Sunday, July 28, 2019

ಎಲ್ಲ ಅತೃಪ್ತ ಶಾಸಕರು ಅನರ್ಹ : ಸ್ಪೀಕರ್ ಆದೇಶ

ಎಲ್ಲ ಅತೃಪ್ತ ಶಾಸಕರು ಅನರ್ಹಸ್ಪೀಕರ್ ಆದೇಶ
ಬೆಂಗಳೂರು:  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಬಹುಮತ ಸಾಬೀತು ಪಡಿಸುವುದಕ್ಕೆ ಒಂದು ದಿನ ಮುಂಚಿತವಾಗಿಯೇ 2019 ಜುಲೈ 28 ಭಾನುವಾರ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶಕುಮಾರ್ ಅವರು ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿರುವ ಎಲ್ಲ 14 ಮಂದಿ ಅತೃಪ್ತ ಶಾಸಕರನ್ನೂ ಶಾಸಕತ್ವದಿಂದ ಅನರ್ಹಗೊಳಿಸಿದರು.

ತುರ್ತು ಪತ್ರಿಕಾಗೋಷ್ಠಿಯಲ್ಲಿ ರಮೇಶ ಕುಮಾರ್ ಅವರು ವಿಚಾರವನ್ನು ತಿಳಿಸಿದರು.

ಎಸ್.ಟಿ. ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್, ಪ್ರತಾಪಗೌಡ ಪಾಟೀಲ್, ರೋಷನ್ ಬೇಗ್, ಎಂಟಿಬಿ ನಾಗರಾಜ್, ಸುಧಾಕರ್, ಬಿಸಿ ಪಾಟೀಲ್, ಶಿವರಾಂ ಹೆಬ್ಬಾರ್, ಗೋಪಾಲಯ್ಯ,  ಶ್ರೀಮಂತ ಪಾಟೀಲ್,ನಾಗೇಂದ್ರ, ಆನಂದ್ ಸಿಂಗ್, ನಾರಾಯಣ ಗೌಡ, ಹೆಚ್ ವಿಶ್ವನಾಥ್ ಅವರನ್ನು  ಪ್ರಸ್ತುತ ವಿಧಾನ ಸಭೆಯ ಅವಧಿ ಮುಕ್ತಾಯಗೊಳ್ಳುವವರೆಗೂ ಅನರ್ಹಗೊಳಿಸಲಾಗಿದೆ ಎಂದು ಸಭಾಧ್ಯಕ್ಷರು ಪ್ರಕಟಿಸಿದರು.

ಪಕ್ಷ ಜಾರಿಗೊಳಿಸಿದ ಆದೇಶವನ್ನು (ವಿಪ್) ಉಲ್ಲಂಘಿಸಿದ ಶಾಸಕರನ್ನು ಅನರ್ಹಗೊಳಿಸಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ  ದಿನೇಶ್ ಗುಂಡುರಾವ್ ದೂರು ನೀಡಿದ್ದರು.

2019 ಜುಲೈ 29 ಸೋಮವಾರ ಬೆಳಗ್ಗೆ ಅಧಿವೇಶನದ ತುರ್ತು ಇರುವುದರಿಂದ ಈದಿನವೇ ಅತೃಪ್ತ ಶಾಸಕರ ರಾಜೀನಾಮೆಯ ಬಗ್ಗೆ ಇತ್ಯರ್ಥ ಮಾಡುವ ಅಗತ್ಯವಿದೆ. ಆದ್ದರಿಂದ ತುರ್ತು ಸುದ್ದಿಗೋಷ್ಠಿ ನಡೆಸಿದ್ಧೇನೆ ಎಂದು ರಮೇಶ ಕುಮಾರ್ ನುಡಿದರು.

ಮುಖ್ಯಮಂತ್ರಿಗಳು ಸೋಮವಾರ ವಿಶ್ವಾಸ ಮತಯಾಚನೆ ಮಾಡುವುದಾಗಿ ಕೋರಿದ  ಕಾರಣ ಎಲ್ಲಾ ಶಾಸಕರಿಗೆ ಅಧಿವೇಶನಕ್ಕೆ ಹಾಜರಾಗಲು ಸೂಚನೆ ನೀಡಿದ್ದೇವೆ. ಕಾರ್ಯ ಕಲಾಪದ ಬಗ್ಗೆ ಸೂಚನೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಹೇಳಿದರು.

ಈದಿನ (28 ಜುಲೈ 2019) ಬೆಳಗ್ಗೆ ನಿಧನರಾದ ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿಯವರನ್ನು ನೆನಪಿಸಿದ ರಮೇಶ ಕುಮಾರ್, ರೆಡ್ಡಿ ಅವರೊಂದಿಗಿನ ಒಡನಾಟವನ್ನು ನೆನಪು ಮಾಡಿಕೊಂಡರು.
ಕೆಲ ದಿನಗಳ ಹಿಂದೆಯಷ್ಟೇ ರಾಜೀನಾಮೆ ನೀಡಿದ್ದ ರಮೇಶ ಜಾರಕಿಹೊಳಿ,  ಮಹೇಶ್ ಕುಮಟಳ್ಳಿ ಮತ್ತು ಆರ್. ಶಂಕರ್ ಅವರನ್ನು ಪ್ರಸ್ತುತ ವಿಧಾನ ಸಭೆಯ ಅವಧಿಯವರೆಗೆ ಸಭಾಧ್ಯಕ್ಷ ರಮೇಶ ಕುಮಾರ್ ಅನರ್ಹಗೊಳಿಸಿದ್ದರು.

No comments:

Post a Comment