Friday, December 7, 2018

ಇಂದಿನ ಇತಿಹಾಸ History Today ಡಿಸೆಂಬರ್ 07

ಇಂದಿನ ಇತಿಹಾಸ History Today ಡಿಸೆಂಬರ್  07
2018: ನವದೆಹಲಿ:  ತಮ್ಮನ್ನುದೇಶಭ್ರಷ್ಟಎಂಬುದಾಗಿ ಘೋಷಿಸಲು ಮತ್ತು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಪ್ರಶ್ನಿಸಿ  ಮದ್ಯ ಉದ್ಯಮಿ ವಿಜಯ್ ಮಲ್ಯ ಅವರು ಸಲ್ಲಿಸಿರುವ ಅರ್ಜಿಗೆ ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿ ಮಾಡಿತು. ಆದರೆ ಸಂಬಂಧದ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ನೀಡಲಿಲ್ಲ. ದೇಶಭ್ರಷ್ಟಹಣೆಪಟ್ಟಿ ಹಚ್ಚುವ ಹಾಗೂ ಆಸ್ತಿ ಮುಟ್ಟುಗೋಲು ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಲಾದ ತಮ್ಮ ಮನವಿಯನ್ನು ನವೆಂಬರ್ 22ರಂದು ಬಾಂಬೆ
ಹೈಕೋರ್ಟ್ ತಿರಸ್ಕರಿಸಿದ ಒಂದು ವಾರದ ಬಳಿಕ ಮಲ್ಯ  ಅವರು ಸುಪ್ರೀಂಕೋಟ್ ಮೆಟ್ಟಿಲು ಏರಿದರು. ತಾವು ದೇಶಭ್ರಷ್ಟ ಆರ್ಥಿಕ ಅಪರಾಧಿ ಅಲ್ಲ, ಮತ್ತು ಹಣ ವರ್ಗಾವಣೆಯ ನಿಗದಿತ ಅಪರಾಧದಲ್ಲಿ ಶಾಮೀಲಾಗಿಲ್ಲ ಎಂಬುದಾಗಿ ವಿಜಯ್ ಮಲ್ಯ ಅವರು ಸೆಪ್ಟೆಂಬರಿನಲ್ಲಿ ಹಣ ವರ್ಗಾವಣೆ  ಕಾಯ್ದೆ (ಪಿಎಂಎಲ್ ) ನ್ಯಾಯಾಲಯಕ್ಕೆ ತಿಳಿಸಿದ್ದರುಪಿಎಂ ಎಲ್ ನ್ಯಾಯಾಲಯ ಮತ್ತು ಬಾಂಬೆ ಹೈಕೋರ್ಟ್ ತಮ್ಮ ಅರ್ಜಿಗಳನ್ನು ತಿರಸ್ಕರಿಸಿದ ಬಳಿಕ  ಅವರು ಹಿಂದಿನ ದಿನ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ೧೨ ಬ್ಯಾಂಕುಗಳ ಒಕ್ಕೂಟದಿಂದ ಕಿಂಗ್ ಫಿಶರ್ ಏರ್ ಲೈನ್ಸ್ ಗಾಗಿ  ತೆಗೆದುಕೊಂಡ ದೊಡ್ಡ  ಮೊತ್ತದ ಸಾಲಗಳಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಅಪರಾಧಗಳ ವಿರುದ್ಧ ಪ್ರಕರಣಗಳು ದಾಖಲಾದ ಬಳಿಕ ಹಣಕಾಸಿನ ಅಪರಾಧಗಳಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯು ಮಲ್ಯ ವಿರುದ್ಧ ನಡೆದ ತನಿಖೆ ಆರಂಭಿಸಿತ್ತು. ಇತ್ತೀಚೆಗೆ ಜಾರಿಗೊಳಿಸಲಾದ ದೇಶಭ್ರಷ್ಟ  ಆರ್ಥಿಕ  ಅಪರಾಧಗಳ ಕಾಯ್ದೆ 2018  ಅಡಿಯಲ್ಲಿ ತನಿಖಾ ಸಂಸ್ಥೆಯು ವಿಶೇಷ ಪಿಎಂಎಲ್ಎಎ ನ್ಯಾಯಾಲಯಕ್ಕೆ ಮಲ್ಯ  ಅವರನ್ನು  ಓರ್ವ ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸುವಂತೆ ಕೋರಿತ್ತು. ಕಳೆದ ಎರಡು ದಿನಗಳಲ್ಲಿ ಮಲ್ಯ ಅವರು ಕರ್ನಾಟಕದ ಹೈಕೋರ್ಟಿನಲ್ಲಿ  ಬ್ಯಾಂಕುಗಳಿಗೆ ಪೂರ್ತಿ ಅಸಲು ಪಾವತಿ ಮೂಲಕ  ಪ್ರಕರಣ ಇತ್ಯರ್ಥ ಪಡಿಸುವ ತಮ್ಮ ಕೊಡುಗೆಯನ್ನು ಸ್ವೀಕರಿಸುವಂತೆ  ಭಾರತೀಯ ಅಧಿಕಾರಿಗಳಿಗೆ ಪುನರಾವರ್ತಿತ ಮನವಿಗಳನ್ನು ಮಾಡಿದ್ದರು. ತಮ್ಮ ಗಡೀಪಾರು ಯತ್ನಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡಿನ ವೆಸ್ಟ್ ಮಿನ್ ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತೀರ್ಪು ನೀಡುವ ಮುನ್ನ ಪ್ರಕರಣವನ್ನು ಇತ್ಯರ್ಥ ಪಡಿಸಿಕೊಳ್ಳಲು ಮಲ್ಯ ಯತ್ನಿಸಿದರು. ಸಹಸ್ರಾರು ಕೋಟಿ ರೂಪಾಯಿಗಳ ಆರ್ಥಿಕ ಅಕ್ರಮಗಳ ಆರೋಪದಲ್ಲಿ ಇಂಗ್ಲೆಂಡಿನಿಂದ ಭಾರತಕ್ಕೆ ಗಡೀಪಾರು ಕ್ರಮವನ್ನು ಮದ್ಯ ಉದ್ಯಮಿ ಮಲ್ಯ ಎದುರಿಸುತ್ತಿದ್ದರು.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಹಲವಾರು ಬ್ಯಾಂಕುಗಳು ನೀಡಿದ ಸಾಲವನ್ನು ಮರುಪಾವತಿ ಮಾಡದೇ ಸುಸ್ತಿದಾರರಾದ ಬಳಿಕ ಬೆಂಗಳೂರಿನ ಸಾಲ ನ್ಯಾಯಾಲಯವು ಮಲ್ಯ ವಿರುದ್ಧ ಕ್ರಮ ಕೈಗೊಳ್ಳಲು ಆದೇಶ ನೀಡಿದ ಹಿನ್ನೆಲೆಯಲ್ಲಿ 2016 ಮಾರ್ಚ್ ತಿಂಗಳಲ್ಲಿ ಮಲ್ಯ ಅವರು ಭಾರತದಿಂದ ಪರಾರಿಯಾಗಿದ್ದರು. ಹಸ್ತಾಂತರ ಪ್ರಕರಣದ ಹೊರತಾಗಿಯೂ, ೧೩ ಭಾರತೀಯ ಬ್ಯಾಂಕುಗಳು ಮತ್ತು ಯು.ಬಿ.ಎಸ್ ಬ್ಯಾಂಕಿನ ಮಧ್ಯ ಅಡಮಾನದ ಚೇತರಿಕೆಯ ಕ್ರಮವನ್ನು ಕೇಂದ್ರ ಲಂಡನ್ನಲ್ಲಿರುವ ತನ್ನ ಮನೆಯ ವಿರುದ್ಧ ಬ್ರಿಟನ್ ತನ್ನ ಸ್ವತ್ತುಗಳ ವಿರುದ್ಧ ಚೇತರಿಸಿಕೊಳ್ಳುವ ಕ್ರಮವನ್ನು ಮಲ್ಯ ಎದುರಿಸುತ್ತಿದ್ದರು. ಗಡೀಪಾರು ಪ್ರಕರಣದ ಹೊರತಾಗಿ, 13 ಬ್ಯಾಂಕುಗಳಿಂದ ಪಡೆದ ಸಾಲಕ್ಕಾಗಿ ಇಂಗ್ಲೆಂಡಿನ ಆಸ್ತಿ ಮುಟ್ಟುಗೋಲು ಪ್ರಕರಣ ಹಾಗೂ ಕೇಂದ್ರ ಲಂಡನ್ನಿನ ತಮ್ಮ ಮನೆಗೆ ಸಂಬಂಧಿಸಿದಂತೆ  ಯುಬಿಎಸ್ ಬ್ಯಾಂಕಿನಿಂದ ಪಡೆದ  ಅಡವು ಸಾಲದ ವಸೂಲಾತಿ ಪ್ರಕರಣವನ್ನೂ  ಮಲ್ಯ  ಎದುರಿಸುತ್ತಿದ್ದರು.

 2017: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ’ನೀಚ ವ್ಯಕ್ತಿ ಎಂಬುದಾಗಿ ಜರೆಯುವ ಮೂಲಕ ಕಾಂಗ್ರೆಸ್ ಧುರೀಣ ಮಣಿ ಶಂಕರ ಅಯ್ಯರ್ ಮತ್ತೊಮ್ಮೆ ವಿವಾದದ ಸುಳಿಯಲ್ಲಿ ಸಿಲುಕಿದರು.  ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಈ ನಿಂದನೆಗಾಗಿ ಪ್ರಧಾನಿಯ ಕ್ಷಮೆ ಕೋರುವಂತೆ ಸೂಚಿಸಿದರು. ಅಯ್ಯರ್ ದೂಷಣೆಗೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ ’ಇದು ಮೊಘಲ್ ಮನೋವೃತ್ತಿ (ಮೊಘಲರ ಮೆಂಟಾಲಿಟಿ) ಎಂದು ಹೇಳಿದರು. ’ಮಣಿ ಶಂಕರ್ ಅಯ್ಯರ್ ಅವರು ಈದಿನ ನಾನು ’ನೀಚ ಜಾತಿಗೆ ಸೇರಿದವರನು ಎಂದಿದ್ದಾರೆ.  ನಾನು ’ನೀಚ, ಇದು ಗುಜರಾತಿಗೆ ಅವಮಾನ ಎಂದು ಮೋದಿ ಸೂರತ್ ನಲ್ಲಿ ಹೇಳಿದರು.  ನಾನು ಸಾರ್ವಜನಿಕ ಬದುಕಿನಲ್ಲಿ ನೀಚ ಕೆಲಸ ಮಾಡಿದ್ದೇನೆಯೇ?’ ಎಂದು ಅವರು ಪ್ರಶ್ನಿಸಿದರು.  ವಿವಾದ ತೀವ್ರಗೊಳ್ಳುತ್ತಿದ್ದಂತೆಯೇ ಅಯ್ಯರ್ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತ ಪಡಿಸಿ ತಮ್ಮ ಮಾತಿನ ಅರ್ಥ ಬೇರೆಯೇ ಆಗಿತ್ತು ಎಂದು ಹೇಳಿದರು.  ಇಷ್ಟೆಲ್ಲ  ಬೆಳವಣಿಗೆಗಳ ಬಳಿಕ ಕಾಂಗ್ರೆಸ್ ವರಿಷ್ಠ ಮಂಡಳಿಯು ಅಯ್ಯರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿತು. ೨೦೧೪ರ ಲೋಕಸಭಾ ಚುನಾವಣೆಗೆ ಮುನ್ನ ಮೋದಿ ಅವರನ್ನು ’ಚಾಯ್ ವಾಲಾ ಎಂಬುದಾಗಿ ಬಣ್ಣಿಸಿದ್ದ ಅಯ್ಯರ್, ಈದಿನ ಪ್ರಧಾನಿಯನ್ನು ’ಕೊಳಕು ರಾಜಕೀಯ ಮಾಡುತ್ತಿರುವ ಸಂಸ್ಕೃತಿ ರಹಿತ ಮನುಷ್ಯ ಎಂದು ಹೇಳಿದರು. ಅಯ್ಯರ್ ಮಾತುಗಳು ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ತಿರುಗುಬಾಣವಾದಂತೆ ಈ ಬಾರಿಯೂ ನಿರ್ಣಾಯಕ ಗುಜರಾತ್ ಚುನಾವಣೆಗೆ ಮುನ್ನ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿತು.  ‘ಈ ವ್ಯಕ್ತಿ ಕೆಳಮಟ್ಟದ ಸಂಸ್ಕೃತಿ ಇಲ್ಲದ ನೀಚ ವ್ಯಕ್ತಿ ಎಂದು ನನಗನ್ನಿಸುತ್ತದೆ. ಈ ಹೊತ್ತಿನಲ್ಲಿ ಅವರು ಇಂತಹ ಕೊಳಕು ರಾಜಕೀಯ ಮಾಡುವ ಅಗತ್ಯ ಏನಿದೆ?’ ಎಂದು ಅಯ್ಯರ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಶ್ನಿಸಿದರು. ಗುಜರಾತಿನ ಚುನಾವಣಾ ಪ್ರಚಾರ ಸಭೆ ಒಂದರಲ್ಲಿ ಮೋದಿ ಅವರು ಮಾಜಿ ಪ್ರಧಾನಿ ಜವಾಹರಲಾಲ್  ನೆಹರೂ ವಿರುದ್ಧ ಟೀಕಾ ಪ್ರಹಾರ ನಡೆಸಿದ ಬಳಿಕ ಅಯ್ಯರ್ ಅವರಿಂದ ಈ ಮಾತುಗಳು ಬಂದವು.  ನೆಹರೂ ಅವರ ಹೆಸರನ್ನು ಉಲ್ಲೇಖಿಸದೆಯೇ ಮೋದಿ ಅವರು ’ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರ ನಿರ್ಮಾಣಕ್ಕೆ ನೀಡಿದ ಕೊಡುಗೆ ಅತ್ಯಂತ ಮಹತ್ವದ್ದು, ಆದರೆ ಅವರ ಪಾತ್ರವನ್ನು ಕಡೆಗಣಿಸುವ ಯತ್ನಗಳು ನಡೆದಿದ್ದವು, ಅವು ಯಶಸ್ವಿಯಾಗಲಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಅಯ್ಯರ್ ಅವರು ’ಬಿಆರ್ ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವಲ್ಲಿ ನೆಹರೂ ಅವರು ಅತ್ಯಂತ ದೊಡ್ಡ ಪಾತ್ರ ವಹಿಸಿದ್ದಾರೆ ಎಂದು ಮೋದಿ ಅವರನ್ನು ’ನೀಚ ವ್ಯಕ್ತಿ ಎಂಬುದಾಗಿ ಜರೆಯುವ ಮುನ್ನ ಪ್ರತಿಪಾದಿಸಿದರು. ದೂರ ಸರಿದ ಕಾಂಗ್ರೆಸ್: ಅಯ್ಯರ್ ಹೇಳಿಕೆ ವಿವಾದದ ಸುಳಿಗಾಳಿ ಎಬ್ಬಿಸುತ್ತಿದ್ದಂತೆಯೇ ಎಚ್ಚರ ವಹಿಸಿದ ಕಾಂಗೆಸ್ ಅವರ ಹೇಳಿಕೆಯಿಂದ ತಾನು ಅಂತರ ಕಾಯ್ದುಕೊಂಡಿತು. ಕಾಂಗ್ರೆಸ್ ನಾಯಕ ಆರ್ ಪಿ ಎನ್ ಸಿಂಗ್ ಅವರು ’ಪಕ್ಷವು ಅವರ ಹೇಳಿಕೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರೆ, ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಅಯ್ಯರ್ ಅವರಿಗೆ ಕ್ಷಮೆ ಕೋರುವಂತೆ ಸೂಚಿಸಿದರು. ಲಘು ಹೇಳಿಕೆ ನೀಡಿ ಅಯ್ಯರ್ ಅವರು ಪ್ರಧಾನಿ ಕೈಯಲ್ಲಿ ಸಿಕ್ಕಿಹಾಕಿಕೊಂಡದ್ದು ಇತ್ತೀಚಿನ ಕೆಲವೇ ದಿನಗಳ ಅಂತರದಲ್ಲಿ ಇದು ಎರಡನೇ ಸಲ. ಶೆಹಜಾದ್ ಪೂನಾವಾಲಾ ಅವರ ’ವಂಶ ರಾಜಕೀಯ ಟೀಕೆಗೆ ಉತ್ತರ ನೀಡುವ ಭರದಲ್ಲಿ ರಾಹುಲ್ ಗಾಂಧಿ ಅವರ ಬಡ್ತಿಯನ್ನು ಮೊಘಲ್ ಆಡಳಿತದಲ್ಲಿನ ಉತ್ತರಾಧಿಕಾರ ವ್ಯವಸ್ಥೆಗೆ ಹೋಲಿಸುವ ಮೂಲಕ ಅಯ್ಯರ್ ಪ್ರಧಾನಿ ಕೈಯಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಮೊಘಲ್ ಆಡಳಿತದ ಅವಧಿಯಲ್ಲಿ ಮಕ್ಕಳು ಚಕ್ರವರ್ತಿ ಸ್ಥಾನಕ್ಕೆ ಏರುವ ಕಾಲದಲ್ಲಿ ಚುನಾವಣೆ ಇತ್ತೇ ಎಂದು ಪ್ರಶ್ನಿಸಿದ್ದ ಅಯ್ಯರ್, ಮಹಾರಾಷ್ಟ್ರದ ನಾಯಕ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಬಹುದು ಎಂದು ಹೇಳಿದ್ದರು. ’ಜಹಾಂಗೀರ್ ಸ್ಥಾನಕ್ಕೆ ಶಹಜಹಾನ್ ಬಂದಾಗ ಚುನಾವಣೆ ಇತ್ತೇ? ಶಹಜಹಾನ್  ಸ್ಥಾನಕ್ಕೆ ಔರಂಗಜೇಬ್ ಬಂದಾಗ ಚುನಾವಣೆ ಇತ್ತೇ? ಇಲ್ಲ. ಚಕ್ರವರ್ತಿಯ ಸಿಂಹಾಸನವನ್ನು ದೊರೆಯ ಪುತ್ರ ಏರುತ್ತಾನೆ ಎಂಬದು ಎಲ್ಲರಿಗೂ ಗೊತ್ತಿದ್ದ ವಿಷಯ. ಅವರು ತಮ್ಮೊಳಗೆ ಕಚ್ಚಾಡಿಕೊಂಡಿದ್ದರೆ ಅದು ಬೇರೆ ವಿಷಯ ಎಂದು ಅಯ್ಯರ್ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಪ್ರಧಾನಿ ’ಔರಂಗಜೇಬ್ ಆಡಳಿತ ಆರಂಭವಾಗುತ್ತಿರುವುದಕ್ಕಾಗಿ ಕಾಂಗ್ರೆಸ್ ನ್ನು ಅಭಿನಂದಿಸಬಯಸುವುದಾಗಿ ಹೇಳುವ ಮೂಲಕ ಟಾಂಗ್ ನೀಡಿದ್ದರು. ೨೦೧೪ರ ಲೋಕಸಭಾ ಚುನಾವಣೆಗೆ ಮುನ್ನ ಅಯ್ಯರ್ ಅವರು ಮೋದಿ ಅವರನ್ನು ’ಚಾಯ್ ವಾಲಾ ಎಂದು ಕರೆದು ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು. ನಾನು ನಿಮಗೆ ಪ್ರಾಮಿಸ್ ಮಾಡುತ್ತೇನೆ. ೨೧ನೇ ಶತಮಾನದಲ್ಲಿ ಮೋದಿ ಅವರು ಎಂದೂ ರಾಷ್ಟ್ರದ ಪ್ರಧಾನಿಯಾಗಲು ಸಾಧ್ಯವಿಲ್ಲ. ಆದರೆ ಅವರು ಇಲ್ಲಿ ಚಹಾ ವಿತರಿಸಬಯಸುವುದಿದ್ದರೆ, ನಾವು ಅವರಿಗೆ ಇಲ್ಲಿ ಒಂದು ಜಾಗ ದೊರಕಿಸಿಕೊಡುತ್ತೇವೆ ಎಂದು ಏಐಸಿಸಿ ಸಭೆಯ ಬಳಿಕ ಅಯ್ಯರ್ ಹೇಳಿದ್ದರು. ಮೋದಿ ಮತ್ತು ಬಿಜೆಪಿ ಇದೇ ’ಚಾಯ್ ವಾಲಾ ಪದವನ್ನೇ ವ್ಯಾಪಕವಾಗಿ ಬಳಸಿಕೊಂಡು ಇದು ಬಡತನಕ್ಕೆ ಮಾಡಿದ ಅವಮಾನ ಎಂಬುದಾಗಿ ಜನರ ಮನ ಮುಟ್ಟಿಸುವಲ್ಲಿ ಸಫಲರಾಗಿದ್ದರು.

2017: ನವದೆಹಲಿ: ಕಾಂಗೆಸ್ ನಾಯಕ ಮತ್ತು ಮಾಜಿ ಕಾನೂನು ಸಚಿವ ಕಪಿಲ್ ಸಿಬಲ್ ಅವರಿಗೆ ಗುಜರಾತಿನಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡದಂತೆ ಪಕ್ಷವು  ಸೂಚಿಸಿತು. ಇತ್ತೀಚೆಗೆ ರಾಮಜನ್ಮಭೂಮಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುಪ್ರೀಂಕೋರ್ಟಿನಲ್ಲಿ ಸಿಬಲ್ ಅವರು ಮಾಡಿದ ವಾದದ ಬಗ್ಗೆ ವಿವಾದ ಎದ್ದ ಹಿನ್ನೆಲೆಯಲ್ಲಿ ಅಂಜಿರುವ ಪಕ್ಷವು ಈ ನಿರ್ಧಾರ ಕೈಗೊಂಡಿದೆ ಎಂದು ಸುದ್ದಿ ಮೂಲಗಳು ಖಾಸಗಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದವು. ಗುಜರಾತ್ ಚುನಾವಣೆಯಲ್ಲಿ ಸಿಬಲ್ ವಾದದ ವಿವಾದವನ್ನು ಬಳಸಿಕೊಳ್ಳಲು ಬಿಜೆಪಿಯು ತೀವ್ರ ಯತ್ನ ನಡೆಸಿರುವ ಹಿನ್ನೆಲೆಯಲ್ಲಿ ಕೋಮು ಆಧಾರದಲ್ಲಿ ಯಾವುದೇ ಧ್ರುವೀಕರಣವಾಗದಂತೆ ನೋಡಿಕೊಳ್ಳಲು ಕಾಂಗ್ರೆಸ್ ಬಯಸಿದೆ ಎಂದು ಮೂಲಗಳು ಹೇಳಿದವು. ಸಾರ್ವಜನಿಕ ಜೀವನದಲ್ಲಿ ರಾಜಕಾರಣಿಗಳಾಗಿಯೂ ವರ್ತಿಸುವ ಸಂದರ್ಭದಲ್ಲಿ  ಕೆಲವೊಮ್ಮೆ ಪ್ರಕರಣಗಳನ್ನು ತೆಗೆದುಕೊಳ್ಳುವಾಗ ವಕೀಲರು ನ್ಯಾಯಯುತರಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಸಂದೀಪ ದೀಕ್ಷಿತ್ ಒಪ್ಪಿಕೊಂಡರು. ಸುಪ್ರೀಂಕೋರ್ಟಿನಲ್ಲಿ ಸಿಬಲ್ ಅವರು ತೆಗೆದುಕೊಂಡ ನಿಲುವು ಚುನಾವಣೆ ನಡೆಯತ್ತಿರುವ ಗುಜರಾತಿನಲ್ಲಿ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ ೬ರಂದು ಗುಜರಾತಿನಲ್ಲಿ  ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಾ ಸಿಬಲ್ ವಾದಗಳನ್ನು ಉಲ್ಲೇಖಿಸಿ, ಕಾಂಗ್ರೆಸ್ ಪಕ್ಷವು ರಾಮಮಂದಿರ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಆಪಾದಿಸಿದ್ದರು. ‘ಕಾಂಗೆಸ್ ಸಂಸತ್ ಸದಸ್ಯ ಕಪಿಲ್ ಸಿಬಲ್ ಅವರು ಸುಪ್ರಿಂಕೋರ್ಟಿನಲ್ಲಿ ಬಾಬರಿ ಮಸೀದಿ ಪ್ರಕರಣದಲ್ಲಿ ವಾದ ಮಾಡಿದ್ದಾರೆ. ಅವರು ಕೋರ್ಟಿನಲ್ಲಿ ವಾದಿಸಬಹುದು. ಆದರೆ ಅವರು ೨೦೧೯ರವರೆಗೆ ವಿಚಾರಣೆಯನ್ನು  ಮುಂದೂಡುವಂತೆ ಕೋರಿದ್ದು ಸರಿಯೇ? ಅವರು ಚುನಾವಣೆಗಳನ್ನು ರಾಮಮಂದಿರದ ಜೊತೆಗೆ ಏಕೆ ತಳಕು ಹಾಕುತ್ತಿದ್ದಾರೆ? ಈಗ, ಕಾಂಗ್ರೆಸ್ ರಾಮ ಮಂದಿರವನ್ನು ರಾಜಕೀಯದ ಜೊತೆಗೆ ತಳಕು ಹಾಕುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದರು. ಸಿಬಲ್ ಅವರು ಕಳೆದ ಒಂದು ತಿಂಗಳಲ್ಲಿ ಗುಜರಾತಿನ ಪಾಟೀದಾರ ಅನ್ಮತ್ ಆಂದೋಲನ ಸಮಿತಿ (ಪಿಎಎಎಸ್) ನಾಯಕರ ಜೊತೆಗಿನ ಮಾತುಕತೆಗಳಲ್ಲಿ ಪಾಲ್ಗೊಂಡು ಪಾಟೀದಾರ ಮೀಸಲು ನೀತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕರಡನ್ನು ರಚಿಸಲು ನೆರವಾಗಿದ್ದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರೂ ಸಿಬಲ್ ಅವರು ನ್ಯಾಯಾಲಯದಲ್ಲಿ ಮುಂದಿಟ್ಟ ವಾದದ ಹಿನ್ನೆಲೆಯಲ್ಲಿ ರಾಮ ಜನ್ಮಭೂಮಿ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗೆಸ್ ಪಕ್ಷವು ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕು ಎಂದು ಆಗ್ರಹಿಸಿದ್ದರು. ಒಂದೆಡೆಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಗುಜರಾತಿನಲ್ಲಿ ದೇವಾಲಯಗಳ ಚುನಾವಣಾ ಪ್ರವಾಸ ಮಾಡುತ್ತಿದ್ದಾರೆ. ಇನ್ನೊಂದೆಡೆಯಲ್ಲಿ ಅವರ ಪಕ್ಷವು ಅಯೋಧ್ಯಾ ವಿವಾದದ ವಿಚಾರಣೆ ಮುಂದೂಡಿಕೆಯಾಗಬೇಕು ಎಂದು ಅಪೇಕ್ಷಿಸುತ್ತಿದೆ ಎಂದು ಶಾ ಹೇಳಿದ್ದರು.
2017: ನವದೆಹಲಿ: ೨೦೧೬ರಲ್ಲಿ ವಿಶ್ವ ಸಂಸ್ಕೃತಿ ಉತ್ಸವ ನಡೆಸಿದ ಸಂದರ್ಭದಲ್ಲಿ ಯಮುನಾ ಪ್ರವಾಹ ಪ್ರದೇಶದಲ್ಲಿ ಆಗಿರುವ ಹಾನಿಗೆ ಶ್ರೀ ಶ್ರೀ ರವಿಶಂಕರ ಗುರೂಜಿ ನೇತೃತ್ವದ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯೇ ಹೊಣೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ ಜಿಟಿ) ತೀರ್ಪು ನೀಡಿತು. ಏನಿದ್ದರೂ ಇದಕ್ಕಾಗಿ ಸಂಸ್ಥೆಯ ಮೇಲೆ ಹೆಚ್ಚಿನ ದಂಡವನ್ನೇನೂ ಅದು ವಿಧಿಸಲಿಲ್ಲ. ಎನ್ ಜಿಟಿ ಅಧ್ಯಕ್ಷ ಸ್ವತಂತ್ರ ಕುಮಾರ್ ನೇತೃತ್ವದ ಪೀಠವು ’ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಬಾಕಿ ದಂಡ ಪಾವತಿ ಮಾಡಿದ ಬಳಿಕ ಪ್ರವಾಹ ಪ್ರದೇಶದ ಪುನಃಸ್ಥಾಪನಾ ಕಾಮಗಾರಿಯನ್ನು  ದೆಹಲಿ ಅಭಿವೃದ್ಧಿ ಪ್ರಾಧಿಕಾರವು (ಡಿಡಿಎ) ನಡೆಸಬೇಕು ಎಂದು ಆಜ್ಞಾಪಿಸಿತು. ಕಳೆದ ವರ್ಷ ಎನ್ ಜಿಟಿ ಮಧ್ಯಂತರ ಪರಿಸರ ಪರಿಹಾರವಾಗಿ ೫ ಕೋಟಿ ರೂಪಾಯಿಗಳನ್ನು  ಪರಿಸರದ ಮೇಲೆ ದುಷ್ಪರಿಣಾಮ ಬೀರುವಂತಹ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ಮೇಲೆ ದಂಡ ವಿಧಿಸಿತ್ತು. ಪುನಃಸ್ಥಾಪನಾ ಕೆಲಸಕ್ಕೆ ಬೇಕಾಗಬಹುದಾದ ಮೊತ್ತ ೫ ಕೋಟಿ ರೂಪಾಯಿಗಳನ್ನು ಮೀರಿದರೆ ಆಗ ನಗರ ಅಭಿವೃದ್ಧಿ ಪ್ರಾಧಿಕಾರವು ಆ ಹಣವನ್ನು ಸಂಸ್ಥೆಯಿಂದ ವಸೂಲಿ ಮಾಡಬೇಕು ಎಂದು ನ್ಯಾಯಮಂಡಳಿ ಹೇಳಿತ್ತು. ‘ಪರಿಸರವನ್ನು ಕಾಯ್ದುಕೊಳ್ಳಬೇಕಾದ ತನ್ನ ಕರ್ತವ್ಯಗಳನ್ನು ನಿಭಾಯಿಸುವಲ್ಲಿ ಡಿಡಿಎ ವಿಫಲಗೊಂಡಿದೆ. ಅದು ಹಾನಿಯ ಪ್ರಮಾಣವನ್ನು ಅಂದಾಜು ಮಾಡಬೇಕು ಮತ್ತು ಪುನಃಸ್ಥಾಪನಾ ಕೆಲಸವನ್ನು ಕೈಗೊಳ್ಳಬೇಕು ಎಂದು ಪೀಠ ಹೇಳಿತು. ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿ ಶೇಖರ್ ನೇತೃತ್ವದ ತಜ್ಞರ ಸಮಿತಿಯು ಏಪ್ರಿಲ್  ತಿಂಗಳಲ್ಲಿ  ಯಮುನಾ ಪ್ರವಾಹ ಪ್ರದೇಶದ ಪುನಸ್ಥಾಪನೆಗೆ ಸುಮಾರು ೧೦ ವರ್ಷ ಬೇಕಾಗುತ್ತದೆ ಮತ್ತು ಅದಕ್ಕೆ ೧೩೨೯ ಕೋಟಿ ರೂಪಾಯಿ ಬೇಕಾಗಬಹುದು ಎಂದು ವರದಿ ನೀಡಿತ್ತು. ಮೂರು ದಿನಗಳ ಕಾರ್ಯಕ್ರಮದ ಪರಿಣಾಮವಾಗಿ ಪ್ರವಾಹ ಪ್ರದೇಶವು ಮರಗಳು, ಪೊದೆಗಳು, ಎತ್ತರದ ಹುಲ್ಲು, ನೀರು ಮತ್ತು ಕೆಸರಿನಲ್ಲಿ ವಾಸವಾಗಿರುವ ಅಸಂಖ್ಯಾತ ಪ್ರಾಣಿಗಳು, ಕೀಟಗಳು, ಇತರ ಸೂಕ್ಷ್ಮ ಜೀವಿಗಳ ಆಶ್ರಯತಾಣವಾದ ನೀರಿನಲ್ಲಿ ಬೆಳೆಯುವ ಹೂಗಿಡಗಳು ಸೇರಿದಂತೆ ಜಲವಾಸಿ ಸಸ್ಯವರ್ಗ ಇತ್ಯಾದಿ ತನ್ನ ಸಹಜ ಸಸ್ಯವರ್ಗವನ್ನು ಕಳೆದುಕೊಂಡಿದೆ ಎಂದು ಸಮಿತಿ ತನ್ನ ೪೭ ಪುಟಗಳ ವರದಿಯಲ್ಲಿ ತಿಳಿಸಿತ್ತು 
2017: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಆರ್ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಇಲ್ಲಿ ಉದ್ಘಾಟಿಸಿದರು. ಕೇಂದ್ರವು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದಂತೆ ಮಹತ್ವದ ಸಂಶೋಧನಾ ಸ್ಥಳವಾಗಲಿದೆ ಎಂದು ಅವರು ನುಡಿದರು. ಪ್ರಧಾನಿಯವರು ದಲಿತ ನಾಯಕನ  ಎರಡು ಪ್ರತಿಮೆಗಳನ್ನೂ ಜನಪಥದ ಕೇಂದ್ರದಲ್ಲಿ ಅನಾವರಣಗೊಳಿಸಿದರು. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಕೇಂದ್ರ ಸಚಿವ ಥಾವರ್ ಚಂದ್ ಗೆಹ್ಲೋಟ್ ಮತ್ತು  ರಾಜ್ಯ ಸಚಿವ ರಾಮದಾಸ್ ಅಠವಳೆ ಹಾಗೂ ಕೇಂದ್ರ ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವ ವಿಜಯ್ ಗೋಯೆಲ್ ಅವರೂ ಸಮಾರಂಭದಲ್ಲಿ ಹಾಜರಿದ್ದರು. ‘ಕೇಂದ್ರವು ಡಾ. ಅಂಬೇಡ್ಕರ್ ಅವರ ವಿಚಾರಗಳು ಮತ್ತು ಬೋಧನೆಗಳ ಪ್ರಚಾರಕ್ಕೆ ಸ್ಫೂರ್ತಿಯ ಕೇಂದ್ರವಾಗಲಿದೆ ಮತ್ತು ಸಾಮಾಜಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬಂಧಿಸಿದ ಸಂಶೋಧನೆಯ ಮಹತ್ವದ ಸ್ಥಳವಾಗಲಿದೆ ಎಂದು ಪ್ರಧಾನಿ ಹೇಳಿದರು. ಸರ್ಕಾರವು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಐದು ಸ್ಥಳಗಳನ್ನು ಪ್ರವಾಸೀ ಸ್ಥಳಗಳಾಗಿ ಅಭಿವೃದ್ಧಿ ಪಡಿಸಿದೆ ಎಂದೂ ಮೋದಿ ನುಡಿದರು. ದೆಹಲಿ, ಮುಂಬೈ, ನಾಗಪುರ, ಮೊಹೊವ್ ಮತ್ತು ಲಂಡನ್ ಈ ಐದು ಪ್ರವಾಸೀ  ಸ್ಥಳಗಳು ಹಾಲಿ ತಲೆಮಾರಿನವರು ಅವರಿಗೆ ಸಲ್ಲಿಸಿದ ಗೌರವಾರ್ಪಣೆಯಂತಿದೆ ಎಂದು ಅವರು ನುಡಿದರು. ಈ ಕೇಂದ್ರವು ಯುವಕರಿಗಾಗಿ ಇದ್ದು, ಇಲ್ಲಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಯನ್ನು ಅರ್ಥ ಮಾಡಿಕೊಳ್ಳಬಹುದು ಎಂದರು.  ‘ಕೇಂದ್ರವು ಬೌದ್ಧ ಮತ್ತು ಆಧುನಿಕ ವಾಸ್ತುಶಿಲ್ಪದ ಮಿಶ್ರಣವಾಗಿದೆ ಎಂದೂ ಪ್ರಧಾನಿ ನುಡಿದರು. ಕೇಂದ್ರಕ್ಕೆ ಪ್ರಧಾನಿಯವರು ೨೦೧೫ರಲ್ಲಿ ಶಿಲಾನ್ಯಾಸ ಮಾಡಿದ್ದರು.
2017: ನವದೆಹಲಿ: ಮದುವೆಯಾದ ತತ್ ಕ್ಷಣವೇ ಮಹಿಳೆ ತನ್ನನ್ನು ತಾನು ಪುರುಷನಿಗೆ ಒತ್ತೆ ಇಟ್ಟುಕೊಳ್ಳುವುದಿಲ್ಲ, ತನ್ನ ಧಾರ್ಮಿಕ ಅಸ್ತಿತ್ವ ಸೇರಿದಂತೆ ತನ್ನ ಅಸ್ತಿತ್ವವನ್ನು ಆಕೆ ಉಳಿಸಿಕೊಳ್ಳುತ್ತಾಳೆ, ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ತನ್ನ ಸಮುದಾಯದ ಹೊರಗಿನ ವ್ಯಕ್ತಿಯನ್ನು ಮದುವೆಯಾದಾಗಲೂ ಆಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾಳೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಇಲ್ಲಿ ಅಭಿಪ್ರಾಯ ಪಟ್ಟರು. ಅಂತರ್ ಧರ್ಮ ಮದುವೆಯಾಗುವವರಿಗೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅವಕಾಶ ನೀಡುವ ಶಾಸನಬದ್ಧ ಪರ್ಯಾಯ ಎಂದು ವಿಶೇಷ ವಿವಾಹ ಕಾಯ್ದೆಯನ್ನು (೧೯೫೪) ಪರಿಗಣಿಸಲಾಗಿದೆ.  ‘ವಿಶೇಷ ವಿವಾಹ ಕಾಯ್ದೆಯು ಆಕೆಗೆ ತನ್ನ ಆಯ್ಕೆಯ ಅವಕಾಶವನ್ನು ದೃಢ ಪಡಿಸುತ್ತದೆ. ಆಕೆಯ ಆಯ್ಕೆ ಪವಿತ್ರವಾದದ್ದು. ನಾನು ನನಗೇ ಪ್ರಶ್ನೆ ಕೇಳುತ್ತೇನೆ: ಮಹಿಳೆಯ ಧಾರ್ಮಿಕ ಅಸ್ತಿತ್ವವನ್ನು ಯಾರು ತೆಗೆದುಹಾಕಬಹುದು? ಮಹಿಳೆ ಮಾತ್ರವೇ ತನ್ನ ಸ್ವಯಂ ಅಸ್ತಿತ್ವವನ್ನು ತೆಗೆದುಹಾಕಿಕೊಳ್ಳಬಹುದು ಎಂಬುದೇ ಇದಕ್ಕೆ ಉತ್ತರ ಎಂದು ಪ್ರಕರಣದ ವಿಚಾರಣೆ ನಡೆಸುತ್ತಿರುವ ಪಂಚ ಸದಸ್ಯ ಪೀಠದ ಮುಖ್ಯಸ್ಥ  ಮಿಶ್ರ ಹೇಳಿದರು. ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಹಿಂದೂ ಒಬ್ಬರನ್ನು ಮದುವೆಯಾದ ಪಾರ್ಸಿ ಮಹಿಳೆಗೆ ಟವರ್ ಆಪ್ ಸೈಲೆನ್ಸ್ ನಲ್ಲಿ ಮೃತರ ಆತ್ಮಕ್ಕೆ ಪ್ರಾರ್ಥನೆ ಸಲ್ಲಿಸಲು ಪಾರ್ಸಿ ಸಮುದಾಯ ಅವಕಾಶ ನಿರಾಕರಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಮೊದಲ ದಿನ ಮುಖ್ಯ ನ್ಯಾಯಮೂರ್ತಿ ಈ ಅಭಿಪ್ರಾಯ ವ್ಯಕ್ತ ಪಡಿಸಿದರು. ಪಾರ್ಸಿ ಮಹಿಳೆ ಈ ಅರ್ಜಿ ಸಲ್ಲಿಸಿದ್ದರು.  ಬೇರೆ ಸಮುದಾಯದ ವ್ಯಕ್ತಿಯನ್ನು ಮದುವೆಯಾದ ಬಳಿಕ ತನ್ನ ಹೆಸರು ಬದಲಾಯಿಸಿದ ಮಾತ್ರಕ್ಕೆ ಆಕೆ ತನ್ನ ಧರ್ಮ ಅಥವಾ ನಂಬಿಕೆಯನ್ನು ಬದಲಾಯಿಸಿದ್ದಾಳೆ ಎಂದು ಯಾರೂ ಅರ್ಥ ಮಾಡಿಕೊಳ್ಳುವಂತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ನ್ಯಾಯಮೂರ್ತಿಗಳಾದ ಎ.ಕೆ.  ಸಿಕ್ರಿ, ಎ.ಎಂ. ಖಾನ್ವಿಲ್ಕರ್, ಡಿ.ವೈ. ಚಂದ್ರಚೂಡ್ ಮತ್ತು ಅಶೋಕ ಭೂಷಣ್ ಅವರನ್ನೂ ಒಳಗೊಂಡಿರುವ ಪೀಠವು ಪಾರ್ಸಿ ಮಹಿಳೆಯು ೧೯೫೪ರ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಬೇರೆ ಧರ್ಮದ ವ್ಯಕ್ತಿಯನ್ನು ಮದುವೆಯಾದ ಬಳಿಕವೂ ತನ್ನ ಧಾರ್ಮಿಕ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದೇ ಎಂಬ ಪ್ರಶ್ನೆಯನ್ನು ಇತ್ಯರ್ಥ ಮಾಡಬೇಕಾಗಿದೆ. ಅರ್ಜಿದಾರರಾದ ಗೊಲ್ರೂಖ್ ಎಂ. ಗುಪ್ತ ಅವರು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಮದುವೆಯಾಗಿದ್ದರೂ ಮತಾಂತರ ಹೊಂದಿಲ್ಲ ಎಂಬ ವಾಸ್ತವವೇ ಆಕೆ ತನ್ನ ಧಾರ್ಮಿಕ ಅಸ್ತಿತ್ವವಾಗಿ ಜೊರಾಸ್ಟ್ರಿಯನ್ ಪಂಥವನ್ನೇ ಇಟ್ಟುಕೊಂಡಿದ್ದಾಳೆ ಎಂಬುದನ್ನು ತೋರಿಸುತ್ತದೆ. ಪಾರ್ಸಿ ಮಹಿಳೆಯ ಪರವಾದ ನಿರ್ಧಾರವು ಧರ್ಮ, ಘನತೆ ಮತ್ತು ಬದುಕಿಗೆ ಸಂಬಂಧಿಸಿದ ಮೂಲಭೂತ ಹಕ್ಕನ್ನು ಎತ್ತಿ ಹಿಡಿಯುತ್ತದೆ ಮತ್ತು ಅಲ್ಪ ಸಂಖ್ಯಾತ ಸಮುದಾಯದ ಮಹಿಳೆಯರ ಪಾಲಿಗೆ ಒಂದು ಮಹತ್ವದ ಬದಲಾವಣೆಯನ್ನು ತರುತ್ತದೆ. ಸುಪ್ರೀಂಕೋರ್ಟ್ ಇತ್ತೀಚೆಗಷ್ಟೇ ಒಂದೇ ಉಸಿರಿನ ತ್ರಿವಳಿ ತಲಾಖ್ ವಿಚ್ಛೇದನ ಪದ್ಧತಿಯನ್ನು ಸಂವಿಧಾನಬಾಹಿರ ಎಂಬುದಾಗಿ ಹೇಳಿ ಮುಸ್ಲಿಂ ಮಹಿಳೆಯರ ಪರವಾದ ತೀರ್ಪು ನೀಡಿದೆ. ಇದು ಈಗ ನೂತನ ಶಾಸನ ರಚನೆಗೂ ದಾರಿ ಮಾಡಿಕೊಟ್ಟಿದೆ. ಮದುವೆಯ ಬಳಿಕ ಮಹಿಳೆಯರ ಅಸ್ತಿತ್ವವು ಆಕೆಯ ಗಂಡನ ಅಸ್ತಿತ್ವದ ಜೊತೆಗೆ ವಿಲೀನಗೊಳ್ಳುತ್ತದೆ ಎಂಬ ವ್ಯಾಪಕ ಭಾವನೆಯನ್ನು ಪೀಠ ಮೇಲ್ನೋಟಕ್ಕೇ ನಿರಾಕರಿಸಿತು.


2016: ಚೆನ್ನೈ: ರಾಜಕೀಯ ಟೀಕಾಕಾರ, ರಂಗ ಕರ್ಮಿ ಮತ್ತು ರಾಜಕಾರಣಿಗಳ ವಿಡಂಬನೆ ಮತ್ತು ನಿರ್ಭೀತ ಟೀಕೆಗೆ ಖ್ಯಾತಿ ಪಡೆದಿದ್ದತುಘಲಕ್ತಮಿಳು ನಿಯತಕಾಲಿಕದ ಸಂಪಾದಕರಾಗಿದ್ದ ಚೊ ರಾಮಸ್ವಾಮಿ ಅಯ್ಯರ್ ಅವರು ನಸುಕಿನ ವೇಳೆಯಲ್ಲಿ ಚೆನ್ನೈಯಲ್ಲಿ ನಿಧನರಾದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದರು. ಕಳೆದ ಕೆಲ ದಿನಗಳಿಂದ ಅಸ್ವಸ್ಥರಾಗಿದ್ದ ಚೊ ಅವರನ್ನು ಇತ್ತೀಚೆಗೆ ಹಲವಾರು ಬಾರಿ ಉಸಿರಾಟದ ಸಮಸ್ಯೆಗಳಿಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ವಾರ ಉಸಿರಾಟದ ಸಮಸ್ಯೆ ಹಾಗೂ ಆಹಾರ ಸೇವನೆ ಕಷ್ಟಕರವಾದ ಹಿನ್ನೆಲೆಯಲ್ಲಿ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚೊ ಅವರು ಜನಿಸಿದ್ದು ವಕೀಲರ ಕುಟುಂಬದಲ್ಲಿ. ಅಜ್ಜ ಅರುಣಾಚಲ ಅಯ್ಯರ್, ತಂದೆ ಶ್ರೀನಿವಾಸ ಅಯ್ಯರ್, ಮತ್ತು ಚಿಕ್ಕಪ್ಪ ಮಾತೃಭೂತಮ್ ಅವರು ಖ್ಯಾತ ವಕೀಲರಾಗಿದ್ದರು. ಚೊ ರಾಮಸ್ವಾಮಿ ಅವರೂ ಸ್ವಲ್ಪ ಕಾಲ ವಕಾಲತ್ತನ್ನು ತಮ್ಮ ವೃತ್ತಿಯಾಗಿ ಸ್ವೀಕರಿಸಿ ಕೆಲ ಕಾಲ ಯಶಸ್ವಿಯಾಗಿ ನಡೆಸಿದ್ದರು. ಸ್ವಲ್ಪ ಕಾಲ ಟಿಟಿಕೆ ಸಮೂಹ ಸಂಸ್ಥೆಗಳಿಗೆ ಕಾನೂನು ಸಲಹೆಗಾರರಾಗಿದ್ದರು. ಬಳಿಕ ಅವರು ರಂಗಭೂಮಿಗೆ ಧುಮುಕಿದರು. ರಂಗಭೂಮಿಯಿಂದ ಚಲನಚಿತ್ರ ರಂಗ ಪ್ರವೇಶಿಸಿದ ಚೊ ಕಟ್ಟ ಕಡೆಗೆ ಗಟ್ಟಿಯಾಗಿ ನಿಂತದ್ದು ಪತ್ರಕರ್ತನಾಗಿ. ತಮ್ಮದೇ ಶೈಲಿಯ ಟೀಕೆ, ವಿಡಂಬನೆ, ನಿರ್ಭೀತ ಬರಹಗಳಿಗೆ ಖ್ಯಾತವಾದ ಅವರೇ ಸ್ಥಾಪಿಸಿದ ಪತ್ರಿಕೆ ತುಘಲಕ್ ರಾಜಕೀಯಲ್ಲಿ ಭಾರಿ ಸಂಚಲನ ಉಂಟು ಮಾಡಿತ್ತು. ರಂಗಕರ್ಮಿಯಾಗಿದ್ದಾಗಲೂ ತಮ್ಮ ನಾಟಕಗಳ ಮೂಲಕ ಅವರು ರಾಜಕೀಯ ವಿಡಂಬನೆಗಳಿಗೆ ಖ್ಯಾತಿ ಪಡೆದಿದ್ದರು. ಪತ್ರಿಕೋದ್ಯಮ ಸಾಧನೆಗಾಗಿ ಬಿ.ಡಿ. ಗೊಯೆಂಕಾ ಪ್ರಶಸ್ತಿಗೆ ಪಾತ್ರರಾಗಿದ್ದ ಚೊ ಅವರನ್ನು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯಸಭೆಗೆ ಸದಸ್ಯರನ್ನಾಗಿ ನಾಮಕರಣ ಮಾಡಿತ್ತು. ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಕಾಮರಾಜ್, ಮಾಜಿ ಪ್ರಧಾನಿ ಇಂದಿರಾಗಾಂಧಿ, ಜಯಪ್ರಕಾಶ ನಾರಾಯಣ್, ಎಲ್.ಕೆ. ಅಡ್ವಾಣಿ, ಆರ್ಎಸ್ಎಸ್ ನಾಯಕ ಬಾಳಾಸಾಹೇಬ್ ದೇವರಸ್, ಮಾಜಿ ಪ್ರಧಾನಿ ಚಂದ್ರಶೇಖರ್, ಜಿ.ಕೆ. ಮೂಪನಾರ್, ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ರಾಜಕೀಯ ನಾಯಕರು ಚೋ ಅವರ ಗೆಳೆಯರಾಗಿದ್ದರು.

2016: ನವದೆಹಲಿ: ಈದಿನ ನಿಧನರಾದ ಹಿರಿಯ ಪತ್ರಕರ್ತ, ರಾಜಕೀಯ ವಿಶ್ಲೇಷಕ ಚೋ ರಾಮಸ್ವಾಮಿ ಜತೆಗಿನ ಒಡನಾಟವನ್ನು ಸ್ಮರಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದರು. ಚೋ ರಾಮಸ್ವಾಮಿ ಅವರು ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿದ್ದಾಗ ಮೋದಿ ಆಸ್ಪತ್ರೆಗೆ ತೆರಳಿ ಚೋ ಅವರನ್ನು ಭೇಟಿ ಮಾಡಿದ್ದರು. ಚೋ ಅವರೊಂದಿಗೆ ಉತ್ತಮ ಬಾಂಧವ್ಯ  ಹೊಂದಿದ್ದ ಮೋದಿ, ಆತ ತನ್ನನ್ನು ಸಾವಿನ ವ್ಯಾಪಾರಿ ಎಂದು ಪರಿಚಯಿಸಿದ್ದ ಕಾರ್ಯಕ್ರಮದ ವಿಡಿಯೊವನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದರು. ಅವರೊಬ್ಬ ವಾಗ್ಮಿ, ಉತ್ತಮ ರಾಷ್ಟ್ರೀಯವಾದಿ. ಧೈರ್ಯಶಾಲಿಯಾಗಿದ್ದ ಅವರು ಗೌರವಾನ್ವಿತ ವ್ಯಕ್ತಿಯಾಗಿದ್ದರು ಎಂದು ಮೋದಿ ಟ್ವೀಟಿಸಿದರು. ಇದೆಲ್ಲದಕ್ಕಿಂತ ಮಿಗಿಲಾಗಿ ಅವರು ನನ್ನ ಆಪ್ತ ಗೆಳೆಯ. ಅವರ ಓದುಗರ ವಾರ್ಷಿಕ ಸಮ್ಮೇಳನದಲ್ಲಿ ನಾನು ಭಾಗವಹಿಸುತ್ತಿದ್ದೆ. ಮುಕ್ತವಾಗಿ ಮಾತನಾಡುವ ಅವರು ಪ್ರತಿಭಾವಂತರಾಗಿದ್ದರು, ಅವರ ನಿಧನದಿಂದ ದುಃಖವಾಗಿದೆ. ತುಘಲಕ್ ಓದುಗರಿಗೆ ಮತ್ತು ಅವರ ಕುಟುಂಬಕ್ಕೆ ದೇವರು ಶಕ್ತಿ ನೀಡಲಿ ಎಂದು ಮೋದಿ ಹೇಳಿದರು. 2002 ಗುಜರಾತ್ ದಂಗೆ ನಂತರ ಮೋದಿಯವರನ್ನು ಸೋನಿಯಾ ಗಾಂಧಿ ಸಾವಿನ ವ್ಯಾಪಾರಿ ಎಂದು ಹೇಳಿದ್ದರುಇದನ್ನೇ ಬಳಸಿ ಚೋ ಅವರು ಕಾರ್ಯಕ್ರಮವೊಂದರಲ್ಲಿ ಮೋದಿಯವರನ್ನು ಪರಿಚಯಿಸಿದ್ದರು. ನಾನೀಗ ಸಾವಿನ ವ್ಯಾಪಾರಿಯನ್ನು ಕಾರ್ಯಕ್ರಮಕ್ಕೆ ಸ್ವಾಗತಿಸುತ್ತೇನೆ. ಭಯೋತ್ಪಾದನೆಯ ಸಾವಿನ ವ್ಯಾಪಾರಿ, ಭ್ರಷ್ಟಾಚಾರದ ಸಾವಿನ ವ್ಯಾಪಾರಿ, ಸ್ವಜನ ಪಕ್ಷಪಾತದ ಸಾವಿನ ವ್ಯಾಪಾರಿ, ಅದಕ್ಷತೆಯ ಸಾವಿನ ವ್ಯಾಪಾರಿ, ಆಡಳಿತ ದುರುಪಯೋಗ ಪಡಿಸುವವರ ಸಾವಿನ ವ್ಯಾಪಾರಿ, ಕತ್ತಲೆಯ ಸಾವಿನ ವ್ಯಾಪಾರಿ..ಇವರು ನಿಮ್ಮನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದಾಗ ಸಭೆಯಲ್ಲಿ ಕರತಾಡನದ ಸದ್ದು ಮಾರ್ದನಿಸಿತ್ತು. 
2016: ಇಸ್ಲಾಮಾಬಾದ್: 47 ಮಂದಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನ ಸಂಸ್ಥೆಯ (ಪಿಐಎ) ವಿಮಾನ ಪತನಗೊಂಡಿತು. ಚಿತ್ರಾಲ್ನಿಂದ  ಸಂಜೆ 3.30ಕ್ಕೆ ಹೊರಟಿದ್ದ  ಪಿಕೆ-661 ವಿಮಾನ ಟೇಕ್ ಆಫ್ ಆಗಿದ್ದ ಕೆಲವೇ ಕ್ಷಣಗಳಲ್ಲಿ ನಿಯಂತ್ರಣ ಕಳೆದುಕೊಂಡು ಕಣ್ಮರೆಯಾಗಿತ್ತು. ವಿಮಾನದಲ್ಲಿ ಐವರು ವಿಮಾನ ಸಿಬ್ಬಂದಿ ಸೇರಿದಂತೆ 47 ಮಂದಿ ಇದ್ದರು ಎಂದು ವಿಮಾನ ಸಂಸ್ಥೆ ಹೇಳಿತು.
2016: ಮುಂಬೈ: ನೋಟು ರದ್ಧತಿ ಕ್ರಮದ ಬಳಿಕ ಇದೇ ಮೊತ್ತ ಮೊದಲ ಬಾರಿಗೆ ಈದಿನ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ) ತನ್ನ ನೂತನ ವಿತ್ತ ನೀತಿಯನ್ನು ಪ್ರಕಟಿಸಿದ್ದು, ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನೂ ಮಾಡಲಿಲ್ಲ. ನೂತನ ವಿತ್ತ ನೀತಿಯನ್ನು ಪ್ರಕಟಿಸಿದ ಆರ್ ಬಿ ಗವರ್ನರ್ ಉರ್ಜಿತ್ ಪಟೇಲ್ ಅವರು ಶೇಕಡಾ 6.25 ರೆಪೋ ದರ ಯಾವುದೇ ಬದಲಾವಣೆ ಇಲ್ಲದೆ ಹಾಗೆಯೇ ಮುಂದುವರೆಯುತ್ತದೆ ಎಂದು ಪ್ರಕಟಿಸಿದರು. ಪ್ರಸ್ತುತ ವಿತ್ತ ವರ್ಷದ ನಾಲ್ಕನೇ ತ್ರೖ ಮಾಸಿಕದ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರ ದರ ಶೇಕಡಾ 5 ಇರುತ್ತದೆ ಎಂದು ಹೇಳಿದ ಅವರು, 2016-17ರಲ್ಲಿ ಜಿಡಿಪಿ ಬೆಳವಣಿಗೆ ಅಂದಾಜನ್ನು ಹಿಂದಿನ ಶೇಕಡಾ 7.6ಕ್ಕೆ ಬದಲಾಗಿ ಶೇಕಡಾ 7.1ಕ್ಕೆ ಇಳಿಸಲಾಗಿದೆ ಎಂದು ನುಡಿದರು. ಹಳೆ ನೋಟುಗಳನ್ನು ಹಿಂತೆಗೆದುಕೊಂಡದ್ದರಿಂದ ಮೂರನೇ ತ್ರೖ ಮಾಸಿಕದ ಅವಧಿಯಲ್ಲಿ ತಾತ್ಕಾಲಿಕವಾಗಿ ಹಣದುಬ್ಬರ ಮೂಲದರದಲ್ಲಿ 10-15 ಪಾಯಿಂಟ್ ಇಳಿಯಬಹುದು ಎಂದು ಪಟೇಲ್ ಹೇಳಿದರು. ವಿತ್ತ ನೀತಿ ಸಮಿತಿಯ ಎಲ್ಲ 6 ಮಂದಿ ಸದಸ್ಯರೂ ಯಥಾಸ್ಥಿತಿ ಕಾಯ್ದುಕೊಳ್ಳುವುದರ ಪರ ಮತ ಚಲಾಯಿಸಿದ್ದಾರೆ. ನೋಟು ರದ್ದತಿ ಕ್ರಮ ಪರಿಣಾಮವಾಗಿ ಚಿಲ್ಲರೆ ವ್ಯಾಪಾರ, ಹೊಟೇಲುಗಳು,  ರೆಸ್ಟೋರೆಂಟುಗಳು  ಮತ್ತು ಸಾಗಣೆ ಕ್ಷೇತ್ರದ ನಗದು ವಹಿವಾಟಿನಲ್ಲಿ ಅಲ್ಪಾವಧಿಯ ಅಡಚಣೆಗಳಾಗುತ್ತವೆ ಎಂದು ಪಟೇಲ್ ನುಡಿದರು.

2016: ನವದೆಹಲಿ: ಚಳಿಗಾಲದ ಅಧಿವೇಶನ ಪ್ರಾರಂಭವಾದ ದಿನದಿಂದಲೂ ನೋಟು ರದ್ದತಿ ವಿಷಯದಿಂದಾಗಿ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪಕ್ಕೆ ವಿರೋಧ ಪಕ್ಷಗಳು ನಡೆಸುತ್ತಿರುವ ಅಡ್ಡಿಯ ಹಿನ್ನೆಲೆಯಲ್ಲಿ ಕಲಾಪ  ಅಸ್ತವ್ಯಸ್ತಗೊಳ್ಳುತ್ತಿರುವುದಕ್ಕೆ ಸಭಾಧ್ಯಕ್ಷರು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ಅವರ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಈದಿನ  ಘಟಿಸಿತು. ಈದಿನ ಸಹ ವಿರೋಧ ಪಕ್ಷಗಳು ಗದ್ದಲ ಮುಂದುವರೆಸಿದ ಕಾರಣ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸದನವನ್ನು ಮುಂದೂಡಿದರು. ಸಂದರ್ಭದಲ್ಲಿ ಕುಪಿತರಾದ ಅಡ್ವಾಣಿ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಅವರನ್ನು ಕರೆದು ಅವರ ಬಳಿ ಕಿಡಿ ಕಾರಿದರು. ಕಲಾಪವನ್ನು ಮುನ್ನಡೆಸುತ್ತಿರುವವರು ಯಾರು? ಕಲಾಪ ಯಾವುದೇ ನಿರ್ದಿಷ್ಟ ಗುರಿಯಿಲ್ಲದೆ ನಡೆಯುತ್ತಿದೆ. ಸಭಾಧ್ಯಕ್ಷರು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಕಲಾಪ ಸುಗಮವಾಗಿ ನಡೆಯುವಂತೆ ವ್ಯವಸ್ಥೆ ಮಾಡಿಲ್ಲ ಎಂದು ಆಕ್ಷೇಪಿಸಿದರು ಸಂದರ್ಭದಲ್ಲಿ ಅಡ್ವಾಣಿಯವರನ್ನು ಸಮಾಧಾನ ಪಡಿಸಲು ಅನಂತ್ ಕುಮಾರ್ ಯತ್ನಿಸುತ್ತಿರುವುದು ಕಂಡು ಬಂದಿತು. ಜತೆಗೆ ಮಾಧ್ಯಮ ಪ್ರತಿನಿಧಿಗಳು ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದೂ ಸಹ ತಿಳಿಸಿದರು. ಆದರೆ ಇದಕ್ಕೂ ಸುಮ್ಮನಾಗದ ಅಡ್ವಾಣಿ ನಾನು ವಿಷಯವನ್ನು ಸಾರ್ವಜನಿಕವಾಗಿ ತಿಳಿಸುತ್ತೇನೆ, ಸಭಾಧ್ಯಕ್ಷರ ಬಳಿ ಸಹ ವಿಷಯವನ್ನು ಪ್ರಸ್ತಾಪ ಮಾಡುತ್ತೇನೆ ಎಂದು  ಹೇಳಿದರು. ನಂತರ ಯಾರೊಂದಿಗೂ ಮಾತನಾಡದೆ ಸದನದಿಂದ ಹೊರ ನಡೆದರು. ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ವೆಂಕಯ್ಯ ನಾಯ್ದು ಹಿರಿಯ ಸಂಸತ್ ಸದಸ್ಯರಾದ ಅಡ್ವಾಣಿಯವರು ವಿರೋಧ ಪಕ್ಷಗಳು ಪದೇ ಪದೇ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಕುರಿತು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

2016: ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಡೊನಾಲ್ಡ್ ಟ್ರಂಫ್ ಅವರನ್ನು ಟೈಮ್ಸ್ ಪತ್ರಿಕೆ 2016 ವರ್ಷದ ವ್ಯಕ್ತಿಯಾಗಿ ಆಯ್ಕೆ ಮಾಡಿತು. ಹಿಲರಿ ಕ್ಲಿಂಟನ್, ಟರ್ಕಿ ಅಧ್ಯಕ್ಷ ಎರ್ಡೋಗನ್, ಬರಾಕ್ ಒಬಾಮ, ನರೇಂದ್ರ ಮೋದಿ ಅವರನ್ನು ಹಿಂದಿಕ್ಕಿ ಟ್ರಂಪ್ ವರ್ಷದ ವ್ಯಕ್ತಿ ಗೌರವ ಪಡೆದಿದ್ದಾರೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲನುಭವಿಸಿದ ಹಿಲರಿ ಕ್ಲಿಂಟನ್ ಎರಡನೇ ಸ್ಥಾನ ಪಡೆದಿದ್ದಾರೆ ಎಂದು ಈದಿನ ಸಂಜೆ ಟೈಮ್ಸ್ ಪತ್ರಿಕೆ ಅಧಿಕೃತ ಪ್ರಕಟಣೆ ಹೊರಡಿಸಿತು. ವರ್ಷದ ವ್ಯಕ್ತಿಯಾಗಿ ಆಯ್ಕೆಯಾದ ನಂತರ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಇದು ನನಗೆ ಸಿಕ್ಕಿರುವ ಗೌರವ, ನಾನು ಟೈಮ್ಸ್ ಪತ್ರಿಕೆ ಓದುತ್ತಾ ಬೆಳೆದಿದ್ದೇನೆ. ಇದೊಂದು ಅತ್ಯುತ್ತಮ ಪತ್ರಿಕೆ. ವರ್ಷದ ವ್ಯಕ್ತಿಯಾಗಿ ಆಯ್ಕೆಯಾಗಿರುವುದು ನನಗೆ ಅತೀವ ಸಂತಸವನ್ನುಂಟು ಮಾಡಿದೆ ಎಂದು ತಿಳಿಸಿದರು. ಟೈಮ್ಸ್ ಪತ್ರಿಕೆ ಆಯ್ಕೆ ಮಾಡಿದ್ದ ಅಂತಿಮ 11 ಜನರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದಿದ್ದರು. ಇದಕ್ಕೂ ಮುನ್ನ ನರೇಂದ್ರ ಮೋದಿ ಆನ್ಲೈನ್ ಮತ ಸಮೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಆದರೆ ಟೈಮ್ಸ್ ಸಂಪಾದಕ ಮಂಡಳಿ ಬಿಡುಗಡೆ ಮಾಡಿದ ಅಂತಿಮ ಪಟ್ಟಿಯಲ್ಲಿ ಮೋದಿ ಅವರಿಗೆ ಸ್ಥಾನ ಸಿಗಲಿಲ್ಲ.
 2016: ಜಕಾರ್ತ: ಇಂಡೋನೇಷ್ಯಾದ ಏಸೆಹ್ ಪ್ರಾಂತ್ಯದಲ್ಲಿ ನಸುಕಿನಲ್ಲಿ ರಿಕ್ಟರ್ ಮಾಪಕದಲ್ಲಿ 6.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿ, ಕನಿಷ್ಠ 97 ಜನ ಸಾವನ್ನಪ್ಪಿದರು. ಭೂಕಂಪದ ತೀವ್ರತೆಗೆ ಹಲವಾರು ಕಟ್ಟಡಗಳು ಕುಸಿದಿದ್ದು, ಕಟ್ಟಡದ ಅವಶೇಷಗಳ ಅಡಿಯಿಂದ ಜನರನ್ನು ರಕ್ಷಿಸಲು ತೀವ್ರ ಯತ್ನ ನಡೆಯಿತು. ಭೂಕಂಪದಲ್ಲಿ ಕನಿಷ್ಠ 97 ಜನ ಸಾವನ್ನಪ್ಪಿದ್ದು, ನಾಲ್ವರನ್ನು ಅವಶೇಷಗಳ ಅಡಿಯಿಂದ ಜೀವಂತ ಹೊರತೆಗೆಯಲಾಗಿದೆ. ಬಹುತೇಕ ಸಾವುಗಳು ಪಿಡೀ ಜಯ ಜಿಲ್ಲೆಯಲ್ಲಿ ಸಂಭವಿಸಿವೆ. ಜಿಲ್ಲೆ ಭೂಕಂಪದ ಕೇಂದ್ರ ಬಿಂದುವಿಗೆ ಸಮೀಪದಲ್ಲಿದೆ. ಅವಶೇಷಗಳ ಅಡಿಯಲ್ಲಿ ಇನ್ನೂ ನಾಲ್ಕೈದು ಮಂದಿ ಹೂತು ಹೋಗಿದ್ದಾರೆ ಎಂದು ನಂಬಲಾಗಿದ್ದು, ಅವರು ಜೀವಂತವಾಗಿ ಉಳಿದಿದ್ದಾರೆಯೇ ಅಥವಾ ಸಾವನ್ನಪ್ಪಿದ್ದಾರೆಯೇ ಎಂಬದು ಗೊತ್ತಾಗಿಲ್ಲ ಎಂದು ಏಸೆಹ್ ಪ್ರಾಂತ್ಯದ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಟಟಾಂಗ್ ಸುಲೈಮಾನ್ ಹೇಳಿದರುಭೂಕಂಪದಲ್ಲಿ ಸುಮಾರು 245 ಕಟ್ಟಡಗಳು ಕುಸಿದು ಹಾನಿಗೊಂಡಿದ್ದು, 273ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
2016: ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿಯ ಉಳಿದ ಪಂದ್ಯಗಳಿಗೆ 2.83
ಕೋಟಿ ರೂ.ಗಳನ್ನು ಬಳಕೆ ಮಾಡಿಕೊಳ್ಳಲು ಸುಪ್ರೀಂ ಕೋರ್ಟ್ ಬಿಸಿಸಿಐಗೆ ಅನುಮತಿ ನೀಡಿತು. ಇಂಗ್ಲೆಂಡ್ ವಿರುದ್ಧದ ಉಳಿದ ಪಂದ್ಯಗಳಿಗೆ ಹಣ ಬಳಕೆ ಮಾಡಿಕೊಳ್ಳಲು ಅನುವು ಮಾಡಿಕೊಡುವಂತೆ ಕೋರಿ ಬಿಸಿಸಿಐ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಬಿಸಿಸಿಐ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಹಣ ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿತು. ಇದೇ ಸಂದರ್ಭದಲ್ಲಿ ಲೋಧಾ ಸಮಿತಿಯ ಶಿಫಾರಸ್ಸುಗಳನ್ನು ಅಳವಡಿಸಿ ಕೊಳ್ಳದಿರುವ ಕಾರಣ ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗೆ ಪಂದ್ಯದ ಆದಾಯವನ್ನು ಹಂಚಿಕೊಳ್ಳದಂತೆ ಸೂಚಿಸಿತು. ಇಂಗ್ಲೆಂಡ್ ವಿರುದ್ಧ ಬಾಕಿ ಉಳಿದಿರುವ 2 ಟೆಸ್ಟ್ ಪಂದ್ಯಗಳಿಗೆ 1.33 ಕೋಟಿ ರೂ. ಮತ್ತು 3 ಏಕ ದಿನ ಪಂದ್ಯಗಳಿಗೆ ತಲಾ 25 ಲಕ್ಷದಂತೆ ಬಳಕೆ ಮಾಡಿಕೊಳ್ಳಬಹುದು. ಮೊತ್ತವನ್ನು ತಂಡದ ಆಟಗಾರರ ಪ್ರಯಾಣ ಮತ್ತು ಉಳಿದುಕೊಳ್ಳುವ ವ್ಯವಸ್ಥೆಗಾಗಿ ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿತು. ನಾಲ್ಕನೇ ಟೆಸ್ಟ್ ಪಂದ್ಯ ಡಿ.8 ರಿಂದ ಮುಂಬೈನಲ್ಲಿ ನಡೆಯಲಿದ್ದು, ಕೊನೆಯ ಪಂದ್ಯ ಡಿ.16 ರಿಂದ ಚೆನ್ನೈನಲ್ಲಿ ನಡೆಯುವುದು.
2016: ಪೋರ್ಟ್ ಬ್ಲೇರ್: ಭಾರಿ ಮಳೆ ಹಾಗೂ ಬಿರುಗಾಳಿ ಪರಿಣಾಮವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದ ಹ್ಯಾವ್ಲೋಕ್ ದ್ವೀಪದಲ್ಲಿ 800 ಮಂದಿ ಪ್ರವಾಸಿಗರು ಸಿಕ್ಕಿ ಹಾಕಿಕೊಂಡಿದ್ದು, ಅವರ ರಕ್ಷಣೆಗಾಗಿ ಭಾರತೀಯ ನೌಕಾಪಡೆ  ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ದ್ವೀಪದಲ್ಲಿನ ಸಹಸ್ರಾರು ಮಂದಿ ಪ್ರವಾಸಿಗರಿಗೆ ಇರುವ ಕಟ್ಟಡಗಳಿಂದ ಹೊರ ಬಾರದಂತೆ ಸೂಚನೆ ನೀಡಲಾಯಿತು. ನೌಕಾಪಡೆಯ ಐಎನ್ಎಸ್ ಬಿತ್ರ, ಬಂಗರಮ್ ಕುಂಭಿರ್ ಮತ್ತು ಎಲ್ಸಿಯು 38 ನೌಕೆಗಳನ್ನು ದ್ವೀಪದಲ್ಲಿ ಸಿಕ್ಕಿ ಬಿದ್ದಿರುವ ಪ್ರವಾಸಿಗರನ್ನು ತೆರವುಗೊಳಿಸಿ ರಕ್ಷಿಸಿ ಕರೆತರುವ ಸಲುವಾಗಿ ನಿಯೋಜಿಸಲಾಯಿತು.  ಅಂಡಮಾನ್ ಮತ್ತು ನಿಕೋಬಾರ್ ವಿಪತ್ತು ನಿರ್ವಹಣಾ ಅಧಿಕಾರಿಗಳು ಮಾಡಿದ ಮನವಿ ಮೇರೆಗೆ ಪ್ರವಾಸಿಗಳ ಹಠಾತ್ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.  ರಾಜಧಾನಿ ಪೋರ್ಟ್ ಬ್ಲೇರ್ನಿಂದ ಸುಮಾರು 36 ಕಿಮೀ ದೂರದಲ್ಲಿರುವ ಹ್ಯಾವ್ಲೋಕ್ ದ್ವೀಪಕ್ಕೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಅಂಡಮಾನ್ ಮತ್ತು ನಿಕೋಬಾರ್ ವಿಪತ್ತು ನಿರ್ವಹಣಾ ಅಧಿಕಾರಿಗಳು ಅಂದಾಜು ಮಾಡಿದ್ದು ಹಿನ್ನೆಲೆಯಲ್ಲಿ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಪೋರ್ಟ್ ಬ್ಲೇರ್ನಿಂದ 310 ಕಿಮೀ ದೂರದಲ್ಲಿ ಸಮುದ್ರ ಮಧ್ಯೆ ತೀವ್ರ ವಾಯುಭಾರ ಕುಸಿತ ಉಂಟಾಗಿದ್ದು, ಹಿನ್ನೆಲೆಯಲ್ಲಿ ಯಾವುದೇ ಪ್ರಮಾದವಾಗದಿರಲಿ ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ವಿಕೋಪ ನಿರ್ವಹಣಾ ನಿರ್ದೇಶನಾಲಯದ ಅಧಿಕಾರಿ ಒಬ್ಬರು ಹೇಳಿದರು.

2016: ಚೆನ್ನೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಿರ್ಮಾಣದ ಪೊಲಾರ್ ಉಪಗ್ರಹ ಉಡಾವಣೆ ರಾಕೆಟ್ (ಪಿಎಸ್ಎಲ್ವಿಸಿ36) ಈದಿನ ರ ಬೆಳಗ್ಗೆ ಶ್ರೀಹರಿಕೋಟಾದಿಂದ 10.25 ಸುಮಾರಿಗೆ ಯಶಸ್ವಿಯಾಗಿ ಗಗನಕ್ಕೆ ಹಾರಿಸಿತು.


2014:  ಬೆಂಗಳೂರು: ಪ್ರತಿಕೂಲ ಹವಾಮಾನದ ಕಾರಣ ಎರಡು ಬಾರಿ ಮುಂದೂಡಿಕೆಯಾಗಿದ್ದ ಭಾರತದ ಅತ್ಯಾಧುನಿಕ ಸಂಪರ್ಕ ಉಪಗ್ರಹ ಜಿಸ್ಯಾಟ್-16ನ್ನು ಏರಿಯನ್ 5 ರಾಕೆಟ್ ಮೂಲಕ ಈದಿನ ನಸುಕಿನಲ್ಲಿ ಯಶಸ್ವಿಯಾಗಿ ಕಕ್ಷೆಗೆ ಸೇರಿಸುವ ಮೂಲಕ ಭಾರತೀಯ ವಿಜ್ಞಾನಿಗಳು ಇನ್ನೊಂದು ವಿಕ್ರಮ ಸಾಧಿಸಿದರು. ಫ್ರೆಂಚ್ ಗಯಾನಾದ ಕೌರು ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್ ಉಡಾವಣೆ ಮೂಲಕ ಈ ಕಾರ್ಯಾಚರಣೆಯನ್ನು ಸುಸೂತ್ರವಾಗಿ ನೆರವೇರಿಸಲಾಯಿತು. ನಸುಕಿನ ವೇಳೆ ಭಾರತೀಯ ಕಾಲಮಾನ 2.10 ಗಂಟೆಗೆ ಜಿಸ್ಯಾಟ್-16 ಉಪಗ್ರಹವನ್ನು ಹೊತ್ತ ಐರೋಪ್ಯ ರಾಕೆಟ್​ನ್ನು ಉಡಾವಣೆ ಮಾಡಲಾಯಿತು. ಯಾವುದೇ ತೊಡಕುರಹಿತ ಪಯಣದ ಮೂಲಕ ಅದನ್ನು ಬಾಹ್ಯಾಕಾಶದಲ್ಲಿ ನಿಗದಿತ ಕಕ್ಷೆಗೆ ಸೇರಿಸಲಾಯಿತು. ಈ ಉಪಗ್ರಹವು ಭಾರತದ ರಾಷ್ಟ್ರೀಯ ಬಾಹ್ಯಾಕಾಶ ಸಾಮರ್ಥ್ಯವನ್ನು ಇನ್ನಷ್ಟು ವೃದ್ಧಿಸಿತು. ಜಿಸ್ಯಾಟ್-16 ಉಪಗ್ರಹವನ್ನು ಭೂಸ್ಥಾಯೀ ವರ್ಗಾವಣೆ ಕಕ್ಷೆಯಲ್ಲಿ (ಜಿಟಿಒ) ಕೂರಿಸಲಾಗಿದೆ. ಏರಿಯನ್ ರಾಕೆಟ್​ನಲ್ಲಿ ಎಸ್​ಎಸ್​ಎಲ್ (ಸ್ಪೇಸ್ ಸಿಸ್ಟಮ್ಸ್/ಲೋರಲ್) ನಿರ್ಮಿಸಿದ ಡೈರೆಕ್ಟ್​ವಿ-14 ಉಪಗ್ರಹ ಕೂಡಾ ಪಯಣಿಸಿತು. ಈ ಉಪಗ್ರಹವು ಅಮೆರಿಕದಾದ್ಯಂತ ಮನೆ ಮನೆಗೆ ಟೆಲಿವಿಷನ್ ಸವಲತ್ತು ಕಲ್ಪಿಸುವ ಡೈರೆಕ್ಟ್​ವಿ-14ಕ್ಕೆ ಅನುಕೂಲ ಕಲ್ಪಿಸುವುದು. ಏರಿಯನ್ ರಾಕೆಟ್​ನ 63ನೇ ಯಶಸ್ವೀ ಉಡಾವಣಾ ಯೋಜನೆಯಿದು. 'ಏರಿಯನ್ 5 ಡೈರೆಕ್ಟ್​ವಿ-14 ಮತ್ತು ಜಿಸ್ಯಾಟ್-16 ಉಪಗ್ರಹಗಳನ್ನು ಕಕ್ಷೆಯಲ್ಲಿ ಕೂರಿಸುವ ಇತ್ತೀಚಿನ ಯೋಜನೆಯಲ್ಲಿ ಯಶಸ್ವಿಯಾಗಿದೆ' ಎಂದು ಏರಿಯನ್ ಸ್ಪೇಸ್ ತನ್ನ ವೆಬ್​ಸೈಟ್​ನಲ್ಲಿ ತಿಳಿಸಿತು. 3,181 ಕಿ.ಗ್ರಾಂ. ತೂಕದ ಜಿಸ್ಯಾಟ್-16 ಒಟ್ಟು 48 ಸಂಪರ್ಕ ಟ್ರಾನ್ಸ್​ಪಾಂಡರ್​ಗಳನ್ನು ಒಯ್ದಿದ್ದು ಇದು ಈವರೆಗೆ ಇಸ್ರೋ ಅಭಿವೃದ್ಧಿ ಪಡಿಸಿದ ಅತಿದೊಡ್ಡ ಸಂಪರ್ಕ ಉಪಗ್ರಹವಾಗಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದೆ ಎಂದು ಉಡಾವಣೆಯಾದ ಸ್ವಲ್ಪ ಹೊತ್ತಿನಲ್ಲೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಬೆಂಗಳೂರು ಕೇಂದ್ರ ಕಚೇರಿ ತಿಳಿಸಿತು.. ಕರ್ನಾಟಕದ ಹಾಸನದಲ್ಲಿ ಇರುವ ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಜಿಸ್ಯಾಟ್-16ರ ನಿಯಂತ್ರಣವನ್ನು ಪಡೆದುಕೊಂಡಿದೆ ಎಂದು ಇಸ್ರೋ ತಿಳಿಸಿತು.

2014: ಚೆನ್ನೈ: 50ಸಾವಿರ ಸ್ವಯಂ ಸೇವಕರು ಭಾರತ ಧ್ವಜವನ್ನು ಮಾನವ ಸರಪಳಿ ಮೂಲಕ ನಿರ್ವಿುಸುವ ಮೂಲಕ ನೂತನ ವಿಶ್ವದಾಖಲೆ ಬರೆದರು. ಹಿಂದೆ ಪಾಕಿಸ್ತಾನದಲ್ಲಿ ಅತಿ ದೊಡ್ಡ ಮಾನವ ಧ್ವಜ ನಿರ್ವಿುಸಿ ದಾಖಲೆ ನಿರ್ವಿುಸಲಾಗಿತ್ತು. ಚೆನ್ನೈನ ವೈಎಂಸಿಎ ಕ್ರೀಡಾಂಗಣದಲ್ಲಿ 50ಸಾವಿರ ಜನರು ತ್ರಿವರ್ಣದ ಬಟ್ಟೆ ಧರಿಸಿ ಭಾರತದ ಧ್ವಜವನ್ನು ನಿರ್ವಿುಸಿದರು. ಪಾಕಿಸ್ತಾನದ ಲಾಹೋರ್​ನಲ್ಲಿ ಈ ಹಿಂದೆ 28,957 ಜನರು ಪಾಕಿಸ್ತಾನ ಧ್ವಜವನ್ನು ನಿರ್ವಿುಸಿ ದಾಖಲೆ ಬರೆದಿದ್ದರು. ಯುವಜನತೆಯಲ್ಲಿ ರಾಷ್ಟ್ರಾಭಿಮಾನ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

2014: ಬೆಳಗಾವಿ: ಕರ್ನಾಟಕದ ಬೆಳಗಾವಿಯಿಂದ ಸುಮಾರು 100 ಕಿ.ಮೀ. ದೂರದ ರಾಯಭಾಗ ತಾಲೂಕಿನ ಮಾಕಳಿ ಗ್ರಾಮದಲ್ಲಿ ಟಂ ಟಂ ಒಂದು ಬಾವಿಗೆ ಬಿದ್ದ ಪರಿಣಾಮವಾಗಿ 5 ವರ್ಷದ ಒಬ್ಬ ಬಾಲಕಿ ಮೃತಳಾಗಿ ಇತರ 6 ಮಂದಿ ಗಾಯಗೊಂಡ ಘಟನೆ ಘಟಿಸಿತು. ಗಾಯಾಳುಗಳ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿ ಹೇಳಿತು. ನತದೃಷ್ಟ ಟಂಟಂ ವಾಹನದಲ್ಲಿ ಇದ್ದ ಪ್ರಯಾಣಿಕರು ಸವದತ್ತಿ ಯಲ್ಲಮ್ಮ ಜಾತ್ರೆ ಮುಗಿಸಿಕೊಂಡು ತಮ್ಮ ಊರಾದ ಮಾವಿನಹೊಂಡಕ್ಕೆ ವಾಪಸ್ ಹೊರಟಿದ್ದರು. ಮಾಕಳಿ ಗ್ರಾಮದಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಾವಿಗೆ ಬಿತ್ತು ಎಂದು ಹೇಳಲಾಯಿತು. ಸುದ್ದಿ ತಿಳಿದ ತತ್​ಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ವಾಹನವನ್ನು ಬಾವಿಯಿಂದ ಮೇಲೆತ್ತಿದರು. ಆದರೆ ಅಷ್ಟರಲ್ಲಾಗಲೇ ಬಾಲಕಿಯ ಪ್ರಾಣಪಕ್ಷಿ ಹಾರಿಹೋಗಿತ್ತು. ಗಾಯಾಳುಗಳೆಲ್ಲರನ್ನೂ ಹಾರೋಗೇರಿ ಆಸ್ಪತ್ರೆಗೆ ದಾಖಲಿಸಲಾಯಿತು.
.
2014: ನವದೆಹಲಿ: ವಿಶ್ವಸಂಸ್ಥೆಯು ಶೀಘ್ರದಲ್ಲೇ ಜೂನ್ 21ನೇ ದಿನಾಂಕವನ್ನು ವಿಶ್ವ ಯೋಗ ದಿನ ಎಂಬುದಾಗಿ ಘೋಷಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ನವದೆಹಲಿಯಲ್ಲಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಸ್ತಾಪವನ್ನು ಅನುಸರಿಸಿ ವಿಶ್ವಸಂಸ್ಥೆ ಈ ಕ್ರಮ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಮೂರು ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಯೋಗವನ್ನು 'ವಿಶ್ವ ಯೋಗ ದಿನ'ವಾಗಿ ಆಚರಿಸಬೇಕು ಎಂದು ವಿಶ್ವ ಸಮುದಾಯಕ್ಕೆ ಮನವಿ ಮಾಡಿದ್ದರು.
2014: ಬೆಳಗಾವಿ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಕೈದಿಯೊಬ್ಬ ಬೆಳಗಾವಿಯ ಹಿಂಡಲಗಾ ಸೆರೆಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಘಟಿಸಿತು. 'ನಂಜಪ್ಪ ಶಿವನಂಜಪ್ಪ ಎಂಬ ಕೈದಿಗೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿತ್ತು. ಆತ ಹಿಂದಿನ ರಾತ್ರಿ ಹಿಂಡಲಗಾ ಕೇಂದ್ರೀಯ ಸೆರೆಮನೆಯ 7ನೇ ನಂಬರ್ ಬ್ಯಾರಕ್ ಬಳಿ ಶೌಚಾಲಯದಲ್ಲಿ ಸ್ವತಃ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ಬೆಳಗಾವಿ ಪೊಲೀಸ್ ಕಮೀಷನರ್ ಎಸ್. ರವಿ ತಿಳಿಸಿದರು.

2014: ಲೆಗಾಝ್ಪಿ, ಫಿಲಿಪ್ಪೈನ್ಸ್: ಹಗುಪಿಟ್ ಚಂಡಮಾರುತವು ಈದಿನ ವೇಳೆಗೆ ದುರ್ಬಲಗೊಂಡಿದ್ದು, ಅದಕ್ಕೆ ಮುನ್ನ ಫಿಲಿಪ್ಪೈನ್ಸ್​ನ ಕರಾವಳಿ ಪ್ರಾಂತಗಳಲ್ಲಿ ಸಹಸ್ರಾರು ಮರಗಳನ್ನು ಉರುಳಿಸಿದ್ದಲ್ಲದೆ, 6,50,000 ಮಂದಿಯನ್ನು ನಿರ್ವಸಿತರನ್ನಾಗಿ ಮಾಡಿತು. ಜೊತೆಗೆ ಇಡೀ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಿತು.. ಏನಿದ್ದರೂ ಈದಿನದ ಹೊತ್ತಿಗೆ ಚಂಡಮಾರುತ ದುರ್ಬಲಗೊಂಡು ಸಾಗಿದ್ದರಿಂದ ಫಿಲಿಪ್ಪೈನ್ ಕಳೆದ ವರ್ಷದ ಕರಾಳ ದುರಂತ ಪರಿಸ್ಥಿತಿಯ ಪುನರಾವರ್ತನೆಯ ಭೀತಿಯಿಂದ ಪಾರಾಯಿತು. ಹಾನಿಗೊಂಡಿರುವ ಗುಡಿಸಲು, ಅಬ್ಬರ ರಹಿತ ಪ್ರವಾಹದ ನೀರು, ಹಾರಿಹೋಗಿರುವ ಟಿನ್ ಛಾವಣಿಗಳು ಇಡೀ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಂಡು ಬಂದವು. ಆದರೆ, ಹಗುಪಿಟ್ ಚಂಡಮಾರುತ ಅಪ್ಪಳಿಸಿದ ಪೂರ್ವ ಸಮರ್ ಮತ್ತು ಇತರ ದ್ವೀಪಪ್ರಾಂತ್ಯಗಳಲ್ಲಿ ಸಾವು ನೋವು ಹಾಗೂ ಭಾರಿ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ವರದಿ ಬರಲಿಲ್ಲ. ಗರಿಷ್ಠ ಗಂಟೆಗೆ 140 ಕಿ.ಮೀ. (87ಮೈಲು) ವೇಗದಲ್ಲಿ ಗಾಳಿ ಬೀಸಿತು. ಇದು ಚಂಡಮಾರುತದ ಗರಿಷ್ಠ ವೇಗಕ್ಕಿಂತ ತುಂಬಾ ಕಡಿಮೆ ಎಂದು ಹೇಳಲಾಯಿತು.
2014: ಕೋಲ್ಕತ: ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಭಾರತೀಯ ಜಲ ಪ್ರದೇಶದಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದುದಕ್ಕಾಗಿ 56 ಮಂದಿ ಮೀನುಗಾರರ ಜೊತೆಗೆ ಎರಡು ಬಾಂಗ್ಲಾದೇಶೀ ಮೀನುಗಾರಿಕಾ ದೋಣಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಕೋಲ್ಕತದಲ್ಲಿ ತಿಳಿಸಿದರು. 'ಅಲ್ಹಾರ್ ಮಲಿಕ್-2' ಮತ್ತು 'ಅನೊವರ' ದೋಣಿಗಳನ್ನು ಭಾರತದ ಕರಾವಳಿ ಕಾವಲುಪಡೆಯ ನೌಕೆ ಸುಚೇತಾ ಕೃಪಲಾನಿ ವಶಕ್ಕೆ ತೆಗೆದುಕೊಂಡಿತು. ಉಭಯ ದೋಣಿಗಳಲ್ಲಿ ಇದ್ದ ತಲಾ 28 ಮಂದಿ ಮೀನುಗಾರರನ್ನೂ ಸಾಗರ ದ್ವೀಪದಿಂದ ಆಗ್ನೇಯಕ್ಕೆ 63 ನಾಟಿಕಲ್ ಮೈಲು ದೂರದಲ್ಲಿ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಅವರು ಹೇಳಿದರು. ತಲಾ 1200 ಕಿ.ಗ್ರಾಂ. ಮತ್ತು 1000 ಕಿ.ಗ್ರಾಂ. ಮೀನು ಇದ್ದ ದೋಣಿಗಳನ್ನು ಫಿರೋಜ್​ಗಂಜ್ ಮರೀನ್ ಪೊಲೀಸರ ವಶಕ್ಕೆ ಮುಂದಿನ ಕ್ರಮಕ್ಕಾಗಿ ನೀಡಲಾಯಿತು.. 'ಮೀನುಗಾರರು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಿಂದ ಬಂದಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈ ದೋಣಿಗಳು ಡಿಸೆಂಬರ್ 4ರಂದು ಅಲ್ಲಿಂದ ಹೊರಟಿದ್ದವು. ಒಂದು ವಾರದಲ್ಲಿ ಅವು ವಾಪಸಾಗುವ ನಿರೀಕ್ಷೆ ಇತ್ತು' ಎಂದು ಕರಾವಳಿ ಕಾವಲು ಪಡೆಯ ಡೆಪ್ಯುಟಿ ಇನ್​ಸ್ಪೆಕ್ಟರ್ ಜನರಲ್ ಡಿ.ಆರ್. ಶರ್ಮಾ ನುಡಿದರು. ಅಕ್ರಮ ಮೀನುಗಾರಿಕೆಗಾಗಿ ಅಕ್ಟೋಬರ್​ನಿಂದ ಒಟ್ಟು 106 ಬಾಂಗ್ಲಾದೇಶಿ ಮೀನುಗಾರರನ್ನು ಬಂಧಿಸಿತ್ತು.

2014: ರಾಂಚಿ: ಕಾಶ್ಮೀರದಲ್ಲಿ ಉಗ್ರಗಾಮಿಗಳು ಮೆರೆದ ಅಟ್ಟಹಾಸದಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ಸಂಕಲ್ಪ ಕುಮಾರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಸಂಪೂರ್ಣ ಸೇನಾ ಗೌರವದೊಂದಿಗೆ ಈದಿನ ರಾಂಚಿಯಲ್ಲಿ ನೆರವೇರಿಸಲಾಯಿತು. ರಾಜ್ಯದ ಹಲವಾರು ಸ್ಥಳಗಳಿಂದ ದೊಡ್ಡ ಪ್ರಮಾಣದಲ್ಲಿ ಆಗಮಿಸಿದ ಜನರ ಸಮೂಹ ಹುತಾತ್ಮ ಯೋಧನಿಗೆ ಹೂವಿನ ಮಳೆಗರೆಯಿತು. ನೂರಾರು ಮಂದಿ ಬೈಕ್ ಸವಾರರು ಪಾರ್ಥಿವ ಶರೀರವನ್ನು ಹಿಂಬಾಲಿಸಿದರು. ರಾಜ್ಯಪಾಲ ಸೈಯದ್ ಅಹಮದ್, ಮುಖ್ಯಮಂತ್ರಿ ಹೇಮಂತ ಸೊರೇನ್, ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ಜಯಂತ ಸಿನ್ಹ, ಸೇನೆ ಹಾಗೂ ಪೊಲೀಸ್ ಇಲಾಖೆಯ ಹಲವಾರು ಅಧಿಕಾರಿಗಳು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
2014: ದುಬೈ: ಪಾಕಿಸ್ತಾನದ ಬೌಲರ್ ಮೊಹಮ್ಮದ್ ಹಫೀಜ್ ಬೌಲಿಂಗ್ ಶೈಲಿ ನಿಯಮಬಾಹಿರವಾಗಿರುವುದನ್ನು ಖಚಿತಗೊಳಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತತ್ ಕ್ಷಣದಿಂದಲೇ ಅವರನ್ನು ಅಮಾನತು ಮಾಡಿತು. ಪರಿಣಾಮ ಐಸಿಸಿ ಅಮಾನತು ತೆರವು ಮಾಡುವ ತನಕ ಹಫೀಜ್ ಐಸಿಸಿ ಮಾನ್ಯತೆಯ ಯಾವುದೇ ಪಂದ್ಯಗಳಲ್ಲಿ ಬೌಲಿಂಗ್ ಮಾಡುವಂತಿಲ್ಲ. ಒಂದೊಮ್ಮೆ ಬೌಲಿಂಗ್ ಮಾಡಬೇಕೆಂದರೂ ಬೌಲಿಂಗ್ ಶೈಲಿಯನ್ನು ತಿದ್ದಿಕೊಂಡು ಐಸಿಸಿಯಿಂದ ಗ್ರೀನ್​ಸಿಗ್ನಲ್ ಪಡೆದುಕೊಳ್ಳಬೇಕು. ಅಮಾನತು ಕ್ರಮ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಐಸಿಸಿ ಪ್ರಕಟಿಸಿತು. ಬೌಲಿಂಗ್ ಶೈಲಿ ಅನುಮಾನಾಸ್ಪದ ವಾಗಿರುವ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಐಸಿಸಿ ಹಫೀಜ್ ಬೌಲಿಂಗ್ ಶೈಲಿಯನ್ನು ಪರೀಕ್ಷೆಗೊಳಪಡಿಸಿದಾಗ ನಿಯಮಬಾಹಿರವಾಗಿರುವುದು ಸಾಬೀತಾಗಿತ್ತು. ಕಳೆದ ತಿಂಗಳು ಅಬುಧಾಬಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್​ನಲ್ಲಿ ಹಫೀಜ್ ಬೌಲಿಂಗ್ ಶೈಲಿಯ ಬಗ್ಗೆ ದೂರು ನೀಡಲಾಗಿತ್ತು. ಬಳಿಕ ನಂ.24ರಂದು ಇಂಗ್ಲೆಂಡ್​ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಪರ್ಫಾರ್ಮೆನ್ಸ್ ಸೆಂಟರ್​ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು.

2014: ಚೆನ್ನೈ: ದೇಹದಲ್ಲಿರುವ ವಿವಿಧ ರೋಗಗಳ ಪತ್ತೆಗೆ ಸಾಮಾನ್ಯವಾಗಿ ವಿವಿಧ ರೀತಿಯ ಸ್ಕ್ಯಾನಿಂಗ್ ಮಾಡಬೇಕಾಗುತ್ತದೆ. ಆದರೆ, ನಾಲಗೆಯಿಂದ ದೇಹದ ಕಾಯಿಲೆಗಳನ್ನು ಗುರುತಿಸುವ ವಿನೂತನ ಪದ್ಧತಿಯೊಂದನ್ನು ಚೆನ್ನೈಯ ಎಂಜಿನಿಯರಿಂಗ್ ಕಾಲೇಜೊಂದರ ಸಹಾಯದಿಂದ ನ್ಯೂರಲ್ ನೆಟ್ವರ್ಕ್ ವ್ಯವಸ್ಥೆಯನ್ನ ರೂಪಿಸಲಾಗಿದ್ದು, ನಾಲಗೆ ಮತ್ತು ಕಣ್ಣಿನ ಪರೀಕ್ಷೆ ಮೂಲಕ ವ್ಯಕ್ತಿಯ ಕೆಲ ರೋಗಗಳನ್ನು ಪತ್ತೆ ಹಚ್ಚಬಹುದು. ವ್ಯಕ್ತಿಯ ನಾಲಗೆಯಲ್ಲಿರುವ ವಿವಿಧ ರೀತಿಯ ವ್ಯತ್ಯಾಸಗಳು ವಿವಿಧ ರೋಗಗಳಿಗೆ ಸೂಚಕವಾಗಿರುತ್ತವೆ. ಉದಾಹರಣೆಗೆ, ನಾಲಗೆಯ ಬಣ್ಣದಲ್ಲಿ ಬದಲಾವಣೆ, ನಾಲಗೆ ತೀರಾ ಮೃದುವಾಗಿರುವುದು, ಬೊಬ್ಬೆಯಾಗಿರುವುದು ಇತ್ಯಾದಿ ಸಂಗತಿಗಳು ವಿವಿಧ ರೋಗಗಳನ್ನು ಸೂಚಿಸುತ್ತವೆ. ನಾಲಗೆಯ ಡಿಜಿಟಲ್ ಫೋಟೋದ ಸಹಾಯದಿಂದ ಹಾಗೂ ರೋಗಿಯ ರೋಗಲಕ್ಷಣಗಳ ಸುಳಿವಿಂದ ತಜ್ಞರು ರೋಗವನ್ನು ಪತ್ತೆಹಚ್ಚಬಹುದು. ಕಣ್ಣಿನಲ್ಲಿನ ವ್ಯತ್ಯಾಸಗಳ ಮೂಲಕವೂ ಒಂದಷ್ಟು ರೋಗವನ್ನು ಪತ್ತೆ ಮಾಡಬಹುದು. ಈ ವ್ಯವಸ್ಥೆಯಿಂದ ಸದ್ಯಕ್ಕೆ 14ಕ್ಕೂ ಹೆಚ್ಚು ರೋಗಗಳನ್ನು ಗುರುತಿಸಬಹುದು.

2014: ನವದೆಹಲಿ: ಕಪ್ಪು ಹಣ ಕುರಿತು ಪ್ರಬಲ ಸಾಕ್ಷಿ ಇರದ ಹೊರತು ಮಾಹಿತಿ ಕೇಳಿಕೊಂಡು ಬರಬೇಡಿ ಎಂದು ಸ್ವಿಟ್ಜರ್ಲೆಂಡ್ ಭಾರತಕ್ಕೆ ಹೇಳಿತು.. ಕಪ್ಪುಹಣ ಕುರಿತಂತೆ ಎಲ್ಲ ಭಾರತೀಯರ ಮಾಹಿತಿ ನೀಡುವಂತೆ ಭಾರತದಿಂದ ಒತ್ತಡ ಹೆಚ್ಚಾಗುತ್ತಿದ್ದಂತೆಯೇ, ಉಲ್ಟಾ ಹೊಡೆದ ಸ್ವಿಟ್ಜರ್ಲೆಂಡ್ ಸರ್ಕಾರ ಆದಾಯ ತೆರಿಗೆ ಅಕ್ರಮದಲ್ಲಿ ಖಾತೆದಾರ ಪಾಲ್ಗೊಂಡಿರುವ ಕುರಿತು ಪ್ರಬಲ ಸಾಕ್ಷಿಯನ್ನು ನೀಡಿದರೆ ಮಾತ್ರ ಭಾರತಕ್ಕೆ ಮಾಹಿತಿ ನೀಡುತ್ತೇವೆ. ಇಲ್ಲವಾದರೆ ಈ ಬಗ್ಗೆ ಮಾತನಾಡಲು ಬರಬೇಡಿ ಎಂದು ಹೇಳಿತು. ಸ್ವಿಸ್ ಸರ್ಕಾರ ರಾಯಭಾರಿ ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ಅವರು, ಗತಕಾಲದ ವಿಚಾರಗಳನ್ನು ಹಿಂದಿರುಗಿಸಲು ಸಾಧ್ಯವಿಲ್ಲ. ಆದರೆ ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ನಾವು ನೀಡಿದ ಭರವಸೆಯಂತೆ ಸಾಕ್ಷ್ಯಾಧಾರಗಳನ್ನು ನೀಡಿದರೆ ಮಾಹಿತಿ ನೀಡುತ್ತೇವೆ ಎಂದು ಹೇಳಿದರು. ಅಂತೆಯೇ ಈ ಹಿಂದೆ ಸ್ವಿಸ್‌ನಲ್ಲಿ ಖಾತೆ ತೆರೆದಿರುವ ಎಲ್ಲ ಖಾತೆದಾರರೂ ತೆರಿಗೆ ವಂಚಕರು ಎಂದು ಹೇಳಲು ಸಾಧ್ಯವಿಲ್ಲ. ಖಾತೆದಾರರ ಖಾತೆಯ ವಿವರಗಳನ್ನು ಗೌಪ್ಯವಾಗಿಡುವುದು ನಮ್ಮ ಕರ್ತವ್ಯ. ಹೀಗಾಗಿಯೇ ನಾವು ಪ್ರಬಲ ಸಾಕ್ಷ್ಯ ನೀಡದ ಹೊರತು ಖಾತೆ ವಿವರಗಳನ್ನು ನೀಡುವುದಿಲ್ಲ ಎಂದು ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ನೇರವಾಗಿ ಹೇಳಿದರು. ಕಪ್ಪು ಹಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಂಡ ಕ್ರಮಗಳನ್ನು ನಾವು ಅಭಿನಂದಿಸುತ್ತೇವೆ. ಭಾರತ ಸರ್ಕಾರದೊಂದಿಗೆ ನಾವು ಅತ್ಯುತ್ತಮವಾದ ಸಂಪರ್ಕ ಹೊಂದಿದ್ದೇವೆ. ಅಂತೆಯೇ ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಭಾರತ ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡುತ್ತೇವೆ. ಗತಕಾಲದ ವಿಚಾರಗಳನ್ನು ನಾವು ಮತ್ತೆ ಪುನರ್ ಸೃಷ್ಟಿ ಮಾಡಲು ಸಾಧ್ಯವಿಲ್ಲ ಎಂದು ಲೀನಸ್ ವಾನ್ ಕ್ಯಾಸ್ಟೆಲ್‌ಮಾರ್ ಹೇಳಿದರು.

2008: ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ಕುಸಿಯಲ್ಪಟ್ಟ ದೇಶದ ಆರ್ಥಿಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ನವದೆಹಲಿಯಲ್ಲಿ ಹಲವು 'ಪರಿಹಾರ ಪ್ಯಾಕೇಜ್'ಗಳನ್ನು ಪ್ರಕಟಿಸಿತು. ಮುಖ್ಯವಾಗಿ ಬೇಡಿಕೆ ಹೆಚ್ಚಿಸಲು ಸಂಬಂಧಪಟ್ಟ ಎಲ್ಲ ವಾಣಿಜ್ಯ ರಂಗಗಳಲ್ಲೂ ತೆರಿಗೆ ಕಡಿತ, ರಫ್ತು, ಗೃಹ ನಿರ್ಮಾಣ, ಜವಳಿ ಹಾಗೂ ಮೂಲಭೂತ ಸೌಲಭ್ಯಗಳ ಕ್ಷೇತ್ರಗಳಿಗೆ ಹೆಚ್ಚುವರಿ ಹಣ ಮತ್ತು ಪ್ರೋತ್ಸಾಹಧನ ಮಂಜೂರು ಇತ್ಯಾದಿ ಇವುಗಳಲ್ಲಿ ಸೇರಿವೆ.

2008: ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಕಟ್ಟಾಜ್ಞೆ ಮಾಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ರಾಜ್ಯವ್ಯಾಪಿ ವಿಸ್ತರಿಸುವುದಾಗಿ ಪ್ರಕಟಿಸಿದರು. ಕೃಷ್ಣಾ ನದಿಯಿಂದ ವಿಜಾಪುರ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಮೊದಲ ಹಂತದ ಯೋಜನೆಗೆ ವಿಜಾಪುರ ತಾಲ್ಲೂಕು ತಿಕೋಟಾದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. 'ಜಲಾಶಯಗಳಿಂದ ಕೆರೆಗಳಿಗೆ ನೀರು ತುಂಬಿಸುವ ದೇಶದ ಮೊದಲ ಯೋಜನೆಯ ಅನುಷ್ಠಾನಕ್ಕೆ ನಮ್ಮ ಸರಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಸಾಧ್ಯವಿರುವೆಡೆ ಜಲಾಶಯಗಳಿಂದ ಕೆರೆಗಳಿಗೆ ನೀರು ಹರಿಸುತ್ತೇವೆ. ಕಡಿಮೆ ಖರ್ಚಿನ ಈ ಯೋಜನೆಯಿಂದ ಹೆಚ್ಚು ಪ್ರದೇಶಕ್ಕೆ ನೀರಾವರಿಯಾಗಿ, ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುತ್ತದೆ. ಜತೆಗೆ ಮೀನುಗಾರಿಕೆಯಿಂದ ಒಂದು ಕೆರೆಯಿಂದ ವಾರ್ಷಿಕ ಒಂದು ಲಕ್ಷ ರೂಪಾಯಿ ಆದಾಯವೂ ಬರುತ್ತದೆ' ಎಂದರು.

2008: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದರು ಎಂದು ಆರೋಪಿಸಿ ವ್ಯಕ್ತಿಯೊಬ್ಬರನ್ನು ಶಸ್ತ್ರಸಜ್ಜಿತ ನಕ್ಸಲರ ತಂಡವೊಂದು ಗುಂಡಿಕ್ಕಿ ಕೊಂದ ಘಟನೆ ಉಡುಪಿ ಜಿಲ್ಲೆ ಕುಂದಾಪುರ ಸಮೀಪದ ಶಂಕರನಾರಾಯಣ ಠಾಣೆ ವ್ಯಾಪ್ತಿಯ ಹಳ್ಳಿಹೊಳೆ ಗ್ರಾಮದ ಅಕ್ಷರಪಾಲು ಎಂಬಲ್ಲಿ ಸಂಭವಿಸಿತು. ಮೃತ ವ್ಯಕ್ತಿಯನ್ನು ಬಿಜೆಪಿಯ ಸಕ್ರಿಯ ಕಾರ್ಯಕರ್ತ, ಕೃಷಿಕ ಕೇಶವ ಯಡಿಯಾಳ (63) ಎಂದು ಗುರುತಿಸಲಾಯಿತು. ಸಂಜೆ ಸುಮಾರು 6.30ರಿಂದ 7ರ ಮಧ್ಯೆ ಕೇಶವ ಅವರನ್ನು ಮನೆಯಿಂದ ಹೊರಕ್ಕೆ ಎಳೆದು ತಂದ ನಕ್ಸಲ್ ತಂಡ, ಮನೆಯ ಎದುರಿನ ಮರವೊಂದಕ್ಕೆ ಕಟ್ಟಿಹಾಕಿ ಈ ದುಷ್ಕೃತ್ಯ ಎಸಗಿತು. ತಡೆಯಲು ಬಂದ ಅವರ ಪತ್ನಿ ಕಾಂತಿಮತಿ ಮಗ ಉಪೇಂದ್ರ ಅವರ ಮೇಲೂ ನಕ್ಸಲರು ಹಲ್ಲೆ ನಡೆಸಿ ಗಾಯಗೊಳಿಸಿದರು. ನಂತರ ಕೇಶವ ಅವರ ಜೀಪಿಗೆ ಕಿಚ್ಚಿಟ್ಟ ನಕ್ಸಲರು, ಪರಿಸರದಲ್ಲಿ ಕರಪತ್ರಗಳನ್ನು ಎಸೆದು ಪರಾರಿಯಾದರು.

2008: ಒಂದು ತಿಂಗಳಿನಿಂದ ಕಚೇರಿಗೆ ಗೈರು ಹಾಜರಾಗಿದ್ದ ಹರಿಯಾಣದ ಉಪಮುಖ್ಯಮಂತ್ರಿ ಚಂದರ್ ಮೋಹನ್ ಅವರನ್ನು ಸಂಪುಟದಿಂದ ಕೈಬಿಡಲಾಯಿತು. ಮುಸಲ್ಮಾನ ಧರ್ಮಕ್ಕೆ ಮತಾಂತರ ಹೊಂದಿ ತಾವು ಎರಡನೇ ಮದುವೆಯಾಗಿರುವುದಾಗಿ ಚಂದರ್ ಮೋಹನ್ ಹಿಂದಿ ವಾಹಿನಿಯೊಂದರಲ್ಲಿ ಹೇಳಿಕೆ ನೀಡಿದ ಕೆಲ ಗಂಟೆಗಳಲ್ಲಿ ಅವರನ್ನು ಸಂಪುಟದಿಂದ ತೆಗೆದುಹಾಕಲಾಯಿತು. 50 ದಿನಗಳಿಂದ ಅವರು ಸಂಪುಟ ಸಭೆಗೆ ಹಾಜರಾಗಿರಲಿಲ್ಲ.

2008: ಕಾಲ್‌ಸೆಂಟರ್ ಉದ್ಯೋಗಿಗಳು ಸೇರಿದಂತೆ ಬದಲಾಗುವ ಪಾಳಿಗಳಲ್ಲಿ ಕೆಲಸ ಮಾಡುವವರು ಮಧುಮೇಹ ರೋಗಕ್ಕೆ ತುತ್ತಾಗುವ ಸಾಧ್ಯತೆ ಅತ್ಯಂತ ಹೆಚ್ಚು. ವ್ಯಕ್ತಿಯೊಬ್ಬನ ಸಕ್ಕರೆಯ ಮಟ್ಟ ಆತನ ದೇಹದ ಗತಿ ಹಾಗೂ ನಿದ್ರಾ ಸ್ವರೂಪವನ್ನು ಅವಲಂಬಿಸಿರುತ್ತದೆ ಎಂಬುದನ್ನು ನೂತನ ಸಂಶೋಧನೆಯೊಂದು ಪತ್ತೆ ಹಚ್ಚಿತು. ಮಧುಮೇಹ ಹಾಗೂ ರಕ್ತ ಸಕ್ಕರೆಯ ಮಟ್ಟವನ್ನು ನಿದ್ರಾ ಸಮಸ್ಯೆಗೆ ಪರಿಹಾರ ಹುಡುಕುವ ಮೂಲಕ ಸ್ವಲ್ಪ ಮಟ್ಟಿಗೆ ಬಗೆಹರಿಸಲು ಸಾಧ್ಯ ಎಂಬುದು ಇದರಿಂದ ತಿಳಿದು ಬಂದಿತು. 'ಪಾಳಿಗಳಲ್ಲಿ ದುಡಿಯುವ ಮಂದಿ ಬಹುಬೇಗನೇ ರಕ್ತದೊತ್ತಡ ಹಾಗೂ ಮಧುಮೇಹಕ್ಕೆ ಗುರಿಯಾಗುವುದಕ್ಕೆ ಒತ್ತಡ ಕಾರಣ ಎಂದು ವೈದ್ಯರು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ಇದಕ್ಕೆ ಬದಲಾಗುವ ದೇಹದ ಗತಿ ಕಾರಣವಾಗಿರುವ ಸಾಧ್ಯತೆ ಅಧಿಕ' ಎಂದು ಸಂಶೋಧಕರಲ್ಲಿ ಒಬ್ಬರಾದ ಫಿಲಿಪ್ ಫ್ರೋಗ್ಯುಯೆಲ್ ಸುದ್ದಿಸಂಸ್ಥೆಗೆ ನೀಡಿರುವ ಇ- ಮೇಲ್ ಸಂದರ್ಶನದಲ್ಲಿ ಎಚ್ಚರಿಸಿದರು.

2007: ಹವ್ಯಾಸಿ ಸಿನಿಮಾ ನಿರ್ದೇಶಕಿ ಜಿ.ಡಿ.ಜಯಲಕ್ಷ್ಮಿ ಅವರ `ಪೇಪರ್! ಪೇಪರ್!' ಚಿತ್ರ 2007ನೇ ಸಾಲಿನ ಕಾಮನ್ ವೆಲ್ತ್ ಪ್ರಶಸ್ತಿಯ ಪ್ರಮುಖ ಬಹುಮಾನ ಗಳಿಸಿಕೊಂಡಿತು. ಕಾಗದದ ಪುನರ್ ಬಳಕೆ ಕುರಿತು 90 ನಿಮಿಷಗಳ ಈ ಚಿತ್ರವನ್ನು ನಿರ್ಮಿಸಲಾಗಿದೆ. `ಯಾವುದೇ ವಸ್ತುವನ್ನು ವ್ಯರ್ಥ ಮಾಡಬಾರದು, ಎಲ್ಲಾ ವಸ್ತುಗಳನ್ನು ಬಳಸಿಕೊಳ್ಳುವ ಮೂಲಕ ರಕ್ಷಿಸಬೇಕು ಎಂಬ ಭಾರತದ ಸಾಂಪ್ರದಾಯಿಕ ಮೌಲ್ಯಗಳಿಗೆ ಸಂಕೇತವಾಗಿ ಈ ಚಿತ್ರ ನಿಲ್ಲುತ್ತದೆ. ಹನ್ನೊಂದು ವರ್ಷ ಇಂಗ್ಲೆಂಡಿನ ಬಿಬಿಸಿಯಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಏಳು ವರ್ಷಗಳಿಂದ ಹವ್ಯಾಸಿ ಚಲನಚಿತ್ರ ನಿರ್ಮಾಪಕಿಯಾಗಿರುವ ಜಯಲಕ್ಷ್ಮಿ ಈ ಚಿತ್ರದ ನಿರ್ಮಾಪಕಿ ಮತ್ತು ನಿರ್ದೇಶಕಿ ಕೂಡ ಆಗಿದ್ದಾರೆ.

2007: ಬೆಂಗಳೂರಿನ ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಲ್ಯಾಪ್ರೊಸ್ಕೋಪಿಕ್ ವಿಧಾನದ ಮೂಲಕ ಮೂತ್ರಪಿಂಡವನ್ನು (ಕಿಡ್ನಿ) ಯಶಸ್ವಿಯಾಗಿ ಕಸಿ ಮಾಡಲಾಯಿತು. `ಲ್ಯಾಪ್ರೊಸ್ಕೋಪಿ' ಎಂದರೆ ಶರೀರದಲ್ಲಿ ಚಿಕ್ಕ ರಂಧ್ರ ಕೊರೆದು, ಅದರ ಮೂಲಕ ಶಸ್ತ್ರಚಿಕಿತ್ಸೆ ನಡೆಸುವ ವಿಧಾನ. ಅರ್ಧ ಇಂಚೂ ಇಲ್ಲದ ಚಿಕ್ಕ ಉಪಕರಣವನ್ನು ರಂಧ್ರದ ಮೂಲಕ ಹಾಯಿಸಿ, ರಕ್ತನಾಳಗಳನ್ನು ಬಿಡಿಸಿ ಕಿಡ್ನಿಯನ್ನು ತೆಗೆಯಲಾಗುತ್ತದೆ. ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ಟಿ.ಮನೋಹರ್ ಅವರು ಈ ವಿಧಾನವನ್ನು ಬಳಸಿ ಕಿಡ್ನಿ ಕಸಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಸ್ಪತ್ರೆ ಈದಿನ ಪ್ರಕಟಿಸಿತು. ಸಾಮಾನ್ಯವಾಗಿ, ತೆರೆದ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿಯನ್ನು ತೆಗೆದು ಅವಶ್ಯವಿರುವ ವ್ಯಕ್ತಿಗೆ ಕಸಿ ಮಾಡಲಾಗುತ್ತದೆ. ಆದರೆ ಇದು ಕ್ಲಿಷ್ಟಕರವಾದ ಕಾರಣ ಕಿಡ್ನಿ ದಾನಕ್ಕೆ ಹೆಚ್ಚಿನವರು ಹಿಂದೇಟು ಹಾಕುತ್ತಿದ್ದರು. ಈಗ ಈ ಹೊಸ ವಿಧಾನ ಮೂತ್ರಪಿಂಡ ರೋಗಿಗಳಿಗೆ ಆಶಾಕಿರಣವಾಗಿದ್ದು, ರಾಜ್ಯದ ಮಟ್ಟಿಗೆ ಇದು ಅಪರೂಪದ ಸಾಧನೆ ಎಂದು ಎನ್ನಲಾಗಿದೆ. ಈ ವಿಧಾನದಲ್ಲಿ ಉದರದ ಭಿತ್ತಿಯ ಮೂಲಕ ಪುಟ್ಟ ನಳಿಕೆಯನ್ನು ಹಾಯಿಸಲಾಗುತ್ತದೆ. ಇದರಿಂದ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಉಪಕರಣಗಳ ಚಲನೆಗೆ ಅನುಕೂಲವಾಗುತ್ತದೆ. ಲ್ಯಾಪ್ರೊಸ್ಕೋಪ್ ಜತೆಗೆ ಹೊಂದಿಕೊಂಡಿರುವ ವಿಡಿಯೋ ಕ್ಯಾಮೆರಾದ ಮೂಲಕ ಉದರದೊಳಗೆ ನಡೆಯುವ ಚಟುವಟಿಕೆಗಳನ್ನು ಪರದೆಯಲ್ಲಿ ವೀಕ್ಷಿಸಬಹುದು. ಹೊಟ್ಟೆಯ ಇನ್ನೊಂದು ಬದಿ ಮಾಡಲಾಗಿರುವ ಎರಡೂವರೆ ಇಂಚಿನ ತೂತಿನ ಮೂಲಕ ಕಿಡ್ನಿಯನ್ನು ತೆಗೆಯಲಾಗುತ್ತದೆ. ಈ ವಿಧಾನದಲ್ಲಿ ಕಿಡ್ನಿಯ ದಾನಿ ಕೇವಲ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇದ್ದರೆ ಸಾಕು. ಒಂದೆರಡು ವಾರಗಳಲ್ಲಿಯೇ ಅವರು ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಬಹುದು ಎಂಬುದು ಆಸ್ಪತ್ರೆಯ ವಿವರಣೆ.

2007: ಕಂಪ್ಯೂಟರ್ ಕಲಿಕೆಗೆ, ಕಾರ್ಯನಿರ್ವಹಣೆಗೆ ಇಂಗ್ಲಿಷ್ ಜ್ಞಾನ ಕಡ್ಡಾಯ ಎಂಬ ಭಾವನೆ ಜನಸಾಮಾನ್ಯರಲ್ಲಿದೆ. ಆದರೆ, ಇಂಗ್ಲಿಷ್ ಗಂಧಗಾಳಿಯಿಲ್ಲದ ಭಾರತೀಯರು ಕಂಪ್ಯೂಟರಿನಲ್ಲಿ ಕೆಲಸ ಮಾಡಬಲ್ಲ ಸಾಫ್ಟವೇರನ್ನು ಇಸ್ರೇಲಿ ಕಂಪೆನಿಯ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಥೆಯೊಂದು ಸಿದ್ಧಪಡಿಸಿತು. ಮಾಹಿತಿ ತಂತ್ರಜ್ಞಾನ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ಸಿ-ಡಾಕ್ (ಅತ್ಯಾಧುನಿಕ ಕಂಪ್ಯೂಟರ್ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರ) ಹಾಗೂ ಇಸ್ರೇಲಿನ `ಎಫ್ ಟಿ ಕೆ ಟೆಕ್ನಾಲಜೀಸ್' ಜೊತೆಯಾಗಿ ಈ ಹೊಸ ಸಾಫ್ಟವೇರ್ ಸಿದ್ಧಪಡಿಸಿವೆ. ಇಸ್ರೇಲ್ ರಾಜಧಾನಿ ಟೆಲ್ ಅವೀವಿನಲ್ಲಿ ಈದಿನ ಈ ಸಾಫ್ಟವೇರನ್ನು ವಿಧ್ಯುಕ್ತವಾಗಿ ಬಿಡುಗಡೆ ಮಾಡಲಾಯಿತು. ಸಾಫ್ಟವೇರಿನ ಮೊದಲ ಪ್ರತಿಯನ್ನು ಇಸ್ರೇಲಿನಲ್ಲಿ ಭಾರತದ ರಾಯಭಾರಿಯಾಗಿರುವ ಅರುಣ್ ಕುಮಾರ್ ಸಿಂಗ್ ಅವರಿಗೆ ನೀಡಲಾಯಿತು. ಭಾರತದಲ್ಲಿ ಇಂಗ್ಲಿಷ್ ತಿಳಿದವರು ಕೇವಲ ಶೇ 10 ಜನ ಮಾತ್ರ. ಉಳಿದ ಶೇ 90 ಜನರಿಗೆ ಮಾಹಿತಿ ತಂತ್ರಜ್ಞಾನದ ಲಾಭ ಮುಟ್ಟಿಸಲು ಈ ಸಾಫ್ಟವೇರ್ ನೆರವಾಗಲಿದೆ ಎಂಬುದು `ಎಫ್ ಟಿ ಕೆ ಟೆಕ್ನಾಲಜೀಸ್' ಮುಖ್ಯಸ್ಥ ಹಾರೆಲ್ ಕೊಹೆನ್ ಅಭಿಪ್ರಾಯ. ಈ ಹೊಸ ಸಾಫ್ಟವೇರ್ 3,000 ರೂಪಾಯಿಗೆ ಲಭ್ಯವಾಗಲಿದೆ. ಸದ್ಯಕ್ಕೆ ಕನ್ನಡ, ಹಿಂದಿ, ಬಂಗಾಳಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಉರ್ದು ಹಾಗೂ ಪಂಜಾಬಿ ಭಾಷೆಯ ಜನ ಈ ಸಾಫ್ಟವೇರ್ ಬಳಸಬಹುದು. 2009ರ ಹೊತ್ತಿಗೆ ಭಾರತದಲ್ಲಿ ಅಧಿಕೃತವಾಗಿ ಮನ್ನಣೆ ಪಡೆದ ಎಲ್ಲ ಭಾಷೆಗಳಲ್ಲೂ ಈ ಸಾಫ್ಟವೇರ್ ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

2007: ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು 64 ಆರೋಪಿಗಳಿಗೆ ಶಿಕ್ಷೆ ವಿಧಿಸಿತು. 24 ಆರೋಪಿಗಳಿಗೆ 3ರಿಂದ 6 ವರ್ಷ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ರಾಂಚಿಯಲ್ಲಿ ತೀರ್ಪು ನೀಡಿತು. ಉಳಿದ ಆರೋಪಿಗಳಿಗೆ ಡಿಸೆಂಬರ್ 12 ರಂದು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ನ್ಯಾಯಾಲಯ ಹೇಳಿತು. ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಒಟ್ಟು 53 ಪ್ರಕರಣಗಳಲ್ಲಿ 23 ಪ್ರಕರಣಗಳು ಇತ್ಯರ್ಥವಾದವು.

2007: ಇರಾಕಿನ ದಯಾಲ್ ಪ್ರಾಂತ್ಯದ ಮುಕದ್ದಿಯಾ ಅಲ್ ಖೈದಾ ಸಂಘಟನೆ ವಿರುದ್ಧ ರಚಿಸಲಾದ ಜಾಗೃತ ಗುಂಪಿನ ಕಚೇರಿಯ ಮೇಲೆ ಆತ್ಮಾಹುತಿ ದಳದ ಮಹಿಳೆಯೊಬ್ಬಳು ದಾಳಿ ನಡೆಸಿದ್ದರಿಂದ 16 ಮಂದಿ ಮೃತರಾಗಿ, 27 ಜನ ಗಾಯಗೊಂಡರು. ಕಚೇರಿಗೆ ಬಂದ ಆತ್ಮಾಹುತಿ ದಳದ ಈ ಮಹಿಳೆ ತನ್ನ ಕೋಟಿನಲ್ಲಿ ಇಟ್ಟಿದ್ದ ಬಾಂಬನ್ನು ಸ್ಪೋಟಿಸಿದಳು.

2007: ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಂಗಳೂರು ನಗರದ ಮಹಾತ್ಮ ಗಾಂಧಿ ರಸ್ತೆಯ ಬಿ. ಆರ್. ವಿ. ಪೆರೇಡ್ ಮೈದಾನದಿಂದ ಎತ್ತರಿಸಿದ (ಎಲಿವೆಟೆಡ್) ರೈಲುಮಾರ್ಗ ನಿರ್ಮಿಸುವುದರಿಂದ ಎಂ.ಜಿ.ರಸ್ತೆಯಲ್ಲಿ ಆಗುವ ಸಂಚಾರ ದಟ್ಟಣೆ ಬಗ್ಗೆ ವರದಿ ಸಲ್ಲಿಸುವಂತೆ ಸರ್ಕಾರವು ನಗರ ಸಂಚಾರ ಪೊಲೀಸರಿಗೆ ಸೂಚನೆ ನೀಡಿತು.

2006: ಉತ್ತರಾಂಚಲವನ್ನು ಉತ್ತರ ಖಂಡ ಎಂಬುದಾಗಿ ಪುನರ್ ನಾಮಕರಣ ಮಾಡುವ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿತು. ಮಸೂದೆಗೆ ಲೋಕಸಭೆ ಡಿಸೆಂಬರ್ 5ರಂದು ಒಪ್ಪಿಗೆ ನೀಡಿತ್ತು. ಲೋಕಸಭೆ ಈದಿನ ಮಸೂದೆಗೆ ಅಂಗೀಕಾರ ನೀಡಿತು.

2006: ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಸ್ಥಾಪಕ ದಿವಂಗತ ಎಂ.ಜಿ. ರಾಮಚಂದ್ರನ್ ಪ್ರತಿಮೆಯನ್ನು ಸಂಸತ್ ಭವನದ ಆವರಣದಲ್ಲಿ ಅನಾವರಣಗೊಳಿಸಲಾಯಿತು. ಭಾರತದಲ್ಲಿ ಕಮ್ಯೂನಿಸ್ಟ್ ಚಳವಳಿಯ ನೇತಾರರಾಗಿದ್ದ ಭೂಪೇಶ್ ಗುಪ್ತಾ ಪ್ರತಿಮೆಯನ್ನೂ ಇದೇ ಸಂದರ್ಭದಲ್ಲಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅನಾವರಣಗೊಳಿಸಿದರು.

2006: ಕರ್ನಾಟಕದಲ್ಲಿ ವಿಧಾನಸಭೆಗೆ ಈವರೆಗೆ ನಡೆದ ಮರು ಚುನಾವಣೆಗಳಲ್ಲಿ ಅತೀ ಕಡಿಮೆ ಮತಗಳ ಅಂತರದಲ್ಲಿ (257 ಮತಗಳು) ಗೆಲುವು ಸಾಧಿಸಿದ ಕೀರ್ತಿಗೆ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ ಭಾಜನರಾದರು. ಪ್ರತಿಷ್ಠಿತ ಚಾಮುಂಡೇಶ್ವರಿ ಮತಕ್ಷೇತ್ರದಲ್ಲಿ ಜೆಡಿಎಸ್ ನ ಶಿವಬಸಪ್ಪ ಅವರನ್ನು ಸಿದ್ದರಾಮಯ್ಯ ಪರಾಭವಗೊಳಿಸಿದರು. 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ 24,000ಕ್ಕೂ ಅಧಿಕ ಮತಗಳ ಅಂತರದಿಂದ ಜಯಿಸಿದ್ದುದು ಒಂದು ದಾಖಲೆಯಾಗಿತ್ತು.

2005: ಚೀನಾದ ತಂಗ್ಷಾನ್ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಫೋಟದಲ್ಲಿ ಕನಿಷ್ಠ 74 ಕಾರ್ಮಿಕರು ಮೃತರಾಗಿ ಹಲವರು ಗಾಯಗೊಂಡರು. ಸುಮಾರು 30 ಮಂದಿ ಕಣ್ಮರೆಯಾದರು.

1981: ನ್ಯಾಟೋ ಕೂಟದ ಸದಸ್ಯನಾಗಿ ಸ್ಪೇನ್ ದೇಶವು ಸೇರ್ಪಡೆಗೊಂಡಿತು.

1980: ಆಧುನಿಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಡಂಬನೆಗೆ ಹೊಸ ಆಯಾಮವನ್ನು ಸೃಷ್ಟಿಸಿದ ಬಿಚ್ಚು ಮನಸ್ಸಿನ ಧೀಮಂತ ಸಾಹಿತಿ ಬಳ್ಳಾರಿಯ ಬೀಚಿ ಬೆಂಗಳೂರಿನಲ್ಲಿ ನಿಧನರಾದರು.

1955: ಬ್ರಿಟನ್ನಿನ ಲೇಬರ್ ಪಾರ್ಟಿ ನಾಯಕತ್ವಕ್ಕೆ ಕ್ಲೆಮೆಂಟ್ ಅಟ್ಲಿ ರಾಜೀನಾಮೆ ನೀಡಿದರು. ಕಳೆದ 20 ವರ್ಷಗಳಿಂದ ಅಟ್ಲಿ ಲೇಬರ್ ಪಾರ್ಟಿಯ ನಾಯಕರಾಗಿದ್ದರು.

1946: ಸಾಹಿತಿ ಡಾ. ಕೆ.ಎಂ. ರಾಘವ ನಂಬಿಯಾರ್ ಜನನ.

1945: ಸಾಹಿತಿ, ಚಿತ್ರ ಕಲಾವಿದ, ನಾಟಕಕಾರ ಹೀಗೆ ಬಹುಮುಖ ಪ್ರತಿಭೆಯ ಪಿ.ಆರ್. ಆಚಾರ್ಯ (ಆರ್ಯ) ಅವರು ಪಿ. ವಿಠಲಾಚಾರ್ಯ- ರುಕ್ಮಿಣಿ ದಂಪತಿಯ ಮಗನಾಗಿ ಉಡುಪಿಯಲ್ಲಿ ಜನಿಸಿದರು.

1941: ಜಪಾನಿನ ಯುದ್ಧ ವಿಮಾನಗಳು ಪರ್ಲ್ ಬಂದರಿನಲ್ಲಿ ಅಮೆರಿಕಾದ ಪೆಸಿಫಿಕ್ ಪಡೆ ಮೇಲೆ ದಾಳಿ ನಡೆಸಿದವು. ಈ ಕೃತ್ಯವು ಎರಡನೇ ವಿಶ್ವಸಮರಕ್ಕೆ ಪ್ರವೇಶಿಸಲು ಅಮೆರಿಕಾಕ್ಕೆ ಪ್ರೇರಣೆ ನೀಡಿತು.

1937: ಸರ್ ರೋಗರ್ ಲ್ಯೂಮ್ ಲೇ ಅವರು ಅಧಿಕೃತವಾಗಿ ಬಾಂಬೆಯಲ್ಲಿ (ಈಗಿನ ಮುಂಬೈ) ಬ್ರಾಬೋರ್ನ್ ಸ್ಟೇಡಿಯಮ್ಮನ್ನು ಉದ್ಘಾಟಿಸಿದರು. (ಲಾರ್ಡ್ ಬ್ರಾಬೋರ್ನ್ ಅವರು ಈ ವೇಳೆಗೆ ಮುಂಬೈ ಬಿಟ್ಟಿದ್ದರು. ಹಾಗೂ ಬಂಗಾಳದ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇವರ ಹೆಸರಿನಲ್ಲೇ ಈ ಸ್ಟೇಡಿಯಮ್ಮನ್ನು ಸ್ಥಾಪಿಸಲಾಯಿತು).

1935: ಸಾಹಿತಿ ಇಂದಿರಾಕೃಷ್ಣ ಜನನ.

1856: ಈಶ್ವರಚಂದ್ರ ವಿದ್ಯಾಸಾಗರ ಅವರು ಮೊತ್ತ ಮೊದಲ ವಿಧವಾ ಪುನರ್ ವಿವಾಹವನ್ನು ಏರ್ಪಡಿಸಿದರು. ಬಾಲವಿಧವೆ ಕಾಳಿಮತಿ ದೇವಿ ಮತ್ತು ಸಿರಿಸ್ ಚಂದ್ರ ವಿದ್ಯಾರತ್ನ ಅವರ ಮದುವೆ ನಡೆಯಿತು. (1856ರ ಹಿಂದು ಪುನರ್ ವಿವಾಹ ಕಾಯ್ದೆಯ ಅಡಿಯಲ್ಲಿಹಿಂದು ವಿಧವೆಯರ ಮರು ಮದುವೆಗೆ ಅವಕಾಶ ಕಲ್ಪಿಸುವ ಕಾನೂನನ್ನು ಲಾರ್ಡ್ ಕ್ಯಾನಿಂಗ್ 1856ರ ಜುಲೈ ತಿಂಗಳಲ್ಲಿ ಜಾರಿಗೆ ತಂದಿದ್ದ.).

1783: ವಿಲಿಯಂ ಪಿಟ್ ಅವರು ಬ್ರಿಟನ್ನಿನ ಪ್ರಧಾನಿಯಾದರು. 24 ವರ್ಷ ವಯಸ್ಸಿನ ಅವರು ಬ್ರಿಟನ್ನಿನ ಅತ್ಯಂತ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಭಾಜನರಾದರು.

1782: ಮುಸ್ಲಿಂ ದೊರೆ ಮೈಸೂರಿನ ಹೈದರಾಲಿ ಚಿತ್ತೂರು ಸಮೀಪದ ಶಿಬಿರವೊಂದರಲ್ಲಿ ಅಸು ನೀಗಿದ. ಫಿರಂಗಿ ಹಾಗೂ ಬಯೋನೆಟ್ಟುಗಳನ್ನು ಹೊಂದಿದ ಮೊತ್ತ ಮೊದಲ ಭಾರತೀಯ ಸೇನಾಪಡೆ ಕಟ್ಟಿದ ಹೆಗ್ಗಳಿಕೆ ಈತನದು.

No comments:

Post a Comment