Saturday, November 24, 2018

ಇಂದಿನ ಇತಿಹಾಸ History Today ನವೆಂಬರ್ 24

ಇಂದಿನ ಇತಿಹಾಸ History Today ನವೆಂಬರ್ 24
2018: ಬೆಂಗಳೂರು: ಕನ್ನಡ ಚಲಚಿತ್ರದ ಹಿರಿಯ ನಟ, ಮಾಜಿ ಸಚಿವರೆಬೆಲ್ ಸ್ಟಾರ್’  ಎಂದೇ ಖ್ಯಾತರಾಗಿದ್ದ ಅಂಬರೀಶ್ (66) ಅನಾರೋಗ್ಯದಿಂದ ನಗರದ ವಿಕ್ರಮ್  ಆಸ್ಪತ್ರೆ ಯಲ್ಲಿ ರಾತ್ರಿ ನಿಧನರಾದರು.ಕಿಡ್ನಿ, ಶ್ವಾಸಕೋಶದ ಸಮಸ್ಯೆಯಿಂದ  ಅವರು ಬಳಲುತ್ತಿದ್ದರು.  ಪತ್ನಿ ಸುಮಲತಾ ಮತ್ತು ಪುತ್ರ ಅಭಿಷೇಕ್ ಸೇರಿದಂತೆ ಅಪಾರ ಅಭಿಮಾನಿ ಬಳಗವನ್ನು ಅಂಬರೀಶ್ ಅಗಲಿದರು.ಮಾಜಿ ಲೋಕಸಭಾ ಸದಸ್ಯರಾದ ಅಂಬರೀಶ್  ವರ ಮೊದಲ ಹೆಸರು ಮಳವಳ್ಳಿ ಹುಚ್ಚೆ ಗೌಡ ಅಮರನಾಥ್. ಹುಚ್ಚೇಗೌಡ- ಪದ್ಮಮ್ಮ ದಂಪತಿಗೆ 6ನೇ ಮಗನಾಗಿ 1952 ಮೇ 29ರಂದು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ದೊಡ್ಡರಸನ ಕೆರೆಗ್ರಾಮದಲ್ಲಿ ಜನಿಸಿದ ಅಂಬರೀಶ್ , ಖ್ಯಾತ ಪೀಟಿಲು ವಾದಕ ವಿದ್ವಾನ್ ಟಿ.ಚೌಡಯ್ಯರವರ ಮೊಮ್ಮಗ.  ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರ ಹಾವು" ಚಿತ್ರದಲ್ಲಿ (ಜಲೀಲ ಪಾತ್ರದ) ನಟಿಸುವ ಮೂಲಕ  ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಿದ ಎಚ್.ಕೆ.ಅನಂತರಾವ್ ಅವರ ಕಾದಂಬರಿ ಆಧಾರಿತ ಅಂತ ಚಿತ್ರದ ನಾಯಕನಾಗಿ ಅಭಿನಯಿಸಿದ್ದು ಇವರ ವೃತ್ತಿ ಜೀವನಕ್ಕೆ ಒಂದು ಹೊಸ ಆಯಾಮ ನೀಡಿತು. ಚಿತ್ರದಲ್ಲಿ ಅನ್ಯಾಯದ ವಿರುದ್ಧ ಸಿಡಿದೇಳುವ ಇನ್ಸ್ಪೆಕ್ಟರ್ ಸುಶೀಲ್ ಕುಮಾರ್ ಪಾತ್ರ ಇವರಿಗೆ ರೆಬೆಲ್ ಸ್ಟಾರ್ ಎಂಬ ಇಮೇಜು ನೀಡಿತು. ಅನಂತರ ಇವರು ನಾಯಕ, ಖಳನಾಯಕಪಾತ್ರಗಳಲ್ಲಿ ನಟಿಸಿದರು. ರಂಗನಾಯಕಿ, ಪಡುವಾರಹಳ್ಳಿ ಪಾಂಡವರು, ಮಸಣದ ಹೂವು, ಚಕ್ರವ್ಯೂಹ, ಏಳುಸುತ್ತಿನ ಕೋಟೆ, ಹೃದಯಹಾಡಿತು, ಸ್ನೇಹಸಂಬಂಧ, ಬ್ರಹ್ಮಾಸ್ತ್ರ, ಅಮರಜ್ಯೋತಿ ಸೇರಿದಂತೆ ಒಟ್ಟು 205 ಚಿತ್ರಗಳಲ್ಲಿ ಅಂಬರೀಶ್  ನಟಿಸಿದ್ದರು. ಮಸಣದಹೂವು ಚಿತ್ರದಲ್ಲಿನ ಇವರ ಪಾತ್ರದ ಅಭಿನಯ ಅವಿಸ್ಮರಣೀಯವಾದರೆ, . ಹೃದಯ ಹಾಡಿತು ಚಿತ್ರ ಇವರ ಚಿತ್ರರಂಗದ ಇಮೇಜನ್ನು ಬದಲಾಯಿಸಿತು. ಚಕ್ರವ್ಯೂಹ ಹಾಗೂ ಮೌನರಾಗ ಚಿತ್ರಗಳು ಇವರಿಗೆ ಜನಪ್ರಿಯತೆ ತಂದುಕೊಟ್ಟವು. ಜೋ ಸೈಮನ್ ನಿರ್ದೇಶನದಲ್ಲಿ, ೧೯೮೯ರಲ್ಲಿ ಬಿಡುಗಡೆಯಾದ ಹಾಂಕಾಂಗ್ನಲ್ಲಿ ಏಜೆಂಟ್ ಅಮರ್ ಇವರ ನೂರನೇ ಚಿತ್ರ. ಇತ್ತೀಚೆಗೆ ಬಿಡುಗಡೆಯಾದ ಅಂಬಿ ನಿಂಗೆ ವಯಸ್ಸಾಯ್ತೋ ಅಂಬರೀಶ್ ಅವರ ಕೊನೆಯ ಚಿತ್ರ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿ ಸಂಸತ್ ಸದಸ್ಯರಾಗಿದ್ದರು. ೨೦೧೩ರಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಅವರು, ಆಗಿನ ಮುಖ್ಯಮಂತ್ರಿ  ಸಿದ್ಧರಾಮಯ್ಯನವರ ಸಂಪುಟದಲ್ಲಿ ವಸತಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.ಅಂಬರೀಶ್ ಅವರ ಪತ್ನಿ ಕನ್ನಡ ಚಿತ್ರನಟಿ ಸುಮಲತಾ. ಪುತ್ರನ ಹೆಸರು ಅಭಿಷೇಕ್ ಗೌಡ. ಅಂಬರೀಶ್ ಅವರು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಮೊದಲಿಗೆ ಜನತಾದಳದಲ್ಲಿದ್ದರು. ಅನಂತರ ಕಾಂಗ್ರೆಸ್ ಪಕ್ಷ ಸೇರಿದರು. ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ಅನಂತರ ಕಾವೇರಿ ಚಳವಳಿಯ ಹಿನ್ನೆಲೆಯಲ್ಲಿ ಜನತೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಮ್ಮ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದರು (2002). ಅಂಬರೀಶ್ ತಮ್ಮ ಉದಾರ ಸ್ವಭಾವದಿಂದಾಗಿ ದಾನಶೂರ ಕರ್ಣ ಎಂದೇ ಹೆಸರಾಗಿದ್ದರು. ಸಮಾಜದ ದುರ್ಬಲ ವರ್ಗದವರ ಬಗ್ಗೆ ಇವರಿಗೆ ವಿಶೇಷ ಕಳಕಳಿಯಿತ್ತು.ರಾಜ್ಯದ ಜನತೆಗೆ ವಿಶೇಷವಾಗಿ ಮಂಡ್ಯದ ಜನತೆಗೆ ಅಂಬರೀಶ್ ನಿಧನ ದಿನದ ಎರಡನೇ ಆಘಾತ. ಇದಕ್ಕೆ ಮುನ್ನ ಇದೇ ದಿನ ಮಂಡ್ಯದಲ್ಲಿ ಖಾಸಗಿ ಬಸ್ಸೊಂದು ನಾಲೆಗೆ ಬಿದ್ದು ಹಲವಾರು ಮಕ್ಕಳು ಮಹಿಳೆಯರು ಸೇರಿದಂತೆ 30 ಮಂದಿ ಸಾವನ್ನಪ್ಪಿದ್ದರು.

2018 : ನವದೆಹಲಿ:  ಐಬಾ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಶಿಪ್ಪಿನಲ್ಲಿ ದೇಶದ ಬಾಕ್ಸಿಂಗ್ ತಾರೆ ಮೆಗ್ನಿಫಿಸೆಂಟ್ ಎಂ.ಸಿ. ಮೇರಿಕೋಮ್ ದಾಖಲೆಯ ಆರನೇಯ ಬಾರಿಗೆ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದರು. ಈ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ೩೫ರ ಹರೆಯದ ಮೇರಿ, ಆರು ಬಾರಿ ವಿಶ್ವ ಚಾಂಪಿಯನ್ ಶಿಪ್ ಗೆದ್ದ ವಿಶ್ವದ ಮೊದಲ ಬಾಕ್ಸಿಂಗ್ ತಾರೆ ಎಂಬ ಕೀರ್ತಿಗೆ ಪಾತ್ರರಾದರು.  ಐಬಾ ಮಹಿಳಾ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಶಿಪ್ಪಿನ ೪೮ ಕೆಜಿ ಲೈಟ್ ಫ್ಲೈವೇಟ್ ವಿಭಾಗದಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಉಕ್ರೇನಿನ ಎಚ್. ಓಕೋಟೊ ವಿರುದ್ಧ - ಅಂತರದ ಅಧಿಕಾರಯುತ ಗೆಲುವು ದಾಖಲಿಸುವ ಮೂಲಕ ಮೇರಿ ಇತಿಹಾಸ ನಿರ್ಮಿಸಿದರು.

2018: ಬೆಂಗಳೂರು: ಚಾಲಕನ ನಿಯಂತ್ರಣ ತಪ್ಪಿ ವಿಶ್ವೇಶ್ವರಯ್ಯ ನಾಲೆ(ವಿ.ಸಿ)ಗೆ ಖಾಸಗಿ ಬಸ್ ಉರುಳಿ
ಬಿದ್ದ ಪರಿಣಾಮ ೩೦ ಮಂದಿ ಸಾವನ್ನ ಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕನಗನಮರ ಡಿ ಗ್ರಾಮದಲ್ಲಿ ಸಂಭವಿಸಿತು. ಇತ್ತೀಚಿನ ವರ್ಷಗಳಲ್ಲಿ ಸಂಭವಿಸಿದ ಅತೀ ಭೀಕರ ಬಸ್ ಅಪಘಾತ ಇದು.  ಮಧ್ಯಾಹ್ನ ೧೨.೩೦ಕ್ಕೆ ಮಂಡ್ಯದಿಂದ ಪಾಂಡವಪುರಕ್ಕೆ ಹೊರಟಿದ್ದ,ಕೆಎ೧೯ ಎಫ್ ೫೬೭೬ ನೋಂದಣಿ ಸಂಖ್ಯೆಯ ಪಂಚಲಿಂಗೇಶ್ವರ ಬಸ್, ಚಾಲಕನ ನಿಯಂತ್ರಣ ತಪ್ಪಿ, ೧೨ ಅಡಿ ಆಳದ ವಿ.ಸಿ ನಾಲೆಗೆ ಬಿದ್ದಿತು. ಘಟನೆಯಲ್ಲಿ ಒಂದೇ ಕುಟುಂಬ ನಾಲ್ವರು ಸಾವನ್ನಪ್ಪಿದರು. ರಾಧಾ(೩೦) ಇವರ ಮಗಳು ವರ್ಷದ ಲಿಖಿತ, ಮಂಜುಳ(೫೯) ಹಾಗೂ ವರ್ಷದ ಪ್ರೇಕ್ಷಾ ಸಾವನ್ನಪ್ಪಿದರು. ಮೃತರು ವದೆ ಸಮುದ್ರ ಗ್ರಾಮದ ನಿವಾಸಿಗಳು.  ವದೆ ಸಮುದ್ರದ ೧೦ಕ್ಕೂ ಹೆಚ್ಚು ಮಂದಿ, ಹುಲಿಕೆರೆಕೊಪ್ಪ ಲಿನ ಓರ್ವ, ಚಿಕ್ಕಾಡೆ ಗ್ರಾಮದ ಓರ್ವ, ಹುಲಿಕೆರೆ ಕೊಪ್ಪಲು ಗ್ರಾಮದ ಇಬ್ಬರು, ಚಾಮಡಹಳ್ಳಿ, ಹಾರೋಹಳ್ಳಿ ಮತ್ತು ಆರತಿ ಕೊಪ್ಪಲು , ಬೇಬಿ ಗ್ರಾಮದ ತಲಾ ಓರ್ವರು ಮೃತರಾದರು. ಕನಗನಮರಡಿ ಗ್ರಾಮದ ಬಳಿ ಬರುತ್ತಿದ್ದಂತೆ ಸ್ಟೇರಿಂಗ್ ಲಾಕ್ ಆಗಿದ್ದರಿಂದ ಚಾಲಕನ ನಿಯಂತ್ರಣ ಕಳೆದುಕೊಂಡು ನಾಲೆಗೆ ಉರುಳಿ ಬಿತ್ತು. ಸುಮಾರು ೨೦ ಅಡಿ ಆಳದ ನಾಲೆಗೆ ಬಸ್ ಬಿದಿದ್ದರಿಂದ ಬಸ್ನಲ್ಲಿದ್ದ ಎಲ್ಲಾ ಪ್ರಯಾಣಿಕರು ನೀರಿನಲ್ಲಿ ಮುಳುಗಿದರು.ನಾಲೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಇದ್ದ ಕಾರಣ ಯಾರೊಬ್ಬರು ಈಜಿ ಮೇಲೆಕ್ಕೆ ಬರಲು ಸಾಧ್ಯವಾಗದೆ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿದರು.

2018: ಅಯೋಧ್ಯೆ(ಉತ್ತರ ಪ್ರದೇಶ): ಮರ್ಯಾದ ಪುರುಷೋತ್ತಮ ಶ್ರೀರಾಮನ ಮಂದಿರ ನಿರ್ಮಾಣದ ದಿನಾಂಕವನ್ನು ಪ್ರಕಟಿಸಿ ಎಂದು ಶಿವ ಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರ ವಾಜಪೇಯಿ ಅವರದ್ದು ಮೈತ್ರಿ ಸರ್ಕಾರವಿದ್ದರಿಂದ ಸೂಕ್ತ ನಿರ್ಧಾರ ಕೈಗೊಳ್ಳಲಾಗಲಿಲ್ಲ. ಆದರೆ, ಕೇಂದ್ರ ದಲ್ಲಿ ಬಿಜೆಪಿ ಬಹುಮತ ಸರ್ಕಾರವಿದೆ. ಆದ್ದ ರಿಂದ ರಾಮ ಮಂದಿರ ನಿರ್ಮಾಣದ ಬಗ್ಗೆ ಯಾವುದೇ ಕಾನೂನಾಗಲೀ ಅಥವಾ ಸುಗ್ರೀವಾ ಜ್ಞೆಯಾಗಲೀ ಜಾರಿ ಮಾಡಿ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು. ಪತ್ನಿ ರಶ್ಮಿ ಮತ್ತು ಪುತ್ರ ಆದಿತ್ಯ ಅವರೊಂ ದಿಗೆ ಶನಿವಾರ ಅಯೋಧ್ಯೆಗೆ ಆಗಮಿಸಿದ ಉದ್ದವ್ ಠಾಕ್ರೆ ಅವರು ಸಂಜೆ ಸರಯು ನದಿ ತೀರದಲ್ಲಿ ಕುಟುಂಬದ ಸಮೇತ ಆರತಿ ಮಾಡಿ, ಪ್ರಾರ್ಥನೆ ಸಲ್ಲಿಸಿದರು.

2018: ನವದೆಹಲಿ: ರಫೇಲ್ ವಹಿವಾಟು ಸಂಬಂಧ ಭಾರತದ ನಂತರ ಫ್ರಾನ್ಸ್ನಲ್ಲಿ ದೂರು ದಾಖಲಾಯಿತು.  ‘ಅಕ್ರಮ ಹಣದ ಹರಿವಿನ ಕುರಿತು ಕಣ್ಗಾವಲು ಇಡುವ ಫ್ರಾನ್ಸ್ ಸರ್ಕಾರೇತರ ಸಂಸ್ಥೆಯೊಂದು ಅಲ್ಲಿನರಾಷ್ಟ್ರೀಯ ಹಣ ಕಾಸು ತನಿಖಾ ಕಚೇರಿಗೆ ಸಂಬಂಧ ದೂರು ನೀಡಿತ್ತು.  ಫ್ರಾನ್ಸ್ ಕಾನೂನು ಸಂಸ್ಥೆಶೇರ್ಪಾ ಅಕ್ಟೋಬರ್ ಅಂತ್ಯದಲ್ಲಿ ತನಿಖಾಧಿಕಾರಿ ಕಚೇರಿಗೆ ದೂರು ನೀಡಿರುವುದಾಗಿ ಫ್ರಾನ್ಸ್ ತನಿಖಾ ವೆಬ್ಸೈಟ್ ಮೀಡಿಯಾಪಾರ್ಟ್ ವರದಿ ಮಾಡಿತು. ತನ್ನನ್ನು ತಾನು ಆರ್ಥಿಕ ಅಪರಾಧಗಳ ಸಂತ್ರಸ್ತರ ಪರ ಹೋರಾಡುವ ಸಂಸ್ಥೆ ಎಂದು ಹೇಳಿಕೊಂಡಿರುವ ಸಂಸ್ಥೆ ಇಂಥಹದ್ದೊಂದು ದೂರು ದಾಖಲಿಸಿರುವುದು ಇದೀಗ ಚರ್ಚೆಗೆ ಗ್ರಾಸವಾಯಿತು. ಯಾವ ನಿಯಮದ ಮೇರೆಗೆ ಡಸಾಲ್ಟ್ ಏವಿಯೇಷನ್ ೩೬ ಯುದ್ಧ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ನಿರ್ಧರಿಸಿತು ಮತ್ತು ಭಾರತದ ಪಾಲುದಾರ ಕಂಪನಿಯಾಗಿ ರಿಲಯನ್ಸ್ನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಯಿತು ಎಂಬುದಕ್ಕೆ ಸ್ಪಷ್ಟನೆ ನೀಡುವಂತೆ ದೂರಿನಲ್ಲಿ ಕೋರಲಾಯಿತು. 

2018: ಭೋಪಾಲ್: ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜಕೀಯ ರಾಡಿಗೆ ತಮ್ಮ ತಾಯಿಯನ್ನು ಎಳೆದುದಕ್ಕಾಗಿ ಕಾಂಗ್ರೆಸ್ ವಿರುದ್ಧ ಕೆಂಡಾಮಂಡಲ ಸಿಟ್ಟಿಗೆದ್ದ ಪ್ರಧಾನಿ ನರೇಂದ್ರ ಮೋದಿ ಅವರುರಾಜ್ ಬಬ್ಬರ್ ಅವರ ಟೀಕೆ ಸಂಪೂರ್ಣವಾಗಿ ಅಸ್ವೀಕಾರಾರ್ಹ ಎಂದು ಹೇಳಿದರು. ಮಧ್ಯಪ್ರದೇಶದಲ್ಲಿ ಚುನಾವಣಾ ಸಭೆಯಲ್ಲಿ  ಮಾತನಾಡುತ್ತಿದ್ದ ಪ್ರಧಾನಿಬೇರಾವುದೇ ವಿಷಯ ಸಿಕ್ಕದ ಕಾರಣ ಕಾಂಗ್ರೆಸ್ ಕಡೆಯ ಅಸ್ತ್ರವಾಗಿ ನನ್ನ ತಾಯಿಯವರನ್ನು ರಾಜಕೀಯ ರಾಡಿಗೆ ಎಳೆತಂದಿದೆ ಎಂದು ಹರಿಹಾಯ್ದರು. ಯಾರಿಗಾದರೂ ಮಾತನಾಡಲು ವಿಷಯ ಇಲ್ಲದೇ ಹೋದಾಗ, ಆತ ಬೇರೆಯವರ ತಾಯಿ ಬಗ್ಗೆ ದೂರತೊಡಗುತ್ತಾನೆ. ಅವರು ರಾಜಕೀಯ ರಾಡಿಗೆ ನನ್ನ ತಾಯಿಯನ್ನು ಎಳೆದಿದ್ದಾರೆ. ನರೇಂದ್ರ ಮೋದಿ ಜೊತೆ ಸೆಣಸುವಲ್ಲಿ ಕಾಂಗ್ರೆಸ್ ಅಸಹಾಯಕವಾಗಿದೆ ಎಂಬುದನ್ನು ಇದು ತೋರಿಸುತ್ತದೆ. ಕಳೆದ ೧೭ ವರ್ಷಗಳಿಂದ ನಾನು ಕಾಂಗ್ರೆಸ್ಸಿಗೆ ಸವಾಲು ಎಸೆದಿದ್ದೇನೆ ಮತ್ತು ಅವರನ್ನು ಪರಾಭವಗೊಳಿಸುತ್ತಾ ಬಂದಿದ್ದೇನೆ ಎಂದು ಮೋದಿ ನುಡಿದರು.ಕಾಂಗ್ರೆಸ್ ಪಕ್ಷದ ಉತ್ತರ ಪ್ರದೇಶ ಘಟಕದ ಮುಖ್ಯಸ್ಥರಾಗಿರುವ ರಾಜ್ ಬಬ್ಬರ್ ಅವರು ಪ್ರಧಾನಿ ಮೋದಿ ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸುವ ಮೂಲಕ ರಾಜಕೀಯ ವಿವಾದ ಹುಟ್ಟು ಹಾಕಿದ್ದಾರೆ. ರೂಪಾಯಿ ಮೌಲ್ಯ ಕುಸಿತವನ್ನು ಅವರು ಮೋದಿ ಅವರ ತಾಯಿಯ ವಯಸ್ಸಿಗೆ ಹೋಲಿಸಿದ್ದರು.ಅವರು (ಪ್ರಧಾನಿ ಮೋದಿ) ಅಮೆರಿಕದ ಡಾಲರ್ ವಿರುದ್ಧ ರೂಪಾಯಿ ಬೆಲೆ ಕುಸಿದಾಗ ಅದು ಆಗಿನ ಪ್ರಧಾನಿ (ಮನಮೋಹನ್ ಸಿಂಗ್) ಅವರ ವಯಸ್ಸಿನ ಸಮೀಪಕ್ಕೆ ಬರುತ್ತಿದೆ ಎಂದು ಹೇಳಿದ್ದರು. ಇಂದು ರೂಪಾಯಿಯ ಬೆಲೆ ಎಷ್ಟು ಕೆಳಕ್ಕೆ ಕುಸಿದಿದೆ ಎಂದರೆ ಅದು ನಿಮ್ಮ ಪ್ರೀತಿಯ ತಾಯಿಯ ವಯಸ್ಸಿನ ಸಮೀಪಕ್ಕೆ ಬರುತ್ತಿದೆ ಎಂದು ರಾಜ್ ಬಬ್ಬರ್ ಅವರು ಇಂದೋರಿನಲ್ಲಿ ಚುನಾವಣಾ ರ್ಯಾಲಿಯಲ್ಲಿ ಹೇಳಿದ್ದರು. ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರಿಗೆ ಈಗ ೯೭ ವರ್ಷ ವಯಸ್ಸು. ನಕಾರಾತ್ಮಕ ರಾಜಕೀಯ ಕಾರಣಕ್ಕಾಗಿ ಕಾಂಗೆಸ್ಸನ್ನು ತಿರಸ್ಕರಿಸಿ ಎಂದು ಮಧ್ಯಪ್ರದೇಶದ ಮತದಾರರನ್ನು ಒತ್ತಾಯಿಸಿದ ಪ್ರಧಾನಿರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಿ. ಕಳೆದ ನಾಲ್ಕು ವರ್ಷಗಳ ತಮ್ಮ ಆಳ್ವಿಕೆಯನ್ನು ಕಾಂಗ್ರೆಸ್ಸಿನ ಕಳೆದ ನಲ್ವತ್ತು ವರ್ಷಗಳ ಆಳ್ವಿಕೆಯ ಜೊತೆಗೆ ಹೋಲಿಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು. ಮ್ಯಾಡಮ್ ಸರ್ಕಾರದ ಕಾಲದಲ್ಲಿ ಬ್ಯಾಂಕ್ ಖಜಾನೆಗಳು ಶ್ರೀಮಂತರ ಸಲುವಾಗಿ ಬರಿದಾಗಿದ್ದವು. ಏನಿದ್ದರೂ ನಮ್ಮ ಸರ್ಕಾರವು ಬ್ಯಾಂಕುಗಳ ಬಾಗಿಲುಗಳನ್ನು ಅಗತ್ಯ ಉಳ್ಳ ಯುವಕರಿಗಾಗಿ ತೆರೆದಿದೆ ಎಂದು ಪ್ರಧಾನಿ ಹೇಳಿದರು.ಮಾಮಾ ಬಗ್ಗೆ ಚಿಂತೆ ಏಕೆ?: ’ಮಾಮಾ ಎಂಬುದಾಗಿ ಖ್ಯಾತರಾಗಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಬಗ್ಗೆ ಕಾಂಗ್ರೆಸ್ಸಿಗೆ ಚಿಂತೆ ಏಕೆ ಎಂಬುದಾಗಿ ಪ್ರಧಾನಿ ಪ್ರಶ್ನಿಸಿದರು.ಅವರು ಮಾಮಾ ಬಗ್ಗೆ ಚಿಂತಿತರಾಗಿದ್ದಾರೆ. ನಿಮಗೆ ಏಕೆ (ಒಟ್ಟಾವಿಯೋ) ಕ್ವಟ್ರೋಚಿ ಮಾಮಾ ಮತ್ತು ವಾರನ್ ಆಂಡರ್ಸನ್ (ಆಗಿನ ಯೂನಿಯನ್ ಕಾರ್ಬೈಡ್ ಅಧ್ಯಕ್ಷ) ಮಾಮಾ ನೆನಪಾಗುತ್ತಿಲ್ಲ?’ ಎಂದು ಬೊಫೋರ್ಸ್ ಹಗರಣ ಮತ್ತು ೧೯೮೪ರ ಭೋಪಾಲ್ ವಿಷಾನಿಲ ದುರಂತವನ್ನು ಉಲ್ಲೇಖಿಸುತ್ತಾ ಮೋದಿ ಕೇಳಿದರು. ವಿಭಜನಕಾರಿ ರಾಜಕೀಯದಲ್ಲಿ ನಿರತವಾದ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವು ೧೫ ವರ್ಷಗಳ ಹಿಂದೆ ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿತು ಎಂದು ಪ್ರಧಾನಿ ಹೇಳಿದರು.

2018: ಚಂಡೀಗಢ: ಅಮೃತಸರದ ನಿರಂಕಾರಿ ಭವನದಲ್ಲಿ ಕಳೆದ ಧಾರ್ಮಿಕ ಸಮಾವೇಶದ ಮೇಲೆ ಗ್ರೆನೇಡ್ ಎಸೆದ ಆರೋಪಿಯನ್ನು ಪಂಜಾಬ್ ಪೊಲೀಸರು ಬಂಧಿಸಿದರು. ಇದರೊಂದಿಗೆ ಮೂರು ಮಂದಿಯ ಸಾವು ಮತು ೨೦ ಮಂದಿ ಗಾಯಗೊಂಡ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದಂತಾಯಿತು. ಅಮೃತಸರದ ಲೊಪೋಕೆಯ (ಅಜ್ನಾಲ) ಚಾಕ್ ಮಿಶ್ರಿ ಗ್ರಾಮದ ನಿವಾಸಿ ಅವತಾರ್ ಸಿಂಗ್ ಎಂಬುದಾಗಿ ಗುರುತಿಸಲಾಗಿರುವ ಆರೋಪಿಯಿಂದ ಅಮೆರಿಕ ನಿರ್ಮಿತ .೩೨ ಬೋರ್ ಪಿಸ್ತೂಲ್, ೨೫ ಸಜೀವ್ ಕಾಡತೂಸುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕ ಸುರೇಶ್ ಅರೋರ ಅವರು ಚಂಡೀಗಢದಲ್ಲಿ  ವರದಿಗಾರರಿಗೆ ತಿಳಿಸಿದರು. ಆರೋಪಿ ಅವತಾರ್ ಸಿಂಗನನ್ನು ಅಮೃತಸರದಲ್ಲಿನ ಲೊಪೋಕೆ ಪೊಲೀಸ್ ಠಾಣೆ ವ್ಯಾಪ್ತಿಯ ಖಯಾಲಾ ಗ್ರಾಮದಲ್ಲಿ ಬಂಧಿಸಲಾಯಿತು ಎಂದು ಡಿಜಿಪಿ ನುಡಿದರು. ಪೊಲೀಸ್ ವಶಕ್ಕೆ ಪಡೆಯುವ ಸಲುವಾಗಿ ಆತನನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಅವರು ಹೇಳಿದರು. ಮೋಟಾರ್ ಸೈಕಲಿನಲ್ಲಿ ಬಂದ ಶಸ್ತ್ರಧಾರಿಗಳು ನಡೆಸಿದ್ದ ದಾಳಿಯಲ್ಲಿ ಬೋಧಕ ಸೇರಿದಂತೆ ಜನರು ಮೃತರಾಗಿ, ೨೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಪೊಲೀಸರು ಈಗಾಗಲೇ ಖಲಿಸ್ತಾನ್ ಲಿಬರೇಶನ್ ಫೋರ್ಸ್ (ಕೆಎಲ್ ಎಫ್) ಉಗ್ರಗಾಮಿ ಸಂಘಟನೆಯ ಕಾರ್ಯಕರ್ತ ಬಿಕ್ರಮ್ ಜಿತ್ ಸಿಂಗ್ ನನ್ನು ಬಂಧಿಸಿದ್ದಾರೆ. ಈತ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ಮತ್ತು ಅವತಾರ್ ಸಿಂಗ್ ಗ್ರೆನೇಡ್ ಎಸೆದ ಎಂದು ಹೇಳಲಾಗಿತ್ತು.

2018: ಚೆನ್ನೈ: ರಜನೀಕಾಂತ್ ಮತ್ತು ಅಕ್ಷಯ್ ಕುಮಾರ್ ಅವರು ನಟಿಸಿದ . ಚಲನಚಿತ್ರವು ಬಿಡುಗಡೆಯಾಗುವುದಕ್ಕೂ ಮುನ್ನವೇ ೩೭೦ ಕೋಟಿ ರೂಪಾಯಿ ಆದಾಯ ಗಳಿಸಿದ್ದು, ಚಿತ್ರ ನಿರ್ಮಾಣದ ಅರ್ಧದಷ್ಟು ವೆಚ್ಚವನ್ನು  ನಿರ್ಮಾಪಕರಿಗೆ ತಂದುಕೊಟ್ಟಿತು. ೨೦೧೮ರ ಅತ್ಯಂತ ನಿರೀಕ್ಷೆಯ. ಚಿತ್ರವು, ಅತ್ಯಂತ ಹೆಚ್ಚು ವೆಚ್ಚದ ಭಾರತೀಯ ಚಿತ್ರ ಎಂದು ಹೇಳಲಾಯಿತು. ವರದಿಗಳ ಪ್ರಕಾರ ಚಿತ್ರ ನಿರ್ಮಾಪಕರಿಗೆ ಚಿತ್ರದ ಎಲ್ಲ ಮೂರು ಆವೃತ್ತಿಗಳ ಡಿಜಿಟಲ್ ಮತ್ತು ಸೆಟಲೈಟ್ ಹಕ್ಕುಗಳ ಮಾರಾಟಪೂರ್ವ ಆದಾಯವೇ ೩೭೦ ಕೋಟಿ ರೂಪಾಯಿಗಳಷ್ಟಾಗಿದ್ದು, ಇದರೊಂದಿಗೆ ನಿರ್ಮಾಣ ವೆಚ್ಚದ ಶೇಕಡಾ ಐವತ್ತರಷ್ಟು ಹಣ ಬಿಡುಗಡೆಗೂ ಮುನ್ನವೇ ಬಂದಂತಾಯಿತು. ತೆಲಂಗಾಣ/ ಆಂಧ್ರಪ್ರದೇಶ, ಕೇರಳ, ಕರ್ನಾಟಕ ಮತ್ತು ಉತ್ತರ ವಲಯದ ವಿತರಣಾ ಹಕ್ಕುಗಳನ್ನು ಈಗಾಗಲೇ ವೈಯಕ್ತಿಕ ವಿತರಕರಿಗೆ, ಎಲ್ ವೈಸಿಗಳಿಗೆ ಮಾರಾಟ ಮಾಡಲಾಗಿದ್ದು, ತಮಿಳುನಾಡು ಮತ್ತು ಸಾಗರದಾಚೆಗಿನ ವಿತರಣಾ ಹಕ್ಕುಗಳನ್ನು ಉಳಿಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿದವು. ನಿರ್ಮಾಪಕರಿಗೆ ಸೆಟಲೈಟ್ ಹಕ್ಕುಗಳಿಂದ (ಎಲ್ಲ ಆವೃತ್ತಿಗಳು) ೧೨೦ ಕೋಟಿ ರೂಪಾಯಿ, ಡಿಜಿಟಲ್ ಹಕ್ಕುಗಳಿಂದ (ಎಲ್ಲ ಆವೃತ್ತಿಗಳು) ೬೦ ಕೋಟಿ ರೂಪಾಯಿ, ಉತ್ತರ ವಲಯ ಹಕ್ಕುಗಳಿಂದ ೮೦ ಕೋಟಿ ರೂಪಾಯಿಗಳು (ಮುಂಗಡ ಆಧಾರ), ಆಂಧ್ರಪ್ರದೇಶ / ತೆಲಂಗಾಣ ಹಕ್ಕುಗಳಿಂದ ೭೦ ಕೋಟಿ, ಕರ್ನಾಟಕ ಹಕ್ಕುಗಳಿಂದ ೨೫ ಕೋಟಿ, ಕೇರಳ ಹಕ್ಕುಗಳಂದ ೧೫ ಕೋಟಿ - ಒಟ್ಟು ೩೭೦ ಕೋಟಿ ರೂಪಾಯಿ ಆದಾಯ ಬಂದಿತು.

2018: ಲಕ್ನೋ: ೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಭಾರತೀಯ ಜನತಾ ಪಕ್ಷವು (ಬಿಜೆಪಿ) ರಾಮಮಂದಿರ ವಿಷಯಕ್ಕೆ ಜೀವ ತುಂಬುತ್ತಿದ್ದಂತೆಯೇ, ಜ್ಯೋತಿರ್ ಮತ್ತು ಶಾರದಾ ದ್ವಾರಕಾ ಪೀಠದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಕೇಂದ್ರ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರ್ಕಾರಗಳು ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿವೆ ಎಂದು ಆಪಾದಿಸಿದರು. ವಾರಾಣಸಿಯಲ್ಲಿಪರಮ ಧರ್ಮ ಸಂಸದ್ ನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರುಸರ್ಕಾರಕ್ಕೆ ಧಾರ್ಮಿಕ ರಚನೆಗಳನ್ನು (ಕಟ್ಟಡಗಳನ್ನು) ರಚಿಸಲು ಜನಾದೇಶ ಇಲ್ಲ ಎಂದು ಹೇಳಿದರು. ‘ಅಯೋಧ್ಯೆಯಲ್ಲಿ ನಡೆಯುವ ಧರ್ಮಸಭೆ ಕೇವಲ ಕಣ್ಣೊರೆಸುವ ತಂತ್ರ. ಸರ್ಕಾರವು ದೇವಾಲಯ, ಚರ್ಚ್, ಮಸೀದಿ ನಿರ್ಮಾಣಕ್ಕೆ ಹೊಣೆಯಲ್ಲ. ಮಂದಿರ ವಿಚಾರವನ್ನು ಎತ್ತುತ್ತಿರುವುದು ನೈಜ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆ ಕಡೆಗೆ ತಿರುಗಿಸುವ ಯತ್ನವಷ್ಟೆ ಎಂದು ಅವರು ನುಡಿದರು. ನಾನು ಅಯೋಧ್ಯೆಗೆ ಭೇಟಿ ನೀಡಿದಾಗ ವಿವಾದಿತ ನಿವೇಶನದಲ್ಲಿ ಯಾವುದೇ ಮಸೀದಿ ಇರಲಿಲ್ಲ. ಆದರೆ ಅಲ್ಲಿ ಮಸೀದಿ ಇತ್ತು ಎಂಬುದಾಗಿ ಸಾಬೀತು ಪಡಿಸುವ ಯತ್ನವಾಗಿ ಬಿಜೆಪಿ, ಆರೆಸ್ಸೆಸ್ ಮತ್ತ ವಿಎಚ್ಪಿ ಅಲ್ಲಿ ಇದ್ದ ಕಟ್ಟಡವನ್ನು ನಾಶಪಡಿಸಿದವು ಎಂದು ಅವರು ಹೇಳಿದರು. ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಸಂಬಂಧಿಸಿದ ಇತರ ಧಾರ್ಮಿಕ ಸ್ಥಳಗಳನ್ನೂ ಹಾಳುಗೆಡವಿದ್ದಕ್ಕಾಗಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಕೇಸರಿ ಸಂಘಟನೆಗಳನ್ನು ತರಾಟೆಗೆ ತೆಗೆದುಕೊಂಡರು.ಅವರು ರಾಮಛಬೂತರ, ಹನುಮಾನ್ ದೇವಾಲಯ ಮತ್ತು ಇತರ ಹಿಂದೂ ರಚನೆಗಳನ್ನು ಹಾನಿಗೊಳಿಸಿದ್ದರು ಮತ್ತು ಈಗ ಸುಗ್ರೀವಾಜ್ಞೆ ತರುವ ಬಗ್ಗೆ ಮಾತನಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ೬೭ ಎಕರೆ ಭೂಮಿಯನ್ನು ಈಗಾಗಲೇ ಈಗಾಗಲೇ ಪಿವಿ ನರಸಿಂಹ ರಾವ್ ಸರ್ಕಾರ ಸ್ವಾಧೀನ ಪಡಿಸಿಕೊಂಡಿದೆ ಎಂದು ಸರಸ್ವತಿ ಹೇಳಿದರು. ಮಧ್ಯೆ ರಾಮಮಂದಿರ ನಿರ್ಮಾಣಕ್ಕೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಮತ್ತು ಶಿವಸೇನಾ ಪ್ರತ್ಯೇಕ ಕಾರ್ಯಕ್ರಮಗಳನ್ನು ಬೃಹತ್ ಪ್ರಮಾಣದಲ್ಲಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅಯೋದ್ಯೆ ವಸ್ತುಶಃ ಭದ್ರಕೋಟೆಯಾಗಿ ಪರಿವರ್ತನೆಗೊಂಡಿದೆ.

2018: ಲಂಡನ್: ಅಂತರ್ಜಾಲ ಬುಕ್ ಮೇಕರ್ ಬೆಟ್೩೬೫ ಗ್ರೂಪ್ ಲಿಮಿಟೆಡ್ ಬ್ರಿಟಿಷ್ ಸಂಸ್ಥಾಪಕಿ ಮತ್ತು ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿಣಿಯಾಗಿರುವ ಡೆನಿಸ್ ಕೋಟ್ಸ್  ಅವರು ಇಂಗ್ಲೆಂಡಿನ ರಾಣಿ ಕ್ವೀನ್ ಎಲಿಜಬೆತ್ ಅವರಿಂದ ೧೦ ಪಟ್ಟು ಶ್ರೀಮಂತೆಯಾಗಿದ್ದಾರೆ ಎಂದು ಬುಕ್ ಮೇಕರ್ ಇತ್ತೀಚೆಗಿನ ಅಂಕಿಅಂಶಗಳು ಬಹಿರಂಗ ಪಡಿಸಿದವು. ೫೧ರ ಹರೆಯದ ಕೋಟ್ಸ್ . ಬಿಲಿಯನ್ (೪೫೦ ಕೋಟಿ) ಡಾಲರ್ ಮೌಲ್ಯದ ಸಂಪತ್ತಿನ ಒಡತಿಯಾಗಿದ್ದಾರೆ. ಅವರ ಬಹುತೇಕ ಹಣ ಬೆಟ್೩೬೫ ನಲ್ಲೇ ಹೂಡಿಕೆಯಾಗಿದೆ ಎಂದು ಬ್ಲೂಮ್ ಬರ್ಗ್ ಕೋಟ್ಯಧೀಶರ ಸೂಚ್ಯಂಕ ತಿಳಿಸಿದೆ. ಬ್ಲೂಮ್ ಬರ್ಗ್ ಕೋಟ್ಯಧೀಶರ ಸೂಚ್ಯಂಕದಲ್ಲಿ ವಿಶ್ವದ ೫೦೦ ಶ್ರೀಮಂತರ ಹೆಸರುಗಳಿದ್ದು, ಡೆನಿಸ್ ಕೋಟ್ಸ್ ಇದೇ ಮೊದಲ ಬಾರಿಗೆ ಶುಕ್ರವಾರ ಸೂಚ್ಯಂಕಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ವರದಿ ತಿಳಿಸಿತು. ಸೂಚ್ಯಂಕಕ್ಕೆ ಸೇರ್ಪಡೆಯಾಗಿರುವ ಇಂಗ್ಲೆಂಡಿನ ೧೭ ಮಂದಿ ಕೋಟ್ಯಧೀಶರ ಪೈಕಿ ಡೆನಿಸ್ ಕೋಟ್ಸ್ ಏಕೈಕ ಮಹಿಳೆಯಾಗಿದ್ದಾರೆ. ಕೋಟ್ಯಧೀಶರ ಪಟ್ಟಿಯಲ್ಲಿ ವಜ್ರಾಭರಣ ವ್ಯಾಪಾರಿ ಲಾರೆನ್ಸ್ ಗ್ರಾಫ್, ವರ್ಜಿನ್ ಗ್ರೂಪ್ ಸ್ಥಾಪಕ ರಿಚರ್ಡ್ ಬ್ರಾನ್ಸನ್ ಮತ್ತು ಟೊಟ್ಟೆನ್ಹಾಮ್ ಹಾಟ್ಸಪುರ ಫುಟ್ಬಾಲ್ ಕ್ಲಬ್ ಮಾಲೀಕ ಜೋ ಲೆವಿಸ್ ಕೂಡಾ ಇದ್ದಾರೆ ಶತಮಾನದ ಆದಿಯಲ್ಲಿ ಆರಂಭವಾದ ಬೆಟ್೩೬೫ ಅಂತರ್ಜಾಲ ಕ್ರೀಡಾ ಬೆಟ್ಟಿಂಗ್ ವಹಿವಾಟಿನಲ್ಲಿ ತನ್ನ ಸಂಪತ್ತನ್ನು ವರ್ಧಿಸಿಕೊಂಡಿದೆ. ಮಾರ್ಚ್ ೨೫ರಂದು ಕೊನೆಗೊಂಡ ವರ್ಷದ ತನ್ನ ವಹಿವಾಟಿನ ಮಾಹಿತಿಯನ್ನು ಕಂಪೆನಿಯು ಬಿಡುಗಡೆ ಮಾಡಿದ್ದು, ಕಳೆದ ಒಂದು ವರ್ಷದಲ್ಲಿ ಅದರ ಆದಾಯ ಇಂಗ್ಲೆಂಡ್ ಮೂಲದ ಸ್ಟಾಫ್ಫೋರ್ಡ್ಶೈರ್ ದಶಕದ ಆದಾಯವನ್ನು ಮೀರಿಸಿತು. ಮಕ್ಕಳು ಬೆಟ್ಟಿಂಗ್ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆ ಬ್ರಿಟನ್ನಿನ ಬುಕ್ ಮೇಕರ್ಸ್ ಬಿಗಿ ಪರಿಶೀಲನೆ ನಡೆಸಿದ್ದರ ಹೊರತಾಗಿಯೂ ಬೆಟ್೩೬೫ ಅತ್ಯಧಿಕ ಲಾಭ ಗಳಿಸಿದೆಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಕೋಟ್ಸ್ ಅವರನ್ನು ಪಾತ್ರರನ್ನಾಗಿ ಮಾಡುವುದರ ಜೊತೆಗೆ ಬೆಟ್೩೬೫, ಕೋಟ್ಸ್ ಅವರನ್ನು ಅತ್ಯಂತ ಹೆಚ್ಚು ವೇತನ ಪಡೆಯುವ ಎಕ್ಸಿಕ್ಯೂಟಿವ್ ಆಗುವಂತೆಯೂ ಮಾಡಿದೆ. ಕೋಟ್ಸ್ ಕಳೆದ ವರ್ಷ ೨೨೦ ಮಿಲಿಯನ್ (೨೨೦೦ ಲಕ್ಷ) ಪೌಂಡ್ ವೇತನವನ್ನು ತಮ್ಮ ಜೇಬಿಗೆ ಇಳಿಸಿಕೊಂಡಿದ್ದಾರೆ ಎಂದು ಆಕೆಯ ವಕ್ತಾರರು ನವೆಂಬರ್ ೨೧ರ ತಮ್ಮ -ಮೇಲ್ ನಲ್ಲಿ ದೃಢ ಪಡಿಸಿದ್ದಾರೆ. ಇದು ಹಿಂದಿನ ೧೨ ತಿಂಗಳುಗಳಿಂತ ಶೇಕಡಾ ೧೦ರಷ್ಟು ಹೆಚ್ಚು. ಇದಲ್ಲದೆ ೪೦ ಮಿಲಿಯನ್ ಪೌಂಡ್ ಗಿಂತಲೂ ಹೆಚ್ಚು ಡಿವಿಡೆಂಡನ್ನೂ ಆಕೆ ಗಳಿಸಿದ್ದಾರೆ. ಬೆಟ್೩೬೫ ಕಂಪೆನಿಯು ೫೫೦ ಮಿಲಿಯನ್ ಪೌಂಡ್ ಗಳನ್ನು ಕಳೆದ ಒಂದು ದಶಕದಲ್ಲಿ ಲಾಭಾಂಶದ ರೂಪದಲ್ಲಿ ವಿತರಿಸಿದೆ.ಸ್ಟಾಫ್ಫೀಲ್ಡ್ ವಿಶ್ವ ವಿದ್ಯಾಲಯದಿಂದ ಇಕನೋಮೆಟ್ರಿಕ್ಸ್ ನಲ್ಲಿ ಪದವಿ ಪಡೆದ ಬಳಿಕ ಕೋಟ್ಸ್ ಅಕೌಂಟೆಂಟ್ ತರಬೇತಿ ಪಡೆದು ಕೆಲವು ಬೆಟ್ಟಿಂಗ್ ಶಾಪ್ ಗಳ ಲೆಕ್ಕಪತ್ರ ನೋಡಿಕೊಳ್ಳುತ್ತಿದ್ದರು. ಆಕೆಯ ತಂದೆ ಅಂಗಡಿಗಳ ಮಾಲೀಕತ್ವ ಹೊಂದಿದ್ದರು.
೨೨ನೇ ವಯಸ್ಸಿನಲ್ಲಿ ಕೋಟ್ಸ್ ವ್ಯವಹಾರದ ಆಡಳಿತ ನಿರ್ದೇಶಕಿಯಾದರು ಮತ್ತು ಆನ್ ಲೈನ್ ವಹಿವಾಟಿಗಿಂತ ಮುನ್ನ ಬೆಟ್ಟಿಂಗ್ ಶಾಪ್ ಗಳ ಸಂಖ್ಯೆಯನ್ನು ವಿಸ್ತರಿಸಿದರು. ಬೆಟ್೩೬೫ ಜೊತೆಗೆ ಕೋಟ್ಸ್ ಮತ್ತು ಅವರ ಕುಟುಂಬ ಸ್ಟೋಕ್ ಸಿಟಿ ಫುಟ್ಬಾಲ್ ಕ್ಲಬ್ ಮಾಲೀಕತ್ವವನ್ನೂ ಪಡೆದರು.೨೦೧೨ರಲ್ಲಿ ಸಮುದಾಯ ಮತ್ತು ವಹಿವಾಟು ಸೇವೆಗಳಿಗಾಗಿ ಬ್ರಿಟಿಷ್ ರಾಣಿಯಿಂದ ಕೋಟ್ಸ್ ಪುರಸ್ಕೃತರಾಗಿದ್ದರು.೯೨ರ ಹರೆಯದ ಬ್ರಿಟಿಷ್ ರಾಣಿ ೪೨೦ ಮಿಲಿಯನ್ (೪೨೦೦ ಲಕ್ಷ=೪೨ ಕೋಟಿ) ಡಾಲರ್ ಮೌಲ್ಯದ ಸಂಪತ್ತನ್ನು ತಮ್ಮ ನೇರ ಹಿಡುವಳಿಗಳಿಂದ ಹೊಂದಿದ್ದಾರೆ. ರಾಣಿ ಮತ್ತು ಅವರ ಕುಟುಂಬದ ನೇರ ಮಾಲೀಕತ್ವದ ಆಸ್ತಿಯಲ್ಲಿ ಸ್ಟಡ್ ಫಾರ್ಮ್ ಮತ್ತು ವಿಶ್ವದ ಅತ್ಯಂತ ಮೌಲ್ಯದ ಅಂಚೆಚೀಟಿಗಳ ಸಂಗ್ರಹವೂ ಸೇರಿದೆ.

2018: ಪುಣೆ: ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕ ಸಾಧಿಸಿ ಪುಣೆಯ ನಿವಾಸಿ ಒಬ್ಬರಿಗೆ ೩೩.೫ ಲಕ್ಷ ರೂಪಾಯಿ ಪಂಗನಾಮ ಹಾಕಿದ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಪುಣೆ ಪೊಲೀಸರು ಪ್ರಕರಣ ದಾಖಲಿಸಿದರು. ೩೭ರ ಹರೆಯದ ದೂರುದಾರರನ್ನು ವ್ಯಕ್ತಿಯೊಬ್ಬ ಇನ್‌ಸ್ಟಾಗ್ರಾಮ್ ಸಂದೇಶದ ಮೂಲಕ ಸಂಪರ್ಕಿಸಿ, ಆತನ ನೆರವಿನೊಂದಿಗೆ ಬಂಡವಾಳ ಹೂಡಿಕೆಯಲ್ಲಿ ಆಸಕ್ತಿ ಹೊಂದಿರುವುದಾಗಿ ನಂಬಿಕೆ ಬರುವಂತೆ ಮಾಡಿದ. ಆ ವ್ಯಕ್ತಿ ಬಳಿಕ ದೂರುದಾರರಿಗೆ ವಿಮಾನಯಾನದ ಟಿಕೆಟನ್ನು ವಾಟ್ಸಪ್ ಮೂಲಕ ಕಳುಹಿಸಿದ ಮತ್ತು ತಾನು ಸೆಪ್ಟೆಂಬರ್ ೧೦ರಂದು ಲಂಡನ್‌ನಿಂದ ನವದೆಹಲಿಗೆ ಬರುವುದಾಗಿ ದೂರುದಾರರಿಗೆ ತಿಳಿಸಿದ.  ಬಳಿಕ, ಮಹಿಳೆಯೊಬ್ಬಳು ದೂರುದಾರರಿಗೆ ದೂರವಾಣಿ ಕರೆ ಮಾಡಿ ತಾನು ಕಸ್ಟಮ್ ಅಧಿಕಾರಿ ಎಂಬುದಾಗಿ ಪರಿಚಯ ಮಾಡಿಕೊಂಡು, ದೂರುದಾರರಿಗೆ ಗೊತ್ತಿರುವ ಪ್ರಯಾಣಿಕ ಹಳದಿ ಪೇಪರ್ ವಲಸೆ ಪ್ರಕ್ರಿಯೆ ಪೂರ್ಣಗೊಳಿಸಲು ವಿಫಲನಾಗಿದ್ದಾನೆ ಎಂದು ತಿಳಿಸಿದಳು. ಅಲ್ಲದೆ, ಲಂಡನ್ನಿನಿಂದ ಬರುತ್ತಿರುವ ವ್ಯಕ್ತಿಯು ದುಬಾರಿ ವಸ್ತುಗಳು ಮತ್ತು ಕರೆನ್ಸಿಯನ್ನು ಹೊಂದಿದ್ದು, ಕಸ್ಟಮ್ಸ್ ಕಣ್ತಪ್ಪಿಸಿ ಬರುವಂತಿಲ್ಲ. ಆದ್ದರಿಂದ ವಿದೇಶೀ ಕರೆನ್ಸಿ ಠೇವಣಿ ಸಲುವಾಗಿ ದೂರುದಾರನ ಬ್ಯಾಂಕ್ ಖಾತೆ ಉನ್ನತೀಕರಣ, ಪ್ರಮಾಣಪತ್ರಕ್ಕೆ ಅನುಮೋದನೆ, ಮಾದಕವಸ್ತು ನಿರೋಧಿ ಮತ್ತು ಭಯೋತ್ಪಾದನೆ ಪರೀಕ್ಷೆ, ವ್ಯಕ್ತಿಗೆ ವಸತಿ ಇತ್ಯಾದಿ ಸೇರಿದಂತೆ ವಿವಿಧ ಕಾರಣಗಳಿಗಾಗಿ ಬೇರೆ ಬೇರೆ ೯ ಖಾತೆಗಳಿಗೆ ೩೩,೫೦,೯೭೫ ರೂಪಾಯಿಗಳನ್ನು ವರ್ಗಾವಣೆ ಮಾಡುವಂತೆ ಸೂಚಿಸಿದಳು.  ಇಷ್ಟೊಂದು ಮೊತ್ತದ ಹಣಪಾವತಿಯ ಬಳಿಕ ತಾನು ವಂಚನೆಗೆ ಒಳಗಾದುದನ್ನು ಆರ್ಥ ಮಾಡಿಕೊಂಡ ದೂರುದಾರರು ಸೈಬರ್ ಕ್ರೈಮ್ ಸೆಲ್‌ನ್ನು ಸಂಪರ್ಕಿಸಿದರು. ಪ್ರಾಥಮಿಕ ತನಿಖೆ ನಡೆಸಿದ ಸೈಬರ್ ಕ್ರೈಮ್ ಸೆಲ್ ಪ್ರಕರಣವನ್ನು ವಿಮಾಂಟಲ್ ಪೊಲೀಸ್ ಠಾಣೆಗೆ ವರ್ಗಾಯಿಸಿತು.  ಬಳಿಕ ಭಾರತೀಯ ದಂಡ ಸಂಹಿತೆಯ ೪೦೬, ೪೧೯, ೪೧೦ ಮತ್ತು ೩೪ ಸೆಕ್ಷನ್ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ೬೬(ಸಿ)(ಡಿ) ಸೆಕ್ಷನ್‌ಗಳ ಅಡಿಯಲ್ಲಿ ವ್ಯಕ್ತಿ ಮತ್ತು ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡರು.

ವಿಮಾಂಟಲ್ ಪೊಲೀಸ್ ಠಾಣೆಯ ಅಪರಾಧ ಶಾಖೆಯ ಪೊಲೀಸ್ ಇನ್‌ಸ್ಪೆಕ್ಟರ್ ಸಾಥೆ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಸುದ್ದಿ ಮೂಲಗಳು ಹೇಳಿದವು.

2008: ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ನಿಕ್ಕಿತಾಶಾ ಮರ್ವಾಹಾ ಅವರು 'ಮಿಸ್ ಇಂಡಿಯಾ ಯು ಎಸ್‌ಎ' ಪ್ರಶಸ್ತಿ ಗೆದ್ದರು.

ಕಳೆದ ಬಾರಿಯ ಸುಂದರಿ  ರಿಚಾ ಗಂಗೋಪಾಧ್ಯಾಯ ಅವರು ನಿಕ್ಕಿತಾಶಾಗೆ ಕಿರೀಟ ತೊಡಿಸಿದರು.

2014: ಮುಂಬೈ: ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಮುರಳಿ ದೇವ್ರಾ ಅವರು ಸೋಮವಾರ ನಸುಕಿನ 3.25ರ ವೇಳೆಯಲ್ಲಿ ನಿಧನರಾದರು. 77 ರ ಹರೆಯದ ದೇವ್ರಾ ಪತ್ನಿ, ಮಾಜಿ ಸಂಸದ ಮಿಲಿಂದ್ ದೇವ್ರಾ ಸೇರಿದಂತೆ ಇಬ್ಬರು ಪುತ್ರರನ್ನು ಅಗಲಿದರು. ದೀರ್ಘಕಾಲದಿಂದ ಅಸ್ವಸ್ಥರಾಗಿದ್ದ ದೇವ್ರಾ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಎರಡು ದಿನಗಳ ಹಿಂದಷ್ಟೇ ಅವರನ್ನು ಮನೆಗೆ ಕರೆತರಲಾಗಿತ್ತು. ಮುರಳಿ ಬಾಯಿ ಎಂಬುದಾಗಿಯೇ ಪರಿಚಿತರಾಗಿದ್ದ ದೇವ್ರಾ 1975ರಲ್ಲಿ ಮೊತ್ತ ಮೊದಲ ಬಾರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವುದರೊಂದಿಗೆ ರಾಜಕೀಯ ಕ್ಷೇತ್ರಕ್ಕೆ ಕಾಲಿರಿಸಿದ್ದರು. ಆ ಬಳಿಕದ ತಮ್ಮ ಸುದೀರ್ಘ ರಾಜಕೀಯ ಬದುಕಿನಲ್ಲಿ ಹಲವಾರು ಮಹತ್ವದ ಹುದ್ದೆಗಳನ್ನು ಅವರು ನಿಭಾಯಿಸಿದ್ದರು. ಆರ್ಥಿಕ ವಿಷಯದ ಪದವೀಧರರಾಗಿದ್ದ ದೇವ್ರಾ 1977-78ರಲ್ಲಿ ಮುಂಬೈಯ ಮೇಯರ್ ಆಗಿದ್ದರು. ಬಳಿಕ ನಾಲ್ಕು ಬಾರಿ ಮುಂಬೈ ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ಬಳಿಕ ದೇವ್ರಾ ಪುತ್ರ ಮಿಲಿಂದ್ ಈ ಕ್ಷೇತ್ರವನ್ನು ಪ್ರತಿನಿಧಿಸಿದರು. ಯುಪಿಎ-1 ಆಡಳಿತಾವಧಿಯಲ್ಲಿ ಪೆಟ್ರೋಲಿಯಂ ಮತ್ತು ಅನಿಲ ಖಾತೆ ಸಚಿವರಾಗಿದ್ದ ದೇವ್ರಾ 22 ವರ್ಷಗಳ ಕಾಲ ಮುಂಬೈ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2006ರಲ್ಲಿ 70ರ ಹರೆಯಕ್ಕೆ ಕಾಲಿರಿಸುವುದಕ್ಕೆ ಸ್ವಲ್ಪ ಮೊದಲು ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗಿದ್ದ ದೇವ್ರಾ ಮ್ಯಾನ್ಮಾರ್, ಅಲ್ಜೀರಿಯಾ ಮತ್ತು ಈಜಿಪ್ಟ್​ನಲ್ಲಿ ತೈಲರಾಜತಂತ್ರ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಸುಡಾನ್, ಚಡ್, ಇಥಿಯೋಪಿಯಾ ಮತ್ತು ಕೋಮ್ರೋಸ್ ಸಚಿವರ ಜೊತೆಗೆ ಅವರು ಮಾತುಕತೆ ನಡೆಸಿದ್ದರು. 2007ರ ನವೆಂಬರಿನಲ್ಲಿ ದೇವ್ರಾ ಅವರು ಮೊತ್ತ ಮೊದಲ ಭಾರತ-ಆಫ್ರಿಕಾ ಹೈಡ್ರೋಕಾರ್ಬನ್ ಸಮ್ಮೇಳನ ಮತ್ತು ವಸ್ತು ಪ್ರದರ್ಶನವನ್ನು ಸಂಘಟಿಸಿದ್ದರು. 2011ರ ಜುಲೈಯಲ್ಲಿ ಅವರು ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವರಾಗಿದ್ದರು. 2006ರಿಂದ 2011ರ ಜುಲೈವರೆಗೆ ಪೆಟ್ರೋಲಿಯಂ, ನೈಸರ್ಗಿಕ ತೈಲ ಹಾಗೂ ಕಾರ್ಪೋರೇಟ್ ವ್ಯವಹಾರಗಳ ಸಚಿವರಾಗಿದ್ದ ಮುರಳಿ ದೇವ್ರಾ ನಾಲ್ಕುಬಾರಿ ಲೋಕಸಭಾ ಸದಸ್ಯರಾಗಿದ್ದರು. ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 2002ರ ಏಪ್ರಿಲ್​ನಿಂದ ಈದಿನ ನಸುಕಿನಲ್ಲಿ ನಿಧನರಾಗುವವರೆಗೂ ಅವರು ಮೇಲ್ಮನೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿದ್ದರು.

2014: ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮುರಳಿ ದೇವ್ರಾ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತ ಪಡಿಸಿದರು. ದೇವ್ರಾ ಅವರ ಸನ್ನಡೆಯ ಸ್ವಭಾವ ಅವರನ್ನು ಪಕ್ಷಾತೀತರಾಗಿ ಜನಪ್ರಿಯರನ್ನಾಗಿ ಮಾಡಿತ್ತು ಎಂದು ಮೋದಿ ಕೊಂಡಾಡಿದರು.  'ನಿನ್ನೆಯಷ್ಟೇ ನಾನು ಶ್ರೀ ಮುರಳಿ ದೇವ್ರಾ ಅವರ ಕುಟುಂಬದ ಜೊತೆಗೆ ಮಾತನಾಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ. ಇಂದು ಅವರ ಸಾವಿನ ಸುದ್ದಿ ಕೇಳಬೇಕಾಗಿ ಬಂದದ್ದು ಅತ್ಯಂತ ದುರದೃಷ್ಟಕರ' ಎಂದು ಪ್ರಧಾನಿ ಟ್ವಿಟ್ಟರ್ ಸಂದೇಶದಲ್ಲಿ ತಿಳಿಸಿದರು. ಹಿರಿಯ ಕಾಂಗ್ರೆಸ್ ನಾಯಕ ಮುರಳಿ ದೇವ್ರಾ ಎಂಬುದಾಗಿ ಟ್ವಿಟ್ಟರ್​ನಲ್ಲಿ ಉಲ್ಲೇಖಿಸಿದ ಪ್ರಧಾನಿ 'ಶ್ರೀ ಮುರಳಿ ದೇವ್ರಾ ಅವರ ನಿಧನದ ಸಂದರ್ಭದಲ್ಲಿ ದೇವ್ರಾ ಕುಟುಂಬಕ್ಕೆ ನನ್ನ ಅತೀವ ಶೋಕ ವ್ಯಕ್ತ ಪಡಿಸುತ್ತಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಕೋರಿದರು. 'ಸಮಾಜಸೇವೆಗೆ ತಮ್ಮನ್ನು ಮುಡಿಪಾಗಿಟ್ಟ ನಾಯಕ, ಮುರಳಿ ದೇವ್ರಾ ಅವರ ಸನ್ನಡೆಯ ಸ್ವಭಾವ ಅವರನ್ನು ಪಕ್ಷಾತೀತವಾಗಿ ಜನಪ್ರಿಯರನ್ನಾಗಿ ಮಾಡಿತ್ತು. ಅವರ ಸಾವಿನ ಸುದ್ದಿ ಬೇಸರ ಉಂಟು ಮಾಡಿದೆ' ಎಂದು ಮೋದಿ ಸರಣಿ ಟ್ವೀಟ್​ಗಳಲ್ಲಿ ಬರೆದರು.

2014: ನವದೆಹಲಿ: ಮಾಜಿ ಕೇಂದ್ರ ಸಚಿವ ಮುರಳಿ ದೇವ್ರಾ ಸೇರಿದಂತೆ ಮೂವರು ಹಾಲಿ ಸಂಸತ್ ಸದಸ್ಯರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಸಂಸತ್ತಿನ ಉಭಯ ಸದನಗಳ ಕಲಾಪಗಳನ್ನು ಮುಂದೂಡಲಾಯಿತು. ರಾಜ್ಯಸಭೆಯಲ್ಲಿ ಸದನ ಸಮಾವೇಶಗೊಳ್ಳುತ್ತಿದ್ದಂತೆಯೇ ಸಭಾಪತಿ ಹಮೀದ್ ಅನ್ಸಾರಿ ಅವರು ಮುಂಬೈಯಲ್ಲಿ ತಮ್ಮ 77 ನೇ ವಯಸ್ಸಿನಲ್ಲಿ ದೇವ್ರಾ ಅವರು ನಿಧನರಾದ ವಿಚಾರವನ್ನು ಪ್ರಸ್ತಾಪಿಸಿದರು. ಲೋಕಸಭೆಯಲ್ಲಿ ಹಾಲಿ ಸದಸ್ಯರಾದ ಹೇಮೇಂದ್ರ ಚಂದ್ರ ಸಿಂಗ್ (ಬಿಜೆಡಿ) ಮತ್ತು ಕಪಿಲ್ ಕೃಷ್ಣ ಥಾಕೂರ್ (ತೃಣಮೂಲ ಕಾಂಗ್ರೆಸ್) ಅವರ ನಿಧನಕ್ಕೆ ಸದಸ್ಯರು ಶೋಕ ವ್ಯಕ್ತ ಪಡಿಸಿದರು. ಹೇಮೇಂದ್ರ ಚಂದ್ರ ಸಿಂಗ್ ಅವರ ಪತ್ನಿ ಪ್ರತ್ಯೂಷಾ ರಾಜೇಶ್ವರಿ ಸಿಂಗ್ (ಬಿಜೆಡಿ) ಅವರು ಕಂಧಮಲ್​ನಲ್ಲಿ ನಡೆದ ಲೋಕಸಭಾ ಉಪಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಲೋಕಸಭೆಯು ಮಾಜಿ ಸದಸ್ಯರಾದ ಅಮಿತವ ನಂದಿ, ಎಂ.ಎಸ್. ಸಂಜೀವಿ ರಾವ್, ಅವೈದ್ಯನಾಥ್, ಸೈಫುದ್ದೀನ್ ಚೌಧರಿ ಮತ್ತು ಸಂಜಯ್ ಸಿಂಗ್ ಅವರ ನಿಧನಕ್ಕೂ ಸಂತಾಪ ವ್ಯಕ್ತ ಪಡಿಸಿತು. ಇತ್ತೀಚಿನ ಉಪ ಚುನಾವಣೆಗಳಲ್ಲಿ ಜಯಗಳಿಸಿದ ಐವರ ಸದಸ್ಯರ ಪೈಕಿ ಮೂವರು ಈದಿನ ಸದನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ತೆರವುಗೊಳಿಸಿದ್ದ ವಡೋದರಾ ಕ್ಷೇತ್ರವನ್ನು ಗೆದ್ದ ರಂಜನಾಬೆನ್ ಭಟ್ (ಬಿಜೆಪಿ), ಮಹಾರಾಷ್ಟ್ರದ ಬೀಡ್ ಕ್ಷೇತ್ರದಲ್ಲಿ ಗೆದ್ದ ಪ್ರೀತಮ್​ಗೋಪಿನಾಥ ಮುಂಡೆ (ಬಿಜೆಪಿ) (ತಂದೆ ಗೋಪಿನಾಥ ಮುಂಡೆ ಸಾವಿನಿಂದ ತೆರವಾಗಿದ್ದ ಕ್ಷೇತ್ರ), ಮುಲಯಂ ಸಿಂಗ್ ಯಾದವ್ ತೆರವುಗೊಳಿಸಿದ್ದ ಮೈನಪುರಿ ಕ್ಷೇತ್ರದಲ್ಲಿ ಗೆದ್ದ ತೇಜ್ ಪ್ರತಾಪ್ ಯಾದವ್ (ಎಸ್​ಪಿ) ಈದಿನ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಮೋದಿ ಅವರು ನವೆಂಬರ್ 9ರಂದು ಸಂಪುಟಕ್ಕೆ ಸೇರ್ಪಡೆಯಾದ ನೂತನ ಸಚಿವರನ್ನು ಸದನಕ್ಕೆ ಪರಿಚಯಿಸಿದರು. ರಾಜ್ಯಸಭೆಯಲ್ಲಿ ಸಭಾಪತಿ ಹಮೀದ್ ಅನ್ಸಾರಿ ಅವರು 'ಮುರಳಿ ದೇವ್ರಾ ನಿಧನದಿಂದ ರಾಷ್ಟ್ರವು ವಿಶಿಷ್ಟ ಸಂಸತ್ ಪಟು, ದಕ್ಷ ಆಡಳಿತಗಾರ ಹಾಗೂ ಸಮರ್ಪಿತ ಮನೋಭಾವದ ಸಾಮಾಜಿಕ ಕಾರ್ಯಕರ್ತನನ್ನು ಕಳೆದುಕೊಂಡಿದೆ' ಎಂದು ಕೊಂಡಾಡಿದರು.

2014: ಪಟ್ನಾ: ಹಿರಿಯ ಬಿಜೆಪಿ ರಾಜ್ಯ ನಾಯಕ ಶ್ರೀಕಾಂತ ಭಾರ್ತಿ ಅವರನ್ನು ಈದಿನ ನಸುಕಿನ ವೇಳೆಯಲ್ಲಿ ಬಿಹಾರಿನ ಸಿವಾನ್ ಜಿಲ್ಲೆಯಲ್ಲಿ ಗುಂಡೇಟಿನಿಂದ ಕೊಲೆ ಗೈಯಲಾಯಿತು. ಈ ಘಟನೆಗೆ ಅವರ ಬೆಂಬಲಿಗರಿಂದ ಹಿಂಸಾತ್ಮಕ ಪ್ರತಿಭಟನೆ ವ್ಯಕ್ತವಾಯಿತು. ಭಾರ್ತಿ ಅವರನ್ನು ಅಪರಿಚಿತ ವ್ಯಕ್ತಿಗಳು ಈದಿನ ನಸುಕಿನ ವೇಳೆಯಲ್ಲಿ ಮದುವೆ ಸಮಾರಂಭ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಗುಂಡು ಹಾರಿಸಿ ಕೊಲೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದರು. ಭಾರ್ತಿ ಹತ್ಯೆಯ ಸುದ್ದಿ ಹರಡುತ್ತಿದ್ದಂತೆಯೇ ಅವರ ಬೆಂಬಲಿಗರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ರಸ್ತೆಗಳನ್ನು ಅಡ್ಡಗಟ್ಟಿ, ಟೈರುಗಳನ್ನು ಸುಟ್ಟು ಹಾಕಿ, ರಾಜ್ಯ ಸರ್ಕಾರದ ವಿರುದ್ಧ ಘೊಷಣೆಗಳನ್ನು ಕೂಗಿದರು. ಭಾರ್ತಿ ಅವರು ಸಿವಾನ್​ನ ಬಿಜೆಪಿ ಸಂಸತ್ ಸದಸ್ಯ ಓಂ ಪ್ರಕಾಶ್ ಯಾದವ್ ಅವರ ನಿಕಟವರ್ತಿಯಾಗಿದ್ದು, 2010ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. 'ಇದು ಪ್ರತಿಸ್ಪರ್ಧಿಗಳು ಹೆಣೆಗೆ ವ್ಯವಸ್ಥಿತ ರಾಜಕೀಯ ಸಂಚಿನ ಕೊಲೆ' ಎಂದು ಭಾರ್ತಿ ಕುಟುಂಬ ಸದಸ್ಯರು ಹಾಗೂ ಬೆಂಬಲಿಗರು ಆಪಾದಿಸಿದರು.

2014: ರಾಯಪುರಛತ್ತೀಸ್ಗಢದ ನಕ್ಸಲೀಯ ಪೀಡಿತ ಸುಕ್ಮಾ ಜಿಲ್ಲೆಯ ಎರಡು ಪ್ರತ್ಯೇಕ ಘಟನೆಗಳಲ್ಲಿ ಪೊಲೀಸರು ಇಬ್ಬರು ಮಾವೋವಾದಿ ನಕ್ಸಲೀಯರನ್ನು ಬಂಧಿಸಿದ್ದುಭದ್ರತಾ ಸಿಬ್ಬಂದಿಯನ್ನು ಗುರಿಯಾಗಿ ಇಟ್ಟಿದ್ದ ಸುಧಾರಿತ ಶಕ್ತಿಶಾಲಿ ಸ್ಪೋಟಕ ಸಾಧನಗಳನ್ನು (ಐಇಡಿವಶ ಪಡಿಸಿಕೊಂಡರು.  ಭದ್ರತಾ ಪಡೆಗಳ ಜಂಟಿ ದಳವೊಂದು ಚಿಂಟಗುಫಾ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂಟಗುಫಾ-ದೋರ್ನಪಾಲ್ ಮಾರ್ಗದಲ್ಲಿ ಪ್ರತ್ಯೇಕವಾಗಿ ಅವಿತಿಡಲಾಗಿದ್ದ 20 ಕಿ.ಗ್ರಾಂಮತ್ತು 2.5 ಕಿ.ಗ್ರಾಂತೂಕದ ಸುಧಾರಿತ ಶಕ್ತಿಶಾಲಿ ಸ್ಪೋಟಕ ಸಾಧನಗಳನ್ನು ಪತ್ತೆ ಹಚ್ಚಿದೆ ಎಂದು ಬಸ್ತಾರ್ ವಲಯದ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಎಸ್ಆರ್ಪಿ ಕಲ್ಲೂರಿ ತಿಳಿಸಿದರುಸಿಆರ್ಪಿಎಫ್ ಜಂಟಿ ತುಕಡಿಯೊಂದು ಕೊಬ್ರಾ ಬೆಟಾಲಿಯನ್ ಜೊತೆಗೆ ಜಿಲ್ಲಾ ಪೊಲೀಸ್ ಪಡೆಯೊಂದಿಗೆ ಪ್ರದೇಶದಲ್ಲಿ ಕೆಲವು ದಿನಗಳಿಂದ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಿರತವಾಗಿತ್ತುತಂಡವು ದೋರ್ನಪಾಲ್ಜಗರಗುಂಡ ರಸ್ತೆಯಲ್ಲಿ ಚಿಂಟಗುಫಾದಿಂದ 1 ಕಿ.ಮೀದೂರಕ್ಕೆ ಈದಿನ ಬೆಳಗ್ಗೆ ತಲುಪಿದಾಗ 20 ಕಿ.ಗ್ರಾಂತೂಕದ ಸುಧಾರಿತ ಶಕ್ತಿಶಾಲಿ ಸ್ಪೋಟಕ ಸಾಧನವನ್ನು ಕಂಟೇನರ್ ಒಂದರಲ್ಲಿ ರಸ್ತೆಯ ಕೆಳಗೆ ಅವಿತಿಟ್ಟಿದ್ದುದು ಪತ್ತೆಯಾಯಿತುನಂತರ ಸಮೀಪದಲ್ಲೇ ಇನ್ನೊಂದು ಕಡೆ 2.5 ಕಿ.ಗ್ರಾಂತೂಕದ ಇನ್ನೊಂದು ಸ್ಪೋಟಕ ಸಾಧನಗಳನ್ನು ಅವಿತಿಟ್ಟಿದ್ದುದೂ ಪತ್ತೆಯಾಯಿತು ಎಂದು ಐಜಿ ನುಡಿದರುಬಾಂಬ್ ನಿಷ್ಕ್ರಿಯ ದಳವು ಸ್ಪೋಟಕ ಸಾಧನಗಳನ್ನು ತತ್ ಕ್ಷಣವೇ ನಿಷ್ಕ್ರಿಯಗೊಳಿಸಿತು ಎಂದು ಅವರು ಹೇಳಿದರುಜಿಲ್ಲೆಯಲ್ಲೇ ಇನ್ನೊಂದು ಘಟನೆಯಲ್ಲಿ ಇಬ್ಬರು ನಕ್ಸಲೀಯರನ್ನು ಗಡಿರಾಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಯಿತುಬಂಧಿತ ಉಗ್ರಗಾಮಿಗಳನ್ನು ಮಿಡಿಯಾಮಿ ಜೋಗ ಮತ್ತು ಜೈಸಿಂಗ್ ಎಂಬುದಾಗಿ ಗುರುತಿಸಲಾಗಿದ್ದುಇವರಿಬ್ಬರೂ ಹಲವಾರು ಅಪರಾಧ ಪ್ರಕರಣಗಳಲ್ಲಿ ಷಾಮೀಲಾಗಿದ್ದರು ಎಂದು ಐಜಿ ತಿಳಿಸಿದರು.

2014:  ಢಾಕಾಆಡಳಿತಾರೂಢ ಅವಾಮೀ ಲೀಗ್ ಉಚ್ಚಾಟಿತ ನಾಯಕ ಮೊಬಾರಕ್ ಹೊಸೈನ್ ಅವರಿಗೆ 1971ರಲ್ಲಿ ನಡೆದ ಪಾಕಿಸ್ತಾನ ವಿರೋಧಿ ಸ್ವಾತಂತ್ರ್ಯಸಮರ ಕಾಲದಲ್ಲಿ ಮಾನವತೆ ವಿರುದ್ಧ ಎಸಗಿದ ಅಪರಾಧಗಳಿಗಾಗಿ ಬಾಂಗ್ಲಾದೇಶದ ವಿಶೇಷ ಟ್ರಿಬ್ಯೂನಲ್ ಮರಣದಂಡನೆ ವಿಧಿಸಿತು. 'ಆತನನ್ನು ಸಾಯುವವರೆಗೆ ನೇಣಿಗೆ ಏರಿಸಬೇಕುಎಂದು ನ್ಯಾಯಮೂರ್ತಿ ಎಂಎನಾಯೆತುರ್ ರಹೀಮ್ನೇತೃತ್ವದ ಅಂತಾರಾಷ್ಟ್ರೀಯ ಅಪರಾಧಗಳ ಟ್ರಿಬ್ಯೂನಲ್ ತ್ರಿಸದಸ್ಯ ಪೀಠವು ತೀರ್ಪು ನೀಡಿತುಮಾಜಿ ಸೇನಾ ಕಮಾಂಡರ್ ವಿರುದ್ಧ ಹೊರಿಸಲಾಗಿದ್ದ ಐದು ಆರೋಪಗಳ ಪೈಕಿ ಎರಡಲ್ಲಿ ತಪ್ಪಿತಸ್ಥರಾಗಿರುವುದು ಸಾಬೀತಾಗಿದೆ ಎಂದು ಟ್ರಿಬ್ಯೂನಲ್ ಹೇಳಿತು. 1971 ಆಗಸ್ಟ್ 22ರಂದು ತನ್ನ ತಾಯ್ನಾಡಾದ ಕೇಂದ್ರ ಬ್ರಾಹ್ಮಣಬಾರಿಯಾ ಜಿಲ್ಲೆಯಲ್ಲಿ 33 ಮಂದಿ ನಾಗರಿಕರನ್ನು ಕೊಂದುದಕ್ಕಾಗಿ 64 ಹರೆಯದ ಹೊಸೈನ್ಗೆ  ಮರಣದಂಡನೆ ವಿಧಿಸಲಾಯಿತು. ಕೊಲೆಅಪಹರಣಅಕ್ರಮ ಬಂಧನಚಿತ್ರಹಿಂಸೆ ಮತ್ತು ಅವರ ಮನೆಗಳಿಂದ ಬೆಲೆಬಾಳುವ ವಸ್ತುಗಳ ಲೂಟಿ ಮಾಡಿದ ಆರೋಪಕ್ಕೆ ಸಂಬಂಧಿಸಿದ ಇನ್ನೊಂದು ಪ್ರಕರಣದಲ್ಲಿ ಹೊಸೈನ್ಗೆ ಟ್ರಿಬ್ಯೂನಲ್ ಜೀವಾವಧಿ ಶಿಕ್ಷೆ ವಿಧಿಸಿತು.

2014: ಕಾಬೂಲ್ಆತ್ಮಾಹುತಿ ಬಾಂಬ್ ದಾಳಿಗೆ 57 ಜನರು ಬಲಿಯಾಗಿ 60ಕ್ಕೂ ಹೆಚ್ಚು ಜನರು ಗಾಯಗೊಂಡರು. ಪೂರ್ವ ಅಫ್ಘಾನಿಸ್ತಾನದ ಪಾಟ್ಕಿಕ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಗುರಿಯಾಗಿಸಿಕೊಂಡು ಆತ್ಮಹತ್ಯಾ ಬಾಂಬ್ ದಾಳಿ ನಡೆಸಲಾಯಿತು. ಪಾಟ್ಕಿಕ ಪ್ರಾಂತ್ಯ ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇದ್ದು ಪ್ರಕ್ಷುಬ್ಧ ಪ್ರದೇಶ ಎಂದು ಗುರುತಿಸಲ್ಪಟ್ಟಿದೆಇಲ್ಲಿನ ಸ್ಥಳೀಯ ತಂಡಗಳ ನಡುವೆ ನಡೆಯುತ್ತಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ವೀಕ್ಷಿಸುತ್ತಿದ್ದ ಜನರ ಗುಂಪಿನ ಮಧ್ಯೆ ಆತ್ಮಾಹುತಿ ಬಾಂಬರ್ ಬಾಂಬ್ ಸ್ಪೋಟಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

2014: ಚೆನ್ನೈಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಪರಮಾಣು ಶಕ್ತಿ ಉಪಯೋಗಕ್ಕೆ ಹೆಚ್ಚಿನ ಒಲವಿದ್ದುನೂತನ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಉತ್ಸುಕವಾಗಿವೆ ಎಂದು ಜಾಗತಿಕ ವಿಶ್ವಾಸಾರ್ಹತೆ ವಿಶ್ಲೇಷಣಾ ಸಂಸ್ಥೆಯಾದ ಮೂಡಿಸ್ ಇನ್ವೆಸ್ಟರ್ಸ್ ಸರ್ವಿಸ್ (ಎಂಐಎಸ್ತಿಳಿಸಿತು. ಅಮೆರಿಕದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಕಡಿಮೆ ಇರುವುದು ಮತ್ತು ಯೂರೋಪ್ ಒಕ್ಕೂಟ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆಗೆ ಒತ್ತು ಕೊಡುತ್ತಿರುವುದರಿಂದ ಅಲ್ಲಿ ಅಣು ವಿದ್ಯುತ್ ಉತ್ಪಾದನೆ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ ಎಂದು ಎಂಐಎಸ್ ಹೇಳಿತು. ಜೊತೆಗೆ ಜಪಾನ್ನಲ್ಲಿ 2011ರಲ್ಲಿ ಫುಕುಷಿಮಾ ಅಣು ವಿದ್ಯುತ್ ಸ್ಥಾವರ ದುರಂತ ಸಂಭವಿಸಿದ್ದರೂ ಸಹ ವಿವಿಧ ದೇಶಗಳಲ್ಲಿ ಅಣು ವಿದ್ಯುತ್ ಉತ್ಪಾದನೆಗೆ ಸಹಕಾರ ಒದಗಿಸುತ್ತಿದೆಅಣು ವಿದ್ಯುತ್ ಉತ್ಪಾದನೆಗೆ ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಒತ್ತು ಸಿಗುತ್ತಿದೆಜತೆಗೆ ಏಷ್ಯಾದ ಇತರ ದೇಶಗಳಲ್ಲೂ ಸಹ ಅಣು ವಿದ್ಯುತ್ ಉತ್ಪಾದನೆಗೆ ಒಲವು ವ್ಯಕ್ತವಾಗುತ್ತಿದೆಒಟ್ಟಾರೆಯಾಗಿ ನೋಡುವುದಾದರೆ ಜಾಗತಿಕ ಮಟ್ಟದಲ್ಲಿ ಏಷ್ಯಾದಲ್ಲಿ ಅಣು ವಿದ್ಯುತ್ ಕಡೆಗೆ ಒಲವು ಹೆಚ್ಚಿದೆಬೇರೆ ಪ್ರದೇಶದಲ್ಲಿ ಇಲ್ಲ ಎಂದು ಎಂಐಎಸ್ ಹೇಳಿತು.

2014: ಬಾಗ್ದಾದ್ಇರಾಕಿನ ರಕ್ಷಣಾ ಪಡೆಗಳು ಐಎಸ್ ಉಗ್ರ ವಶದಲ್ಲಿದ್ದ ಪೂರ್ವ ಇರಾಕಿನ ದಿಯಾಲ ಪ್ರಾಂತ್ಯದ 2 ನಗರಗಳನ್ನು ವಶ ಪಡಿಸಿಕೊಂಡವು. ಇರಾಕ್ ಸೇನೆಪೊಲೀಸ್ಶಿಯಾ ಸೈನಿಕರು ಮತ್ತು ಕುರ್ದಿಶ್ ರಕ್ಷಣಾ ಪಡೆಗಳು ಒಟ್ಟಿಗೆ ಕಾರ್ಯಾಚರಣೆ ನಡೆಸಿ ಬಾಗ್ದಾದ್ನಿಂದ ಪೂರ್ವಕ್ಕೆ 120 ಕಿ.ಮೀದೂರದಲ್ಲಿರುವ ಸದಿಯಾ ಮತ್ತು ಜಲವಾಲ ಎಂಬ 2 ನಗರಗಳನ್ನು ವಶಪಡಿಸಿಕೊಂಡವು ಎಂದು ಸೇನಾ ಮೂಲಗಳು ತಿಳಿಸಿದವು. ಹಿಂದಿನ ದಿನ ನಗರಗಳನ್ನು ವಶಪಡಿಸಿಕೊಳ್ಳುವ ಕಾರ್ಯಾಚರಣೆ ಆರಂಭಿಸಿದ್ದ ಪಡೆಗಳು  ಈದಿನ ಐಎಸ್ ಉಗ್ರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದವು. ಉಗ್ರರು ನಗರದ ರಸ್ತೆ ಬದಿಗಳಲ್ಲಿಕಟ್ಟಡಗಳಲ್ಲಿ ಬಾಂಬ್ಗಳನ್ನು ಅಡಗಿಸಿಟ್ಟಿದ್ದುರಕ್ಷಣಾ ಪಡೆಗಳು ಅವುಗಳನ್ನು ನಾಶಪಡಿಸಿದ ನಂತರ ನಗರವಾಸಿಗಳು ವಾಪಸ್ ಬರಬಹುದು ಎಂದು ಸೇನಾ ಮೂಲಗಳು ತಿಳಿಸಿದವು.
  
2008: ಎಲ್‌ಟಿಟಿಇಗಳ ಭದ್ರಕೋಟೆ ಕಿಲಿನೋಚ್ಚಿ ಪ್ರದೇಶದಲ್ಲಿ ನಡೆದ ಶ್ರೀಲಂಕಾ ಸೇನೆ ಹಾಗೂ ಎಲ್‌ಟಿಟಿಇ ನಡುವಿನ ಕಾಳಗದಲ್ಲಿ ಸುಮಾರು 120 ಎಲ್‌ಟಿಟಿಇ ಬಂಡುಕೋರರು ಹಾಗೂ 27 ಸೈನಿಕರು ಸಾವನ್ನಪ್ಪಿದರು. ಬಂಡುಕೋರರ ರಾಜಧಾನಿ ಎಂದೇ ಪರಿಗಣಿಸಲಾದ ಕಿಲಿನೋಚ್ಚಿ ಪ್ರದೇಶವನ್ನು ಕೈವಶ ಮಾಡಿಕೊಳ್ಳಲು ಶ್ರೀಲಂಕಾ ಸೇನೆ ತೀವ್ರ ಸೆಣಸಾಟ ನಡೆಸಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿದವು.

2008: ಪ್ರಪಂಚದಲ್ಲೇ ಅತ್ಯಂತ ಅನ್ವೇಷಣಾ ಪ್ರವೃತ್ತಿ ಹೊಂದಿದ ಭಯೋತ್ಪಾದನಾ ಸಂಘಟನೆ ಎಂಬ ಹೆಸರು ಪಡೆದ ಎಲ್‌ಟಿಟಿಇ ತನ್ನ ಗೆರಿಲ್ಲಾ ಯುದ್ಧ ತಂತ್ರಜ್ಞಾನದಲ್ಲಿ ಮತ್ತೊಂದು ಹೊಸ ಹೆಜ್ಜೆ ಇರಿಸಿತು. ಅತ್ಯಂತ ಆಧುನಿಕ ತಂತ್ರಜ್ಞಾನಗಳಿಂದ ಒಡಗೂಡಿದ ಅತ್ಯುನ್ನತ ಮಟ್ಟದ ಆತ್ಮಹತ್ಯಾ ಮೇಲು ಹೊದಿಕೆಗಳನ್ನು  (ಜಾಕೆಟ್) ಎಲ್‌ಟಿಟಿಇ ಕಂಡು ಹಿಡಿದಿದೆ ಎಂದು ಶ್ರೀಲಂಕಾ ಸರ್ಕಾರ ಹೇಳಿತು. ಈ ಆತ್ಮಹತ್ಯಾ ಮೇಲು ಹೊದಿಕೆಗಳನ್ನು ಎಲ್‌ಟಿಟಿಇ ಮಧ್ಯಪ್ರಾಚ್ಯದ ಆತ್ಮಹತ್ಯಾ ದಳಗಳಿಗೆ ಪೂರೈಕೆ ಮಾಡುತ್ತಿದೆ ಎಂಬ ಅಂಶವನ್ನೂ ಸರ್ಕಾರ ಬಯಲು ಮಾಡಿತು. ಈ ಮೇಲು ಹೊದಿಕೆಗಳು ಪಾಸ್ಲ್ಟಿಕ್ಕಿನ ಪದಾರ್ಥಗಳಿಂದ ಕೂಡಿದ ಸ್ಫೋಟಕಗಳನ್ನು ಹೊಂದಿರುತ್ತವೆ. ಈಗ ಎಲ್‌ಟಿಟಿಇ ಇವುಗಳನ್ನು ಬಹುಶಃ ಹಣಕ್ಕಾಗಿ ಮಧ್ಯಪ್ರಾಚ್ಯದ ಆತ್ಮಹತ್ಯಾ ದಳಗಳಿಗೆ ಮಾರಾಟ ಮಾಡುತ್ತಿದೆ ಎಂದು ಶ್ರೀಲಂಕಾ ರಕ್ಷಣಾ ಪಡೆಯ ವೆಬ್‌ಸೈಟಿನ ಲೇಖನವೊಂದು ವಿವರಿಸಿತು.

2008: ಕಾಡುಗಳ್ಳತನಕ್ಕೆ ಬಳಸಿದ ವಾಹನಗಳನ್ನು ಮತ್ತು ಇತರ ಸಲಕರಣೆಗಳನ್ನು ವಶಕ್ಕೆ ತೆಗೆದುಕೊಳ್ಳುವ ಮತ್ತು ಅವುಗಳನ್ನು ಹರಾಜು ಹಾಕುವ ಹಕ್ಕು ಸರ್ಕಾರಕ್ಕೆ ಇದೆ ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿತು. ಅರಣ್ಯ ಎಂಬುದು ಒಂದು ರಾಷ್ಟ್ರೀಯ ಸಂಪತ್ತು. ಅರಣ್ಯ ನಾಶದಿಂದ ಪರಿಸರ ಅಸಮತೋಲನ ತಲೆದೋರುತ್ತದೆ. ಹೀಗಾಗಿ ಅರಣ್ಯ  ಸಂರಕ್ಷಿಸುವುದಕ್ಕೆ ಮತ್ತು ಅರಣ್ಯಗಳ್ಳರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಸರ್ಕಾರಕ್ಕೆ ಹಕ್ಕಿದೆ ಎಂದು ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಮತ್ತು ಮುಕುಂದಕಂ ಶರ್ಮಾ ಅವರನ್ನು  ಒಳಗೊಂಡ ಪೀಠ ಹೇಳಿತು. ಮಹಾರಾಷ್ಟ್ರದಲ್ಲಿ 1999ರಲ್ಲಿ ಅಕ್ರಮ ಮರ ಸಾಗಾಣಿಕೆ ವೇಳೆ ಸಿಕ್ಕಿಬಿದ್ದ. ಟ್ರಕ್ ವಿಷಯದಲ್ಲಿ  ಮಹಮ್ಮದ್ ಅಶೀಖ್ ಎಂಬವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಪೀಠ ಈ ತೀರ್ಪು ನೀಡಿತು.

2008: ಮಾಂಟೆಕಾರ್ಲೊ: ಜಮೈಕಾದ ಸ್ಪ್ರಿಂಟರ್ ಉಸೇನ್ ಬೋಲ್ಟ್ ಮತ್ತು ರಷ್ಯಾದ ಮಹಿಳಾ ಪೋಲ್‌ವಾಲ್ಟ್ ಸ್ಪರ್ಧಿ ಎಲೆನಾ ಇಸಿನ್ಬಯೇವಾ ಅವರು ಅಂತರರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ (ಐಎಎಎಫ್) 'ವರ್ಷದ ಶ್ರೇಷ್ಠ ಅಥ್ಲೀಟ್' ಗೌರವ ತಮ್ಮದಾಗಿಸಿಕೊಂಡರು. ಬೋಲ್ಟ್ ಮತ್ತು ಇಸಿನ್ಬಯೇವಾ ಅವರು ತಲಾ ಒಂದು ಲಕ್ಷ ಡಾಲರ್ ನಗದು ಬಹುಮಾನ ಪಡೆದರು. ಈದಿನ ಮಾಂಟೆಕಾರ್ಲೊದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಇಬ್ಬರಿಗೂ ಪ್ರಶಸ್ತಿ ವಿತರಿಸಲಾಯಿತು. ಪ್ರಸಕ್ತ ವರ್ಷ ಟ್ರ್ಯಾಕಿನಲ್ಲಿ ಮಿಂಚಿನ ಸಂಚಲನ ಮೂಡಿಸಿದ 22ರ ಹರೆಯದ ಬೋಲ್ಟ್ ಅವರು ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ ಮೂರು ಚಿನ್ನ ಗೆದ್ದುಕೊಂಡಿದ್ದರು. ಅವು ಮೂರನ್ನು ಕೂಡಾ ವಿಶ್ವದಾಖಲೆಯ ಸಮಯದೊಂದಿಗೆ ತಮ್ಮದಾಗಿಸಿದ್ದು ವಿಶೇಷವಾಗಿತ್ತು. 100 ಮೀ. ಓಟವನ್ನು 9.69 ಸೆಕೆಂಡುಗಳಲ್ಲಿ ಪೂರೈಸಿದ್ದ ಅವರು 200 ಮೀ. ಓಟ ಪೂರೈಸಲು 19.30 ಸೆಕೆಂಡ್ ಮಾತ್ರ ತೆಗೆದುಕೊಂಡಿದ್ದರು. ಅದೇ ರೀತಿ ಇವರನ್ನೊಳಗೊಂಡ ಜಮೈಕಾ ತಂಡ 4x100 ಮೀ. ರಿಲೇಯಲ್ಲಿ ವಿಶ್ವದಾಖಲೆಯ ಸಮಯದೊಂದಿಗೆ ಸ್ವರ್ಣ ಜಯಿಸಿತ್ತು.

2007: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸರೆಡ್ಡಿ ಅವರ ಬೆಂಗಳೂರು, ಆನೆಕಲ್ಲಿನ ಮನೆ ಮತ್ತು ಕಚೇರಿ ಮೇಲೆ ಈದಿನ ಬೆಳಗ್ಗೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 20 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದರು. ಖಚಿತ ಮಾಹಿತಿಯನ್ನು ಆಧರಿಸಿ ರೆಡ್ಡಿ ಅವರ ಸದಾಶಿವನಗರದ ನಿವಾಸ, ಅವರ ಅತ್ತೆ (ಪತ್ನಿಯ ತಾಯಿ) ಚೌಡಮ್ಮ ಅವರ ಇಂದಿರಾನಗರದ ನಿವಾಸ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ತಿರುಮಗೊಂಡನಹಳ್ಳಿಯ ರಮಣ ಮಹರ್ಷಿ ಸೇವಾ ಟ್ರಸ್ಟ್ ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ನಗದು, ಬ್ಯಾಂಕ್ ಖಾತೆಗಳು ಮತ್ತು ಸ್ಥಿರಾಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ವಶಪಡಿಸಿಕೊಂಡರು. ಆದಾಯಕ್ಕಿಂತ 57 ಪಟ್ಟು ಅಧಿಕ ಆಸ್ತಿಪಾಸ್ತಿ ಶ್ರೀನಿವಾರ ರೆಡ್ಡಿ ಅವರ ಬಳಿ ದೊರಕಿತು. ಅವರ ಒಟ್ಟು ಸೇವಾ ಅವಧಿಯಲ್ಲಿ ಸರ್ಕಾರದಿಂದ ಪಡೆದ ಸಂಬಳ ಮತ್ತು ಇತರೆ ಸೌಲಭ್ಯಗಳ ಮೊತ್ತ ಕೇವಲ ರೂ 35 ಲಕ್ಷ! ಅದರೆ ದಾಳಿ ಕಾಲದಲ್ಲಿ ಪತ್ತೆಯಾದದ್ದು 20 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ಆಸ್ತಿಪಾಸ್ತಿ ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ಹೇಳಿದರು.

2007: ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಆದಿವಾಸಿ ವಿದ್ಯಾರ್ಥಿಗಳ ಸಂಘಟನೆ ಅಸ್ಸಾಮಿನ ಗುವಾಹಟಿಯಲ್ಲಿ ನಡೆಸಿದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ, ಅದನ್ನು ನಿಯಂತ್ರಿಸಲು ಪೊಲೀಸರು ನಡೆಸಿದ ಗೋಲಿಬಾರಿಗೆ ಐವರು ಬಲಿಯಾದರು. ರಾಜ್ಯದ 2.6 ಕೋಟಿ ಜನ ಸಂಖ್ಯೆಯಲ್ಲಿ ಶೇ 6 ರಷ್ಟಿರುವ ಸಂತಲ್ ಆದಿವಾಸಿಗಳು ಬಹುತೇಕ ಚಹಾ ತೋಟಗಳಲ್ಲಿ ಕೆಲಸ ಮಾಡುವವರು. ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ  ಹೋರಾಟ ನಡೆಸಿದ್ದು, ಇದೇ ಆಗ್ರಹ ಮುಂದಿಟ್ಟು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ದರು.

2007: ಜೈಪುರದಿಂದ ನವದೆಹಲಿಗೆ ಕರೆತರಲಾದ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲಿಮಾ ನಸ್ರೀನ್ ಅವರನ್ನು ರಾಜಸ್ಥಾನ ಹೌಸಿನಲ್ಲಿ ಇರಿಸಿ ದೆಹಲಿ ಹಾಗೂ ರಾಜಸ್ಥಾನೀ ಪೊಲೀಸರು ಬಿಗಿ ಭದ್ರತೆ ಒದಗಿಸಿದರು. ಅತಿಥಿ ಗೃಹಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಯಿತು. `ಲಜ್ಜಾ' ಪುಸ್ತಕ ಬರೆದು ತಸ್ಲಿಮಾ  ಮುಸ್ಲಿಂ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾದರು.

2007: ಪಾಕಿಸ್ಥಾನದ ರಾವಲ್ಪಿಂಡಿ ಹಾಗೂ ಆಪ್ಘಾನಿಸ್ಥಾನದ ಕಾಬೂಲಿನಲ್ಲಿ ಸಂಭವಿಸಿದ ಪ್ರತ್ಯೇಕ  ಆತ್ಮಹತ್ಯಾ ದಾಳಿಗಳಲ್ಲಿ ಒಟ್ಟು 39ಮಂದಿ ಮೃತರಾದರು. ರಾವಲ್ಪಿಂಡಿಯಲ್ಲಿ 30 ಜನ, ಕಾಬೂಲಿನಲ್ಲಿ 9 ಮಂದಿ ಸಾವನ್ನಪ್ಪಿದರು.

2007: ಹುಬ್ಬಳ್ಳಿ - ಧಾರವಾಡ ಅವಳಿ ನಗರದ ಕೆಲವೆಡೆ ಈದಿನ ಸಂಜೆ ಲಘು ಭೂಕಂಪದ ಅನುಭವವಾಯಿತು. ಸಂಜೆ 5ರ ಸುಮಾರಿಗೆ ಮನೆಗಳಲ್ಲಿ ಮೇಜು, ಕುರ್ಚಿ, ಪಾತ್ರೆಗಳು ಅಲುಗಾಡಿದ ಅನುಭವವಾಯಿತು.

2007: ವಿಚಾರವಾದಿ ದಿವಂಗತ ಕೆ.ರಾಮದಾಸ್ ಅವರ ಪತ್ನಿ ಆರ್. ನಿರ್ಮಲ (59) ದೀರ್ಘಕಾಲದ ಅನಾರೋಗ್ಯದಿಂದಾಗಿ ಮೈಸೂರಿನ ನಿವಾಸದಲ್ಲಿ ನಿಧನರಾದರು. ಕೆಲವು ತಿಂಗಳ ಹಿಂದೆಯಷ್ಟೆ ಪತಿ ಕೆ.ರಾಮದಾಸ್ ತೀರಿಕೊಂಡಿದ್ದರು. ಮೂರು ದಶಕಗಳ ಕಾಲ ಕನ್ನಡ ಅಧ್ಯಾಪಕಿಯಾಗಿ ಕೆಲಸ  ಮಾಡಿ ನಿವೃತ್ತಿಹೊಂದಿದ್ದ ನಿರ್ಮಲ ತಮ್ಮ ಪತಿಯೊಂದಿಗೆ ಸೇರಿ ನಾಡಿನ ಹಲವಾರು ಪ್ರಗತಿಪರ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ನಿರ್ಮಲ ಅವರ  `ಚಲ್ ಮೇರಿ ಲೂನಾ' ಎಂಬ ಲಲಿತ ಪ್ರಬಂಧ ಸಂಕಲನಕ್ಕೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಪಚ್ಚೆಪೈರು (ಮಕ್ಕಳ  ಸಾಹಿತ್ಯ), ಉರಿವ ಒಲೆಗಳ ಮುಂದೆ (ಕವನ ಸಂಕಲನ) ಪ್ರಕಟವಾಗಿವೆ.

2007: ಇಂಗ್ಲೆಂಡಿನಲ್ಲಿ ಭಾರತೀಯ ರಾಯಭಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಕಮಲೇಶ್ ಶರ್ಮಾ ಅವರು ಕಾಮನ್ವೆಲ್ತ್ ಒಕ್ಕೂಟದ ನೂತನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಉಗಾಂಡದ ಕಂಪಾಲಾದಲ್ಲಿ ನಡೆದ ಕಾಮನ್ವೆಲ್ತ್ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿ 66 ವರ್ಷದ ಐ ಎಫ್ ಎಸ್ ಅಧಿಕಾರಿ ಕಮಲೇಶ್ ಅವರನ್ನು ಈ ಮಹತ್ವದ ಹುದ್ದೆಗೆ ಬಹುಮತದಿಂದ ಆಯ್ಕೆ ಮಾಡಲಾಯಿತು.

2007: ಅಂಟಾರ್ಟಿಕ್ ಸಾಗರದಲ್ಲಿ ಮುಳುಗುತ್ತಿದ್ದ ಹಡಗಿನಿಂದ ಬಹುತೇಕ ಎಲ್ಲ 154 ಪ್ರಯಾಣಿಕರು ಹಾಗೂ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾದರು ಎಂದು ಬ್ರಿಟಿಷ್ ಕರಾವಳಿ ರಕ್ಷಣಾ ಪಡೆ ವಕ್ತಾರ ಆ್ಯಂಡಿ ಕಟ್ರೆಲ್ ತಿಳಿಸಿದರು. 154 ಮಂದಿಯನ್ನು ರಕ್ಷಿಸಲು ಅರ್ಜೆಂಟೀನಾ ಹಾಗೂ ಅಮೆರಿಕಾ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ನೆರವು ನೀಡಿದರು.

2006: ಕೆನ್ ಶಾಲೆಯ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘವು ಖ್ಯಾತ ಕಲಾವಿದ ಆರ್. ಎಂ. ಹಡಪದ್ ಹೆಸರಿನಲ್ಲಿ ನೀಡುವ ಪ್ರಶಸ್ತಿಯು ಕೆನ್ ಕಲಾ ಶಾಲೆಯ ಪ್ರಾಚಾರ್ಯ ಹಾಗೂ ಕಲಾವಿದ ಜಿ.ಎಂ.ಎನ್. ಮಣಿ ಅವರಿಗೆ ಲಭಿಸಿತು.

2006: ಭೋಪಾಲಿನಿಂದ 30 ಕಿ.ಮೀ. ದೂರದ ಭೋಜಪುರದಲ್ಲಿ ಪರ್ಮಾರ್ ರಾಜಮನೆತನದ ರಾಜಾ ಭೋಜಪಾಲ್ ನಿರ್ಮಿಸಿ ಕಾರಣಾಂತರಗಳಿಂದ ಅಪೂರ್ಣವಾಗಿ ಬಿಟ್ಟಿದ್ದ ಒಂದು ಸಹಸ್ರ ವರ್ಷಗಳ ಹಿಂದಿನ ಶಿವ ದೇವಸ್ಥಾನವನ್ನು ಭಾರತೀಯ ಸರ್ವೇಕ್ಷಣಾಲಯ ಇಲಾಖೆಯು ಪೂರ್ಣಗೊಳಿಸಿತು. ರಾಷ್ಟ್ರದಲ್ಲೇ ಅತ್ಯಂತ ದೊಡ್ಡದಾದ ಈ ದೇವಸ್ಥಾನವು ಕಳೆದ 1000 ವರ್ಷಗಳಿಂದ ಛಾವಣಿ ಇಲ್ಲದೆ ನಿಂತಿತ್ತು. ಸ್ಥಂಭಗಳ ಕೆಲಸವೂ ಅಪೂರ್ಣವಾಗಿತ್ತು. ಶಿವಲಿಂಗ ಬಿಸಿಲಿಗೆ ಒಣಗಿ ಮಳೆಗೆ ನೆನೆಯುತ್ತಿತ್ತು.

2006: ಭಾರತೀಯ ಏರೋನಾಟಿಕಲ್ ಎಂಜಿನಿಯರ್ ಬೆಂಗಳೂರಿನ ಜೋಸೆಫ್ ಪಿಚಮುತ್ತು ಅವರು ವಿಮಾನಗಳ ಸುರಕ್ಷಿತ ಭೂಸ್ಪರ್ಶಕ್ಕೆ ಅನುವು ಮಾಡುವ ಉಪಕರಣವೊಂದನ್ನು ಸಂಶೋಧಿಸಿರುವುದಾಗಿ ಪ್ರಕಟಿಸಿದರು. ಹವಾಮಾನ ವೈಪರೀತ್ಯಗಳ ನಡುವೆಯೂ ವಿಮಾನ ಭೂಸ್ಪರ್ಶ ಮಾಡಬೇಕಿರುವ ರನ್ ವೇ ನಡುವಿನ ಅಂತರವನ್ನು ಈ ಉಪಕರಣದ ಮೂಲಕ ನಿಖರವಾಗಿ ತಿಳಿಯಬಹುದು. ಇದರಿಂದ ಸುರಕ್ಷಿತ ಭೂಸ್ಪರ್ಶ ಮಾಡಲು ಪೈಲಟ್ ಗೆ ಅನುಕೂಲವಾಗುತ್ತದೆ.

2005: ಎನ್ ಡಿ ಎ ನಾಯಕ ನಿತೀಶ್ ಕುಮಾರ್ ಅವರು ಪಟ್ನಾದ ಚಾರಿತ್ರಿಕ ಗಾಂಧಿ ಮೈದಾನದಲ್ಲಿ ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ಎಂಟೂವರೆ ತಿಂಗಳ ರಾಷ್ಟ್ರಪತಿ ಆಡಳಿತ ಕೊನೆಗೊಂಡು ಜೆಡಿ (ಯು)-ಬಿಜೆಪಿ ಮೈತ್ರಿಕೂಟದ ಆಡಳಿತ ಆರಂಭಗೊಂಡಿತು.

2005: ಸರ್ಕಾರಿ ಸ್ವಾಮ್ಯದ ಎನ್ ಜಿ ಇ ಎಫ್ ಕಾರ್ಖಾನೆಗೆ ಬೀಗಮುದ್ರೆ ಘೋಷಿಸಿ ಆಸ್ತಿ ಮಾರಾಟ ಮಾಡುವ ನಿರ್ಧಾರವನ್ನು ಕೈಬಿಡಲು ಕರ್ನಾಟಕ ಸಚಿವ ಸಂಪುಟ ನಿರ್ಧರಿಸಿತು.

1992: ಲೋಕಸಭೆ ಅಧಿವೇಶನವು ವಂದೇ ಮಾತರಂನಿಂದ ಆರಂಭಗೊಂಡು ಜನಗಣಮನದೊಂದಿಗೆ ಅಂತ್ಯಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಯಿತು.

1991: ಬ್ರಿಟಿಷ್ ರಾಕ್ ಗ್ರೂಪಿನ ಸಂಗೀತ ರಾಣಿ ಫ್ರೆಡ್ಡೀ ಮರ್ಕ್ಯೂರಿ ಲಂಡನ್ನಿನಲ್ಲಿ ಏಡ್ಸ್ ಪರಿಣಾಮವಾಗಿ ತನ್ನ 45ನೇ ವಯಸ್ಸಿನಲ್ಲಿ ಮೃತರಾದರು.

1969: ಚಂದ್ರ ಗ್ರಹಕ್ಕೆ ಎರಡನೇ ಯಾತ್ರೆಯನ್ನು ಮುಗಿಸಿದ ಅಪೋಲೊ 12 ಗಗನನೌಕೆ ಕ್ಷೇಮವಾಗಿ ಪೆಸಿಫಿಕ್ ಸಾಗರಕ್ಕೆ ಬಂದಿಳಿಯಿತು.

1961: ಖ್ಯಾತ ಲೇಖಕಿ, ಪರಿಸರ ಚಿಂತಕಿ ಅರುಂಧತಿ ರಾಯ್ ಹುಟ್ಟಿದ ದಿನ. ಅವರ ಕಾದಂಬರಿ `ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' (ಕ್ಷುದ್ರದೇವತೆ) ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಲಭಿಸಿದೆ.

1952: ಮಾಜಿ ಕ್ರಿಕೆಟ್ ಆಟಗಾರ ಬ್ರಿಜೇಶ್ ಪಟೇಲ್ ಹುಟ್ಟಿದ ದಿನ.

1926: ಶ್ರೀ ಅರಬಿಂದೊ ಘೋಷ್ ಅವರು ಪಾಂಡಿಚೇರಿಯಲ್ಲಿ `ಪೂರ್ಣಸಿದ್ಧಿ' ಪಡೆದರು. ಈ ದಿನವನ್ನು ಶ್ರೀ ಅರಬಿಂದೋ ಆಶ್ರಮ ಸ್ಥಾಪನಾ ದಿನ ಎಂಬುದಾಗಿ  ಪರಿಗಣಿಸಲಾಗಿದೆ.

1924: ಖ್ಯಾತ ವ್ಯಂಗ್ಯಚಿತ್ರಕಾರ ರಾಸಿಪುರಂ ಕೃಷ್ಣಸ್ವಾಮಿ ಲಕ್ಷ್ಮಣ್ (ಆರ್. ಕೆ. ಲಕ್ಷ್ಮಣ್) ಹುಟ್ಟಿದ ದಿನ. ಇವರು ಖ್ಯಾತ ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಸಹೋದರ. ಲಕ್ಷ್ಮಣ್ ಅವರ ಸೃಷ್ಟಿ `ಕಾಮನ್ ಮ್ಯಾನ್' ತುಂಬ ಜನಪ್ರಿಯ.

1917: ಐತಿಹಾಸಿಕ ಕಾದಂಬರಿಕಾರರೆಂದೇ ಖ್ಯಾತರಾಗಿದ್ದ ಸಮೇತನಹಳ್ಳಿ ರಾಮರಾಯರು (24-11-1917ರಿಂದ 5-1-1999) ಶ್ರೀನಿವಾಸರಾವ್- ರುಕ್ಮಿಣಿಯಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆ ಹೊಸಕೋಟೆಯ ಸಮೇತನಹಳ್ಳಿಯಲ್ಲಿ ಜನಿಸಿದರು.

1896: ಸಂಸ್ಕೃತ ವಿದ್ವಾಂಸ ಕ್ಷಿತಿಶ್ ಚಂದ್ರ ಚಟರ್ಜಿ (1896-1961) ಹುಟ್ಟಿದ ದಿನ.

1859: ಚಾರ್ಲ್ಸ್ ಡಾರ್ವಿನ್ ಅವರ `ಆನ್ ದಿ ಒರಿಜಿನ್ ಆಫ್ ಸ್ಪೀಸೀಸ್' ಪುಸ್ತಕ ಪ್ರಕಟಗೊಂಡಿತು. ಈ ಪುಸ್ತಕ ಡಾರ್ವಿನ್ ಅವರ ವಿಕಾಸವಾದವನ್ನು ವಿವರಿಸುತ್ತದೆ. ಮೊದಲ ಆವೃತ್ತಿಯ ಎಲ್ಲ 1250 ಪ್ರತಿಗಳು ಪ್ರಕಟವಾದ ದಿನವೇ ಮಾರಾಟವಾಗಿ ಹೋದವು.

1642: ಟಾಸ್ಮಾನಿಯಾವನ್ನು ಡಚ್ ಸಂಶೋಧಕ ಅಬೆಲ್ ಟಾಸ್ಮನ್ ಪತ್ತೆ ಹಚ್ಚಿದ. ಈ ಭೂಪ್ರದೇಶಕ್ಕೆ ಆತ ವ್ಯಾನ್ ಡೇಮಿನ್ಸ್ ಲ್ಯಾಂಡ್ ಎಂಬುದಾಗಿ ಡಚ್ ಈಸ್ಟ್ ಇಂಡೀಸ್ ನ ಗವರ್ನರ್ ಜನರಲನ ಹೆಸರನ್ನು ಇಟ್ಟ. ವ್ಯಾನ್ ಡೇಮಿನ್ಸ್ ಆತನ ಸಂಶೋಧನೆಗೆ ನೆರವು ನೀಡಿದ ವ್ಯಕ್ತಿ. 1853ರಲ್ಲಿ ಇದಕ್ಕೆ `ಟಾಸ್ಮಾನಿಯಾ' ಎಂಬುದಾಗಿ ಮರುನಾಮಕರಣ ಮಾಡಲಾಯಿತು.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment