Wednesday, September 26, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 26

ಇಂದಿನ ಇತಿಹಾಸ History Today ಸೆಪ್ಟೆಂಬರ್ 26
2018: ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಆಧಾರ್ ವಿಶಿಷ್ಟ ಸಂಖ್ಯಾ ಯೋಜನೆಸಂವಿಧಾನ ಬದ್ಧ ಎಂಬುದಾಗಿ ಐತಿಹಾಸಿಕ ತೀರ್ಪು ನೀಡಿದ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ಖಾಸಗಿ ಸವಲತ್ತುಗಳಿಗೆಆಧಾರ್ ಕಡ್ಡಾಯವಾಗಬೇಕಾದ ಅಗತ್ಯ ಇಲ್ಲ ಎಂದು ಹೇಳಿ ಆಧಾರ್ ಕಾಯ್ದೆಯ ಕೆಲವು ವಿಧಿಗಳನ್ನು ರದ್ದು ಪಡಿಸಿತು. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು - ಬಹುಮತದ ತೀರ್ಪು ನೀಡಿ ಆಧಾರ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿಯಿತು. ಇದೇ ವೇಳೆಗೆ ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ಗಳು ಮತ್ತು ಶಾಲಾ ಪ್ರವೇಶಕ್ಕೆ ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದ್ದ ಕಾಯ್ದೆಯ ವಿಧಿಗಳನ್ನು ಹೊಡೆದು ಹಾಕಿತು. ಐಟಿ ರಿಟರ್ನ್ಸ್ ಸಲ್ಲಿಕೆ ಮತ್ತು ಕಾಯಂ ಖಾತಾ ಸಂಖ್ಯೆ (ಪರ್ಮನಂಟ್ ಅಕೌಂಟ್ ನಂಬರ್ -ಪಾನ್) ಹಂಚಿಕೆಯಲ್ಲಿ ಆಧಾರ್ ಕಡ್ಡಾಯವಾಗಿ ಮುಂದುವರೆಯಲಿದೆ. ಆದರೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆಯ ಜೋಡಣೆ ಕಡ್ಡಾಯವಲ್ಲ ಮತ್ತು ಟೆಲಿಕಾಂ ಸೇವಾದಾರರು ಮೊಬೈಲ್ಗಳಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವಂತೆ ಕೋರುವಂತಿಲ್ಲ ಪೀಠವು ಹೇಳಿತುಶಾಲಾ ಪ್ರವೇಶಗಳಿಗೆ ಆಧಾರ್ ಕಡ್ಡಾಯವಲ್ಲ. ಹಾಗೆಯೇ ಮಾಧ್ಯಮಿಕ ಪರೀಕ್ಷೆಯ ಕೇಂದ್ರೀಯ ಮಂಡಳಿ (ಸಿಬಿಎಸಿಇ), ರಾಷ್ಟ್ರೀಯ ಅರ್ಹತೆ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆ ಹಾಗೂ ವಿಶ್ವ ವಿದ್ಯಾಲಯ ಅನುದಾನ ಆಯೋಗ ನಡೆಸುವ ಪರೀಕ್ಷೆಗಳಿಗೆ ಆಧಾರ್ ಜೋಡಣೆ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿತುಆಧಾರ್ ಕಾಯ್ದೆಯ ರಾಷ್ಟ್ರೀಯ ಭದ್ರತಾ ವಿನಾಯ್ತಿಯನ್ನೂ (ಟಾರ್ಗೆಟೆಡ್ ಡೆಲಿವರಿ ಆಫ್ ಫೈನಾನ್ಷಿಯಲ್ ಅಂಡ್ ಅದರ್ ಸಬ್ಸಿಡೀಸ್, ಬೆನಿಫಿಟ್ಸ್ ಅಂಡ್ ಸರ್ವೀಸಸ್) ಪೀಠ ರದ್ದು ಪಡಿಸಿತು.  ‘ಆಧಾರ್ ವಿಶಾಲ ಸಾರ್ವಜನಿಕ ಹಿತಾಸಕ್ತಿಗೆ ಪೂರಕ. ಆಧಾರ್ ವಿಶಿಷ್ಟವಾದುದು. ಅದು ಅತ್ಯುತ್ತಮ ಆಗಿರುವುದಕ್ಕಿಂತಲೂ ವಿಶಿಷ್ಟ ಆಗಿರುವುದು ಉತ್ತಮ ಎಂದು ಹೇಳಿದ ಪೀಠ, ’ಸಮಾಜದಲ್ಲಿ ಮೂಲೆಗುಂಪಾದ ವರ್ಗಗಳಿಗೆ ಸವಲತ್ತುಗಳನ್ನು ತಲುಪಿಸುವ ಸಲುವಾಗಿ ಆಧಾರ್ ಯೋಜನೆ ರೂಪಿಸಲಾಗಿದೆ. ವೈಯಕ್ತಿಕ ದೃಷ್ಟಿಕೋನದಿಂದ ಮಾತ್ರವಲ್ಲ ಸಾಮುದಾಯಿಕ ದೃಷ್ಟಿಯಿಂದಲೂ ಜನರ ಘನತೆಯನ್ನು ಅದು ಗಮನಕ್ಕೆ ತೆಗೆದುಕೊಳ್ಳುತ್ತದೆ ಎಂದು ಹೇಳಿತು.  ಸುಪ್ರೀಂಕೋರ್ಟ್ ಆಧಾರ್ ಕಾಯ್ದೆಯ ಸಿಂಧುತ್ವಕ್ಕೆ ಸಂಬಂಧಿಸಿದಂತೆ ಮೂರು ಜೊತೆ ತೀರ್ಪುಗಳನ್ನು ಪ್ರಕಟಿಸಿತು. ನ್ಯಾಯಮೂರ್ತಿಗಳಾದ .ಕೆ. ಸಿಕ್ರಿ ಅವರು ತಾವು ಸಿಜೆಐ ಮತ್ತು ನ್ಯಾಯಮೂರ್ತಿ .ಎಂ. ಖಾನ್ವಿಲ್ಕರ್ ಜೊತೆಗೆ ನೀಡಿದ ತೀರ್ಪನ್ನು ಓದಿ ಹೇಳಿದರು.  ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಅಶೋಕ ಭೂಷಣ್ ಅವರು ಪ್ರತ್ಯೇಕ ತೀರ್ಪುಗಳಲ್ಲಿ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ನೀಡಿದರುನ್ಯಾಯಮೂರ್ತಿ ಸಿಕ್ರಿ ಅವರು ಆಧಾರ್ ಕಾಯ್ದೆಯ ಸೆಕ್ಷನ್ ೫೭ನ್ನು ರದ್ದು ಪಡಿಸಿದರು. ವಿಧಿಯು ಖಾಸಗಿ ಘಟಕಗಳಿಗೆ ಆಧಾರ್ ಮಾಹಿತಿ ಪಡೆಯಲು ಅನುಮತಿ ನೀಡಿದೆ. ಆಧಾರ್ ದೃಢೀಕರಣ ಮಾಹಿತಿಯನ್ನು ಆರು ತಿಂಗಳುಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳುವಂತಿಲ್ಲ ಎಂದೂ ಅವರು ಆಜ್ಞಾಪಿಸಿದರುಅಕ್ರಮ ವಲಸಿಗರಿಗೆ ಆಧಾರ್ ಸಂಖ್ಯೆ ನೀಡದಂತೆ ಪೀಠವು ಸರ್ಕಾರಕ್ಕೆ ನಿರ್ದೇಶನ ನೀಡಿತುಆಧಾರ್ ಮಸೂದೆಯನ್ನು ಲೋಕಸಭೆಯಲ್ಲಿ ಹಣಕಾಸು ಮಸೂದೆಯಾಗಿ ಅಂಗೀಕರಿಸಿದ್ದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಕಾಂಗ್ರೆಸ್ ಪಕ್ಷ ಮತ್ತು ಅದರ ನಾಯಕ ಜೈರಾಮ್ ರಮೇಶ್ ಅವರು ಸದನದಲ್ಲಿ ಹಣಕಾಸು ಮಸೂದೆಯಾಗಿ ಆಧಾರ್ ಮಸೂದೆ ಅಂಗೀಕಾರವನ್ನು ಪ್ರಶ್ನಿಸಿದ್ದರುವ್ಯಕ್ತಿಗಳ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿವಂತಹುದು ಏನೂ ಆಧಾರ್ ಕಾಯ್ದೆಯಲ್ಲಿ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು. ಮಾಹಿತಿ ಸಂರಕ್ಷಣೆಯ ಕಟ್ಟುಮಸ್ತಾದ ವ್ಯವಸ್ಥೆಯನ್ನು ಆದಷ್ಟೂ ಶೀಘ್ರ ರೂಪಿಸಬೇಕು ಎಂದು ನ್ಯಾಯಮೂರ್ತಿ ಸಿಕ್ರಿ ಹೇಳಿದರು. ಸಂವಿಧಾನದ ಅಡಿ ಒದಗಿಸಲಾಗಿರುವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂಬ ನೆಲೆಯಲ್ಲಿ ಅರ್ಜಿದಾರರು ಆಧಾರ್ ಯೋಜನೆಯ ಮೇಲೆ ದಾಳಿ ನಡೆಸಿದ್ದಾರೆ. ಆಧಾರ್ ಮೂಲಕ ಸರ್ಕಾರದಿಂದಲೇ ಜನರ ಮೇಲೆ ಕಣ್ಗಾವಲು ಇಡುವಂತಹ ವ್ಯವಸ್ಥೆಯೊಂದು ರೂಪುಗೊಳ್ಳಬಹುದು ಎಂದು ಅವರು ಭಾವಿಸಿದ್ದರು ಎಂದು ಸಿಕ್ರಿ ನುಡಿದರು. ಆಧಾರ್ ನೋಂದಣಿಗಾಗಿ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರವು (ಯುಐಡಿಎಐ) ಕನಿಷ್ಠ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಸಂಗ್ರಹಿಸಿದೆ. ವಿಶಿಷ್ಟ ಗುರುತಿಸುವಿಕೆ ದಾಖಲೆಯು ಸಮಾಜದ ಮೂಲೆಗುಂಪಾದ ವರ್ಗಗಳಿಗೆ ಅಸ್ತಿತ್ವವನ್ನೂ ಮತ್ತು ಸಬಲತೆಯನ್ನೂ ನೀಡಿದೆ ಎಂದೂ ಪೀಠ ವಿಶ್ಲೇಷಿಸಿತು.  ‘ನಕಲಿ ಆಧಾರ್ ಕಾರ್ಡ್ ಪಡೆಯುವ ಸಾಧ್ಯತೆಗಳು ಇಲ್ಲ. ಆಧಾರ್ ಯೋಜನೆಯಲ್ಲಿ ದೃಢೀಕರಣಕ್ಕೆ ಸಾಕಷ್ಟು ರಕ್ಷಣಾತ್ಮಕ ವ್ಯವಸ್ಥೆ ಇದೆ ಎಂದು ಕೋರ್ಟ್ ಹೇಳಿತು.  ‘ಮಾನವ ಘನತೆಯ ಕಲ್ಪನೆಯು ಯೋಜನೆಯಿಂದ ವಿಸ್ತಾರಗೊಂಡಿದೆ ಎಂದು ತೀರ್ಪು ಹೇಳಿತು. ೨೦೧೬ರಲ್ಲಿ ರೂಪಿಸಲಾದ ಆಧಾರ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳ ವಿಚಾರಣೆಯ ಬಳಿಕ ಸುಪ್ರೀಂಕೋರ್ಟ್ ಈದಿನ ತನ್ನ ತೀರ್ಪನ್ನು ಪ್ರಕಟಿಸಿತು. ನಾಲ್ಕೂವರೆ ತಿಂಗಳುಗಳ ಅವಧಿಯಲ್ಲಿ ೩೮ ದಿನಗಳ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ಮೇ ೧೦ರಂದು ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಏಕೆ ವಿರೋಧ?: ನಾಗರಿಕರ ಬೆರಳಚ್ಚು, ಐರಿಸ್ ಸ್ಕ್ಯಾನ್ ಮತ್ತು ಇತರ ಮಾಹಿತಿಗಳನ್ನು ಅವರ ಒಪ್ಪಿಗೆ ಇಲ್ಲದೆಯೇ ಸಂಗ್ರಹಿಸಲು ಅವಕಾಶ ನೀಡಿರುವ ಕಾರಣ ಆಧಾರ್ ನಾಗರಿಕರ ಖಾಸಗಿತನವನ್ನು ಅತಿಕ್ರಮಿಸಿದೆ ಎಂಬುದು ಆಧಾರ್ ಯೋಜನೆಯನ್ನು ಪ್ರಶಿಸಿದ್ದ ಅರ್ಜಿದಾರರ ಪ್ರಮುಖ ಅಳಲು ಆಗಿತ್ತು೧೨ ಅಂಕಿಗಳ ವಿಶಿಷ್ಟ ಗುರುತು ಸಂಖ್ಯೆಯಾಗಿರುವ ಆಧಾರ್ ಕುರಿತ ಎಲ್ಲ ಟೀಕೆಗಳನ್ನೂ ಸರ್ಕಾರ ತಿರಸ್ಕರಿಸಿತ್ತು. ಕಾಯ್ದೆಯ ಪ್ರಕಾರ ಪ್ರಸ್ತುತ ಬ್ಯಾಂಕ್ ಖಾತೆಗಳು, ಮೊಬೈಲ್ ಫೋನ್ ನಂಬರುಗಳು ಮತ್ತು ಆದಾಯ ತೆರಿಗೆ ರಿಟನ್ಸ್ ಸಲ್ಲಿಸುವಾಗ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗಿದೆ. ಸಮಾಜ ಕಲ್ಯಾಣ ಯೋಜನೆಯ ಸವಲತ್ತಿನ ದುರುಪಯೋಗ ಆಗದಂತೆ ಆಧಾರ್ ಖಾತರಿ ನೀಡುತ್ತದೆ. ಕಪ್ಪು ಹಣ ಮತ್ತು ಹಣ ವರ್ಗಾವಣೆಯನ್ನು ತಡೆಗಟ್ಟುತ್ತದೆ ಎಂದು ಸರ್ಕಾರ ಪ್ರತಿಪಾದಿಸಿತ್ತುಆಧಾರ್ ಮಾಹಿತಿ ಸುರಕ್ಷಿತವಾಗಿದೆ. ಯಾರೂ ಇದನ್ನು ಛಿದ್ರಗೊಳಿಸಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ಹೇಳಿತ್ತು೨೦೧೭ರ ಆಗಸ್ಟ್ ತಿಂಗಳಲ್ಲಿ ಸುಪ್ರೀಂಕೋರ್ಟ್ ವ್ಯಕ್ತಿಯ ಖಾಸಗಿತನವು ಸಂವಿಧಾನದ ಅಡಿಯಲ್ಲಿ ಖಾತರಿ ನೀಡಲಾಗಿರುವ ಮೂಲಭೂತ ಹಕ್ಕು ಎಂದು ತೀರ್ಪು ನೀಡಿತ್ತು. ಆಧಾರ್ ಯೋಜನೆಯು ಸರ್ಕಾರಕ್ಕೆ ಜನರ ಮೇಲೆ ಕಣ್ಣಿಡಲು ನೆರವಾಗುತ್ತದೆ ಎಂಬುದಾಗಿ ಪ್ರತಿಪಾದಿಸಿದ್ದ, ಆಧಾರ್ ಯೋಜನೆಯ ಟೀಕಾಕಾರರಲ್ಲಿ ಸುಪ್ರೀಂಕೋರ್ಟಿನ ತೀರ್ಪು ಭರವಸೆಯನ್ನು ಹುಟ್ಟು ಹಾಕಿತ್ತು೨೦೧೮ರ ಮಾರ್ಚ್ ತಿಂಗಳಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರದ ಅಧ್ಯಕ್ಷರು ಮುಂದಿಟ್ಟ ನಾಲ್ಕು ಗಂಟೆಗಳ ಪವರ್ ಪಾಯಿಂಟ್ ಪ್ರಸಂಟೇಷನ್ ಬಳಿಕ ಸುಪ್ರೀಂಕೋರ್ಟ್, ಅಧಾರ್ ದೃಢೀಕರಣ ಮಾಹಿತಿಯನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಬಗ್ಗೆ ಕಳವಳ ವ್ಯಕ್ತ ಪಡಿಸಿತ್ತುಭಿನ್ನ ಮತದ ತೀರ್ಪು ನೀಡಿದ ನ್ಯಾಯಮೂರ್ತಿ ಚಂದ್ರಚೂಡ್:  ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಮಾತ್ರ ತಮ್ಮ ಭಿನ್ನಮತದ ತೀರ್ಪಿನಲ್ಲಿ ಆಧಾರ್ ಕಾಯ್ದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿರುವುದುಸಂವಿಧಾನಕ್ಕೆ ಮಾಡಿದ ವಂಚನೆ ಎಂಬದಾಗಿ ಬಣ್ಣಿಸಿ, ಅದು ರದ್ದು ಪಡಿಸಲು ಯೋಗ್ಯ ಎಂಬುದಾಗಿ ಹೇಳಿದರು. ನ್ಯಾಯಮೂರ್ತಿ ಎಕೆ. ಸಿಕ್ರಿ ಅವರು ಪ್ರಕಟಿಸಿರುವ ತೀರ್ಪಿನಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳಿಂತ ಭಿನ್ನವಾದ ಅಬಿಪ್ರಾಯವನ್ನು ತಾವು ಭಿನ್ನಮತದ ತೀರ್ಪಿನಲ್ಲಿ ವ್ಯಕ್ತ ಪಡಿಸುತ್ತಿರುವುದಾಗಿ ನ್ಯಾಯಮೂರ್ತಿ ಚಂದ್ರಚೂಡ್ ತಿಳಿಸಿದರು. ಆಧಾರ್ ಕಾಯ್ದೆಯನ್ನು ಅಂಗೀಕರಿಸಲು ರಾಜ್ಯಸಭೆಯನ್ನು ಬದಿಗೊತ್ತಿದ್ದು ನುಣುಚಿಕೊಳ್ಳುವ ವರ್ತನೆಯಾಗಿದ್ದು, ಕಾಯ್ದೆಯು ಸಂವಿಧಾನದ ೧೧೦ನೇ ಪರಿಚ್ಛೇದದ ಉಲ್ಲಂಘಿಸಿರುವ ಕಾರಣ ರದ್ದು ಪಡಿಸಲು ಯೋಗ್ಯ ಎಂದು ಅವರು ತೀರ್ಪು ನೀಡಿದರು. ಸಂವಿಧಾನದ ೧೧೦ನೇ ಪರಿಚ್ಛೇದವು ಹಣಕಾಸು ಮಸೂದೆಗೆ ನಿರ್ದಿಷ್ಟ ನೆಲೆಗಳನ್ನು ವಿವರಿಸುತ್ತದೆ. ಆಧಾರ್ ಕಾಯ್ದೆಯು ಇದರ ಮಿತಿಯನ್ನು ಮೀರಿದೆ. ಹಾಲಿ ರೂಪದಲ್ಲಿ ಕಾಯ್ದೆಯನ್ನು ಸಂವಿಧಾನಬದ್ಧ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಕಾಯ್ದೆ ರೂಪಿಸುವ ಮೂಲಕ ಕೇಂದ್ರದ ಆಧಾರ್ ಯೋಜನೆಯನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.  ಯಾವುದಕ್ಕೆ ಆಧಾರ್ ಕಡ್ಡಾಯ?  * ಸರ್ಕಾರಿ ಯೋಜನೆ/ ಸೌಲಭ್ಯಗಳಿಗೆ ಮಾತ್ರ ಕಡ್ಡಾಯ.  * ಪ್ಯಾನ್ ನಂಬರ್ಗೆ ಆಧಾರ್ ಜೋಡಣೆ ಕಡ್ಡಾಯ.  * ಐಟಿ ರಿಟರ್ನ್ಸ್ ಸಲ್ಲಿಸಲು ಆಧಾರ್ ಕಡ್ಡಾಯಯಾವುದಕ್ಕೆ ಆಧಾರ್ ಕಡ್ಡಾಯವಲ್ಲ?  * ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯವಲ್ಲ.  * ಪೇಟಿಯಂ, ಫೋನ್ ಪೇ, ಡಿಜಿಟಲ್ ಆಪ್ಗಳಿಗೆ ಕಡ್ಡಾಯವಲ್ಲ.  * ಮೊಬೈಲ್ ನಂಬರ್ಗಳಿಗೆ ಆಧಾರ್ ಕಡ್ಡಾಯವಲ್ಲ.  * ಹಣಕಾಸುಉದ್ದೇಶಕ್ಕಾಗಿಆಧಾರ್ ಬಳಸುವಂತಿಲ್ಲ.  * ಮೊಬೈಲ್ ಸಿಮ್ ಖರೀದಿಗೆ ಕಡ್ಡಾಯವಲ್ಲ.  * ಖಾಸಗಿ ಶಾಲಾ, ಕಾಲೇಜು ಸೇರ್ಪಡೆಗೆ ಆಧಾರ್ ಕಡ್ಡಾಯವಲ್ಲ.  * ತಿಂಗಳಿಗಿಂತ ಹೆಚ್ಚು ಕಾಲ ಆಧಾರ್ ಮಾಹಿತಿ ಸಂಗ್ರಹಿಸಿ ಇಟ್ಟುಕೊಳ್ಳುವಂತಿಲ್ಲ.

2018: ನವದೆಹಲಿ: ’ಆಧಾರ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದು ಸುಪ್ರೀಂಕೋರ್ಟಿನ ಸಿಜೆಐ ದೀಪಕ್ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ನೀಡಿದ ತೀರ್ಪನ್ನು ಐತಿಹಾಸಿಕ ಎಂಬುದಾಗಿ ಇಲ್ಲಿ ಬಣ್ಣಿಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಇದರಿಂದ ಸರ್ಕಾರದ ವಿವಿಧ ಯೋಜನೆಗಳ ಹಣವನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಸರ್ಕಾರಕ್ಕೆ ೯೦,೦೦೦ ಕೋಟಿ ರೂಪಾಯಿಗಳನ್ನು ಉಳಿಸಲು ಅನುಕೂಲವಾಗಿದೆ ಎಂದು ಹೇಳಿದರು.  ‘ಇದು ಐತಿಹಾಸಕ ತೀರ್ಪು. ವಿಶಿಷ್ಟ ಗುರುತಿನ ಸಂಖ್ಯೆಯ ಸಂಪೂರ್ಣ ಕಲ್ಪನೆಯನ್ನು ನ್ಯಾಯಾಂಗ ಪರಿಶೀಲನೆಯ ಬಳಿಕ ಅಂಗೀಕರಿಸಿರುವುದು ಅತ್ಯಂತ ಸ್ವಾಗತಾರ್ಹ ನಿರ್ಣಯ. ಪ್ರಸ್ತುತ ೧೨೨ ಕೋಟಿ ಜನರು ಭಾರತದಲ್ಲಿ ಆಧಾರ್ ಕಾರ್ಡ್ಗಳನ್ನು ಹೊಂದಿದ್ದಾರೆ. ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಗುರುತಿಸುವಲ್ಲಿ ನಕಲಿಯಾಗದಂತೆ ಅಥವಾ ಎರಡೆರಡು ಬಾರಿ ಪಾವತಿಯಾಗದಂತೆ ತಡೆಯುವ ಮೂಲಕ ನಾವು ಪ್ರತಿವರ್ಷ ಈಗಾಗಲೇ ೯೦,೦೦೦ ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡುತ್ತಿದ್ದೇವೆ ಎಂದು ಜೇಟ್ಲಿ ನುಡಿದರು.  ರಾಹುಲ್ ಗಾಂಧಿ: ಆಧಾರ್ ಕಾಯ್ದೆಗೆ ಸಂಬಂಧಿಸಿದಂತೆ ನೀಡಿದ ತೀರ್ಪಿಗಾಗಿ ಸುಪ್ರೀಂಕೋರ್ಟಿಗೆ ಧನ್ಯವಾದ ಸಲ್ಲಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುಇದು ಕಾಂಗ್ರೆಸ್ ಪಕ್ಷಕ್ಕೆ ಬಲ ತುಂಬುವ ಸಾಧನ ಎಂದು ಹೇಳಿದರು.  ‘ಕಾಂಗ್ರೆಸ್ ಪಕ್ಷಕ್ಕೆ ಆಧಾರ್ ಸಬಲೀಕರಣದ ಸಾಧನವಾಗಿತ್ತು. ಬಿಜೆಪಿಗೆ ಆಧಾರ್ ದಮನ ಮತ್ತು ಗೂಢಚರ್ಯೆಯ  ಸಾಧನವಾಗಿತ್ತು. ಕಾಂಗ್ರೆಸ್ ದೃಷ್ಟಿಕೋನವನ್ನು ಬೆಂಬಲಿಸಿದ್ದಕ್ಕಾಗಿ ಮತ್ತು ಭಾರತವನ್ನು ರಕ್ಷಿಸುತ್ತಿರುವುದಕ್ಕಾಗಿ ಸುಪ್ರೀಂಕೋರ್ಟಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು. ರವಿಶಂಕರ ಪ್ರಸಾದ್: ಇದು ಆಧಾರ್ ಯೋಜನೆಯನ್ನು ಎತ್ತಿ ಹಿಡಿದು ನೀಡಲಾಗಿರುವ : ಬಹುಮತದ ತೀರ್ಪು. ನಾಲ್ವರು ನ್ಯಾಯಮೂರ್ತಿಗಳು ಆಧಾರ್ ಯೋಜನೆಯನ್ನು ಎತ್ತಿ ಹಿಡಿದಿದ್ದಾರೆ ಎಂಬುದು ಅತ್ಯಂತ ಮಹತ್ವದ ವಿಚಾರ. ತೀರ್ಪು ಪ್ರಜಾಪ್ರಭುತ್ವ, ಉತ್ತಮ ಆಡಳಿತ ಮತ್ತು ಸಮಾಜದ ಅತ್ಯಂತ ಬಡವರ್ಗಗಳಿಗೆ ಸೇವೆಗಳನ್ನು ತಲುಪಿಸುವ ಕಾರ್ಯವನ್ನು ಬಲಪಡಿಸಲಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದರುಅರ್ಜಿದಾರರ ಸ್ವಾಗತ: ಆಧಾರ್  ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನ ಮೆಟ್ಟಿಲೇರಿದ್ದ ಅರ್ಜಿದಾರರು, ಸಾಮಾಜಿಕ ಕಾರ್ಯಕರ್ತರು ಆಧಾರ್ ಕಾಯ್ದೆಗೆ ಸಾಂವಿಧಾನಿಕ ಮಾನ್ಯತೆ ನೀಡಿದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದರು.  ಅರ್ಜಿದಾರರಲ್ಲಿ ಒಬ್ಬರಾಗಿರುವ ತೆಹ್ಸೀನ್ ಪೂನಾವಾಲ ಅವರು ಬ್ಯಾಂಕ್ ಖಾತೆಗಳು ಮತ್ತು ಟೆಲಿಕಾಂ ಸೇವಾ ಪೂರೈಕೆದಾರರು ಆಧಾರ್ ಜೋಡಣೆಯನ್ನು ಕೋರುವುದು ಅಗತ್ಯವಲ್ಲ ಎಂಬುದಾಗಿ ಎಂದು ಸುಪ್ರೀಂಕೋರ್ಟ್ ಹೇಳಿರುವುದಕ್ಕೆ ಮತ್ತು ಆಧಾರ್ ಕಾಯ್ದೆಯ ಸೆಕ್ಷನ್ ೫೭ನ್ನು ರದ್ದು ಪಡಿಸಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದರು. ಸೈಬರ್ ಭದ್ರತಾ ತಜ್ಞ ಪವನ್ ದುಗ್ಗಲ್ ಅವರು ತೀರ್ಪನ್ನು ಸ್ವಾಗತಿಸಿ, ಕಾಯ್ದೆಯ ನ್ಯೂನತೆಗಳನ್ನು ಪೂರ್ವಭಾವಿ ನೆಲೆಯಲ್ಲಿ ನಿಭಾಯಿಸಬೇಕು ಎಂದು ಹೇಳಿದರು.   ಕಪಿಲ್ ಸಿಬಲ್: ಸುಪ್ರೀಂಕೋರ್ಟ್ ಸಂವಿಧಾನ ಪೀಠದ ತೀರ್ಪನ್ನು ಸ್ವಾಗತಿಸಿದ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ಆಧಾರ್ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ ವಿಚಾರದಲ್ಲಿ ನ್ಯಾಯಾಂಗವು ಇನ್ನೊಮ್ಮೆ ಪರಾಮರ್ಶಿಸುವ ಅಗತ್ಯ ಇದೆ. ವಿಷಯವನ್ನು ಸದಸ್ಯರ ವಿಶಾಲ ಪೀಠಕ್ಕೆ ವಹಿಸಬೇಕು ಎಂದು ನುಡಿದರು. ಕೈಗಳ ಮೂಲಕ ದುಡಿಯುವ ಬಹಳಷ್ಟು ಮಂದಿ ಬೆರಳಚ್ಚು ನೀಡಲು ಹೋಗುವಾಗ ಗುರುತು ದಾಖಲಾಗುವುದಿಲ್ಲ. ಅವರ ಹಕ್ಕುಗಳ ಗತಿಯೇನು? ಎಂದು ಪ್ರಶ್ನಿಸುವ ಮೂಲಕ ಸಿಬಲ್ ಅವರು ಕಾಯ್ದೆಯಲ್ಲಿನ ಇನ್ನಷ್ಟು ನ್ಯೂನತೆಗಳ ಬಗ್ಗೆ ಗಮನ ಸೆಳೆದರು.  ಬಿಜೆಪಿ: ಸುಪ್ರೀಂಕೋರ್ಟ್ ತೀರ್ಪು ಪ್ರಧಾನಿ ಮೋದಿ ಸರ್ಕಾರಕ್ಕೆ ಲಭಿಸಿರುವ ವಿಜಯ ಎಂದು ಭಾರತೀಯ ಜನತಾ ಪಕ್ಷ ಹೇಳಿತು. ಆಧಾರ್ ಸುರಕ್ಷಿತ ಎಂಬುದಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ಇದು ಕಾಂಗ್ರೆಸ್ ಪಕ್ಷವನ್ನು ಅನಾವರಣಗೊಳಿಸಿದೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಪ್ರತಿಪಾದಿಸಿದರು. ಇದು ಬಡವರ ಪರ ಮೋದಿ ಸರ್ಕಾರಕ್ಕೆ ಲಭಿಸಿರುವ ದೊಡ್ಡ ವಿಜಯ ಎಂಬುದಾಗಿ ನಾವು ಭಾವಿಸುತ್ತೇವೆ. ಸುಪ್ರೀಂಕೋರ್ಟ್ ಆಧಾರ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದೆ ಮತ್ತು ಇದು ಖಾಸಗಿತನವನ್ನು ಉಲ್ಲಂಘಿಸುವುದಿಲ್ಲ ಎಂಬುದಾಗಿಯೂ ಹೇಳಿದೆ ಎಂದು ಪಾತ್ರ ಹೇಳಿದರುಕಾಂಗ್ರೆಸ್ ಸ್ವಾಗತ: ಖಾಸಗಿ ಘಟಕಗಳಿಗೆ ಆಧಾರ್ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಿದ್ದ ಆಧಾರ್ ಕಾಯ್ದೆಯ ಸೆಕ್ಷನ್ ೫೭ನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ ಕಾಂಗ್ರೆಸ್ಇದು ಬಿಜೆಪಿಯ ಕಪಾಳಕ್ಕೆ ಬಿದ್ದ ತಪರಾಕಿ ಎಂದು ಬಣ್ಣಿಸಿತು.  ಆಧಾರ್  ಕಾಯ್ದೆಯ ಸೆಕ್ಷನ್ ೫೭ನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಖಾಸಗಿ ಘಟಕಗಳು ಇನ್ನು ಮುಂದೆ ಆಧಾರ್ ಮಾಹಿತಿಯನ್ನು ಪರಿಶೀಲನೆ ಉದ್ದೇಶಕ್ಕೆ ಬಳಸುವಂತಿಲ್ಲ ಎಂದು ಕಾಂಗ್ರೆಸ್ ಟ್ವೀಟ್ ಮಾಡಿತು. ಚಿದಂಬರಂ: ಆಧಾರ್ ಬಗೆಗಿನ ಯುಪಿಎಯ ಮೂಲ ಕಲ್ಪನೆಯನ್ನು ಸುಪ್ರೀಂಕೋರ್ಟ್ ಪುನಃಸ್ಥಾಪಿಸಿದೆ. ಎನ್ ಡಿಎ ಸರ್ಕಾರವು ಅದನ್ನುದೈತ್ಯನನ್ನಾಗಿ ಮಾರ್ಪಾಡು ಮಾಡಿತ್ತು ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಹೇಳಿದರು.

2018: ನವದೆಹಲಿ: ರಾಷ್ಟ್ರೀಯ ಡಿಜಿಟಲ್ ಸಂಪರ್ಕ ನೀತಿ (ನ್ಯಾಷನಲ್ ಡಿಜಿಟಲ್ ಕಮ್ಯೂನಿಕೇಷನ್ಸ್ ಪಾಲಿಸಿ- ಎನ್ ಡಇ ಸಿಪಿ) ೨೦೧೮ ಎಂಬುದಾಗಿ ಈಗ ಹೆಸರಿಸಲಾಗಿರುವ ನೂತನ ಟೆಲಿಕಾಂ ನೀತಿಗೆ ಕೇಂದ್ರ ಸಚಿವ ಸಂಪುಟವು  ಮಂಜೂರಾತಿ ನೀಡಿತು. ಟೆಲಿಕಾಂ ರಂಗದಲ್ಲಿ ೧೦೦ ಬಿಲಿಯನ್ (೧೦೦೦೦ ಕೋಟಿ) ಅಮೆರಿಕನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವ ಮತ್ತು ೨೦೨೨ರ ವೇಳೆಗೆ ಮಿಲಿಯನ್ (೪೦ ಲಕ್ಷ) ಉದ್ಯೋಗ ಸೃಷ್ಟಿಯ ಗುರಿಯನ್ನು ಹೊಸ ಟೆಲಿಕಾಂ ನೀತಿ ಹೊಂದಿದೆ. ಸಂಪುಟವು ಎನ್ ಡಿಸಿಪಿಗೆ ಒಪ್ಪಿಗೆ ನೀಡಿದೆ ಎಂದು ಅಧಿಕೃತ ಮೂಲವೊಂದು ತಿಳಿಸಿತು.

2018: ನವದೆಹಲಿ: ಎಸ್‌ಸಿ/ಎಸ್‌ಟಿ ಸರ್ಕಾರಿ ಉದ್ಯೋಗಿ ಗಳಿಗೆ ಬಡ್ತಿಯಲ್ಲಿ ಮೀಸಲಾತಿ ಕೋರಿ ಕೇಂದ್ರ ಸರ್ಕಾರ ಮಾಡಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದ್ದು, ಸರ್ಕಾರಿ ಉದ್ಯೋಗದ ಬಡ್ತಿಯಲ್ಲಿ ಮೀಸಲಾತಿ ಅಗತ್ಯವಿಲ್ಲ. ಕೆನೆಪದರ ನೀತಿ ಅನ್ವಯವಾಗುತ್ತದೆ. ಅಲ್ಲದೆ, ಎಂ. ನಾಗ ರಾಜ್ ಪ್ರಕರಣದ ತೀರ್ಪನ್ನು ಏಳು ನ್ಯಾಯ ಮೂರ್ತಿಗಳ ನ್ಯಾಯಪೀಠಕ್ಕೆ ವರ್ಗಾಯಿಸುವ ಅಗತ್ಯವಿಲ್ಲ ಎಂದು  ಹೇಳಿತು. ಮುಖ್ಯ  ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾ.ಕುರಿಯನ್ ಜೋಸೆಫ್, ಆರ್. ಎಫ್.ನಾರಿಮನ್, ಎಸ್.ಕೆ.ಕೌಲ್ ಮತ್ತು ಇಂದು ಮಲ್ಹೋತ್ರಾ ಅವರಿದ್ದ ಪಂಚಸದಸ್ಯ ನ್ಯಾಯ ಪೀಠವು ಆ.೩೦ರಂದು ತೀರ್ಪು ಕಾಯ್ದಿರಿಸಿತ್ತು. ಈ ಕುರಿತು ತೀರ್ಪು ಪ್ರಕಟಿಸಿದ ಸಂವಿಧಾನ ಪೀಠ ೨೦೦೬ರ ಎಂ.ನಾಗರಾಜು ಅವರ ತೀರ್ಪಿನ ಮರು ಪರಿಶೀಲನೆ ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿತು.  ಎಂ.ನಾಗರಾಜ್ ಪ್ರಕರಣದ ತೀರ್ಪನ್ನು ಏಳು ನ್ಯಾಯಮೂರ್ತಿಗಳ ನ್ಯಾಯಪೀಠಕ್ಕೆ ವರ್ಗಾ ಯಿಸುವ ಅಗತ್ಯವಿಲ್ಲ. ಎಸ್‌ಸಿ, ಎಸ್‌ಟಿ ನೌಕರರ ಮುಂಬಡ್ತಿ ಕುರಿತು ಎಂ ನಾಗರಾಜ್ ಪ್ರಕರಣದ ಮರು ಪರಿಶೀಲನೆ ಅಗತ್ಯವಿಲ್ಲ ಎಂದು ನ್ಯಾ. ನಾರಿಮನ್ ಸ್ಪ?ಪಡಿಸಿದ್ದಾರೆ. ಹಿಂದುಳಿದವರು ಎಂದು ಹೇಳಲು ಮಾಹಿತಿ ಸಂಗ್ರಹ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅಸಮರ್ಪಕ ಪ್ರತಿನಿಧಿಗಳಿಗೆ ಬಡ್ತಿ ನೀಡಿದರೆ ಸರ್ಕಾರದ ಆಡಳಿತದಲ್ಲಿ ದಕ್ಷತೆ ಕುಸಿಯುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿತು.
ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿದ್ದ ಅರ್ಟಾನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು, ಈ ಸಮುದಾಯಗಳು ಹಿಂದುಳಿದಿವೆ ನಿಜ. ಆದರೆ, ಪ್ರಾತಿನಿಧ್ಯದ ಕೊರತೆ ಇದೆ ಎಂಬು ದನ್ನು ಸಾಬೀತು ಮಾಡಲು ಬೇಕಾದ ದತ್ತಾಂಶ ಸಂಗ್ರಹಿಸುವುದು ಅಸಾಧ್ಯ ಎಂದು ಹೇಳಿದ್ದರು.  ದೀರ್ಘ ಕಾಲದಿಂದ ಶೋ?ಣೆಗೆ ಒಳಗಾಗಿ ರುವ ಈ ಸಮುದಾಯಗಳಿಗೆ ಬಡ್ತಿಯಲ್ಲಿ ಮೀಸ ಲಾತಿ ನೀಡಲೇಬೇಕು. ಎಸ್ಸಿ, ಎಸ್ಟಿ ಸಮುದಾಯ ದವರು ಬಹುಹಿಂದಿನಿಂದಲೂ ಜಾತಿ ತಾರತಮ್ಯ ಎದುರಿಸುತ್ತಿದ್ದಾರೆ. ಹಿಂದುಳಿದ ಆಧಾರದ ಮೇಲೆ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಕೇಂದ್ರದ ಪರ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಎಸ್ಸಿ, ಎಸ್ಟಿ ಉದ್ಯೋಗಿಗಳ ಪರ ಬಲವಾಗಿ ವಾದ ಮಂಡಿಸಿದ್ದರು.  ರಾಜ್ಯ ಸರ್ಕಾರಗಳು ಬಡ್ತಿ ನೀಡುವಾಗ ಎಸ್‌ಸಿ/ಎಸ್‌ಟಿ ಸೇರಿದಂತೆ ಹಿಂದುಳಿದ ವರ್ಗಗಳ ಉದ್ಯೋಗಿಗಳ ದತ್ತಾಂಶವನ್ನು ಸಂಗ್ರಹಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಎಂ.ನಾಗರಾಜು ಪ್ರಕರಣದಲ್ಲಿ ನೀಡಿದ ತೀರ್ಪಿನ ಮರುಪರಿಶೀಲನೆ ಅಗತ್ಯವಿಲ್ಲ ಎಂದು ಸ್ಪ?ಪಡಿ ಸಿದೆ. ಪರಿಶಿ? ಜಾತಿ ಮತ್ತು ಪರಿಶಿ? ಪಂಗಡದ ಸರ್ಕಾರಿ ನೌಕರರ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ೨೦೦೬ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿತ್ತು. ಬಡ್ತಿ ಮೀಸಲಾತಿ ಪ್ರಶ್ನಿಸಿ ಬೆಂಗಳೂರು ಮೂಲದ ಎಂ.ನಾಗರಾಜ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು.  ಮಹಾರಾಷ್ಟ್ರ ಮತ್ತು ತ್ರಿಪುರಾ ರಾಜ್ಯಗಳಿಗೆ ಸಂಬಂಧಿಸಿದ ಇದೇ ಮಾದರಿಯ ಪ್ರಕರಣಗಳ ವಿಚಾರಣೆ ಸುಪ್ರೀಂನಲ್ಲಿ ನಡೆಯುತ್ತಿತ್ತು. ಆದ್ದರಿಂದ, ಅರ್ಜಿಗಳ ವಿಚಾರಣೆಗೆ ಸಂವಿಧಾನಿಕ ಪೀಠ ರಚನೆ ಮಾಡಲಾಗಿತ್ತು.

2018: ನವದೆಹಲಿ: ನ್ಯಾಯಾಲಯದಲ್ಲಿನ ಕಾರ್ಯ ಕಲಾಪಗಳ ವಿಡಿಯೋ ರೆಕಾರ್ಡಿಂಗ್ ಹಾಗೂ ನೇರ ಪ್ರಸಾರ ಮಾಡುವ ಕುರಿತು, ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಪ್ರಕಟಿಸಿತು. ಕೋರ್ಟ್ ಕಲಾಪಗಳ ನೇರಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದ್ದು, ಇದು ಸುಪ್ರೀಂ ಕೋರ್ಟ್‌ನಿಂದಲೇ ಆರಂಭವಾಗಲಿದೆ ಎಂದು ಹೇಳಿತು. ಇದಕ್ಕೆ ನಿಯಮಗಳನ್ನು ಪಾಲಿಸಬೇಕು. ಕೋರ್ಟ್ ಕಲಾಪಗಳ ನೇರಪ್ರಸಾರ ನ್ಯಾಯಾಂಗ ವ್ಯವಸ್ಥೆಯಲ್ಲಿ ಮತ್ತ? ಪಾರದರ್ಶಕತೆ ತರುತ್ತದೆ ಎಂದು ಪೀಠ ಹೇಳಿತು. ಸಾರ್ವಜನಿಕರಿಗೆ ನ್ಯಾಯಾಲಯದ ಕೋಣೆ ಯೊಳಗೆ ಏನು ಆಗುತ್ತಿದೆ. ಹೇಗೆ ವಾದ ನಡೆಯು ತ್ತದೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯಿತು. ಕೋರ್ಟ್ ವಿಚಾರಣೆಯ ನೇರಪ್ರಸಾರಕ್ಕೆ ಅನು ಮತಿ ಸಿಕ್ಕಿದ್ದು, ದೇಶಾದ್ಯಂತ ಎಲ್ಲಾ ಕೋರ್ಟ್ ಗಳಿಗೂ ಇದು ಅನ್ವಯವಾಗಲಿದೆ. ಅ? ಅಲ್ಲ, ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಇದೊಂದು ಮಹತ್ವದ ಮೈಲಿಗಲ್ಲಾಯಿತು. ಪೀಠದ ನೇತೃತ್ವ ವಹಿಸಿದ್ದ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ, ಸೂರ್ಯನ ಬೆಳಕು ಅತ್ಯುತ್ತಮ ಸೋಂಕು ನಿವಾರಕ ಇದರಿಂದ ನ್ಯಾಯಾಂಗದಲ್ಲಿ ಪಾರದರ್ಶಕತೆ ತಂದಂತಾಗುವುದು. ಕೋರ್ಟ್‌ನಲ್ಲಿ ನಡೆಯುವ ವಿಚಾರಣೆಗಳನ್ನು ಮಾಧ್ಯಮಗಳಲ್ಲಿ ನೇರ ಪ್ರಸಾರ ಮಾಡಿಕೊಟ್ಟರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ಹೊಣೆ ಗಾರಿಕೆ ಬರುವುದು ಎಂದು ಹೇಳಿದರು.  ನೇರಪ್ರಸಾರ ಮಾಡುವಂತೆ ಹಿರಿಯ ನ್ಯಾಯ ವಾದಿ ಇಂದಿರಾ ಜೈಸಿಂಗ್, ಕಾನೂನು ವಿದ್ಯಾರ್ಥಿ ಸ್ನೇಹಿಲ್ ತ್ರಿಪಾಠಿ, ಎನ್‌ಜಿಒ ಸಲ್ಲಿಸಿದ್ದ ಅರ್ಜಿಗಳನ್ನು ಜುಲೈನಲ್ಲಿ ಪರಿಶೀಲನೆಗೆ ಕೈಗೆತ್ತಿಕೊಂಡ ವೇಳೆ ದೀಪಕ್ ಮಿಶ್ರಾ, ಕೋರ್ಟ್ ವಿಚಾರಣೆ ಗಳನ್ನು ನಡೆಸುವಾಗ ಮಾಧ್ಯಮಗಳು ನೇರಪ್ರಸಾರ ಮಾಡು ವಂತಿರಬೇಕು ಕಕ್ಷಿಗಾರರರು ಅವರ ಪ್ರಕರಣಗಳು ಹೇಗೆ ಬಗೆಹರಿಯಲ್ಪಡುತ್ತವೆ, ವಾದ-ಪ್ರತಿವಾದ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಯಲು ಅರ್ಹರಾಗಿದ್ದಾರೆ ಎಂದಿದ್ದರು.  ಎಲ್ಲವೂ ಅಲ್ಲದಿದ್ದರೂ, ಅತ್ಯಾಚಾರ, ವೈವಾ ಹಿಕ ಜೀವನಕ್ಕೆ ಸಂಬಂಧಪಟ್ಟಂತೆ ನಡೆಯುವ ವಿಚಾರಣೆಗಳನ್ನಾದರೂ ಇದರ ವ್ಯಾಪ್ತಿಗೆ ತರಬೇಕು. ಅಲ್ಲದೆ ಹೀಗೆ ನೇರಪ್ರಸಾರ ಮಾಡುವುದರಿಂದ ವಿದ್ಯಾರ್ಥಿಗಳ ಕಲಿಕೆಗೂ ಅನುಕೂಲವಾಗುತ್ತದೆ ಎಂದು ಹೇಳಿದ್ದರು.  ಇದೇ ಸಂದರ್ಭದಲ್ಲಿ, ನ್ಯಾಯಾಧೀಶರ ಘನ ತೆಯನ್ನು ಕಾಪಾಡುವಂತಹ ಮತ್ತು ಸಾರ್ವಜನಿಕರ ಹಕ್ಕನ್ನು ಸಮತೋಲನಗೊಳಿಸುವ ಅಗತ್ಯ ಕಾನೂ ನುಗಳನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಉನ್ನತ ನ್ಯಾಯಾಲಯ ಹೇಳಿದೆ. ಇದೀಗ ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಅನುಮತಿ ದೊರೆತಿರುವುದರಿಂದ ನ್ಯಾಯಾಲಯ ದಲ್ಲಿ ಪ್ರೇಕ್ಷಕರು ಕಡಿಮೆಯಾಗುವುದರಿಂದ ಜನ ಸಂದಣಿಯೂ ಕಡಿಮೆಯಾಗುತ್ತದೆ.


2018: ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್ ಗೊಗೋಯ್ ಅವರನ್ನು ನೇಮಕ ಮಾಡಿರುವುದನ್ನು ಪ್ರಶ್ನಿಸಿ ಸುಪ್ರೀ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅರ್ಹತೆ ಇಲ್ಲದ ನೆಲೆಯಲ್ಲಿ ವಜಾಗೊಳಿಸಿತು. ಹಾಲಿ ಸಿಜೆಐ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ (ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ಡಿ ವೈ ಚಂದ್ರಚೂಡ್) ವು ಅರ್ಜಿಯ ವಿಚಾರಣೆ ನಡೆಸಿ, ತೀರ್ಪು ನೀಡಿ ಹಸ್ತಕ್ಷೇಪದ ಹಂತ ಇದಲ್ಲ ಎಂದು ಹೇಳಿತು. ಈ ಅರ್ಜಿಗೆ ಯಾವುದೇ ಅರ್ಹತೆ ಇಲ್ಲ. ಆದ್ದರಿಂದ ನ್ಯಾಯಾಲಯ ಈ ಅರ್ಜಿ ಯನ್ನು ವಜಾಗೊಳಿಸುತ್ತಿದೆ,” ಎಂದು ಮುಖ್ಯನ್ಯಾಯ ಮೂರ್ತಿ ದೀಪಕ್ ಮಿಶ್ರಾ ತಿಳಿಸಿದರು. ಜ.೧೨ ರಂದು ನವದೆಹಲಿಯಲ್ಲಿ ಸುಪ್ರೀಂ ಕೋರ್ಟಿ ನ ಹಿರಿಯ ನ್ಯಾಯಮೂರ್ತಿಗಳಾದ ನ್ಯಾ. ಕುರಿಯನ್  ಜೋಸೆಫ್, ನ್ಯಾ. ಜೆ ಚಲಮೇಶ್ವರ, ನ್ಯಾ. ರಂಜನ್ ಗೊಗೊಯ್ ಮತ್ತು ನ್ಯಾ. ಮದನ್ ಲೋಕೂರ್ ಅಭೂತಪೂರ್ವ ಸುದ್ದಿ ಗೋಷ್ಠಿ ನಡೆಸಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

2016: ಶ್ರೀಹರಿಕೋಟಾ : ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ
ಕೇಂದ್ರದಲ್ಲಿ ಬೆಳಗ್ಗೆ 9.12ಕ್ಕೆ ಏಕಕಾಲಕ್ಕೆ 8 ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಹೊಸ ಮೈಲುಗಲ್ಲು ಸ್ಥಾಪಿಸಿತು. ಶ್ರೀಹರಿಕೋಟಾದಿಂದ 8 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ ಸಿ- 35 ರಾಕೆಟ್ ಗಗನಕ್ಕೆ ಚಿಮ್ಮಿತು. ಈ ಭಾರತದ 3 ಹಾಗೂ ವಿದೇಶದ 5 ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು.  ಉಡಾವಣೆಗೊಂಡ ಉಪ್ರಗಹಳು ನಿಗದಿತ 2 ಕಕ್ಷೆಗಳನ್ನು ಸೇರಿದವು. ಇದರಲ್ಲಿ  371 ಕೆಜೆ ತೂಕವಿರುವ ಸ್ಕಾಟ್ ಸ್ಯಾಟ್-1  ಉಪಗ್ರಹವು ಹವಾಮಾನ, ಚಂಡಮಾರುತಗಳ ಕುರಿತಾದ ಮಾಹಿತಿ ನೀಡಲಿದೆ, ಭಾರತದ ಮೂರು ಉಪಗ್ರಹಗಳ ಜತೆ ಅಮೆರಿಕ, ಕೆನಡಾ, ಅಲ್ಜಿರಿಯಾದ ಉಪಗ್ರಹಗಳು ಕೂಡ ಉಡಾವಣೆಗೊಂಡವು. ಅತೀ ದೀರ್ಘಕಾಲದ ಉಡಾವಣೆ ಪ್ರಕ್ರಿಯೆ ಇದಾಗಿದ್ದು, 8 ಉಪಗ್ರಹಗಳ ಉಡಾವಣೆ ಪ್ರಕ್ರಿಯೆಗೆ 2 ಗಂಟೆ 15 ನಿಮಿಷಗಳ ಕಾಲ ವ್ಯಯಿಸಲಾಯಿತು. 9 ಉಪಗ್ರಹಗಳನ್ನು ಉಡಾವಣೆ ಮಾಡಿ ಸಾಧನೆ ಮಾಡಿರುವ ಇಸ್ರೋವನ್ನು ಅಭಿನಂದಿಸಿದ ಪ್ರಧಾನಿ ಮೋದಿ ಇದು ಹೆಮ್ಮೆಯ ಕ್ಷಣ ಎಂದು ಟ್ವೀಟ್ ಮಾಡಿದರು.

2016: ನವದೆಹಲಿ: ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ಮತ್ತು ಉಪನದಿಗಳ ನದಿಗಳ ಗರಿಷ್ಠ ನೀರನ್ನು ಭಾರತದಲ್ಲೆ ಬಳಸಿಕೊಳ್ಳಲು ಯೋಜನೆ ರೂಪಿಸುವಂತೆ ಪುನರ್ ಪರಿಶೀಲನಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದರು. ನೆತ್ತರು ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಸಿಂಧೂ ಮತ್ತು ಉಪನದಿಗಳ ನೀರು ಬಳಕೆ ಒಪ್ಪಂದಕ್ಕೆ ಸಂಬಂಧಿಸಿದ ಪುನರ್ ಪರಿಶೀಲನಾ ಸಭೆಯಲ್ಲಿ ಮೋದಿ ಸ್ಪಷ್ಟವಾಗಿ ಹೇಳಿದರು. ಮೂಲಕ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುತ್ತಿರುವ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವನ್ನು ಅವರು ರವಾನಿಸಿದರು.


2016: ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015 ಗೌರವ ಪ್ರಶಸ್ತಿ ಪ್ರಕಟಗೊಂಡಿತು. ಐವರು ಹಿರಿಯ ಸಾಹಿತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಡಾ. ಕೃಷ್ಣಮೂರ್ತಿ ಹನೂರು, ಡಾ. ಎಚ್.ಎಸ್‌. ಶಿವಪ್ರಕಾಶ್‌, ಡಾ. ಎಲ್‌. ಹನುಮಂತಯ್ಯ, ನೇಮಿಚಂದ್ರ ಮತ್ತು ಡಾ.ಎಚ್‌. ನಾಗವೇಣಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಪ್ರಕಟಿಸಿದರು
2014ರಲ್ಲಿ ಪ್ರಕಟವಾದ 17 ಪ್ರಕಾರದ ಕೃತಿಗಳು ಮತ್ತು 6 ದತ್ತಿನಿಧಿ ಬಹುಮಾನಕ್ಕೆ ಲೇಖಕರನ್ನು ಆಯ್ಕೆ ಮಾಡಲಾಗಿವೆ ಎಂದು ಅವರು ತಿಳಿಸಿದರು. 2014 ವರ್ಷದ ಪುಸ್ತಕ ಬಹುಮಾನ: "ಕಾಫಿ ಕಪ್ಪಿನೊಳಗೆ ಕೋಲಂಬಸ್"(ಸಂಕೀರ್ಣ)-  ಜಿ.ಎನ್. ಮೋಹನ್ನನ್ನ ಶಬ್ದ ನಿನ್ನಲಿ ಬಂದು(ಕಾವ್ಯ) -  ಕೆಪಿ ಮೃತ್ಯಂಜಯ್ಯ, ಆಡುಕಳ(ಕಾದಂಬರಿ) - ಶ್ರೀಧರ್ ಬಳಿಗಾರ,
ದಿನಚರಿಯ ಕಡೆ ಪುಟದಿಂದ (ಸಣ್ಣಕತೆ) - ಜಯಶ್ರೀ ಕಾಸರವಳ್ಳಿ, ದೇವನಾಂಪ್ರಿಯ ಅಶೋಕ (ನಾಟಕ) - ಎಂ ಭೈರೇಗೌಡ, ಅರ್ಥಾರ್ಥ (ಲಿಲಿತ ಪ್ರಬಂಧ) - ಎಂ.ಎಸ್.ಶ್ರೀರಾಮ್ಅಪೂರ್ವ ಪೂರ್ವ (ಪ್ರವಾಸ ಸಾಹಿತ್ಯ) - ವೆಂಕಟೇಶ ಮಾಚಕನೂರ, ಆನಂದ ಕುಮಾರಸ್ವಾಮಿ (ಜೀವನಚರಿತ್ರೆ) - ಜಿ.ಬಿ. ಹರೀಶ, ಬಯಲ ಬನಿ (ಸಾಹಿತ್ಯ ವಿಮರ್ಶೆ) - ರವಿಕುಮಾರ್ ನೀಹಾ, ಶ್ರೀ ಕನಕದಾಸರ ಕೀರ್ತನೆಗಳು (ಗ್ರಂಥ ಸಂಪಾದನೆ ) - ಟಿ.ಎನ್. ನಾಗರತ್ನ, ಬೆಳಗುತಿರುವ ಭಾರತ (ಮಕ್ಕಳ ಸಾಹಿತ್ಯ) - .ಕೆ.ರಾಮೇಶ್ವರ, ಕ್ವಾಂಟಂ ಜಗತ್ತು (ವಿಜ್ಞಾನ ಸಾಹಿತ್ಯ) ಅಗ್ನಿ ಶ್ರೀಧರ್,ನಂಬಿಕೆ, ಮೂಡನಂಬಿಕೆ, ವೈಜ್ಞಾನಿಕ ಮನೋವೃತ್ತಿ (ಮಾನವಿಕ) - ಎಂ.‌ಅಬ್ದುಲ್ ರೆಹಮಾನ್ ಪಾಷ, ಹಸ್ತಪ್ರತಿ ಸಂಕಥನ (ಸಂಶೋಧನೆ) - ವೀರೇಶ ಬಡಿಗೇರ, ಗಾಳಿ ಪಳಗಿಸಿದ ಬಾಲಕ (ಸೃಜನಶೀಲ ಅನುವಾದ -1) - ಕರುಣಾ ಬಿ.ಎಸ್ಕಾರ್ಪೊರೇಟ್ ಕಾಲದಲ್ಲೂ ಕಾರ್ಲ್ ಮಾರ್ಕ್ಸ್ ಪ್ರಸ್ತುತ (ಸೃಜನೇತರ ಅನುವಾದ) - ಆರ್.ಕೆ. ಹುಡುಗಿ, ಆವರ್ತ (ಮೊದಲ ಕೃತಿ- ಕಾದಂಬರಿ) - ಆಶಾ ರಘು, 2014 ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ದತ್ತಿ ಪ್ರಶಸ್ತಿಗಳು: ವೈ.ಎಸ್.ಹರಗಿ, ಉರಿವ ಜಲ - ಕಾದಂಬರಿ (ಚದುರಂಗ ದತ್ತಿ ನಿಧಿ ಪ್ರಶಸ್ತಿ,), ಎಸ್.‌ಜಗದೀಶ್ ಕೊಪ್ಪ, ಬಿಳಿ ಸಾಹೇಬನ ಭಾರತ - ಜೀವನಚರಿತ್ರೆ- (ಸಿಂಪಿ ಲಿಂಗಣ್ಣ ದತ್ತಿನಿಧಿ ಪ್ರಶಸ್ತಿ,) ರಾಮಲಿಂಗಪ್ಪ ಟಿ. ಬೇಗೂರು - ಮಹಿಳೆ ಚರಿತ್ರ ಪುರಾಣ - ಸಾಹಿತ್ಯ ವಿಮರ್ಶೆ - (ಪಿ. ಶ್ರೀನಿವಾಸ್ ರಾವ್ ದತ್ತಿನಿಧಿ ಪ್ರಶಸ್ತಿಬಸು ಬೇವಿನಗಿಡದ - ಸಮಕಾಲೀನ ಭಾರತೀಯ ಸಣ್ಣಕಥೆಗಳು - ಸೃಜನಶೀಲ ಅನುವಾದ ( ಎಲ್. ಗುಂಡಪ್ಪ ಮತ್ತು ಶಾರದಾ ದತ್ತನಿಧಿ ಪ್ರಶಸ್ತಿ), ಪದ್ಮನಾಭ ಭಟ್ ಶೇವ್ಕಾರ್, ಕೇಪಿನ ಡಬ್ಬಿ - ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರ ಚೆನ್ನ ದತ್ತಿನಿಧಿ ಪ್ರಶಸ್ತಿ), ಡಾ. ಎಚ್.ಎಸ್.ಎಂ. ಪ್ರಕಾಶ್, ಹಿಸ್ಟರಿ ಆಫ್ ದಲಿತ್ ಮ್ಯೂಮೆಂಟ್ - ಕನ್ನಡದಿಂದ ಇಂಗ್ಲಿಷ್ ಗೆ ಅನುವಾದ (ಅಮೇರಿಕನ್ನಡ ದತ್ತಿ ಬಹುಮಾನ)


2016: ಸೀತಾಪುರ: ಉತ್ತರ ಪ್ರದೇಶದಲ್ಲಿ ರೋಡ್ ಶೋ ನಡೆಸುತ್ತಿದ್ದ ವೇಳೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೆ ವ್ಯಕ್ತಿಯೊಬ್ಬರು ಚಪ್ಪಲಿ ಎಸೆದ ಘಟನೆ ಘಟಿಸಿತು. ಇಲ್ಲಿನ ಸೀತಾಪುರ್ ನಗರದಲ್ಲಿ ತೆರದ ವಾಹನದಲ್ಲಿ ರಾಹುಲ್ ಪ್ರಚಾರ ಕಾರ್ಯಕ್ರಮ ನಡೆಸುತ್ತಿದ್ದರು. ಹೊತ್ತಿಗೆ ಜನರ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬರು ರಾಹುಲ್ ಅವರಿಗೆ ಚಪ್ಪಲಿ ಎಸೆದರು.  ಚಪ್ಪಲಿ ತಮ್ಮೆಡೆಗೆ ತೂರಿ ಬರುತ್ತಿರುವುದನ್ನು ಗಮನಿಸಿದ ರಾಹುಲ್ ಅದರ ಹೊಡೆತದಿಂದ ತಪ್ಪಿಸಿಕೊಂಡರು.
 ಬಿಜೆಪಿ
ಮತ್ತು ಆರ್ಎಸ್ಎಸ್  ಕಾಂಗ್ರೆಸ್ ವಿರುದ್ಧ ದ್ವೇಷ ಕಾರುತ್ತಿದ್ದರೂ, ನಾನು ಪ್ರೀತಿಯಿಂದಲೇ ಎಲ್ಲವನ್ನೂ ಸಂಭಾಳಿಸುತ್ತೇನೆ, ಇದೇ ನನ್ನ ನಿಲುವು ಎಂದು ರಾಹುಲ್ ಪ್ರತಿಕ್ರಿಯಿಸಿದರು.
ಚಪ್ಪಲಿ
ಎಸೆದ ವ್ಯಕ್ತಿ ಅನೂಪ್ ಮಿಶ್ರಾ ಎಂದು ಗುರುತಿಸಲಾಯಿತು. ಈತನನ್ನು ಪೊಲೀಸರು ಬಂಧಿಸಿದರು. ಮಿಶ್ರಾ ಪತ್ರಕರ್ತರಾಗಿದ್ದಾರೆ ಎನ್ನಲಾಯಿತು.
2016: ನವದೆಹಲಿ: ಸೆಪ್ಟೆಂಬರ್ 27 ತನಕ ತಮಿಳುನಾಡಿಗೆ ನಿತ್ಯ 6000 ಕ್ಯುಸೆಕ್ ಕಾವೇರಿ ನೀರು
ಬಿಡಬೇಕೆಂಬ ತನ್ನ ಆದೇಶವನ್ನು ಬದಲಾಯಿಸುವಂತೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮಾರ್ಪಾಡು ಅರ್ಜಿ ಸಲ್ಲಿಸಿತು. ರಾಜ್ಯದ ಕಾವೇರಿ ಜಲಾಶಯಗಳಲ್ಲಿನ ನೀರು ಮುಂದಿನ ವರ್ಷ ಜೂನ್ ತಿಂಗಳವರೆಗೆ ಕುಡಿಯುವ ನೀರು ಪೂರೈಕೆಗೆ ಅಗತ್ಯವಾಗಿದ್ದು, ತಮಿಳುನಾಡಿಗೆ ಬಿಡುವಷ್ಟು ನೀರು ಇಲ್ಲ. ಹೀಗಾಗಿ ನಿತ್ಯ 6000 ಕ್ಯುಸೆಕ್ ನೀರು ಬಿಡುಬೇಕೆಂದು ಇದೇ 21ರಂದು ನೀಡಿದ್ದ ಆದೇಶವನ್ನು ಮಾರ್ಪಾಡು ಮಾಡಬೇಕು. ನೀರು ಬಿಡುಗಡೆಯ ಆದೇಶದಿಂದ ಮುಕ್ತಗೊಳಿಸಬೇಕು ಎಂದು ರಾಜ್ಯ ಸರ್ಕಾರ ನ್ಯಾಯಾಲಯವನ್ನು ಕೋರಿತು.  ತಮಿಳುನಾಡಿಗೆ ನೀರು ಹರಿಯಬಿಡುವಷ್ಟು ನೀರಿನ ಸಂಗ್ರಹ ಕಾವೇರಿಕೊಳ್ಳದಲ್ಲಿ ಇಲ್ಲ ಎಂದು ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿತು.
2016: ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಕೇಳಿಬಂದಿದ್ದರಿಂದ ಸಚಿವ ಸ್ಥಾನ ಕಳೆದುಕೊಂಡಿದ್ದ ಶಾಸಕ ಕೆ.ಜೆ. ಜಾರ್ಜ್ಅವರು ಈದಿನ ಮರಳಿ ಸಂಪುಟ ಸೇರಿದರು. ಬೆಳಗ್ಗೆ 10.15ಕ್ಕೆ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ಜಾರ್ಜ್ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಜು.18 ರಂದು ರಾಜಿನಾಮೆ ಕೊಟ್ಟಿದ್ದ ಜಾರ್ಜ್ ಎರಡೇ ತಿಂಗಳಲ್ಲಿ ಮತ್ತೆ ಸಚಿವ ಸ್ಥಾನಕ್ಕೆ ಮರಳಿದರು. ಮತ್ತೆ ಸಚಿವ ಸಂಪುಟ ಸೇರಿರುವ ಜಾರ್ಜ್ ಅವರಿಗೆ ಹಿಂದೆ ನಿರ್ವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡುವ ಸಾಧ್ಯತೆ ಇದೆ ಎನ್ನಲಾಯಿತು.
2016: ಕಾನ್ಪುರ: ಭಾರತದ 500ನೇ ಟೆಸ್ಟ್ ಐತಿಹಾಸಿಕ  ವಿಜಯದ ಸಂಭ್ರಮಕ್ಕೆ ಗ್ರೀನ್ ಪಾರ್ಕ್
ಕ್ರೀಡಾಂಗಣ ಸಾಕ್ಷಿಯಾಯಿತು. ನ್ಯೂಜಿಲೆಂಡ್ತಂಡವನ್ನು ಭರ್ಜರಿ 197 ರನ್ಗಳಿಂದ ಮಣಿಸುವ ಮೂಲಕ ವಿರಾಟ್ ಕೊಹ್ಲಿ  ಪಡೆ ಗಂಗಾನದಿ ತೀರದಲ್ಲಿ ವಿಜಯೋತ್ಸವ ಆಚರಿಸಿತು. ಇಲ್ಲಿ ನಡೆದ ನ್ಯೂಜಿಲೆಂಡ್ ಎದುರಿನ ಸರಣಿಯ ಮೊದಲ ಪಂದ್ಯದ ಐದನೇ  ದಿನದ ಮಧ್ಯಾಹ್ನವೇ ಗೆಲುವಿನ ಗೌರವವನ್ನು ಭಾರತ ತನ್ನದಾಗಿಸಿಕೊಂಡಿತು. 500ನೇ ಟೆಸ್ಟ್ಆಡುತ್ತಿರುವ ಆತಿಥೇಯ ತಂಡವು ಎರಡನೇ ಇನಿಂಗ್ಸ್ನಲ್ಲಿ ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜ ಅವರ ಅರ್ಧಶತಕಗಳ ನೆರವಿನಿಂದ  5 ವಿಕೆಟ್ಗಳಿಗೆ 377 ರನ್ ಪೇರಿಸಿ ಡಿಕ್ಲೇರ್ಮಾಡಿಕೊಂಡಿತು. ಮೊದಲ ಇನಿಂಗ್ಸ್ನಲ್ಲಿ 56 ರನ್ಗಳ ಮುನ್ನಡೆ ಪಡೆದಿದ್ದ ಕೊಹ್ಲಿ ಬಳಗವು  ಒಟ್ಟು  434 ರನ್ಗಳ ಕಠಿಣ ಗುರಿಯನ್ನು ಕಿವೀಸ್ಗೆ ನೀಡಿತು. ನಾಲ್ಕನೇ ದಿನದಾಟದ ಅಂತ್ಯಕ್ಕೆ   ಕೀವಿಸ್ತಂಡವು  37 ಓವರ್ಗಳಲ್ಲಿ 4 ವಿಕೆಟ್ಕಳೆದುಕೊಂಡು  93 ರನ್ಗಳಿಸಿತ್ತು. ಈದಿನ  ಮಧ್ಯಾಹ್ನದ ವೇಳೆಗೆ ನ್ಯೂಜಿಲೆಂಡ್ಎಲ್ಲ ವಿಕೆಟ್ಗಳನ್ನು ಕಳೆದುಕೊಂಡು ಸುಲಭವಾಗಿ ಸೋಲು ಅನುಭವಿಸಿತು. ಭಾರತದ ಪರ ಅಶ್ವೀನ್ಆರು ವಿಕೆಟ್ಕಬಳಿಸಿದರು.

2016: ಚೆನ್ನೈ: ಚಿನ್ನದ ಹೂಡಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆಭರಣ ತಯಾರಿಕಾ ಕಂಪೆನಿ ಜಿಆರ್ಟಿ ಜ್ಯುವೆಲರ್ಸ್‌, ಭಾರಿ ತೂಕದ ಚಿನ್ನದ ಕಿವಿಯೋಲೆ ತಯಾರಿಸಿ ಗಿನ್ನೆಸ್ ದಾಖಲೆ ಮಾಡಿತು.  ಜಗತ್ತಿನಲ್ಲೇ ಭಾರದ ಕಿವಿಯೋಲೆ ಎನಿಸಿರುವ ಇದರ ತೂಕ 1.513 ಕೆ.ಜಿಭಾರತೀಯ ಸಾಂಪ್ರದಾಯಿಕ ಜುಮ್ಕಿ ಅಥವಾ ಜುಮ್ಕಾ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. 22 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದೆ. ಇದಕ್ಕ ಆಗಿರುವ ವೆಚ್ಚ ರೂ. 45 ಲಕ್ಷ. ಭಾರಿ ತೂಕದ ಕಿವಿಯೋಲೆಯು ಗಿನ್ನೆಸ್ ದಾಖಲೆ ಸೇರಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಕಂಪೆನಿ ವ್ಯವಸ್ಥಾಪಕ ಜಿ.ಆರ್. ಆನಂದ್ ಅನಂತ ಪದ್ಮನಾಭನ್ ಅವರು, ದೇಶವು ಹೆಮ್ಮೆಪಡಲು  ತಮ್ಮೊಂದೊಂದು ಚಿಕ್ಕ ಕೊಡುಗೆಯಿದು ಎಂದರು. ಇದೇ ಕಂಪೆನಿಯು ದುಬೈಯಲ್ಲಿ ಕಳೆದ ವರ್ಷ 1 ಕೆ.ಜಿ. ತೂಕದ ಚಿನ್ನದ ಕಿವಿಯೋಲೆಯನ್ನು ಸಿದ್ಧಪಡಿಸಿ ಗಮನ ಸೆಳೆದಿತ್ತು.

2008: ಗುಜರಾತಿನ  ಗೋಧ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜಿ.ಟಿ. ನಾನಾವತಿ ಆಯೋಗದ ವರದಿಯ ಪ್ರಸಾರವನ್ನು ತಡೆ ಹಿಡಿಯಲು ಸುಪ್ರೀಂಕೋರ್ಟ್ ನಿರಾಕರಿಸಿತು. ವರದಿಗೆ ತಡೆಯಾಜ್ಞೆ ವಿಧಿಸುವಂತೆ ಕೋರಲಾದ ಅರ್ಜಿಯೊಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠದ ಮುಂದೆ ಈದಿನ ಪ್ರಸ್ತಾಪಕ್ಕೆ ಬಂದಾಗ ಪೀಠವು ಅದನ್ನು ಆಲಿಸಲು ಅಕ್ಟೋಬರ್ ತಿಂಗಳ 13ರ ದಿನಾಂಕವನ್ನು ನಿಗದಿ ಪಡಿಸಿತು. ಸಿಟಿಜನ್  ಫಾರ್ ಜಸ್ಟೀಸ್ ಎಂಬ ಸರ್ಕಾರೇತರ ಸಂಸ್ಥೆಯೊಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ ನ್ಯಾಯಮೂರ್ತಿ ನಾನಾವತಿ  ಆಯೋಗದ  ವರದಿಯನ್ನು  ತಡೆ ಹಿಡಿಯಲು ಕೋರಿತು. ಗೋಧ್ರಾ ಹತ್ಯಾಕಾಂಡದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಯು.ಸಿ. ಬ್ಯಾನರ್ಜಿ ಸಮಿತಿಯ ವರದಿಯನ್ನು ಹಿಂದೆ ತಡೆ ಹಿಡಿಯಲಾಗಿತ್ತು. ಗುಜರಾತ್ ವಿಧಾನಮಂಡಲದಲ್ಲಿ ಮಂಡನೆಯಾದ  ನ್ಯಾಯಮೂರ್ತಿ ನಾನಾವತಿ ಆಯೋಗದ ವರದಿ ಬಗೆಗೂ ಅದೇ ಮಾದರಿ ಕ್ರಮ ಕೈಗೊಳ್ಳಬೇಕು ಎಂದು  ಸರ್ಕಾರೇತರ ಸಂಸ್ಥೆ ಕೋರಿತು. ಗೋಧ್ರಾ ಘಟನಯಲ್ಲಿ ಮುಖ್ಯಮಂತ್ರಿ, ಅವರ ಸಂಪುಟ ಸದಸ್ಯರು ಇಲ್ಲವೇ ಪೊಲೀಸ್ ಅಧಿಕಾರಿಗಳು ಪಾತ್ರ ವಹಿಸಿದ್ದರು ಎಂಬುದನ್ನು ಸಾಬೀತು ಪಡಿಸುವಂತಹ ಯಾವ ಸಾಕ್ಷ್ಯಾಧಾರವೂ ಇಲ್ಲ ಎಂದು ಸುಪ್ರೀಂಕೋರ್ಟಿನ ಮಾಜಿ ನ್ಯಾಯಮೂರ್ತಿ ನಾನಾವತಿ ಆಯೋಗದ ವರದಿ ಹೇಳಿತ್ತು. 2002ರ ಫೆಬ್ರುವರಿಯಲ್ಲಿ ಅಯೋಧ್ಯೆಯಿಂದ ವಾಪಸಾಗುತ್ತಿದ್ದ 58 ಮಂದಿ ಕರಸೇವಕರು ಸಬರಮತಿ ಎಕ್ಸ್  ಪ್ರೆಸ್ ರೈಲು ಗಾಡಿಯ ಅಗ್ನಿ ದುರಂತದಲ್ಲಿ ಅಸು ನೀಗಿದ್ದರು. ಈ ಘಟನೆಯ ತನಿಖೆ ನಡೆಸಿದ ನ್ಯಾಯಮೂರ್ತಿ ನಾನಾವತಿ ಅವರು ತಮ್ಮ ವರದಿಯಲ್ಲಿ `ಇದು  ಗೋಧ್ರಾದ ಅಮನ್ ಅತಿಥಿಗೃಹದಲ್ಲಿ ರೂಪುಗೊಂಡ ಪೂರ್ವ ಯೋಜಿತ ಸಂಚು' ಎಂದು ಹೇಳಿದ್ದರು.

2008: ಹಿರಿಯ ನಾಗರಿಕರ ಕಾಯ್ದೆಯು 2007ರ್ಲಲಿ ಅಸ್ತಿತ್ವಕ್ಕೆ ಬಂದ ಬಳಿಕ ಬಹುಶಃ ಮೊತ್ತ ಮೊದಲ ಪ್ರಕರಣದಲ್ಲಿ ಕೊಟ್ಟಾಯಂನ 58 ವರ್ಷದ ವ್ಯಕ್ತಿಯೊಬ್ಬರನ್ನು ತನ್ನ ವೃದ್ಧ ತಾಯಿಯನ್ನು ನಿರ್ಲಕ್ಷಿಸಿದ್ದಕ್ಕಾಗಿ ಕೊಲ್ಲಂ ಪೊಲೀಸರು ಅವರ ಇಬ್ಬರು ಸಹೋದರರು ಮತ್ತು ಮೂವರು ಸಹೋದರಿಯರು ಸೇರಿದಂತೆ ಇತರ ಐವರ ವಿರುದ್ಧವೂ ಖಟ್ಲೆ ದಾಖಲಿಸಿದರು. ಜಿಲಾ ಅಧಿಕಾರಿಯ  ಕೇಂದ್ರ ಕಚೇರಿಯಿಂದ ಬಂದ ಸೂಚನೆಯ ಮೇರೆಗೆ ಪಾಲಕರ ನಿರ್ವಹಣೆ ಮತ್ತು  ಕಲ್ಯಾಣ ಹಾಗೂ ಹಿರಿಯ  ನಾಗರಿಕರ ಕಾಯ್ದೆಯ ಅಡಿಯಲ್ಲಿ ಈ ಐದು ಮಂದಿಯ  ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಪೊಲೀಸರು ಮತ್ತು ವಕೀಲರ ಪ್ರಕಾರ ಕೇರಳದಲ್ಲಿ ಮಾತ್ರವೇ ಅಲ್ಲ, ರಾಷ್ಟ್ರದಲ್ಲೂ ಹಿರಿಯ ನಾಗರಿಕರ ಕಾಯ್ದೆಯ ಅಡಿಯಲ್ಲಿ ದಾಖಲಾದ ಪ್ರಪ್ರಥಮ ಪ್ರಕರಣ ಇದು ಎನ್ನಲಾಯಿತು. 84 ವರ್ಷದ ವಯೋವೃದ್ಧೆ ಲಕ್ಷ್ಮಿ ಕುಟ್ಟಿಯ  ದುಃಸ್ಥಿತಿ, ಈ ಪ್ರದೇಶದ ಸಾಮಾಜಿಕ ಕಾರ್ಯಕರ್ತರ ಮೂಲಕ ಅಧಿಕಾರಿಗಳ ಗಮನಕ್ಕೆ ಬಂತು. ಭಾಗಶಃ ಪಾರ್ಶ್ವವಾಯುವಿಗೆ ತುತ್ತಾಗಿದ್ದ ಈಕೆಯನ್ನು ಆಕೆಯ ಮನೆಯಲ್ಲಿ ಬಿಟ್ಟು ಬಿಡಲಾಗಿತ್ತು. ಈಕೆಯ ದುಃಸ್ಥಿತಿ ಗಮನಿಸಿದ ಸಾಮಾಜಿಕ ಕಾರ್ಯಕರ್ತರು ಮೂರು ವಾರಗಳ ಹಿಂದೆ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು. ಲಕ್ಷ್ಮಿ ಕುಟ್ಟಿಯ  ಸೊಸೆ ಮೂರು ದಿನಗಳ  ಬಳಿಕ ಅತ್ತೆಯನ್ನು ಸೇವಾ ಕಾರ್ಯಕರ್ತರ ಆಶ್ರಯದಲ್ಲಿ ಬಿಟ್ಟು ಹೊರಟು ಹೋದಳು. ಆಕೆಯ ಆರೋಗ್ಯ ಸ್ವಲ್ಪ ಸುಧಾರಿಸಿದ ಬಳಿಕ ಜಿಲ್ಲಾ ಆಧಿಕಾರಿಗಳು ಮತ್ತು  ಸಾಮಾಜಿಕ ಕಾರ್ಯಕರ್ತರು ಆಕೆಯನ್ನು ಇಲ್ಲಿಗೆ ಸಮೀಪದ ಮಯ್ಯನ್ನಾಡಿನ ಅನಾಥಾಲಯವೊಂದಕ್ಕೆ ಸ್ಥಳಾಂತರಿಸಿದರು. ನಂತರ ಥಂಕಶ್ಯೇರಿಯಲ್ಲಿ ಇಗರ್ಜಿಯೊಂದು ನಡೆಸುತ್ತಿರುವ ನಿರ್ಗತಿಕರ ಧಾಮಕ್ಕೆ ಸೇರಿಸಿದರು. ಆ ಬಳಿಕ ವಯೋವೃದ್ಧರ ರಕ್ಷಣೆಗೆ ಸಂಬಂಧಿಸಿದ ನಿಯಮಗಳ ಅನುಷ್ಠಾನದ ಹೊಣೆ ಹೊತ್ತ ಜಿಲ್ಲಾ ಕೇಂದ್ರದ ಅಧಿಕಾರಿ ಈ ವೃದ್ಧೆಯ ಮಕ್ಕಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು. ಲಕ್ಷ್ಮಿ ಕುಟ್ಟಿಯ ಹಿರಿಯ ಮಗ ರಮಣನ್ ಅವರನ್ನು ಕೊಟ್ಟಾಯಮ್ಮಿನಲ್ಲಿ ಬಂಧಿಸಿದ ಸಬ್ ಇನ್ಸ್ಪೆಕ್ಟರ್, ಪ್ರಕರಣ ದಾಖಲಿಸಿ ನಂತರ  ಬಿಡುಗಡೆ ಮಾಡಿದರು.

2008: ಗುಲ್ಬರ್ಗ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಜಿಲ್ಲೆ ರಚಿಸಲು ಗುಲ್ಬರ್ಗದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿತು. ರಾಜ್ಯದ 30ನೇ ಜಿಲ್ಲೆಯಾಗಿ ಯಾದಗಿರಿಯನ್ನು ಘೋಷಿಸಲಾಗುವುದು. ಶಹಪುರ ತಾಲ್ಲೂಕನ್ನು ಉಪ ವಿಭಾಗವಾಗಿ ಮಾಡಲಾಗುವುದು ಎಂದು ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು ಪ್ರಕಟಿಸಿದರು.

2007: ಎಲ್ಲ ನ್ಯಾಯಾಲಯಗಳು ಮತ್ತು ಟ್ರಿಬ್ಯೂನಲ್ಲುಗಳ ನ್ಯಾಯಾಂಗ ಕಲಾಪಗಳು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಯನ್ನು ಮೀರಿದವುಗಳು ಎಂದು ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಮಹತ್ವದ ತೀರ್ಪು ನೀಡಿತು. ನ್ಯಾಯಾಂಗ ಸಂಸ್ಥೆಯು ಸಂಪೂರ್ಣ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಬೇಕು. ನ್ಯಾಯಾಂಗ ಕಲಾಪದ ಮಾಹಿತಿ ಪಡೆಯಲು ಮಾಹಿತಿ ಹಕ್ಕು ಕಾಯ್ದೆಯ ಬಳಕೆಗೆ ಆಯೋಗ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಮುಖ್ಯ ಮಾಹಿತಿ ಆಯುಕ್ತ ವಜಾಹತ್ ಹಬೀಬುಲ್ಲಾ ನೇತೃತ್ವದ ಆಯೋಗದ ಪೂರ್ಣಪೀಠವು ತನ್ನ 22 ಪುಟಗಳ ತೀರ್ಪಿನಲ್ಲಿ ಹೇಳಿತು. ದೆಹಲಿಯ ಚಾರ್ಟರ್ಡ್ ಅಕೌಂಟೆಂಟ್ ರಾಕೇಶ್ ಕುಮಾರ ಗುಪ್ತ ಅವರ ಅರ್ಜಿಯ ವಿಚಾರಣೆ ನಡೆಸಿದ ಆಯೋಗವು ಈ ತೀರ್ಪು ನೀಡಿತು. ಆದಾಯ ತೆರಿಗೆ ಮೇಲ್ಮನವಿ ಟ್ರಿಬ್ಯೂನಲ್ಲಿನಿಂದ (ಐಟಿಎಟಿ) ಎಸ್ಕಾರ್ಟ್ಸ್  ಲಿಮಿಟೆಡ್ಡಿನ ಆದಾಯ ತೆರಿಗೆ ಅಂದಾಜಿಗೆ ಸಂಬಂಧಿಸಿದಂತೆ ಟ್ರಿಬ್ಯೂನಲ್ ಸದಸ್ಯರ ಕಲಾಪದ ಮಾಹಿತಿ ಕೊಡಿಸುವಂತೆ ರಾಕೇಶ್ ಕುಮಾರ ಗುಪ್ತ ಕೋರಿದ್ದರು. ಪ್ರಕರಣಕ್ಕೆ  ಸಂಬಂಧಿಸಿದ ದಾಖಲೆಗಳ ತಪಾಸಣೆ ನಡೆಸಬೇಕು ಎಂದೂ ಅವರು ತಮ್ಮ ಅರ್ಜಿಯಲ್ಲಿ ಕೋರಿದ್ದರು.

2007: ಭಾರತೀಯ ಪ್ರಕೃತಿ ಚಿತ್ರಗಳ ನಿರ್ಮಾಪಕ, ಮೂರು ಬಾರಿ ಗ್ರೀನ್ ಆಸ್ಕರ್ ಪ್ರಶಸ್ತಿ ಪುರಸ್ಕೃತರಾದ ಮೈಕ್ ಪಾಂಡೆ ಅವರು ಕೇಂದ್ರ ಸರ್ಕಾರದ ಪ್ರತಿಷ್ಠಿತ ರಾಜೀವ್ ಗಾಂಧಿ ವನ್ಯಜೀವಿ ಸಂರಕ್ಷಣಾ ಪ್ರಶಸ್ತಿಗೆ ಆಯ್ಕೆಯಾದರು. ಪ್ರಶಸ್ತಿಯು 1ಲಕ್ಷ ರೂ. ನಗದು ಹಾಗೂ ಪ್ರಮಾಣಪತ್ರ ಒಳಗೊಂಡಿರುತ್ತದೆ.  ಕೀನ್ಯಾದಲ್ಲಿ  ಹುಟ್ಟಿದ ಪಾಂಡೆ, ಬ್ರಿಟನ್ ಹಾಗೂ ಅಮೆರಿಕದಲ್ಲಿ ತರಬೇತಿ ಪಡೆದು ತಮ್ಮ ವೃತ್ತಿ ಬದುಕನ್ನು ಭಾರತದಲ್ಲಿ ಆರಂಭಿಸಿದ್ದರು. ವನ್ಯಜೀವಿ ಹಾಗೂ ಪರಿಸರದ ಬಗ್ಗೆ ಇವರು ನಿರ್ಮಿಸಿದ ಚಿತ್ರ ಮತ್ತು ಧಾರಾವಾಹಿಗಳು ಅಂತಾರಾಷ್ಟ್ರೀಯ ಮನ್ನಣೆ ಗಳಿಸಿವೆ.

2007: 70 ದಶ ಲಕ್ಷ ವರ್ಷದ ವಿಶ್ವದಲ್ಲೇ ಅತಿ ಹಳೆಯದಾದ ಹಾವಿನ ಪಳೆಯುಳಿಕೆಯೊಂದನ್ನು ಗುಜರಾತಿನ ಖೇಡಾ ಜಿಲ್ಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯ ವಿಜ್ಞಾನಿಗಳು  ಪತ್ತೆ ಮಾಡಿದರು.

2007: ಮ್ಯಾನ್ಮಾರಿನಲ್ಲಿ (ಹಿಂದಿನ ಬರ್ಮಾ) ದಶಕಗಳಿಂದ ಅಧಿಕಾರವನ್ನು ಅಕ್ರಮವಾಗಿ ಕೇಂದ್ರೀಕರಣ ಮಾಡಿಕೊಂಡ ಸೇನಾಡಳಿತದ ವಿರುದ್ಧ 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದೊಡ್ಡ ಚಳವಳಿ ಆರಂಭವಾಗಿದ್ದು, ಪ್ರತಿಭಟನೆ ನಡೆಸಿದ ಬಿಕ್ಕುಗಳ ನೇತೃತ್ವದ ಗುಂಪನ್ನು ಚದುರಿಸಲು ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ನೂರಾರು ಬಿಕ್ಕುಗಳನ್ನು ಬಂಧಿಸಲಾಯಿತು.

 2007: ದಕ್ಷಿಣ ವಿಯೆಟ್ನಾಮಿನ ಕ್ಯಾನ್ ಥೋ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಕಾರಣ 60 ಕೆಲಸಗಾರರು ಮೃತರಾಗಿ ಇತರ 100 ಮಂದಿ ಕಣ್ಮರೆಯಾದರು. ಜಪಾನ್ ನೆರವಿನೊಂದಿಗೆ ಈ ಸೇತುವೆಯನ್ನು ಹ್ಯೂ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿತ್ತು. ಬೆಳಗ್ಗೆ 8 ಗಂಟೆಗೆ ಸೇತುವೆ ಕುಸಿದಾಗ  ಸ್ಥಳದಲ್ಲಿ ಸುಮಾರು 250 ಮಂದಿ ಕೆಲಸ ಮಾಡುತ್ತಿದ್ದರು.

2007: ಕರ್ನಾಟಕ ಮುಖ್ಯಮಂತ್ರಿಯ ನಿವಾಸದ ಎದುರು ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಏಷ್ಯಾ ಕಪ್ ಹಾಕಿ ಗೆದ್ದ ತಂಡದಲ್ಲಿದ್ದ ರಾಜ್ಯದ ಮೂವರು ಹಾಕಿ ಆಟಗಾರರಿಗೆ ತಲಾ ಎರಡು ಲಕ್ಷ ರೂಪಾಯಿಗಳ ಬಹುಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಕಟಿಸಿದರು. ವಿಶ್ವಕಪ್ ಗೆದ್ದು ತಂದರೆ ಹಾಕಿ ಆಟಗಾರರನ್ನು ಗೌರವಿಸಲಾಗುವುದು ಎಂದು ಇದಕ್ಕೆ ಮುನ್ನ ಕುಮಾರಸ್ವಾಮಿ ಕಟುವಾಗಿ ಹೇಳಿದ್ದರು. ಭಾರತ ಕ್ರಿಕೆಟ್ ತಂಡಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಗ್ಗಾಮುಗ್ಗಾ ಬಹುಮಾನ ಪ್ರಕಟಿಸಿದವು, ಆದರೆ ಭಾರತ ಹಾಕಿ ತಂಡ ವಿಶ್ವಕಪ್ ಗೆದ್ದಾಗ ಕ್ಯಾರೇ ಎನ್ನಲಿಲ್ಲ ಎಂದು ದೂರಿದ ಹಾಕಿ ಆಟಗಾರರು ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಕಿದ್ದರು.

2007: ದಕ್ಷಿಣ ಆಫ್ರಿಕಾದಲ್ಲಿ ನಡೆದ ಟ್ವೆಂಟಿ 20 ವಿಶ್ವಕಪ್ ಟೂರ್ನಿಯಲ್ಲಿ ಕಿರೀಟ ಜಯಿಸಿ ಐತಿಹಾಸಿಕ ಸಾಧನೆಗೈದು ಭಾರತೀಯ ಕ್ರಿಕೆಟಿನ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಿಕೊಟ್ಟ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ಮುಂಬೈ ನಗರ ಅದ್ದೂರಿಯ ಸ್ವಾಗತ ನೀಡಿತು.

2007:  ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ದಾಖಲೆ ಪ್ರಮಾಣದಲ್ಲಿ ಮುಂದುವರಿದು ಇನ್ನೊಂದು ಮಜಲು ತಲುಪಿತು. ಕೇವಲ ಆರು ದಿನಗಳ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕವು ಮತ್ತೆ ಒಂದು ಸಾವಿರ ಅಂಶಗಳಷ್ಟು ಹೆಚ್ಚಳ ಸಾಧಿಸಿ, ದಿನದ ಗರಿಷ್ಠ ಮಟ್ಟ 17 ಸಾವಿರ ಅಂಶಗಳ ಗಡಿ ದಾಟಿ  ಹೊಸ ದಾಖಲೆ ಬರೆಯಿತು. ಇದರಿಂದ ಷೇರು ಹೂಡಿಕೆದಾರರಿಗೆ ಕೇವಲ 6 ದಿನಗಳಲ್ಲಿ ರೂ 2 ಲಕ್ಷ ಕೋಟಿಗಳಷ್ಟು ಲಾಭವಾಯಿತು. ಮಾರುಕಟ್ಟೆಯ ಒಟ್ಟು ಬಂಡವಾಳ ಮೌಲ್ಯವೂ ರೂ 51,19,729 ಕೋಟಿಗಳಷ್ಟಾಯಿತು.

2007: ವಿಶ್ವಾದ್ಯಂತ ಪ್ರಾಮಾಣಿಕತೆಗೆ ಸಂಬಂಧಿಸಿದ ಸಮೀಕ್ಷೆಯಲ್ಲಿ ಭಾರತ ಪ್ರಸಕ್ತ ವರ್ಷ 72 ನೇ ಸ್ಥಾನ ಪಡೆದಿದೆ ಎಂದು ಪಾರದರ್ಶಕತೆ ಕುರಿತ ಅಂತಾರಾಷ್ಟ್ರೀಯ ಸಮಿತಿ (ಟಿಐ) ಪ್ರಕಟಿಸಿತು. ಪ್ರಾಮಾಣಿಕತೆ ಪಟ್ಟಿಯಲ್ಲಿ 2006ರಲ್ಲಿ ಭಾರತ 70 ನೇ ಸ್ಥಾನದಲ್ಲಿ ಇತ್ತು. ಆದರೆ ಈ ವರ್ಷ ಶೇ 3.5 ರಷ್ಟು ಸುಧಾರಿಸಿದೆ ಎಂದು ಟಿಐ ವರದಿ ತಿಳಿಸಿತು. ಚೀನಾ, ಮೆಕ್ಸಿಕೊ, ಮೊರಾಕ್ಕೊ ಹಾಗೂ ಪೆರು ದೇಶಗಳೂ 72 ನೇ ಸ್ಥಾನ ಗಳಿಸಿವೆ. ಡೆನ್ಮಾರ್ಕ್, ಫಿನ್ಲ್ಯಾಂಡ್ ಹಾಗೂ ನ್ಯೂಜಿಲ್ಯಾಂಡ್ ದೇಶಗಳಲ್ಲಿ ಭ್ರಷ್ಟಾಚಾರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದೆ ಎಂದು ವರದಿ ಹೇಳಿತು.

2007: `ಒಸಾಮಾ ಬಿನ್ ಲಾಡೆನ್ ಕುರಿತಂತೆ ಇತ್ತೀಚೆಗೆ ಬಿಡುಗಡೆಯಾದ `ವೀಡಿಯೋದಲ್ಲಿದ್ದ ವ್ಯಕ್ತಿ ನನ್ನ ತಂದೆಯಲ್ಲ' ಎಂದು ಆತನ ನಾಲ್ಕನೇ ಪುತ್ರ ಒಮರ್ ಲಾಡೆನ್ ಲಂಡನ್ನಿನಲ್ಲಿ ಸ್ಪಷ್ಟಪಡಿಸಿದ. ಬ್ರಿಟನ್ನಿನಲ್ಲಿ ವಾಸವಾಗಿರುವ 27 ವರ್ಷದ ಒಮರ್ 51 ವರ್ಷದ ತನ್ನ ಬ್ರಿಟಿಷ್ ಪತ್ನಿ ಜೇನ್ ಫೆಲಿಕ್ಸ್ ಬ್ರೌನ್ ಗೆ ಈ ವಿಷಯ ತಿಳಿಸಿದ್ದಾನೆ ಎಂದು `ನ್ಯೂಸ್ ಆಫ್ ದಿ ವರ್ಲ್ಡ್' ಪತ್ರಿಕೆ ವರದಿ ಮಾಡಿತು. ವೀಡಿಯೋದಲ್ಲಿರುವ  ವ್ಯಕ್ತಿ ನನ್ನ ತಂದೆಯಲ್ಲ. ಆತ ನಕಲಿ ಲಾಡೆನ್ ಎಂದು ವೀಡಿಯೋವನ್ನು ಐದಾರು ಬಾರಿ ವೀಕ್ಷಿಸಿದ ಬಳಿಕ ಒಮರ್ ತಿಳಿಸಿರುವುದಾಗಿ ಪತ್ನಿ ಜೇನ್ ಫೆಲಿಕ್ಸ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿರುವುದಾಗಿ ವರದಿ ಹೇಳಿತು. ಒಮರನಿಂದ ತನಗೆ ಸೆಪ್ಟೆಂಬರ್ 15ರಂದು ವಿಚ್ಛೇದನ ದೊರೆತಿರುವುದಾಗಿ ಹೇಳಿರುವ ಜೇನ್, ಅಂದೇ ನಮ್ಮ ವಿವಾಹ ವಾರ್ಷಿಕೋತ್ಸವ ಇದ್ದುದು ದುರಂತ ಎಂದು ಪ್ರತಿಕ್ರಿಯಿಸಿರುವುದಾಗಿ ಪತ್ರಿಕೆ ಪ್ರಕಟಿಸಿದೆ.

2007: ಸಾಗರದಾಚೆಯ ಉದ್ದಿಮೆ ಸಂಸ್ಥೆಗಳ ಸ್ವಾಧೀನ ಪ್ರಕ್ರಿಯೆ ಮುಂದುವರಿಸಿದ ಬೆಂಗಳೂರು ಮೂಲದ ಮದ್ಯದ ದೊರೆ ವಿಜಯ್ ಮಲ್ಯ ಅವರು, ಅಮೆರಿಕದ ಜೆಟ್ ತಯಾರಿಕಾ ಖಾಸಗಿ ಸಂಸ್ಥೆ ಎಪಿಕ್ ನ ಶೇ. 50ರಷ್ಟು ಷೇರುಗಳನ್ನು ರೂ 480 ಕೋಟಿಗಳಿಗೆ ಖರೀದಿಸಿದರು. ಯುಬಿ ಗ್ರೂಪ್ ಮುಖ್ಯಸ್ಥರಾಗಿರುವ ವಿಜಯ್ ಮಲ್ಯ, ತಮ್ಮ ವೈಯಕ್ತಿಕ ಸಾಮರ್ಥ್ಯದ ಮೇಲೆ ಈ ಕಂಪೆನಿಯ ಶೇ 50 ರಷ್ಟು ಷೇರು ಖರೀದಿಸಿದರು.

2006: 2001ರ ಡಿಸೆಂಬರ್ 13ರಂದು ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ರೂವಾರಿ ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಬಾರಾಮುಲ್ಲಾ ನಿವಾಸಿ ಮೊಹಮ್ಮದ್ ಅಫ್ಜಲನನ್ನು ಅಕ್ಟೋಬರ್ 20ರಂದು  ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೆ ಏರಿಸಬೇಕು ಎಂದು ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಧೀಶರಾದ ರವೀಂದರ್ ಕೌರ್ ಆಜ್ಞಾಪಿಸಿದರು. ಕೌರ್ ಅವರು ದಾಳಿ ನಡೆದ ಸುಮಾರು ಐದು ವರ್ಷಗಳ ಬಳಿಕ ಮರಣದಂಡನೆ ಜಾರಿ ವಾರಂಟ್ ಹೊರಡಿಸಿದರು. 2002ರ ಡಿಸೆಂಬರ್ 18ರಂದು ವಿಶೇಷ ಪೋಟಾ ನ್ಯಾಯಾಲಯವು ಅಫ್ಜಲನಿಗೆ ಮರಣದಂಡನೆ ವಿಧಿಸಿತ್ತು. ದೆಹಲಿ ಹೈಕೋಟರ್್ ದೃಢಪಡಿಸಿದ್ದ ಈ ಮರಣದಂಡನೆ ಆದೇಶವನ್ನು ಸುಪ್ರೀಂಕೋರ್ಟ್ ಕೂಡಾ 2005ರ ಆಗಸ್ಟ್ 4ರಂದು ಎತ್ತಿ ಹಿಡಿದಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಅವರನ್ನು 1989ರ ಜನವರಿ 6ರಂದು ತಿಹಾರ್ ಸೆರೆಮನೆಯಲ್ಲಿ ಗಲ್ಲಿಗೇರಿಸಲಾಗಿತ್ತು. ಇಲ್ಲಿ ಜಾರಿಯಾಗಿದ್ದ ಕೊನೆಯ ಮರಣದಂಡನೆ ಪ್ರಕರಣ ಇದು.

2006: ಜಪಾನಿನ ನೂತನ ಪ್ರಧಾನ ಮಂತ್ರಿಯಾಗಿ ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ನಾಯಕ ಶಿಂಜೊ ಅಬೆ (52) ಆಯ್ಕೆಯಾದರು. ವಾರದ ಹಿಂದೆಯಷ್ಟೇ ಆಡಳಿತಾರೂಢ ಲಿಬರಲ್ ಡೆಮಾಕ್ರಾಟಿಕ್ ಪಕ್ಷದ ಅಧ್ಯಕ್ಷರಾಗಿ ಅವರು ಆಯ್ಕೆಯಾಗಿದ್ದರು. ಅಬೆ ಅವರು ಎರಡನೇ ವಿಶ್ವ ಸಮರದ ಬಳಿಕ ಜಪಾನಿನ ಪ್ರಧಾನಿ ಹುದ್ದೆಗೆ ಆಯ್ಕೆಯಾದ ಅತ್ಯಂತ ಕಿರಿಯ ವ್ಯಕ್ತಿಯಾಗಿದ್ದು ವಿಶ್ವ ಸಮರದ ಬಳಿಕ ಜನಿಸಿದವರು.

2006: ಅವಳಿ ಸಹೋದರಿಯರಾದ ಪ್ಯಾಟ್ ಗುಡಿನಾಸ್ ಮತ್ತು ಶಿರ್ಲೆ ಮೆಕ್ ಗುಯಿರಿ ತಾವು ಹುಟ್ಟಿದ 71 ವರ್ಷಗಳ ಬಳಿಕ ಮಿಲ್ ವೌಕಿಯಲ್ಲಿ ಮೊತ್ತ ಮೊದಲ ಬಾರಿಗೆ ಪರಸ್ಪರ ಭೇಟಿಯಾದರು. ಇದರೊಂದಿಗೆ ಪ್ಯಾಟ್ ಗುಡಿನಾಸ್ ಳ ಎಂಟು ವರ್ಷಗಳ ಯತ್ನ ಫಲಿಸಿತು. ಆಸ್ಟಿನಿನ ಟೆಕ್ಸಾಸ್ ಬಳಿ ವಾಸವಿದ್ದ ಶಿರ್ಲೆ ಸುದೀರ್ಘ ಕಾಲದ ಬಳಿಕ ಭೇಟಿಯಾದ ಪ್ಯಾಟ್ ಳನ್ನು ಅಪ್ಪಿಕೊಂಡು ಚುಂಬಿಸಿ `ಇಷ್ಟೊಂದು ವರ್ಷಗಳ ಕಾಲ ನಾನು ಈಕೆಯನ್ನು ಕಳೆದುಕೊಂಡು ಬಿಟ್ಟಿದ್ದ' ಎಂದು ಬಿಕ್ಕಳಿಸಿದಳು. ವಿವಾಹಿತ ಪುರುಷನೊಬ್ಬನಿಗೆ ಆಪ್ತಳಾಗಿದ್ದ ಮಹಿಳೆಗೆ ಈ ಇಬ್ಬರು ಅವಳಿ ಮಕ್ಕಳು ಜನಿಸಿದ್ದರು. ಇವರಿಬ್ಬರನ್ನೂ ಬೇರ್ಪಡಿಸಿ ಮಿಲ್ ವೌಕಿಯ ದಕ್ಷಿಣ ಭಾಗದ ಸೈಂಟ್ ಜೋಸೆಫ್ ಅನಾಥಾಲಯದಲ್ಲಿ ಪ್ರತ್ಯೇಕ ಪ್ರತ್ಯೇಕವಾಗಿ ಬೆಳೆಸಲಾಗಿತ್ತು. ಆ ಬಳಿಕ ಅವರನ್ನು ಬೇರೆ ಬೇರೆ ವ್ಯಕ್ತಿಗಳು ದತ್ತು ಪಡೆದು ಸಾಕಿದ್ದರು. ಬೆಳೆಯುವ ವೇಳೆಯಲ್ಲಿ ಅವರಿಗೆ ಅವರಿಬ್ಬರು ಅವಳಿಗಳು ಎಂದು ತಿಳಿಸಲಾಗಿತ್ತು. ಆದರೆ ಹೆಸರು ಗೊತ್ತಿರಲಿಲ್ಲ.

2006: ಲಂಡನ್ನಿನ ಜ್ಯಾಕ್ ನೀಲ್ ಎಂಬ ಮೂರು ವರ್ಷದ ಬಾಲಕನೊಬ್ಬ ತಾಯಿಯ ಕಂಪ್ಯೂಟರ್ ಬಳಸಿ ಇಂಟರ್ನೆಟ್ ಇಬೇ ಹರಾಜು ಸೈಟಿನ ಮೂಲಕ ನಡೆದ ಹರಾಜಿನಲ್ಲಿ 9000 ಪೌಂಡುಗಳಿಗೆ ಕಾರು ಖರೀದಿಸಿದ. ಪಿಂಕ್ ನಿಸ್ಸಾನ್ ಫಿಗರೊ ವೆಬ್ ಸೈಟಿನಿಂದ ಹರಾಜು ಗೆದ್ದುದಕ್ಕಾಗಿ ಅಭಿನಂದನೆಗಳ ಸಂದೇಶ ಬಂದಾಗ ಮೂರು ವರ್ಷದ ಪೋರ ಪುತ್ರನ ಪ್ರತಾಪ ತಂದೆ ತಾಯಿಯರ ಗಮನಕ್ಕೆ ಬಂತು. ಬಾಲಕನ ತಾಯಿ ಮಾರಾಟಗಾರನಿಗೆ ದೂರವಾಣಿ ಮೂಲಕ ಆದ ತಪ್ಪನ್ನು ವಿವರಿಸಿದಾಗ ಅದೃಷ್ಟವಶಾತ್ ಆತ ಮರು ಜಾಹೀರಾತು ನೀಡಲು ಒಪ್ಪಿಕೊಂಡ.

1991: ನಾಲ್ವರು ಪುರುಷರು ಮತ್ತು ನಾಲ್ವರು ಮಹಿಳೆಯರು ಅರಿಝೋನಾದ ಒರೇಕಲ್ಲಿನಲ್ಲಿ `ಬಯೋಸ್ಫಿಯರ್-2' ಹೆಸರಿನ ಕೋಶದೊಳಗೆ ಎರಡು ವರ್ಷಗಳ ವಾಸ ಆರಂಭಿಸಿದರು. ಕೃತಕ ಜೀವಗೋಲದಲ್ಲಿ ಬದುಕುವ ಬಗೆಯನ್ನು ತೋರಿಸುವ ಜೀವಂತ ಉದಾಹರಣೆಯನ್ನು ಒದಗಿಸುವುದು ಇದರು ಉದ್ದೇಶವಾಗಿತ್ತು.

1981: ಸುವಾದ ಸೌತ್ ಫೆಸಿಫಿಕ್ ವಿಶ್ವವಿದ್ಯಾನಿಲಯವು ಫಿಜಿ ರಾಷ್ಟ್ರೀಯ ಜಿಮ್ನಾಸಿಯಂ ಸಮಾರಂಭದಲ್ಲಿ ಭಾರತದ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಪುರಸ್ಕರಿಸಿತು.

1959: ಶ್ರೀಲಂಕಾ ಪ್ರಧಾನಿ ಸೋಲೋಮನ್ ಬಂಡಾರನಾಯಿಕೆ ಅವರು ಗುಂಡೇಟಿನ ಪರಿಣಾಮವಾಗಿ ಮೃತರಾದರು. ಹಿಂದಿನ ದಿನವಷ್ಟೇ ಸೋಲೋಮನ್ ಅವರ ಮೇಲೆ ಅತೃಪ್ತ ಬೌದ್ಧ ಬಿಕ್ಷು ತಲ್ದುವೆ ಸೊಮರಮ ಗುಂಡು ಹಾರಿಸಿದ್ದರು.

1950: ವಿಶ್ವಸಂಸ್ಥೆ ಪಡೆಗಳು ದಕ್ಷಿಣ ಕೊರಿಯಾದ ರಾಜಧಾನಿ ಸೋಲ್ ನ್ನು ಉತ್ತರ ಕೊರಿಯನ್ನರಿಂದ ಮರುವಶ ಪಡಿಸಿಕೊಂಡವು.

1931: ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿಜಯ್ ಮಾಂಜ್ರೇಕರ್ (1931-83) ಜನ್ಮದಿನ.

1928: ನಂಜೇಗೌಡ ಹಾರೋಹಳ್ಳಿ ಜನನ.

1926: ಸಾಹಿತಿ ಶ್ರೀನಿವಾಸ ತೋಫಖಾನೆ ಜನನ.

1924: ಮಹಾತ್ಮಾ ಗಾಂಧಿಯವರು ದೆಹಲಿಯಲ್ಲಿ `ದಿ ಹಿಂದುಸ್ತಾನ್ ಟೈಮ್ಸ್' ಪತ್ರಿಕೆಯನ್ನು ಉದ್ಘಾಟಿಸಿದರು. ಮಹಾತ್ಮಾ ಗಾಂಧಿಯವರು ಮಗ ದೇವದಾಸ್ ಗಾಂಧಿ ಅವರು 1937ರಿಂದ 1957ರವರೆಗೆ 20 ವರ್ಷಗಳ ಕಾಲ ಈ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದರು.

1923: ಭಾರತೀಯ ಚಿತ್ರನಟ, ನಿರ್ದೇಶಕ ದೇವ್ ಆನಂದ್ ಜನ್ಮದಿನ.

1904: ರಂಗಭೂಮಿಗೆ ಹೊಸ ದಿಕ್ಕು ತೋರಿದ ಶ್ರೀರಂಗ ಕಾವ್ಯನಾಮದ ರಂಗಾಚಾರ್ಯ ಅವರು ವಾಸುದೇವಾಚಾರ್ಯ- ರಮಾಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಅಗರಖೇಡದಲ್ಲಿ ಜನಿಸಿದರು.

1902: ಜೀನ್ಸ್ ಪ್ಯಾಂಟುಗಳ ಸಂಶೋಧಕ ಹಾಗೂ ಉತ್ಪಾದಕ ಬವೇರಿಯಾ ಮೂಲದ ಲೆವಿ ಸ್ಟ್ರಾಸ್ ತನ್ನ 73ನೇ ವಯಸಿನಲ್ಲಿ ಮೃತನಾದ. ಮೊದಲಿಗೆ ದೊರಗು ಕ್ಯಾನ್ವಾಸಿನಿಂದ ಟೆಂಟ್ ಹಾಗೂ ವ್ಯಾಗನ್ ಹೊದಿಕೆಗಳನ್ನು ಮಾಡುವ ಯೋಜನೆ ಹೊಂದಿದ್ದ ಈತ ಶ್ರಮದ ದುಡಿಮೆಗಾರರಿಗಾಗಿ ದೊರಗು ಕ್ಯಾನ್ವಾಸಿನಿಂದ ದೀರ್ಘಾವಧಿ ಬಾಳುವ ಪ್ಯಾಂಟುಗಳನ್ನು ಉತ್ಪಾದಿಸಿದರೆ ಹೆಚ್ಚಿನ ಮಾರುಕಟ್ಟೆ ದೊರೆಯಬಹುದೆಂಬ ಸುಳಿವು ಹತ್ತಿ ಅದನ್ನು ಜಾರಿಗೊಳಿಸಿದ. ಮಾರುಕಟ್ಟೆಗೆ ಬರುತ್ತಿದ್ದಂತೆಯೇ ಈತನ ಪ್ಯಾಂಟುಗಳು ಬಿಸಿ ಬಿಸಿಯಾಗಿ ಮಾರಾಟವಾದವು. ಲೆವಿ ಸ್ಟ್ರಾಸ್ ಫ್ಯಾಕ್ಟರಿ ತೆರೆದು ಈ ಪ್ಯಾಂಟುಗಳನ್ನು ಇನ್ನಷ್ಟು ಸುಧಾರಿಸಿದ. ಫ್ರಾನ್ಸಿನಲ್ಲಿ ದೊರಕುತ್ತಿದ್ದ ಜೀನ್ಸ್ ಎಂಬ ವಸ್ತುವನ್ನು ಅದಕ್ಕೆ ಬಳಸಿದ. ಇದರಿಂದಾಗಿ ಇವುಗಳಿಗೆ `ಜೀನ್ಸ್' ಎಂಬ ಹೆಸರು ಬಂತು.

1820: ಬಂಗಾಳಿ ಸಾಹಿತಿ ಈಶ್ವರಚಂದ್ರ ವಿದ್ಯಾಸಾಗರ್ (1820-91) ಜನ್ಮದಿನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment