Thursday, January 24, 2019

ಶೇ. 10ರ ಆರ್ಥಿಕ ಮೀಸಲಾತಿ: ತಡೆಯಾಜ್ಞೆಗೆ ಸುಪ್ರೀಂ ನಕಾರ


ಶೇ. 10 ಆರ್ಥಿಕ ಮೀಸಲಾತಿ: ತಡೆಯಾಜ್ಞೆಗೆ ಸುಪ್ರೀಂ ನಕಾರ

ನವದೆಹಲಿ: ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ ಬಡವರಿಗೆ ೧೦ ಶೇ. ರಷ್ಟು ಮೀಸಲಾತಿ ಕಲ್ಪಿಸಿರುವ ಕೇಂದ್ರ ಸರ್ಕಾರದ ಎಕ್ಸಿಕ್ಯೂಟಿವ್ ಆದೇಶಕ್ಕೆ ತಡೆಯಾಜ್ಞೆ ನೀಡಲು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ  ನೇತೃತ್ವದ ಸುಪ್ರೀಂಕೋರ್ಟ್  ಪೀಠವು ೨೦೧೯ ಜನವರಿ ೨೫ ಶುಕ್ರವಾರ ನಿರಾಕರಿಸಿತು.

ಹೊಸ ಮೀಸಲಾತಿಯ ಅಡಿಯಲ್ಲಿ ಮಾಡಲಾಗುವ ನೇಮಕಾತಿಗಳು ಸುಪ್ರೀಂಕೋರ್ಟಿನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂಬುದಾಗಿ ಶರತ್ತು ವಿಧಿಸುವಂತೆ ಮಾಡಲಾದ ಮನವಿಯನ್ನು ಕೂಡಾ ತಿರಸ್ಕರಿಸಿದ ಪೀಠ, ನಾವು ವಿಷಯವನ್ನು ಪರಿಶೀಲಿಸುತ್ತೇವೆ ಎಂದು ಹೇಳಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ನಾಲ್ಕು ವಾರಗಳ ಒಳಗಾಗಿ ಪ್ರತಿಕ್ರಿಯೆ ನೀಡುವಂತೆ  ಸೂಚಿಸಿ ನೋಟಿಸ್ ಜಾರಿ ಮಾಡಿತು.
  
ಮನವಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಿಷಯವನ್ನು ಪರಿಶೀಲಿಸಲಾಗುವುದು ಎಂದು ಪೀಠ ಹೇಳಿತು.

ಸರ್ಕಾರಿ ಉದ್ಯೋಗಗಳಲ್ಲಿ  ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯ ವರ್ಗದ ಆರ್ಥಿಕ ದುರ್ಬಲರಿಗೆ ಶೇಕಡಾ ೧೦% ಮೀಸಲಾತಿ ಕಲ್ಪಿಸಿರುವ  103ನೇ ಸಂವಿಧಾನ ತಿದ್ದುಪಡಿ  ಕಾನೂನು ಜಾರಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾಗಿದೆ.

ಸಮಾನತೆಗಾಗಿ ಯುವಕರು (ಯೂತ್ ಫಾರ್ ಈಕ್ವಾಲಿಟಿ) ಸರ್ಕಾರೇತರ ಸಂಘಟನೆಯು ಅರ್ಜಿಯನ್ನು ಸಲ್ಲಿಸಿದೆ. ಸದರಿ ಕಾನೂನು ವಿಧಾನದ "ಮೂಲರಚನೆಯನ್ನು" ಬದಲಾಯಿಸುತ್ತದೆ ಎಂದು  ಅರ್ಜಿಯು ಪ್ರತಿಪಾದಿಸಿದೆ.

೨೦೧೯ ಲೋಕಸಭೆ ಚುನಾವಣೆಗಳಿಗೆ ಮುಂಚಿತವಾಗಿ ತಿಂಗಳೊಳಗೆ ಮಸೂದೆಯನ್ನು  ಅಂಗೀಕರಿಸಲು  ಕೇಂದ್ರ ಸರ್ಕಾರವು "ತ್ವರೆ" ಮಾಡಿದ್ದುದನ್ನು ವಿರೋಧ ಪಕ್ಷಗಳು ತೀವ್ರವಾಗಿ ಪ್ರಶ್ನಿಸಿದ ಬಳಿಕ ಮಸೂದೆಗೆ ಸಂಸತ್ತಿನ ಅನುಮತಿ ಲಭಿಸಿತ್ತು.

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಮೂರು  ಪ್ರಮುಖ ಹಿಂದಿ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಕೇಂದ್ರದ ಅಧಿಕಾರಾರೂಢ ಬಿಜೆಪಿ ಸೋಲುಂಡ ಬಳಿಕ ಕೇಂದ್ರ ಸರ್ಕಾರವು ಮಸೂದೆಯನ್ನು ತಂದಿಗೆ ಎಂದು ಪ್ರತಿಪಕ್ಷಗಳು ದಾಳಿ ನಡೆಸಿದ್ದವು.

ಮಸೂದೆಯನ್ನು ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ೧೯೯೨ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಒಂಬತ್ತು ನ್ಯಾಯಮೂರ್ತಿಗಳ ಸುಪ್ರೀಂಕೋರ್ಟ್ ಸಂವಿಧಾನ ಪೀಠವು ನೀಡಿದ್ದ ಆದೇಶವನ್ನು ಉಲ್ಲೇಖಿಸಿದೆ.  ಉದ್ಯೋಗ ಮತ್ತು ಶಿಕ್ಷಣದಲ್ಲಿ ಆರ್ಥಿಕ ಹಿಂದುಳಿದಿರುವಿಕೆಯು ಮೀಸಲಾತಿಗೆ ಆಧಾರವಾಗಿರಬಾರದು ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಹೇಳಿದ್ದು, ಬಂಧನಕಾರಿಯಾದ  ತೀರ್ಪನ್ನು ಸದರಿ ಕಾನೂನು ಉಲ್ಲಂಘಿಸಿದೆ ಎಂದು ಅರ್ಜಿ ಪ್ರತಿಪಾದಿಸಿದೆ.

ಹೊಸ ಮೀಸಲಾತಿ  ಕಾನೂನು ಉದ್ಯೋಗ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಧಿಸಿರುವ ಶೇಕಡಾ 50 ಒಟ್ಟಾರೆ  ಮೀಸಲಾತಿ ಮಿತಿಯನ್ನೂ ಉಲ್ಲಂಘಿಸುತ್ತದೆ ಎಂದೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಾದಿಸಿದೆ.  ೨೦೦೬ ರಲ್ಲಿ ಎಂ ನಾಗರಾಜ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಮಿತಿಯನ್ನು  ನಿಗದಿಪಡಿಸಿದೆ ಎಂದು ಅರ್ಜಿ ಹೇಳಿದೆ.

ಪ್ರಸ್ತುತ ಜಾರಿಯಲ್ಲಿರುವ  ಸಾಂವಿಧಾನಿಕ ವ್ಯವಸ್ಥೆಗಳಡಿಯಲ್ಲಿ, ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳಿಗೆ ಓಬಿಸಿ) ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ವ್ಯವಸ್ಥೆ ಇದೆ.

ಏನಿದ್ದರೂ, ಸದರಿ ಕಾನೂನು ನ್ಯಾಯಾಲಯದ ಪರಿಶೀಲನೆಯಲ್ಲಿ ಪಾರಾಗಬಲ್ಲುದು ಎಂದು ಸರ್ಕಾರ ಪ್ರತಿಪಾದಿಸಿದೆ.

ಲೋಕಸಭೆಯಲ್ಲಿ ಮಸೂದೆ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರುಶೇಕಡಾ 50 ಮೀಸಲಾತಿ ಮಿತಿಯು ಹಿಂದುಳಿದ ಜಾತಿ, ವರ್ಗಗಳ ಮೀಸಲಾತಿಗೆ ಮಾತ್ರ ಅನ್ವಯವಾಗುತ್ತದೆ  ಎಂಬುದಾಗಿ  ಸುಪ್ರೀಂ ಕೋರ್ಟ್ ಹೇಳಿದೆ. ಮಸೂದೆಯುಸಾಮಾಜಿಕ ಮತ್ತು ಆರ್ಥಿಕ ನ್ಯಾಯಒದಗಿಸುತ್ತದೆ ಎಂದು ಪ್ರತಿಪಾದಿಸಿದ್ದರು.

ಸದರಿ ಕಾನೂನು  ಖಾಸಗಿ ಅನುದಾನರಹಿತ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೂಡಾ  ಮೀಸಲಾತಿಯನ್ನು ಕಲ್ಪಿಸುತ್ತದೆ. ಹಿಂದಿನ ಎರಡು ತೀರ್ಪುಗಳ ಮೂಲಕ ಸುಪ್ರೀಂಕೋರ್ಟ್ ಇದನ್ನು ನಿಷೇಧಿಸಿತ್ತು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಾದಿಸಿದೆ.

No comments:

Post a Comment