Thursday, December 6, 2018

ಇಂದಿನ ಇತಿಹಾಸ History Today ಡಿಸೆಂಬರ್ 06

ಇಂದಿನ ಇತಿಹಾಸ History Today ಡಿಸೆಂಬರ್  06
2018: ನವದೆಹಲಿ: ಕರ್ನಾಟಕದ ಬೆಳ್ಳಂದೂರು, ಅಗರ ಮತ್ತು ವರ್ತೂರು ಕೆರೆಗಳ ಸಂರಕ್ಷಣೆ, ಮಾಲಿನ್ಯ ನಿವಾರಣೆ ಮತ್ತು ಪುನರುಜ್ಜೀವನ ನಿಟ್ಟಿನಲ್ಲಿ ತನ್ನ ಆದೇಶ ಪಾಲನೆ ವೈಪಲ್ಯಕ್ಕಾಗಿ ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಒಟ್ಟು ೭೫ ಕೋಟಿ ರೂಪಾಯಿಗಳ ದಂಡ ವಿಧಿಸಿದ ರಾಷ್ಟ್ರೀಯ ಹಸಿರು ನ್ಯಾಯಪೀಠವು (ಎನ್ ಜಿಟಿ), ೫೦೦ ಕೋಟಿ ರೂಪಾಯಿಗಳನ್ನು ಕಾಮಗಾರಿ ಖಾತರಿ ಖಾತೆಗೆ ವರ್ಗಾಯಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿತು. ಕೆರೆಗಳ ಪುನರುಜ್ಜೀವನ ಕಾರ್ಯಯೋಜನೆಯನ್ನು ತಿಂಗಳ ಒಳಗಾಗಿ ರೂಪಿಸಲು ಮತ್ತು ಅದರ ಅನುಷ್ಠಾನದ ಉಸ್ತುವಾರಿ ನೋಡಿಕೊಳ್ಳಲು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ನೇತೃತ್ವದಲ್ಲಿ ಸಮಿತಿಯೊಂದನ್ನೂ ಹಸಿರು ನ್ಯಾಯಪೀಠವು ರಚಿಸಿತು. ಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಕಾರ್ಯದಲ್ಲಿ ವಿಫಲವಾದುದಕ್ಕಾಗಿ ಸರ್ಕಾರ ಮತ್ತು ಬಿಬಿಎಂಪಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ರಾಷ್ಟ್ರೀಯ ಹಸಿರು ಪೀಠದ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ಅವರು, ರಾಜ್ಯ ಸರ್ಕಾರಕ್ಕೆ ೫೦ ಕೋಟಿ ರೂಪಾಯಿಗಳನ್ನು ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ೨೫ ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಪಾವತಿ ಮಾಡುವಂತೆ ಸೂಚಿಸಿದರು. ಖಾತರಿ ಖಾತೆಗೆ ಪಾವತಿ ಮಾಡಲಾಗುವ ೫೦೦ ಕೋಟಿ ರೂಪಾಯಿಗಳನ್ನು ಕೆರೆಗಳ ಸ್ವಚ್ಚತೆಗಾಗಿ ಕಾರ್ಯಯೋಜನೆ ಅನುಷ್ಠಾನಕ್ಕೆ ಬಳಸಬೇಕು ಎಂದು ಸೂಚಿಸಿದ ಗೋಯೆಲ್ರಾಜ್ಯ ಸರ್ಕಾರಕ್ಕೆ ವಿಧಿಸಲಾದ ೫೦ ಕೋಟಿ ದಂಡದ ಹಣವನ್ನು ವಿವೇಚನೆ ರಹಿತವಾಗಿ ಹರಿದ ಸಂಸ್ಕರಿಸದ ಕೊಚ್ಚೆ ನೀರಿನಿಂದ ಕಲುಷಿತವಾದ ಕೆರೆಗಳ ಪುನರುಜ್ಜೀವನಕ್ಕಾಗಿ ಬಳಸಬೇಕು ಎಂದು ಸೂಚಿಸಿದರು. ಜಲ ಮಾಲಿನ್ಯದಿಂದ ಪರಿಸರಕ್ಕೆ ಆದ ಹಾನಿಗೆ ಪರಿಹಾರವಾಗಿ ಬಿಬಿಎಂಪಿ ೨೫ ಕೋಟಿ ರೂಪಾಯಿಗಳ ದಂಡವನ್ನು ತೆರಬೇಕು ಎಂದು ಗೋಯೆಲ್ ಆಜ್ಞಾಪಿಸಿದರುಕೆರೆಗಳ ಸಂರಕ್ಷಣೆ ಮತ್ತು ಪುನರುಜ್ಜೀವನ ಹಾಗೂ ರಾಜ್ಯದ ರಾಜಕಾಲುವೆಗಳ ಅತಿಕ್ರಮಣ ತೆರವು ಬಗ್ಗೆ  ತಾಳಲಾದ ಉದಾಸೀನತೆಗಾಗಿ ತೀವ್ರ ಅಸಂತೋಷ ವ್ಯಕ್ತ ಪಡಿಸಿದ ಗೋಯೆಲ್ ಅವರು, ಪೀಠದ ಆದೇಶ ಪಾಲನೆ ನಿಟ್ಟಿನಲ್ಲಿ ಕಾಲಮಿತಿಯ ಕಾರ್ಯಯೋಜನೆಯನ್ನು ತಿಂಗಳ ಒಳಗಾಗಿ ರೂಪಿಸಲು ಮತ್ತು ಅದರ ಅನುಷ್ಠಾನ ಕಾರ್ಯದ ಉಸ್ತುವಾರಿ ನೋಡಿಕೊಳ್ಳಲು ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಗೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದರು. ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಉಪನ್ಯಾಸಕ ಪ್ರೊಫೆಸರ್ ರಾಮಚಂದ್ರನ್ ಹಾಗೂ  ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿಗಳು ಹಾಗೂ ಇತರರು ಸಮಿತಿಯ ಸದಸ್ಯರಾಗಿರುತ್ತಾರೆ. ಹಸಿರು ನ್ಯಾಯಪೀಠದ ಹಿಂದಿನ ಆದೇಶಗಳನ್ನು ಜಾರಿಗೊಳಿಸುವಲ್ಲಿ ವಿಫಲರಾದ ಅಧಿಕಾರಿಗಳನ್ನು ಗುರುತಿಸುವಂತೆಯೂ ಪೀಠವು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು. ಕೆರೆಗಳಿಗೆ ಮಾಲಿನ್ಯಕಾರಕ ತ್ಯಾಜ್ಯ ಸೇರದಂತೆ ಖಾತರಿ ಪಡಿಸುವ ನಿಟ್ಟಿನಲ್ಲಿ ಪಂಜ್ವಾನಿ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು. ಜಲಾನಯನ ಪ್ರದೇಶಗಳಲ್ಲಿನ ಒತ್ತುವರಿಗಳನ್ನು ತೆರವುಗೊಳಿಸಬೇಕು ಎಂದು ಪೀಠ ಆಜ್ಞಾಪಿಸಿತು. ವಿಷಯಕ್ಕೆ ಸಂಬಂಧಿಸಿದಂತೆ ನೀತಿಗಳನ್ನು ರೂಪಿಸುವಂತೆಯೂ ಪೀಠ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿತು.

2018: ನವದೆಹಲಿ: ಬಹುಕೋಟಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರ್ ಹಗರಣದ ಮಧ್ಯವರ್ತಿ ಬ್ರಿಟಿಶ್ ಉದ್ಯಮಿ ಕ್ರಿಸ್ಟಿಯನ್ ಜೇಮ್ಸ್ ಮೈಕೆಲ್ ಗಡೀಪಾರಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ತನ್ನ ವಕೀಲರನ್ನು ನೆರವಿಗೆ ಕಳುಹಿಸುವ ಮೂಲಕಮೈಕೆಲ್ ಮಾಮಾ ರಕ್ಷಣೆಗೆ ಯತ್ನಿಸುತ್ತಿದೆ ಎಂದು ಬಿಜೆಪಿ ಆಪಾದಿಸಿತು.  ಇದೇ ವೇಳೆಗೆ ಕಾಂಗ್ರೆಸ್ ಮೈಕೆಲ್ ಪರ ಹಾಜರಾಗಿದ್ದ ವಕೀಲ ಭಾರತೀಯ ಯುವ ಕಾಂಗೆಸ್ ನಾಯಕ ಅಲಿಯೋ ಜೋಸೆಫ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತು.  ‘ಮೈಕೆಲ್ ಗಡೀಪಾರಿನೊಂದಿಗೆ ರಹಸ್ಯಗಳೆಲ್ಲ ಹೊರಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಸಭೆ ಒಂದರಲ್ಲಿ ಕಾಂಗ್ರೆಸ್ಸಿಗೆ ಎಚ್ಚರಿಕೆ ನೀಡಿದ ಮರುದಿನವೇ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರು ಮೈಕೆಲ್ ಅವರ ರಕ್ಷಣೆಗಾಗಿ ಬಂದಿರುವ ವಕೀಲರ ರಾಜಕೀಯ ಸಂಬಂಧವನ್ನು ಉಲ್ಲೇಖಿಸಿದರು. ಮೈಕೆಲ್ ಪರವಾಗಿ ಹಾಜರಾದ ವಕೀಲ ಅಲಿಯೋ ಜೋಸೆಫ್ ಅವರನ್ನು ಪಕ್ಷದಿಂದ ಉಚ್ಚಾಟಿಸುವುದರ ಜೊತೆಗೆ ಭಾರತೀಯ ಯುವ ಕಾಂಗ್ರೆಸ್ಸಿನ ರಾಷ್ಟ್ರೀಯ ಕಾನೂನು ವಿಭಾಗದ ಉಸ್ತುವಾರಿ ಹೊಣೆಗಾರಿಕೆಯಿಂದಲೂ ಕಾಂಗ್ರೆಸ್ ಮುಕ್ತಗೊಳಿಸಿದ್ದರೂ, ಸಂಬಿತ್ ಪಾತ್ರ ಅವರುಇದನ್ನು ಕೇವಲ ಸೋಗು ಎಂದು ಹೇಳಿ ತಳ್ಳಿಹಾಕಿದರು.  ‘ಕ್ರಿಸ್ಟಿಯನ್ ಮೈಕೆಲ್ ಗಡೀಪಾರಿನ ಬಳಿಕ ಕಾಂಗ್ರೆಸ್ ದಡಬಡ ಓಡಾಡುತ್ತಿದೆ. ಅವರು ತಮ್ಮ ತಂಡವನ್ನು ಮೈಕೆಲ್ ರಕ್ಷಣೆಗೆ ಕಳುಹಿಸಿಕೊಟ್ಟಿದ್ದಾರೆ. ಕಾಂಗ್ರೆಸ್ಸಿನ ಅಲಿಯೋ ಜೋಸೆಫ್ ಅವರು ಮೈಕೆಲ್ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದಾರೆ. ಬಳಿಕ ಅವರನ್ನು ಕಿತ್ತು ಹಾಕುವಸೋಗಿನ ವರ್ತನೆಯನ್ನು ಕಾಂಗ್ರೆಸ್ ಪ್ರದರ್ಶಿಸಿದೆ ಎಂದು ಪಾತ್ರ ಹೇಳಿದರುಕಾಂಗ್ರೆಸ್ಸಿನ ಕುಟುಂಬಕ್ಕೆ ನಿದ್ದೆ ಇಲ್ಲದ ರಾತ್ರಿಗಳು ಎದುರಾಗಿವೆ. ಅಲಿಯೋ ಕೆ ಜೋಸೆಫ್ ಅವರುಯಾರೋ ಒಬ್ಬರು ಮೈಕೆಲ್ ಪರ ವಕೀಲನಾಗುವಂತೆ ಸೂಚಿಸಿದ್ದುದಾಗಿ ಹೇಳಿದ್ದರು. ’ ಯಾರೋ ಅಂದರೆ ಯಾರು? ಅವರು ಕಾಂಗ್ರೆಸ್ಸಿನ ಇಬ್ಬರು ಮಾತ್ರ. ಉಳಿದವರೆಲ್ಲ ಏನೂ ಅಲ್ಲ ಎಂದು ಪಾತ್ರ ನುಡಿದರುಜೋಸೆಫ್ ಹೊರತಾಗಿ ಮೈಕೆಲ್ ವಕೀಲರಾಗಿ ಕೇರಳ ಕಾಂಗೆಸ್ ನಾಯಕ ಶ್ರೀರಾಮ್ ಪರಕ್ಕತ್ ಅವರ ಪುತ್ರ, ಕಾಂಗ್ರೆಸ್ ಯುವ ವಿಭಾಗವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎಸ್ ಎಸ್ ಯುಐ) ಸದಸ್ಯ ವಿಷ್ಣು ಶಂಕರ್ ಅವರೂ ಹಾಜರಾಗಿದ್ದಾರೆ. ಮೂವರೂ ಕಾಂಗ್ರೆಸ್ ಪಕ್ಷದ ಉನ್ನತ ವಕೀಲರಾದ ಸಲ್ಮಾನ್ ಖುರ್ಷಿದ್ ಮತ್ತು ಕಪಿಲ್ ಸಿಬಲ್ ಅವರಂತಹ ಕೈಕೆಳಗೆ ಕೆಲಸ ಮಾಡಿದ್ದವರು ಎಂದು ಪಾತ್ರ ಹೇಳಿದರು.  ‘ಇದು ಕಾಕತಾಳೀಯ ಅಲ್ಲ, ೧೦ ಜನಪಥದಿಂದ ಉದ್ದಕ್ಕೆ ಚಾಚಿದ ಕೈ ಎಂದು ನುಡಿದ ಅವರುಕಾಂಗ್ರೆಸ್ಸಿನ ಮೂವರು ವಕೀಲರು ಮೈಕೆಲ್ ನನ್ನು ಪೊಲೀಸ್ ವಶಕ್ಕೆ ಒಪ್ಪಿಸುವುದನ್ನು ವಿರೋಧಿಸಿದರು. ದಿನಕ್ಕೆ ಎರಡು ಬಾರಿ ಭೇಟಿ ಮಾಡುವ ಮೂಲಕ ಅವರು ಮೈಕಲ್ ಸಂಪರ್ಕವನ್ನು ಪಡೆಯುತ್ತಿದ್ದಾರೆ ಎಂದು ಪಾತ್ರ ನುಡಿದರುಇದೆಲ್ಲವೂ ಮೈಕೆಲ್ ರಕ್ಷಣೆಯನ್ನು ಖಾತರಿಪಡಿಸಿಕೊಳ್ಳಲು ಹೂಡಲಾಗಿರುವ ವ್ಯವಸ್ಥಿತ ಕ್ರಮ ಎಂದು ಬಿಜೆಪಿ ನಾಯಕ ಹೇಳಿದರು೫೭ರ ಹರೆಯದ ಮೈಕೆಲ್ ೩೬೦೦ ಕೋಟಿ ರೂಪಾಯಿಗಳ ವಿವಿಐಪಿ ಅಗಸ್ಟಾ ವೆಸ್ಟ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಮಧ್ಯರಾತ್ರಿಗೆ ಸ್ವಲ್ಪ ಮುನ್ನ ದುಬೈಯಿಂದ ಭಾರತಕ್ಕೆ ಗಡೀಪಾರಾಗಿ ಬಂದಿದ್ದು, ಲಂಚ ಪಾವತಿ ಆರೋಪದ ಹಿನ್ನೆಲೆಯಲ್ಲಿ ವಹಿವಾಟನ್ನು ಸರ್ಕಾರ ರದ್ದು ಪಡಿಸಿದೆ. ಇಟಲಿ ಮೂಲದ ಫಿನ್ ಮೆಕಾನಿಕಾದ ಉತ್ಪಾದಕರಿಗೆ (ಈಗ ಲಿಯೋನಾರ್ಡೊ ಸಮೂಹ) ಹೆಲಿಕಾಪ್ಟರ್ ವ್ಯವಹಾರ ಲಭಿಸುವಂತೆ ನೋಡಿಕೊಳ್ಳಲು ಲಂಚ ಪಾವತಿ ಮಾಡಲಾಗಿತ್ತು ಎನ್ನಲಾಗಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲೇ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು ಮತ್ತು ಅದರನ್ನು ರದ್ದು ಪಡಿಸಲಾಗಿತ್ತುಕಾಂಗ್ರೆಸ್ಸಿನಿಂದ ವಕೀಲನ ಉಚ್ಚಾಟನೆ: ಇದಕ್ಕೆ ಮುನ್ನ ಭಾರತೀಯ ಯುವ ಕಾಂಗ್ರೆಸ್ ನಾಯಕ ವಕೀಲ ಅಲಿಯೋ ಕೆ. ಜೋಸೆಫ್ ಅವರನ್ನು ಕ್ರಿಸ್ಟಿಯನ್ ಮೈಕೆಲ್ ಪರ ಹಾಜರಾದುದಕ್ಕಾಗಿ ಕಾಂಗ್ರೆಸ್ ಪಕ್ಷವು  ಉಚ್ಚಾಟಿಸಿತ್ತುಡಿಸೆಂಬರ್ ೫ರಂದು ಮೈಕಲ್ ನನ್ನು ನ್ಯಾಯಾಲಯವು ಐದು ದಿನಗಳ ಅವಧಿಗೆ ಸಿಬಿಐ ವಶಕ್ಕೆ ಒಪ್ಪಿಸಿತ್ತು ತನ್ನ ವಶಕ್ಕೆ ಒಪ್ಪಿಸುವಂತೆ ಸಿಬಿಐ ಮಾಡಿದ ಮನವಿಯನ್ನು ವಕೀಲ ಜೋಸೆಫ್ ಮತ್ತು ವಿಷ್ಣ ಶಂಕರನ್ ಅವರು ವಿರೋಧಿಸಿದ್ದರು. ತಮಗೆ ಇನ್ನೂ ಆರೋಪಿಗೆ ಸಂಬಂಧಿಸಿದ ದಾಖಲೆಗಳು ಸಿಬಿಐಯಿಂದ ಬರಬೇಕಾಗಿದೆ. ಆದ್ದರಿಂದ ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಬಹುದು ಎಂದು ಅವರು ವಾದಿಸಿದ್ದರು. ಬಿಜೆಪಿಯ ಮುಂಬೈ ಘಟಕದ ವಕ್ತಾರ ಸುರೇಶ್ ನಕುವಾ ಅವರು ಮೈಕೆಲ್ ವಕೀಲ ಯುವ ಕಾಂಗ್ರೆಸ್ ಕಾರ್ಯಕರ್ತ ಎಂದು ಪ್ರತಿಪಾದಿಸಿದ್ದರು. ತತ್ ಕ್ಷಣವೇ ಹೇಳಿಕೆಗೆ ತೀವ್ರ ಟೀಕೆಗಳು ವ್ಯಕ್ತವಾದವು. ತತ್ ಕ್ಷಣವೇ ಕಾಂಗ್ರೆಸ್ ಪಕ್ಷವು ಜೋಸೆಫ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತುಅಲಿಯೋ ಜೋಸೆಫ್ ಅವರು ತಮ್ಮ ವೈಯಕ್ತಿಕ ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಜರಾಗುವ ಮುನ್ನ ಅವರು ಯುವ ಕಾಂಗ್ರೆಸ್ ಜೊತೆಗೆ ಸಮಾಲೋಚಿಸಿಲ್ಲ. ಐವೈಸಿಯು ಇಂತಹ ಕೆಲಸಗಳನ್ನು ಅನುಮೋದಿಸುವುದಿಲ್ಲ. ಐವೈಸಿಯು ಅಲಿಯೋ ಜೋಸೆಫ್ ಅವರು ತನ್ನ ಕಾನೂನು ವಿಭಾಗದಿಂದ ಮತ್ತು ಪಕ್ಷದಿಂದ ತತ್ ಕ್ಷಣವೇ ಜಾರಿಗೆ ಬರುವಂತೆ ಉಚ್ಚಾಟಿಸಿದೆ ಎಂದು ಐವೈಸಿ ಹೇಳಿಕೆಯೊಂದರಲ್ಲಿ ತಿಳಿಸಿತು.

2018: ನವದೆಹಲಿ: ತಮ್ಮ ಪೂರ್ವಾಧಿಕಾರಿಯ ಮೇಲಿನ  ‘ಬಾಹ್ಯ ಒತ್ತಡಗಳ ಬಗೆಗಿನ ಆರೋಪಗಳ ತನಿಖೆ ಬಯಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ಬಗ್ಗೆ ಅಸಂತೋಷ ವ್ಯಕ್ತ ಪಡಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರುಸಂಸ್ಥೆಯ ವಿಶ್ವಾಸಾರ್ಹತೆಯು ಅದನ್ನು ನಿರ್ವಹಿಸುವವರಿಂದ ಅತ್ಯುತ್ತಮವಾಗಿ ಇರುತ್ತದೆ, ವೃತ್ತ ಪತ್ರಿಕೆಗಳ ವರದಿಗಳಿಂದಲ್ಲ್ಲ ಎಂದು ಹೇಳಿದರುಹೊಸದಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ ವಕೀಲರು ಸಿಜೆಐ ಅವರ ಮುಂದೆ ಹಾಜರಾಗಿ ವಿಷಯವನ್ನು ಶೀಘ್ರ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಕೋರಿದರುನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಕಳೆದವಾರ ತಮ್ಮ ನಿವೃತ್ತಿಯ ಬಳಿಕ ನೀಡಿದ ಹೇಳಿಕೆ ಬಗ್ಗೆ ತನಿಖೆಯ ಅಗತ್ಯವನ್ನು ಒತ್ತಿ ಹೇಳಿರುವ ಮಾಧ್ಯಮ ವರದಿಗಳನ್ನು ಅರ್ಜಿಯು ಉಲ್ಲೇಖಿಸಿದೆ ಎಂದು ವಕೀಲರು ಪೀಠಕ್ಕೆ ವಿವರಿಸಿದರು. ‘ಆದ್ದರಿಂದ ನೀವು ಇಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿ ನಾವು ಅದನ್ನು ತುರ್ತು ಆಧಾರದಲ್ಲಿ ಪಟ್ಟಿ ಮಾಡಬೇಕು ಎಂದು ಬಯಸುತ್ತೀರಿ. ಏನಿದು? ನೀವು ನಿಮ್ಮ ಕೆಲಸ ಮಾಡಬೇಕು ಮತ್ತು ನಾವು ನಮ್ಮ ಕೆಲಸ ಮಾಡಬೇಕು. ಅಷ್ಟೆ ಎಂದು ನ್ಯಾಯಮೂರ್ತಿ ಗೊಗೋಯಿ ಉತ್ತರಿಸಿದರುಆಗ, ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ರಕ್ಷಿಸುವ ಯತ್ನ ತಮ್ಮದು ಎಂದು ವಕೀಲರು ಹೇಳಿದರು. ’ಅನಗತ್ಯವಾಗಿ ಕಾಳಜಿ ತೋರುವುದು ನಿಮ್ಮ ಕೆಲಸವಲ್ಲ ಎಂದು ಮರು ಉತ್ತರ ನೀಡಿದ ಗೊಗೋಯಿ ಅವರುಸಂಸ್ಥೆಯ ವಿಶ್ವಾಸಾರ್ಹತೆಯನ್ನು ಸಂಸ್ಥೆಯನ್ನು ನೋಡಿಕೊಳ್ಳುವ ಜನರು ನಿರ್ವಹಿಸುತ್ತಾರೆ. ಸಂಸ್ಥೆಯ ಉನ್ನತ ಸ್ಥಾನದಲ್ಲಿ ಇರುವವರಿಂದ ಪರಿಣಾಮವಾಗುತ್ತದೆ ಹೊರತು ವೃತ್ತ ಪತ್ರಿಕಾ ವರದಿಗಳಿಂದ ಅಲ್ಲ ಎಂದು ಹೇಳಿದರುಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಬಗ್ಗೆ ತುರ್ತು ವಿಚಾರಣೆಗೆ ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿನಾವು ನಮ್ಮ ಕೆಲಸ ಮಾಡುತ್ತೇವೆ ಮತ್ತು ಪ್ರತಿಯೊಬ್ಬರೂ ಅವರವರ ಕೆಲಸ ಮಾಡಬೇಕು ಎಂದು ಪುನರುಚ್ಚರಿಸಿದರುನ್ಯಾಯಮೂರ್ತಿ ಜೋಸೆಫ್ ಅವರು ಕಳೆದವಾರ ನಿವೃತ್ತರಾಗಿದ್ದರು. ಹಿಂದಿನ ಸಿಜೆಐ ದೀಪಕ್ ಮಿಶ್ರ ಅವರು ಕೆಲವೊಂದುಬಾಹ್ಯ ಒತ್ತಡಗಳ ಅಡಿಯಲ್ಲಿ ಇದ್ದಂತೆ ಕಾಣುತ್ತಿತ್ತು ಮತ್ತು ಬಹುಶ ಅವರು ದೂರ ನಿಯಂತ್ರಿತರಾಗಿದ್ದಿರಬಹುದು ಎಂದು ಜೋಸೆಫ್ ಅವರು ಹೇಳಿರುವುದಾಗಿ ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ನ್ಯಾಯಮೂರ್ತಿ ಜೋಸೆಫ್ ಅವರು ವರ್ಷ ಜನವರಿ ತಿಂಗಳಲ್ಲಿ ಹಿಂದೆಂದೂ ನಡೆಯದಂತಹ ಪತ್ರಿಕಾಗೋಷ್ಠಿ ನಡೆಸಿದ್ದ ನಾಲ್ವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿದ್ದಾರೆ. ಆಗ ಸುಪ್ರೀಂಕೋರ್ಟಿನ ಅತ್ಯುನ್ನತ ಸ್ಥಾನದಲ್ಲಿದ್ದ ಸಿಜೆಐ ಮಿಶ್ರ ಅವರ ಆಡಳಿತದ ಬಗ್ಗೆ ವಿಶ್ವಾಸದ ಕೊರತೆಯನ್ನು  ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತ ಪಡಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ, ಪ್ರಸ್ತುತ ಮುಖ್ಯ ನ್ಯಾಯಮೂರ್ತಿಯಾಗಿರುವ ನ್ಯಾಯಮೂರ್ತಿ ಗೊಗೋಯಿ ಅವರೂ ಸೇರಿದಂತೆ ನಾಲ್ವರು ನ್ಯಾಯಮೂರ್ತಿಗಳೂರಾಷ್ಟ್ರದ ಋಣವನ್ನು ತೀರಿಸಲು ನಾವು ಬಯಸಿದ್ದೇವೆ ಎಂದು ಹೇಳಿದ್ದರು

2018: ನವದೆಹಲಿ: ತಮ್ಮ ಹೆಸರಿನ ಮುಂದೆ  ಜಾರಿ ನಿರ್ದೇಶನಾಲಯವುದೇಶಭ್ರಷ್ಟ ಹಣೆಪಟ್ಟಿ
ಅಂಟಿಸುವುದರ ವಿರುದ್ಧ ಉದ್ಯಮಿ ವಿಜಯ್ ಮಲ್ಯ ಅವರು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದರು. ಸೆಪ್ಟೆಂಬರ್ ತಿಂಗಳಲ್ಲಿ ಮಲ್ಯ ಅವರು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ) ನ್ಯಾಯಾಲಯಕ್ಕೆ, ತಾವು ಕಾಯ್ದೆಯ ಅಡಿಯಲ್ಲಿ  ’ದೇಶಭ್ರಷ್ಟ ಆರ್ಥಿಕ ಅಪರಾಧಿ ಅಲ್ಲ ಮತ್ತು ಹಣವರ್ಗಾವಣೆಯ ಸೂಚಿತ ಅಪರಾಧದಲ್ಲಿ ಶಾಮೀಲಾಗಿಲ್ಲ ಎಂದು ತಿಳಿಸಿದ್ದರುಕಳೆದ ಎರಡು ದಿನಗಳಲ್ಲಿ ಮಲ್ಯ ಅವರು ಇಂಗ್ಲೆಂಡಿನ ವೆಸ್ಟ್ ಮಿನ್ ಸ್ಟರ್ ಮ್ಯಾಜಿಸ್ಟ್ರೇಟ್ ಕೋಟ ಗಡೀಪಾರು ಯತ್ನ ಪ್ರಕರಣದಲ್ಲಿ ತೀರ್ಪು ನೀಡುವುದಕ್ಕೆ ಮುನ್ನ, ಕರ್ನಾಟಕ ಹೈಕೋರ್ಟಿನಲ್ಲಿ ತಾವು ಮುಂದಿಟ್ಟಿರುವ ಪೂರ್ತಿ ಅಸಲು ಪಾವತಿ ಮೂಲಕ ಇತ್ಯರ್ಥ ಮಾಡುವ ಕೊಡುಗೆಯನ್ನು ಅಂಗೀಕರಿಸುವಂತೆ ಭಾರತೀಯ ಅಧಿಕಾರಿಗಳಿಗೆ ಪುನರಪಿ ಮನವಿಗಳನ್ನು ಮಾಡಿದ್ದರು.

2018: ಗಾಂಧಿನಗರ: ಇದು ವೈದ್ಯ ಲೋಕದ ಮತ್ತೊಂದು ವಿಸ್ಮಯ. ಗುಜರಾತ್‌ನ ಗಾಂಧಿನಗರದ ಸ್ವಾಮಿನಾರಾಯಣ ದೇವಸ್ಥಾನ ಇರುವ ಅಕ್ಷರಧಾಮ ದೇಗುಲ ಆವರಣದಿಂದ ಹಿರಿಯ ಹೃದ್ರೋಗ ತಜ್ಞರೊಬ್ಬರು ೩೨ ಕಿ.ಮೀ. ದೂರದ ಆಪರೇಷನ್ ಥಿಯೇಟರಿನಲ್ಲಿದ್ದ ಮಹಿಳೆಯೊಬ್ಬರಿಗೆ ಯಶಸ್ವಿಯಾಗಿ ಚಿಕಿತ್ಸೆ ನಡೆಸಿದ ಅಚ್ಚರಿ ಘಟನೆ. ಇದು ವಿಶ್ವದ ಪ್ರಥಮ ಇನ್-ಹ್ಯೂಮನ್ ಟೆಲಿರೋಬೋಟಿಕ್ ಕರೋನರಿ ಇಂಟರ್‍ವೆನ್ಷನ್ ಚಿಕಿತ್ಸೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.  ಡಾ.ತೇಜಸ್ ಪಟೇಲ್ ಈ ಯಶಸ್ವಿ ಪ್ರಯೋಗ ನಡೆಸಿದ ವಿಶ್ವದ ಮೊದಲ ವೈದ್ಯ ಎಂಬ ಕೀರ್ತಿಗಳಿಸಿದರು. ಮಧ್ಯ ವಯಸ್ಸಿನ ಮಹಿಳೆಯೊಬ್ಬರಿಗೆ ಹೃದಯಘಾತವಾಗಿತ್ತು.  ಆಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಹೃದಯ ರಕ್ತನಾಳಗಳಲ್ಲಿ ಕೊಬ್ಬು ಹೆಪ್ಪುಗಟ್ಟಿರುವುದು ಪತ್ತೆಯಾಗಿತ್ತು. ತಮ್ಮ ಅಪೆಕ್ಸ್ ಆಸ್ಪತ್ರೆಯಲ್ಲಿ ಮಹಿಳೆಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ ಡಾ.ಪಟೇಲ್, ಅಲ್ಲಿಂದ ೩೨ ಕಿ.ಮೀ. ದೂರದಲ್ಲಿರುವ ಅಕ್ಷರಧಾಮ ದೇವಸ್ಥಾನದ ಆವರಣದಲ್ಲಿನ ವಿಶೇಷ ಕೊಠಡಿಯೊಂದರಲ್ಲಿ ದೂರ ನಿಯಂತ್ರಿತ ರಿಮೋಟ್ ಚಿಕಿತ್ಸೆಗೆ ವಿಶೇಷ ವ್ಯವಸ್ಥೆ ಮಾಡಿದರು.  ಇದಕ್ಕೆ ಟೆಲಿಮೆಡಿಸಿನ್ ಮತ್ತು ರೋಬೋ ತಂತ್ರಜ್ಞಾನವನ್ನು ಬಳಸಲಾಗಿತ್ತು. ಜತೆಗೆ ಇಂಟರ್‌ನೆಟ್ ನೆರವಿನ ಅತ್ಯಾಧುನಿಕ ವಿಧಾನವನ್ನೂ ಸಹ ಅಳವಡಿಸಲಾಗಿತ್ತು. ನಂತರ ಬಹು ದೂರದಿಂದಲೇ ವಿಶೇಷ ಸಾಧನಗಳ ಮೂಲಕ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸುವಲ್ಲಿ ಯಶಸ್ವಿಯಾದರು. ಸುರಕ್ಷತಾ ದೃಷ್ಟಿಯಿಂದ ಆಪರೇಷನ್ ಥಿಯೇಟರಿನಲ್ಲಿ ವಿಶೇಷ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ತಂಡವೊಂದನ್ನು ನಿಯೋಜಿಸಲಾಗಿತ್ತು.



2017: ಲಂಡನ್: ಸೆಲ್ಫಿ ಕ್ಲಿಕ್ಕಿಸಿಕೊಂಡು ಜಗತ್ತಿನಾದ್ಯಂತ ಫೇಮಸ್ಆದ ಇಂಡೋನೇಷ್ಯಾ ಮಂಗ "ನರುಟೊ' ಬಾರಿಯ "ವರ್ಷದ ವ್ಯಕ್ತಿ'! ಬಿರುದನ್ನು ಮಂಗಕ್ಕೆ ಪ್ರಾಣಿಗಳ ಹಕ್ಕು ಸಂಘಟನೆ "ಪೇಟ' ದಯಪಾಲಿಸಿತು. ಈ ಕೋತಿಯನ್ನು ಕೇವಲ ಪ್ರಾಣಿ ಎಂದು ಪರಿಗಣಿಸಕೂಡದು. ಅದು ಮಾನವನಿಗಿಂತ ಕಡಿಮೆ ಏನಲ್ಲ ಎಂದು ಪೇಟ ಕೋರ್ಟಿನಲ್ಲಿ ವಾದಿಸಿತ್ತು. ನರುಟೊ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು 2011ರಲ್ಲಿ. ಬ್ರಿಟಿಷ್ಛಾಯಾಗ್ರಾಹಕ ಡೇವಿಡ್ಸ್ಲೇಟರ್ಸುಲುವೇಸಿ ದ್ವೀಪದಲ್ಲಿ ಕ್ಯಾಮೆರಾ ಸಿದ್ಧಪಡಿಸಿ ಇರಿಸಿದ್ದಾಗ ನರುಟೋ ಅದನ್ನು ಹಿಡಿದು ಫೋಟೊ ಬಟನ್ಒತ್ತಿತ್ತು. ಬಳಿಕ ಪೇಟ ಸಂಘಟನೆ ಫೋಟೊದ ಹಕ್ಕನ್ನು ನರುಟೋಗೆ ನೀಡಬೇಕೆಂದು ಒತ್ತಾಯಿಸಿತ್ತು.

2017: ವಾಷಿಂಗ್ಟನ್‌: ಯಹೂದಿಗಳ ಪವಿತ್ರಭೂಮಿ ಎನಿಸಿಕೊಂಡಿರುವ ಜೆರುಸಲೇಮ್ ನ್ನು  ಇಸ್ರೇಲ್ರಾಜಧಾನಿ ಎಂದು ಅಮೆರಿಕ ಘೋಷಿಸಲಿದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿತು.  ಕೆಲ ಮಧ್ಯಪ್ರಾಚ್ಯ ದೇಶಗಳ ಅಪಸ್ವರದ ನಡುವೆಯೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ಟ್ರಂಪ್ಬುಧವಾರ (06 ಡಿಸೆಂಬರ್) ರಾತ್ರಿ (ಸ್ಥಳೀಯ ಕಾಲಮಾನ) ಜೆರುಸಲೇಂಗೆ ಇಸ್ರೇಲ್ ರಾಜಧಾನಿ ಮಾನ್ಯತೆ ನೀಡುವ ಪ್ರಮುಖ ಘೋಷಣೆ ಹೊರಡಿಸಲಿದ್ದಾರೆ ಎನ್ನಲಾಯಿತು. ಈಗಾಗಲೇ ಇಸ್ರೇಲ್ ಹಾಲಿ ರಾಜಧಾನಿ ಟೆಲ್ಅವೀವ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಜೆರುಸಲೇಮ್ ಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ಟ್ರಂಪ್ಸೂಚನೆ ಕೊಟ್ಟಿದ್ದಾರೆ ಎನ್ನಲಾಯಿತು. ಈ ಮಧ್ಯೆ ಇರಾನ್ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ''ಇಸ್ಲಾಂ ಧರ್ಮವನ್ನು ಮೂಲೆಗುಂಪಾಗಿಸುವ ಸಂಚು ಇದಾಗಿದ್ದು, ಮುಸ್ಲಿಂ ರಾಷ್ಟ್ರಗಳನ್ನು ಇದನ್ನು ಪ್ರತಿಭಟಿಸಬೇಕು,'' ಎಂದು ಇರಾನ್ಅಧ್ಯಕ್ಷ ಹಸನ್ರೊಹಾನಿ ಕರೆ ಕೊಟ್ಟರು. ಇಸ್ರೇಲ್‌-ಪ್ಯಾಲೆಸ್ತೀನ್ನಡುವಿನ ಗಡಿ ಬಿಕ್ಕಟ್ಟು ನಿರ್ಮೂಲನೆಗೆ ಇದು ಹೊಸ ದಾರಿ ಮಾಡಿಕೊಡಲಿದೆ ಎಂದು ಅಮೆರಿಕ ಹೇಳಿತು.ಆದರೆ, ಸೌದಿ ಅರೇಬಿಯಾ ಸೇರಿದಂತೆ ಕೆಲ ಮುಸ್ಲಿಂ ರಾಷ್ಟ್ರಗಳು ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ಗಲಭೆ ಭುಗಿಲೇಳುವ ಆತಂಕ ವ್ಯಕ್ತಪಡಿಸಿ, ನಿರ್ಧಾರದಿಂದ ಹಿಂದೆ ಸರಿಯುವಂತೆ ಒತ್ತಡ ಹೇರಿದವು. ಮುಸ್ಲಿಂ ರಾಷ್ಟ್ರಗಳ ಆತಂಕ ತಗ್ಗಿಸುವ ನಿಟ್ಟಿನಲ್ಲಿ ಟ್ರಂಪ್ ಹಿಂದೆಯೇ ಇಸ್ರೇಲ್ಪ್ರಧಾನಿ ಬೆಂಜಮಿನ್ನೆತನ್ಯಾಹು, ಪ್ಯಾಲೆಸ್ತೀನ್ಅಧ್ಯಕ್ಷ ಮೊಹಮೂದ್ಅಬ್ಬಾಸ್‌, ಜೋರ್ಡಾನ್ದೊರೆ 2ನೇ ಅಬ್ದುಲ್ಲಾ, ಈಜಿಪ್ತ್ಅಧ್ಯಕ್ಷ ಅಬ್ದೇಲ್ಪುತಃ ಅಲ್ಸಿಸಿ, ಸೌದಿ ಅರೇಬಿಯಾದ ದೊರೆ ಸಲ್ಮಾನ್ಬಿನ್ಅಬ್ದುಲ್ಅಜೀದ್ಜತೆ ಚರ್ಚೆ ನಡೆಸಿದ್ದರು.


2017: ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣದಲ್ಲಿ ಸುನ್ನಿ ವಕ್ಫ್ ಬೋರ್ಡ್ಪರ ಡಿಸೆಂಬರ್ 5ರಂದು  ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ಸಿಬಲ್ಅವರ ಹೇಳಿಕೆ ಕಾಂಗ್ರೆಸ್ಗೆ ತಿರುಗುಬಾಣವಾಗಿ ಪರಿಣಮಿಸಿತು. ಸೂಕ್ಷ್ಮಾತಿ ಸೂಕ್ಷ ಪ್ರಕರಣ ಇದಾಗಿರುವ ಕಾರಣ ವಿಚಾರಣೆಯು 2019 ಲೋಕಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದರಿಂದ ಅದನ್ನು 2019 ಜುಲೈ ವರೆಗೆ ಮುಂದೂಡಬೇಕು ಎಂದು ಕಪಿಲ್ಸಿಬಲ್ವಾದ ಮಂಡಿಸಿದ್ದರು. ಆದರೆ ಈದಿನ ಸಿಬಲ್ವಾದದ ವಿರುದ್ಧ ಸುನ್ನಿ ವಕ್ಫ್ ಬೋರ್ಡ್ತಿರುಗಿಬಿದ್ದ ಬೆನ್ನಲ್ಲೇ ಇದು ಹೊಸ ತಿರುವು ಪಡೆದುಕೊಂಡಿತು. ಈ ಬೆಳವಣಿಗೆ ಅಯೋಧ್ಯೆ ಪ್ರಕರಣದಲ್ಲಿ ಕಾಂಗ್ರೆಸ್ವಿರುದ್ಧ ಪ್ರಹಾರಕ್ಕೆ ಬಿಜೆಪಿಗೆ ಹೊಸ ಅಸ್ತ್ರ ಒದಗಿಸಿದಂತಾಯಿತು. ಸಿಬಲ್ಅವರು ಕೋರ್ಟ್ನಲ್ಲಿ ಕಾಂಗ್ರೆಸ್ಏಜೆಂಟ್ನಂತೆ ವರ್ತಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿತು. ''ನಾವು ಪ್ರಕರಣದ ವಿಚಾರಣೆ ಮುಂದೂಡುವಂತೆ ವಾದ ಮಂಡಿಸಲು ನಮ್ಮ ವಕೀಲರಿಗೆ ಕೇಳಿಕೊಂಡಿರಲಿಲ್ಲ. ಅವರು ತಮ್ಮ ಪಕ್ಷದ ಲಾಭ-ನಷ್ಟದ ಲೆಕ್ಕಾಚಾರ ಗಮನದಲ್ಲಿರಿಸಿಕೊಂಡು ವೈಯಕ್ತಿಕ ಅಭಿಪ್ರಾಯ ಮಂಡಿಸಿದ್ದು, ಇದಕ್ಕೆ ನಮ್ಮ ಅಸಾಮಾಧಾನವಿದೆ ಎಂದು ವಕ್ಫ್ ಬೋರ್ಡ್ಹೇಳಿತು. ಸುನ್ನಿ ವಕ್ಫ್ ಬೋರ್ಡ್ಹೇಳಿದ್ದೇನು?: ಕಪಿಲ್ಸಿಬಲ್ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬೋರ್ಡ್ ಹಾಜಿ ಮೆಹಬೂಬ್ಅವರು, ''ನಮ್ಮ ವಕೀಲರು ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿದ್ದು, ಅವರು ಕೋರ್ಟ್ನಲ್ಲಿ ಮಂಡಿಸಿರುವ ವಾದ ಸರಿಯಿಲ್ಲ. ಆದಷ್ಟು ಶೀಘ್ರ ಪ್ರಕರಣ ಇತ್ಯರ್ಥವಾಗಬೇಕೆಂದು ನಾವು ಬಯಸುತ್ತೇವೆಯೇ ವಿನಃ ಮುಂದೂಡಿಕೆ ಇಷ್ಟಪಡುವುದಿಲ್ಲ. ನಮ್ಮ ನಿಲುವಿಗೂ, ಅವರ ಹೇಳಿಕೆಗೂ ವ್ಯತ್ಯಾಸವಿದೆ. ಅವರ ವೈಯಕ್ತಿಕ ಅಭಿಪ್ರಾಯವನ್ನು ನಾವು ಒಪ್ಪುವುದಿಲ್ಲ,'' ಎಂದು ಹೇಳಿದರು. ವೈಯಕ್ತಿಕ ಅಭಿಪ್ರಾಯ: ಬೆಳವಣಿಗೆಯ ಬೆನ್ನಿಗೇ ಕಾಂಗ್ರೆಸ್‌, ಸಿಬಲ್ಅವರ ನಿಲುವಿನಿಂದ ಅಂತರ ಕಾಯ್ದುಕೊಂಡಿತು. ''ಸಿಬಲ್‌, ಕೋರ್ಟ್ನಲ್ಲಿ ಹೇಳಿರುವ ವಿಚಾರಕ್ಕೂ ಪಕ್ಷದ ನಿಲುವಿಗೂ ಸಂಬಂಧವಿಲ್ಲ. ನ್ಯಾಯಾಲಯದ ಸಲಹೆ ಮೇರೆಗೆ ಸರಕಾರ ಹಾಗೂ ರಾಜಕೀಯ ಪಕ್ಷಗಳು ಚರ್ಚೆ ನಡೆಸಿ ಅಯೋಧ್ಯೆ ವಿವಾದ ಪರಿಹಾರಕ್ಕೆ ಮುಂದಾಗಬೇಕು ಎಂದೇ ನಮ್ಮ ಪಕ್ಷ ಹೇಳಿಕೊಂಡು ಬರುತ್ತಿದೆ,'' ಎಂದು ಕಾಂಗ್ರೆಸ್ವಕ್ತಾರ ರಣದೀಪ್ಸುರ್ಜೆವಾಲ ತಿಳಿಸಿದರು. ಲೋಕಸಭೆ ಚುನಾವಣೆ ಅಯೋಧ್ಯೆ ಲಿಂಕ್ಏಕೆ: ಮೋದಿ: ಧನ್ಧುಕಾ (ಗುಜರಾತ್‌): ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಜಾಗದ ವಿವಾದ ಬಗೆಹರಿಯುವುದು ಹಸ್ತ ಪಕ್ಷಕ್ಕೆ ಬೇಕಿಲ್ಲ. ರಾಜಕೀಯ ಲಾಭ-ನಷ್ಟದ ಉದ್ದೇಶದಿಂದಲೇ ಇಂತಹ ಹಲವು ಜಟಿಲ ಸಮಸ್ಯೆಗಳನ್ನು ದಶಕಗಳ ಕಾಲ ಜೀವಂತವಾಗಿರಿಸಿಕೊಂಡು ಬರುವುದೇ ಅದರ ಜಾಯಮಾನ. ಈಗ ರಾಮ ಮಂದಿರ ವಿವಾದವನ್ನೂ ಗುಜರಾತ್ಮತ್ತು 2019 ಲೋಕಸಭೆ ಚುನಾವಣೆಗೆ ಲಿಂಕ್ಮಾಡುತ್ತಿದೆ... ಹೀಗೆ ಕಾಂಗ್ರೆಸ್ವಿರುದ್ಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಗುಜರಾತ್ ಧನ್ಧುಕಾದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಭಾಷಣದುದ್ದಕ್ಕೂ ಕಾಂಗ್ರೆಸ್ಪಕ್ಷದ ನಿಲುವನ್ನು ತರಾಟೆಗೆ ತೆಗೆದುಕೊಂಡರು. ಸುಪ್ರೀಂಕೋರ್ಟ್ನಲ್ಲಿ ಹಿರಿಯ ವಕೀಲ ಕಪಿಲ್ಸಿಬಲ್‌, ಇಂತಹ ಸೂಕ್ಷ್ಮ ಪ್ರಕರಣದ ವಿಚಾರಣೆಯನ್ನು 2019 ಲೋಕಸಭೆ ಚುನಾವಣೆವರೆಗೂ ಮುಂದೂಡಬೇಕು ಎಂದು ವಾದಿಸಿದ್ದು ಎಷ್ಟು ಸರಿ? ಎಲೆಕ್ಷನ್ಗೂ ರಾಮ ಮಂದಿರಕ್ಕೂ ಸಂಪರ್ಕ ಕಲ್ಪಿಸುವ ಅಗತ್ಯವಾದರೂ ಏನಿದೆ? ವಕ್ಫ್ ಬೋರ್ಡ್ಚುನಾವಣೆ ಎದುರಿಸುತ್ತದೆಯೇ? ಎಂದು ಪ್ರಶ್ನಿಸಿದರು. ಕಾಂಗ್ರೆಸ್ಪಕ್ಷವು ಮತ ಬ್ಯಾಂಕ್ಗಾಗಿ ಇಂತಹ ಹಲವು ಜಟಿಲ ವಿಷಯಗಳನ್ನು ಬಗೆಹರಿಸದೇ ಜೀವಂತವಾಗಿರಿಸಿಕೊಂಡು ಬಂದಿದೆ ಎಂದು ಕಿಡಿಕಾರಿದರು. ಇನ್ನು ತ್ರಿವಳಿ ತಲಾಕ್ವಿಚಾರದಲ್ಲೂ ಅದು ಹೀಗೆಯೇ ನಡೆದುಕೊಂಡಿತು ಎಂದು ದೂರಿದರು.

2017: ಮೈಸೂರು: ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ಪತ್ನಿ ತ್ರಿಷಿಕಾ ಕುಮಾರಿ ಅವರು ಬೆಂಗಳೂರಿನ ಆಸ್ಪತ್ರೆಯಲ್ಲಿ ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದರು. ರಾಜವಂಶದಲ್ಲಿ ಸಂತಾನ ಭಾಗ್ಯ ಪ್ರಾಪ್ತಿಯಾಗಿರುವುದು ಮೈಸೂರು ಅರಮನೆಯಲ್ಲಿ ಖುಷಿಗೆ ಕಾರಣವಾಯಿತು. ಯದುವೀರ ಅವರು ಪ್ರಮೋದಾದೇವಿ ಒಡೆಯರ್ದತ್ತುಪುತ್ರ.


2017: ನವದೆಹಲಿ: ಯುನೆಸ್ಕೊದ ಉತ್ತಮ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ತಾಜ್ಮಹಲ್ ಎರಡನೇ ಸ್ಥಾನದಲ್ಲಿದೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿತು. ಕಾಂಬೋಡಿಯಾದ ದೇವಾಲಯ ಸಂಕೀರ್ಣ ಅಂಕೂರ್ವಾಟ್ಮೊದಲ ಸ್ಥಾನ ಗಿಟ್ಟಿಸಿತು. ಯುನೆಸ್ಕೊದ ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳ ಪಟ್ಟಿಯನ್ನು ಆಧರಿಸಿ ಸಮೀಕ್ಷೆ ನಡೆಸಲಾಗಿತ್ತು. ಪ್ರಯಾಣ ಸೌಲಭ್ಯ ಒದಗಿಸುವ ಅಂತರ್ಜಾಲ ತಾಣಟ್ರಿಪ್ಅಡ್ವೈಸರ್ಸಮೀಕ್ಷೆ ನಡೆಸಿದ್ದು, ಉತ್ತಮ ಪಾರಂಪರಿಕ ತಾಣಗಳ ಪಟ್ಟಿಯನ್ನು ಅದು ಸಿದ್ಧಪಡಿಸಿತ್ತು. ವಿಶ್ವದಾದ್ಯಂತ ಪ್ರವಾಸಿಗರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ‘ಅದ್ಭುತ ತಾಣ ತಾಜ್ಮಹಲ್ಗೆ ಭೇಟಿ ನೀಡಿದರೆ ನೂರಾರು ಅವಿಸ್ಮರಣೀಯ ಅನುಭವಗಳು ನಿಮ್ಮದಾಗುತ್ತವೆ. ಖಾಸಗಿ ಪ್ರವಾಸಿ ಮಾರ್ಗದರ್ಶಕರು ಇಲ್ಲಿ ಸಿಗುತ್ತಾರೆ. ಸೂರ್ಯೋದಯ, ಸೂರ್ಯಾಸ್ತ ತಾಣಗಳಲ್ಲಿ ಕಾಲ ಕಳೆಯಬಹುದು. ಸ್ಥಳೀಯ ಆಹಾರ ಸವಿಯಲು ಬಯಸುವವರಿಗೆ ಅಂಥ ಅವಕಾಶ ಮಾಡಿಕೊಡುವ ಹಲವು ಮನೆಗಳೂ ಆಗ್ರಾದಲ್ಲಿ ಇವೆಎಂದು ಟ್ರಿಪ್ಅಡ್ವೈಸರ್ ಹೇಳಿತು. ತಾಜ್ಮಹಲ್ಗೆ ವಾರ್ಷಿಕ 80 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡುತ್ತಾರೆ. ಇತರ ಉತ್ತಮ ತಾಣಗಳು: ಚೀನಾ ಮಹಾಗೋಡೆ, ಮಾಚು ಪಿಚು ಕೋಟೆ (ದಕ್ಷಿಣ ಆಫ್ರಿಕಾ), ಇಗುವಾಜು ರಾಷ್ಟ್ರೀಯ ಉದ್ಯಾನ (ಬ್ರೆಜಿಲ್), ಪುರಾತನ ಗುಹೆಗಳಿರುವ ಸಸ್ಸಿ ಡಿ ಮಟೆರಾ (ಇಟಲಿ), ಅಶ್ವಿಟ್ಸ್ ಬಿರ್ಕೆನೌ ಸ್ಮಾರಕ ವಸ್ತುಸಂಗ್ರಹಾಲಯ, ಐತಿಹಾಸಿಕ ಕ್ರಕೋವ್ ನಗರ (ಪೋಲಂಡ್), ಇಸ್ರೇಲ್ ಜೆರುಸಲೇಮ್ ಓಲ್ಡ್ಸಿಟಿ ಪ್ರದೇಶ ಮತ್ತು ಟರ್ಕಿಯ ಇಸ್ತಾಂಬುಲ್ ಐತಿಹಾಸಿಕ ಸ್ಥಳಗಳು.


2016: ಚೆನ್ನೈ: ಕರ್ನಾಟಕದ ಮಂಡ್ಯದ ಮೇಲುಕೋಟೆಯಲ್ಲಿ ಜನಿಸಿ, ಪಂಚಭಾಷಾ ನಟಿಯಾಗಿ
ದಯಪಾಲಿಸಿದ್ದುಚಿತ್ರರಂಗದಲ್ಲಿ ಮಿನುಗಿ, ರಾಜಕಾರಣಿಯಾಗಿ ತಮಿಳುನಾಡಿ ಮಿಂಚಿ, ತಮಿಳುನಾಡಿನ ಜನರ ಕಣ್ಮಣಿಯಾಗಿ ಇತಿಹಾಸ ಸೃಷ್ಟಿಸಿದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ (68) ಅವರ ಅಂತ್ಯ ಸಂಸ್ಕಾರ ಚೆನ್ನೈಯ ಮರೀನಾ ಬೀಚ್ನಲ್ಲಿರುವ ದಿವಂಗತ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ಅವರ ಸ್ಮಾರಕದ ಪಕ್ಕದಲ್ಲಿಈದಿನ  ಸಂಜೆ ನೆರವೇರಿತು. ಅಯ್ಯಂಗಾರ್ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಯಿತು. ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಅವರು ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸಿದರು. ಇದರೊಂದಿಗೆ ತಮಿಳರಅಮ್ಮಎಂದೇ ಮನೆಮನಗಳಲ್ಲಿ ಸ್ಥಾನಗಳಿಸಿದ್ದ ಜನನಾಯಕಿ ಮಣ್ಣಲ್ಲಿ ಮಣ್ಣಾಗುವ ಮೂಲಕ ತೆರೆಮರೆಗೆ ಸರಿದು, ಭೂಮಿ ತಾಯಿಯ ಒಡಲಿನಲ್ಲಿ ಲೀನರಾಗಿ ಅಮರರಾದರು. ಜಯಲಲಿತಾ ಅವರ ಪಾರ್ಥಿವ ಶರೀರವನ್ನು ಗಂಧದ ಪೆಟ್ಟಿಗೆಯಲ್ಲಿ ಇಟ್ಟು ದಫನ ಮಾಡಲಾಯಿತು. ಸೆಪ್ಟೆಂಬರ್ 22ರಿಂದ ಅಸ್ವಸ್ಥತೆಯ ಕಾರಣ ಚೆನ್ನೈಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಯಲಲಿತಾ ಅವರ ದೇಹಸ್ಥಿತಿ ಭಾನುವಾರ ಹೃದಯಾಘಾತದ ಪರಿಣಾಮವಾಗಿ ವಿಷಮಿಸಿ, ಸೋಮವಾರ ರಾತ್ರಿ 11.30 ವೇಳೆಗೆ ಅವರು ಕೊನೆಯುಸಿರು ಎಳೆದಿದ್ದರು.. ತಮಿಳುನಾಡು ಸೇರಿದಂತೆ ಇಡೀ ದೇಶ ಅವರಿಗಾಗಿ ಕಂಬನಿಗರೆಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ, ಮನ ಮೋಹನ್ ಸಿಂಗ್, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡಿನ ಎಐಎಡಿಎಂಕೆ ನಾಯಕ ಹಾಲಿ ಮುಖ್ಯಮಂತ್ರಿ ಪನ್ನೀರ ಸೆಲ್ವಂ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಸಚಿವ ವೆಂಕಯ್ಯ ನಾಯ್ಡು, ಖ್ಯಾತ ಚಿತ್ರನಟ ರಜನೀಕಾಂತ್ ಸೇರಿದಂತೆ ಚಿತ್ರರಂಗದ ಗಣ್ಯರು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್ ಸೇರಿದಂತೆ ಭಾರಿ ಸಂಖ್ಯೆಯ ವಿವಿಧ ರಂಗಗಳ ಗಣ್ಯರೂ ಖುದ್ದಾಗಿ ಚೆನ್ನೈಗೆ ಆಗಮಿಸಿ ರಾಜಾಜಿ ಹಾಲ್ನಲ್ಲಿ ಜಯಲಲಿತಾ ಅವರ ಅಂತಿಮ ನಮನ ಸಲ್ಲಿಸಿದರು. ಹಲವಾರು ಗಣ್ಯರು ಅಂತ್ಯ ಯಾತ್ರೆ, ಅಂತಿಮ ಸಂಸ್ಕಾರದಲ್ಲೂ ಪಾಲ್ಗೊಂಡರು. ಇಡೀ ತಮಿಳುನಾಡು ದೈನಂದಿನ ಚಟುವಟಕೆಗಳೆಲ್ಲವನ್ನೂ ಸ್ತಬ್ಧಗೊಳಿಸಿ ನೆಚ್ಚಿನ ಅಮ್ಮನಿಗೆ ಗೌರವ ಸಲ್ಲಿಸಿತು. ಈದಿನ ಬೆಳಗ್ಗಿನಿಂದಲೇ ಲಕ್ಷಾಂತರ ಮಂದಿ ಅಭಿಮಾನಿಗಳು ಅಮ್ಮನ ಅಂತಿಮ ದರ್ಶನ ಪಡೆದು ಕಣ್ಣೀರು ಹರಿಸಿದರು. ಸಂಜೆ ನಡೆದ ಅಂತಿಮ ಯಾತ್ರೆ ಹಾಗೂ ಅಂತ್ಯ ಸಂಸ್ಕಾರದಲ್ಲೂ ಲಕ್ಷಾಂತರ ಸಂಖ್ಯೆಯಲ್ಲಿ ಜನ ಪಾಲ್ಗೊಂಡರು.
2016: ನವದೆಹಲಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಜಗದೀಶ ಸಿಂಗ್ ಕೇಹರ್ (ಜೆ.ಎಸ್. ಕೇಹರ್) ಅವರು ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿ ಆಗಿ ನೇಮಕಗೊಂಡರು. ನ್ಯಾಯಮೂರ್ತಿ ಜೆ.ಎಸ್. ಕೇಹರ್ ಅವರು ಹಾಲಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರ ಉತ್ತರಾಧಿಕಾರಿಯಾಗಿ 2017 ಜನವರಿ 4ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆನ್ಯಾಯಮೂರ್ತಿ ಜೆ.ಎಸ್. ಕೇಹರ್ ಅವರು ಕರ್ನಾಟಕ ಹೈಕೋರ್ಟ್ ಮತ್ತು ಉತ್ತರಾಖಂಡ ಹೈಕೋರ್ಟುಗಳಲ್ಲಿ ಮುಖ್ಯನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದು, 2011 ಸೆಪ್ಟೆಂಬರ್ನಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
2016ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಈವರೆಗೆ
ರೂ.2,000 ಕೋಟಿ ಅಕ್ರಮ ಹಣ ಬಹಿರಂಗವಾಗಿದೆ ಎಂದು ವಿತ್ತ ಸಚಿವಾಲಯ  ಪ್ರಕಟಿಸಿತು. ನವೆಂಬರ್ 8 ನಂತರ ಆದಾಯ ತೆರಿಗೆ ಇಲಾಖೆ 400ಕ್ಕಿಂತಲೂ ಹೆಚ್ಚು ಅಕ್ರಮ ಹಣ ಪ್ರಕರಣಗಳನ್ನು ಭೇದಿಸಿದ್ದು, ಇದರಲ್ಲಿ ರೂ.130 ಕೋಟಿ ಹಣ ಮತ್ತು ಚಿನ್ನಾಭರಣಗಳು ಪತ್ತೆಯಾದವು. ಅಕ್ರಮ ಹಣದಲ್ಲಿ ರದ್ದು ಮಾಡಿರುವ ನೋಟುಗಳ ಸಂಖ್ಯೆಯೇ ಜಾಸ್ತಿಯಾಗಿದ್ದು, ಬೆಂಗಳೂರಿನಲ್ಲಿ ನಡೆದ ಐಟಿ  ದಾಳಿಯಲ್ಲಿ ಅತೀ ಹೆಚ್ಚು ಮೊತ್ತ ಪತ್ತೆಯಾಗಿದೆ ಎಂದು ವಿತ್ತ ಸಚಿವಾಲಯ ಹೇಳಿತು. 30ಕ್ಕಿಂತಲೂ  ಹೆಚ್ಚು ಪ್ರಕರಣಗಳಲ್ಲಿ ಆದಾಯ ತೆರಿಗೆ ಕಾಯ್ದೆಯನ್ನು ಉಲ್ಲಂಘಿಸಿದ ಪ್ರಕರಣಗಳ ಸಂಖ್ಯೆಯೇ ಹೆಚ್ಚು ಇದೆ ಎಂದು ಹೇಳಲಾಯಿತು. ಡಿಸೆಂಬರ್ 2ರಂದು ಬೆಂಗಳೂರಿನಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಮತ್ತು ಇಬ್ಬರು ಗುತ್ತಿಗೆದಾರರ ನಿವಾಸದ ಮೇಲೆ ದಾಳಿ ನಡೆಸಿದ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಈವರೆಗೆ ರೂ. 6 ಕೋಟಿ ಅಧಿಕ ನಗದು ವಶಕ್ಕೆ ಪಡೆದಿದ್ದರು. ದಾಳಿ ವೇಳೆ ರೂ. 4.7 ಕೋಟಿಯಷ್ಟು ರೂ.2 ಸಾವಿರ ಮುಖ ಬೆಲೆಯ ಹೊಸ ನೋಟುಗಳು ಪತ್ತೆಯಾಗಿದ್ದು,ಉಳಿದ ಹಣ ರೂ.100 ಮತ್ತು ಹಳೆಯ ರೂ 500 ಮುಖ ಬೆಲೆಯ ನೋಟುಗಳಲ್ಲಿ ಸಿಕ್ಕಿದವು. ಅಲ್ಲದೆ, ರೂ. 2 ಕೋಟಿ ಮೌಲ್ಯದ 7 ಕೆಜಿಯಷ್ಟು ಚಿನ್ನದ ಗಟ್ಟಿ ಮತ್ತು 7 ಕೆಜಿಯಷ್ಟು ಆಭರಣಗಳು ದಾಳಿ ವೇಳೆ ವಶಪಡಿಸಿಕೊಳ್ಳಲಾಗಿತ್ತು.. ದುಬಾರಿ ಲ್ಯಾಂಬರ್ಗಿನಿ  ಕಾರೊಂದನ್ನೂ ಜಪ್ತಿ ಮಾಡಲಾಗಿತ್ತು.
2014: ನವದೆಹಲಿ: ಜಮ್ಮು ಕಾಶ್ಮೀರ ಚುನಾವಣೆ ವಿಫಲಗೊಳಿಸುವ ಉದ್ದೇಶದಿಂದ 2014ರ ಡಿಸೆಂಬರ್ 5ರಂದು  ಒಂದೇ ದಿನ ನಾಲ್ಕು ಕಡೆ ದಾಳಿ ನಡೆಸಿ 11 ಜನರನ್ನು ಬಲಿ ಪಡೆದ ಪಾಕ್ ಪ್ರೇರಿತ ಉಗ್ರರ ಮತ್ತೊಂದು ಸಂಚು ಬಯಲಾಯಿತು. ಜ. 26ರಂದು ನಡೆಯುವ ಗಣರಾಜ್ಯೊತ್ಸವ ಕಾರ್ಯಕ್ರಮದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾಗವಹಿಸದಂತೆ ತಡೆಯಲು ಉಗ್ರ ಸಂಘಟನೆಗಳು ಶತಾಯಗತಾಯ ಯತ್ನಿಸುತ್ತಿವೆ ಎಂಬ ಅಂಶವನ್ನು ಕೇಂದ್ರ ಗುಪ್ತಚರ ದಳ ಹೊರಹಾಕಿತು. ಮುಂದಿನ ಕೆಲ ದಿನಗಳಲ್ಲಿ ದೆಹಲಿ, ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಭಾರಿ ಹಿಂಸಾಚಾರ ಸೃಷ್ಟಿಸಿ, ಭದ್ರತಾ ಆತಂಕ
ಉಂಟು ಮಾಡಿದರೆ ಒಬಾಮ ಭೇಟಿ ರದ್ದಾಗುತ್ತದೆ ಎಂಬುದು ಲಷ್ಕರ್ ಉಗ್ರರ ಯೋಜನೆ. ಹಲವು ಉಗ್ರ ಸಂಘಟನೆಗಳೂ ಈ ಯೋಜನೆಗೆ ಕೈ ಜೋಡಿಸಿವೆ. ಇದಕ್ಕಾಗಿ 26/11ರ ಮುಂಬೈ ಮಾದರಿಯ ದಾಳಿ ನಡೆಸಲು ಉಗ್ರರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಯಿತು. ಈ ವಿಷಯ ಬೆಳಕಿಗೆ ಬರುತ್ತಲೇ ದೆಹಲಿಯಲ್ಲಿ ಕಟ್ಟೆಚ್ಚರ ಘೋಷಿಸಲಾಯಿತು. ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಹಲವು ಮಹಾನಗರಗಳಲ್ಲಿ ತೀವ್ರ ನಿಗಾ ವಹಿಸಲಾಯಿತು. ಭದ್ರತೆ ಕುರಿತು ದೆಹಲಿ ಪೊಲೀಸ್ ಮಹಾನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ತನಿಖಾ ಸಂಸ್ಥೆಗಳು, ಗುಪ್ತಚರ ಇಲಾಖೆ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದವು. ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಸõತವಾಗಿ ರ್ಚಚಿಸಲಾಯಿತು. ದೆಹಲಿಯ ರೈಲ್ವೆ ಹಾಗೂ ವಿಮಾನ ನಿಲ್ದಾಣ, ರಾಷ್ಟ್ರಪತಿ ಭವನ, ಸಂಸತ್, ಮೆಟ್ರೋ ನಿಲ್ದಾಣ, ಇಂಡಿಯಾ ಗೇಟ್ ಮತ್ತಿತರ ಕಡೆ ಬಿಗಿ ಬಂದೋಬಸ್ತ್ ಕೈಗೊಳ್ಳಲು ನಿರ್ಧರಿಸಲಾಯಿತು. ಸೂಕ್ಷ್ಮ ಪ್ರದೇಶಗಳಲ್ಲಿ ಅಣಕು ಕಾರ್ಯಾಚರಣೆ ನಡೆಸುವ ಮೂಲಕ ಭದ್ರತಾ ವ್ಯವಸ್ಥೆ ಬಲ ಪಡಿಸಲು ನಿರ್ಣಯ ಕೈಗೊಳ್ಳಲಾಯಿತು.. ಒಬಾಮ ಭೇಟಿ ಸಂದರ್ಭದಲ್ಲಿ ಕೈಗೊಳ್ಳಬೇಕಾದ ರಕ್ಷಣಾ ವ್ಯವಸ್ಥೆ ಕುರಿತು ಇದೇ ವೇಳೆ ರ್ಚಚಿಸಲಾಯಿತು. ದೆಹಲಿಯ 5 ಪ್ರಮುಖ ಪ್ರದೇಶದಲ್ಲಿ 289 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿತು. ಕ್ಯಾಮರಾದಲ್ಲಿ ಎರಡು ಹೈಡೆಫಿನಿಷನ್ ಲೆನ್ಸ್ ಇರಲಿದ್ದು, ಇದು ನಾಲ್ಕೂ ದಿಕ್ಕುಗಳ ದೃಶ್ಯಗಳನ್ನು ಸೆರೆ ಹಿಡಿಯುವುವು.

2014: ಭದ್ರಾವತಿ: ಉಕ್ಕಿನ ನಗರಿಯ ಬೆಡಗಿಗೆ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿತು. ಪೋಲೆಂಡ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಆಶಾ ಭಟ್ 'ಮಿಸ್ ಸುಪ್ರಾ ಇಂಟರ್ನ್ಯಾಷನಲ್' ಆಗಿ ಹೊರಹೊಮ್ಮಿದರು. ಈ ಮೂಲಕ ಭಾರತಕ್ಕೆ ಮೊದಲ ಬಾರಿಗೆ ಈ ಪ್ರಶಸ್ತಿ ತಂದುಕೊಟ್ಟ ಕೀರ್ತಿಗೆ ಭಾಜನರಾದರು.  'ಮಗಳು ಮೊದಲಿನಿಂದಲೂ ಪ್ರತಿಭಾವಂತೆ. ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಛಲವಿತ್ತು. ಅದು ಅವಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದೆ' ಎಂದು ತಾಯಿ ಶ್ಯಾಮಲಾ ಭಟ್ 'ವಿಜಯವಾಣಿ'ಯೊಂದಿಗೆ ಸಂಭ್ರಮ ಹಂಚಿಕೊಂಡರು. ಸದ್ಯ ಆಶಾ ಅವರು ಬೆಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಆಶಾ ಅವರು ಕಳೆದ ತಿಂಗಳು ಮುಂಬೈಯಲ್ಲಿ ನಡೆದ 'ಮಿಸ್ ಡೀವಾ ಯೂನಿವರ್ಸ್'ನಲ್ಲಿ ದ್ವಿತೀಯ ರನ್ನರ್ಅಪ್ ಪ್ರಶಸ್ತಿ ಪಡೆದಿದ್ದರು.

2014: ಲಂಡನ್: ದಿ ಟೈಮ್ಸ್ ನ ಹೈಯರ್ ಎಜುಕೇಷನ್ (ಟಿಎಚ್ಇ) ಬಿಡುಗಡೆ ಮಾಡಿದ ಬ್ರಿಕ್ಸ್ ದೇಶಗಳ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ 25ನೇ ಸ್ಥಾನ ಪಡೆದುಕೊಂಡಿತು. ಬ್ರಿಕ್ಸ್ ದೇಶಗಳ ಒಟ್ಟು 100 ವಿವಿಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ 40ರೊಳಗಿನ ಶ್ರೇಣಿಯಲ್ಲಿ ಭಾರತದ ನಾಲ್ಕು ವಿವಿಗಳು ಸೇರಿದವು. ಐಐಟಿ ಬಾಂಬೆ (37), ಐಐಟಿ ರೂರ್ಕಿ(38), ಚಂಡೀಗಢದ ಪಂಜಾಬ್ ವಿವಿ (39) ಪಟ್ಟಿಯಲ್ಲಿರುವ ಇತರ ವಿವಿಗಳು. ಪಟ್ಟಿಯಲ್ಲಿ ಚೀನಾದ ಪೆಕಿಂಗ್ ವಿಶ್ವವಿದ್ಯಾಲಯ ಮೊದಲ ಸ್ಥಾನದಲ್ಲಿದೆ. ಭಾರತೀಯ ಶಿಕ್ಷಣ ಸಂಸ್ಥೆಗಳ ಪೈಕಿ ಬೆಂಗಳೂರಿನ ಐಐಎಸ್ಸಿ ಮೊದಲ ಸ್ಥಾನದಲ್ಲಿದೆ. ನ್ಯೂಯಾರ್ಕ್ನ ರಾಕ್ಫೆಲ್ಲರ್ ಫೌಂಡೇಶನ್ ಈ ವರದಿ ತಯಾರಿಸಿದ್ದು, ಜಗತ್ತಿನ 100 ನಗರಗಳನ್ನು ಪಟ್ಟಿ ಮಾಡಲಾಯಿತು.

2014: ಶ್ರೀನಗರ: ಕಾಶ್ಮೀರದಲ್ಲಿ 2014ರ ಡಿಸೆಂಬರ್ 5ರಂದು ಅಟ್ಟಹಾಸ ಮೆರೆದ ಉಗ್ರಗಾಮಿಗಳಿಗೆ ಪಾಕಿಸ್ತಾನ ಕುಮ್ಮಕ್ಕು ನೀಡಿದ್ದನ್ನು ಸಾಬೀತು ಪಡಿಸುವ ದಾಖಲೆಗಳು ಲಭ್ಯವಾದವು.. ಉರಿ ಸೇನಾ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಷಾಮೀಲಾಗಿದ್ದ 6 ಹತ ಉಗ್ರಗಾಮಿಗಳ ಬಳಿ ಇದ್ದ ಆಹಾರದ ಪೊಟ್ಟಣಗಳಲ್ಲಿ ಪಾಕಿಸ್ತಾನಿ ಸರ್ಕಾರದ 'ಗುರುತು'ಗಳು ಪತ್ತೆಯಾದವು. ಘರ್ಷಣೆ ಸಂಭವಿಸಿದ ಸ್ಥಳದಲ್ಲಿ ಪತ್ತೆಯಾದ ಆಹಾರದ ಪೊಟ್ಟಣಗಳು ಸಾಮಾನ್ಯವಾಗಿ ಪಾಕಿಸ್ತಾನಿ ಸೇನೆ ಬಳಸುವ ಆಹಾರದ ಪೊಟ್ಟಣಗಳಾಗಿವೆ ಎಂದು ಹಿರಿಯ ಸೇನಾ ಅಧಿಕಾರಿ ಹೇಳಿದರು. ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡಿನ ಜೊತೆಗೆ ಲಭಿಸಿದ ಈ ಆಹಾರದ ಪೊಟ್ಟಣಗಳು ಉಗ್ರಗಾಮಿಗಳು ಭದ್ರತಾ ಪಡೆಗಳನ್ನು ದೀರ್ಘಕಾಲ ಪೀಡಿಸಲು ಹೊಂಚು ಹಾಕಿದ್ದರು ಎಂಬುದನ್ನು ತೋರಿಸಿವೆ ಎಂದು ಅವರು ನುಡಿದರು. ಸೇನೆ ಮತ್ತು ಉಗ್ರಗಾಮಿಗಳ ಗುಂಪಿನ ನಡುವೆ ಡಿ.5ರಂದು ಸುಮಾರು 6 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಎಂಟು ಸೈನಿಕರು ಸೇರಿದಂತೆ 11 ಮಂದಿ ಭದ್ರತಾ ಸಿಬ್ಬಂದಿ ಮೃತರಾಗಿದ್ದರು. ಕದನದಲ್ಲಿ 6 ಮಂದಿ ಉಗ್ರಗಾಮಿಗಳೂ ಹತರಾಗಿದ್ದರು. ಭೀಕರ ಕದನ ನಡೆದ ಸ್ಥಳದಲ್ಲಿ ಲಭಿಸಿದ ಇತರ ವಸ್ತುಗಳಲ್ಲಿ 6 ಎಕೆ ರೈಫಲ್ಗಳು, 55 ಮ್ಯಾಗಝೀನ್ಗಳು, ಎರಡು ಶಾಟ್ ಗನ್ಗಳು, ಎರಡು ರಾತ್ರಿ ಕಾಲದ ವೀಕ್ಷಣೆಗೆ ಬಳಸುವ ಬೈನಾಕ್ಯುಲರ್ಗಳು, ನಾಲ್ಕು ರೇಡಿಯೋ ಸೆಟ್ಗಳು, 32 ಬಳಸದ ಗ್ರೆನೇಡ್ಗಳು ಮತ್ತು ಒಂದು ವೈದ್ಯಕೀಯ ಕಿಟ್ ಕೂಡಾ ಸೇರಿದ್ದವು.

2014: ಮುಂಬೈ: ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕರಾಡ್ ಸಮೀಪ ಟ್ಯಾಂಕರ್ ಮತ್ತು ಬಸ್ಸು ಮುಖಾಮುಖಿ ಢಿಕ್ಕಿಯಲ್ಲಿ ಐವರು ಮೃತರಾಗಿ ಇತರ ಎಂಟು ಮಂದಿ ಗಾಯಗೊಂಡಿಡ ಘಟನೆ ಘಟಿಸಿತು. ಪಶ್ಚಿಮ ಮಹಾರಾಷ್ಟ್ರದ ಬೆಳವಡೆ ಗ್ರಾಮದ ಬಳಿ ಈ ದುರ್ಘಟನೆ ಸಂಭವಿಸಿತು. ಗಾಯಾಳುಗಳಲ್ಲಿ ಕೆಲವರನ್ನು ಕರಾಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.. ಇತರ ಕೆಲವರನ್ನು ಅಲ್ಲಿನ ಖಾಸಗಿ ಆಸ್ಪತ್ರೆಗೂ ದಾಖಲು ಮಾಡಲಾಯಿತು.

2014: ನವದೆಹಲಿ: ಹಿರಿಯ ಐಎಎಸ್ ಅಧಿಕಾರಿ ದಿನೇಶ ಕುಮಾರ್ ಅವರನ್ನು ಪೋಲಾವರಂ ಯೋಜನಾ ಪ್ರಾಧಿಕಾರದ ಮುಖ್ಯ ಕಾರ್ಯಕಾರಿ ಅಧಿಕಾರಿಯಾಗಿ (ಸಿಇಒ) ನೇಮಕ ಮಾಡಲಾಯಿತು. ಆಂಧ್ರ ಪ್ರದೇಶ ಕೇಡರ್ನ 1963ರ ತಂಡದ ಐಎಎಸ್ ಅಧಿಕಾರಿಯಾದ ಕುಮಾರ್ ಪ್ರಸ್ತುತ ಜವುಳಿ ಸಚಿವಾಲಯದಲ್ಲಿ ಅಭಿವೃದ್ಧಿ ಆಯುಕ್ತ. ಪೋಲಾವರಂ ಯೋಜನೆಯು ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಯೋಜನಾ ಸ್ಥಾನಮಾನ ಪಡೆದಿರುವ ವಿವಿಧೋದ್ದೇಶೀ ನೀರಾವರಿ ಯೋಜನೆ. ಗೋದಾವರಿ ನದಿಗೆ ಅಡ್ಡವಾಗಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಪೋಲಾವರಂ ಅಣೆಕಟ್ಟು ನಿರ್ವಿುಸಲಾಗಿದೆ. ಈ ಜಲಾಶಯ ಛತ್ತೀಸ್ಗಢದ ಕೆಲವು ಭಾಗಗಳು ಮಾತ್ರವೇ ಅಲ್ಲ ಒಡಿಶಾ ರಾಜ್ಯದ ಹಲವು ಭಾಗಗಳಿಗೂ ವ್ಯಾಪಿಸಿದೆ.

2014: ಗುವಾಹಟಿ: ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಲ್ಲೆಯ ಅಕ್ಟೋಬರ್ 2ರ ಸ್ಪೋಟದ ಮುಖ್ಯ ಆರೋಪಿ ಶಹನೂರ್ ಅಲೋಮ್ಸನನ್ನು ಅಸ್ಸಾಮಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ನಲ್ಬಾರಿ ಜಿಲ್ಲೆಯಲ್ಲಿ ಹಿಂದಿನ ದಿನ ತಡರಾತ್ರಿಯಲ್ಲಿ ಆತನನ್ನು ಬಂಧಿಸಲಾಗಿದೆ. ಅಸ್ಸಾಮಿನಲ್ಲಿ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ ಸಂಘಟನೆಯ ಮುಖ್ಯ ಸಂಚಾಲಕರಲ್ಲಿ ಒಬ್ಬನಾದ ಅಲೋಮ್ ಬರಪೇಟಾ ಜಿಲ್ಲೆಯ ಛಟ್ಲಾ ಗ್ರಾಮದ ತನ್ನ ಮನೆಯಿಂದ ಈ ವರ್ಷದ ಅಕ್ಟೋಬರ್ ತಿಂಗಳಿನಿಂದ ತಲೆತಪ್ಪಿಸಿಕೊಂಡಿದ್ದ. ಅಸ್ಸಾಂ ಪೊಲೀಸ್ ಘಟಕವು ನಲ್ಬಾರಿ ಜಿಲ್ಲೆಯ ಲಾರ್ಕೂಚಿ ಗ್ರಾಮದಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಅಲೋಮ್ನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದರು. 'ಇದೊಂದು ಮಹತ್ವದ ಬಂಧನ. ರಾಜ್ಯದಲ್ಲಿ ಜಿಹಾದಿ ಸಂಘಟನೆ ಬಗ್ಗೆ ವ್ಯಾಪಕ ವಿವರಗಳನ್ನು ಆತನಿಂದ ನಾವು ಪಡೆಯುವ ಸಾಧ್ಯತೆಗಳಿವೆ. ಸಂಘಟನೆಯ ಸದಸ್ಯ ಬಲ, ಹಣಕಾಸು ವರ್ಗಾವಣೆ ಮತ್ತಿತರ ವಿವರಗಳು ಆತನಿಂದ ಲಭಿಸುವ ನಿರೀಕ್ಷೆಯಿದೆ' ಎಂದು ಅಧಿಕಾರಿ ನುಡಿದರು. ಬುರ್ದ್ವಾನಿನ ಖಾಗ್ರಾಗಡ ಪ್ರದೇಶದಲ್ಲಿ ಸಂಭವಿಸಿದ್ದ ಆಕಸ್ಮಿಕ ಸ್ಪೋಟದಲ್ಲಿ ಜಮಾತ್-ಉಲ್-ಮುಜಾಹಿದೀನ್ ಬಾಂಗ್ಲಾದೇಶ್ ಸಂಘಟನೆಯ ಉಗ್ರಗಾಮಿಗಳಿಬ್ಬರು ಹತರಾಗಿ ಇನ್ನೊಬ್ಬ ಗಾಯಗೊಂಡಿದ್ದ. ಅಲೋಮ್ ಪತ್ನಿ ಸುಜೀನಾ ಬೇಗಂಳನ್ನು ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಪುತ್ರನನ್ನು ಗುವಾಹಟಿಯಲ್ಲಿ ಪೊಲೀಸರು ಕಳೆದ ತಿಂಗಳು ಬಂಧಿಸಿದ್ದರು.

2014: ಹಾಸನ: ಅರಸೀಕೆರೆ ತಾಲೂಕು ಬೊಮ್ಮೇನಹಳ್ಳಿ ರಸ್ತೆಯಲ್ಲಿ ಆಟೋ ಮತ್ತು ಮ್ಯಾಕ್ಸಿಕ್ಯಾಬ್ ಢಿಕ್ಕಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಮೂವರು ಮೃತರಾಗಿ ಇತರ 15 ಮಂದಿ ಗಾಯಗೊಂಡರು. ಮೃತರನ್ನು ಮಾಡಾಳುವಿನ ಮಂಜಾಚಾರ್ (46), ಅರಳಿಕಟ್ಟದ ರಾಜಪ್ಪ (40) ಮತ್ತು ಅರಸೀಕೆರೆಯ ದ್ರಾಕ್ಷಾಯಣಮ್ಮ (40) ಎಂದು ಗುರುತಿಸಲಾಯಿತು.

2014: ಹಜಾರಿಬಾಗ್ (ಜಾರ್ಖಂಡ್): ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿಗಳು ಅಟ್ಟಹಾಸ ಮೆರೆದ ಒಂದು ದಿನದ ಬಳಿಕ ಈದಿನ ಇಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 'ಉಗ್ರಗಾಮಿಗಳು ಭಾರತೀಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಆದರೆ ದಿಟ್ಟ ಯೋಧರು ರಾಷ್ಟ್ರದ ಭದ್ರತೆ ಕಾಪಾಡುತ್ತಾ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ' ಎಂದು ಹೇಳಿದರು. ಉಗ್ರಗಾಮಿಗಳೊಂದಿಗೆ ಹೋರಾಡುತ್ತಾ ಹುತಾತ್ಮರಾದ ಯೋಧರಿಗೆ ಪ್ರಧಾನಿ ತಮ್ಮ ಶ್ರದ್ಧಾಂಜಲಿಯನ್ನೂ ಸಲ್ಲಿಸಿದರು. ಹಜಾರಿಬಾಗ್ನಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ 'ಭಯೋತ್ಪಾದಕರು ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಸಲು ಯತ್ನಿಸಿದ್ದಾರೆ. ಆದರೆ ನಮ್ಮ ದಿಟ್ಟ ಯೋಧರು ರಾಷ್ಟ್ರದ ಭದ್ರತೆ ಕಾಪಾಡಲು ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡಿದ್ದಾರೆ ಎಂದು ನುಡಿದರು. 'ತಮ್ಮ ಜೀವಗಳನ್ನೇ ಬಲಿದಾನ ಮಾಡಿದ ಜಾರ್ಖಂಡ್ನ ಧೀರ ಪುತ್ರ ಸಂಕಲ್ಪ ಕುಮಾರ ಶುಕ್ಲ ಮತ್ತು ಇತರ ಧೀರ ಯೋಧರಿಗೆ ನಾನು ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಸಂಕಲ್ಪ ಕುಮಾರ ಶುಕ್ಲಾ ಅವರ ಬಲಿದಾನವು ರಾಜ್ಯದಲ್ಲಿ ಮುಂದಿನ ತಲೆಮಾರುಗಳವರೆಗೂ ನೆನಪಿನಲ್ಲಿ ಉಳಿಯುತ್ತದೆ' ಎಂದು ಅವರು ಹೇಳಿದರು. ಕಾಶ್ಮೀರ ಕಣಿವೆಯಲ್ಲಿ ಶನಿವಾರ ಗಡಿ ದಾಟಿ ಬಂದ ಉಗ್ರಗಾಮಿಗಳು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಲೆಫ್ಟಿನೆಂಟ್ ಕರ್ನಲ್ ಸಂಕಲ್ಪ ಕುಮಾರ ಸೇರಿದಂತೆ 11 ಮಂದಿ ಭದ್ರತಾ ಸಿಬ್ಬಂದಿ ಮತ್ತು ಟ್ರಾಲ್ನಲ್ಲಿ ಇಬ್ಬರು ನಾಗರಿಕರನ್ನು ಕೊಂದಿದ್ದರು. ಭಯೋತ್ಪಾದಕರ ದಾಳಿಗಳು ಹಾಗೂ ಗುಂಡಿನ ಕಾಳಗಗಳಲ್ಲಿ ಒಟ್ಟು 21 ಜನ ಮೃತರಾಗಿದ್ದರು. ಅವರಲ್ಲಿ ಪಾಕಿಸ್ತಾನಿ ಮೂಲದ ಎಲ್ಇಟಿ ಭಯೋತ್ಪಾದಕ ಸಂಘಟನೆಯ ಒಬ್ಬ ಉನ್ನತ ಕಮಾಂಡರ್ ಸೇರಿದಂತೆ 7 ಜನ ಉಗ್ರಗಾಮಿಗಳು ಸೇರಿದ್ದರು.

2008: ಮುಂಬೈ ಮೇಲೆ ಭಯೋತ್ಪಾದಕರು ನಡೆಸಿದ ಭಾರಿ ವಿಧ್ವಂಸಕ ದಾಳಿಯಲ್ಲಿ ಪಾಕಿಸ್ಥಾನದಲ್ಲಿನ ಉಗ್ರಗಾಮಿ ಸಂಘಟನೆಗಳ ಕೈವಾಡದ ಬಗ್ಗೆ ತಳ್ಳಿಹಾಕಲಾಗದಂತಹ ಸಾಕ್ಷ್ಯಾಧಾರಗಳು ಇರುವುದರಿಂದ ಅಲ್ಲಿನ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾದರೆ, ಸ್ವತಃ ಕಾರ್ಯಾಚರಣೆಗೆ ಇಳಿಯಬೇಕಾದೀತು ಎಂದು ಅಮೆರಿಕವು ಪಾಕಿಸ್ಥಾನಕ್ಕೆ ತಾಕೀತು ಮಾಡಿತು. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಕಾಂಡೋಲಿಸಾ ರೈಸ್ ಅವರು ಇಸ್ಲಾಮಾಬಾದಿಗೆ ನೀಡಿದ್ದ ಭೇಟಿ ಸಂದರ್ಭದಲ್ಲಿ ಈ ಎಚ್ಚರಿಕೆ ನೀಡಿದರು ಎಂದು ಪಾಕಿಸ್ಥಾನದ ಪ್ರಭಾವಿ ದಿನಪತ್ರಿಕೆ 'ಡಾನ್' ವರದಿ ಮಾಡಿತು.

2008: ಮಹಾರಾಷ್ಟ್ರದ ಪಕ್ಷ ನಾಯಕ ನಾರಾಯಣ ರಾಣೆ ಅವರನ್ನು ಕಾಂಗ್ರೆಸ್ ಪಕ್ಷವು ಅಮಾನತುಗೊಳಿಸಿತು. ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧೆಯಲ್ಲಿದ್ದ ರಾಣೆ ತಾವು ಸ್ಪರ್ಧೆಯಲ್ಲಿ ಹಿಂದೆ ಬಿದ್ದಿರುವುದು ಗೊತ್ತಾದಾಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಇತರ ಹಲವರ ವಿರುದ್ಧ ಹರಿಹಾಯ್ದಿದ್ಧರು. ಈ ಟೀಕೆಗಳು ಬಂದ ಒಂದು ದಿನದ ಬಳಿಕ ಕಾಂಗ್ರೆಸ್ ಪಕ್ಷವು ಅವರನ್ನು ಅಮಾನತುಗೊಳಿಸವ ಕ್ರಮ ಕೈಗೊಂಡಿತು.

2008: ಅಪಹರಣ ಮತ್ತು ದರೋಡೆ ಪ್ರಕರಣದಲ್ಲಿ ತಪ್ಪಿತಸ್ಥ ಎನಿಸಿದ ಅಮೆರಿಕನ್ ಫುಟ್‌ಬಾಲ್ (ರಗ್ಬಿ) ದಂತಕತೆ ಒ.ಜೆ. ಸಿಂಪ್ಸನ್ ಅವರಿಗೆ ನ್ಯೂಯಾರ್ಕ್ ಜಿಲ್ಲಾ ನ್ಯಾಯಾಲಯ 33 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ತೀರ್ಪು ಪ್ರಕಟಿಸಿದ ಜಿಲ್ಲಾ ನ್ಯಾಯಾಧೀಶರಾದ ಜಾಕೀ ಗ್ಲಾಸ್ ಅವರು ಸಿಂಪ್ಸನ್‌ಗೆ ಕಠಿಣ ಶಿಕ್ಷೆಯನ್ನೇ ವಿಧಿಸಿದರು. ಸಿಂಪನ್ಸ್ 2007ರಲ್ಲಿ ಲಾಸ್ ವೆಗಾಸ್‌ನಲ್ಲಿ ಕ್ರೀಡಾ ಸ್ಮರಣಿಕೆಗಳ ವಿತರಕರಿಬ್ಬರನ್ನು ಅಪಹರಿಸಿ ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಿದ್ದರು. ಇತರ ಬಂದೂಕುಧಾರಿಗಳು ಕೂಡಾ ಈ ವೇಳೆ ಅವರ ಜೊತೆಗಿದ್ದರು. ಈ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಎರಡು ತಿಂಗಳ ಹಿಂದೆ ತೀರ್ಪು ಪ್ರಕಟಿಸಿ ಸಿಂಪ್ಸನ್ ತಪ್ಪಿತಸ್ಥ ಎಂದು ಘೋಷಿಸಿತ್ತು. ಇದೀಗ 61 ರ ಹರೆಯದ ಅವರಿಗೆ ಜೈಲು ಶಿಕ್ಷೆ ವಿಧಿಸಿತು.

2008: ವಿಮಾನಯಾನ ಟರ್ಬೈನ್ ಇಂಧನದ ಬೆಲೆಯನ್ನು ತೈಲ ಮಾರುಕಟ್ಟೆ ಕಂಪೆನಿಗಳು ಕಡಿತಗೊಳಿಸಿರುವುದನ್ನು ಅನುಸರಿಸಿ ಕಿಂಗ್‌ಫಿಶರ್, ಜೆಟ್ ಏರ್‌ವೇಸ್, ಏರ್ ಇಂಡಿಯಾ ಮತ್ತು ಇಂಡಿಗೋ ಸೇರಿದಂತೆ ಎಲ್ಲ ಪ್ರಮುಖ ದೇಶೀಯ ವಿಮಾನಯಾನ ಸಂಸ್ಥೆಗಳು ವಿಮಾನ ಹಾರಾಟಗಳ ಸರ್‌ಚಾರ್ಜ ಕಡಿತಗೊಳಿಸಿದವು. ಇದರಿಂದಾಗಿ ವಿಮಾನಯಾನ ದರ ಅಂದಾಜು 400 ರೂಪಾಯಿಗಳಷ್ಟು ಅಗ್ಗವಾಯಿತು.

2007: ಮತದಾರರ ಪಟ್ಟಿ ಪರಿಷ್ಕರಣೆ ಅಥವಾ ಮತಗಟ್ಟೆಯ ಚುನಾವಣಾ ಕರ್ತವ್ಯಗಳಿಗೆ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿತು. ಈ ಸಂಬಂಧ ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿಹಿಡಿದ ನ್ಯಾಯಮೂರ್ತಿಗಳಾದ ಎಸ್.ಬಿ. ಸಿನ್ಹಾ ಮತ್ತು ಎಚ್. ಎಸ್. ಬೇಡಿ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ನ್ಯಾಯಪೀಠವು, `ಆದರೆ ರಜೆಯ ಅವಧಿ ಮತ್ತು ಬೋಧನೇತರ ದಿನಗಳಲ್ಲಿ ಮಾತ್ರ ಮತದಾರರ ಪಟ್ಟಿ ಪರಿಷ್ಕರಣೆ ಮತ್ತು ಚುನಾವಣಾ ಕೆಲಸಗಳಿಗೆ ನಿಯೋಜಿಸಬಹುದು' ಎಂದು ಅಭಿಪ್ರಾಯಪಟ್ಟಿತು. ಬೋಧನಾ ಅವಧಿಗಳಲ್ಲಿ ಶಿಕ್ಷಕರನ್ನು ಚುನಾವಣೆ ಕೆಲಸಗಳಿಗೆ ಬಳಸಿಕೊಳ್ಳಬಾರದು. ಆದರೆ ಕಾನೂನಿನಲ್ಲಿ ಅವಕಾಶವಿರುವಂತೆ ಶಿಕ್ಷಕೇತರ ವರ್ಗವನ್ನು ಶಾಲಾ ಕೆಲಸದ ಅವಧಿ ಅಥವಾ ಯಾವುದೇ ಸಮಯದಲ್ಲಾದರೂ ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳಬಹುದು ಎಂದೂ ಪೀಠ ಸ್ಪಷ್ಟಪಡಿಸಿತು. ಲೋಕಸಭೆ, ವಿಧಾನಸಭೆ, ನಗರಾಡಳಿತ, ಗುರುದ್ವಾರ ಮಂಡಳಿ ಮುಂತಾದ ಆಡಳಿತ ಸಂಸ್ಥೆಗಳ ಚುನಾವಣಾ ಕೆಲಸ, ಮತದಾರರ ಪಟ್ಟಿ ಪರಿಷ್ಕರಣೆ, ಪಲ್ಸ್ ಪೋಲಿಯೊ ಕಾರ್ಯಕ್ರಮ, ಜನಸಂಖ್ಯಾ ಗಣತಿ, ಮಲೇರಿಯಾ, ಪರಿಸರ ಮಾಲಿನ್ಯ ಮತ್ತಿತರ ಕ್ಷೇತ್ರಗಳ ಸಮೀಕ್ಷೆ ಇತ್ಯಾದಿ ಕಾರ್ಯಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳಲು ಸರ್ಕಾರವು ಸುತ್ತೋಲೆ ಹೊರಡಿಸುತ್ತಿರುವುದನ್ನು ಪ್ರಶ್ನಿಸಿ ಸೇಂಟ್ ಮೇರೀಸ್ ಶಾಲೆಯು ದೆಹಲಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಇಂತಹ ಕೆಲಸಗಳಿಂದ ಅಪೂರ್ಣ ಬೋಧನೆ, ತರಗತಿಗೆ ವಿದ್ಯಾರ್ಥಿಗಳ ಗೈರು, ಕೆಟ್ಟಫಲಿತಾಂಶ, ಗುಣಮಟ್ಟವಿಲ್ಲದ ಶಿಕ್ಷಣ ಮುಂತಾದ ದುಷ್ಪರಿಣಾಮಗಳನ್ನು ತಡೆಯಲು ಮಧ್ಯಪ್ರವೇಶ ಮಾಡಬೇಕೆಂದು ಅರ್ಜಿದಾರರು ಕೋರಿದ್ದರು.

2007: ವೈರಿ ಕ್ಷಿಪಣಿಗಳನ್ನು ಆಗಸದಲ್ಲೇ ನಾಶ ಪಡಿಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ ಆರ್ ಡಿ ಒ) ಬಂಗಾಳ ಕೊಲ್ಲಿಯಲ್ಲಿ ದೇಶೀಯವಾಗಿ ನಿರ್ಮಿಸಿದ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು 2ನೇ ಬಾರಿ ಪರೀಕ್ಷೆಗೆ ಒಡ್ಡಿತು. ಈ ಪ್ರಾಯೋಗಿಕ ಪರೀಕ್ಷೆ ಕರಾರುವಾಕ್ಕಾಗಿ ನಡೆದು `ಡಿ ಆರ್ ಡಿ ಒ' ವಿಜ್ಞಾನಿಗಳ ಮುಖದಲ್ಲಿ ಸಂತಸ ಮೂಡಿತು. ಪರೀಕ್ಷೆಯ ಅಂಗವಾಗಿ ಮೊದಲು ಮಾರ್ಪಡಿಸಿದ ಪೃಥ್ವಿ ಕ್ಷಿಪಣಿಯನ್ನು ಬಾಲಸೋರಿನ ಚಂಡಿಪುರದಿಂದ ಹಾರಿಸಲಾಯಿತು. ಅದನ್ನು ಆಗಸದಲ್ಲೇ ನಾಶಪಡಿಸಲು 2 ನಿಮಿಷ 40 ಸೆಕೆಂಡ್ ನಂತರ ಪಕ್ಕದ ಭದ್ರಕ್ ಜಿಲ್ಲೆಯ ವೀಲ್ಹರ್ ದ್ವೀಪದಿಂದ ಮತ್ತೊಂದು ಕ್ಷಿಪಣಿಯನ್ನು (ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ) ಹಾರಿಬಿಡಲಾಯಿತು.

2007: `ಅಕ್ರಮ- ಸಕ್ರಮ ಯೋಜನೆ ಬಗ್ಗೆ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಬದಲಿಗೆ ಡಿಸೆಂಬರ್ 10ರಂದು ಹೈಕೋರ್ಟ್ ನೀಡುವ ನಿರ್ದೇಶನವನ್ನು ಪಾಲಿಸುವುದು' ಎಂದು ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಸರ್ಕಾರದ ಕಾರ್ಯಕಾರಿ ಸಮಿತಿ ಸಭೆಯ ಬಳಿಕ ಹೇಳಿದರು. ಇದರಿಂದಾಗಿ ಸಕ್ರಮ ಚೆಂಡು ಮತ್ತೆ ನ್ಯಾಯಾಲಯಕ್ಕೆ ಹೊರಳಿದಂತಾಯಿತು.

2007: ರಕ್ತ ಕ್ಯಾನ್ಸರ್ ರೋಗಿಗಳಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡುವ ನೂತನ ಯೋಜನೆಯನ್ನು `ಡಾಬರ್ ಆಂಕ್ವೆಸ್ಟ್' ದೇಶದಲ್ಲಿಯೇ ಪ್ರಥಮ ಬಾರಿಗೆ ಬೆಂಗಳೂರಿನಲ್ಲಿ ಪರಿಚಯಿಸಿತು. ಸಂಸ್ಥೆಯು ಆಯ್ದ ರೋಗಿಗಳಿಗೆ ನೀಡಲಾಗುವ ಚಿಕಿತ್ಸೆಯ ಉಸ್ತುವಾರಿ ವಹಿಸಿಕೊಳ್ಳುವುದು. ಆದರೆ ಯೋಜನೆಯನ್ನು ಮೂರನೇ ಸಂಸ್ಥೆ ಜಾರಿ ತರಲಿದ್ದು ಆ ಸಂಸ್ಥೆಯೇ ರೋಗಿಗಳನ್ನು ಗುರುತಿಸುವುದು. ಪ್ರಸ್ತುತ ರೋಗ ಪತ್ತೆಗೆ ಸಂಬಂಧಿಸಿದ ಎಲ್ಲ ನಾಲ್ಕು ಪರೀಕ್ಷೆಗಳಿಗೆ ಸುಮಾರು 24 ಸಾವಿರ ರೂಪಾಯಿ ವೆಚ್ಚವಾಗುತ್ತಿದ್ದು, ಈ ಯೋಜನೆಯಡಿ 10,200 ರೂಪಾಯಿಗಳಿಗೆ ಎಲ್ಲ ನಾಲ್ಕೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು.

2007: ಧರ್ಮಪುರಿಯಲ್ಲಿ 2000ರ ಫೆಬ್ರುವರಿಯಲ್ಲಿ ಬಸ್ಸಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಣ್ಣಾಡಿಎಂಕೆ ಪಕ್ಷದ ಮೂವರು ಕಾರ್ಯಕರ್ತರಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಮರಣ ದಂಡನೆಯನ್ನು ಮದ್ರಾಸ್ ಹೈಕೋರ್ಟ್ ಕಾಯಂಗೊಳಿಸಿತು. ತಮಿಳುನಾಡು ಕೃಷಿ ವಿಶ್ವವಿದ್ಯಾಲಯದ ಬಸ್ಸಿಗೆ 2000ದ ಫೆಬ್ರುವರಿಯಲ್ಲಿ ಅಣ್ಣಾಡಿಎಂಕೆ ಕಾರ್ಯಕರ್ತರು ಧರ್ಮಪುರಿಯಲ್ಲಿ ಬೆಂಕಿ ಹಚ್ಚಿದ್ದರು. ಪ್ಲೆಸೆಂಟ್ ಸ್ಟೇ ಹೋಟೆಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪಕ್ಷದ ನಾಯಕಿ, ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ವಿಶೇಷ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದ್ದನ್ನು ವಿರೋಧಿಸಿ ಕಾರ್ಯಕರ್ತರು ಬಸ್ಸಿಗೆ ಬೆಂಕಿ ಹಚ್ಚಿದ್ದರು. ಆಗ ವಿಶ್ವ ವಿದ್ಯಾಲಯದ ಮೂವರು ವಿದ್ಯಾರ್ಥಿನಿಯರು ಸಜೀವ ದಹನ ಗೊಂಡಿದ್ದರು.

2007: ಜರ್ಮನಿ ಮೂಲದ ವಿಶ್ವದ ಅತಿ ದೊಡ್ಡ ಖಾಸಗಿ ಕೈಗಾರಿಕಾ ಸಂಸ್ಥೆ ಬಾಷ್, ಭಾರತದಲ್ಲಿನ ತನ್ನ ವಿವಿಧ ಕಾರ್ಯಾಚರಣೆಗಳಲ್ಲಿ ರೂ 850 ಕೋಟಿಗಳಷ್ಟು ಹೆಚ್ಚುವರಿ ಬಂಡವಾಳ ಹೂಡಲು ನಿರ್ಧರಿಸಿತು. ಇದರಿಂದ ಭಾರತದಲ್ಲಿನ ಬಾಷ್ ನ ಒಟ್ಟು ಹೂಡಿಕೆಯು 2010ನೇ ಇಸ್ವಿ ಹೊತ್ತಿಗೆ ರೂ 2,650 ಕೋಟಿಗಳಷ್ಟಾಗಲಿದೆ. ಮೋಟಾರ್ ಇಂಡಸ್ಟ್ರೀಸ್ ಕಂಪೆನಿಯು ಲಿಮಿಟೆಡ್ (ಮೈಕೊ) ಹೆಸರನ್ನು ಬಾಷ್ ಲಿಮಿಟೆಡ್ ಎಂದು ಬದಲಾಯಿಸಲು ಮೈಕೊದ ನಿರ್ದೇಶಕ ಮಂಡಳಿಯು ನಿರ್ಧರಿಸಿತು.

2007: ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನದ ಬಳಿಕ ತಾಂತ್ರಿಕ ಕ್ಷೇತ್ರದಲ್ಲಿ ಮುಂದಿನ ದಿನಗಳು ನ್ಯಾನೊ ತಂತ್ರಜ್ಞಾನದ್ದಾಗಿದ್ದು, ಇದಕ್ಕೆ ಸರ್ಕಾರ, ಸಮಾಜ ಸಜ್ಜಾಗಬೇಕು ಎಂಬ ಸ್ಪಷ್ಟ ಸಂದೇಶದೊಂದಿಗೆ ದೇಶದ ಪ್ರಥಮ ನ್ಯಾನೊ ಸಮ್ಮೇಳನ ಬೆಂಗಳೂರಿನಲ್ಲಿ ಆರಂಭವಾಯಿತು. ರಾಜ್ಯಪಾಲ ರಾಮೇಶ್ವರ ಠಾಕೂರ್ ಸಮ್ಮೇಳನವನ್ನು ಉದ್ಘಾಟಿಸಿದರು.

2006: ರಸ್ತೆಬದಿ ಜಗಳ ಸಾವಿನಲ್ಲಿ ಅಂತ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಕ್ರಿಕೆಟಿಗ, ಬಿಜೆಪಿ ಮುಖಂಡ ನವಜೋತ್ಸಿಂಗ್ ಸಿಧು ಅವರಿಗೆ ಪಂಜಾಬ್- ಹರಿಯಾಣ ಹೈಕೋರ್ಟ್ ಮೂರು ವರ್ಷಗಳ ಕಠಿಣ ಸಜೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು. ಮತ್ತೊಬ್ಬ ಆರೋಪಿ ರೂಪಿಂದರ್ ಸಿಂಗ್ ಸಂಧು ಅವರಿಗೂ ಇದೇ ಶಿಕ್ಷೆ ವಿಧಿಸಲಾಯಿತು.

2006: ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಸಚಿವರು ಸೇರಿದಂತೆ ಜನ ಪ್ರತಿನಿಧಿಗಳನ್ನು ಕಾನೂನು ವಿಚಾರಣೆಗೆ ಗುರಿಪಡಿಸಲು ಪೂರ್ವಾನುಮತಿಯ ಅಗತ್ಯ ಇಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು.

2006: ಜೈನ ಸಾಹಿತ್ಯಕ್ಕೆ ಮೌಲಿಕ ಕೊಡುಗೆ ನೀಡಿದ ಹಿರಿಯ ಸಾಹಿತಿ ಎಸ್. ಬಿ. ವಸಂತರಾಜಯ್ಯ ಅವರನ್ನು 2006-07ರ ಸಾಲಿನ `ಚಾವುಂಡರಾಯ ಪ್ರಶಸ್ತಿ'ಗೆ ಕನ್ನಡ ಸಾಹಿತ್ಯ ಪರಿಷತ್ ಆಯ್ಕೆ ಮಾಡಿತು. 15ಕ್ಕೂ ಅಧಿಕ ಜೈನ ಸಾಹಿತ್ಯ ಕೃತಿಗಳನ್ನು ಅವರು ರಚಿಸಿದ್ದಾರೆ.

2006: ಫಿಜಿಯಲ್ಲಿ ಕ್ಷಿಪ್ರಕ್ರಾಂತಿ ನಡೆಸಿದ್ದ ಸೇನಾ ದಂಡನಾಯಕ ಫ್ರಾಂಕ್ ಬೈನಿಮರಮ ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಷಿ, ಸಂಸತ್ ವಿಸರ್ಜಿಸುವ ಮೂಲಕ ತಮ್ಮ ಹಿಡಿತ ಭದ್ರಗೊಳಿಸಿದರು.

2005: ರಾಷ್ಟ್ರಧ್ವಜವನ್ನು ವಸ್ತ್ರ ಮತ್ತು ಸಮವಸ್ತ್ರವಾಗಿ ಗೌರವಾರ್ಹ ರೂಪದಲ್ಲಿ ಧರಿಸಲು ಅವಕಾಶ ನೀಡುವ ರಾಷ್ಟ್ರೀಯ ಗೌರವ (ತಿದ್ದುಪಡಿ) ಮಸೂದೆಗೆ ಲೋಕಸಭೆ ಅಂಗೀಕಾರ ನೀಡಿತು. ರಾಷ್ಟ್ರಧ್ವಜವನ್ನು ಇನ್ನು ಮುಂದೆ ಉಡುಪು, ಸಮವಸ್ತ್ರದ ಮೇಲೆ ಗೌರವಯುತ ರೀತಿಯಲ್ಲಿ ಬಳಸಿಕೊಳ್ಳಬಹುದು. ಆದರೆ ರಾಷ್ಟ್ರಧ್ವಜವನ್ನು ಸೊಂಟದ ಕೆಳಗೆ ಹಾಗೂ ಕುಷನ್, ಕರವಸ್ತ್ರಗಳು, ನ್ಯಾಪ್ ಕಿನ್, ಒಳ ಉಡುಪು ಮುಂತಾದ ನಿತ್ಯಬಳಕೆಯ ವಸ್ತುಗಳ ಮೇಲೆ ಬಳಸುವಂತಿಲ್ಲ. ಧ್ವಜದ ಮೇಲೆ ಕಸೂತಿ ಅಥವಾ ಮುದ್ರಣ ಮಾಡುವಂತಿಲ್ಲ. ಗೃಹಖಾತೆಯ ರಾಜ್ಯಸಚಿವ ಮಾಣಿಕ್ ರಾವ್ ಗವಿಟ್ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಿದರು.

2005: ಸಿಲಿಕಾನ್ ಲೋಹದ ಅಸ್ಪಟಿಕ ರೂಪ (ಎಮಾರ್ಫಸ್ ಸಿಲಿಕಾನ್) ಪತ್ತೆ ಕ್ಷೇತ್ರದಲ್ಲಿ ಹೆಸರು ಮಾಡಿದ ಭಾರತೀಯ ಮೂಲದ ಅಮೆರಿಕನ್ ವಿಜ್ಞಾನಿ ಸುಬೇಂದು ಗುಹಾ ಅವರು ಇಂಧನ ಕ್ಷೇತ್ರದ ಪ್ರತಿಷ್ಠಿತ 2005ನೇ ಸಾಲಿನ ಜಾಗತಿಕ ತಂತ್ರಜ್ಞಾನ ಪ್ರಶಸ್ತಿಗೆ ಆಯ್ಕೆಯಾದರು. ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ನಡೆದ ವಿಶ್ವತಂತ್ರಜ್ಞಾನ ಶೃಂಗಸಭೆಯಲ್ಲಿ ಈ ಪ್ರಶಸ್ತಿಯನ್ನು ಪ್ರಕಟಿಸಲಾಯಿತು.

2005: ಕೇಂದ್ರ ಸಂಪುಟಕ್ಕೆ ತಮ್ಮ ರಾಜೀನಾಮೆ ನೀಡುವ ನಿರ್ಧಾರವನ್ನು ಕೇಂದ್ರ ದ ಖಾತಾ ರಹಿತ ಸಚಿವ ಕೆ. ನಟವರ್ಸಿಂಗ್ ಅವರು ನವದೆಹಲಿಯಲ್ಲಿ ನಡುರಾತ್ರಿ ಪ್ರಕಟಿಸಿದರು. ವೋಲ್ಕರ್ ವರದಿ ಹಿನ್ನೆಲೆಯಲ್ಲಿ ಭುಗಿಲೆದ್ದ ಭಾರೀ ವಿವಾದದ ಹಿನ್ನೆಲೆಯಲ್ಲಿ ಇದಕ್ಕೆ ಮೊದಲು ಅವರು ವಿದೇಶಾಂಗ ಖಾತೆಯನ್ನು ಕಳೆದುಕೊಂಡಿದ್ದರು. ಡಿಸೆಂಬರ್ 5 ರ ರಾತ್ರಿ ಕಾಂಗ್ರೆಸ್ ಪಕ್ಷದ ಚಾಲನಾ ಸಮಿತಿಯಿಂದ ಕಿತ್ತು ಹಾಕಲಾಯಿತು. ಕ್ರೊಯೇಷಿಯಾ ರಾಯಭಾರಿಯಾಗಿದ್ದ ಅನಿಲ್ ಮಥೆರಾನಿ ಅವರು ಆಹಾರಕ್ಕಾಗಿ ತೈಲ ಪ್ರಕರಣದ ಮುಖ್ಯ ಫಲಾನುಭವಿ ನಟವರ್ ಸಿಂಗ್ ಎಂಬುದಾಗಿ ಹೇಳಿದ ಹಿನ್ನೆಲೆಯಲ್ಲಿ ನಟವರ್ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದು ವಿರೋಧಪಕ್ಷಗಳು ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುತ್ತಾ ಬಂದಿದ್ದವು.

2005: ಇರಾನಿನ ಟೆಹರಾನಿನಲ್ಲಿ ಸೇನೆಯ ಸರಕುಸಾಗಣೆ ವಿಮಾನ 10 ಅಂತಸ್ತಿನ ಕಟ್ಟಡಕ್ಕೆ ಅಪ್ಪಳಿಸಿ 119 ಜನ ಅಸುನೀಗಿದರು. ಪತ್ರಕರ್ತರೇ ಅಧಿಕ ಸಂಖ್ಯೆಯಲ್ಲಿದ್ದ ವಿಮಾನದೊಳಗಿನ 94 ಮಂದಿ ಸತ್ತರೆ, ಕಟ್ಟಡದಲ್ಲಿದ್ದ 25 ಮಂದಿ ಮೃತರಾಗಿ 80ಕ್ಕೂ ಹೆಚ್ಚು ಜನ ಗಾಯಗೊಂಡರು. ಪತ್ರಕರ್ತರು ಬಂಡಾ ಅಬ್ಬಾಸ್ ಪಟ್ಟಣಕ್ಕೆ ಸೇನಾ ಕವಾಯತು ವರದಿಗಾಗಿ ಹೊರಟಿದ್ದರು.

2005: ಪರಿಸರ ಶಿಕ್ಷಣಕ್ಕೆ ಆಂದೋಲನದ ರೂಪ ನೀಡಿದ ಮೈಸೂರಿನ ಪಕ್ಷಿ ತಜ್ಞ ಕೆ. ಮನು ಅವರಿಗೆ ಹಸಿರು ಶಿಕ್ಷಕ ಪ್ರಶಸ್ತಿ ಘೋಷಿಸಲಾಯಿತು. ಪ್ರತಿಷ್ಠಿತ ಸ್ಯಾಂಚುರಿ ಏಷ್ಯಾ ಪತ್ರಿಕೆ ಮತ್ತು ಎಬಿಎನ್ ಆಮ್ರೊ ಬ್ಯಾಂಕಿನ ಸಹಯೋಗದಲ್ಲಿ ಈ ಪ್ರಶಸ್ತಿ ಸ್ಥಾಪಿಸಲಾಗಿದೆ.

2005: ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹಿಂದೂಸೇನೆ ಉದಯ. ಭಜರಂಗದಳದಿಂದ ಶಿವಸೇನೆ ಸೇರಿ ಅಲ್ಲಿಂದಲೂ ಹೊರಬಂದ ಪ್ರಮೋದ್ ಮುತಾಲಿಕ್ ಈ ಸೇನೆಯ ಅಧ್ಯಕ್ಷರಾಗಿದ್ದು ಗಾಜಿನಮನೆಯಲ್ಲಿ ಹೊಸ ಪಕ್ಷದ ಉದಯವನ್ನು ಘೋಷಿಸಿದರು.

2001: ಕಾರುಗಳಲ್ಲಿ ಮುಂಭಾಗದಲ್ಲಿ ಕುಳಿತು ಪ್ರಯಾಣ ಮಾಡುವವರು ಸೀಟ್ ಬೆಲ್ಟ್ಗಳನ್ನು ಧರಿಸುವುದು ಕಡ್ಡಾಯ ಎಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿತು.

1992: ಉತ್ತರ ಪ್ರದೇಶದ ಅಯೋಧ್ಯೆಯ ಬಾಬರಿ ಮಸೀದಿ- ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ ತೀವ್ರಗೊಳ್ಳುತ್ತಾ ನಡೆದ ಸರಣಿ ಘಟನೆಗಳು ಈ ದಿನ ಅಯೋಧ್ಯೆಯಲ್ಲಿ ವಿವಾದಿತ ರಾಮಜನ್ಮಭೂಮಿ- ಬಾಬರಿ ಮಸೀದಿ ಕಟ್ಟಡ ಧ್ವಂಸದೊಂದಿಗೆ ಪರ್ಯವಸಾನಗೊಂಡವು.

1956: ಭಾರತೀಯ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷ ಭೀಮರಾವ್ ರಾಮ್ ಜಿ ಅಂಬೇಡ್ಕರ್ ತಮ್ಮ 65ನೇ ವಯಸ್ಸಿನಲ್ಲಿ ನಿಧನರಾದರು. ಇವರು ಭಾರತ ಸರ್ಕಾರದ ಪ್ರಥಮ ಕಾನೂನು ಸಚಿವರಾಗಿದ್ದರು. ಈ ದಿನವನ್ನು ಮಹಾರಾಷ್ಟ್ರದಲ್ಲಿ `ಮಹಾಪರಿನಿವರ್ಾಣ ದಿನ' ಆಗಿ ಆಚರಿಸಲಾಗುತ್ತದೆ.

1955: ಸಾಹಿತಿ ಪೂರ್ಣಿಮಾ ರಾಮಣ್ಣ ಜನನ.

1949: ಸಾಹಿತಿ ಶಿವಳ್ಳಿ ಕೆಂಪೇಗೌಡ ಜನನ.

1947: ಸಾಹಿತಿ ಡಾ. ಡಿ.ಎಸ್. ಜಯಪ್ಪ ಗೌಡರ ಜನನ.

1934: ಪ್ರಾಧ್ಯಾಪಕ, ಜಾನಪದ ತಜ್ಞ, ಮಹಾದೇವಯ್ಯ ಅವರು ರುದ್ರಯ್ಯ- ಹೊನ್ನಮ್ಮ ದಂಪತಿಯ ಮಗನಾಗಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ತಿಪ್ಪೂರು ಗ್ರಾಮದಲ್ಲಿ ಜನಿಸಿದರು.

1898: ಜರ್ಮನ್ ಸಂಜಾತ ಛಾಯಾಗ್ರಾಹಕ ಆಲ್ ಫ್ರೆಡ್ ಐಸೆನ್ ಸ್ಟೇಟ್ (1898-1995) ಹುಟ್ಟಿದ ದಿನ. `ಲೈಫ್' ಪತ್ರಿಕೆಗೆ ಇವರು ಒದಗಿಸುತ್ತಿದ್ದ ಛಾಯಾಚಿತ್ರಗಳು ಅಮೆರಿಕಾದ `ಫೊಟೋ ಜರ್ನಲಿಸಂ'ನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದವು.

1877: ಅಮೆರಿಕನ್ ಸಂಶೋಧಕ ಥಾಮಸ್ ಆಲ್ವಾ ಎಡಿಸನ್ ಅವರಿಂದ ಮೊತ್ತ ಮೊದಲ ಧ್ವನಿ ಮುದ್ರಣ ನಡೆಯಿತು. ನ್ಯೂ ಜೆರ್ಸಿಯ ವೆಸ್ಟ್ ಆರೆಂಜಿನಲ್ಲಿ ನಡೆದ ಪ್ರದರ್ಶನದಲ್ಲಿ ಎಡಿಸನ್ ಫೋನೋಗ್ರಾಫ್ ಎದುರು `ಮೇರಿ ಹ್ಯಾಡ್ ಎ ಲಿಟ್ಲ್ ಲ್ಯಾಂಬ್' ಹಾಡಿದಾಗ ಅದು ಮುದ್ರಣಗೊಂಡು ನಂತರ ಪುನಃ ಆಲಿಸಲು ಸಾಧ್ಯವಾಯಿತು.

1823: ಈ ದಿನ ಜರ್ಮನ್ ಭಾಷಾ ತಜ್ಞ ಮ್ಯಾಕ್ಸ್ ಮುಲ್ಲರ್ (1823-1900) ಜನ್ಮದಿನ. `ದಿ ಸೇಕ್ರೆಡ್ ಬುಕ್ಸ್ ಆಫ್ ಈಸ್ಟ್' ನ್ನು ಸಂಪಾದಿಸಿದ್ದು ಇವರ ಮಹತ್ತರ ಸಾಧನೆ. `ಋಗ್ವೇದ' ಸಂಪಾದಿಸಿದ ಹೆಗ್ಗಳಿಕೆಯೂ ಇವರಿಗಿದೆ.

No comments:

Post a Comment