Monday, October 1, 2018

ಇಂದಿನ ಇತಿಹಾಸ History Today ಅಕ್ಟೋಬರ್ 01

ಇಂದಿನ ಇತಿಹಾಸ History Today ಅಕ್ಟೋಬರ್  01
2018: ಸ್ಟಾಕ್ ಹೋಮ್: ಶರೀರಶಾಸ್ತ್ರ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗುವ ನೊಬೆಲ್ ಪ್ರಶಸ್ತಿಯನ್ನು ೨೦೧೮ರ ಸಾಲಿನಲ್ಲಿ ಕ್ಯಾನ್ಸರ್ ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಅಮೆರಿಕ ಮತ್ತು ಜಪಾನಿನ ಪ್ರತಿರಕ್ಷಾ ವಿಜ್ಞಾನಿಗಳು ಹಂಚಿಕೊಂಡರು. ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯದ ಜೇಮ್ಸ್ ಪಿ. ಅಲ್ಲಿಸನ್ ಮತ್ತು ಜಪಾನಿನ ಕ್ಯೋಟೋ ವಿಶ್ವ ವಿದ್ಯಾಲಯದ ತಸುಕು ಹೊಂಜೊ ಅವರಿಗೆ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಬಹುದಾದ ಚಿಕಿತ್ಸಾ ಪದ್ಧತಿಯನ್ನು ಸಂಶೋಧಿಸಿದ್ದಕ್ಕಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೀಡಲಾಗುವ ೨೦೧೮ರ ಸಾಲಿನ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಯಿತು. ೯ ದಶಲಕ್ಷ ಕ್ರೋನರ್ (.೦೧ ದಶಲಕ್ಷ ಡಾಲರ್) ಮೊತ್ತದ ಪ್ರಶಸ್ತಿಯನ್ನು ಸ್ವೀಡನ್ನಿನ ಕರೊಲಿನ್ಸ್ಕಾ  ಇನ್ಸ್ಟಿಟ್ಯೂಟ್ ನೊಬೆಲ್ ಅಸೆಂಬ್ಲಿಯು ಈದಿನ ಪ್ರಕಟಿಸಿತು.  ‘ಕ್ಯಾನ್ಸರ್ ಲಕ್ಷಾಂತರ ಮಂದಿಯನ್ನು ಪ್ರತಿವರ್ಷವೂ ಕೊಲ್ಲುತ್ತಿದೆ. ಇದು ಮಾನವತೆಯು ಎದುರಿಸುತ್ತಿರುವ ಅತಿದೊಡ್ಡ ಸವಾಲು. ಕ್ಯಾನ್ಸರ್ ಕೋಶಗಳ ಮೇಲೆ ದಾಳಿನಡೆಸಲು ಸಶಕ್ತವಾಗುವಂತೆ ನಮ್ಮ ಪ್ರತಿರಕ್ಷಾ ವ್ಯವಸ್ಥೆಯನ್ನು (ಇಮ್ಯೂನ್ ಸಿಸ್ಟಮ್) ಆಂತರಿಕವಾಗಿ ಬಲಗೊಳಿಸುವ ಮೂಲಕ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ವಿಧಾನವನ್ನು ಸಂಶೋಧಿಸುವ ಮೂಲಕ ಉಭಯ ಸಂಶೋಧಕರೂ ಮಹತ್ವದ ಕಾಣಿಕೆ ನೀಡಿದ್ದಾರೆಎಂದು ಅಕಾಡೆಮಿ ಹೇಳಿಕೆ ತಿಳಿಸಿತು. ಉಭಯ ಸಂಶೋಧಕರೂ ಪ್ರತಿರಕ್ಷಾ ವ್ಯವಸ್ಥೆಯನ್ನು ಬಲ ಪಡಿಸುವ ಭಿನ್ನ ವಿಧಾನಗಳನ್ನು ಅಭಿವೃದ್ಧಿ ಪಡಿಸಿದ್ದಾರೆಪರಂಪರಾಗತ ವಿಧಾನದ ಬದಲು ನೂತನ ವಿಧಾನದಲ್ಲಿ ಕ್ಯಾನ್ಸರ್ ವಿರುದ್ಧ ಸೆಣಸುವ ನಿಟ್ಟಿನಲ್ಲಿ ಅವರ ಸಂಶೋಧನೆ ಅತ್ಯಂತ ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದು ಹೇಳಿಕೆ ತಿಳಿಸಿತು. ಕರೊಲಿನ್ಸ್ಕಾ ಇನ್ಸ್ಟಿಟ್ಯೂಟ್ ೫೦ ಮಂದಿ ಉಪನ್ಯಾಸಕರು ವರ್ಷದ ನೊಬೆಲ್ ಪ್ರಶಸ್ತಿಗೆ ಸಂಶೋಧಕರನ್ನು ಆಯ್ಕೆ ಮಾಡಿದರು.

2018: ಮುಂಬೈ: ಅಚ್ಚರಿಯ ಬೆಳವಣಿಗೆ ಒಂದರಲ್ಲಿ ಸುಸ್ತಿ ಸಾಲದ ಸುಳಿಯಲ್ಲಿ ಸಿಲುಕಿರುವ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಅಂಡ್ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಐಎಲ್ ಅಂಡ್ ಎಫ್ ಎಸ್) ಸಾಲಸಂಸ್ಥೆಯನ್ನು ಕೇಂದ್ರ ಸರ್ಕಾರವು ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿದ್ದು, ಕೊಟಕ್ ಮಹೀಂದ್ರ ಬ್ಯಾಂಕ್ ಮುಖ್ಯಸ್ಥ ಉದಯ್ ಕೊಟಕ್ ನೇತೃತ್ವದ ಸದಸ್ಯರ ಮಂಡಳಿಯು ತತ್ ಕ್ಷಣದಿಂದಲೇ ಸಮೂಹದ ಆಡಳಿತವನ್ನು ವಹಿಸಿ ಕೊಂಡಿತು. ಅವ್ಯವಹಾರಗಳ ಹಿನ್ನೆಲೆಯಲಿ ಐಎಲ್ ಮತ್ತು ಎಫ್ ಎಸ್ ಸಂಸ್ಥೆಯ ಆಡಳಿತ ಮಂಡಳಿಯನ್ನು ರದ್ದು ಪಡಿಸಿ, ಆಡಳಿತ ಮಂಡಳಿ ಪುನರ್ರಚನೆಗೆ ಅನುಮತಿ ನೀಡುವಂತೆ ಕೇಂದ್ರ ಸರ್ಕಾರ ಮಾಡಿದ್ದ ಮಧ್ಯಂತರ ಮನವಿಯನ್ನು ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್ ಪುರಸ್ಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ತುರ್ತು ಕ್ರಮ ಕೈಗೊಂಡಿತು. ಟ್ರಿಬ್ಯೂನಲ್ ಮುಂಬೈ ಪೀಠದ ನ್ಯಾಯಾಧೀಶರಾದ ಎಂ.ಕೆ. ಶರಾವತ್ ಮತ್ತು ರವಿಕುಮಾರ್ ದೊರೈಸ್ವಾಮಿ ಅವರು ಸರ್ಕಾರಿ ನಾಮನಿರ್ದೇಶಿತ ಸದಸ್ಯರು ಐಎಲ್ ಅಂಡ್ ಎಫ್ ಎಸ್ ವಶಕ್ಕೆ ಪಡೆದುಕೊಳ್ಳಲು ಅನುಮತಿ ನೀಡಿತುಬಿಕ್ಕಟ್ಟಿನಲ್ಲಿರುವ ಐಎಲ್ ಅಂಡ್ ಎಫ್ ಎಸ್ ಆಡಳಿತ ಮಂಡಳಿಯ ಅವ್ಯವಹಾರಗಳ ಹಿನ್ನೆಲೆಯಲ್ಲಿ ೨೦೧೩ರ ಕಂಪೆನಿಗಳ ಕಾಯ್ದೆಯ ೨೪೧() ಅನುಚ್ಛೇದವನ್ನು ಜಾರಿಗೊಳಿಸಲು ಇದು ಸೂಕ್ತವಾದ ಪ್ರಕರಣವಾಗಿದೆ ಎಂದು ಟ್ರಿಬ್ಯೂನಲ್ ಹೇಳಿತು. ಈ ಅನುಚ್ಛೇದವು ಹಾಲಿ ಆಡಳಿತ ಮಂಡಳಿಯನ್ನು ರದ್ದು ಪಡಿಸಲು ಅವಕಾಶ ನೀಡುತ್ತದೆಐಎಲ್ ಅಂಡ್ ಎಫ್ ಎಸ್ ವ್ಯವಹಾರಗಳು ಸಾರ್ವಜನಿಕ ಹಿತಾಸಕ್ತಿಗೆ ತೊಂದರೆಯಾಗುವ ರೀತಿಯಲ್ಲಿವೆ ಎಂಬುದು ಕೇಂದ್ರದ ಅರ್ಜಿಯಿಂದ ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ. ಹೀಗಾಗಿ, ಆರು ಸದಸ್ಯರ ನೂತನ ತಂಡಕ್ಕೆ ಐಎಲ್ ಅಂಡ್ ಎಫ್ ಎಸ್ ಮಂಡಳಿಯ ಅಧಿಕಾರ  ವಹಿಸಿಕೊಳ್ಳಲು ಅನುಮತಿ ನೀಡಬೇಕೆಂಬ ಕೇಂದ್ರದ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುವುದಾಗಿ ಟ್ರಿಬ್ಯೂನಲ್ ಹೇಳಿತು. ಕೊಟಕ್ ಹೊರತಾಗಿ ಐಎಎಸ್ ಅಧಿಕಾರಿ ವಿನೀತ್ ನಯ್ಯರ್, ಮಾಜಿ ಸೆಬಿ ಅಧ್ಯಕ್ಷ ಜಿ.ಎನ್. ಬಾಜಪೇಯಿ, ಐಸಿಐಸಿಐಯ ಎಕ್ಸಿಕ್ಯೂಟಿವ್ ಯೇv ಅಧ್ಯಕ್ಷ ಜಿ.ಸಿ. ಚತುರ್ವೇದಿ, ಐಎಎಸ್ ಅಧಿಕಾರಿ ಮಾಲಿನಿ ಶಂಕರ್ ಮತ್ತು ಸಿಎಜಿಯ ಹಿರಿಯ ಆಡಳಿತಾಧಿಕಾರಿ ನಂದ ಕಿಶೋರ್ ಅವರು ಆಡಳಿತ ಮಂಡಳಿಯ ಇತರ ಸದಸ್ಯರಾಗಿದ್ದಾರೆನೂತನ ಆಡಳಿತ ಮಂಡಳಿ ಸದಸ್ಯರಿಗೆ ಪೀಠವು ತಮ್ಮಲ್ಲೇ ನೂತನ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿ, ವರ್ಷ ಅಕ್ಟೋಬರ್ ೮ರ ಒಳಗೆ ಮೊದಲ ಸಭೆ ನಡೆಸುವಂತೆ ನಿರ್ದೇಶಿಸಿದೆ ಮತ್ತು ಮುಂದಿನ ವಿಚಾರಣೆ ನಡೆಯಲಿರುವ ಅಕ್ಟೋಬರ್ ೩೧ರ ಒಳಗೆ ಮಾರ್ಗನಕ್ಷೆಯನ್ನು ರಚಿಸಿ ವರದಿ ಸಲ್ಲಿಸುವಂತೆ ಸೂಚಿಸಿತು. ಕೇಂದ್ರ ಸರ್ಕಾರವು ತನ್ನ ಮನವಿಯಲ್ಲಿ ಪ್ರಸ್ತಾಪಿಸಿದ ಎಲ್ಲ ಅಂಶಗಳಿಗೆ ವರ್ಷ ಅಕ್ಟೋಬರ್ ೧೫ರ ಒಳಗಾಗಿ ಉತ್ತರ ನೀಡುವಂತೆಯೂ ಐಎಲ್ ಅಂಡ್ ಎಫ್ ಎಸ್ ಗೆ ಪೀಠ ನೋಟಿಸ್ ನೀಡಿತು.  ದೇಶದ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯವು ಹಿಂದೆ ಎರಡು ಪ್ರಕರಣಗಳಲ್ಲಿ ಮಾತ್ರ ಕಂಪೆನಿಯನ್ನು ವಶಕ್ಕೆ ಪಡೆದುಕೊಳ್ಳಲು ಕೋರಿಕೆ ಮಂಡಿಸಿತ್ತು ಮತ್ತು ಸತ್ಯಂ ಕಂಪ್ಯೂಟರ್ ಸರ್ವೀಸಸ್ ಲಿಮಿಟೆಡ್ ಕಂಪೆನಿಯನ್ನು ಮಾತ್ರವೇ ೨೦೦೯ರಲ್ಲಿ ಸ್ವಾಧೀನಕ್ಕೆ ಪಡೆದಿತ್ತುಐಎಲ್ ಮತ್ತು ಎಫ್ ಎಸ್ ಸಂಸ್ಥೆಯ ಸಾಲಗಳು ದೊಡ್ಡ ಪ್ರಮಾಣದಲ್ಲಿ ಸುಸ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಕಂಪೆನಿಯು ಒಟ್ಟು ೧೨. ಬಿಲಿಯನ್ (೧೨.೬೦ಕೋಟಿ) ಡಾಲರ್ ಅಂದರೆ ಶೇಕಡಾ ೬೧ರಷ್ಟು ಸಾಲವನ್ನು ವಿವಿಧ ಹಣಕಾಸು ಸಂಸ್ಥೆಗಳಿಗೆ ನೀಡಿದೆ. ಸಾಲಸುಸ್ತಿಯ ಪರಿಣಾಮ ಮಾರುಕಟ್ಟೆಯಲ್ಲಿ ನಷ್ಟ ಸಂಭವಿಸುತ್ತಿದೆ ಎಂದು ವರದಿಗಳು ಹೇಳಿದವು.  ನ್ಯಾಷನಲ್ ಕಂಪೆನಿ ಲಾ ಟ್ರಿಬ್ಯೂನಲ್ ವಿಷಯಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ ೩೧ರಂದು ಮುಂದಿನ ವಿಚಾರಣೆ ನಡೆಸಲಿದೆನೂತನ ಮಂಡಳಿಯು ೬೦೦ ಬಿಲಿಯನ್ (೬೦೦ ಕೋಟಿ) ರೂಪಾಯಿಗಳನ್ನು ಕಂಪೆನಿಯ ಆಸ್ತಿ ಮಾರಾಟದಿಂದ ಪಡೆಯಬಹುದು ಎಂದು ಕಂಪೆನಿಯ ಅತಿದೊಡ್ಡ ಶೇರುದಾರ ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಹೇಳಿತು. ಎಲ್ ಐಸಿ ಹೊರತಾಗಿ ಜಪಾನಿನ ಓರಿಕ್ಸ್ ಕಾರ್ಪೋರೇಷನ್ ಕಂಪೆನಿಯ ಎರಡನೇ ದೊಡ್ಡ ಶೇರುದಾರ ಸಂಸ್ಥೆಯಾಗಿದೆ. ಅಬುಧಾಬಿ ಇನ್ ವೆಸ್ಟ್ ಮೆಂಟ್ ಅಥಾರಿಟಿ ಮತ್ತು ಭಾರತದ ಅತಿದೊಡ್ಡ ಅಡಮಾನ ಸಾಲ ನೀಡಿಕೆ ಸಂಸ್ಥೆಯಾಗಿರುವ ಹೌಸಿಂಗ್ ಅಂಡ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೋರೇಷನ್ ಐಎಲ್ ಅಂಡ್ ಎಫ್ ಎಸ್ ಇತರ ದೊಡ್ಡ ಶೇರುದಾರ ಸಂಸ್ಥೆಗಳಾಗಿವೆಐಎಲ್ ಅಂಡ್ ಎಫ್ ಎಸ್ ಏಷ್ಯಾದ ಮೂರನೇ ದೊಡ್ಡ ಆರ್ಥಿಕತೆಯಾಗಿರುವ ಭಾರತದ ಮೂಲಸವಲತ್ತು ಯೋಜನೆಗಳಿಗೆ ಹಣ ಒದಗಿಸುತ್ತದೆ. ಅತ್ಯಂತ ದೃಢ ಸಂಸ್ಥೆ ಎಂಬುದಾಗಿ ಪರಿಗಣಿತವಾಗಿದ್ದ ಇದರ ಸುಸ್ತಿ ಸಾಲಗಳು ಆಗಸ್ಟ್ ತಿಂಗಳಿನಿಂದ ಮ್ಯೂಚುವಲ್ ಪಂಡ್ ಗಳನ್ನು ಪಡೆದು ಸಾಲ ನೀಡಲು ವಿನಿಯೋಗಿರುವ  ಸಂಸ್ಥೆಗಳಲ್ಲಿ ಆತಂಕಕ್ಕೆ ಕಾರಣವಾಗಿದೆಸಮೂಹದ ಸಮಸ್ಯೆಗಳು ಬ್ಯಾಂಕುಗಳ ಮೇಲೆ ಪರಿಣಾಮ ಬೀರಿ ಮುಂದಿನ ವರ್ಷದ ಚುನಾವಣೆಗೂ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರ ಮೂಲ ಸವಲತ್ತು ಯೋಜನೆಗಳ ಮೇಲೆ ಪರಿಣಾಮ ಬೀರಬಹುದು ಎಂಬ ಕಳವಳವೂ ವ್ಯಕ್ತವಾಗಿದೆ.

2018: ನವದೆಹಲಿ: ಕೋರೆಗಾಂವ್ - ಭೀಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಐವರು ಸಾಮಾಜಿಕ ಕಾರ್ಯಕರ್ತರ (ನಗರ ನಕ್ಸಲರ) ಪೈಕಿ ಒಬ್ಬರಾದ ಗೌತಮ್ ನವಲಖಾ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸಲು ದೆಹಲಿ ಹೈಕೋರ್ಟ್  ಅನುಮತಿ ನೀಡಿತು.
ಹೆಚ್ಚಿನ ನೆರವು, ಪರಿಹಾರಕ್ಕಾಗಿ ನಾಲ್ಕು ವಾರಗಳ ಒಳಗಾಗಿ ಸೂಕ್ತ ವೇದಿಕೆಯನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ಸುಪ್ರೀಂಕೋರ್ಟ್ ಕಳೆದವಾರ ಬಂಧಿತರಿಗೆ ನೀಡಿತ್ತು. ನಲವಖಾ ಅವರು ಅದನ್ನು ಬಳಸಿಕೊಂಡಿದ್ದಾರೆ ಎಂದು ಹೇಳುವ ಮೂಲಕ ಹೈಕೋರ್ಟ್ ಅವರಿಗೆ ನಿರಾಳತೆಯನ್ನು ಒದಗಿಸಿತು.  ವಿಚಾರಣಾ ನ್ಯಾಯಾಲಯದ ಟ್ರಾನ್ಸಿಟ್ ರಿಮಾಂಡ್ ಆದೇಶವನ್ನೂ ಹೈಕೋರ್ಟ್ ರದ್ದು ಪಡಿಸಿತು. ಪ್ರಕರಣವು ಸುಪ್ರೀಂಕೋರ್ಟಿಗೆ ಹೋಗುವ ಮುನ್ನವೇ ನವಲಖಾ ಅವರು ಆದೇಶವನ್ನು ದೆಹಲಿ ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರುನವಲಖಾ ಅವರ ಬಂಧನವು ೨೪ ಗಂಟೆಗಳನ್ನು ಮೀರಿದೆ. ಇದು ಅಸಮರ್ಥನೀಯ ಎಂದು ಹೈಕೋರ್ಟ್ ಹೇಳಿತುನವಲಖಾ ಅವರನ್ನು ರಾಷ್ಟ್ರದ ರಾಜಧಾನಿಯಲ್ಲಿ ಆಗಸ್ಟ್ ೨೮ರಂದು ಬಂಧಿಸಲಾಗಿತ್ತು. ಇತರ ನಾಲ್ವರು ಸಾಮಾಜಿಕ ಕಾರ್ಯಕರ್ತರನ್ನು ಇದೇ ದಿನ ರಾಷ್ಟ್ರದ ವಿವಿಧೆಡೆಗಳಲ್ಲಿ ನಡೆಸಲಾದ ದಾಳಿಗಳಲ್ಲಿ ಬಂಧಿಸಲಾಗಿತ್ತು.  ಐವರೂ ಬಂಧಿತರನ್ನು ತತ್ ಕ್ಷಣ ಬಿಡುಗಡೆ ಮಾಡುವಂತೆ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್ ೨೯ರಂದು ತಿರಸ್ಕರಿಸಿ, ’ಇದು ಕೇವಲ ರಾಜಕೀಯ ಭಿನ್ನಮತದ ಕಾರಣಕ್ಕಾಗಿ ಮಾಡಲಾಗಿರುವ ಬಂಧನದ ಪ್ರಕರಣವಲ್ಲ, ಬಂಧಿತರಿಗೆ ನಿಷೇಧಿತ ನಕ್ಸಲೀಯರ ಜೊತೆಗೆ ಸಂಪರ್ಕವಿದೆ ಎಂಬುದನ್ನು ದಾಖಲೆಗಳು ಮೇಲ್ನೋಟಕ್ಕೆ ಸಾಬೀತುಪಡಿಸಿವೆ ಎಂದು ಹೇಳಿತ್ತುಬಂಧಿತರ ಗೃಹ ಬಂಧನ ಇನ್ನೂ ನಾಲ್ಕು ವಾರಗಳ ಕಾಲ ಮುಂದುವರೆಯುವುದು. ಅವಧಿಯಲ್ಲಿ ಅವರು ಕಾನೂನುಬದ್ಧ ಪರಿಹಾರಗಳಿಗಾಗಿ ಸೂಕ್ತ ನ್ಯಾಯಾಲಯವನ್ನು ಸಂಪರ್ಕಬಹುದಾಗಿದ್ದು, ನ್ಯಾಯಾಲಯಗಳು ಅರ್ಹತೆ ಆಧಾರದಲ್ಲಿ ಪ್ರಕರಣವನ್ನು ಪರಿಶೀಲಿಸಬಹುದು ಎಂದು ಸುಪ್ರೀಂಕೋರ್ಟ್ ತಿಳಿಸಿತ್ತು. ಕಳೆದ ವರ್ಷ ಡಿಸೆಂಬರ್ ೩೧ರಂದು ನಡೆದ  ’ಎಲ್ಗರ್ ಪರಿಷದ್ ಸಮಾವೇಶದ ಬಳಿಕ ರಾಜ್ಯದ ಕೋರೆಗಾಂವ್ -ಭೀಮಾ ಗ್ರಾಮದಲ್ಲಿ ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಎಫ್ ಐಆರ್ನ್ನು ಅನುಸರಿಸಿ ಮಹಾರಾಷ್ಟ್ರ ಪೊಲೀಸರು ಆಗಸ್ಟ್  ೨೮ರಂದು ಕಾರ್ಯಕರ್ತರನ್ನು ಬಂಧಿಸಿದ್ದರು. ಬಂಧಿತ ಕಾರ್ಯಕರ್ತರಾದ ವರವರ ರಾವ್, ಅರುಣ್ ಫೆರೇರಿಯಾ, ವೆರ್ನೋನ್ ಗೋನ್ಸಾಲ್ವೆಸ್, ಸುಧಾ ಭಾರದ್ವಾಜ್ ಮತ್ತು ಗೌತಮ ನವಲಖಾ ಅವರನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಆಗಸ್ಟ್ ೨೯ರಂದು ಗೃಹ ಬಂಧನದಲ್ಲಿ ಇರಿಸಲಾಗಿತ್ತು. ಇತಿಹಾಸಕಾರಾದ ರೊಮಿಲಾ ಥಾಪರ್, ಆರ್ಥಿಕ ತಜ್ಞರಾದ ಪ್ರಭಾತ್ ಪಟ್ನಾಯಿಕ್ ಮತ್ತು ದೇವಕಿ ಜೈನ್, ಸಮಾಜಶಾಸ್ತ್ರ ಉಪನ್ಯಾಸಕ ಸತೀಶ ದೇಶಪಾಂಡೆ ಮತ್ತು ಮಾನವ ಹಕ್ಕುಗಳ ವಕೀಲ ಮಾಜಾ ದಾರುವಾಲ ಅವರು ಪೊಲೀಸ್ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರುಖ್ಯಾತ ತೆಲುಗು ಕವಿ ವರವರ ರಾವ್ ಅವರನ್ನು ಆಗಸ್ಟ್ ೨೮ರಂದು ಹೈದರಾಬಾದಿನಲ್ಲಿ ಬಂಧಿಸಿದ್ದರೆ, ಕಾರ್ಯಕರ್ತರಾದ ಗೋನ್ಸಾಲ್ವೆಸ್ ಮತ್ತು ಫೆರೇರಿಯಾ ಅವರನ್ನು ಮುಂಬೈಯಲ್ಲಿ ಬಂಧಿಸಲಾಗಿತ್ತು. ಕಾರ್ಮಿಕ ಸಂಘದ ನಾಯಕಿ ಸುಧಾ ಭಾರದ್ವಾಜ್ ಅವರನ್ನು ಹರಿಯಾಣದ ಫರೀದಾಬಾದಿನಲ್ಲಿ, ನಾಗರಿಕ ಹಕ್ಕುಗಳ ಕಾರ್ಯಕರ್ತ ನವಲಖಾ ಅವರನ್ನು ದೆಹಲಿಯಲ್ಲಿ ಸೆರೆ ಹಿಡಿಯಲಾಗಿತ್ತು.

2018: ತಿರುವನಂತಪುರಂ: ಸುಪ್ರೀಂಕೋರ್ಟ್ ಸಂವಿಧಾನ ಪೀಠದ ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೈಯ ಅಯ್ಯಪ್ಪ ದೇವಾಲಯದಲ್ಲಿ ಉತ್ತಮ ಸವಲತ್ತುಗಳನ್ನು ಒದಗಿಸಲು ನಿರ್ಧರಿಸಲಾಗಿದ್ದರೂ, ಮಹಿಳೆಯರಿಗಾಗಿ ಪ್ರತ್ಯೇಕ ಸರತಿಯ ಸಾಲು (ಕ್ಯೂ) ರಚಿಸುವುದು ಕಾರ್ಯ ಸಾಧ್ಯವಲ್ಲ ಎಂದು ಕೇರಳ ಸರ್ಕಾರ ಹೇಳಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತಾಧಿಕಾರ ಸಭೆಯಲ್ಲಿ ಮಹಿಳಾ ಭಕ್ತರಿಗೆ ಒದಗಿಸಬೇಕಾದ ವಿವಿಧ ವ್ಯವಸ್ಥೆಗಳ ಬಗ್ಗೆ ಈದಿನ ಚರ್ಚಿಸಲಾಯಿತು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸುಪ್ರೀಂಕೋರ್ಟ್ ಪಂಚ ಸದಸ್ಯ ಸಂವಿಧಾನ ಪೀಠವು ತನ್ನ ತೀರ್ಪಿನಲ್ಲಿ ಎಲ್ಲ ವಯಸ್ಸಿನ ಮಹಿಳೆಯರಿಗೂ ಶಬರಿಮಲೈ ದೇಗುಲದ ದ್ವಾರವನ್ನು ತೆರೆದ ಹಿನ್ನೆಲೆಯಲ್ಲಿ ಸಭೆ ನಡೆಯಿತು. ಸಭೆಯು ದೇವಾಲಯ ಸಮುಚ್ಚಯದ ಸನ್ನಿಧಾನಕ್ಕೆ ಬರಲು ಮಹಿಳೆಯರಿಗೆ ಪ್ರತ್ಯೇಕ ಸರತಿಯ ಸಾಲುಗಳನ್ನು ರಚಿಸುವುದು ಕಾರ್ಯಸಾಧ್ಯವಲ್ಲ ಎಂದು ತೀರ್ಮಾನಿಸಿತು. ’ಭಕ್ತರು ದರ್ಶನಕ್ಕಾಗಿ ಕನಿಷ್ಠ -೧೦ ಗಂಟೆಗಳ ಕಾಲ ಉದ್ದನೆಯ ಕ್ಯೂಗಳಲ್ಲಿ ನಿಂತು ಕಾಯಬೇಕಾಗುತ್ತದೆ. ಮಹಿಳಾ ಭಕ್ತರು ಇದಕ್ಕೆ ಸಿದ್ಧರಾಗಿರಬೇಕಾಗುತ್ತದೆ. ಉದ್ದನೆಯ ಸರತಿ ಸಾಲಿನಲ್ಲಿ ನಿಲ್ಲಲು ಸಾಧ್ಯವಿದ್ದವರು ಮಾತ್ರ ದರ್ಶನಕ್ಕೆ ಬರಬಹುದು ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದರುಮಹಿಳಾ ಭಕ್ತರು ಬಹುತೇಕ ತಮ್ಮ ಪುರುಷ ಬಂಧುಗಳು ಹಾಗೂ ಇತರ ಆರಾಧಕರೊಂದಿಗೆ ಬಂದಿರುತ್ತಾರೆ. ಪ್ರತ್ಯೇಕ ಕ್ಯೂ ರಚಿಸಿದಲ್ಲಿ ಅವರು ತಮ್ಮ ಕುಟುಂಬ ಸದಸ್ಯರಿಂದ ಪ್ರತ್ಯೇಕಗೊಳ್ಳುವ ಸಾಧ್ಯತೆ ಇರುತ್ತದೆ ಎಂದು ಸಚಿವರು ನುಡಿದರು. ಏನಿದ್ದರೂ ಮಹಿಳಾ ಭಕ್ತರಿಗೆ ಪ್ರತ್ಯೇಕ ವಾಶ್ ರೂಂ ಮತ್ತು ಸ್ನಾನಘಟ್ಟಗಳನ್ನು ಒದಗಿಸಲಾಗುವುದು ಎಂದು ಅವರು ಹೇಳಿದರು. ಸನ್ನಿಧಾನದಲ್ಲಿ ಪೂಜೆಯ ಬಳಿಕ ನಿಲ್ಲದಂತೆ ಭಕ್ತರಿಗೆ ನಿಯಂತ್ರಣಗಳನ್ನು ವಿಧಿಸುವ ಯೋಜನೆಗಳೂ ಇವೆ. ಭಕ್ತರ ಸಂದಣಿಯಾಗದಂತೆ ನೋಡಿಕೊಳ್ಳುವ ಸಲುವಾಗಿ ದೇವರ ದರ್ಶನದ ಬಳಿಕ ತ್ವರಿತವಾಗಿ ನಿರ್ಗಮಿಸುವಂತೆ ಭಕ್ತರಿಗೆ ಸೂಚಿಸಲಾಗುವುದು. ಸಂದಣಿಯು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ದರ್ಶನ ಅವಧಿ ಮತ್ತು ಪೂಜಾ ದಿನಗಳನ್ನು ಹೆಚ್ಚಿಸುವಂತೆ ದೇವಾಲಯದ ಆಡಳಿತದ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಸುರೇಂದ್ರನ್ ಹೇಳಿದರು.

2018: ವಾಷಿಂಗ್ಟನ್ ಡಿಸಿ: ಹಾರ್ವರ್ಡ್ ಪ್ರಾಧ್ಯಾಪಕಿ, ಭಾರತೀಯ ಮೂಲದ ಗೀತಾ ಗೋಪಿನಾಥ್ ಅವರನ್ನು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಮುಖ್ಯ ಅರ್ಥ ಶಾಸ್ತ್ರಜ್ಞೆಯಾಗಿ ನೇಮಕ ಮಾಡಲಾಯಿತು.  ಡಿಸೆಂಬರಿನಲ್ಲಿ ನಿವೃತ್ತರಾಗಲಿರುವ ಮೌರಿ ಒಬ್ಸ್ಟ್ ಫೆಲ್ಡ್ ಅವರ ಸ್ಥಾನಕ್ಕೆ ಗೀತಾ ಗೋಪಿನಾಥ್ ನೇಮಕಗೊಂಡರು.  ‘ಗೀತಾ ಅವರು ಉತ್ತಮ ಶೈಕ್ಷಣಿಕ ದಾಖಲೆ ಮತ್ತು ಬೌದ್ಧಿಕ ನಾಯಕತ್ವದ ದಾಖಲೆಯನ್ನು ಹೊಂದಿರುವ ವಿಶ್ವದ ಪ್ರಮುಖ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ಅವರಿಗೆ ಅಪಾರವಾದ ಅಂತಾರಾಷ್ಟ್ರೀಯ ಅನುಭವವಿದೆ ಎಂದು ಐಎಂಎಫ್ ಆಡಳಿತ ನಿರ್ದೇಶಕರಾದ ಕ್ರಿಸ್ಟೀನ್ ಲಗಾರ್ಡೆ ಹೇಳಿದರು. ಪ್ರಸ್ತುತ ಹಾರ್ವರ್ಡ್ನಲ್ಲಿ ಅರ್ಥ ತಜ್ಞೆ ಹಾಗೂ ಅಂತಾರಾಷ್ಟ್ರೀಯ ಅಧ್ಯಯನದ ಪ್ರಾಧ್ಯಾಪಕಿಯಾಗಿರುವ ಗೀತಾ ಅಮೆರಿಕದ ಪ್ರಜೆಯಾಗಿದ್ದಾರೆ. ದೆಹಲಿ ವಿಶ್ವ ವಿದ್ಯಾಲಯದಿಂದ ಬಿಎ ಹಾಗೂ ದೆಹಲಿ ಸ್ಕೂಲ್ ಆಫ್ ಇಕನಾಮಿಕ್ಸ್ ಮತ್ತು ವಾಷಿಂಗ್ಟನ್ ವಿಶ್ವ ವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಬಳಿಕ ೨೦೦೧ರಲ್ಲಿ ಗೀತಾ ಅವರು ಪ್ರಿನ್ಸಟನ್ ವಿಶ್ವ ವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಪಿಎಚ್ ಡಿ ಪಡೆದಿದ್ದರು.

2018: ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ಸಾವಿ ರಾರು ಕೋಟಿ ರೂ. ಸಾಲ ಮಾಡಿ ಸಾಲ ತೀರಿಸದೆ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಅಂದಾಜು ೬೩೭ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿ ಕೊಂಡಿತು.  ಲಂಡನ್, ನ್ಯೂಯಾ ರ್ಕ್ ಹಾಗೂ ಮುಂಬೈನಲ್ಲಿ ರುವ ಆಸ್ತಿಗಳನ್ನು ಇಡಿ ವಶಕ್ಕೆ ಪಡೆಯಿತು.  ನೀರವ್ ಮೋದಿ ಹಾಗೂ ಅವರ ಕುಟುಂಬಕ್ಕೆ ಸಂಬಂಧಿಸಿದ ಆಸ್ತಿಗಳನ್ನೆಲ್ಲಾ ಜಪ್ತಿ ಮಾಡ ಲಾಯಿತು.  ಲಂಡನ್ ಹಾಗೂ ನ್ಯೂಯಾರ್ಕ್ ಅಪಾರ್ಟ್ ಮೆಂಟ್‌ಗಳನ್ನು ವಶಕ್ಕೆ ಪಡೆದಿದ್ದು, ಭಾರತ ಸೇರಿ ೫ ದೇಶಗಳಲ್ಲಿನ ಆಸ್ತಿಯನ್ನು ಜಪ್ತಿ ಮಾಡಲಾಯಿತು. ಅಲ್ಲದೆ, ಸುಮಾರು ೨೨.೬೯ ಕೋಟಿ ರೂ. ಮೌಲ್ಯದ ಚಿನ್ನಾ ಭರಣವನ್ನು ವಶಕ್ಕೆ ಪಡೆಯಲಾಯಿತು.  ನ್ಯೂಯಾರ್ಕಿನ  ಸೆಂಟ್ರಲ್ ಪಾರ್ಕ್ ಬಳಿಯ ೨೧೬ ಕೋಟಿ ರೂ. ಮೌಲ್ಯದ ಎರಡು ಅಪಾರ್ಟಮೆಂಟ್, ಪೂರ್ವಿ ಮೋದಿ ಹೆಸರಿನಲ್ಲಿರುವ ಲಂಡನ್‌ನ ಮರ್ಲೆ ಬೋನ್ ನಲ್ಲಿರುವ ೫೭ ಕೋಟಿ ರೂ. ಬೆಲೆಬಾಳುವ ಅಪಾರ್ಟಮೆಂಟ್, ಹಾಂಕಾಂಗ್‌ನಿಂದ ಭಾರತಕ್ಕೆ ತಂದಿದ್ದ ೨೨.೬೯ ಕೋಟಿ ರೂ. ಮೊತ್ತದ ವಜ್ರದ ಆಭ ರಣಗಳು, ಸಿಂಗಾಪುರ ಬ್ಯಾಂಕ್ ಖಾತೆಯಲ್ಲಿ ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಮೂಲದ ಕಂಪನಿಯೊಂದರ ಹೆಸರಿನಲ್ಲಿದ್ದ ೪೪ ಕೋಟಿ ರೂ., ಮುಂಬೈನಲ್ಲಿರುವ ೧೯.೫ ಕೋಟಿ ಮೌಲ್ಯದ ಫ್ಲ್ಯಾಟ್ ಅನ್ನು ವಶಕ್ಕೆ ಪಡೆದುಳ್ಳಲಾಯಿತು. ಈ ಆಸ್ತಿಯಲ್ಲಿ ಕೆಲವೊಂದು ನೀರವ್ ಮೋದಿ ಸಹೋ ದರಿ ಪೂರ್ವಿ ಮೋದಿ ಹಾಗೂ ಆಕೆಯ ಪತಿ ಮಾಯಂಕ್ ಮೆಹ್ತಾ ಅವರಿಗೆ ಸೇರಿದೆ. ನೀರವ್ ಮೋದಿ ಬಂಧನಕ್ಕಾಗಿ ತನಿಖಾಧಿಕಾರಿಗಳು ಪ್ರಯತ್ನ ಮುಂದುವರೆಸಿದರು. ಜೊತೆಗೆ ವಿವಿಧ ದೇಶಗಳ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿತ್ತು. ಅದರ ಪರಿಣಾಮ ಈಗ ನೀರವ್ ಮೋದಿ ಆಸ್ತಿಯನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಲಾಯಿತು.  ಜೊತೆಗೆ ವಿದೇಶದಲ್ಲಿದ್ದ ಆಭರಣಗಳನ್ನು ಭಾರತಕ್ಕೆ ತರಲಾಗುವುದು  ಎಂದು ಜಾರಿ ನಿರ್ದೇಶನಾಲಯ ತಿಳಿಸಿತು. ಏನಿದು ಪ್ರಕರಣ?: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ೧೩ ಸಾವಿರ ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಯಾವುದೇ ದೇಶದಲ್ಲಿ ಅಡಗಿ ದ್ದರೂ ಬಂಧನಕ್ಕೆ ಆದೇಶ ಸಿಕ್ಕಿದೆ. ನೀರವ್ ಮೋದಿ ಜೊತೆ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸುವಂತೆ ಇಂಟರ್ ಪೋಲ್‌ಗೆ ಮನವಿ ಮಾಡಿಕೊಂಡಿತ್ತು.  ಏನಿದು ರೆಡ್ ಕಾರ್ನರ್ ನೋಟಿಸ್?: ಸ್ವದೇಶದಲ್ಲಿ ಯಾವುದೇ ಒಬ್ಬ ವ್ಯಕ್ತ ಅಪರಾಧಿ ಹಿನ್ನೆಲೆಯಲ್ಲಿ ದೇಶವನ್ನು ತೊರೆದು ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೆ, ಅಂತಹ ವ್ಯಕ್ತಿಯನ್ನು ಹುಡುಕಿ ಬಂಧಿಸಿ ಅವ ನನ್ನು ಮರಳಿ ಆ ದೇಶಕ್ಕೆ ಹಸ್ತಾಂತ ರಿಸುವಂತೆ ಇಂಟರ್ ಪೋಲ್ ಹೊರಡಿಸುವ ನೋಟಿಸಿಗೆ ರೆಡ್ ಕಾರ್ನರ್ ನೋಟಿಸ್ ಎಂದು ಕರೆಯ ಲಾಗುತ್ತದೆ. ಕ್ರಿಮಿನಲ್ ಪ್ರಕರಣದಲ್ಲಿ ಭಾರತೀಯ ಸಂಸ್ಥೆಯು ವಿದೇಶಿ ಆಸ್ತಿಯನ್ನು ಜಪ್ತಿ ಮಾಡಿರುವ ಪ್ರಕರಣಗಳು ತುಂಬಾ ಕಡಿಮೆ. ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋ ರ್ವ ಆರೋಪಿ ಆದಿತ್ಯ ನಾನಾವತಿ ವಿರುದ್ಧ ಇಂಟರ್‌ಪೋಲ್‌ನಿಂದ ರೆಡ್ ಕಾರ್ನರ್ ನೋಟಿಸ್ ಜಾರಿಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಈ ವರ್ಷದ ಬಹುದೊಡ್ಡ ಹಗರಣ ಎಂಬ ಕುಖ್ಯಾತಿಗೆ ಒಳಗಾಗಿತ್ತು.  ಪ್ರಕರಣದ ರೂವಾರಿ ನೀರವ್ ಮೋದಿ ಹಾಗೂ ಅವರ ಅಂಕಲ್ ಛೋಕ್ಸಿ ೧೩,೪೦೦ ಕೋಟಿ ರೂ. ಸಾಲ ಪಡೆದು ಹಿಂದಿರುಗಿಸಲಾಗದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರು.

2016: ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶದ
ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸರ್ವ ಪಕ್ಷಗಳ ಸಭೆಯು ತಮಿಳುನಾಡಿಗೆ ನೀರು ಬಿಡದೇ ಇರುವ ನಿರ್ಧಾರವನ್ನು ಇನ್ನಷ್ಟು ಗಟ್ಟಿಗೊಳಿಸಿತು. ಬಳಿಕ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಸದನದ ತೀರ್ಮಾನಕ್ಕೆ ಬದ್ಧವಾಗಿರಲು ನಿರ್ಧರಿಸಲಾಯಿತು. ವಿಧಾನ ಮಂಡಲದ ಒಕ್ಕೊರಲಿನ ನಿರ್ಧಾರದಂತೆ ಯಾವುದೇ ಕಾರಣಕ್ಕೂ ತಮಿಳುನಾಡಿಗೆ ಕಾವೇರಿ ನೀರು ಬಿಡುವಂತಿಲ್ಲ ಎಂಬುದಾಗಿ ಸರ್ಕಾರ ಕೈಗೊಂಡರುವ ನಿರ್ಧಾರವನ್ನು ಸರ್ವಪಕ್ಷ ಸಭೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಜಾತ್ಯತೀತ ಜನತಾದಳ ಬೆಂಬಲಿಸಿದವುಸರ್ಕಾರವು ರಾಜ್ಯದ ರೈತರ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದ ಸಭೆ, ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಮತ್ತು ತಮಿಳುನಾಡಿಗೆ ಮತ್ತೆ ನೀರು ಬಿಡುವಂತೆ ಮಾಡಿದ ಆದೇಶ ರಾಜ್ಯಕ್ಕೆ ಆಘಾತಕಾರಿ ಎಂಬುದಾಗಿ ಅಭಿಪ್ರಾಯಪಟ್ಟಿತು ಎಂದು ಸಭೆಯ ಬಳಿಕ ವಿರೋಧ ಪಕ್ಷಗಳ ಮುಖಂಡರಾದ ಜಗದೀಶ ಶೆಟ್ಟರ ಮತ್ತು ವೈಎಸ್ವಿ ದತ್ತ ಹೇಳಿದರು. ಅಕ್ಟೋಬರ್ 6ರಂದು ಸುಪ್ರೀಂಕೋರ್ಟ್ ಕೈಗೊಳ್ಳುವ ತೀರ್ಮಾನವನ್ನು ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲೂ ಸಭೆ ತೀರ್ಮಾನಿಸಿತು.

2016: ಬೆಂಗಳೂರು: ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿ ಸುಪ್ರಿಂಕೋರ್ಟ್ ತೀರ್ಪಿನ ಬಳಿಕ ಸ್ವತಃ ಹೋರಾಟಕ್ಕೆ ಇಳಿದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬೆಂಗಳೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.ಬೆಳಗ್ಗೆಯಿಂದ ವಿಧಾನಸೌಧದ ಎದುರ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಅವರು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಮೈಸೂರು ದಸರಾ ಆಚರಣೆಗೆ ಚಾಲನೆ ನೀಡಿದ ಬಳಿಕ ಬೆಂಗಳೂರಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರವಾಗಿ ದೇವೇಗೌಡರ ಬಳಿ ತೆರಳಿ ಮಾತುಕತೆ ನಡೆಸಿದರು. ಸರ್ವಪಕ್ಷ ಸಭೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದರು. ನಗುತ್ತಲೇ ಸಿಎಂ ಜತೆ ಮಾತುಕತೆ ನಡೆಸಿದ ದೇವೇಗೌಡರು, ನೀವು ಸರ್ವಪಕ್ಷ ಸಭೆ ಸಡೆಸಿ. ನಾನು ಹೋರಾಟ ಮುಂದುವರಿಸುತ್ತೇನೆ. ಅ.3ರವರೆಗೂ ನನ್ನ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
2016: ನವದೆಹಲಿ: ದೇಶದೊಳಗಿನ ಕಪ್ಪು ಹಣ ಘೋಷಣೆಗೆ ನೀಡಲಾಗಿದ್ದ ಸೆಪ್ಟೆಂಬರ್ 30 ಗಡುವಿನ ಒಳಗಿನ ಅವಧಿಯಲ್ಲಿ 64,275 ಮಂದಿ ತಮ್ಮ ಬಳಿ ಇರುವ ಅಕ್ರಮ ಸಂಪತ್ತನ್ನು ಬಹಿರಂಗ ಪಡಿಸಿದ್ದು, ಸ್ವಯಂಘೊಷಣೆ ಆಗಿರುವ ಒಟ್ಟು ಕಾಳಧನದ ಮೊತ್ತ 65,250 ಕೋಟಿ ರೂಪಾಯಿಗಳು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈದಿನ ಇಲ್ಲಿ ಪ್ರಕಟಿಸಿದರು. ಇದರ ಹೊರತಾಗಿ ಶೋಧ ಕಾರ್ಯಾಚರಣೆಯ ಮೂಲಕ 56,378 ಕೋಟಿ ರೂಪಾಯಿ ಸಂಪತ್ತನ್ನು ಪತ್ತೆ ಹಚ್ಚಲಾಗಿದೆ ಎಂದು ಜೇಟ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಹೆಚ್ಎಸ್ಬಿಸಿ ಪಟ್ಟಿಯಿಂದ 8000 ಕೋಟಿ ರೂಪಾಯಿಗಳಿಗೆ ತೆರಿಗೆ ಅಂದಾಜು ಪೂರ್ಣಗೊಳಿಸಲಾಗಿದೆ ಎಂದು ಅವರು ನುಡಿದರು. ತೆರಿಗೆ ವಂಚನೆಯನ್ನು ತಪ್ಪಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದೂ ಅವರು ನುಡಿದರು.
 2016: ಬೀಜಿಂಗ್: ಟಿಬೆಟ್ನಲ್ಲಿ ಚೀನಾ ನಿರ್ಮಿಸುತ್ತಿರುವ ಬೃಹತ್ ಜಲವಿದ್ಯುತ್ ಜಲಾಶಯದ ಕಾಮಗಾರಿಗಾಗಿ ಬ್ರಹ್ಮಪುತ್ರ ನದಿಯ ಉಪನದಿಗಳನ್ನು ತಡೆಹಿಡಿದದ್ದು ಬೆಳಕಿಗೆ ಬಂತು. ಇದು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ನದಿಯ ಹರಿವಿನ ಮೇಲೆ ವ್ಯತಿರಿಕ್ತ ಪ್ರಭಾವ ಬೀರುವ ಸಾಧ್ಯತೆ ಇದೆಚೀನಾ ಸುಮಾರು 740 ಮಿಲಿಯನ್ ಡಾಲರ್ ವೆಚ್ಚದಲ್ಲಿ ಟಿಬೆಟ್ ಕ್ಸಿಗಜೆ ಎಂಬಲ್ಲಿ ಬ್ರಹ್ಮಪುತ್ರ ನದಿಯ ಉಪನದಿ ಕ್ಸಿಬುಕು ನದಿಗೆ ಬೃಹತ್ ಅಣೆಕಟ್ಟು ನಿರ್ಮಿಸುತ್ತಿದೆ. ಕ್ಸಿಗಜೆ ಸಿಕ್ಕಿಂಗೆ ಸಮೀಪದಲ್ಲಿದ್ದು, ಇಲ್ಲಿಂದ ಬ್ರಹ್ಮಪುತ್ರ ನದಿ ಅರುಣಾಚಲ ಪ್ರದೇಶಕ್ಕೆ ಪ್ರವೇಶಿಸುತ್ತದೆ. ಚೀನಾ ಅಣೆಕಟ್ಟು ನಿರ್ಮಾಣ ಕಾರ್ಯವನ್ನು 2014 ಜೂನ್ನಲ್ಲಿ ಪ್ರಾರಂಭಿಸಿದ್ದು 2019 ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. ಪ್ರಸ್ತುತ ಅಣೆಕಟ್ಟು ನಿರ್ಮಾಣ ಕಾರ್ಯಕ್ಕಾಗಿ ಬ್ರಹ್ಮಪುತ್ರಾ ನದಿಯ ಉಪನದಿಗೆ ತಡೆಯೊಡ್ಡಿದೆ. ಇದರಿಂದಾಗಿ ಬ್ರಹ್ಮಪುತ್ರ ನದಿಯ ಹರಿವಿನ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ಮಾಹಿತಿ ಲಭ್ಯವಿಲ್ಲ ಎಂದು ಚೀನಾ ಮಾಧ್ಯಮ ವರದಿ ಮಾಡಿತು. ಚೀನಾ ಟಿಬೆಟ್ನಲ್ಲಿ ಬ್ರಹ್ಮಪುತ್ರ ನದಿಗೆ ನಿರ್ಮಿಸಿರುವ ಜಾಮ್ ಜಲವಿದ್ಯುತ್ ಅಣೆಕಟ್ಟನ್ನು ಕಳೆದ ವರ್ಷ ಉದ್ಘಾಟಿಸಿತ್ತು. ಇದು ಭಾರತ ಬ್ರಹ್ಮಪುತ್ರ ನದಿಯ ಕುರಿತು ಚಿಂತಿಸುವಂತೆ ಮಾಡಿತ್ತು. ಭಾರತಕ್ಕೆ ನೀರು ಹರಿಸುವ ಸಂಬಂಧ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ನಾವು ಕೇವಲ ವಿದ್ಯುತ್ ಉತ್ಪಾದನೆ ಮಾಡುತ್ತೇವೆ. ನೀರನ್ನು ತಡೆ ಹಿಡಿಯುವ ಉದ್ದೇಶ ಹೊಂದಿಲ್ಲ ಎಂದು ಚೀನಾ ತಿಳಿಸಿತ್ತು. ಉರಿ ದಾಳಿಯ ಹಿನ್ನಲೆಯಲ್ಲಿ ಪಾಕಿಸ್ತಾನದೊಂದಿಗೆ ಸಿಂಧು ನದಿ ನೀರಿನ ಒಪ್ಪಂದದ ಕುರಿತು ಮರು ಚಿಂತಿಸುವುದಾಗಿ ಭಾರತ ತಿಳಿಸಿದೆ. ಸಮಯದಲ್ಲೇ ಚೀನಾ ಬ್ರಹ್ಮಪುತ್ರ ನದಿಯ ಉಪನದಿಗಳನ್ನು ತಡೆದಿದೆ. ಮೂಲಕ ಪರೋಕ್ಷವಾಗಿ ಭಾರತದ ಮೇಲೆ ಒತ್ತಡ ಹೇರುವ ತಂತ್ರವನ್ನು ಚೀನಾ ಅನುಸರಿಸಿತು.

2016: ವಿಶ್ವಸಂಸ್ಥೆ: ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ವಿಶ್ವಸಂಸ್ಥೆ ಸಮಸ್ಯೆ ಪರಿಹರಿಸಿಕೊಳ್ಳಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ತಿಳಿಸಿತು. ಭಾರತ ಮತ್ತು ಪಾಕಿಸ್ತಾನದ ನಡುವೆ ಇತ್ತೀಚೆಗೆ ನಡೆಯುತ್ತಿರುವ ಘಟನಾವಳಿಗಳು ಉಭಯ ರಾಷ್ಟ್ರಗಳ ನಡುವಿನ ಸಂಬಂಧದಲ್ಲಿ ಬಿರುಕನ್ನುಂಟು ಮಾಡುತ್ತಿದೆ. ಗಡಿನಿಯಂತ್ರಣ ರೇಖೆ ಬಳಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಗುಂಡಿನ ಚಕಮಕಿ ನಡೆಯುತ್ತಿದೆ. ಬೆಳವಣಿಗೆಗೆ ವಿಶ್ವಸಂಸ್ಥೆ ವಿಷಾದ ವ್ಯಕ್ತಪಡಿಸುತ್ತದೆ. ಹಾಗಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಘರ್ಷಣೆಯನ್ನು ಕಡಿಮೆ ಮಾಡಲು ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಲು ಸಿದ್ಧವಿದೆ. ಭಾರತ ಮತ್ತು ಪಾಕಿಸ್ತಾನ ಮಾತುಕತೆಗೆ ಒಪ್ಪಿದರೆ ವಿಶ್ವಸಂಸ್ಥೆ ವೇದಿಕೆ ಕಲ್ಪಿಸಲಿದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ವಿಶ್ವಸಂಸ್ಥೆಯ ತಂಡವೊಂದು ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ಮತ್ತು ಪಾಕ್ ಸೇನೆಯ ಚಟುವಟಿಕೆಗಳು ಮತ್ತು ಕದನ ವಿರಾಮ ಉಲ್ಲಂಘನೆಯ ಮೇಲೆ ನಿಗಾ ಇರಿಸುತ್ತದೆ. ತಂಡ ವಿಶ್ವಸಂಸ್ಥೆಗೆ ತನ್ನ ವರದಿಯನ್ನು ಸಲ್ಲಿಸುತ್ತದೆ.

2016: ಶ್ರೀನಗರ: ಪಾಕಿಸ್ತಾನ ಪಡೆ ಮತ್ತು ಭಾರತೀಯ ಯೋಧರ ನಡುವೆ ಈದಿನ ಬೆಳಗಿನಜಾವ ಜಮ್ಮು ಕಾಶ್ಮೀರದ ಆಖನೂರ್ ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ಚಕಮಕಿ ನಡೆಯಿತು. ಭಾರತೀಯ ಸೇನಾ ತುಕಡಿಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ ಪಾಕಿಸ್ತಾನಿ ಪಡೆ ಸಣ್ಣ ಪ್ರಮಾಣದ ಫಿರಂಗಿಗಳನ್ನು ಮತ್ತು ಮೆಷಿನ್ ಗನ್ಗಳನ್ನು ಉಪಯೋಗಿಸಿತು ಎಂದು ಮೂಲಗಳು ತಿಳಿಸಿದವು. ಬೆಳಗಿನಜಾವ 3.30ರಿಂದ ಬೆಳಗ್ಗೆ 6ಗಂಟೆಯ ತನಕ ಗುಂಡಿನ ಚಕಮಕಿ ನಡೆಯಿತು. ಭಾರತದ ಒಳ ಪ್ರವೇಶಿಸುವ ಪಾಕಿಸ್ತಾನಿ ಪಡೆಗೆ ಭಾರತೀಯ ಸೈನ್ಯ ದಿಟ್ಟ ಉತ್ತರ ನೀಡಿತು ಎಂದು ಮೂಲಗಳು ಸ್ಪಷ್ಟಪಡಿಸಿದವು. ಇದಲ್ಲದೆ, ಪಲ್ಲನ್ವಾಲಾ ಸೆಕ್ಟರ್ನಲ್ಲಿಯೂ ದಾಳಿ ನಡೆದ ವರದಿಗಳು ಬಂದವು. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು, ಪಾಕಿಸ್ತಾನ ಪಡೆ ಬಡೂ ಮತ್ತು ಚಾನೂ ಗ್ರಾಮಗಳಲ್ಲಿನ ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಿರಬಹುದಾದ ಸಾಧ್ಯತೆ ಇದೆ. ಹಿನ್ನೆಲೆಯಲ್ಲಿಯೇ ಭಾಗದಿಂದ ಎಲ್ಲಾ ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಯಾರಿಗೂ ಯಾವುದೇ ಸಮಸ್ಯೆಯಾಗಿಲ್ಲ. ಗುಂಡಿನ ದಾಳಿಯಿಂದ ಕೆಲವು ಮನೆಗಳಿಗೆ ಹಾನಿಯಾಗಿದೆ ಎಂದು ತಿಳಿಸಿದರು.

2016: ವಿಶ್ವಸಂಸ್ಥೆ: ಜೈಶ್--ಮೊಹಮ್ಮದ್ ಮುಖ್ಯಸ್ಥ ಭಯೋತ್ಪಾದಕ ಮಸೂದ್ ಅಜರ್ನನ್ನು ವಿಶ್ವಸಂಸ್ಥೆಯ ಕಪ್ಪು ಪಟ್ಟಿಗೆ ಸೇರಿಸಲು ಭಾರತ ನಡೆಸುವ ಯತ್ನಕ್ಕೆ ಅಡ್ಡಿ ಉಂಟು ಮಾಡಿದ್ದ ಚೀನಾ ಮತ್ತೆ ವಿಚಾರದಲ್ಲಿ ತನ್ನ ಮೂಗು ತೂರಿಸಿ, ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ತನ್ನ ವ್ಹೀಟೋವನ್ನು (ವಿಶೇಷಾಧಿಕಾರ) ವಿಸ್ತರಿಸಿತು. ತಾಂತ್ರಿಕ ಅಡ್ಡಿಯನ್ನು ವಿಸ್ತರಿಸುವುದು, ತಾಂತ್ರಿಕ ಅಡ್ಡಿಯನ್ನು ತಡೆಯುವಿಕೆಯನ್ನಾಗಿ ಮಾರ್ಪಡಿಸುವುದು ಅಥವಾ ಅಂಕಿತಕ್ಕೆ ಪಡೆಯಲು ಬಿಟ್ಟು ಬಿಡುವುದು- ಮೂರು ಆಯ್ಕೆಗಳು ಚೀನಾದ ಮುಂದಿವೆ ಮೂರು ಆಯ್ಕೆಗಳ ಪೈಕಿ ಚೀನಾ ಮೊದಲನೇ ಆಯ್ಕೆಯನ್ನು ಪ್ರಯೋಗಿಸಲು ನಿರ್ಧರಿಸಿತು. ಇದು ಪ್ರಕ್ರಿಯೆ ಸ್ವರೂಪದ್ದಾಗಿದ್ದು, ತನ್ನ ಅಡ್ಡಿಯನ್ನು ಒಡ್ಡುವ ಮೂಲಕ ಹಲವಾರು ತಿಂಗಳುಗಳವರೆಗೆ ನಿರ್ಧಾರ ಕೈಗೊಳ್ಳದಂತೆ ಜಗ್ಗುವುದು ಚೀನಾದ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿದವು.

2016: ನವದೆಹಲಿ: ಪಾಕ್ ಕಲಾವಿದರ ಪರವಾಗಿ ಬ್ಯಾಟಿಂಗ್ ನಡೆಸಿದ ವಿವಾದಿತ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಎಮ್ನ್ಎಸ್ ನಿಷೇಧ ಬೆದರಿಕೆ ಹಾಕಿತು. ಪಾಕಿಸ್ತಾನ ಕಲಾವಿದರಿಗೆ ಬೆಂಬಲ ಮುಂದುವರೆಸಿದ ಪಕ್ಷದಲ್ಲಿ ನಿಮ್ಮ ಚಿತ್ರವನ್ನು ಭಾರತದಲ್ಲಿ ನಿಷೇಧ ಮಾಡಲಾಗುವುದು ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಮುಖ್ಯಸ್ಥ ರಾಜಾ ಠಾಕ್ರೆ ಎಚ್ಚರಿಕೆ ಸಂದೇಶ ರವಾನಿಸಿದರು. ನಮ್ಮ ದೇಶದಲ್ಲಿ ಕಲಾವಿದರಿಗೆ ಬರವಿದೆಯೇ? ನಮ್ಮ ಚಿತ್ರಗಳಲ್ಲಿ ಪಾಕ್ ಕಲಾವಿದರು ಏಕೆ ಅಭಿನಯಿಬೇಕು ಎಂದು ಠಾಕ್ರೆ ಪ್ರಶ್ನಿಸಿದ್ದಾರೆ. ದೇಶದ ಗಡಿಯಲ್ಲಿ ನಮ್ಮ ಸೈನಕರು ಪ್ರಾಣವನ್ನು ಲೆಕ್ಕಿಸದೇ ಹೋರಾಡುತ್ತಿದ್ದಾರೆ. ಒಂದು ವೇಳೆ ಅವರು ತಮ್ಮ ಕೈಯಲ್ಲಿರುವ ಬಂದೂಕುಗಳನ್ನು ಕೆಳಗಿಟ್ಟರೆ ಸಲ್ಮಾನ್ ದೇಶಕ್ಕಾಗಿ ಹೋರಾಡುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದರ ಬೆನ್ನಲ್ಲೇ ಶಿವಸೇನ ಕೂಡ ಸಲ್ಮಾನ್ ಗೆ ಪಾಕಿಸ್ತಾನದ ನಟರ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ಅವರ ಜತೆಗೆ ಈತನೂ ತೆರಳಲಿ ಎಂದು ತಿಳಿಸಿತು.  ಫವಾದ್ ಖಾನ್ ಸೇರಿ ಉಳಿದ ಪಾಕ್ ಕಲಾವಿದರ ಪರವಾಗಿ ಬ್ಯಾಟಿಂಗ್ ನಡೆಸಿದ ಸಲ್ಮಾನ್, ಅವರೆಲ್ಲ ಕಲಾವಿದರೇ ಹೊರತು ಭಯೋತ್ಪಾದಕರಲ್ಲ. ಸರ್ಕಾರವೇ ಇವರಿಗೆ ವೀಸಾ ನೀಡಿ ಪರವಾನಗಿ ನೀಡಿದೆ ಎಂದಿದ್ದರು.

2016: ನವದೆಹಲಿ: ಆಗ್ರಾದಲ್ಲಿ ರೋಡ್ ಶೋ ವೇಳೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಬಿದ್ದು ಅವರು ಲಘು ವಿದ್ಯುತ್ ಆಘಾತಕ್ಕೆ ಒಳಗಾದರು ಎಂಬ ವರದಿಗಳನ್ನು ಅಲ್ಲಗಳೆಯಲಾಗಿದೆ ಎಂದು ಎಎನ್ ವರದಿ ಮಾಡಿತು. ಆಗ್ರಾದಲ್ಲಿ ರೋಡ್ ಶೋ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಮೇಲೆ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಬಿದ್ದು ಅವರು ಲಘು ವಿದ್ಯುತ್ ಆಘಾತಕ್ಕೆ ಒಳಗಾದರು ಎಂದು ಇದಕ್ಕೆ ಮುನ್ನ ವರದಿಗಳು ತಿಳಿಸಿದ್ದವು. ‘ರಾಹುಲ್ ಅವರಿಗೆ ವಿದ್ಯುತ್ ಆಘಾತವಾದ ಸುದ್ದಿ ಸರಿಯಲ್ಲ. ರಾಹುಲ್ ಗಾಂಧಿ ಅವರ ಮೇಲೆ ಬಿದ್ದದ್ದು ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಅಲ್ಲಎಂದು ಎಎನ್ ಹೇಳಿತು. ಆಗ್ರಾದ ಫೌಂಟನ್ ಚೌಕದಲ್ಲಿ ಅಗ್ರಸೇನ ಅವರ ಸನ್ಮಾನ ಸಮಾರಂಭದ ವೇಳೆಯಲ್ಲಿ ರಾಹುಲ್ ಅವರ ಮೇಲೆ ವಿದ್ಯುತ್ ತಂತಿ ಬಿದ್ಧ ಬಗ್ಗೆ ಹಿಂದಿ ದೈನಿಕವೊಂದು ವರದಿ ಮಾಡಿತ್ತು.

2016: ಮುಂಬೈ: ಪಾಕಿಸ್ತಾನ ಮೂಲದ ಕಲಾವಿದರಿಗೆ ಭಾರತದಲ್ಲಿ ನಿಷೇಧ ಹೇರುವ ವಿಚಾರವಾಗಿ ಪರ ವಿರೋಧ ವ್ಯಕ್ತವಾದ ಬೆನ್ನಲ್ಲೇ  ದಬಂಗ್ ಸುಂದರಿ ಸೋನಾಕ್ಷಿ ಸಿನ್ಹಾ ಮುಂಬರುವ ನೂರ್ ಚಿತ್ರದಲ್ಲಿ ಪಾಕಿಸ್ತಾನ ಪತ್ರಕರ್ತೆ ಪಾತ್ರವನ್ನು ನಿರ್ವಹಿಸುವುದಿಲ್ಲ ಎಂದು ಹೇಳುವ ಮೂಲಕ ದೇಶಪ್ರೇಮ ಮೆರೆದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಪಾಕಿಸ್ತಾನಿ ಲೇಖಕ ಸಬಾ ಇಮ್ತಿಯಾಜ್ ಅವರಕರಾಚಿ ಯು ಆರ್ ಕಿಲ್ಲಿಂಗ್ ಮೀಕಾದಂಬರಿ ಶೀಘ್ರದಲ್ಲೇ ಸೆಟ್ಟೇರಲಿತ್ತು. ಅಷ್ಟೇ ಅಲ್ಲ ಚಿತ್ರದ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಆಯ್ಕೆಯಾಗಿದ್ದರು. ಆದರೆ ಉರಿ ದಾಳಿ ಬಾಲಿವುಡ್ ನಟಿಯ ಕಣ್ಣು ಕೆಂಪಾಗಿಸಿತು.
ಫೋರ್ಸ್ 2 ಚಿತ್ರದ ಟ್ರೖೆಲರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಸೋನಾಕ್ಷಿ, ನಾನು ಪಾಕಿಸ್ತಾನಿ ಪತ್ರಕರ್ತೆ ಪಾತ್ರ ನಿರ್ವಹಿಸುವುದಿಲ್ಲ. ಮಹಿಳಾ ಪ್ರದಾನವಾದ ಚಿತ್ರ ನೂರ್ ಎಂಬ ಪಾಕಿಸ್ತಾನಿ ಪತ್ರಕರ್ತೆಯ ಜೀವನಯಾನವನ್ನು ಚಿತ್ರಿಸಲಿದೆ. ಚಿತ್ರದ ಕತೆ ರಚಿಸಿದವರು ಪಾಕಿಸ್ತಾನಿ ಲೇಖಕರಾದ್ದರಿಂದ ನಾನು ಅಭಿನಯಿಸುವುದಿಲ್ಲ ಎಂದು ತಿಳಿಸಿದರು.
2016: ಭೋಪಾಲ್ (ಮಧ್ಯಪ್ರದೇಶ): ರೈಲುಗಾಡಿಯೊಂದರ ಎಂಟು ಬೋಗಿಗಳು ವೇಗವಾಗಿ ಹಾದು ಹೋದ ಬಳಿಕವೂ ರೈಲಿನಿಂದ ಹಳಿಗೆ ಬಿದ್ದಿದ್ದ ಬಾಲಕನೊಬ್ಬ ಪವಾಡ ಸದೃಶವಾಗಿ ಒಂದಿಷ್ಟೂ ಗಾಯಗಳಿಲ್ಲದೆ ಪಾರಾದ ಘಟನೆ ವಿಡಿಯೋ ಒಂದರಲ್ಲಿ ದಾಖಲಾಯಿತು.  ಮಧ್ಯಪ್ರದೇಶದ ಜಬುವಾ ಜಿಲ್ಲೆಯ ಬಮ್ನಿಯಾ ರೈಲು ನಿಲ್ದಾಣದಲ್ಲಿ ಘಟನೆ ಘಟಿಸಿತು. ಸೆ.30ರ ಬೆಳಗ್ಗೆ ಜನತಾ ಎಕ್ಸ್ಪ್ರೆಸ್ ರೈಲು ಹತ್ತುವ ಯತ್ನದಲ್ಲಿದ್ದಾಗ ಬಾಲಕ ಆಯತಪ್ಪಿ ಕೆಳಕ್ಕೆ ರೈಲು ಹಳಿಗಳ ಮೇಲೆ ಬಿದ್ದು ಬಿಟ್ಟ. ಸಹ ಪ್ರಯಾಣಿಕರು ರಕ್ಷಿಸಲು ಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಅಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತು. ಕ್ಷಣಾರ್ಧದಲ್ಲಿ ರೈಲುಗಾಡಿಯ ಎಂಟೂ ಬೋಗಿಗಳು ಮುಂದಕ್ಕೆ ಸಾಗಿಹೋದವು. ದಿಗ್ಭ್ರಾಂತರಾಗಿದ್ದ ಜನ ನೋಡ ನೋಡುತ್ತಿದ್ದಂತೆಯೇ, ಬಾಲಕ ಹಳಿಗಳ ಕೆಳಗಿನಿಂದ ಎದ್ದು ನಿಂತು ಸ್ವತಃ ಪ್ಲಾಟ್ಫಾರಂ ಮೇಲಕ್ಕೆ ಜಿಗಿದ. ಎಲ್ಲರೂ ನೋಡುತ್ತಿದ್ದಂತೆಯೇ ತನ್ನ ಚಡ್ಡಿ ಸರಿಪಡಿಸಿಕೊಳ್ಳುತ್ತಾ ಮುಂದಕ್ಕೆ ಸಾಗಿ ನಿಂತಿದ್ದ ಇನ್ನೊಂದು ರೈಲುಗಾಡಿಯನ್ನು ಹತ್ತಿಕೊಂಡು ಮುಂಬೈಗೆ ಹೊರಟು ಹೋದ ಎಂದು ವರದಿಗಳು ತಿಳಿಸಿದವು.

2016: ಮೈಸೂರು: ನಾಡಹಬ್ಬ ದಸರಾ ಸಂಭ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಪಸ್ಥಿತಿಯಲ್ಲಿ ಹಿರಿಯ ಸಾಹಿತಿ ಚನ್ನವೀರ ಕಣವಿ ಅವರು ಶುಭ ಧನುರ್ ಲಗ್ನದಲ್ಲಿ ಚಾಲನೆ ನೀಡಿದರು. 15 ವರ್ಷಗಳ ಬಳಿಕ ಬರುವ 11 ದಿನಗಳವೃದ್ಧಿ ದಸರಾಇದಾಗಿರುವುದು ಇನ್ನೊಂದು ವಿಶೇಷ. ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಿಯ ಸನ್ನಿಧಿಯಲ್ಲಿ ಸುಂದರ ದಸರಾ ಹಬ್ಬಕ್ಕೆ ಚಾಲನೆ ಸಿಕ್ಕಿತು. ಮದುವಣಗಿತ್ತಿಯಂತೆ ಸಿಂಗರಿಸಲಾದ ಮೈಸೂರಿಗೆ ಸಹಸ್ರಾರು ಪ್ರವಾಸಿಗರು ದೇಶ, ವಿದೇಶಗಳಿಂದ ಆಗಮಿಸಿದರು.. ಬೆಳಗ್ಗೆ ನಡೆದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಮೈಸೂರು ದಸರೆಯ ಸಂಭ್ರಮ ವೀಕ್ಷಿಸಲು ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸುವ ಪ್ರವಾಸಿಗರಿಗೆ ಬಾರಿ ಸರ್ಕಾರಆಕಾಶ ಅಂಬಾರಿಸೇವೆ ಆರಂಭಿಸಿದೆ. ಸಿಎಂ ಸಿದ್ದರಾಮಯ್ಯ  ಬೆಳಗ್ಗೆ ಎಚ್ಎಎಲ್ ವಿಮಾನ ನಿಲ್ದಾಣದಲ್ಲಿಆಕಾಶ ಅಂಬಾರಿಗೆ ಚಾಲನೆ ನೀಡಿ, ಅದೇ ವಿಮಾನದಲಿಯೇ ಮೈಸೂರಿಗೆ ತೆರಳಿದರುಅಕ್ಟೋಬರ್ 15 ತನಕಆಕಾಶ ಅಂಬಾರಿಸೇವೆ ಇರಲಿದೆ.


2016: ವಾಷಿಂಗ್ಟನ್: ಕೇವಲ 15 ದಿನದ ಅವಧಿಯಲ್ಲಿ ಎರಡು ಬಾರಿ ಪರಮಾಣು ಸಮರದ ಬಗ್ಗೆ ಮಾತನಾಡಿರುವುದಕ್ಕಾಗಿ ಪಾಕಿಸ್ತಾನದ ಸಚಿವರನ್ನು ಅಮೆರಿಕ ಪ್ರಬಲವಾಗಿ ತರಾಟೆಗೆ ತೆಗೆದುಕೊಂಡಿತು. ಸಚಿವರ ಹೇಳಿಕೆಗೆ ಪ್ರಬಲ ಆಕ್ಷೇಪ ವ್ಯಕ್ತ ಪಡಿಸಿದ ಅಮೆರಿಕಪಾಕ್ ಸಚಿವರ ಹೇಳಿಕೆ ಬೇಜವಾಬ್ದಾರಿಯುತ ಮತ್ತು ಕಳವಳಕಾರಿಎಂದು ಹೇಳಿತು. ನಾವು ಅವರಿಗೆ (ಪಾಕಿಸ್ತಾನಕ್ಕೆ) ವಿಷಯದ ಬಗ್ಗೆ (ಅಣ್ವಸ್ತ್ರ ಸಮರ ಬೆದರಿಕೆಗೆ ಅಮೆರಿಕದ ಆಕ್ಷೇಪ) ಮತ್ತೆ ಮತ್ತೆ ಸ್ಪಷ್ಟವಾಗಿ ಹೇಳಿದ್ದೇವೆಎಂದು ವಿದೇಶಾಂಗ ಇಲಾಖೆ ಅಧಿಕಾರಿಯೊಬ್ಬರು ಇಲ್ಲಿ ಹೇಳಿದರು. ತಮ್ಮ ಹೆಸರು ಹೇಳಲು ಇಚ್ಛಿಸದ ಅಧಿಕಾರಿ ಯಾವ ಹಂತದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಯಿತು ಎಂಬುದನ್ನು ವಿವರಿಸಲಿಲ್ಲ. ‘ಇದು ತುಂಬ ಕಳವಳಕಾರಿ ಮತ್ತು ಗಂಭೀರವಾದ ವಿಷಯಎಂದು ಪಾಕ್ ರಕ್ಷಣಾ ಸಚಿವ ಖ್ವಾಜಾ ಅಸಿಫ್ ಕಳೆದ 15 ದಿನಗಳಲ್ಲಿ ಎರಡು ಬಾರಿ ಅಣ್ವಸ್ತ್ರ ಸಮರ ಬಗ್ಗೆ ಮಾತನಾಡಿದ ಬಗ್ಗೆ ಪ್ರಶ್ನಿಸಿದಾಗ ಅಧಿಕಾರಿ ಪ್ರತಿಕ್ರಿಯಿಸಿದರು. ತಮ್ಮ ರಾಷ್ಟ್ರವು ಭಾರತದ ವಿರುದ್ಧ ಅಣ್ವಸ್ತ್ರಗಳನ್ನು ಬಳಸಬಹುದು ಎಂದು ಪಾಕ್ ಸಚಿವ ಅಸಿಫ್ ಹೇಳಿದ್ದರು. ಪ್ರಕ್ಷುಬ್ಧತೆ ಶಮನಕ್ಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಮೆರಿಕದ ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳನ್ನು ಒತ್ತಾಯಿಸಿತು.

ವಿಶ್ವ ಹಿರಿಯರ ದಿನ. ಬಾಳಿನ ಮುಸ್ಸಂಜೆಯಲ್ಲಿ ಹೆಜ್ಜೆ ಹಾಕುತ್ತಿರುವ ಹಿರಿಯರಿಗೆ ಗೌರವ ಸಲ್ಲಿಸುವ  ದಿನವಿದು. ಹಿರಿಯರ ಸಮಸ್ಯೆಗಳಿಗೆ ಹಾಗೂ ಅವರನ್ನು ನಿರ್ಲಕ್ಷಿಸುವುದರಿಂದ ಉದ್ಭವಿಸುವ ಸಮಸ್ಯೆಗಳಿಗೆ ಉತ್ತರ ಕಂಡು ಕೊಳ್ಳುವ ಯತ್ನವನ್ನು ಈದಿನ ವಿಶ್ವಾದ್ಯಂತ ಮಾಡಲಾಗುತ್ತದೆ.


2014: ಇಂಚೋನ್: ಏಷ್ಯಾಡ್ ಮಹಿಳಾ ಬಾಕ್ಸಿಂಗ್ ಸ್ಪರ್ಧೆಯ ಸೆಮಿಫೈನಲ್​ನಲ್ಲಿ ತೀರ್ಪಗಾರರ ಪಕ್ಷಪಾತದಿಂದ ಸೋಲು ಕಂಡಿದ್ದ ಮಣಿಪುರಿ ಬಾಕ್ಸರ್ ಸರಿತಾ ದೇವಿ ಕಂಚಿನ ಪದಕ ಸ್ವೀಕರಿಸಲು ನಿರಾಕರಿಸಿ ದಿಟ್ಟತನ ಮೆರೆದರು.. ಸರಿತಾ ತೋರಿದ ಆಕ್ರೋಶ ಅಂತಾರಾಷ್ಟ್ರೀಯ ಬಾಕ್ಸಿಂಗ್ ಒಕ್ಕೂಟದ ಕೆಂಗಣ್ಣಿಗೂ ಗುರಿಯಾಗಿದ್ದು, ನಿಷೇಧ ಶಿಕ್ಷೆಗೊಳಗಾಗುವ ಭೀತಿಯಿದೆ. ಏತನ್ಮಧ್ಯೆ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿಕೋಮ್​ಸ್ವರ್ಣ ಪದಕಕ್ಕೆ ಕೊರಳೊಡ್ಡಿ ಬೀಗಿದರು. ಕೂಟದ 13ನೇ ದಿನ ಭಾರತ ತಲಾ ಒಂದು ಚಿನ್ನ, ಬೆಳ್ಳಿ, 2 ಕಂಚು ಜಯಿಸಿತು. 800 ಮೀಟರ್ ಓಟದಲ್ಲಿ ಪಿಟಿ ಉಷಾ ಶಿಷ್ಯೆ ಟಿಂಟು ಲೂಕಾ ಬೆಳ್ಳಿ ಹಾಗೂ ಜಾವೆಲಿನ್ ಥ್ರೋನಲ್ಲಿ ಅನು ರಾಣಿ ಕಂಚು ಗೆದ್ದುಕೊಂಡರು. ಮಹಿಳಾ ಹಾಕಿ ತಂಡ ಕೂಡ ಕಂಚಿನ ಸಾಧನೆ ಮಾಡಿತು. ಆದರೂ ಭಾರತ ಪದಕ ಪಟ್ಟಿಯಲ್ಲಿ 10ನೇ ಸ್ಥಾನದಿಂದ (ಚಿನ್ನ-7, ಬೆಳ್ಳಿ-9, ಕಂಚು-34, ಒಟ್ಟು-50) 11ಕ್ಕೆ ಜಾರಿತು..
 
2014: ಫ್ರಾಂಕ್​ಫರ್ಟ್: ತಮ್ಮ ಅಮೆರಿಕ ಭೇಟಿಯನ್ನು ಮುಗಿಸಿ ಸ್ವದೇಶಕ್ಕೆ ವಾಪಸಾಗುವ ಮಾರ್ಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾಂಕ್​ಫರ್ಟ್​ಗೆ ಆಗಮಿಸಿದರು. ಅಮೆರಿಕ ಭೇಟಿಯಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿದ ಬಳಿಕ ಭಾರತ ಮತ್ತು ಅಮೆರಿಕ ಭಯೋತ್ಪಾಕದರ ಸ್ವರ್ಗವನ್ನು ಧ್ವಂಸಗೊಳಿಸಲು ಜಂಟಿ ಪ್ರಯತ್ನಗಳನ್ನು ಮಾಡಲು ಒಪ್ಪಂದಕ್ಕೆ ಬಂದಿವೆ. ಇದರ ಜೊತೆಗೆ ರಕ್ಷಣೆ, ಇಂಧನ, ಆರ್ಥಿಕ ಕ್ಷೇತ್ರ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಸಹಕಾರ ವೃದ್ಧಿಗೂ ಮೋದಿ ಹಾಗೂ ಬರಾಮ ಒಪ್ಪಿಕೊಂಡಿದ್ದಾರೆ. ಹಿಂದಿನ ದಿನ ಅಮೆರಿಕ-ಭಾರತ ವ್ಯವಹಾರ ಮಂಡಳಿ (ಯುಎಸ್​ಐಬಿಸಿ) ಏರ್ಪಡಿಸಿದ್ದ ಕೊನೆಯ ಅಧಿಕೃತ ಕಾರ್ಯಕ್ರಮದ ಕೊನೆಯಲ್ಲಿ 'ಥ್ಯಾಂಕ್ ಯೂ ಅಮೆರಿಕಾ' (ಅಮೆರಿಕವೇ ನಿನಗೆ ಧನ್ಯವಾದ) ಎಂದು ಹೇಳುವುದರೊಂದಿಗೆ ಪ್ರಧಾನಿಯವರು ತಮ್ಮ ಐದು ದಿನಗಳ ಅಮೆರಿಕಾ ಪ್ರವಾಸವನ್ನು ಮುಕ್ತಾಯಗೊಳಿಸಿದರು. 'ನನ್ನ ಭೇಟಿ ಅತ್ಯಂತ ಯಶಸ್ವಿಯಾಗಿದೆ' ಎಂದು ಈ ಸಂದರ್ಭದಲ್ಲಿ ಮೋದಿ ಹೇಳಿದರು. ವಾಷಿಂಗ್ಟನ್​ನ ಶ್ವೇತಭವನದ ಓವಲ್ ಕಚೇರಿಯಲ್ಲಿ ಮೋದಿ ಅವರು ಒಬಾಮಾ ಅವರನ್ನು ಭೇಟಿ ಮಾಡಿದರು. ಭೇಟಿಯ ಕೊನೆಗೆ ಉಭಯ ನಾಯಕರು ಜಂಟಿ ಹೇಳಿಕೆ ಬಿಡುಗಡೆ ಮಾಡಿ ಭಾರತ-ಅಮೆರಿಕ ಬಾಂಧವ್ಯವನ್ನು ಇನ್ನೂ ಎತ್ತರಕ್ಕೆ ಒಯ್ಯುವ ವಚನ ನೀಡಿದರು. ಭೇಟಿಯ ಬಳಿಕ ಅಮೆರಿಕ ಅಧ್ಯಕ್ಷರು ಮತ್ತು ಪ್ರಧಾನಿ ಒಟ್ಟಿಗೇ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಸ್ಮಾರಕಕ್ಕೆ ಭೇಟಿ ನೀಡಿದರು. ಅಮೆರಿಕ ಪ್ರವಾಸದ ಮೊದಲ ಹಂತದಲ್ಲಿ ಮೋದಿ ಅವರು ನ್ಯೂಯಾರ್ಕ್​ನಲ್ಲಿ ಸೆಪ್ಟೆಂಬರ್ 27ರಂದು ವಿಶ್ವಸಂಸ್ಥೆ ಮಹಾಧಿವೇಶನವನ್ನು ಉದ್ಧೇಶಿಸಿ ಮಾತನಾಡಿದರು. ಸೆಪ್ಟೆಂಬರ್ 28ರಂದು ಬಿಗ್ ಆಪಲ್​ನ ಮ್ಯಾಡಿಸನ್ ಸ್ಕೆವೕರ್ ಗಾರ್ಡನ್​ನಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಭಾರತೀಯ ಮೂಲಕ ಅಮೆರಿಕನ್ ಸಮುದಾಯವನ್ನು ಉದ್ಧೇಶಿಸಿ ಮಾತನಾಡಿ 'ಮೋಡಿ' ಮಾಡಿದರು. ಈ ಭೇಟಿ ಅವಧಿಯಲ್ಲಿ ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸ, ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸೀನಾ ಮತ್ತು ನೇಪಾಳೀ ಪ್ರಧಾನಿ ಸುಶೀಲ್ ಕೊಯಿರಾಲ ಅವರ ಜೊತೆಗು ಪ್ರಧಾನಿ ರ್ಚಚಿಸಿದರು. ಮೋದಿ ಅವರು ಅಮೆರಿಕದ ಉನ್ನತ ಉದ್ಯಮಿಗಳು, ಬಿಲ್ ಮತ್ತು ಹಿಲರಿ ಕ್ಲಿಂಟನ್, ನ್ಯೂಯಾರ್ಕ್ ಮೇಯರ್ ಮೈಕೆಲ್ ಬ್ಲೂಮ್​ಗ್ ಅವರಂತಹ ಅಮೆರಿಕದ ಖ್ಯಾತ ನಾಯಕರನ್ನು ಭೇಟಿ ಮಾಡಿದರು. ಒಟ್ಟಾರೆಯಾಗಿ 50ಕ್ಕೂ ಹೆಚ್ಚು ಮಂದಿ ಅಮೆರಿಕದ ಶಾಸನಕರ್ತರು, ಭಾರತೀಯ ಮೂಲದ ದಕ್ಷಿಣ ಕರೋಲಿನಾದ ಗವರ್ನರ್ ನಿಕ್ಕಿ ಹಾಲೀ ಸೇರಿದಂತೆ ಮೂವರು ಗವರ್ನರ್​ಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಪ್ರವಾಸ ಕಾಲದಲ್ಲಿ ಮೋದಿ ಅವರು ನ್ಯೂಯಾರ್ಕ್​ನ 9/11ಭಯೋತ್ಪಾದಕ ದಾಳಿಯ ಸ್ಮಾರಕ ಮತ್ತು ವಾಷಿಂಗ್ಟನ್ ಡಿಸಿಯ ಮಹಾತ್ಮಾ ಗಾಂಧಿ ಪ್ರತಿಮೆ ಸ್ಥಳಕ್ಕೂ ಭೇಟಿ ನೀಡಿದರು.

2014:  ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್​ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಎಂ.ಸಿ. ಮೇರಿ ಕೋಮ್​ಅವರು ಮಹಿಳೆಯರ ಫ್ಲೈವೈಟ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಸ್ವರ್ಣಪದಕ ಗೆದ್ದುಕೊಂಡರು. ಐದು ಬಾರಿ ವಿಶ್ವಚಾಂಪಿಯನ್ ಆಗಿದ್ದ ಮೇರಿ ಅವರು ಕಝುಕಿಸ್ಥಾನದ ಝೈನಾ ಶೆಕೆರ್ಬೆಕೋವಾ ಅವರನ್ನು 2-0 ಅಂಕಗಳ ಅಂತರದಲ್ಲಿ ಪರಾಭವಗೊಳಿಸಿದರು.

2014: ಬರೇಲಿ: ಸೇನಾ ಹೆಲಿಕಾಪ್ಟರ್ ಒಂದು ಇಲ್ಲಿನ ವಾಯುನೆಲೆಯಿಂದ ಗಗನಕ್ಕೆ ಏರಿದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿ ಇಬ್ಬರು ಪೈಲಟ್​ಗಳು ಮತ್ತು ಒಬ್ಬ ಎಂಜಿನಿಯರ್ ಮೃತರಾದರು. ಘಟನೆ ಈದಿನ ಬೆಳಗ್ಗೆ ಘಟಿಸಿದ್ದು, ಮೂವರು ಅಧಿಕಾರಿಗಳು ಮೃತರಾಗಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದರು. ಹೆಲಿಕಾಪ್ಟರ್ ತನ್ನ ಮಾಮೂಲಿ ಹಾರಾಟಕ್ಕೆ ಹೊರಟಿತ್ತು ಎಂದು ಸುದ್ದಿ ಮೂಲಗಳು ತಿಳಿಸಿದವು. ಹೆಲಿಕಾಪ್ಟರ್ ಗಗನಕ್ಕೇ ಏರಿದ ಕೆಲವೇ ಕ್ಷಣಗಳಲ್ಲಿ ತೊಂದರೆಯಲ್ಲಿ ಸಿಲುಕಿದಂತೆ ಕಾಣಿಸಿತು. ಬೆನ್ನಲ್ಲೇ ಅದರಲ್ಲಿ ಬೆಂಕಿ ಕಾಣಿಸಿಕೊಂಡು ವಾಯುನೆಲೆಯಲ್ಲಿ ನೆಲಕ್ಕೆ ಅಪ್ಪಳಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಹೆಲಿಕಾಪ್ಟರ್​ನಲ್ಲಿ ಇದ್ದ ಇಬ್ಬರು ಪೈಲಟ್​ಗಳು ಮತ್ತು ಒಬ್ಬ ಎಂಜಿನಿಯರ್ ದುರಂತದಲ್ಲಿ ಅಸು ನೀಗಿದರು. ಸೇನೆಯ ಹಿರಿಯ ಆಡಳಿತಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು.

2014:  ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ತಮಿಳುನಾಡು ಮಾಜಿ ಸಿಎಂ ಜಯಲಲಿತಾ, 4 ವರ್ಷ ಸಜೆಯ ಅಮಾನತು ಹಾಗೂ ಮಧ್ಯಂತರ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ನ ರಜಾಕಾಲೀನ ಪೀಠವು ಅಕ್ಟೋಬರ್ 7ಕ್ಕೆ ಮುಂದೂಡಿತು. 'ಪ್ರಕರಣದ ವಿಚಾರಣೆಯನ್ನು ರಜಾಕಾಲದ ಪೀಠ ನಡೆಸುವುದು ಸೂಕ್ತವಲ್ಲ, ಸಾಮಾನ್ಯ ಪೀಠವೇ ನಡೆಸುವುದು ಸೂಕ್ತ' ಎಂಬುದಾಗಿ ಈದಿನ ಜಾಮೀನು ಕೋರಿಕೆ ಅರ್ಜಿ ತಮ್ಮ ಮುಂದೆ ಬಂದಾಗ ರಜಾಕಾಲೀನ ಪೀಠದ ನ್ಯಾಯಮೂರ್ತಿ ರತ್ನಕಲಾ ಅವರು ಅಭಿಪ್ರಾಯಪಟ್ಟರು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ಮುಂದೂಡುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು. ಹಿಂದಿನ ದಿನ ಬೆಳಗ್ಗೆ ಅಧೀನ ನ್ಯಾಯಾಲಯದಲ್ಲಿ ಪ್ರಕರಣದ ಸರ್ಕಾರಿ ಅಭಿಯೋಜಕರಾಗಿದ್ದ ಭವಾನಿಸಿಂಗ್ ತಮಗೆ ಉನ್ನತ ಮಟ್ಟದ ನ್ಯಾಯಾಲಯದಲ್ಲಿ ಮುಂದುವರಿಯಲು ಸರ್ಕಾರದಿಂದ ಅಧಿಕೃತ ಅಧಿಸೂಚನೆ ದೊರೆತಿಲ್ಲ ಎಂದು ಹೇಳಿದ್ದನ್ನು ಪರಿಗಣಿಸಿದ ನ್ಯಾಯಾಲಯ ಅಭಿಯೋಜಕರಿಲ್ಲದೆ ಪ್ರಕರಣದ ವಿಚಾರಣೆ ನಡೆಸಿದಲ್ಲಿ ಅದು ಏಕಪಕ್ಷೀಯವಾಗುತ್ತದೆ ಎಂದು ಅಭಿಪ್ರಾಯಪಟ್ಟು ಅ.6ಕ್ಕೆ ವಿಚಾರಣೆ ಮುಂದೂಡಿತ್ತು. ನಂತರ, ತಮಿಳುನಾಡಿನ ಸಂಸದ, ಹಾಗೂ ವಕೀಲರು ವಿಶೇಷ ಪೀಠ ರಚಿಸಿ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಕೋರಿ ರಿಜಿಸ್ಟ್ರಾರ್​ಗೆ ಸಲ್ಲಿಸಿದ ಮನವಿಗೆ ನ್ಯಾಯಮೂರ್ತಿಗಳು ಸಮ್ಮತಿ ಸೂಚಿಸಿದ್ದರು.

2014:  ಬೆಂಗಳೂರು: ವಿಶೇಷ ನ್ಯಾಯಾಲಯವು ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೆ. ಜಯಲಲಿತಾ ಅವರು ತಮಗೆ ವಿಧಿಸಿರುವ 4 ವರ್ಷಗಳ ಸೆರೆವಾಸವನ್ನು ಪ್ರಶ್ನಿಸುವುದರ ಜೊತೆಗೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ನ ರಜಾಕಾಲೀನ ಪೀಠವು ಅಕ್ಟೋಬರ್ 7ಕ್ಕೆ ಮುಂದೂಡಿದ್ದನ್ನು ಪ್ರತಿಭಟಿಸಿ ಜಯಲಲಿತಾ ಬೆಂಬಲಿಗ ವಕೀಲರು ಕರ್ನಾಟಕ ಹೈಕೋರ್ಟ್ ಹೊರಭಾಗದಲ್ಲಿ ಧರಣಿ ನಡೆಸಿದರು. ಜಯಲಲಿತಾ ಅವರ ಅವರ ಅರ್ಜಿಯು ರಜಾಕಾಲದ ನ್ಯಾಯಮೂರ್ತಿ ಅವರ ಪೀಠದ ಮುಂದೆ ಬಂದಾಗ, ಜಯಲಲಿತಾ ಪರ ವಕೀಲ ರಾಮ್ ಜೇಠ್ಮಲಾನಿ ಅವರು ಅಪರಾಧ ದಂಡ ಸಂಹಿತೆಯ (ಸಿಆರ್​ಪಿಸಿ) 389ನೇ ವಿಧಿಯಡಿಯಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಬೇಕು ಮತ್ತು ಜಯಲಲಿತಾ ಅವರನ್ನು ಜಾಮೀನಿನಲ್ಲಿ ಬಿಡುಗಡ ಮಾಡಬೇಕು ಎಂದು ಕೋರಿದರು. ಶಿಕ್ಷೆಗೆ ಒಳಗಾದ ವ್ಯಕ್ತಿಯು ಸಲ್ಲಿಸುವ ಯಾವುದೇ ಮೇಲ್ಮನವಿಯನ್ನು ಬಾಕಿ ಇರಿಸಿಕೊಂಡು ಮೇಲ್ಮನವಿ ನ್ಯಾಯಾಲಯವು ಶಿಕ್ಷೆಯ ಜಾರಿಯನ್ನು ಅಮಾನತುಗೊಳಿಸಬಹುದು ಎಂದು ಅಪರಾಧ ದಂಡ ಸಂಹಿತೆಯ 389ನೇ ವಿಧಿಯು ಹೇಳುತ್ತದೆ. ಅಲ್ಲದೆ, ವ್ಯಕ್ತಿಯು ಸೆರೆಮನೆಯಲ್ಲಿದ್ದರೆ ಆತ ಅಥವಾ ಆಕೆಯನ್ನು ಜಾಮೀನಿನಲ್ಲಿ ಅಥವಾ ಸ್ವಯಂ ಖಾತರಿ ಆಧಾರದಲ್ಲಿ ಬಿಡುಗಡೆ ಮಾಡಬೇಕು ಎಂದೂ ಈ ವಿಧಿ ಹೇಳುತ್ತದೆ. ಏನಿದ್ದರೂ ಈ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ರಜಾಕಾಲದ ಪೀಠವು ನಡೆಸುವುದು ಸರಿಯಲ್ಲ, ಸಾಮಾನ್ಯ ಪೀಠವೇ ವಿಚಾರಣೆ ನಡೆಸುವುದು ಸೂಕ್ತ ಎಂದು ಹೇಳಿದ ನ್ಯಾಯಮೂರ್ತಿ ರತ್ನಕಲಾ ಅವರು ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 7ಕ್ಕೆ ಮುಂದೂಡಿದರು. ನ್ಯಾಯಾಲಯವು ವಿಚಾರಣೆ ಮುಂದೂಡಿದ್ದರಿಂದ ಅಸಮಾಧಾನಗೊಂಡ ಜಯಲಲಿತಾ ಬೆಂಬಲಿಗ ವಕೀಲರು ತತ್ ಕ್ಷಣವೇ ಹೈಕೋರ್ಟ್ ಹೊರಭಾಗದಲ್ಲಿ ಪ್ರತಿಭಟನಾ ಧರಣಿ ನಡೆಸಿದರು.

2014: ನವದೆಹಲಿ: ಎರಡು ಪ್ಯಾಸೆಂಜರ್ ರೈಲುಗಾಡಿಗಳು ಉತ್ತರ ಪ್ರದೇಶದ ಗೋರಖ್​ಪುರ ಸಮೀಪ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮವಾಗಿ ಕನಿಷ್ಠ 14 ಜನ ಮೃತರಾಗಿ 45 ಮಂದಿ ಗಾಯಗೊಂಡರು. 45 ಮಂದಿ ಗಾಯಾಳುಗಳ ಪೈಕಿ 12 ಜನರ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಂ ರೈಲ್ವೇ ವಕ್ತಾರ ಅನಿಲ್ ಸಕ್ಸೇನಾ ಹೇಳಿದರು. ವಾರಾಣಸಿಯಿಂದ ಗೋರಖ್​ಪುರಕ್ಕೆ ತೆರಳುತ್ತಿದ್ದ ಕೃಷಕ್ ಎಕ್ಸ್​ಪ್ರೆಸ್​ಲಖನೌದಿಂದ ಬರೌನಿಗೆ ಹೊರಟಿದ್ದ ಬರೌನಿ ಎಕ್ಸ್​ಪ್ರೆಸ್ ರೈಲುಗಾಡಿದೆ ಹಿಂದಿನಿಂದ ಢಿಕ್ಕಿ ಹೊಡೆಯಿತು. ರಾತ್ರಿ 11 ಗಂಟೆ ವೇಳೆಗೆ ಗೋರಖ್​ಪುರದಿಂದ ಸುಮಾರು 7 ಕಿಮೀ ದೂರದಲ್ಲಿ ಈ ದುರಂತ ಘಟಿಸಿತು ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಲೋಕ್ ಸಿಂಗ್ ನುಡಿದರು. ಢಿಕ್ಕಿಯ ಪರಿಣಾಮವಾಗಿ ಬರೌನಿ ಎಕ್ಸ್​ಪ್ರೆಸ್​ನ ಮೂರು ಬಂಡಿಗಳು ಹಳಿಯಿಂದ ಹೊರಕ್ಕೆ ತಳ್ಳಲ್ಪಟ್ಟವು. ಸಿಗ್ನಲ್ ಗಮನಿಸದೇ ರೈಲು ಓಡಿಸಿದ್ದಕ್ಕಾಗಿ ಕೃಷಕ್ ಎಕ್ಸ್​ಪ್ರೆಸ್ ಚಾಲಕರನ್ನು ರೈಲ್ವೇಯು ಅಮಾನತುಗೊಳಿಸಿತು. ಘಟನೆಯ ಕಾರಣ ಪತ್ತೆಗಾಗಿ ರೈಲ್ವೇ ಸುರಕ್ಷತಾ ಕಮೀಷನರ್ ಪಿ.ಕೆ. ಬಾಜಪೇಯಿ ನೇತೃತ್ವದಲ್ಲಿ ತನಿಖೆಗೆ ಆಜ್ಞಾಪಿಸಲಾಯಿತು.

2014: ಇಂಚೋನ್ (ದಕ್ಷಿಣ ಕೊರಿಯಾ): ದಕ್ಷಿಣ ಕೊರಿಯಾದ ಇಂಚೋನ್​ನಲ್ಲಿ ನಡೆಯುತ್ತಿರುವ 17ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳೆಯರ ಹಾಕಿ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡಿತು. ತಂಡವು ಜಪಾನನ್ನು 2-1 ಅಂತರದಲ್ಲಿ ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು. ಇಲ್ಲಿನ ಸಿಯೊನ್ಹಾಕ್ ಹಾಕಿ ಕ್ರೀಡಾಂಗಣದಲ್ಲಿ ನಡೆದ ಹಾಕಿ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಜಪಾನನ್ನು 2-1 ಅಂತರದಲ್ಲಿ ಸೋಲಿಸಿತು. ಇದರೊಂದಿಗೆ ಭಾರತದ ತಂಡ ಕಂಚಿನ ಪದಕವನ್ನು ಗೆದ್ದುಕೊಂಡದ್ದು ಮಾತ್ರವಲ್ಲ, 4 ವರ್ಷಗಳ ಹಿಂದೆ 2010ರಲ್ಲಿ ಜಪಾನ್​ನಿಂದ ಸೋಲುಂಡು ಕಂಚಿನ ಪದಕ ಕಳೆದುಕೊಂಡಿದ್ದುದರ ಸೇಡನ್ನು ತೀರಿಸಿಕೊಂಡಿತು. 2010ರ ಗುವಾಂಗ್ಝೊಹು ಕ್ರೀಡಾಂಗಣದಲ್ಲಿ ಜಪಾನ್ ಭಾರತವನ್ನು ಸೋಲಿಸಿ ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತ್ತು.

2014: ಚೆನ್ನೈ: ಶ್ರೀಲಂಕಾ ಅಧಿಕಾರಿಗಳ ವಶದಲ್ಲಿ ಇರುವ 20 ಮಂದಿ ಮೀನುಗಾರರು ಮತ್ತು 75 ದೋಣಿಗಳ ತತ್ ಕ್ಷಣ ಬಿಡುಗಡೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಮಿಳುನಾಡಿನ ನೂತನ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು. ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೋದಿ ಅವರಿಗೆ ಬರೆದ ಪ್ರಥಮ ಪತ್ರದಲ್ಲಿ ಪನ್ನೀರಸೆಲ್ವಂ ಅವರು ಕಳೆದ ತಿಂಗಳು ಪ್ರತ್ಯೇಕ ಸಂದರ್ಭಗಳಲ್ಲಿ ಶ್ರೀಲಂಕಾ ಪಡೆಗಳು 20 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದ ಬಗ್ಗೆ ಪ್ರಸ್ತಾಪಿಸಿದರು. ಶ್ರೀಲಂಕಾ ಸೆರೆಮನೆಗಳಲ್ಲಿ ಇರುವ ಭಾರತೀಯ ಮೀನುಗಾರರ ಬಿಡುಗಡೆಗೆ ಕೇಂದ್ರ ಸರ್ಕಾರ ಮತ್ತು ಹಿಂದಿನ ಮುಖ್ಯಮಂತ್ರಿ, ಎಐಎಡಿಎಂಕೆ ಮುಖ್ಯಸ್ಥೆ ಜೆ. ಜಯಲಲಿತಾ ನಡೆಸಿದ ಪ್ರಯತ್ನಗಳನ್ನು ಅವರು ವಿವರಿಸಿದರು.

2007: ಆಡಳಿತಾರೂಢ ಡಿಎಂಕೆ ಹಾಗೂ ಡಿಪಿಎ ಸರ್ಕಾರದ ಕರೆಯ ಮೇರೆಗೆ ಸೇತು ಸಮುದ್ರಂ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ತಮಿಳ್ನಾಡು ರಾಜ್ಯದ ಬಹುತೇಕ ಕಡೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ಜೊತೆಗೇ ಅಂಗಡಿಗಳು ಬಂದ್ ಆಚರಿಸಿದವು. ಈ ಸಂದರ್ಭದಲ್ಲಿ ಉಪವಾಸ ಕುಳಿತದ್ದಕ್ಕಾಗಿ ಮುಖ್ಯಮಂತ್ರಿ ಕರುಣಾನಿಧಿ ಅವರಿಗೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ಈ ಛೀಮಾರಿ ಪರಿಣಾಮವಾಗಿ ಕರುಣಾನಿಧಿ ಉಪವಾಸವನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದರು. ರಾಜ್ಯದೆಲ್ಲೆಡೆ `ಅಘೋಷಿತ ಬಂದ್' ಸ್ಥಿತಿ ಕಂಡುಬಂದಿತು. ಸುಪ್ರೀಂಕೋರ್ಟ್ ಛೀಮಾರಿ ಹಿನ್ನೆಲೆಯಲ್ಲಿ ಕರುಣಾನಿಧಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸಿದವು.

2008: ಜೋಧಪುರ ಮೆಹರಂಗಡದ ಚಾಮುಂಡಾ ದೇವಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತರಾದವರ ಸಂಖ್ಯೆ 224ಕ್ಕೆ ಹೆಚ್ಚಿತು. ಈದಿನ 77 ಸಾವುಗಳು ವರದಿಯಾದವು. ದುರಂತ ನಡೆದ ಒಂದು ದಿನದ ನಂತರ ಬೆಟ್ಟದ ದೇವಾಲಯದ ಬಾಗಿಲು ತೆರೆದು ಭಕ್ತಾಧಿಗಳಿಗೆ ಮುಕ್ತಗೊಳಿಸಲಾಯಿತು. .

2008: ಭಾರತದ `ಸರ್ವೋದಯ ದಂಪತಿ' ಕೃಷ್ಣಮ್ಮಾಳ್ ಮತ್ತು ಶಂಕರಲಿಂಗಮ್ ಜಗನ್ನಾಥನ್ ದಂಪತಿ ಸೇರಿದಂತೆ ನಾಲ್ವರು ಸಾಮಾಜಿಕ ಕಾರ್ಯಕರ್ತರನ್ನು `2008ರ ರೈಟ್ ಲೈವ್ಲಿ ಹುಡ್ ಪುರಸ್ಕಾರ'ಕ್ಕೆ ಆಯ್ಕೆ ಮಾಡಲಾಯಿತು. `ಗಾಂಧಿ ವಿಚಾರಧಾರೆಗಳನ್ನು ತಮ್ಮ ಜೀವನದುದಕ್ಕೂ ಅಳವಡಿಸಿಕೊಂಡಿರುವುದನ್ನು ಗುರುತಿಸಿ ಜಗನ್ನಾಥನ್ ದಂಪತಿಯನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಯಿತು. ಜಗನ್ನಾಥನ್ ದಂಪತಿಯ ಈ ಸಾಮಾಜಿಕ ಸಮರ್ಪಣೆಯನ್ನು ಪ್ರಶಸ್ತಿ ಸಮಿತಿಯು ಭಾರತದ ಶಕ್ತಿ'ಎಂದು ಉಲ್ಲೇಖಿಸಿದರು. ಪರ್ಯಾಯನೊಬೆಲ್ ಪುರಸ್ಕಾರ' ಎಂದೇ ಕರೆಯಲ್ಪಡುವ ಈ ಪ್ರಶಸ್ತಿಯನ್ನು ಜಗನ್ನಾಥನ್ ದಂಪತಿಯ ಜೊತೆ ಅಮೆರಿಕದ ಪತ್ರಕರ್ತ ಅಮಿ ಗೂಡ್ ಮ್ಯಾನ್, ಜರ್ಮನಿಯ ಸ್ತ್ರೀರೋಗ ತಜ್ಞೆ ಮೋನಿಕಾ ಹೌಸೆರ್ ಹಾಗೂ ಸೋಮಾಲಿಯಾದ ಆಶಾ ಹಗಿ ಅವರು ಹಂಚಿಕೊಂಡರು..ಕೃಷ್ಣಮ್ಮಾಳ್ ಜಗನ್ನಾಥನ್, ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯವರು. 80 ವರ್ಷದ ಈ `ಸರ್ವೋದಯ ಕಾರ್ಯಕರ್ತೆ'ಗ' ಭಾರತ ಸರ್ಕಾರದ ಪ್ರತಿಷ್ಠಿತ `ಪದ್ಮಶ್ರೀ' ಮತ್ತು ಅಮೆರಿಕ ಸಿಯಾಟಲ್ ವಿವಿ ನೀಡುವ `ಒಪುಸ್ -2008' ಪ್ರಶಸ್ತಿ ಕೂಡ ಲಭಿಸಿವೆ. ಸರ್ವೋದಯ ನಾಯಕ ಶಂಕರಲಿಂಗಮ್ ಜಗನ್ನಾಥನ್ ಅವರನ್ನು ವಿವಾಹವಾದ ಈಕೆ ಗಾಂಧೀಜಿಯವರ `ಭೂದಾನ ಚಳುವಳಿ'ಯಲ್ಲಿ ಗಾಂಧಿವಾದಿ ವಿನೋದ ಭಾವೆಯವರ ಜೊತೆ ಪಾಲ್ಗೊಂಡಿದ್ದರು. 1981ರಲ್ಲಿ ನಾಗಪಟ್ಟಣಂ ಜಿಲ್ಲೆಯ ಕುಥೂರ್ ಹಳ್ಳಿಯಲ್ಲಿ ಸ್ವಯಂ ಸೇವಾ ಸಂಸ್ಥೆ (ಎನ್ ಎ ಎಪ್ ಟಿ ಐ)ಯನ್ನು ಆರಂಭಿಸಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

2008: ಅಮೆರಿಕದ ಲೀಮನ್ ಬ್ರದರ್ಸ್ ಬ್ಯಾಂಕ್ ದಿವಾಳಿಯ ಹಿನ್ನೆಲೆಯಲ್ಲಿ ಬ್ರಿಟನ್ ಶಾಖೆಯಲ್ಲಿನ 750 ಹುದ್ದೆಗಳನ್ನು ಕಡಿತಗೊಳಿಸುವುದಾಗಿ ಬ್ಯಾಂಕಿನ ಆಡಳಿತಾಧಿಕಾರಿಗಳು ಘೋಷಿಸಿದರು.

2008: ಬ್ರಿಟನ್ ರಾಜಕುಮಾರಿ ಡಯಾನಾ ಸತ್ತು ದಶಕವೇ ಕಳೆದಿದ್ದರೂ, ತಾನು ಬಳಸುತ್ತಿದ್ದ ವಸ್ತುಗಳ ಮೂಲಕ ಆಕೆ ಜನಮಾನಸದಲ್ಲಿ ಜೀವಂತವಾಗಿರುವುದು ಬೆಳಕಿಗೆ ಬಂತು. ಹದಿಹರೆಯದ ವಯಸ್ಸಿನಲ್ಲಿ ಡಯಾನಾ ತನ್ನ ಪ್ರಿಯಕರ ರಾಜಕುಮಾರ ಚಾರ್ಲ್ಸ್ ಅವರಿಗೆ ಬರೆದ ಪ್ರೇಮಪತ್ರಗಳು ಈದಿನ ಇಂಗ್ಲೆಂಡ್ನ್ಲಲಿ ನಡೆದ ಹರಾಜಿನಲ್ಲಿ 12,000 ಪೌಂಡುಗಳಿಗೆ ಮಾರಾಟವಾದವು. ಈ ಪ್ರೇಮಪತ್ರಗಳನ್ನು ರೀಮನ್ ಡನ್ಸಿ ಎಂಬುವರು 12431 ಪೌಂಡುಗಳಿಗೆ ಖರೀದಿಸಿದರು. ಪತ್ರಗಳಲ್ಲಿ ರಾಜಕುಮಾರ ಚಾರ್ಲ್ಸ್ ಜೊತೆಗಿನ ಪ್ರೀತಿ, ಪ್ರೇಮ, ಪ್ರಣಯದ ಜೊತೆಗೆ ಇಬ್ಬರ ನಡುವಿನ ಮಾತುಕತೆಗಳೂ ಅಡಕವಾಗಿವೆ ಎನ್ನಲಾಗಿತ್ತು.

 2007: ಭಾರತೀಯ ಭೂಗರ್ಭ ಸರ್ವೇಕ್ಷಣಾಲಯದ `ಸಮುದ್ರಮಂಥನ' ಹಡಗಿನ ಬದಲಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಸಮುದ್ರ ತಳ ಸಮೀಕ್ಷೆ ಮತ್ತು ಸಂಶೋಧನೆಗೆ ನೆರವಾಗುವ ಹೊಸ  ಹಡಗನ್ನು ಭೂಗರ್ಭ ಸರ್ವೇಕ್ಷಣಾಲಯಕ್ಕೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಿಯರಂಜನ್ ದಾಸ್ಮುನ್ಷಿ ಪ್ರಕಟಿಸಿದರು. ಈ ಪ್ರಸ್ತಾವಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು ಹೆಚ್ಚು ಕಾರ್ಯಕ್ಷಮತೆಯ ಹೊಸ ಸಂಶೋಧನಾ ಹಡಗಿನ ವೆಚ್ಚ 448ಕೋಟಿ. ರೂಪಾಯಿಗಳು.

2007: ರಾಷ್ಟ್ರದಲ್ಲಿಯೇ ಮೊತ್ತ ಮೊದಲ ಬಾರಿಗೆ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ 'ಮಡಿಲು' ಯೋಜನೆಗೆ ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ತಾಯಿ ಮತ್ತು ಶಿಶುವಿನ ಆರೋಗ್ಯ ಕಾಪಾಡುವ ಉದ್ದೇಶಕ್ಕಾಗಿ ರೂಪಿಸಲಾದ ಈ ಯೋಜನೆಯಡಿಯಲ್ಲಿ ಸಾಂಕೇತಿಕವಾಗಿ ಬೆಂಗಳೂರು ಸುತ್ತ ಮುತ್ತಲಿನ 26 ಮಹಿಳೆಯರಿಗೆ 'ಉಚಿತ ಆರೈಕೆ ಕಿಟ್' ವಿತರಿಸಲಾಯಿತು. ಯೋಜನೆಯಡಿಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆಯಾಗುವ ಮಹಿಳೆಯರಿಗೆ ಅಗತ್ಯವಸ್ತುಗಳ ಕಿಟ್ ನೀಡಲಾಗುವುದು. ರಾಜ್ಯದ 6.5 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆಯಲಿದ್ದಾರೆ.

2007: ಅಕ್ಟೋಬರ್ 2ರ ಸಂಜೆ ಒಳಗಾಗಿ ಅಧಿಕಾರ ಹಸ್ತಾಂತರ ಮಾಡುವಂತೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರುವ ಸಲುವಾಗಿ ಸಚಿವ ರಾಮಚಂದ್ರಗೌಡ ಅವರ ಮನೆಯಲ್ಲಿ ಈದಿನ ನಡೆದ ಸಭೆಯಲ್ಲಿ ಬಿಜೆಪಿಯ ಎಲ್ಲ ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ಈ ಪತ್ರಗಳನ್ನು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದರು. ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ ಸಿನ್ಹ ನೇತೃತ್ವದಲ್ಲಿ ಈ ಸಭೆ ನಡೆಯಿತು. ಸಮ್ಮಿಶ್ರ ಸರ್ಕಾರ ಮುಂದುವರಿಯಲು ಕುಮಾರ ಸ್ವಾಮಿ ಅವರನ್ನೇ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ಜನತಾದಳ ಪಟ್ಟು ಹಿಡಿಯಿತು.

2007: ಹಬ್ಬ-ಹರಿದಿನಗಳ ಪೂರ್ವಭಾವಿಯಾಗಿ ನೀಡುವ ಬೋನಸ್ಸಿಗೆ ಸಂಬಂಧಪಟ್ಟ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ದೇಶದ ಕೈಗಾರಿಕೆಗಳಲ್ಲಿ ದುಡಿಯುವ ಲಕ್ಷಾಂತರ ಕಾರ್ಮಿಕರಿಗೆ ಇದರಿಂದ ಲಾಭವಾಗುವುದು. ಈ ತಿದ್ದುಪಡಿಯಿಂದಾಗಿ ಮಾಸಿಕ 10,000 ರೂಪಾಯಿಗಳವರೆಗೆ ವೇತನ ಪಡೆಯುವ ಉದ್ಯೋಗಿಗಳು ಸಹ ಬೋನಸ್ ಪಡೆಯಲು ಅರ್ಹರಾಗುವರು. ಈ ಹಿಂದೆ, ಮಾಸಿಕ 3,500 ರೂಪಾಯಿಗಳ ತನಕ ವೇತನ ಪಡೆಯುತ್ತಿದ್ದ ಕಾರ್ಮಿಕರು ಮಾತ್ರ ಈ ಸೌಲಭ್ಯ ಪಡೆಯುವ ಅರ್ಹತೆ ಹೊಂದಿದ್ದರು.

2007: ಹನ್ನೊಂದು ವರ್ಷಗಳ ಹಿಂದೆ ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೃಷ್ಣಯ್ಯ ಅವರನ್ನು ಹತ್ಯೆಗೈದಿದ್ದ ಆರೋಪದ ಮೇಲೆ ಮಾಜಿ ಸಂಸತ್ ಸದಸ್ಯ ಆನಂದ್ ಮೋಹನ್, ಆತನ ಪತ್ನಿ ಲವ್ಲಿ ಆನಂದ್ ಮತ್ತು ಅವರ ಐವರು ಸಹಚರರಿಗೆ ಪಟ್ನಾ ನ್ಯಾಯಾಲಯ 11 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಡಿಸೆಂಬರ್ 5, 1994ರಂದು ಗೋಪಾಲಗಂಜ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿದ್ದ ಕೃಷ್ಣಯ್ಯ ಅವರನ್ನು ಗುಂಪೊಂದು ಹತ್ಯೆಗೈದಿತ್ತು. ಆ ಗುಂಪಿಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಶಿಯೋಹಾರ್ ಲೋಕಸಭಾ ಕ್ಷೇತ್ರದ ಮಾಜಿ ಸದಸ್ಯ ಆನಂದ್ ಮೋಹನ್, ಸಂಸತ್ತಿನಲ್ಲಿ ವೈಶಾಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರ ಹೆಂಡತಿ ಲವ್ಲಿ ಆನಂದ್ ಅವರಿಗೆ ಶಿಕ್ಷೆ ವಿಧಿಸಲಾಯಿತು.

2007: ಗೋವುಗಳು ಮನುಷ್ಯರಿಗೆ ಎಲ್ಲ ರೀತಿಯಲ್ಲೂ ನೆರವಿಗೆ ಬರುವುದರಿಂದ ನಶಿಸುತ್ತಿರುವ ಗೋವುಗಳ ಸಾಕಣೆಗೆ ಒಲವು ತೋರಿಸಿ ರಕ್ಷಣೆಗೆ ಶ್ರಮಿಸಬೇಕು ಎಂದು ಕೃಷಿತಜ್ಞ ಡಾ. ನಾರಾಯಣರೆಡ್ಡಿ ಕೃಷ್ಣರಾಜಪುರದಲ್ಲಿ ವರ್ತೂರು ವಲಯ ಸಮಿತಿಯು ಏರ್ಪಡಿಸಿದ್ದ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಕರೆ ನೀಡಿದರು. ದೇವಸಂದ್ರ ರಾಮಕೃಷ್ಣಸ್ವಾಮಿ ವಿವೇಕಾನಂದ ಸಾಧನ ಕೇಂದ್ರದ ಸ್ಥಾಪಕ ಅಧ್ಯಕ್ಷ ಚಂದ್ರೇಶಾನಂದಜಿ ಸ್ವಾಮೀಜಿ, ರಾಮಚಂದ್ರಾಪುರದ ಮಠದ ರಾಘವೇಶ್ವರ ಭಾರತಿ ಮಹಾಸ್ವಾಮಿಗಳು ಹಾಗೂ ವಿಭೂತಿಪುರ ವೀರಸಿಂಹಾಸನ ಮಠದ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಪಾಲ್ಗೊಂಡಿದ್ದರು.

1997: ವಿಶ್ವದ ಅತೀ ಕುಬ್ಜ ಮನುಷ್ಯ ಗುಲ್ ಮೊಹಮ್ಮದ್ (36) ನಿಧನ. 56.16 ಸೆಂ.ಮೀ. ಎತ್ತರವಿದ್ದ ಗುಲ್ ಮೊಹಮ್ಮದ್ ಈ ವಿಶೇಷತೆಯಿಂದಾಗಿಯೇ 1992ರಲ್ಲಿ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದ್ದರು.

1995: ಖ್ಯಾತ ಕೈಗಾರಿಕೋದ್ಯಮಿ ಆದಿತ್ಯ ಬಿರ್ಲಾ ನಿಧನ.

1982: ಹೆಲ್ಮಟ್ ಕೊಹ್ಲ್ ಅವರು ಪಶ್ಚಿಮ ಜರ್ಮನಿಯ ಚಾನ್ಸಲರ್ ಆದರು.

1977: ಸಾಕರ್ ದಂತಕತೆಯಾದ ಬ್ರೆಝಿಲಿನ ಪೀಲೆ ಅವರು 1363 ಆಟಗಳಲ್ಲಿ 1281 ಗೋಲುಗಳನ್ನು ಪಡೆದ ಬಳಿಕ ಸ್ಪರ್ಧಾತ್ಮಕ ಫುಟ್ಬಾಲ್ ನಿಂದ ನಿವೃತ್ತರಾದರು.

1972: ಕೀನ್ಯಾದ ಪುರಾತತ್ವ ತಜ್ಞ ಹಾಗೂ ಮಾನವ ಜನಾಂಗದ ಅಧ್ಯಯನಕಾರ ಲೂಯಿ ಲೀಕಿ (1903-1972) ತಮ್ಮ 69ನೇ ವಯಸ್ಸಿನಲ್ಲಿ ಮೃತರಾದರು. ಅವರು ಪೂರ್ವ ಆಫ್ರಿಕಾದಲ್ಲಿಪಳೆಯುಳಿಕೆಗಳ ಕುರಿತು ನಡೆಸಿದ ಸಂಶೋಧನೆಗಳು ಮಾನವ ವಂಶದ ಹುಟ್ಟು ಹಿಂದೆ ನಂಬಿದ್ದಕ್ಕಿಂತಲೂ ಪುರಾತನವಾದದ್ದು ಹಾಗೂ ಮಾನವ ಅಭಿವೃದ್ಧಿ ಏಷ್ಯಾಕ್ಕೂ ಹೆಚ್ಚಾಗಿ ಆಫ್ರಿಕಾದಲ್ಲೇ ಕೇಂದ್ರೀಕೃತವಾಗಿತ್ತು ಎಂದೂ ಸಾಬೀತು ಮಾಡಿದವು.

1971: ಫ್ಲಾರಿಡಾದ ಓರ್ಲೆಂಡೋದಲ್ಲಿ `ವಾಲ್ಟ್ ಡಿಸ್ನಿ ವರ್ಡ್' ಆರಂಭವಾಯಿತು.

1953: ಆಂಧ್ರಪ್ರದೇಶ ರಾಜ್ಯವು ಅಸ್ತಿತ್ವಕ್ಕೆ ಬಂದಿತು. ಟಿ. ಪ್ರಕಾಶಂ ಮೊದಲ ಮುಖ್ಯಮಂತ್ರಿಯಾದರು. ಮದ್ರಾಸ್ ರಾಜ್ಯದ 11 ಜಿಲ್ಲೆಗಳನ್ನು ಸೇರಿಸಿ ರಚಿಸಲಾದ ಈ ರಾಜ್ಯಕ್ಕೆ ಕರ್ನೂಲ್ ರಾಜಧಾನಿಯಾಯಿತು. ಒಂದು ಜಿಲ್ಲೆಗೆ ಪ್ರಕಾಶಂ ಜಿಲ್ಲೆ ಎಂದೇ ಹೆಸರಿಡಲಾಯಿತು. ನಂತರ 1956ರ ನವೆಂಬರ್ 1ರಂದು ರಾಜ್ಯಗಳ ಪುನರ್ ವಿಂಗಡಣಾ ಸಮಿತಿಯ ಶಿಫಾರಸಿನಂತೆ ಹಿಂದಿನ ನಿಜಾಮನ ಆಳ್ವಿಕೆಗೆ ಒಳಪಟ್ಟಿದ್ದ 9 ಜಿಲ್ಲೆಗಳನ್ನು ಸೇರಿಸಿ ಆಂಧ್ರಪ್ರದೇಶವನ್ನು ವಿಸ್ತರಿಸಲಾಯಿತು. ಹೈದರಾಬಾದ್ ಅದರ ಹೊಸ ರಾಜಧಾನಿಯಾಯಿತು.

1953: ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ) ಜನನ.

 1947: ಸಾಹಿತಿ ಮಲೆಯೂರು ಗುರುಸ್ವಾಮಿ ಜನನ.

1938: ಮೈಕೆಲ್ ಫರೇರಾ ಜನ್ಮದಿನ. ಭಾರತದ ಖ್ಯಾತ ಬಿಲಿಯರ್ಡ್  ಆಟಗಾರರಾದ ಇವರು ಬಿಲಿಯರ್ಡಿನ `ವರ್ಲ್ಡ್ ಅಮೆಚೂರ್ ಪ್ರಶಸ್ತಿ'ಯನ್ನು ಮೂರು ಬಾರಿ ಗೆದ್ದಿದ್ದರು.

1931: ಸಾಹಿತಿ ಬಿ.ಆರ್. ನಾಗೇಶ್ ಜನನ.

1930: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ (1930-2000) ಜನ್ಮದಿನ.

1927: ಖ್ಯಾತ ತಮಿಳು ಚಿತ್ರ ನಟ ಶಿವಾಜಿ ಗಣೇಶನ್ (1927-2001) ಜನ್ಮದಿನ. ಇವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

1912: ಸಾಹಿತಿ ವಿ.ಎಂ. ಇನಾಂದಾರ್ ಜನನ.

1912: ಸಾಹಿತಿ ಗೌರಮ್ಮ ಜನನ.

1895: ಪಾಕಿಸ್ಥಾನದ ಪ್ರಥಮ ಪ್ರಧಾನಿ ಲಿಯಾಖತ್ ಅಲಿ ಖಾನ್ (1895-1956) ಜನ್ಮದಿನ.

1885: ಕನ್ನಡದ ಅಶ್ವಿನಿ ದೇವತೆಗಳಲ್ಲಿ ಒಬ್ಬರು ಎಂದೇ ಖ್ಯಾತರಾಗಿದ್ದ ಟಿ.ಎಸ್. ವೆಂಕಣ್ಣಯ್ಯ (1-10-1885ರಿಂದ 24-2-1939) ಅವರು ಸುಬ್ಬಣ್ಣ- ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನಲ್ಲಿ ಜನಿಸಿದರು.

1880: ಎಡಿಸನ್ ಲ್ಯಾಂಪ್ ವರ್ಕ್ಸ್ ನ್ಯೂಜೆರ್ಸಿಯಲ್ಲಿ ಮೊತ್ತ ಮೊದಲ ಎಲೆಕ್ಟ್ರಿಕ್ ಬಲ್ಬ್ ತಯಾರಿ ಕಾರ್ಯವನ್ನು ಆರಂಭಿಸಿತು.

1854: ಭಾರತದಲ್ಲಿ ಮೊದಲ ಬಾರಿಗೆ ಅಂಚೆ ಚೀಟಿ ಪರಿಚಯ. ಅರ್ಧ ಮತ್ತು ಒಂದು ಆಣೆಯ ಈ ಅಂಚೆ ಚೀಟಿಯಲ್ಲಿ ರಾಣಿ ವಿಕ್ಟೋರಿಯಾ ಭಾವಚಿತ್ರ ಮುದ್ರಿಸಲಾಗಿತ್ತು.

1847: ಬ್ರಿಟಿಷ್ ಸಮಾಜ ಸುಧಾರಕಿ ಹಾಗೂ ಭಾರತ ಸ್ವಾತಂತ್ರ್ಯ ಹೋರಾಟದ ನಾಯಕರಲ್ಲಿ ಒಬ್ಬರಾದ ಅನ್ನೀ ಬೆಸೆಂಟ್ (1847-1933) ಜನ್ಮದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment