Sunday, November 25, 2018

ಇಂದಿನ ಇತಿಹಾಸ History Today ನವೆಂಬರ್ 25

ಇಂದಿನ ಇತಿಹಾಸ History Today ನವೆಂಬರ್ 25
2018: ಲಕ್ನೋ:  ರಾಮ ಮಂದಿರ ನಿರ್ಮಾಣಕ್ಕಾಗಿ ಬೇಡಿಕೆತಾರಕಕ್ಕೆಏರಿರುವುದರ ಮಧ್ಯೆಯೇ, ಅಯೋಧ್ಯೆಯಲ್ಲಿ  ೨೨೧ ಮೀಟರ್‌ಎತ್ತರದ ಶ್ರೀರಾಮನ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದು ಉತ್ತರಪ್ರದೇಶದ ಪ್ರಧಾನ ಕಾರ್ಯದರ್ಶಿ (ಮಾಹಿತಿ) ಅವನೀಶ್ ಅವಸ್ತಿ ಇಲ್ಲಿ ಪ್ರಕಟಿಸಿದರು.  ಪ್ರತಿಮೆಯ  ನೈಜ ಎತ್ತರವು ೧೫೧ ಮೀಟರ್ ಆಗಿದ್ದರೆ, ಪ್ರತಿಮೆಯ ತಲೆಯ ಮೇಲಿನ  ಛತ್ರಿ ೨೦ ಮೀಟರ್ ಮತ್ತು ಪೀಠ  ೫೦ ಮೀಟರ್ ಎತ್ತರ ಆಗುತ್ತದೆ ಎಂದು ಅವರು ಹೇಳಿದರು. ಪೀಠದಲ್ಲಿ  ವಸ್ತುಸಂಗ್ರಹಾಲಯದ ವ್ಯವಸ್ಥೆ ಮಾಡಲಾಗುವುದುಎಂದು ಅವಸ್ತಿ ನುಡಿದರು. ಪ್ರತಿಮೆಯನ್ನು ನಿರ್ಮಿಸಲು ಐದು ಕಂಪನಿಗಳನ್ನು  ಪಟ್ಟಿ ಮಾಡಲಾಗಿದ್ದು, ಶನಿವಾರ  ಸಂಜೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್  ಅವರ ಮುಂದೆ ಅವರ ವಿನ್ಯಾಸಗಳನ್ನು ಪ್ರಸ್ತುತ ಪಡಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ಪ್ರತಿಮೆಯ ಸ್ಥಾಪನೆಗಾಗಿ  ಮಣ್ಣಿನ ಪರೀಕ್ಷೆಯನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿ ನುಡಿದರು. ಅಕ್ಟೋಬರ್ ೩೧ ರಂದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊತ್ತ ಮೊದಲ ಗೃಹ ಸಚಿವ  ‘ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೮೨ ಮೀಟರ್‌ಎತ್ತರದ ಪ್ರತಿಮೆಯನ್ನು ಗುಜರಾತಿನಲ್ಲಿ ಲೋಕಾರ್ಪಣೆ ಮಾಡಿದ್ದರು. ಇದು ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಧ್ಯೆ ಅಯೋಧ್ಯೆಯಲ್ಲಿ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತೊಮ್ಮೆ ರಾಮ ಮಂದಿರ ನಿರ್ಮಾಣದ  ಬೇಡಿಕೆಯನ್ನು ಪುನರುಚ್ಚರಿಸಿದರು. ಅಯೋಧ್ಯೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಠಾಕ್ರೆ, ರಾಮ ಮಂದಿರವನ್ನು ನಿರ್ಮಿಸದಿದ್ದರೆ, ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಉಳಿಯುವುದಿಲ್ಲ ಎಂದು ಎಚ್ಚರಿಸಿದರು. ಪಕ್ಷ ಅಧಿಕಾರದಲ್ಲಿದ್ದರೆ ಅಥವಾ ಇಲ್ಲದೇ ಇದ್ದರೂರಾಮ ಮಂದಿರವನ್ನು ಖಂಡಿತವಾಗಿಯೂ ನಿರ್ಮಿಸಲಾಗುವುದು ಎಂದು ಉದ್ಧವ್ ಹೇಳಿದರು.  "ಮಂದಿರವನ್ನು  ನಿರ್ಮಿಸದಿದ್ದರೆ, ಈ ಸರ್ಕಾರವು ಉಳಿಯಲು ಸಾಧ್ಯವಿಲ್ಲ, ಆದರೆ ಸರ್ಕಾರ  ಉಳಿಯದೇ ಇದ್ದರೂ ಮಂದಿರವನ್ನು ನಿರ್ಮಿಸಲಾಗುವುದು" ಎಂದು ಅವರು ನುಡಿದರು.  ಬೆಳಗ್ಗೆ  ರಾಮಲಲ್ಲಾ ದರ್ಶನಕ್ಕೆ  ಹೋಗಿದ್ದಾಗ ರಾಮ ಮಂದಿರ ನಿರ್ಮಾಣ ಪೂರ್ಣಗೊಳಿಸಲು ಸಂತರ ಆಶೀರ್ವಾದ ಪಡೆದುದಾಗಿ ಠಾಕ್ರೆ ಹೇಳಿದರು.  "ನಿಮ್ಮ ಆಶೀರ್ವಾದ  ಇಲ್ಲದೆ ನಾವು ಕೈಗೊಳ್ಳಲು ಹೊರಟಿರುವ ಕಾರ್ಯವನ್ನು ಪೂರ್ಣಗೊಳಿಸಲು ಆಗುವುದಿಲ್ಲ ಎಂದು ನಾನು ನನ್ನನ್ನು ಆಶೀರ್ವದಿಸಿದ ಸಂತರಿಗೆ ಹೇಳಿದ್ದೇನೆ ಎಂದು ಅವರು ನುಡಿದರು. ಅಯೋಧ್ಯೆಗೆ ಯಾವುದೇ ರಹಸ್ಯ ಕಾರ್ಯಸೂಚಿಯೊಂದಿಗೆ ಬಂದಿಲ್ಲ. ಪ್ರಪಂಚದಾದ್ಯಂತದ ಎಲ್ಲಾ ಭಾರತೀಯರ ಮತ್ತು ಹಿಂದೂಗಳ ಭಾವನೆಗಳನ್ನು ವ್ಯಕ್ತಪಡಿಸಲು ಇಲ್ಲಿಗೆ ಬಂದಿದ್ದೇನೆ. ಅವರು ರಾಮ ಮಂದಿರವನ್ನು ಕಟ್ಟಲು ಕಾಯುತ್ತಿದ್ದಾರೆ "ಎಂದು ಠಾಕ್ರೆ ಹೇಳಿದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ  ಠಾಕ್ರೆ, "ಮಂಡಿರ್‌ಥಾ, ಹೈ ಔರ್ ರಹೇಗಾ" (’ಅಲ್ಲಿ ಮಂದಿರವಿತ್ತು, ಅಲ್ಲಿ ಮಂದಿರವಿದೆ ಮತ್ತು ಮಂದಿರವು ಇರುತ್ತದೆ.’) ಎಂದು ಮುಖ್ಯಮಂತ್ರಿ ಹೇಳಿದ್ದಾರೆ ಎಂದು ನಾನು ಕೇಳಿದೆ.  ಅದು ನಮ್ಮ ನಂಬಿಕೆ, ನಮ್ಮ ಬದ್ಧತೆ ಮತ್ತು ನಮ್ಮ ಭಾವನೆ. ಆದರೆ ಅಲ್ಲಿ ಮಂದಿರವನ್ನು ನಾವು ಕಾಣುತ್ತಿಲ್ಲ ಎಂಬುದು ನಮ್ಮ ನೋವು. ಈ ಮಂದಿರವನ್ನು ನಾವು ಕಾಣುವುದು ಯಾವಾಗ?’ ಎಂದು ಠಾಕ್ರೆ  ಪ್ರಶ್ನಿಸಿದರು.

2018: ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ದಿನಾಂಕ ಮುಂದಿನ ವರ್ಷದ ಆದಿಯಲ್ಲಿ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದ ಕಾಲದಲ್ಲಿ ಪ್ರಕಟಗೊಳ್ಳಲಿದೆ ಎಂದು  ನಿರ್ಮೋಹಿ ಅಖಾರದ ರಾಮಜಿ ದಾಸ್ ಅವರು ವಿಶ್ವ ಹಿಂದೂ ಪರಿಷದ್ ಸಂಘಟಿಸಿದ ಧರ್ಮ ಸಭೆಯಲ್ಲಿ ಹೇಳಿದರು. ಬಡೇ ಭಕ್ತಿಮಾಲ್ ಕಿ ಬಗಿಯಾದಲ್ಲಿ ನಡೆದ ಧರ್ಮ ಸಭೆಯ ಉದ್ಘಾಟನೆಯ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಮಜಿ ದಾಸ್ ಅವರು ’ರಾಮಮಂದಿರ ನಿರ್ಮಾಣದ ದಿನಾಂಕವನ್ನು ೨೦೧೯ರ ಆದಿಯಲ್ಲಿ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಕುಂಭಮೇಳದ ಕಾಲದಲ್ಲಿ ಘೋಷಿಸಲಾಗುವುದು ಎಂದು ಹೇಳಿದರು.  ‘ಇನ್ನು ಕೆಲವು ದಿನಗಳು ಮಾತ್ರ, ತಾಳ್ಮೆ ತೋರುವಂತೆ ನಾನು ನಿಮಗೆಲ್ಲರಿಗೂ ಮನವಿ ಮಾಡುತ್ತೇನೆ ಎಂದು ಅವರು ನುಡಿದರು.  ರಾಮಜನ್ಮಭೂಮಿ ನ್ಯಾಸದ ಅಧ್ಯಕ್ಷ ನೃತ್ಯ ಗೋಪಾಲದಾಸ್ ಅವರು ಮಾತನಾಡಿ ’ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಇಲ್ಲಿ ನಡೆದಿರುವ ಈ ಸಮಾವೇಶವು ಬದುಕಿನ ವಿವಿಧ ಕ್ಷೇತ್ರಗಳ ಜನರು ರಾಮಮಂದಿರ ಬಗ್ಗೆ ಎಷ್ಟೊಂದು ಆಸಕ್ತಿ ಇಟ್ಟುಕೊಂಡಿದ್ದಾರೆ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದರು.  ‘ನಾವು ನ್ಯಾಯಾಲಯಗಳನ್ನು ಗೌರವಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ನಮಗೆ ಅಪಾರ ವಿಶ್ವಾಸವಿದೆ. ರಾಮಮಂದಿರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಆದಷ್ಟೂ ಬೇಗ ಕೈಗೊಳ್ಳುವಂತೆ ನಾನು ಸರ್ಕಾರಕ್ಕೆ ಕರೆ ನೀಡುತ್ತಿದ್ದೇನೆ ಎಂದು ಅವರು ನುಡಿದರು.  ಮಣ್ಣು ಹಿಡಿದು ಪತಿಜ್ಞೆ: ಎಲ್ಲೆಂದರಲ್ಲಿ ಕೇಸರಿ ಧ್ವಜ,ಕೇಸರಿ ಬ್ಯಾನರುಗಳು, ಕೇಸರಿ ಬಂಟಿಂಗ್ ಗಳು ಮತ್ತು ತಲೆಗೆ ಕೇಸರಿ ಪಟ್ಟಿಗಳನ್ನು ಸುತ್ತಿಕೊಂಡಿದ್ದ ಪ್ರತಿನಿಧಿಗಳಿಂದ ಸಂಪೂರ್ಣ ತಾಣ ಕೇಸರಿ ಬಣ್ಣವನ್ನು ತಳೆದಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳೂ ಅಯೋಧ್ಯೆಯ ಮಣ್ಣನ್ನು ತಮ್ಮ ಕೈಗಳಲ್ಲಿ ಹಿಡಿದುಕೊಂಡು ರಾಮ ಮಂದಿರ ನಿರ್ಮಾಣದ ಪ್ರತಿಜ್ಞೆ ಸ್ವೀಕರಿಸಿದರು.  ಡಿಸೆಂಬರ್ ೧೧ರಂದು ಪ್ರಧಾನಿ ನಿರ್ಧಾರ: ಸಭೆಯನ್ನು ಉದ್ದೇಶಿಸಿ ಮಾತನಾಡಿದ ಧಾರ್ಮಿಕ ನಾಯಕ ರಾಮ ಭದ್ರಾಚಾರ್ಯ ಅವರು ’ನವೆಂಬರ್ ೨೩ರಂದು ನಾನು ಹಿರಿಯ ಸಚಿವರನ್ನು ಭೇಟಿ ಮಾಡಿದ್ದು ಅವರು ಡಿಸೆಂಬರ್ ೧೧ರಂದು ಚುನಾವಣಾ ನೀತಿ ಸಂಹಿತೆ ಮುಕ್ತಾಯವಾದ ಬಳಿಕ ರಾಮಮಂದಿರ ನಿರ್ಮಾಣ ಸಾಧ್ಯವಾಗುವ ನಿಟ್ಟಿನಲ್ಲಿ ಪ್ರಧಾನಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಭರವಸೆ ನೀಡಿದ್ದಾರೆ ಎಂದು ಹೇಳಿದರು.  ‘ನಮ್ಮನ್ನು ವಂಚಿಸಲಾಗುವುದಿಲ್ಲ ಎಂದು ನಮಗೆ ಹೇಳಲಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸುಗ್ರೀವಾಜ್ಞೆ ಮಾರ್ಗವನ್ನು ಆಯ್ಕೆ ಮಾಡಬಹುದು ಎಂದು ನನ್ನ ಭಾವನೆ. ನಾವು ತಾಳ್ಮೆ ವಹಿಸಬೇಕು. ನಮಗೆ ನ್ಯಾಯಾಲಯದಿಂದ ನಿರಾಶೆಯಾಗಿದೆ. ಜನತಾ ನ್ಯಾಯಾಲಯ ನಮ್ಮನ್ನು ವಂಚಿಸುವುದಿಲ್ಲ ಎಂದು ಅವರು ನುಡಿದರು.  ಒಮ್ಮೆ ರಾಮಮಂದಿರ ನಿರ್ಮಾಣವಾದರೆ ಅದು ಘೋಷಿತ ಹಿಂದೂ ರಾಷ್ಟ್ರವಾಗುತ್ತದೆ ಎಂದು ಅವರು ಹೇಳಿದರು.  ಮಂದಿರ ನಿರ್ಮಾಣಕ್ಕೆ ಪೂರ್ತಿ ಭೂಮಿ ಬೇಕು: ಇದಕ್ಕೆ ಮುನ್ನ ಮಾತನಾಡಿದ ಹಿರಿಯ ನಾಯಕ ಚಂಪತ್ ರೈ ಅವರು ದೇವಾಲಯ ನಿರ್ಮಾಣಕ್ಕಾಗಿ ಭೂಮಿಯನ್ನು ವಿಭಜಿಸುವ ಸೂತ್ರವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಘೋಷಿಸಿದರು. ’ಮಂದಿರ ನಿರ್ಮಾಣಕ್ಕಾಗಿ ಸಂಪೂರ್ಣ ಭೂಮಿಯನ್ನು ನಾವು ಬಯಸುತ್ತೇವೆ. ಭೂಮಿ ವಿಭಜಿಸುವ ಯಾವುದೇ ಸೂತ್ರವನ್ನು ನಾವು ಒಪ್ಪುವುದಿಲ್ಲ ಎಂದು ಅವರು ನುಡಿದರು.  ರೈ ಅವರು ವಿವರಗಳನ್ನು ಹೇಳದೇ ಇದ್ದರೂ, ಅಲಹಾಬಾದ್ ಹೈಕೋರ್ಟ್ ಭೂಮಿಯನ್ನು ಮೂರು ಭಾಗಗಳಾಗಿ ವಿಭಜಿಸಲು ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನು ಹೇಳಿದರು.  ಅಲಹಾಬಾದ್ ಹೈಕೋರ್ಟ್ ತಮ್ಮ ಬಹುಮತದ ತೀರ್ಪಿನಲ್ಲಿ ವಿವಾದಿತ ಅಯೋಧ್ಯಾ ಭೂಮಿಯನ್ನು ಹಿಂದುಗಳು ಮತ್ತು ಮುಸ್ಲಿಮರಿಗೆ ಸಮಾನವಾಗಿ ಮೂರು ಭಾಗಗಳಾಗಿ ವಿಭಜಿಸಬೇಕು ಎಂದು ಹೇಳಿತ್ತು. ಪ್ರಸ್ತುತ ರಾಮಲಲ್ಲಾ ವಿಗ್ರಹ ಇರುವ ತಾತ್ಕಾಲಿಕ ದೇವಾಲಯದ ಜಾಗ ಹಿಂದುಗಳಿಗೆ ಸೇರಿದ್ದು ಎಂದೂ ಹೈಕೋರ್ಟ್ ಹೇಳಿತ್ತು.  ೬೦ ವರ್ಷಗಳಷ್ಟು ಹಳೆಯದಾದ ರಾಮಜನ್ಮಭೂಮಿ-ಬಾಬರಿ ಮಸೀದಿ ರಚನೆ ಇದ್ದ ಭೂಮಾಲೀಕತ್ವಕ್ಕೆ ಸಂಬಂಧಿಸಿದ ಸೂಕ್ಷ್ಮ ಪ್ರಕರಣದಲ್ಲಿ ಮೂರು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದ ನ್ಯಾಯಮೂರ್ತಿಗಳಾದ ಎಸ್.ಯು. ಖಾನ್ ಮತ್ತು ಸುಧೀರ್ ಅಗರ್‌ವಾಲ್  ಅವರು ’ಮೂರು ಗುಮ್ಮಟಗಳಿದ್ದ ಕಟ್ಟಡದ ಮಧ್ಯದ ಗುಮ್ಮಟದ ಕೆಳಗಿನ ರಾಮಲಲ್ಲಾ ವಿಗ್ರಹ ಇರುವ ಜಾಗ ಹಿಂದುಗಳಿಗೆ ಸೇರಿದೆ ಎಂದು ಹೇಳಿದ್ದರು.  ‘ಮಂದಿರ ನಿರ್ಮಾಣದಲ್ಲಿ ವಿಳಂಬ ಒಳ್ಳೆಯ ಸೂಚನೆಯಲ್ಲ ಎಂದು ರೈ ನುಡಿದರು.  ‘ಇದು ಅಂತಃಕರಣದ ವಿಷಯ, ಪೊಲೀಸರು ನಮ್ಮ ಜೊತೆಗಿದ್ದಾರೆ ಎಂದು ವಿಎಚ್ ಪಿ ಧರ್ಮಸಭಾದಲ್ಲಿ ಪಾಲ್ಗೊಂಡ ಪ್ರತಿನಿಧಿಗಳು ಘೋಷಣೆ ಕೂಗಿದರು.  ಫಲಕಗಳು, ಕೇಸರಿ ಧ್ವಜಗಳು, ಬಂಟಿಂಗ್ಸ್ ಹಾಗೂ ತಲೆಗೆ ಕೇಸರಿ ಪಟ್ಟಿ ಧರಿಸಿ ಓಡಾಡುತ್ತಿದ್ದ ಪ್ರತಿನಿಧಿಗಳ ಸಡಗರದೊಂದಿಗೆ ಧರ್ಮ ಸಭೆಗೆ ಉತ್ಸವದ ಕಳೆ ಬಂದಿತ್ತು.  ಧರ್ಮಸಭೆಯಲ್ಲಿ ಸುಮಾರು ೩ ಲಕ್ಷ ಮಂದಿ ಪಾಲ್ಗೊಂಡಿದ್ದಾರೆ ಎಂದು ವಿಎಚ್‌ಪಿ ಪ್ರತಿಪಾದಿಸಿದೆ. ಪ್ರತಿನಿಧಿಗಳಿಗೆ ಆಹಾರ ಮತ್ತು ವೈದ್ಯಕೀಯ ಸವಲತ್ತುಗಳ ವಿಸ್ತೃತ ವ್ಯವಸ್ಥೆ ಮಾಡಲಾಗಿತ್ತು. ವಿಎಚ್‌ಪಿಯ ದಿವಂಗತ ನಾಯಕ ಅಶೋಕ ಸಿಂಘಲ್ ಅವರ ಚಿತ್ರಗಳನ್ನು ಅಲ್ಲಲ್ಲಿ ಪ್ರದರ್ಶಿಸಲಾಗಿದ್ದು, ಭಕ್ತರು ಶಂಖನಾದಗಳನ್ನು ಮೊಳಗಿಸುತ್ತಿದ್ದ ದೃಶ್ಯಗಳೂ ಕಂಡುಬಂದವು.  ಜನಾಗ್ರಹ ಸಮಾವೇಶ: ಈ ಮಧ್ಯೆ ಅಯೋಧ್ಯೆಯಲ್ಲಿ ರಾಮಮಂದಿರವನ್ನು ತ್ವರಿತವಾಗಿ ನಿರ್ಮಿಸಬೇಕು ಎಂದು ಒತ್ತಾಯಿಸಿ ದೇಶದ ವಿವಿಧ ಕಡೆಗಳಲ್ಲಿ ವಿಶ್ವ ಹಿಂದೂ ಪರಿಷತ್ ಜನಾಗ್ರಹ ಸಭೆಗಳನ್ನು ಸಂಘಟಿಸಿತ್ತು. ನಾಗಪುರದಲ್ಲಿ ನಡೆದ ಜನಾಗ್ರಹ ಸಭೆಯಲ್ಲಿ ಪಾಲ್ಗೊಂಡ ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ’ನ್ಯಾಯಾಂಗಕ್ಕೆ ರಾಮ ಮಂದಿರ ವಿಚಾರ ಆದ್ಯತೆಯ ವಿಚಾರ ಅಲ್ಲವಾದರೆ ಸರ್ಕಾರ ಈ ನಿಟ್ಟಿನಲ್ಲಿ ತ್ವರಿತವಾಗಿ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು. ಪ್ರಕರಣ ನ್ಯಾಯಾಲಯದಲ್ಲಿದೆ. ತೀರ್ಪನ್ನು ಬೇಗನೇ ನೀಡಬೇಕು. ಅಯೋಧ್ಯೆಯ ಈ ಸ್ಥಳದಲ್ಲಿ ದೇಗುಲ ಇತ್ತು ಎಂಬುದು ಈಗಾಗಲೇ ಋಜುವಾತಾಗಿದೆ. ಸುಪ್ರೀಂಕೋರ್ಟ್ ಈ ಪ್ರಕರಣಕ್ಕೆ ಆದ್ಯತೆ ನೀಡದೇ ಇದ್ದರೆ ನ್ಯಾಯವನ್ನು ನಿರಾಕರಿಸಿದಂತಾಗುತ್ತದೆ ಎಂದು ಭಾಗವತ್ ಹೇಳಿದರು.

