Friday, September 7, 2018

ಮುಳ್ಳಿಗೆ ಮುಳ್ಳು: ಕಲ್ಲೇಟಿಗರ ವಿರುದ್ಧ ಜಮ್ಮು- ಕಾಶ್ಮೀರ ಪೊಲೀಸರ ಹೊಸ ವರಸೆ


 ಮುಳ್ಳಿಗೆ ಮುಳ್ಳು: ಕಲ್ಲೇಟಿಗರ ವಿರುದ್ಧ
     ಜಮ್ಮು- ಕಾಶ್ಮೀರ ಪೊಲೀಸರ ಹೊಸ ವರಸೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರು ೨೦೧೮ರ ಸೆಪ್ಟೆಂಬರ್ ೭ರ ಶುಕ್ರವಾರ ನಗರದ ಐತಿಹಾಸಿಕ ಜಾಮಾ ಮಸೀದಿ ಬಳಿ ಪೊಲೀಸರು, ಭದ್ರತಾ ಪಡೆಗಳ ಮೇಲೆ ಕಲ್ಲೆಸೆಯುತ್ತಿದ್ದ ನಿಜವಾದ ಅಪರಾಧಿಗಳನ್ನು ಹಿಡಿಯಲು ಹೊಸ ತಂತ್ರ ಪ್ರಯೋಗಿಸಿದರು.

ಶುಕ್ರವಾರದ ಪ್ರಾರ್ಥನೆಯ ನಂತರ, ಮಸೀದಿಯ ಒಳಗಿನಿಂದ ಬಂದ ಜನರ ಗುಂಪು ಪೊಲೀಸರು ಮತ್ತು ಸಿಆರ್ ಪಿಎಫ್  ಸಿಬ್ಬಂದಿ ಮೇಲೆ  ಕಲ್ಲುಗಳನ್ನು ತೂರಲು ಪ್ರಾರಂಭಿಸಿತು ಆದರೆ ಬಾರಿ ಪೊಲೀಸರು, ಸಿಆರ್ ಪಿಎಫ್ ಕಡೆಯಿಂದ ಯಾವುದೇ ಪ್ರತಿರೋಧ ವ್ಯಕ್ತವಾಗಲಿಲ್ಲ. ಲಾಠಿಪ್ರಹಾರವಾಗಲೀ, ಅಶ್ರುವಾಯ ಶೆಲ್ ಪ್ರಯೋಗವಾಗಲೀ ನಡೆಯಲಿಲ್ಲ.

ಪ್ರತಿಭಟನಕಾರರ ಗುಂಪು ೧೦೦ಕ್ಕಿಂತಲೂ ಹೆಚ್ಚಾದಾಗ  ಇಬ್ಬರು ಕಲ್ಲೇಟಿಗರು ಮೆರವಣಿಗೆಯ ಮುಂದಾಳುತ್ವ ವಹಿಸಿಕೊಂಡು ಮುಂದುವರೆದರು. ಆಗ ಮೊದಲ ಬಾರಿಗೆ ಗುಂಪನ್ನು ಚದುರಿಸಲು ಆಶ್ರುವಾಯು ಶೆಲ್ ಸಿಡಿಸಲಾಯಿತು.

ಮಧ್ಯೆ ಮಫ್ತಿಯಲ್ಲಿದ್ದುಕೊಂಡು ಕಲ್ಲೇಟಿಗರಂತೆ ಮುಖಕ್ಕೆ ಮುಸುಕು ಹಾಕಿಕೊಂಡು ನಟಿಸುತ್ತಾ ದಾಳಿಕೋರರ ನಡುವೆ ಸೇರಿಕೊಂಡಿದ್ದ ಪೊಲೀಸರು ಆಟಿಕೆ ಪಿಸ್ತೂಲು ತೋರಿಸುತ್ತಾ ಮೆರವಣಿಗೆಯ ನೇತೃತ್ವ ವಹಿಸಿದ್ದ ನೈಜ ಕಲ್ಲೇಟಿರಿಬ್ಬರನ್ನು ದಬಕ್ಕನ್ನೆ ಹಿಡಿದು ವಾಹನಕ್ಕೆ ಎಳೆದೊಯ್ದರು.

ದಿಢೀರ್ ಬೆಳವಣಿಗೆಯಿಂದ ದಿಗಿಲು ಬಿದ್ದ ಕಲ್ಲೇಟಿಗರು ತಮ್ಮ ಪ್ರತಿಭಟನೆಯನ್ನು ಅರ್ಧಕ್ಕೆ ನಿಲ್ಲಿಸಿ ಸ್ಥಳ ಬಿಟ್ಟು ಚದುರಿದರು. ಪೊಲೀಸರು ತಮ್ಮ ವರಸೆ ಬದಲಿಸಿದ್ದರಿಂದ ಪ್ರತಿಭಟನಕಾರರು ಬೇಸ್ತು ಬಿದ್ದಿದ್ದರು.

೨೦೧೦ರಲ್ಲಿ ಕೂಡಾ ನಿಜವಾದ ಕಲ್ಲೇಟಿಗರನ್ನು  ಪತ್ತೆ ಹಚ್ಚಲು ಭಾರೀ ಸಂಖ್ಯೆಯಲ್ಲಿ ಪೊಲೀಸರು ಮಫ್ತಿ ವೇಷ ಧರಿಸಿಕೊಂಡು ಜನರ ಗುಂಪಿನ ಮಧ್ಯೆ ಸೇರಿ ಇದೇ ಮಾದರಿ ಕಾರ್ಯಾಚರಣೆ ನಡೆಸಿದ್ದರು.

No comments:

Post a Comment