Friday, August 9, 2019

370,35ಎ ವಿಧಿಗಳೇ ಠಕ್ಕು: ಪಾಕ್ ಸೇನೆಯ ಉದ್ಘೋಷ!

370,35 ವಿಧಿಗಳೇ ಠಕ್ಕು: ಪಾಕ್ ಸೇನೆಯ ಉದ್ಘೋಷ!
ಪಾಕ್ ದೂರಿಗೆ ಮಣೆ ಹಾಕದ ವಿಶ್ವಸಂಸ್ಥೆ
ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಭಾರತೀಯ ಸಂವಿಧಾನದ 370 ಮತ್ತು 35 ವಿಧಿಗಳು ಬರೇ ಕಪಟ, ರಾವಲ್ಪಿಂಡಿಯು ಅದನ್ನು ಎಂದಿಗೂ ಮಾನ್ಯ ಮಾಡಿರಲಿಲ್ಲ ಎಂದು ಭಾರತವು ಅವುಗಳನ್ನು ರದ್ದು ಪಡಿಸಿದ ಬಳಿಕ ಪಾಕಿಸ್ತಾನದ ಸೇನೆ ಬಹಿರಂಗವಾಗಿ ಘೋಷಿಸಿದೆ, ಆದರೆ ಅವುಗಳನ್ನು ರದ್ದು ಮಾಡಿದ ಭಾರತದ ಕ್ರಮದ ವಿರುದ್ಧ ತನ್ನ ಹುಯಿಲೆಬ್ಬಿಸುವುದನ್ನೂ ಮುಂದುವರೆಸಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ಮತ್ತು 35 ವಿಧಿಗಳನ್ನು ರದ್ದು ಪಡಿಸುವ ಮತ್ತು ರಾಜ್ಯವನ್ನು ಜಮ್ಮುಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು  ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಮಸೂದೆಯನ್ನು ಭಾರತದ ಸಂಸತ್ತು ಮೂರನೇ ಎರಡು ಬಹುಮತದಿಂದ ಅಂಗೀಕರಿಸಿದೆ.

ಭಾರತದ ಕ್ರಮವನ್ನು ಖಂಡತುಂಡವಾಗಿ ವಿರೋಧಿಸುತ್ತಿರುವ ಪಾಕಿಸ್ತಾನ ಭಾರತದ ರಾಯಭಾರಿಯನ್ನು ಉಚ್ಚಾಟಿಸಿ ರಾಯಭಾರ ಸಂಬಂಧ ಕಡಿದುಕೊಂಡದ್ದಲ್ಲದೆ,  ವ್ಯಾಪಾರ ಬಾಂಧವ್ಯವನ್ನೂ ಅಮಾನತುಗೊಳಿಸಿದೆ. ಸಾಲದ್ದಕ್ಕೆ ದಶಕಗಳಿಂದ ಉಭಯ ದೇಶಗಳ ಸ್ನೇಹ ಸಂಕೇತವಾಗಿ ಓಡುತ್ತಿದ್ದ ಸಂಜೌತಾ ಎಕ್ಸ್ ಪ್ರೆಸ್ ರೈಲುಗಾಡಿಯ ಸಂಚಾರವನ್ನೂ ರದ್ದು ಪಡಿಸಿದೆ.

ಇಷ್ಟೆಲ್ಲ ಮಾಡಿಕೊಂಡ ಬಳಿಕವೂ ಪಾಕಿಸ್ತಾನದ ಸಶಸ್ತ್ರ ಪಡೆಗಳ ಮಾಧ್ಯಮ ಘಟಕವಾಗಿರು ಇಂಟರ್ ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್  ಆಗಸ್ಟ್ 6ರಂದು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿಜಮ್ಮು ಮತ್ತು ಕಾಶ್ಮೀರವನ್ನು ಅತಿಕ್ರಮಿಸಿಕೊಂಡಿರುವ ಭಾರತ, ದಶಕಗಳ ಹಿಂದೆ  ತನ್ನ ಅತಿಕ್ರಮಣವನ್ನು ಕಾನೂನುಬದ್ಧಗೊಳಿಸಲು ವಿಧಿ 370 ಮತ್ತು 35 ಮೂಲಕ ನಡೆಸಿದ್ದ ಕಪಟ ಯತ್ನಗಳನ್ನು ಪಾಕಿಸ್ತಾನ ಎಂದೂ ಮಾನ್ಯ ಮಾಡಿರಲಿಲ್ಲ. ಈಗ ಭಾರತವೇ ಅದನ್ನು ಹಿಂತೆಗೆದುಕೊಂಡಿದೆಎಂದು ಹೇಳಿದೆ!

ರಾವಲ್ಪಿಂಡಿಯ ಸರ್ಕಾರಿ ಕೇಂದ್ರ ಕಚೇರಿಯಲ್ಲಿ (ಜಿಎಚ್ ಕ್ಯೂ) ನಡೆದ ಕೋರ್ ಕಮಾಂಡರ್ ಗಳ ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನದ ಭೂಸೇನಾ ದಂಡನಾಯಕ ಜನರಲ್ ಖಮರ್ ಜಾವೇದ್ ಬಜ್ವಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಪಾಕಿಸ್ತಾನ ಸೇನೆಯ ಹೇಳಿಕೆಯಂತೆ ವಿಧಿ 370, 35 ಯನ್ನು ಅದು ಮಾನ್ಯವೇ ಮಾಡಿಲ್ಲ ಎಂದಾದರೆ, ಭಾರತದ ಜೊತೆಗಿನ ರಾಜತಾಂತ್ರಿಕ ಬಾಂಧವ್ಯ ಕಡಿತ, ವಿಶ್ವ ಸಂಸ್ಥೆಗೆ ದೂರುಗಳ ಮೂಲಕ ಭಾರತ ಕೈಗೊಂಡಿರುವ ನಿರ್ಣಯದ ವಿರುದ್ಧ ಹುಯಿಲೆಬ್ಬಿಸುತ್ತಿರುವುದಾದರೂ ಏಕೆ ಎಂದು ಹೆಸರು ಹೇಳಲು ಇಚ್ಛಿಸದ ಭಾರತ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.

ಮಧ್ಯೆ ಕಾಶ್ಮೀರ ಕುರಿತ ಭಾರತದ ಕ್ರಮವನ್ನು ವಿರೋಧಿಸಿ ವಿಶ್ವಸಂಸ್ಥೆಗೆ ಪಾಕಿಸ್ತಾನ ನೀಡಿರುವ ದೂರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರ್ಸೆಸ್ ತಿರಸ್ಕರಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ಶಿಮ್ಲಾ ಒಪ್ಪಂದದ ಪ್ರಕಾರ ಕಾಶ್ಮೀರ ವಿಷಯವನ್ನು ದ್ವಿಪಕ್ಷೀಯವಾಗಿ ಇತ್ಯರ್ಥ ಪಡಿಸಿಕೊಳ್ಳಬೇಕು, ಪರಿಸ್ಥಿತಿ ಉಲ್ಬಣಿಸುವಂತಹ ಯಾವುದೇ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಅವರು ಹೇಳಿದ್ದಾರೆ.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ:

1 comment:

  1. Best solution is just ignore Pakistan ..this is our internal matter and Kashmir is an integral part of India and pak better keep away from us.

    ReplyDelete