2018: ಪಾಟ್ನಾ: ೨೦೧೯ರಲ್ಲಿ ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂಬುದು ತಮ್ಮ ಆಶಯ, ಆದರೆ ಪಕ್ಷದ ವಿರುದ್ಧ ಯಾವುದೇ ಅವಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಲೋಕ ಸಮತಾ ಪಕ್ಷದ (ಆರ್‌ಎಲ್ ಎಸ್ ಪಿ) ಮುಖ್ಯಸ್ಥ, ಕೇಂದ್ರ ಸಚಿವ ಉಪೇಂದ್ರ ಕುಶವಾಹ ಅವರು ಇಲ್ಲಿ ಹೇಳಿದರು.  ಸರಣಿ ಟ್ವೀಟ್‌ಗಳನ್ನು ಮಾಡಿದ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆಯ ರಾಜ್ಯ ಸಚಿವ ಕುಶವಾಹ ಅವರು ಸ್ಥಾನ ಹಂಚಿಕೆ ಬಗ್ಗೆ ಯಾವುದೇ ಪ್ರಸ್ತಾಪ ಮಾಡಲಿಲ್ಲ, ಆದರೆ ’ನ್ಯಾಯ ಮತ್ತು ಗೌರವ ಸಿಗಬೇಕು ಎಂದು ಆಗ್ರಹಿಸಿದರು. ಬಿಹಾರದಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ (ಎನ್‌ಡಿಎ) ಸ್ಥಾನ ಹಂಚಿಕೆ ವಿಚಾರದಲ್ಲಿ ಪ್ರಧಾನಿ ಮಧ್ಯಪ್ರವೇಶ ಮಾಡಬೇಕು ಎಂದು ಕುಶವಾಹ ಆಗ್ರಹಿಸಿದರು. ಇತ್ತೀಚಿನ ಪ್ರಕಟಣೆ ಪ್ರಕಾರ, ಬಿಹಾರದಲ್ಲಿ ೨೦೧೯ರ ಲೋಕಸಭಾ ಚುನಾವಣೆಯ ಒಟ್ಟು ೪೦ ಸ್ಥಾನಗಳನ್ನು ಬಿಜೆಪಿ ಮತ್ತು ಜೆಡಿ(ಯು) ಸಮಾನ ಸಂಖ್ಯೆಯ ಸ್ಥಾನಗಳನ್ನು ಹಂಚಿಕೊಳ್ಳಲು ಒಪ್ಪಿವೆ. ಪರಿಣಾಮವಾಗಿ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದ್ದ ಆರ್ ಎಲ್ ಎಸ್ ಪಿಗೆ ಸ್ಥಾನಗಳು ಕಡಿಮೆಯಾಗುವ ಸಾಧ್ಯತೆಗಳವೆ. ೨೦೧೪ರಲ್ಲಿ ಆರ್ ಎಲ್ ಎಸ್ ಪಿ ೩ ಸ್ಥಾನಗಳನ್ನು ಗೆದ್ದಿತ್ತು.
ಆದರಣೀಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರನ್ನು ೨೦೧೯ರಲ್ಲಿ ಪುನಃ ಪ್ರಧಾನಮಂತ್ರಿಯನ್ನಾಗಿ ಮಾಡಲು ಬಯಸುತ್ತೇನೆ. ಆದರೆ ಅಪಮಾನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಕುಶವಾಹ ತಮ್ಮ ಟ್ವೀಟ್ ಗಳಲ್ಲಿ ಹೇಳಿದರು. ಕುಶವಾಹ ಅವರು ರಾಮಧಾರಿ ಸಿಂಗ್ ದಿನಕರ್ ಅವರ ’ರಶ್ಮಿರತಿ ಪುಸ್ತಕದ ಕೆಲವು ವಾಕ್ಯಗಳನ್ನು ತಮ್ಮ ಭಾವನೆಗಳಿಗೆ ರೂಪ ಕೊಡಲು ಬಳಸಿಕೊಂಡರು. 

2018: ಆಳ್ವಾರ್ (ರಾಜಸ್ಥಾನ): ’ಕಾಂಗ್ರೆಸ್ ಜಾತಿವಾದಿ ರಾಜಕೀಯ ನಡೆಸುತ್ತಿದೆ, ಜನರ ಸಮಸ್ಯೆಗಳಿಗಿಂತ ಹೆಚ್ಚಾಗಿ ತಮ್ಮ ಜಾತಿ ಬಗ್ಗೆ ಕಾಳಜಿ ವಹಿಸಿದೆ ಎಂದು ರಾಜಸ್ಥಾನದ ಆಳ್ವಾರ್‌ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಆಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಅಯೋಧ್ಯಾ ಪ್ರಕರಣವನ್ನು ವಿಳಂಬಗೊಳಿಸಲು ಕೂಡಾ ಕಾಂಗ್ರೆಸ್ ಯತ್ನಿಸಿತ್ತು ಎಂದು ದೂರಿದರು. ಕಾಂಗ್ರೆಸ್ ಪಕ್ಷಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ನೆನಪಿಲ್ಲ ಮತ್ತು ಕುಟುಂಬದ ಏಕೈಕ ವ್ಯಕ್ತಿಗೆ ಭಾರತ ರತ್ನ ಪ್ರಧಾನ ಮಾಡಲಾಗಿದೆ ಎಂಬುದೂ ನೆನಪಿಲ್ಲ ಎಂದು ಪ್ರಧಾನಿ ಹೇಳಿದರು.  ಅಯೋಧ್ಯಾ ಪ್ರಕರಣದಲ್ಲಿ ನ್ಯಾಯಾಂಗವನ್ನು ರಾಜಕೀಯಕ್ಕೆ ಎಳೆಯಲು ಕಾಂಗ್ರೆಸ್ ಪ್ರಯತ್ನಿಸಿತು ಎಂದು ಆಪಾದಿಸಿದ ಮೋದಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳೂ ತಮ್ಮ ’ರಾಜಕೀಯಕ್ಕೆ ಅನುಗುಣವಾಗಿ ಕೆಲಸ ಮಾಡದೇ ಇದ್ದಲ್ಲಿ ’ವಾಗ್ದಂಡನೆ ಮೂಲಕ ಅವರನ್ನು ಹೆದರಿಸುವ ಕೆಲಸವನ್ನು ಕಾಂಗ್ರೆಸ್ ಸಂಸದರು ಶುರುಮಾಡುತ್ತಾರೆ ಎಂದು ಟೀಕಿಸಿದರು. ಇದಕ್ಕೆ ಮುನ್ನ ಮಧ್ಯಪ್ರದೇಶದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ತಾವು ಮಾಜಿ ಪ್ರಧಾನಿಗಳು ಮತ್ತು ರಾಜಕಾರಣಿಗಳನ್ನು ಉಲ್ಲೇಖಿಸುತ್ತಿದ್ದು ಯಾರ ಕುಟುಂಬದ ಬಗೆಗೂ ಮಾತನಾಡುತ್ತಿಲ್ಲ. ವಿಪಕ್ಷಗಳಿಗೆ ತಮ್ಮ ಬಗ್ಗೆ ಮತ್ತು ತಮ್ಮ ಕುಟುಂಬ ಸದಸ್ಯರು ರಾಜಕೀಯದಲ್ಲಿದ್ದರೆ ಅವರ ಬಗ್ಗೆ ಮಾತನಾಡುವ ಎಲ್ಲ ಹಕ್ಕೂ ಇದೆ ಎಂದು ಹೇಳಿದರು.  ‘ನನ್ನ ಕುಟುಂಬದಲ್ಲಿ ಯಾರೂ ರಾಜಕಾರಣದಲ್ಲಿ ಇಲ್ಲ. ಎರಡು ದಿನಗಳ ಹಿಂದೆ ಕಾಂಗ್ರೆಸ್ ನಾಯಕರೊಬ್ಬರು ನನ್ನ ತಾಯಿಯನ್ನು ಚುನಾವಣಾ ರಾಡಿಗೆ ಎಳೆತಂದರು. ಇದು ಸರಿಯೇ?’ ಎಂದು ಪ್ರಶ್ನಿಸಿದ ಪ್ರಧಾನಿ ಮೋದಿ ’ಈಗ ಅವರು ನನ್ನ ತಂದೆಯನ್ನೂ ಅದಕ್ಕೆ ಎಳೆತಂದಿದ್ದಾರೆ ಎಂದು ಟೀಕಿಸಿದರು. ಕಾಂಗ್ರೆಸ್ ನಾಯಕ ಸಿ.ಪಿ. ಜೋಶಿ ಅವರು ತಮ್ಮ ಜಾತಿ ಬಗ್ಗೆ ಮಾಡಿದ ಟೀಕೆಯನ್ನು ಪ್ರಸ್ತಾಪಿಸಿದ ಪ್ರಧಾನಿ ’ವಿಶ್ವಾದ್ಯಂತ ಯಾರೂ ನನ್ನ ಜಾತಿ ಬಗ್ಗೆ ಚಿಂತೆ ಹೊಂದಿಲ್ಲ. ಯಾರೂ ನನ್ನ ಜಾತಿಯನ್ನು ನೋಡುವುದಿಲ್ಲ ಅಥವಾ ನನ್ನ ಜಾತಿ ಬಗ್ಗೆ ಪ್ರಶ್ನಿಸುವುದಿಲ್ಲ. ನಾನು ಪ್ರತಿನಿಧಿಸುವ ೧೨೫ ಕೋಟಿ ಭಾರತೀಯರನ್ನಷ್ಟೇ ಅವರು ನೋಡುತ್ತಾರೆ. ಎಲ್ಲ ಜಾತಿಗಳೂ ಸಮಾನ ಎಂಬುದನ್ನು ಕಾಂಗ್ರೆಸ್ ಮರೆತಿದೆ ಎಂದು ಹೇಳಿದರು.  ಬಿಜೆಪಿಯ ಏಕೈಕ ಗುರಿ ಸಮಾಜದ ಪ್ರತಿಯೊಂದು ವರ್ಗದ ಸಂಪೂರ್ಣ ಏಳಿಗೆ ಎಂದು ಪ್ರಧಾನಿ ನುಡಿದರು.  ‘ಕಾಂಗ್ರೆಸ್ ನಾಯಕರು ನಿರಂತರವಾಗಿ ನನ್ನ ವಿರುದ್ಧ ವೈಯಕ್ತಿಕ ದಾಳಿಗಳನ್ನು ಮಾಡುತ್ತಿರುವುದು ನನಗೆ ಅಚ್ಚರಿಯನ್ನೇನೂ ಉಂಟು ಮಾಡಿಲ್ಲ. ಅವರು ನನ್ನ ಜಾತಿ ಬಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ ಮತ್ತು ರಾಜಕೀಯ ರಾಡಿಗೆ ನನ್ನ ತಾಯಿನ್ನು ಎಳೆತಂದಿದ್ದಾರೆ, ಇದಕ್ಕೆ ಕಾರಣ ಅವರಿಗೆ ರಾಜಸ್ಥಾನದ ಅಭಿವೃದ್ಧಿಯ ದೃಷ್ಟಿಕೋನವೇ ಇಲ್ಲದೆ ಇರುವುದು ಎಂದು ಮೋದಿ ಹೇಳಿದರು.  ‘ಪ್ರತಿಯೊಂದು ದಿನ ಕಳೆಯುತ್ತಿದ್ದಂತೆಯೇ ಕಾಂಗ್ರೆಸ್ ಮತ್ತಷ್ಟು ಕೆಳಕ್ಕೆ ಜಾರುತ್ತಿದೆ. ಗೆಲ್ಲುವ ಬಗ್ಗೆ ಹತಾಶೆ ಗೊಂಡಿರುವ ಅದು ಎಲ್ಲ ರಾಜಕೀಯ ನೈತಿಕತೆಗಳನ್ನು ಮೂಲೆಪಾಲು ಮಾಡಿದೆ. ಮತದಾರರು ನನ್ನ ಜಾತಿಯನ್ನು ಲೆಕ್ಕಿಸುವುದಿಲ್ಲ, ಆದರೆ ಕಾಂಗ್ರೆಸ್ ಕಾಳಜಿ ವಹಿಸುತ್ತದೆ ಎಂದು ಪ್ರಧಾನಿ ನುಡಿದರು. ಕಾಂಗ್ರೆಸ್ ನಾಯಕರನ್ನು ಗುರಿಯಿಟ್ಟು ಮಾತನಾಡಿದ ಮೋದಿ ದಿಗ್ವಿಜಯ್ ಸಿಂಗ್ ಅವರಿಗೆ ಮಧ್ಯಪ್ರದೇಶದ ಕರಾಳ ದಿನಗಳ ಬಗ್ಗೆ ನೆನಪಿಸಿದರು. ಕಾಂಗ್ರೆಸ್ ಪಕ್ಷವು ಯುವಕರನ್ನು ಅವಮಾನಿಸಿದೆ ಎಂದೂ ಅವರು ನುಡಿದರು. ವಿವಿಧ ರಾಜ್ಯಗಳಲ್ಲಿ ತಾವು ನಡೆಸುತ್ತಿರುವ ನಿರಂತರ ಚುನಾವಣಾ ರ್‍ಯಾಲಿಗಳನ್ನು ಪ್ರಸ್ತಾಪಿಸಿದ ಮೋದಿ ’ಕಾಂಗ್ರೆಸ್ ನಾಯಕರು ದೆಹಲಿಯ ತಮ್ಮ ಹವಾನಿಯಂತ್ರಿತ ಕೊಠಡಿಗಳಿಗೆ ಸೀಮಿತರಾಗಿರುತ್ತಾರೆ. ಅದಕ್ಕೂ ಹೆಚ್ಚಾಗಿ ತಮ್ಮದೇ ಪಕ್ಷದ ನಾಯಕತ್ವದ ಬಗ್ಗೆ ಗೊಂದಲದಿಂದಿದ್ದಾರೆ. ಈ ಚುನಾವಣೆಯಲ್ಲಿ ಮುಖ್ಯ ವಿಚಾರ ಅಭಿವೃದ್ಧಿ. ಯಾರು ಹೇಗೆ ಅಭಿವೃದ್ಧಿ ತರುತ್ತಾರೆ ಎಂಬುದೇ ಪ್ರಶ್ನೆ. ಭೂತಕಾಲದಿಂದ ಪಾಠ ಕಲಿಯುವುದಾದರೆ ರಾಷ್ಟ್ರದ ಜನತೆ ಅಭಿವೃದ್ಧಿಯ ಪ್ರತೀಕವಾಗಿರುವ ಬಿಜೆಪಿಯನ್ನು ಮತ್ತೊಮ್ಮೆ ಆಯ್ಕೆ ಮಾಡುತ್ತಾರೆ ಎಂದು ಪ್ರಧಾನಿ ನುಡಿದರು. ತಮ್ಮ ಆಳ್ವಾರ್ ಭಾಷಣದಲ್ಲಿ ನ್ಯಾಯಾಂಗವನ್ನು ರಾಜಕೀಯಕ್ಕೆ ಕಾಂಗ್ರೆಸ್ ಎಳೆಯುತ್ತಿದೆ ಎಂದು ಆಪಾದಿಸಿದ ಮೋದಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ತಮ್ಮ ’ರಾಜಕೀಯಕ್ಕೆ ತಾಳಹಾಕದೇ ಇದ್ದಲ್ಲಿ ಆಗ ಕಾಂಗ್ರೆಸ್ ಸಂಸದರು ’ವಾಗ್ದಂಡನೆಯ ಹೆಸರಿನಲ್ಲಿ ಅವರನ್ನು ಬೆದರಿಸಲು ಆರಂಭಿಸುತ್ತಾರೆ. ಇದು ಅಪಾಯಕಾರಿ ಆಟ. ಕಾಂಗ್ರೆಸ್ಸಿಗೆ ನ್ಯಾಯಾಂಗದ ಮೇಲೆ ವಿಶ್ವಾಸವಿಲ್ಲ. ರಾಜ್ಯಸಭೆಯಲ್ಲಿನ ತಮ್ಮ ಸಂಖ್ಯಾಬಲದ ಆಧಾರದಲ್ಲಿ ಅವರು ನ್ಯಾಯಾಂಗವನ್ನು ಬೆದರಿಸುತ್ತಾರೆ. ಆದರೆ ಪ್ರಜಾಪ್ರಭುತ್ವದ ಈ ದೇಗುಲದಲ್ಲಿ ಈ ’ಕಾಲ ಕರ್ನಾಮ ನಡೆಯಲು ನಾವು ಅವಕಾಶ ನೀಡುವುದಿಲ್ಲ ಎಂದು ಹೇಳಿದರು. ’ಭಯಪಡಬೇಡಿ. ನ್ಯಾಯದ ಹಾದಿಯಲ್ಲಿ ಮುನ್ನಡೆಯಿರಿ ಎಂದು ನ್ಯಾಯಮೂರ್ತಿಗಳಿಗೆ ಹೇಳಲೂ ನಾನು ಬಯಸುತ್ತೇನೆ ಎಂದು ಪ್ರಧಾನಿ ಹೇಳಿದರು. ಅಯೋಧ್ಯಾ ಪ್ರಕರಣದ ವಿಚಾರಣೆ ವಿಳಂಬಗೊಳಿಸಲು ಕಾಂಗ್ರೆಸ್ ಯತ್ನಿಸಿದೆ ಎಂಬ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ’ಅಯೋಧ್ಯಾ ಪ್ರಕರಣದಲ್ಲಿ ಕಾಂಗ್ರೆಸ್ ಕಕ್ಷಿದಾರನಲ್ಲ. ನ್ಯಾಯಾಲಯದ ವಿಚಾರಣೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಅಯೋಧ್ಯಾ ಪ್ರಕರಣದ ವಿಚಾರಣೆ ನಮ್ಮ ಆದ್ಯತೆಯಲ್ಲ ಎಂದು ಸ್ವತಃ ಸಿಜೆಐ ರಂಜನ್ ಗೊಗೋಯಿ ಅವರೇ ಹೇಳಿದ್ದಾರೆ. ಪ್ರಧಾನಿಗೆ ಸಿಜೆಐ ವಿರುದ್ಧ ಏನಾದರೂ ಹೇಳುವ ಧ್ಯರ್‍ಯ ಇಲ್ಲ. ರಾಜಕೀಯ ಲಾಭಕ್ಕಾಗಿ ಕಾಂಗ್ರೆಸ್ಸನ್ನು ದೂಷಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಪಿಲ್ ಸಿಬಲ್ ಹೇಳಿದರು.  ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನು ’ವಾಗ್ದಂಡನೆಯನ್ನು ಬಳಸಿ ಕಾಂಗ್ರೆಸ್ ಬೆದರಿಸುತ್ತಿದೆ ಎಂಬ ಪ್ರಧಾನಿ ಆಪಾದನೆಯನ್ನು ಟೀಕಿಸಿದ ಸಿಬಲ್ ’ತಮ್ಮ ಸುಳ್ಳುಗಳಿಗಾಗಿಯೇ ಪ್ರಧಾನಿ ಮೋದಿಯವರು ಹೊಸ ರೇಡಿಯೋ ಕಾರ್‍ಯಕ್ರಮ ಆರಂಭಿಸಬೇಕು ಎಂದು ಹೇಳಿದರು. ’ಮನ್ ಕಿ ಬಾತ್ ನ ೫೦ನೇ ಆವೃತ್ತಿ ಮುಗಿದಿದೆ. ಈಗ ಅವರು ’ಝೂಟೀ ಬಾತೇಂ (ಸುಳ್ಳು ಮಾತುಗಳು) ಕಾರ್‍ಯಕ್ರಮವನ್ನು ಆರಂಭಿಸಬೇಕು ಎಂದು ನಾನು ಅವರಿಗೆ ಹೇಳಬಯಸುತ್ತೇನೆ. ರಾಷ್ಟ್ರಕ್ಕೆ ಯಾರು ಸುಳ್ಳುಗಾರರು ಎಂಬುದು ಗೊತ್ತಿದೆ. ನಾನು ರಾಮಮಂದಿರ ಪ್ರಕರಣದಲ್ಲಿ ಹಾಜರಾಗಿರಲಿಲ್ಲ. ಪ್ರಕರಣದ ವಿಚಾರಣೆ ಬಗ್ಗೆ ಸಿಜೆಐ ಸ್ಪಷ್ಟ ಪಡಿಸಿದ್ದಾರೆ ಎಂದು ಸಿಬಲ್ ಹೇಳಿದರು. ಈ ಹಿಂದೆ,  ೨೦೧೮ರ ಮಾರ್ಚ್ ತಿಂಗಳಲ್ಲಿ ಆಯೋಧ್ಯಾ ಪ್ರಕರಣದ ವಿಚಾರಣೆ ಕಾಲದಲ್ಲಿ ಸುನ್ನಿ ವಕ್ಫ್ ಮಂಡಳಿಯನ್ನು ಸುಪ್ರೀಂಕೋರ್ಟಿನಲ್ಲಿ ಪ್ರತಿನಿಧಿಸಿದ್ದ ಕಪಿಲ್ ಸಿಬಲ್ ಅವರು ’ನ್ಯಾಯಾಲಯದ ನಿರ್ಣಯವು ಗಂಭೀರವಾದ ಪರಿಣಾಮಗಳನ್ನು ಬೀರುವ ಸಾಧ್ಯತೆ ಇರುವುದರಿಂದ ಪ್ರಕರಣದ ವಿಚಾರಣೆಯನ್ನು ಜುಲೈ ೨೦೧೯ರವರೆಗೆ ಮುಂದೂಡಬೇಕು, ಆ ವೇಳೆಗೆ ಮಹಾಚುನಾವಣೆ ಮುಗಿದಿರುತ್ತದೆ ಎಂದು ಆಗಿನ ಸಿಜೆಐ ದೀಪಕ್ ಮಿಶ್ರ ಅವರ ಪೀಠದ ಮುಂದೆ ಅಹವಾಲು ಮಂಡಿಸಿದ್ದರು. ಇದು ತೀವ್ರ ವಿವಾದಕ್ಕೆ ಗುರಿಯಾದಾಗ ಕಾಂಗ್ರೆಸ್ ವರಿಷ್ಠ ಮಂಡಳಿಯು ವಕ್ಫ್ ಬೋರ್ಡ್ ಪರ ವಕಾಲತ್ತು ವಹಿಸದಂತೆ ಸಿಬಲ್ ಅವರಿಗೆ ಸೂಚಿಸಿತ್ತು. ಈಮಧ್ಯೆ ಕಾಂಗ್ರೆಸ್ ನಾಯಕ ವಿಲಾಸ್ ಮುತ್ತೆಮ್ವಾರ್ ಅವರು ’ಪ್ರಧಾನಿ ಮೋದಿ ಅವರ ತಂದೆ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂಬುದಾಗಿ ಕಾಂಗ್ರೆಸ್ ಸಭೆಯೊಂದರಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿತ್ತು. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಅವರು ’ರೂಪಾಯಿಯ ಬೆಲೆ ಮೋದಿ ಅವರ ತಾಯಿಯ ವಯಸ್ಸನ್ನು ಸಮೀಪಿಸುತ್ತಿದೆ ಎಂದು ಟೀಕಿಸಿದ್ದರು. ಏನಿದ್ದರೂ ವಿಲಾಸ್ ಅವರು ಬಳಿಕ ತಮ್ಮ ಹೇಳಿಕೆಯನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಹೇಳಿದ್ದರು.


