Wednesday, August 21, 2019

ಇಂದಿನ ಇತಿಹಾಸ History Today ಆಗಸ್ಟ್ 21

2019: ನವದೆಹಲಿ : ಐಎನ್ ಎಕ್ಸ್ ಮೀಡಿಯಾ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಟಕೀಯ ಬೆಳವಣಿಗೆಗಳ ಮಧ್ಯೆ  ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಕೇಂದ್ರೀಯ ತನಿಖಾ ದಳವು (ಸಿಬಿಐ) ಈದಿನ ರಾತ್ರಿ ದೆಹಲಿಯ ಅವರ ಪೋಶ್ ಜೋರ್ ಬಾಗ್ ನಿವಾಸದಲ್ಲಿ ಬಂಧಿಸಿತು.ಬಂಧನದಿಂದ ಪಾರಾಗಲು ಸಾಕಷ್ಟು ನಾಟಕಗಳು ನಡೆದರೂ ಯಾವುದೇ ಪ್ರಯೋಜನವಾಗಲಿಲ್ಲ ಕೊನೆಗೂ ಸಿಬಿಐ ಅಧಿಕಾರಿಗಳ ಬಲೆಗೆ  ಬೀಳಬೇಕಾಯಿತುಬಂಧನಕ್ಕೊಳಗಾದ ಪಿ.ಚಿದಂಬರಂ ಅವರನ್ನು ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ ಬಳಿಕ ಸಿಬಿಐ ಕೇಂದ್ರ ಕಚೇರಿಗೆ ಕರೆದುಕೊಂಡು ಹೋಗಲಾಯಿತು.ಸಿಬಿಐ ಕೇಂದ್ರ ಕಚೇರಿಯಲ್ಲಿ ವಿಚಾರಣೆ ಬಳಿಕ ಆಗಸ್ಟ್ 22 ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಅಧಿಕಾರಿಗಳು ಹೇಳಿದರುಇತ್ತ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ ಚೆನ್ನೈಯಲ್ಲಿದ್ದ ಪುತ್ರ ಕಾರ್ತಿ ಚಿದಂಬರಂ ಅವರು ದೆಹಲಿಗೆ ಹೊರಟರು. ಬಂಧನಕ್ಕೆ ಮುನ್ನ  ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ.ಚಿದಂಬರಂನನ್ನ ಮೇಲೆ ಸಿಬಿಐ ವರೆಗೂ ಚಾರ್ಜ್ ಶೀಟ್ ದಾಖಲು ಮಾಡಿಲ್ಲ, ಎಫ್ಐಆರ್ ನಲ್ಲೂ ನನ್ನ ಹೆಸರನ್ನು ಉಲ್ಲೇಖ ಮಾಡಿಲ್ಲ,ನನ್ನನ್ನಾಗಲೀ, ನನ್ನ ಕುಟುಂಬ ಸದಸ್ಯರನ್ನಾಗಲೀ ಆರೋಪಿಗಳಾಗಿ ಹೆಸರಿಸಿಲ್ಲ. ಕಳೆದ 27 ಗಂಟೆಗಳ ಬೆಳವಣಿಗೆಗಳು ಗೊಂದಲಗಳಿಗೆ ಕಾರಣವಾಗಿವೆ ಪ್ರಕರಣದಲ್ಲಿ ನಾನು ಆರೋಪಿಯಲ್ಲ ಎಂದು ಹೇಳಿದರು.  ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಕೇಂದ್ರದ ಮಾಜಿ ಗೃಹ ಸಚಿವ ಪಿ.ಚಿದಂಬರಂ ಅವರನ್ನು ಸಿಬಿಐ ಬಂಧಿಸಿದ್ದಕ್ಕೆ ಅವರ ಪುತ್ರ, ಕಾರ್ತಿ ಚಿದಂಬರಂ ಕೆಂಡಾಮಂಡಲ ಕೋಪ ಪ್ರದರ್ಶಿಸಿದರು. ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ಇಷ್ಟೆಲ್ಲ ನಾಟಕ ಮಾಡಿ ಬಂಧಿಸುವಂಥದ್ದು ಏನೂ ಇರಲಿಲ್ಲ. ಇದನ್ನೆಲ್ಲ ರಾಜಕೀಯ ದ್ವೇಷದಿಂದಲೇ ಮಾಡಲಾಗುತ್ತಿದೆ. ಇದನ್ನು ಮಾಡುತ್ತಿರುವವರು ಬಿಜೆಪಿಯವರು ಹೊರತು ಅಮೆರಿಕದ ಡೊನಾಲ್ಡ್ ಟ್ರಂಪ್ ಅಲ್ಲ ಎಂದು ಅವರು ಹೇಳಿದರು.

2019: ನವದೆಹಲಿ: ರಾಜಧಾನಿ ದೆಹಲಿ ಮತ್ತು ಮುಂಬೈ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲು ಇನ್ನು ಮುಂದೆ ಹಿಂದಿಗಿಂತ ಅತೀ ವೇಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಪಶ್ಚಿಮ  ರೈಲ್ವೇ ತಿಳಿಸಿತು.  ದೆಹಲಿ-ಮುಂಬೈ ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ಮೊದಲು ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಇನ್ನು ಮುಂದೆ  ವೇಗದ ಪ್ರಮಾಣವನ್ನು 160 ಕಿಲೋ ಮೀಟರುಗಳಿಗೆ  ಹೆಚ್ಚಿಸಲಾಗಿದೆ. ಇದರಿಂದಾಗಿ 5 ಗಂಟೆ ಮುಂಚಿತವಾಗಿ ಮುಂಬೈ ತಲುಪಲಿದೆ ಎಂದು ಇಲಾಖೆ ತಿಳಿಸಿತು. ಈ ಮೊದಲು ದೆಹಲಿಯಿಂದ ಮುಂಬೈ ತಲುಪಲು ರಾಜಧಾನಿ ರೈಲು 15.5 ಗಂಟೆ  ಕಾಲವನ್ನು ತೆಗೆದುಕೊಳ್ಳುತ್ತಿತ್ತು.. ಇನ್ನು ಮುಂದೆ ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವುದರಿಂದ ಕೇವಲ 10 ಗಂಟೆಯಲ್ಲಿ ಮುಂಬೈ ತಲುಪಲಿದೆ. ಕೇಂದ್ರ ಸರ್ಕಾರದ  ಅನುಮತಿ ನೀಡಿದ ನಂತರ ಮುಂಬೈ-ದೆಹಲಿ ಮಧ್ಯೆ  ನಡುವೆ ಸಂಚರಿಸುವ ರಾಜಧಾನಿ ಎಕ್ಸ್ ಪ್ರೆಸ್ ರೈಲಿನ ವೇಗವನ್ನು 160 ಕಿ.ಮೀಗೆ ಹೆಚ್ಚಿಸಿದೆ ಎಂದು ಪಶ್ಚಿಮ ರೈಲ್ವೆ ವಲಯ ಟ್ವೀಟ್ ಮೂಲಕ ಪ್ರಕಟಿಸಿತು.

2019: ನವದೆಹಲಿ: ಬಾಲಾಕೋಟ್ ದಾಳಿ ಬಳಿಕ ಪಾಕಿಸ್ಥಾನದ ವಾಯುಪಡೆಯ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಸುದ್ದಿ ಮಾಡಿದ್ದ ವಾಯುಪಡೆ ಸೂಪರ್ ಹೀರೋ ಪೈಲಟ್ ಅಭಿನಂದನ್ (36) ಮತ್ತೆ ಮಿಗ್ 21 ವಿಮಾನ ಚಾಲನೆಗೆ ಸಿದ್ಧರಾದರು. ಅವರನ್ನು ರಾಜಸ್ಥಾನದ ವಾಯುಪಡೆ ನೆಲೆಯಲ್ಲಿ ನಿಯೋಜಿಸಲಾಯಿತು. ಫೆ.27ರಂದು ಪಾಕ್ ವಾಯುಪಡೆಯೊಂದಿಗೆ ಹೋರಾಟದ ಬಳಿಕ ಅಭಿನಂದನ್ ವಿಮಾನ ಪತನಗೊಂಡಿದ್ದು, ಪಾಕ್ ಸೇನೆಗೆ ಸೆರೆ ಸಿಕ್ಕಿದ್ದರು. ಬಳಿಕ ಪಾಕ್ ಅಭಿನಂದನ್ ಅವರನ್ನು ಯುದ್ಧ ಕೈದಿ ಎಂದು ಪರಿಗಣಿಸಿ ಮರಳಿಸಿತ್ತು.ವಿಮಾನದಿಂದ ಹೊರಗೆ ಹಾರಿದ್ದು, ಮತ್ತು ಸ್ಥಳೀಯರು, ಪಾಕ್ ಸೇನೆಯ ಹಿಂಸೆಯಿಂದಾಗಿ ಅಭಿನಂದನ್ಗೆ ಏಟಾಗಿತ್ತು. ಆ  ಬಳಿಕ ಅವರು ವಿಮಾನ ಚಾಲನೆಯಿಂದ ದೂರವಿದ್ದರು. ಈಗ 6 ತಿಂಗಳ ಬಳಿಕ ಮತ್ತೆ ಸಿದ್ಧರಾದರು. ಬೆಂಗಳೂರಿನ ಏರೋಸ್ಪೇಸ್ ಮೆಡಿಸಿನ್ ಅಭಿನಂದನ್ ಅವರನ್ನು ಪೈಲಟ್ ಕೆಲಸಕ್ಕೆ ಫಿಟ್ ಆಗಿರುವುದಾಗಿ ಮೂರು ವಾರಗಳ ಹಿಂದೆ ಘೋಷಿಸಿತ್ತು. ಶತ್ರುರಾಷ್ಟ್ರದ ಕೈಗೆ ಸೆರೆ ಸಿಕ್ಕರೂ, ಅಪ್ರತಿಮ ಧೈರ್ಯ ತೋರಿದ್ದಕ್ಕಾಗಿ ಮತ್ತು ಶತ್ರು ರಾಷ್ಟ್ರದ ಯುದ್ಧ ವಿಮಾನ ಪುಡಿಗಟ್ಟಿದ್ದಕ್ಕಾಗಿ ಅವರಿಗೆ ಇತ್ತೀಚಿಗೆ ವೀರ ಚಕ್ರ ಶೌರ್ಯ ಪದಕವನ್ನು ನೀಡಿ ಗೌರವಿಸಲಾಗಿತ್ತು.

2019: ಇಸ್ಲಾಮಾಬಾದ್: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಕಂಗೆಟ್ಟಿರುವ ಪಾಕಿಸ್ಥಾನ ಕಂಡ ಕಂಡಲ್ಲಿ ಭಾರತ ಮತ್ತು ಭಾರತೀಯರನ್ನು ಹಣಿಯಲು ಇನ್ನಿಲ್ಲದ ಪ್ರಯತ್ನ ನಡೆಸಿತು.  ಇದಕ್ಕೆ ಹೊಸ ಸೇರ್ಪಡೆಯಾಗಿ ಯುನಿಸೆಫ್ ಸದ್ಭಾವನಾ ರಾಯಭಾರಿಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಅವರನ್ನು ವಜಾಗೊಳಿಸಬೇಕು ಎಂದು ವಿಶ್ವಸಂಸ್ಥೆಗೆ ಪಾಕ್ ಒತ್ತಾಯಿಸಿತು. ಪ್ರಿಯಾಂಕಾ ಬಾಲಾಕೋಟ್ ದಾಳಿ ಸಂದರ್ಭ (ಫೆಬ್ರವರಿಯಲ್ಲಿ) ಭಾರತೀಯ ಸಶಸ್ತ್ರ ಪಡೆಗಳನ್ನು ಉದ್ದೇಶಿಸಿ ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದರು. ಇದೇ ಟ್ವೀಟ್ ಅನ್ನು ನೆವವಾಗಿರಿಸಿ, ಈಗ ಎಚ್ಚೆತ್ತಿರುವ ಪಾಕ್, ಮೋದಿ ಸರ್ಕಾರದ  ನಡೆಯನ್ನು ಪ್ರಿಯಾಂಕಾ ಬೆಂಬಲಿಸಿದ್ದರು. ಕಾಶ್ಮೀರ ವಿಚಾರದಲ್ಲಿ ಯುದ್ಧಕ್ಕೆ, ಅಣ್ವಸ್ತ್ರ ಯುದ್ಧಕ್ಕೂ ಬೆಂಬಲ ನೀಡಿದರು. ಇದು ಅವರು ವಿಶ್ವಸಂಸ್ಥೆಯಲ್ಲಿ ಹೊಂದಿರುವ ಶಾಂತಿ ರಾಯಭಾರಿ ಹುದ್ದೆಗೆ ಅವಮಾನಕರ. ಆದ್ದರಿಂದ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಪಾಕಿಸ್ತಾನ ಹೇಳಿತು. ಪಾಕಿಸ್ಥಾನದ ಮಾನವ ಹಕ್ಕು ಸಚಿವೆ ಶೈರೀನ್ ಮಝಾರಿ ಅವರು ಕುರಿತ ಪತ್ರಿಕಾ ಹೇಳಿಕೆ ನೀಡಿ ಟ್ವೀಟ್ ಮಾಡಿದರು. ಅವರು ಹೀಗೆ ಟ್ವೀಟ್ ಮಾಡುತ್ತಿದ್ದಂತೆ, ಭಾರತೀಯ ಟ್ವೀಟಿಗರು ಲೇವಡಿ ಮಾಡಿದರು. ಇನ್ನಷ್ಟು ದಿನ ಕಳೆದ ಬಳಿಕ ನೀವು ಹೀಗೆ ಆಗ್ರಹ ಮಾಡಬಹುದಿತ್ತು ಎಂದು ಕೆಲವರು ಬರೆದರೆ,  ಇನ್ನು ಕೆಲವರು ಪಾಕ್ನಲ್ಲಿ ಮಾನವ ಹಕ್ಕು ಎಂದೇನಾದರೂ ಇದೆಯೇ ಎಂದು ಕಾಲೆಳೆದರು.
2019: ನವದೆಹಲಿ: ಕೇಂದ್ರ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಅವರು ಬಂಧನಪೂರ್ವ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ತುರ್ತಾಗಿ ಆಲಿಸಲು ನಿರಾಕರಿಸಿದ ಸುಪ್ರೀಂಕೋರ್ಟ್ ಅರ್ಜಿಯನ್ನು  ಎರಡು ದಿನ ತಡವಾಗಿ ಆಗಸ್ಟ್  23ರ ಶುಕ್ರವಾರ ವಿಚಾರಣೆಗೆ ಪಟ್ಟಿ ಮಾಡಿತು. ಇದರೊಂದಿಗೆ ಐಎನ್ಎಕ್ಸ್ ಮೀಡಿಯಾ  ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಮತ್ತು ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ  ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿ ದೆಹಲಿ ಹೈಕೋರ್ಟ್ ನೀಡಿರುವ ತೀರ್ಪಿನ ಬಳಿಕ ಚಿದಂಬರಂ ಅವರಿಗೆ ಮತ್ತೊಂದು ಹಿನ್ನಡೆಯಾಯಿತು. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ನೇತೃತ್ವದ ಚಿದಂಬರಂ ಅವರ ವಕೀಲರ ತಂಡವು ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು  ತತ್ ಕ್ಷಣವೇ ವಿಚಾರಣೆಗೆ ಎತ್ತಿಕೊಳ್ಳುವಂತೆ ಇಡೀದಿನ ನಡೆಸಿದ ಹಲವಾರು ಪ್ರಯತ್ನಗಳನ್ನು ನಡೆಸಿದ ಬಳಿಕ ಸುಪ್ರೀಂಕೋರ್ಟ್ ಪ್ರಕರಣವನ್ನು 23ರಂದು ವಿಚಾರಣೆಗೆ ಎತ್ತಿಕೊಳ್ಳಲು ತೀರ್ಮಾನಿಸಿತು.ಕಪಿಲ್ ಸಿಬಲ್ ಅವರು ಇದಕ್ಕೆ ಮುನ್ನ ನ್ಯಾಯಮೂರ್ತಿ ಎನ್ ವಿ ರಮಣ ಅವರ ಮುಂದೆ ಅರ್ಜಿಯನ್ನು ಪ್ರಸ್ತಾಪಿಸಲು ಹಲವು ಬಾರಿ ಪ್ರಯತ್ನಿಸಿದ್ದರು. ಆದರೆ ಪೀಠವು ವಿಷಯ ಪ್ರಸ್ತಾಪವಾದ ಎರಡೂ ಸಂದರ್ಭಗಳಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರನ್ನು ಸಂಪರ್ಕಿಸುವಂತೆ ಸಿಬಲ್ ಅವರಿಗೆ ಸೂಚಿಸಿತು. ಮುಖ್ಯ ನ್ಯಾಯಮೂರ್ತಿಯವರು ಕೆಲವು ವಿಧಿ ವಿಧಾನಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂಬ ಕಾರಣಕ್ಕಾಗಿ ಸಂಜೆಯವರೆಗೂ ಯಾವುದೇ ಆದೇಶ ನೀಡಲಿಲ್ಲ ಮತ್ತು ಅರ್ಜಿಯಲ್ಲಿನ ಲೋಪದೋಷಗಳನ್ನು ಸರಿಪಡಿಸುವಂತೆ ವಕೀಲರಿಗೆ ಸೂಚಿಸಿದರು. ೨೦೦೭ರಲ್ಲಿ ಚಿದಂಬರಂ ಅವರು ಕೇಂದ್ರ ವಿತ್ತ ಸಚಿವರಾಗಿದ್ದಾಗ  ಐಎನ್ಎಕ್ಸ್ ಮೀಡಿಯಾ ಸಮೂಹವು ಸ್ವೀಕರಿಸಿದ ವಿದೇಶೀ ಹೂಡಿಕೆಯಲ್ಲಿನ ಶಂಕಿತ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸದಂತೆ ಮಧ್ಯಂತರ ರಕ್ಷಣೆ ಒದಗಿಸಲು ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿ ಸುನಿಲ್ ಗೌರ್ ಅವರು ನಿರಾಕರಿಸುವುದರೊಂದಿಗೆ ಹಿಂದಿನ ದಿನ ಕಾಂಗ್ರೆಸ್ ನಾಯಕನ ಬಂಧನಕ್ಕೆ ದಾರಿ ಸುಗಮಗೊಂಡಿತ್ತು. ಚಿದಂಬರಂ ಅವರಿಗೆ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪಕ್ಷದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ರಾಹುಲ್ ಮತ್ತು ಪ್ರಿಯಾಂಕಾ ಅವರು ಟ್ವೀಟ್ ಮೂಲಕ ಹಿರಿಯ ರಾಜಕಾರಣಿಯನ್ನು ಸರ್ಕಾರವುಬೇಟೆಗೆಗುರಿ ಮಾಡುತ್ತಿದೆ ಎಂದು ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು. ಸರ್ಕಾರವು ಮಾಜಿ ಗೃಹ ಹಾಗೂ ವಿತ್ತ ಸಚಿವರನ್ನುಬೇಟೆಯಾಡುತ್ತಿರುವುದುನಾಚಿಕೆಗೇಡು ಎಂದು ಪ್ರಿಯಾಂಕಾ ಅವರು ಟ್ವೀಟ್ ಮಾಡಿದರೆ, ’ಸರ್ಕಾರವು  ಜಾರಿ ನಿರ್ದೇಶನಾಲಯ, ಸಿಬಿಐ ಮತ್ತು ಬೆನ್ನ ಮೂಳೆ ಇಲ್ಲದ ಕೆಲವು ಮಾಧ್ಯಮಗಳನ್ನು ಬಳಸಿಕೊಂಡು ಚಿದಂಬರಂ ಅವರ ಚಾರಿತ್ರ್ಯ ವಧೆಗಾಗಿ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುತ್ತಿದೆಎಂದು ರಾಹುಲ್ ಗಾಂಧಿ ಟ್ವೀಟಾಸ್ತ್ರ ಎಸೆದರು. ಚಿದಂಬರಂ ಅವರು ವಿತ್ತ ಸಚಿವರಾಗಿದ್ದಾಗ ೨೦೦೭ರ ಸುಮಾರಿನಲ್ಲಿ ಸುಮಾರು ೩೦೫ ಕೋಟಿ ರೂಪಾಯಿಗಳ ವಿದೇಶೀ ನೇರ ಬಂಡವಾಳ ಪಡೆಯಲು ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ  ಅನುಮತಿ ನೀಡಿದ ವಿದೇಶೀ ಹೂಡಿಕೆ ಅಭಿವೃದ್ಧಿ ಮಂಡಳಿಯ (ಎಫ್ ಐಪಿಬಿ) ನಿರ್ಧಾರದ ಹಿನ್ನೆಲೆಯಲ್ಲಿ ಅಕ್ರಮಗಳು ನಡೆದಿವೆ ಎಂಬುದಾಗಿ ಆಪಾದಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣ ಇದು. ೨೦೧೭ರ ಮೇ ತಿಂಗಳಲ್ಲಿ ಪ್ರಕರಣವನ್ನು ದಾಖಲಿಸಿದ್ದ ಕೇಂದ್ರೀಯ ತನಿಖಾ ದಳವು (ಸಿಬಿಐ), ಐಎನ್ಎಕ್ಸ್ ಮೀಡಿಯಾದ ಸಹ ಸಂಸ್ಥಾಪಕರಾದ ಇಂದ್ರಾಣಿ ಮುಖರ್ಜಿ ಮತ್ತು ಆಕೆಯ ಪತಿ ಪೀಟರ್ ಮುಖರ್ಜಿ ಅವರು ಎಫ್ಐಪಿಬಿಯಿಂದ ಅಗತ್ಯ ವಿದೇಶೀ ಹೂಡಿಕೆ ಅನುಮತಿಗಳನ್ನು ಪಡೆಯಲು ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರಿಗೆ ಲಂಚ ನೀಡಿದ್ದರು ಎಂದು ಆಪಾದನೆ ಮಾಡಿತ್ತು. ಜಾರಿ ನಿರ್ದೇಶನಾಲಯವು (ಇಡಿ) ಒಂದು ವರ್ಷದ ಬಳಿಕ ಪ್ರಕರಣದ ವಿಚಾರಣೆಗೆ ಕೈ ಹಾಕಿತ್ತು.ಎಫ್ಐಪಿಬಿ ಅನುಮತಿ ಪಡೆಯಲು ಕಾರ್ತಿ ಚಿದಂಬರಂ ಜೊತೆಗೆ ತಾನು ಮತ್ತು ಪತಿ ಪೀಟರ್ ಮುಖರ್ಜಿ ೧೦ ಲಕ್ಷ ಡಾಲರ್ ಮೊತ್ತದ ಲಂಚ ವ್ಯವಹಾರ ಕುದುರಿಸಿದ್ದುದಾಗಿ ೨೦೧೮ರಲ್ಲಿ ಇಂದ್ರಾಣಿ ಮುಖರ್ಜಿ ಸಿಬಿಐಗೆ ತಿಳಿಸಿದ್ದರು. ಕಳೆದ ತಿಂಗಳು ದೆಹಲಿ ನ್ಯಾಯಾಲಯವು ತನ್ನ ಪುತ್ರಿ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಅವರಿಗೆ ಐಎನ್ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು (ಅಪ್ರೂವರ್) ಅನುಮತಿ ನೀಡಿತ್ತು.ದೆಹಲಿ ಹೈಕೋರ್ಟ್ ತೀರ್ಪಿನ ಬಳಿಕದ ಪರಿಸ್ಥಿತಿಯನ್ನು ಚಿದಂಬರಂ ಅವರ ಜೊತೆ ಚರ್ಚಿಸಿದ ಬಳಿಕ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟಿನಲ್ಲಿ ತುರ್ತು ವಿಚಾರಣೆ ಕೋರಿ ಅರ್ಜಿ ಸಲ್ಲಿಸಿದರು. ಹಿರಿಯ ವಕೀಲರಾದ ಸಲ್ಮಾನ್ ಖಾನ್ ಮತ್ತು ಅಭಿಷೇಕ್ ಮನು ಸಿಂಘ್ವಿ ಅವರು ಕೂಡಾ ಸುಪ್ರೀಂಕೋರ್ಟಿನಲ್ಲಿ ಕಪಿಲ್ ಸಿಬಲ್ ಅವರಿಗೆ ನೆರವಾದರು. ಅರ್ಜಿಯನ್ನು  ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ಪೀಠವು ಬುಧವಾರ ವಿಚಾರಣೆಗೆ ಎತ್ತಿಕೊಳ್ಳುವುದಾಗಿ ಭಾವಿಸಲಾಗಿತ್ತು.ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ತಿರಸ್ಕರಿಸಿ ನೀಡಲಾದ  ತನ್ನ ತೀರ್ಪಿನ ಜಾರಿಗೆ ಮೂರು ದಿನಗಳ ತಡೆಯಾಜ್ಞೆ ನೀಡುವಂತೆ ಮಾಡಿದ ಮನವಿಯನ್ನೂ ದೆಹಲಿ ಹೈಕೋರ್ಟ್ ನಿರಾಕರಿಸಿದ ಬಳಿಕ ಚಿದಂಬರಂ ಅವರು ಯಾವುದೇ ಹೊತ್ತಿನಲ್ಲಿ ಬಂಧನ ಎದುರಿಸುವ ಸಾಧ್ಯತೆಗಳು ಬಲವಾಗಿವೆ. ಚಿದಂಬರಂ ಅವರಿಗೆ ಬಂಧನದಿಂದ ರಕ್ಷಣೆ ಒದಗಿಸಲು ನಿರಾಕರಿಸಿದ್ದ ನ್ಯಾಯಮೂರ್ತಿ ಸುನಿಲ್ ಗೌರ್ ಅವರುಅವರು (ಚಿದಂಬರಂ) ಸಂಸತ್ ಸದಸ್ಯನಾಗಿರುವುದು ಅಥವ ವಕೀಲ ವೃತ್ತಿಯಲ್ಲಿ ಇರುವುದು ಪ್ರಕರಣದ ಮೇಲೆ ಯಾವುದೇ ಪ್ರಭಾವವನ್ನೂ ಬಿರುವುದಿಲ್ಲಎಂದು ಹೇಳಿದ್ದರು.ಐಎನ್ಎಕ್ಸ್ ಮೀಡಿಯಾ ಟೆಲಿವಿಷನ್ ಕಂಪೆನಿಗೆ ೨೦೦೭ರಲ್ಲಿ ೩೦೫ ಕೋಟಿ ರೂಪಾಯಿಗಳಷ್ಟು ವಿದೇಶೀ ಬಂಡವಾಳ ಸ್ವೀಕಾರಕ್ಕೆ ನೆರವಾಗಲು ತಮ್ಮ ಪುತ್ರ ಕಾರ್ತಿ ಚಿದಂಬರಂ ಅವರು ಲಂಚ ಸ್ವೀಕರಿಸಿದ್ದಾರೆ ಎಂಬ ಆಪಾದನೆಗಳಿಗೆ ಸಂಬಂಧಿಸಿದಂತೆ  ಚಿದಂಬರಂ ಅವರನ್ನು ತನಿಖಾ ಸಂಸ್ಥೆಗಳು ಹಲವಾರು ಬಾರಿ ಪ್ರಶ್ನಿಸಿದ್ದವು. ’ಅರ್ಜಿದಾರರು ಇಡೀ ಹಗರಣದ ಮುಖ್ಯಸ್ಥರಾಗಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ ಮತ್ತು ಅವರು ತನಿಖೆಗೆ ಸಹಕರಿಸಿಲ್ಲಎಂದು ದೆಹಲಿ ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡಿಸಲಾಗಿರುವ ಬೃಹತ್ ಪ್ರಮಾಣದ ಮಾಹಿತಿಗಳು ಬಂಧನಪೂರ್ವ ಜಾಮೀನಿಗೆ ಅವರನ್ನು ಅನರ್ಹರನ್ನಾಸಿಗಿವೆಎಂದೂ ಹೈಕೋರ್ಟ್ ಹೇಳಿತ್ತು.  ‘ಆರ್ಥಿಕ ಅಪರಾಧವನ್ನು ಬಿಗಿ ಮುಷ್ಠಿಯೊಂದಿಗೆ ನಿಭಾಯಿಸಬೇಕು ಮತ್ತು ಇಂತಹ ಬೃಹತ್ ಆರ್ಥಿಕ ಅಪರಾಧದಲ್ಲಿ ತನಿಖಾ ಸಂಸ್ಥೆಗಳ ಕೈಗಳನ್ನು ಕಟ್ಟಿ ಹಾಕಲಾಗದುಎಂದೂ ಹೈಕೋರ್ಟ್ ಹೇಳಿತ್ತು. ನ್ಯಾಯಮೂರ್ತಿ ಸುನಿಲ್ ಗೌರ್ ಅವರು ಇದಕ್ಕೆ ಮುನ್ನ ಜನವರಿ ೨೫ರಂದು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು.  ಚಿದಂಬರಂ ಅವರು ಪ್ರಶ್ನಿಸುವಾಗ ಜಾರಿಕೆಯ ಉತ್ತರ ನೀಡುತ್ತಿರುವುದರಿಂದ ಅವರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸುವ ಅಗತ್ಯವಿದೆ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ವಿಚಾರಣೆ ಕಾಲದಲ್ಲಿ ವಾದಿಸಿದ್ದವು. ಚಿದಂಬರಂ ಅವರು ವಿತ್ತ ಸಚಿವರಾಗಿದ್ದಾಗ ಮಾಧ್ಯಮ ಸಂಸ್ಥೆಗೆ ೩೦೫ ಕೋಟಿ ರೂಪಾಯಿ ವಿದೇಶೀ ನೇರ ಬಂಡವಾಳ ಸ್ವೀಕರಿಸಲು ಎಫ್ಐಪಿಬಿ ಅನುಮತಿ ನೀಡಿತ್ತು. ಹಣ ವರ್ಗಾವಣೆ ಪಡೆದ ಕಂಪೆನಿಗಳು ನೇರವಾಗಿ ಇಲ್ಲವೇ ಪರೋಕ್ಷವಾಗಿ ಚಿದಂಬರಂ ಅವರ ಪುತ್ರ  ಕಾರ್ತಿ ಚಿದಂಬರಂ ಅವರ ನಿಯಂತ್ರಣದಲ್ಲಿ ಇದ್ದವು. ಆದ್ದರಿಂದ ಚಿದಂಬರಂ ಪುತ್ರನ ಹಸ್ತಕ್ಷೇಪದ ಬಳಿಕವೇ ಐಎನ್ಎಕ್ಸ್ ಮೀಡಿಯಾಕ್ಕೆ ವಿದೇಶೀ ನೇರ ಬಂಡವಾಳ ಪಡೆಯಲು ಎಫ್ಐಪಿಬಿ ಒಪ್ಪಿಗೆ ನೀಡಿತು ಎಂಬುದಾಗಿ ನಂಬಲು ಕಾರಣಗಳಿವೆ ಎಂದು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ನ್ಯಾಯಾಲಯದಲ್ಲಿ ವಾದಿಸಿದ್ದವು.ಚಿದಂಬರಂ ಅವರನ್ನು ಬಂಧಿಸದಂತೆ ದೆಹಲಿ ಹೈಕೋರ್ಟ್ ೨೦೧೮ರ ಜುಲೈ ೨೫ರಂದು ಮಧ್ಯಂತರ ರಕ್ಷಣೆ ಮಂಜೂರು ಮಾಡಿತ್ತು ಮತ್ತು ಕಾಲ ಕಾಲಕ್ಕೆ ರಕ್ಷಣೆಯನ್ನು ವಿಸ್ತರಿಸುತ್ತಾ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ತಮಗೆ ಎಂದೂ ಸಮನ್ಸ್ ಕಳುಹಿಸಿಲ್ಲ. ಸಿಬಿಐ ಜಾರಿ ಮಾಡಿರುವ ಸಮನ್ಸ್ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಚಿದಂಬರಂ ತಮ್ಮ ಅರ್ಜಿಯಲ್ಲಿ ಹೇಳಿದ್ದರು. ತಮ್ಮನ್ನು ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಿಲ್ಲ ಅಥವಾ ಎಫ್ಐಆರ್ನಲ್ಲಿ ನಮೂದಿಸಿದ ವಿಧಿಗಳು ತಮ್ಮ ವಿರುದ್ಧ ಮಾಡಿದ್ದಲ್ಲ. ಜಾಮೀನು ನೀಡಿಕೆಯ ಹಂತದಲ್ಲಿ ನ್ಯಾಯಾಲಯವು ಪ್ರಕರಣದ ಅರ್ಹತೆಗಳ ಬಗ್ಗೆ ಪರಿಶೀಲಿಸಬೇಕಾದ ಅಗತ್ಯ ಇಲ್ಲ. ವಿದೇಶಯಾನದ ಸಾಧ್ಯತೆ, ಸಾಕ್ಷ್ಯಾಧಾರದಲ್ಲಿ ಕೈಯಾಡಿಸುವ ಸಾಧ್ಯತೆ ಮತ್ತು ಆರೋಪಿಯು ಮುಂದಿನ ವಿಚಾರಣೆಗೆ ಲಭ್ಯವಾಗುವ ಸಾಧ್ಯತೆ ಮೂರು ವಿಚಾರಗಳ ಬಗ್ಗೆ ಮಾತ್ರ ಜಾಮೀನು ನೀಡಿಕೆ ಸಂದರ್ಭದಲ್ಲಿ ನ್ಯಾಯಾಲಯ ಖಚಿತ ಪಡಿಸಿಕೊಳ್ಳಬೇಕು ಎಂದೂ ಚಿದಂಬರಂ ವಾದಿಸಿದ್ದರು.

2019: ವಿಶಾಖಪಟ್ಟಣ: ಅಮರಾವತಿಯು ಆಂಧ್ರಪ್ರದೇಶದ ನೂತನ ರಾಜಧಾನಿ ಆಗದೇ ಇರಬಹುದು ಎಂಬ ಸುಳಿವನ್ನು ಮುನಿಸಿಪಲ್ ಆಡಳಿತ ಮತ್ತು ನಗರ ಅಭಿವೃದ್ಧಿ ಸಚಿವ ಬೋತ್ಸಾ ಸತ್ಯನಾರಾಯಣ ಅವರು ಇಲ್ಲಿ ನೀಡಿದರು.ಇತ್ತೀಚೆಗೆ ಸುರಿದ ಭಾರೀ ಮಳೆಗೆ ಇಡೀ ಪ್ರದೇಶ ಪ್ರವಾಹಕ್ಕೆ ತುತ್ತಾದುದರ ಕಡೆಗೆ ಬೊಟ್ಟು ಮಾಡಿದ ಸಚಿವ ಬೋತ್ಸಾ ಸತ್ಯನಾರಾಯಣ ಅವರುಅಮರಾವತಿಯು ನೂತನ ರಾಜಧಾನಿ ನಗರವಾಗಲು ಸುರಕ್ಷಿತ ಸ್ಥಳವಲ್ಲ ಎಂದು ಶಿವರಾಮಕೃಷ್ಣ ಸಮಿತಿಯು ಹೇಳಿದೆ. ಈಗ ನೀವು ಕಾಣುತ್ತಿರುವಂತೆ ರಾಜಧಾನಿ ಪ್ರದೇಶದ ಹಲವಾರು ಭಾಗಗಳು ಪ್ರವಾಹಕ್ಕೆ ತುತಾಗಿವೆಎಂದು ಹೇಳಿದರು. ಸರ್ಕಾರವು ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಿಲ್ಲ ಎಂದು ಆರೋಪಗಳನ್ನು ಅಲ್ಲಗಳೆದ ಸಚಿವರು, ನಿರ್ಮಾಣ ವೆಚ್ಚ ಅಧಿಕಗೊಳ್ಳುತ್ತಿರುವುದು ಕೂಡಾ ಯೋಜನೆ ಏಕೆ ಅನುಷ್ಠಾನಗೊಳ್ಳಬಾರದು ಎಂಬುದಕ್ಕೆ ಇನ್ನೊಂದು ಕಾರಣ ಎಂದು ಹೇಳಿದರು. ಹಿಂದಿನ ಟಿಡಿಪಿ ಸರ್ಕಾರವು ಜನರ ಹಣವನ್ನು ದುರುಪಯೋಗ ಮಾಡಿದೆ. ಅಮರಾವತಿಯ ನಿರ್ಮಾಣ ಪ್ರಕ್ರಿಯೆಯ ವೆಚ್ಚವು ಇತರ ಪ್ರದೇಶಗಳಿಗೆ ಹೋಲಿಕೆ ಮಾಡಿದಾಗ ಅತ್ಯಂತ ದುಬಾರಿಯಾಗಿದೆ. ಇತರ ಕಡೆಗಳಲ್ಲಿ ಒಂದು ಒಂದು ಲಕ್ಷ ರೂಪಾಯಿ ಹೂಡಿದರೆ,  ಇಲ್ಲಿ ನೀವು ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ನಾವು ಯೋಜನೆಯನ್ನು ಮರುಪರಿಶೀಲನೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಚಿವರು ಹೇಳಿದರು. ಹಿರಿಯ ನಾಯಕನ ಹೇಳಿಕೆಗೆ ತೀವ್ರ ವಿರೋಧವೂ ವ್ಯಕ್ತವಾಗಿದೆ. ಬಿಜೆಪಿ ವಕ್ತಾರ ಲಂಕಾ ದಿನಕರ ಅವರುನೀವು ವಿರೋಧ ಪಕ್ಷದ ನಾಯಕರಾಗಿದ್ದಾಗ ಯೋಜನೆಯನ್ನು ವಿರೋಧಿಸಿರಲಿಲ್ಲ, ನೆನಪಿರಲಿಎಂದು ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರಿಗೆ ನೆನಪಿಸಿದರು. ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ತೆಲುಗುದೇಶಂ ಪಕ್ಷವು (ಟಿಡಿಪಿ) ಸಚಿವ ಸತ್ಯನಾರಾಯಣ ಅವರ ಹೇಳಿಕೆಯನ್ನುಬೇಜಾಬ್ದಾರಿ ಮತ್ತು ನಿರಾಧಾರವಾದ ಹೇಳಿಕೆಎಂದು ಖಂಡಿಸಿತು.  ‘ಧಾರಾಳ ಜಮೀನು ಮತ್ತು ಇತರ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆಯನ್ನು ಲಕ್ಷಿಸಿ ಅಮರಾವತಿಯನ್ನು ರಾಜಧಾನಿಯನ್ನಾಗಿ ಮಾಡಲು ಆಯ್ಕೆ ಮಾಡಲಾಗಿತ್ತು.’ ಎಂದು ತೆಲುಗುದೇಶಂ ಪಕ್ಷವು ತನ್ನ ಹೇಳಿಕೆಯಲ್ಲಿ ತಿಳಿಸಿತು. ನಗರ ನಿರ್ಮಾಣದ ವೆಚ್ಚ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕಾಗಿ ರಾಜಧಾನಿ ನಿರ್ಮಾಣದ ಯೋಜನೆಯನ್ನು ಕೈಬಿಡುವುದು ಅಮರಾವತಿ ನಿರ್ಮಿಸುವ ರಾಜ್ಯ ಸರ್ಕಾರದ ಬದ್ಧತೆಯ ಮತ್ತು ಆಸಕ್ತಿಯ ಅಭಾವವನ್ನು ತೋರಿಸುತ್ತದೆಎಂದು ತೆಲುಗುದೇಶಂ ಹೇಳಿತು. ಚೀನಾ ಬೆಂಬಲಿತ ಅಸಿಯಾನ್ ಮೂಲ ಸವಲತ್ತು ಹೂಡಿಕೆ ಬ್ಯಾಂಕ್ ಮತ್ತು ವಿಶ್ವ ಬ್ಯಾಂಕ್ ೭೦೦೦ ಲಕ್ಷ (೭೦೦ ಮಿಲಿಯನ್) ಡಾಲರ್ ಮೊತ್ತದ ಉದ್ದೇಶಿತ ಸಾಲ ನೀಡಿಕೆಯನ್ನು ಕೈಬಿಡಲು ತೀರ್ಮಾನಿಸಿದ ಒಂದು ತಿಂಗಳ ಬಳಿಕ ಸಚಿವ ಬೋತ್ಸಾ ಸತ್ಯನಾರಾಯಣ ಅವರ ಹೇಳಿಕೆ ಬಂದಿತು. ಈಮಧ್ಯೆ,  ಬಲವಂತದ ಭೂಸ್ವಾಧಿನ ಕುರಿತ ದೂರುಗಳ ಬಗ್ಗೆ ಸ್ವತಂತ್ರ ತನಿಖೆ ನಡೆಸಲು ಅನುಮತಿ ನೀಡುವಂತೆ ವಿಶ್ವ ಬ್ಯಾಂಕ್ ಅನುಮತಿ ಕೋರಿದೆ ಎಂದು ವರದಿ ತಿಳಿಸಿತು. ಅಲ್ಲದೆ ಕೃಷ್ಣಾ ನದಿಯ ಪ್ರವಾಹ ಪೀಡಿತ ಜಾಗಗಳಲ್ಲಿ ಕಟ್ಟಡ ನಿರ್ಮಿಸಲು ಅನುಮತಿ ನೀಡಿದ ಬಗೆಗೂ ಅದು ಕಳವಳ ವ್ಯಕ್ತಪಡಿಸಿದೆ ಎನ್ನಲಾಯಿತು.

1 comment:

  1. I am really surprised by the quality of your constant posts.You really are a genius, I feel blessed to be a regular reader of such a blog Thanks so much
    onlinekaj.com/
    What is love
    Mobile price bd
    font copy and paste

    ReplyDelete