಿಯಾಗಿರುವ ಸುಷ್ಮಾ ಸ್ವರಾಜ್ ಅವರು, ಇಂದಿರಾ ಗಾಂಧಿ ನಂತರ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆಯಾ ಗಿರುವ ಎರಡನೇ ಮಹಿಳೆ.. ಸಂಸದೆ ಯಾಗಿ ಬಾರಿ ಮತ್ತು ವಿಧಾನಸಭಾ ಸದಸ್ಯೆಯಾಗಿ ಮೂರು ಬಾರಿ ಆಯ್ಕೆಯಾಗಿದ್ದರು. ೨೫ನೇ ವಯಸ್ಸಿನಲ್ಲಿಯೇ ಸುಷ್ಮಾ ಅವರು ಉತ್ತರ ಭಾರತದ ಹರಿಯಾಣ ರಾಜ್ಯದ ಅತ್ಯಂತ ಕಿರಿಯ ಸಂಪುಟ ಸಚಿವೆಯಾಗಿದ್ದರು. ೧೯೯೮ರಲ್ಲಿ ಅಲ್ಪಾವಧಿಗೆ ದೆಹಲಿಯ ೫ನೇ ಮುಖ್ಯಮಂತ್ರಿಯಾ ಗಿಯೂ ಸೇವೆ ಸಲ್ಲಿಸಿದ್ದರು. ಇದಲ್ಲದೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಸೇವೆ ಸಲ್ಲಿಸಿ ರುವ ಅವರು, ಲೋಕಸಭೆಯಲ್ಲಿ ಬಿಜೆಪಿ ಹಾಗೂ ವಿರೋಧ ಪಕ್ಷದ ವಕ್ತಾರರಾಗಿ ಕಾರ್ಯನಿರ್ವ ಹಿಸಿದ್ದರು.  ಅವರ ಕುಟುಂಬದ ಮೂಲಗಳ ಪ್ರಕಾರ, ಸ್ವರಾಜ್ ಅವರಿಗೆ ಆರೋಗ್ಯದಲ್ಲಿ ಉಂಟಾಗಿರುವ ಸೋಂಕಿನಿಂದ ಮುಕ್ತರಾಗಲು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಅಗತ್ಯವಿದೆ ಎಂದು ದೃಢಪಡಿಸಿದ್ದರು.ಅವರು ೧೧ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದಾರೆ. ನಿರ್ಧಾರದ ಹಿಂದೆ ರಾಜಕೀಯ ಕಾರಣವಿಲ್ಲ ಎಂದು ಮೂಲಗಳು ತಿಳಿಸಿದವು. ಸುಷ್ಮಾ ಅವರು ೨೦೧೬ರಲ್ಲಿ ಮೂತ್ರಪಿಂಡದ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆದಿದ್ದರು. ಮೂಲತಃ ಹರಿಯಾಣದ ಅಂಬಾಲಾ ಕ್ಯಾಂಟ್ ನವರಾದ ಸುಷ್ಮಾ ಸ್ವರಾಜ್ ಅವರು ವಕೀಲರರಾಗಿದ್ದರು. ಬಳಿಕ ರಾಜಕೀಯ ಪ್ರವೇಶಿ ಸಿದ್ದರು.

2016: ಉತ್ತರ ಪ್ರದೇಶ: ಉತ್ತರ ಪ್ರದೇಶದ ಕಾನ್ಪುರ ಬಳಿ ಈದಿನ ನಸುಕಿನಲ್ಲಿ ಸಂಭವಿಸಿದ ರೈಲು
ದುರಂತದಲ್ಲಿ 121 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡರು. ಇಂದೋರ್ನಿಂದ ಪಟ್ನಾಕ್ಕೆ ತೆರಳುತ್ತಿದ್ದ ರೈಲು ಉತ್ತರ ಪ್ರದೇಶದ ಪುಖರಾಯನ್ಸಮೀಪ ಹಳಿ ತಪ್ಪಿದ ಪರಿಣಾಮ ಭೀಕರ ದುರಂತ ಸಂಭವಿಸಿತು. ನಸುಕಿನ ಜಾವ 3:10 ಸುಮಾರಿಗೆ ಅಪಘಾತ ಘಟಿಸಿತು.14 ಬೋಗಿಗಳಿದ್ದ ರೈಲು ಪಟ್ನಾ ಕಡೆಗೆ ಹೊರಟಿತ್ತು. ದುರಂತದಲ್ಲಿ ಮೃತರಾದವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ರೈಲ್ವೆ ಸಚಿವ ಸುರೇಶ್ಪ್ರಭು ಪರಿಹಾರ ಘೋಷಿಸಿದರು. ಮೃತರ ಕುಟುಂಬಕ್ಕೆ 3.5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದರು.  ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ಯಾದವ್ಮೃತರ ಕುಟುಂಬಕ್ಕೆ ₹5 ಲಕ್ಷ ಪರಿಹಾರ ಘೋಷಿಸಿದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.  30 ಆಂಬುಲೆನ್ಸ್‌, 250ಕ್ಕೂ ಹೆಚ್ಚು ಪೊಲೀಸ್ಸಿಬ್ಬಂದಿ ರಾತ್ರಿಯಾದರೂ  ರಕ್ಷಣಾ ಕಾರ್ಯದಲ್ಲಿ ತೊಡಗಿದ್ದರು. ರೈಲು ಹಳಿ ತಪ್ಪಲು ನಿಖರ ಕಾರಣ ತಿಳಿಯಲಿಲ್ಲ. ಈ  ಮಧ್ಯೆ, ಹಳಿ ಶಿಥಿಲಗೊಂಡದ್ದು ದುರಂತಕ್ಕೆ ಕಾರಣ ಎಂದು ರೈಲ್ವೆ ಮೂಲಗಳು ತಿಳಿಸಿದವು. ದುರಂತಕ್ಕೆ ಖಚಿತ ಕಾರಣವೇನು ಎಂಬುದು ತನಿಖಾ ವರದಿಯ ಬಳಿಕವೇ ಸ್ಪಷ್ಟವಾಗಬೇಕಿದ್ದು, ಹಳಿ ಶಿಥಿಲಗೊಂಡದ್ದರಿಂದ ದುರಂತ ಸಂಭವಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ ಎಂದು ಮೂಲಗಳು ಹೇಳಿದವು. ರೈಲುಗಾಡಿಯಲ್ಲಿ ಆಧುನಿಕ ಲಿಂಕೆ ಹೊಫ್ವಾನ್ ಬುಶ್ (ಎಲ್ಎಚ್ಬಿ) ಬೋಗಿಗಳ ಕೊರತೆ ಕೂಡಾ ಸಾವು ನೋವಿನ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ಭಾವಿಸಲಾಗಿದೆ ಎಂದು ಮೂಲಗಳೂ ತಿಳಿಸಿದವು.
 2016: ಪುಝೌ: ಭಾರತದ ಸ್ಟಾರ್ ಷಟ್ಲರ್, ರಿಯೋ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಅವರು ತಮ್ಮ ವೃತ್ತಿ ಜೀವನದ ಚೊಚ್ಚಲ ಸೂಪರ್ ಸೀರೀಸ್ ಪ್ರಿಮಿಯರ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ತನ್ನ ಕಿರೀಟಕ್ಕೆ ಇನ್ನೊಂದು ಗರಿ ಸೇರಿಸಿಕೊಂಡು ಇತಿಹಾಸ ಸೃಷ್ಟಿಸಿದರು. 2016 ಚೀನಾ ಓಪನ್ ಟೂರ್ನಿಯ ಫೈನಲಿನಲ್ಲಿ ಚೀನಾದ ಸುನ್ ಯು ಅವರನ್ನು 21-11, 17-21, 21-11 ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಅವರು ಪ್ರಶಸ್ತಿಯನ್ನು ತಮ್ಮ ಬಗಲಿಗೆ ಏರಿಸಿಕೊಂಡರು. ಸೂಪರ್ ಸೀರೀಸ್ ಪಂದ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಪಾಲ್ಗೊಂಡ ಹೈದರಾಬಾದ್ ಆಟಗಾರ್ತಿ ಮೊದಲ ಗೇಮಿನಲ್ಲಿ 11-5 ಅಂತರದ ಮೂಲಕ ಮುನ್ನಡೆ ಸಾಧಿಸಿ, ಕೊನೆಯ ಗೇಮಿನಲ್ಲಿ 21-11 ಅಂತರ ಸಾಧಿಸುವ ಮೂಲಕ ಜಯವನ್ನು ಗಟ್ಟಿಗೊಳಿಸಿದರು. ಒಟ್ಟು 4.77 ಕೋಟಿ ರೂ. ಬಹುಮಾನ ಮೊತ್ತದ ಟೂರ್ನಿಯಲ್ಲಿ ಅವರು ಹಿಂದಿನ ದಿನ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ಅವರನ್ನು ಪರಾಭವಗೊಳಿಸಿ ಫೈನಲ್ ಪ್ರವೇಶಿಸಿದ್ದರು.
2016: ಆಗ್ರಾ: 500 ಮತ್ತು 1000  ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ರದ್ದು
ಮಾಡಿರುವ ನಿರ್ಧಾರವು 'ಅಗ್ನಿ ಪರೀಕ್ಷೆ'ಯಾಗಿತ್ತು. ಅಗ್ನಿ ಪರೀಕ್ಷೆಯಲ್ಲಿ ದೇಶ ಗೆದ್ದು ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಆಗ್ರಾದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನೋಟು ರದ್ದತಿ ಪ್ರಕ್ರಿಯೆಗೆ ತುಂಬಾ ಸಮಯ ವ್ಯಯವಾಗುತ್ತದೆ ಎಂದು ನಾನು ನಿರ್ಧಾರವನ್ನು ಘೋಷಣೆ ಮಾಡಿದ ದಿನದಂದೇ ಹೇಳಿದ್ದೆ. ನಿರ್ಧಾರದಿಂದಾಗಿ ಜನರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ. ಆದರೆ, ಅಗ್ನಿಪರೀಕ್ಷೆಯಲ್ಲಿ ದೇಶ ಗೆದ್ದು ಬರಲಿದೆ ಎಂದರು. ನಮ್ಮ ಸರ್ಕಾರವು ನೋಟು ರದ್ದತಿ ನಿರ್ಧಾರವನ್ನು ಕೈಗೊಂಡಾಗಲೇ ಇದಕ್ಕೆ ಪರ್ಯಾಯ ಮಾರ್ಗಗಳನ್ನೂ ಕಂಡುಕೊಂಡಿತ್ತು. 50 ದಿನಗಳ ಕಾಲ ನಮಗೆ ಸಹಕರಿಸಿ ಎಂದು ನಾನು ಮನವಿ ಮಾಡಿದ್ದೆ. ನಿರ್ಧಾರ ಪ್ರಕಟವಾದ 10 ದಿನಗಳಲ್ಲಿ 5,000 ಕೋಟಿಗಿಂತಲೂ ಹೆಚ್ಚಿನ ಮೊತ್ತ ಬ್ಯಾಂಕ್ಗಳಲ್ಲಿ ಜಮೆ ಆಗಿದೆ. ಯಾವುದೇ ಕಾರಣಕ್ಕೂ ನಾನು ನಿರ್ಧಾರವನ್ನು ಹಿಂಪಡೆದುಕೊಳ್ಳುವುದಿಲ್ಲ, ಯಾರಿಗೂ ತೊಂದರೆ ನೀಡುವ ಉದ್ದೇಶದಿಂದ ನಿರ್ಧಾರ ತೆಗೆದುಕೊಂಡಿಲ್ಲ. ಮುಂಬರುವ ಪೀಳಿಗೆಗೆ ಉತ್ತಮ ಭವಿಷ್ಯ ಕಲ್ಪಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
2016: ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಅವರು ಅಮೆರಿಕದ ಪೀಪಲ್ಸ್ಚಾಯ್ಸ್ 2017 ಪ್ರಶಸ್ತಿಗೆ ಎರಡನೇ ಬಾರಿ ನಾಮನಿರ್ದೇಶನಗೊಂಡರು. ಅಮೆರಿಕದ ಪ್ರಖ್ಯಾತ ಟಿವಿ ಧಾರಾವಾಹಿಕ್ವಾಂಟಿಕೋದಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಪ್ರಿಯಾಂಕಾ, ಜನಮೆಚ್ಚಿದ ಉತ್ತಮ ಟಿವಿ ನಟಿ ವಿಭಾಗದಲ್ಲಿ ನಾಮನಿರ್ದೇಶನಗೊಂಡರು.  ಕ್ವಾಂಟಿಕೋದಲ್ಲಿನ ಉತ್ತಮ ನಟನೆಗಾಗಿ ಕಳೆದ ವರ್ಷವೇ ಪ್ರಿಯಾಂಕಾ ಜನಮೆಚ್ಚಿದ ಟಿವಿ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು ಹಾಗೂ ಪ್ರಶಸ್ತಿ ಪಡೆದ ಮೊದಲ ದಕ್ಷಿಣ ಏಷ್ಯಾ ನಟಿ ಎಂಬ ಹೆಗ್ಗಳಿಕೆಗೂ  ಪಾತ್ರರಾಗಿದ್ದರು.
ಇದೇ ವಿಭಾಗದಲ್ಲಿ ಪ್ರಿಯಾಂಕಾರೊಂದಿಗೆ ನಟಿಯರಾದ ಎಲೆನ್ ಪೊಂಪಿಯೋ, ಕೆರ್ರಿ ವಾಷಿಂಗ್ಟನ್, ತರಾಜಿ ಹೆನ್ಸನ್, ವಿಯೋಲಾ ಡೇವಿಸ್ ಅವರು ನಾಮನೀರ್ದೇಶನಗೊಂಡರು.
2016: ಪಣಜಿ (ಗೋವಾ): ಗೋವಾದ ಪಣಜಿಯಲ್ಲಿ 47ನೇ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ ಸಂಜೆ ಆರಂಭಗೊಂಡಿತು. ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು, ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ ಪರ್ಸೇಕರ್ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಸಂದರ್ಭದಲ್ಲಿ ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರನ್ನುಶತಮಾನದ ಪ್ರಶಸ್ತಿ’ ನೀಡಿ ಸನ್ಮಾನಿಸಿದರು.

2016: ಮುಂಬೈ: ಉದ್ಯಮಿ ವಿಜಯ್ ಮಲ್ಯ ಅವರ ಕಿಂಗ್ಫಿಷರ್ ಏರ್ಲೈನ್ಸ್ 7000 ಕೋಟಿ
ರೂಪಾಯಿ ಸಾಲವನ್ನು ಮನ್ನಾ ಮಾಡಲು ಸಾಧ್ಯವಾಗುವುದಾದರೆ ನನ್ನ ಸಾಲವನ್ನು ಏಕೆ ಮನ್ನಾ ಮಾಡಲಾಗದು? ಮಲ್ಯ ಸಾಲ ಮನ್ನಾ ಮಾಡಿದ ಮಾದರಿಯಲ್ಲೇ ನನ್ನ 1.5 ಲಕ್ಷ ರೂಪಾಯಿ ಸಾಲವನ್ನೂ ಮನ್ನಾ ಮಾಡಿ ಎಂದು ನಾಸಿಕ್ ಪೌರ ಕಾರ್ವಿುಕನೊಬ್ಬ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ (ಎಸ್ಬಿಐ) ಪತ್ರ ಬರೆದು ಮನವಿ ಮಾಡಿದ್ದು ಬೆಳಕಿಗೆ ಬಂದಿತು. ಭಾವುರಾವ್ ಸೋನಾವನೆ ಎಂಬ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತ್ರಯಂಬೇಕೇಶ್ವರ ನಗರಸಭೆಯ ಪೌರ ಕಾರ್ವಿುಕ, ಮಲ್ಯ ಸಾಲಮನ್ನಾ ಮಾದರಿಯಲ್ಲೇ ತನ್ನ ಸಾಲವನ್ನೂ ಮನ್ನಾ ಮಾಡುವಂತೆ ಕೋರಿ ತಾನು ಎಸ್ಬಿಐಗೆ ಪತ್ರ ಬರೆದಿರುವುದಾಗಿ ಪ್ರಕಟಿಸಿದ.  ಮಲ್ಯ ಸಾಲಮನ್ನಾ ಮಾಡಲು ನಿರ್ಧರಿಸುವ ಮೂಲಕ ಬಹಳ ಒಳ್ಳೆಯ ನಿರ್ಧಾರ ಕೈಗೊಂಡಿದ್ದೀರಿ. ಅದಕ್ಕಾಗಿ ಅಭಿನಂದನೆಗಳು ಎಂಬುದಾಗಿ ತಿಳಿಸುವುದರ ಜೊತೆಗೇ ನಾನು ಮಗನ ಅನಾರೋಗ್ಯ ವೆಚ್ಚ ಭರಿಸಲು ಪಡೆದ 1.5 ಲಕ್ಷ ರೂಪಾಯಿ ಸಾಲವನ್ನೂ ಇದೇ ಮಾದರಿಯಲ್ಲಿ ಮನ್ನಾ ಮಾಡಿ ಎಂಬುದಾಗಿ ಕೋರಿದ್ದೇನೆ. ಬ್ಯಾಂಕ್ ಮ್ಯಾನೇಜರ್ನಿಂದ ಇನ್ನೂ ಉತ್ತರ ಬಂದಿಲ್ಲ ಎಂದು ಸೋನಾವನೆ ಹೇಳಿದ. ವಿಜಯ್ ಮಲ್ಯ ಅವರ ಕಿಂಗ್ಫಿಷರ್ ಏರ್ ಲೈನ್ಸ್ ಸಾಲವನ್ನು ಕೆಟ್ಟ ಸಾಲಗಳ (ವಸೂಲಿಯಾಗದ ಸಾಲ) ಪಟ್ಟಿಗೆ ಎಸ್ಬಿಐ ಸೇರಿಸಿದೆ. ಆದರೆ ಅವರ ಸಾಲ ಮನ್ನಾ ಆಗುತ್ತದೆ ಎಂಬುದು ಇದರ ಅರ್ಥವಲ್ಲ, ಇದಕ್ಕೆ ಸಂಬಂಧಿಸಿದ ಕಾನೂನು ಕ್ರಮ ಮುಂದುವರೆಯುತ್ತದೆ ಎಂಬುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೇಳಿದ ಹಿನ್ನೆಲೆಯಲ್ಲಿ ಸೋನಾವನೆ ಪತ್ರ ಬರೆದಿದ್ದ.

2016: ಮುಂಬೈ (ಮಹಾರಾಷ್ಟ್ರ)/ ಡುಮ್ಕಾ (ಜಾರ್ಖಂಡ್): ಜಾರ್ಖಂಡಿನ ಡುಮ್ಕಾದಲ್ಲಿ ಅಂಚೆ
ಕಚೇರಿ ನೌಕರನೊಬ್ಬನ ಮನೆಯಲ್ಲಿ 40 ಲಕ್ಷ ರೂಪಾಯಿ ಪತ್ತೆಯಾದ ಸುದ್ದಿಯ ಬೆನ್ನಲ್ಲೇ ಮಹಾರಾಷ್ಟ್ರದ ನವ ಮುಂಬೈಯಲ್ಲಿ ಕಾರೊಂದರಲ್ಲಿ ಹಳೆಯ 500, 1000 ರೂಪಾಯಿ ಮುಖಬೆಲೆಯ ಒಂದು ಕೋಟಿ ರೂಪಾಯಿ ಪತ್ತೆಯಾಯಿತು. ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರು ತಮ್ಮ ಬಳಿ ಇದ್ದ ಹಳೆಯ 500, 1000 ರೂಪಾಯಿ ನೋಟುಗಳನ್ನು 2000 ರೂಪಾಯಿಗಳಿಗೆ ವಿನಿಮಯ ಮಾಡಿ, ಬಿಳಿ ಹಣವನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದ್ದಾಗ ನವಿ ಮುಂಬೈ ಅಪರಾಧ ಶಾಖೆ ಪೊಲೀಸರ ಕೈಯಲ್ಲಿ ಸಿಕ್ಕಿ ಬಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರಿಯಲ್ ಎಸ್ಟೇಟ್ ಏಜೆಂಟರು ಮತ್ತು ಇತರ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಪೊಲೀಸರು ಒಂದು ಕೋಟಿ ರೂಪಾಯಿಗಳನ್ನು ವಶ ಪಡಿಸಿಕೊಂಡರು.  ರಿಯಲ್ ಎಸ್ಟೇಟ್ ಏಜೆಂಟರ ಹೊರತಾಗಿ ಬಂಧಿತರಾದ ಇಬ್ಬರು ವ್ಯಕ್ತಿಗಳು ಶೇಕಡಾ 30 ಕಮಿಷನ್ ಪಡೆದು ರಿಯಲ್ ಎಸ್ಟೇಟ್ ಏಜೆಂಟರ ಕಪ್ಪು ಹಣವನ್ನು ಬಿಳ ಹಣವನ್ನಾಗಿ ಮಾರ್ಪಡಿಸುವ ಭರವಸೆ ನೀಡಿದ್ದರು ಎಂದು ಪೊಲೀಸ್ ಮೂಲಗಳು ಹೇಳಿದವು. ಸುಳಿವು ಸಿಕ್ಕಿದ್ದ ಹಿರಿಯ ಇನ್ಸ್ಪೆಕ್ಟರ್ ಅಶೋಕ ರಜಪೂತ್ ಅವರು ಆರೋಪಿಗಳನ್ನು ಹಿಂದಿನ ರಾತ್ರಿ ಅಡ್ಡಗಟ್ಟಿ ಸ್ಕೋಡಾ ಕಾರಿನಲ್ಲಿದ್ದ ಹಣವನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಿದರು.  ಜಾರ್ಖಂಡಿನ ಡುಮ್ಕಾದಲ್ಲಿ ಅಂಚೆ ಕಚೇರಿ ನೌಕರನ ಮನೆಯಲ್ಲಿ 40 ಲಕ್ಷ ರೂಪಾಯಿ ವಶ ಪಡಿಸಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಪ್ರಸಾದ್ ನೇತೃತ್ವದಲ್ಲಿ ಮೂರು ಕಡೆಗಳಲ್ಲಿ ದಾಳಿ ನಡೆಸಿ 93 ಲಕ್ಷ ರೂಪಾಯಿಗಳನ್ನು ವಶ ಪಡಿಸಿಕೊಂಡರು.


2016: ಅಹಮದಾಬಾದ್: ಸಮುದ್ರದ ಮಧ್ಯೆ ಹೊತ್ತಿಕೊಂಡು ಉರಿಯುತ್ತಿದ್ದ ದೋಣಿಯೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಐವರನ್ನು ಭಾರತೀಯ ಕರಾವಳಿ ಕಾವಲುಪಡೆಯು ರಕ್ಷಿಸಿದ ಘಟನೆ ಗುಜರಾತಿನ ಪೋರ್ ಬಂದರು  ಸಮೀಪ ನವೆಂಬರ್ 18 ಶುಕ್ರವಾರ ಘಟಿಸಿತು. ಕೃಷ್ಣರಾಜ್ ಹೆಸರಿನ ಮೀನುಗಾರಿಕಾ ದೋಣಿಗೆ ಪೋರ್ ಬಂದರು ಸಮೀಪ ಅರಬ್ಬಿ ಸಮುದ್ರ ಮಧ್ಯದಲ್ಲಿ ಬೆಂಕಿ ತಗುಲಿತ್ತು. ಮೀನುಗಾರರ ಸಂಘದ ಮೂಲಕ ಸುದ್ದಿ ತಿಳಿದ ಕರಾವಳಿ ಕಾವಲು ಪಡೆಯ ಅರುಶ್ ನೌಕೆ ಮೀನುಗಾರರ ರಕ್ಷಣೆಗಾಗಿ ತತ್ ಕ್ಷಣವೇ ಸಮುದ್ರ ಮಧ್ಯಕ್ಕೆ ಧಾವಿಸಿತು. ದೋಣಿಗೆ ಬೆಂಕಿ ತಗುಲಿದಾಗ ಅದು ಪೋರ್ ಬಂದರಿನಿಂದ 14 ನಾಟಿಕಲ್ ಮೈಲು ದೂರ ಸಮುದ್ರದಲ್ಲಿತ್ತು. ಇತರ ಮೀನುಗಾರಿಕಾ ದೋಣಿಗಳ ನೆರವಿನೊಂದಿಗೆ ದೋಣಿಗೆ ತಗುಲಿದ್ದ ಬೆಂಕಿ ಆರಿಸಲು ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ಸುಮಾರು ಒಂದೂವರೆ ಗಂಟೆ ಬೇಕಾಯಿತು ಎಂದು ಕರಾವಳಿ ಕಾವಲು ಪಡೆ ತಿಳಿಸಿತು. ಕಾರ್ಯಾಚರಣೆಯಲ್ಲಿ ಐವರನ್ನು ರಕ್ಷಿಸಲು ಸಾಧ್ಯವಾಯಿತಾದರೂ, ಒಬ್ಬ ಮೀನುಗಾರ ಸಾವನ್ನಪ್ಪಿದ್ದು, ಇನ್ನೊಬ್ಬನಿಗೆ ಅಲ್ಪಸ್ವಲ್ಪ ಸುಟ್ಟ ಗಾಯಗಳಾದವು. . ದೋಣಿಯನ್ನು ಇನ್ನೊಂದು ದೋಣಿಗೆ ಕಟ್ಟಿ ಕರಾವಳಿಗೆ ತರಲಾಯಿತು ಎಂದು ಕರಾವಳಿ ಕಾವಲು ಪಡೆ ಹೇಳಿತು.

2016: ನವದೆಹಲಿ: 500 ರೂ. ಮತ್ತು 1000 ರೂ. ನೋಟುಗಳ ರದ್ದತಿಯ ಹಿನ್ನೆಲೆಯಲ್ಲಿ ವಾಸ್ತವ ಪರಿಸ್ಥಿತಿಯನ್ನು ಅರಿಯಲು ಎಲ್ಲಾ ರಾಜ್ಯಗಳಿಗೂ ಭೇಟಿ ನೀಡುವಂತೆ ಕೇಂದ್ರ ಸರ್ಕಾರವು ವಿವಿಧ ಸಚಿವಾಲಯಗಳ ಹಿರಿಯ ಅಧಿಕಾರಿಗಳಿಗೆ ಸೂಚಿಸಿತು. ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಜಂಟಿ ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ದರ್ಜೆಯ 70 ಹಿರಿಯ ಅಧಿಕಾರಿಗಳನ್ನು ಆಯ್ಕೆ ಮಾಡಿ 32 ತಂಡಗಳನ್ನು ರಚಿಸಿದೆ. ಅಧಿಕಾರಿಗಳು ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಿ ನೋಟು ರದ್ಧತಿಯ ನಂತರದ ಪರಿಸ್ಥಿತಿಯ ಕುರಿತು ತಳಮಟ್ಟದಲ್ಲಿ ಅಧ್ಯಯನ ನಡೆಸಲಿದ್ದಾರ. ಗ್ರಾಮೀಣ ಪ್ರದೇಶಗಳಿಗೆ ತೆರಳಿ ಮಾಹಿತಿ ಕಲೆ ಹಾಕಲಿದ್ದಾರೆ. ನಂತರ ಕೇಂದ್ರ ಸರ್ಕಾರಕ್ಕೆ ವಿವರವಾದ ವರದಿಯನ್ನು ಸಲ್ಲಿಸಲಿದ್ದಾರೆ. ಗುಜರಾತ್, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಒಡಿಶಾ, ತಮಿಳುನಾಡು, ಆಂಧ್ರ ಪ್ರದೇಶ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ ಹಾಗೂ ಪಂಜಾಬ್ಗೆ ತಲಾ 3 ಅಧಿಕಾರಿಗಳ ತಂಡ ಭೇಟಿ ನೀಡಲಿದೆ. ತೆಲಂಗಾಣ, ಕೇರಳ, ಹರ್ಯಾಣ, ಛತ್ತೀಸ್ಗಢ, ಜಾರ್ಖಂಡ್, ಗೋವಾ, ಅಸ್ಸಾಂ ರಾಜ್ಯಗಳಿಗೆ ತಲಾ ಇಬ್ಬರು ಅಧಿಕಾರಿಗಳಿರುವ ತಂಡ ಭೇಟಿ ನೀಡಲಿದೆ. ನಾಗಾಲ್ಯಾಂಡ್, ಮಿಜೋರಾಂ, ಅರುಣಾಚಲಪ್ರದೇಶ, ತ್ರಿಪುರಾ, ಮೇಘಾಲಯ, ಮಣಿಪುರ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಪುದುಚೆರಿ ಮತ್ತು ಸಿಕ್ಕಿಂಗೆ ತಲಾ ಓರ್ವ ಅಧಿಕಾರಿ ಭೇಟಿ ನೀಡಿ ಮಾಹಿತಿ ಕಲೆ ಹಾಕಲಿದ್ದಾರೆ. ಅಧಿಕಾರಿಗಳ ಭೇಟಿಗೆ ದಿನಾಂಕವನ್ನು ಶೀಘ್ರ ನಿಗದಿ ಮಾಡಲಾಗುವುದು ಎಂದು ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯ ತಿಳಿಸಿತು.

2016: ಡುಮ್ಕಾ (ಜಾರ್ಖಂಡ್): ಜಾರ್ಖಂಡಿನ ಡುಮ್ಕಾದಲ್ಲಿ ಅಂಚೆ ಕಚೇರಿ ನೌಕರನೊಬ್ಬನ ಮನೆಯಲ್ಲಿ 40 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ಪೊಲೀಸ್ ದಾಳಿ ವೇಳೆಯಲ್ಲಿ ಅಂಚೆ ಕಚೇರಿ ನೌಕರನ ಮನೆಯಲ್ಲಿ 40 ಲಕ್ಷ ರೂಪಾಯಿ ನಗದು ಹಣ ಪತ್ತೆಯಾಯಿತು.
 2016: ನವದೆಹಲಿ: ಕೇಂದ್ರ ಸರ್ಕಾರವು 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ದೊಡ್ಡ ಪ್ರಮಾಣದಲ್ಲಿ ಕಪ್ಪು ಹಣ  ಸಂಗ್ರಹ ಪತ್ತೆಯಾಗುತ್ತಿದೆ. ಈಗ ಬಂದಿರುವ ವರದಿಗಳ ಪ್ರಕಾರ ನಕ್ಸಲೀಯರು ಅಡಗಿಸಿಟ್ಟಿದ್ದ ಕಪ್ಪು ಹಣವೂ ಪತ್ತೆಯಾಗಿದೆ. ವರದಿಗಳ ಪ್ರಕಾರ ತೆಲಂಗಾಣ- ಛತ್ತೀಸ್ಗಢ ಗಡಿಯಲ್ಲಿ ನಕ್ಸಲೀಯರ ಕಪ್ಪು ಹಣ ಪತ್ತೆಯಾಗಿದ್ದು, ಗ್ರಾಮಸ್ಥನೊಬ್ಬನನ್ನು 6 ಲಕ್ಷ ರೂಪಾಯಿ ಸಹಿತವಾಗಿ ಬಂಧಿಸಲಾಯಿತು ಎಂದು ವರದಿ ತಿಳಿಸಿತು.

2008: ದಿವಂಗತ ಜೋಕಿಮ್ ಮತ್ತು ವಯೊಲೆಟ್ ಆಳ್ವಾ ಅವರ ಸಂಸ್ಮರಣಾರ್ಥ ಅಂಚೆ ಚೀಟಿಯನ್ನು ಅವರ ಜನ್ಮ ಶತಮಾನೋತ್ಸವ ವರ್ಷದ ಅಂಗವಾಗಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನವದೆಹಲಿಯಲ್ಲಿ ಬಿಡುಗಡೆ ಮಾಡಿದರು. ವಯೊಲೆಟ್ ಮತ್ತು ಜೋಕಿಮ್ ಅವರು ರಾಜ್ಯಸಭೆ ಮತ್ತು ಲೋಕಸಭೆಗೆ 1952ರಲ್ಲಿ ಆಯ್ಕೆಯಾದರು. ಇವರು ದೇಶದ ಇತಿಹಾಸದಲ್ಲಿ ಸಂಸತ್ತಿಗೆ ಆಯ್ಕೆಯಾದ ಮೊದಲ ದಂಪತಿ. ಈ ಸ್ವಾತಂತ್ರ್ಯ ಹೋರಾಟಗಾರ ದಂಪತಿಯ ನೆನಪಿಗಾಗಿ ಪ್ರಥಮ ದಿನದ ಲಕೋಟೆಯನ್ನೂ ಸಹ ಪಾಟೀಲ್  ಬಿಡುಗಡೆ ಮಾಡಿದರು. ಈ ಸಮಾರಂಭದಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ, ಹಿಮಾಚಲ ಪ್ರದೇಶದ ರಾಜ್ಯಪಾಲರಾದ ಪ್ರಭಾರಾವ್, ಸಂಪರ್ಕ ಸಚಿವ ಎ.ರಾಜ, ಮಾಜಿ ಪ್ರಧಾನಿ ಐ.ಕೆ. ಗುಜ್ರಾಲ್ ಹಾಗೂ ಜೋಕಿಮ್ ಮತ್ತು ವಯೊಲೆಟ್ ಆಳ್ವ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಭಾಗವಹಿಸಿದ್ದರು.

2008: ಮಹಾರಾಷ್ಟ್ರ ಸರ್ಕಾರವು ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲ 10 ಆರೋಪಿಗಳ ವಿರುದ್ಧ ಮೊಕಾ ಕಾಯ್ದೆ ಜಾರಿಗೊಳಿಸಿತು.

2008: ಬಿಹಾರದಲ್ಲಿನ ಬೌದ್ಧ ಧರ್ಮೀಯರ ಪವಿತ್ರ ಕ್ಷೇತ್ರ ಬೋಧ ಗಯಾದ ಮಹಾಬೋಧಿ ದೇಗುಲ ಸಂಕೀರ್ಣದೊಳಗೆ ಬರುವ ಭಕ್ತರು ಮತ್ತು ಪ್ರವಾಸಿಗರು ಇನ್ನು ಮುಂದೆ ಗರ್ಭಗುಡಿ ಹೊರತುಪಡಿಸಿ ಉಳಿದೆಡೆಯೆಲಾ ಚಪ್ಪಲಿ ಧರಿಸಬಹುದು. ಈವರೆಗೆ ಈ ಸಂಬಂಧ ಇದ್ದ ದಶಕಗಳಷ್ಟು ಹಳೆಯದಾದ ನಿರ್ಬಂಧವನ್ನು ದೇವಸ್ಥಾನದ ಆಡಳಿತ ಮಂಡಳಿ ತೆಗೆದುಹಾಕಿತು. ಚಳಿಗಾಲದಲ್ಲಿ 2ರಿಂದ 4 ಡಿಗ್ರಿ ಸೆಲ್ಸಿಯಸ್ಸಿಗೆ ಕುಸಿಯುವ ಉಷ್ಣಾಂಶ ಹಾಗೂ ಬೇಸಿಗೆ ಕಾಲದಲ್ಲಿ ಅತಿಯಾದ ಬಿಸಿಲಿನಲ್ಲಿ ಬರಿಗಾಲಲ್ಲಿ ನಡೆಯುವುದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಎದುರಿಸಬೇಕಾಗಿದ್ದ ಹಿನ್ನೆಲಯಲ್ಲಿ, ಚಪ್ಪಲಿ ಧರಿಸಲು ಇದ್ದ ನಿರ್ಬಂಧ ತೆಗೆದು ಹಾಕಬೇಕೆಂಬ  ಒತ್ತಾಯ ಕೇಳಿಬಂದಿತ್ತು. ಟಿಬೆಟಿನ ಬೌದ್ಧೀಯರ ಕರ್ಮಪಾ ಪಂಗಡದ ಯುವ ಮುಖ್ಯಸ್ಥ ಉಗೇನ್ ಟ್ರಿನ್ಲ್ಲೆ ದೋರ್ಜೆ 2001ರಲ್ಲಿ ನಿಯಮ ಉಲ್ಲಂಘಿಸಿ ದೊಡ್ಡ ಶೂಗಳನ್ನು ಧರಿಸಿ ದೇವಸ್ಥಾನ ಸಂಕೀರ್ಣಪ್ರವೇಶಿಸುವ ಮೂಲಕ ಮತ್ತೊಂದು ಪಂಗಡದ  ವಿರೋಧ ಎದುರಿಸಿದ್ದರು. 1500 ವರ್ಷ ಹಳೆಯದಾದ ಮಹಾಬೋಧಿ ದೇವಸ್ಥಾನವನ್ನು 2550 ವರ್ಷ ಹಿಂದೆ ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷದ ಎದುರು ಕಟ್ಟಲಾಗಿತ್ತು. 2002ರಲ್ಲಿ ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಅದನ್ನು ಸೇರಿಸಿದ್ದರಿಂದ ವರ್ಷವಿಡೀ ಸಾವಿರಾರು ಪ್ರವಾಸಿಗರು, ಅದರಲ್ಲೂ ಬೌದ್ಧ ಸಮುದಾಯ ಹೆಚ್ಚಾಗಿರುವ ದೇಶಗಳ ಜನ ಅಲ್ಲಿಗೆ ಭೇಟಿ ನೀಡುತ್ತಾರೆ.

2008: ಎರಡು ವರ್ಷದ ಹಿಂದೆ ತಮ್ಮ ನಾಯಕನನ್ನು ಕೊಲೆ ಮಾಡಿದ್ದ21 ಮಂದಿ ಸಿಪಿಎಂ ಕಾರ್ಯಕರ್ತರಿಗೆ ಪಶ್ಚಿಮಬಂಗಾಳದ ಹೂಗ್ಲಿಯ ಸ್ಥಳೀಯ ನ್ಯಾಯಾಲಯವೊಂದು  ಜೀವಾವಧಿ ಶಿಕ್ಷೆ ವಿಧಿಸಿ, ಜೊತೆಗೆ ತಲಾ 25 ಸಾವಿರ ರೂ. ದಂಡವನ್ನೂ ವಿಧಿಸಿತು.

2008: ಇಂಗ್ಲಿಷಿನ ಕ್ಲಾಸಿಕಲ್ ಪದವನ್ನು ಕನ್ನಡದಲ್ಲಿ ಶಾಸ್ತ್ರೀಯ ಎಂದು ಬಳಸಿದರೆ ಹೆಚ್ಚು ಅರ್ಥ ನೀಡುವುದಿಲ್ಲ. `ಶಾಸ್ತ್ರೀಯ' ಎಂದರೆ ಸಾಂಪ್ರದಾಯಿಕ, ನಿಯಮ ಬದ್ಧ ಎಂದರ್ಥ. ಆದ್ದರಿಂದ `ಕ್ಲಾಸಿಕಲ್' ಪದಕ್ಕೆ ತೀರಾ ಸಮೀಪವಿರುವ `ಅಭಿಜಾತ' (ಅತ್ಯುತ್ತಮ) ಪದವನ್ನೇ ಇನ್ನು ಮುಂದೆ ಎಲ್ಲರೂ ಬಳಸಬೇಕು ಎಂದು ಸಂಶೋಧಕ ಡಾ. ಎಂ.ಚಿದಾನಂದ ಮೂರ್ತಿ ಬೆಂಗಳೂರಿನಲ್ಲಿ ಸಲಹೆ ನೀಡಿದರು. `ಇಂಗ್ಲಿಷಿನ `ಕ್ಲಾಸಿಕಲ್' ಎಂಬ ಮಾತಿಗೆ ಗ್ರೀಕ್, ರೋಮನ್ ಮಾದರಿಯಲ್ಲಿ ಅತ್ಯುನ್ನತ, ಚಿರಂತನ ಶ್ರೇಷ್ಠತೆಯ ಎಂಬ ಅರ್ಥವಿದೆ. `ಶಾಸ್ತ್ರೀಯ' ಎಂಬ ಪದಕ್ಕೆ ಸಂಬಂಧಿಸಿದಂತೆ  ಹಲವಾರು ವಿದ್ವಾಂಸರೊಂದಿಗೆ ಚರ್ಚಿಸಿ, `ಶಾಸ್ತ್ರೀಯ ಭಾಷೆ' ಬದಲು `ಅಭಿಜಾತ ಭಾಷೆ' ಎಂದು ಬಳಸಿದರೆ ಒಳಿತು ಎಂಬ ನಿರ್ಧಾರಕ್ಕೆ ಬಂದಿರುವುದಾಗಿ' ಅವರು ತಿಳಿಸಿದರು.

2008: ಜಕಣಾಚಾರಿ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಲ್ಪ ಕಲಾವಿದ ಗುಂಡಪ್ಪ ದೇವೇಂದ್ರಪ್ಪ ಮಾಯಾಚಾರಿ (83) ಬಾಗಲಕೋಟೆಯಲ್ಲಿ ನಿಧನರಾದರು. ಕೃಷ್ಣಶಿಲೆ ಕೆತ್ತನೆಯಲ್ಲಿ ಪರಿಣತಿ ಹೊಂದಿದ್ದ ಗುಂಡಪ್ಪ, ಅವರಿಗೆ 1999ರಲ್ಲಿ ಅಮರಶಿಲ್ಪಿ ಜಕಣಾಚಾರಿ ಪ್ರಶಸ್ತಿ, 1978ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 1998ರಲ್ಲಿ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಸಮ್ಮಾನಗಳು ಲಭಿಸಿದ್ದವು. ಮೂಲತಃ ಬೀಳಗಿ ತಾಲ್ಲೂಕು ಹೆರಕಲ್ ಗ್ರಾಮದವರಾದ ಗುಂಡಪ್ಪ ಮಾಯಾಚಾರಿ, ದೇವಿಮೂರ್ತಿಗಳ ಕೆತ್ತನೆಯ ಮೂಲಕ ಪ್ರಸಿದ್ಧಿ ಗಳಿಸಿದ್ದರು.

2007: ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿ, ವಿಧಾನಸಭೆಯ ವಿಸರ್ಜನೆಗೆ ಸಂಸತ್ತನ್ನು ಕೋರಲು ನಿರ್ಧರಿಸಿತು. ಸಂಪುಟದ ನಿರ್ಣಯಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅಂಗೀಕಾರದ ಮೊಹರು ಒತ್ತಿದ ನಂತರ ಗೃಹಸಚಿವ ಶಿವರಾಜ್ ಪಾಟೀಲ್ ರಾಷ್ಟ್ರಪತಿ ಆಳ್ವಿಕೆಯ ಅಧಿಕೃತ ನಿರ್ಧಾರವನ್ನು ಸಂಜೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರಿಗೆ ರವಾನಿಸಿದರು. ಹೀಗಾಗಿ ಕರ್ನಾಟಕ ಕೇವಲ ಆರು ವಾರಗಳ ಅವಧಿಯಲ್ಲಿ ಎರಡನೇ ಬಾರಿಗೆ ರಾಷ್ಟ್ರಪತಿ ಆಳ್ವಿಕೆಗೆ ಒಳಗಾಯಿತು. ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಜೆಡಿ (ಎಸ್) ನಿರಾಕರಿಸಿದ್ದರಿಂದ ನಿರ್ಮಾಣವಾದ ರಾಜಕೀಯ ಬಿಕ್ಕಟ್ಟಿನಿಂದಾಗಿ 2007ರ ಅಕ್ಟೋಬರ್ ಒಂಬತ್ತರಿಂದ ನವೆಂಬರ್ 12ರ ವರೆಗೆ 34 ದಿನಗಳ ಕಾಲ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.

2007: ಹನೂರು ಕ್ಷೇತ್ರ ಶಾಸಕಿ ಪರಿಮಳಾ ನಾಗಪ್ಪ ಅವರ ಅಳಿಯ ಡಾ.ಕಿರಣ್ ಪಟೇಲ್ (34) ಅವರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಭೂಪಸಂದ್ರ ಬಡಾವಣೆಯಲ್ಲಿ ಸಂಭವಿಸಿತು. ಎಂಬಿಬಿಎಸ್ ವ್ಯಾಸಂಗ ಮುಗಿಸಿದ ಬಳಿಕ ವೈದ್ಯಕೀಯ ಉಪಕರಣಗಳ ವ್ಯಾಪಾರ ಮಾಡಿಕೊಂಡಿದ್ದ ಕಿರಣ್ ಪಟೇಲ್ ಅವರು ಭೂಪಸಂದ್ರದಲ್ಲಿ ನೆಲೆಸಿದ್ದರು.

2007: 1997ರಲ್ಲಿ ದೆಹಲಿಯ ಉಪಾಹಾರ್ ಸಿನಿಮಾ ಮಂದಿರದ ಬೆಂಕಿ ದುರಂತದಲ್ಲಿ 59 ಜನರು ಸಜೀವ ದಹನಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾ ಮಂದಿರದ ಮಾಲಿಕರಾದ ಸುಶಿಲ್, ಗೋಪಾಲ್ ಅನ್ಸಾಲ್ ಮತ್ತು ದೆಹಲಿ ನಗರಪಾಲಿಕೆ ಅಧಿಕಾರಿಗಳಾದ ಶಾಂ ಸುಂದರ್ ಶರ್ಮಾ, ಎನ್. ಡಿ. ತಿವಾರಿ ಹಾಗೂ ಅಗ್ನಿ ಶಾಮಕದ ದಳದ ಅಧಿಕಾರಿ ಎಚ್. ಎಸ್. ಪನ್ವರ್ ಅವರೂ ಸೇರಿ ಇತರ 12 ಮಂದಿಯನ್ನು ತಪ್ಪಿತಸ್ಥರು ಎಂದು ನ್ಯಾಯಾಲಯ ಘೋಷಿಸಿತು. ಅನ್ಸಾಲ್ ಮತ್ತು ಇತರ 12 ಮಂದಿ ಭಾರತೀಯ ದಂಡ ಸಂಹಿತೆ 304ಎ (ಆತುರ ಹಾಗೂ ನಿರ್ಲ್ಯಕ್ಷದ ಕ್ರಮ) ಮತ್ತು ಜನರ ಜೀವಕ್ಕೆ ಅಪಾಯ ಒಡ್ಡಿದ ಇತರ ಪ್ರಕರಣಗಳ ಪ್ರಕಾರ ತಪ್ಪಿತಸ್ಥರು. ಇದಲ್ಲದೆ ಅನ್ಸಾಲ್ ಸಹೋದರರು ಸಿನಿಮಾಟೋಗ್ರಫಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಎಂದು ಹೆಚ್ಚುವರಿ ಸೆಷನ್ ನ್ಯಾಯಾಧೀಶರಾದ ಮಮತಾ ಸೆಹಗಲ್ ತೀರ್ಪು ನೀಡಿದರು. ಅನ್ಸಾಲ್ ಸಹೋದರರ ಎಂಟು ಮಂದಿ ಸಂಬಂಧಿಕರೂ ಸೇರಿದಂತೆ ಸಿಬಿಐ ಅಧಿಕಾರಿಗಳು ಒಟ್ಟು 115 ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ಅನ್ಸಾಲ್ ಸಂಬಂಧಿಗಳು ನಂತರ ತದ್ವಿರುದ್ಧ ಹೇಳಿಕೆ ನೀಡಿದ್ದರು. ಈ ಮಧ್ಯೆ ಅನ್ಸಾಲ್ ಸಹೋದರರ ಆಮಿಷಕ್ಕೆ ಒಳಗಾಗಿ ದಾಖಲೆ ಪತ್ರಗಳನ್ನು ತಿದ್ದಿದ್ದ  ನ್ಯಾಯಾಲಯದ ಸಿಬ್ಬಂದಿಯೊಬ್ಬರನ್ನು ಸೇವೆಯಿಂದ ವಜಾ ಮಾಡಲಾಗಿತ್ತು.

2007:  ದೇವರ ಆಜ್ಞೆಯ ನೆಪ ಹೇಳಿ  ಜಲಪೈಗುರಿ ಜಿಲ್ಲೆಯ ಕಾಶಿಯಾಜ್ಹೋರಾ ಗ್ರಾಮದ ಅಫಿಜುದ್ದೀನ್ ಅಲಿ (37) ಎಂಬಾತ  ತನ್ನ ಹದಿಹರೆಯದ ಮಗಳನ್ನೇ ಮದುವೆಯಾದ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿತು. ದೈವಿಕ ಇಚ್ಛೆಯೇ ತಾನು ತನ್ನ ಮಗಳನ್ನು ಮದುವೆಯಾಗಲು ಕಾರಣ. ದೇವರು ಕನಸಲ್ಲಿ ಬಂದು ಹಿರಿಯ ಮಗಳನ್ನು ಮದುವೆಯಾಗಲು ಆಜ್ಞಾಪಿಸಿದ ಎಂಬ ಸಬೂಬನ್ನು ಈ ಭೂಪ ನೀಡಿದ. ಹುಡುಗಿ ಐದು ತಿಂಗಳ ಗರ್ಭಿಣಿಯಾದಾಗ ವಿಷಯ ಬೆಳಕಿಗೆ ಬಂತು.

2007: ತಿರುಮಕೂಡಲಿನ ಇತಿಹಾಸ ಪ್ರಸಿದ್ಧ ಸೋಸಲೆ ವ್ಯಾಸರಾಜಮಠದ ಮಠಾಧಿಪತಿಗಳಾಗಿದ್ದ ವಿದ್ಯಾವಾಚಸ್ಪತಿ ತೀರ್ಥ ಸ್ವಾಮೀಜಿ (87) ತಿ. ನರಸೀಪುರದಲ್ಲಿ ನಿಧನರಾದರು. ಮೂಲತಃ ತಿ. ನರಸೀಪುರ ತಾಲ್ಲೂಕಿನ ತಲಕಾಡಿನವರಾದ ಸ್ವಾಮೀಜಿ, ಗುಂಬಳ್ಳಿ ನರಸಿಂಹಾಚಾರ್ ಅವರ ಪುತ್ರರಾಗಿದ್ದರು. ತಿ.ನರಸೀಪುರದಲ್ಲಿ ತಮ್ಮ ವಿದ್ಯಾಭ್ಯಾಸ ಪಡೆದಿದ್ದರು. ಮಹಾರಾಜರ ಕಾಲದಲ್ಲಿ ಇವರು 5 ಭಾಷೆಗಳಲ್ಲಿ ಹರಿಕಥಾ ವಿದ್ವಾಂಸರಾಗಿ ಸೇವೆ ಸಲ್ಲಿಸಿದ್ದರು. ಇವರಿಗೆ 10 ಮಂದಿ ಮಕ್ಕಳಿದ್ದರು. 1997ರಲ್ಲಿ ಮಠದ 54ನೇ ಮಠಾಧಿಪತಿಗಳಾಗಿ ಇವರು ನೇಮಕಗೊಂಡಿದ್ದರು.

2007: ಪೆಪ್ಸಿಕೊದ ಚೇರ್ಮನ್ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಇಂದ್ರಾ ಕೆ. ನೂಯಿ ಅವರನ್ನು ಅಮೆರಿಕ ಭಾರತ ವಾಣಿಜ್ಯ ಮಂಡಳಿಯ (ಯುಎಸ್ಐಬಿಸಿ) ನಿರ್ದೇಶಕ ಮಂಡಳಿಗೆ ನೇಮಕ ಮಾಡಲಾಯಿತು. ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಅಮೆರಿಕದ 250 ಬೃಹತ್ ಉದ್ದಿಮೆ ಸಂಸ್ಥೆಗಳಿಗೆ ಮತ್ತು ಭಾರತದ 24 ಜಾಗತಿಕ ಸಂಸ್ಥೆಗಳಿಗೆ `ಯು ಎಸ್ ಐ ಬಿ ಸಿ' ಸಲಹಾ ರೂಪದ ಸೇವೆ ನೀಡುತ್ತದೆ.

2006: ಕ್ಯಾನ್ಸರ್, ಏಡ್ಸ್, ಮಧುಮೇಹ ಮತ್ತು ರಕ್ತದ ಒತ್ತಡದಂತಹ ರೋಗಗಳನ್ನು ವಾಸಿ ಮಾಡುವಲ್ಲಿಪರಿಣಾಮಕಾರಿ ಫಲ ನೀಡಿರುವ ಗೋಮೂತ್ರ ಇದೀಗ ಗಡಿಯಾರದ ಮುಳ್ಳುಗಳನ್ನು ಚಲಿಸುವಂತೆ ಮಾಡುವಲ್ಲಿಯೂ ಯಶಸ್ವಿಯಾಯಿತು. ಕಛ್ ಮೂಲದ ವರ್ಧಮಾನ ಜೀವದಯಾ ಕೇಂದ್ರದ ಆಡಳಿತ ಟ್ರಸ್ಟಿ ವಸಂತಜಿ ಪ್ರೇಮ್ ಜಿ ಸೋನಿ ಅವರು ಆನಂದದಲ್ಲಿ ಗುಜರಾತ್ ಪ್ರದೇಶ ಆಯುರ್ವೇದ ಸಮ್ಮೇಳನದ ಆಶ್ರಯದಲ್ಲಿ ನಡೆದ ಆಯುರ್ವೇದ ಮೇಳದಲ್ಲಿ ಇದನ್ನು ಯಶಸ್ವಿಯಾಗಿ ಪ್ರಯೋಗ ಮಾಡಿ ತೋರಿಸಿದರು. ಅವರು ಮಾಡಿದ್ದು ಇಷ್ಟೆ: ಒಂದು ಲೋಟದದಲ್ಲಿ ಗೋಮೂತ್ರ ತುಂಬಿ ಅದರಲ್ಲಿ ತಾಮ್ರ ಹಾಗೂ ಸತುವಿನ ಒಂದೊಂದು ವಿದ್ಯುತ್ ವಾಹಕಗಳನ್ನು (ಎಲೆಕ್ಟ್ರೋಡ್) ಮುಳುಗಿಸಿದರು. ವಿದ್ಯುತ್ ಸಂಪರ್ಕ ಕಲ್ಪಿಸುವ ಈ ಪ್ರಕ್ರಿಯೆ ಪೂರ್ಣಗೊಂಡಾಗ ವಿದ್ಯುತ್ ಸಂಚಾರ ಆರಂಭವಾಗಿ ಗಡಿಯಾರದ ಮುಳ್ಳುಗಳು ಟಿಕ್ ಟಿಕ್ ಸದ್ದು ಮಾಡುತ್ತಾ ಚಲಿಸಲಾರಂಭಿಸಿದವು. `ಗೋಮೂತ್ರದಿಂದ ಈ ರೀತಿ ಉತ್ಪನ್ನವಾಗುವ ವಿದ್ಯುತ್ತಿನಿಂದ ಗಡಿಯಾರವನ್ನು 15 ದಿನಗಳ ಕಾಲ ನಿರಂತರವಾಗಿ ಚಲಾಯಿಸಬಹುದು. ಗೋಮೂತ್ರದ ವಿದ್ಯುತ್ ಶಕ್ತಿಯ ಬಗ್ಗೆ 1999ರಿಂದಲೇ ಪ್ರಯೋಗ ನಡೆಸುತ್ತಿದ್ದೇನೆ. ಎಲೆಕ್ಟ್ರಾನಿಕ್ ಕ್ಯಾಲ್ಕುಲೇಟರುಗಳು ಹಾಗೂ ರೇಡಿಯೋಗಳನ್ನು ಸಹಾ ಗೋಮೂತ್ರ ಬಳಸಿ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದೇನೆ' ಎಂದು ಅವರು ಪ್ರತಿಪಾದಿಸಿದರು. ವರ್ಧಮಾನ ಜೀವದಯಾ ಕೇಂದ್ರವು ಗೋಶಾಲೆಯೊಂದನ್ನು ನಡೆಸುತ್ತಿದ್ದು ಅಲ್ಲಿ ಭಾರಿ ಪ್ರಮಾಣದಲ್ಲಿ ಹಸುಗಳನ್ನು ಸಾಕುತ್ತಿದೆ.

2006: ಉತ್ತರ ಬಂಗಾಳದ ನ್ಯೂ ಜಲಪೈಗುರಿ ಸಮೀಪದ ಬೆಲಕೋಬ ನಿಲ್ದಾಣದಲ್ಲಿ, ಹಲ್ದಿಬಾರಿ-ಸಿಲಿಗುರಿ ಪ್ಯಾಸೆಂಜರ್ ರೈಲಿನಲ್ಲಿ ಸಂಜೆ ಸಂಭವಿಸಿದ ಭಾರಿ ಬಾಂಬ್ ಸ್ಫೋಟದಲ್ಲಿ 8 ಪ್ರಯಾಣಿಕರು ಮೃತರಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಅನಧಿಕೃತ ಮೂಲಗಳ ಪ್ರಕಾರ ಸತ್ತವರ ಸಂಖ್ಯೆ 15 ಎಂದು ಹೇಳಲಾಗಿದೆ. ರೈಲುಗಾಡಿಯ ಬೋಗಿಯೊಂದರ ಶೌಚಾಲಯದಲ್ಲಿ ಉಗ್ರಗಾಮಿಗಳು ಬಾಂಬನ್ನು ಅಡಗಿಸಿ ಇಟ್ಟಿದ್ದರು ಎಂದು ಶಂಕಿಸಲಾಗಿದೆ.

2006: ತ್ವರಿತವಾಗಿ ಆರ್ಥಿಕ ಬೆಳವಣಿಗೆ ಸಾಧಿಸುತ್ತಿರುವ ಭಾರತ ಮತ್ತು ಚೀನಾ ದೇಶಗಳ ಪರಸ್ಪರ ಬಾಂಧವ್ಯ ಸುಧಾರಣೆಗೆ ಒತ್ತು ಸಿಗುವ ನಿರೀಕ್ಷೆಗಳ ಮಧ್ಯೆ ಚೀನಾ ಅಧ್ಯಕ್ಷ ಹು ಜಿಂಟಾವೊ ಅವರು ನವದೆಹಲಿಗೆ ಆಗಮಿಸಿದರು. ಉನ್ನತ ಮಟ್ಟದ ನಿಯೋಗದ ನೇತೃತ್ವ ವಹಿಸಿರುವ ಜಿಂಟಾವೊ ಅವರನ್ನು ಪಾಲಂ ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣವ್ ಮುಖರ್ಜಿ ಹಾಗೂ ಕೇಂದ್ರ ಸಚಿವ ಕಪಿಲ್ ಸಿಬಲ್ ಸ್ವಾಗತಿಸಿದರು. 10 ವರ್ಷಗಳ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಮೊದಲ ಚೀನೀ ರಾಷ್ಟ್ರಪತಿ ಜಿಂಟಾವೊ.

2005: ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಬೆಂಗಳೂರಿನಲ್ಲಿ ಕರ್ನಾಟಕ ವಿಧಾನಮಂಡಲ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದರು. ಉಜ್ವಲ ಕರ್ನಾಕಕಕ್ಕೆ ನೀಲನಕ್ಷೆಯನ್ನು ಪ್ರಕಟಿಸಿದರು.

1999: ಖ್ಯಾತ ಗಾಯಕಿ ಲತಾ ಮಂಗೇಶ್ಕರ್, ಹಿರಿಯ ಪತ್ರಕರ್ತ ರಾಮಸ್ವಾಮಿ, ನ್ಯಾಯಮೂರ್ತಿ ಫಾಲಿ ಎಸ್. ನಾರಿಮನ್ ಮತ್ತು ಹಿರಿಯ ಆರೆಸ್ಸೆಸ್ ನಾಯಕ ನಾನಾಜಿ ದೇಶಮುಖ್ ಅವರನ್ನು ರಾಜ್ಯಸಭೆ ಸದಸ್ಯರಾಗಿ ನಾಮಕರಣ ಮಾಡಲಾಯಿತು.

1995: ತಾನು ರಾಜಕುಮಾರ ಚಾರ್ಲ್ಸ್ ಅವರಿಗೆ ವಿಧೇಯಳಾಗಿಲ್ಲ ಎಂದು ರಾಜಕುಮಾರಿ ಡಯಾನಾ ಬಿಬಿಸಿಯಲ್ಲಿ ಪ್ರಸಾರವಾದ ಸಂದರ್ಶನವೊಂದರಲ್ಲಿ ಒಪ್ಪಿಕೊಂಡರು.

1981: ಭಾರತದ ಎರಡನೇ ಭೂ ವೀಕ್ಷಣಾ ಉಪಗ್ರಹ `ಭಾಸ್ಕರ-2'ನ್ನು ಮಾಸ್ಕೋದ ಬಾಹ್ಯಾಕಾಶ ಉಪಗ್ರಹ ನಿಲ್ದಾಣದಿಂದ ಯಶಸ್ವಿಯಾಗಿ ಅಂತರಿಕ್ಷಕ್ಕೆ ಹಾರಿಬಿಡಲಾಯಿತು.

1975: ಸ್ಪೇನಿನ ಜನರಲ್ ಫ್ರಾನ್ಸಿಸ್ಕೊ ಫ್ರಾಂಕೊ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಹೆಚ್ಚು ಕಡಿಮೆ 40 ವರ್ಷಗಳ ಕಾಲ ಅವರು ಸ್ಪೇನಿನ ಆಡಳಿತ ನಡೆಸಿದರು.

1970: ಸಾಹಿತಿ ಟಿ. ಪದ್ಮ ಜನನ.

1962: ಕ್ಯೂಬಾದ ಕ್ಷಿಪಣಿ ಬಿಕ್ಕಟ್ಟು ಅಂತ್ಯಗೊಂಡಿತು. ಸೋವಿಯತ್ ಯೂನಿಯನ್ ಕ್ಯೂಬಾದಲ್ಲಿದ್ದ ತನ್ನ ಎಲ್ಲ ಕ್ಷಿಪಣಿ ಹಾಗೂ ಬಾಂಬರುಗಳನ್ನು. ಅಮೆರಿಕ ದ್ವೀಪದ ಮೇಲೆ ವಿಧಿಸಿದ್ದ ದಿಗ್ಬಂಧನವನ್ನು ರದ್ದು ಪಡಿಸಿತು.

1952: ಸಾಹಿತಿ ಕಮಲಾ ಹೆಮ್ಮಿಗೆ ಜನನ.

1947: ಬ್ರಿಟನ್ನಿನ ರಾಜಕುಮಾರಿ ಎಲಿಜಬೆತ್ ಮತ್ತು ಎಡಿನ್ ಬರೋದ ಡ್ಯೂಕ್ ಫಿಲಿಪ್ ಮೌಂಟ್ ಬ್ಯಾಟನ್ ಅವರ ವಿವಾಹ ವೆಸ್ ್ಟಮಿನ್ ಸ್ಟರ್ ಅಬ್ಬೆಯಲ್ಲಿ ನಡೆಯಿತು.

1944: ಸಾಹಿತಿ ದಾಸೇಗೌಡ (ಜಿವಿಡಿ) ಜನನ.

1931: ಸಾಹಿತಿ ವಿ.ಜೆ. ನಾಯಕ ಜನನ.

1918: ಸಾಹಿತಿ ಇ.ಆರ್. ಸೇತೂರಾಂ ಜನನ.

1900: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ದೇಶಭಕ್ತರಿಗೆ ಕನ್ನಡ ದೇಶಭಕ್ತಿ ಗೀತೆಗಳನ್ನು ರಚಿಸಿಕೊಟ್ಟ `ಭಾರತಿ' ಕಾವ್ಯನಾಮದ ರಾಜಮ್ಮ (20-11-1900ರಿಂದ 24-10-1984) ಅವರು ರಾಘವಾಚಾರ್ಯರು- ಸೀತಮ್ಮ ದಂಪತಿಯ ಮಗನಾಗಿ ತುಮಕೂರಿನಲ್ಲಿ ಜನಿಸಿದರು.

1889: ಅಮೆರಿಕದ ಖಗೋಳ ವಿಜ್ಞಾನಿ ಎಡ್ವಿನ್ ಪೊವೆಲ್ ಹಬಲ್ (1889-1953) ಹುಟ್ಟಿದ ದಿನ. ವಿಶ್ವವು ವಿಸ್ತಾರಗೊಳ್ಳುತ್ತಿದೆ ಎಂಬುದಕ್ಕೆ ಇವರು ಮೊತ್ತ ಮೊದಲ ಸಾಕ್ಷ್ಯ ಒದಗಿಸಿದರು. ಇಂದು ಇವರು `ಎಕ್ಸ್ ಟ್ರಾ ಗ್ಯಾಲಕ್ಟಿಕ್ ಅಸ್ಟ್ರಾನಮಿ'ಯ ಸ್ಥಾಪಕರೆಂದೇ ಖ್ಯಾತರಾಗಿದ್ದಾರೆ.

1873: ಪ್ರತಿಸ್ಪರ್ಧಿ ನಗರಗಳಾಗಿದ್ದ ಬುಡಾ ಮತ್ತು ಪೆಸ್ಟ್ ಒಂದಾಗಿ ಹಂಗರಿಯ ರಾಜಧಾನಿ `ಬುಡಾಪೆಸ್ಟ್' ರೂಪುಗೊಂಡಿತು.

1659: ಮರಾಠಾ ಯೋಧ ಶಿವಾಜಿ ತನ್ನ ಕೈಗೆ ಅಂಟಿಸಲಾಗಿದ್ದ `ವ್ಯಾಘ್ರನಖ' (ಹುಲಿ ಉಗುರು) ಬಳಸಿ ಬಿಜಾಪುರದ ಅದಿಲ್ ಶಹಾನ ಜನರಲ್ ಅಫ್ಜಲ್ ಖಾನನನ್ನು ಕೊಂದು ಹಾಕಿದ. ಸಂಧಾನದ ಹೆಸರಿನಲ್ಲಿ ಶಿವಾಜಿಯ ಹತ್ಯೆಗಾಗಿ ನಡೆದಿದ್ದ ಸಂಚೊಂದು ಈ ರೀತಿ ವಿಫಲಗೊಂಡಿತು. ಈ ಘಟನೆಯ ಬಳಿಕ ಶಿವಾಜಿ `ಹೀರೋ' ಆಗಿ ಬೆಳೆದ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment