೨೦೨೩ರ ರಾಜೌರಿ ದಾಳಿಯ ಸೂತ್ರಧಾರಿ ಅಬು ಕತಾಲ್ ಹತ್ಯೆ
ನವದೆಹಲಿ: ಲಷ್ಕರ್-ಇ-ತೈಬಾ ಸಂಘಟನೆಗೆ ಸೇರಿದ ʼಮೋಸ್ಟ್ ವಾಂಟೆಡ್ʼ ಭಯೋತ್ಪಾದಕರಲ್ಲಿ ಒಬ್ಬನಾದ ಅಬು ಕತಾಲ್ ಯಾನೆ ಫೈಸಲ್ ನದೀಮ್ ೨೦೨೫ ಮಾರ್ಚ್ ೧೫ರ ಶನಿವಾರ ರಾತ್ರಿ ಪಾಕಿಸ್ತಾನದಲ್ಲಿ ಹತನಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆಯಲ್ಲಿ ಈತ ಪ್ರಮುಖ ವ್ಯಕ್ತಿಯಾಗಿದ್ದ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ದಾಳಿಗಳನ್ನು ಆಯೋಜಿಸುವ ಜವಾಬ್ದಾರಿಯನ್ನು ಹೊಂದಿದ್ದ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ವರದಿಗಳ ಪ್ರಕಾರ, ಪಾಕಿಸ್ತಾನದ ಝೇಲಂನ ದಿನಾ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯಿಂದ ಕತಾಲ್ ಹತ್ಯೆಗೀಡಾಗಿದ್ದಾನೆ
೨೬/೧೧ ಮುಂಬೈ ದಾಳಿಯ ಸೂತ್ರಧಾರ ಹಫೀಜ್ ಸಯೀದನ ಆಪ್ತ ಸಹಚರನಾಗಿದ್ದ ಅಬು ಕತಾಲ್ ಜೂನ್ 9 ರಂದು ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ದೇವಸ್ಥಾನದಿಂದ ಹಿಂತಿರುಗುತ್ತಿದ್ದ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ. ಕತಾಲ್ ನೇತೃತ್ವದಲ್ಲಿ ಈ ದಾಳಿಯನ್ನು ಆಯೋಜಿಸಲಾಗಿತ್ತು.
ಜನವರಿ ೧, ೨೦೨೩ ರಂದು, ರಾಜೌರಿಯ ಧಂಗ್ರಿ ಗ್ರಾಮದಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಸಲಾಗಿತ್ತು. ದಾಳಿಯ ನಂತರ ಮರುದಿನ ಐಇಡಿ ಸ್ಫೋಟ ಸಂಭವಿಸಿತ್ತು. ಇಬ್ಬರು ಮಕ್ಕಳು ಸೇರಿದಂತೆ ಏಳು ಜನರು ಪ್ರಾಣ ಕಳೆದುಕೊಂಡಿದ್ದರು. ಇತರ ಹಲವರು ತೀವ್ರ ಗಾಯಗೊಂಡಿದ್ದರು.
ಹಫೀಜ್ ಸಯೀದ್ ಅಬು ಕತಾಲ್ ನನ್ನು ಲಷ್ಕರ್-ಇ-ತೈಬಾದ ಮುಖ್ಯ ಕಾರ್ಯಾಚರಣಾ ಕಮಾಂಡರ್ ಆಗಿ ನೇಮಿಸಿದ್ದ. ಹಫೀಜ್ ಸಯೀದ್ ಅಬು ಕತಾಲ್ ಗೆ ಆದೇಶ ನೀಡುತ್ತಿದ್ದ. ಅದರಂತೆ ಕತಾಲ್ ಕಾಶ್ಮೀರದಲ್ಲಿ ಪ್ರಮುಖ ದಾಳಿಗಳನ್ನು ನಡೆಸುತ್ತಿದ್ದ.
೨೦೨೩ ರ ರಾಜೌರಿ ದಾಳಿಯಲ್ಲಿ ಅಬು ಕತಾಲ್ ಪಾತ್ರಕ್ಕಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನ್ನ ಆರೋಪಪಟ್ಟಿಯಲ್ಲಿ ಅಬು ಕತಾಲ್ನನ್ನು ಹೆಸರಿಸಿತ್ತು.
ರಾಜೌರಿ ದಾಳಿಗೆ ಸಂಬಂಧಿಸಿದಂತೆ, ಎನ್ಐಎ ಐದು ಆರೋಪಿಗಳ ಮೇಲೆ ಆರೋಪಪಟ್ಟಿ ಸಲ್ಲಿಸಿದೆ, ಅವರಲ್ಲಿ ಮೂವರು ನಿಷೇಧಿತ ಲಷ್ಕರ್-ಇ -ತೈಬಾಕ್ಕೆ ಸೇರಿದ ಪಾಕಿಸ್ತಾನೀಯರು.
ನಾಗರಿಕರನ್ನು, ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯದ ನಾಗರಿಕರನ್ನು ಮತ್ತು ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಲು ಪಾಕಿಸ್ತಾನದಿಂದ ಎಲ್ಇಟಿ ಭಯೋತ್ಪಾದಕರ ನೇಮಕಾತಿ ಮತ್ತು ರವಾನೆಯನ್ನು ಈ ಮೂವರು ಸಂಘಟಿಸಿದ್ದರು ಎಂದು ಎನ್ಐಎ ತನಿಖೆಗಳು ಬಹಿರಂಗಪಡಿಸಿವೆ.
ಜಮ್ಮು ಮತ್ತು ಕಾಶ್ಮೀರದಾದ್ಯಂತ ಹಲವಾರು ಭಯೋತ್ಪಾದನಾ ಸಂಬಂಧಿತ ಘಟನೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಅಬು ಕತಾಲ್ ಮೇಲೆ ಸೇನೆ ಸೇರಿದಂತೆ ಹಲವಾರು ಭದ್ರತಾ ಸಂಸ್ಥೆಗಳು ನಿಗಾ ಇಟ್ಟಿದ್ದವು.
ಕೆಳಗಿನವುಗಳನ್ನೂ ಓದಿರಿ:
ಬಾನಿನಿಂದ ಬಂತು ಸಾವು: ಅಮೆರಿಕದ ಕ್ಷಿಪಣಿ ದಾಳಿ, ಐಸಿಸ್ ಮುಖ್ಯಸ್ಥ ಖತಂ
No comments:
Post a Comment