Monday, September 10, 2018

ಮಹಾತ್ಮ ಗಾಂಧಿ ರಸ್ತೆಯಲ್ಲಿ ‘ಗಣೇಶ ಸೃಷ್ಟಿ’


ಮಹಾತ್ಮ ಗಾಂಧಿ ರಸ್ತೆಯಲ್ಲಿಗಣೇಶ ಸೃಷ್ಟಿ

ಗಣೇಶ ಹಬ್ಬ ಬಂತೆಂದರೆ ದೇಶಾದ್ಯಂತ ಜನ ಸಂಭ್ರಮಿಸುತ್ತಾರೆ.  ಪ್ರಥಮ ಪೂಜೆಗೆ ಪಾತ್ರನಾದ ಗಣಪತಿಯ ಬಹುಕೃತ ವೇಶಗಳನ್ನು ಕಂಡಷ್ಟೂ ಕಣ್ಣಿಗೆ ತೃಪ್ತಿಯಾಗುವುದಿಲ್ಲ. ಗಣೇಶನ ಹಬ್ಬ ಬಂದಾಗ  ಎಷ್ಟು ಹೆಚ್ಚು ಗಣಪನನ್ನು ನೋಡುತ್ತೀರೋ ಅಷ್ಟು ಒಳ್ಳೆಯದು ಎಂಬ ನಂಬಿಕೆ ಇದೆ.

ವರ್ಷದ ಗಣೇಶನ ಹಬ್ಬಕ್ಕೆ ಬೆಂಗಳೂರಿನ ಜನರಿಗೆ ಕೇವಲ ಬೆಂಗಳೂರು ಮಾತ್ರವಲ್ಲ, ಇತರ ನಗರಗಳ ಗಣೇಶನನ್ನು ನೋಡುವ ವಿಶಿಷ್ಠ ಅವಕಾಶ ಪ್ರಾಪ್ತಿಯಾಗಿದೆ.ಭಾರತೀಯ ಅರಣ್ಯ ಸೇವಾ ಅಧಿಕಾರಿ (ಐಎಫ್ ಎಸ್) ಹಾಗೂ  ನಾಗಾಲ್ಯಾಂಡಿನ ಪ್ರಿನ್ಸಿಪಲ್ ಚೀಫ್ ಕನ್ಸರ್ ವೇಟರ್ ಆಫ್ ಫಾರೆಸ್ಟ್ಸ್ ಮತ್ತು ಫಾರೆಸ್ಟ್ ಫೋರ್ಸ್ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಎಂ. ಲೋಕೇಶ್ವರ ರಾವ್ ಅವರು ಹೈದರಾಬಾದ್, ಮುಂಬೈ, ಸಂಗೋಲಾ ಮಹಾರಾಷ್ಟ್ರ ಮತ್ತು ಬೆಂಗಳೂರಿನಲ್ಲಿ ಕಳೆದ 10 ವರ್ಷಗಳ ಅವಧಿಯಲ್ಲಿ ಗಣೇಶ ಉತ್ಸವ ಸಂದರ್ಭಗಳಲ್ಲಿ ತಾವು ಸೆರೆ ಹಿಡಿದ ಗಣೇಶನ ಚಿತ್ರಗಳ ಏಕವ್ಯಕ್ತಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದ್ದಾರೆ.

ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋನಿಲ್ದಾಣದ ಬಳಿ ಇರುವ ಬೆಳಕು ಗ್ಯಾಲರಿ ರಂಗೋಲಿ ಕಲಾ ಕೇಂದ್ರದಲ್ಲಿ 2018ರ  ಸೆಪ್ಟೆಂಬರ್ 11ರ ಮಂಗಳವಾರದಿಂದ ಸೆಪ್ಟೆಂಬರ್ 13ರ ಗುರುವಾರದವರೆಗೆ ಮೂರು ದಿನ ಬೆಳಗ್ಗೆ 11 ಗಂಟೆಯಿಂದ ರಾತ್ರಿ 7 ಗಂಟೆಯವರೆಗೆ ಗಣೇಶ ಸೃಷ್ಟಿ ಪ್ರದರ್ಶನ ಇರುತ್ತದೆ.

ವಿವಿಧ ನಗರಗಳಲ್ಲಿ ಗಣೇಶನ ಮೂರ್ತಿ ತಯಾರಿಸುವುದರಿಂದ ಹಿಡಿದು, ಚೌತಿಯ ವೇಳೆಗೆ ಮನೆಗಳಿಗೆ, ಪೋಡಿಯಂ, ಪೆಂಡಾಲ್ ಗಳಿಗೆ ತಂದು ಇರಿಸಿ, ಪ್ರಾಣ ಪ್ರತಿಷ್ಠೆ ಮಾಡಿ, ಪೂಜಿಸಿ ಕೊನೆಗೆ ನೀರಿನಲ್ಲಿ ವಿಸರ್ಜಿಸುವವರೆಗಿನ ವಿವಿಧ ಹಂತಗಳ ದೃಶ್ಯಗಳನ್ನು ಲೋಕೇಶ್ವರ ರಾವ್ ಸೆರೆ ಹಿಡಿದಿದ್ದಾರೆ. ಇವುಗಳ ಪೈಕಿ ಆಯ್ದ 30 ಫೋಟೋಗಳನ್ನು ಪ್ರದರ್ಶನದಲ್ಲಿ ಕಣ್ತುಂಬಿಕೊಳ್ಳಬಹುದು.

ಗಣೇಶ ಸೃಷ್ಟಿಪ್ರದರ್ಶನದ ಬಹುತೇಕ ಫೋಟೋಗಳು ತಾವು ಹೈದರಾಬಾದಿನಲ್ಲಿ  ಕೆಲಸ ಮಾಡುತ್ತಿದ್ದಾಗ ಸೆರೆ ಹಿಡಿದ ಫೋಟೋಗಳು ಎನ್ನುತ್ತಾರೆ ರಾವ್.

1983 ಭಾರತೀಯ ಅರಣ್ಯ ಸೇವಾ ತಂಡದ ಅಧಿಕಾರಿಯಾಗಿದ್ದ ಲೋಕೋಶ್ವರ ರಾವ್ ಅವರು ಬಾಲಕನಾಗಿದ್ದಾಗಲೇ ಚಿತ್ರ ಕಲೆಯ ಬಗ್ಗೆ ಒಲವು ಬೆಳಸಿಕೊಂಡಿದ್ದವರು. ಚಿತ್ರಕಲೆ, ಫೋಟೋಗ್ರಫಿಯಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಅವರಿಗೆ  2010ರಲ್ಲಿ  ಚಿತ್ರಕಲೆಗಾಗಿ ಅಲಾದಿನ್ 4ನೇ ಆರ್ಟ್ ಸ್ಲಾಂಟ್ (ಅಮೆರಿಕ) 4ನೇ ಶೋ ಕೇಸ್  ಪ್ರಶಸ್ತಿ, 2011 ಚಿತ್ರ ಸಂತೆಯಲ್ಲಿ ಅಪ್ರಿಸಿಯೇಷನ್ ಅವಾರ್ಡ್, 2010ರಲ್ಲಿ ಮಜೆವುರ್ ಸಿಲ್ವರ್ ಅವಾರ್ಡ್, ‘ರಾಧಾಕೃಷ್ಣ’ ವರ್ಣಚಿತ್ರಕ್ಕೆ 2012ರಲ್ಲಿ ಶೋಕೇಸ್ ಅವಾರ್ಡ್ ಲಭಿಸಿತ್ತು.

ಅವರಯುನಿವರ್ಸ್ ಬುದ್ಧವರ್ಣ ಚಿತ್ರವು 2012ರಲ್ಲಿ ಆರ್ ಟಿ ಸೊಸೈಟಿಯ ಅಖಿಲ ಭಾರತ ಚಿತ್ರ ಪ್ರದರ್ಶನಕ್ಕೆ ಆಯ್ಕೆಯಾಗಿತ್ತು. ಅವರ ವರ್ಣ ಚಿತ್ರಗಳು ನ್ಯೂಯಾರ್ಕಿನ ಐಸಿಎ ಪಬ್ಲಿಷರ್ಸ್ ಅಂತಾರಾಷ್ಟ್ರೀಯ ಸಮಕಾಲೀನ ಚಿತ್ರಕಲಾವಿದರ ಪುಸ್ತಕದಲ್ಲಿ ಪ್ರಕಟಗೊಂಡಿವೆ.  ಅವರಬುದ್ಧ ದಿ ಗ್ರೇಟ್ವರ್ಣ ಚಿತ್ರವು ವಾಲ್ ಆರ್ಟ್ ಮ್ಯಗಜಿನ್ ನಲ್ಲಿ ಅತ್ಯಂತ ಹೆಚ್ಚು ಓದುಗರ ಮೆಚ್ಚುಗೆ ಗಳಿಸಿತ್ತು. ಅವರ ಅನೇಕ ವರ್ಣಚಿತ್ರಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರದರ್ಶನಗಳಿಗೆ ಆಯ್ಕೆಯಾಗಿವೆ.

ಅಂಚೆ ಚೀಟಿ ಸಂಗ್ರಹಕಾರರೂ ಆಗಿರುವ ರಾವ್ ಅವರಿಗೆ ಅಂಚೆ ಚೀಟಿ ಸಂಗ್ರಹಕ್ಕಾಗಿಯೂ ಹಲವಾರು ಪ್ರಶಸ್ತಿಗಳು ಬಂದಿವೆ.

ಲೋಕೇಶ್ವರ ರಾವ್ ಅವರ ಕಲಾಕೃತಿಗಳ ವೀಕ್ಷಣೆಗೆ www.mlrao.com  ವೆಬ್ ಸೈಟನ್ನೂ ಸಂದರ್ಶಿಸಬಹುದು.





ಸುವರ್ಣ ಟೈಮ್ಸ್ ಆಫ್ ಕರ್ನಾಟಕ  ದಿನ ಪತ್ರಿಕೆಯಲ್ಲಿ 11 ಸೆಪ್ಟೆಂಬರ್ 2018ರ ಮಂಗಳವಾರ ಬಂದಿರುವ ವರದಿ:



No comments:

Post a Comment