ನಾನು ಮೆಚ್ಚಿದ ವಾಟ್ಸಪ್

Monday, March 2, 2020

ಇಂದಿನ ಇತಿಹಾಸ History Today ಮಾರ್ಚ್ 02

2020: ನವದೆಹಲಿ:  ಟ್ವಿಟರ್, ಫೇಸ್ ಬುಕ್,  ಇನ್ ಸ್ಟಾ ಗ್ರಾಮ್ ಹಾಗೂ ಯೂಟ್ಯೂಬ್ ನಿಂದ  ದೂರ ಉಳಿಯುವ ಬಗ್ಗೆ ಚಿಂತನೆ ನಡೆಸಿರುವುದಾಗಿ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು 2020 ಮಾರ್ಚ್ 02ರ ಸೋಮವಾರ ಅಚ್ಚರಿಯ “ಶಾಕ್ ನೀಡಿದರು. ಈ ಭಾನುವಾರ ಹೀಗೇ ಚಿಂತನೆ ನಡೆಸುತ್ತಿದ್ದಾಗ, ಸಾಮಾಜಿಕ ಜಾಲತಾಣಗಳಿಂದ ದೂರ ಸರಿದರೆ ಹೇಗೆಂಬ ಆಲೋಚನೆ ಮನಸ್ಸಿನಲ್ಲಿ ಸುಳಿದಿತ್ತು ಎಂದು ಟ್ವೀಟ್ ಮಾಡಿದ ಅವರು, ಈ ಚಿಂತನೆಗೆ ಕಾರಣವೇನೆಂಬುದನ್ನು ತಿಳಿಸಲಿಲ್ಲ. ಸಾಮಾಜಿಕ ಜಾಲತಾಣಗಳನ್ನು ಅತ್ಯಂತ “ಸಮರ್ಥವಾಗಿ ಬಳಸಿಕೊಂಡ ಭಾರತದ ಏಕೈಕ ಪ್ರಧಾನಿಯೆಂಬ ಹೆಗ್ಗಳಿಕೆಯನ್ನು ಪಡೆದಿರುವ ಮೋದಿ, ಇತ್ತೀಚೆಗಷ್ಟೇ, ಫೇಸ್ ಬುಕ್ ನಲ್ಲಿ  ಅತಿ ಹೆಚ್ಚು ಬೆಂಬಲಿಗರನ್ನು ಹೊಂದಿರುವ ವಿಶ್ವದ ೨ನೇ ನಾಯಕರಾಗಿ ಹೊರಹೊಮ್ಮಿದ್ದರು.  ಅಮೆರಿಕದ ಅಧ್ಯಕ್ಷ ಟ್ರಂಪ್ ಅವರೇ  ಇದ್ದನ್ನು ಖುದ್ದು ಹೇಳಿಕೊಂಡು ಮೋದಿ ಅವರಿಗೆ ಇತ್ತೀಚೆಗೆ ಧನ್ಯವಾದ ಹೇಳಿದ್ದರು. ಇದಾಗಿ ಕೆಲವೇ ದಿನಗಳಲ್ಲೇ ಮೋದಿ, ಹೀಗೆ ಹೇಳಿರುವುದು ಎಲ್ಲರಲ್ಲೂ ಕುತೂಹಲ ಹುಟ್ಟುಹಾಕಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಮಹದಾಯಿ ವಿಚಾರದಲ್ಲಿ ಗೋವಾಕ್ಕೆ ಹಿನ್ನಡೆಯಾಗಿದ್ದು, ಮಹದಾಯಿ ಯೋಜನೆ ಕಾಮಗಾರಿಯ ಡಿಪಿಆರ್ ಹಾದಿಯನ್ನು  2020 ಮಾರ್ಚ್ 02ರ ಸೋಮವಾರ ಸುಪ್ರೀಂ ಕೋರ್ಟ್ ಸುಗಮಗೊಳಿಸಿತು. ದೆ. ಕೇಂದ್ರದ ಅನುಮತಿ ಪಡೆದು ಡಿಪಿಆರ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್ ಕಾಮಗಾರಿಯನ್ನು ಆರಂಭಿಸಬಹುದು ಎಂದು ಹೇಳಿತು. ಮಹದಾಯಿ ನದಿ ನೀರು ಪ್ರಕರಣದಲ್ಲಿ ಕರ್ನಾಟಕದ ಯೋಜನೆ ಆಕ್ಷೇಪಿಸಿ ಗೋವಾ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಚಂದ್ರಚೂಡ್, ನ್ಯಾಯಮೂರ್ತಿ ಅಜಯ್ ರಸ್ಟೋಗಿ ದ್ವಿಸದಸ್ಯ ಪೀಠ ಈ ಸೂಚನೆ ನೀಡಿದ್ದು, ೨೦೧೪ರ ಮಧ್ಯಂತರ ಆದೇಶದಲ್ಲಿ ನೀಡಿರುವ ನಿರ್ದೇಶನ ಪಾಲಿಸಬೇಕು ಎಂದು ತಿಳಿಸಿದೆ. ಈ ಮೂಲಕ ಗೋವಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು. ಯೋಜನೆ ಕಾಮಗಾರಿಗೆ ಕೇಂದ್ರ, ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ಇದಲ್ಲದೆ ಡಿಪಿಆರ್ಗೆ ಕೇಂದ್ರ ಸರಕಾರದಿಂದ ಒಪ್ಪಿಗೆ ಪಡೆದುಕೊಳ್ಳಬೇಕು ಎಂದಿರುವ ಸುಪ್ರೀಂ, ಪರಿಸರ ಮೌಲ್ಯಮಾಪನ ಮಾಡಿಸಿ ಆ ವರದಿಗೆ ಒಪ್ಪಿಗೆ ಪಡೆಯಬೇಕು ಎಂದು ಆದೇಶಿಸಿದೆ. ಮಹದಾಯಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆ ವಿರುದ್ಧ ಗೋವಾ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಗೋವಾ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದರು. ಕರ್ನಾಟಕದ ಯೋಜನೆಗಳಿಗೆ ಅನುಮತಿ ನೀಡದಂತೆ ಆಕ್ಷೇಪ ವ್ಯಕ್ತಪಡಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಕೊರೋನವೈರಸ್ ಇಬ್ಬರಿಗೆ ತಗುಲಿರುವುದು ಖಚಿತವಾಗಿದೆ ಎಂದು ಸರ್ಕಾರ 2020 ಮಾರ್ಚ್ 02ರ ಸೋಮವಾರ ಪ್ರಕಟಿಸುವುದರೊಂದಿಗೆ ಜಗತ್ತನ್ನೇ ನಡುಗಿಸುತ್ತಿರುವ ಮಾರಕ ವ್ಯಾಧಿ ಭಾರತಕ್ಕೂ ಅಡಿ ಇಟ್ಟಿತು.  ನವದೆಹಲಿ ಮತ್ತು ತೆಲಂಗಾಣದಿಂದ ವರದಿಯಾಗಿರುವ ಪ್ರಕರಣಗಳಲ್ಲಿ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಎಂದು ಸರ್ಕಾರ ಸೋಮವಾರ ಹೇಳಿತು.  ಕೊರೋನಾವೈರಸ್ ಹರಡಿರುವ ರಾಷ್ಟ್ರಗಳಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. "ನವದೆಹಲಿಯಲ್ಲಿ ಮತ್ತು ತೆಲಂಗಾಣದಲ್ಲಿ ಕೋವಿಡ್-೧೯ ಖಚಿತಗೊಂಡಿರುವ ತಲಾ ಒಂದು ಪ್ರಕರಣ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿತು. "ದೆಹಲಿಯ ವ್ಯಕ್ತಿಯು ಇಟಲಿಯಿಂದ ಪ್ರಯಾಣಿಸಿದ್ದರೆ, ತೆಲಂಗಾಣದ ವ್ಯಕ್ತಿ ದುಬೈಯಿಂದ ಪ್ರಯಾಣ ಮಾಡಿದ್ದಾನೆ. ಅವರ ಪ್ರಯಾಣದ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲಾಗುತ್ತಿದೆ ಆರೋಗ್ಯ ಸಚಿವಾಲಯ ಹೇಳಿತು. ಇಬ್ಬರು ರೋಗಿಗಳ ದೇಹಸ್ಥಿತಿಯೂ ಸ್ಥಿರವಾಗಿದೆ. ಅವರ ಮೇಲೆ ಸೂಕ್ಷ್ಮ ನಿಗಾ ಇಡಲಾಗಿದೆ ಎಂದು ಸಚಿವಾಲಯ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಬೆಂಕಿಯೊಂದಿಗೆ ಸರಸ ಬೇಡ ಎಂಬುದಾಗಿ ಬೆಳಗ್ಗೆ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಶಿಕ್ಷಿತ ಅಪರಾಧಿಗಳ ಪರ ವಕೀಲ .ಪಿ.ಸಿಂಗ್ ಅವರಿಗೆ ಎಚ್ಚರಿಕೆ ನೀಡಿದ್ದ ವಿಚಾರಣಾ ನ್ಯಾಯಾಲಯ 2020 ಮಾರ್ಚ್ 02ರ ಸೋಮವಾರ ಸಂಜೆ ನಾಲ್ಕೂ ಮಂದಿ ಅಪರಾಧಿಗಳ ಗಲ್ಲು ಜಾರಿಯನ್ನು ತಡೆ ಹಿಡಿದು, ಪ್ರಕರಣವನ್ನು ಮುಂದಿನ ಆದೇಶಕ್ಕಾಗಿ ಮುಂದೂಡಿತು. ಪ್ರಕರಣದ ನಾಲ್ವರು ಅಪರಾಧಿಗಳನ್ನು ೨೦೨೦ ಮಾರ್ಚ್ ೩ರ ಸೋಮವಾರ ಬೆಳಗ್ಗೆ ಗಂಟೆಗೆ ಗಲ್ಲಿಗೆ ಏರಿಸಬೇಕಾಗಿತ್ತು. ಗಲ್ಲು ಕುಣಿಕೆಯಿಂದ ನಿರ್ಭಯಾ ಹಂತಕರು ಪಾರಾಗಿರುವುದು ಇದು ಮೂರನೇ ಬಾರಿ.  ನಾಲ್ವರು ಅಪರಾಧಿಗಳ ಪೈಕಿ ಒಬ್ಬನಾದ ಪವನ್ ಕುಮಾರ್ ಗುಪ್ತ ಸಲ್ಲಿಸಿದ ಕ್ಷಮಾದಾನ ಕೋರಿಕೆ ಅರ್ಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಮುಂದೆ ಬಾಕಿ ಇರುವುದನ್ನು ಅನುಸರಿಸಿ ನ್ಯಾಯಾಲಯ ವಿಷಯದ ವಿಚಾರಣೆಯನ್ನು ಮುಂದೂಡಿತು. ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಪವನ್ ಕುಮಾರ ಗುಪ್ತ ಅರ್ಜಿಯು ಇತ್ಯರ್ಥಗೊಳ್ಳದೇ ಬಾಕಿ ಉಳಿದಿರುವುದರಿಂದ ಮರಣದಂಡನೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ತಮ್ಮ ಆದೇಶದಲ್ಲಿ ತಿಳಿಸಿದರು. ಕ್ಷಮಾದಾನ ಕೋರಿಕೆ ಅರ್ಜಿಯನ್ನು ತಾನು ಸೋಮವಾರ ರಾಷ್ಟ್ರಪತಿ ಕೋವಿಂದ್ ಅವರ ಮುಂದೆ ತಾನು ಸಲ್ಲಿಸಿರುವುದರಿಂದ ಗಲ್ಲು ಶಿಕ್ಷೆ ಜಾರಿಗೆ ತಡೆ ನೀಡಬೇಕು ಎಂದು ಕೋರಿ ಪವನ್ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ೨೦೧೨ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಕ್ರೂರ ಸಾವಿಗೆ ಬಲಿಯಾದ ನತದೃಷ್ಟ ಯುವತಿಯ ತಾಯಿ ಆಶಾದೇವಿ ಅವರು ಕ್ರಿಮಿನಲ್‌ಗಳಿಗೇ ನಮ್ಮ ವ್ಯವಸ್ಥೆಯ ಬೆಂಬಲ ಎಂಬುದಾಗಿ ತಮ್ಮ ಹತಾಶ ಪ್ರತಿಕ್ರಿಯೆಯನ್ನು 2020 ಮಾರ್ಚ್ 02ರ ಸೋಮವಾರ ವ್ಯಕ್ತ ಪಡಿಸಿದರು. ದೆಹಲಿ ನ್ಯಾಯಾಲಯದ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ಪ್ರಕರಣದ ನಾಲ್ವರು ಅಪರಾಧಿಗಳ ಗಲ್ಲು ಜಾರಿಯನ್ನು ತಡೆ ಹಿಡಿದು ಪ್ರಕರಣದ ವಿಚಾರಣೆಯನ್ನು ಮುಂದೂಡಿರುವುದಾಗಿ ಪ್ರಕಟಿಸಿದ ಬಳಿಕ ಮಾಧ್ಯಮಗಳ ಜೊತೆ ಆಶಾದೇವಿ ಮಾತನಾಡಿದರು. ಪ್ರಕರಣದ ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆ ಜಾರಿಯು ಪದೇ ಪದೇ ಮುಂದೂಡಿಕೆಯಾಗುತ್ತಿರುವುದು ನಮ್ಮ ವ್ಯವಸ್ಥೆ ಮತ್ತು ಸರ್ಕಾರದ ವೈಫಲ್ಯ. ಶಿಕ್ಷಿತರನ್ನು ಗಲ್ಲಿಗೇರಿಸುವಂತೆ ತಾನೇ ನೀಡಿದ ಆದೇಶವನ್ನು ಜಾರಿಗೊಳಿಸಲು ನ್ಯಾಯಾಲಯ ಹೀಗೇಕೆ ಇಷ್ಟೊಂದು ಸಮಯ ತೆಗೆದುಕೊಳ್ಳುತ್ತಿದೆ? ಗಲ್ಲು ಜಾರಿಯನ್ನು ಪದೇ ಪದೇ ಮುಂದೂಡುತ್ತಿರುವುದು ನಮ್ಮ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ನಮ್ಮ ಇಡೀ ವ್ಯವಸ್ಥೆ ಕ್ರಿಮಿನಲ್‌ಗಳನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ನವದೆಹಲಿ ಮತ್ತು ತೆಲಂಗಾಣದಲ್ಲಿ ಇಬ್ಬರು ವ್ಯಕ್ತಿಗಳಿಗೆ ಕೊರೋನಾವೈರಸ್ ಸೋಂಕು ತಗುಲಿರುವುದು ದೃಢ ಪಟ್ಟ ಬೆನ್ನಲ್ಲೇ ಕೇಂದ್ರ ಸರ್ಕಾರವು ಚೀನಾ, ಇರಾನ್, ಕೊರಿಯಾ, ಸಿಂಗಾಪುರ ಮತ್ತು ಇಟಲಿ ಐದು ರಾಷ್ಟ್ರಗಳ ಅನಗತ್ಯ ಪ್ರವಾಸಗಳನ್ನು ಮುಂದೂಡುವಂತೆ ಜನರಿಗೆ  2020 ಮಾರ್ಚ್ 02ರ ಸೋಮವಾರ ಸಲಹೆ ಮಾಡಿತು. ಕೊರೋನಾವೈರಸ್ ಸೋಂಕು ಪತ್ತೆಯ ಹಿನ್ನೆಲೆಯಲಿ ಭಾರತವು ಪ್ರಯಾಣಿಕರ ತಪಾಸಣೆಯನ್ನು ಇನ್ನಷ್ಟು ಬಿಗಿಗೊಳಿಸಿದೆ ಮತ್ತು ಕೊರೋನಾವೈರಸ್ ಸೋಂಕಿನ ಮುಷ್ಠಿಗೆ ಸಿಲುಕಿರುವ ರಾಷ್ಟ್ರಗಳಲ್ಲಿ ಅನಗತ್ಯ ಪ್ರವಾಸ ಮಾಡುವುದನ್ನು ಕೈಬಿಡುವಂತೆ ಜನತೆಗೆ ಸಲಹೆ ಮಾಡುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಇಲ್ಲಿ ಹೇಳಿದರು. ೨೧ ವಿಮಾನ ನಿಲ್ದಾಣಗಳು ಸಮುದ್ರ ತಡಿಯ , ೧೨ ಪ್ರಮುಖ ಬಂದರುಗಳು ಮತ್ತು ಸಣ್ಣ ಬಂದರುಗಳಲ್ಲಿ ಪ್ರಯಾಣಿಕರ ಪರಿಶೀಲನೆ ನಡೆಸಲಾಗುತ್ತಿದ್ದು, ವಿಮಾನ ನಿಲ್ದಾಣಗಳಲ್ಲಿ ,೫೭,೪೩೧ ಪ್ರಯಾಣಿಕರನ್ನು ಮತ್ತು ಸಮುದ್ರ ದಂಡೆಯ ಪ್ರಮುಖ ಹಾಗೂ ಸಣ್ಣ ಬಂದರುಗಳಲ್ಲಿ ೧೨,೪೩೧ ಪ್ರಯಾಣಿಕರನ್ನು ತಪಾಸಣೆಗೆ ಗುರಿಪಡಿಸಲಾಗಿದೆ ಎಂದು ಹರ್ಷವರ್ಧನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಚೀನಾ, ಇರಾನ್, ಕೊರಿಯಾ, ಸಿಂಗಾಪುರ ಮತ್ತು ಇಟಲಿಗೆ ಅನಗತ್ಯ ಪ್ರವಾಸಗಳನ್ನು ಮಾಡಬೇಡಿ ಎಂದು ನಾವು ಭಾರತೀಯರಿಗೆ ಸಲಹೆ ಮಾಡುತ್ತೇವೆ. ಪರಿಸ್ಥಿತಿಯನ್ನು ಅನುಸರಿಸಿ ಪ್ರವಾಸೀ ನಿರ್ಬಂಧಗಳನ್ನು ಇತರ ದೇಶಗಳಿಗೂ ವಿಸ್ತರಿಸಬಹುದು ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ದೆಹಲಿ ಹಿಂಸಾಚಾರದಲಿ ಸಾವನ್ನಪ್ಪಿದ ಗುಪ್ತಚರ ದಳದ (ಐಬಿ) ಅಧಿಕಾರಿ ಅಂಕಿತ್ ಶರ್ಮ ಅವರ ಕುಟುಂಬಕ್ಕೆ ಒಂದು ಕೋಟಿ ರೂಪಾಯಿಗಳ ಪರಿಹಾರವನ್ನು ದೆಹಲಿ ಸರ್ಕಾರವು 2020 ಮಾರ್ಚ್ 02ರ ಸೋಮವಾರ ಪ್ರಕಟಿಸಿತು. ಅಂಕಿತ್ ಶರ್ಮ ಅವರು ಒಬ್ಬ ದಿಟ್ಟ ಅಧಿಕಾರಿ. ಅವರು ದಂಗೆಯಲ್ಲಿ ಕ್ರೂರವಾಗಿ ಹತರಾಗಿದ್ದಾರೆ. ರಾಷ್ಟ್ರಕ್ಕೆ ಅವರ ಬಗ್ಗೆ ಹೆಮ್ಮೆ ಇದೆ. ದೆಹಲಿ ಸರ್ಕಾರವು ಅವರ ಕುಟುಂಬಕ್ಕೆ ಕೋಟಿ ರೂಪಾಯಿ ಪರಿಹಾರ ಮತ್ತ ಅವರ ಕುಟುಂಬದಲ್ಲಿ ಒಬ್ಬರಿಗೆ ನೌಕರಿ ಕೊಡಲು ನಿರ್ಧರಿಸಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ  ಹಿಂದಿ ಟ್ವೀಟಿನಲ್ಲಿ ಸೋಮವಾರ ತಿಳಿಸಿದರು. ಶರ್ಮ ಅವರು ಚಾಂದ್ ಬಾಗ್‌ನಲ್ಲಿ ವಾಸವಾಗಿದ್ದರು. ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಗಲಭೆಯ ಕಾಲದಲ್ಲಿ ಇಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ಹಾನಿ, ಹಿಂಸಾಚಾರ ಸಂಭವಿಸಿತ್ತು. ಶರ್ಮ ಅವರ ದೇಹವನ್ನು ಬುಧವಾರ ಚರಂಡಿಯಿಂದ ಹೊರಗೆತ್ತಲಾಗಿತ್ತು. ಶರ್ಮ ಅವರನ್ನು ಆಮ್ ಆದ್ಮಿ ಪಕ್ಷದ (ಆಪ್) ಕೌನ್ಸಿಲರ್ ತಾಹಿರ್ ಹುಸೇನ್ ಕೊಲ್ಲಿಸಿದ್ದಾರೆ ಎಂದು ಶರ್ಮ ಕುಟುಂಬ ಆಪಾದಿಸಿತ್ತು. ಅಂಕಿತ್ ಶರ್ಮ ಅವರು ಮಂಗಳವಾರ ಸಂಜೆ ಕಚೇರಿಯಿಂದ ವಾಪಸ್ ಬಂದಿದ್ದರು ಮತ್ತು ಪ್ರದೇಶದಲ್ಲಿ ಏನು ಗದ್ದಲವಾಗುತ್ತಿದೆ ಎಂದು ನೋಡಲು ಹೊರಕ್ಕೆ ಹೋಗಿದ್ದರು, ಆದರೆ ಮರಳಿ ಬರಲಿಲ್ಲ ಎಂದು ಅವರ ಸಹೋದರ ಅಂಕುರ್ ಶರ್ಮ ಹೇಳಿದ್ದರು. ಕುಟುಂಬ ಸದಸ್ಯರು ಅಂಕಿತ್ ಶರ್ಮ ಪತ್ತೆಗಾಗಿ ಗಂಟೆಗಳ ಕಾಲ ತೀವ್ರ ಶೋಧ ನಡೆಸಿದ್ದರು, ಆದರೆ ಅಂತಿಮವಾಗಿ ಅವರ ಶವ ಚರಂಡಿಯಲ್ಲಿ ಪತ್ತೆಯಾಯಿತು ಎಂಬ ಮಾಹಿತಿ ಅವರಿಗೆ ಲಭಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಕಾಬೂಲ್: ಅಮೆರಿಕದ ಜೊತೆಗಿನ ತನ್ನ ಚಾರಿತ್ರಿಕ ಶಾಂತಿ ಒಪ್ಪಂದವನ್ನು ತಾನು ಭಾಗಶಃ ರದ್ದು ಪಡಿಸಿರುವುದಾಗಿ 2020 ಮಾರ್ಚ್ 02ರ ಸೋಮವಾರ ಘೋಷಿಸಿದ ತಾಲಿಬಾನ್, ಅಫ್ಘನ್ ಭದ್ರತಾ ಪಡೆಗಳ ವಿರುದ್ಧ ತಮ್ಮ ದಾಳಿ ಕಾರ್ಯಾಚರಣೆಗಳು ಪುನಾರಂಭಗೊಳ್ಳಲಿವೆ ಎಂದು ಪ್ರಕಟಿಸಿತು. ಅಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ತಾಲಿಬಾನ್ ಜೊತೆಗೆ ಮಾರ್ಚ್ ೧೦ರಂದು ಅಫ್ಘನ್ ಅಧಿಕಾರಿಗಳ ಮಾತುಕತೆ ನಡೆಯುವವರೆಗೆ ತಾವು ಭಾಗಶಃ ಒಪ್ಪಂದವನ್ನು ಮುಂದುವರೆಸುವುದಾಗಿ ಪ್ರಕಟಿಸಿದ ಒಂದು ದಿನದ ಬಳಿಕ ತಾಲಿಬಾನ್ ಘೋಷಣೆ ಮಾಡಿದೆ. ಅಪ್ಘನ್ ಸೆರೆಮನೆಯಲ್ಲಿರುವ ತಾಲಿಬಾನ್ ಕೈದಿಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದೂ ಘನಿ ಪ್ರಕಟಿಸಿದ್ದರು. ಹಿಂಸಾಚಾರವನ್ನು ಕಡಿಮೆಗೊಳಿಸುವ ವಿಚಾರಕ್ಕೆ ಈಗ ತೆರೆ ಬಿದ್ದಿದೆ. ನಮ್ಮ ಕಾರ್‍ಯಾಚರಣೆಗಳು ಎಂದಿನಂತೆಯೇ ಮುಂದುವರೆಯುತ್ತವೆ ಎಂದು ತಾಲಿಬಾನ್ ವಕ್ತಾರ ಝಬೀಹುಲ್ಲಾ ಮುಜಾಹಿದ್ ಹೇಳಿದರು. ಅಮೆರಿಕ -ತಾಲಿಬಾನ್ ಒಪ್ಪಂದದ ಪ್ರಕಾರ, ನಮ್ಮ ಮುಜಾಹಿದೀನ್ ಪಡೆಗಳು ವಿದೇಶೀ ಪಡೆಗಳ ಮೇಲೆ ದಾಳಿ ಮಾಡುವುದಿಲ್ಲ, ಆದರೆ ನಮ್ಮ ದಾಳಿ ಕಾರ್ಯಾಚರಣೆಗಳು ಕಾಬೂಲ್ ಆಡಳಿತದ ಪಡೆಗಳ ವಿರುದ್ದ ಮುಂದುವರೆಯುತ್ತವೆ ಎಂದು ಅವರು ನುಡಿದರು. ಒಪ್ಪಂದ ಮುರಿದು ಬಿದ್ದಿದೆಯೇ ಎಂಬ ಬಗ್ಗೆ ಸರ್ಕಾರವು ಪರಿಶೀಲಿಸುವುದು ಎಂದು ರಕ್ಷಣಾ ಸಚಿವಾಲಯದ ಉಪ ವಕ್ತಾರ ಫವಾದ್ ಅಮಾನ್ ಹೇಳಿದರು. ರಾಷ್ಟ್ರದಲ್ಲಿ ದೊಡ್ಡ ದಾಳಿಗಳು ನಡೆದ ಬಗ್ಗೆ ಯಾವುದೇ ವರದಿಗಳು ಬಂದಿಲ್ಲ ಎಂದು ಅವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 02  (2019+ ಹಿಂದಿನವುಗಳಿಗೆ ಇಲ್ಲಿಕ್ಲಿಕ್ ಮಾಡಿರಿ)



No comments:

Post a Comment