Monday, October 15, 2018

ಶಬರಿಮಲೈ: ಮಂಗಳವಾರ ಇನ್ನೊಂದು ಸುತ್ತಿನ ಚರ್ಚೆ

ಶಬರಿಮಲೈ: ಮಂಗಳವಾರ ಇನ್ನೊಂದು ಸುತ್ತಿನ ಚರ್ಚೆ

ತಿರುವನಂತಪುರಂ: ಭಕ್ತಾದಿಗಳೊಂದಿಗೆ ಮುಖಾಮುಖಿ ತಪ್ಪಿಸುವ ಪ್ರಯತ್ನವಾಗಿ, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)  ಅಕ್ಟೋಬರ್ ೧೬, ೨೦೧೮ ರ ಮಂಗಳವಾರ ಶಬರಿಮಲೈ ತಂತ್ರಿ (ಪ್ರಧಾನ  ಅರ್ಚಕರು), ಪಂದಳ  ರಾಜ ಕುಟುಂಬ ಮತ್ತು ಅಯ್ಯಪ್ಪ ಸೇವಾ ಸಂಘದೊಂದಿಗೆ ಸಭೆಯನ್ನು ಕರೆದಿದೆ.

ಸುಪ್ರೀಂ ಕೋರ್ಟ್ ಆದೇಶ ವಿರುದ್ಧ ಪ್ರತಿಭಟನಾ ಅಭಿಯಾನದ ನಾಯಕತ್ವ ವಹಿಸುತ್ತಿರುವ ಭಾರತೀಯ ಜನತಾ ಪಕ್ಷವು (ಬಿಜೆಪಿ) ಮಾತುಕತೆಗಳನ್ನು ತಿರಸ್ಕರಿಸಿದೆ. ಆದರೂ, ತಂತ್ರಿ ಮತ್ತು ಪಂದಳ ರಾಜಕುಟುಂಬದವರು ತಮ್ಮ ನಿರ್ಧಾರವನ್ನು ನಂತರ ಘೋಷಿಸುವುದಾಗಿ ಹೇಳಿದ್ದಾರೆ.

" ಸಮಸ್ಯೆಯನ್ನು ಸ್ನೇಹಯುತವಾಗಿ ಇತ್ಯರ್ಥ ಪಡಿಸಲಾಗುವುದು  ಎಂದು ನಾವು ನಂಬಿದ್ದೇವೆ. ನಾವು ಎಲ್ಲಾ ಪಾಲುದಾರರನ್ನು ತಾಳ್ಮೆಯಿಂದ ಆಲಿಸುತ್ತೇವೆ. ಇದನ್ನು ರಾಜಕೀಯ ಸಮಸ್ಯೆಯನ್ನಾಗಿ ಮಾಡಲು ಬಯಸುವುದಿಲ್ಲ. ಇದೇ ವೇಳೆಯಲ್ಲಿ ನಮ್ಮ ಮಿತಿಗಳನ್ನು ನಾವು ಮನವರಿಕೆ ಮಾಡಿಸುತ್ತೇವೆ ಎಂದು ಮಂಡಳಿ  ಅಧ್ಯಕ್ಷ ಪದ್ಮಕುಮಾರ್ ಹೇಳಿದರು.

ಮಾಸಿಕ ಪೂಜಾ ವಿಧಿಗಳ ಸಲುವಾಗಿ ಅಕ್ಟೋಬರ್ 17ರಂದು ದೇವಾಲಯವನ್ನು ತೆರೆಯಲಾಗುತ್ತಿದ್ದು, ಇದಕ್ಕೆ ಕೇವಲ ಮೂರು ದಿನಗಳು ಉಳಿದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ತೀವ್ರಗೊಂಡಿರುವ ಪ್ರತಿಭಟನೆಗಳು ರಾಜ್ಯ ಸರ್ಕಾರಕ್ಕೆ ಚಿಂತೆ ಉಂಟು ಮಾಡಿವೆ.
"ಆಡಳಿತಾರೂಢ ಸಿಪಿಐ (ಎಮ್) ಕೈಗೊಂಬೆಯಾಗಿರುವ ದೇವಸ್ವಂ ಮಂಡಳಿ ಅಧ್ಯಕ್ಷರಿಂದ ನಾವು ಹೆಚ್ಚು ನಿರೀಕ್ಷಿಸಲಾಗದು” ಎಂದು ಬಿಜೆಪಿ ಅಧ್ಯಕ್ಷ ಪಿ. ಎಸ್. ಶ್ರೀಧರನ್ ಪಿಳ್ಳೈ ಸೋಮವಾರ ಇಲ್ಲಿ ಹೇಳಿದರು. ಭಕ್ತರಿಗೆ ಸವಾಲು ಎಸೆಯುವ ಮೂಲಕ ಮತ್ತು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿದೆ ಎಂದು ಅವರು ನುಡಿದರು.

"ತೀರ್ಪು ಹೊರ ಬಂದಾಗ ಸರ್ಕಾರವು ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಬದಲಾಗಿ, ಮಹಿಳಾ ಪೊಲೀಸ್ ಮತ್ತು ಅಧಿಕಾರಿಗಳ ನಿಯೋಜನೆ ಇತ್ಯಾದಿ ಪ್ರಚೋದನಕಾರಿ ಹೇಳಿಕೆಗಳನ್ನು ಅದು ನೀಡಿದೆ. ಪ್ರಸ್ತುತ ಅವ್ಯವಸ್ಥೆಗೆ ಸರ್ಕಾರವೇ ಹೊಣೆ’ ಎಂದು ಮೂ ವರು ತಂತ್ರಿಗಳ ಪೈಕಿ ಒಬ್ಬರಾಗಿರುವ ಮೋಹನರು ಕಂಡಾರರು ಹೇಳಿದರು.

ಈಮಧ್ಯೆ, ಬಿಜೆಪಿ ನೇತೃತ್ವದ ಎನ್ ಡಿಎ ಕಳೆದವಾರ ಆರಂಭಿಸಿದ್ದ ಸಂಘಟಿಸಿದ್ದ ಸುದೀರ್ಘ ಜಾಥಾವು ಭಾನುವಾರ ತಿರುವನಂತಪುರಂ ತಲುಪಿದೆ. ನಟ -ಸಂಸದ ಸುರೇಶ್ ಗೋಪಿ ಆಲಂಕೋಡಿನಲ್ಲಿ ಜಾಥಾಕ್ಕೆ ಚಾಲನೆ ಹಸಿರು ನಿಶಾನೆ ತೋರಿಸಿದ್ದರು.

"ಶತಮಾನಗಳಷ್ಟು  ಹಳೆಯ ಸಂಪ್ರದಾಯದ ಪಾವಿತ್ರ್ಯ ರಕ್ಷಣೆಗಾಗಿ ತಮ್ಮ   ಅಂತಿಮ ರಕ್ತದವರೆಗೂ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನೂ ಹೋರಾಡುತ್ತಾನೆ" ಎಂದು ಪಿಳ್ಳೈ ಹೇಳಿದ್ದರು. ರಾಜ್ಯದ ದಕ್ಷಿಣ ಜಿಲ್ಲೆಗಳ ಮೂಲಕ ಸಾಗಿದ ಮೆರವಣಿಗೆ, ಸೋಮವಾರ ಆಡಳಿತಾತ್ಮಕ ಕೇಂದ್ರವಾಗಿರುವ ತಿರುವನಂತಪುರಂನ ರಾಜ್ಯ ಕಾರ್ಯದರ್ಶಿ ಕಚೇರಿ ಮುಂದೆ ಸಮಾಪ್ತಗೊಳ್ಳಲಿದೆ.

ಭಕ್ತರ ಕಾಳಜಿಯನ್ನು ಗಮನಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ,  ಅಂತಾರಾಷ್ಟ್ರೀಯ ಹಿಂದು ಪರಿಷತ್ (ಎಎಚ್ ಪಿ) ನೇತೃತ್ವದಲ್ಲೂ ನೂರಾರು ಕಾರ್ಯಕರ್ತರು ಮೆರವಣಿಗೆ ನಡೆಸಿದರು.

 ಎಡರಂಗ ಸರ್ಕಾರವು ಸುಪ್ರೀಂ ಕೋರ್ಟ್ ಆದೇಶವನ್ನು ಅನುಷ್ಠಾನಗೊಳಿಸಿದರೆ, ಅಕ್ಟೋಬರ್ 18ರಂದು ರಾಜ್ಯದಲ್ಲಿ ಮುಷ್ಕರ ನಡೆಸುವಂತೆ ಎಎಚ್ ಪಿ ಅಧ್ಯಕ್ಷ ಪ್ರವೀಣ್ ತೊಗಾಡಿಯಾ ಕರೆ ನೀಡಿದರು.

ಯುವ ಮೋರ್ಚಾ ಕಾರ್ಯಕರ್ತರ ಒಂದು ಗುಂಪು ಉತ್ತರ ಕಣ್ಣೂರು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿವಾಸಕ್ಕೆ ಮೆರವಣಿಗೆ ನಡೆಸಿತು. ನಿವಾಸದಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಅಡೆತಡೆ ಹಾಕುವ ಮೂಲಕ ಆಂದೋಲನಗಾರರನ್ನು ಪೊಲೀಸರು ನಿರ್ಬಂಧಿಸಿದರು.

ಸೆಪ್ಟೆಂಬರ್ 28ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಐವರು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಸಂವಿಧಾನ ಪೀಠವು ಋತುಮತಿ ವಯಸ್ಸಿನ ಮಹಿಳೆಯರ ದೇವಾಲಯ ಪ್ರವೇಶದ ಮೇಲಿದ್ದ ನಿಷೇಧವನ್ನು ತೆರವುಗೊಳಿಸಿತ್ತು.

No comments:

Post a Comment