Tuesday, September 18, 2018

ಇಂದಿನ ಇತಿಹಾಸ History Today ಸೆಪ್ಟೆಂಬರ್ 18

ಇಂದಿನ ಇತಿಹಾಸ History Today ಸೆಪ್ಟೆಂಬರ್  18
2018: ನವದೆಹಲಿ: ಕಾಂಗ್ರೆಸ್ ಅಥವಾ ಅದರ ನಾಯಕರು ಇಚ್ಛಿಸಿದ ರೀತಿಯಲ್ಲಿ ರಾಷ್ಟ್ರದಲ್ಲಿ ಚುನಾವಣೆಗಳನ್ನು ನಡೆಸಲು ಚುನಾವಣಾ ಆಯೋಗವು ಬದ್ಧವಾಗಿರಬೇಕಾಗಿಲ್ಲ ಎಂದು ಭಾರತದ ಚುನಾವಣಾ ಆಯೋಗವು ಸುಪ್ರೀಂಕೋರ್ಟಿಗೆ ತಿಳಿಸಿತು. ಕಾಂಗ್ರೆಸ್ ನಾಯಕ ಕಮಲ್ ನಾಥ್ ಅವರು ಸಲ್ಲಿಸಿದ ಅರ್ಜಿಯನ್ನು ವಿರೋಧಿಸಿದ ಚುನಾವಣಾ ಆಯೋಗವು, ತಾನು ಸಂವಿಧಾನಬದ್ಧ ಸಂಸ್ಥೆಯಾಗಿದ್ದು, ನಿಯಮಾವಳಿಗಳು ಕಾನೂನುಗಳಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕೇ ಹೊರತು ಯಾವುದೇ ಒಂದು ರಾಜಕೀಯ ಪಕ್ಷದಸೂಚನೆಗಳಿಗೆ ಅನುಗುಣವಾಗಿ ತಾಳ ಹಾಕಬೇಕಾಗಿಲ್ಲ ಎಂದು ಹೇಳಿತುಭಾರತದ ಚುನಾವಣಾ ಆಯೋಗವು ಕೈಗೊಂಡ ಕ್ರಮಗಳನ್ನು ಪ್ರಶ್ನಿಸುವುದು ಅರ್ಜಿದಾರರ ಮತ್ತು / ಅಥವಾ ಅವರ ಪಕ್ಷ, ಸಂಘಟನೆಯ ವ್ಯಾಪ್ತಿಯೊಳಕ್ಕೆ ಬರುವುದೂ ಇಲ್ಲ ಎಂದು ಆಯೋಗವು ಸುಪ್ರೀಂಕೋರ್ಟಿಗೆ ಸಲ್ಲಿಸಿದ ತನ್ನ ಪ್ರಮಾಣ ಪತ್ರದಲ್ಲಿ (ಅಫಿಡವಿತ್) ತಿಳಿಸಿತು.
ಕಮಲ್ ನಾಥ್ ಮತ್ತು ಅವರು ಪ್ರತಿನಿಧಿಸಿದ ಪಕ್ಷವು ಮತ್ತೆ ಮತ್ತೆ ಸುಪ್ರೀಂಕೋರ್ಟಿಗೆ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವಂತಿಲ್ಲ ಮತ್ತು ಚುನಾವಣಾ ಆಯೋಗದಂತಹ ಸಾಂವಿಧಾನಿಕ ಪ್ರಾಧಿಕಾರದ ಕಾರ್ ನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ ಎಂದು ಆಯೋಗ ಹೇಳಿತು. ‘ಕಮಲ್ ನಾಥ್ ಮತ್ತು ಅವರ ಪಕ್ಷವು ನಿರ್ದಿಷ್ಟವಾದ ರೀತಿಯಲ್ಲಿ (ವಿವಿಪ್ಯಾಟ್ ಅನುಷ್ಠಾನ ಸೇರಿದಂತೆ) ಚುನಾವಣೆಗಳನ್ನು ನಡೆಸುವಂತೆ ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರುವಂತಿಲ್ಲ ಎಂದೂ ಚುನಾವಣಾ ಆಯೋಗ ತಿಳಿಸಿತು. ಕಮಲ್ ನಾಥ್ ಅವರ ಅರ್ಜಿಯು ತಮ್ಮ ಮತ್ತು ತಮ್ಮ ಪಕ್ಷದ ವೈಯಕ್ತಿಕ ಇಚ್ಛೆಯಂತೆ ಚುನಾವಣಾ ಆಯೋಗವು ಚುನಾವಣೆಗಳನ್ನು ನಡೆಸುವಂತೆ ನಿರ್ದೇಶನ ನೀಡಲು ಕೋರಿರುವುದರಿಂದ ಅದು ದುರುದ್ದೇಶಪೂರಿತ ಅರ್ಜಿಯೂ ಆಗಿದೆ ಎಂದು ಆಯೋಗ ಆಪಾದಿಸಿತು. ಅರ್ಜಿದಾರರು ಮತ್ತು ಅವರು ಪ್ರತಿನಿಧಿಸಿರುವ ಪಕ್ಷ/ ಸಂಘಟನೆಯು ತಾವು ನೀಡಿದ ಎಲ್ಲ ಸಲಹೆಗಳನ್ನು ಅಂಗೀಕರಿಸುವಂತೆ ಚುನಾವಣೆಯ ಮೇಲೆ ಒತ್ತಡ ತರುವಂತಿಲ್ಲ ಎಂದೂ ಹೇಳಿರುವ ಪ್ರಮಾಣಪತ್ರವುಅರ್ಜಿಯನ್ನು ದಂಡ ಸಹಿತವಾಗಿ ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತು.  ‘ಚುನಾವಣಾ ಆಯೋಗಕ್ಕೆ ತನ್ನ ಪಾತ್ರ ಮತ್ತು ಕರ್ತವ್ಯಗಳ ಬಗ್ಗೆ ಅರಿವು ಇದೆ ಮತ್ತು ಅದಕ್ಕೆ ಅನುಗುಣವಾಗಿ ಈಗಾಗಲೇ ವಿದ್ಯುನ್ಮಾನ ಯಂತ್ರಗಳ (ಇವಿಎಂ) ದಾಸ್ತಾನು ಮತ್ತು ಸುರಕ್ಷತೆ, ವಿವಿಪ್ಯಾಟ್ಗಳ ಮುದ್ರಣ ಯಂತ್ರಗಳ ಅಣಕು ಪರೀಕ್ಷೆ, ಅಧಿಕಾರಿಗಳ ನಿಯೋಜನೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಎಲ್ಲ ಅಗತ್ಯ ಸೂಚನೆಗಳನ್ನೂ ನೀಡಿದೆ ಎಂದು ಆಯೋಗ ತಿಳಿಸಿತು. ದೊಡ್ಡ ಪ್ರಮಾಣದಲ್ಲಿ ವಿದ್ಯುನ್ಮಾನ ಯಂತ್ರಗಳ ಕೊರತೆಯಾಗಬಹುದು ಎಂಬ ಅರ್ಜಿದಾರರ ಭೀತಿ ತಪ್ಪು ಕಲ್ಪನೆ, ಅಸಮರ್ಥನೀಯ ಮತ್ತು ಅನಗತ್ಯ. ವಿವಿಪ್ಯಾಟ್ ಯಂತ್ರಗಳು ಒಂದು ನಿರ್ದಿಷ್ಟ ಪಕ್ಷದ ಪರವಾಗಿ ಮತಗಳು ಬೀಳುವಂತೆ ಮಾಡುತ್ತವೆ ಎಂಬ ಆರೋಪ ಸಂಪೂರ್ಣ ಸುಳ್ಳು. ಇದನ್ನೂ ಪ್ರಬಲವಾಗಿ ನಿರಾಕರಿಸಲಾಗುತ್ತದೆ ಎಂದು ಆಯೋಗ ತನ್ನ ಪ್ರಮಾಣಪತ್ರದಲ್ಲಿ ಹೇಳಿತು.
ಇದೇ ವಿಷಯಗಳ ಬಗ್ಗೆ ಸುಪ್ರೀಂಕೋರ್ಟ್ ಈಗಾಗಲೇ ಗುಜರಾತಿನ ಇನ್ನೊಬ್ಬ ಕಾಂಗ್ರೆಸ್ ನಾಯಕ ಸಲ್ಲಿಸಿದ್ದ ಇಂತಹುದೇ ಇನ್ನೊಂದು ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿತ್ತು. ಆದ್ದರಿಂದ ಪಕ್ಷ ಅಥವಾ ಅದರ ಸದಸ್ಯರು ಒಂದೇ ವಿಷಯವನ್ನು ಪ್ರತಿ ವಿಧಾನಸಭಾ ಚುನಾವಣೆ ಬರುವಾಗಲೂ ಕೆದಕುವುದಕ್ಕೆ ಯಾವುದೇ ಸಮರ್ಥನೆಯೂ ಇಲ್ಲ ಎಂದು ಚುನಾವಣಾ ಆಯೋಗ ತನ್ನ ಪ್ರಮಾಣಪತ್ರದಲ್ಲಿ ತಿಳಿಸಿತ್ತು. ಮಧ್ಯಪ್ರದೇಶದಲ್ಲಿ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಕಮಲ್ ನಾಥ್ ಅವರು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವಂತೆ ಕೋರಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

2018: ನವದೆಹಲಿ: ಕರ್ನಾಟಕದ ಪ್ರಭಾವೀ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ತೆರಿಗೆ ವಂಚನೆ ಮತ್ತು ಹವಾಲಾ ವರ್ಗಾವಣೆ ಆರೋಪದ ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿತು. ಶಿವಕುಮಾರ್, ನವದೆಹಲಿಯ ಕರ್ನಾಟಕ ಭವನದ ನೌಕರ ಹನುಮಂತಯ್ಯ ಮತ್ತು ಇತರರ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ಶೀಘ್ರದಲ್ಲೇ ಆರೋಪಿಗಳಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ಕಳುಹಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದವು. ಪ್ರಸ್ತುತ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಲಯ ಒಂದರಲ್ಲಿ ಶಿವಕುಮಾರ್ ವಿರುದ್ಧ ಆದಾಯ ತೆರಿಗೆ ಇಲಾಖೆಯು ದಾಖಲಿಸಿದ್ದ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಆಧಾರದಲ್ಲಿ ಜಾರಿ ನಿರ್ದೇಶನಾಲಯವು ಪ್ರಕರಣವನ್ನು ದಾಖಲಿಸಿದೆಆರೋಪಿಗಳಾದ ಶಿವಕುಮಾರ್ ಮತ್ತು ಅವರ ನಿಕಟವರ್ತಿ ಎಸ್.ಕೆ. ಶರ್ಮಾ ಅವರು ಬೃಹತ್ ಪ್ರಮಾಣದ ಲೆಕ್ಕವಿಲ್ಲದ ಹಣವನ್ನು ನಿಯಮಿತವಾಗಿ ಹವಾಲಾ ಜಾಲಗಳ ಮೂಲಕ ಇಬ್ಬರು ಅಥವಾ ಮೂವರು ಆರೋಪಿಗಳ ನೆರವಿನೊಂದಿಗೆ ಸಾಗಣೆ  ಮಾಡುತ್ತಿದ್ದರು ಎಂದು ಆದಾಯ ತೆರಿಗೆ ಇಲಾಖೆ ಆಪಾದಿಸಿತ್ತು. ವಾಸ್ತವಾಂಶಗಳು ಮತ್ತು ಸಾಕ್ಷ್ಯಾಧಾರಗಳ ವಿಶ್ಲೇಷಣೆಯಿಂದ ಒಂದನೇ ಆರೋಪಿಯು (ಶಿವಕುಮಾರ್) ದೆಹಲಿ ಮತ್ತು ಬೆಂಗಳೂರಿನ ಆವರಣಗಳಲ್ಲಿ ಲೆಕ್ಕವಿಲ್ಲದ ನಗದು ಹಣದ ಸಾಗಣೆ ಮತ್ತು ಬಳಕೆಗೆ ವ್ಯಕ್ತಿಗಳ ವಿಸ್ತೃತ ಜಾಲವನ್ನೇ ನಿರ್ಮಿಸಿದ್ದಾರೆಂದು ಕಂಡು ಬಂದಿತು ಎಂದು ಇಲಾಖೆ ಹೇಳಿತ್ತು.  ಸಚಿನ್ ನಾರಾಯಣ್, ಆಂಜನೇಯ ಹನುಮಂತಯ್ಯ ಮತ್ತು ಎನ್ ರಾಜೇಂದ್ರ ಅವರು ಪ್ರಕರಣದ ಇತರ ಆರೋಪಿಗಳು ಎಂದು ಇಲಾಖೆ ತಿಳಿಸಿತ್ತು. ಆದಾಯ ತೆರಿಗೆ ಇಲಾಖೆಯ ಪ್ರಕಾರ ನಾರಾಯಣ್ ಅವರು ಶಿವಕುಮಾರ್ ಅವರ ವ್ಯವಹಾರದ ಪಾಲುದಾರರಾಗಿದ್ದು, ಶರ್ಮಾ ಅವರು ಐಷಾರಾಮೀ ಮತ್ತು ಪ್ರಯಾಣಿಕ ಬಸ್ಸು ಸೇವೆ ಕಲ್ಪಿಸುವ ಶರ್ಮಾ ಟ್ರಾನ್ಸ್ ಪೋರ್ಟ್ಸ ಮಾಲೀಕರಾಗಿದ್ದು ವಿವಿಧ ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಬಾಡಿಗೆ ನೆಲೆಯಲ್ಲಿ ಸಾಗಣೆ ಸೇವೆಗಳನ್ನು ಕಲ್ಪಿಸುತ್ತಾರೆ. ಕರ್ನಾಟಕ ಭವನದಲ್ಲಿ ನೌಕರನಾಗಿರುವ ಹನುಮಂತಯ್ಯ ದೆಹಲಿಯಲ್ಲಿ ಶಿವಕುಮಾರ್ ಅವರ ಲೆಕ್ಕವಿಲ್ಲದ ಹಣವನ್ನು ಸಂಗ್ರಹಿಸಿ ಇಡುವ ಮತ್ತು ನಿಭಾಯಿಸುವ ಹೊಣೆಗಾರಿಕೆ ಹೊತ್ತಿದ್ದುದಾಗಿ ಇಲಾಖೆ ತನ್ನ ದೂರಿನಲ್ಲಿ ತಿಳಿಸಿತ್ತುರಾಜೇಂದ್ರ ಅವರು ಕರ್ನಾಟಕ ಭವನದಲ್ಲಿ ಶರ್ಮಾ ಅವರ ಕೆಲಸಗಳ ಉಸ್ತುವಾರಿ ನೋಡುಕೊಳ್ಳುವ ವ್ಯಕ್ತಿಯಾಗಿದ್ದು, ಶಿವಕುಮಾರ ಮತ್ತು ಶರ್ಮಾ ಅವರ ಸ್ಥಿರ ಆಸ್ತಿಗಳ ನಿರ್ವಾಹಕ ಕೂಡಾ ಎಂದು ಇಲಾಖೆ ಹೇಳಿತ್ತು. ಐವರು ಆರೋಪಿಗಳು ಒಟ್ಟಾಗಿ ತೆರಿಗೆ ವಂಚನೆಗೆ ಸಂಚು ಹೆಣೆದಿದ್ದರು ಎಂದೂ ಆದಾಯ ತೆರಿಗೆ ಇಲಾಖೆ ಆಪಾದಿಸಿತ್ತು.
ಸಾಕ್ಷ್ಯಾಧಾರಗಳ ವಿಶ್ಲೇಷಣೆಯಿಂದ ಸಚಿವರು ಲೆಕ್ಕ ಇಡದ ಹಣದ ಸಾಗಣೆ ಮತ್ತು ಬಳಕೆ ಸಲುವಾಗಿ ದೆಹಲಿ ಮತ್ತು ಬೆಂಗಳೂರಿನ ಆವರಣಗಳಲ್ಲಿ ವ್ಯಕ್ತಿಗಳ ವಿಸ್ತೃತ ಜಾಲವನ್ನು ನಿರ್ಮಿಸಿದ್ದರು ಎಂಬುದು ಕಂಡು ಬರುತ್ತದೆ ಎಂದು ಅದು ಆಪಾದಿಸಿತ್ತು. ಅವರು ಸಂಘಟಿತವಾಗಿ ತೆರಿಗೆ ವಂಚಿಸುವ ಮತ್ತು ಇತರರನ್ನು ಇದರಲ್ಲಿ ಶಾಮೀಲುಗೊಳಿಸುವ ಸಂಚಿನ ಭಾಗವಾಗಿದ್ದರು ಎಂದು ಇಲಾಖೆ ಹೇಳಿತ್ತು. ನವದೆಹಲಿ ಮತ್ತು ಬೆಂಗಳೂರಿನಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ನಡೆಸಲಾಗಿದ್ದ ದಾಳಿ ಕಾಲದಲ್ಲಿ ಸುಮಾರು ೨೦ ಕೋಟಿ ರೂಪಾಯಿ ಮೌಲ್ಯದ ಲೆಕ್ಕವಿಲ್ಲದ ನಗದು ಹಣ ಪತ್ತೆಯಾಗಿದ್ದು ಇದು ನೇರವಾಗಿ ಶಿವಕುಮಾರ್ ಅವರಿಗೆ ಸಂಬಂಧಿಸಿದ್ದಾಗಿತ್ತು ಎಂದು ಅದು ತಿಳಿಸಿತ್ತು. ಆದಾಯ ತೆರಿಗೆ ಇಲಾಖೆಯು ತಮ್ಮನ್ನು ಗುರಿಯಾಗಿಟ್ಟಿದೆ ಎಂದು ತಮಗೆ ಉಸಿರಾಡಲೂ ಬಿಡುತ್ತಿಲ್ಲ ಎಂದು ಶಿವಕುಮಾರ್  ಆಪಾದಿಸಿದ್ದರು. ಆದರೆ ತಾವು ಕಾನೂನುಬದ್ಧವಾಗಿ ಹೋರಾಟ ನಡೆಸುವುದಾಗಿ ಅವರು ಹೇಳಿದ್ದರು. ಕೆಲ ಸಮಯದ ಹಿಂದೆ ವಿಶೇಷ ನ್ಯಾಯಾಲಯವು ಶಿವಕುಮಾರ್ ಅವರಿಗೆ ಷರತ್ತಿನ ಜಾಮೀನು ಮಂಜೂರು ಮಾಡಿ, ಪ್ರಕರಣದ ಮುಂದಿನ ವಿಚಾರಣೆಗೆ ಸೆಪ್ಟೆಂಬರ್ ೨೦ರ ದಿನಾಂಕವನ್ನು ನಿಗದಿ ಪಡಿಸಿತ್ತು. ಕಳೆದ ವರ್ಷ ರಾಜ್ಯಸಭಾ ಚುನಾವಣೆಗಳ ಕಾಲದಲ್ಲಿ ಬಿಜೆಪಿಯ ಬೇಟೆಯಾಡಲು ಯತ್ನಿಸುತ್ತಿದೆ ಎಂಬ ಆರೋಪಗಳ ಮಧ್ಯೆ ಗುಜರಾತ್ ಕಾಂಗ್ರೆಸ್ ಶಾಸಕರು ಕರ್ನಾಟಕಕ್ಕೆ ದೌಡಾಯಿಸಿದ್ದಾಗ, ಅವರಿಗೆ ಕರ್ನಾಟದ ರೆಸಾರ್ಟ್ಗಳಲ್ಲಿ ಸುರಕ್ಷಿತ ವಾಸ್ತವ್ಯಕ್ಕೆ ನೆಲೆ ಕಲ್ಪಿಸುವಲ್ಲಿ ಶಿವ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.

2018: ಬೆಂಗಳೂರು: ಜಾರಕಿಹೊಳಿ ಸಹೋದರರ ಬಂಡಾಯವು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಂಧಾನದಿಂದ ಶಮನಗೊಂಡಿದೆ. ನಾಲ್ಕು ತಿಂಗಳುಗಳ ಸರ್ಕಾರವನ್ನು ಸರಣಿ ಪಕ್ಷಾಂತರಗಳ ಮೂಲಕ ಉರುಳಿಸಲು ವಿರೋಧಿ ಬಿಜೆಪಿ ನಡೆಸಿದ ಪ್ರಯತ್ನಗಳ ಹೊರತಾಗಿಯೂ ತಮ್ಮ ಸರ್ಕಾರ ಸುರಕ್ಷಿತವಾಗಿದೆ ಎಂದು ಆಡಳಿತಾರೂಢ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ಪ್ರತಿಪಾದಿಸಿದ್ದರೂ, ’ಇದು ತಾತ್ಕಾಲಿಕ ಮಾತ್ರ ಎಂದು ಕಾಂಗ್ರೆಸ್ ಪಕ್ಷದ ಆಂತರಿಕ ಮೂಲಗಳು ಹೇಳಿದವು. ಬಿಜೆಪಿಯು ತನ್ನ ಎಲ್ಲ ಶಾಸಕರನ್ನೂ ರಾಜಧಾನಿಗೆ ಬರುವಂತೆ ಕರೆ ನೀಡಿರುವುದು, ಆಡಳಿತ ಪಕ್ಷದಲ್ಲಿ ಕೆಲವರು ಬಂಡಾಯ ಏಳುವರೆಂಬ ವದಂತಿಗಳಿಗೆ ಇಂಬು ನೀಡಿದವು. ಈ ಮಧ್ಯೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಕಾಂಗ್ರೆಸ್ಸಿನ ಪ್ರಭಾವಶಾಲಿ ಸಚಿವರಾದ ಜಾರಕಿಹೊಳಿ ಸಹೋದರರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸುಮಾರು ಒಂದು ಗಂಟೆಯ ಸುದೀರ್ಘ ಮಾತುಕತೆಯ ಬಳಿಕ ಜಾರಕಿಹೊಳಿ ಸಹೋದರರು ಕುಮಾರ ಸ್ವಾಮಿ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿದರು ಮತ್ತು ತಾವು ಬಿಜೆಪಿಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರುರಾಜ್ಯ ಸರ್ಕಾರದಲ್ಲಿ ಸಚಿವರಾಗಿರುವ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಉನ್ನತ ನಾಯಕತ್ವದ ಜೊತೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮೂಲಕ ಸಂಪರ್ಕ ಹೊಂದಿದ್ದಾರೆ ಎಂದು ವರದಿಗಳು ಹೇಳಿದ್ದವು. ಅವರ ಸಹೋದರ ಸತೀಶ್ ಜಾರಕಿಹೊಳಿ ಅವರು ಏಐಸಿಸಿ ಕಾರ್ಯದರ್ಶಿಯಾಗಿದ್ದು ಮಾಜಿ ಸಚಿವರೂ ಆಗಿದ್ದಾರೆ. ಜಾರಕಿಹೊಳಿ ಸಹೋದರರು ಕನಿಷ್ಠ ೧೦-೧೨ ಶಾಸಕರ ಬೆಂಬಲ ಹೊಂದಿದ್ದು, ಅವರೆಲ್ಲರೂ ಪಕ್ಷ ಬದಲಿಸಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ಹೇಳಿದ್ದವು. ಆದರೆ ಸತೀಶ್ ಜಾರಕಿಹೊಳಿ ಅವರು ಸೈದ್ಧಾಂತಿಕವಾಗಿ ಬಿಜೆಪಿಗೆ ವಿರುದ್ಧವಾಗಿದ್ದು ಪಕ್ಷ ಬದಲಿಸುವ ಸಾಧ್ಯತೆಗಳು ಇಲ್ಲ ಎಂದು ಸತೀಶ್ ಜಾರಕಿಹೊಳಿ ಅವರ ಆಪ್ತ ಮೂಲಗಳು ಪ್ರತಿಪಾದಿಸಿದವು.
ರಾಹುಲ್ ಗಾಂಧಿ ಬುಲಾವ್: ’ಸತೀಶ್ ಅವರಿಗೆ ನವದೆಹಲಿಗೆ ಬರುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕರೆ ಕಳುಹಿಸಿದ್ದಾರೆ. ರಾಹುಲ್ ಗಾಂಧಿಯವರು ಅವರ ಮನವೊಲಿಸಲು ಯಶಸ್ವಿಯಾದರೆ ಸರ್ಕಾರವು ಬೀಳುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಹೇಳಿದರು. ಪಕ್ಷದ ಶಾಸಕರನ್ನು ಒಟ್ಟಾಗಿ ಇರಿಸಿಕೊಳ್ಳುವಂತೆ ಪಕ್ಷದ ವರಿಷ್ಠ ಮಂಡಳಿಯಿಂದ ಸೂಚನೆ ಪಡೆದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ಈದಿನ ಜಾರಕಿಹೊಳಿ ಸಹೋದರರನ್ನು ಭೇಟಿ ಮಾಡಿದ್ದರು. ಏನಿದ್ದರೂ ಪಕ್ಷದ ಒಳಗಿನ ಮೂಲಗಳ ಪ್ರಕಾರಎಲ್ಲವೂ ಚೆನ್ನಾಗಿಲ್ಲ, ಏನಿದ್ದರೂ ಇದು ತಾತ್ಕಾಲಿಕ ಶಾಂತಿ ಅಷ್ಟೆ.ಸರ್ಕಾರವನ್ನು ಉಳಿಸುವ ತುರ್ತು ವ್ಯೂಹ ರಚಿಸುವ ಸಲುವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ಉನ್ನತ ನಾಯಕರನ್ನು ದೆಹಲಿಗೆ ಬರುವಂತೆ ಸೂಚಿಸಿದ್ದಾರೆ ಪಕ್ಷದ ಪ್ರಭಾವೀ ನಾಯಕ, ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರ ವಿರುದ್ಧ ಜಾರಿ ನಿರ್ದೇಶನಾಲಯವು (ಇಡಿ) ಹಣ ವರ್ಗಾವಣೆ ಪ್ರಕರಣ ದಾಖಲಿಸಿಕೊಂಡಿರುವುದೂ ಕಾಂಗ್ರೆಸ್ ವಲಯದಲ್ಲಿ ಎಚ್ಚರಿಕೆಯ ಗಂಟೆಗಳನ್ನು ಭಾರಿಸಿತು.. ಜಾರಕಿಹೊಳಿ ಸಹೋದರರು ಬೆಳಗಾವಿ ಜಿಲ್ಲೆಯ ರಾಜಕೀಯದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪವನ್ನು ವಿರೋಧಿಸುತ್ತಿದ್ದು, ಕಾಂಗ್ರೆಸ್ ನಾಯಕರು ಮುಂದಕ್ಕೆ ಪರಿಸ್ಥಿತಿಯನ್ನು ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಯಿತು. ಕೇಂದ್ರದ ಬಿಜೆಪಿ ಸರ್ಕಾರವು ಕಾಂಗ್ರೆಸ್ ನಾಯಕರ ವಿರುದ್ಧ ತನಿಖಾ ಸಂಸ್ಥೆಗಳನ್ನು ಅಕ್ರಮ ಹಾಗೂ ಅಸಾಂವಿಧಾನಿಕ ಮಾರ್ಗಗಳ ಮೂಲಕ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಪಕ್ಷ ನಾಯಕರು ಪ್ರತಿಪಾದಿಸಿದ್ದರು. ಆಪಾದನೆಗಳಿಗೆ ಬಿಜೆಪಿ ನಕಾರ: ಆದರೆ ಬಿಜೆಪಿಯ ಕಾಂಗ್ರೆಸ್ ಆಪಾದನೆಗಳನ್ನು ತಿರಸ್ಕರಿಸಿತು. ಸಮ್ಮಿಶ್ರ ಸರ್ಕಾರವು ಶೀಘ್ರದಲ್ಲೇ ತಾನಾಗಿಯೇ ಬಿದ್ದು ಮಣ್ಣು ಮುಕ್ಕುತ್ತದೆ ಎಂದು ಅದು ಪ್ರತಿಪಾದಿಸಿತು. ಕುಮಾರ ಸ್ವಾಮಿ ಸರ್ಕಾರವನ್ನು ಉರುಳಿಸಲು ಪಕ್ಷವು ಸಂಚು ರೂಪಿಸಿದೆ ಎಂಬ ಆಪಾದನೆಗಳನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್. ಯಡಿಯೂರಪ್ಪ ಅವರು ನಿರಾಕರಿಸಿದರು. ಬಿಜೆಪಿಯ ಎಲ್ಲ ೧೦೪ ಮಂದಿ ಶಾಸಕರು  ಬೆಂಗಳೂರಿಗೆ ಬರುತ್ತಿರುವುದು ಮುಂಬರುವ ಲೋಕಸಭಾಚುನಾವಣೆಗಾಗಿ ಪಕ್ಷದ ವ್ಯೂಹವನ್ನು ರಚಿಸುವುದಕ್ಕಾಗಿ ಎಂದು ನುಡಿದ ಯಡಿಯೂರಪ್ಪ ತಮಗೆಕುದುರೆ ವ್ಯಾಪಾರದಲ್ಲಿ ಆಸಕ್ತಿ ಇಲ್ಲ ಎಂದು ಹೇಳಿದರುಕೆಲವು ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿಯು ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡುತ್ತಿದೆ ಎಂಬ ವರದಿಗಳಿಂದ ಚಿಂತಿತವಾದ ಜನತಾದಳ-ಕಾಂಗ್ರೆಸ್ ಮೈತ್ರಿಕೂಟವು ಯಾವುದೇ ಬಂಡಾಯವಾಗದಂತೆ ತಡೆಯಲು ಸರಣಿ ಸಭೆಗಳನ್ನು ನಡೆಸಿತು. ಎರಡು ವಾರಗಳ ಯುರೋಪ್ ಪ್ರವಾಸದಿಂದ ವಾಪಸಾಗಿರುವ ಸಿದ್ದರಾಮಯ್ಯ ಅವರು ಜೆಡಿಎಸ್ ನೇತೃತ್ವದ ಸರ್ಕಾರದ ಬಗ್ಗೆ ಅಸಮಾಧಾನಗೊಂಡಿದ್ದಾರೆ ಎನ್ನಲಾದ ಪಕ್ಷ ಶಾಸಕರ ಜೊತೆಗೆ ಸರಣಿ ಸಭೆಗಳನ್ನು ನಡೆಸಿದರು. ಸಿದ್ದರಾಮಯ್ಯ ಅವರು ಅತೃಪ್ತ ಶಾಸಕರನ್ನು ಸಮಾಧಾನಗೊಳಿಸಿದರು ಮತ್ತು ಬಿಜೆಪಿಯ ಹಣ ಮತ್ತು ಅಧಿಕಾರದ ಆಮಿಷಕ್ಕೆ ಬಲಿಯಾಗಬೇಡಿ ಎಂದು ಅವರಿಗೆ ಸೂಚಿಸಿದರು ಎಂದು ಪಕ್ಷದ ಮೂಲಗಳು ಹೇಳಿದವು. ಪಕ್ಷದ ಪರಿಸ್ಥಿತಿಯನ್ನು ಅಂದಾಜು ಮಾಡುವ ಸಲುವಾಗಿ ಸಿದ್ದರಾಮಯ್ಯ ಅವರು ಹಲವಾರು ಸರಣಿ ಸಭೆಗಳನ್ನು ನಡೆಸಿದ್ದರು. ಕರ್ನಾಟಕದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆ.ಸಿ. ವೇಣುಗೋಪಾಲ್ ಅವರೂ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಜೊತೆಗೆ ಪಕ್ಷದ ಸದಸ್ಯರ ಸಂಭಾವ್ಯ ಬೇಟೆ ತಡೆಯುವ ತಂತ್ರದ ಬಗ್ಗೆ ಚರ್ಚಿಸಿದರು. ಹಾಲಿ ಸರ್ಕಾರವನ್ನು ಉರುಳಿಸಿ, ತನ್ನದೇ ಸರ್ಕಾರ ರಚನೆಗೆ ಬಿಜೆಪಿ ಹತಾಶ ಯತ್ನಗಳನ್ನು ನಡೆಸುತ್ತಿದೆ. ಜೆಡಿ(ಎಸ್) ಮತ್ತು ಕಾಂಗ್ರೆಸ್ಸಿಗೆ ಇದರ ಪೂರ್ಣ ಅರಿವು ಇದೆ ಎಂದು ಅವರು ಹೇಳಿದರು. ಸ್ಥಳೀಯ ನಗರಾಡಳಿತ ಸಂಸ್ಥೆಗಳ ಚುನಾವಣೆಗಳಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ. ಇದು ಕೇಂದ್ರದಲ್ಲಿರುವ ಬಿಜೆಪಿಗೆ ಭಾರಿ ಚಿಂತೆಯನ್ನು ಉಂಟು ಮಾಡಿದೆ. ಲೋಕಸಭಾ ಚುನಾವಣೆಯವರೆಗೂ ನಾವು ಅಧಿಕಾರದಲ್ಲಿ ಮುಂದುವರೆದರೆ ಬಿಜೆಪಿಯು ಕರ್ನಾಟಕದಲ್ಲಿ ಒಂದಂಕಿಗೆ ಇಳಿಯುತ್ತದೆ. ಕಾರಣದಿಂದಲೇ ನಮ್ಮ ಶಾಸಕರಿಗೆ ಹಣ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿ ಅವರು ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿದ್ದಾರೆ. ಆದರೆ ನಾವು ಒಗ್ಗಟ್ಟಿನಿಂದ ಇದ್ದೇವೆ. ಬಿಜೆಪಿ ತನ್ನ ಯತ್ನದಲ್ಲಿ ಯಶಸ್ವಿಯಾಗದು. ಮಾಧ್ಯಮಗಳು ಸರ್ಕಾರ ಪತನದ ಕಾಲ್ಪನಿಕ ಕಥೆಗಳನ್ನು ಕಟ್ಟುತ್ತಿವೆ ಅಷ್ಟೆ ಎಂದು ಸಿದ್ದರಾಮಯ್ಯ ನುಡಿದರು. ಕಾಂಗ್ರೆಸ್ ಮತ್ತು ಜೆಡಿಎಸ್ನ ೧೫ ಮಂದಿ ಶಾಸಕರನ್ನು ಸೆಳೆಯುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ. ಇದರಿಂದ ರಾಜ್ಯ ವಿಧಾನಸಭೆಯ ಬಲ ೨೨೨ರಿಂದ ೨೦೭ಕ್ಕೆ ಇಳಿಯುತ್ತದೆ. ನಮ್ಮ - ಮಂದಿ ಶಾಸಕರ ಮನವೊಲಿಸುವಲ್ಲೂ ಅವರು ಸಫಲರಾಗಿದ್ದರು. ಆದರೆ ಗುರಿ ಮುಟ್ಟಲು ಅವರಿಗೆ ಕಷ್ಟವಾಗುತ್ತಿದೆ ಎಂದು ಮುಖ್ಯಮಂತ್ರಿಯವರ ನಿಕಟವರ್ತಿಯೊಬ್ಬರು ಹೇಳಿದರು. ಹಿರಿಯ ಜೆಡಿ(ಎಸ್) ಶಾಸಕ ಎಚ್.ಕೆ. ಕುಮಾರ ಸ್ವಾಮಿ ಅವರ ಪತ್ನಿ ಚಂಚಲ ಅವರೂ ಇಬ್ಬರು ಬಿಜೆಪಿ ನಾಯಕರು ತಮ್ಮ ಪತಿಗೆ ೩೦ ಕೋಟಿ ರೂಪಾಯಿ ಮತ್ತು ಸಚಿವ ಸ್ಥಾನದ ಆಮಿಷ ಒಡ್ಡಿರುವುದಾಗಿ ಹೇಳುವ ಮೂಲಕ ಬಾಂಬ್ ಹಾಕಿದ್ದರು. ಆದರೆ ಅವರು ನಿರಾಕರಿಸಿದ್ದಾರೆ ಎಂದು ಅವರು ಹೇಳಿದ್ದರು. ಇನ್ನೊಬ್ಬ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಅವರೂ ಬಿಜೆಪಿ ವಿರುದ್ಧ ಇಂತಹುದೇ ಆಪಾದನೆಗಳನ್ನು ಮಾಡಿದ್ದರು. ಬಿಜೆಪಿಯ - ಶಾಸಕರು ತಮ್ಮ ಸಂಪರ್ಕದಲ್ಲಿ ಇದ್ದಾರೆ ಎಂಬುದಾಗಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಎದಿರೇಟು ನೀಡಿದ ಬಳಿಕ ಬಿಜೆಪಿ ಕೂಡಾ ತನ್ನ ಶಾಸಕರನ್ನು ರೆಸಾರ್ಟ್ಗಳಿಗೆ ಒಯ್ಯಲು ಯೋಜಿಸುತ್ತಿದೆ ಎಂದು ವರದಿಗಳು ಹೇಳಿವೆ. ಆದರೆ ಬಿಜೆಪಿ ಶಾಸಕರು ರಾಜೀನಾಮೆ ನೀಡುವ ವರದಿಗಳನ್ನು ರಾಜ್ಯ ಬಿಜೆಪಿ ವಕ್ತಾರ ಎಸ್. ಪ್ರಕಾಶ್ ತಳ್ಳಿಹಾಕಿದರು. ಜೆಡಿ(ಎಸ್)-ಕಾಂಗ್ರೆಸ್ ಸರ್ಕಾರವು ತನ್ನ ಕೊನೆಯ ಕ್ಷಣಗಳನ್ನು ಎಣಿಸುತ್ತಿದೆ. ಸರ್ಕಾರವನ್ನು ಉರುಳಿಸಲು ಬಿಜೆಪಿಯು ಯಾವುದೇ ಪ್ರಯತ್ನಗಳಿಲ್ಲದೆಯೇ ಅದು ಪತನಗೊಳ್ಳಲಿದೆ ಎಂದು ಯಡಿಯೂರಪ್ಪ ಹೇಳಿದರು..
೨೨೪ ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ೭೯, ಜನತಾದಳ (ಎಸ್) ೩೮, ಸರ್ಕಾರವನ್ನು ಬೆಂಬಲಿಸುವ ಪಕ್ಷೇತರರು ಇಬ್ಬರು ಇದ್ದಾರೆ. ಬಿಜೆಪಿ ೧೦೪ ಸದಸ್ಯರನ್ನು ಹೊಂದಿದ್ದು, ಎರಡು ಸ್ಥಾನಗಳು ಖಾಲಿಯಾಗಿವೆ.

2018: ಪಣಜಿ: ಕಾಂಗ್ರೆಸ್ ನಾಯಕರು ಗೋವಾ ರಾಜ್ಯಪಾಲರಾದ ಮೃದುಲಾ ಸಿನ್ಹ ಅವರನ್ನೂ ಭೇಟಿ ಮಾಡಿ ರಾಜ್ಯ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ಸೂಚಿಸಬೇಕು ಎಂದು ಆಗ್ರಹಿಸಿದರು.
೬೨ರ ಹರೆಯದ ಪರಿಕ್ಕರ್ ಅವರು ಅಸ್ವಸ್ಥರಾಗಿರುವುದರಿಂದ ಗೊವಾದಲ್ಲಿ ಆಡಳಿತವು ಸ್ಥಗಿತಗೊಂಡಿದೆ ಎಂದು ಕಾಂಗ್ರೆಸ್ ಆಪಾದಿಸಿತು. ಪರಿಕ್ಕರ್ ಅವರು ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಜೆಪಿಯ ಪರಿಕ್ಕರ್ ಅವರ ಸ್ಥಾನಕ್ಕೆ ಸರ್ವಾನುಮತದ ಅಭ್ಯರ್ಥಿಯ ಹೆಸರನ್ನು ಸೂಚಿಸಲು ಅಸಮರ್ಥವಾಗಿರುವುದರಿಂದ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ ಎಂದು ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಚೋಡಂಕರ್ ಅವರು ಇದಕ್ಕೆ ಮುನ್ನ ಹೇಳಿದ್ದರು. ವಾಸ್ತವವಾಗಿ ಅಲ್ಪಮತಕ್ಕೆ ಇಳಿದಿರುವ ಸರ್ಕಾರವನ್ನು ರಾಜ್ಯಪಾಲರು ವಜಾಗೊಳಿಸಬೇಕು. ಈಗಲಾದರೂ ಏಕೈಕ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ಸಿಗೆ ಸರ್ಕಾರ ರಚಿಸಲು ಆಹ್ವಾನ ನೀಡಬೇಕು. ಸದನದಲ್ಲಿ ಬಹುಮತ ಸಾಬೀತು ಪಡಿಸುವ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ವಿಶ್ವಾಸ ಇದೆ ಎಂದು ಅವರು ಹೇಳಿದ್ದರು.

2018: ನವದೆಹಲಿ: ರಫೇಲ್ ಯುದ್ಧ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದಂತೆ ವಿಪಕ್ಷಗಳು ತಮ್ಮ ದಾಳಿಯನ್ನು ಇನ್ನೂ ಮುಂದುವರೆಸಿರುವಂತೆಯೇ ಅವರ ವಿರುದ್ಧ ಇಲ್ಲಿ ಹರಿಹಾಯ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ’ವಿದೇಶೀ ಕಂಪೆನಿ ಜೊತೆಗೆ ವ್ಯವಹರಿಸುವ ನಿಯಮವನ್ನು ಮಾಡಿದ್ದು ನಾವಲ್ಲ ಸ್ವಾಮಿ, ನೀವೇ ಎಂದು ಕಾಂಗ್ರೆಸ್ ಪಕ್ಷಕ್ಕೆ ಎದಿರೇಟು ನೀಡಿದರು. ಒಬ್ಬ ಉದ್ಯಮಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಎನ್ ಡಿಎ ಸರ್ಕಾರವು ಗುತ್ತಿಗೆಯನ್ನು ಬದಲಾಯಿಸಿ, ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ಹಿತಾಸಕ್ತಿಯನ್ನು ಬಲಿ ಕೊಟ್ಟಿದೆ ಎಂದು ಕಾಂಗ್ರೆಸ್ ಆಪಾದಿಸುತ್ತಿರುವುದನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಪಕ್ಷದ ಆಪಾದನೆಯನ್ನು ತಳ್ಳಿಹಾಕಿದ ಸೀತಾರಾಮನ್ ಅವರುವಾಸ್ತವಾಂಶ ಏನೆಂದರೆ ಖಾಸಗಿ ಕಂಪೆನಿಗಳು ಸೇರಿದಂತೆ ವಿದೇಶೀ ಕಂಪೆನಿಗಳ ಜೊತೆ ವ್ಯವಹಾರ ನಡೆಸಲು ಅನುಮತಿ ನೀಡಿ ನಿಯಮಾವಳಿಗಳನ್ನು ರೂಪಿಸಿದ್ದು ಹಿಂದಿನ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವೇ ಎಂದು ಹೇಳಿದರುನೀವು ರೂಪಿಸಿದ ನಿಯಮಾವಳಿಗಳು ತಪ್ಪು ಎಂದು ನೀವು ಹೇಳುತ್ತಿದ್ದೀರಾ? ಅದು ನಿಮ್ಮದೇ ನಿಯಮಾವಳಿ ಎಂದು ಭಾರತೀಯ ಮಹಿಳಾ ಪತ್ರಕರ್ತರು ಸಂಘಟಿಸಿದ್ದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಸಚಿವೆ ನುಡಿದರು. ಕಾರ್ಯಕ್ರಮದಲ್ಲಿ ಮೂಡಿ ಬಂದ ಹೆಚ್ಚಿನ ಪ್ರಶ್ನೆಗಳು ಹಾಗೂ ಸಂವಾದ ರಫೇಲ್ ಯುದ್ಧ ವಿಮಾನಕ್ಕೆ ಸಂಬಂಧಿಸಿದ ರಾಜಕೀಯ ವಿವಾದದ ಸುತ್ತವೇ ಸುತ್ತಿದ್ದವು. ’ರಫೇಲ್ ವ್ಯವಹಾರವು ಶತಮಾನದ ಭ್ರಷ್ಟಾಚಾರ ಎಂಬುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವಾರು ವಿರೋಧಿ ನಾಯಕರು ಬಣ್ಣಿಸಿದರು. ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಸಮೂಹದ ಜೊತೆಗೆ ಡಸಾಲ್ಟ್ ಕಂಪೆನಿಯು ಒಪ್ಪಂದವೊಂದಕ್ಕೆ ಸಹಿ ಹಾಕಿರುವ ಹಿನ್ನೆಲೆಯಲ್ಲಿ ಡಸಾಲ್ಟ್ ಕಂಪೆನಿಗೆ ವಿಮಾನ ಖರೀದಿ ಗುತ್ತಿಗೆ ಕೊಟ್ಟದ್ದು ಉದ್ಯಮಿ ಅಂಬಾನಿ ಅವರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಎಂದು ಕಾಂಗ್ರೆಸ್ ಅಧ್ಯಕ್ಷರು ಆಪಾದಿಸಿದರು. ಹಿನ್ನೆಲೆಯಲ್ಲಿ ರಫೇಲ್ ವ್ಯವಹಾರವು ವಿವಾದಕ್ಕೆ ಗುರಿಯಾಯಿತು. ಇದರ ಜೊತೆಗೆ ಎನ್ ಡಿಎ ಸರ್ಕಾರವು ಖರೀದಿಸುತ್ತಿರುವ ನಾಲ್ಕನೇ ತಲೆಮಾರಿನ ಯುದ್ಧ ವಿಮಾನಗಳಿಗೆ ದುಬಾರಿ ಬೆಲೆ ನೀಡಲಾಗುತ್ತಿದೆ ಎಂದೂ ಕಾಂಗ್ರೆಸ್ ಪ್ರತಿಪಾದಿಸಿತು. ಯುಪಿಎ ಸರ್ಕಾರವು ವಿಮಾನ ಖರೀದಿಗೆ ನಿಗದಿ ಗೊಳಿಸಲಿದ್ದ ೫೨೬ ಕೋಟಿ ರೂಪಾಯಿಯ ಮೂರು ಪಟ್ಟು ಬೆಲೆಯನ್ನು ಎನ್ ಡಿಎ ಸರ್ಕಾರ ನಿಗದಿಪಡಿಸಿದೆ ಎಂದೂ ಕಾಂಗ್ರೆಸ್ ಆಪಾದಿಸಿತು. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ವರ್ಷಾನುಗಟ್ಟಲೆ ವ್ಯವಹಾರವನ್ನು ಅಂತಿಮ ಗೊಳಿಸದೇ ಇದ್ದುದೇಕೆ ಎಂದೂ ಸೀತಾರಾಮನ್ ಅವರು ಪ್ರಶ್ನಿಸಿದರು.  ’ಒಪ್ಪಂದ ಏಕೆ ಆಗಲಿಲ್ಲ?’ ಎಂದು ಹಿಂದಿನ ೧೦ ವರ್ಷಗಳಿಂದ ಮಾತುಕತೆಗಳು ನಡೆಯುತ್ತಲೇ ಇದ್ದುದರತ್ತ ಬೊಟ್ಟು ಮಾಡುತ್ತಾ ಸೀತಾರಾಮನ್ ಕೇಳಿದರು. ’ಒಪ್ಪಂದ ಆಗಬೇಕಿತ್ತು ಸ್ವಾಮೀ, ಬರಿಯ ಮಾತುಕತೆ ಅಲ್ಲ ಎಂದು ಸಚಿವರು ಹೇಳಿದರು.  ಡಸಾಲ್ಟ್ ಕಂಪೆನಿಯು ನಿರ್ಮಿಸಿದ ೩೬ ರಫೇಲ್ ಯುದ್ಧ ವಿಮಾನಗಳನ್ನು . ಬಿಲಿಯನ್ (೮೭೦ ಕೋಟಿ) ಡಾಲರ್ ಮೊತ್ತಕ್ಕೆ ಖರೀದಿಸುವ ವ್ಯವಹಾರ ಮಾಡಿಕೊಂಡ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಸರ್ಕಾರದ ನಿರ್ಧಾರವನ್ನು ಫ್ರಾನ್ಸ್ ಜೊತೆಗೆ ಒಪ್ಪಂದಕ್ಕೆ ಸಹಿಹಾಕಿದ ಒಂದು ವರ್ಷದ ಬಳಿಕ ೨೦೧೫ರ ಏಪ್ರಿಲ್ನಲ್ಲಿ ಪ್ರಕಟಿಸಲಾಗಿತ್ತು.  ೧೨೬ ರಫೇಲ್ ವಿಮಾನಗಳನ್ನು ಖರೀದಿಸಲು ಹಿಂದಿನ ಸಂಯುಕ್ತ ಪ್ರಗತಿಪರ ಮೈತ್ರಿಕೂಟ ಸರ್ಕಾರ ಕೈಗೊಂಡಿದ್ದ ನಿರ್ಧಾರವನ್ನು ರದ್ದು ಪಡಿಸಿ ಹೊಸ ನಿರ್ಧಾರ ಕೈಗೊಳ್ಳಲಾಗಿತ್ತು. ಹಿಂದಿನ ಯುಪಿಎ ಸರ್ಕಾರದ ನಿರ್ಧಾರದಂತೆ ೧೨೬ ರಫೇಲ್ ಯುದ್ಧ ವಿಮಾನಗಳ ಪೈಕಿ ೧೦೮ ವಿಮಾನಗಳನ್ನು ಭಾರತದಲ್ಲೇ ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿಸಬೇಕಾಗಿತ್ತು. ರಫೇಲ್ ಯುದ್ಧ ವಿಮಾನಗಳನ್ನು ಯುಪಿಎ ಸರ್ಕಾರ ಒಪ್ಪಿದ್ದ ಬೆಲೆಗಿಂತ ಶೇಕಡಾ ೯ರಷ್ಟು ಕಡಿಮೆ ಮೂಲದರದಲ್ಲಿ ಸರ್ಕಾರವು ಈಗ ಪಡೆಯುತ್ತಿದೆ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದರು.


2017: ಥಾಣೆ : ಪಾಕಿಸ್ಥಾನದ ಕರಾಚಿಯಲ್ಲಿ ಅಡಗಿಕೊಂಡಿರುವ ಭಾರತದ ಮೋಸ್ಟ್ ವಾಂಟೆಡ್ ಭೂಗತ ಜಗತ್ತಿನ ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಇಬ್ರಾಹಿಂ ಕಸ್ಕರ್ ನನ್ನು  ದಕ್ಷಿಣ ಮುಂಬಯಿಯ ಆತನ ಸಹೋದರಿ ಮನೆಯಲ್ಲಿ ತಡ ರಾತ್ರಿ ಪೊಲೀಸರು ವಶಕ್ಕೆ ತೆಗೆದುಕೊಂಡರು.  ಸಂದರ್ಭದಲ್ಲಿ ಆತ ಟಿವಿಯಲ್ಲಿ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮವನ್ನು ವೀಕ್ಷಿಸುತ್ತಾ ಬಿರಿಯಾನಿ ಸವಿಯುತ್ತಿದ್ದ ಎಂದು ಥಾಣೆ ಪೊಲೀಸ್ ಕಮಿಷನರ್ ಪರಮಬೀರ್ ಸಿಂಗ್  ಬಹಿರಂಗ ಪಡಿಸಿದರು. ಥಾಣೆಯ ಸುಲಿಗೆ ನಿಗ್ರಹ ಪೊಲೀಸ್ ದಳದವರು ದಾವೂದ್ ಸಹೋದರ ಕಸ್ಕರ್ನನ್ನು ಆತನ ಸಹೋದರಿ ಹಸೀನಾ ಪಾರ್ಕರ್ ಮನೆಯಲ್ಲಿ ವಶಕ್ಕೆ ತೆಗೆದುಕೊಂಡು ಅನಂತರ ಬಂಧನದಲ್ಲಿ ಇರಿಸಿದರು. ಆತನನ್ನು  ಬೇಗನೆ ಕೋರ್ಟ್ ಮುಂದೆ ಹಾಜರುಪಡಿಸಲಾಗುವುದು ಎಂದು ಸಿಂಗ್ ಹೇಳಿದರು. ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಬಿಲ್ಡರ್ ಒಬ್ಬರಿಂದ ನಾಲ್ಕು ಫ್ಯಾಟುಗಳು ಮತ್ತು 30 ಲಕ್ಷ ರೂ. ನಗದನ್ನು ಸುಲಿಗೆ ಮೊತ್ತವಾಗಿ ಕೇಳಿದ್ದ. ಕಸ್ಕರ್ನನ್ನು ತನಿಖೆಗೆ ಒಳಪಡಿಸಿದಾಗ ಆತನಿಂದ ಇನ್ನೂ ಕೆಲವು ಬಿಲ್ಡರ್ಗಳು ಮತ್ತು ರಾಜಕಾರಣಿಗಳ ಹೆಸರು ಬಹಿರಂಗವಾಗಿದೆ ಎಂದು ಸಿಂಗ್ ಹೇಳಿದರುಇಕ್ಬಾಲ್ ಕಸ್ಕರ್ ಮತ್ತು ಪಾಕಿಸ್ಥಾನದ ಕರಾಚಿಯಲ್ಲಿ ಅಡಗಿಕೊಂಡಿರುವ ದಾವೂದ್ ಇಬ್ರಾಹಿಂನ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಗ್ರಹ ಕಾಯಿದೆ (ಮಕೋಕಾ) ಯನ್ನು ಅನ್ವಯಿಸಬಹುದೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಸಿಂಗ್ ನುಡಿದರು. 
 
2016: ಶ್ರೀನಗರ: ಉತ್ತರ ಜಮ್ಮು ಕಾಶ್ಮೀರದ ಉರಿ ವಿಭಾಗದ ಸೇನಾ ಕೇಂದ್ರದ ಮೇಲೆ ಈದಿನ
ಬೆಳಗಿನಜಾವ ಉಗ್ರರು ಆತ್ಮಾಹುತಿ ಬಾಂಬ್ದಾಳಿ ಮಾಡಿದ್ದು, 17 ಯೋಧರು ಹುತಾತ್ಮರಾದರು. 19 ಮಂದಿ ಗಾಯಗೊಂಡರು. ಸೇನೆ ಪ್ರತಿ ದಾಳಿ ನಡೆಸಿತು. ಘಟನೆಯಲ್ಲಿ ನಾಲ್ವರು ಉಗ್ರರು ಸಾವನ್ನಪ್ಪಿದರು. ವಿದೇಶ ಪ್ರವಾಸ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ ಅವರು ತುರ್ತು ಸಭೆ ಕರೆದರು. ಸೇನೆಯ ಡೋಗ್ರಾ ರೆಜಿಮೆಂಟ್ ಯೋದರು ಕ್ಯಾಂಪ್ ಟೆಂಟ್ನಲ್ಲಿ ಮಲಗಿದ್ದಾಗ ಬೆಳಗಿನಜಾವ 4ಕ್ಕೆ ಉಗ್ರರು ಬಾಂಬ್ದಾಳಿ ನಡೆಸಿದರು. ಜತೆಗೆ, ಮನಬಂದಂತೆ ಗುಂಡು ಹಾರಿಸಿದರು. ಯೋಧರು ಮತ್ತು ಭಯೋತ್ಪಾದಕರ ಮಧ್ಯೆ ತೀವ್ರ ಗುಂಡಿನ ಚಕಮಕಿ ನಡೆಯಿತು. ಬಳಿಕ ಸಂಭವಿಸಿದ ಸ್ಫೋಟದಲ್ಲಿ 17 ಯೋಧರು ಹುತಾತ್ಮರಾಗಿ ಇತರ 19 ಮಂದಿ ಗಾಯಗೊಂಡರು. ಸೇನೆ ನೆಡೆಸಿದ ಪ್ರತಿ ದಾಳಿಗೆ ನಾಲ್ವರು ಉಗ್ರರು ಬಲಿಯಾದರು ಎಂದು ಸೇನೆಯ ಉತ್ತರ ವಲಯ ಕಮಾಂಡರ್ಹಾಗೂ ವಕ್ತಾರರು ತಿಳಿಸಿದರು. ಉಗ್ರರ ಶೋಧಕಾರ್ಯದಲ್ಲಿ ಸೇನೆ ತೊಡಗಿದ್ದು, ಹೆಕಾಪ್ಟರ್ಮೂಲಕ ಹಾಗೂ ಹೆಚ್ಚಿನ ಸೇನಾ ಪಡೆ ಕಾರ್ಯಾಚರಣೆ ನಡೆಸಿತು. ಘಟನೆಯಲ್ಲಿ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಘಟನೆ ನಡೆದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ರಾಜನಾಥ್ಸಿಂಗ್ಅವರು ತಮ್ಮ ರಷ್ಯಾ ಮತ್ತು ಅಮೆರಿಕ ಭೇಟಿಯ ಪ್ರವಾಸವನ್ನು ರದ್ದುಗೊಳಿಸಿ, ತುರ್ತು ಸಭೆ ಕರೆದರು. ದಾಳಿ ನಡೆದಿರುವ ಸೇನಾ ನೆಲೆ ಶ್ರೀನಗರದಿಂದ 102 ಕಿ.ಮೀ. ದೂರದಲ್ಲಿದೆ. ದಾಳಿ ನಡೆದ ಸ್ಥಳದಲ್ಲಿ ಸತ್ತ ಭಯೋತ್ಪದಕರ ಬಳಿ ಇದ್ದ ಶಸ್ತ್ರಾಸ್ತ್ರ ಮದ್ದು ಗುಂಡಿನಲ್ಲಿ ಪಾಕ್ ಮೊಹರುಗಳು ಕಂಡು ಬಂದಿವೆ ಎಂದು ಸೇನಾ ಮೂಲಗಳು ತಿಳಿಸಿವೆ. ಜೈಷ್ ಎ ಮೊಹಮ್ಮದ್ (ಜೆಇಎಂ) ಈ ದಾಳಿ ನಡೆಸಿತು ಎಂದು ಹೇಳಲಾಯಿತು.

2016: ನವದೆಹಲಿ: ಉರಿ ವಿಭಾಘದಲ್ಲಿ
ಭಾರತೀಯ ಸೇನಾ ನೆಲೆ ಮೇಲಿನ ದಾಳಿಯನ್ನು ಬಲವಾಗಿ
ಖಂಡಿಸಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ‘ ಪರಮೋಚ್ಚ ಬಲಿದಾನ ಮಾಡಿದ ವೀರ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವೆ. ಇಂತಹ ದಾಳಿಗಳಿಂದ ಭಾರತವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ. ಭಯೋತ್ಪಾದಕರು ಮತ್ತು ಅವರ ಹಿಂದಿನ ಪ್ರಚೋದಕರ ದುರುದ್ದೇಶಗಳನ್ನು ನಾವು ವಿಫಲಗೊಳಿಸುತ್ತೇವೆ’ ಎಂದು ಹೇಳಿದರು..
2016: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ನಡೆದ ಹೇಡಿ ಭಯೋತ್ಪಾದಕ
ದಾಳಿಯನ್ನು ನಾವು ಪ್ರಬಲವಾಗಿ ಖಂಡಿಸುತ್ತೇವೆ. ತುಚ್ಛ ದಾಳಿಯ ಹಿಂದಿರುವವರನ್ನು ಶಿಕ್ಷೆಯಿಂದ ತಪ್ಪಿಸಿಕೊಂಡು ಹೋಗಲು ಬಿಡುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.  ಜಮ್ಮು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ನಡೆದಿರುವ ದಾಳಿಯಲ್ಲಿ ಹುತ್ಮಾತ್ಮರಾದ ಸೈನಿಕರಿಗೆ ನಮನ ಸಲ್ಲಿಸಿದ ಮೋದಿ, ದೇಶಕ್ಕಾಗಿ ನೀಡಿದ ಅವರ ಸೇವೆ ಅಮರ ಎಂದರು. ಈ ಕುರಿತಾಗಿ ಗೃಹ ಸಚಿವರು ಹಾಗೂ ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಅವರು ನುಡಿದರು.


2016: ನವದೆಹಲಿ
ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ. ಅದನ್ನು ಏಕಾಂಗಿಯನ್ನಾಗಿ ಮಾಡಿ
ಎಂದು ಭಾರತ ಎಚ್ಚರಿಕೆ ಸಂದೇಶ ರವಾನಿಸಿತು. ಬೆಳಿಗ್ಗೆ ಶ್ರೀನಗರ ಸೇನಾ ಕೇಂದ್ರದ ಮೇಲೆ ಉಗ್ರರು ಆತ್ಮಾಹುತಿ ದಾಳಿ ನಡೆಸಿ 17 ಯೋಧರು ಹುತಾತ್ಮರಾದ ಬೆನ್ನಲ್ಲೇ ಉಗ್ರರ ವಿರುದ್ಧ ಭಾರತ ಗುಡುಗಿತು. ಉರಿ  ಸೇನಾ ನೆಲೆ ಮೇಲೆ ನಡೆದ ದಾಳಿಗೆ ಕಟುವಾದ ಹೇಳಿಕೆ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ‘ನುರಿತ ತರಬೇತಿ ಪಡೆದ ಹಾಗೂ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ ಉಗ್ರರು ದಾಳಿ ನಡೆಸಿದ್ದಾರೆ. ದಾಳಿ ಹಿಂದಿನ ಕೈಗಳನ್ನು ಸುಮ್ಮನೆ ಬಿಡುವುದಿಲ್ಲಎಂದು ಎಚ್ಚರಿಸಿದರು. ಪಾಕಿಸ್ತಾನ ಭಯೋತ್ಪಾದನೆಗೆ ನೇರವಾಗಿಯೇ ಬೆಂಬಲ ನೀಡುತ್ತಿದ್ದೆ ಎಂದು ಆಪಾದಿಸಿದ ಅವರು, ‘ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಅದನ್ನು ಏಕಾಂಗಿಯಾಗಿ ಮಾಡಬೇಕುಎಂದು ಹೇಳಿದರು.
 

2016: ನವದೆಹಲಿ: ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಿದ ಭ್ರಷ್ಟಾಚಾರಕ್ಕೆ ಸಂಬಂಧಿಸಿದ
ಪ್ರತಿ 10 ಪ್ರಕರಣಗಳಲ್ಲಿ 7 ಪ್ರಕರಣಗಳಲ್ಲಿ ಕಳಂಕಿತ ಸರ್ಕಾರಿ ಅಧಿಕಾರಿಗಳಿಗೆ ಶಿಕ್ಷೆಯಾಗಿದೆ. ಕಳೆದ ಒಂದು ದಶಕದ ಅಂಕಿ ಸಂಖ್ಯೆಗಳು ದೃಢ ಪಡಿಸಿದವು. 2006ರಿಂದೀಚೆಗೆ ಸಿಬಿಐ 7000ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ನಡೆಸಿದೆ. ಅವುಗಳ ಪೈಕಿ 6,533 ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡಿದ್ದು, 4,054 ಪ್ರಕರಣಗಳಲ್ಲಿ 1988 ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆಯಾಗಿದ್ದು, 2,095 (ಶೇಕಡಾ 32) ಮಂದಿ ಮಾತ್ರ ಖುಲಾಸೆಯಾಗಿದ್ದಾರೆ. ಭಾರತದಲ್ಲಿ ವಿಚಾರಣೆ ವಿಳಂಬವಾಗುತ್ತದೆ ಮತ್ತು ಪ್ರಭಾವಿ ವ್ಯಕ್ತಿಗಳು ಕಾರಾಗೃಹ ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಾರೆ ಎಂಬ ಜನರ ಸಾಮಾನ್ಯ ನಂಬಿಕೆಯನ್ನು ಅಂಕಿ ಅಂಶಗಳು ಹುಸಿಗೊಳಿಸಿದವು. 2015ರವರೆಗಿನ ರಾಷ್ಟ್ರೀಯ ಮಾಹಿತಿ ಪ್ರಕಾರ 13,585 ಪ್ರಕರಣಗಳ ತನಿಖೆ ನಡೆಸಲಾಗಿತ್ತು. ಅವುಗಳಲ್ಲಿ ಹೆಚ್ಚಿನವು ಭ್ರಷ್ಟಾಚಾರ ಮತ್ತು ಕ್ರಿಮಿನಲ್ ದುರ್ವರ್ತನೆಗಳಿಗೆ ಸಂಬಂಧಪಟ್ಟವು ಎಂದು ಮಾಹಿತಿ ತಿಳಿಸಿತು.

2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ನಡುವಣ ಮಾತುಕತೆಗಳ ಫಲಶ್ರುತಿಯಾಗಿ ಭಾರತ ಮತ್ತು ಚೀನಾ 12 ಒಪ್ಪಂದಗಳಿಗೆ ಸಹಿ ಹಾಕಿದವು. ರೈಲ್ವೇ, ಬಾಹ್ಯಾಕಾಶ ಮತ್ತು ಕಸ್ಟಮ್ಸ್ ಕ್ಷೇತ್ರಗಳಲ್ಲಿ ಸಹಕಾರ ಈ ಒಪ್ಪಂದಗಳಲ್ಲಿ ಸೇರಿವೆ. ಭಾರತ ಮತ್ತು ಚೀನಾ ನಡುವಣ ಬಾಂಧವ್ಯ ವೃದ್ಧಿಯ ಸಂಪೂರ್ಣ ಸಾಮರ್ಥ್ಯ ಅರಿವಿಗೆ ಪರಸ್ಪರ ನಂಬಿಕೆ ಮತ್ತು ಗಡಿಯಲ್ಲಿ ಶಾಂತಿ ಕಾಯ್ದುಕೊಳ್ಳುವುದು ಅತ್ಯಂತ ಮಹತ್ವದ ವಿಚಾರ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎರಡು ದಿನಗಳ ಮಾತುಕತೆಯಲ್ಲಿ ನಾವು ಆರ್ಥಿಕ, ರಾಜಕೀಯ, ಭದ್ರತೆ ಸೇರಿದಂತೆ ಎಲ್ಲಾ ವಿಷಯಗಳ ಬಗೆಗೂ ರ್ಚಚಿಸಿದ್ದೇವೆ. ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಕೊಳ್ಳಬೇಕು ಎಂದು ನಾವು ನಿರ್ಧರಿಸಿದ್ದೇವೆ ಎಂದು ಪ್ರಧಾನಿ ನುಡಿದರು. ವ್ಯಾಪಾರ ಅಸಮತೋಲನ ಬಗ್ಗೆ ನಾವು ಕಳವಳ ವ್ಯಕ್ತ ಪಡಿಸಿದ್ದೇವೆ ಮತ್ತು ಚೀನಾದಲ್ಲಿ ಭಾರತೀಯ ಕಂಪೆನಿಗಳಿಗೆ ಹೂಡಿಕೆ ಮೇಲಿನ ನಿಯಂತ್ರಣಗಳನ್ನು ನಿವಾರಿಸುವಂತೆ ಚೀನೀ ನಾಯಕ ಕ್ಷಿ ಜಿನ್​ಪಿಂಗ್ ಅವರಿಗೆ ಮನವಿ ಮಾಡಿದ್ದೇವೆ ಎಂದು ಮೋದಿ ಹೇಳಿದರು. ಭಾರತ ಮತ್ತು ಚೀನಾ ನಾಗರಿಕ ಪರಮಾಣು ಸಹಕಾರ ನಿಟ್ಟಿನಲ್ಲೂ ಮಾತುಕತೆ ಆರಂಭಿಸಲು ನಿರ್ಧರಿಸಿವೆ ಎಂದು ಪ್ರಧಾನಿ ವಿವರಿಸಿದರು.

2014: ನವದೆಹಲಿ: ಮುಂದಿನ ಐದು ವರ್ಷಗಳಲ್ಲಿ 2000 ಕೋಟಿ ಅಮೆರಿಕನ್ ಡಾಲರ್ (1,21,830 ಕೋಟಿ ರೂಪಾಯಿ) ಮೌಲ್ಯದಷ್ಟು ಹೂಡಿಕೆಯನ್ನು ಭಾರತದಲ್ಲಿ ಮಾಡಲು ಚೀನಾ ಒಪ್ಪಿಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಮಾತುಕತೆ ಸಂದರ್ಭದಲ್ಲಿ ಈ ವಿಚಾರದಲ್ಲಿ ಚೀನಾ ತನ್ನ ಬದ್ಧತೆಯನ್ನು ಸ್ಪಷ್ಟ ಪಡಿಸಿದೆ ಎಂದು ಪ್ರಧಾನಿ ನಂತರ ತಿಳಿಸಿದರು. ಗಡಿಯುದ್ಧಕ್ಕೂ ಸಂಭವಿಸುತ್ತಿರುವ ಘಟನೆಗಳ ಬಗ್ಗೆ ನಾನು ಕಳವಳ ವ್ಯಕ್ತ ಪಡಿಸಿದೆ. ಗಡಿ ಪ್ರಶ್ನೆಯನ್ನು ಬಗೆಹರಿಸಬೇಕು. ನೈಜ ನಿಯಂತ್ರಣ ರೇಖೆ ಬಗ್ಗೆ ಸ್ಪಷ್ಟತೆಯ ಅಗತ್ಯ ಇದೆ ಎಂದು ನಾವು ಅಭಿಪ್ರಾಯಪಟ್ಟೆವು ಎಂದು ಮೋದಿ ಹೇಳಿದರು. ಚೀನಾದ ವೀಸಾನೀತಿ ಹಾಗೂ ನೀರಿನ ವಿಷಯ ಬಗೆಗೂ ನಾನು ಕಳವಳ ವ್ಯಕ್ತಪಡಿಸಿದೆ. ಈ ಕುರಿತ ವಿವಾದ ಇತ್ಯರ್ಥದಿಂದ ಬಾಂಧವ್ಯ ಇನ್ನಷ್ಟು ಬಲಗೊಳ್ಳುವುದು ಎಂದು ನಾನು ಹೇಳಿದೆ ಎಂದು ಪ್ರಧಾನಿ ವಿವರಿಸಿದರು. ನಾವು ಪರಸ್ಪರ ಕಾಳಜಿಗೆ ಸಂಬಂಧಪಟ್ಟ ಎಲ್ಲಾ ವಿಚಾರಗಳಲ್ಲೂ ಫಲಪ್ರದ ಮಾತುಕತೆ ನಡೆಸಿದ್ದೇವೆ ಎಂದು ಚೀನೀ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ನುಡಿದರು. ಮುಂದಿನ ವರ್ಷ ಆದಿಯಲ್ಲಿ ಚೀನಾಕ್ಕೆ ಭೇಟಿ ನೀಡುವಂತೆಯೂ ಕ್ಷಿ ಅವರು ಈ ಸಂದರ್ಭದಲ್ಲಿ ಮೋದಿ ಅವರಿಗೆ ಆಮಂತ್ರಣ ನೀಡಿದರು. 2015ನೇ ವರ್ಷವನು ಚೀನಾದಲ್ಲಿ 'ಭಾರತಕ್ಕೆ ಭೇಟಿ ನೀಡಿ' (ವಿಸಿಟ್ ಇಂಡಿಯಾ) ವರ್ಷವಾಗಿ ಆಚರಿಸಲಾಗುವುದು ಎಂದೂ ಅವರು ನುಡಿದರು. ಪ್ರದೇಶದಲ್ಲಿ ಬೆಳವಣಿಗೆ ಮತ್ತು ಸಮೃದ್ಧಿಗಾಗಿ ಅವಳಿ ಎಂಜಿನ್​ಗಳಂತೆ ಚೀನಾ ಮತ್ತು ಭಾರತ ಕಾರ್ಯ ನಿರ್ವಹಿಸಲಿವೆ ಎಂದು ಚೀನಾ ಅಧ್ಯಕ್ಷರು ಹೇಳಿದರು. ಪರಸ್ಪರರ ಕಾಳಜಿಗಳನ್ನು ಗೌರವಿಸಲು ನಾವು ನಿರ್ಧರಿಸಿದೆವು. ಚೀನಾವು ಗಡಿ ವಿವಾದ ಇತ್ಯರ್ಥಕ್ಕೆ ದೃಢ ನಿಲುವು ಹೊಂದಿದೆ ಎಂದು ಅವರು ನುಡಿದರು. ಗಡಿಯನ್ನು ಗುರುತಿಸಿಲ್ಲವಾದ್ದರಿಂದ ಕೆಲವು ಘಟನೆಗಳು ಸಂಭವಿಸುತ್ತಿವೆ. ಆದರೆ ಇಂತಹ ಘಟನೆಗಳನ್ನು ನಿರ್ವಹಿಸಲು ಉಭಯ ರಾಷ್ಟ್ರಗಳು ವ್ಯವಸ್ಥೆ ರೂಪಿಸುವುವು ಎಂದು ಅವರು ಹೇಳಿದರು.

2014: ನವದೆಹಲಿ: ಲಡಾಖ್​ನ ಚುಮುರ್ ವಿಭಾಗದಲ್ಲಿ ಸುಮಾರು 1000 ಮಂದಿ ಚೀನೀ ಸೈನಿಕರು ಚೀನಾದ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಿರುವ ವೇಳೆಯಲ್ಲೇ ಈದಿನ ಭಾರತದೊಳಕ್ಕೆ ನುಸುಳಿ ಬಂದರು. ಸೇನಾ ಮೂಲಗಳ ಪ್ರಕಾರ 1000 ಮಂದಿ ಚೀನೀ ಸೈನಿಕರು ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ನೈಜ ನಿಯಂತ್ರಣ ರೇಖೆಯನ್ನು ದಾಟಿ ದೇಶದೊಳಕ್ಕೆ ನುಸುಳಿ ಬಂದಿದ್ದು ಹಿಂದಕ್ಕೆ ಹೋಗಲೂ ನಿರಾಕರಿಸಿದರು. ಭಾರತೀಯ ಸೇನೆ ಮೂರು ಬೆಟಾಲಿಯನ್​ಗಳನ್ನು ತತ್ ಕ್ಷಣವೇ ಚುಮುರ್ ವಿಭಾಗದ ನೈಜ ನಿಯಂತ್ರಣ ರೇಖೆಯ ಕಡೆಗೆ ಕಳುಹಿಸಿತು. ಉಭಯ ರಾಷ್ಟ್ರಗಳ ಮಧ್ಯೆ ಧ್ವಜಸಭೆ ನಡೆದ ಮರುದಿನವೇ ಈ ಘಟನೆ ಘಟಿಸಿತು. ಚೀನೀ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಹಿಂದಿನ ದಿನವಷ್ಟೇ ಅಹಮದಾಬಾದಿನಿಂದ ಮೂರು ದಿನಗಳ ಭಾರತ ಪ್ರವಾಸ ಆರಂಭಿಸಿದ್ದರು.

2014: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ರಾತ್ರಿ ಚೀನೀ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ಅವರ ಜೊತೆಗಿನ ಮಾತುಕತೆ ಕಾಲದಲ್ಲಿ ಚೀನೀ ಅತಿಕ್ರಮಣದ ವಿಷಯವನ್ನು ಪ್ರಸ್ತಾಪಿಸಿದರು. ಉಭಯ ನಾಯಕರು ಈದಿನ ಶೃಂಗಸಭೆ ನಡೆಸುವ ವೇಳೆಯಲ್ಲಿ ಭಾರತದ ಕಡೆಯಿಂದ ಈ ವಿಚಾರವನ್ನು ಇನ್ನಷ್ಟು ವಿವರವಾಗಿ ಪ್ರಸ್ತಾಪಿಸಲಿದ್ದಾರೆ ಎಂದು ಎಂಇಎ ವಕ್ತಾರರು ತಿಳಿಸಿದರು. ಶೃಂಗಸಭೆಗಳು ನಾಯಕರಿಗೆ ದ್ವಿಪಕ್ಷೀಯ ಬಾಂಧವ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ವಿಚಾರಗಳನ್ನೂ ಪ್ರಸ್ತಾಪಿಸಲು ಉತ್ತಮ ಸಂದರ್ಭಗಳು. ಪ್ರಧಾನಿಯವರು ಹಿಂದಿನ ರಾತ್ರಿಯ ಮಾತುಕತೆ ಸಂದರ್ಭವನ್ನು ಭಾರತ ಭೇಟಿಯಲ್ಲಿ ಇರುವ ಚೀನೀ ಅಧ್ಯಕ್ಷರ ಜೊತೆಗೆ ಪ್ರಸ್ತಾಪಿಸಲು ಬಳಸಿಕೊಂಡರು ಎಂದು ಎಂಇಎ ವಕ್ತಾರ ಸೈಯದ್ ಅಕ್ಬರುದ್ದೀನ್ ನುಡಿದರು. ನಿಯೋಗ ಮಟ್ಟದಲ್ಲಿ ನಡೆಯುವ ಮಾತುಕತೆಗಳಲ್ಲಿ ಈ ವಿಷಯವನ್ನು ಮತ್ತಷ್ಟು ವಿಷದವಾಗಿ ಚರ್ಚಿಸಲಾಗುವುದು. ಚೀನೀ ಅಧ್ಯಕ್ಷರು ಅಹಮದಾಬಾದಿಗೆ ಬಂದ ಬಳಿಕ ಅವರಿಗೆ ಖಾಸಗಿ ಭೋಜನಕೂಟ ಏರ್ಪಡಿಸಿದ್ದ ಪ್ರಧಾನಿ, ಈ ಸಂದರ್ಭವನ್ನು ಬಳಸಿಕೊಂಡು ಚೀನೀ ಅತಿಕ್ರಮಣಗಳ ಬಗೆಗಿನ ಭಾರತದ ಕಳವಳವನ್ನು ವ್ಯಕ್ತ ಪಡಿಸಿದರು. ಚೀನೀ ಪಡೆಗಳು ಚುಮರ್ ವಿಭಾಗದಲ್ಲಿ ಮತ್ತಷ್ಟು ಅತಿಕ್ರಮಣ ನಡೆಸಿರುವುದಾಗಿ ವರದಿಗಳು ತಿಳಿಸಿದವು.

2014: ನವದೆಹಲಿ: ಭಾರತದೊಂದಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಇನ್ನೂ ಎತ್ತರಕ್ಕೆ ಒಯ್ಯುವ ಸಲುವಾಗಿ ಆಯಕಟ್ಟಿನ ಮತ್ತು ಸಹಕಾರಾತ್ಮಕ ಸಹಭಾಗಿತ್ವವನ್ನು ಮುಂದಕ್ಕೆ ಒಯ್ಯುವ ಆಶಯವನ್ನು ಚೀನೀ ಅಧ್ಯಕ್ಷ ಕ್ಷಿ ಜಿನ್​ಪಿಂಗ್ ವ್ಯಕ್ತ ಪಡಿಸಿದರು. ಇದೇ ವೇಳೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಲಡಾಖ್ ಪ್ರದೇಶದಲ್ಲಿ ನಡೆಯುತ್ತಿರುವ ಚೀನೀ ಅತಿಕ್ರಮಣದ ವಿಚಾರವನ್ನು ಪ್ರಸ್ತಾಪಿಸಿದರು. ಮೂರು ದಿನಗಳ ಭಾರತ ಭೇಟಿಗಾಗಿ ಆಗಮಿಸಿದ ಕ್ಷಿ ಅವರಿಗೆ ನವದೆಹಲಿಯಲ್ಲಿ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಈದಿನ ಮುಂಜಾನೆ ಸಾಂಪ್ರದಾಯಿಕ ಸ್ವಾಗತ ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು ಸಂಪ್ರದಾಯ ಮುರಿದು ಕ್ಷಿ ಅವರಿಗೆ ಹಿಂದಿನ ದಿನವೇ ತಮ್ಮ ತಾಯ್ನಾಡು ಗುಜರಾತಿನಲ್ಲಿ ಅದ್ಧೂರಿಯ ಸ್ವಾಗತ ನೀಡಿ, ಶೃಂಗಸಭೆ ಮಾತುಕತೆಗಳಿಗೆ ವೇದಿಕೆ ಸಜ್ಜುಗೊಳಿಸಿದ್ದರು. ಮೋದಿ ಮತ್ತು ಕ್ಷಿ ಅವರ ಎರಡನೇ ದಿನದ ಶೃಂಗಸಭೆ ಮಾತುಕತೆ ಹೈದರಾಬಾದ್ ಭವನದಲ್ಲಿ ಆರಂಭವಾಯಿತು. ಇದೇ ವೇಳೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲಡಾಖ್ ಪ್ರದೇಶದ ಗಡಿಯಲ್ಲಿ ಭಾರತ ಮತ್ತು ಚೀನೀ ಸೇನೆ ಪರಸ್ಪರ ಮುಖಾಮುಖಿಯಾಗಿ ನಿಂತಿದ್ದವು.

2014: ಶ್ರೀನಗರ: ಶತಮಾನದ ಭೀಕರ ಪ್ರವಾಹದ ಪರಿಣಾಮವಾಗಿ 11 ದಿನಗಳಿಂದ ಮುಚ್ಚಿದ್ದ ಜಮ್ಮು ಮತ್ತು ಕಾಶ್ಮೀರದ ನಾಗರಿಕ ಸಚಿವಾಲಯ ಈದಿನ ಮತ್ತೆ ತೆರೆಯಿತು. ಆದರೆ ನಿಗದಿತ ಕಚೇರಿ ವೇಳೆಯಾದ 9.30 ಗಂಟೆಗೆ ಶೇಕಡಾ 10ರಷ್ಟು ನೌಕರರು ಮಾತ್ರ ಕೆಲಸಕ್ಕೆ ಹಾಜರಾದರು ಎಂದು ಸಚಿವಾಲಯದ ಭದ್ರತಾ ಉಸ್ತುವಾರಿ ಅಧಿಕಾರಿ ತಿಳಿಸಿದರು. ಸಚಿವಾಲಯದ ಮುಖ್ಯದ್ವಾರವೂ ಸೇರಿದಂತೆ ಸುತ್ತುಮುತ್ತಣ ಪ್ರದೇಶ ಇನ್ನೂ ಸುಮಾರು ಒಂದು ಅಡಿಯಷ್ಟು ನೀರಿನಲ್ಲಿ ಮುಳುಗಿದೆ. ಜಲಾವೃತಗೊಂಡಿರುವ ಕಾರಣ ಸಚಿವಾಲಯದ ನೆಲಮಹಡಿಯಲ್ಲಿ ಕಾರ್ಯ ನಿರ್ವಹಣೆ ಇನ್ನೂ ದುಸ್ತರವಾಗಿಯೇ ಇದೆ. 7 ಮಹಡಿಗಳ ಕಟ್ಟಡದಲ್ಲಿ ಮೇಲಿನ ಮಹಡಿಗಳಲ್ಲಿನ ಉಳಿದ ಕಚೇರಿಗಳು ಈದಿನ ತೆರೆದಿವೆ ಎಂದು ಅಧಿಕಾರಿ ಹೇಳಿದರು. ಸೆಪ್ಟೆಂಬರ್ 18ರಂದು ಶ್ರೀನಗರದ ನಾಗರಿಕ ಸಚಿವಾಲಯದ ಕಾರ್ಯನಿರ್ವಹಣೆಯೊಂದಿಗೆ ಸರ್ಕಾರ ಕಾರ್ಯಾರಂಭಿಸಬೇಕು ಎಂದು ಕಳೆದ ವಾರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ರಾಜ್ಯ ಸಚಿವ ಸಂಪುಟವು ನಿರ್ಧರಿಸಿತ್ತು. ಭೀಕರ ಪ್ರವಾಹಕ್ಕೆ 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು.

2014: ನವದೆಹಲಿ: ಮುಖ್ಯ ಜಾಗೃತಾ ಆಯುಕ್ತ (ಚೀಫ್ ವಿಜಿಲೆನ್ಸ್ ಕಮೀಷನರ್ - ಸಿವಿಸಿ) ನೇಮಕಾತಿಗೆ ಪರಿಗಣನಾ ವಲಯವನ್ನು ವಿಸ್ತರಿಸಬೇಕು ಮತ್ತು ಇಡೀ ಪ್ರಕ್ರಿಯೆಯನ್ನು ಪಾರದರ್ಶಕಗೊಳಿಸಬೇಕು ಎಂಬುದಾಗಿ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸುಪ್ರೀಂಕೋರ್ಟ್ ಪೀಠವು ಅಕ್ಟೋಬರ್ 9ರ ಒಳಗೆ ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿತು. ನ್ಯಾಯಾಲಯವು ಪ್ರಕರಣವನ್ನು ಆಲಿಸುವವರೆಗೆ ಸರ್ಕಾರವು ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸುವುದಿಲ್ಲ ಎಂಬುದಾಗಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ ಬಳಿಕ ಪೀಠವು ಈ ನಿರ್ದೇಶನ ನೀಡಿತು. ಪ್ರಕರಣದ ಅಂತಿಮ ವಿಚಾರಣೆಗೆ ಅಕ್ಟೋಬರ್ 14ರ ದಿನವನ್ನು ಪೀಠವು ನಿಗದಿ ಪಡಿಸಿತು.

2014: ಘಾಜಿಯಾಬಾದ್: ಮಾಜಿ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಅವರ ಬಂಗ್ಲೆಯ ನೀರು ಮತ್ತು ವಿದ್ಯುತ್ ಪೂರೈಕೆ ಕಡಿತಗೊಳಿಸಿದ್ದನ್ನು ವಿರೋಧಿಸಿ ನಡೆದ ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಲೋಕ ದಳ (ಆರ್​ಎಲ್​ಡಿ) ಮತ್ತು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು)ನ 200ಕ್ಕೂ ಹೆಚ್ಚು ರೈತರು ಮತ್ತು ಪೋಲಿಸರು ತೀವ್ರ ಗಾಯಗೊಂಡ ಘಟನೆ ಇಲ್ಲಿನ ಮುರಾದ್ ನಗರದಲ್ಲಿ ಘಟಿಸಿತು. ಇತ್ತೀಚೆಗಷ್ಟೆ ತುಘಲಕ್ ಮಾರ್ಗದಲ್ಲಿರುವ ಅಜಿತ್ ಸಿಂಗ್ ಬಂಗ್ಲೆಯನ್ನು ತೆರವುಗೊಳಿಸುವ ಹಿನ್ನೆಲೆಯಲ್ಲಿ ಸರ್ಕಾರವೇ ನೀರು ಮತ್ತು ವಿದ್ಯುತ್ ಪೂರೈಕೆಯನ್ನು ನಿಲ್ಲಿಸಿತ್ತು. ಇದನ್ನು ವಿರೋಧಿಸಿ ಈ ಎರಡೂ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 58ರಲ್ಲಿ ವಾಹನ ಸಾಗಟಕ್ಕೆ ಅಡ್ಡಿ ಪಡಿಸಿದರು. ಅಷ್ಟೇ ಅಲ್ಲ ಸೋನಿಯಾ ವಿಹಾರ ನೀರು ಸಂಸ್ಕರಣಾ ಘಟಕಕ್ಕೂ ದಾಳಿ ನಡೆಸಿದರು. ಈ ವೇಳೆ ಪೋಲಿಸರು ಮತ್ತು ಪ್ರತಿಭಟನಾಕಾರರ ನಡುವೆ ಚಕಮಕಿ ನಡೆದು ಬಳಿಕ ಹಿಂಸಾ ಸ್ವರೂಪ ಪಡೆದುಕೊಂಡಿತು. ಘಟನೆಯಲ್ಲಿ ವಿಜಯ ನಗರ ಪೋಲಿಸ್ ಠಾಣೆಯ ಅಧಿಕಾರಿ ಅರುಣ್ ಕುಮಾರ್ ಸಿಂಗ್ ಗಂಭಿರವಾಗಿ ಗಾಯಗೊಂಡರು. ಪ್ರತಿಭಟನಾಕಾರರನು ಚದುರಿಸಲು ನಡೆಸಿದ ಪೋಲಿಸರ ರಬ್ಬರ್ ಗುಂಡಿನ ದಾಳಿಯಲ್ಲಿ ಆರ್​ರಲ್​ಡಿ ಮುಖಂಡ ವೀರ್ ಪಾಲ್ ಸಿಂಗ್ ಕೂಡ ತೀವ್ರ ಗಾಯಗೊಂಡರು.

2008: ಹದಿನೆಂಟು ಭಾರತೀಯರು ಸೇರಿ ಒಟ್ಟು 22 ಸಿಬ್ಬಂದಿ ಇದ್ದ ಹಾಂಕಾಂಗ್ ನೋಂದಣಿಯ ಹಡಗಿನ ಅಪಹರಣದ ಬೆನ್ನ ಹಿಂದೆಯೇ,  25 ಸಿಬ್ಬಂದಿ ಇದ್ದ ಗ್ರೀಕಿನ ಸರಕು ಸಾಗಣೆ ನೌಕೆಯೊಂದನ್ನು ಸೋಮಾಲಿಯಾ ಕರಾವಳಿಯಲ್ಲಿ ಅಪಹರಿಸಲಾಯಿತು.. ಸೋಮಾಲಿಯಾ ರಾಜಧಾನಿ ಮೊಗದಿಶುವಿನಿಂದ 200 ನಾಟಿಕಲ್ ಮೈಲ್ ದೂರದಲ್ಲಿಶಸ್ತ್ರಸಜ್ಜಿತ ಸಮುದ್ರಗಳ್ಳರು ಕೀನ್ಯಾಗೆ ತೆರಳುತ್ತಿದ್ದ ಈ ಹಡಗನ್ನು ವಶಪಡಿಸಿಕೊಂಡರು.

2007: ರೈತರಿಗೆ ಈಗ ನೀಡಲಾಗುತ್ತಿರುವ ವಿದ್ಯುತ್ ಸಹಾಯಧನದ ಬದಲಾಗಿ, ನಗದು ಪರಿಹಾರ ನೀಡುವ ಮೂಲಕ ಅಂತರ್ಜಲ ಮಟ್ಟ ಕುಸಿತ ನಿಯಂತ್ರಿಸಲು ಯೋಜನಾ ಆಯೋಗ ಸಲಹೆ ಮಾಡಿತು. `ಅಂತರ್ಜಲ ನಿರ್ವಹಣೆ ಮತ್ತು ಮಾಲೀಕತ್ವ' ಕುರಿತು ತಜ್ಞರ ತಂಡ ತಯಾರಿಸಿದ ವರದಿಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿದ ಆಯೋಗದ ಸದಸ್ಯ ಕಿರೀಟ್ ಪಾರಿಖ್, 2001-02ರಲ್ಲಿ ಸುಮಾರು ರೂ.30,000 ಕೋಟಿಯಷ್ಟಿದ್ದ ವಿದ್ಯುತ್ ಸಹಾಯಧನ ಪ್ರಮಾಣವನ್ನು ಹೆಚ್ಚಿಸದೇ ಇದನ್ನು ಸಾಧಿಸಬಹುದು ಎಂದು ಅಭಿಪ್ರಾಯಪಟ್ಟರು. ರೈತರಿಗೆ ವಿದ್ಯುತ್ ಸಹಾಯಧನ ನೀಡುವುದಕ್ಕಿಂತ ಯುನಿಟ್ಟಿಗೆ ಇಷ್ಟು ಎಂದು ನಿಶ್ಚಿತ ಮೊತ್ತವನ್ನು ಹಾಗೂ ಒಟ್ಟು ವಾರ್ಷಿಕ ಬಳಕೆ ಪ್ರಮಾಣವನ್ನು ನಿಗದಿಪಡಿಸಬೇಕು. ವರ್ಷಾಂತ್ಯದಲ್ಲಿ ಬಳಸಲಾದ ವಿದ್ಯುತ್ ಪ್ರಮಾಣವನ್ನು ಇದರಲ್ಲಿ ಕಡಿತಗೊಳಿಸಿ, ಬಾಕಿ ಹಣವನ್ನು ರೈತರಿಗೆ ನಗದಾಗಿ ನೀಡಬೇಕು. ಆಗ ಹೆಚ್ಚು ನಗದು ಪರಿಹಾರ ಪಡೆಯುವ ಉದ್ದೇಶದಿಂದ ರೈತರು ವಿದ್ಯುತ್ ಬಳಕೆ ಕಡಿಮೆ ಮಾಡುತ್ತಾರೆ ಎಂದು ಪಾರೀಖ್ ಹೇಳಿದರು. ಇದರಿಂದ ವಿದ್ಯುತ್ ಸಬ್ಸಿಡಿ ಮೇಲಿನ ಒತ್ತಡ ತಗ್ಗಿ ಅವು ಚೇತರಿಸಿಕೊಳ್ಳಲು ಸಹಾಯವಾಗುತ್ತದೆ. ಇನ್ನೊಂದೆಡೆ ರೈತರಲ್ಲಿ ಜಲಪ್ರಜ್ಞೆ ಬೆಳೆದು ನೀರಿನ ಸದುಪಯೋಗವಾಗುತ್ತದೆ ಎಂದು ಅವರು ವಿವರಿಸಿದರು. ರಾಜ್ಯ ಹಾಗೂ ಕೇಂದ್ರ ವಿದ್ಯುತ್ ಮಂಡಳಿಗಳು ವಿದ್ಯುತ್ ಬಳಕೆ ನಿಯಂತ್ರಿಸುವುದಕ್ಕೆ ಒತ್ತು ನೀಡುವುದಕ್ಕಿಂತ ಅಂತರ್ಜಲ ನಿರ್ವಹಣೆ, ಮಳಕೊಯ್ಲು ವಿಷಯಗಳಿಗೆ ಆದ್ಯತೆ ನೀಡಬೇಕು ಎಂದು ಪಾರಿಖ್ ಸಲಹೆ ಮಾಡಿದರು.

2007: ಸರ್ಕಾರಿ ಬಂಗಲೆ, ಕಟ್ಟಡಗಳಲ್ಲಿ ಅನಧಿಕೃತವಾಗಿ ವಾಸಿಸುವ ರಾಜಕಾರಣಿಗಳು, ಅಧಿಕಾರಿಗಳ ಬೆನ್ನು ಹತ್ತುವ ಧೈರ್ಯ ಸರ್ಕಾರಕ್ಕೆ ಇಲ್ಲ ಎಂದು ಸುಪ್ರೀಂಕೋರ್ಟ್ ಛೀಮಾರಿ ಹಾಕಿತು. ಅಧಿಕಾರ ಮುಗಿದ ಮೇಲೂ ಸರ್ಕಾರಿ ಬಂಗ್ಲೆಗಳಲ್ಲಿ ಗೂಟ ಹೊಡೆದುಕೊಂಡು ಇರುವ ರಾಜಕಾರಣಿಗಳು, ಹಿರಿಯ ಅಧಿಕಾರಿಗಳನ್ನು ಒಕ್ಕಲೆಬ್ಬಿಸಲು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಅಥವಾ ಅವರಿಂದ ಭಾರಿ ಮೊತ್ತದ ಬಾಕಿ ಹಣ ವಸೂಲು ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲ ಎಂದು ನ್ಯಾಯಮೂರ್ತಿ ಬಿ. ಎನ್. ಅಗರವಾಲ್ ಹಾಗೂ ಬಿ.ಕೆ. ಜೈನ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿತು.

2007: ರಾಮನ ಅಸ್ತಿತ್ವ ಹಾಗೂ ರಾಮಾಯಣದ ಕುರಿತು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ವಿವಾದಾತ್ಮಕ ಪ್ರಮಾಣ ಪತ್ರವನ್ನು ಹಿಂದಕ್ಕೆ ಪಡೆದ ಬೆನ್ನಲ್ಲೇ ಕೇಂದ್ರ ಸರ್ಕಾರವು ಪುರಾತತ್ವ ಇಲಾಖೆಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿತು. ಈ ವಿವಾದದ ಹೊಣೆ ಹೊತ್ತು ಸಂಸ್ಕೃತಿ ಸಚಿವೆ ಅಂಬಿಕಾ ಸೋನಿ ರಾಜೀನಾಮೆ ನೀಡಬೇಕು ಎಂದು ಬಹಿರಂಗ ಹೇಳಿಕೆ ನೀಡಿದ್ದ ವಾಣಿಜ್ಯ ಖಾತೆ ರಾಜ್ಯ ಸಚಿವ ಜೈರಾಮ್ ರಮೇಶ್ ತಮ್ಮ ಹೇಳಿಕೆಗಾಗಿ ಅಂಬಿಕಾ ಅವರ ಕ್ಷಮೆ ಯಾಚಿಸಿದರು. ಸೇತುಸಮುದ್ರಂ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸುಪ್ರೀಂಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಯೋಜನಾ ಪ್ರದೇಶದಲ್ಲಿ ಹೂಳೆತ್ತಲು ಹಾಗೂ ಕಾರ್ಮಿಕರನ್ನು ಸಾಗಿಸಲು ನಿಯೋಜಿಸಲಾಗಿದ್ದ ಮೂರು ಹಡಗುಗಳನ್ನು ನಾಗಪಟ್ಟಣಂಗೆ ಕಳುಹಿಸಲಾಯಿತು.

 2007: ಇನ್ನು ಮುಂದೆ ಕಡಿಮೆ ನೀರು ಬಳಸಿ ಭತ್ತ ಬೆಳೆಯುವುದು ಸಾಧ್ಯವಾಗಲಿದೆ. ಬೆಂಗಳೂರಿನ ವಿಜ್ಞಾನಿಯೂ ಸೇರಿದಂತೆ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ವಂಶವಾಹಿ ತಂತ್ರಜ್ಞಾನ ಬಳಸಿ ಭತ್ತದ ಹೊಸ ತಳಿ ಕಂಡು ಹಿಡಿದಿರುವುದನ್ನು ನವದೆಹಲಿಯಲ್ಲಿ ಬಹಿರಂಗ ಪಡಿಸಿತು. ಎಚ್. ಆರ್. ಡಿ.ವೈ. (ಹಾರ್ಡಿ) ಹೆಸರಿನ ವಂಶವಾಹಿಯನ್ನು `ಅರಬಿಡೋಪ್ಸಿಸ್' ಎಂಬ ಹೆಸರಿನ ಮಾದರಿ ತಳಿಯಿಂದ ಹೊರತೆಗೆಯಲಾಗಿದ್ದು, ಇದನ್ನು ಬಳಸಿ ರೂಪಿಸಲಾಗಿರುವ ಅಂತರ್ ವಂಶವಾಹಿ ಭತ್ತ ಕಡಿಮೆ ನೀರಿನಲ್ಲಿಯೂ ಚೆನ್ನಾಗಿ ಬೆಳೆಯುವುದು ಸಾಬೀತಾಗಿದೆ ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿ ಡಾ. ಆರತಿ ಕರಬ ತಿಳಿಸಿದರು. `ಭತ್ತದ ಇತರ ಪಾರಂಪರಿಕ ತಳಿಗಳಿಗೆ ಹೋಲಿಸಿದರೆ, ಈ ಹೊಸ ತಳಿ ಕಡಿಮೆ ನೀರಿನಲ್ಲಿಯೂ ಅತಿ ಹೆಚ್ಚು ಪ್ರಮಾಣ ಹಾಗೂ ತೂಕದ ಬೇರು ಹಾಗೂ ಕಾಂಡವನ್ನು ಹೊಂದಬಲ್ಲುದು. ಅಲ್ಲದೆ ಅದರ ದ್ಯುತಿಸಂಶ್ಲೇಷಣೆ ಸಾಮರ್ಥ್ಯವೂ ಹೆಚ್ಚು' ಎಂದು ಅವರು ಹೇಳಿದರು. `ಈಗ ಚಾಲ್ತಿಯಲ್ಲಿರುವ ಭತ್ತದ ಇತರ ತಳಿಗಳಿಂತ ಹಾರ್ಡಿ ಭತ್ತದ ತಳಿ ನೀರಿನ ಕೊರತೆ ಇರುವ ಪ್ರದೇಶದಲ್ಲಿಯೂ ಚೆನ್ನಾಗಿ ಬೆಳವಣಿಗೆ ಹೊಂದಬಲ್ಲುದು. ಇಂತಹ ಪ್ರದೇಶಗಳಲ್ಲಿ ಬೆಳೆಯಲಾದ ಭತ್ತದ ಇತರ ತಳಿಗಳಿಗಿಂತ ಹಾರ್ಡಿ ತಳಿ ಶೇ.50ರಷ್ಟು ಹೆಚ್ಚು ಜೈವಿಕ ತೂಕ ಹೊಂದಿತ್ತು. ಬರಪೀಡಿತ ಪ್ರದೇಶದ ರೈತರಿಗೆ ಈ ತಳಿ ಉಪಯುಕ್ತವಾಗಿದ್ದು, ನೀರಾವರಿ ಪ್ರದೇಶಕ್ಕೂ ಸೂಕ್ತವಾಗಿದೆ' ಎಂಬುದು ಸಂಶೋಧನಾ ತಂಡದ ಸದಸ್ಯರಲ್ಲಿ ಒಬ್ಬರಾದ ಶೀತಲ ದೀಕ್ಷಿತ ಅಭಿಪ್ರಾಯ. ಡಚ್ ಕೃಷಿ ಸಚಿವಾಲಯದ ಧನ ಸಹಾಯ ಪಡೆದಿರುವ ಸಂಶೋಧನಾ ತಂಡದಲ್ಲಿ ಭಾರತವಲ್ಲದೇ ಹಾಲೆಂಡ್, ಅಮೆರಿಕ, ಇಟಲಿ, ಇಂಡೋನೇಷ್ಯ, ಮೆಕ್ಸಿಕೋ ದೇಶದ ಪ್ರತಿನಿಧಿಗಳೂ ಇದ್ದರು. ಹೊಸ ತಳಿಯ ಇಳುವರಿ ಪ್ರಮಾಣದ ಅಧ್ಯಯನ ನಡೆದಿದ್ದು, ಅಲ್ಲಿ ಕೂಡ ಉತ್ತಮ ಇಳುವರಿ ಬಂದರೆ, ತಳಿಯನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲಾಗುವುದು. ಗೋಧಿ ಅಥವಾ ಮೆಕ್ಕೆಜೋಳಕ್ಕೆ ಹೋಲಿಸಿದರೆ ಭತ್ತ ಅತಿ ಹೆಚ್ಚು ನೀರು ಬೇಡುವ ಸಸ್ಯ. ಇತರ ಪಾರಂಪರಿಕ ಬೆಳೆಗಳಿಗಿಂತ ಮೂರು ಪಟ್ಟು ಹೆಚ್ಚು ನೀರನ್ನು ಇದು ಬಳಸುತ್ತದೆ. ಜಗತ್ತಿನೆಲ್ಲೆಡೆ ಕೃಷಿಯಲ್ಲಿ ಬಳಸಲಾಗುವ ಶೇ.30ರಷ್ಟು ನೀರನ್ನು ಭತ್ತದ ಬೆಳೆಯೊಂದೇ ಬಳಸುತ್ತಿರುವುದರಿಂದ  ಈ ಹೊಸ ತಳಿ ಭರವಸೆ ಮೂಡಿಸಿದೆ.

2007: ಕೆನಡಾದಲ್ಲಿ ಪತ್ತೆ ಮಾಡಲಾಗಿದ್ದ 5650 ಲಕ್ಷ ವರ್ಷ ಹಳೆಯ ಪಳೆಯುಳಿಕೆಗೆ ಭಾರತದ ನಿವೃತ್ತ ಭೂಗರ್ಭ ಶಾಸ್ತ್ರಜ್ಞರೊಬ್ಬರ ಹೆಸರು ಇಡಲಾಗಿದ್ದು, ಇದು ಭಾರತೀಯನೊಬ್ಬನಿಗೆ ದೊರೆತ ಅಪರೂಪದ ಗೌರವ. 60ರ ದಶಕದ ಕೊನೆಯಲ್ಲಿ ಭೂಗರ್ಭ ಶಾಸ್ತ್ರಜ್ಞ ಡಾ. ಎಸ್.ಬಿ.ಮಿಶ್ರ ಅವರು ಅನೇಕ ಪುರಾತನ ಪಳೆಯುಳಿಕೆಗಳನ್ನು ಶೋಧಿಸಿದ್ದರು. ಈ ಪೈಕಿ ಒಂದು ಪಳೆಯುಳಿಕೆಗೆ ಮಿಶ್ರ ಅವರ ಹೆಸರನ್ನು ಇಡಲು ಕೆನಡಾದ ಪೋರ್ಚುಗಲ್ ಕೊವ್ ಸೌತ್ ಸಿಟಿಯಲ್ಲಿ ನಡೆದ  ಸಭೆ ತೀರ್ಮಾನಿಸಿತು. ಇನ್ನುಮುಂದೆ  ಈ ಪಳೆಯುಳಿಕೆಯನ್ನು ` ಫ್ರಾಕ್ಟೊಫ್ಯುಸಸ್ ಮಿಸ್ರೈ' ಎಂದು ಕರೆಯಲಾಗುತ್ತದೆ. ಮಿಶ್ರ ಅವರು `ಮಿಸ್ಟೇಕನ್ ಪಾಯಿಂಟ್' ನಲ್ಲಿ ಈ ಪಳೆಯುಳಿಕೆಯನ್ನು ಪತ್ತೆ ಹಚ್ಚಿ ಅದರ ಕಾಲವನ್ನು ಅಂದಾಜು ಮಾಡಿದ್ದರು. ಹೀಗಾಗಿ ಈ ಸ್ಥಳವನ್ನು ಕೆನಡಾ ಸರ್ಕಾರ ಸಂರಕ್ಷಿತ ತಾಣವೆಂದು ಘೋಷಿಸಿದೆ.

2007: ರಷ್ಯದಲ್ಲೇ ಅತಿ ಎತ್ತರ ಎನ್ನಬಹುದಾದ ಗಗನ ಚುಂಬಿ ಕಟ್ಟಡಕ್ಕೆ ಮಾಸ್ಕೊದ (ಇತಾರ್ ತಾಸ್) ಮೇಯರ್ ಯುರಿ ಲುಝಕೊವ್ ಶಿಲಾನ್ಯಾಸ ನೆರವೇರಿಸಿದರು. `ರಷ್ಯಾದ ಗಗನಚುಂಬಿ ಕಟ್ಟಡ ಅಥವಾ `ದಿ ರಷ್ಯಾ ಟವರ್' ಎಂದು  ಕರೆಯಲ್ಪಡುವ ಈ ಕಟ್ಟಡದ ವಿನ್ಯಾಸಕಾರ ಬ್ರಿಟಿಷ್ ವಾಸ್ತುಶಿಲ್ಪಿಕಾರ ನಾರ್ಮನ್ ಫಾಸ್ಟೆರ್. ಪಿರಮಿಡ್ ಶೈಲಿಯಲ್ಲಿ ನಿರ್ಮಿಸಲಾಗುವ ಈ ಕಟ್ಟಡದ ಎತ್ತರ 612 ಮೀಟರುಗಳು.

2007: ವಿಶ್ವದ ಹಿರಿಯಜ್ಜ ಜಪಾನಿನ ಟೋಕಿಯೋದ ಟೊಮೊಜಿ ತನಾಬೆ ಅವರಿಗೆ ಈದಿನ 112 ನೇ ಜನ್ಮದಿನದ ಸಂಭ್ರಮ. ಜಪಾನಿನ ಸಾಂಪ್ರದಾಯಿಕ ಉಪಾಹಾರ ಸೇವನೆ ಮೂಲಕ ತಮ್ಮ ಹುಟ್ಟುಹಬ್ಬ ಆಚರಿಕೊಂಡ ಅವರು, 'ನಾನು ಅಜರಾಮರನಾಗಲು ಬಯಸುವೆ' ಎಂದು ಹೇಳಿದರು. ಜಪಾನಿನ ಮಿಯಾಝಕಿಯಲ್ಲಿರುವ ತಮ್ಮ ಮಗನ ಜತೆ ವಾಸವಾಗಿರುವ ಈ  ಹಿರಿಯಜ್ಜ, ದಿನಚರಿ ಬರೆಯುತ್ತಾರೆ. ದಿನಪತ್ರಿಕೆ ಓದುವ ಹವ್ಯಾಸವಿದೆ. `ನನಗೆ ಸಾಯಲು ಇಷ್ಟವಿಲ್ಲ. ದೀರ್ಘಾಯುಷಿಯಾಗಲು ಬಯಸುತ್ತೇನೆ. ಮದ್ಯ ಸೇವನೆಯಿಂದ ದೂರ ಇರುವುದೇ ನನ್ನ ಸುದೀರ್ಘ ಬದುಕಿನ ಗುಟ್ಟು' ಎಂದು ತನಾಬೆ ನೀಡಿದ ಹೇಳಿಕೆಯನ್ನು ಕ್ಯುಡೋ ಸುದ್ದಿ ಸಂಸ್ಥೆ ವರದಿ ಮಾಡಿತು.

2007: 1994ಕ್ಕಿಂತ ಮೊದಲು ವಿವಾಹವಾದ ಮಹಿಳೆ ಕೂಡ ಪಿತ್ರಾರ್ಜಿತ ಆಸ್ತಿಯಲ್ಲಿ ಪುರುಷನಷ್ಟೇ ಸಮಪಾಲುದಾರಳು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. ಈ ಅವಧಿ ನಂತರ ವಿವಾಹವಾದ ಮಹಿಳೆ ಮಾತ್ರ ಪಿತ್ರಾರ್ಜಿತ ಆಸ್ತಿಯಲ್ಲಿ (ತಂದೆ ಅಥವಾ ತಾಯಿಗೆ ಅವರ ಪೂರ್ವೀಕರಿಂದ ಬಂದ ಪಾಲು) ಸಮಪಾಲು ಕೇಳಲು ಅರ್ಹ ಎಂಬ `ಹಿಂದು ಉತ್ತರಾಧಿಕಾರಿ ಕಾಯ್ದೆ-1956'ಕ್ಕೆ ರಾಜ್ಯ ಸರ್ಕಾರ ಮಾಡಿರುವ ತಿದ್ದುಪಡಿಯನ್ನು ಕೋರ್ಟ್ ಅನೂರ್ಜಿತಗೊಳಿಸಿತು. ಅಂತೆಯೇ, ಇಬ್ಬರೂ ಸಮಾನ ಹಕ್ಕುದಾರರು ಎಂದು ಕೇಂದ್ರ ಸರ್ಕಾರವು 2005 ರಲ್ಲಿ ಮಾಡಿದ ತಿದ್ದುಪಡಿಯನ್ನು ನ್ಯಾಯಮೂರ್ತಿ ವಿ.ಜಗನ್ನಾಥನ್ ಎತ್ತಿ ಹಿಡಿದರು. ಕಾಯ್ದೆಯ 6(ಎ)(ಬಿ) ಪ್ರಕಾರ ವಿವಾಹಿತ ಮಹಿಳೆ ಹಾಗೂ ಪುರುಷರು ಸಮಾನರು ಎಂದು ತಿಳಿಸಲಾಗಿದ್ದರೂ, 1990 ರಲ್ಲಿ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ಮಾಡಿತು. 1994ರ ಜುಲೈ 30ಕ್ಕೆ ಅನ್ವಯ ಆಗುವಂತೆ ಮಾಡಲಾದ ಈ ತಿದ್ದುಪಡಿಯಲ್ಲಿ 6(ಎ)(ಸಿ) ಕಲಮು ಸೇರ್ಪಡೆಯಾಯಿತು. ಈ ಕಲಮಿನ ಪ್ರಕಾರ ಮಹಿಳೆಯ ಆಸ್ತಿ ಹಕ್ಕಿಗೆ 1994ರ ಜುಲೈ 30ರ ದಿನಾಂಕವನ್ನು `ಕಟ್ ಆಫ್' ದಿನಾಂಕವನ್ನಾಗಿ ನಿಗದಿ ಮಾಡಲಾಯಿತು. ಈ ಅವಧಿಯ ನಂತರದಲ್ಲಿ ವಿವಾಹವಾದ ಮಹಿಳೆ ಮಾತ್ರ ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗಿದಾರಳೇ ವಿನಾ, ಮೊದಲು ವಿವಾಹವಾದ ಮಹಿಳೆಗೆ ಅನರ್ಹಳು ಎಂದು ತಿಳಿಸಲಾಯಿತು. ಆದರೆ ಕೇಂದ್ರ ಸರ್ಕಾರ 2005 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಿ, ಆಸ್ತಿಯಲ್ಲಿ ಇಬ್ಬರೂ ಸಮಾನರು ಎಂದು ಘೋಷಿಸಿತು. ಕೇಂದ್ರ ಸರ್ಕಾರದ ತಿದ್ದುಪಡಿ ರಾಜ್ಯ ಸರ್ಕಾರದ ತಿದ್ದುಪಡಿಗಿಂತ ನಂತರದ ಅವಧಿಯಲ್ಲಿ ಆಗಿರುವ ಕಾರಣ, ಅದೇ ಊರ್ಜಿತಗೊಳ್ಳುತ್ತದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು. ತಿದ್ದುಪಡಿಯನ್ನು ಪ್ರಶ್ನಿಸಿ ವಿಜಾಪುರ ಜಿಲ್ಲೆ ಸಿಂಧಗಿಯ ಸುಗಲಾಬಾಯಿ ಮಾಲಗಾರ ಹಾಗೂ ಕೋಲಾರ ಜಿಲ್ಲೆಯ ಶಿಡ್ಲಘಟ್ಟದ ವೆಂಕಟರಾಯಪ್ಪ ಅವರು ಸಲ್ಲಿಸಿದ ಅರ್ಜಿಯನ್ನು ಇತ್ಯರ್ಥ ಮಾಡಿದ ಕೋರ್ಟ್, ಕೇಂದ್ರ ಸರ್ಕಾರದ ತಿದ್ದುಪಡಿ ಪ್ರಕಾರ, ಇಬ್ಬರಿಗೂ ಸಮಾನ ಅವಕಾಶ ಇದೆ ಎಂದು  ಅವರು  ಆದೇಶಿಸಿದರು.

2007: ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ-2007ರ ಅಧ್ಯಕ್ಷತೆಯನ್ನು ಹಿರಿಯ ವಿದ್ವಾಂಸರೂ, ಕನ್ನಡ ನಿಘಂಟು ತಜ್ಞರೂ ಆದ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ವಹಿಸುವರು ಎಂದು ಎಂದು ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ ಆಳ್ವ ಪ್ರಕಟಿಸಿದರು. ಸಮೇಳನವನ್ನು ಹಿರಿಯ ಸಾಹಿತಿ ಕಾದಂಬರಿಕಾರ ವ್ಯಾಸರಾಯ ಬಲ್ಲಾಳ ಉದ್ಘಾಟಿಸುವರು.

2007: ಸಂವೇದಿ ಸೂಚ್ಯಂಕವು ಇದೇ ಮೊದಲ ಬಾರಿಗೆ 16 ಸಾವಿರ ಅಂಶ ದಾಟುವ ಮೂಲಕ ಮುಂಬೈ ಷೇರುಪೇಟೆಯಲ್ಲಿ ಹೊಸ ಮೈಲಿಗಲ್ಲೊಂದು ಸ್ಥಾಪನೆಗೊಂಡಿತು.

2007: ಯುವ ಹಾಗೂ ಬಿರುಸಿನ ಹೊಡೆತಗಳ ಆಟಗಾರ ಮಹೇಂದ್ರ ಸಿಂಗ್ ದೋನಿ ಅವರನ್ನು ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕನನ್ನಾಗಿ ಆಯ್ಕೆ ಮಾಡಲಾಯಿತು. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ರಾಷ್ಟ್ರೀಯ ಆಯ್ಕೆ ಸಮಿತಿ ಸಭೆಯು ಸ್ವದೇಶದಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಹಾಗೂ ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿಗೆ ಈ ಆಯ್ಕೆ ಮಾಡಿತು. ರಾಹುಲ್ ದ್ರಾವಿಡ್ ಅವರು ನಾಯಕತ್ವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದರಿಂದ ಈ ಹುದ್ದೆ ತೆರವಾಗಿತ್ತು.

2007: ಬಹುಕಾಲದಿಂದ ನೆನೆಗುದಿಗೆ ಬಿದ್ದಿದ್ದ ಸರ್ಕಾರದ ಹಿರಿಯ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಣೆಯಿಂದ ತನಿಖೆ ಆರಂಭಿಸುವ ಅಧಿಕಾರವನ್ನು ಸುಗ್ರೀವಾಜ್ಞೆ ಮೂಲಕ ಲೋಕಾಯುಕ್ತರಿಗೆ ನೀಡಲು ಕರ್ನಾಟಕ ರಾಜ್ಯ ಸಚಿವ ಸಂಪುಟ ನಿರ್ಧರಿಸಿತು. ಆದರೆ ಸ್ವಯಂಪ್ರೇರಣೆಯಿಂದ ವಿಚಾರಣೆ ನಡೆಸುವ ಅಧಿಕಾರದಿಂದ ಶಾಸಕರು, ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಹೊರಗಿರಿಸಲಾಯಿತು. ಈ ವರ್ಗವನ್ನು ಸಹ ಸ್ವಯಂಪ್ರೇರಣೆಯಿಂದ ತನಿಖೆ ನಡೆಸುವ ವ್ಯಾಪ್ತಿಗೆ ತರಬೇಕು ಎನ್ನುವ ಆಗ್ರಹವನ್ನು ಲೋಕಾಯುಕ್ತರು ಮಾಡಿದ್ದರು.

2006: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿಂತೆ ತಲೆ ತಪ್ಪಿಸಿಕೊಂಡಿರುವ ಮುಖ್ಯ ಆರೋಪಿ ಟೈಗರ್ ಮೆಮನ್ ನ ಮಾಜಿ ಅಕೌಂಟೆಂಟ್ ಅಸ್ಘರ್ ಯೂಸುಫ್ ಮುಕದಮ್ ಮತ್ತು ಆತನ ಸಹಚರ ಶಾನವಾಜ್ ಅಬ್ದುಲ್ ಖಾದರ್ ಖುರೇಷಿ ಅವರನ್ನು 1993ರಲ್ಲಿ ಪ್ಲಾಜಾ ಥಿಯೇಟರಿನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣದ ತಪ್ಪಿತಸ್ಥರು ಎಂದು ವಿಶೇಷ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ ಅವರು ತೀರ್ಪು ನೀಡಿದರು. ಮುಕದಮ್ ಸಹಚರ ಖುರೇಷಿ ಶಸ್ತ್ರಾಸ್ತ್ರ ತರಬೇತಿ ಪಡೆಯಲು ಪಾಕಿಸ್ತಾನಕ್ಕೆ ತೆರಳುವ ಅಪರಾಧವನ್ನೂ ಎಸಗಿದ್ದಾನೆ ಎಂದು ನ್ಯಾಯಾಲಯ ಹೇಳಿತು. ನ್ಯಾಯಾಂಗ ತೀರ್ಪಿನಲ್ಲಿ ನೆರೆ ರಾಷ್ಟ್ರವೊಂದರರಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದ ವಿಚಾರ ಪ್ರಸ್ತಾಪಗೊಂಡದ್ದೂ ಇದೇ ಮೊತ್ತ ಮೊದಲನೆಯ ಸಲ.

2006: ವಿಶ್ವದ ಮೊದಲ ಮಹಿಳಾ ಪ್ರವಾಸಿ ಹಾಗೂ ಪ್ರಥಮ ಇರಾನ್ ಸಂಜಾತೆ ಅಮೆರಿಕದ ಅನೌಷೇಹ ಅನ್ಸಾರಿ ಅವರನ್ನು ಹೊತ್ತ ರಷ್ಯದ ಸೋಯುಜ್ ಅಂತರಿಕ್ಷ ನೌಕೆಯು ಕಜಕಸ್ಥಾನದ ಬೈಕನೂರ್ ಉಡಾವಣಾ ಕೇಂದ್ರದಿಂದ ಬೆಳಕ್ಕೆ 9.39ಕ್ಕೆ ಬಾಹ್ಯಾಕಾಶದಲ್ಲಿನ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾವಣೆಗೊಂಡಿತು. ರಷ್ಯದ ಮಿಖಾಯಿಲ್ ಟ್ಯುರಿನ್ ಮತ್ತು ಅಮೆರಿಕದ ಮೈಕೆಲ್ ಲೋಪೆಜ್ ಅವರು ಗಗನ ನೌಕೆಯೊಳಗಿರುವ ಇತರ ಇಬ್ಬರು ಗಗನಯಾತ್ರಿಗಳು. 10 ದಿನಗಳ ಬಳಿಕ ಅನ್ಸಾರಿ ಭೂಮಿಗೆ ವಾಪಸಾಗುವರು.

2006: ಜಾರ್ಖಂಡ್ ರಾಜ್ಯದ ನಾಲ್ಕನೇ ಮುಖ್ಯಮಂತ್ರಿಯಾಗಿ ಪಕ್ಷೇತರ ಶಾಸಕ ಮಧು ಕೋಡಾ ರಾಂಚಿಯಲ್ಲಿ ಪ್ರಮಾಣವಚನ ಸ್ವೀಕರಿಸಿದರು.

2001: ದಕ್ಷಿಣ ಆಫ್ರಿಕದ ಕ್ರಿಕೆಟಿಗ ಜಾಕಿಸ್ ಕಾಲ್ಲೀಸ್ ಅವರು ಬುಲಾವೆಯೋದ ಕ್ರಿಕೆಟ್ ಟೆಸ್ಟಿನಲ್ಲಿ ಔಟಾಗದೇ ದೀರ್ಘಕಾಲ ಬ್ಯಾಟಿಂಗ್ ಮಾಡುವ ಮೂಲಕ ಜಾಗತಿಕ ದಾಖಲೆ ನಿರ್ಮಿಸಿದರು. ಎರಡು ಟೆಸ್ಟ್ ಪಂದ್ಯ ಸರಣಿಯಲ್ಲಿ ಅವರು 388 ರನ್ನುಗಳನ್ನು ಗಳಿಸಿದರು. ಔಟಾಗದೇ 1028 ನಿಮಿಷಗಳ ಕಾಲ ಬ್ಯಾಟಿಂಗ್ ಮಾಡಿದ ಅವರು ಇಂಗ್ಲೆಂಡಿನ ನಾಸ್ಸೇರ್ ಹುಸೇನ್ ಅವರು
1999-2000ದಲ್ಲಿ ದಕ್ಷಿಣ ಆಫ್ರಿಕ ವಿರುದ್ಧದ ಪಂದ್ಯದಲ್ಲಿ ಮಾಡಿದ ದಾಖಲೆಯನ್ನು (1021 ನಿಮಿಷ) ಮುರಿದರು.

1990: ಭಾರತದ ಮಾಜಿ ಉಪ ರಾಷ್ಟ್ರಪತಿ, ಮುಖ್ಯ ನ್ಯಾಯಮೂರ್ತಿ ಎಂ. ಹಿದಾಯತುಲ್ಲಾ (89) ನಿಧನರಾದರು.

1980: ಕ್ಯೂಬಾದ ಗಗನಯಾನಿ ಅರ್ನಾಲ್ಡ್ ಟಮಾಯೋ-ಮೆಂಡೆಝ್ ಅವರು ಬಾಹ್ಯಾಕಾಶಕ್ಕೆ ಹಾರಿದ ಪ್ರಥಮ ಲ್ಯಾಟಿನ್ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇಂಟರ್ ಕಾಸ್ಮೋಸ್ ಕಾರ್ಯಕ್ರಮದ ಅಡಿಯಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾದ `ಸೋಯುಜ್-38ರಲ್ಲಿ ಇದ್ದ ಇಬ್ಬರು ಗಗನ ಯಾನಿಗಳ ಪೈಕಿ ಅರ್ನಾಲ್ಡ್ ಒಬ್ಬರಾಗಿದ್ದರು.

1970: ರಾಕ್ ಸಂಗೀತಗಾರ ಜಿಮಿ ಹೆಂಡ್ರಿಕ್ಸ್ ಲಂಡನ್ನಿನಲ್ಲಿ ತಮ್ಮ 27ನೇ ವಯಸ್ಸಿನಲ್ಲಿಮೃತರಾದರು. ಮನಸ್ಸನ್ನು ಶಾಂತಗೊಳಿಸಿ ನಿದ್ದೆ ಬರುವಂತೆ ಮಾಡುವ ಮಾದಕ ದ್ರವ್ಯದ (ಬಾರ್ಬಿಟ್ಯುರೇಟ್ಸ್) ಅತಿ ಸೇವನೆ ಪರಿಣಾಮವಾಗಿ ಅವರು ಅಸುನೀಗಿದರು.

1961: ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾಗ್ ಹ್ಯಾಮರ್ ಶೀಲ್ಡ್ ಅವರು ಲಿಯೋಪೋಲ್ಡ್ ವಿಲ್ಲೆಗೆ ಪ್ರಯಾಣ ಮಾಡುತ್ತಿದ್ದಾಗ ಉತ್ತರ ರೊಡೇಸಿಯಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿಮೃತರಾದರು. 1961ರಲ್ಲಿ ಅವರಿಗೆ ಮರಣೋತ್ತರ ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

1958: ಭಾರತೀಯ ತತ್ವಶಾಸ್ತ್ರಜ್ಞ ಹಾಗೂ ವಿದ್ವಾಂಸ ಡಾ. ಭಗವಾನ್ ದಾಸ್ ಅವರು ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು.

1958: ಸಾಹಿತಿ ಗಿರಿಜಾ ಶಾಸ್ತ್ರಿ ಜನನ.

1951: ಖ್ಯಾತ ಚಿತ್ರನಟಿ ಶಬಾನಾ ಆಜ್ಮಿ ಜನನ. ಖ್ಯಾತ ಸಾಹಿತಿ ಕೈಫಿ ಆಜ್ಮಿ- ರಂಗನಟಿ ಶೌಕತ್ ದಂಪತಿಯ ಪುತ್ರಿ ಶಬಾನಾ ಆಜ್ಮಿ ಅವರ ಪತಿ ಚಿತ್ರ ಸಾಹಿತಿ ಜಾವಿದ್ ಅಖ್ತರ್. ಮನೋವಿಜ್ಞಾನದಲ್ಲಿ ಪದವಿ, ಪುಣೆ ಭಾರತೀಯ ದೂರದರ್ಶನ ಮತ್ತು ಚಲನಚಿತ್ರ ಸಂಸ್ಥೆಯಲ್ಲಿ ಕಲಾ ತರಬೇತಿ ಪಡೆದ ಶಬಾನಾ ಅವರ ಮೊದಲ ಚಿತ್ರ- ಶ್ಯಾಮ್ ಬೆನಗಲ್ ನಿರ್ದೇಶನದ `ಅಂಕುರ್'. 1983, 1984, 1985ರಲ್ಲಿ ಚಲನಚಿತ್ರ ರಾಷ್ಟ್ರ ಪ್ರಶಸ್ತಿಗಳನ್ನು ಗಳಿಸಿದ ಶಬಾನಾಗೆ 1988ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತು.
1950: ಸಾಹಿತಿ ಭಾಗ್ಯಲಕ್ಷ್ಮಿ ಎನ್.ವಿ. ಜನನ.

1948: ಈದಿನ ಸಂಜೆ 4.30ರ ವೇಳೆಗೆ ಹೈದರಾಬಾದ್ ರಾಜ್ಯದ ಪಡೆಗಳ ಕಮಾಂಡರ್ ಮೇಜರ್ ಜನರಲ್ ಎಲ್ ಎಡ್ರೋಸ್ ಅವರು ಹೈದರಾಬಾದ್ ನಿಜಾಮನ ಪರವಾಗಿ ಭಾರತೀಯ ಸೇನೆಯ ಮೊದಲ ಸಶಸ್ತ್ರ ವಿಭಾಗದ ಕಮಾಂಡರ್ ಮೇಜರ್ ಜನರಲ್ ಜೆ.ಎನ್. ಚೌಧರಿ ಅವರಿಗೆ ಶರಣಾಗತರಾದರು. ರಜಕಾರರ ನಾಯಕ ಕಾಸಿಂ ರಿಜ್ವಿಯನ್ನು ಬಂಧಿಸಿ, ರಜಕಾರರ ಸಂಘಟನೆಯನ್ನು ನಿಷೇಧಿಸಲಾಯಿತು. ಮೇಜರ್ ಜನರಲ್ ಜೆ.ಎನ್. ಚೌಧರಿ ಅವರನ್ನು ಮಿಲಿಟರಿ ಗವರ್ನರ್ ಆಗಿ ನೇಮಿಸಲಾಯಿತು. 1950ರ ಜನವರಿ 26ರಂದು ಹೈದರಾಬಾದನ್ನು ಭಾರತಕ್ಕೆ ಸೇರ್ಪಡೆ ಮಾಡಲಾಯಿತು.

1938: ಸಾಹಿತಿ ಶಾರದಾ ತಿರುಮಲೈ ಜನನ.

1935: ಸಾಹಿತ್ಯ, ಸಂಗೀತ, ಕ್ರೀಡಾಪ್ರೇಮಿ ಸದಾನಂದ ಕನವಳ್ಳಿ ಅವರು ವೀರಪ್ಪ- ವೀರಮ್ಮ ದಂಪತಿಯ ಮಗನಾಗಿ ಸವಣೂರು ತಾಲ್ಲೂಕಿನ ಹಿರೇಮುಗದೂರ ಗ್ರಾಮದಲ್ಲಿ ಜನಿಸಿದರು.

1935: ಸಾಹಿತಿ ಜಿ.ಎಚ್. ನಾಯಕ ಜನನ.

1917: ಸಾಹಿತಿ ವಸಂತಾದೇವಿ ಅನಕೃ ಜನನ.

1851: ಹೆನ್ರಿ ಜಾರ್ವಿಸ್ ರೇಮಂಡ್ ಅವರಿಂದ ಸ್ಥಾಪನೆಯಾದ `ದಿ ನ್ಯೂಯಾರ್ಕ್ ಟೈಮ್ಸ್' ಪತ್ರಿಕೆಯ ಮೊದಲ ಸಂಚಿಕೆ ಪ್ರಕಟವಾಯಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment