2019: ಶ್ರೀನಗರ: ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಸಂಘಟನೆಯ ಐವರು ಭಯೋತ್ಪಾದಕರು ಕಾಶ್ಮೀರಕ್ಕೆ ನುಸುಳಿದ್ದು ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸುವ ಸಾಧ್ಯತೆಯನ್ನು ಗುಪ್ತಚರ ಮೂಲಗಳು ದೃಢ ಪಡಿಸಿದ ಹಿನ್ನೆಲೆಯಲ್ಲಿ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಕಟ್ಟೆಚ್ಚರ ಘೋಷಿಸಿದ ಜಮ್ಮುಮತ್ತು ಕಾಶ್ಮೀರ ಸರ್ಕಾರವು ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಿ, ತತ್ ಕ್ಷಣ ರಾಜ್ಯ ಬಿಡುವಂತೆ ಯಾತ್ರಾರ್ಥಿಗಳಿಗೆ ಸೂಚನೆ ನೀಡಿತು. ವಾರ್ಷಿಕ ಯಾತ್ರೆಯನ್ನು ಹದಗೆಡಿಸಲು ಪಾಕಿಸ್ತಾನ ಯೋಜಿಸಿದೆ ಎಂಬ ಮಾಹಿತಿ ತನಗೆ ಲಭಿಸಿದೆ ಎಂಬುದಾಗಿ ಸೇನೆಯು ತಿಳಿಸಿದ ಕೆಲವೇ ಗಂಟೆಗಳಲ್ಲಿ ಯಾತ್ರೆಯನ್ನು ಮೊಟಕುಗೊಳಿಸುವ ಪ್ರಕಟಣೆಯನ್ನು ಹೊರಡಿಸಲಾಯಿತು. ರಾಜ್ಯ ಗೃಹ ಇಲಾಖೆಯು ಮಧ್ಯಾಹ್ನ ಹೊರಡಿಸಿರುವ ಆದೇಶದಲ್ಲಿ ಸರ್ಕಾರವು ಸಂಭಾವ್ಯ ಭಯೋತ್ಪಾದಕ ದಾಳಿಗಳ ಬಗ್ಗೆ ಗುಪ್ತಚರ ಮೂಲಗಳು ಸುಳಿವು ನೀಡಿರುವುದನ್ನು ಉಲ್ಲೇಖಿಸಿದ್ದು, ಯಾತ್ರೆ ಮೊಟಕಿಗೆ ಇದೇ ಕಾರಣ ಎಂದು ತಿಳಿಸಿತು. ಭಯೋತ್ಪಾದಕ ದಾಳಿಗಳ ಬಗ್ಗೆ ಅದರಲ್ಲೂ ಅಮರನಾಥ ಯಾತ್ರೆಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಬಗ್ಗೆ ಗುಪ್ತಚರ ಮೂಲಗಳು ಇತ್ತೀಚೆಗೆ ನೀಡಿರುವ ಮಾಹಿತಿಯನ್ನು ಅನುಸರಿಸಿ ಮತ್ತು ಕಾಶ್ಮೀರ ಕಣಿವೆಯ ಭದ್ತತಾ ಪರಿಸ್ಥಿತಿಯನ್ನು ಪರಿಗಣಿಸಿ, ಪ್ರವಾಸಿಗಳು ಮತ್ತು ಅಮರನಾಥ ಯಾತ್ರಿಕರ ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು, ತತ್ ಕ್ಷಣವೇ ಅಮರನಾಥ ಯಾತ್ರೆಯನ್ನು ಮೊಟಕುಗೊಳಿಸಲು ಮತ್ತು ಯಾತ್ರಿಗಳನ್ನು ಆದಷ್ಟೂ ಬೇಗೆ ಹಿಂದಕ್ಕೆ ಕಳುಹಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳೂವಂತೆ ಸಲಹೆ ಮಾಡಲಾಗಿದೆ ಎಂದು ಆದೇಶ ತಿಳಿಸಿತು. ಜುಲೈ ೧ರಂದು ಆರಂಭವಾದ ಅಮರನಾಥ ಯಾತ್ರೆಯು ಆಗಸ್ಟ್ ೧೫ರಂದು ಮುಕ್ತಾಯಗೊಳ್ಳಬೇಕಾಗಿತ್ತು. ಕಾಶ್ಮೀರ ಕಣಿವೆಯ ಹವಾಮಾನ ಮುನ್ಸೂಚನೆಯನ್ನು ಅನುಸರಿಸಿ ಯಾತ್ರೆಯನ್ನು ಆಗಸ್ಟ್ ೪ರವರೆಗೆ ಅಮಾನತುಪಡಿಸಲಾಗಿತ್ತು. ಈ ವರ್ಷ ಈವರೆಗೆ ೩.೫ ಲಕ್ಷದಷ್ಟು ದಾಖಲೆ ಸಂಖ್ಯೆಯ ಭಕ್ತರು ವಾರ್ಷಿಕ ಯಾತ್ರೆಯನ್ನು ಕೈಗೊಂಡಿದ್ದು, ಯಾತ್ರಿಕರ ಸಂಖ್ಯೆ ಈ ವರ್ಷ ಕಳೆದ ವರ್ಷಕ್ಕಿಂತ ಶೇಕಡಾ ೩೦ರಷ್ಟು ಹೆಚ್ಚಾಗಿತ್ತು. ಪಾಕಿಸ್ತಾನವು ಕಣಿವೆಯಲ್ಲಿ ಶಾಂತಿಯನ್ನು ಕದಡಲು ಯತ್ನ ನಡೆಸುತ್ತಿದೆ, ಆದರೆ ಅವರ ಯತ್ನಗಳನ್ನು ಸಹಿಸಲಾಗುವುದಿಲ್ಲ ಎಂದು ಸೇನೆಯ ೧೫ ಕೋರ್ನ ಲೆಫ್ಟಿನೆಂಟ್ ಜನರಲ್ ಕೆಜೆಎಸ್ ಧಿಲ್ಲೋನ್ ಹೇಳಿದರು. ಕಳೆದ ಕೆಲವು ದಿನಗಗಳಲ್ಲಿ ನಡೆಸಲಾದ ಶೋಧ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳು ಪಾಕಿಸ್ತಾನ ನಿರ್ಮಿತ ಸ್ಫೋಟಕ ಮತ್ತು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಮರನಾಥ ಯಾತ್ರೆಯ ಮಾರ್ಗದಲ್ಲಿ ಪತ್ತೆ ಹಚ್ಚಿದ ಬಳಿಕ ಧಿಲ್ಲೋನ್ ಅವರು ಈ ಹೇಳಿಕೆ ನೀಡಿದರು. ಪಾಕಿಸ್ತಾನ ಮತ್ತು ಅದರ ಸೇನೆಯು ಕಾಶ್ಮೀರ ಕಣಿವೆಯಲ್ಲಿ ಶಾಂತಿಯನ್ನು ಹಾಳುಗೆಡವಲು ತೀವ್ರ ಯತ್ನ ನಡೆಸುತ್ತಿವೆ ಎಂದು ಕೋರ್ ಕಮಾಂಡರ್ ಹೇಳಿದರು. ‘ಕಳೆದ ಮೂರು-ನಾಲ್ಕು ದಿನಗಳಿಂದ ಪಾಕಿಸ್ತಾನ ನೇತೃತ್ವದ ಭಯೋತ್ಪಾದಕರು ಮತ್ತು ಪಾಕಿಸ್ತಾನಿ ಸೇನೆಯು ಸಧ್ಯ ನಡೆಯುತ್ತಿರುವ ಶ್ರೀ ಅಮರನಾಥ ಯಾತ್ರೆಯನ್ನು ದಾಳಿಗೆ ಗುರಿಯಾಗಿಸಲು ಪ್ರಯತ್ನಿಸುತ್ತಿರುವ ಬಗ್ಗೆ ಗುಪ್ತಚರ ಮೂಲಗಳಿಂದ ದೃಢಪಟ್ಟ ಮಾಹಿತಿಗಳು ನಮಗೆ ಬರುತ್ತಿವೆ’ ಎಂದು ಧಿಲ್ಲೋನ್ ಅವರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಜೊತೆಗೆ ಶ್ರೀನಗರದಲ್ಲಿ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಪವಿತ್ರ ಗುಹಾ ದೇವಾಲಯಕ್ಕೆ ಹೋಗುವ ಅವಳಿ ಮಾರ್ಗಗಳಾದ ಬಲ್ಟಾಲ್ ಮತ್ತು ಪಹಲ್ಗಾಮ್ ಮಾರ್ಗಗಳಲ್ಲಿ ಭದ್ರತಾ ಪಡೆಗಳ ಜಂಟಿ ತಂಡಗಳು ಶೋಧ ನಡೆಸಿದ್ದು ಶಸ್ತ್ರಾಸ್ತ್ರಗಳು, ಮದ್ದುಗುಂಡು ಮತ್ತು ಸ್ಫೋಟಕಗಳು ಕಳೆದ ಮೂರು ದಿನಗಳ ಕಾರ್ಯಾಚರಣೆಯಲ್ಲಿ ಪತ್ತೆಯಾಗಿವೆ ಎಂದು ಧಿಲ್ಲೋನ್ ನುಡಿದರು. ‘ಶೋಧ ಕಾರ್ಯಾಚರಣೆಯಲ್ಲಿ ನಮಗೆ ಪ್ರಮಖ ಯಶಸ್ಸು ಲಭಿಸಿದೆ. ಕೆಲವು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಪತ್ತೆಯಾಗಿವೆ. ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಶೋಧದ ವೇಳೆಯಲ್ಲಿ ಅಮೆರಿಕನ್ ಎಂ-೨೪ (ಸ್ನೈಪರ್) ರೈಫಲ್ ಮತ್ತು ಪಾಕಿಸ್ತಾನ ಶಸ್ತ್ರಾಸ್ತ್ರ ಕಾರ್ಖಾನೆಯಲ್ಲಿ ನಿರ್ಮಾಣವಾದ ಆಂಟಿ ಪರ್ಸನಲ್ ಮೈನ್ ಲಭಿಸಿದ್ದು, ಕಾಶ್ಮೀರದ ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಶಾಮೀಲಾಗಿರುವುದನ್ನು ಇದು ಸ್ಪಷ್ಟವಾಗಿ ಸೂಚಿಸಿದೆ’ ಎಂದು ಅವರು ಹೇಳಿದರು. ‘ಇದು ಘಟಿಸಲು ಅವಕಾಶ ನೀಡಲಾಗುವುದಿಲ್ಲ ಎಂಬುದಾಗಿ ಭದ್ರತಾ ಪಡೆಗಳ ಪರವಾಗಿ ನಾನು ಭರವಸೆ ನೀಡುತ್ತೇನೆ. ಪಾಕಿಸ್ತಾನದ ಷಡ್ಯಂತ್ರಗಳನ್ನು ಯಾವುದೇ ಬೆಲೆ ತೆತ್ತು ವಿಫಲಗೊಳಿಸಲಾಗುವುದು. ಕಾಶ್ಮೀರದಲ್ಲಿ ಯಾರೂ ಶಾಂತಿಯನ್ನು ಹದಗೆಡಿಸಲು ಸಾಧ್ಯವಿಲ್ಲ. ಇದು ಕಾಶ್ಮೀರದ ಜನರಿಗೆ ಮತ್ತು ರಾಷ್ಟ್ರದ ಪ್ರತಿಯೊಬ್ಬನಿಗೂ ನಮ್ಮ ವಚನ’ ಎಂದು ಅವರು ನುಡಿದರು.
2019:
ನವದೆಹಲಿ: ರಾಮಜನ್ಮಭೂಮಿ- ಬಾಬರಿ ಮಸೀದಿ ವಿವಾದ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ವಿವಿಧ ಕಕ್ಷಿಗಾರರ ಮಧ್ಯೆ ಯಾವುದೇ ಒಪ್ಪಂದ ರೂಪಿಸಲು ತ್ರಿಸದಸ್ಯ ಸಂಧಾನ ಸಮಿತಿಗೆ ಸಾಧ್ಯವಾಗದೇ ಇರುವುದರಿಂದ ಆಗಸ್ಟ್ ೬ರಿಂದ ಪ್ರತಿದಿನವೂ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಈದಿನ ನಿರ್ಧರಿಸಿತು. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಮತ್ತು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಡಿ.ವೈ. ಚಂದ್ರಚೂಡ್, ಅಶೋಕ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪಂಚ ಸದಸ್ಯ ಸಂವಿಧಾನ ಪೀಠವು ಗುರುವಾರ ಸಲ್ಲಿಸಲಾದ ಸಂಧಾನ ಸಮಿತಿಯ ವರದಿಯನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರಕ್ಕೆ ಬಂದಿತು. ಅಯೋಧ್ಯಾ ಭೂವಿವಾದ ಪ್ರಕರಣಗಳಿಗೆ ಸಂಬಂಧಿಸಿದ ಹಿಂದು ಮತ್ತು ಮುಸ್ಲಿಮ್ ಕಕ್ಷಿದಾರರ ಮಧ್ಯೆ ಅಂತಿಮ ಇತ್ಯರ್ಥಕ್ಕಾಗಿ ನಡೆದ ಸಂಧಾನ ಯತ್ನಗಳು ವಿಫಲಗೊಂಡಿವೆ ಎಂಬುದಾಗಿ ತಿಳಿಸಿದ ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಸಂವಿಧಾನ ಪೀಠವು ಆಗಸ್ಟ್ ೬ರಿಂದ ದೈನಂದಿನ ವಿಚಾರಣೆ ಪ್ರಾರಂಭವಾಗುವುದು ಎಂದು ಪ್ರಕಟಿಸಿತು. ನಿರ್ಮೋಹಿ ಅಖಾರ ಮತ್ತು ರಾಮಲಲ್ಲಾ ಅವರ ಮೇಲ್ಮನವಿಗಳನ್ನು ಮೊದಲು ಆಲಿಸಲಾಗುವುದು ಎಂದು ಪೀಠವು ತಿಳಿಸಿತು. ಮುಸ್ಲಿಮ್ ಕಕ್ಷಿದಾರರ ಪರ ಹಿರಿಯ ವಕೀಲ ರಾಜೀವ ಧವನ್ ಅವರು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದರು. ಅಖಾರ ಮತ್ತು ರಾಮಲಲ್ಲಾ ಅರ್ಜಿಗಳನ್ನು ಪೀಠವು ಮೊದಲು ಆಲಿಸುವುದೇಕೆ ಎಂದು ಅವರ ಪ್ರಶ್ನಿಸಿದರು. ಕೆಲವು ಮುಸ್ಲಿಮ್ ಕಕ್ಷಿದಾರರು ಮೊದಲು ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ವಾದಿಸಿದರು. ಆದರೆ ನ್ಯಾಯಾಲಯ ಒಪ್ಪಲಿಲ್ಲ. ಆಗ ಧವನ್ ಅವರು ತಮಗೆ ಪ್ರಕರಣದ ಪರವಾಗಿ ವಾದಿಸಲು ೨೦ ಪೂರ್ಣ ದಿನಗಳು ಬೇಕು ಮತ್ತು ತಮ್ಮ ವಾದವನ್ನು ಮೊಟಕುಗೊಳಿಸಬಾರದು ಎಂದು ಧವನ್ ಮನವಿ ಮಾಡಿದರು. ‘ನಾವು ಅದನ್ನು ಪರಿಶೀಲಿಸುತ್ತೇವೆ. ಮೊದಲು ಮೇಲ್ಮನವಿಗಳ ಆಲಿಕೆ ಆರಂಭಿಸೋಣ’ ಎಂದು ಮುಖ್ಯ ನ್ಯಾಯಮೂರ್ತಿ ಗೊಗೋಯಿ ಉತ್ತರಿಸಿದರು. ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ. ಕಲೀಫುಲ್ಲ, ಆಧ್ಯಾತ್ಮಿಕ ಗುರು ಹಾಗೂ ಆರ್ಟ್ ಆಫ್ ಲಿವಿಂಗ್ ಸ್ಥಾಪಕ ಶ್ರೀ ಶ್ರೀ ರವಿಶಂಕರ ಮತ್ತು ಹಿರಿಯ ವಕೀಲ ಹಾಗೂ ಖ್ಯಾತ ಸಂಧಾನಕಾರರಾದ ಶ್ರೀರಾಮ ಪಂಚು ಅವರನ್ನು ಒಳಗೊಂಡ ಸಂಧಾನ ಸಮಿತಿಯು ನಾಲ್ಕೂವರೆ ತಿಂಗಳ ಕಾಲ ಹಿಂದು ಮತ್ತು ಮುಸ್ಲಿಮ್ ಕಕ್ಷಿದಾರರ ಜೊತೆ ಮಾತುಕತೆಗಳನ್ನು ನಡೆಸಿ ದಶಕಗಳಷ್ಟು ಹಳೆಯದಾದ ಭೂ ವಿವಾದವವನ್ನು ಕೋರ್ಟಿನ ಹೊರಗೇ ಇತ್ಯರ್ಥ ಪಡಿಸುವ ಸಾಧ್ಯತೆಯನ್ನು ಅನ್ವೇಷಿಸಲು ಯತ್ನಿಸಿದ ಬಳಿಕ ತನ್ನ ವರದಿಯನ್ನು ಆಗಸ್ಟ್ 3ರ ಗುರುವಾರ ಸಲ್ಲಿಸಿತ್ತು. ಬಹುತೇಕ ಮುಸ್ಲಿಮ್ ಕಕ್ಷಿದಾರರು ಸಂಧಾನ ಯತ್ನವನ್ನು ಸ್ವಾಗತಿಸಿದ್ದರೂ, ಉತ್ತರ ಪ್ರದೇಶ ಸರ್ಕಾರ ಮತ್ತು ಹಿಂದು ಕಕ್ಷಿದಾರರು ಈ ಉಪಕ್ರಮವನ್ನು ವಿರೋಧಿಸಿದ್ದರು. ೧೯೫೦ರಷ್ಟು ಹಿಂದೆಯೇ ಭೂವಿವಾದದ ಅರ್ಜಿ ದಾಖಲಿಸಿದ್ದ, ಪ್ರಕರಣದ ಮೂಲ ಅರ್ಜಿದಾರರಲ್ಲಿ ಒಬ್ಬರಾದ ಗೋಪಾಲ್ ಸಿಂಗ್ ವಿಶಾರದ ಅವರು ರಾಜೇಂದ್ರ ಸಿಂಗ್ ಮೂಲಕ ಜುಲೈ ೯ರಂದು, ನ್ಯಾಯಮೂರ್ತಿ ಕಲೀಫುಲ್ಲ ಸಮಿತಿಯು ಯಾವ ಪ್ರಗತಿಯನ್ನೂ ಸಾಧಿಸಿಲ್ಲ ಎಂಬುದಾಗಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದಾಗ ಸಂಧಾನ ಸಮಿತಿಯ ಯತ್ನಗಳ ಫಲಪ್ರದತೆಯ ವಿಚಾರ ಸುಪ್ರೀಂಕೋಟ್ ಪೀಠದ ಮುಂದೆ ಬಂದಿತ್ತು. ಸಂಧಾನ ಪ್ರಕ್ರಿಯೆಯನ್ನು ನಿಲ್ಲಿಸಿ ಬಾಕಿ ಬಿದ್ದಿರುವ ಅಯೋಧ್ಯಾ ಮೇಲ್ಮನವಿಗಳ ವಿಚಾರಣೆ ಮುಂದುವರೆಸುವಂತೆ ಅರ್ಜಿ ನ್ಯಾಯಾಲಯವನ್ನು ಒತ್ತಾಯಿಸಿತ್ತು. ಮನವಿಗೆ ಸ್ಪಂದಿಸಿದ್ದ ಸುಪ್ರೀಂಕೋರ್ಟ್, ಸಂಧಾನ ಪ್ರಕ್ರಿಯೆಯ ಫಲಶ್ರುತಿಯನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ಸಂಧಾನ ಸಮಿತಿಗೆ ಆದೇಶ ನೀಡಿತ್ತು. ಸಂಧಾನ ಯತ್ನದ ಈವರೆಗಿನ ಪ್ರಗತಿ ಬಗ್ಗೆ ವಿವರಿಸುವಂತೆ ಪೀಠವು ನ್ಯಾಯಮೂರ್ತಿ ಕಲೀಫುಲ್ಲ ಅವರನ್ನು ಜುಲೈ ೧೮ರಂದು ಕೋರಿತ್ತು. ಸಂಧಾನ ವಿಫಲವಾದಲ್ಲಿ ದೈನಂದಿನ ವಿಚಾರಣೆ ಆರಂಭವಾಗುವುದು ಎಂದು ಪೀಠ ಹೇಳಿತ್ತು. ಇತ್ಯರ್ಥ ಸಾಧ್ಯತೆಯನ್ನು ಅನ್ವೇಷಿಸಲು ಸಂಧಾನ ಸಮಿತಿಗೆ ಮೊದಲು ಎಂಟು ವಾರಗಳ ಕಾಲಾವಕಾಶ ನೀಡಲಾಗಿತ್ತು, ಆದರೆ ಮೇ ೧೦ರಂದು ಸಮಿತಿಯು ಮಧ್ಯಂತರ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ಬಳಿಕ, ಸುಪ್ರೀಂಕೋರ್ಟ್ ಪೀಠವು ಆಗಸ್ಟ್ ೧೫ರವರೆಗೆ ಕಾಲಾವಕಾಶವನ್ನು ವಿಸ್ತರಿಸಿತ್ತು. ಅಯೋಧೆಯ ವಿವಾದಿತ ೨.೭೭ ಎಕರೆ ಭೂಮಿಯನ್ನು ಪ್ರಕರಣದ ಮೂವರು ಕಕ್ಷಿದಾರರಾದ ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾರ ಮತ್ತು ರಾಮ ಲಲ್ಲಾ ಮಧ್ಯೆ ಸಮಾನವಾಗಿ ವಿಭಾಗಿಸುವಂತೆ ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ್ದ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ೧೪ ಮೇಲ್ಮನವಿಗಳು ದಾಖಲಾಗಿದ್ದವು.
2019:
ನವದೆಹಲಿ: ಭಾರತ ಆರ್ಥಿಕ ಪ್ರಗತಿ ಕಳೆದ ಹಣಕಾಸು ಅವಧಿಯಲ್ಲಿ ಕುಂಠಿತಗೊಂಡಿದೆ ಎಂದು ವಿಶ್ವ ಬ್ಯಾಂಕ್ ನ ವರದಿಯಲ್ಲಿ ಹೇಳಿತು. ಜಿಡಿಪಿಯಲ್ಲಿ
(ಸಮಗ್ರ ಆಂತರಿಕ ಉತ್ಪನ್ನ) 1 ಅಂಕ ಕಳೆದುಕೊಂಡಿರುವ ಭಾರತ 7ನೇ ಸ್ಥಾನಕ್ಕೆ ಇಳಿಯಿತು. ಭಾರತ ಈ ವರ್ಷ ನಿರೀಕ್ಷೆಯಂತೆ 5ನೇ ಸ್ಥಾನವನ್ನು ಅಲಂಕರಿಸಬೇಕಿತ್ತು. ಭಾರತ 5 ವರ್ಷಗಳಲ್ಲಿ ಅತ್ಯಂತ ನಿಧಾನಗತಿಯ ಆರ್ಥಿಕತೆಯನ್ನು ಹೊಂದಿದೆ ಎಂದು ವಿಶ್ವ ಬ್ಯಾಂಕ್ ಹೇಳಿತು. 2018-19ರ ಆರ್ಥಿಕ ವರ್ಷದಲ್ಲಿ ವಿತ್ತೀಯ ಪ್ರಮಾಣ 7.1ರಿಂದ 6.8ಕ್ಕೆ ಕುಸಿಯಿತು. 2018ರಲ್ಲಿ ಭಾರತವು ಫ್ರಾನ್ಸ್ ಮತ್ತು ಇಂಗ್ಲೆಂಡ್ ಬಳಿದ 7ನೇ ಸ್ಥಾನವನ್ನು ಅಲಂಕರಿಸಿತ್ತು. 2018ರಲ್ಲಿ ಭಾರತ ಶೇ. 2.72 ಜಿಡಿಪಿ ಕಂಡುಕೊಂಡಿತ್ತು. ಜೊತೆಗೆ ಇಂಗ್ಲೆಂಡ್ ಶೇ. 2.82 ಮತ್ತು ಫ್ರಾನ್ಸ್ ಶೇ.2.77 ಡಿಜಿಪಿ ಸಾಧಿಸಿದ್ದವು. ಭಾರತದ ನಂತರದ ಸ್ಥಾನದಲ್ಲಿ ಇಟಲಿ, ಬ್ರೆಜಿಲ್, ಕೆನಡಾ, ರಷ್ಯಾ, ಕೊರಿಯಾ, ಆಸ್ಟ್ರೇಲಿಯಾ, ಸ್ಪೇನ್ ಮತ್ತು ಮೆಕ್ಸಿಕೋ ಇದ್ದವು. ವಿಶ್ವ ಬ್ಯಾಂಕ್ ಪ್ರಕಾರ ಜಗತ್ತಿನ 4 ಆರ್ಥಿಕ ಬಲಿಷ್ಠ ರಾಷ್ಟ್ರಗಳ ಪೈಕಿ ಅಮೆರಿಕ 20 ಜಿಡಿಪಿಯೊಂದಿಗೆ ಅಗ್ರಸ್ಥಾನದಲ್ಲಿದೆ. ದ್ವಿತೀಯ ಸ್ಥಾನದಲ್ಲಿ 13.6 ಹೊಂದಿರುವ ಚೀನ ಇದೆ. ಬಳಿಕದ ಸ್ಥಾನದಲ್ಲಿ 4.9 ಸಾಧಿಸಿರುವ ಜಪಾನ್, ನಾಲ್ಕನೇ ಅತೀ ದೊಡ್ಡ ರಾಷ್ಟ್ರವಾಗಿ 3.9 ಹೊಂದಿರುವ ಜರ್ಮನಿ ಇದೆ. ಭಾರತ ಈ 3 ಲಕ್ಷ ಕೋಟಿ ಜಿಡಿಪಿ ಮೌಲ್ಯದ ಸನಿಹದಲ್ಲಿದ್ದು, 2024ರ ಸುಮಾರಿಗೆ 5 ಲಕ್ಷ ಕೋಟಿ (5 ಟ್ರಿಲಿಯನ್) ಸಾಧಿಸುವ ಗುರಿ ಹೊಂದಿತ್ತು. ಆದರೆ ಈ ಅಂಕಿ ಅಂಶ ನಿರಾಸೆ ಮೂಡಿಸಿದೆ ಎಂದು ಹೇಳಲಾಯಿತು. 2017ರಲ್ಲಿ ಭಾರತ ಶೇ.2.65 ಹೊಂದಿತ್ತು. ಬಳಿಕದ ಸ್ಥಾನದಲ್ಲಿ ಶೇ.2.64 ಹೊಂದಿದ್ದ ಇಂಗ್ಲೆಂಡ್ ಹಾಗೂ ಶೇ.2.59 ಸಾಧಿಸಿದ್ದ ಫ್ರಾನ್ಸ್ ಇತ್ತು. ಆದರೆ ಈ ವರ್ಷ ಈ ಎರಡು ರಾಷ್ಟ್ರಗಳು ಭಾರತವನ್ನು ಹಿಂದಿಕ್ಕಿವೆ. ಭಾರತ ಕಳೆದ ವರ್ಷದ ಉತ್ತರಾರ್ಧದಲ್ಲಿ ಅತೀ ವೇಗದಲ್ಲಿರುವ ಆರ್ಥಿಕತೆಯ ಪಟ್ಟಿಯಿಂದ ಹೊರ ಬಿದ್ದಿತ್ತು.
2018: ನವದೆಹಲಿ: ಕರ್ನಾಟಕವನ್ನು ವಿಭಜಿಸುವ ಯಾವುದೇ ಯತ್ನವನ್ನು ಇಲ್ಲಿ ವಿರೋಧಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತಾವು ಅಥವಾ ತಮ್ಮ ಮಗ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಜೀವಿತಾವಧಿಯಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಈಡೇರದು ಎಂದು ಹೇಳಿದರು. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿಯು ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕಾಗಿ ಆಗ್ರಹಿಸಿ ೧೩ ಜಿಲ್ಲೆಗಳಲ್ಲಿ ಈದಿನ ಒಂದು ದಿನದ ಬಂದ್ ಆಚರಿಸಲು ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಬಂದ್ ದಿನವೇ ಸುದ್ದಿ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ ಜೆಡಿ(ಎಸ್) ರಾಷ್ಟ್ರೀಯ ಮುಖ್ಯಸ್ಥ ಬಿಜೆಪಿಯ ಪ್ರಚೋದನೆಗಳಿಗೆ ಬಲಿಯಾಗಬೇಡಿ ಎಂದು ಜನತೆಗೆ ಮನವಿ ಮಾಡಿದರು. ‘ರಾಜ್ಯ ಮುಂಗಡಪತ್ರದಲ್ಲಿ ನೀಡಲಾಗಿರುವ ಅನುದಾನದಲ್ಲಿ ಉತ್ತರ ಕರ್ನಾಟಕಕ್ಕೆ ಯಾವುದೇ ಅನ್ಯಾಯ ಆಗಿಲ್ಲ’ ಎಂದು ಹೇಳಿದ ಅವರು ’ದುರುದ್ದೇಶಪೂರಿತ ಪ್ರಚಾರದ ಮೂಲಕ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವುದಕ್ಕಾಗಿ’ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಿರುದ್ಧ ಹರಿಹಾಯ್ದರು. ‘ಯಡಿಯೂರಪ್ಪ ಅವರು ಮಾಡಿರುವ ಪ್ರಚೋದನೆ ಸತ್ಯವಾಗುವುದಿಲ್ಲ. ನಾವು ಅದರ ಬಗ್ಗೆ ಎಚ್ಚರಿಕೆ ವಹಿಸುತ್ತೇವೆ. ಯಾರಾದರೂ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಬೇಡಿಕೆಯನ್ನು ಆಗ್ರಹಿಸುತ್ತಿದ್ದರೆ, ಇದು ನನ್ನ ಮತ್ತು ನನ್ನ ಮಗನ ಜೀವಿತಾವಧಿಯಲ್ಲಿ ಸಂಭವಿಸುವುದಿಲ್ಲ ಎಂದು ನಾನು ಅವರಿಗೆ ಹೇಳಬಯಸುತ್ತೇನೆ’ ಎಂದು ದೇವೇಗೌಡ ನುಡಿದರು. ಸಾಕಷ್ಟು ಸ್ಥಾನಗಳನ್ನು ಗೆದ್ದರೂ ಸರ್ಕಾರ ರಚಿಸಲು ವಿಫಲರಾದ ಬಳಿಕ ಹುಟ್ಟಿಕೊಂಡ ಸಿಟ್ಟು ಇನ್ನೂ ಆರದ ಕಾರಣ ಬಿಜೆಪಿಯ ರಾಜ್ಯ ಅಧ್ಯಕ್ಷರು ಉತ್ತರಕರ್ನಾಟಕದ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಆಪಾದಿಸಿದರು. ‘ಮಾಜಿ ಮುಖ್ಯಮಂತ್ರಿಯವರು ಅಶಾಂತಿ ಸೃಷ್ಟಿಸುವ ಏಕೈಕ ಉದ್ದೇಶದಿಂದ ಕೃಷಿ ಸಾಲಮನ್ನಾ, ರಾಜ್ಯ ಮುಂಗಡಪತ್ರ ಮತ್ತು ಇತರ ವಿಷಯಗಳನ್ನು ಎತ್ತಿಕೊಂಡು ಜನರನ್ನು ’ಬೆದರಿಸಲು’ ಆರಂಭಿಸಿದ್ದಾರೆ ಎಂದೂ ದೇವೇಗೌಡ ದೂರಿದರು. ರಾಜ್ಯದ ಏಕೀಕರಣಕ್ಕಾಗಿ ಹಲವಾರು ನಾಯಕರು ತ್ಯಾಗಗಳನ್ನು ಮಾಡಿದ್ದಾರೆ ಎಂದು ಹೇಳಿದ ಮಾಜಿ ಪ್ರಧಾನಿ, ಪ್ರಚೋದನೆಗಳಿಗೆ ಬಲಿಯಾಗದಂತೆ ಮತ್ತು ಹಾಲಿ ಸರ್ಕಾರದ ಮೇಲೆ ವಿಶ್ವಾಸ ಇರಿಸುವಂತೆ ಜನತೆಗೆ ಮನವಿ ಮಾಡಿದರು. ಕುಮಾರ ಸ್ವಾಮಿಯವರು ಈಗಾಗಲೇ ಕೆಲವು ಪ್ರಮುಖ ಸರ್ಕಾರಿ ಇಲಾಖೆಗಳನ್ನು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಲು ಆದೇಶ ನೀಡಿದ್ದಾರೆ ಎಂದೂ ದೇವೇಗೌಡ ನುಡಿದರು. ನಿರಂತರವಾಗಿ ಅಧಿಕಾರಕ್ಕೆ ಬಂದ ಸರ್ಕಾರಗಳು ಉತ್ತರ ಕರ್ನಾಟಕ ಪ್ರದೇಶವನ್ನು ನಿರ್ಲಕ್ಷಿಸುತ್ತಾ ಬಂದಿರುವುದರಿಂದ ಈ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವಂತೆ ಆಗ್ರಹಿಸಲು ಸಮಿತಿ ಬಂದ್ ಗೆ ಕರೆ ಕೊಟ್ಟಿತ್ತು. ಕುಮಾರ ಸ್ವಾಮಿ ಅವರು ಜುಲೈ ೫ರಂದು ಮಂಡಿಸಿದ ಮುಂಗಡಪತ್ರದಲ್ಲೂ ಅನುದಾನ ನೀಡುವಲ್ಲಿ ಉತ್ತರ ಕರ್ನಾಟಕ ಪ್ರದೇಶದ ಬಗ್ಗೆ ತಾರತಮ್ಮಯ ಮಾಡಲಾಗಿದೆ. ಸಂಪುಟದಲ್ಲಿ ಪ್ರಾತಿನಿಧ್ಯ ನೀಡುವಲ್ಲೂ ಉತ್ತರ ಕರ್ನಾಟಕಕ್ಕೆ ನ್ಯಾಯ ಒದಗಿಸಲಾಗಿಲ್ಲ ಎಂದು ಸಮಿತಿ ಆಪಾದಿಸಿತ್ತು. (ಎಚ್.ಡಿ.ದೇವೇಗೌಡರ ಈ ವಿಶಿಷ್ಟ ಚಿತ್ರ ಕ್ಲಿಕ್ ಮಾಡಿದ್ದು: ಅನುಪ ಕೃಷ್ಣ ಭಟ್ ನೆತ್ರಕೆರೆ)
2018: ನವದೆಹಲಿ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ (ಎನ್ಸಿಬಿಸಿ) ಸಾಂವಿಧಾನಿಕ ಸ್ಥಾನಮಾನ ನೀಡುವ ಮಹತ್ವದ ಮಸೂದೆ ಈದಿನ ಲೋಕಸಭೆಯಲ್ಲಿ ಮೂರನೇ ಎರಡಂಶಕ್ಕಿಂತಲೂ ಅಧಿಕ ಬಹುಮತದೊಂದಿಗೆ ಅಂಗೀಕಾರಗೊಂಡಿತು. ಸದನದಲ್ಲಿ 2017ರ 123ನೇ ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ಐದು ತಾಸುಗಳ ಚರ್ಚೆ ನಡೆದು 30ಕ್ಕೂ ಹೆಚ್ಚು ಸದಸ್ಯರು ಚರ್ಚೆಯಲ್ಲಿ ಪಾಲ್ಗೊಂಡರು.
2018: ಗುವಾಹಟಿ: ಅಸ್ಸಾಮಿನ ೪೦ ಲಕ್ಷ ನಿವಾಸಿಗಳನ್ನು ಹೊರಗಿಟ್ಟ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಅಂತಿಮ ಕರಡು ಬಗ್ಗೆ ಮಮತಾ ಬ್ಯಾನರ್ಜಿ ಅವರು ತಳೆದ ನಿಲುವನ್ನು ಪ್ರತಿಭಟಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ಅಸ್ಸಾಂ ಘಟಕದ ಅಧ್ಯಕ್ಷ ಮತ್ತು ಇತರ ಇಬ್ಬರು ರಾಜ್ಯ ನಾಯಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದರು. ಟಿಎಂಸಿ ರಾಜ್ಯ ಘಟಕದ ಅಧ್ಯಕ್ಷ ದ್ವಿಪೇನ್ ಪಾಠಕ್ ಅವರು ಎನ್ ಆರ್ ಸಿ ವಿಷಯಕ್ಕೆ ಸಂಬಂಧಿಸಿದಂತೆ ಮಮತಾ ಬ್ಯಾನರ್ಜಿ ಅವರ ಅರಿವಿನ ಅಭಾವಕ್ಕಾಗಿ ತಾವು ಪಕ್ಷದ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು.
2018: ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯ ಲೋಲಬ್ ನಲ್ಲಿ ಭದ್ರತಾ ಪಡೆಗಳು ಮಧ್ಯಾಹ್ನ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದೀನ್ ಉಗ್ರಗಾಮಿಗಳು ಹತರಾಗಿದ್ದಾರೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೈದ್ ತಿಳಿಸಿದರು. ಕುಪ್ವಾರದ ಶರತ್ ಮುಖಮ್ನ ಬಿಲಾಲ್ ಶಾ ಮತ್ತು ಕಲರೂಸ್ ನ ಝಹೂರ್ ಅವರ ವಿರುದ್ಧ ಭದ್ರತಾ ಪಡೆಗಳು ಈದಿನ ಕಾರ್ಯಾಚರಣೆಗೆ ಇಳಿದಾಗ ಈ ಇಬ್ಬರೂ ವಾಹನವೊಂದರಲ್ಲಿ ಪ್ರಯಾಣ ಹೊರಟಿದ್ದರು ಎಂದು ವೈದ್ ಹೇಳಿದರು.
2018: ನವದೆಹಲಿ: ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ (ಎಸ್ಸಿ / ಎಸ್ಟಿ ಕಾಯ್ದೆ) ತಿದ್ದುಪಡಿ ಮಸೂದೆಯನ್ನು ಸಂಸತ್ತಿನ ಮುಂಗಾರು ಅಧಿವೇಶನದಲ್ಲಿಯೇ ಅಂಗೀಕರಿಸಲು ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಈದಿನ ಲೋಕಸಭೆಗೆ ತಿಳಿಸಿದರು. ಸುಪ್ರೀಂಕೋರ್ಟ್ ತನ್ನ ಆದೇಶದ ಮೂಲಕ ಸೇರ್ಪಡೆ ಮಾಡಿರುವ ವಿಧಿಗಳಿಂದ ಎಸ್ಸಿ / ಎಸ್ಟಿ ಕಾಯ್ದೆಯು ದುರ್ಬಲಗೊಂಡಿದೆ ಎಂದು ರೊಚ್ಚಿಗೆದ್ದಿರುವ ದಲಿತ ಸಂಘಟನೆಗಳು ಸುಪ್ರೀಂಕೋರ್ಟ್ ತೀರ್ಪನ್ನು ನಿರರ್ಥಕಗೊಳಿಸಲು ಸಂಸತ್ತಿನ ಹಾಲಿ ಅಧಿವೇಶನದಲ್ಲಿಯೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದವು.
2017: ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಆರಂಭಿಸಲು ಉದ್ದೇಶಿಸಿರುವ ಕಿಶನ್ಗಂಗಾ ಮತ್ತು ರಾಟ್ಲೆ ಜಲವಿದ್ಯುತ್ ಯೋಜನೆ ಅನುಷ್ಠಾನಕ್ಕೆ ವಿಶ್ವಬ್ಯಾಂಕ್ ಷರತ್ತುಬದ್ಧ ಅನುಮತಿ ನೀಡಿತು. ಝೇಲಂ ಮತ್ತು ಚೆನಾಬ್ ನದಿಗಳ ನೀರನ್ನು ಬಳಸಿಕೊಂಡು ವಿದ್ಯುತ್ ಉತ್ಪಾದಿಸುವ ಭಾರತದ ಯೋಜನೆಗೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಕಿಶನ್ಗಂಗಾ (330 ಮೆಗಾವಾಟ್) ಮತ್ತು ರಾಟ್ಲೆಯಲ್ಲಿ (850 ಮೆಗಾವಾಟ್) ಜಲ ವಿದ್ಯುತ್ ಸ್ಥಾವರ ನಿರ್ಮಿಸುವ ಭಾರತದ ಕ್ರಮವನ್ನು ವಿರೋಧಿಸಿದ್ದ ಪಾಕಿಸ್ತಾನ, ಈ ಯೋಜನೆಯು 1960 ಸಿಂಧೂ ಜಲ ಒಪ್ಪಂದಕ್ಕೆ ವಿರುದ್ಧವಾಗಿದೆಯೇ ಎಂದು ಪರಿಶೀಲಿಸುವಂತೆಯೂ ವಿಶ್ವಬ್ಯಾಂಕ್ಗೆ ಮನವಿ ಮಾಡಿತ್ತು.
2017: ನವದೆಹಲಿ/ಶ್ರೀನಗರ: ಭದ್ರತಾ ಪಡೆಯಿಂದ ಆ.1ರಂದು ಹತ್ಯೆಯಾದ ಲಷ್ಕರ್–ಇ–ತೊಯಬಾ(ಎಲ್ಇಟಿ) ಸಂಘಟನೆಯ ಕಮಾಂಡರ್ ಅಬು ದುಜಾನಾ ಮೃತದೇಹವನ್ನು ಪಡೆದುಕೊಳ್ಳಲು ಪಾಕಿಸ್ತಾನವು ನಿರಾಕರಿಸಿತು. ಈ ಹಿನ್ನೆಲೆಯಲ್ಲಿ ಅಬು ದುಜಾನಾ ಅಂತ್ಯಸಂಸ್ಕಾರವನ್ನು ಜಮ್ಮು ಕಾಶ್ಮೀರದ ಉರಿ ಸೇನಾ ವಲಯದ ಬಳಿ ನೆರವೇರಿಸಲಾಗಿದೆ ಎಂದು ವರದಿ ತಿಳಿಸಿತು. ಕೇಂದ್ರ ಗೃಹ ಸಚಿವಾಲಯವು ಉಗ್ರನ ಮೃತದೇಹವನ್ನು ಪಡೆದುಕೊಳ್ಳುವಂತೆ ಪಾಕಿಸ್ತಾನದ ಉನ್ನತ ಸಚಿವಾಲಯಕ್ಕೆ ಹೇಳಿತ್ತು. ಆದರೆ ಸಚಿವಾಲಯವು ನಿರಾಕರಿಸಿತು.ದೆ. ಈ ಸಂಬಂಧ ಉಗ್ರನ ಕುಟುಂಬಸ್ಥರಿಗೆ ಕೊನೆಯ ಬಾರಿ ಮುಖ ನೋಡಲು ಅವಕಾಶ ನೀಡಲಾಗಿತ್ತು ಎಂದು ಐಜಿಪಿ ಮುನೀರ್ ಖಾನ್ ಹೇಳಿದರು.
2017: ಬೀಜಿಂಗ್ : ಭಾರತ ಯಾವುದೇ ಶರತ್ತುಗಳನ್ನು ಒಡ್ಡದೇ ವಿವಾದಿತ ಡೋಕ್ಲಾಮ್ ಪ್ರದೇಶದಿಂದ ತನ್ನ ಸೇನೆಯನ್ನು ಈ ಕೂಡಲೇ ಹಿಂದೆಗೆದುಕೊಳ್ಳಬೇಕು ಎಂದು ಚೀನ ಮತ್ತೆ ಹೊಸ ಎಚ್ಚರಿಕೆಯನ್ನು ನೀಡಿತು. ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಮ್ ಟ್ರೈ ನೇಶನ್ ಜಂಕ್ಷನ್ ಪ್ರದೇಶವು ತನ್ನದೆಂದು ಚೀನ ಹೇಳಿಕೊಂಡಿತು. ಅದೇ ವೇಳೆ ಭೂತಾನ್, ಡೋಕ್ಲಾಮ್ ತನಗೆ ಸೇರಿದ್ದೆಂದು ಹೇಳಿ ಚೀನಕ್ಕೆ ಪ್ರತಿಭಟನೆ ಸಲ್ಲಿಸಿತು.
2017: ಲಾಸ್ಏಂಜಲೀಸ್: ಭಾರತದಲ್ಲಿ ಬರಗಾಲ ಬರಲು ಯುರೋಪ್ನ ಮಾಲಿನ್ಯವೇ ಕಾರಣ ಎಂದು ಇತ್ತೀಚೆಗೆ ಲಂಡನ್ನ ಸಂಶೋಧಕರ ವರದಿಯೊಂದು ತಿಳಿಸಿದ್ದು, ಯುರೋಪ್ನ ವಿದ್ಯುತ್ ಸ್ಥಾವರಗಳಲ್ಲಿ ಉತ್ಪತ್ತಿಯಾಗುವ ಸಲ್ಫರ್ ಡಯಾಕ್ಸೈಡ್ನಿಂದ ಮಾಲಿನ್ಯ ಹೆಚ್ಚಾಗಿ, ಅದರ ದುಷ್ಪರಿಣಾಮ ನೇರವಾಗಿ ಭಾರತಕ್ಕೆ ತಲುಪಿತ್ತಿದೆ ಎಂದು ಹೇಳಿತ್ತು. ಇದೀಗ ಅದಕ್ಕೆ ಪುಷ್ಟಿ ನೀಡುವಂತೆ, ಹವಾಮಾನ ವೈಪರೀತ್ಯವೇ ಭಾರತದಲ್ಲಿ ರೈತರ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಮುಖ ಕಾರಣ ಎಂದು ಅಮೆರಿಕದ ಸಂಶೋಧಕರ ತಂಡವೊಂದು ಹೇಳಿತು. ಕಳೆದ 30 ವರ್ಷಗಳಲ್ಲಿ ಭಾರತದಲ್ಲಿ 59 ಸಾವಿರಕ್ಕೂ ಹೆಚ್ಚು ಅನ್ನದಾತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಚಟುವಟಿಕೆಗಳ ಕಾಲದಲ್ಲಿ ತಾಪಮಾನ ಹೆಚ್ಚಳ ಮತ್ತು ಮಳೆಯ ಕೊರತೆಯಿಂದ ರೈತರು ಹತಾಶೆಗೊಳಗಾಗುತ್ತಾರೆ. ನಿರೀಕ್ಷೆಯೆಲ್ಲ ಹುಸಿಯಾದಾಗ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರ ಅಧ್ಯಯನ ವರದಿ ಹೇಳಿತು.
2015: ನವದೆಹಲಿ/ ಕೋಲ್ಕತ: ಮೂರು ದಿನಗಳಿಂದ ನಿರಂತರಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಭಾರತದಲ್ಲಿ ಹಲವಡೆ ಪ್ರವಾಹಪರಿಸ್ಥಿತಿ ಉಂಟಾಗಿ 70ಕ್ಕೂ ಹೆಚ್ಚು ಮಂದಿ ಅಸು ನೀಗಿದರು. ಪಶ್ಚಿಮ ಬಂಗಾಳದ13 ಜಿಲ್ಲೆಗಳು ಜಲಾವೃತಗೊಂಡು 18 ಲಕ್ಷಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡು, 50ಕ್ಕೂ ಹೆಚ್ಚು ಮಂದಿ ಮೃತರಾದರು. ಒಡಿಶಾದಲ್ಲೂ ಪ್ರವಾಹ ಸ್ಥಿತಿಉಂಟಾಗಿದ್ದು, ಮಣಿಪುರದಲ್ಲಿ ಭೂಕುಸಿತಗಳಿಗೆ 20 ಮಂದಿ ಬಲಿಯಾದರು.
2015: ನವದೆಹಲಿ/ ಕೋಲ್ಕತ: ಮೂರು ದಿನಗಳಿಂದ ನಿರಂತರಸುರಿಯುತ್ತಿರುವ ಮಳೆಯಿಂದಾಗಿ ಉತ್ತರ ಭಾರತದಲ್ಲಿ ಹಲವಡೆ ಪ್ರವಾಹಪರಿಸ್ಥಿತಿ ಉಂಟಾಗಿ 70ಕ್ಕೂ ಹೆಚ್ಚು ಮಂದಿ ಅಸು ನೀಗಿದರು. ಪಶ್ಚಿಮ ಬಂಗಾಳದ13 ಜಿಲ್ಲೆಗಳು ಜಲಾವೃತಗೊಂಡು 18 ಲಕ್ಷಕ್ಕೂ ಹೆಚ್ಚು ಮಂದಿ ಸಿಕ್ಕಿಹಾಕಿಕೊಂಡು, 50ಕ್ಕೂ ಹೆಚ್ಚು ಮಂದಿ ಮೃತರಾದರು. ಒಡಿಶಾದಲ್ಲೂ ಪ್ರವಾಹ ಸ್ಥಿತಿಉಂಟಾಗಿದ್ದು, ಮಣಿಪುರದಲ್ಲಿ ಭೂಕುಸಿತಗಳಿಗೆ 20 ಮಂದಿ ಬಲಿಯಾದರು.
2015: ನವದೆಹಲಿ: ಕೂದಲು ಉದುರುವಿಕೆ ತಡೆಯುವ ಚಿಕಿತ್ಸೆಗಾಗಿ ಅರಶಿನ,ದೇವದಾರು ತೊಗಟೆ/ಚಕ್ಕೆ ಮತ್ತು ಹಸಿರು ಚಹಾ ಹೊಂದಿದ ವೈದ್ಯಕೀಯಮಿಶ್ರಣಕ್ಕೆ ಪೇಟೆಂಟ್ ಪಡೆಯುವ ಇಂಗ್ಲೆಂಡಿನ ಖ್ಯಾತ ಲ್ಯಾಬೋರೇಟರಿ ಒಂದರಯತ್ನವನ್ನು ತಡೆಯುವ ಮೂಲಕ ತನ್ನ ಪರಂಪರಾಗತ ಜ್ಞಾನವನ್ನುರಕ್ಷಿಸಿಕೊಳ್ಳುವಲ್ಲಿ ಭಾರತ ಮಹತ್ವದ ಯಶಸ್ಸು ಸಾಧಿಸಿದೆ ಎಂದು ವಿಜ್ಞಾನಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ (ಸಿಎಸ್ ಐಆರ್) ಪರಂಪರಾಗತಜ್ಞಾನದ ಡಿಜಿಲ್ ಲೈಬ್ರೆರಿ (ಟಿಕೆಡಿಎಲ್) ಪ್ರಕಟಿಸಿತು. ಗಿಡಮೂಲಿಕೆಗಳ ಸಾರಹೊಂದಿದ ಮೌತ್ವಾಶ್ ಫಾರ್ಮುಲಾಕ್ಕೆ ಪೇಟೆಂಟ್ ಪಡೆಯಲು ಅಮೆರಿಕಮೂಲದ ಗ್ರಾಹಕ ವಸ್ತುಗಳ ದೈತ್ಯ ಕೋಲ್ಗೇಟ್-ಪಾಮೋಲಿವ್ ನಡೆಸಿದ್ದಇಂತಹುದೇ ಯತ್ನವನ್ನು ವಿಫಲಗೊಳಿಸಿದ ಬೆನ್ನಲ್ಲೇ ಭಾರತಕ್ಕೆ ಈ ಯಶಸ್ಸುಪ್ರಾಪ್ತವಾಗಿದೆ.
2015: ಮುಂಬೈ: ವಾಂಖೇಡೆ ಕ್ರೀಡಾಂಗಣ ಪ್ರವೇಶಿಸದಂತೆ ಶಾರುಖ್ ಖಾನ್ ವಿರುದ್ಧ ಹೇರಲಾಗಿದ್ದ ನಿಷೇಧವನ್ನು ಮುಂಬೈ ಕ್ರಿಕೆಟ್ಅಸೋಸಿಯೇಶನ್ (ಎಂಸಿಎ) ಭಾನುವಾರ ರದ್ದು ಪಡಿಸಿತು.
2012ರಲ್ಲಿ ಶಾರುಖ್ ಖಾನ್ ವಿರುದ್ಧ ನಿಷೇಧ ಹೇರಲಾಗಿತ್ತು. ಇಂಡಿಯನ್ಪ್ರೀಮಿಯರ್ ಲೀಗ್ನ ಅಂತಿಮ ಪಂದ್ಯವು ಮುಂಬೈಗೆ ಸ್ಥಳಾಂತರಗೊಂಡರೆ ವಾಂಖೇಡೆ ಕ್ರೀಡಾಂಗಣ ಪ್ರವೇಶಿಸದಂತೆ ಶಾರುಖ್ ಖಾನ್ ವಿರುದ್ಧಹೇರಲಾಗಿದ್ದ ನಿಷೇಧವನ್ನು ರದ್ದು ಪಡಿಸಲು ತಾನು ಸಿದ್ಧ ಎಂದು ಅಸೋಸಿಯೇಶನ್ ಇತ್ತೀಚೆಗೆ ಪ್ರಕಟಿಸಿತ್ತು. ಎಂಸಿಎ ಅಧಿಕಾರಿಗಳ ಜೊತೆಗೆಘರ್ಷಣೆ ನಡೆಸಿದ್ದ ಹಿನ್ನೆಲೆಯಲ್ಲಿ 2012ರಲ್ಲಿ ಶಾರುಖ್ ಖಾನ್ ಅವರಿಗೆ ವಾಖೇಡೆ ಕ್ರೀಡಾಂಗಣ ಪ್ರವೇಶವನ್ನು ನಿಷೇಧಿಸಲಾಗಿತ್ತು.
2015: ಕೋಲ್ಕತ್ತಾ: ಎಲ್ಲವೂ ಅಂದುಕೊಂಡಂತೆ ಆದರೆ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ನಿವಾರಣೆಗೆ ಕೆಲವೇ ದಿನಗಳಲ್ಲಿಡ್ರೋಣ್ ಬಳಕೆ ಆರಂಭವಾಗಲಿದೆ. ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ನಿಯಂತ್ರಿಸಲು ಡ್ರೋಣ್ ಬಳಕೆ ಮಾಡಲುಡೆಹ್ರಾಡೋನ್ನ ‘ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ’ ವಿಜ್ಞಾನಿಗಳು ನಿರ್ಧರಿಸಿದರು.
2015: ಶ್ರೀನಗರ: ಪಾಕಿಸ್ತಾನ ಪಡೆ ಮತ್ತೆ ಜಮ್ಮು ಕಾಶ್ಮೀರದ ಗಡಿ ಪ್ರದೇಶಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಯೋಧರುಮತ್ತು ಪಾಕ್ ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತು. ಆರ್ಎಸ್ ಪುರ ಸೆಕ್ಟರ್ ವ್ಯಾಪ್ತಿಯಲ್ಲಿ ಗಡಿ ಒಳಪ್ರವೇಶಕ್ಕೆ ಮುಂದಾದ ಪಾಕ್ ಪಡೆಈದಿನ ಬೆಳಗ್ಗೆಯೂ ಬಿಎಸ್ಎಫ್ ಯೋಧರ ಮೇಲೆ ಗುಂಡಿನ ಮಳೆ ಗರೆಯಿತು. ಭಾರತೀಯ ಯೋಧರೂ ತಕ್ಕ ಉತ್ತರ ನೀಡಿದರು.
2015: ಜಕಾರ್ತ (ಇಂಡೋನೇಷ್ಯಾ): ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ಜೊಂಗ್-ಉನ್ ಅವರು ‘ಜಾಗತಿಕ ಮುತ್ಸದ್ಧಿ’ ಪ್ರಶಸ್ತಿಗೆಪಾತ್ರರಾದರು. ಈಹಿಂದೆ ಮಹಾತ್ಮಾ ಗಾಂಧಿ, ಅಂಗ್ ಸಾನ್ ಸೂ-ಕಿ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು.
2015: ಕೋಪೆನ್ ಹೊಗನ್: ಭಾರತದ ಮಹಿಳಾ ರಿಕರ್ವ್ ಅರ್ಚರಿ ತಂಡ ರಷ್ಯಾ ವಿರುದ್ಧದ ವಿಶ್ವ ಚಾಂಪಿಯನ್ಷಿಪ್ ಫೈನಲ್ನಲ್ಲಿ 4-5ರಿಂದಸೋಲನುಭವಿಸಿ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಭಾರತದ ಮಹಿಳಾ ರಿಕರ್ವ್ ತಂಡ ಫೈನಲ್ನಲ್ಲಿ ರಷ್ಯಾದೊಂದಿಗೆ ಸಮಬಲ ಹೊಂದಿತ್ತು.ಆದರೆ ಟೈಬ್ರೇಕರ್ನಲ್ಲಿ (27-28) ಕೇವಲ ಒಂದು ಅಂಕದ ವ್ಯತ್ಯಾಸದಲ್ಲಿ ಚಿನ್ನದ ಪದಕವನ್ನು ರಷ್ಯಾ ತಂಡಕ್ಕೆ ಬಿಟ್ಟುಕೊಟ್ಟಿತು.
2008: ಕೊಲಂಬೋದಲ್ಲಿ ಸಾರ್ಕ್ ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಉತ್ತರ ಶ್ರೀಲಂಕಾದಲ್ಲಿ ಸೇನೆ ಹಾಗೂ ಎಲ್ ಟಿ ಟಿ ಇ ನಡುವಣ ಕಾಳಗದಲ್ಲಿ 52 ಮಂದಿ ಸಾವನ್ನಪ್ಪಿದರು. ಸಾವನ್ನಪ್ಪಿದವರಲ್ಲಿ ಹದಿನಾಲ್ಕು ಮಂದಿ ಸೈನಿಕರು ಹಾಗೂ 38 ಮಂದಿ ಎಲ್ ಟಿ ಟಿ ಐ ಉಗ್ರರು ಎಂದು ಸೇನೆ ಹೇಳಿತು.
2008: ಕೊಲಂಬೋದಲ್ಲಿ ಸಾರ್ಕ್ ಸಮ್ಮೇಳನ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಉತ್ತರ ಶ್ರೀಲಂಕಾದಲ್ಲಿ ಸೇನೆ ಹಾಗೂ ಎಲ್ ಟಿ ಟಿ ಇ ನಡುವಣ ಕಾಳಗದಲ್ಲಿ 52 ಮಂದಿ ಸಾವನ್ನಪ್ಪಿದರು. ಸಾವನ್ನಪ್ಪಿದವರಲ್ಲಿ ಹದಿನಾಲ್ಕು ಮಂದಿ ಸೈನಿಕರು ಹಾಗೂ 38 ಮಂದಿ ಎಲ್ ಟಿ ಟಿ ಐ ಉಗ್ರರು ಎಂದು ಸೇನೆ ಹೇಳಿತು.
2007: ಹಲವು ತಿಂಗಳುಗಳಿಂದ ನೆನೆಗುದಿಗೆ ಬಿದ್ದಿದ್ದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಆಗಸ್ಟ್ 30ರಂದು ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿತು. ಚುನಾವಣೆ ನಡೆಯಬೇಕಿದ್ದ 208 ನಗರ ಸ್ಥಳೀಯ ಸಂಸ್ಥೆಗಳ ಪೈಕಿ 163 ನಗರ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಈಗ ಚುನಾವಣೆ ನಡೆಯಲಿದೆ ಎಂದು ಆಯೋಗದ ಮುಖ್ಯ ಆಯುಕ್ತ ಎಂ.ಆರ್. ಹೆಗಡೆ ಹಾಗೂ ಅಧೀನ ಕಾರ್ಯದರ್ಶಿ ಎಚ್. ಎಸ್. ಉದಯಶಂಕರ್ ಈದಿನ ಬೆಂಗಳೂರಿನಲ್ಲಿ ಪ್ರಕಟಿಸಿದರು.
2007: ಅಮೆರಿಕದ ಮಿನ್ನಿಯಾಪೊಲೀಸ್ ಹೆದ್ದಾರಿಯಲ್ಲಿ ಮಿಸಿಸಿಪ್ಪಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಕುಸಿದು ಐವರು ಮೃತಪಟ್ಟು 20 ಜನರು ನಾಪತ್ತೆಯಾದರು. 60ಕ್ಕೂ ಹೆಚ್ಚು ಮಂದಿ ಗಾಯಗೊಂಡರು ಎಂದು ಅಮೆರಿಕದ ಪೊಲೀಸ್ ಇಲಾಖೆ ಖಚಿತಪಡಿಸಿತು.
2007: ಪತ್ನಿ ಶಕೀರಾ ಅವರನ್ನು ಕೊಲೆ ಮಾಡಿದ ಸ್ವಾಮಿ ಶ್ರದ್ಧಾನಂದ ಅವರಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವ ಪ್ರಕರಣದ ವಿಚಾರಣಾ ಪೀಠದಲ್ಲಿ ಕುಳಿತುಕೊಳ್ಳಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕರ್ನಾಟಕ ಮೂಲದ ಆರ್.ವಿ. ರವೀಂದ್ರನ್ ನಿರಾಕರಿಸಿದರು. ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಹಾಗೂ ದಲ್ವೀರ್ ಭಂಡಾರಿ ಅವರನ್ನೊಳಗೊಂಡ ಮೂವರು ಸದಸ್ಯರ ಪೀಠದ ಮುಂದೆ ಪ್ರಕರಣ ಬಂದಾಗ, ರವೀಂದ್ರನ್ ಅವರು ತಮ್ಮನ್ನು ವಿಚಾರಣಾ ಪೀಠದಿಂದ ಬಿಡುಗಡೆಗೊಳಿಸುವಂತೆ ಕೇಳಿಕೊಂಡರು. ಈ ಬೆಳವಣಿಗೆಯಿಂದಾಗಿ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರು ಪ್ರಕರಣವನ್ನು ಮೂವರು ನ್ಯಾಯಮೂರ್ತಿಗಳಿರುವ ಮತ್ತೊಂದು ಪೀಠಕ್ಕೆ ವರ್ಗಾಯಿಸಿದರು.
2007: ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರವು, ಕೇರಳದಲ್ಲಿರುವ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರವನ್ನು (ಆರ್ ಜಿ ಸಿ ಬಿ) ತನ್ನ ವಶಕ್ಕೆ ತೆಗೆದುಕೊಂಡು ಅದಕ್ಕೆ ಸ್ವಾಯತ್ತತೆ ನೀಡುವ ನಿರ್ಧಾರ ಕೈಗೊಂಡಿತು. ಆರ್ ಜಿ ಸಿ ಬಿ ವಶಕ್ಕೆ ತೆಗೆದುಕೊಳ್ಳುವುದರಿಂದ ರಾಜ್ಯ ಹಾಗೂ ಆ ಪ್ರದೇಶದಲ್ಲಿ ಜೈವಿಕ ತಂತ್ರಜ್ಞಾನದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂದು ವಾರ್ತಾ ಹಾಗೂ ಪ್ರಸಾರ ಸಚಿವ ಪಿ.ಆರ್. ದಾಸ್ ಮುನ್ಷಿ ಸಂಪುಟ ಸಭೆಯ ನಂತರ ಪ್ರಕಟಿಸಿದರು.
2007: ರಷ್ಯದ ಎರಡು ಮಿನಿ ಜಲಾಂತರ್ಗಾಮಿಗಳು 27 ನಿಮಿಷಗಳ ಅಂತರದಲ್ಲಿ ಉತ್ತರ ಧ್ರುವದಲ್ಲಿರುವ ಆರ್ಕ್ಟಿಕ್ ಸಮುದ್ರದ ತಳವನ್ನು ಯಶಸ್ವಿಯಾಗಿ ಮುಟ್ಟಿದವು. ಮೀರ್- 1 ಮತ್ತು ಮೀರ್- 2 ಹೆಸರಿನ ಈ ಜಲಾಂತರ್ಗಾಮಿಗಳಲ್ಲಿ ಸಾಹಸಿ ನಾವಿಕರು 4,300 ಮೀಟರ್ ಆಳಕ್ಕೆ ತೆರಳಿ ತಮ್ಮ ಪಾರಮ್ಯ ಪ್ರದರ್ಶಿಸಿದರು. ಈ ಸಮುದ್ರ ಪ್ರದೇಶ ತನಗೆ ಸೇರಿದ್ದೆಂದು ರಷ್ಯ ಹೇಳುತ್ತ ಬಂದಿದ್ದು, ಕೆಲವು ರಾಷ್ಟ್ರಗಳು ಇದನ್ನು ವಿರೋಧಿಸಿದ್ದವು.
2007: 2007ರ ಸಾಲಿನ `ಜಿ.ಆರ್. ಮೋದಿ ಸಂಶೋಧನಾತ್ಮಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶಸ್ತಿ'ಗೆ ಭಾರತೀಯ ವಿಜ್ಞಾನ ಸಂಸ್ಥೆಯ ಡಾ. ಗೋವರ್ಧನ್ ಮೆಹ್ತಾ ಆಯ್ಕೆಯಾದರು. ಎಸ್ ಐ ಆರ್ ಭಟ್ನಾಗರ್ ಫೆಲೋ ಆಗಿರುವ ಅವರು, ಸಾವಯವ ಸಮನ್ವಯ ಸಿದ್ಧಾಂತದ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದವರು. ಈ ನೂತನ ಪರಿಕಲ್ಪನೆ ಪರಿಗಣಿಸಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿತು.
2006: ಮೂರು ವರ್ಷಗಳ ಹಿಂದೆ ತಂಪು ಪಾನೀಯಗಳಲ್ಲಿ ಕೀಟನಾಶಕಗಳು ಪತ್ತೆಯಾಗಿ ಎದ್ದಿದ್ದ ಭಾರಿ ವಿವಾದ ತಣ್ಣಗಾಗುವ ಮೊದಲೇ ಕೋಕಾ ಕೋಲಾ ಮತ್ತು ಪೆಪ್ಸಿಯ 11 ಜನಪ್ರಿಯ ಬಾಂಡುಗಳಲ್ಲಿ ಅಪಾಯಕಾರಿ ಮಟ್ಟದ ಕೀಟ ನಾಶಕಗಳ ಅಂಶ ಪತ್ತೆಯಾಗಿರುವುದಾಗಿ ದೆಹಲಿಯ ಸರ್ಕಾರೇತರ ಸಂಸ್ಥೆ (ಎನ್ಜಿಓ) ವಿಜ್ಞಾನ ಮತ್ತು ಪರಿಸರ ಕೇಂದ್ರವು ನವದೆಹಲಿಯಲ್ಲಿ ಪ್ರಕಟಿಸಿತು.
2006: ಚೆನ್ನೈಯ ಎಂಜಿನಿಯರಿಂಗ್ ಪದವೀಧರ ಅಭಿಷೇಕ್ ಕುಮಾರ (22) ಅವರು ಮೈಕ್ರೋಸಾಫ್ಟ್ ಕಂಪೆನಿಯ ರೆಡ್ಮೊಂಡ್ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಮುಖ್ಯ ಶಿಲ್ಪಿ ಬಿಲ್ ಗೇಟ್ಸ್ ಜೊತೆಗೆ ಕೆಲಸ ಮಾಡುವ ಅಪರೂಪದ ಗೌರವ ಪಡೆದರು.
2001: ಕೊಲಂಬೋದಲ್ಲಿ ನಡೆದ ಕೊಕಾ-ಕೋಲಾ ಟ್ರೋಫಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 100 ರನ್ನುಗಳನ್ನು ಗಳಿಸುವ ಮೂಲಕ ವೀರೇಂದ್ರ ಸೆಹ್ ವಾಗ್ ಅವರು ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಎರಡನೇ `ವೇಗದ ಶತಕ' (69 ಬಾಲ್ ಗಳಿಗೆ) ಬಾರಿಸಿದ ಭಾರತೀಯ ಎನಿಸಿದರು.
2006: ಮಾಜಿ ಒಲಿಂಪಿಯನ್, ಫುಟ್ ಬಾಲ್ ಆಟಗಾರ ಬಲರಾಂ ಪರಬ್ ಮುಂಬೈಯಲ್ಲಿ ನಿಧನರಾದರು.
2006: ಸಮಾಜ ಶಾಸ್ತ್ರಜ್ಞೆ, ಮಾನವ ಹಕ್ಕುಗಳ ಹೋರಾಟಗಾರ್ತಿ ನಾಡೋಜ ಪ್ರೊ. ಸಿ. ಪಾರ್ವತಮ್ಮ (40) ಮೈಸೂರಿನಲ್ಲಿ ನಿಧನರಾದರು.
1990: ಸದ್ದಾಂ ಹುಸೇನ್ ಕುವೈಟ್ ಮೇಲೆ ದಾಳಿ ನಡೆಸಿದರು.
1990: ಕ್ಯೂಬಾದ ಹೆವಿವೇಯ್ಟ್ ಬಾಕ್ಸರ್ ಟಿಯೋಫಿಲೋ ಸ್ಟೀವನ್ ಸನ್ (ಲೊರೆಂಝೊ) ಅವರು ಒಂದೇ ವಿಭಾಗದಲ್ಲಿ ಸತತವಾಗಿ ಮೂರು ಬಾರಿ ಒಲಿಂಪಿಕ್ ಸ್ವರ್ಣ ಗ್ದೆದ ಪ್ರಥಮ ಬಾಕ್ಸರ್ ಎಂಬ ಕೀರ್ತಿಗೆ ಭಾಜನರಾದರು. ಈ ಮೊದಲು ಅವರು 1972ರಲ್ಲಿ ಮ್ಯೂನಿಚ್ ಮತ್ತು 1976ರಲ್ಲಿ ಮಾಂಟ್ರಿಯಲ್ ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಹೆವಿ ವೇಯ್ಟ್ ಬಾಕ್ಸಿಂಗ್ ಸ್ವರ್ಣ ಗೆದ್ದಿದ್ದರು.
1938: ಡಾ. ಸಿ. ಅಶ್ವತ್ಥ ಜನನ.
1925: ಮನೋಹರ ಬಾಲಚಂದ್ರ ಘಾಣೇಕರ್ ಜನನ.
1923: ಅಮೆರಿಕದ 29ನೇ ಅಧ್ಯಕ್ಷ ವಾರನ್ ಜಿ ಹರ್ಡಿಂಗ್ ಅವರು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ತಮ್ಮ 57ನೇ ವಯಸ್ಸಿನಲ್ಲಿ ಮೃತರಾದರು.
1899: ಡಿ.ಸಿ. ಪಾವಟೆ ಜನನ.
1887: ಹದಿನೆಂಟನೇ ಶತಮಾನದ ಖ್ಯಾತ ಇಂಗ್ಲಿಷ್ ಚಿತ್ರ ಕಲಾವಿದ ಥಾಮಸ್ ಗೇಯಿನ್ಸ್ ಬೊರೊ ಅವರು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು.
1876: `ವೈಲ್ಡ್ಬಿಲ್' ಎಂದೇ ಹೆಸರಾಗಿದ್ದ ಹಿಕ್ ಕಾಕ್ ಅವರು ದಕ್ಷಿಣ ಡಕೋಟಾದ ಡೆಡ್ ವುಡ್ ನ ಸಲೂನ್ ನಲ್ಲಿ ಫೋಕರ್ ಆಡುತ್ತಿದ್ದಾಗ ಗುಂಡೇಟಿನಿಂದ ಸಾವನ್ನಪ್ಪಿದರು.
1858: ಬ್ರಿಟಿಷ್ ಸಂಸತಿನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರ್ಕಾರಕ್ಕೆ ಭಾರತದ ಆಡಳಿತವನ್ನು ಹಸ್ತಾಂತರಿಸುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಯಿತು. ಈ ತೀರ್ಮಾನದ ಬಳಿಕ ಭಾರತದ ಆಡಳಿತ ನಿರ್ವಹಣೆಗೆ ವೈಸ್ ರಾಯ್ ಅವರನ್ನು ನೇಮಕ ಮಾಡಲಾಯಿತು.
1852: ಹೊಸಗನ್ನಡದ ಭಾಷಾ ಸಾಹಿತ್ಯದ ಪ್ರವರ್ತಕರಲ್ಲೊಬ್ಬರಾದ ವಾಸುದೇವಯ್ಯ (2-8-1852ರಿಂದ 26-12-1943) ಅವರು ಚನ್ನಪಟ್ಟಣದಲ್ಲಿ ಜನಿಸಿದರು.
No comments:
Post a Comment