Friday, October 12, 2018

ಇಂದಿನ ಇತಿಹಾಸ History Today ಅಕ್ಟೋಬರ್ 12

ಇಂದಿನ ಇತಿಹಾಸ History Today ಅಕ್ಟೋಬರ್ 12
2018: ವಿಶ್ವಸಂಸ್ಥೆ: ಭಾರತವು ವಿಶ್ವಸಂಸ್ಥೆಯ ಉನ್ನತ ಮಾನವ ಹಕ್ಕುಗಳ ಮಂಡಳಿಗೆ ಜನವರಿ , ೨೦೧೯ ರಿಂದ ಮೂರು ವರ್ಷಗಳ ಅವಧಿಗೆ ಆಯ್ಕೆಯಾಯಿತು. ಏಷ್ಯ--ಪೆಸಿಫಿಕ್ ವಿಭಾಗದಲ್ಲಿ ೧೮೮ ಮತಗಳೊಂದಿಗೆ ಅಭ್ಯರ್ಥಿಗಳ ಪೈಕಿ ಭಾರತವೇ ಅತ್ಯಧಿಕ ಮತಗಳನ್ನು ಪಡೆಯಿತು. ವಿಶ್ವಸಂಸ್ಥೆಯ 193 ಸದಸ್ಯ ಬಲದ ಮಾನವ ಹಕ್ಕುಗಳ ಮಂಡಳಿಗೆ ಹೊಸ ಸದಸ್ಯರ  ಆಯ್ಕೆಗಾಗಿ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಚುನಾವಣೆ ನಡೆಯಿತು. ರಹಸ್ಯ ಮತದಾನದ ಮೂಲಕ ೧೮ ಹೊಸ ಸದಸ್ಯರನ್ನು ಸಂಪೂರ್ಣ ಬಹುಮತದೊಂದಿಗೆ ಚುನಾಯಿಸಲಾಯಿತು. ಮಂಡಳಿಗೆ ಚುನಾಯಿತರಾಗುವ ರಾಷ್ಟ್ರಗಳು ಕನಿಷ್ಟ 97 ಮತಗಳನ್ನು ಪಡೆಯಬೇಕಾಗಿತ್ತು. ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಭಾರತವು ಸ್ಥಾನಕ್ಕೆ ಸ್ಪರ್ಧಿಸಿತ್ತು. ಭಾರತ ಜೊತೆಗೆ, ಬಹ್ರೇನ್, ಬಾಂಗ್ಲಾದೇಶ, ಫಿಜಿ ಮತ್ತು ಫಿಲಿಪೈನ್ಸ್ ದೇಶಗಳು ಅದೇ ಪ್ರಾದೇಶಿಕ ಗುಂಪಿನಲ್ಲಿ ಸ್ಪರ್ಧಿಸಿದ್ದವು.  ಏಷ್ಯಾ ಪೆಸಿಫಿಕ್ ವಿಭಾಗದಲ್ಲಿ ಐದು ಸ್ಥಾನಗಳಿಗೆ ಆಯ್ಕೆಯಾಗಬೇಕಾಗಿದ್ದು, ಭಾರತದ ಆಯ್ಕೆ ಖಚಿತವಾಗಿತ್ತು.  ವಿಶ್ವಸಂಸ್ಥೆಯಲ್ಲಿ ಭಾರತದ  ಕಾಯಂ ರಾಯಭಾರಿಯಾಗಿರುವ  ಸೈಯದ್ ಅಕ್ಬರುದ್ದೀನ್  ಅವರು, ‘ಭಾರತದ ವಿಜಯವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ದೇಶದ ನಿಲುವನ್ನು ಪ್ರತಿಫಲಿಸಿದೆ’ ಎಂದು ಹೇಳಿದರು.
ಚುನಾವಣೆಯ ಬಳಿಕ ಅಕ್ಬರುದ್ದೀನ್  ಅವರು "ಸಂತಸದ ಫಲಿತಾಂಶಕ್ಕಾಗಿ ಮತದಾನ. ವಿಶ್ವಸಂಸ್ಥೆಯಲ್ಲಿ ನಮ್ಮ ಎಲ್ಲ ಸ್ನೇಹಿತರ ಬೆಂಬಲದೊಂದಿಗೆ ಭಾರತವು ಎಲ್ಲ ಅಭ್ಯರ್ಥಿಗಳ ಪೈಕಿ ಅತ್ಯಧಿಕ ಮತಗಳೊಂದಿಗೆ ಮಾನವ ಹಕ್ಕುಗಳ ಮಂಡಳಿಗೆ ಆಯ್ಕೆಯಾಗಿದೆ’ ಎಂದು ಟ್ವೀಟ್ ಮಾಡಿದರು. ಹೊಸ ಸದಸ್ಯರು ಮುಂದಿನ ವರ್ಷ ಜನವರಿ ರಿಂದ ಮೂರು ವರ್ಷಗಳ ಅವಧಿಗೆ ಸೇವೆ ಸಲ್ಲಿಸುವರು. ಭಾರತವು ಹಿಂದೆ ಜಿನಿವಾ ಮೂಲದ ಮಾನವ ಹಕ್ಕುಗಳ ಮಂಡಳಿಗೆ ೨೦೧೧-೨೦೧೪ ಮತ್ತು ೨೦೧೪-೨೦೧೭ ಅವಧಿಗೆ ಆಯ್ಕೆಯಾಗಿತ್ತು. ಅದರ ಕೊನೆಯ ಅಧಿಕಾರಾವಧಿಯು ಡಿಸೆಂಬರ್ ೩೧, ೨೦೧೭ ರಂದು ಅಂತ್ಯಗೊಂಡಿತ್ತು. ನಿಯಮಗಳ ಅನುಸಾರ, ಎರಡು ಬಾರಿ ಸತತ ಅವಧಿಗೆ ಸೇವೆ ಸಲ್ಲಿಸಿದ್ದರಿಂದ ತಕ್ಷಣವೇ ಮರು-ಚುನಾವಣೆಗೆ ಭಾರತಕ್ಕೆ ಅರ್ಹತೆ ಇರಲಿಲ್ಲ.  ಮಾನವ ಹಕ್ಕುಗಳೊಂದಿಗೆ ವ್ಯವಹರಿಸುವ ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯು 2006ರ ಮಾರ್ಚ್ ತಿಂಗಳಲ್ಲಿ ಸ್ಥಾಪನೆಗೊಂಡಿದ್ದು, 47 ಚುನಾಯಿತ ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ. ಸಮಾನ ಭೌಗೋಳಿಕ ವಿತರಣೆಯ ಆಧಾರದ ಮೇಲೆ ಮಂಡಳಿಯ ಸ್ಥಾನಗಳನ್ನು ಐದು ಪ್ರಾದೇಶಿಕ ಗುಂಪುಗಳಿಗೆ ಹಂಚಲಾಗುತ್ತದೆ: ಆಫ್ರಿಕನ್ ರಾಜ್ಯಗಳು 13 ಸ್ಥಾನಗಳು; ಏಷ್ಯ-ಪೆಸಿಫಿಕ್ ರಾಜ್ಯಗಳು 13 ಸ್ಥಾನಗಳು; ಪೂರ್ವ ಯುರೋಪಿಯನ್ ರಾಜ್ಯಗಳು 6 ಸ್ಥಾನಗಳು; ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ರಾಜ್ಯಗಳು 8 ಸ್ಥಾನಗಳು; ಮತ್ತು ಪಶ್ಚಿಮ ಯುರೋಪಿಯನ್ ಮತ್ತು ಇತರ ರಾಜ್ಯಗಳು, 7 ಸ್ಥಾನಗಳನ್ನು ಪಡೆದಿವೆ.  ಜನರಲ್ ಅಸೆಂಬ್ಲಿಯ ಎಲ್ಲಾ ಐದು ಪ್ರಾದೇಶಿಕ ಗುಂಪುಗಳು ಪೈಪೋಟಿ-ಮುಕ್ತ ಸ್ಲಾಟ್ಗಳನ್ನು  ಸಲ್ಲಿಸಿದ್ದವು. ಅಂದರೆ ಎಲ್ಲಾ ಅಭ್ಯರ್ಥಿಗಳೂ ತಮ್ಮ ಹಕ್ಕುಗಳ ದಾಖಲೆಗಳನ್ನು ಲೆಕ್ಕಿಸದೆ, ಮಂಡಳಿ ಸದಸ್ಯತ್ವ ಪಡೆಯುವುದು ಖಚಿತವಿತ್ತು.  ಮಾನವ ಹಕ್ಕುಗಳ ಮಂಡಳಿಗಾಗಿ ನಡೆಯುವ ಚುನಾವಣೆಯಲ್ಲಿ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಫಿಲಿಪೈನ್ಸ್ ಮತ್ತು ಎರಿಟ್ರಿಯಾದ ಅಭ್ಯರ್ಥಿಗಳನ್ನು ವಿರೋಧಿಸಬೇಕು ಎಂದು ಮಾನವ ಹಕ್ಕುಗಳ ಕಣ್ಗಾವಲು ಸಮೂಹವು ಸೂಚಿಸಿತ್ತು. ಬಹ್ರೇನ್ ಮತ್ತು ಕ್ಯಾಮರೂನಿನಲ್ಲಿ ಮಾನವ ಹಕ್ಕುಗಳ ತೀವ್ರ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಕರೆ ನೀಡಲಾಗಿತ್ತು. ಚಿಲಿಯ ಮಾಜಿ ಅಧ್ಯಕ್ಷ ಮಿಚೆಲ್ ಬ್ಯಾಚೆಲೆಟ್ ಅವರು ವರ್ಷದ ಸೆಪ್ಟಂಬರಿನಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯುಕ್ತರ ಹುದ್ದೆಯನ್ನು ನಿರ್ವಹಿಸಿದ್ದರು. ಅವರ  ಪೂರ್ವಾಧಿಕಾರಿಯಾದ   ಜೋರ್ಡಾನ್ ರಾಯಭಾರಿ ಝೀದ್ ರಾದ್ ಅಲ್-ಹುಸೇನ್ ಅವರು ವರ್ಷದ ಜೂನ್ ತಿಂಗಳಲ್ಲಿ ಕಾಶ್ಮೀರ ಕುರಿತು ಚೊಚ್ಚಲ ವರದಿಯನ್ನು ಬಿಡುಗಡೆ ಮಾಡಿದ್ದರು. ಭಾರತ ಅದನ್ನು ತಿರಸ್ಕರಿಸಿತ್ತು.

2018: ನವದೆಹಲಿ: #ಮಿಟೂ ಚಳವಳಿಯಿಂದ ಬೆಳಕಿಗೆ ಬರುತ್ತಿರುವ ಲೈಂಗಿಕ ಹಲ್ಲೆ, ಕಿರುಕುಳ ಪ್ರಕರಣಗಳ ಕುರಿತು ಪರಿಶೀಲಿಸಲು ಸರ್ಕಾರವು ನ್ಯಾಯಾಧೀಶರ ಸಮಿತಿ ರಚನೆಯ ಪ್ರಸ್ತಾಪವನ್ನು ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಮುಂದಿಟ್ಟರು. ‘ನಾನು ಅವರೆಲ್ಲರನ್ನೂ ನಂಬುತ್ತೇನೆ. ಪ್ರತಿಯೊಂದು ದೂರಿನ ಹಿಂದಿನ ನೋವು ಮತ್ತು ಆಘಾತವನ್ನು ನಾನು ನಂಬುತ್ತೇನೆ ಎಂದು ನುಡಿದ ಮೇನಕಾ ಗಾಂಧಿ, ಲೈಂಗಿಕ ಕಿರುಕುಳದ ಪ್ರಕರಣಗಳ ಬಗ್ಗೆ ಶೂನ್ಯ ಸಹನೆಯೊಂದಿಗೆ ವ್ಯವಹರಿಸಬೇಕು ಎಂದು ಹೇಳಿದರು. ಎಲ್ಲ ಪ್ರಕರಣಗಳ ಪರಿಶೀಲನೆಗಾಗಿ ತಮ್ಮ ಸಚಿವಾಲಯವು ಹಿರಿಯ ನ್ಯಾಯಾಂಗ ಮತ್ತು ಕಾನೂನು ತಜ್ಞರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಿದೆ ಎಂದೂ ಅವರು ನುಡಿದರು.  ‘ಕೆಲವು ಪ್ರಕರಣಗಳನ್ನು ಮುಕ್ತ ಹಾಗೂ ಸ್ವತಂತ್ರವಾಗಿ ಪರಿಶೀಲಿಸಲು ನಾವು ನ್ಯಾಯಾಧೀಶರ ಸಮೂಹವೊಂದನ್ನು ರಚಿಸಲಿದ್ದು, ಮುಂದಕ್ಕೆ ನಾವು ಹೇಗೆ ಸಾಗಬೇಕು ಎಂಬ ಬಗ್ಗೆ ನಮಗೆ ಸಲಹೆ ನೀಡುವಂತೆ ಕೋರಲಿದ್ದೇವೆ ಎಂದು ಅವರು ಹೇಳಿದರುಸಮಿತಿಯು ಲೈಂಗಿಕ ಕಿರುಕುಳ ದೂರುಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ಪರಿಶೀಲಿಸುವುದು ಮತ್ತು ಅಗತ್ಯ ಬಿದ್ದಲ್ಲಿ ಕೆಲವು ದೂರುಗಳ ಬಗ್ಗೆ ಅವುಗಳನ್ನು ಬಲಪಡಿಸುವುದು ಹೇಗೆ ಎಂಬ ಬಗ್ಗೆ ಸಚಿವಾಲಯಕ್ಕೆ ಸಲಹೆ ನೀಡುವುದು ಎಂದು ಮೇನಕಾ ಗಾಂಧಿ ನುಡಿದರು. ವಾರಾರಂಭದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯಸಚಿವ ಎಂ.ಜೆ. ಅಕ್ಬರ್ ಅವರು ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ತನಿಖೆಯಾಗಬೇಕು ಎಂದು ಕರೆ ನೀಡುವ ಮೂಲಕ ಮೇನಕಾ ಗಾಂಧಿಯವರು ಈರೀತಿ ಆಗ್ರಹಿಸಿದ ನರೇಂದ್ರ ಮೋದಿ ಸರ್ಕಾರದ  ಮೊದಲ ಸಂಪುಟ ದರ್ಜೆ ಸಚಿವೆ ಎನಿಸಿದ್ದರುಈವರೆಗೆ ಸುಮಾರು ೧೦ ಮಹಿಳೆಯರು ಅಕ್ಬರ್ ವಿರುದ್ಧ ಲೈಂಗಿಕ ದುರ್ವರ್ತನೆಯ ಆರೋಪ ಮಾಡಿದ್ದು, ಕೇಂದ್ರ ಸಚಿವ ಸಂಪುಟದ ಬೇರೆ ಯಾವ ಮಹಿಳೆಯರೂ ಇಂತಹ ಆಗ್ರಹ ಮಾಡಿಲ್ಲ. ಸಚಿವೆಯರಾದ ಸುಷ್ಮಾ ಸ್ವರಾಜ್ ಮತ್ತು ನಿರ್ಮಲಾ ಸೀತಾರಾಮನ್ ಅವರು ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಇದಕ್ಕೆ ಉತ್ತರಿಸಲು ಅಕ್ಬರ್ ಅವರೇಸೂಕ್ತ ವ್ಯಕ್ತಿ ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದ್ದರು.  ‘ತನಿಖೆ ನಡೆಯಬೇಕು. ಅಧಿಕಾರದಲ್ಲಿರುವ ಪುರುಷರು ಆಗಾಗ್ಗೆ ಹೀಗೆ ಮಾಡುತ್ತಾರೆ. ಇದು ಮಾಧ್ಯಮ, ರಾಜಕೀಯ ಮತ್ತು ಕಂಪೆನಿಗಳಲ್ಲಿ ಕೆಲಸ ಮಾಡುವ ಹಿರಿಯರಿಗೆ ಅನ್ವಯಿಸುತ್ತದೆ. ಈಗ ಮಹಿಳೆಯರು ಬಹಿರಂಗವಾಗಿ ಮಾತನಾಡಲು ಶುರು ಮಾಡಿದ್ದಾರೆ. ನಾವು ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಮೇನಕಾ ಗಾಂಧಿ ಅಕ್ಬರ್ ವಿರುದ್ಧದ ಆಪಾದನೆಗಳ ಬಗ್ಗೆ ಪ್ರಶ್ನಿಸಿದ ಸುದ್ದಿ ವಾಹಿನಿ ಒಂದಕ್ಕೆ ಹೇಳಿದ್ದರು೧೦-೧೫ ವರ್ಷಗಳಷ್ಟು ತಡವಾಗಿಯಾದರೂ ಲೈಂಗಿಕ ಕಿರುಕುಳದ ದೂರುಗಳಿಗೆ ಅವಕಾಶ ನೀಡಬೇಕು. ಮಕ್ಕಳ ಮೇಲಿನ ಲೈಂಗಿಕ ದುರ್ವರ್ತನೆಯ ಪ್ರಕರಣಗಳಿಗೆ ಯಾವುದೇ ಕಾಲಮಿತಿ ಇರಲೇಬಾರದು ಎಂದು ಮೇನಕಾ ನುಡಿದಿದ್ದರು.  ‘ಇಂತಹ ಕೃತ್ಯ ಎಸಗಿದ ವ್ಯಕ್ತಿಯನ್ನು ನೀವು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೀರಿ. ಹೀಗಾಗಿ ಇಂತಹ ದೂರುಗಳಿಗೆ ಯಾವುದೇ ಸಮಯದ ಮಿತಿ ವಿಧಿಸಬಾರದು ಎಂದು ನಾವು ಕಾನೂನು ಸಚಿವಾಲಯಕ್ಕೆ ಬರೆದಿದ್ದೇವೆ ಎಂದು ಮೇನಕಾ  ಹೇಳಿದ್ದರು.  ‘ನೀವು ಈಗ ೧೦-೧೫ ವರ್ಷಗಳ ಬಳಿಕ ದೂರು ನೀಡಬಹುದು, ಎಷ್ಟು ತಡವಾಗಿದೆ ಎಂದು ಚಿಂತಿಸಬೇಕಿಲ್ಲನೀವು ದೂರು ನೀಡುವಿರಾದರೆ ಅವಕಾಶ ಈಗಲೂ ಮುಕ್ತವಾಗಿದೆ ಎಂದು ನುಡಿದ ಮೇನಕಾಲೈಂಗಿಕ ಮಾನಭಂಗದ ಬಗೆಗಿನ ಸಿಟ್ಟು ಎಂದಿಗೂ ಆರುವುದಿಲ್ಲ ಎಂದು ಹೇಳಿದರು.

2018: ಮುಂಬೈ: #ಮಿಟೂ ಚಳವಳಿಯಲ್ಲಿ ನಟಿ ತನುಶ್ರೀ ದತ್ತ ಅವರಿಂದ ಲೈಂಗಿಕ ದುರ್ನಡತೆ ಆರೋಪಕ್ಕೆ ಗುರಿಯಾಗಿರುವ ಚಿತ್ರ ನಟ ನಾನಾ ಪಾಟೇಕರ್ ಅವರು ಹೌಸ್ ಫುಲ್ ಚಿತ್ರದಿಂದ ಹೊರಬಂದಿದ್ದಾರೆ ಎಂದು ವರದಿಗಳು ತಿಳಿಸಿದವು. ವರದಿಯ ಪ್ರಕಾರ ಚಿತ್ರದ ಹೈ ಪ್ರೊಫೈಲ್ ನಟ ಅಕ್ಷಯ್ ಕುಮಾರ್ ಅವರು ಲೈಂಗಿಕ ಅಪರಾಧಿಗಳೊಂದಿಗೆ ತಾನು ಕೆಲಸ ಮಾಡುವುದಿಲ್ಲ ಎಂಬುದಾಗಿ ಟ್ವೀಟ್ ಮಾಡಿದ ಬಳಿಕ, ತೀವ್ರ ಒತ್ತಡಕ್ಕೆ ಒಳಗಾಗಿ ನಾನಾ ಪಾಟೇಕರ್ ಅವರು ಹೌಸ್ ಫುಲ್ ನಿಂದ ಹೊರಬಂದಿದ್ದಾರೆ ಎನ್ನಲಾಯಿತು. ಅಕ್ಷಯ್ ಕುಮಾರ್ ಅವರು ಚಿತ್ರನಿರ್ಮಾಣವನ್ನೇ ಸ್ಥಗಿತಗೊಳಿಸುವಂತೆ ಟ್ವೀಟ್ ಮೂಲಕ ಚಿತ್ರ ನಿರ್ಮಾಪಕರನ್ನು ಆಗ್ರಹಿಸಿದ್ದರು. ಆಪಾದನೆಯ ಹಿನ್ನೆಲೆಯಲ್ಲಿ ಸಾಜಿದ್ ಅವರು ಚಿತ್ರದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು.
                              
2018:  ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ನೀಡಿರುವ ರಸ್ತೆ ಕಾಮಗಾರಿ ಗುತ್ತಿಗೆ ನೀಡಿಕೆಗಳಲ್ಲಿ ನಡೆದಿದೆ ಎನ್ನಲಾಗಿರುವ  ಭಾರೀ ಭ್ರಷ್ಟಾಚಾರ ಆರೋಪಗಳ ಬಗ್ಗೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಆಜ್ಞಾಪಿಸಿತು. ನ್ಯಾಯಮೂರ್ತಿ . ಜಗದೀಶ್ ಚಂದಿರ ಅವರು ಡಿಎಂಕೆ ಸಲ್ಲಿಸಿದ್ದ ಅರ್ಜಿಯೊಂದಕ್ಕೆ ಸಂಬಂಧಿಸಿದಂತೆ ಜಾಗೃತಾದಳ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯದ (ಡಿವಿಎಸಿ) ವರದಿ ಪರಿಶೀಲನೆಯ ಬಳಿಕ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆಗೆ ನಿರ್ದೇಶನ ನೀಡಿದರುಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್. ಭಾರತಿ ಅವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ, ಡಿಎವಿಸಿಯ ವರದಿ ಮತ್ತು ಅದರ ಕಾರ್ಯಾನುಷ್ಠಾನ ಕ್ರಮಗಳ ಬಗ್ಗೆ ತನಗೆ ಸಮಾಧಾನವಾಗಿಲ್ಲ ಎಂದು ಹೇಳಿದರುಬಳಿಕ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನೂ ಒಂದು ವಾರದ ಒಳಗಾಗಿ ಸಿಬಿಐಗೆ ಒಪ್ಪಿಸುವಂತೆ ನ್ಯಾಯಮೂರ್ತಿಯವರು ಜಾಗೃತಾ ದಳಕ್ಕೆ ನಿರ್ದೇಶಿಸಿದರುಸಿಬಿಐ ಮೂರು ತಿಂಗಳುಗಳ ಒಳಗಾಗಿ ತನ್ನ ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಬೇಕು ಮತ್ತು ಮೇಲ್ನೋಟಕ್ಕೆ ಪ್ರಕರಣ ಸಾಬೀತಾದರೆ, ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಬೇಕು ಎಂದು ನ್ಯಾಯಮೂರ್ತಿ ಹೇಳಿದರು. ರಸ್ತೆ ಕಾಮಗಾರಿ ಗುತ್ತಿಗೆ ನೀಡಿಕೆಗಳಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಡಿಎಂಕೆ ಆಪಾದಿಸಿದೆ. ಪಳನಿಸ್ವಾಮಿ ಅವರು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡು ಅಂದಾಜು ೩೫೦೦ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳನ್ನು ತಮ್ಮ ಬಂಧುಗಳು ಮತ್ತುಬೇನಾಮಿಗಳಿಗೆ ಹಂಚಿಕೆ ಮಾಡಿದ್ದಾರೆ ಎಂದು ಡಿಎಂಕೆ ದೂರಿತ್ತು. ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ ತನ್ನ ದೂರಿಗೆ ಸಂಬಂಧಿಸಿದಂತೆ ಜೂನ್ ತಿಂಗಳಲ್ಲಿ ಎಫ್ ಐಆರ್ ದಾಖಲಿಸುವಂತೆ ಡಿಎವಿಸಿಗೆ ನಿರ್ದೇಶನ ನೀಡಬೇಕು ಎಂಬುದಾಗಿ ಮೊದಲಿಗೆ ಅರ್ಜಿದಾರರು ಬಯಸಿದ್ದರು. ಆದರೆ ಬಳಿಕ ಅವರು ಹೆಚ್ಚುವರಿ ಮನವಿಯನ್ನು ಸಲ್ಲಿಸಿ ಡಿಎವಿಸಿ ತಾಂತ್ರಿಕವಾಗಿ ಮುಖ್ಯಮಂತ್ರಿಯವರ ಆಧೀನದಲ್ಲಿ ಇರುವ ಕಾರಣ ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕು ಎಂದು ಕೋರಿದ್ದರು. ನ್ಯಾಯಾಲಯವು ಸೆಪ್ಟೆಂಬರ್ ೧೨ರಂದು, ದೂರಿಗೆ ಸಂಬಂಧಿಸಿದಂತೆ ಪಳನಿಸ್ವಾಮಿ ವಿರುದ್ಧ ನಡೆಸಿದ ಪ್ರಾಥಮಿಕ ತನಿಖೆಯ ದೈನಂದಿನ ವರದಿಯನ್ನು ಸಲ್ಲಿಸುವಂತೆ ಡಿಎವಿಸಿಗೆ ನಿರ್ದೇಶಿಸಿತ್ತುಡಿಎವಿಸಿಯು ಸಂಸ್ಥೆಯಾಗಿ ನಿರಂತರ ಮುಖ್ಯಮಂತ್ರಿಯನ್ನು ಬೆಂಬಲಿಸುತ್ತಾ ಬಂದಿರುವುದರಿಂದ ಕಕ್ಷಿದಾರರು ಡಿಎವಿಸಿ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ಅಕ್ಟೋಬರ್ ೯ರ ವಿಚಾರಣೆ ಕಾಲದಲ್ಲಿ ಅರ್ಜಿದಾರರ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಡಿಎವಿಸಿ ಪರ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಅವರು ಆಪಾದನೆಯನ್ನು ನಿರಾಕರಿಸಿದ್ದರು. ಡಿಎವಿಸಿಯು ನಿಯಮಾವಳಿಗಳಿಗೆ ಅನುಸಾರವಾಗಿ ಪ್ರಾಥಮಿಕ ತನಿಖೆಯನ್ನು ನಡೆಸಿದೆ ಮತ್ತು ತನ್ನ ವರದಿಯನ್ನು ಜಾಗೃತಾದಳ ಆಯುಕ್ತರಿಗೆ ಕಳುಹಿಸಿದೆ ಎಂದು ಅಡ್ವೋಕೇಟ್ ಜನರಲ್ ಪ್ರತಿಪಾದಿಸಿದ್ದರು. ಹೆದ್ದಾರಿಗಳ ಇಲಾಖೆಯು ಮುಖ್ಯಮಂತ್ರಿಯವರ ಕೈ ಕೆಳಗಿದೆ. ಆದರೆ ಡಿಎವಿಸಿಯು ಜಾಗೃತಾದಳ ಆಯುಕ್ತರ ಆಡಳಿತದ ಅಡಿಯಲ್ಲಿ ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ ಎಂದು ಅವರು ಹೇಳಿದ್ದರು.

2018: ನವದೆಹಲಿ: ಚುನಾವಣೆ ನಡೆಯಲಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳ ಕರಡು ಮತದಾರರ ಪಟ್ಟಿಯನ್ನು  ಪಠ್ಯರೂಪದಲ್ಲಿ ಒದಗಿಸುವಂತೆ ಭಾರತದ ಚುನಾವಣಾ ಆಯೋಗಕ್ಕೆ  (ಇಸಿಐ) ನಿರ್ದೇಶನ ನೀಡುವಂತೆ ಕಾಂಗ್ರೆಸ್ ನಾಯಕರಾದ ಕಮಲನಾಥ್ ಮತ್ತು ಸಚಿನ್ ಪೈಲಟ್ ಅವರು ಸಲ್ಲಿಸಿದ್ದ ಮನವಿಗಳನ್ನು ಸುಪ್ರೀಂಕೋರ್ಟ್ ವಜಾಮಾಡಿತು. ಮಧ್ಯಪ್ರದೇಶದಲ್ಲಿ ನವೆಂಬರ್ ೨೮ರಂದು ಮತ್ತು ರಾಜಸ್ಥಾನದಲ್ಲಿ ಡಿಸೆಂಬರ್ ೭ರಂದು ವಿಧಾನಸಭಾ ಚುನಾವಣೆಗಳು ನಡೆಯಲಿವೆ. ನ್ಯಾಯಮೂರ್ತಿಗಳಾದ  .ಕೆ. ಸಿಕ್ರಿ ಮತ್ತು ಅಶೋಕ ಭೂಷಣ್ ಅವರನ್ನು ಒಳಗೊಂಡ ಪೀಠವು  ‘ನಾವು ಅರ್ಜಿಗಳನ್ನು ವಜಾಗೊಳಿಸಿದ್ದೇವೆ ಎಂದು ಈದಿನ ಹೇಳಿತು. ಕಮಲ್ ನಾಥ್ ಮತ್ತು ಪೈಲಟ್ ಅವರು ಪಟ್ಟಿಯಲ್ಲಿ ಮತದಾರರನ್ನು ದ್ವಿಗುಣಗೊಳಿಸಲಾಗಿದೆ ಎಂಬುದಾಗಿ ಆಪಾದಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಪೀಠವು ಅಕ್ಟೋಬರ್ ೮ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಮುಕ್ತ ಹಾಗೂ ಪ್ರಾಮಾಣಿಕ ಚುನಾವಣೆ ಖಚಿತಪಡಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಭಯ ನಾಯಕರೂ ಕೋರಿದ್ದರು.   ‘ಪಿಡಿಎಫ್ ಮಾದರಿಗೆ ಬದಲಾಗಿ, ನಿಯಮಾವಳಿಗಳಿಗೆ ಅನುಗುಣವಾಗಿ ಮತದಾರರ ಪಟ್ಟಿಯನ್ನು ಪಠ್ಯರೂಪದಲ್ಲಿ ಪ್ರಕಟಿಸುವಂತೆ  ನಿರ್ದೇಶನ ನೀಡಬೇಕು ಎಂಬುದಾಗಿ ಮನವಿ ಮಾಡಿದ್ದ  ಕಮಲ್ ನಾಥ್ ಅವರು ಎಲ್ಲ ದೂರುಗಳಿಗೆ ಸಂಬಂಧಿಸಿದಂತೆ ತುರ್ತು ನಿರ್ಧಾರಗಳನ್ನು ಅಂತಿಮ ಪಟ್ಟಿಯ ಅಂತಿಮ ಪ್ರಕಟಣೆಗೆ ಮುನ್ನ ಕೈಗೊಳ್ಳುವಂತೆಯೂ ಸೂಚಿಸಬೇಕು ಎಂದು ಕೋರಿದ್ದರುವಿವಿಪ್ಯಾಟ್ ಚೀಟಿ ಪರಿಶೀಲನೆ: ವೋಟರ್ ವೆರಿಫಿಯೇಬಲ್ ಪೇಪರ್ ಅಡಿಟ್ ಟ್ರಯಲ್ (ವಿವಿಪ್ಯಾಟ್) ಚೀಟಿಗಳನ್ನು ಯಾದೃಚ್ಛಿಕವಾಗಿ (ಯದ್ವಾತದ್ವ) ಪರಿಶೀಲಿಸುವಂತೆಯೂ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದೂ ಅರ್ಜಿಗಳು ಮನವಿ ಮಾಡಿದ್ದವುಸೆಪ್ಟೆಂಬರ್ ೧೮ರಂದು ಚುನಾವಣಾ ಆಯೋಗವು ಪ್ರಮಾಣ ಪತ್ರದ ಮೂಲಕ ಮಧ್ಯಪ್ರದೇಶದಲ್ಲಿ ಪಿಡಿಎಫ್ ರೂಪದಲ್ಲಿ ಕರಡು ಮತದಾರರ ಭಾವಚಿತ್ರ ರಹಿತವಾದ ಪಟ್ಟಿಯನ್ನು ಒದಗಿಸುವುದನ್ನು ಸಮರ್ಥಿಸಿಕೊಂಡಿತ್ತು. ಮತದಾರರ ಮಾಹಿತಿಯಲ್ಲಿ ಯಾವುದೇ ಕೈಚಳಕವಾಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿತ್ತುಮಧ್ಯಪ್ರದೇಶದಲ್ಲಿ ೬೦ ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು ಇದ್ದಾರೆ ಮತ್ತು ರಾಜಸ್ಥಾನದಲ್ಲಿ ೪೧ ಲಕ್ಷ ನಕಲಿ ಮತದಾರರಿದ್ದಾರೆ ಎಂಬುದಾಗಿ ಸಮೀಕ್ಷೆಯೊಂದು ತಿಳಿಸಿದೆ ಎಂದು ಕಾಂಗ್ರೆಸ್ ನಾಯಕರ ಮನವಿಗಳು ತಿಳಿಸಿದ್ದವುರಾಜಸ್ಥಾನದಲ್ಲಿ ಚುನಾವಣಾ ಆಯೋಗವು ೭೧ ಲಕ್ಷ ಹೊಸ ಮತದಾರರನ್ನು ಸೇರ್ಪಡೆ ಮಾಡಿದೆ. ಮುಕ್ತ ಮತ್ತು ಪ್ರಾಮಾಣಿಕ ಚುನಾವಣೆ ನಡೆಸಲು ಮತಪಟ್ಟಿಯಲ್ಲಿನ ಅಸಮಂಜಸತೆಗಳನ್ನು ನಿವಾರಿಸಬೇಕು ಎಂದು ಮನವಿಗಳು ಆಗ್ರಹಿಸಿದ್ದವು.

2018: ಲಕ್ನೋ: ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು ತೆರವುಗೊಳಿಸಿದ್ದ ನಂ., ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗದ ಬಂಗಲೆಯನ್ನು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಸಮಾಜವಾದಿ ಸೆಕ್ಯೂಲರ್ ಮೋರ್ಚಾ ಸ್ಥಾಪಕ ಶಿವಪಾಲ್ ಯಾದವ್ ಅವರಿಗೆ ಹಂಚಿಕೆ ಮಾಡಿತು. ‘ನನಗೆ ಅಪಾಯ ಇರುವ ಬಗ್ಗೆ ಗುಪ್ತಚರ ವರದಿಗಳು ಇರುವ ಹಿನ್ನೆಲೆಯಲ್ಲಿ ಬಂಗಲೆಯನ್ನು ನನಗೆ ಹಂಚಿಕೆ ಮಾಡಲಾಗಿದೆ ಎಂದು ಸಮಾಜವಾದಿ ಪಕ್ಷದ (ಎಸ್ ಪಿ) ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಹಾಗೂ ಎಸ್ ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ  ಶಿವಪಾಲ್ ಯಾದವ್  ಇಲ್ಲಿ ಹೇಳಿದರು.  ’ನಾನು ಐದು ಬಾರಿ ಶಾಸಕನಾಗಿದ್ದು, ವಿಧಾನಸಭೆಯಲ್ಲಿ ಹಿರಿಯ ಸದಸ್ಯನಾದ್ದರಿಂದ ಬಂಗಲೆ ನೀಡಲಾಗಿದೆ ಎಂದು ಶಿವಪಾಲ್ ಪ್ರತಿಪಾದಿಸಿದರುನಾನು ಸರ್ಕಾರಿ ಬಂಗಲೆಗಾಗಿ ಅರ್ಜಿ ಸಲ್ಲಿಸಿದ್ದೆ. ನಿಯಮಾವಳಿಗಳಿಗೆ ಅನುಸಾರವಾಗಿ ನಂ., ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗದ ಬಂಗಲೆಯನ್ನು ನನಗೆ ಹಂಚಿಕೆ ಮಾಡಲಾಗಿದೆ ಎಂದು ಅವರು ಹೇಳಿದರು. ಮಧ್ಯೆ, ಬಂಗಲೆ ಹಂಚಿಕೆಯಲ್ಲಿ ಪಕ್ಷಪಾತ ಎಸಗಲಾಗಿದೆ. ಶಿವಪಾಲ್ ಯಾದವ್ ಅವರು ಆಡಳಿತಾರೂಢ ಬಿಜೆಪಿ ಸಲುವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆಪಾದಿಸಿತು. ಏನಿದ್ದರೂ ಶಿವಪಾಲ್ ಯಾದವ್ ಅವರು ತಮಗೂ ಬಿಜೆಪಿಗೂ ಹೊಂದಾಣಿಕೆ ಇದೆ ಎಂಬುದನ್ನು ತಳ್ಳಿ ಹಾಕಿದರು. ಶಿವಪಾಲ್ ಯಾದವ್ ಅವರು ತನ್ನ ಸಮಾಜವಾದಿ ಸೆಕ್ಯುಲರ್ ಮೋರ್ಚಾವನ್ನು ಈಗ ತಮಗೆ ಹಂಚಿಕೆ ಮಾಡಲಾಗಿರುವ ಬಂಗಲೆಯಿಂದಲೇ ನಡೆಸಬಹುದು ಎಂದು ಯಾದವ್ ಅವರ ನಿಕಟವರ್ತಿಯೊಬ್ಬರು ಹೇಳಿದರು.  ಆಗಸ್ಟ್ ತಿಂಗಳಲ್ಲಿ ಮೋರ್ಚಾ ಸ್ಥಾಪನೆ ಮಾಡುವ ಸಂದರ್ಭದಲ್ಲಿ ಶಿವಪಾಲ್ ಯಾದವ್ ಅವರು ಅಖಿಲೇಶ್ ಯಾದವ್ ಪಕ್ಷದ ಮುಖ್ಯಸ್ಥನಾದ ಬಳಿಕ ತಮಗೆ ನಿರ್ಲಕ್ಷ್ಯದ ಅನುಭವವಾಗುತ್ತಿದೆ ಎಂದು ಹೇಳಿದ್ದರುಮೋರ್ಚಾ ಸ್ಥಾಪನೆಯ ಬಳಿಕವೂ ಶಿವಪಾಲ್ ಯಾದವ್ ಅವರು ಎಸ್ ಪಿ ತೊರೆದಿಲ್ಲ. ಆದರೆ, ತಮ್ಮ ಮೋರ್ಚಾವು ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಲಿದೆ ಎಂದು ಅವರು ಹೇಳಿದರು. ಬಂಗಲೆ ಹಂಚಿಕೆ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡಲು ರಾಜ್ಯ ಸರ್ಕಾರಿ ಅಧಿಕಾರಿಗಳು ನಿರಾಕರಿಸಿದರು.  ರಾಜ್ಯ ಬಿಜೆಪಿ ವಕ್ತಾರ ಶಲಭ್ ಮಣಿ ತ್ರಿಪಾಠಿ ಅವರುಇದರಲ್ಲಿ ಯಾವುದೇ ರಾಜಕೀಯವನ್ನೂ ಕಾಣಬಾರದು ಎಂದು ಹೇಳಿದರು. ‘ಅವರು (ಶಿವಪಾಲ್) ಹಿರಿಯ ನಾಯಕ, ಮಾಜಿ ಸಚಿವ ಮತ್ತು ಶಾಸಕ. ಸರ್ಕಾರವು ಬಂಗಲೆಯನ್ನು ಅವರಿಗೆ ಹಂಚಿಕೆ ಮಾಡುವಾಗ ಅವರ ಹಿರಿತನವನ್ನು ಗಮನಕ್ಕೆ ತೆಗೆದುಕೊಂಡಿರಬಹುದು ಎಂದು ಶಲಭ್ ಮಣಿ ನುಡಿದರು.  ಬಿಜೆಪಿ ಒತ್ತಡದಿಂದಲೇ ಮೋರ್ಚಾ ಸ್ಥಾಪನೆ: ಶಿವಪಾಲ್ ಯಾದವ್ ಅವರು ಮೋರ್ಚಾವನ್ನು ಹುಟ್ಟುಹಾಕಿದ್ದೇ ಬಿಜೆಪಿ ಒತ್ತಡದ ಪರಿಣಾಮವಾಗಿ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ವಕ್ತಾರ ರಾಜೀವ್ ಭಕ್ಷಿ ಪ್ರತಿಪಾದಿಸಿದರು. ’ಅತ್ಯಂತ ಮಹತ್ವದ ಬಂಗಲೆಯನ್ನು ಶಿವಪಾಲ್ ಅವರಿಗೆ ನೀಡಿದ್ದು ಬಿಜೆಪಿಯ ಅವರಿಗೆ ನೆರವಾಗುತ್ತಿದೆ ಎಂಬುದನ್ನು ತೋರಿಸಿದೆ. ಶಿವಪಾಲ್ ಅವರು ಬಿಜೆಪಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಅವರು ನುಡಿದರು. ಉತ್ತರ ಪ್ರದೇಶ ಸಚಿವರು (ವೇತನ, ಭತ್ಯೆ ಮತ್ತು ಇತರ ವಿಧಿಗಳು) ಕಾಯ್ದೆಗೆ ಮಾಡಲಾಗಿದ್ದ ತಿದ್ದುಪಡಿಯನ್ನು ಸುಪ್ರೀಂಕೋರ್ಟ್ ಮೇ ೭ರಂದು ರದ್ದು ಪಡಿಸಿದ ಬಳಿಕ ಮಾಯಾವತಿ ಅವರು ಬಂಗಲೆಯನ್ನು ತೆರವು ಮಾಡಿದ್ದರು. ತಮ್ಮ ಅಧಿಕಾರಾವಧಿ ಮುಗಿದ ಬಳಿಕವೂ ಬಂಗಲೆಯನ್ನು ತಮ್ಮ ಬಳಿಯೇ ಇಟ್ಟುಕೊಳ್ಳಲು ಕಾಯ್ದೆಗೆ ತರಲಾಗಿದ್ದ ತಿದ್ದುಪಡಿ ಮಾಜಿ ಮುಖ್ಯಮಂತ್ರಿಗಳಿಗೆ ಅವಕಾಶ ಕಲ್ಪಿಸಿತ್ತುಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಾಯಾವತಿ, ಮುಲಾಯಂ ಸಿಂಗ್ ಯಾದವ್, ಅಖಿಲೇಶ್ ಯಾದವ್, ನಾರಾಯಣ ದತ್ತ ತಿವಾರಿ ಮತ್ತು ರಾಜನಾಥ್ ಸಿಂಗ್ ಅವರು ಲಕ್ನೋದಲ್ಲಿನ ತಮ್ಮ ಬಂಗಲೆಗಳನ್ನು ತೆರವು ಮಾಡಿದ್ದರು.

2018: ನವದೆಹಲಿ: ರಾಜ್ಯಾದ್ಯಂತದ ೨೮,೦೦೦ ದುರ್ಗಾಪೂಜಾ ಸಮಿತಿಗಳಿಗೆ ೨೮ ಕೋಟಿ ರೂಪಾಯಿ ಅನುದಾನ ನೀಡಲು ಪಶ್ಚಿಮ ಬಂಗಾಳ ಸರ್ಕಾರ ಕೈಗೊಂಡ ನಿರ್ಣಯಕ್ಕೆ ತಡೆಯಾಜ್ಞೆ  ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಆದರೆ ಬಗ್ಗೆ ವಾರಗಳ ಒಳಗಾಗಿ ವಿವರಣೆ ನೀಡುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ  ನಿರ್ದೇಶನ ನೀಡಿತುತಲಾ ೧೦,೦೦೦ ರೂಪಾಯಿಗಳಂತೆ ೨೮,೦೦೦ ಸಮಿತಿಗಳಿಗೆ ಅನುದಾನ ನೀಡಲು ಕೈಗೊಂಡ ನಿರ್ಧಾರದ ಬಗ್ಗೆ ವಾರಗಳ ಒಳಗಾಗಿ ವಿವರಣೆ ನೀಡುವಂತೆ ನ್ಯಾಯಮೂರ್ತಿಗಳಾದ ಮದನ್ ಬಿ. ಲೋಕುರ್ ಮತ್ತು ದೀಪಕ್ ಗುಪ್ತ ಅವರನ್ನು ಒಳಗೊಂಡ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು. ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಪೂಜಾ ಸಮಿತಿಗಳಿಗೆ ನೇವಾಗಿ ಹಣ ಪಾವತಿ ಮಾಡಲಾಗಿಲ್ಲ. ರಾಜ್ಯ ಪೊಲೀಸರ ಮೂಲಕ ಅದನ್ನು ನೀಡಲಾಗಿದೆ ಎಂದು ಹೇಳಿದರುದುರ್ಗಾಪೂಜೆ ಆಚರಣೆಗಾಗಿ ಪೂಜಾ ಸಮಿತಿಗಳಿಗೆ ೨೮ ಕೋಟಿ ರೂಪಾಯಿ ಅನುದಾನ ನೀಡುವ ಮಮತಾ ಬಾನರ್ಜಿ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ವಕೀಲರಾದ ಸೌರವ್ ದತ್ತ ಸಲ್ಲಿಸಿದ್ದ ಅಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಿತ್ತು. ಸೆಪ್ಟೆಂಬರ್ ೧೦ರಂದು, ಮಮತಾ ಬ್ಯಾನರ್ಜಿ ಅವರು ರಾಜ್ಯಾದ್ಯಂತದ ೨೮,೦೦೦ ಪೂಜಾ ಸಮಿತಿಗಳಿಗೆ ತಲಾ ೧೦,೦೦೦ ರೂಪಾಯಿಗಳನ್ನು ನೀಡಲಾಗುವುದು  ಎಂದು ಪ್ರಕಟಿಸಿದ್ದರು. ಪೈಕಿ ೩೦೦೦ ಸಮಿತಿಗಳು ನಗರದಲ್ಲಿ ಇದ್ದರೆ, ೨೫,೦೦೦ ಸಮಿತಿಗಳು ಜಿಲ್ಲೆಗಳಲ್ಲಿ ಇವೆ. ಅನುದಾನದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ೨೮ ಕೋಟಿ ರೂಪಾಯಿ ಹೊರೆ ಬೀಳುವುದು. ಅಕ್ಟೋಬರ್ ೧೦ರಂದು ಕಲ್ಕತ್ತ ಹೈಕೋರ್ಟ್ ರಾಜ್ಯದ ದುರ್ಗಾಪೂಜಾ ಸಮಿತಿಗಳಿಗೆ ಅನುದಾನ ನೀಡುವ ರಾಜ್ಯ ಸರ್ಕಾರದ ನಿರ್ಣಯದ ಬಗ್ಗೆ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು. ರಾಜ್ಯ ಸರ್ಕಾರವು ಜಾತ್ಯತೀತತೆಯ ತತ್ವಗಳಿಗೆ ವಿರುದ್ಧವಾದ ಆಚರಣೆಗಳನ್ನು ನಡೆಸುತ್ತಿದ್ದು, ಇದು ಸಂವಿಧಾನದ ಮೂಲರಚನೆಯ ತತ್ವಕ್ಕೆ ವಿರುದ್ಧ ಎಂದು ಮನವಿ ದೂರಿತ್ತು.

2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ತಂಗ್ಧರ್ ವಿಭಾಗದಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ನೆಲಕ್ಕೆ ನುಸುಳಲು ಭಯೋತ್ಪಾದಕರು ನಡೆಸಿದ ಭಾರೀ ಯತ್ನವನ್ನು ಭದ್ರತಾ ಪಡೆಗಳು ವಿಫಲಗೊಳಿಸಿದವು. ಇದೇ ವೇಳೆಗೆ ಪ್ಯಾಂಪೋರ್ನಲ್ಲಿ ಭಯೋತ್ಪಾದಕರ ಜೊತೆಗಿನ 60 ಗಂಟೆಗಳ ಗುಂಡಿನ ಘರ್ಷಣೆ  ಕೊನೆಗೊಂಡಿತು. ಕಾರ್ಯಾಚರಣೆ ಯಲ್ಲಿ ಇಬ್ಬರು ಉಗ್ರರನ್ನು ಕೊಲ್ಲಲಾಯಿತು. ಪ್ಯಾಂಪೋರ್ ನಲ್ಲಿ ಒಬ್ಬ ಭಯೋತ್ಪಾದಕನನ್ನು ಹಿಂದಿನ ದಿನ ಕೊಲ್ಲಲಾಗಿದ್ದು, ಇನ್ನೊಬ್ಬ ಭಯೋತ್ಪಾದಕನನ್ನು ಈದಿನ ಬೆಳಗ್ಗೆ ಕಾರ್ಯಾಚರಣೆ ಪುನಾರಂಭಗೊಂಡ ಬಳಿಕ ಕೊಲ್ಲಲಾಯಿತು.  ಉಗ್ರಗಾಮಿಗಳು 60 ಕೊಠಡಿಗಳ ಬೃಹತ್ ಕಟ್ಟಡದಲ್ಲಿ ಅಡಗಿಕೊಳ್ಳುವುದರೊಂದಿಗೆ ಪ್ಯಾಂಪೋರ್ ಕಾರ್ಯಾಚರಣೆ ಆರಂಭವಾಗಿತ್ತುಪ್ಯಾಂಪೋರ್ನಲ್ಲಿ ಕಳೆದ ರಾತ್ರಿ ಕತ್ತಲಿನ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಜಮ್ಮು ಕಾಶ್ಮೀರದ ಪ್ಯಾಂಪೋರ್ ಇಡಿಐ ಕಟ್ಟಡದಲ್ಲಿ ಉಗ್ರರು ಅಡಗಿದ್ದರು.
 2016: ಮಥುರಾ: ಭಾರತೀಯ ರೈಲ್ವೇಯಲ್ಲಿ ದೂರ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಸಕಾಲಕ್ಕೆ ಬೇಕಾದ ಆಹಾರ ಪಡೆಯುವುದೊಂದು ದೊಡ್ಡ ಸಮಸ್ಯೆ. ಆದರೆ ಈಗ ಕಾಲ ಬದಲಾಗಿದೆ. ನೀವು ಕುಳಿತ ಸ್ಥಳಕ್ಕೆ ಸ್ವಲ್ಪವೇ ಹೊತ್ತಿನಲ್ಲಿ ನಿಮಗೆ ಬೇಕಾದ ಆಹಾರ ವಸ್ತುವನ್ನು ತಲುಪಿಸುವ ವ್ಯವಸ್ಥೆ ಈಗ ಬಂದಿದೆ. ಕೆಂಟುಕಿ ಫ್ರೖೆಡ್ ಚಿಕನ್ನಿಂದ ಹಿಡಿದು ಡೊಮಿನೋಸ್ ಪಿಜ್ಜಾವರೆಗೆ ಅಥವಾ ಸ್ಥಳೀಯ ತಿನಸುಗಳನ್ನು ಪ್ರಯಾಣಿಕರಿಗೆ ತತ್ ಕ್ಷಣ ದೊರಕಿಸುವ ವ್ಯವಸ್ಥೆ ಈಗಿದೆ. ಇದು ಸಾಧ್ಯವಾಗಿರುವುದು ಸ್ಮಾರ್ಟ್ ಫೋನ್ ನೆರವಿನಿಂದಗ್ರಾಹಕ ರೈಲಿನಲ್ಲೇ ಕುಳಿತು ಸ್ಮಾರ್ಟ್ ಫೋನಿನಲ್ಲಿ ತಮಗೆ ಬೇಕಾದ ಆಹಾರಕ್ಕೆ ಆರ್ಡರ್ ಮಾಡಿದರಾಯಿತು. ಕೇವಲ ಎರಡು ನಿಮಿಷದಲ್ಲಿ ಗ್ರಾಹಕ ಎಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಿ, ಆತನಿಗೆ ಬೇಕಾದ ಆಹಾರ ವಸ್ತುವನ್ನು ತಲುಪಿಸಲಾಗುತ್ತದೆ. ಗ್ರಾಹಕ ತನ್ನ ಬಳಿಗೆ ಆಹಾರ ಬಂದ ಬಳಿಕ ಹಣ ಪಾವತಿ ಮಾಡಬಹುದು. ಹಿಂದೆ ಆಹಾರಕ್ಕೆ ಆರ್ಡರ್ ಮಾಡಿ ಅದು ಬರುವಷ್ಟರಲ್ಲಿ ಹಳಸಿದ ಅನುಭವ ಬಹಳ ಸಲ ತಮಗಾಗಿತ್ತು. ಈಗ ತೊಂದರೆ ಇಲ್ಲ. ಬಿಸಿ ಬಿಸಿಯಾದ ಆಹಾರ ಆರ್ಡರ್ ಮಾಡಿದ ಸ್ವಲ್ಪ ಹೊತ್ತಿನಲ್ಲೇ ಬಂದು ಬಿಡುತ್ತದೆ ಎಂದು ರೈಲು ಪ್ರಯಾಣಿಕ ಅಮಿತ್ ವಿ ಹೇಳಿದರು. ಈಗಿನ ಆಹಾರ ಹಿಂದಿನದಕ್ಕೆ ಹೋಲಿಸಿದರೆ ಸಾವಿರ ಪಾಲು ಮೇಲು ಎಂದು ಗಣಿತ ಶಿಕ್ಷಕರೊಬ್ಬರು ವರದಿಗಾರರಿಗೆ ತಿಳಿಸಿದರು. ಮಥುರಾ ನಿಲ್ದಾಣದಲ್ಲಿ ಜನ ಕಿಕ್ಕಿರಿದಿದ್ದರೂ ಆರ್ಡರ್ ಮಾಡಿದ ಆಹಾರ ತಲುಪಿಸಲು ತನಗೆ ಎರಡೇ ನಿಮಿಷ ಸಾಕಾಗುತ್ತದೆ ಎಂದು ಹೇಳುತ್ತಾರೆ ಆಹಾರ ಪೂರೈಸುವ ಅಮನ್ ಸಿಂಗ್ ಬಧೋರಿ.
2016: ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ತೀವ್ರವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುತ್ತಿರುವುದಂತೆ- ಹೀಗೆಂದು ದೆಹಲಿ ಸರ್ಕಾರ ಅಭಿಪ್ರಾಯಪಟ್ಟಿತು. ದೆಹಲಿಯಲ್ಲಿ ವಾಯುಮಾಲಿನ್ಯ ತೀವ್ರವಾಗಿ ಹೆಚ್ಚುತ್ತಿದೆ. ಇದಕ್ಕೆ ಕಾರಣ ಉತ್ತರ ಪ್ರದೇಶದ ಪಶ್ಚಿಮ ಭಾಗ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯವನ್ನು ಸುಡುತ್ತಿರುವುದು ಎಂದು ದೆಹಲಿಯ ಸಚಿಚ ಸತ್ಯೇಂದ್ರ ಜೈನ್  ಇಲ್ಲಿ ಹೇಳಿದರು. ವಾಯು ಮಾಲಿನ್ಯ ನಿಯಂತ್ರಿಸಲು ಮತ್ತು ಕೃಷಿ ತ್ಯಾಜ್ಯಗಳ ಸುಡುವಿಕೆಯನ್ನು ನಿಲ್ಲಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ದೆಹಲಿ ಸರ್ಕಾರವು ನೆರೆಹೊರೆಯ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಜೈನ್ ನುಡಿದರು.

2016: ಚೆನ್ನೈ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮತ್ತು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಚೆನ್ನೈಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಕಳೆದ 20 ದಿನಗಳಿಂದ ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿದರು. ಜಯಲಲಿತಾ ಅವರಿಗೆ ಹೃದಯ ಸೋಂಕಿಗಾಗಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದರುಆಸ್ಪತ್ರೆಯಲ್ಲಿ 20 ನಿಮಿಷ ಕಾಲ ಇದ್ದ ಷಾ ಮತ್ತು ಜೇಟ್ಲಿ ಹೊರಗಿದ್ದ ಪತ್ರಕರ್ತರ ಬಳಿ ಏನೂ ಮಾತನಾಡಲಿಲ್ಲ. ಆದರೆ ತಾವು ಆಸ್ಪತ್ರೆಗೆ ಭೇಟಿ ನೀಡಿದ್ದು, ಜಯಲಲಿತಾ ಅವರ ಆರೋಗ್ಯ ಬಗ್ಗೆ ವಿಚಾರಿಸಿರುವುದಾಗಿಯೂ, ಅವರು ಶೀಘ್ರ ಗುಣಮುಖರಾಗಲಿ ಎಂದು ಹಾರೈಸುವುದಾಗಿಯೂ ಬಳಿಕ ಟ್ವೀಟ್ ಮಾಡಿದರು. ಮಧ್ಯೆ ರಾಜ್ಯದ ಮುಖ್ಯ ವಿರೋಧ ಪಕ್ಷ ಡಿಎಂಕೆಯ ನಾಯಕ ಎಂ. ಕರುಣಾನಿಧಿ ಅವರು ಆಸ್ಪತ್ರೆಗೆ ಭೇಟಿ ನೀಡುವ ನಾಯಕರಿಗೆ ಜಯಲಲಿತಾ ಅವರನ್ನು ಭೇಟಿ ಮಾಡಲು ಏಕೆ ಅವಕಾಶ ನೀಡಲಾಗುತ್ತಿಲ್ಲ ಎಂದು ಪ್ರಶ್ನಿಸಿದರು. ಜಯಲಲಿತಾ ಅವರ ಬಳಿಯಿದ್ದ ಖಾತೆಗಳನ್ನು ಸಚಿವ ಪನ್ನೀರಸೆಲ್ವಮ್ ಅವರಿಗೆ ವರ್ಗಾಯಿಸಿದ ರೀತಿ ಬಗೆಗೂ ಕೇಳಿದ ಕರುಣಾನಿಧಿ ರಾಜ್ಯಪಾಲರಿಂದ ಸ್ಪಷ್ಟನೆಗೆ ಆಗ್ರಹಿಸಿದರು.

2016: ಮುಂಬೈ: ಗಡಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕರನ್ನು ಬಗ್ಗು ಬಡಿದ ಸೀಮಿತ ದಾಳಿಯ ಶ್ರೇಯಸ್ಸು ದಾಳಿ ಬಗ್ಗೆ ಸಂಶಯ ವ್ಯಕ್ತ ಪಡಿಸಿದವರೂ ಸೇರಿದಂತೆ ಎಲ್ಲ ಭಾರತೀಯರಿಗೆ ಸಲ್ಲುತ್ತದೆ. ಏಕೆಂದರೆ ದಾಳಿ ನಡೆಸಿದ್ದು ನಮ್ಮ ಸಶಸ್ತ್ರ ಪಡೆಗಳು ಹೊರತು ಯಾವುದೇ ರಾಜಕೀಯ ಪಕ್ಷವೂ ಅಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಇಲ್ಲಿ ಹೇಳಿದರು. ಏನಿದ್ದರೂ ನಿಟ್ಟಿನಲ್ಲಿ ನಿರ್ಧರಿಸಿ ಯೋಜನೆ ರೂಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಸರ್ಕಾರಕ್ಕೆ ಶ್ರೇಯಸ್ಸಿನ ಬಹುಪಾಲು ಸಲ್ಲುತ್ತದೆ ಎಂದೂ ಪರಿಕ್ಕರ್ ಇದೇ ಸಮಯದಲ್ಲಿ ಹೇಳಿದರು. ಸೀಮಿತ ದಾಳಿಯ ಶ್ರೇಯಸ್ಸನ್ನು ಪ್ರತಿಯೊಬ್ಬ ಭಾರತೀಯನ ಜೊತೆಗೆ ಹಂಚಿಕೊಳ್ಳಲು ನಾನು ಚಿಂತಿಸುವುದಿಲ್ಲ. ಏಕೆಂದರೆ ಕಾರ್ಯಾಚರಣೆ ನಡೆಸಿದ್ದು ನಮ್ಮ ಸಶಸ್ತ್ರ ಪಡೆಗಳೇ ಹೊರತು ಯಾವುದೇ ರಾಜಕೀಯ ಪಕ್ಷವಲ್ಲ. ಆದ್ದರಿಂದ ಕಾರ್ಯಾಚರಣೆ ಬಗ್ಗೆ ಸಂಶಯ ಪಡುವವರೂ ಸೇರಿದಂತೆ ಎಲ್ಲ ಭಾರತೀಯರೂ ಸೀಮಿತ ದಾಳಿಯ ಶ್ರೇಯಸ್ಸು ಹಂಚಿಕೊಳ್ಳಬಹುದು ಎಂದು ಸಮಾರಂಭವೊಂದರಲ್ಲಿ ಮಾತನಾಡುತ್ತಾ ಅವರು ನುಡಿದರು. ಶ್ರೇಯಸ್ಸನ್ನು ಹಂಚಿಕೊಳ್ಳುವುದರಿಂದ ಹಲವರ ನರೋದ್ರೇಕ ಶಮನಗೊಳ್ಳಬಹುದು ಎಂದು ನುಡಿದ ಅವರು ಜನರ ಭಾವನೆಗಳು ಏನಿದ್ದವು ಎಂಬುದು ನನಗೆ ಗೊತ್ತಿವೆ, ಅವರೀಗ ಸಂತೃಪ್ತರಾಗಿದ್ದಾರೆ ಎಂದು ಹೇಳಿದರು. ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸಿರುವ ಎರಡು ವರ್ಷಗಳ ಅವಧಿಯಲ್ಲಿ ತಮಗೆ ತಿಳಿದ ಪ್ರಕಾರ ರಾಷ್ಟ್ರವು ಹಿಂದೆ ಎಂದೂ ಸೀಮಿತ ದಾಳಿ ನಡೆಸಿರಲಿಲ್ಲ. ಹಿಂದೆ ಸೀಮಿತ ದಾಳಿ ನಡೆಸಲಾಗಿದೆ ಎಂಬುದಾಗಿ ಹೇಳುತ್ತಿರುವುದು ಗಡಿ ಪ್ರಕ್ಷುಬ್ಧತೆಗಳಾದಾಗ ಎಲ್ಲ ಕಡೆಗಳಲ್ಲೂ ನಡೆಯುವಂತಹ ಕಾರ್ಯಾಚರಣೆ ಇರಬಹುದು ಎಂದು ಅವರು ನುಡಿದರು. ಹಲವಾರು ರಾಜಕೀಯ ನಾಯಕರು, ಪಕ್ಷಗಳು ಸೀಮಿತ ದಾಳಿಯನ್ನು ಪ್ರಶ್ನಿಸಿ ಸಾಕ್ಷ್ಯ ಕೇಳಿದ್ದರೆ, ಅಧಿಕೃತವಾಗಿ ಸರ್ಕಾರವನ್ನು ಬೆಂಬಲಿಸಿದ ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲೂ ಇಂತಹ ಸೀಮಿತ ದಾಳಿಗಳನ್ನು ನಡೆಸಲಾಗಿತ್ತು ಎಂದು ಪ್ರತಿಪಾದಿಸಿತ್ತು.

2016: ಅಗರ್ತಲಾ: ರಿಯೊ ಒಲಿಂಪಿಕ್ಸ್ ಜಿಮ್ನಾಸ್ಟಿಕ್ಸ್ವಿಭಾಗದಲ್ಲಿ ಸಾಧನೆ ಮಾಡಿದ ಭಾರತದ ದೀಪಾ ಕರ್ಮಾಕರ್ಅವರು ತಮಗೆ ಉಡುಗೊರೆಯಾಗಿ ಬಂದಿದ್ದ ಬಿಎಂಡಬ್ಲ್ಯೂ ಕಾರನ್ನು ಮರಳಿಸಲು ನಿರ್ಧರಿಸಿದರು.  ಬಿಎಂಡಬ್ಲ್ಯೂ ಕಾರಿನ ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಕಾರನ್ನು ವಾಪಸ್ನೀಡಲು ದೀಪಾ ನಿರ್ಧರಿಸಿದ್ದಾರೆ ಎನ್ನಲಾಯಿತು. ಅಗರ್ತಲಾದ ರಸ್ತೆಗಳು ಕಿರಿದು, ಅಲ್ಲದೆ ಸರಿಯಾದ ನಿರ್ವಹಣೆ ಇಲ್ಲ. ಇದಕ್ಕೂ ಹೆಚ್ಚಾಗಿ ಮುಂಬರಲಿರುವ ಚಾಲೆಂಜರ್ಸ್ಕಪ್ಗಾಗಿ ಹೆಚ್ಚು ಕಸರತ್ತು ಅಗತ್ಯವಿರುವ ಕಾರಣ ಕಾರಿನ ನಿರ್ವಹಣೆಗೆ ಹಣ ವ್ಯಯ ಮಾಡದೆ ಅಭ್ಯಾಸದ ಕಡೆಗೆ ಗಮನ ಹರಿಸುವಂತೆ ದೀಪಾ ಅವರಿಗೆ ಅವರ ಆತ್ಮೀಯರು ಸಲಹೆ ನೀಡಿದ್ದಾರೆ ಎನ್ನಲಾಯಿತು.  ರಿಯೊ ಒಲಿಂಪಿಕ್ಸ್ನಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಾದ ಪಿ.ವಿ. ಸಿಂಧು, ಸಾಕ್ಷಿ ಮಲಿಕ್‌, ದೀಪಾ ಕರ್ಮಾಕರ್ಜತೆಗೆ ಪುಲ್ಲೇಲಾ ಗೋಪಿಚಂದ್ಅವರಿಗೂಬಿಎಂಡಬ್ಲ್ಯೂ ಕಾರನ್ನು ಸೆಪ್ಟೆಂಬರ್ನಲ್ಲಿ ಉಡುಗೊರೆಯಾಗಿ ನೀಡಲಾಗಿತ್ತು. ಹೈದರಾಬಾದ್ಬ್ಯಾಡ್ಮಿಂಟನ್ಸಂಸ್ಥೆ ಅಧ್ಯಕ್ಷ ಚಾಮುಂಡೇಶ್ವರನಾಥ್ಅವರು ಬಿಎಂಡಬ್ಲ್ಯೂ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದರು.

2016: ಲಂಡನ್: ರಿಪಬ್ಲಿಕನ್ಪಕ್ಷದಿಂದ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ವಿವಾದಿತ ನಾಮನಿರ್ದೇಶಿತ ಅಭ್ಯರ್ಥಿ ಡೊನಾಲ್ಡ್ಟ್ರಂಪ್ ಅವರನ್ನು ಹೋಲುವಂತಹ ತಲೆಗೂದಲು ಮತ್ತು ದಿರಿಸು ತೊಟ್ಟ ನಾಯಿಯೊಂದು ಬ್ರಿಟನ್ನಲ್ಲಿ ನಡೆದ ಅತ್ಯುತ್ತಮ ಉಡುಗೆ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿತು. ತೆಳು ಗೆರೆಗಳಿರುವ ಸೂಟ್‌, ರೇಷ್ಮೆಯ ನೀಲಿ ಟೈ ತೊಟ್ಟ ಮತ್ತು ಟ್ರಂಪ್ ಅವರಂತೆಯೇ ಕಾಣುವ ತೆಳು ಕೂದಲು ಹೊಂದಿರುವ ಲಂಕಾಷೈರ್ ಬಾಕ್ಸರ್ತಳಿಗೆ ಸೇರಿದಸ್ಪಡ್‌’ ಸುಮಾರು 12ಕ್ಕೂ ಅಧಿಕ ಎದುರಾಳಿಗಳನ್ನು ಮಣಿಸಿ ಮೊದಲ ಸ್ಥಾನ ಪಡೆದುಕೊಂಡಿತು. ಬನಾನಾ ಮೂನ್ ಕ್ಲಾತಿಂಗ್ಎಂಬ ಅಂತರ್ಜಾಲ ಚಿಲ್ಲರೆ ಮಾರಾಟ ಸಂಸ್ಥೆ ಸ್ಪರ್ಧೆ ಆಯೋಜಿಸಿತ್ತು.  ಉಡುಪು ಶೈಲಿ ಮತ್ತು ಟ್ರಂಪ್ ಅವರನ್ನು ಹೋಲುವ ಕೇಶ ವಿನ್ಯಾಸ ಹೊಂದಿರುವ ಸ್ಪಡ್ಇತರೆ ಸ್ಪರ್ಧಿಗಳನ್ನು ಸಲೀಸಾಗಿ ಮಣಿಸಿತು. ‘ ಸ್ಪರ್ಧೆಗೆ ಒಟ್ಟು 82 ಶ್ವಾನಗಳು ಪ್ರವೇಶ ಪಡೆದಿದ್ದವು. ಎಲ್ಲ ಶ್ವಾನಗಳ ವಸ್ತ್ರ ವಿನ್ಯಾಸಗಳೂ ಪ್ರಶಸ್ತಿ ಗೆಲ್ಲುವಷ್ಟು ಯೋಗ್ಯವಾಗಿಯೇ ಇದ್ದವು. ಆದರೆ ಟ್ರಂಪ್ಅವರನ್ನು ಹೋಲುವಂತಹ ಸ್ಪಡ್ನನ್ನು ವಿಜೇತ ಎಂದು ಆಯ್ಕೆ ಮಾಡಲಾಯಿತು. ವಾಸ್ತವವಾಗಿ ಆತನ ಚಿತ್ರ ಇಡೀ ನಮ್ಮ ಕಚೇರಿಯನ್ನು ನಗೆಗಡಲಲ್ಲಿ ಮುಳುಗಿಸಿತ್ತುಎಂದು ಬನಾನಾ ಮೂನ್ ಕ್ಲಾತಿಂಗ್ ವ್ಯವಸ್ಥಾಪಕ ನಿರ್ದೇಶಕ ಅಲೆಕ್ಸ್ಗ್ರೇಸ್ಹೇಳಿದರು. ‘ಸ್ಪಡ್ಸದಾ ವಿನೋದ ಪ್ರಿಯ. ತನ್ನ ಸ್ನೇಹಿತರ ನಡುವೆ ತುಂಬಾ ಜನಪ್ರಿಯ ಕೂಡ. ಆದರೆ ಅವನು ಯಾವುದರಲ್ಲಿಯೂ ಮೊದಲ ಸ್ಥಾನ ಗಳಿಸುತ್ತಿರಲಿಲ್ಲ. ಏಕೆಂದರೆ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳಲಾಗದಷ್ಟು ಬಿಜಿಯಾಗಿರುತ್ತಾನೆಎಂದು ಶ್ವಾನದ ಒಡತಿ ಡಯಾನ ಗೌಲ್ಡಿಂಗ್ ಹೇಳಿದರು.

2016: ಪಣಜಿ: ಸುಗಂಧ ಧ್ರವ್ಯ ತಯಾರಿಕಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಮೋನಿಕಾ ಘುರ್ಡೆ ಹತ್ಯಾ ಪ್ರಕರಣ ಈಗ ಮತ್ತೊಂದು ತಿರುವು ಪಡೆದುಕೊಂಡಿತು. ಕೊಲೆಗೂ ಮೊದಲು ಆಕೆಯ ಮೇಲೆ ಅತ್ಯಾಚಾರ ಕೂಡ ನಡೆದಿತ್ತು ಎನ್ನುವ ಮಾಹಿತಿ ಹೊರಬಿದ್ದಿತು. ಪ್ರಕರಣದ ತನಿಖೆ ನಡೆಸುತ್ತಿರುವ ಗೋವಾ ಪೊಲೀಸರು ಇದನ್ನು ಖಚಿತಪಡಿಸಿದರು. ಅಕ್ಟೋಬರ್ 5ರಂದು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಕೊಲೆ ಆರೋಪಿ, ಅಪಾರ್ಟ್ವೆುಂಟ್ ಸೆಕ್ಯೂರಿಟಿ ಗಾರ್ಡ್ ರಾಜ್ ಕುಮಾರ್ ಸಿಂಗ್ ಎಂಬಾತನನ್ನು ಗೋವಾ ಪೊಲೀಸರು ಕರ್ನಾಟಕ ಪೊಲೀಸರ ಸಹಾಯದಿಂದ ಅಕ್ಟೋಬರ್ 8ರಂದು ಬೆಂಗಳೂರಿನಲ್ಲಿ ಬಂಧಿಸಿದ್ದರು. ಬಳಿಕ ನಿರಂತರ ವಿಚಾರಣೆಗೊಳಪಡಿಸಿದಾಗ ರಾಜ್ ಕುಮಾರ್ ಸಿಂಗ್ ಅತ್ಯಾಚಾರವೆಸಗಿರುವುದನ್ನು ಬಾಯ್ಬಿಟ್ಟಿದ್ದಾನೆ. ಅಲ್ಲದೇ ತಾನೆ ಮೋನಿಕಾರನ್ನು ಕೊಲೆ ಮಾಡಿದ್ದಾಗಿಯೂ ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿರುವ ಪೊಲೀಸರು, ರಾಜ್ಕುಮಾರ್ ಸಿಂಗ್ ಆಕೆಯ ಚಲನವಲನ ತಿಳಿದುಕೊಳ್ಳಲಿಕ್ಕಾಗಿಯೇ ಅಪಾರ್ಟ್ವೆುಂಟ್ ಮೇಲ್ಚಾವಣಿ ಏರಿ ಎರಡು ದಿನಗಳ ಕಾಲ ಗಮನಿಸಿದ್ದಾಗಿಯೂ ಹೇಳಿಕೊಂಡಿದ್ದಾನೆ ಎಂದು ತಿಳಿಸಿದರು. ಕೊಲೆಯ ಬಳಿಕ ಮೋನಿಕಾ ಅವರ ಎಟಿಎಂ ಕಾರ್ಡ್ ಕದ್ದು ಬೆಂಗಳೂರಿಗೆ ಆಗಮಿಸಿದ್ದ ರಾಜ್ಕುಮಾರ್ ಅನೇಕ ಕಡೆ ಎಟಿಎಂ ಕಾರ್ಡ್ ಬಳಸಿಕೊಂಡು ಬಟ್ಟೆಗಳನ್ನು ಕೊಂಡುಕೊಂಡಿದ್ದ. ಇದನ್ನೇ ಆಧಾರವಾಗಿ ತನಿಖೆ ನಡೆಸಿದ ಪೊಲೀಸರು ಬೆಂಗಳೂರಿನಲ್ಲಿ ಆತನನ್ನು ಬಂಧಿಸಿದ್ದರು. ತಾನು ಮೋನಿಕಾರನ್ನು ಮೋಹಿಸಿದ್ದು, ಕೊಡ ಕಳವು ಸಂಬಂಧ ಆಕೆ ನೀಡಿದ ದೂರಿನಿಂದಾಗಿ ಕೆಲಸ ಕೈತಪ್ಪಿದ್ದರಿಂದ ವ್ಯಗ್ರನಾಗಿದ್ದೆ ಎಂದೂ ಆತ ೊಪ್ಪಿಕೊಂಡಿರುವುದಾಗಿ ಗೋವಾ ಪೊಲೀಸ್ ವರಿಷ್ಠಾಧಿಕಾರಿ ವಿಮಲ್ ಗುಪ್ತಾ ಮಾಹಿತಿ ನೀಡಿದರು.

2016: ಚೆನ್ನೈ: ತಮಿಳುನಾಡಿನಲ್ಲಿ ಬಸ್ಸೊಂದರಲ್ಲಿ ಪ್ರಯಾಣ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಳಗ್ಗೆ ಗುಂಡಿಟ್ಟು ಕೊಲೆಗೈಯಲಾಯಿತು.  ಘಟನೆ ಸಂಭವಿಸುತ್ತಿದ್ದಂತೆಯೇ ಉಂಟಾದ ಭಯಗ್ರಸ್ತ ವಾತಾವರಣ, ಕೋಲಾಹಲದ ಮಧ್ಯೆ ಗುಂಡು ಹಾರಿಸಿದ ಇಬ್ಬರು ಆಗಂತುಕರು ಪರಾರಿಯಾಗಿದ್ದಾರೆ ಎಂದು ವರದಿಗಳು ತಿಳಿಸಿದವು. ಮದುರೈಯಿಂದ 80 ಕಿಮೀ ದೂರದ ಸತ್ತೂರಿನಲ್ಲಿ ಗುಂಡು ಹಾರಾಟದ ಘಟನೆ ಘಟಿಸಿತು. ಗುಂಡೇಟಿಗೆ ಬಲಿಯಾದ ವ್ಯಕ್ತಿ ಬಸ್ಸು ಹತ್ತುವಾಗಲೇ ಆತನನ್ನು ಹಿಂಬಾಲಿಸಿಕೊಂಡು ಹಂತಕರೂ ಬಸ್ಸು ಹತ್ತಿರಬಹುದು ಎಂದು ಪೊಲೀಸರು ಶಂಕಿಸಿದರು. ಸಾವನ್ನಪ್ಪಿರುವ ವ್ಯಕ್ತಿಯನ್ನು ಕೋವಿಲ್ಪಟ್ಟಿಯ ಕರುಪ್ಪಸಾಮಿ ಎಂಬುದಾಗಿ ಗುರುತಿಸಲಾಗಿದ್ದು, ಆತ ಬಸ್ಸಿನಲ್ಲಿ ಸುಮಾರು 25 ಕಿಮೀ ಪ್ರಯಾಣಿಸಿದ ಬಳಿಕ ಹಂತಕರು ಆತನ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದರು.

2016: ಕುಂದಾಪುರ: ಕರ್ನಾಟಕದ ಕರಾವಳಿ ಭಾಗದಲ್ಲಿ ಇಲಿಜ್ವರದ ಸಮಸ್ಯೆ ಹೆಚ್ಚುತ್ತಿದ್ದು, ಕುಂದಾಪುರ ತಾಲೂಕಿನ ಕೋಟೇಶ್ವರದ ಮಾಕೋಡು ನಿವಾಸಿಯೊಬ್ಬರು ಬೆಳಗ್ಗೆ ನಿಧನರಾದರು. ಸುಬ್ರಹ್ಮಣ್ಯ (27) ಇಲಿಜ್ವರಕ್ಕೆ ಬಲಿಯಾದ ದುರ್ದೈವಿ. ತಾಲೂಕಿನಲ್ಲಿ ಇಲಿಜ್ವರಕ್ಕೆ ಬಲಿಯಾದ ಪ್ರಕರಣಗಳ ಪೈಕಿ ಇದು ಮೂರನೆಯದು. ಸುಬ್ರಹ್ಮಣ್ಯ ಅವರು ಜ್ವರದ ಹಿನ್ನೆಲೆಯಲ್ಲಿ ಅಕ್ಟೋಬರ್ 8ರಂದು ಎನ್.ಆರ್.ಆಚಾರ್ಯ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆಪ್ತ ಮೂಲಗಳು ತಿಳಿಸಿದವು.


2016: ನವದೆಹಲಿ: ವಾಣಿಜ್ಯ ವ್ಯವಾಹರವೊಂದರಲ್ಲಿ ಮೋಸ ಮಾಡಿದ ಆರೋಪದ ಮೇಲೆ ಟೀಂ ಇಂಡಿಯಾದ ಸೀಮಿತ ಓವರ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ವಿರುದ್ಧ ಸೆಕ್ಷನ್ 420 ಅನ್ವಯ ಗುರುಗ್ರಾಮ ಪೋಲಿಸರು ಎಫ್ಐಆರ್ ದಾಖಲಿಸಿದರು. ಈ ಹಿಂದೆ ಸಾಕ್ಷಿ ಜತೆಗೆ ಇತರ ಮೂವರ ವಿರುದ್ಧ ಉದ್ಯಮಿ ಡೇನಿಸ್ ಅರೋರ ಎಂಬುವರು ಪ್ರಕರಣ ದಾಖಲಿಸಿದ್ದರು. ಸಾಕ್ಷಿ ಜತೆಗೆ ಅರುಣ್ ಪಾಂಡೆ, ಶುಭವತಿ ಪಾಂಡೆ, ಮತ್ತು ಪ್ರತಿಮಾ ಪಾಂಡೆ ಅವರು ರಿತಿ ಎಂಎಸ್ಡಿ ಅಲ್ಮೋಡೆ ಪ್ರೆವೆಟ್ ಲಿಮಿಟೆಡ್ ಕಂಪನಿಯ ಪಾಲುದಾರರಾಗಿದ್ದರು. ಡೇನಿಸ್ ಅರೋರ ಅವರು ಶೇ.39ರಷ್ಟು ಷೇರು ಹೊಂದಿರುವ ಫಿಟ್ನೆಸ್ ಸೆಂಟರ್ಗಳನ್ನು ಒಳಗೊಂಡ ಸ್ಪೋಟ್ಸ್ ರ್ಟ್ ವರ್ಲ್ಡ್ ಪ್ರೖೆವೆಟ್ ಲಿಮಿಟೆಡ್ ಕಂಪನಿಯನ್ನು ಕಳೆದ ವರ್ಷ ಖರೀದಿಸಿದ್ದರು. ವ್ಯವಹಾರದ ಅನ್ವಯ ಸಾಕ್ಷಿ ಸಹಿತ ರಿತಿ ಎಂಎಸ್ಡಿ ಅಲ್ಮೋಡೆ ಕಂಪನಿಯ ನಿರ್ದೇಶಕರು , ವರ್ಷ ಮಾರ್ಚ್ 31ರೊಳಗೆ ಅರೋರಗೆ 11ಕೋಟಿ ರೂ. ಪಾವತಿಸಬೇಕಾಗಿತ್ತು. ಆದರೆ ತಮಗೆ ಇದುವರೆಗೆ 2.25 ಕೋಟಿ ರೂ. ಮಾತ್ರ ನೀಡಲಾಗಿದೆ ಎಂದು ಅರೋರ ಆರೋಪಿಸಿದರು.  ಪ್ರಕರಣದ ಬಗ್ಗೆ ಸಾಕ್ಷಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಸಾಕ್ಷಿ ಕಳೆದ ವರ್ಷವೇ ಕಂಪನಿ ತೊರೆದಿದ್ದು, ಈಗ ಪಾಲುದಾರರಲ್ಲ.

2014: ಜಮ್ಮು : ಜಮ್ಮುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿ ಈದಿನ ನಸುಕಿನಲ್ಲಿ ಪಾಕಿಸ್ತಾನ ಸೇನೆ ಮತ್ತೆ ಗುಂಡಿನ ದಾಳಿ ನಡೆಸಿದ್ದು, ಮೂವರು ಭಾರತೀಯರು ಗಾಯಗೊಂಡರು. 15 ಗಡಿ ಠಾಣೆಗಳನ್ನು ಗುರಿಯಾಗಿರಿಸಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿತು. ಭಾರತೀಯ ಸೇನೆ ಪಾಕ್ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿತು. ಪಾಕಿಸ್ತಾನದ ರೇಂಜರ್ ಗಳು ನಸುಕಿನ  2.10ರ ಸುಮಾರಿಗೆ ಜಮ್ಮುವಿನ ಆರ್ ಎಸ್ ಪುರ ಜಿಲ್ಲೆ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಗುಂಡು ಹಾಗೂ ಷೆಲ್ ದಾಳಿ ನಡೆಸಿದ್ದು, ಮೂವರು ಗಾಯಗೊಂಡರು ಎಂದು ಗಡಿ ಭದ್ರತಾ ಪಡೆಯ ವಕ್ತಾರರು ತಿಳಿಸಿದರು. ಪ್ರಸಕ್ತ ತಿಂಗಳಲ್ಲಿ ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಗೆ ಎಂಟು ಮಂದಿ ಭಾರತೀಯರು ಮೃತರಾಗಿದ್ದಾರೆ. ಸೇನೆಯ 13 ಯೋಧರು ಸೇರಿದಂತೆ 90 ಮಂದಿ ಭಾರತೀಯರು ಗಾಯಗೊಂಡಿದ್ದಾರೆ. ಗಡಿಯಲ್ಲಿನ 113 ಹಳ್ಳಿಗಳಲ್ಲಿನ 32 ಸಾವಿರ ಜನ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

2014: ವಿಶಾಖಪಟ್ಟಣ, ಹೈದರಾಬಾದ್ : ಪ್ರತಿ ಗಂಟೆಗೆ 170ರಿಂದ 180 ಕಿ.ಮೀ. ವೇಗದಲ್ಲಿ ಬೀಸಲಾರಂಭಿಸಿದ ಭೀಕರ ಗಾಳಿ, ಮಳೆಯೊಂದಿಗೆ ‘ಹುದ್ ಹುದ್’ ಚಂಡಮಾರುತ ಆಂಧ್ರಪ್ರದೇಶ ಹಾಗೂ ಒಡಿಶಾದ ಕರಾವಳಿಗೆ ಅಪ್ಪಳಿಸಿತು. ಮಾರುತಕ್ಕೆಸಿಲುಕಿ ಐವರು ಸಾವಿಗೀಡಾದರು. ಅಬ್ಬರದ ಗಾಳಿ ಸಹಿತ ಮಳೆಯಿಂದ ವಿದ್ಯುತ್ ಮತ್ತು ದೂರವಾಣಿ ಕಂಬಗಳಿಗೆ ಹಾನಿಯಾಗಿ, ಸಂಪರ್ಕ ಕಡಿತಗೊಂಡಿತು. ಎರಡು ರಾಜ್ಯಗಳ ಕರಾವಳಿ ತೀರದ ಜನರ ಬದುಕು ಅಸ್ತವ್ಯಸ್ಥವಾಯಿತು. ಆಂಧ್ರಪ್ರದೇಶದ ಕರಾವಳಿ ತೀರದ ನಾಲ್ಕು ಜಿಲ್ಲೆಗಳಲ್ಲಿ 90,000 ಜನರನ್ನು, ಒಡಿಶಾದ ಕರಾವಳಿ ತೀರದ ಜಿಲ್ಲೆಗಳಲ್ಲಿ 68 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಕರಾವಳಿಗೆ ಅಪ್ಪಳಿಸಿದ ಚಂಡಮಾರುತಕ್ಕೆ ಆಂಧ್ರಪ್ರದೇಶದ ಕರಾವಳಿಯಲ್ಲಿ ಮೂವರು ಹಾಗೂ ಒಡಿಶಾದ ಕರಾವಳಿಯಲ್ಲಿ ಇಬ್ಬರು ಸಾವಿಗೀಡಾದರು ಎಂದು ನವದೆಹಲಿಯಲ್ಲಿ ಪ್ರಧಾನಮಂತ್ರಿ ಕಚೇರಿ ಮೂಲಗಳು ತಿಳಿಸಿದವು.

2008: ವಿಶ್ವಾದ್ಯಂತದಿಂದ ಆಗಮಿಸಿದ ಸುಮಾರು 25,000ಕ್ಕೂ ಹೆಚ್ಚು ಭಾರತೀಯರ ಸಮ್ಮುಖದಲ್ಲಿ ಕೇರಳದ ಕೊಟ್ಟಾಯಂನ ಕ್ರೈಸ್ತ ಸನ್ಯಾಸಿನಿ ದಿವಂಗತ ಅಲ್ಫೋನ್ಸಾ ಅವರನ್ನು ಕ್ಯಾಥೋಲಿಕ್ ಚರ್ಚಿನ ಭಾರತದ ಮೊದಲ ಮಹಿಳಾ ಸಂತರನ್ನಾಗಿ ವ್ಯಾಟಿಕನ್ನಿನಲ್ಲಿ ಅಧಿಕೃತವಾಗಿ ಘೋಷಿಸಲಾಯಿತು. ವ್ಯಾಟಿಕನ್ ಸಿಟಿಯ ಸೇಂಟ್ ಪೀಟರ್ ಚೌಕದಲ್ಲಿ ನಡೆದ ಸಮಾರಂಭದಲ್ಲಿ 16 ನೇ ಪೋಪ್ ಬೆನೆಡಿಕ್ಟ್ ಅವರು ಅಲ್ಫೋನ್ಸಾ ಅವರಿಗೆ ಸಂತ ಗೌರವ ನೀಡಿದರು. ಸಿಸ್ಟರ್ ಅಲ್ಫೋನ್ಸಾ ಅಲ್ಲದೇ ಇಟಲಿ ಮೂಲದ ಗಟನೊ ಎರಿಕೊ, ಸ್ವಿಜರ್ಲ್ಯಾಂಡಿನ ಮೇರಿ ಬರ್ನಾರ್ಡ್ ಹಾಗೂ ಇಕ್ವೆಡಾರಿನ ನಾರ್ಸಿನಾ ಡಿ ಜೀಸಸ್ ಮಾರ್ಟಿಲೋ ಮೊರನ್ ಅವರಿಗೂ ಸಂತ ಗೌರವ ನೀಡಲಾಯಿತು. ಸಿಸ್ಟರ್ ಅಲ್ಫೋನ್ಸಾ ಅವರು ತಮ್ಮ 36ರ ಹರೆಯದಲ್ಲಿಯೇ ಇಹ ಲೋಕ ತ್ಯಜಿಸಿದ್ದರು. ಸುಮಾರು 50ಕ್ಕೂ ಹೆಚ್ಚು ವರ್ಷಗಳ ಕಾಲ ಅಲ್ಫೋನ್ಸಾ ಅವರ ಬದುಕು ಹಾಗೂ ಸೇವೆಗಳನ್ನು ಪರಿಶೀಲಿಸಿದ ಬಳಿಕ ವ್ಯಾಟಿಕನ್ ಚರ್ಚಿನ ಮಹೋನ್ನತ ಗೌರವವಾದ  ಸಂತ ಪದವಿಯನ್ನು ಅವರಿಗೆ ನೀಡಿತು. 2007ರ ಜೂನ್ 1ರಲ್ಲಿ ಅಲ್ಫೋನ್ಸಾ ಅವರನ್ನು ಪೋಪ್ ಬೆನೆಡಿಕ್ಟ್ ಅವರು ಸಂತ ಗೌರವಕ್ಕೆ ಆಯ್ಕೆ ಮಾಡಿದ್ದರು. ಅಲ್ಫೋನ್ಸಾ ಅವರು ಸಂತ ಗೌರವ ಪಡೆದ 2ನೇ ಭಾರತೀಯ ಸನ್ಯಾನಿಸಿ. ಇದಕ್ಕೂ ಮೊದಲು (19ನೇ ಶತಮಾನ) ಮುಂಬೈ ಮೂಲದ ಗೊನ್ಸಾಲೊ ಗಾರ್ಸಿಯಾ ಅವರಿಗೆ ಸಂತ ಗೌರವ ನೀಡಲಾಗಿತ್ತು.

2008: ಆಂಧ್ರದ ಅದಿಲಾಬಾದ್ ಜಿಲ್ಲೆ ಭೈನ್ಸಾ ಪಟ್ಟಣದಲ್ಲಿ ದುರ್ಗಾ ಮೂರ್ತಿಗಳ ವಿಸರ್ಜನೆ ವೇಳೆ ನಡೆದ ಕೋಮು ಗಲಭೆಯಲ್ಲಿ ನಾಲ್ವರು ಮೃತರಾದರು. ಈ ಪಟ್ಟಣದ ಸಮೀಪದ ವಟೋಲಿ ಗ್ರಾಮದಲ್ಲಿ ದುಷ್ಕರ್ಮಿಗಳು ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ ಮೂವರು ಮಕ್ಕಳ ಸಹಿತ ಒಂದೇ ಕುಟುಂಬದ 6 ಮಂದಿ ಈದಿನ ಸಜೀವ ದಹನಗೊಂಡರು.

2008: ಆರನೇ ಬಾಹ್ಯಾಕಾಶ ಪ್ರವಾಸಿ ಸೇರಿದಂತೆ ಮೂವರ ತಂಡವನ್ನು ಹೊತ್ತ ರಷ್ಯಾದ ಕ್ಷಿಪಣಿ ವಾಹಕ ಸೋಯಜ್- ಎಫ್ ಜಿ ಕಜಕಸ್ಥಾನದ ಬೈಕನೂರ್ ಬಾಹ್ಯಾಕಾಶ ಕೇಂದ್ರದಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ (ಐಎಸ್ಎಸ್) ಹಾರಿತು. ಮೂರು ಹಂತದ ಈ ವಾಹಕವು ಪೂರ್ವ ನಿಗದಿಯಂತೆ ಬೆಳಗ್ಗೆ 11.0 ಕ್ಕೆ (ಮಾಸ್ಕೊ ಕಾಲಮಾನ) ಗಗನನೌಕೆ ಸೋಯಜ್ ಟಿಎಂಎ- 12 ನೊಂದಿಗೆ ಗಗನಕ್ಕೆ ಏರಿತು. ಈ 18ನೇ ಬಾಹ್ಯಾಕಾಶ ಪ್ರಯಾಣಕ್ಕೆ ನಿಗದಿಯಾದ ಸೋಯಜ್ ನೌಕೆಯನ್ನು ಇಳಿಸಿಕೊಳ್ಳಲು ಅನುವಾಗುವಂತೆ ಅಕ್ಟೋಬರ್ 4ರಂದು ವಿಶ್ವದ ಏಕೈಕ ಕಕ್ಷೆಗಾಮಿಯನ್ನು ಯಶಸ್ವಿಯಾಗಿ ಉನ್ನತ ಕಕ್ಷೆಗೆ ಕಳುಹಿಸಲಾಗಿತ್ತು.

2007: ಭಾರತೀಯ ವಿಜ್ಞಾನಿ ಆರ್. ಕೆ. ಪಚೌರಿ ನೇತೃತ್ವದ ಐಪಿಸಿಸಿ ಮತ್ತು ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್ ಗೋರ್ ಅವರಿಗೆ 2007ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಯಿತು. ವಿಶ್ವಸಂಸ್ಥೆಯ ಅಂಗಸಂಸ್ಥೆಯಾಗಿರುವ ಐಪಿಸಿಸಿಯಲ್ಲಿ 130 ದೇಶಗಳ ಮೂರು ಸಾವಿರಕ್ಕೂ ಹೆಚ್ಚು ಹವಾಮಾನ ತಜ್ಞರು, ಸಾಗರ ವಿಜ್ಞಾನಿಗಳು, ಆರ್ಥಿಕ ತಜ್ಞರಿದ್ದಾರೆ. ವಿಶ್ವ ಹವಾಮಾನ ಬದಲಾವಣೆ ಮತ್ತು ಅದರ ದುಷ್ಪರಿಣಾಮಗಳ ಬಗ್ಗೆ ಕೆಲಸ ಮಾಡುತ್ತಿರುವ ವಿಶ್ವದ ಮುಂಚೂಣಿ ಸಂಸ್ಥೆ ಇದು. ಟಾಟಾ ಶಕ್ತಿ ಸಂಶೋಧನಾ ಸಂಸ್ಥೆಯ (ಟೆರಿ) ಮಹಾನಿರ್ದೇಶಕರೂ ಆಗಿರುವ ಪಚೌರಿ ಅವರು, `ಈ ಪ್ರಶಸ್ತಿಯಿಂದಾಗಿ ಹವಾಮಾನ ಬದಲಾವಣೆಯ ವಿಷಯ ಇನ್ನಷ್ಟು ಮಹತ್ವ ಪಡೆಯಲಿದೆ. ಸಂಸ್ಥೆಯ ಪ್ರತಿಯೊಬ್ಬರೂ ಇದಕ್ಕೆ ಭಾಜನರು' ಎಂದು ಹರ್ಷ ವ್ಯಕ್ತಪಡಿಸಿದರು. ವಿಜೇತರು ರೂ. 15.4 ಲಕ್ಷ ಡಾಲರ್ (ಸುಮಾರು 6 ಕೋಟಿ ರೂಪಾಯಿ) ನಗದು ಪಡೆಯಲಿದ್ದು ಇದನ್ನು ಸಮಾನವಾಗಿ ಹಂಚಲಾಗುತ್ತದೆ.

2007: ವಿಶ್ವಕಂಡ ಶ್ರೇಷ್ಠ ಬ್ಯಾಟ್ಸ್ ಮನ್ನರಲ್ಲಿ ಒಬ್ಬರು ಎನಿಸಿದ ಪಾಕಿಸ್ಥಾನ ತಂಡದ ಇಂಜಮಾಮ್ ಉಲ್ ಹಕ್ ಈದಿನ ಲಾಹೋರಿನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟಿಗೆ `ಗುಡ್ಬೈ' ಹೇಳಿದರು. ಲಾಹೋರಿನಲ್ಲಿ ನಡೆದ ಪಂದ್ಯದಲ್ಲಿ ಕೊನೆಯ ಇನಿಂಗ್ಸಿನಲ್ಲಿ ಕೇವಲ ಎರಡು ಎಸೆತ ಎದುರಿಸುವುದರೊಂದಿಗೆ ಇಂಜಮಾಮ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಒಡನಾಟ ಅಂತ್ಯಗೊಂಡಿತು. ತಮ್ಮ ಜೀವನದ ಕೊನೆಯ ಇನಿಂಗ್ಸಿನಲ್ಲಿ ಅವರು ಗಳಿಸಿದ್ದು ಕೇವಲ 3 ರನ್. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಅಂತಿಮ ದಿನ ಅವರು ಪಾಲ್ ಹ್ಯಾರಿಸ್ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಮೊದಲ ಇನಿಂಗ್ಸಿನಲ್ಲಿ 14 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಈ ಟೆಸ್ಟ್ ಡಾ ಆಗಿ ಕೊನೆಗೊಂಡಿತು. 1992ರಲ್ಲಿ ಬರ್ಮಿಂಗ್ ಹ್ಯಾಮಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಜಮಾಮ್ ಪದಾರ್ಪಣೆ ಮಾಡಿದ್ದರು. ಟೆಸ್ಟಿನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಾಕ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲು ಅವರಿಗೆ ಕೇವಲ 3 ರನ್ನುಗಳ ಅವಶ್ಯಕತೆ ಇತ್ತು. ಆದರೆ ಅದನ್ನು ಸಾಧಿಸಲು ಇಂಜಿಗೆ ಕೊನೆಗೂ ಸಾಧ್ಯವಾಗಲಿಲ್ಲ. ಜಾವೇದ್ ಮಿಯಾಂದಾದ್ ಅವರು 8832 ರನ್ ಪೇರಿಸಿದ್ದು, ಅದು ಈಗ ಇರುವ ದಾಖಲೆ. 120 ಟೆಸ್ಟ್ ಪಂದ್ಯಗಳಲ್ಲಿ ಪಾಕ್ ತಂಡವನ್ನು ಪ್ರತಿನಿದಿಸಿದ್ದ ಇಂಜಮಾಮ್ 50.07 ಸರಾಸರಿಯಲ್ಲಿ 8830 ರನ್ ಪೇರಿಸಿದ್ದಾರೆ. ಈ ಅವಧಿಯಲ್ಲಿ 25 ಶತಕ ಹಾಗೂ 46 ಅರ್ಧ ಶತಕ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ಹೊರತುಪಡಿಸಿ ಟೆಸ್ಟ್ ಆಡುವ ಎಲ್ಲ ದೇಶಗಳ ವಿರುದ್ಧ ಶತಕ ಗಳಿಸಿದ ಗೌರವವನ್ನು ಇಂಜಿ ಹೊಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಗಳಿಸಿದ 329 ರನ್ ಅತ್ಯಧಿಕ ಸ್ಕೋರ್. ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಹೆಗ್ಗಳಿಕೆ ಅವರದು. 37 ವರ್ಷ ವಯಸ್ಸಿನ ಎಡಗೈ ಬ್ಯಾಟ್ಸ್ಮನ್ ಕೆರಿಬಿಯನ್ ವಿಶ್ವಕಪ್ ಚಾಂಪಿಯನ್ ಶಿಪ್ ಬಳಿಕ ಏಕದಿನ ಕ್ರಿಕೆಟಿಗೆ ನಮಸ್ಕಾರ ಹೇಳಿದ್ದರು. 378 ಪಂದ್ಯಗಳಿಂದ ಅವರು 11739 ರನ್ ಗಳಿಸಿದ್ದಾರೆ. ಇಂಜಿ ಅವರ ಅರ್ಧ ಶತಕದ (83) ವಿಶ್ವದಾಖಲೆಯನ್ನು ಸಚಿನ್ ತೆಂಡೂಲ್ಕರ್ ಆಸ್ಟ್ರೇಲಿಯಾ ವಿರುದ್ಧ ಚಂಡೀಗಡದಲ್ಲಿ ನಡೆದ ಪಂದ್ಯದಲ್ಲಿ ಅಳಿಸಿಹಾಕಿದರು.

2007: ರಕ್ತ ಕ್ಯಾನ್ಸರಿನಿಂದ ಬಳಲುತ್ತಿದ್ದ ಮ್ಯಾನ್ಮಾರ್ ಪ್ರಧಾನಿ ಸೋ ವಿನ್(59) ಅವರು ಯಾಂಗೂನಿನ ಆಸ್ಪತ್ರೆಯಲ್ಲಿ ನಿಧನರಾದರು.

2007: ಬ್ರಿಟನ್ನಿನ ಐಷಾರಾಮಿ ಹೋಟೆಲ್ ಕ್ಲಾರಿಜ್ಸ್ ಮುಂದಿನ ತಿಂಗಳಿಂದ ವಿಶ್ವದಲ್ಲಿಯೇ ಅತ್ಯಂತ ದುಬಾರಿಯಾದ ಕುಡಿವ ನೀರನ್ನು ತನ್ನ ಗ್ರಾಹಕರಿಗೆ ನೀಡಲಿದೆ ಎಂದು ಹೊಟೇಲ್ ಈದಿನ ಪ್ರಕಟಿಸಿತು. ಈ ನೀರಿನ ಬೆಲೆ ಲೀಟರಿಗೆ 50 ಪೌಂಡ್ (ಸುಮಾರು 4 ಸಾವಿರ ರೂಪಾಯಿ). ಭಾರತದ ನೀಲಗಿರಿ ಬೆಟ್ಟಗಳ ನೀರು ಸೇರಿದಂತೆ 30 ವಿವಿಧ ಬ್ರಾಂಡುಗಳ ನೀರಿನಲ್ಲಿ ಗ್ರಾಹಕ ಯಾವುದನ್ನಾದರೂ ಆಯ್ಕೆ ಮಾಡಿಕೊಳ್ಳಬಹುದು.

2007: ಚಿಕ್ಕ ರಾಷ್ಟ್ರವಾದರೂ ಜಪಾನ್ ತಾಂತ್ರಿಕತೆಯಲ್ಲಿ ಎತ್ತಿದ ಕೈ. ಆದರೆ ಎಷ್ಟೇ ಅತ್ಯಾಧುನಿಕ ತಂತ್ರಜ್ಞಾನವಾದರೂ ಕೆಲವೊಮ್ಮೆ ಕೈಕೊಡುತ್ತದೆ. ಅದಕ್ಕೊಂದು ತಾಜಾ ನಿದರ್ಶನ ರಾಜಧಾನಿ ಟೋಕಿಯೊದಲ್ಲಿ ಈದಿನ ನಡೆಯಿತು. ಟೋಕಿಯೋದ (ಕ್ಯೋಡೊ) ಸುಮಾರು 400 ರೈಲ್ವೆ ನಿಲ್ದಾಣಗಳಲ್ಲಿ ಅತ್ಯಾಧುನಿಕ ಸ್ವಯಂಚಾಲಿತ ಟಿಕೆಟ್ ಕೌಂಟರುಗಳಿವೆ. ಇಲ್ಲಿ ಟಿಕೆಟ್ ಪಡೆದರೆ ಮಾತ್ರ ಪ್ರಯಾಣಿಸಲು ಸಾಧ್ಯ. ಈದಿನ ಈ ಎಲ್ಲ ಕೌಂಟರುಗಳೂ ಕೆಟ್ಟು ನಿಂತವು. ಎಲ್ಲ ನಿಲ್ದಾಣಗಳಲ್ಲಿ ಏಕಕಾಲಕ್ಕೆ ಕೌಂಟರುಗಳು ಕೈಕೊಟ್ಟದ್ದು ಇದೇ ಮೊದಲು. ಬೆಳಿಗ್ಗೆ ಕಚೇರಿಗಳಿಗೆ ಹೊರಟ ಪ್ರಯಾಣಿಕರು ಪರದಾಡುವಂತಾಯಿತು. ಕೊನೆಗೆ ಅವರ ಒತ್ತಡಕ್ಕೆ ಮಣಿದ ಸರ್ಕಾರಿ ಹಾಗೂ ಖಾಸಗಿ ರೈಲ್ವೆ ಸಂಸ್ಥೆಗಳು ಕೆಲವು ಮಾರ್ಗಗಳಲ್ಲಿ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಟ್ಟವು.

2007: ಮೀಟರ್ ಗೇಜ್ ರೈಲು ಸಂಚಾರದ ಕೊನೆಯ ಕೊಂಡಿಯಾಗಿ ಉಳಿದುಕೊಂಡಿದ್ದ ಬಾಗಲಕೋಟೆ- ಗದಗ ಪ್ಯಾಸೆಂಜರ್ ರೈಲು ಈದಿನ ತನ್ನ ಕೊನೆಯ ಸಂಚಾರದೊಂದಿಗೆ ಇತಿಹಾಸದ ಪುಟ ಸೇರಿತು. ನೂರಾರು ವರ್ಷಗಳಿಂದ ಜನರೊಂದಿಗೆ ಭಾವನಾತ್ಮಕ ಸಂಬಂಧ ಬೆಸೆದುಕೊಂಡಿದ್ದ ಮೀಟರ್ ಗೇಜ್ ರೈಲನ್ನು ಈದಿನ ಸಂಜೆ ಬಾಗಲಕೋಟೆ ರೈಲು ನಿಲ್ದಾಣದ ಸಿಬ್ಬಂದಿ ಹಾಗೂ ಸ್ಥಳೀಯ ಜನರು ಬೀಳ್ಕೊಟ್ಟರು. ಸಂಜೆ 5.45ಕ್ಕೆ ಗದುಗಿಗೆ ಹೋಗುವ ರೈಲಿಗೆ ಪೂಜೆ ನೆರವೇರಿಸಿದ ರೈಲ್ವೆ ಸಿಬ್ಬಂದಿ ಆರತಿ ಮಾಡುವ ಮೂಲಕ ಕೊನೆಯ ಗಾಡಿಗೆ ಹೃದಯಸ್ಪರ್ಶಿ ವಿದಾಯ ಹೇಳಿದರು. ವಿಜಾಪುರ-ಗದಗ ನಡುವಿನ ಮೀಟರ್ ಗೇಜ್ ಅನ್ನು ಬ್ರಾಡ್ ಗೇಜಿಗೆ ಪರಿವರ್ತಿಸುವ ಹಿನ್ನೆಲೆಯಲ್ಲಿಮೀಟರ್ ಗೇಜ್ ರೈಲು ಸಂಚಾರವನ್ನು ರೈಲ್ವೆ ಇಲಾಖೆ ಸ್ಥಗಿತಗೊಳಿಸಿತು. ರಾಜ್ಯದ ಸಂಸದ ಸಿ.ಕೆ. ಜಾಫರ್ ಷರೀಫ್ ಕೇಂದ್ರ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ ಸೋಲಾಪುರ-ಗದಗ ನಡುವಿನ ಮೀಟರ್ ಗೇಜ್ ನ್ನು ಬ್ರಾಡ್ ಗೇಜ್ ಗೆ ಪರಿವರ್ತಿಸುವ 318 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ಸಂಸತ್ 1992-93 ರಲ್ಲಿ ಒಪ್ಪಿಗೆ ನೀಡಿತ್ತು. 318 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ 1999ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು ಆದರೆ ಅನಗತ್ಯ ವಿಳಂಬದಿಂದಾಗಿ ಇದುವರೆಗೆ ಪೂರ್ಣಗೊಂಡಿಲ್ಲ. ಸೊಲ್ಲಾಪುರದಿಂದ ವಿಜಾಪುರದವರೆಗಿನ ಗೇಜ್ ಪರಿವರ್ತನೆ ಪೂರ್ಣಗೊಂಡಿದ್ದು, ಬಾಗಲಕೋಟೆ-ಗದಗ ನಡುವಿನ 98 ಕಿಲೋ ಮೀಟರ್ ಕಾಮಗಾರಿ ಮಾತ್ರ ಬಾಕಿ ಉಳಿದಿದೆ. ಹತ್ತು ವರ್ಷಗಳ ವಿಳಂಬದಿಂದ ಇದರ ವೆಚ್ಚ 318 ಕೋಟಿಯಿಂದ 778 ಕೋಟಿ ರೂಪಾಯಿಗೆ ಏರಿದೆ.

2007: ಬೃಹತ್ ಬೆಂಗಳೂರು ಮಹಾನಗರಪಾಲಿಕೆಯು ಒಳಚರಂಡಿ ಹಾಗೂ ಮಳೆ ನೀರು ಮೋರಿಗಳ ಅತ್ಯುತ್ತಮ ನಿರ್ವಹಣೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆಯಿತು. ನವದೆಹಲಿಯಲ್ಲಿ ನಡೆದ `ನರ್ಮ್' ಯೋಜನೆಯ ರಾಷ್ಟ್ರೀಯ ಸಮಾವೇಶದಲ್ಲಿ ಪಾಲಿಕೆ ಆಯುಕ್ತ ಡಾ. ಎಸ್. ಸುಬ್ರಹ್ಮಣ್ಯ ಅವರು ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ ರೆಡ್ಡಿ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ನವೀಕರಣ ಯೋಜನೆಯ (ನರ್ಮ್) ಅಡಿಯಲ್ಲಿ ಸ್ಥಾಪಿಸಲಾಗಿರುವ ಈ ಪ್ರಶಸ್ತಿಯನ್ನು ಪೌರಸೇವೆ, ಒಳಚರಂಡಿ ಮತ್ತು ಮಳೆ ನೀರಿನ ಮೋರಿಗಳ ಸಮರ್ಪಕ ಕಾರ್ಯ ನಿರ್ವಹಣೆಗಾಗಿ ನೀಡಲಾಗುತ್ತದೆ. ಮಹಾನಗರದಲ್ಲಿ ಈ ಬಾರಿ ಸುಮಾರು 200 ಮಿ.ಮೀ ಮಳೆಯು ಮೂರು ದಿನಗಳ ಕಾಲ ಸುರಿದಾಗ ನಗರ ಜೀವನ ಅಸ್ತವ್ಯಸ್ತವಾಗದಂತೆ ಕೂಡಲೇ ಕಾರ್ಯೋನ್ಮುಖಗೊಂಡ ಪಾಲಿಕೆ ಒಳಚರಂಡಿ ಮತ್ತು ಮೋರಿಗಳ ಕಾರ್ಯವನ್ನು ದಕ್ಷವಾಗಿ ನಿಭಾಯಿಸಿದ್ದಕ್ಕಾಗಿ ಈ ಪ್ರಶಸ್ತಿ ಲಭಿಸಿತು.

2006: ಸಾಹಿತ್ಯಕ್ಕಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಗೆ ಪ್ರಸ್ತುತ ಸಾಲಿನಲ್ಲಿ ಟರ್ಕಿಯ ಹೆಸರಾಂತ ಲೇಖಕ ಓರನ್ ಪಾಮುಖ್ ಆಯ್ಕೆಯಾದರು.

2006: ನ್ಯೂಯಾರ್ಕಿನ ಮ್ಯಾನ್ ಹಟನ್ನಿನ 52 ಮಹಡಿಗಳ ಗಗನಚುಂಬಿ ಕಟ್ಟಡಕ್ಕೆ ಡಿಕ್ಕಿ ಹೊಡೆದ ನಾಲ್ಕು ಆಸನಗಳ ವಿಮಾನದಲ್ಲಿ ಮೃತರಾದ ಇಬ್ಬರನ್ನು ಖ್ಯಾತ ಬೇಸ್ಬಾಲ್ ಆಟಗಾರ ಕೊರಿ ಲಿಡ್ಲಿ (34) ಮತ್ತು ವಿಮಾನ ಚಾಲನೆಯ ತರಬೇತುದಾರ ಎಂದು ಗುರುತಿಸಲಾಯಿತು. ನಾಲ್ಕು ಆಸನಗಳ ಈ ಪುಟ್ಟ ವಿಮಾನ ಅಕ್ಟೋಬರ್ 11ರಂದು ಗಗನಚುಂಬಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿತ್ತು.

2006: ಭಾರತದ ಮೊತ್ತ ಮೊದಲ ಕ್ರಾಲ್ ತಂತ್ರಜ್ಞಾನವನ್ನು ಮಾಹಿತಿ ತಂತ್ರಜ್ಞಾನ ಸೇವೆಯಲ್ಲಿ ಮುಂಚೂಣಿಯಲ್ಲಿ ಇರುವ ಗುರೂಜಿ ಡಾಟ್ ಕಾಮ್ ಮಾರುಕಟ್ಟೆಗೆ ಪರಿಚಯಿಸಿತು. ಸೀಕ್ವೋವಿಯಾ ಕ್ಯಾಪಿಟಲ್ ಇಂಡಿಯಾ ನೇತೃತ್ವದ ಗುರೂಜಿ ಡಾಟ್ ಕಾಮ್ ದೇಶೀಯ ಗ್ರಾಹಕರನ್ನು ಗಮನದಲ್ಲಿ ಇಟ್ಟುಕೊಂಡು ದೇಶದ ಈ ಪ್ರಪ್ರಥಮ ಸರ್ಚ್ ಎಂಜಿನನ್ನು ಬಿಡುಗಡೆ ಮಾಡಿತು.

2006: ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ (ಭಾರತ ಸಂಚಾರ ನಿಗಮ ನಿಯಮಿತ ) 1.16 ಕೋಟಿಗೂ ಹೆಚ್ಚಿನ ತನ್ನ ಸ್ಥಿರ ದೂರವಾಣಿ ಚಂದಾದಾರರಿಗೆ ಬಾಡಿಗೆ ಮಾಸಿಕ 225 ರೂಪಾಯಿಗಳಿಂದ ರೂ. 180ಕ್ಕೆ ಇಳಿಕೆ, ಉಚಿತ ಕರೆಗಳ ದ್ವಿಗುಣ ಸವಲತ್ತುಗಳ ಜೊತೆಗೆ ಎಸ್ ಟಿಡಿ ಕರೆ ದರವನ್ನೂ ನಿಮಿಷಕ್ಕೆ ಕೇವಲ ಒಂದು ರೂಪಾಯಿಗೆ ಇಳಿಸುವ ಮೂಲಕ ದೀಪಾವಳಿ ಕೊಡುಗೆ ನೀಡಿತು.ದೇಶಾದ್ಯಂತದ ಮಾಸಿಕ 180 ರೂಪಾಯಿ ಅಥವಾ ಅದಕ್ಕೂ ಹೆಚ್ಚು ಬಾಡಿಗೆ ಪಾವತಿ ಮಾಡುವ ಎಲ್ಲ ಸ್ಥಿರ ದೂರವಾಣಿ ಚಂದಾದಾರರನ್ನೂ `ಒನ್ ಇಂಡಿಯಾ' ಯೋಜನೆಯ ಅಡಿಯಲ್ಲಿ ತಂದು ಅವರಿಗೆ ಒಂದು ರೂಪಾಯಿಗೆ ಮೂರು ನಿಮಿಷಗಳ ಸ್ಥಳೀಯ ಕರೆ ಹಾಗೂ ಒಂದು ರೂಪಾಯಿಗೆ ಒಂದು ನಿಮಿಷದ ಎಸ್ಟಿಡಿ ಕರೆ ಅವಕಾಶವನ್ನು ಅದು ಕಲ್ಪಿಸಿಕೊಟ್ಟಿತು. ಹೊಸ ದರಗಳು ನವೆಂಬರ್ 1ರಿಂದ ಜಾರಿಗೆ ಬರುವುದಾಗಿ ಬಿಎಸ್ಸೆನ್ನೆಲ್ ಮುಖ್ಯ ಆಡಳಿತ ನಿರ್ದೇಶಕ (ಸಿಎಂಡಿ) ಎ.ಕೆ. ಸಿನ್ಹ ಅವರು ನವದೆಹಲಿಯಲ್ಲಿಪ್ರಕಟಿಸಿದರು.

2001: ವಿಶ್ವ ಸಂಸ್ಥೆ ಮತ್ತು ವಿಶ್ವಸಂಸ್ಥೆ ಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಜಂಟಿಯಾಗಿ ಈ ಶತಮಾನದ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಗೆದ್ದುಕೊಂಡರು. ಜಾಗತಿಕ ಸೌಹಾರ್ದ ವೃದ್ಧಿಗಾಗಿ ಮಾಡಿದ ಕೆಲಸ ಹಾಗೂ ಜಾಗತಿಕ ಶಾಂತಿಯ ನಿಟ್ಟಿನಲ್ಲಿ ವಿಶ್ವಸಂಸ್ಥೆಯ ಪಾತ್ರಕ್ಕೆ ಒತ್ತು ನೀಡಿದ್ದಕ್ಕಾಗಿ ಈ ಪ್ರಶಸ್ತಿಗಳು ಬಂದವು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯೊಬ್ಬರು ವಿಶ್ವಸಂಸ್ಥೆ ಜೊತೆಗೆ ಪ್ರಶಸ್ತಿ ಹಂಚಿಕೊಂಡದ್ದು ಇದೇ ಪ್ರಥಮ.

1999: ಜನರಲ್ ಪರ್ವೇಜ್ ಮುಷರಫ್ ನೇತೃತ್ವದಲ್ಲಿ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಅವರ ಚುನಾಯಿತ ಸರ್ಕಾರವನ್ನು ಪಾಕಿಸ್ತಾನದ ಸೇನೆಯು ಕಿತ್ತೊಗೆಯಿತು.

1984: ಕನ್ಸರ್ ವೇಟಿವ್ ಪಕ್ಷದ ಸಮ್ಮೇಳನ ಸಂದರ್ಭದಲ್ಲಿ ಬ್ರಿಟಿಷ್ ಸಚಿವ ಸಂಪುಟವನ್ನೇ ಬಲಿ ತೆಗೆದುಕೊಳ್ಳುವ ಯತ್ನವಾಗಿ ಐರಿಷ್ ರಿಪಬ್ಲಿಕನ್ ಸೇನೆಯು ಬ್ರೈಟನ್ನಿನ ಗ್ರ್ಯಾಂಡ್ ಹೋಟೆಲ್ ಮೇಲೆ ಬಾಂಬ್ ಎಸೆಯಿತು.

1967: ಭಾರತೀಯ ಸಮಾಜವಾದಿ ನಾಯಕ ಡಾ. ರಾಮ್ ಮನೋಹರ್ ಲೋಹಿಯಾ (1910-1967) ಅವರು ನವದೆಹಲಿಯಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ನಿಧನರಾದರು. ಕಾಂಗ್ರೆಸ್ ಸೋಶಿಯಲಿಸ್ಟ್ ಪಕ್ಷದ ಹಿಂದಿನ ಸ್ಫೂರ್ತಿಯಾಗಿದ್ದ ಲೋಹಿಯಾ ವಿದ್ವಾಂಸರೂ, ಅತ್ಯದ್ಭುತ ಸಂಸದೀಯ ಪಟುವೂ ಆಗಿದ್ದರು. ಭಾರತದಲ್ಲಿನ ರಾಜಮನೆತನಗಳ ಮಧ್ಯೆ ಹಂಚಿಹೋಗಿದ್ದ ರಾಜ್ಯಗಳನ್ನು ಏಕೀಕೃತಗೊಳಿಸುವ ಯೋಚನೆಯನ್ನು ಮೊದಲು ಬಿತ್ತಿದ್ದೇ ಲೋಹಿಯಾ. ನಂತರ ಅದನ್ನು ಸರ್ದಾರ ಪಟೇಲ್ ಕೈಗೆತ್ತಿಕೊಂಡರು.

1931: ವಾಗ್ಮಿ, ಸಾಹಿತಿ, ನಾಟಕಕಾರ ಡಾ. ವಸಂತ ಕವಲಿ (12-10-1931ರಿಂದ 17-11-1988) ಅವರು ಚೆನ್ನಬಸಪ್ಪ ಎಲ್ಲಪ್ಪ ಕವಲಿ- ಗೌರಮ್ಮ ದಂಪತಿಯ ಮಗನಾಗಿ ಬ್ಯಾಡಗಿಯಲ್ಲಿ ಜನಿಸಿದರು.

1911: ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿಜಯ್ ಮರ್ಚೆಂಟ್ (1911-1987) ಜನ್ಮದಿನ.

1858: ಐಸಾಕ್ ನ್ಯೂಟನ್ ಲೆವಿಸ್ (1858-1931) ಜನ್ಮದಿನ. ಅಮೆರಿಕದ ಸೇನಾ ಅಧಿಕಾರಿಯಾಗಿದ್ದ ಈತ ಲೆವಿಸ್ ಮೆಷಿನ್ ಗನ್ ಸಂಶೋಧಕ. ಈ ಮೆಷಿನ್ ಗನ್ ಮೊದಲನೆಯ ಜಾಗತಿಕ ಸಮರ ಕಾಲದಲ್ಲಿ ವ್ಯಾಪಕವಾಗಿ ಬಳಕೆಯಾಯಿತು.

No comments:

Post a Comment