ನಾನು ಮೆಚ್ಚಿದ ವಾಟ್ಸಪ್

Thursday, March 12, 2020

ಇಂದಿನ ಇತಿಹಾಸ History Today ಮಾರ್ಚ್ 12

2020: ಲಂಡನ್: ಖಗೋಳಶಾಸ್ತ್ರಜ್ಞರು ’ಮೀನ ರಾಶಿಯ ನಕ್ಷತ್ರಪುಂಜದಲ್ಲಿ ಅತಿ ಬಿಸಿಯಾದ (ಅಲ್ಟ್ರಾ-ಹಾಟ್) ದೈತ್ಯ ಗ್ರಹವೊಂದನ್ನು ಪತ್ತೆ ಹಚ್ಚಿದ್ದಾರೆ. ಈ ಗ್ರಹದಲ್ಲಿ ಕಬ್ಬಿಣದ ಮಳೆ ಸುರಿಯುತ್ತದೆ ಎಂದು ಅವರು ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಗ್ರಹದ ಪತ್ತೆಯು ಸೌರವ್ಯೂಹದ ಹೊರಗಿನ ಅತ್ಯಂತ ವಿಪರೀತ ಗ್ರಹಗಳ ಹವಾಮಾನವನ್ನು ಅಧ್ಯಯನ ಮಾಡುವ ಉತ್ತಮ ಮಾರ್ಗಗಳನ್ನು ತೋರಿಸಿಕೊಡಬಹುದು ಎಂದು ಖಗೋಳ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸ್ವಿಜರ್ಲೆಂಡಿನ  ಜಿನೀವಾ ವಿಶ್ವವಿದ್ಯಾನಿಲಯದ ವಿಜ್ಞಾನಿಗಳನ್ನೂ ಒಳಗೊಂಡಿರುವ ಸಂಶೋಧಕರ ಪ್ರಕಾರ, ಪತ್ತೆ ಹಚ್ಚಲಾಗಿರುವ ಈ ದೈತ್ಯ ಸೌರಾತೀತ ಗ್ರಹ (ಎಕ್ಸೋಪ್ಲಾನೆಟ್) ’ಡಬ್ಲ್ಯುಎಎಸ್‌ಪಿ -೭೬ ಬಿ ಭೂಮಿಯಿಂದ ೬೪೦ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ. (ಅಂದರೆ ಅಲ್ಲಿಂದ ಬೆಳಕು ಭೂಮಿಗೆ ತಲುಪಲು ಬೇಕಾಗುವ ವೇಗದಷ್ಟು ದೂರ) ಮತ್ತು ಈ ಗ್ರಹದಲ್ಲಿ ಹಗಲಿನ ವೇಳೆಯಲ್ಲಿ ತಾಪಮಾನವು ೨೪೦೦ ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಿದೆ. ಈ ತಾಪಮಾನದಲ್ಲಿ ಲೋಹಗಳು ಕೂಡಾ ಆವಿಯಾಗಬಲ್ಲವು. ಗ್ರಹದ ಮೇಲ್ಮೈಯಲ್ಲಿ ಬೀಸುವ ಬಲವಾದ ಗಾಳಿಯು ಕಬ್ಬಿಣದ ಆವಿಯನ್ನು ತಂಪಾದ ರಾತ್ರಿ ಇರುವ ಗ್ರಹದ ಭಾಗದ ಕಡೆಗೆ ಕೊಂಡೊಯ್ಯುತ್ತದೆ, ಅಲ್ಲಿ ಅದು ಕಬ್ಬಿಣದ ಹನಿಗಳಾಗಿ ಘನೀಕರಣಗೊಳ್ಳಬಹುದು ಖಗೋಳತಜ್ಞರು ’ನೇಚರ್ ಜರ್ನಲ್ನಲ್ಲಿ 2020 ಮಾರ್ಚ್ 13ರ ಗುರುವಾರ ಪ್ರಕಟಗೊಂಡಿರುವ ಲೇಖನದಲ್ಲಿ ತಿಳಿಸಿದರು.  ಪ್ರಬಲಗಾಳಿಯ ಕಾರಣ ’ಈ ಗ್ರಹದಲ್ಲಿ ಸಂಜೆ ಮಳೆಯಾಗುತ್ತದೆ ಎಂದು ಹೇಳಬಹುದು" ಎಂದು ಸ್ವಿಟ್ಜರ್ಲೆಂಡ್‌ನ ಜಿನೀವಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಧ್ಯಯನದ ಸಹ-ಲೇಖಕ ಡೇವಿಡ್ ಎಹ್ರೆನ್‌ರಿಚ್ ಹೇಳಿದರು. (ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ).

2020: ನವದೆಹಲಿ/ ಮುಂಬೈ: ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020 ಮಾರ್ಚ್ 13ರ ಗುರುವಾರ ೭೩ಕ್ಕೆ ಏರುತ್ತಿದ್ದಂತೆಯೇ ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಎಲ್ಲ ಶಾಲೆ, ಕಾಲೇಜುಗಳಿಗೂ ಮಾರ್ಚ್ ೩೧ರವರೆಗೆ ರಜೆ ಘೋಷಿಸಿದರು. ಇದೇ ವೇಳೆಗೆ ಭಾರತದ ಷೇರುಪೇಟೆಯಲ್ಲಿ ಭಾರೀ ಕುಸಿತ ಉಂಟಾಗಿ, ಹೂಡಿಕೆದಾರರು ೧೧ ಲಕ್ಷ ಕೋಟಿ ರೂಪಾಯಿಗಳನ್ನು ಗುರುವಾರ ಒಂದೇ ದಿನ ಕಳೆದುಕೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರ ಎಲ್ಲ ವಿದೇಶ ಪಯಣಗಳಿಗೂ ಕತ್ತರಿ ಹಾಕಿದರು. ಚೀನಾದ ವುಹಾನ್‌ನಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್ ಈಗ ವಿಶ್ವವ್ಯಾಪಿಯಾಗಿದ್ದು, ೧೨೪ ದೇಶಗಳಿಗೆ ವ್ಯಾಪಿಸಿದೆ. ಕೊರೊನಾ ಸೋಂಕಿತರ ಸಂಖ್ಯೆ ೧,೨೬,೬೩೧ಕ್ಕೆ ಏರಿತು.  ಜಗತ್ತಿನಲ್ಲಿ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ೪,೬೩೮ಕ್ಕೆ ತಲುಪಿತು.  ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ಎಲ್ಲ ಶಾಲಾ ಕಾಲೇಜುಗಳು, ಚಿತ್ರ ಮಂದಿರಗಳಿಗೆ ಮಾರ್ಚ್ ೩೧ರವರೆಗೆ ರಜೆ ಘೋಷಿಸಿದರು. ಈಮಧ್ಯೆ, ಟೂರ್ನಮೆಂಟ್ ಸಲುವಾಗಿ ಬರ್ಮಿಂಗ್ ಹ್ಯಾಮ್‌ಗೆ ತೆರಳಿದ್ದ ಭಾರತದ ಬ್ಯಾಡ್ಮಿಂಟನ್ ತಂಡವು ಅಲ್ಲಿ ಸಿಕ್ಕಿಹಾಕಿಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಪರುಪಳ್ಳಿ ಕಶ್ಯಪ್ ಅವರು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಿಗೆ ಟ್ವೀಟನ್ನು ಟ್ಯಾಗ್ ಮಾಡಿ ’ಸಂಕಷ್ಟದಲ್ಲಿದ್ದೇವೆ, ನಿಮ್ಮನ್ನು ಸಂಪರ್ಕಿಸಬೇಕಾಗಿದೆ ಎಂದು ಮನವಿ ಮಾಡಿದರು. ಆಂಧ್ರಪ್ರದೇಶದಲ್ಲಿ ಇಟಲಿಯಿಂದ ಬಂದ ಆಂಧ್ರಪ್ರದೇಶದ ವ್ಯಕ್ತಿಗೆ ಕೊರೋನಾವೈರಸ್ ಅಂಟಿರುವುದು ದೃಢ ಪಟ್ಟಿರೆ, ಕರ್ನಾಟಕದಲ್ಲಿ ಗ್ರೀಸ್ ದೇಶದಿಂದ ಬಂದ ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆಯನ್ನು ೫ಕ್ಕೆ ಏರಿಸಿತು.  (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ).

2020: ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೊಂದಣಿ (ಎನ್‌ಪಿಆರ್) ಪರಿಷ್ಕರಣೆಯ ಸಂದರ್ಭದಲ್ಲಿ ’ಯಾರನ್ನೂ ’ಡಿ ಅಥವಾ ಡೌಟ್ ಫುಲ್ (ಸಂಶಯಾಸ್ಪದ) ಎಂಬುದಾಗಿ ಗುರುತಿಸಲಾಗುವುದಿಲ್ಲ ಮತ್ತು ಯಾರು ಕೂಡಾ ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿಶ್ ಶಾ 2020 ಮಾರ್ಚ್ 13ರ ಗುರುವಾರ  ರಾಜ್ಯಸಭೆಯಲ್ಲಿ ಸ್ಪಷ್ಟ ಪಡಿಸಿದರು. ದೆಹಲಿ ಗಲಭೆಗಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯ ವೇಳೆ ವಿರೋಧಿ ನಾಯಕರು ಮಾಡಿದ ಆಪಾದನೆಗಳಿಗೆ ಉತ್ತರ ನೀಡಿದ ಶಾ, ’ಎನ್‌ಪಿಆರ್ ಪರಿಷ್ಕರಣೆ ಪ್ರಕ್ರಿಯೆಯ ವೇಳೆಯಲ್ಲಿ ತಾವು ಬಯಸಿದ ಮಾಹಿತಿಯನ್ನು ಮಾತ್ರ ಎಣಿಕೆದಾರರ ಬಳಿ ಘೋಷಿಸುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ ಎಂದು ನುಡಿದರು. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗೆಗಿನ ಎಲ್ಲ ಸಂಶಯಗಳನ್ನು ಕೂಡಾ ಸ್ಪಷ್ಟ ಪಡಿಸುವ ಕಾಲ ಬಂದಿದೆ ಮತ್ತು ಎಲ್ಲ ಪಕ್ಷಗಳೂ ಈಗ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಅವರು ಕೋರಿದರು. ೫೨ ಮಂದಿಯನ್ನು ಬಲಿತೆಗೆದುಕೊಂಡ ದೆಹಲಿ ಗಲಭೆಗಳಲ್ಲಿ ಶಾಮೀಲಾದ ೧೯೨೨ ಜನರನ್ನು ಗುರುತಿಸಲಾಗಿದೆ ಎಂದೂ ಅವರು ತಿಳಿಸಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ).

2020: ನವದೆಹಲಿ: ಕೊರೋನಾವೈರಸ್ ವಿರುದ್ಧ ಲಸಿಕೆ ತಯಾರಿಸುವ ನಿಟ್ಟಿನಲ್ಲಿ ಭಾರತೀಯ ವಿಜ್ಞಾನಿಗಳು ಅಡಿ ಇಟ್ಟಿದ್ದಾರೆ, ಆದರೆ ಅದನ್ನು ತಯಾರಿಸಲು ಒಂದೂವರೆಯಿಂದ ಎರಡು ವರ್ಷ ಬೇಕಾಗಬಹುದು ಎಂದು ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು  2020 ಮಾರ್ಚ್ 13ರ ಗುರುವಾರ ತಿಳಿಸಿದರು.  ಸರ್ಕಾರದ ಬಳಿ ಪ್ರಸುತ ಒಂದು ಲಕ್ಷದಷ್ಟು ಪರೀಕ್ಷಾ ಕಿಟ್ಗಳು ಇವೆ ಎಂದೂ ಅಧಿಕಾರಿಗಳು ಹೇಳಿದರು. ಲಸಿಕೆಯೇ ಆದರೂ, ಅದನ್ನು ಅರ್ಥ ಮಾಡಿಕೊಳ್ಳಲು ಒಂದೂವರೆಯಿಂದ ಎರಡು ವರ್ಷಕ್ಕಿಂತ ಕಡಿಮೆ ಸಮಯ ಸಾಕಾಗುವುದಿಲ್ಲ. ಕ್ಷಿಪ್ರ ಕ್ಲಿನಿಕಲ್ ಟ್ರಯಲ್ಗಳನ್ನು ನಡೆಸಿ ಮನುಷ್ಯರ ಮೇಲೆ ಪ್ರಯೋಗಿಸಲು ಅನುಮತಿ ಪಡೆಯಲು ಇಷ್ಟು ಸಮಯ ಬೇಕಾಗುತ್ತದೆಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಡಾ. ಗಂಗಾ ಕೇತ್ಕರ್ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೋವಿಡ್-೧೯ ಹರಡದಂತೆ ತಡೆಯಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳನ್ನು ವಿವರಿಸಿದ ಡಾ. ಕೇತ್ಕರ್, ವಿಜ್ಞಾನಿಗಳು ವೈರಸ್ನ್ನು ಪ್ರತ್ಯೇಕಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ನುಡಿದರು. ‘ಕೊರೋನಾವೈರಸ್ಸನ್ನು ಪ್ರತ್ಯೇಕಿಸುವುದು ಬಹಳ ಕಷ್ಟ. ಆದರೆ ಅವುಗಳನ್ನು ಪ್ರತ್ಯೇಕಿಸಲು ನಡೆಸಿದ ನಮ್ಮ ಮೊದಲ ಯತ್ನಗಳು ಸಫಲಗೊಂಡಿವೆ. ನಾವು ಈಗ ಸುಮಾರು ೧೧ರಷ್ಟು ಕೊರೋನಾವೈರಸ್ಸಿನ ಪ್ರತ್ಯೇಕಿತ ಮಾದರಿಗಳನ್ನು ಹೊಂದಿದ್ದೇವೆ. ಕೊರೋನಾವೈರಸ್ಸಿಗೆ ಸಂಬಂಧಿಸಿದಂತೆ ಯಾವದೇ ಮಾದರಿಯ ಸಂಶೋಧನೆ ನಡೆಸಲು ಇದು ಮೂಲ ಅಗತ್ಯವಾಗಿದೆ. ವೈರಸ್ ವಿರುದ್ಧ ಪ್ರತಿಜೀವಾಣುಗಳನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿ ಪಡಿಸಲು ಯಾವುದೇ ವೈರಸ್ಸಿನ ಪ್ರತ್ಯೇಕಿತ ಮಾದರಿಯನ್ನು ಮೊದಲು ಕಂಡುಕೊಳ್ಳಬೇಕಾಗುತ್ತದೆ ಎಂದು ಡಾ. ಕೇತ್ಕರ್ ಹೇಳಿದರು(ವಿವರಗಳಿಗೆಇಲ್ಲಿ  ಕ್ಲಿಕ್  ಮಾಡಿರಿ).



No comments:

Post a Comment