2018: ಬೆಂಗಳೂರು: ತೀವ್ರ ಆನಾರೋಗ್ಯದಿಂದ ಬಳಲು ತ್ತಿದ್ದ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಜಾಫರ್ ಷರೀಫ್  ನಿಧನ ರಾದರು. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾದರು.  ಅವರಿಗೆ ೮೫ ವರ್ಷ ವಯಸ್ಸಾಗಿತ್ತು.  ಜಾಫರ್  ಷರೀಫ್ ಅವರ ಪತ್ನಿ ಅಮಿನಾಭಿ ಅವರು ೨೦೦೯ರಲ್ಲಿ ನಿಧನರಾಗಿದ್ದರು. ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ನಾಲ್ವರು ಮಕ್ಕಳು. ಅದರಲ್ಲಿ ಕಿರಿಯ ಪುತ್ರ ಖಾದರ್ ನವಾಜ್ ಷರೀಫ್ ೧೯೯೯ರಲ್ಲಿ ನಿಧನರಾಗಿದ್ದಾರೆ. ಹಿರಿಯ ಪುತ್ರ ಅಬ್ದುಲ್ ಖರೀಮ್ ಅವರು ೨೦೦೯ರಲ್ಲಿ ನಿಧನರಾಗಿದ್ದಾರೆ. ಒಂದೇ ವರ್ಷ ತಾಯಿ ಮತ್ತು ಪುತ್ರ ಇಬ್ಬರೂ ನಿಧನರಾಗಿದ್ದರು. ೧೯೩೩ರ ನವೆಂಬರ್ ೩ರಂದು ಚಿತ್ರದುರ್ಗದ ಚಳ್ಳಕೆರೆಯಲ್ಲಿ ಜನಿಸಿದ ಜಾಫರ್ ಷರೀಫ್ ನಿಜ ಲಿಂಗಪ್ಪ ಅವರ ಕಾಲದಿಂದ ಕಾಂಗ್ರೆಸ್ ಪಕ್ಷದ ಜತೆ ತಮ್ಮನ್ನು ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಇಬ್ಭಾಗವಾದಾಗ ಮಾತ್ರ ಅವರು ಇಂದಿರಾ ಗಾಂಧಿಯವರ  ಆಳುವ  ಕಾಂಗ್ರೆಸ್ ಜತೆ ಗುರು ತಿಸಿಕೊಂಡರು. ಗಾಂಧಿಯವರ ಆಪ್ತ ಕೂಟದಲ್ಲಿ ಇವರೂ ಒಬ್ಬರಾಗಿದ್ದರು. ಷರೀಫ್ ಅವರು ಪಿ.ವಿ. ನರಸಿಂಹ ರಾವ್ ಸಂಪುಟದಲ್ಲಿ ರೈಲ್ವೇ ಖಾತೆ ಸಚಿವರಾಗಿದ್ದರು. ೧೯೯೧ ರಿಂದ ೧೯೯೫ ರವರೆಗೆ ರೈಲ್ವೇ ಖಾತೆ ಸಚಿವರಾಗಿದ್ದಾಗ ರೈಲ್ವೇ ಹಳಿಯನ್ನು ನ್ಯಾರೋ ಗೇಜ್‌ನಿಂದ ಬ್ರಾಡ್ ಗೇಜ್‌ಗೆ ಏರಿಸುವ ತೀರ್ಮಾನವನ್ನು ಅವರು ತೆಗೆದುಕೊಂಡಿದ್ದರು. ಬೆಂಗಳೂರಿನಲ್ಲಿ ರೈಲ್ವೇ ಕಾರ್ಖಾನೆ ಬರುವಲ್ಲಿಯೂ ಅವರ ಕೊಡುಗೆ ಮಹತ್ತರವಾಗಿತ್ತು. ೧೯೭೭ ರಿಂದ ೧೯೯೯ರವರೆಗೆ ೭ ಬಾರಿ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮಧ್ಯದಲ್ಲಿ ಒಮ್ಮೆ ೧೯೯೬ರಲ್ಲಿ ಮಾತ್ರ ಅವರು ಇಲ್ಲಿ ಚುನಾವಣೆಗೆ ನಿಲ್ಲಲಿಲ್ಲ. ಆದರೆ ೧೯೯೯ರ ನಂತರ ಅವರಿಗೆ ಗೆಲುವು ಮರೀ ಚಿಕೆಯಾಯಿತು. ೨೦೦೪ರಲ್ಲಿ ಸೋತ ಅವರು ೨೦೦೯ರಲ್ಲಿ ಕೊನೆಯ ಬಾರಿ ಚುನಾವಣಾ ಅಖಾಡ ಕ್ಕೆ ಇಳಿದು ಸೋಲನ್ನು ಕಾಣಬೇಕಾಯಿತು.  ನಟ, ರಾಜಕಾರಣಿ ಅಂಬರೀಶ್ ಅವರ ನಿಧನದ ಹಿಂದೆಯೇ ಜಾಫರ್ ಷರೀಫ್ ಸಾವಿನ ಸುದ್ದಿ ಹೊರಬಿದ್ದಿತು. ಈ ಮೂಲಕ ಇಬ್ಬರು ಪ್ರಭಾವಿ ಮುಖಂಡರನ್ನು ಕಾಂಗ್ರೆಸ್ ಪಕ್ಷ ಕಳೆದುಕೊಂಡಿತು.  ಕಾಂಗ್ರೆಸ್ ಮೇಲೆ ಮುನಿಸು: ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ಸೆಂಟ್ರಲ್‌ನಿಂದ ಕಣಕ್ಕಿಳಿಯಲು ಜಾಫರ್  ಷರೀಫ್ ಬಯಸಿದ್ದರು.  ಆದರೆ ರಾಜ್ಯ ಕಾಂಗ್ರೆಸ್ ವರಿಷ್ಠರು ಯುವ ನಾಯಕ ರಿಜ್ವಾನ್  ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದರು. ಇದರಿಂದ ಕಾಂಗ್ರೆಸ್ ನಾಯಕರ ವಿರುದ್ಧ ಜಾಫರ್ ಷರೀಫ್ ತೀವ್ರವಾಗಿ ಕೋಪಗೊಂದಿದ್ದರು. ಬಳಿಕ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಕಾಂಗ್ರೆಸ್‌ನಲ್ಲಿ ಇದ್ದರೂ ತೆರೆಮರೆಗೆ ಸರಿದಿದ್ದ ಜಾಫರ್  ಷರೀಫ್ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರ ವಿರುದ್ಧ ಬಹಿರಂಗವಾಗಿಯೇ ಗುಟುರು ಹಾಕುತ್ತಿದ್ದರು. ಪಕ್ಷ ಮತ್ತು ನಿಷ್ಠೆಗೆ ಹೆಸರಾಗಿದ್ದ ಜಾಫರ್ ಷರೀಫ್ ಹೈಕಮಾಂಡ್‌ನಲ್ಲಿ ಅತ್ಯಂತ ಪ್ರಭಾವಿ ಮುಖಂಡರಾಗಿದ್ದರು. ಹಿಂದಿನ ದಿನ  ಮಧ್ಯಾಹ್ನ ನಮಾಝ್‌ಗೆ ತೆರಳಲು ಕೋಲ್ಸ್ ಪಾರ್ಕ್ ಸಮೀಪದ ತಮ್ಮ ನಿವಾಸದಲ್ಲಿ ಸಿದ್ಧವಾಗುತ್ತಿದ್ದರು. ಈ ವೇಳೆ ಏಕಾಏಕಿ ಕುಸಿದು ಬಿದ್ದರು. ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಕೂಡಲೇ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಉಸಿರಾಟದ ಸಮಸ್ಯೆ ಹೆಚ್ಚಾಗಿರುವ ಕಾರಣ ಅವರನ್ನು ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

2008:  ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಅಮೆರಿಕದ ನಿಯೋಜಿತ ಅಧ್ಯಕ್ಷ  ಒಬಾಮ ಅವರಿಗೆ ನೆರವು ನೀಡುವ ತಂಡದಲ್ಲಿ ಭಾರತೀಯ ಮೂಲದ ಹಲವರನ್ನು ಸೇರಿಸಿಕೊಳ್ಳ      ಲಾಯಿತು. ಈ ತಂಡಕ್ಕೆ ಸೇರಿಕೊಂಡವರೆಲ್ಲ ಒಂದಿಲ್ಲೊಂದು ಬಗೆಯಲ್ಲಿ ಒಬಾಮ ಅವರ ಹಳೆಯ ಸ್ನೇಹಿತರೇ.  ಭಾರತೀಯ ಮೂಲದ ನಿಕ್ ರಾಥೋಡ್ ಅವರನ್ನು ಅಂತರ್- ಸರ್ಕಾರ ವ್ಯವಹಾರಗಳ ನಿರ್ದೇಶಕರಾಗಿ ನೇಮಿಸಲಾಯಿತು. ನಿಕ್ ರಾಥೋಡ್ ಪ್ರಸ್ತುತ ದಕ್ಷಿಣಾ ಏಷ್ಯಾ ಜನರ ನೆರವಿಗಾಗಿ ಸ್ಥಾಪಿಸಲಾದ ರಾಷ್ಟ್ರೀಯ ಸಂಸ್ಥೆಯೊಂದರ ನಿರ್ದೇಶಕರು. 'ಅಂತರ್- ಸರ್ಕಾರ ವ್ಯವಹಾರಗಳ ಉಪ ನಿರ್ದೇಶಕರಾಗಿ ಪರಾಗ್ ಮೆಹ್ತಾ ಅವರನ್ನು ನೇಮಿಸಲಾಯಿತು. ಮೆಹ್ತಾ ಏಷ್ಯಾ ಮೂಲದವರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ಹಲವು ಅಲ್ಪಸಂಖ್ಯಾತ ಗುಂಪುಗಳ ಸಮನ್ವಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುವರು. ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಒಬಾಮ ಅವರ ಸಹಪಾಠಿಯಾಗಿದ್ದ, ಡ್ಯುಕ್ ವಿವಿ ಅಧ್ಯಾಪಕಿ ಆರತಿ ರೈ ಅವರನ್ನು ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ ಹಾಗೂ ಮಾನವಿಕ ವಿಭಾಗದ ಪರಿಶೀಲನಾ ಸಂಸ್ಥೆಯ ಸದಸ್ಯೆಯಾಗಿ ನೇಮಿಸಲಾಯಿತು.

2008: ಎಂಡೆವರ್ ನೌಕೆಯಲ್ಲಿ ತೆರಳಿದ ಅಮೆರಿಕದ ಇಬ್ಬರು ಗಗನಯಾತ್ರಿಗಳು ನಾಲ್ಕನೇಯ ಹಾಗೂ ಅಂತಿಮ ಬಾಹ್ಯಾಕಾಶ  ನಡಿಗೆಯನ್ನು ಪೂರ್ಣಗೊಳಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ವಿದ್ಯುತ್ ಒದಗಿಸುವ ಸೌರ ಫಲಕಗಳನ್ನು ಜೋಡಿಸುವ ಕಾರ್ಯವನ್ನು ಈ ಜೋಡಿ ಪೂರ್ಣಗೊಳಿಸಿತು. ಸ್ಟೆವ್ ಬೊವೆನ್ ಹಾಗೂ ಶೇನ್ ಕಿಂಬ್ರೋಗ್ ಎರಡೂವರೆ ಗಂಟೆಗಳ ಕಾಲ ಕಾರ್ಯನಿರ್ವಹಿಸಿ ತಮಗೆ ವಹಿಸಿದ್ದ ಕೆಲಸಗಳನ್ನು ಪೂರ್ಣಗೊಳಿಸಿದರು. ಜಪಾನಿನ ಕಿಬೊ ಪ್ರಯೋಗಾಲಯದ ಮೇಲಿರುವ ಉಷ್ಣನಿಯಂತ್ರಕ ಕವಚವನ್ನು ಈ ಜೋಡಿ ತೆಗೆದುಹಾಕಿತು. ಬೊವೆನ್ ಪ್ರಯೋಗಾಲಯದ ಮೇಲೆ ಜಿಪಿಎಸ್ ಆಂಟೆನಾವನ್ನು ಅಳವಡಿಸಿದರು. ಈ ಎಂಡೆವರ್ ಯಾತ್ರೆ 16 ದಿನಗಳ ಅವಧಿಯದ್ದು.

2008: 437 ಕೋಟಿ ರೂಪಾಯಿಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ಸುವರ್ಣ ಸಹಕಾರಿ ಬ್ಯಾಂಕಿನ ಸಂಸ್ಥಾಪಕ- ಮಾಜಿ ಅಧ್ಯಕ್ಷ  ಸೇರಿದಂತೆ 14 ಮಂದಿಯನ್ನು  ಪುಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನ್ಯಾಯಾಂಗ ವಶಕ್ಕೆ ಒಪ್ಪಿಸಿತು. ಪೊಲೀಸ್ ವಶದಲ್ಲೇ ಮುಂದುವರಿಸುವಂತೆ ಸಲ್ಲಿಸಲಾಗಿದ್ದ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತು. ಪುಣೆ ಆರ್ಥಿಕ ಅಪರಾಧಗಳ ಘಟಕದ ಪೊಲೀಸರು ನವೆಂಬರ್ 22ರಂದು ಇವರನ್ನು ಬಂಧಿಸಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಾಮವಳಿಗಳನ್ನು ಉಲ್ಲಂಘಿಸಿ  ಸರಿಯಾದ ದಾಖಲೆಗಳು ಇಲ್ಲದಿದ್ದರೂ ಇವರು ದೊಡ್ಡ ಮೊತ್ತದ ಸಾಲ ನೀಡುತ್ತಿದ್ದರೆಂದು ಈ 14 ಮಂದಿ ಮೇಲೆ ಆರೋಪ ಹೊರಿಸಲಾಯಿತು. ಈ ಪ್ರಕರಣ 2006 ರಲ್ಲಿ ಬೆಳಕಿಗೆ ಬಂದಾಗ ಬ್ಯಾಂಕಿನಲ್ಲಿ ಠೇವಣಿ ಇರಿಸಿದವರು ಕಂಗಾಲಾಗಿದ್ದರು.

2008: ಸ್ವಾತಂತ್ರ್ಯ ಯೋಧ ಹಾಗೂ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜಿನಲ್ಲಿ ಸೈನಿಕರಾಗಿ ಹೋರಾಡಿದ್ದ ಗೋಪಾಲ ಶೆಟ್ಟಿ (90) ಅವರು ಈದಿನ ಮಂಗಳೂರಿನ ಪಡೀಲಿನಲ್ಲಿನ ಪೇರ್ಲ ವಠಾರದಲ್ಲಿ ನಿಧನರಾದರು. ಶೆಟ್ಟಿ ಅವರು 1941ರಲ್ಲಿ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾಗ, ದ್ವಿತೀಯ ಮಹಾಯುದ್ಧದಲ್ಲಿ ಭಾಗವಹಿಸಿ ಲಿಬಿಯಾದಲ್ಲಿ ಜರ್ಮನಿಯ ಸೈನಿಕ ಕೈದಿಯಾಗಿ ಬಂಧಿತರಾಗಿ ಇಟಲಿ ಹಾಗೂ ಜರ್ಮನಿಯ ಕ್ಯಾಂಪಿನಲ್ಲಿದ್ದರು. ಬೋಸ್‌ ಅವರು ಜರ್ಮನಿಯಲ್ಲಿ ಆಜಾದ್ ಹಿಂದ್ ಫೌಜ್ ಸ್ಥಾಪಿಸಿದ್ದಾಗ ಬಂಧನದಲ್ಲಿದ್ದ ಇತರ ಭಾರತೀಯ ಸೈನಿಕರೊಂದಿಗೆ ಅವರು ಈ ಪಡೆಗೆ ಸೇರಿದ್ದರು. ಸ್ವಾತಂತ್ರ್ಯಾನಂತರ ಭಾರತೀಯ ಸೇನೆಗೆ ಸೇರಿದ್ದರು. ಸೈನ್ಯದಿಂದ ನಿವೃತ್ತರಾದ ಮೇಲೆ ಮಂಗಳೂರಿನ ಎನ್‌ಸಿಸಿ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದರು.

2008: ಸ್ಪೇನಿನ  ಮ್ಯಾಡ್ರಿಡಿನಲ್ಲಿ ನಡೆದ ಮಕ್ಕಳ ಹಾಗೂ ಯುವಕರ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2008ರಲ್ಲಿ ಮಾ. ಕಿಶನ್ ನಿರ್ದೇಶನದ 'ಕೇರಾಫ್ ಫುಟ್‌ಪಾತ್' ಚಿತ್ರ 'ಅತ್ಯುತ್ತಮ ಮಕ್ಕಳ ತೀರ್ಪುಗಾರರ ಪ್ರಶಸ್ತಿ' ಹಾಗೂ ಚಿತ್ರದಲ್ಲಿನ ನಟನೆಗಾಗಿ 'ಅತ್ಯುತ್ತಮ ನಟ' ಪ್ರಶಸ್ತಿ ಪಡೆಯಿತು. ನವೆಂಬರ್ 17-22ರವರೆಗೆ ನಡೆದ ಈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾಸ್ಟರ್ ಕಿಶನ್ ಹಾಗೂ ಚಿತ್ರದ ನಿರ್ಮಾಪಕಿ ಶೈಲಜಾ ಶ್ರೀಕಾಂತ್ ಭಾಗವಹಿಸಿದ್ದರು. ಈ ಚಲನ ಚಿತ್ರೋತ್ಸವದಲ್ಲಿ ಇದು ಭಾರತದಿಂದ ಪ್ರದರ್ಶನಗೊಂಡ ಏಕೈಕ ಚಲನ ಚಿತ್ರವಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಕಿಶನ್ 'ಈ ಪ್ರಶಸ್ತಿ ನನಗೆ ಮಾತ್ರವಲ್ಲ, ಇಡೀ ಚಿತ್ರ ತಂಡಕ್ಕೆ ಸಂದ ಪ್ರಶಸ್ತಿ' ಎಂದು ತಿಳಿಸಿದರು.

2008: ಖ್ಯಾತ ಮಾಜಿ ಫುಟ್‌ಬಾಲ್ ತಾರೆ ಪೀಟರ್ ತಂಗರಾಜ್ (72) ಅವರು ರಾಂಚಿಯಲ್ಲಿ ಹೃದಯಾಘಾತದಿಂದ ನಿಧನರಾದರು. ದೀರ್ಘ ಕಾಲ ಅನಾರೋಗ್ಯದಿಂದ ಬಳಲಿದ್ದ ಅವರನ್ನು ಈದಿನ ಬೆಳಿಗ್ಗೆಯಷ್ಟೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೇ ಅವರು ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿದವು. 1962ರಲ್ಲಿ ಜಕಾರ್ತಾ ಏಷ್ಯಾ ಕ್ರೀಡಾಕೂಟದಲ್ಲಿ ಭಾರತ ತಂಡವು ಫುಟ್‌ಬಾಲ್‌ನಲ್ಲಿ ಸ್ವರ್ಣ ಪದಕ ಗೆದ್ದ ಸಂದರ್ಭದಲ್ಲಿ ತಂಗರಾಜ್  ಗೋಲ್ ಕೀಪರ್ ಆಗಿ ಕಾರ್ಯ ನಿರ್ವಹಿಸಿದ್ದರು. 1958ರಲ್ಲಿ ಏಷ್ಯಾದ ಅತ್ಯಂತ ಶ್ರೇಷ್ಠ ಗೋಲ್ ಕೀಪರ್ ಎನ್ನುವ ಶ್ರೇಯವನ್ನೂ ಪಡೆದಿದ್ದರು. 1954ರಿಂದ 1968ರವರೆಗೆ ಭಾರತ ತಂಡವನ್ನು ಪ್ರತಿನಿಧಿಸಿ ಅನೇಕ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಆಡಿದ್ದರು. 1954, 1958,  1962  ಹಾಗೂ 1966ರ ಏಷ್ಯಾ ಕ್ರೀಡಾಕೂಟಗಳಲ್ಲಿ ಕೂಡಾ ಪಾಲ್ಗೊಂಡ್ದಿದರು. 1968ರಲ್ಲಿ ಅರ್ಜುನ ಪ್ರಶಸ್ತಿ ಪಡೆದಿದ್ದ ಅವರು 1960ರಲ್ಲಿ ಏಷ್ಯಾದ ಆಲ್‌ ಸ್ಟಾರ್ ತಂಡದಲ್ಲಿಯೂ ಪಾಲ್ಗೊಂಡಿದ್ದರು.. ಮೆಲ್ಬೋರ್ನ್ (1956) ಹಾಗೂ ರೋಮ್ (1960) ಒಲಿಂಪಿಕ್ ಕೂಟಗಳಲ್ಲಿ ಪಾಲ್ಗೊಂಡ ಭಾರತ ತಂಡದ ಸದಸ್ಯರಾಗಿದ್ದರು.

2007: ಭಾರತ ತಂಡದ ಸಚಿನ್ ತೆಂಡೂಲ್ಕರ್ ತೆಂಡೂಲ್ಕರ್ ಅವರು ಟೆಸ್ಟ್  ಕ್ರಿಕೆಟಿನಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗುವ ಮೂಲಕ ಮತ್ತೊಂದು ವಿಶ್ವದಾಖಲೆ ಸ್ಥಾಪಿಸಿದರು. ಪಾಕಿಸ್ಥಾನ ವಿರುದ್ಧ ನವದೆಹಲಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸಚಿನ್ 11183 ರನ್ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದರು. ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ 24ನೇ ರನ್ ಗಳಿಸುವುದರೊಂದಿಗೆ ಅವರ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಅತ್ಯಂತ ಹೆಚ್ಚು ರನ್ನು ಗಳಿಸಿದ ವಿಶ್ವದಾಖಲೆ (11,183) ಅವರದಾಯಿತು. ಅಂತಾರಾಷ್ಟ್ರೀಯ ಟೆಸ್ಟ್  ಕ್ರಿಕೆಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ನರಲ್ಲಿ ಎರನೆಯವರೆಂಬ ಹೆಗ್ಗಳಿಕೆ ಭಾರತದ ತೆಂಡೂಲ್ಕರ್ ಅವರಿಗೆ ಪ್ರಾಪ್ತಿಯಾಯಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ಅವರು 11174 ರನ್ ಪೇರಿಸಿದ್ದ ಆಸ್ಟ್ರೇಲಿಯಾದ ಮಾಜಿ ನಾಯಕ ಅಲನ್ ಬಾರ್ಡರ್ ದಾಖಲೆಯನ್ನು ಅಳಿಸಿಹಾಕಿದರು. ಈ ಪಂದ್ಯದಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದ ತೆಂಡೂಲ್ಕರ್ ಅವರಿಗೆ ಇದು 141ನೇ ಟೆಸ್ಟ್ ಹಾಗೂ 228ನೇ ಇನಿಂಗ್ಸ್. ಅವರು ಈಗ 54.79 ಸರಾಸರಿಯಲ್ಲಿ 11183 ರನ್ ಕಲೆಹಾಕಿದರು. ವೆಸ್ಟ್ ಇಂಡೀಸಿನ ಮಾಜಿ ಆಟಗಾರ ಬ್ರಯನ್ ಲಾರಾ (11953 ರನ್) ಮೊದಲ ಸ್ಥಾನದಲ್ಲಿದ್ದಾರೆ.

2007: ಮೊಘಲ್ ಹಾಗೂ ಬಹಮನಿ ಆಡಳಿತ ಕಾಲಕ್ಕೆ ಸೇರಿರುವ ಐತಿಹಾಸಿಕ ಮೌಲ್ಯದ 640 ಬೆಳ್ಳಿ ನಾಣ್ಯಗಳು ಗುಲ್ಬರ್ಗದಲ್ಲಿ ಪತ್ತೆಯಾದವು. ಸುಮಾರು 7143 ಗ್ರಾಂ ತೂಕದ ಈ ನಾಣ್ಯಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಯಿತು. ಪ್ರಾಚ್ಯವಸ್ತು ತಜ್ಞರ ಪ್ರಕಾರ ಈ ನಾಣ್ಯಗಳು 1269-1299ರ ಕಾಲಕ್ಕೆ ಸೇರಿದವು ಎಂದು ಖಚಿತಪಡಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ. ಎನ್. ನಾಗರಾಜ ಪ್ರಕಟಿಸಿದರು. ಗುಲ್ಬರ್ಗದ ಬ್ರಹ್ಮಪೂರ ಬಡಾವಣೆಯ ಕುಂಬಾರಗಲ್ಲಿಯ ಗುಂಡಪ್ಪ ಹಡಗಿಲ್ ಎಂಬುವರ ಬಿದ್ದುಹೋದ ಮನೆಯಲ್ಲಿ ಈ ನಾಣ್ಯಗಳು ದೊರಕಿದವು. ಇದೇ ಬಡಾವಣೆಯ ಪ್ರಕಾಶ ಪಾಟೀಲ್ ಎಂಬುವರ ಬಳಿ ಕೆಲಸಕ್ಕೆ ಇದ್ದ ಹಣಮಂತಪ್ಪ ಹರಗೆನೂರ ಹೂವಿನ ಕುಂಡಗಳಿಗೆ ಹಾಕಲು ಮಣ್ಣು ತರಲು ಹೋದಾಗ ಅವರಿಗೆ ನವೆಂಬರ್ 22ರಂದು ಈ ನಾಣ್ಯಗಳು ದೊರಕಿದವು. ಈ ನಾಣ್ಯಗಳ ಹಾಲಿ ಬೆಲೆ ಅಂದಾಜು 1.40 ಲಕ್ಷ ರೂಪಾಯಿಗಳು. ಐತಿಹಾಸಿಕ ಮೌಲ್ಯದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ನಾಣ್ಯಗಳ ಮೌಲ್ಯ ಸುಮಾರು 15-20 ಲಕ್ಷ ರೂ.ಗಳು ಎಂದು ಅಂದಾಜು. ಹರಗೇನೂರ ಕುಟುಂಬ ಸದಸ್ಯರು ಈ ನಾಣ್ಯಗಳನ್ನು ಸರ್ಕಾರಕ್ಕೆ ಒಪ್ಪಿಸಿದರು.

2007: ಗಡಿಪಾರಾದ ಸುಮಾರು 7 ವರ್ಷಗಳ ಬಳಿಕ ಪಾಕಿಸ್ಥಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಈದಿನ ಲಾಹೋರಿಗೆ ಆಗಮಿಸಿದರು. ಪಾಕಿಸ್ಥಾನದ ಮುಸ್ಲಿಂ ಲೀಗ್ (ಪಿಎಂಎಲ್ -ಎನ್) ಮುಖಂಡ ಶರೀಫ್ ಅವರು ಕಳೆದ ಸೆಪ್ಟೆಂಬರಿನಲ್ಲಿ ಮೊದಲ ಬಾರಿ ಪಾಕಿಸ್ಥಾನಕ್ಕೆ ಆಗಮಿಸಿದಾಗ ಅವರನ್ನು ಬಂಧಿಸಲಾಗಿತ್ತು.

2007: ಪಶ್ಚಿಮ ಇಂಡೋನೇಷ್ಯದಲ್ಲಿ ಈದಿನ  ಬೆಳಗ್ಗೆ ಶಕ್ತಿಶಾಲಿ ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.2 ರಷ್ಟಿತ್ತು. ಕರಾವಳಿ ಪ್ರದೇಶ ಸುಮಾತ್ರ  ದ್ವೀಪದ ಬೇಕ್ ಕುಲಾ ನಗರದ 28 ಕಿ.ಮೀ ದೂರದಲ್ಲಿ ಈ  ಕಂಪನದ ಕೇಂದ್ರಬಿಂದು ಇತ್ತು.  2004ರಲ್ಲಿ ಸಮುದ್ರದಲ್ಲಿ ಸಂಭವಿಸಿದ  ಭೂಕಂಪದಿಂದ ಉಂಟಾದ ಸುನಾಮಿಗೆ ಸುಮಾರು 1.70 ಲಕ್ಷ ಜನ ಬಲಿಯಾಗಿದ್ದರು.

2007: ತಮ್ಮ ಹೊಸ ಚಿತ್ರಕ್ಕಾಗಿ ಚೀನಾದ ಖ್ಯಾತ ಚಿತ್ರನಟ ಜೆಟ್ ಲೀ 100 ದಶಲಕ್ಷ ಯೂನ್ (13 ದಶಲಕ್ಷ ಡಾಲರುಗಳು)ಸಂಭಾವನೆ ಪಡೆದು ದಾಖಲೆ ನಿರ್ಮಿಸಿದರು. ಚೀನಾ ಭಾಷೆಯ ಚಿತ್ರಗಳಲ್ಲಿ ಇದುವರೆಗೆ ಯಾರೂ ಇಷ್ಟು  ದೊಡ್ಡ ಪ್ರಮಾಣದ ಸಂಭಾವನೆ ಪಡೆದಿರಲಿಲ್ಲ. ಜೆಟ್ ಲೀ ನಟಿಸಿದ `ದಿ ವಾರ್ ಲಾರ್ಡ್ಸ್' ಚಿತ್ರದ ಒಟ್ಟಾರೆ ಬಜೆಟ್ 40 ದಶಲಕ್ಷ ಡಾಲರುಗಳು.

2006: ಹಿರಿಯ ಕವಿ ಡಾ. ಕಯ್ಯಾರ ಕಿಂಞಣ್ಣರೈ, ಡಾ. ಎಂ. ಸರೋಜಿನಿ ಮಹಿಷಿ, ಜಾನಪದ ವಿದ್ವಾಂಸ ಮುದೇನೂರು ಸಂಗಣ್ಣ, ಸಾಹಿತಿ ಸಂಶೋಧಕ ಡಾ. ಹಂಪ ನಾಗರಾಜಯ್ಯ ಹಾಗೂ ಜನಪದ ಗಾಯಕಿ ಬುರ್ರಕಥಾ ಈರಮ್ಮ ಅವರಿಗೆ 2006ನೇ ಸಾಲಿನ `ನಾಡೋಜ' ಗೌರವವನ್ನು ಕನ್ನಡ ವಿಶ್ವವಿದ್ಯಾಲಯವು ಘೋಷಿಸಿತು.

2006: ರಾಷ್ಟ್ರದ ಮೊತ್ತ ಮೊದಲ `ಚಿಟ್ಟೆ ಉದ್ಯಾನ'ವನ್ನು ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಆವರಣದಲ್ಲಿ ಕೇಂದ್ರದ ವಿಜ್ಞಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಕಪಿಲ್ ಸಿಬಲ್ ರಾಷ್ಟ್ರಕ್ಕೆ ಅರ್ಪಿಸಿದರು. 10,490 ಚದರಡಿ ವ್ಯಾಪ್ತಿಯಲ್ಲಿ ನಿರ್ಮಿತವಾದ `ಚಿಟ್ಟೆ ಉದ್ಯಾನ' ಜಗತ್ತಿನ ಇಂತಹ ವಿಶಾಲ ಉದ್ಯಾನಗಳ ಸಾಲಿನಲ್ಲಿ ಒಂದಾಗಲಿದೆ. ನಗರ ಮತ್ತು ಸುತ್ತಮುತ್ತಣ ಸುಮಾರು 42 ಜಾತಿಯ ಚಿಟ್ಟೆಗಳಿಗೆ ಆವಾಸ ಸ್ಥಾನವಾಗಲಿರುವ ಈ ಉದ್ಯಾನದಲ್ಲಿ 2ನೇ ಹಂತದಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಚಿಟ್ಟೆಗಳನ್ನೂ ಸಾಕಲಾಗುವುದು. ಉದ್ಯಾನದ ನಿಮರ್ಾಣ ವೆಚ್ಚ 4.9 ಕೋಟಿ ರೂಪಾಯಿಗಳು.   

2005: ಮಹಾತ್ಮ ಗಾಂಧಿ ಹತ್ಯೆ ಪ್ರಕರಣದ ಆರೋಪಿ ಹಾಗೂ ನಾಥೂರಾಂ ಗೋಡ್ಸೆ ಕಿರಿಯ ಸಹೋದರ ಗೋಪಾಲ್ ವಿನಾಯಕ ಗೋಡ್ಸೆ (86) ಈ ದಿನ ರಾತ್ರಿ ನಿಧನರಾದರು. ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಗೋಪಾಲ್ ಗೋಡ್ಸೆ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸೆರೆವಾಸ ಅನುಭವಿಸಿದ್ದರು.

2005: ಮಾಜಿ ಲೋಕಸಭಾಧ್ಯಕ್ಷ ಪಿ.ಎ. ಸಂಗ್ಮಾ ಅವರು ಲೋಕಸಭಾ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಸಭಾಧ್ಯಕ್ಷ ಸೋಮನಾಥ ಚಟರ್ಜಿ ಅಂಗೀಕರಿಸಿದರು. 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ತೃಣಮೂಲ ಕಾಂಗ್ರೆಸ್ಸಿನಿಂದ ಮೇಘಾಲಯದ ತುರಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ತಿಂಗಳ ಹಿಂದೆ ಈ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

2005: ಬಹು ವಿವಾದಿತ ಅರ್ಕಾವತಿ ಬಡಾವಣೆಗಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿತು. ಇದರೊಂದಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಜಮೀನು ಮಾಲೀಕರ ನಡುವಣ ಕಾನೂನು ಸಮರಕ್ಕೆ ತೆರೆಬಿತ್ತು. ಬಡಾವಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಯ ಮಾಲೀಕತ್ವದ ಹಕ್ಕುಗಳನ್ನು ಮೂಲ ಮಾಲೀಕರಿಗೆ ವರ್ಗಾಯಿಸುವಂತೆ ಏಕಸದಸ್ಯ ಪೀಠ ನೀಡಿದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎನ್. ಕೆ. ಸೋಧಿ ಹಾಗೂ ನ್ಯಾಯಮೂರ್ತಿ ಎನ್. ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು ರದ್ದುಪಡಿಸಿತು.

2005: ಆಫ್ಘಾನಿಸ್ಥಾನದಲ್ಲಿ ತಾಲಿಬಾನ್ ಉಗ್ರರಿಂದ ಹತ್ಯೆಗೀಡಾದ ಮಣಿಯಪ್ಪನ್ ಕುಟ್ಟಿಯ ಶವವನ್ನು ಹುಟ್ಟೂರಾದ ಅಳಪ್ಪುಳ ಗ್ರಾಮಕ್ಕೆ ತಂದು ಸೇನಾಪಡೆ ಗೌರವದ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.

2002: ನ್ಯೂಕ್ಯಾಸಲ್ನ ಜಾನ್ ಹಂಟರ್ ಆಸ್ಪತ್ರೆಂಯಲ್ಲಿ ಹಾನಿಗೀಡಾದ ತನ್ನ ಹೃದಯವನ್ನು ದುರಸ್ತಿಪಡಿಸಲು ಆಸ್ಟ್ರೇಲಿಯಾದ ಜಿಮ್ ನಿಕೊಲ್ ವಿಶಿಷ್ಟ ಶಸ್ತ್ರಚಿಕಿತ್ಸೆಗೆ ಒಳಗಾದರು. `ಅಡಲ್ಟ್ ಸ್ಟೆಮ್ ಸೆಲ್ಸ್' (ಮೂಲಕೋಶ) ಬಳಸಿ ನಡೆಸಲಾದ ಜಗತ್ತಿನ ಮೊತ್ತ ಮೊದಲ ರಿಪೇರಿ ಕೆಲಸ ಇದು.

2001: ಜಗತ್ತಿನಲ್ಲಿ ಮೊತ್ತ ಮೊದಲಬಾರಿಗೆ ತಾನು ಮಾನವ ಭ್ರೂಣದ ತದ್ರೂಪು (ಕ್ಲೋನಿಂಗ್) ಸೃಷ್ಟಿ ಮಾಡಿರುವುದಾಗಿ ಮೆಸಾಚ್ಯುಸೆಟ್ಸಿನ ಎಸಿಟಿ ಕಂಪೆನಿ ಈ ದಿನ ಪ್ರಕಟಿಸಿತು. ತನಗೆ ಮಾನವ ಸೃಷ್ಟಿಯ ಉದ್ದೇಶವಿಲ್ಲ. ಆದರೆ ರೋಗಗಳಿಗೆ ಚಿಕಿತ್ಸೆ ನೀಡುವ ಮೂಲಕೋಶಗಳಿಗಾಗಿ ಭ್ರೂಣವನ್ನು ಬಳಸುವ ಉದ್ದೇಶವಿದೆ ಎಂದು ಅದು ಹೇಳಿತು. ಮನುಕುಲವನ್ನು ಕಾಡುವ ವ್ಯಾಪಕ ಕಾಯಿಲೆಗಳಿಂದ ಪ್ರಾಣ ಉಳಿಸುವ ಚಿಕಿತ್ಸಾ ವಿಧಾನ ರೂಪಿಸುವ ಉದ್ದೇಶ ತಮ್ಮದು ಎಂದು ಅದು ಹೇಳಿತು. ಭ್ರೂಣದಿಂದ ಪಡೆದ ಭ್ರೂಣ ಮೂಲಕೋಶವನ್ನು ದೇಹದ ಯಾವುದೇ ಅಂಗವಾಗಿ ಬೆಳೆಸಬಹುದು.

1981: ಭಾರತದಲ್ಲಿ ನಡೆದ ಮೊತ್ತ ಮೊದಲ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಅಹಮದಾಬಾದಿನ ಸರ್ದಾರ್ ಪಟೇಲ್ ಸ್ಟೇಡಿಯಂ ಪಾತ್ರವಾಯಿತು. ಪಂದ್ಯದಲ್ಲಿ ಭಾರತವನ್ನು ಇಂಗ್ಲೆಂಡ್ ಐದು ವಿಕೆಟ್ ಅಂತರದಲ್ಲಿ ಸೋಲಿಸಿತು.

1952: ಅಗಾಥಾ ಕ್ರಿಸ್ಟೀ ಅವರ ನಾಟಕ `ದಿ ಮೌಸ್ ಟ್ರ್ಯಾಪ್'ನ ಮೊತ್ತ ಮೊದಲ ಪ್ರದರ್ಶನ ಲಂಡನ್ನಿನ ಅಂಬಾಸಡರ್ ಥಿಯೇಟರಿನಲ್ಲಿ ನಡೆಯಿತು.

1948: ನ್ಯಾಷನಲ್ ಕೆಡೆಟ್ ಕೋರ್ (ಎನ್ ಸಿ ಸಿ) ಎನ್ ಸಿ ಸಿ ಕಾಯ್ದೆಗೆ ಅನುಗುಣವಾಗಿ ಈ ದಿನ ಅಸ್ತಿತ್ವಕ್ಕೆ ಬಂತು. ಭಾರತೀಯ ವಿದ್ಯಾರ್ಥಿಗಳ ಕಲ್ಯಾಣದ ದೃಷ್ಟಿಯಿಂದ ಇದನ್ನು ರೂಪಿಸಲಾಗಿದ್ದು `ಏಕತೆ ಮತ್ತು ಶಿಸ್ತು' ಇದರ ಪ್ರಮುಖ ಗುರಿ.

1945: ನಾಜಿ ನಾಯಕರ ವಿಚಾರಣೆಯನ್ನು ಅಂತಾರಾಷ್ಟ್ರೀಯ ಮಿಲಿಟರಿ ಟ್ರಿಬ್ಯೂನಲ್ ಈದಿನ ನ್ಯೂರೆಂಬರ್ಗಿನ ನ್ಯಾಯ ಅರಮನೆಯಲ್ಲಿ (ಪ್ಯಾಲೇಸ್ ಆಫ್ ಜಸ್ಟೀಸ್) ಆರಂಭಿಸಿತು. `ನ್ಯೂರೆಂಬರ್ಗ್ ಟ್ರಯಲ್' (ನ್ಯೂರೆಂಬರ್ಗ್ ವಿಚಾರಣೆ) ಎಂದೇ ಖ್ಯಾತಿ ಪಡೆದ ಈ ವಿಚಾರಣೆ 1946ರ ಸೆಪ್ಟೆಂಬರ್ 30ರಂದು ಕೊನೆಗೊಂಡಿತು. ಅಕ್ಟೋಬರ್ 1ರಂದು ತೀರ್ಪು ಪ್ರಕಟಿಸಲಾಯಿತು. ಒಳಸಂಚು, ಶಾಂತಿ ವಿರೋಧಿ ಅಪರಾಧಗಳು, ಯುದ್ಧ ಅಪರಾಧಗಳು ಹಾಗೂ ಮಾನವತೆ ವಿರುದ್ಧ ಎಸಗಿದ ಅಪರಾಧಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಲಾಯಿತು.10 ಮಂದಿಗೆ ಮರಣದಂಡನೆ, 7 ಮಂದಿಗೆ ಸೆರೆವಾಸದ ಶಿಕ್ಷೆ ವಿಧಿಸಿದರೆ, ಮೂವರನ್ನು ಖುಲಾಸೆ ಮಾಡಲಾಯಿತು.

1916: ಕನ್ನಡಕ್ಕಿಂತ ಇಂಗ್ಲಿಷಿನಲ್ಲಿಯೇ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ್ದ  ಸಾಹಿತಿ ಹೇಮಂತ ಕುಲಕರ್ಣಿ (21-11-1916ರಿಂದ 22-7-1994) ಅವರು ಬಿಜಾಪುರದಲ್ಲಿ ಜನಿಸಿದರು.

1916: ಸಾಹಿತಿ ರಾಮಕೃಷ್ಣ ಉಡುಪ ಜನನ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment