Saturday, December 8, 2018

ಇಂದಿನ ಇತಿಹಾಸ History Today ಡಿಸೆಂಬರ್ 08

ಇಂದಿನ ಇತಿಹಾಸ History Today ಡಿಸೆಂಬರ್  08
2018: ಕೇಪ್ ಕೆನೆವರಾಲ್: ಮಂಗಳಗ್ರಹದಲ್ಲಿ ಬೀಸುವ ಗಾಳಿಯ ಸದ್ದನ್ನು ಭೂಮಿಯ ಮೇಲಿನ ಮಾನವರು ಇದೀಗ ಆಲಿಸಬಹುದು. ಕೆಂಪು ಗ್ರಹದಲ್ಲಿ ಇಳಿದಿರುವ ನಾಸಾದ  ಇನ್ ಸೈಟ್ ಲ್ಯಾಂಡರ್ ಮಂಗಳನ ಅಂಗಳದಲ್ಲಿ ಬೀಸುವ ಗಾಳಿಯ  ಸದ್ದನ್ನು ರೆಕಾರ್ಡ್ ಮಾಡಿ ಇದೇ ಮೊತ್ತ ಮೊದಲ ಬಾರಿಗೆ ಭೂಮಿಗೆ ಕಳುಹಿಸಿತು. ನವೆಂಬರ್ 26ರಂದು ಮಂಗಳ ಗ್ರಹದಲ್ಲಿ ಇಳಿದಿರುವ ನಾಸಾದ ಮಾನವ ರಹಿತ ಸಂಶೋಧನಾ ನೌಕೆ ಇನ್ ಸೈಟ್  ಅಲ್ಲಿ ಬೀಸುತ್ತಿರುವ 10-15 ಎಂಪಿ ಎಚ್ (ಸೆಕೆಂಡಿಗೆ 5-7 ಮೀಟರ್) ವೇಗದ ಗಾಳಿಯನ್ನು ತನ್ನ ಸೌರಫಲಕದ ಮೇಲೆ ಹಾದು ಹೋಗುವಾಗ ಧ್ವನಿಮುದ್ರಿಸಿಕೊಂಡು ಭೂಮಿಗೆ ರವಾನಿಸಿತು.  ಲ್ಯಾಂಡರ್ ಜೆಟ್ ಪ್ರೊಪಲ್ಷನ್ ಪ್ರಯೋಗಾಲಯ ಅನ್ಯಗ್ರಹದ ಗಾಳಿಯ ಸದ್ದಿನ ಧ್ವನಿಮುದ್ರಿಕೆಯನ್ನು 2018 ಡಿಸೆಂಬರ್ 7 ಶುಕ್ರವಾರ (ಭಾರತೀಯ ಕಾಲಮಾನದ ಪ್ರಕಾರ ಡಿಸೆಂಬರ್ 8 ಶನಿವಾರ) ಬಿಡುಗಡೆ ಮಾಡಿತು. ಮಂಗಳನ ಅಂಗಳದಲ್ಲಿ ಇಳಿದ ಮೊದಲ ವಾರವೇ ಅತ್ಯಂತ ಕ್ಷೀಣ ತರಂಗಗಳ ಧ್ವನಿಯನ್ನು ಗ್ರಹಿಸಿದ ಇನ್ಸೈಟ್ ಲ್ಯಾಂಡರ್ ಅದನ್ನು ದಾಖಲಿಸಿ ಭೂಮಿಗೆ ಕಳುಹಿಸಿತು. ಮಂಗಳನ ಮೊದಲ ಧ್ವನಿಯನ್ನು ಮಾನವನ ಕಿವಿಗೆ ಕೇಳಿಸುವಂತೆ ಮಾರ್ಸ್ ಲ್ಯಾಂಡರ್ ಸೆರೆ ಹಿಡಿದಿದೆ ಎಂದು ನಾಸಾದ ಸಂಶೋಧಕರು ಪ್ರಕಟಿಸಿದರು'ಇದು ಬೇಸಿಗೆ ಮಧ್ಯಾಹ್ನ ಹೊರಗೆ ಕುಳಿತಾಗ ಬೀಸುವ ಗಾಳಿಯ ಸದ್ದನ್ನು ನೆನಪಿಸುವಂತಿದೆ... ಮಂಗಳನ ಮೇಲಿರುವ ಇನ್ಸೈಟ್ ಲ್ಯಾಂಡರ್ ನೌಕೆಯಲ್ಲಿ ನೀವು ಕುಳಿತಿದ್ದರೆ ಸದ್ದು ಕೇಳಬಹುದು' ಎಂದು ಕಾರ್ನೆಲ್ ಯುನಿವರ್ಸಿಟಿಯ ಸಂಶೋಧಕ ಡಾನ್ ಬ್ಯಾನ್ಫೀಲ್ಡ್ ಸುದ್ದಿಗಾರರಿಗೆ ತಿಳಿಸಿದರು. ಧ್ವನಿ ಹೊರ ಜಗತ್ತಿನದ್ದೇ ಎಂಬುದರಲ್ಲಿ ಸಂದೇಹವಿಲ್ಲ ಎಂದು ಯೋಜನೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಒಪ್ಪಿಕೊಂಡರು.  'ಇದು ಭೂಮಿಯಲ್ಲಿ ನಾವು ಕೇಳುವ ಸದ್ದಿಗಿಂತ ಭಿನ್ನವಾಗಿದೆ. ಸಂಕೇತಗಳು ನಮ್ಮನ್ನು ತಲುವುವಾಗ ಇಷ್ಟು ಕ್ಷೀಣವಾಗಬೇಕಾದರೆ ನಾವು ಜಗತ್ತಿನಿಂದ ಅದೆಷ್ಟು ದೂರದಲ್ಲಿದ್ದೇವೆ ಎಂದು ಕಲ್ಪಿಸಿಕೊಳ್ಳಬಹುದು' ಎಂದು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಥೋಮಸ್ ಪೈಕ್ ಹೇಳಿದರು. ಇನ್ಸೈಟ್ ಸೌರ ಫಲಕಕ್ಕೆ ಎದುರಾಗಿ ಬೀಸುವ ಗಾಳಿಯ ಸದ್ದು ಅದು. ಗಾಳಿಗೆ ವೇಗಕ್ಕೆ ಇಡೀ ನೌಕೆ ಕಂಪಿಸುತ್ತಿದ್ದು ಅದರಿಂದ ಹೊಮ್ಮಿದ ಸದ್ದು ಅದಾಗಿರಬೇಕು. ಲ್ಯಾಂಡರ್ ಒಳಗೆ ಭೂಮಿಯ ಗಾಳಿಯ ಒತ್ತಡದಲ್ಲಿರುವ ಸೆನ್ಸರ್ಗಳು ಮುದ್ರಿಸಿಕೊಂಡ ಧ್ವನಿ ಸಂಕೇತಗಳಿವು ಎಂದು ವಿಜ್ಞಾನಿಗಳು ಹೇಳಿದರು. ಕ್ಷೀಣವಾದ ಈ ಸದ್ದನ್ನು ಹೆಡ್ ಪೋನ್ ಹಾಕಿಕೊಂಡು ಸ್ಪಷ್ಟವಾಗಿ ಕೇಳಿಸಿಕೊಳ್ಳಬಹುದು.  ಮಂಗಳದ ಗಾಳಿಯ ಆಡಿಯೊ ಟ್ರ್ಯಾಕ್ www.nasa.gov/insightmarswind ನಲ್ಲಿ ಲಭಿಸುತ್ತದೆ.


2018: ನವದೆಹಲಿ: ಸರ್ಜಿಕಲ್ ದಾಳಿಗಳ ’ಓವರ್ ಹೈಪ್’ (ಪ್ರಚಾರ) ಸೇನೆಗೆ ಯಾವ ರೀತಿಯ ನೆರವನ್ನೂ ನೀಡುವುದಿಲ್ಲ ಎಂಬುದಾಗಿ ಲೆಫ್ಟೆನೆಂಟ್ ಜನರಲ್ (ನಿವೃತ್ತ) ಡಿ.ಎಸ್. ಹೂಡಾ ಅವರು ನೀಡಿದ ಹೇಳಿಕೆಯಿಂದ ಇನ್ನಷ್ಟು ಹುರುಪು ಪಡೆದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆಯಾಗುವುದಿಲ್ಲ ಎಂದು ಮತ್ತೆ ಹರಿಹಾಯ್ದರು. ಪ್ರಧಾನಿ ಮೋದಿ ಅವರು ಸೇನೆಯು ೨೦೧೬ರಲ್ಲಿ ಗಡಿ ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ಸರ್ಜಿಕಲ್ ದಾಳಿಯನ್ನು ರಾಜಕೀಯ ಲಾಭಕ್ಕೆ ಬಳಸಿದ್ದಕ್ಕಾಗಿ ಅವರ ವಿರುದ್ಧ ಪದೇ ಪದೇ ದಾಳಿಗಳನ್ನು ನಡೆಸಿದ್ದ ರಾಹುಲ್,  ’ನಮ್ಮ ಸೇನೆಯನ್ನು ವೈಯಕ್ತಿಯ ಆಸ್ತಿಯಂತೆ ಬಳಸುವುದಕ್ಕೆ ಪ್ರಧಾನಿಯವರಿಗೆ ನಾಚಿಕೆಯಾಗುವುದಿಲ್ಲ’ ಎಂದು ಟ್ವೀಟ್ ಮಾಡಿದರು.  ’ನೈಜ ಯೋಧರಂತೆ ಮಾತನಾಡಿದ್ದೀರಿ ಜನರಲ್. ಭಾರತಕ್ಕೆ ನಿಮ್ಮ ಬಗ್ಗೆ ಹೆಮ್ಮೆ ಇದೆ. ಮಿಸ್ಟರ್ ೩೬ ಅವರಿಗೆ ನಮ್ಮ ಸೇನೆಯನ್ನು ತಮ್ಮ ವೈಯಕ್ತಿಕ ಆಸ್ತಿಯಂತೆ ಬಳಕೆ ಮಾಡಲು ನಾಚಿಕೆಯಾಗುವುದಿಲ್ಲ. ಅವರು ಸರ್ಜಿಕಲ್ ದಾಳಿಗಳನ್ನು ರಾಜಕೀಯ ಬಂಡವಾಳವಾಗಿ ಬಳಸಿದ್ದಾರೆ. ಮತ್ತು ರಫೇಲ್ ವಹಿವಾಟನ್ನು ಅನಿಲ್ ಅಂಬಾನಿ ಅವರ ನೈಜ ಬಂಡವಾಳವನ್ನು ೩೦,೦೦೦ ಕೋಟಿ ರೂಪಾಯಿಗಳಷ್ಟು ಏರಿಸಲು ಬಳಸಿದ್ದಾರೆ’ ಎಂದು ರಾಹುಲ್ ಗಾಂಧಿ ಟ್ವಟ್ಟರಿನಲ್ಲಿ ಬರೆದರು.  ಪ್ರಧಾನಿಯವರ ವಿರುದ್ಧ ಟೀಕಿಸುವಾಗ ’ಮಿಸ್ಟರ್ ೫೬’ ಪದ ಬಳಕೆ ಮಾಡುತ್ತಿದ್ದ ರಾಹುಲ್ ಅವರು ಈ ಬಾರಿ ೩೬ ರಫೇಲ್ ವಿಮಾನಗಳ ಉಲ್ಲೇಖದ ಸಲುವಾಗಿ ’ಮಿಸ್ಟರ್ ೩೬’ ಪದವನ್ನು ಬಳಸಿದರು. ಸಮಾರಂಭ ಒಂದರಲ್ಲಿ ಮಾತನಾಡುತ್ತಿದ್ದ ಜನರಲ್ ಹೂಡಾ ಅವರು ಉರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಲಾದ ಸರ್ಜಿಕಲ್ ದಾಳಿ ಕಾರ್‍ಯಾಚರಣೆಗಳ ನೇತೃತ್ವ ವಹಿಸಿದ್ದರು.  ಯಶಸ್ಸಿನ ಬಗ್ಗೆ ಆರಂಭಿಕ ಹಿಗ್ಗು ಸಹಜ, ಆದರೆ ಅದರ ಬಗೆಗಿನ ನಿರಂತರ ಹೈಪ್ ಅನಗತ್ಯವಾಗಿತ್ತು’ ಎಂದು ಜನರಲ್ ಹೂಡಾ ಹೇಳಿದ್ದರು. ’ಅತಿಯಾದ  ಹೈಪ್‌ನಿಂದ ಪ್ರಯೋಜನವಾಯಿತೇ? ನಾನು ಸಂಪೂರ್ಣವಾಗಿ ಇಲ್ಲ ಎಂದೇ ಹೇಳುತ್ತೇನೆ. ಸೇನಾ ಕಾರ್‍ಯಾಚರಣೆಗಳಲ್ಲಿ ನೀವು ರಾಜಕೀಯ ಅನುರಣನಗಳನ್ನು ಆರಂಭಿಸಿದರೆ, ಅದು ಒಳ್ಳೆಯದಲ್ಲ. ಸೇನಾ ಕಾರ್‍ಯಾಚರಣೆಗಳು ರಾಜಕೀಯಗೊಂಡರೆ, ಅದು ಒಳ್ಳೆಯದಲ್ಲ’ ಎಂದು ಅವರು ಹೇಳಿದ್ದರು. ಆಡಳಿತಾರೂಢ ಬಿಜೆಪಿಯು ಇತ್ತೀಚಿನ ಚುನಾವಣಾ ಭಾಷಣಗಳಲ್ಲಿ ಸೇನಾ ದಾಳಿಯನ್ನು ಬಳಸಿದ್ದಕ್ಕೆ ಮತ್ತು ಈ ವರ್ಷ ಸೆಪ್ಟೆಂಬರ್ ೨೯ರಂದು ’ಸರ್ಜಿಕಲ್ ದಾಳಿ ದಿನ’ ಆಚರಿಸಿದ್ದಕ್ಕೆ ಮಾಡಲಾಗಿರುವ ಆಕ್ಷೇಪ ಎಂಬುದಾಗಿ ಈ ಹೇಳಿಕೆಯನ್ನು ಅರ್ಥೈಸಲಾಯಿತು. ಸರ್ಜಿಕಲ್ ದಾಳಿಗಳನ್ನು ನಡೆಸಿದ ಸಂದರ್ಭದಲ್ಲಿ ಉತ್ತರದ ಸೇನಾ ಕಮಾಂಡರ್ ಆಗಿದ್ದ ಜನರಲ್ ಹೂಡಾ ಅವರು ’ಸೇನಾ ಕಾರ್‍ಯಾಚರಣೆಗಳ ಬಗ್ಗೆ ನಿರಂತರ ಹೈಪ್ ಮಾಡುವ ಅಗತ್ಯ ಇರಲಿಲ್ಲ’ ಎಂದೂ ಹೇಳಿದ್ದರು.  ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಜನರಲ್ ಹೂಡಾ ಅವರು ’ಅದನ್ನು (ಸರ್ಜಿಕಲ್ ದಾಳಿಗಳು) ನಾವು ರಹಸ್ಯವಾಗಿ ನಡೆಸಿದ್ದರೆ ಉತ್ತಮವಿತ್ತು. ಇಂತಹ ಯಾವುದೇ ದಾಳಿಗಳ ಗುರಿ ಯುದ್ಧ ತಂತ್ರವಷ್ಟೇ ಅಲ್ಲ ವ್ಯೂಹಾತ್ಮಕವೂ ಆಗಿರುತ್ತದೆ. ಅದು ವೈರಿಯ ನೈತಿಕ ಸ್ಥೈರ್ಯವನ್ನು  ಗಣನೀಯವಾಗಿ ಉಡುಗಿಸುತ್ತದೆ’ ಎಂದು ಹೇಳಿದರು.  ಕಳೆದ ವಾರ ರಾಜಸ್ಥಾನದ ಚುನಾವಣಾ ರ್‍ಯಾಲಿ ಒಂದರಲ್ಲಿ ರಾಹುಲ್ ಗಾಂಧಿ ಅವರು ಯುಪಿಎ ಅವಧಿಯಲ್ಲಿ ಸೇನೆಯು ಮೂರು ಸರ್ಜಿಕಲ್ ದಾಳಿಗಳನ್ನು ನಡೆಸಿತ್ತು, ಆದರೆ ಸೇನೆಯ ಕೋರಿಕೆ ಮೇರೆಗೆ ಅದನ್ನು ರಹಸ್ಯವಾಗಿಡಲಾಗಿತ್ತು ಎಂದು ಹೇಳಿದ್ದರು.  ’ನರೇಂದ್ರ ಮೋದಿ ಅವರ ಸರ್ಜಿಕಲ್ ದಾಳಿಯಂತಹ ದಾಳಿಗಳನ್ನು (ಮಾಜಿ ಪ್ರಧಾನಿ) ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಮೂರು ಬಾರಿ ನಡೆಸಲಾಗಿತ್ತು ಎಂಬುದು ನಿಮಗೆ ಗೊತ್ತೆ? ಸೇನೆಯು ಮನಮೋಹನ್ ಸಿಂಗ್ ಅವರ ಬಳಿಗೆ ಬಂದು ಪಾಕಿಸ್ತಾನದ ವಿರುದ್ಧ ನಾವು ಸೇಡು ತೀರಿಸುವ ಅಗತ್ಯವಿದೆ ಎಂದು ಹೇಳಿತ್ತು. ನಾವು ನಮ್ಮದೇ ಉದ್ದೇಶಗಳ ಸಲುವಾಗಿ ಅದನ್ನು ರಹಸ್ಯವಾಗಿ ಇರಿಸಬಯಸಿದ್ದೇವೆ ಎಂದೂ ಸೇನೆ ಹೇಳಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷರು ಪ್ರತಿಪಾದಿಸಿದ್ದರು.  ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನು ತಡೆಯುವ ಸಲುವಾಗಿ ಮೋದಿ ಅವರು  ಸರ್ಜಿಕಲ್ ದಾಳಿಗಳನ್ನು ದುರುಪಯೋಗಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆಪಾದಿಸಿದ್ದರು.
ವೈಯಕ್ತಿಕ ಗ್ರಹಿಕೆ, ಅದನ್ನು ಗೌರವಿಸುವೆ- ಜನರಲ್ ಬಿಪಿನ್ ರಾವತ್: ಈ ಮಧ್ಯೆ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಡಿ.ಎಸ್. ಹೂಡಾ ಹೇಳಿಕೆಯನ್ನು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ’ವೈಯಕ್ತಿಕ ಗ್ರಹಿಕೆ’ ಎಂದು ಹೇಳಿದರು. ೨೦೧೬ರ ಸೆಪ್ಟೆಂಬರ್ ೨೮ ಮತ್ತು ೨೯ರಂದು ನಡೆಸಲಾಗಿದ್ದ ಸರ್ಜಿಕಲ್ ದಾಳಿ ಬಗ್ಗೆ ’ಓವರ್ ಹೈಪ್’ ಅನಗತ್ಯವಾಗಿತ್ತು ಎಂಬುದಾಗಿ ಹೇಳುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದರು. ’ಇವು ವೈಯಕ್ತಿಕ ಗ್ರಹಿಕೆಗಳು. ಅವುಗಳ ಬಗ್ಗೆ ಟೀಕಿಸುವುದು ಬೇಡ’ ಎಂದು ಜನರಲ್ ರಾವತ್ ನುಡಿದರು. ’ಈ ದಾಳಿಗಳನ್ನು ನಡೆಸಿದ್ದ ಪ್ರಮುಖ ವ್ಯಕ್ತಿಗಳಲ್ಲಿ ಹೂಡಾ ಅವರೂ ಒಬ್ಬರಾಗಿದ್ದರು. ಆದ್ದರಿಂದ ನಾನು ಅವರ ಮಾತುಗಳನ್ನು ಅಪಾರವಾಗಿ ಗೌರವಿಸುವೆ’ ಎಂದು ಸೇನಾ ಮುಖ್ಯಸ್ಥರು ನುಡಿದರು.
  
2018: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರ ಬಳಿಕ ಸುಪ್ರೀಂಕೋರ್ಟಿನ ಇನ್ನೊಬ್ಬ ನ್ಯಾಯಮೂರ್ತಿಯವರು ಸೈಬರ್ ಅಪರಾಧಕ್ಕೆ ತುತ್ತಾದರು. ಅಪರಿಚಿತ ವ್ಯಕ್ತಿಯೊಬ್ಬ ನ್ಯಾಯಮೂರ್ತಿ ಮದನ್ ಭೀಮ್ ಲೋಕುರ್ ಅವರಂತೆ ನಟಿಸುತ್ತಾ ಆನ್‌ಲೈನ್ ಮೂಲಕ ಜಾಲತಾಣಿಗರರ ಮೇಲೆ ’ಪ್ರಭಾವ ಬೀರಿ’ ವಂಚಿಸುತ್ತಿರುವುದು ಬೆಳಕಿಗೆ ಬಂದಿತು. ಯಾರೋ ಒಬ್ಬ ವ್ಯಕ್ತಿ ಇಮೇಲ್ ಐಡಿಯನ್ನು  ಬಳಸಿಕೊಂಡು ಸುಪ್ರೀಂಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿಯಂತೆ ನಟಿಸುತ್ತಾ ಮಿಂಚಂಚೆ (ಇಮೇಲ್) ಸ್ವೀಕೃತಿದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದ್ದಾನೆ ಎಂದು ಸುಪ್ರೀಂಕೋರ್ಟಿನ ಕಂಪ್ಯೂಟರ್ ಸೆಲ್ ಡೆಪ್ಯುಟಿ ರಿಜಿಸ್ಟ್ರಾರ್ ಅವಧೇಶ್ ಕುಮಾರ್ ಅವರು ಪೊಲೀಸ್ ಕಮೀಷನರ್ ಅಮೂಲ್ಯ ಪಟ್ನಾಯಕ್ ಅವರಿಗೆ ಸಲ್ಲಿಸಿದ ತಮ್ಮ ದೂರಿನಲ್ಲಿ ತಿಳಿಸಿದರು. ದೆಹಲಿ ಪೊಲೀಸ್ ವಿಶೇಷ ದಳವು ಸದರಿ ಇಮೇಲ್ ಐಡಿಯನ್ನು ಬಳಸುತ್ತಿರುವ ವ್ಯಕ್ತಿಯ ಪತ್ತೆಗಾಗಿ ತನಿಖೆ ನಡೆಸುತ್ತಿದೆ. ಈ ಇಮೇಲ್ ಐಡಿಯು ಸುಪ್ರೀಂಕೋರ್ಟಿನ ನ್ಯಾಯಮೂರ್ತಿಯವರ ಇಮೇಲ್ ಐಡಿಯಂತೆಯೇ ಇದೆ ಎಂದು ಮೂಲಗಳು ಹೇಳಿದವು.  ನ್ಯಾಯಮೂರ್ತಿ ಲೋಕುರ್ ಅವರು ಬಿಹಾರದ ಮಕ್ಕಳ ಆಶ್ರಯಧಾಮಗಳಲ್ಲಿ ನಡೆದ ಅತ್ಯಾಚಾರ ಪ್ರಕರಣ ಸೇರಿದಂತೆ ಕೆಲವು ನಿರ್ಣಾಯಕ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೀಠದ ಮುಖ್ಯಸ್ಥರಾಗಿದ್ದರು. ಸದರಿ ಇಮೇಲ್ ಐಡಿಯಿಂದ ಮಿಂಚಂಚೆಗಳನ್ನು ಸ್ವೀಕರಿಸಿದ ಕೆಲವು ವ್ಯಕ್ತಿಗಳ ಇಮೇಲ್‌ಗಳನ್ನು ಅವಧೇಶ್ ಕುಮಾರ್ ಅವರು ತಮ್ಮ ದೂರಿನ ಜೊತೆಗೆ ಸಲ್ಲಿಸಿದ್ದಾರೆ. ಈ ಮಿಂಚಂಚೆಗಳ ಬಗ್ಗೆ ತಿಳಿದ ಬಳಿಕವಷ್ಟೇ ಅವಧೇಶ್ ಕುಮಾರ್ ಅವರಿಗೆ ಅಪರಾಧದ ಸುಳಿವು ಲಭಿಸಿದ್ದು, ಅವರು ಅದನ್ನು ನ್ಯಾಯಮೂರ್ತಿಯವರಿಗೆ ತಿಳಿಸಿ, ಬಳಿಕ ವಿಶೇಷ ಸೆಲ್‌ಗೆ ದೂರು ನೀಡಿದರು. ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದ್ದು, ವಿಶೇಷ ದಳವು ಪ್ರಕರಣದ ತನಿಖೆ ಆರಂಭಿಸಿತು. ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ ೬೬ಸಿ (ಕಳವು ಪತ್ತೆ) ಮತ್ತು ಸೆಕ್ಷನ್ ೬೬ ಡಿ (ಕಂಪ್ಯೂಟರ್ ಮೂಲವನ್ನು ಬಳಸಿಕೊಂಡು ಇನ್ನೊಬ್ಬ ವ್ಯಕ್ತಿಯಂತೆ ನಟಿಸುವ ಮೂಲಕ ವಂಚಿಸುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಮೂಲಗಳು ಹೇಳಿದವು. ಇಮೇಲ್ ಸೃಷ್ಟಿಸಿದ ವ್ಯಕ್ತಿಯ ಬಗ್ಗೆ ನಮಗೆ ಕೆಲವು ಸುಳಿವುಗಳು ಲಭಿಸಿವೆ. ಆದರೆ ಪ್ರಕರಣ ಸೂಕ್ಷ್ಮ ಸ್ವರೂಪದ್ದಾದ ಕಾರಣ ವಿವರಗಳನ್ನು ಬಹಿರಂಗ ಪಡಿಸುವಂತಿಲ್ಲ. ನಾವು ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಿದ್ದೇವೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ವಿಶೇಷ ದಳದ ಸೈಬರ್ ಅಪರಾಧ ಕೋಶದ ಇನ್‌ಸ್ಪೆಕ್ಟರ್ ಭಾನುಪ್ರತಾಪ್ ನೇತೃತ್ವದ ತಂಡವು ಪ್ರಕರಣದ ತನಿಖೆ ನಡೆಸಿತು. ತಿಂಗಳ ಹಿಂದೆ ಇದೇ ರೀತಿ ನಕಲಿ ವ್ಯಕ್ತಿಯೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರಂತೆ ನಟಿಸಿ ಟ್ವಿಟರ್ ಖಾತೆ ಸೃಷ್ಟಿಸಿ ಅದರಲ್ಲಿ ಅವಹೇಳನಕಾರಿ ಮಾಹಿತಿಯನ್ನು ಪ್ರಕಟಿಸಿದ್ದ. ಪೊಲೀಸರಿಗೆ ಈ ಪ್ರಕರಣದಲ್ಲೂ ಹೆಚ್ಚಿನ ಪ್ರಗತಿ ಸಾಧಿಸಲು ಈವರೆಗೂ ಸಾಧ್ಯವಾಗಿಲ್ಲ. ನ್ಯಾಯಮೂರ್ತಿ ಮದನ್ ಲೋಕುರ್ ಮತ್ತು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ (ಆಗ ನ್ಯಾಯಮೂರ್ತಿ) ಅವರು ಈ ವರ್ಷದ ಆದಿಯಲ್ಲಿ ಆಗ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಕ್ ಮಿಶ್ರ ವಿರುದ್ಧ ಚಾರಿತ್ರಿಕ ಪತ್ರಿಕಾಗೋಷ್ಠಿ ನಡೆಸಿದ್ದ ಸುಪ್ರೀಂಕೋರ್ಟಿನ ನಾಲ್ವರು ನ್ಯಾಯಮೂರ್ತಿಗಳಲ್ಲಿ ಇಬ್ಬರಾಗಿದ್ದಾರೆ ಎಂಬುದನ್ನು ಇಲ್ಲಿ ಗಮನಿಸಬಹುದು.

2018: ಲಕ್ನೋ/ ಶ್ರೀನಗರ: ಉತ್ತರ ಪ್ರದೇಶದ ಮಹ್ವಾ ಗ್ರಾಮದಲ್ಲಿ ಡಿಸೆಂಬರ್ ೩ರಂದು ಗೋವುಗಳ ಮೃತದೇಹಗಳು ಪತ್ತೆಯಾದ ಬಳಿಕ ಸಂಭವಿಸಿದ ಹಿಂಸಾಚಾರಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಬುಲಂದಶಹರ್ ಜಿಲ್ಲೇ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕೆ.ಬಿ. ಸಿಂಗ್ ಅವರನ್ನು ಸರ್ಕಾರವು ವರ್ಗಾವಣೆ ಮಾಡಿದ ಬೆನ್ನಲ್ಲೇ, ಸೇನೆಯು ಪೊಲೀಸ್ ಇನ್‌ಸ್ಪೆಕ್ಟರ್ ಕೊಲೆ ಆರೋಪಕ್ಕೆ ಗುರಿಯಾಗಿರುವ ಯೋಧನನ್ನು ಉತ್ತರ ಪ್ರದೇಶ ಪೊಲೀಸರಿಗೆ ಒಪ್ಪಿಸಿತು. ಗುಂಪು ಹಿಂಸಾಚಾರದ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್ ಸುಬೋಧ ಕುಮಾರ್ ಸಿಂಗ್ ಅವರಿಗೆ ಗುಂಡು ಹಾರಿಸಿದ ಆರೋಪಕ್ಕೆ ಗುರಿಯಾಗಿರುವ ರಾಷ್ಟ್ರೀಯ ರೈಫಲ್ಸ್ ಕಾಶ್ಮೀರ ಘಟಕದ ಯೋಧ ಜೀತೇಂದ್ರ ಮಲಿಕ್ ಯಾನೆ ಜೀತು ಫೌಜಿಯನ್ನು ರಾಷ್ಟ್ರೀಯ ರೈಫಲ್ಸ್ ಘಟಕವು ತನಿಖೆಯ ಸಲುವಾಗಿ ಉತ್ತರ ಪ್ರದೇಶ ಪೊಲೀಸರಿಗೆ ಒಪ್ಪಿಸಿದೆ ಎಂದು ವರದಿಗಳು ತಿಳಿಸಿದವು. ಇದಕ್ಕೆ ಮುನ್ನ ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರಪ್ರದೇಶದ ಪೊಲೀಸ್ ತಂಡವು ಯೋಧನನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಸೇನೆಯನ್ನು ಸಂಪರ್ಕಿಸಿ ಮನವಿ ಮಾಡಿತ್ತು.  ಮಲಿಕ್ ಯಾನೆ ಜೀತು ಫೌಜಿಯನ್ನು ಪೊಲೀಸರಿಗೆ ಒಪ್ಪಿಸಲು ಸೇನೆಯ ಉನ್ನತ ಅಧಿಕಾರಿಗಳಿಂದ ಒಪ್ಪಿಗೆ ಲಭಿಸಿದ ಬಳಿಕ ಆತನನ್ನು ಪೊಲೀಸರಿಗೆ ಹಸ್ತಾಂತರಿಸಲು ನಿರ್ಧರಿಸಲಾಯಿತು ಎಂದು ಮೂಲಗಳು ಹೇಳಿದವು.  ಶ್ರೀನಗರದಲ್ಲಿನ ರಕ್ಷಣಾ ವಕ್ತಾರರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಡಿಸೆಂಬರ್ ೩ರಂದು ಪೊಲೀಸ್ ಇನ್‌ಸ್ಪೆಕ್ಟರ್ ಸುಬೋಧ ಸಿಂಗ್ ಅವರ ಸಾಲಿಗೆ ಕಾರಣವಾದ ಬುಲಂದಶಹರ್ ಹಿಂಸಾಚಾರದಲ್ಲಿ ಆರೋಪಿ ಎಂಬುದಾಗಿ ಹೆಸರಿಸಲಾಗಿರುವ ಯೋಧ ಜಿತೇಂದ್ರ ಮಲಿಕ್ ಯಾತು ಜೀತು ಫೌಜಿಯನ್ನು ಗುರುತಿಸುವಂತೆ ಉತ್ತರಪ್ರದೇಶ ಪೊಲೀಸರು ಸೇನೆಯ ಉತ್ತರ ಕಮಾಂಡ್ ಘಟಕವನ್ನು ಸಂಪರ್ಕಿಸಿ ಕೋರಿದ್ದಾರೆ ಎಂದು ಇದಕ್ಕೆ ಮುನ್ನ ಸೇನಾ ಮೂಲಗಳು ಹೇಳಿದ್ದವು.   ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸೇನೆಯು ಪೊಲೀಸರೊಂದಿಗೆ ಸಂಪೂರ್ಣವಾಗಿ ಸಹಕರಿಸುವುದು ಎಂದು ಹೇಳಿದ್ದರು. ’ಪೊಲೀಸರ ಬಳಿ ಸಾಕ್ಷ್ಯಾಧಾರವಿದ್ದರೆ ಮತ್ತು ಪೊಲೀಸರು ಆತನ ಬಗ್ಗೆ ಶಂಕಿಸುವುದಾದರೆ, ನಾವು ಆತನನ್ನು ಅವರ ಎದುರು ಹಾಜರು ಪಡಿಸುತ್ತೇವೆ. ನಾವು ಪೊಲೀಸರ ಜೊತೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ರಾವತ್ ತಿಳಿಸಿದ್ದರು.  ಎಸ್ ಎಸ್ ಪಿ ವರ್ಗಾವಣೆ: ಲಕ್ನೋ ವರದಿ: ಉತ್ತರ ಪ್ರದೇಶದ ಮಹ್ವಾ ಗ್ರಾಮದಲ್ಲಿ ಡಿಸೆಂಬರ್ ೩ರಂದು ಗೋವುಗಳ ಮೃತದೇಹಗಳು ಪತ್ತೆಯಾದ ಬಳಿಕ ಸಂಭವಿಸಿದ ಹಿಂಸಾಚಾರಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಬುಲಂದಶಹರ್ ಜಿಲ್ಲೇ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕೆ.ಬಿ. ಸಿಂಗ್ ಅವರನ್ನು ಸರ್ಕಾರವು ವರ್ಗಾವಣೆ ಮಾಡಿತು.  ಇದಕ್ಕೆ ಮುನ್ನ ಸ್ಯಾನಾ ಸರ್ಕಲ್ ಅಧಿಕಾರಿ ಸತ್ಯ ಪ್ರಕಾಶ್ ಶರ್ಮ ಮತ್ತು ಚಿಂಗ್ರಾವಥಿ ಪೊಲೀಸ್ ಹೊರಠಾಣಾ ಉಸ್ತುವಾರಿ ಅಧಿಕಾರಿ ಸುರೇಶ್ ಕುಮಾರ್ ಅವರನ್ನು ಕರ್ತ್ಯವ್ಯ ಚ್ಯುತಿಗಾಗಿ ವರ್ಗಾವಣೆ ಮಾಡಲಾಗಿತ್ತು. ಶರ್ಮ ಅವರನ್ನು ಮೊರಾದಾಬಾದಿನ ಪೊಲೀಸ್ ತರಬೇತಿ ಕೇಂದ್ರಕ್ಕೆ ಕಳುಹಿಸಿದರೆ, ಕುಮಾರ್ ಅವರನ್ನು ಹಮೀರಪುರಕ್ಕೆ ವರ್ಗಾವಣೆ ಮಾಡಲಾಗಿತ್ತು.  ಕೆಬಿ ಸಿಂಗ್ ಅವರನ್ನು ಲಕ್ನೋ ಕೇಂದ್ರ ಕಚೇರಿಯಲ್ಲಿನ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಕಚೇರಿ ವ್ಯಾಪ್ತಿಗೆ ವರ್ಗಾವಣೆ ಮಾಡಲಾಗಿದೆ. ಪ್ರಭಾಕರ ಚೌಧರಿ ಅವರನ್ನು ಬುಲಂದ ಶಹರ್ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಆಗಿ ನಿಯೋಜಿಸಲಾಯಿತು ಎಂದು ಗೃಹ ಇಲಾಖಾ ಮುಖ್ಯ ಕಾರ್‍ಯದರ್ಶಿ ಅರವಿಂದ ಕುಮಾರ್ ಹೇಳಿದರು.  ಚೌಧರಿ ಅವರು ಪ್ರಸ್ತುತ ಸೀತಾಪುರದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಇನ್ನೊಬ್ಬ ಐಪಿಎಸ್ ಅಧಿಕಾರಿ ಎಲ್. ಆರ್. ಕುಮಾರ್ ಅವರನ್ನು ಸೀತಾಪುರದ ನೂತನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್‌ಪಿ) ನೇಮಿಸಲಾಯಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗೃಹಖಾತೆಯ ಮುಖ್ಯ ಕಾರ್‍ಯದರ್ಶಿ ಅರವಿಂದ ಕುಮಾರ್ ಮತ್ತು ಡಿಜಿಪಿ ಒಪಿ ಸಿಂಗ್ ಅವರ ಜೊತೆಗೆ ಸಭೆ ನಡೆಸಿದ ಬಳಿಕ ರಾಜ್ಯದ ಉನ್ನತ ಅಧಿಕಾರಿಗಳು ಕ್ಷಿಪ್ತ ಕಾರ್‍ಯಾಚರಣೆ ಆರಂಭಿಸಿದರು.  ಗುಪ್ತಚರ ಇಲಾಖೆಯ ಎಡಿಜಿ ಎಸ್.ಬಿ. ಶಿರೋಡ್ಕರ್ ಅವರು ಡಿಸೆಂಬರ್ ೩ರ ಹಿಂಸಾಚಾರ ಕುರಿತು ವರದಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ಈ ಸಭೆಯನ್ನು ನಡೆಸಿದ್ದರು. ಡಿಸೆಂಬರ್ ೩ರ ಹಿಂಸಾಚಾರದಲ್ಲಿ ಸ್ಯಾನಾ ಪೊಲೀಸ್ ಇನ್‌ಸ್ಪೆಕ್ಟರ್ ಸುಬೋಧ ಕುಮಾರ ಸಿಂಗ್ ಮತ್ತು ಸ್ಥಳೀಯ ಯುವಕ ಸುಮಿತ್ ಕುಮಾರ್ ಗುಂಡೇಟಿಗೆ ಬಲಿಯಾಗಿದ್ದರು.  ಈ ಮಧ್ಯೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬುಲಂದಶಹರ್ ಘಟನೆ ಒಂದು ಆಕಸ್ಮಿಕ ಘಟನೆ ಎಂದು ಹೇಳಿದ್ದರು. ಅದಕ್ಕೂ ಮುನ್ನ ಭಾರೀ ಸಂಚಿನ ಫಲಶ್ರುತಿಯಾಗಿ ಸಂಭವಿಸಿದ ಘಟನೆ ಇದು ದೆಹಲಿಯಲ್ಲಿ ಹೇಳಿದ್ದರು.  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ೯ ಮಂದಿ ಆರೋಪಿಗಳನ್ನು ಬಂಧಿಸಿದ್ದರು.  ಆದರೆ ಮುಖ್ಯ ಆರೋಪಿ, ಜಿಲ್ಲಾ ಬಜರಂಗ ದಳದ ಸಂಚಾಲಕ ಯೋಗೇಶ್ ರಾಜ್ ಈವರೆಗೂ ಪೊಲೀಸರಿಗೆ ಸಿಗಲಿಲ್ಲ.


2018: ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಪುತ್ರಿ ಇಶಾ ಅಂಬಾನಿ ಮದುವೆ ಸಡಗರ ಉದಯಪುರದಲ್ಲಿ ಆರಂಭವಾಯಿತು. ಪ್ರಮುಖ ರಾಜಕಾರಣಿಗಳು, ಚಿತ್ರ ನಟ ನಟಿಯರಲ್ಲದೆ ೫೦೦ಕ್ಕೂ ಹೆಚ್ಚು ಜಾಗತಿಕ ಸಿಇಒಗಳ ಆಗಮನದೊಂದಿಗೆ ಉದಯಪುರವು ದಾವೋಸ್ ಆಗಿ ಪರಿವರ್ತನೆಗೊಂಡಿತು. ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್, ಬಿಪಿ ಗ್ರೂಪ್ ಮುಖ್ಯ ಎಕ್ಸಿಕ್ಯೂಟಿವ್ ಬಾಬ್ ಡುಡ್ಲೆ, ೨೧ನೇ ಶತಮಾನದ ಫಾಕ್ಸ್ ಸಿಇಒ ಜೇಮ್ಸ್ ಮುರ್ಡೋಕ್ ಮತ್ತು ಡಿಯಾಗಿಯೋ ಸಿಇಒ ಇವಾನ್ ಮೆನೆಜೆಸ್ ಸೇರಿದಂತೆ ಹಲವು ಸಿಇಒಗಳು ಇಶಾ ಅಂಬಾನಿ ಮದುವೆ ಸಡಗರಕ್ಕೆ ಸಾಕ್ಷಿಗಳಾಗಲು ಆಗಮಿಸಿದರು. ೨೭ರ ಹರೆಯದ ಇಶಾ ಅಂಬಾನಿ ಅವರ ಮದುವೆ ೩೩ರ ಹರೆಯದ ಪಿರಮಲ್ ಗ್ರೂಪ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆನಂದ ಪಿರಮಲ್ ಜೊತೆಗೆ ಮುಂಬೈಯಲ್ಲಿ ನಡೆಯಲಿದೆ. ಆದರೆ ಮದುವೆ ಮುಂಚಿನ ಸಡಗರದ ಧಾರ್ಮಿಕ ವಿಧಿಗಳು ರಾಜಸ್ಥಾನದ ’ಸರೋವರಗಳ ನಗರ’ ಉದಯಪುರದಲ್ಲಿ ಮೂರು ದಿನ ಮೊದಲೇ ಶುರುವಾಯಿತು. ಸೌದಿ ಆರ್ಮಾಕೊದ ಅಧ್ಯಕ್ಷ ಖಲೀದ್ ಅಲ್-ಫಲೀಹ್, ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಸಿಇಒ ಬಿಲ್ ವಿಂಟರ್ಸ್, ಡಬ್ಲ್ಯೂ ಪಿಪಿ ಸ್ಥಾಪಕ ಮಾರ್ಟಿನ್ ಸೋರೆಲ್, ಗೋಲ್ಡಮನ್ ಸ್ಯಾಚ್ಸ್ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ ಕೆನ್ನೆತ್ ಹಿಚ್ನರ್, ಜೆಪಿ ಮಾರ್ಗನ್ ಏಷ್ಯಾ ಫೆಸಿಫಿಕ್ ಅಧ್ಯಕ್ಷ ಹಾಗೂ ಸಿಇಒ ನಿಕೋಲಸ್ ಅಕ್ವಿಜಿನ್, ಎಎನ್‌ಝಡ್ ಗ್ರೂಪ್ ಎಕ್ಸಿಕ್ಯೂಟಿವ್ ಇಂಟರ್ ನ್ಯಾಷನಲ್ ಫರ್‍ಹಾನ್ ಫರೂಖಿ, ವರ್ಲ್ಡ್ ಇಕನಾಮಿಕ್ ಫೋರಂ ಸ್ಥಾಪಕ ಕ್ಲೌಸ್ ಶ್ವಾವಾಬ್, ಹಫಿಂಗ್ಟನ್ ಪೋಸ್ಟ್ ಸ್ಥಾಪಕ ಅರಿಯನ್ನ ಹಫಿಂಗ್ಟನ್, ನೋಕಿಯಾ ಸಿಇಒ ರಾಜೀವ್ ಸುರಿ ಆಗಮಿಸಿರುವ ಜಾಗತಿಕ ಗಣ್ಯರಲ್ಲಿ ಕೆಲವರು. ಗಣ್ಯರ ಪಟ್ಟಿ ಇಲ್ಲಿಗೆ ಮುಗಿದಿಲ್ಲ. ಅಮೆರಿಕದ ಮಾಜಿ ವಿದೇಶಾಂಗ ಕಾರ್‍ಯದರ್ಶಿ ಮತ್ತು ೨೦೧೬ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಾಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡಾ ಪಟ್ಟಿಯಲ್ಲಿ ಸೇರಿದ್ದಾರೆ. ಅಮೆರಿಕದ ಗಾಯಕ ಬೆಯೋನ್ಸ್ ಗಾಯನ ನಡೆಸಿಕೊಡುವರು.  ಚಿತ್ರೋದ್ಯಮ, ಕ್ರೀಡಾ ಮತ್ತಿತರ ಕ್ಷೇತ್ರಗಳ ಪ್ರಮುಖರ ಪೈಕಿ ಅನಿಲ್ ಕಪೂರ್, ಡೇವಿಡ್ ಧವನ್, ವಿದ್ಯಾ ಬಾಲನ್ - ಸಿದ್ಧಾರ್ಥ ರಾಯ್ ಕಪೂರ್, ಜಾನ್ ಅಬ್ರಹಾಂ-ಪ್ರಿಯ ರುಂಚಲ್, ಜಾವೇದ್ ಜಾಫ್ರಿ, ಸಚಿನ್ ತೆಂಡೂಲ್ಕರ್-ಅಂಜಲಿ ತೆಂಡೂಲ್ಕರ್, ಪ್ರಿಯಾಂಕಾ ಚೋಪ್ರಾ-ನಿಕ್ ಜೋನಸ್, ಸಾಕ್ಷಿ ಸಿಂಗ್ ಧೋನಿ, ಸಾಕ್ಷಿಯಪುತ್ರಿ ಝಿವಾ ಈಗಾಗಲೇ ಕಾಣಿಸಿಕೊಂಡಿದ್ದರು.
2017: ಬೆಂಗಳೂರುಶ್ರವಣ ಬೆಳಗೊಳ ಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಅವರನ್ನು 2017ನೇ ಸಾಲಿನ ಮಹಾವೀರ ಶಾಂತಿ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು. 44 ವರ್ಷಗಳಿಂದ ಶ್ರವಣ ಬೆಳಗೊಳದ ಮಠದ ಪೀಠಾಧ್ಯಕ್ಷರಾಗಿ ಜನಹಿತ ಮತ್ತು ಆಧ್ಯಾತ್ಮಿಕ ಕೈಂಕರ್ಯದಲ್ಲಿ ತೊಡಗಿರುವ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯರು ಶ್ರವಣ ಬೆಳಗೊಳದಲ್ಲಿ ಪ್ರಾಕೃತ ಅಧ್ಯಯನನ ಸಂಸ್ಥೆ ಸ್ಥಾಪನೆ ಮಾಡಿದ್ದಾರೆ. ಅನೇಕ ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ. ಅನ್ನದಾಸೋಹ ಮತ್ತು ಜ್ಞಾನದಾಸೋಹ ಎರಡನ್ನೂ ನಡೆಸುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸಿದ್ದಾರೆ. ಧಾರ್ಮಿಕ ಸಭೆಗಳ ಜತೆ ಸಾಹಿತ್ಯ ಸಭೆಗಳನ್ನೂ ಆಯೋಜಿಸಿದ್ದಾರೆ. ಮಠವನ್ನು ಸಾಮಾಜಮುಖಿಯಾಗಿ ನಡೆಸುವಲ್ಲಿ ಶ್ರಮಿಸಿದ್ದಾರೆ.  ಪ್ರಶಸ್ತಿಯು ರೂ.10 ಲಕ್ಷ ನಗದು, ಸ್ಮರಣಿಕೆ ಹಾಗೂ ಫಲಕಗಳನ್ನು ಒಳಗೊಂಡಿದೆ. ಹಿರಿಯ ಸಾಹಿತಿ ಜಿನದತ್ತ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಸಮಿಯು ಆಯ್ಕೆ ಮಾಡಿದೆ. ಪ್ರಶಸ್ತಿಯನ್ನು ಮಹಾವೀರ ಜಯಂತಿಯ ಸಂದರ್ಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು. ಜಾನಪದ ಶ್ರೀ ಪ್ರಶಸ್ತಿ ಎರಡಕ್ಕೆ ಹೆಚ್ಚಳ
ಜಾನಪದ ಕ್ಷೇತ್ರದದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾಗುವ ಜಾನಪದ ಶ್ರೀ ಪ್ರಶಸ್ತಿಯನ್ನು ಪ್ರತಿ ವರ್ಷ ಒಬ್ಬರಿಗೆ ನೀಡಲಾಗುತ್ತಿತ್ತು. ಜಾನಪದ ಕ್ಷೇತ್ರದ ವೈಶಾಲ್ಯತೆಯನ್ನು ಗಮನದಲ್ಲಿಸಿರಿಕೊಂಡು ಪ್ರಶಸ್ತಿ ಸಂಖ್ಯೆಯನ್ನು ಪ್ರಸಕ್ತ ವರ್ಷದಿಂದ ಎರಡಕ್ಕೆ ಹೆಚ್ಚಿಸಲಾಗಿದೆ ಎಂದು ಉಮಾಶ್ರೀ ಹೇಳಿದರು. 


2017: ಭಭಾರ್ (ಗುಜರಾತ್): ಅಮಾನತುಗೊಂಡಿರುವ ಕಾಂಗೆಸ್ ನಾಯಕ ಮಣಿ ಶಂಕರ ಅಯ್ಯರ್ ಅವರು ಪಾಕಿಸ್ತಾನ ಭೇಟಿ ಕಾಲದಲ್ಲಿ  ಸುಪಾರಿ ನೀಡುವ ಮೂಲಕ ನನ್ನನ್ನು ಮಾರ್ಗದಿಂದಕಿತ್ತು ಹಾಕಲು ಬಯಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಇಲ್ಲಿ ಆಪಾದಿಸಿದರು. ಭಾರತ ಮತ್ತು ನೆರೆಯ ರಾಷ್ಟ್ರವಾದ ಪಾಕಿಸ್ತಾನದ ಮಧ್ಯೆ ಶಾಂತಿ ಖಚಿತಗೊಳಿಸಲು ಮೋದಿ ಅವರನ್ನು ಮಾರ್ಗದಿಂದ ಕಿತ್ತು ಹಾಕಬೇಕು ಎಂದು ಅಯ್ಯರ್ ಬಯಸಿದ್ದರು ಎಂದು ಮೋದಿ ಹೇಳಿದರು. ಪ್ರಧಾನಿ ವಿರುದ್ಧನೀಚ ವ್ಯಕ್ತಿ ಪದ ಬಳಕೆಗಾಗಿ ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುವ ರಾಜತಾಂತ್ರಿಕ -ರಾಜಕಾರಣಿ ಅಯ್ಯರ್ ವಿರುದ್ಧ ಎರಡು ದಿನಗಳಲ್ಲಿ ಎರಡನೇ ಬಾರಿ ವಾಕ್  ಪ್ರಹಾರ ನಡೆಸಿದ ಮೋದಿ, ಕಾಂಗ್ರೆಸ್ ಪಕ್ಷವು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದು, ಅಯ್ಯರ್  ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ ಎಂದು ದೂರಿದರು. ಕಾಂಗ್ರೆಸ್ ಕಾರ್ಯವೈಖರಿ ಮೇಲೆ ದಾಳಿ ನಡೆಸಿದ ಮೋದಿ, ಪಕ್ಷವುಅಟ್ಕ್ಕಾನ (ತಡೆ ಹಿಡಿಯುವುದು), ’ಲಟ್ಕಾನ(ವಿಷಯವನ್ನು ನನೆಗುದಿಯಲ್ಲಿ ಇಡುವುದು) ಮತ್ತುಭಟ್ಕಾನ (ವಿಷಯಾಂತರ ಮಾಡುವುದು) ಸಿದ್ಧಾಂತದಲ್ಲಿ ನಂಬಿಕೆ ಇಟ್ಟುಕೊಂಡಿದೆ ಎಂದು ವ್ಯಂಗ್ಯವಾಡಿದರು. ಅಯ್ಯರ್ ಅವರು ಮೋದಿ ಅವರನ್ನುನೀಚ ವ್ಯಕ್ತಿ ಎಂಬುದಾಗಿ ಮಾಡಿದ ಟೀಕೆ ರಾಜಕೀಯ ಬಿರುಗಾಳಿ ಎಬ್ಬಿಸಿದ ಒಂದು ದಿನದ ಬಳಿಕ ಪ್ರಧಾನಿಯವರಿಂದ ಆಪಾದನೆ ಬಂದಿದೆ. ಕಾಂಗ್ರೆಸ್ ಪಕ್ಷವು ಅಯ್ಯರ್ ಅವರನ್ನುನೀಚ ಪದ ಬಳಕೆಗಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಶೋಕಾಸ್  ನೋಟಿಸ್ ಜಾರಿ ಮಾಡಿತ್ತು. ‘ಶ್ರೀಮಾನ್ ಮಣಿ ಶಂಕರ ಅಯ್ಯರ್, ಅವರು ಏನು ಮಾಡಿದ್ದಾರೆ ಎಂಬುದು ನಿಮಗೆ ಗೊತ್ತೆ? ಅವರು ನಿಂದನೆಯನ್ನು ನನ್ನ ಮೇಲೆ ಮಾಡಿದ್ದಾರೋ ಅಥವಾ ನಿಮ್ಮ ಮೇಲೋ? ಅವರು ನನ್ನನ್ನು ನಿಂದಿಸಿದ್ದಾರೋ ಅಥವಾ ಗುಜರಾತನ್ನೋ? ಅವರು ಭಾರತದ ಸಭ್ಯ ಸಮಾಜವನ್ನು ನಿಂದಿಸಿದ್ದಾರೋ ಅಥವಾ ನನ್ನನ್ನೋ?’ ಎಂದು ಪ್ರಧಾನಿ ಉತ್ತರ ಗುಜರಾತಿನ ಬನಸ್ಕಾಂತ ಜಿಲ್ಲೆಯ ಪುಟ್ಟ ಪಟ್ಟಣದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಶ್ನಿಸಿದರು. ‘ ನಿಂದನೆಯ ಬಗ್ಗೆ ಮಾತನಾಡುವುದು ಬೇಡ, ಏಕೆಂದರೆ ಗುಜರಾತಿನ ಜನತೆ ಅದನ್ನು ಗಮನಿಸುತ್ತಾರೆ ಮತ್ತು ಉತ್ತರ ನೀಡುತ್ತಾರೆ. ಅವರು (ಕಾಂಗ್ರೆಸ್) ಡಿಸೆಂಬರ್ ೧೮ರಂದು ಫಲಿತಾಂಶವನ್ನು ತಿಳಿಯುತ್ತಾರೆ ಎಂದು ಮೋದಿ ನುಡಿದರು. ‘ಆದರೆ, ನಾನು ಪ್ರಧಾನಿಯಾದ ಬಳಿಕ, ವ್ಯಕ್ತಿ (ಅಯ್ಯರ್) ಪಾಕಿಸ್ತಾನಕ್ಕೆ ಹೋದರು ಮತ್ತು ಕೆಲವು ಪಾಕಿಸ್ತಾನೀಯರನ್ನು ಭೇಟಿ ಮಾಡಿದರು. ವಿವರಗಳೆಲ್ಲ ಸಾಮಾಜಿಕ ಜಾಲತಾಣದಲ್ಲಿ ಸಿಗುತ್ತವೆ. ಭೇಟಿ ಕಾಲದಲ್ಲಿ ಅವರು ಪಾಕಿಸ್ತಾನೀಯರ ಜೊತೆಗೆ ಮಾತನಾಡುತ್ತಾಎಲ್ಲಿಯವರೆಗೆ ಮೋದಿಯನ್ನು ರಸ್ತೆಯಿಂದ ತೊಲಗಿಸಲಾಗುವುದಿಲ್ಲವೋ ಅಲ್ಲಿಯವರೆಗೆ ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ಸುಧಾರಿಸಲು ಸಾಧ್ಯವಿಲ್ಲ ಎಂದು ಹೇಳಿದರು ಎಂದು ಮೋದಿ ವಿವರಿಸಿದರು. ‘ರಸ್ತೆಯಿಂದ ತೊಲಗಿಸುವ ಸಭೆಯ ಕಥೆ ಏನು ಎಂದು ಕೆಲವರು ನನ್ನ ಬಳಿ ಕೇಳಿದ್ದಾರೆ. ನೀವು ಪಾಕಿಸ್ತಾನಕ್ಕೆ ನನ್ನಸುಪಾರಿ ಕೊಡಲು ಹೋಗಿದ್ದಿರಿ, ನೀವು ಮೋದಿಯಸುಪಾರಿ’ ಕೊಡಬಯಸಿದ್ದಿರಿ ಎಂದು ಪ್ರಧಾನಿ ಹೇಳಿದರು. ಆದರೆ ಜನ ಚಿಂತಿಸಬೇಕಿಲ್ಲ. ಏಕೆಂದರೆ ಮಾ ಅಂಬೆ ನನ್ನನ್ನು ರಕ್ಷಿಸುತ್ತಿದ್ದಾಳೆ ಎಂದು ಅವರು ನುಡಿದರು. ‘ ಸಂಭಾಷಣೆ ಮೂರು ವರ್ಷಗಳ ಹಿಂದೆ ನಡೆದಿದೆ. ಕಾಂಗ್ರೆಸ್ ಪಕ್ಷವು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದೆ. ಕಳೆದ ಮೂರು ವರ್ಷಗಳಲ್ಲಿ ಅವರು ಯಾವ ಕ್ರಮವನ್ನೂ ಕೈಗೊಂಡಿಲ್ಲ ಎಂದು ಮೋದಿ ಆಪಾದಿಸಿದರು. ‘ನನ್ನ ಅಪರಾಧ ಏನು? ರಾಷ್ಟ್ರದ ಜನ ನನ್ನನ್ನು ಪ್ರಜಾಪ್ರಭುತ್ವದ ಮಾರ್ಗದಲ್ಲಿ ಚುನಾಯಿಸಿದರು ಮತ್ತು ನೀವು ಪಾಕಿಸ್ತಾನಕ್ಕೆ ಹೋಗಿ ವ್ಯಕ್ತಿ ಮಾರ್ಗಕ್ಕೆ ಅಡ್ಡಿಯಾಗುತ್ತಿದ್ದಾನೆ, ಅವನನ್ನು ನಿವಾರಿಸಿ!’ ಎಂದು ಹೇಳುತ್ತೀರಿ ಎಂದು ಮೋದಿ ವಾಕ್  ಪ್ರಹಾರ ನಡೆಸಿದರು.
2017: ಇಸ್ಲಾಮಾಬಾದ್: ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಡಿಸೆಂಬರ್ ೨೫ರಂದು ತನ್ನ ಪತ್ನಿ ಮತ್ತು ತಾಯಿಯನ್ನು ಭೇಟಿ ಮಾಡಲು ಅವಕಾಶ ನೀಡುವುದಾಗಿ ಪಾಕಿಸ್ತಾನ ತಿಳಿಸಿತು. ೪೭ರ ಹರೆಯದ ಜಾಧವ್ ಅವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯವು ಏಪ್ರಿಲ್ ತಿಂಗಳಲ್ಲಿ ಗೂಢಚರ್ಯೆ ಮತ್ತು ಭಯೋತ್ಪಾದನೆಯ ಆಪಾದನೆಗಾಗಿ ಮರಣದಂಡನೆಯನ್ನು ವಿಧಿಸಿತ್ತು.  ಭಾರತದ ಮೇಲ್ಮನವಿ ಮೇರೆಗೆ ಅಂತಾರಾಷ್ಟ್ರೀಯ ನ್ಯಾಯಾಲಯವು ಮೇ ತಿಂಗಳಲ್ಲಿ ಮರಣದಂಡನೆ ಜಾರಿಯನ್ನು ತಡೆ ಹಿಡಿದಿತ್ತು. ಜಾಧವ್ ಅವರಿಗೆ ಡಿಸೆಂಬರ್ ೨೫ರಂದು ತಮ್ಮ ಪತ್ನಿ ಮತ್ತು ತಾಯಿಯನ್ನು ಭೇಟಿ ಮಾಡಲು ಅವಕಾಶ ನೀಡಲಾಗುವುದು ಎಂದು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದರು. ಸಾಪ್ತಾಹಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು ಭೇಟಿ ಕಾಲದಲ್ಲಿ ಭಾರತೀಯ ಹೈಕಮೀಷನ್   ಸಿಬ್ಬಂದಿಯೊಬ್ಬರೂ ಹಾಜರಿರುತ್ತಾರೆ ಎಂದು ನುಡಿದರು. ಇದಕ್ಕೆ ಮುನ್ನ ನವೆಂಬರ್ ೧೦ರಂದು ಪಾಕಿಸ್ತಾನವು ಜಾಧವ್ ಅವರನ್ನು ಭೇಟಿ ಮಾಡಲು ಅವರ ಪತ್ನಿಗೆ ಅವಕಾಶ ನೀಡಲು ಒಪ್ಪಿತ್ತು. ಮಾನವೀಯ ನೆಲೆಯಲ್ಲಿ ಜಾಧವ್ ಪತ್ನಿ ಅವಂತಿಕಾ ಅವರಿಗೂ ವೀಸಾ ಮಂಜೂರು ಮಾಡುವಂತೆ ಭಾರತ ಪಾಕಿಸ್ತಾನವನ್ನು ಒತ್ತಾಯಿಸಿತ್ತು. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಇತ್ತೀಚೆಗೆ ಜಾಧವ್ ಪ್ರಕರಣವನ್ನು ನವದೆಹಲಿಯಲ್ಲಿನ ಪಾಕಿಸ್ತಾನಿ ಹೈ ಕಮೀಷನರ್  ಸೊಹೈಲ್ ಮಹಮೂದ್ ಅವರ ಜೊತೆಗೆ ಚರ್ಚಿಸಿದ್ದರು. ಪಾಕಿಸ್ತಾನವು ಜಾಧವ್ ಅವರನ್ನು ಭೇಟಿ ಮಾಡಲು ಭಾರತದ ರಾಜತಾಂತ್ರಿಕ ಕಚೇರಿಗೆ ಪದೇ ಪದೇ ಅವಕಾಶ ನಿರಾಕರಿಸಿತ್ತು.  ಗೂಢಚರ್ಯೆ ಸಂಬಂಧಿತ ಪ್ರಕರಣಗಳಲ್ಲಿ ರಾಜತಾಂತ್ರಿಕ ಭೇಟಿಯ ಅವಕಾಶ ಅನ್ವಯಿಸುವುದಿಲ್ಲ ಎಂದು ಎಂಬ ಕಾರಣವನ್ನು ತನ್ನ  ನಿರಾಕರಣೆಗೆ ಪಾಕಿಸ್ತಾನ ನೀಡಿತ್ತು. ಜಾಧವ್ ಅವರು ಪಾಕಿಸ್ತಾನಿ ಸೇನಾ ಮುಖ್ಯಸ್ಥ ಒಮರ್ ಜಾವೇದ್ ಬಜ್ವಾ ಬಳಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದು ಅರ್ಜಿ ಇನ್ನೂ ಬಾಕಿ ಉಳಿದಿದೆ. ಜಾಧವ್ ಅವರ ಕ್ಷಮಾದಾನ ಕೋರಿಕೆ ಅರ್ಜಿ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳುವುದಾಗಿ ಪಾಕಿಸ್ತಾನಿ ಸೇನೆ ಅಕ್ಟೋಬರ್ ತಿಂಗಳಲ್ಲಿ ತಿಳಿಸಿತ್ತು. ಜಾಧವ್ ಅವರನ್ನು ಗಲಭೆ ಪೀಡಿತ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಅವರು ಇರಾನ್ ನಿಂದ ಪ್ರವೇಶಿಸಿದ ಬಳಿಕ ಕಳೆದ ವರ್ಷ ಮಾರ್ಚ್ ೩ರಂದು ತನ್ನ ಭದ್ರತಾ ಪಡೆ ಬಂಧಿಸಿದೆ ಎಂದು ಪಾಕಿಸ್ತಾನ ಪ್ರತಿಪಾದಿಸಿತ್ತು.  ಆದರೆ ಜಾಧವ್ ಅವರನ್ನು ಭಾರತೀಯ ನೌಕಾಪಡೆಯಿಂದ ನಿವೃತ್ತರಾದ ಬಳಿಕ ವ್ಯವಹಾರ ಸಂಬಂಧದಲ್ಲಿ ಹೋಗಿದ್ದಾಗ ಇರಾನ್ ನಿಂದ ಅಪಹರಿಸಲಾಗಿದೆ ಎಂದು ಭಾರತ ಹೇಳಿತ್ತು. ಜಾಧವ್ ಅವರಿಗೆ ಮರಣದಂಡನೆ ವಿಧಿಸಿದ್ದು ಭಾರತದಲ್ಲಿ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು. ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಮನವಿ ಮಾಡಿದ ಬಳಿಕ ೧೦ ಸದಸ್ಯರ ಪೀಠವು ಮೇ ೧೮ರಂದು ತನ್ನ ಮುಂದಿನ ಪ್ರಕರಣ ಇತ್ಯರ್ಥವಾಗುವವರೆಗೆ ಜಾಧವ್ ಮರಣದಂಡನೆಯನ್ನು ಜಾರಿಗೊಳಿಸದಂತೆ ಪಾಕಿಸ್ತಾವನ್ನು ನಿರ್ಬಂಧಿಸಿತ್ತು. ಡಿಸೆಂಬರ್ ೧೩ರಂದು ನ್ಯಾಯಾಲಯವು ತನ್ನ ಮುಂದಿನ ಕಲಾಪ ಆರಂಭಿಸುವುದಕ್ಕೆ ಮುನ್ನ, ತನ್ನ ಉತ್ತರವನ್ನು ಸಲ್ಲಿಸುವಂತೆ ಅಂತಾರಾಷ್ಟ್ರೀಯ ನ್ಯಾಯಾಲಯವು ಪಾಕಿಸ್ತಾನಕ್ಕೆ ಸೂಚಿಸಿತ್ತು.
2017: ನವದೆಹಲಿ: ಪುರುಷನನ್ನು ತಪ್ಪಿತಸ್ಥನನ್ನಾಗಿಯೂ, ವಿವಾಹಿತ ಮಹಿಳೆಯನ್ನುಸಂತ್ರಸ್ಥೆಯನ್ನಾಗಿಯೂ ಪರಿಗಣಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಪ್ರಾಚೀನ ಕಾಲದವ್ಯಭಿಚಾರ’ ಅಪರಾಧಕ್ಕೆ ಸಂಬಂಧಿಸಿದ ವಿಧಿಯ ಪರಿಶೀಲನೆಗೆ ಸುಪ್ರೀಂಕೋರ್ಟ್ ನಿರ್ಧರಿಸಿತು. ಈ ವಿಧಿಯು ಮಹಿಳೆಯರನ್ನು ವಸ್ತುವಾಗಿ ಪರಿಗಣಿಸುತ್ತದೆಯೇ ಎಂಬುದಾಗಿ ಸುಪ್ರೀಂಕೋರ್ಟ್  ಪರಿಶೀಲಿಸಲಿದೆ. ಭಾರತೀಯ ದಂಡ ಸಂಹಿತೆಯ ೪೯೭ನೇ ವಿಧಿಯುಬೇರೊಬ್ಬರ ಪತ್ನಿ ಎಂಬುದಾಗಿ ಗೊತ್ತಿದ್ದೂ, ಆತನ ಒಪ್ಪಿಗೆ ಇಲ್ಲವೇ  ಸಹಕಾರವಿಲ್ಲದೆ,  ಅತ್ಯಾಚಾರ ವ್ಯಾಪ್ತಿಗೆ ಬಾರದಂತೆ, ಆಕೆಯ ಜೊತೆ ಯಾವುದೇ ಪುರುಷ ಲೈಂಗಿಕ ಸಂಪರ್ಕ ಹೊಂದುವುದು ವ್ಯಭಿಚಾರದ ಅಪರಾಧವಾಗುತ್ತದೆ ಮತ್ತು ಶಿಕ್ಷಾರ್ಹವಾಗಿದೆ ಎಂದು ಹೇಳುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿದ ಸುಪ್ರೀಂಕೋರ್ಟ್ ವಿಧಿಯ () ಪುರುಷನ ವಿರುದ್ಧ ಮಾತ್ರ ವ್ಯಭಿಚಾರದ ಆಪಾದನೆ ಮಾಡಲಾಗುತ್ತದೆ. ಮಹಿಳೆಯನ್ನು ಯಾವಾಗಲೂ ಸಂತ್ರಸ್ಥೆ ಎಂಬುದಾಗಿ ಬಿಂಬಿಸಲಾಗುತ್ತದೆ. ಆದ್ದರಿಂದ ಆಕೆ ಗಂಡನಆಸ್ತಿಯೇ ಅಥವಾ ನಿಷ್ಕ್ರಿಯ ವಸ್ತುವೇ? () ಮಹಿಳೆಯ ಪತಿ ಸಹಕಾರ ನೀಡಿದರೆ ಅಥವಾ ಒಪ್ಪಿಗೆ ನೀಡಿದರೆ ಅಪರಾಧಇಲ್ಲ’ವಾಗುತ್ತದೆಯೇ? - ಎರಡು ಅಂಶಗಳ ಬಗ್ಗೆ ಪರಿಶೀಲಿಸುವುದಾಗಿ ಹೇಳಿತು. ಅಲ್ಲದೆ ಕೇವಲ ಗಂಡ ಅಥವಾ ಯಾರ ಸುಪರ್ದಿಯಲ್ಲಿ ಗಂಡನು ತನ್ನ ಪತ್ನಿಯನ್ನು ಬಿಟ್ಟಿರುತ್ತಾನೆಯೋ ಅಂತಹವರು ಮಾತ್ರವೇ ೨೯೭ನೇ ವಿಧಿಯ ಅಡಿಯಲ್ಲಿ ದೂರು ಸಲ್ಲಿಸಬಹುದೇ ಎಂಬ ಬಗೆಗೂ ನ್ಯಾಯಾಲಯ ಪರಿಶೀಲಿಸಲಿದೆ. ಅರ್ಜಿದಾರ ಜೋಸೆಫ್ ಶೈನ್ ಪರವಾಗಿ ವಾದಿಸಿದ ವಕೀಲರಾದ ಕಲೀಸ್ವರಂ ರಾಜ್ ಮತ್ತು ಸುವಿದತ್ ಎಂ.ಎಸ್. ಅವರು ದಂಡ ಸಂಹಿತೆಯ ವಿಧಿಯನ್ನು ಮಹಿಳೆಯರನ್ನು ಪುರುಷರ ಆಸ್ತಿ ಎಂಬುದಾಗಿ ಪರಿಗಣಿಸಲಾಗಿದ್ದ ಕಾಲದಲ್ಲಿ ರೂಪಿಸಲಾಗಿದೆ ಎಂದು ವಾದಿಸಿದ್ದರು. ಸಮಾನ ಸ್ಥಾನಮಾನ: ಭಾರತದ ಸಂವಿಧಾನವು ಪುರುಷ ಮತ್ತು ಮಹಿಳೆಗೆ ಸಮಾನ ಸ್ಥಾನಮಾನ ನೀಡಿದೆ. ಪ್ರತಿಯೊಂದು ವಿಚಾರದಲ್ಲೂ ಮಹಿಳೆ ತನ್ನ ಗಂಡನಿಗೆ ಸಮಾನ ಎಂಬುದಾಗಿ ಸಮಾಜವು ಅರ್ಥ ಮಾಡಿಕೊಳ್ಳಬೇಕಾದ ಕಾಲ ಬಂದಿದೆ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ತಮ್ಮ ಆದೇಶದಲ್ಲಿ ದಾಖಲಿಸಿದರು. ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರುಪತಿಯ ಒಪ್ಪಿಗೆಯೊಂದಿಗೆ ಮಹಿಳೆ ವ್ಯಭಿಚಾರದ ಬಾಂಧವ್ಯ ಹೊಂದಿದರೆ ಇದು ಆಕೆಯನ್ನು ವಸ್ತುವಿನ ಮಟ್ಟಕ್ಕೆ ಇಳಿಸುತ್ತದೆಯೇ? ಕಾನೂನಿನ ವಿಧಿಯೇ ಇದನ್ನು ಪ್ರೋತ್ಸಾಹಿಸದಂತಾಗುತ್ತದೆಯೇ?’ ಎಂಬ ಪ್ರಶ್ನೆಯನ್ನು ಮುಂದಿಟ್ಟರು.  ವಿಧಿಯನ್ನುಪ್ರಾಚೀನ ಎಂಬುದಾಗಿ ಬಣ್ಣಿಸಿದ ಕೋರ್ಟ್ ಸಮಾಜ ಮುಂದುವರಿದಾಗ, ಹೊಸ ಚಿಂತನೆಗಳು ಬರುತ್ತವೆ ಎಂದು ಹೇಳಿತು.
2017: ನವದೆಹಲಿ: ದೆಹಲಿಯ ಶಾಲಿಮಾರ್ ಬಾಗ್ ನಲ್ಲಿರುವ ಮ್ಯಾಕ್ಸ್ ಆಸ್ಪತ್ರೆಯ ಪರವಾನಗಿಯನ್ನು ಅವಳಿ ಶಿಶು ಸಾವು ಪ್ರಕರಣದ ಹಿನ್ನೆಲೆಯಲ್ಲಿ  ದೆಹಲಿ ಸರ್ಕಾರವು ತತ್ ಕ್ಷಣದಿಂದ ಜಾರಿಗೆ ಬರುವಂತೆ ರದ್ದು ಪಡಿಸಿತು. ‘’ಸತ್ತಿದೆ ಎಂಬುದಾಗಿ ಆಸ್ಪತ್ರೆಯು ಘೋಷಿಸಿದ್ದ, ಅವಧಿಗೆ ಮುಂಚಿತವಾಗಿ ಜನಿಸಿದ ಅವಳಿ ಶಿಶುಗಳಲ್ಲಿ ಒಂದು ಶಿಶು ಅಂತ್ಯಕ್ರಿಯೆಗೆ ಒಯ್ದಾಗ ಜೀವಂತ ಇದ್ದ ಪ್ರಕರಣ ಬೆಳಕಿಗೆ ಬಂದ ದಿನಗಳ ಬಳಿಕ ಸರ್ಕಾರ ನಿರ್ಧಾರ ಕೈಗೊಂಡಿತು. ಏನಿದ್ದರೂ ಶಿಶು ನಂತರ  ಡಿ.6ರ ಬುಧವಾರ ಅಸು ನೀಗಿತ್ತು. ಈಗಾಗಲೇ ಆಸ್ಪತ್ರೆಗೆ ದಾಖಲಾಗಿರುವ ಯಾವುದೇ ರೋಗಿಗೂ ಸರ್ಕಾರದ ನಿರ್ಧಾರದಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ನೋಟಿಸ್ ಜಾರಿ: ಕ್ರಿಮಿನಲ್ ನಿರ್ಲಕ್ಷ್ಯವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಹೇಳಿದ ಸಚಿವರು, ಮ್ಯಾಕ್ಸ್ ಆಸ್ಪತ್ರೆಗೆ ಇಂತಹ ತಪ್ಪೆಸಗುವ ಹವ್ಯಾಸವಿದೆ. ಹಿಂದೆ ಕೂಡಾ ಅದಕ್ಕೆ ಮೂರು ಬಾರಿ ನೋಟಿಸ್ ಗಳನ್ನು ನೀಡಲಾಗಿತ್ತು. ಬಳಿಕ ಕೆಲವು ಪ್ರಕರಣಗಳಲ್ಲಿ ಅಪರಾಧವೂ ಸಾಬೀತಾಗಿತ್ತು. ಹಿಂದಿನ ನೋಟಿಸ್ ಗಳ ಪರಿಣಾಮದ ಹಿನ್ನೆಲೆಯಲ್ಲಿಯೇ ಈದಿನ ಆಸ್ಪತ್ರೆಯ ಪರವಾನಗಿ ರದ್ದು ಪಡಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ನುಡಿದರು. ಅತಿ ದುರ್ಬಲ ವರ್ಗದ ರೋಗಿಗಳ ಕೋಟಾಕ್ಕೆ ಸಂಬಂಧಿಸಿದ ಲೋಪಗಳಿಗಾಗಿ ಹಿಂದೆ ನೋಟಿಸ್ ಗಳನ್ನು ನೀಡಲಾಗಿತ್ತು. ಡಿಸೆಂಬರ್ ೧ರಂದು, ಸರ್ಕಾರವು ಅವಳಿ ಮಕ್ಕಳ ಘಟನೆಯ ತನಿಖೆಗೆ ಆಜ್ಞಾಪಿಸಿತ್ತು.  ತ್ರಿಸದಸ್ಯ ತನಿಖಾ ತಂಡವು ತನ್ನ  ಪ್ರಾಥಮಿಕ ವರದಿಯಲ್ಲಿ ನವಜಾತ ಶಿಶುಗಳಿಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ನಿಯಮಗಳನ್ನು ಆಸ್ಪತ್ರೆ ಅನುಸರಿಸಿಲ್ಲ ಎಂದು ತಿಳಿಸಿತ್ತು.  ಶಿಶುಗಳು ಸತ್ತಿವೆ ಎಂಬುದಾಗಿ ಘೋಷಿಸುವ ಮುನ್ನ ಎಲೆಕ್ಟ್ರೋಕಾರ್ಡಿಯೋಗ್ರಾಫಿ (ಇಸಿಜಿ)  ಪರೀಕ್ಷೆ ನಡೆಸುವಲ್ಲಿ ವೈದ್ಯರು ವಿಫಲರಾಗಿದ್ದರು ಎಂದು ವರದಿ ಹೇಳಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯು ಡಾ. .ಪಿ. ಮೆಹ್ತಾ ಮತ್ತು ಡಾ. ವಿಶಾಲ್ ಗುಪ್ತ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.
 2017: ನವದೆಹಲಿ: ರಾಜ್ಯ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದ ಮಹಾರಾಷ್ಟ್ರದ ಬಿಜೆಪಿ ಸಂಸತ್ ಸದಸ್ಯ ನಾನಾ ಪಟೋಲೆ ಅವರು ಪಕ್ಷ ಮತ್ತು ಲೋಕಸಭೆಗೆ ರಾಜೀನಾಮೆ ಸಲ್ಲಿಸಿದರು. ಪಟೋಲೆ ಅವರು ಹಿಂದೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಸದಸ್ಯರಾಗಿದ್ದರು. ೨೦೧೪ರ ಲೋಕಸಭಾ ಚುನಾವಣೆಗೆ ಮುನ್ನ ಅವರು ಬಿಜೆಪಿ ಸೇರಿದ್ದರು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಭಂಡಾರ-ಗೊಂಡಿಯಾ ಕ್ಷೇತ್ರದಲ್ಲಿ ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ಅವರನ್ನು ಪರಾಭವಗೊಳಿಸಿದ್ದರು. ರೈತರ ಸಂಕಷ್ಟ ಸೇರಿದಂತೆ ಹಲವಾರು ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದ ಅವರು ಬಿಜೆಪಿಯನ್ನು ನಿರಂತರ ತರಾಟೆಗೆ ತೆಗೆದುಕೊಂಡಿದ್ದರು. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ ಬರೆದಿರುವ ಪತ್ರದಲ್ಲಿ ಪಟೋಲೆ, ಕೃಷಿ, ಆರ್ಥಿಕತೆ ಮತ್ತು ನಿರುದ್ಯೋಗ ಸೇರಿದಂತೆ ೧೪ ವಿಷಯಗಳನ್ನು ತಮ್ಮ ರಾಜೀನಾಮೆಗೆ ಕಾರಣವಾಗಿ ಉಲ್ಲೇಖಿಸಿದರು. ತಾವು ಪದೇ ಪದೇ ವಿಷಯಗಳನ್ನು ಪ್ರಧಾನಿಯವರ ಜೊತೆಗೆ ಪ್ರಸ್ತಾಪಿಸುತ್ತಿದ್ದರೂ, ಅವುಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಅವರು ಆಪಾದಿಸಿದರು.
2017: ಬ್ರಸ್ಸೆಲ್ಸ್: ಇಂಗ್ಲೆಂಡ್ ಪ್ರಧಾನಿ ಥೆರೇಸಾ ಮೇ ಅವರು ಮಾತುಕತೆಗಳಿಗಾಗಿ ಬಸ್ಸೆಲ್ಸ್ಗೆ ಧಾವಿಸಿದ ಬಳಿಕ ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟ (ಯುರೋಪಿಯನ್ ಯೂನಿಯನ್-ಇಯು) ಬ್ರೆಕ್ಸಿಟ್ ವಿಚ್ಛೇದನ ಷರತ್ತುಗಳಿಗೆ ಸಂಬಂಧಿಸಿದ ಚಾರಿತ್ರಿಕ ಒಪ್ಪಂದಕ್ಕೆ ಸಹಿ ಹಾಕಿದವು. ಐರಿಷ್ ಗಡಿ, ಬ್ರಿಟನ್ ವಿಚ್ಛೇದನಾ ಮಸೂದೆ ಮತ್ತು ನಾಗರಿಕರ ಹಕ್ಕುಗಳು ಸೇರಿದಂತೆ ಬೇರ್ಪಡೆ ವಿಷಯಗಳಿಗೆ ಸಂಬಂಧಿಸಿದಂತೆ ಬ್ರಿಟನ್ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ತಾನು ಶಿಫಾರಸು ಮಾಡುವುದಾಗಿ ಐರೋಪ್ಯ ಆಯೋಗ ಈದಿನ ಹೇಳಿತು.  ಒಪ್ಪಂದವು ಡಿಸೆಂಬರ್ ೧೪-೧೫ರಂದು ನಡೆಯಲಿರುವ ಶೃಂಗ ಸಭೆಯಲ್ಲಿ ಐರೋಪ್ಯ  ಒಕ್ಕೂಟದ ನಾಯಕರಿಗೆ ಎರಡನೇ ಹಂತದ ಬ್ರೆಕ್ಸಿಟ್ ಮಾತುಕತೆಗಳನ್ನು ಆರಂಭಿಸಲು ಮಾರ್ಗ ತೆರವುಗೊಳಿಸಲಿದೆ. ಮಾತುಕತೆಗಳಲ್ಲಿ ವ್ಯಾಪಾರ ಮಾತುಕತೆ ಮತ್ತು ಬದಲಾವಣೆಯ ಅವಧಿ ಬಗ್ಗೆ ಚರ್ಚೆ ನಡೆಯಲಿದೆ. ೨೦೧೬ರಲ್ಲಿ ಐರೋಪ್ಯ ಒಕ್ಕೂಟದಿಂದ ಹೊರಬರುವ ಪ್ರಸ್ತಾಪಕ್ಕೆ ಮತಹಾಕುವ ಮೂಲಕ ಬ್ರಿಟನ್ ಐರೋಪ್ಯ ಒಕ್ಕೂಟ ತ್ಯಜಿಸುವ ಮೊದಲ ರಾಷ್ಟ್ರವೆನಿಸಿತ್ತು. ನಾಲ್ಕು ದಶಕಗಳ ಸದಸ್ಯತ್ಯ ಹೊಂದಿದ್ದ ಬ್ರಿಟನ್ ನಿರ್ಧಾರ ಕೈಗೊಂಡಿತಾದರೂ, ಬೇರ್ಪಡೆ ವಿಧಿ ವಿಧಾನ ಕುರಿತ ಮಾತುಕತೆ ನಿಧಾನಗತಿಯಲ್ಲಿ ಸಾಗಿತ್ತು. ಬಹಳಷ್ಟು ಸಂದರ್ಭಗಳಲ್ಲಿ ಮಾತುಕತೆ ಆಕ್ರೋಶಕಾರಿಯೂ ಆಗಿತ್ತು. ಮೂರು ಆದ್ಯತಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ಆಯೋಗ ತೃಪ್ತಿ ವ್ಯಕ್ತ ಪಡಿಸಿದೆ ಎಂದು ಆಯೋಗದ ಹೇಳಿಕೆ ತಿಳಿಸಿತು. ಬ್ರಿಟನ್ ಬೇರ್ಪಡೆ ಷರತ್ತುಗಳಿಗೆ ಸಂಬಂಧಿಸಿದ ಒಪ್ಪಂದವನ್ನು  ಅಂತಿಮಗೊಳಿಸಲು ಇಡೀ ರಾತ್ರಿ ಮಾತುಕತೆ ನಡೆಸಲಾಗಿತ್ತು. ಐರಿಷ್ ಗಡಿಗೆ ಸಂಬಂಧಿಸಿದ ಭವಿಷ್ಯದ ವ್ಯವಸ್ಥೆ ಕುರಿತ ಷರತ್ತುಗಳಿಗೆ ಮೇ ಅವರ ಉತ್ತರ ಐರಿಷ್ ಮಿತ್ರಪಕ್ಷಗಳು ಆಕ್ಷೇಪ ಎತ್ತಿದ ಪರಿಣಾಮವಾಗಿ ಕಳೆದ ಸೋಮವಾರದ ಮಾತುಕತೆಗಳು ಮುರಿದು ಬಿದ್ದಾಗ ಐರೋಪ್ಯ ಒಕ್ಕೂಟ ಮುಂದಿನ ಡಿ.10ರ ಭಾನುವಾರದ ಗಡುವನ್ನು ನೀಡಿತ್ತು. ನೂತನ ಪೋಪ್ ಆಯ್ಕೆಯ ಸಂಕೇತವಾಗಿ ವ್ಯಾಟಿಕನ್ ಬಳಸುವ ಶ್ವೇತಧೂಮದ ಸಂಕೇತದಂತೆ, ಆಯೋಗದ ಮುಖ್ಯಸ್ಥ ಜೀನ್ ಕ್ಲೌಡೆ ಜಂಕರ್ ಅವರ ಸಿಬ್ಬಂದಿ ಮುಖ್ಯಸ್ಥ ಮಾರ್ಟಿನ್ ಸೆಲ್ಮೈರ್ ಅವರು ಬೆಳಗ್ಗೆ ಥೆರೇಸಾ ಮೇ ಆಗಮನದ ಬಳಿಕಶ್ವೇತಧೂಮ ಚಿತ್ರವನ್ನು ಟ್ವೀಟ್ ಮಾಡಿದ್ದರು.  ಜಂಕರ್ ಅವರು ಮೊದಲು ಐರಿಷ್ ಪ್ರಧಾನಿ ಲಿಯೋ ವರ್ಡೆಕರ್ ಜೊತೆ ಹಾಗೂ ಬಳಿಕ ಥೆರೇಸಾ ಮೇ ಅವರ ಜೊತೆಗೆ ಮಾತುಕತೆ ನಡೆಸಿ ಐರಿಷ್ ಗಡಿ ಕಗ್ಗಂಟು ಬಿಡಿಸಲು ಯತ್ನಿಸಿದ್ದರು.

  2016: ಮುಂಬೈ: ಬಾಲಿವುಡ್ನಟಿ ಪ್ರಿಯಾಂಕ ಚೋಪ್ರಾ ಅವರನ್ನು ಪರಾಭವಗೊಳ್ಳಿಸುವ ಮೂಲಕ ದೀಪಿಕಾ ಪಡುಕೋಣೆ 2016 ನೇ ಸಾಲಿನಏಷ್ಯಾದ ಮಾದಕ ಮಹಿಳೆಎಂಬ ಹೆಗ್ಗಳಿಕೆಗೆ ಪಾತ್ರರಾದರು. ದೀಪಿಕಾ ಪಡುಕೋಣೆ ಅವರು ಇದೇ ಮೊದಲ ಬಾರಿಗೆಏಷ್ಯಾದ ಮಾದಕ ಮಹಿಳೆಪಟ್ಟವನ್ನು ಅಲಂಕರಿಸಿದರು. ಬ್ರಿಟನ್ಮೂಲದಈಸ್ಟರ್ನ್ ಪತ್ರಿಕೆ ಪ್ರತಿ ವರ್ಷದಂತೆ ವರ್ಷವು ಅತಿ ಹೆಚ್ಚು ಜನಪ್ರಿಯತೆ ಗಳಿಸಿದವರನ್ನು ಆಯ್ಕೆ ಮಾಡಿದ ಪ್ರಕ್ರಿಯೆಯಲ್ಲಿ ದೀಪಿಕಾ ಯಶಸ್ವಿಯಾದರು.  ಸೆಕ್ಸಿಎಂಬ ಪದ ವಿವಿಧ ವರ್ಗದ ಜನರಿಗೆ ವಿವಿಧ ರೀತಿಯ ಆರ್ಥವನ್ನು ನೀಡುತ್ತದೆ. ನನ್ನ ಪ್ರಕಾರಸೆಕ್ಸಿಎಂದರೇ ಅದು ಕೇವಲ ದೈಹಿಕವಾಗಿ ಸುಂದರವಾಗಿರುವುದಲ್ಲ, ಅದು ವಿಶ್ವಾಸಾರ್ಹತೆ, ಮುಗ್ಧತೆಯನ್ನು ತೋರ್ಪಡಿಸುವುದಾಗಿದೆ ಎಂದು ದೀಪಿಕಾ ಪಡುಕೋಣೆ ತಿಳಿಸಿದರು. ಪ್ರಿಯಾಂಕ ಚೋಪ್ರಾ ಸತತ ನಾಲ್ಕು ಬಾರಿಏಷ್ಯಾದ ಮಾದಕ ಮಹಿಳೆಪಟ್ಟ ಅಲಂಕರಿಸಿದ್ದರು. ಆಗ್ರ ಹತ್ತು ಸ್ಥಾನಗಳ ಪೈಕಿ ದೀಪಿಕಾ ಪಡುಕೋಣೆ, ನಂತರ ಪ್ರಿಯಾಂಕ ಚೋಪ್ರಾ, ನಿಯಾ ಶರ್ಮಾ, ಡಾರ್ಸತಿ ಧಮ್ಮಿ, ಐದನೇ ಸ್ಥಾನದಲ್ಲಿ ಅಲಿಯಾ ಭಟ್ಕಾಣಿಸಿಕೊಂಡರು. ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಮಂದಿ ಮಾಡಿರುವ ವೋಟ್ಗಳನ್ನು ಆಧರಿಸಿ ದೀಪಿಕಾ ಅವರನ್ನು 2016 ನೇ ಸಾಲಿನಏಷ್ಯಾದ ಮಾದಕ ಮಹಿಳೆಎಂದು ಘೋಷಿಸಲಾಯಿತು.
2016: ನವದೆಹಲಿ: ದೇಶದಲ್ಲಿ ನಗದು ರಹಿತ ವ್ಯವಸ್ಥೆ ಪ್ರಚುರಪಡಿಸಲು ಮುಂದಾದ ಕೇಂದ್ರ ಸರ್ಕಾರ  ಡಿಜಿಟಲ್ಪಾವತಿ ಮೂಲಕ ಡೀಸೆಲ್ಮತ್ತು ಪೆಟ್ರೋಲ್ಖರೀದಿ ಹಾಗೂ ರೈಲ್ವೆ ಟಿಕೆಟ್ ಖರೀದಿಗೆ ಶೇ.0.75ರಷ್ಟು ರಿಯಾಯಿತಿ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿತ್ತ ಸಚಿವ ಅರುಣ್ಜೇಟ್ಲಿ ಪ್ರಕಟಿಸಿದರು. ನಿತ್ಯ ಅಂದಾಜು 4.5 ಕೋಟಿ ಗ್ರಾಹಕರು ಇಂಧನ ಖರೀದಿಸುತ್ತಿದ್ದು, ಕಾರ್ಡ್ಅಥವಾ ವಾಲೆಟ್ಮೂಲಕ ಪಾವತಿ ಮಾಡಿದರೆ ಶೇ.0.75ರಷ್ಟು ರಿಯಾಯಿತಿ ಸಿಗಲಿದೆ. ಡಿಜಿಟಲ್ಪಾವತಿ ಮೂಲಕ ರೈಲು ಟಿಕೆಟ್ಪಡೆಯುವ ಉಪನಗರಗಳ ಪ್ರಯಾಣಿಕರು 2017 ಜನವರಿ 1ರಿಂದ ಶೇ.0.5ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಆನ್ಲೈನ್ಟಿಕೆಟ್ಖರೀದಿಸುವವರು ರೂ.10 ಲಕ್ಷ ವಿಮಾ ರಕ್ಷಣೆ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ವಸತಿ, ವಿಶ್ರಾಂತಿ ಕೋಣೆ, ಆಹಾರ ಪದಾರ್ಥಗಳ ಮೇಲೆ ಶೇ.5ರಷ್ಟು ರಿಯಾಯಿತಿ ಪಡೆಯುತ್ತಾರೆನೋಟು ರದ್ದತಿ ಬಳಿಕ ನಗದು ರಹಿತ ವ್ಯವಸ್ಥೆಗೆ ಸರ್ಕಾರ ಹೆಚ್ಚು ಒತ್ತು ನೀಡುತ್ತಿದ್ದು, ಡೆಬಿಟ್ಅಥವಾ ಕ್ರೆಡಿಟ್ಕಾರ್ಡ್‌, ಮೊಬೈಲ್ವಾಲೆಟ್ಹಾಗೂ ಆನ್ಲೈನ್ಬ್ಯಾಂಕಿಂಗ್ಬಳಕೆಗೆ ಉತ್ತೇಜನ ನೀಡುತ್ತಿದೆ ಎಂದು ಜೆಟ್ಲಿ ಪ್ರಕಟಿಸಿದರು. ವಿಮೆ ಪಾವತಿಗೆ ರಿಯಾಯಿತಿ:  ಆನ್ಲೈನ್ಮೂಲಕ ಜನರಲ್ಇನ್ಶ್ಯೂರೆನ್ಸ್ಕಂತು ಪಾವತಿ ಮಾಡುವ ಗ್ರಾಹಕರು ಶೇ.10 ಹಾಗೂ ಜೀವ ವಿಮಾ ಕಂತು ಪಾವತಿಗೆ ಶೇ.8ರಷ್ಟು ರಿಯಾಯಿತಿ ಪಡೆಯಬಹುದು.  ಇತರೆ ಕ್ರಮಗಳು: * ಸರ್ಕಾರಿ ಸಂಸ್ಥೆಗಳಲ್ಲಿ ಡಿಜಟಲ್ಪಾವತಿಗೆ ವಹಿವಾಟು ಶುಲ್ಕ ವಿಧಿಸುವುದಿಲ್ಲ * ರಾಷ್ಟ್ರೀಯ ಹೆದ್ದಾರಿಗಳ ಟೋಲ್ಗಳಲ್ಲಿ ಸ್ಮಾರ್ಟ್‌ TAGs and RFID ಬಳಕೆ ಹಾಗೂ ಡಿಜಿಟಲ್ಪಾವತಿದಾರರಿಗೆ ಶೇ.10 ರಿಯಾಯಿತಿ * 10 ಸಾವಿರ ಜನಸಂಖ್ಯೆ ಹೊಂದಿರುವ ಹಳ್ಳಿಗಳಿಗೆ ಎರಡು ಪಾಯಿಂಟ್ಆಫ್ಸೇಲ್ಮೆಷಿನ್ವ್ಯವಸ್ಥೆ ಮಾಡಲಾಗುತ್ತದೆ. ದೇಶದ 1 ಲಕ್ಷ ಹಳ್ಳಿಗಳಲ್ಲಿ ಪ್ರಸ್ತುತ ಯೋಜನೆಯ ವಿಸ್ತರಣೆ ಆಗಲಿದೆ
2016: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದ ಅರಿಹಾಲ್ ಪ್ರದೇಶದ ಜಮ್ಮು ಮತ್ತು ಕಾಶ್ಮೀರ ಬ್ಯಾಂಕಿಗೆ ನುಗ್ಗಿ ಭಯೋತ್ಪಾದಕರು  13.38 ಲಕ್ಷ ರೂಪಾಯಿಗಳನ್ನು ಲೂಟಿ ಮಾಡಿದರು. ಭಯೋತ್ಪಾದಕರು ಲೂಟಿ ಮಾಡಿರುವ 13.38 ಲಕ್ಷ ರೂಪಾಯಿಗಳ ಪೈಕಿ 2.23 ಲಕ್ಷ ರೂಪಾಯಿಗಳು ಹಳೆಯ ನೋಟುಗಳಾಗಿದ್ದು, 11.15 ಲಕ್ಷ ರೂಪಾಯಿಗಳು ಹೊಸ ನೋಟುಗಳಾಗಿವೆ ಎಂದು ವರದಿಗಳು ತಿಳಿಸಿದವು. ನಾಲ್ವರು ಭಯೋತ್ಪಾದಕರು ವಾಹನವೊಂದರಲ್ಲಿ ಬಂದು ಬ್ಯಾಂಕಿಗೆ ನುಗ್ಗಿ ಗುಂಡು ಹಾರಿಸಿ ಬೆದರಿಸಿ ಹಣ ಅಪಹರಿಸಿದರು ಎಂದು ವರದಿಗಳು ತಿಳಿಸಿವೆ.. ಇದಕ್ಕೂ ಮುನ್ನ ಹಲವು ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದರು. ಕಾಶ್ಮಿರದಲ್ಲಿ ಒಂದೇ ತಿಂಗಳಲ್ಲಿ ಎರಡು ಬಾರಿ ಬ್ಯಾಂಕ್ಲೂಟಿಯಾಗಿದೆನಗದು ಕೌಂಟರ್ನಿಂದ ಹಣ ದೋಚಿದ ಶಂಕಿತರು ಅಲ್ಲಿಂದ ಪರಾರಿ ಆಗುವ ಮುನ್ನ ಐದರಿಂದ ಆರು ಸುತ್ತು ಗುಂಡಿನ ದಾಳಿ ನಡೆಸಿದರು ಎಂದು ಬ್ಯಾಂಕ್ಸಿಬ್ಬಂದಿ ತಿಳಿಸಿದರು. ಉಗ್ರರು .21ರಂದು ಮಧ್ಯಕಾಶ್ಮೀರದ ಛೋಹರ್‌ –ಷರೀಫ್ಪ್ರದೇಶದ ಬ್ಯಾಂಕ್ನಿಂದ 13 ಲಕ್ಷ ರೂಪಾಯಿ ಲೂಟಿ ಮಾಡಿದ್ದರು.
2016: ತಿರುವನಂತಪುರಂ: ಕೇರಳದ ರಾಜಧಾನಿ ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಮಹಿಳೆಯರಿಗೆ ಚೂಡಿದಾರ ಧರಿಸಲು ಅವಕಾಶ ನೀಡಿ ದೇವಾಲಯದ ಆಡಳಿತ ಮಂಡಳಿ ಹೊರಡಿಸಿದ ಹೊಸ ವಸ್ತ್ರ ಸಂಹಿತೆಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತು. ಖಾಸಗಿ ವ್ಯಕ್ತಿಗಳು ಸಲ್ಲಿಸಿದ್ದಅರ್ಜಿಯ ವಿಚಾರಣೆ ಕಾಲದಲ್ಲಿ ಹೈಕೋರ್ಟ್ ತೀರ್ಪು ನೀಡಿತು. ವಸ್ತ್ರ ಸಂಹಿತೆಯನ್ನು ಸರಳಗೊಳಿಸಿ ಆದೇಶ ಹೊರಡಿಸಿದ್ದ ಪದ್ಮನಾಭ ಸ್ವಾಮಿ ದೇವಾಲಯದ ಆಡಳಿತ ಮಂಡಳಿ ಚೂಡಿದಾರ ಧರಿಸಲು ಮಹಿಳೆಯರಿಗೆ ಅನುಮತಿ ನೀಡಿತ್ತು. ಆಡಳಿತ ಮಂಡಳಿಯ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ದೇವಾಲಯದ ಆಡಳಿತ ಮಂಡಳಿ ಕ್ರಮವು ದೇವಸ್ಥಾನದ ಪರಂಪರಾಗತ ಸಂಪ್ರದಾಯಗಳಿಗೆ ವಿರುದ್ಧ ಎಂದು ಹಲವಾರು ಗುಂಪುಗಳು ವಿರೋಧ ವ್ಯಕ್ತ ಪಡಿಸಿದ್ದವು.
2016: ಅಲಹಾಬಾದ್: ಮೂರು ಬಾರಿತಲಾಖ್ಪದವನ್ನು ಉಸುರಿ ಮಹಿಳೆಗೆ ವಿಚ್ಛೇದನ ನೀಡುವತ್ರಿವಳಿ ತಲಾಖ್ಇಸ್ಲಾಮೀ ಪದ್ಧತಿ ಸಂವಿಧಾನ ಬಾಹಿರ ಎಂದು ಅಲಹಾಬಾದ್ ಹೈಕೋರ್ಟ್  ಚಾರಿತ್ರಿಕ ತೀರ್ಪು ನೀಡಿತು. ಇಸ್ಲಾಮ್  ಧರ್ಮದ ವಿವಾಹ, ಆಸ್ತಿಪಾಸ್ತಿ ಮತ್ತು ವಿಚ್ಛೇದನ ಬಗೆಗಿನ ನಿಯಮಾವಳಿಗಳನ್ನು ಒಳಗೊಂಡಿರುವ ಮುಸ್ಲಿಮ್  ವೈಯಕ್ತಿಕ ಕಾನೂನು ಅಡಿಯಲ್ಲಿ ಆಚರಣೆಯಲ್ಲಿರುವ ತ್ರಿವಳಿ ತಲಾಖ್ ಪದ್ಧತಿಯು ಮುಸ್ಲಿಮ್ ಮಹಿಳೆಯರ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೈಕೋರ್ಟ್ ಹೇಳಿತು. ಯಾವುದೇ ವೈಯಕ್ತಿಕ ಕಾನೂನು ಮಂಡಳಿ ಸಂವಿಧಾನಕ್ಕಿಂತ ಮೇಲೆ ಅಲ್ಲ ಎಂದು ಹೈಕೋರ್ಟ್ ಹೇಳಿತು. ಇದರ ಹೊರತಾಗಿ ತ್ರಿವಳಿ ತಲಾಖ್ ಪದ್ಧತಿಯನ್ನು ಪ್ರಶ್ನಿಸಿ ಹಲವಾರು ಮಹಿಳೆಯರು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿಗೆ ತನ್ನ ಅಭಿಪ್ರಾಯವನ್ನು ನೀಡಿರುವ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಪದ್ಧತಿಯು ಲಿಂಗ ನ್ಯಾಯಪರತೆ, ಸಮಾನತೆ ಮತ್ತು ಸಂವಿಧಾನಕ್ಕೆ ವಿರುದ್ಧ ಎಂದು ತಿಳಿಸಿತ್ತು. ಪ್ರಭಾವಶಾಲಿ ಸಂಘಟನೆಯಾಗಿರುವ ಅಖಿಲ ಭಾರತ ಮುಸ್ಲಿಮ್  ವೈಯಕ್ತಿಕ ಕಾನೂನು ಮಂಡಳಿಯು ತ್ರಿವಳಿ ತಲಾಖ್ ಪದ್ಧತಿಯನ್ನು ಸಮರ್ಥಿಸಿತ್ತು.  ಮಹಿಳೆಯನ್ನು ಕೊಲ್ಲುವುದಕ್ಕಿಂತ ವಿಚ್ಛೇದನ ಉತ್ತಮ. ಧಾರ್ಮಿಕವಾಗಿ ನೀಡಲಾಗಿರುವ ಹಕ್ಕುಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಿಲ್ಲ ಎಂದು ಮಂಡಳಿ ಪ್ರತಿಪಾದಿಸಿತ್ತು.
2016: ಚೆನ್ನೈ: ಚೆನ್ನೈ ಚಿನ್ನಾಭರಣ ವ್ಯಾಪಾರಿಗಳ ಮನೆಗಳ ಮೇಲೆ ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳು  ದಾಳಿ ನಡೆಸಿದ್ದು, 70 ಕೋಟಿ ಮೌಲ್ಯದ ಹೊಚ್ಚ ಹೊಸ ನೋಟುಗಳು ಸೇರಿ 90 ಕೋಟಿ ರೂಪಾಯಿ ನಗದು ಹಣ ಮತ್ತು 100 ಕಿ.ಗ್ರಾಂ. ಚಿನ್ನ ವಶ ಪಡಿಸಿಕೊಂಡರು. ಅಣ್ಣಾನಗರ ಮತ್ತು ಟಿ ನಗರ ಸೇರಿದಂತೆ ಚೆನ್ನೈ ನಗರದ ಎಂಟು ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಐಟಿ ಅಧಿಕಾರಿಗಳು ಚಿನ್ನಾಭರಣ ವ್ಯಾಪಾರಿಗಳಾದ ಶೇಖರ ರೆಡ್ಡಿ, ಶ್ರೀನಿವಾಸ ರೆಡ್ಡಿ ಮತ್ತು ಪ್ರೇಮ್ ಅವರನ್ನು ಪ್ರಶ್ನಿಸುತ್ತಿದ್ದು, ಹಣ ವಿನಿಮಯ ಜಾಲವನ್ನು ಭೇದಿಸಲಾಗಿದೆ ಎಂದು ಮೂಲಗಳು ಹೇಳಿದವು.

2016: ನವದೆಹಲಿನೋಟು ರದ್ದತಿ ಬಳಿಕ ನಗದು ರಹಿತ ವಹಿವಾಟಿಗೆ ಉತ್ತೇಜನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಡೆಬಿಟ್‌, ಕ್ರೆಡಿಟ್ಕಾರ್ಡ್ಬಳಸಿ 2,000 ರೂಪಾಯಿವರೆಗೆ ನಡೆಸುವ ನಗದುರಹಿತ ವಹಿವಾಟು ಮೇಲಿನ ಸೇವಾ ತೆರಿಗೆಯನ್ನು ಹಿಂಪಡೆಯಲಿದೆ. ಸಂಬಂಧ ಸಂಸತ್ನಲ್ಲಿ ತಿದ್ದುಪಡಿ ಮಸೂದೆ ಮಂಡನೆಯಾಗಲಿದೆ. ಕ್ರೆಡಿಟ್‌, ಡೆಬಿಟ್ಅಥವಾ ಇನ್ನಾವುದೇ ಪಾವತಿ ಕಾರ್ಡ್ಬಳಸಿ 2,000 ರೂಪಾಯಿವರೆಗೆ ನಡೆಸುವ ವಹಿವಾಟಿಗೆ ಸೇವಾತೆರಿಗೆಯಿಂದ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿದವು. ಈ ಸಂಬಂಧ ಹಣಕಾಸು ಸಚಿವ ಅರುಣ್ಜೇಟ್ಲಿ ಅವರು ಸಂಸತ್ನಲ್ಲಿ ತಿದ್ದುಪಡಿ ಮಸೂದೆ ಮಂಡನೆ ಮಾಡಲಿದ್ದಾರೆ. 2012ರಲ್ಲಿ ಮಂಡನೆಯಾಗಿದ್ದ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಅಧಿಸೂಚನೆಗೆ ಈ ಮೂಲಕ ತಿದ್ದುಪಡಿ ತರಲಾಗುತ್ತಿದೆ. ನಗದು ರಹಿತ ವಹಿವಾಟನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಅಂಗವಾಗಿ ಇತ್ತೀಚೆಗೆ ಮಾರ್ಚ್ 31ರೊಳಗೆ ದೇಶಾದ್ಯಂತ ಹೆಚ್ಚುವರಿಯಾಗಿ 10 ಲಕ್ಷ ಪಿಒಎಸ್ ಟರ್ವಿುನಲ್ಲುಗಳನ್ನು (ಪಾಯಿಂಟ್ ಆಫ್ ಸೇಲ್ ಟರ್ವಿುನಲ್) ಅಳವಡಿಸುವಂತೆ ಬ್ಯಾಂಕುಗಳಿಗೆ ಸೂಚಿಸಿತ್ತು.
2016: ನವದೆಹಲಿ: ಹಿರಿಯ ಬಿಜೆಪಿ ಸಂಸತ್ ಸದಸ್ಯ ಎಲ್.ಕೆ. ಅಡ್ವಾಣಿ ಅವರು ಸಂಸತ್ ಕಲಾಪ ನಿರಂತರ ಭಗ್ನಗೊಳ್ಳುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಘಟನೆಯ ಬಿಸಿ ಆರುವ ಮುನ್ನವೇ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರೂ ಸಂಸತ್ ಕಲಾಪ ಭಗ್ನಗೊಳ್ಳುತ್ತಿರುವ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತ ಪಡಿಸಿದರು. ಸಂಸದೀಯ ಸ್ವಾತಂತ್ರ್ಯ ವನ್ನು ಕಲಾಪಕ್ಕೆ ಅಡ್ಡಿ ಪಡಿಸುವ ಮೂಲಕ ದುರುಪಯೋಗಿಸಿಕೊಳ್ಳಬಾರದು. ನನಗೆ ಯಾರೇ ವ್ಯಕ್ತಿಯ ಬಗ್ಗೆ ಆಪಾದನೆ ಮಾಡುವ ಉದ್ದೇಶವಿಲ್ಲ. ಆದರೆ ಸಂಸತ್ ಕಲಾಪ ಭಗ್ನಗೊಳಿಸುವುದು ಅಭ್ಯಾಸವಾಗಿ ಬಿಟ್ಟಿದೆ ಎಂದು ಪ್ರಣಬ್ ವಿಷಾದಿಸಿದರು. ‘ಬಹುತೇಕ ಮಂದಿ ಕಲಾಪ ಭಗ್ನಗೊಳಿಸುವಿಕೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಕೆಲವೇ ಕೆಲವರು ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ನುಗ್ಗಿ ಘೊಷಣೆ ಕೂಗುತ್ತಾರೆ, ಕಲಾಪಗಳನ್ನು ಅಸ್ತವ್ಯಸ್ತಗೊಳಿಸುತ್ತಾರೆ. ಸದನವನ್ನು ಮುಂದೂಡುವುದರ ಹೊರತಾಗಿ ಬೇರೆ ಯಾವುದೇ ಆಯ್ಕೆಯೂ ಆಗ ಪೀಠಕ್ಕೆ ಉಳಿಯುವುದಿಲ್ಲ. ರೀತಿಯಾದ ಸಂಸತ್ ಕಲಾಪ ಅಡ್ಡಿಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ರಾಷ್ಟ್ರಪತಿ ಹೇಳಿದರು.

2016: ನವದೆಹಲಿಅಂಡಮಾನ್ ಹ್ಯಾವ್ಲೋಕ್ ಮತ್ತು ನೀಲ್ದ್ವೀಪಗಳಲ್ಲಿ ವಾಯುಭಾರ ಕುಸಿತ ಉಂಟಾಗಿ ಸುರಿದ ಭಾರಿ ಗಾಳಿ ಮಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಅವರನ್ನು ಮರಳಿ ಕರೆತರಲು ಎಲ್ಲಾ ಪ್ರಯತ್ನ ನಡೆದಿದೆ ಎಂದು ಗೃಹಸಚಿವ ರಾಜನಾಥ್ಸಿಂಗ್ತಿಳಿಸಿದರು. ರಾಜನಾಥ್ಅವರು ಅಂಡಮಾನ್ಮತ್ತು ನಿಕೋಬಾರ್ಧ್ವೀಪದ ಗವರ್ನರ್ಜಗಧೀಶ್ಮುಖೈ ಅವರ ಜತೆ ಮಾತನಾಡಿ, ಪರಿಸ್ಥಿತಿ ಹಾಗೂ ಪ್ರವಾಸಿಗರ ರಕ್ಷಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಮಳೆಯಿಂದಾಗಿ ಸಂಕಷ್ಟದಲ್ಲಿ ಸಿಲುಕಿರುವ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ. ಪ್ರವಾಸಿಗರ ರಕ್ಷಣೆಗೆ ಸರ್ಕಾರ ಎಲ್ಲಾ ಕ್ರಮ ಕೈಗೊಂಡಿರುವುದಾಗಿ ಮುಖೈ ತಿಳಿಸಿದ್ದಾರೆ ಎಂದು ರಾಜನಾಥ್ಹೇಳಿದರು. ಹಿಂದಿನ ದಿನ 1,400 ಪ್ರವಾಸಿಗರು ಧ್ವೀಪದಲ್ಲಿ ಸಂಕಷ್ಟಕ್ಕೆ ಸಿಲುಕಿದರು. ಪ್ರವಾಸಿಗರನ್ನು ರಕ್ಷಿಸುವುದಕ್ಕಾಗಿ ನೌಕಾ ಪಡೆಯು ನಾಲ್ಕು ಹಡಗುಗಳನ್ನು ನಿಯೋಜಿಸಲಾಯಿತು. ಆದರೆ, ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯ ಆರಂಭಿಸಲು ಸಾಧ್ಯವಾಗಿರಲಿಲ್ಲ.

2016: ನವದೆಹಲಿ: ಆಮ್ಆದ್ಮಿ ಪಕ್ಷದ ಸಂಸದ ಭಗವಂತ್ಮನ್ಅವರನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗಿಯಾಗದಂತೆ ಅಮಾನತುಗೊಳಿಸಲು ಸಂಸತ್ಸಮಿತಿ ಶಿಫಾರಸು ಮಾಡಿತು. ಎಎಪಿ ಸಂಸದ ಭಗವಂತ್ಮನ್ಸಂಸತ್ತಿನ ಭದ್ರತಾ ವ್ಯವಸ್ಥೆಯನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದರು. ಸಂಬಂಧ ತನಿಖೆ ನಡೆಸಿರುವ ಸಂಸತ್ಸಮಿತಿಯು ಮನ್ಅವರನ್ನು ಅಮಾನತಿನಲ್ಲಿಡಲು ಶಿಫಾರಸು ಮಾಡಿದ್ದು, ಚಳಿಗಾಲದ ಅಧಿವೇಶನದಿಂದ ಮನ್ದೂರ ಉಳಿಯಬೇಕಾಗುತ್ತದೆ. ಕುರಿತು ಸಂಸತ್ಡಿಸೆಂಬರ್ 9ರಂದು ನಿರ್ಣಯ ಕೈಗೊಳ್ಳಲಿದೆ. ಹಿಂದಿನ ಸಂಸತ್ಅಧಿವೇಶನದಲ್ಲಿ ವಿಡಿಯೋ ಪ್ರಕರಣ ಕೋಲಾಹಲ ಸೃಷ್ಟಿಸಿತ್ತು. ಬಳಿಕ ತಪ್ಪು ಒಪ್ಪಿಕೊಂಡಿದ್ದ ಭಗವಂತ್ಮನ್ಸಂಸತ್ತಿನಲ್ಲಿ ಬೇಷರತ್ಕ್ಷಮೆಯಾಚಿಸಿದ್ದರು. ಆದರೆ, ಕ್ಷಮೆಯಾಚಿಸಿದರೆ ಸಾಲದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ವ ಸದಸ್ಯರು ಒತ್ತಾಯಿಸಿದ್ದರು. ಮನೆಯಿಂದ ಸಂಸತ್ಪ್ರವೇಶದವರೆಗೂ ಸಾಗುವ ಹಾದಿಯ ವಿಡಿಯೋ ಚಿತ್ರೀಕರಿಸಿ ಜುಲೈ 21ರಂದು ಸಂಸದ ಮನ್ಫೇಸ್ಬುಕ್ನಲ್ಲಿ ಪ್ರಕಟಿಸಿದ್ದರು. ಸಂಸತ್ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ನಡೆಸಿರುವ ಚಿತ್ರೀಕರಣದ ಕುರಿತು ಲೋಕಸಭಾ ಸ್ಪೀಕರ್ಸುಮಿತ್ರಾ ಮಹಾಜನ್ಜುಲೈ 25ರಂದು ಕಿರೀಟ್ ಸೋಮಯ್ಯ ನೇತೃತ್ವದ ಸಮಿತಿ ರಚಿಸಿ ತನಿಖೆ ನಡೆಸಲು ಸೂಚಿಸಿದ್ದರು.
2014: ಹೈದರಾಬಾದ್: ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ದಿಗ್ಗಜ ನೆಡುನೂರಿ ಕೃಷ್ಣಮೂರ್ತಿ (87)  
ವಿಶಾಖಪಟ್ಟಣಂನಲ್ಲಿರುವ ತಮ್ಮ ನಿವಾಸದಲ್ಲಿ ಈದಿನ ನಸುಕಿನಲ್ಲಿ ಕೊನೆಯುಸಿರೆಳೆದರು. ಶ್ವಾಸಕೋಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಕೃಷ್ಣಮೂರ್ತಿ ಬೆಳಗಿನ ಜಾವ 1.38ರ ಸುಮಾರಿಗೆ ನಿಧನರಾಗಿದ್ದಾರೆಂದು ಕುಟುಂಬಸ್ಥರು ತಿಳಿಸಿದರು. ನೆಡುನೂರಿ ಸಾವಿಗೆ ಸಂತಾಪ ಸೂಚಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು, ಕೃಷ್ಣಮೂರ್ತಿ ಕರ್ನಾಟಕ ಶಾಸ್ತ್ರೀಯ ಸಂಗೀತದ ರಾಯಭಾರಿಯಂತಿದ್ದರು ಎಂದರು. 1927 ಅ.10ರಂದು ಆಂಧ್ರದ ಕೊತ್ತಪಲ್ಲಿಯಲ್ಲಿ ಜನಿಸಿದ ಕೃಷ್ಣಮೂರ್ತಿ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದರು. ಸಂಗೀತ ಕಾಲೇಜುಗಳ ಮುಖ್ಯಸ್ಥರಾಗಿ ಸೇವೆಸಲ್ಲಿಸಿದ್ದ ಅವರು, ಟಿಟಿಡಿಯ ಅನ್ನಮಾಚಾರ್ಯ ಕೀರ್ತನೆಗಳಿಗೆ ಕಂಠ ಕೊಟ್ಟವರು. ಅಲ್ಲದೆ ಟಿಟಿಡಿ ಆಸ್ಥಾನ ವಿದ್ವಾನ್ ಆಗಿಯೂ ಸೇವೆಸಲ್ಲಿಸಿದ್ದರು. 1991ರಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಸಂಗೀತ ಕಲಾನಿಧಿ ಪ್ರಶಸ್ತಿ ನೀಡಿ ಅವರನ್ನು ಗೌರವಿಸಿತ್ತು..

2014: ಕೇಪ್ ಟೌನ್: ಮಧುಚಂದ್ರದ ವೇಳೆ ಸೆಕ್ಸ್ ನಿರಾಕರಿಸಿದ ಬ್ರಿಟಿಷ್ ಇಂಡಿಯನ್ ಉದ್ಯಮಿ ಶ್ರಿಯನ್ ದೆವಾನಿ ಕೊಲೆಗಾರನಲ್ಲ ಎಂದು ದಕ್ಷಿಣ ಆಫ್ರಿಕಾದ ಕೋರ್ಟ್ ಹೇಳಿತು. 2010ರಲ್ಲಿ ಹನಿಮೂನ್ ವೇಳೆ ಇಂಡೋ ಸ್ವೀಡಿಷ್ ಪತ್ನಿ ಅನ್ನಿ ದೆವಾನಿ ಕೊಲೆ ಸಂಚು ಆರೋಪ ಹೊತ್ತಿದ್ದ ದೆವಾನಿಯನ್ನು ಕೋರ್ಟ್ ಆರೋಪ ಮುಕ್ತಗೊಳಿಸಿತು. ಹನಿಮೂನ್ ವೇಳೆ ಸೆಕ್ಸ್ ನಿರಾಕರಿಸುತ್ತಾ ಬಂದ 34ರ ಹರೆಯ ಶ್ರಿಯನ್ ದೆವಾನಿ ಸಲಿಂಗಕಾಮಿ ಎಂಬ ಸತ್ಯ ತಿಳಿದ 28 ವರ್ಷದ ಅನ್ನಿ ದೆವಾನಿ, ಪತಿಯಿಂದ ವಿವಾಹ ವಿಚ್ಛೇದನ ಪಡೆಯಲು ಮುಂದಾಗಿದ್ದಳು. ಆದರೆ ಅಷ್ಟರಲ್ಲೇ ಅನ್ನಿಯ ಕೊಲೆಯಾಗಿತ್ತು. ಶ್ರಿಯನ್ ತನ್ನ
ಸಲಿಂಗಕಾಮಿ ನೆಟ್ವರ್ಕ್ ಬಳಸಿ ಆಕೆಯನ್ನು ಕೊಲೆ ಮಾಡಿಸಿದ್ದಾನೆ ಎಂಬ ಆರೋಪವನ್ನು ಹೊತ್ತಿದ್ದ. ಈ ಪ್ರಕರಣಕ್ಕೆ ಪ್ರಮುಖ ಸಾಕ್ಷಿಯಾಗಿದ್ದ ಟ್ಯಾಕ್ಸಿ ಚಾಲಕ ಜೋಲಾ ಟಾಂಗೋ ನೀಡಿದ ಹೇಳಿಕೆಗಳು ದೆವಾನಿಯ ಆರೋಪಿ ಎಂದು ಸಾಬೀತು ಪಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೋರ್ಟ್ ಶ್ರಿಯನ್ ಕೊಲೆಗಾರನಲ್ಲ ಎಂದು ಹೇಳಿತು. ವಿಚಾರಣೆ ಆರಂಭದಲ್ಲೇ ದೆವಾನಿ ತಾನು ಬೈ ಸೆಕ್ಸುಯಲ್, ಸಲಿಂಗಿ ವಿಟರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಅದರೆ ನನ್ನ ಪತ್ನಿಯನ್ನು ಕೊಲ್ಲಿಸುವಷ್ಟು ಕ್ರೂರಿಯಲ್ಲ ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೆ ಎಂದು ಹೇಳಿದ್ದ. ಈ ಪ್ರಕರಣದ ಸಹ ಆರೋಪಿಗಳಾದ ಟ್ಯಾಕ್ಸಿ ಚಾಲಕ ಟಾಂಗೋಗೆ 18 ವರ್ಷ ಜೈಲು, ಮಿವಾಮಾಡೊಡಾ ಕ್ವಾಬೆಗೆ 25 ವರ್ಷ ಹಾಗೂ ಜೊಲಿಲೆ ಗೆನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಈ ಪೈಕಿ ಗೆನಿ ಜೈಲಿನಲ್ಲೇ ಮೃತನಾಗಿದ್ದ. ಅನ್ನಿ ಜೊತೆಗೂಡಿ ಕೇಪ್ಸ್ ಟೌನಿನಲ್ಲಿ ಹನಿಮೂನಿಗೆ ಬಂದಿದ್ದ. ಆದರೆ ಇಂಗ್ಲೆಂಡಿಗೆ ಒಬ್ಬನೇ ಮರಳಿದ್ದ. ಅನ್ನಿ ಸೆಕ್ಸ್ ಮನವಿಯನ್ನು ನಿರಾಕರಿಸಿದ ಶ್ರಿಯಾನಿ ಮುಂಬೈನಲ್ಲಿ ಆರತಕ್ಷತೆ ಆದ ಮೇಲೆ ಇದೆಲ್ಲ ಇಟ್ಟುಕೊಳ್ಳೊಣ ಎಂದಿದ್ದ. ಆದರೆ, ಅನ್ನಿಗೆ ತನ್ನ ಪತಿ ಆತನ ಸಲೀಂಗಿ ಗೆಳೆಯನಿಗೆ ಕಳಿಸಿದ್ದ ಸರಸ ಸಂದೇಶಗಳು ಸಿಕ್ಕಿದ್ದವು. ಕೂಡಲೇ ಅನ್ನಿ ವಿಚ್ಛೇದನಕ್ಕೆ ತಯಾರಿ ನಡೆಸಿದ್ದಳು. ಆದರೆ ಮರುದಿನವೇ ಅನ್ನಿ ಕೊಲೆಯಾಗಿತ್ತು.

2014: ಮುಂಬೈ: ಐಟಿ ಕ್ಷೇತ್ರದ ದಿಗ್ಗಜ ಎನ್ನಿಸಿಕೊಂಡ ಇನ್ಫೋಸಿಸ್‌ ಸಂಸ್ಥೆಯ ಸಹ ಸ್ಥಾಪಕರಾದ ಎನ್.ಆರ್ ನಾರಾಯಣ ಮೂರ್ತಿ, ನಂದನ್ ನೀಲೆಕಣಿ, ಕೆ. ದಿನೇಶ್ ಮತ್ತು ಅವರ ಕುಟುಂಬ ಸದಸ್ಯರು ತಮ್ಮ ಒಡೆತನದಲ್ಲಿದ್ದ ಕಂಪೆನಿಯ 1.1 ಬಿಲಿಯನ್ ಡಾಲರ್ (ರೂ. 6,484 ಕೋಟಿ) ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದರು. ಈ ನಾಲ್ವರು ತಮ್ಮ
ಒಡೆತನದಲ್ಲಿದ್ದ ಒಟ್ಟು 326 ಲಕ್ಷ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಗೆ(ಎಫ್‌ಐಐ) ಪ್ರತಿ ಷೇರಿಗೆ ರೂ. 1,988 ರಂತೆ ಮಾರಾಟ ಮಾಡಿದ್ದಾರೆ. ಇದರಿಂದ ಸಂಗ್ರಹವಾಗುವ ಮೊತ್ತವನ್ನು ದಾನ ಧರ್ಮದ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಇನ್ಫೋಸಿಸ್ ಪರವಾಗಿ ಈ ಮಾರಾಟ ಪ್ರಕ್ರಿಯೆ ನಡೆಸಿದ ಡಾಯಿಷ್ ಈ ಕ್ವಿಟ್ ಇಂಡಿಯಾ ಸಂಸ್ಥೆ ತಿಳಿಸಿತು. ನಾರಾಯಣ ಮೂರ್ತಿ ಕುಟುಂಬ ತಮ್ಮ ಒಡೆತನದ ಒಟ್ಟು ಷೇರುಗಳಲ್ಲಿ ಶೇ. 23ರಷ್ಟು ಅಂದರೆ, 120 ಲಕ್ಷ ಷೇರುಗಳನ್ನು ಮಾರಾಟ ಮಾಡಿತು. ನೀಲೆಕಣಿ ಕುಟುಂಬ ತಮ್ಮ ಒಡೆತನದ ಷೇರುಗಳಲ್ಲಿ ಶೇ 31.3ರಷ್ಟು ಅಂದರೆ, 120 ಲಕ್ಷ ಷೇರುಗಳನ್ನು, ದಿನೇಶ್‌ ಕುಟುಂಬ ತಮ್ಮ ಒಡೆತನದ ಷೇರುಗಳಲ್ಲಿ ಶೇ 21.5ರಷ್ಟು ಅಂದರೆ, 62 ಲಕ್ಷ ಷೇರುಗಳನ್ನು ಮತ್ತು ಕುಮಾರಿ ಶಿಬುಲಾಲ್‌ ಅವರು ತಮ್ಮ ಒಡೆತನದ ಷೇರುಗಳಲ್ಲಿ ಶೇ9.6ರಷ್ಟು ಅಂದರೆ, 24 ಲಕ್ಷ ಷೇರುಗಳನ್ನು ಮಾರಾಟ ಮಾಡಿದರು ಎಂದು ಡಾಯಿಷ್‌ ಈಕ್ವಿಟಿ ಹೇಳಿತು. ಡಿ.5ರಂದು ಇನ್ಫೊಸಿಸ್ ಮಾರುಕಟ್ಟೆ ಮೌಲ್ಯ 2,37,768 ಕೋಟಿಯಷ್ಟಿತ್ತು. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಇನ್ಫೊಸಿಸ್‌ ಷೇರು ಮೌಲ್ಯ ಶೇ 21.4ರಷ್ಟು ಹೆಚ್ಚಿದೆ.

2014: ಚಿಕ್ಕಮಗಳೂರು : ಪ್ರಮುಖ ನಕ್ಸಲ್‌ ಹೋರಾಟಗಾರರಿಬ್ಬರು ಈದಿನ ಶರಣಾಗತರಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳುವಲ್ಲಿ ಪ್ರಮುಖ ಹೆಜ್ಜೆ ಇಟ್ಟರು. ಸಿರಿಮನೆ ನಾಗರಾಜ್‌ ಹಾಗೂ ನೂರ್‌ ಜುಲ್ಫಿಕರ್‌ ಅವರು ಶರಣಾದ ನಕ್ಸಲ್‌ ನಾಯಕರು. ಸಿರಿಮನೆ ಮತ್ತು ಜುಲ್ಫಿಕರ್‌ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿ ಶೇಖರಪ್ಪ ಅವರೆದುರು ಶರಣಾಗತರಾದರು. ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹಾಗೂ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾಗಿರುವ ದೊರೆಸ್ವಾಮಿ ಅವರು ಈ ಕ್ಷಣಕ್ಕೆ ಸಾಕ್ಷಿಯಾಗಿದ್ದರು.

2014: ಜಿನೀವಾ: 2014 ಮಕ್ಕಳ ಪಾಲಿಗೆ ಕರಾಳ ವರ್ಷ ಎಂದು ಯುನಿಸೆಫ್ ಕಾರ್ಯ ನಿರ್ವಾಹಕ ನಿರ್ದೇಶಕ ಆಂಥೋನಿ ಲೆಕ್ ತಿಳಿಸಿದರು. ಮಧ್ಯ ಆಫ್ರಿಕಾ ದೇಶಗಳು, ಇರಾಕ್, ಸಿರಿಯಾ, ದಕ್ಷಿಣ ಸುಡಾನ್, ಉಕ್ರೇನ್ ಮತ್ತು ಪ್ಯಾಲಿಸ್ತೀನ್
ಪ್ರಾಂತ್ಯದಲ್ಲಿ ನಡೆಯುತ್ತಿರುವ ಘರ್ಷಣಿಯಿಂದಾಗಿ ಸುಮಾರು 1.5 ಕೋಟಿ ಮಕ್ಕಳು ಸಮಸ್ಯೆಗೆ ತುತ್ತಾಗಿದ್ದಾರೆ. ಅಫ್ಘಾನಿಸ್ತಾನ, ಕಾಂಗೋ, ನೈಜೀರಿಯಾ,ಲ ಪಾಕಿಸ್ತಾನ, ಸೊಮಾಲಿಯಾ, ಸುಡಾನ್, ಯೆಮನ್ ಸೇರಿದಂತೆ ಪ್ರಪಂಚದಾದ್ಯಂತ ಸಶಸ್ತ್ರ ಘರ್ಷಣೆ ನಡೆಯುತ್ತಿರುವ ದೇಶಗಳಲ್ಲಿ ಸುಮಾರು 23 ಕೋಟಿ ಮಕ್ಕಳಿದ್ದಾರೆ. ಶಾಲೆಯಲ್ಲಿ ಪಾಠ ಕಲಿಯುತ್ತಿರುವಾಗ, ನಿದ್ದೆ ಮಾಡುತ್ತಿರುವಾಗ ಮಕ್ಕಳ ಮೇಲೆ ಹಲ್ಲೆಗಳಾಗಿವೆ. ಮಕ್ಕಳನ್ನು ಅನಾಥರನ್ನಾಗಿ ಮಾಡಲಾಗಿದೆ, ಅಪಹರಣ, ಕಿರುಕುಳ, ಬಾಲ ಕಾರ್ವಿುಕರಾಗಿ ಸೇರ್ಪಡೆ, ರೇಪ್ ಪ್ರಕರಣ ಮತ್ತು ಗುಲಾಮಗಿರಿಯಂತಹ ಕೃತ್ಯಗಳಲ್ಲಿ ಮಕ್ಕಳನ್ನು ಉಪಯೋಗಿಕೊಳ್ಳಲಾಗಿದೆ. ಮಧ್ಯ ಆಫ್ರಿಕಾ ರಾಷ್ಟ್ರಗಳಲ್ಲಿ 23 ಲಕ್ಷ ಮಕ್ಕಳು ಸಮಸ್ಯೆಗೆ ತುತ್ತಾಗಿದ್ದು, 10,000 ಮಕ್ಕಳನ್ನು ಸಶಸ್ತ್ರ ಪಡೆಗಳಿಗೆ ಸೇರಿಸಿಕೊಳ್ಳಲಾಗಿದೆ. ಜತೆಗೆ 2014ರಲ್ಲಿ 430 ಮಕ್ಕಳು ಘರ್ಷಣೆಗೆ ಬಲಿಯಾಗಿದ್ದಾರೆ. ಸಿರಿಯಾದಲ್ಲಿ 73ಲಕ್ಷ ಮಕ್ಕಳು ನಾಗರಿಕ ಯುದ್ಧದಿಂದ ಪ್ರಭಾವಕ್ಕೆ ಒಳಗಾಗಿದ್ದು, ಇರಾಕ್​ನಲ್ಲಿ 27 ಲಕ್ಷ ಮಕ್ಕಳು ತೊಂದರೆಗೆ ಒಳಗಾಗಿದ್ದಾರೆ. ದಕ್ಷಿಣ ಸುಡಾನ್​ನಲ್ಲಿ 7,50,000 ಮಕ್ಕಳನ್ನು ಸ್ಥಳಾಂತರಿಸಲಾಗಿದೆ. ಅವರಲ್ಲಿ 3,20,000 ಮಕ್ಕಳು ಅನಾಥರಾಗಿ ಜೀವನ ಸಾಗಿಸುತ್ತಿದ್ದಾರೆ ಎಂದು ಯುನಿಸೆಫ್ ಹೇಳಿತು.

2014:ರಿಯಾದ್: ಸೌದಿ ಅರೇಬಿಯಾ ದೇಶಾದ್ಯಂತ ನಡೆಸಿದ ದಾಳಿಯಲ್ಲಿ 135 ಉಗ್ರವಾದಿಗಳನ್ನು ಬಂಧಿಸಲಾಗಿದೆ ಎಂದು ಸೌದಿ ಅರೇಬಿಯಾ ಆಂತರಿಕ ಸಚಿವಾಲಯ ತಿಳಿಸಿತು. ಬಂಧಿತ ಉಗ್ರವಾದಿಗಳ ಪೈಕಿ 26 ವಿದೇಶಿಯರೂ ಸೇರಿದ್ದು, ಅವರಲ್ಲಿ ಬಹುತೇಕರು ಸಿರಿಯಾ ದೇಶದವರು. ಉಳಿದಂತೆ ಯೆಮನ್, ಬಹರೇನ್, ಇರಾಕ್, ಈಜಿಪ್ಟ್, ಲೆಬನಾನ್, ಇಥಿಯೋಪಿಯಾ ಮತ್ತು ಆಫ್ಘಾನಿಸ್ತಾನದ ಉಗ್ರರು ಸೇರಿದ್ದಾರೆ. ಇವರೆಲ್ಲರೂ ಐಎಸ್​ಐಎಸ್ ಉಗ್ರರಿಂದ ಪ್ರಚೋದಿತರಾಗಿದ್ದರು ಎಂದು ತಿಳಿಸಲಾಯಿತು. ಐಎಸ್​ಐಎಸ್ ಉಗ್ರರು ಮತ್ತು ಅಲ್ ಖೈದಾ ಸಂಘಟನೆಗಳು ಸಾಮಾಜಿಕ ಜಾಲತಾಣಗಳು ಮೂಲಕ ಸೌದಿ ಅರೇಬಿಯಾ ಯುವಕರನ್ನು ಸೆಳೆಯಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಸರ್ಕಾರ ಎಚ್ಚೆತ್ತಿದ್ದು, ದಾಳಿ ನಡೆಸುವ ಮೂಲಕ ಉಗ್ರಗಾಮಿಗಳನ್ನು ಬಂಧಿಸಿತು.

2008: ಮುಂಬೈ ಭಯೋತ್ಪಾದನೆಯ ಬಿರುಗಾಳಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರುವುದು ಎಂಬ ಎಲ್ಲ ಊಹೆಗಳು ಸುಳ್ಳಾಗಿ, ಐದು ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮೂರರಲ್ಲಿ (ದೆಹಲಿ, ಮಹಾರಾಷ್ಟ್ರ, ಮಿಜೋರಂ) ಜಯಭೇರಿ ಬಾರಿಸಿದರೆ, ಬಿಜೆಪಿಯು ರಾಜಸ್ಥಾನವನ್ನು ಕಳೆದುಕೊಂಡು ಎರಡು ರಾಜ್ಯಗಳಲ್ಲಷ್ಟೇ ಅಧಿಕಾರದ ಚುಕ್ಕಾಣಿ ಹಿಡಿಯುವ ಹಾದಿಯಲ್ಲಿ ಮುಂದುವರೆಯಿತು. ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಈ 'ಮಿನಿ ಚುನಾವಣೆ'ಯು ಸ್ಪಷ್ಟ ದಿಕ್ಸೂಚಿಯಾಗುವ ಸಾಧ್ಯತೆಗಳಿದ್ದುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಮೇಲುಗೈ ಸಾಧಿಸಲು ಶಕ್ತಿ ಮೀರಿ ಪ್ರಯತ್ನಿಸಿದ್ದವು.

2008: ದೇಶದ ವಿವಿಧ ಕಡೆ ಲಷ್ಕರ್- ಇ- ತೊಯ್ಬಾ (ಎಲ್‌ಇಟಿ) ಕಾರ್ಯಕರ್ತರ ವಿರುದ್ಧ ಗುಪ್ತ ಕಾರ್ಯಾಚರಣೆ ಆರಂಭಿಸಿದ ಪಾಕಿಸ್ಥಾನದ ಭದ್ರತಾ ಪಡೆಯು, ಸಂಘಟನೆಯ ನಾಯಕ, ಮುಂಬೈ ದಾಳಿಯ ಸೂತ್ರಧಾರ ಎಂದು ನಂಬಲಾದ ಝಾಕೀರ್ ರೆಹಮಾನ್ ಲಖ್ವಿಯನ್ನು ಬಂಧಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿದವು. ಪಾಕ್ ಭದ್ರತಾ ಪಡೆಯು ದೇಶದ ವಿವಿಧ ಕಡೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಎಲ್‌ಇಟಿ ವಿರುದ್ಧ ಗುಪ್ತ ಕಾರ್ಯಾಚರಣೆ ಆರಂಭಿಸಿದೆ ಎಂದು ಡಾನ್ ಪತ್ರಿಕೆಯೂ ವರದಿ ಮಾಡಿತು.

2008: ಚುಂಬನದ ಮೋಹಕ್ಕೆ ಸಿಲುಕಿದ ಯುವತಿಯೊಬ್ಬಳು ತನ್ನ ಕಿವಿತಮ್ಮಟೆಯನ್ನೇ ಕಳೆದುಕೊಂಡು ಭಾಗಶಃ ಕಿವುಡಿಯಾದ ವಿಲಕ್ಷಣ ಪ್ರಸಂಗ ದಕ್ಷಿಣ ಚೀನಾದ ಗ್ವಾಂಗ್‌ಡಂಗ್ ಪ್ರಾಂತ್ಯದಿಂದ ವರದಿಯಾಯಿತು. ಒಳಗಿವಿ ಮತ್ತು ಬಾಯಿಗೆ ನಳಿಕೆಯೊಂದರ ಸಂಪರ್ಕ ಇರುತ್ತದೆ. ಕಿವಿ ಮತ್ತು ಬಾಯಿಯಲ್ಲಿನ ಒತ್ತಡವನ್ನು ಸರಿಸಮಾನಗೊಳಿಸುವುದು ಈ ನಳಿಕೆಯ ಕೆಲಸ. ದೀರ್ಘ ಚುಂಬನದ ವೇಳೆ ಬಾಯಿಯಲ್ಲಿನ ಒತ್ತಡ ಕಡಿಮೆಯಾದುದರಿಂದ ಕಿವಿತಮಟೆ ಛಿದ್ರಗೊಂಡಿತು ಎಂದು ಜುಹೈ ಸೆಕೆಂಡ್ ಪೀಪಲ್ಸ್ ಹಾಸ್ಪಿಟಲ್ಲಿನ ಡಾ. ಲಿ ಹೇಳಿದರು. 20ರ ಹರೆಯದ ಈ ಯುವತಿಗೆ ಮತ್ತೆ ತನ್ನ ಎಡಗಿವಿಯಲ್ಲಿ ಶಬ್ಧ ಕೇಳಿಸಬೇಕಾದರೆ ಇನ್ನೂ ಎರಡು ತಿಂಗಳು ಕಾಯುವುದು ಅನಿವಾರ್ಯವಾಯಿತು. ಚುಂಬನದಿಂದ ಯಾವುದೇ ಅಪಾಯವೂ ಇಲ್ಲ ಎಂಬುದು ಇದುವರೆಗೆ ತಿಳಿದ ಸಂಗತಿ. ಆದರೆ ಇಲ್ಲೂ ಕೆಲವು ಅಪಾಯ ಇದೆ ಎಂಬುದನ್ನು ಈ ವಿದ್ಯಮಾನ ತೋರಿಸಿಕೊಟ್ಟಿತು.

2008: ಕುಷ್ಠ ರೋಗಿಗಳು ಹಾಗೂ ಕುಷ್ಠ ರೋಗಿಗಳ ಮಕ್ಕಳಿಗಾಗಿ ಮಾಡಿದ ಸಮಾಜ ಸೇವೆಯನ್ನು ಗುರುತಿಸಿ ಗುಲ್ಬರ್ಗ ನಗರದ ಹಣಮಂತ ದೇವನೂರ ಅವರಿಗೆ ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಅಧಿಕಾರಿತಾ ಮಂತ್ರಾಲಯ ನವದೆಹಲಿಯಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿತು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು ವಿಜ್ಞಾನ ಭವನದಲ್ಲಿ ಪ್ರಶಸ್ತಿ ಫಲಕ, ಮೆಡಲ್ ಹಾಗೂ 25 ಸಾವಿರ ನಗದು ಬಹುಮಾನ ನೀಡಿದರು.

2007: ದಶಕದ ನಂತರ ಕೊನೆಗೂ ಮಂಗಳೂರು - ಬೆಂಗಳೂರು ಮಧ್ಯೆ ರೈಲು ಸಂಚಾರ ಆರಂಭಗೊಂಡಿತು. ಮಂಗಳೂರು ರೈಲು ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲು ಆರಂಭಕ್ಕೆ ರೈಲ್ವೇ ಸಚಿವ ಲಾಲೂ ಪ್ರಸಾದ್ ಹಸಿರು ನಿಶಾನೆ ತೋರಿಸಿದರು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ- ಸಕಲೇಶಪುರ ನಡುವಣ ಬ್ರಾಡ್ ಗೇಜ್ ಹಳಿಯನ್ನೂ ಅವರು ಉದ್ಘಾಟಿಸಿದರು. ಸಚಿವ ಲಾಲು ಪ್ರಸಾದ್ ರಿಮೋಟ್ ಮೂಲಕ ಉದ್ಘಾಟನಾ ಫಲಕದ ಪರದೆ ಸರಿಸಿ, ಸಿಗ್ನಲ್ಲಿನ ಗೇರ್ ಅದುಮಿ, ಮಂಗಳೂರು-ಬೆಂಗಳೂರು ರೈಲಿಗೆ ಹಸಿರು ನಿಶಾನೆ ತೋರಿಸುತ್ತಿದ್ದಂತೆಯೇ 6517 ನಂಬರಿನ ರೈಲು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮುಂದಡಿಯಿಟ್ಟಿತು. ರಾಷ್ಟ್ರಗೀತೆಯ ನಾದಕ್ಕನುಗುಣವಾಗಿ ಹಾರ್ನ್ ಹಾಕುತ್ತಾ ಚುಕು ಪುಕು ಸದ್ದು ಮಾಡುತ್ತಾ ಹೊರಟ ರೈಲಿನ ದೃಶ್ಯವನ್ನು ವೇದಿಕೆ ಪಕ್ಕದಲ್ಲಿ ನಿರ್ಮಿಸಿದ್ದ ಬೃಹತ್ ಡಿಜಿಟಲ್ ಪರದೆಯಲ್ಲಿ ಕಂಡ ಕರಾವಳಿಯ ಜನೆ ಪುಳಕಗೊಂಡರು. ಸಕಲೇಶಪುರ- ಸುಬ್ರಹ್ಮಣ್ಯದ ನಡುವೆ ಸುಮಾರು 128 ಸೇತುವೆ ಹಾಗೂ 58 ಸುರಂಗ ಮಾರ್ಗಗಳನ್ನು ಹೊಂದಿರುವ ಘಾಟ್ ಮಾರ್ಗದಲ್ಲಿ ಕರಾವಳಿ ಜನತೆಯ ದಶಕಗಳ ಕನಸು, ರಾಜಧಾನಿಯ ಸಂಪರ್ಕ, ನಿಸರ್ಗ ಸಿರಿ ದರ್ಶನದ ಬ್ರಾಡ್ ಗೇಜ್ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲನ್ನು ಅಪ್ಪಟ ಕನ್ನಡಿಗ ಮೈಸೂರಿನ ರಾಮಸ್ವಾಮಿ ಮೊದಲ ಬಾರಿ ಚಲಾಯಿಸಿದರು. ರೈಲ್ವೆ ವಿಭಾಗದಲ್ಲಿ ಒಟ್ಟು 33 ವರ್ಷಗಳ ರೈಲು ಚಾಲನೆ ಅನುಭವ ಇರುವ ಕ್ಲಾಸ್-1 ಚಾಲಕರಾದ ರಾಮಸ್ವಾಮಿ, ಮಂಗಳೂರು- ಬೆಂಗಳೂರು ಮಧ್ಯೆ ಮೀಟರ್ ಗೇಜ್ ರೈಲನ್ನೂ ಚಲಾಯಿಸಿದ್ದರು. ದೇಶದ ಇತರ ಕಡೆಗಳಲ್ಲಿ 1843ರಲ್ಲೇ ರೈಲು ಸಂಚಾರ ಆರಂಭಗೊಂಡರೂ ಮಂಗಳೂರಿಗೆ ಮೊದಲ ರೈಲು ಬಂದದ್ದೇ 1907ರಲ್ಲಿ. ಮಂಗಳೂರಿಗೆ ಸಮೀಪದ ಉಳ್ಳಾಲದಲ್ಲಿ ರೈಲ್ವೆ ಸೇತುವೆ ನಿರ್ಮಾಣಗೊಂಡ ಬಳಿಕ 1907ರಲ್ಲಿ ಮೊತ್ತಮೊದಲು ಕೇರಳ ಕಡೆಯಿಂದ ಮಂಗಳೂರಿಗೆ ರೈಲು ಬಂದಿತ್ತು. ಇದಾದ 100 ವರ್ಷಗಳ ಬಳಿಕ ಮಂಗಳೂರು-ಬೆಂಗಳೂರು ಮಧ್ಯೆ ಬ್ರಾಡ್ ಗೇಜ್ ಮೇಲೆ ರೈಲು ಸಂಚಾರ ಈದಿನ ಆರಂಭಗೊಂಡಿತು. ಕೊಂಕಣ ರೈಲು ಬಳಿಕ ಕರಾವಳಿಗೆ ಇದು ಮಹತ್ತರ ಕೊಡುಗೆ. ಶಿರಾಡಿ ಘಾಟ್ ರಸ್ತೆ ಹದಗೆಟ್ಟು ಸಂಪರ್ಕ ಸ್ಥಗಿತಗೊಂಡಾಗ ಇಲ್ಲಿ ರೈಲು ಸಂಚಾರದ ಕೂಗು ಬಲವಾಯಿತು. 2006ರ ಮೇ ತಿಂಗಳಲ್ಲೇ ಗೂಡ್ಸ್ ರೈಲು ಓಡಾಟ ಪ್ರಾರಂಭ ಆದರೂ ಪ್ರಯಾಣಿಕ ರೈಲು ಮಾತ್ರ ಓಡಲಿಲ್ಲ. ಕಬ್ಬಿಣದ ಅದಿರು ಸಾಗಾಟ ಮೂಲಕ ಭಾರಿ ಲಾಭ ತಂದುಕೊಂಡುವ ಮಾರ್ಗವಾಗಿ ಇದು ಪರಿವರ್ತಿತವಾಯಿತಾದರೂ ಪ್ರಯಾಣಿಕ ರೈಲು ಸಂಚಾರಕ್ಕೆ ಮುಹೂರ್ತ ಕೂಡಿ ಬಂದಿರಲೇ ಇಲ್ಲ. ಕೊನೆಗೆ ಜನರ ಚಳವಳಿಯ ಬಳಿಕ ಈದಿನ ಬ್ರಾಡ್ ಗೇಜ್ ಆಗಿ ಪರಿವರ್ತನೆಗೊಂಡ ಮಾರ್ಗದಲ್ಲಿ ರೈಲು ಸಂಚಾರ ಪುನರಾರಂಭಗೊಂಡಿತು. ದೀರ್ಘ ಹೋರಾಟದ ಬಳಿಕ ಮೀಟರ್ ಗೇಜ್ ಮಾರ್ಗದಲ್ಲಿ ಕೆಲವು ವರ್ಷಗಳ ಹಿಂದೆ ಆರಂಭವಾಗಿದ್ದ ರೈಲುಸಂಚಾರ ಬ್ರಾಡ್ ಗೇಜ್ ಮಾರ್ಗ ಪರಿವರ್ತನೆ ಸಲುವಾಗಿ ನಿಂತು ಹೋಗಿತ್ತು. ಮಂಗಳೂರು- ಬೆಂಗಳೂರು ಬ್ರಾಡ್ ಗೇಜ್ ರೈಲು ಸಂಚಾರ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಮುಖ್ಯ ಅತಿಥಿಯಾಗಿದ್ದರು.

2007: ಅನಿಲ ಸ್ಫೋಟದಿಂದ ಅಪಾಯದಲ್ಲಿ ಸಿಲುಕಿಕೊಂಡಿದ್ದ ಸಹೋದ್ಯೋಗಿಗಳನ್ನು ರಕ್ಷಿಸಲು ಗಣಿಯೊಳಗೆ ಧಾವಿಸಿದವರೂ ಸೇರಿದಂತೆ ಸುಮಾರು 104 ಮಂದಿ ಕಲ್ಲಿದ್ದಲು ಗಣಿ ಕಾರ್ಮಿಕರು ಅಸು ನೀಗಿದ ದಾರುಣ ಘಟನೆ ಚೀನಾದ ಶಾಂಗ್ ಶಿ ಪ್ರಾಂತ್ಯದ ಹಾಂಗ್ ಟಾಗ್ ಕೌಂಟಿಯಲ್ಲಿ ಸಂಭವಿಸಿತು.

2007: ದಕ್ಷಿಣ ಫೆಸಿಫಿಕ್ ನ ಫಿಜಿಯಲ್ಲಿ ತೀವ್ರವಾದ ಬಿರುಗಾಳಿಯಿಂದ ಕೂಡಿದ ಸಿಕೋಬಿಯಾ ಚಂಡಮಾರುತ ಬೀಸಿದ ಪರಿಣಾಮವಾಗಿ ಎರಡು ಸಣ್ಣಹಳ್ಳಿಗಳು ನೆಲಸಮವಾದವು. ನಿರಾಶ್ರಿತರಾದ 69 ಮಂದಿ ಗುಹೆಗಳಲ್ಲಿ ಆಶ್ರಯ ಪಡೆದರು.

2006: ಕೊಯಮತ್ತೂರಿನ ವಕೀಲ ಎಂ. ರಾಜಾ ಷರೀಫ್ ಅವರು 7 ಅಡಿ ಎತ್ತರ, 4 ಅಡಿ ಅಗಲ ಮತ್ತು 250 ಕಿಲೋ ಗ್ರಾಂ ತೂಕದ ಬೃಹತ್ ಕುರಾನ್ ಗ್ರಂಥವನ್ನು ತಮಿಳುನಾಡಿನ ಚೆನ್ನೈಯಲ್ಲಿ ಪ್ರದರ್ಶಿಸಿದರು. ಅರಬ್ಬೀ ಭಾಷೆಯಲ್ಲಿ ಬರೆಯಲಾಗಿರುವ ಈ ಗ್ರಂಥ 610 ಪುಟಗಳನ್ನು ಹೊಂದಿದೆ. ಷರೀಫ್ ಕುಟುಂಬದ ಎಲ್ಲ ಸದಸ್ಯರೂ ಈ ಗ್ರಂಥ ರಚನೆಗೆ ಒಂದು ವರ್ಷಕಾಲ ಶ್ರಮಿಸಿದ್ದಾರೆ. ಷರೀಫ್ ಅವರು ಈ ಹಿಂದೆ ತಾಳೆಗರಿಯಲ್ಲಿ ತಮಿಳು ಭಾಷೆಯ `ತಿರುಕ್ಕುರಳ್' ಗ್ರಂಥದ 1330 ಪದ್ಯಗಳನ್ನು ಬರೆದು ದಾಖಲೆ ನಿರ್ಮಿಸಿದ್ದರು. 2003ರಲ್ಲಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೊಯಮತ್ತೂರಿಗೆ ಭೇಟಿ ನೀಡಿದ್ದಾಗ ಷರೀಫ್ ಅವರು ಈ ತಾಳೆಗರಿ ಹಾಳೆಯನ್ನು ರಾಷ್ಟ್ರಪತಿಗಳಿಗೆ ಅರ್ಪಿಸಿದ್ದರು.

2006: ಪ್ರತಿಕೂಲ ಹವಾಮಾನದಿಂದಾಗಿ ಫ್ಲೋರಿಡಾದ ಕೇಪ್ ಕೆನವರಾಲಿನಲ್ಲಿ ನಡೆಯಬೇಕಾಗಿದ್ದ ಅಮೆರಿಕದ ಗಗನನೌಕೆ `ಡಿಸ್ಕವರಿ'ಯ ಉಡಾವಣೆಯನ್ನು ಮುಂದೂಡಲಾಯಿತು. ರಾತ್ರಿ ನಡೆಯಬೇಕಾಗಿದ್ದ ಉಡಾವಣೆಗೆ ಕೆಲವೇ ನಿಮಿಷಗಳ ಮೊದಲು ಹವಾಮಾನದಲ್ಲಿ ವೈಪರೀತ್ಯ ಕಂಡುಬಂದದ್ದರಿಂದ ನಾಸಾ ವಿಜ್ಞಾನಿಗಳು ಇದನ್ನು ಮುಂದೂಡುವ ನಿರ್ಧಾರ ಕೈಗೊಂಡರು. ಭಾರತದ ಸುನಿತಾ ವಿಲಿಯಮ್ಸ್ ಸೇರಿದಂತೆ ಏಳು ಮಂದಿ ಗಗನಯಾತ್ರಿಗಳು ಡಿಸ್ಕವರಿ ಮೂಲಕ ಗಗನಕ್ಕೆ ನೆಗೆದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ದುರಸ್ತಿ ಮಾಡಬೇಕಾಗಿತ್ತು. ಮೂಲ ಯೋಜನೆಯಂತೆ ಅಮೆರಿಕದ ಕಾಲಮಾನ ರಾತ್ರಿ 9.35 ನಿಮಿಷಕ್ಕೆ ಡಿಸ್ಕವರಿ ಗಗನಕ್ಕೆ ಚಿಮ್ಮಲು ಸಿದ್ಧವಾಗಿತ್ತು. ಗಗನಯಾತ್ರಿಗಳೂ ಆಸನದಲ್ಲಿ ಕುಳಿತು ಕ್ಷಣಗಣನೆ ಆರಂಭಿಸಿದ್ದರು. ಆದರೆ 8.05 ಗಂಟೆ ಹೊತ್ತಿಗೆ ದಟ್ಟ ಮೋಡಗಳು ಕಾಣಿಸಿಕೊಂಡವು. 2002ರ ನವೆಂಬರ್ 23ರಂದು ಉಡಾವಣೆಗೊಂಡ ಎಂಡೀವರ್ ಗಗನನೌಕೆಯ ಬಳಿಕ ರಾತ್ರಿವೇಳೆ ಉಡಾವಣೆಗೆ ಸಜ್ಜಾದ ಮೊದಲ ಗಗನನೌಕೆ ಡಿಸ್ಕವರಿ. `ಕೊಲಂಬಿಯ' ದುರಂತದ ಬಳಿಕ ಮೂರು ನೌಕೆಗಳನ್ನು ಹಗಲು ಹೊತ್ತಿನಲ್ಲೇ ಉಡಾವಣೆ ಮಾಡಲಾಗಿತ್ತು.

2006: ನೇಪಾಳದ ದೊರೆ ಜ್ಞಾನೇಂದ್ರ ಹಾಗೂ ರಾಜಕುಮಾರ ಪಾರಸ್ ಕಠ್ಮಂಡು ವಿಮಾನ ನಿಲ್ದಾಣದಲ್ಲಿ 53,739 ರೂ. ತೆರಿಗೆ ಪಾವತಿಸಿ ಅಮೆರಿಕದಿಂದ ತಮ್ಮ ವಿಳಾಸಕ್ಕೆ ಬಂದಿದ್ದ ಪಾರ್ಸೆಲ್ ಪಡೆದುಕೊಂಡರು. ಏಕನಾಯಕ ಚಕ್ರಾಧಿಪತ್ಯವಿರುವ ಈ ಹಿಮಾಲಯ ರಾಷ್ಟ್ರದಲ್ಲಿ 238 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ `ದೊರೆ ತೆರಿಗೆ ಪಾವತಿ ಮಾಡಿದ' ಈ ಪ್ರಕರಣ ನಡೆಯಿತು. ದೊರೆ ಜ್ಞಾನೇಂದ್ರ ಅವರ ವಿಳಾಸಕ್ಕೆ ಬಂದ ಪಾರ್ಸೆಲ್ ಪೆಟ್ಟಿಗೆಯಲ್ಲಿ ಇದ್ದದ್ದು 50 ಟಾರ್ಚ್ ಲೈಟುಗಳು.

2006: `ಹೆನ್ರಿ ಜೆ. ಹೈಡ್ ಅಮೆರಿಕ- ಭಾರತ ಶಾಂತಿಯು ಪರಮಾಣು ಶಕ್ತಿ ಸಹಕಾರ ಕಾಯ್ದೆ 2006' ಎಂದು ಕರೆಯಲಾಗುವ ಭಾರತ- ಅಮೆರಿಕ ನಡುವಣ ನಾಗರಿಕ ಬಳಕೆಯ ಪರಮಾಣು ಒಪ್ಪಂದಕ್ಕೆ ಅವಕಾಶ ಒದಗಿಸುವ 74 ಪುಟಗಳ ಮಸೂದೆಗೆ ಅಮೆರಿಕದ ಕಾಂಗ್ರೆಸ್ ಈ ರಾತ್ರಿ ಒಪ್ಪಿಗೆ ನೀಡಿತು. ಭಾರತ ವ್ಯಕ್ತಪಡಿಸಿದ ಆಕ್ಷೇಪಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಅಮೆರಿಕದ ಸೆನೆಟ್ ಮತ್ತು ಕಾಂಗ್ರೆಸ್ ಸದಸ್ಯರ ಸಮಿತಿ ಮಸೂದೆಯಲ್ಲಿ ಬಳಸಿದ ಭಾಷೆಗೆ ತಿದ್ದುಪಡಿಗಳನ್ನು ತಂದಿದೆ. ಒಪ್ಪಂದದಿಂದಾಗಿ ಕಳೆದ 32 ವರ್ಷಗಳಲ್ಲಿ ಮೊದಲ ಬಾರಿಗೆ ಪರಮಾಣು ತಂತ್ರಜ್ಞಾನ ನೆರವನ್ನು ಅಮೆರಿಕ ಭಾರತಕ್ಕೆ ನೀಡಲಿದ್ದು, ಭಾರತ ತನ್ನ ಬಹುತೇಕ ಪರಮಾಣು ಸ್ಥಾವರಗಳನ್ನು ಮುಕ್ತ ವೀಕ್ಷಣೆಗೆ ತೆರೆದಿಡಲಿದೆ.

2005: ಖಾಸಗಿ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ ಮೀಸಲು ನೀಡುವ ಸಂಬಂಧ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲು ಭಾರತದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅನುದಾನರಹಿತ ಕಾಲೇಜುಗಳಲ್ಲಿ ಮೀಸಲು ನೀಡಬೇಕಾದ ಅಗತ್ಯ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಪ್ರತಿಯಾಗಿ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಮಸೂದೆಯನ್ನು ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಅನ್ವಯಿಸದಿರಲು ನಿರ್ಧರಿಸಿತು.

2005: ಲೈಂಗಿಕ ಕಿರುಕುಳ ಸಂಬಂಧ ಮೇಲಧಿಕಾರಿಗಳ ವಿರುದ್ಧ ದೂರು ನೀಡಿದ್ದ ಭಾರತೀಯ ವಾಯುಪಡೆಯ ಫ್ಲೈಯಿಂಗ್ ಅಧಿಕಾರಿ ಅಂಜಲಿ ಗುಪ್ತಾ ಅವರ ವಿಚಾರಣೆ ನಡೆಸಿದ ಮಿಲಿಟರಿ ನ್ಯಾಯಾಲಯ ಆಕೆಯನ್ನು ತಪ್ಪಿತಸ್ಥೆ ಎಂದು ತೀರ್ಮಾನಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲು ಆದೇಶಿಸಿತು.

2005: ಹಿರಿಯ ಪತ್ರಕರ್ತ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ನಿವೃತ್ತ ಮುಖ್ಯ ವರದಿಗಾರ ಎಸ್. ಜಿ. ಮೈಸೂರುಮಠ ಅವರು ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ವಿಶ್ವ ಕರ್ನಾಟಕ ಮೂಲಕ ಪತ್ರಿಕಾ ರಂಗ ಪ್ರವೇಶಿಸಿದ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ 25 ವರ್ಷ ಸೇವೆ ಸಲ್ಲಿಸಿದ್ದೂ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ನಾಲ್ಕು ದಶಕಗಳ ಸೇವೆ ಸಲ್ಲಿಸಿದ್ದರು.

2001: ಭಾರತದ ಖ್ಯಾತ ಕ್ಯಾಮರಾಮ್ಯಾನ್ ಸುಬ್ರತೊ ಮಿತ್ರ (1930-2001) ನಿಧನರಾದರು. ಸತ್ಯಜಿತ್ ರೇ ಅವರ ಎರಡನೇ ಚಿತ್ರ `ಅಪರಾಜಿತೊ'ದಲ್ಲಿ ಅವರು `ಬೌನ್ಸ್ ಲೈಟ್ನಿಂಗ್' ನ್ನು ಅಳವಡಿಸಿದ್ದರು. ರೇ ಅವರ ಖ್ಯಾತ ಚಿತ್ರಗಳಾದ `ಪಥೇರ್ ಪಾಂಚಾಲಿ', `ಅಪುರ್ ಸಂಸಾರ್' ಇತ್ಯಾದಿ ಚಿತ್ರಗಳ ಚಿತ್ರೀಕರಣವನ್ನೂ ಅವರು ಮಾಡಿದ್ದರು. 1992 ರಲ್ಲಿ ಸಿನಿಮಾಟೋಗ್ರಪಿಯಲ್ಲಿ ಜೀವಮಾನದ ಸಾಧನೆಗಾಗಿ ನೀಡಲಾಗುವ `ಈಸ್ಟ್ಮನ್ ಕೊಡಕ್' ಪ್ರಶಸ್ತಿಯನ್ನು ಗೆದ್ದ ಮೊತ್ತ ಮೊದಲ ಭಾರತೀಯನೆಂಬ ಹೆಗ್ಗಳಕೆಗೆ ಸುಬ್ರತೊ ಮಿತ್ರ ಭಾಜನರಾಗಿದ್ದರು.

1991: ರಷ್ಯ, ಉಕ್ರೇನ್ ಮತ್ತು ಬೆಲಾರಸ್ ರಾಷ್ಟ್ರಗಳು ಬೆಲಾರಸ್ನಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಿ ಕಮ್ಯೂನಿಸ್ಟ್ ಯುಗದ ಒಕ್ಕೂಟವನ್ನು ವಿಸರ್ಜಿಸಿದವು ಮತ್ತು ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತನ್ನು ಸ್ಥಾಪಿಸಿದವು.

1980: ರಾಕ್ ಸಂಗೀತಗಾರ ಜಾನ್ ಲೆನ್ನನ್ ಅವರನ್ನು ನ್ಯೂಯಾರ್ಕ್ ನಗರದ ಹೊರವಲಯದ ಅಪಾರ್ಟ್ಮೆಂಟ್ ಕಟ್ಟಡವೊಂದರಲ್ಲಿ ಗುಂಡಿಟ್ಟು ಕೊಲೆಗೈಯಲಾಯಿತು. ಹುಚ್ಚೆದ್ದ ಅಭಿಮಾನಿ ಮಾರ್ಕ್ ಚಾಪ್ ಮ್ಯಾನ್ ಎಂಬ ವ್ಯಕ್ತಿ ಈ ಕೃತ್ಯ ಎಸಗಿದ.

1978: ಇಸ್ರೇಲಿನ ಪ್ರಧಾನಿ ಗೋಲ್ಡಾ ಮೀರ್ ಅವರು ಜೆರುಸಲೇಮಿನಲ್ಲಿ ತಮ್ಮ 80ನೇ ವಯಸ್ಸಿನಲ್ಲಿ ನಿಧನರಾದರು. 1969ರಿಂದ

1974ರವರೆಗೆ ಅವರು ಇಸ್ರೇಲ್ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು.

1941: ಎರಡನೇ ಜಾಗತಿಕ ಯುದ್ಧ ಕಾಲದಲ್ಲಿ ಈದಿನ ಗ್ರೇಟ್ ಬ್ರಿಟನ್, ಆಸ್ಟ್ರೇಲಿಯಾ ಮತ್ತು ಅಮೆರಿಕಾ ಒಟ್ಟಾಗಿ ಜಪಾನ್ ವಿರುದ್ಧ ಸಮರ ಸಾರಿದವು.

1937: ಭಾರತದ ಮೊತ್ತ ಮೊದಲ ಡಬಲ್ ಡೆಕರ್ ಬಸ್ಸು ಬಾಂಬೆಯಲ್ಲಿ (ಈಗಿನ ಮುಂಬೈ) ಸೇವೆಗೆ ಇಳಿಯಿತು. ಈ ಬಸ್ಸಿನಲ್ಲಿ 58 ಮಂದಿ ಪ್ರಯಾಣಿಸಬಹುದಾಗಿತ್ತು.

1935: ಬಾಲಿವುಡ್ಡಿನ ಖ್ಯಾತ ನಟ ಹಾಗೂ ಚಿತ್ರ ನಿರ್ಮಾಪಕ ಧರ್ಮೇಂದ್ರ ಡಿಯೋಲ್ ಜನಿಸಿದರು.

1900: ಭಾರತದ ಖ್ಯಾತ ನೃತ್ಯಪಟು ಹಾಗೂ ನೃತ್ಯ ನಿರ್ದೇಶಕ ಉದಯ ಶಂಕರ್ (1900-1977) ಹುಟ್ಟಿದ ದಿನ. ಇವರು ಸಾಂಪ್ರದಾಯಿಕ ಹಿಂದೂ ನೃತ್ಯಗಳಿಗೆ ಪಾಶ್ಚಾತ್ಯ ತಂತ್ರಗಳನ್ನು ಅಳವಡಿಸಿ ಭಾರತದ ಪುರಾತನ ಕಲಾ ಪ್ರಕಾರವನ್ನು ಭಾರತ ಹಾಗೂ ಹೊರ ದೇಶಗಳಲ್ಲಿ ಜನಪ್ರಿಯಗೊಳಿಸಿದರು.

1875: ಭಾರತೀಯ ನ್ಯಾಯವಾದಿ ಹಾಗೂ ಮುತ್ಸದ್ದಿ ಸರ್ ತೇಗ್ ಬಹಾದುರ್ ಸಪ್ರು (1875-1949) ಹುಟ್ಟಿದ ದಿನ.

No comments:

Post a Comment