Saturday, December 15, 2018

ಮಹಿಂದಾ ರಾಜಪಕ್ಸ ಕಡೆಗೂ ರಾಜೀನಾಮೆ


ಮಹಿಂದಾ ರಾಜಪಕ್ಸ ಕಡೆಗೂ ರಾಜೀನಾಮೆ

ಕೊಲಂಬೋ:  ಅಧ್ಯಕ್ಷ ಮೈತ್ರಿಪಾಲ  ಸಿರಿಸೇನಾ ಅವರಿಂದ ವಿವಾದಾತ್ಮಕ ಕ್ರಮವೊಂದರಲ್ಲಿ ಶ್ರೀಲಂಕಾದ ಪ್ರಧಾನಮಂತ್ರಿಯಾಗಿ ನೇಮಕಗೊಂಡಿದ್ದ ಮಹಿಂದರಾಜಪಕ್ಸ  ಅವರು ೨೦೧೮ ಡಿಸೆಂಬರ್ ೧೫ರ ಶನಿವಾರ  ಕಡೆಗೂ ರಾಜೀನಾಮೆ ನೀಡಿದ್ದಾರೆ.

ಸುಪ್ರೀಂಕೋರ್ಟಿನ ಎರಡು ಪ್ರಮುಖ ತೀರ್ಪುಗಳು  ಪ್ರಧಾನ ಮಂತ್ರಿ ಸ್ಥಾನದಲ್ಲಿ ಮುಂದುವರೆಯುವ  ಅವರ ಯತ್ನಗಳನ್ನು ವಿಫಲಗೊಳಿಸಿದ ಬಳಿಕ ರಾಜಪಕ್ಸೆ ಅವರು ಅನಿವಾರ್ಯವಾಗಿ ಹುದ್ದೆಯಿಂದ ಕೆಳಗಿಳಿದರು.

ರಾಜಪಕ್ಸ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಯುನೈಟೆಡ್ ಪೀಪಲ್ಸ್ ಫ್ರೀಡಂ ಅಲೈಯನ್ಸ್ (ಯುಪಿಎಫ್) ಸಂಸದ ಶೆಹನ್ ಸೆಮಾಶಿಂಗ ಅವರು ಸುದ್ದಿಗಾರರಿಗೆ ತಿಳಿಸಿದರು.

ಅಧ್ಯಕ್ಷ ಸಿರಿಸೇನಾ ಅವರು 2018 ಅಕ್ಟೋಬರ್ 26ರಂದು ರಾನಿಲ್ ವಿಕ್ರಮ ಸಿಂಘೆ ಅವರನ್ನು ವಿವಾದಾತ್ಮಕವಾಗಿ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು. ಸಿರಿಸೇನಾ ಅವರ ಕ್ರಮವು ದೇಶದಲ್ಲಿ ಅಭೂತಪೂರ್ವ ಸಾಂವಿಧಾನಿಕ ಬಿಕ್ಕಟ್ಟನ್ನು ಸೃಷ್ಟಿಸಿತ್ತು.

ಪ್ರಧಾನಿಯಾಗಿ ಮುಂದುವರೆಯುವುದನ್ನು ನಿಷೇಧಿಸಿ ತಾನು ನೀಡಿದ ಆದೇಶಕ್ಕೆ ಮುಂದಿನ ತಿಂಗಳು ಪ್ರಕರಣವನ್ನು ಪೂರ್ಣ ಪ್ರಮಾಣದಲ್ಲಿ ಆಲಿಸುವವರೆಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ಡಿಸೆಂಬರ್ 14 ಶುಕ್ರವಾರ ನಿರಾಕರಿಸಿತ್ತು.

ಅಧ್ಯಕ್ಷ ಸಿರಿಸೇನಾ ಅವರು ಸಂಸತ್ ವಿಸರ್ಜನೆ ಮಾಡಿದ ಕ್ರಮವನ್ನು ಅಕ್ರಮ ಎಂಬುದಾಗಿ ಸುಪ್ರೀಂಕೋರ್ಟ್ ಗುರುವಾರ ಸರ್ವಾನುಮತದ ತೀರ್ಪು ನೀಡಿತ್ತು.

ಹೊಸ ಸರ್ಕಾರವನ್ನು ನೇಮಕ ಮಾಡಲು ಅಧ್ಯಕ್ಷರಿಗೆ ಅನುಕೂಲ ಮಾಡಿಕೊಡಲು ತಾವು ರಾಜೀನಾಮೆ ನೀಡಲು ನಿರ್ಧರಿಸಿರುವುದಾಗಿ ರಾಜಪಕ್ಸೆ ಅವರು ಸಿರಿಸೇನಾ ಅವರ ಜೊತೆಗಿನ ಭೇಟಿ ವೇಳೆ ತಿಳಿಸಿರುವುದಾಗಿ ರಾಜಪಕ್ಸೆ ಅವರ ಪರ ಶಾಸನಕರ್ತ ಲಕ್ಷ್ಮಣ್ ಯಪ ಅಬೆವರ್ದನ  ಸುದ್ದಿಗಾರರಿಗೆ ತಿಳಿಸಿದರು.

ರಾನಿಲ್ ವಿಕ್ರಮ ಸಿಂಘೆ ಅವರು ಭಾನುವಾರ ಶ್ರೀಲಂಕಾದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ನಿರೀಕ್ಷೆ ಇದೆ.

ಶುಕ್ರವಾರ ರಾನಿಲ್ ವಿಕ್ರಮ ಸಿಂಘೆ ಅವರ ಜೊತೆಗೆ ದೂರವಾಣಿಯಲ್ಲಿ ಮಾತನಾಡಿರುವ ಅಧ್ಯಕ್ಷ ಸಿರಿಸೇನಾ ಅವರು ವಿಕ್ರಮಸಿಂಘೆ ಅವರನ್ನು ಪ್ರಧಾನಿಯಾಗಿ ಮರುನೇಮಕ ಮಾಡಲು ಒಪ್ಪಿದ್ದಾರೆ ಎಂದು ಹೇಳಲಾಗಿದೆ.

No comments:

Post a Comment