ನಾನು ಮೆಚ್ಚಿದ ವಾಟ್ಸಪ್

Monday, March 23, 2020

ಇಂದಿನ ಇತಿಹಾಸ History Today ಮಾರ್ಚ್ 23

2020: ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹರಡುವಿಕೆಯನ್ನು ತಡೆಯುವ ಸಲುವಾಗಿ ಕರ್ನಾಟಕ ಸೇರಿದಂತೆ 20 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ 2020 ಮಾರ್ಚ್ 23ರ ಸೋಮವಾರ ಲಾಕ್ ಡೌನ್ ವಿಸ್ತರಿಸಲಾಗಿದ್ದು, ದೇಶದೊಳಗಿನ ಎಲ್ಲ ವಿಮಾನಯಾನಗಳನ್ನು 2020 ಮಾರ್ಚ್ 24ರ ಮಂಗಳವಾರ ನಡುರಾತ್ರಿಯಿಂದ ನಿಷೇಧಿಸಲಾಯಿತು. ದೇಶಾದ್ಯಂತ ಎಲ್ಲ ವಿಮಾನಯಾನಗಳನ್ನು  2020 ಮಾರ್ಚ್ ೨೪ರ ಮಂಗಳವಾರ ಮಧ್ಯರಾತ್ರಿಯಿಂದ ಅನ್ವಯವಾಗುವಂತೆ ನಿಷೇಧಿಸಿ ಕೇಂದ್ರ ಸರ್ಕಾರವು 2020 ಮಾರ್ಚ್ 23ರ ಸೋಮವಾರ ಆದೇಶ ಹೊರಡಿಸಿತು. ಸಂಸತ್ ಅಧಿವೇಶನವನ್ನು ಕೂಡಾ ಅನಿರ್ದಿಷ್ಟ ಅವಧಿಗೆ ಮುಂದೂಡಲಾಯಿತು. ಮಾರಕ ಕೊರೋನಾ ವೈರಸ್ ಪಶ್ಚಿಮ ಬಂಗಾಳದಲ್ಲಿ ಇನ್ನೊಬ್ಬನನ್ನು ಬಲಿ ಪಡೆಯುವುದರೊಂದಿಗೆ ಮಾರಕ ವೈರಾಣುವಿಗೆ ಸಾವನ್ನಪ್ಪಿದವರ ಸಂಖ್ಯೆ ಭಾರತದಲ್ಲಿ ೯ಕ್ಕೇ ಏರಿತು. ದೇಶದಲ್ಲಿ ಸೋಂಕಿಗೆ ಒಳಗಾದವರ ಸಂಖ್ಯೆ 471ಕ್ಕೆ ತಲುಪಿತು. ಇದನ್ನು ಅನುಸರಿಸಿ ದೇಶಾದ್ಯಂತ ಕರ್ನಾಟಕವೂ ಸೇರಿದಂತೆ 20 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಗೆ ಲಾಕ್ ಡೌನ್ ವಿಸ್ತರಣೆಯಾಯಿತು. ನವದೆಹಲಿ ಮತ್ತು ಮುಂಬೈ ಮತ್ತು ಇತರ ಹಲವಾರು ರಾಜ್ಯ ರಾಜಧಾನಿಗಳು ಸ್ತಬ್ಧ ಸ್ಥಿತಿ (ಲಾಕ್ ಡೌನ್) ಎದುರಿಸುತ್ತಿವೆ. ಮಹಾರಾಷ್ಟ್ರದ ಗಡಿಗಳನ್ನು ಮುಚ್ಚುವುದರ ಜೊತೆಗೆ ಸಂಪೂರ್ಣ ಕರ್ಫ್ಯೂ ಘೋಷಿಸಲಾಗಿದ್ದರೆ, ಅಸ್ಸಾಂ ರಾಜ್ಯ ಕೂಡಾ ಲಾಕ್ ಡೌನ್ ಘೋಷಿಸಿತು. ಕರ್ನಾಟಕದಲ್ಲೂ  ಜಿಲ್ಲೆಗಳಲ್ಲಿ ವಿಧಿಸಲಾಗಿದ್ದ ಲಾಕ್ ಡೌನ್ನ್ನು ರಾಜ್ಯಾದ್ಯಂತ ವಿಸ್ತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು. ವಿಶ್ವಾದ್ಯಂತ ಕೊರೋನಾವೈರಸ್ಸಿಗೆ ಬಲಿಯಾದವರ ಸಂಖ್ಯೆ ಸೋಮವಾರ ೧೪,೦೦೦ ಸಂಖ್ಯೆಯನ್ನು ದಾಟಿತು. ಪ್ರಪಂಚದಾದ್ಯಂತ ,೩೦,೦೦೦ ಕ್ಕೂ ಹೆಚ್ಚು ಜನರು ಕೊರೋನವೈರಸ್ ಪೀಡಿತರಾಗಿದ್ದಾರೆ, ಅವರ ಪೈಕಿ ೯೯,೦೦೩ ಜನರು ಚೇತರಿಸಿಕೊಂಡಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ) 

2020:  ನವದೆಹಲಿ: ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ ಯೋಜನೆಯನ್ನು ಅನುಷ್ಠಾನಗೊಳಿಸಲು ದೆಹಲಿಯ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ (ಆಪ್) ಸರ್ಕಾರ 2020 ಮಾರ್ಚ್ 23ರ ಸೋಮವಾರ ನಿರ್ಧರಿಸಿದ್ದು, ಯೋಜನೆಯು ೨೦೨೦-೨೧ರ ಹಣಕಾಸು ವರ್ಷದಿಂದ ಜಾರಿಯಾಗಲಿದೆ ಎಂದು ಪ್ರಕಟಿಸಿತು.
ರಾಷ್ಟ್ರೀಯ ರಾಜಧಾನಿಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಬಾರದು ಎಂಬ ನಿಲುವು ತಳೆದಿದ್ದ ಆಪ್ ಸರ್ಕಾರವು, ದೇಶಾದ್ಯಂತ ಕೊರೋನಾವೈರಸ್ ಸೋಂಕಿನ ಪ್ರಕರಣಗಳು ೪೧೫ಕ್ಕೆ ತಲುಪುತ್ತಿದ್ದಂತೆಯೇ ತನ್ನ ನಿಲುವು ಬದಲಾಯಿಸುವ ನಿರ್ಧಾರ ಕೈಗೊಂಡಿತು. ಕೋವಿಡ್-೧೯ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಪ್ ಸರ್ಕಾರ ಕೂಡಾ ಕೇಂದ್ರ ಪ್ರಾಯೋಮಿತ ಆರೋಗ್ಯ ರಕ್ಷಣಾ ಯೋಜನೆಯನ್ನು ೨೦೨೦-೨೧ರ ವಿತ್ತ ವರ್ಷದಿಂದ ಜಾರಿಗೆ ತರಲಿದೆ ಎಂದು ದೆಹಲಿ ವಿಧಾನಸಭೆಯಲ್ಲಿ ದೆಹಲಿಯ ವಿತ್ತ ಸಚಿವ ಮನಿಶ್ ಸಿಸೋಡಿಯಾ ಅವರು ಸೋಮವಾರ ಪ್ರಕಟಿಸಿದರು. ಪ್ರಸ್ತುತ ವರ್ಷದಲ್ಲಿ ಯೋಜನೆಗೆ ಕೋಟಿ ರೂಪಾಯಿಗಳನ್ನು ಮತ್ತು ಮುಂದಿನ ವಿತ್ತ ವರ್ಷದಲ್ಲಿ ೫೦ ಕೋಟಿ ರೂಪಾಯಿಗಳನ್ನು ಕೊರೋನಾವೈರಸ್ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ಒದಗಿಸಲಾಗುವುದು ಎಂದು ಹೇಳಿದರು. ಪ್ರತಿಯೊಂದು ಕುಟುಂಬಕ್ಕೆ ಪ್ರತಿವರ್ಷ ಲಕ್ಷ ರೂಪಾಯಿಗಳವರೆಗಿನ ಆರೋಗ್ಯ ವಿಮಾ ರಕ್ಷಣೆ ಒದಗಿಸುವ ಸಲುವಾಗಿ ದೆಹಲಿ ಸರ್ಕಾರವು ೨೦೨೦-೨೧ರ ಆರ್ಥಿಕ ವರ್ಷದಿಂದ ಆಯುಷ್ಮಾನ್ ಭಾರತ- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯನ್ನು ದೆಹಲಿಯಲ್ಲಿ ಜಾರಿಗೊಳಿಸಲಿದೆ ಎಂದು ಸಿಸೋಡಿಯಾ ನುಡಿದರು.
ರಾಷ್ಟ್ರೀಯ ರಾಜಧಾನಿಯಲ್ಲಿ ಯೋಜನೆಯು ಆಡಳಿತಾರೂಢ ಆಪ್ ಮತು ಬಿಜೆಪಿ ನಡುವಣ ಘರ್ಷಣೆಗೆ ಕಾರಣವಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ಕೋಲ್ಕತ: ಕೋರೋನಾ ವೈರಸ್ ಸಾಂಕ್ರಾಮಿಕ ಪಿಡುಗಿಗೆ ಸಂಬಂಧಿಸಿದ ದೇಶದ ೮ನೇ ಸಾವು 2020 ಮಾರ್ಚ್ 23ರ ಸೋಮವಾರ ಕೋಲ್ಕತದಿಂದ ವರದಿಯಾಗಿದ್ದು, ೫೭ರ ಹರೆಯದ ರೋಗಿ ಯಾವುದೇ ವಿದೇಶಯಾನ ಮಾಡಿದ ದಾಖಲೆ ಇಲ್ಲದೇ ಇರುವುದು ವೈದ್ಯಕೀಯ ರಂಗದ ತಜ್ಞರನ್ನು ಚಿಂತೆಗೀಡು ಮಾಡಿತು.  ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ರೋಗಿ ವಿದೇಶಯಾನ ಮಾಡಿದ ಇತಿಹಾಸವಿಲ್ಲ. ಹೀಗಾಗಿ ಈತನಿಗೆ ಕೋವಿಡ್ ಸೋಂಕು ತಗುಲಿದ್ದು ಹೇಗೆ ಎಂಬ ಪ್ರಶ್ನೆಯನ್ನು ಪ್ರಕರಣ ಹುಟ್ಟು ಹಾಕಿದೆ. ಸೋಂಕು ಮೂಲದ ಪತ್ತೆ ಅಸಾಧ್ಯವಾಗಿರುವುದರಿಂದ ಕೋವಿಡ್ -೧೯ ಇದೀಗ ಭಾರತದಲ್ಲಿ ೩ನೇ ಹಂತವನ್ನು ಪ್ರವೇಶಿಸಿರಬಹುದೇ ಎಂಬ ಗುಮಾನಿ ತಜ್ಞರನ್ನು ಕಾಡಿತು.
ಪಶ್ಚಿಮ ಬಂಗಾಳದಲ್ಲಿ ಇದು ಇದು ೭ನೇ ಕೊರೋನಾ ಸೋಂಕು ತಗುಲಿದ ಪ್ರಕರಣವಾಗಿದ್ದು, ಕಳೆದ ವಾರವಷ್ಟೇ ರಾಜ್ಯಕ್ಕೆ ಸೋಂಕು ಕಾಲಿರಿಸಿತ್ತು. ರಾಜ್ಯದಲ್ಲಿ ಕೊರೋನಾವೈರಸ್ ಸೋಂಕು ಹೆಚ್ಚುತ್ತಿರುವಂತೆಯೇ ಸಂಸತ್ತಿಗೆ ರಾಜ್ಯದ ಸಂಸದರನ್ನು ಕಳುಹಿಸದೇ ಇರುವ ನಿರ್ಧಾರ ಕೈಗೊಂಡಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ರಾಜ್ಯಕ್ಕೆ ಬರುವ ಎಲ್ಲ ವಿಮಾನಗಳನ್ನೂ ನಿಷೇಧಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ರಾಜ್ಯದಲ್ಲಿ ಮೊದಲ ಕೊರೋನಾ ಶಂಕೆಯ ರೋಗಿ ಇಂಗ್ಲಿಂಡಿನಿಂದ ಬಂದ ವಿದ್ಯಾರ್ಥಿಯಾಗಿದ್ದ. ಯುವಕ ಕೊರೋನಾ ಸೊಂಕು ಖಚಿತಪಡುವ ಮುನ್ನ ಮಾಲ್ ಒಂದಕ್ಕೆ ಭೇಟಿ ನೀಡಿದ್ದ. ತೀರಾ ಇತ್ತೀಚಿನ ಕೋವಿಡ್-೧೯ ಪ್ರಕರಣದಲ್ಲಿ ವಿಮಾನ ನಿಲ್ದಾಣಕ್ಕೆ ಸಮೀಪದ ಡಂಡಂ ನಿವಾಸಿಯಾದ ೫೭ರ ಹರೆಯದ ವ್ಯಕ್ತಿ ಮಾರ್ಚ್ ೧೬ರಂದು ಉಸಿರಾಟದ ತೀವ್ರ ತೊಂದರೆಯ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದು ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಹೆಚ್ಚು ಅಪಾಯ ಎದುರಿಸುತ್ತಿರುವ ಕೋವಿಡ್ -೧೯ ರೋಗಿಗಳಿಗೆ ಅಸಾಧಾರಣ ಸಂದರ್ಭಗಳಲ್ಲಿ ಚಿಕಿತ್ಸೆ ನೀಡಲು ಮಲೇರಿಯಾ-ವಿರೋಧಿ ಔಷಧsವಾದ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)  2020 ಮಾರ್ಚ್ 23ರ ಸೋಮವಾರ ಶಿಫಾರಸು ಮಾಡಿತು. ಕೋವಿಡ್ -೧೯ ಚಿಕಿತ್ಸೆಯಲ್ಲಿ ಮಲೇರಿಯಾ-ವಿರೋಧಿ ಔಷಧವು ಪರಿಣಾಮಕಾರಿಯಾಗಿದೆಯೇ ಎಂಬ ಬಗ್ಗೆ ನಡೆಯುತ್ತಿರುವ ಜಾಗತಿಕ ಚರ್ಚೆ ಮತ್ತು ಜೈಪುರದಲ್ಲಿ ಕೋವಿಡ್ -೧೯ ರೋಗಿಗಳಿಗೆ ಚಿಕಿತ್ಸೆಯಾಗಿ ಎಚ್ಐವಿ ವಿರೋಧಿ ಹಾಗೂ ಮಲೇರಿಯಾ ವಿರೋಧಿ ಔಷಧ ಬಳಸಿದ್ದನ್ನು ಅನುಸರಿಸಿ ಕೆಲವು ಸಂದರ್ಭಗಳಲ್ಲಿ  ಇದನ್ನು ಬಳಸಬಹುದು ಎಂದು ಶಿಫಾರಸು ಮಾಡಲಾಯಿತು.  ವಿದೇಶದಲ್ಲಿ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಲು ಪ್ರತಿಜೀವಕ ಬಳಸುವ ಕಾರ್ಯ ವಿಧಾನವನ್ನು ಗಮನಿಸಿದರೆ, ಹೈಡ್ರಾಕ್ಸಿಕ್ಲೋರೋಕ್ವಿನ್ ಪ್ರಯೋಜನಕಾರಿಯಾಗಬಹುದು ಎಂಬುದಾಗಿ ಇತ್ತೀಚಿನ ಫ್ರೆಂಚ್ ಅಧ್ಯಯನವು ತೋರಿಸಿದೆ. ಆದಾಗ್ಯೂ, ಒಂದು ಔಷಧದ ಪರಿಣಾಮಕಾರಿತ್ವವನ್ನು ನಿರ್ಣಾಯಕವಾಗಿ ನಿರ್ಧರಿಸಲು ಹೆಚ್ಚು ದೊಡ್ಡ ಮಾಪಕಗಳ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಬೇಕಾಗಿರುವುದರಿಂದ ಸಂಶೋಧನೆಯು ಪ್ರಸ್ತುತ ಅತ್ಯಂತ ಸೀಮಿತ ಪ್ರಮಾಣದ್ದು ಮಾತ್ರ ಎಂದು ವೈಜ್ಞಾನಿಕ ಸಮುದಾಯವು ಎಚ್ಚರಿಕೆ ನೀಡಿತು.  ಚಿಕಿತ್ಸೆಯು ಸುಳ್ಳು ಭದ್ರತೆಯ ಪ್ರಜ್ಞೆಗೆ ಕಾರಣವಾಗಬಾರದು. ಕೈ ತೊಳೆಯುವುದು, ಮತ್ತು ಮೀಟರ್ ದೂರವನ್ನು ಕಾಯ್ದುಕೊಳ್ಳುವುದು ಮುಂತಾದ ಎಲ್ಲಾ ಮುನ್ನೆಚ್ಚರಿಕೆಯ ರಕ್ಷಣಾತ್ಮಕ ಕ್ರಮಗಳನ್ನು ಎಂದಿನಂತೆ ಅನುಸರಿಸಬೇಕು ಎಂದು  ಮಂಡಳಿ ಹೇಳಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)


2020: ಭೋಪಾಲ್: ಮಧ್ಯ ಪ್ರದೇಶದಲ್ಲಿ ಮತ್ತೆ ಬಿಜೆಪಿ ಶಕೆ ಶುರುವಾಯಿತು.  ಪಕ್ಷದ ಹಿರಿಯ ಮುಖಂಡ ಶಿವರಾಜ್ ಸಿಂಗ್ ಚೌಹಾಣ್ ಮತ್ತೊಮ್ಮೆ ಮಧ್ಯ ಪ್ರದೇಶ ಸರ್ಕಾರದ ಚುಕ್ಕಾಣಿ ಹಿಡಿದರು. ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಅವರು  2020 ಮಾರ್ಚ್ 23ರ ಸೋಮವಾರ ಅಧಿಕಾರ ಸ್ವೀಕರಿಸಿದರು.  ಇದಕ್ಕೂ ಮುನ್ನ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ನಾಯಕರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಭೋಪಾಲಿನ ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಸಭೆಗೆ ಕೇಂದ್ರದ ವೀಕ್ಷಕರಾಗಿ ಅರುಣ್ ಸಿಂಗ್ ಮತ್ತು ವಿನಯ್ ಸಹಸ್ರಬುದ್ಧೆ ಅವರನ್ನು ನೇಮಿಸಲಾಗಿತ್ತು. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಇಬ್ಬರೂ ನಾಯಕರು ದೆಹಲಿಯಿಂದಲೇ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.  ತೋಮರ್ ಶುಭಾಶಯ: ಸಿಎಂ ಸ್ಪರ್ಧೆಯಲ್ಲಿಧಿದ್ದಾರೆ ಎಂದು ಹೇಳಲಾಗಿದ್ದ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಚೌಹಾಣ್ಗೆ ಶುಭಾಶಯ ಕೋರಿದರು.. ಈ ಮಧ್ಯೆ, ಬಿಜೆಪಿ ಹಿರಿಯ ಮುಖಂಡ ಗೋಪಾಲ್ ಭಾರ್ಗವ್ ಅವರು ಪ್ರತಿಪಕ್ಷ ನಾಯಕ  ಸ್ಥಾನಕ್ಕೆ ರಾಜೀನಾಮೆ ನೀಡಿದರು.  ಕಾಂಗ್ರೆಸ್ಸಿನ  ಮಾಜಿ ಪ್ರಭಾವಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ  ಅವರು,  ಮಾಜಿ ಮುಖ್ಯಮಂತ್ರಿ ಕಮಲನಾಥ್  ವಿರುದ್ಧ ಬಂಡಾಯವೆದ್ದು ಪಕ್ಷ ತೊರೆಯುವುದರೊಂದಿಗೆ ೧೫ ತಿಂಗಳ ಕಾಂಗ್ರೆಸ್ ಸರ್ಕಾರ  ಸಂಕಷ್ಟಕ್ಕೆ ಸಿಲುಕಿತ್ತು. ಸಿಂಧಿಯಾ ನಿಷ್ಠರಾದ  ೨೨ ಶಾಸಕರೂ ರಾಜೀನಾಮೆ ನೀಡಿದ್ದರಿಂದ ಕಾಂಗ್ರೆಸ್ ಸರ್ಕಾರ  ಅಲ್ಪಮತಕ್ಕೆ ಕುಸಿದು ಪತನಗೊಂಡಿತು. ಇದರ ಬೆನ್ನಲ್ಲೇ ಕಮಲನಾಥ್   ರಾಜೀನಾಮೆ ನೀಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಮಾಡಿರಿ)

No comments:

Post a Comment