Monday, September 16, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 16


2019: ನವದೆಹಲಿ
: ಜನರು ಹೇಳುವಂತೆ ಕಾಶ್ಮೀರದ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿ
ಇರುವುದೇ ಹೌದಾದರೆ, ನಾನೇ ಶ್ರೀನಗರಕ್ಕೆ ಖುದ್ದು ಭೇಟಿ ನೀಡಿ ಪರಿಶೀಲಿಸುತ್ತೇನೆ, ಆದರೆ ಹಾಗೆ ಪರಿಶೀಲಿಸಿದಾಗ ಪರಿಸ್ಥಿತಿ ವಕೀಲರ ಹೇಳಿಕೆಗೆ ವ್ಯತಿರಿಕ್ತವಾಗಿದ್ದರೆ ಅವರು ಕಠಿಣ ಕ್ರಮ ಎದುರಿಸಲು ಸಿದ್ಧರಾಗಿರಬೇಕಾಗುತ್ತದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಈದಿನ ಸುಪ್ರೀಂಕೋರ್ಟಿನಲ್ಲಿ ಎಚ್ಚರಿಕೆ ನೀಡಿದರು. ಅರ್ಜಿಯೊಂದರ ವಿಚಾರಣೆ ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹೈಕೋರ್ಟ್ ಮೊರೆ ಹೋಗಲು ಕೂಡಾ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಕಾಶ್ಮೀರ ಟೈಮ್ಸ್ ಪತ್ರಿಕೆ ಸಂಪಾದಕಿ ಅನುರಾಧ ಭಾಸಿನ್ ಮತ್ತು  ಮಕ್ಕಳ ಹಕ್ಕುಗಳ ಕಾರ್ಯಕರ್ತರಾದ ಏನಾಕ್ಷಿ ಗಂಗೂಲಿ ಹಾಗೂ ಪ್ರೊಫೆಸರ್ ಶಾಂತ ಸಿನ್ಹ ಅವರು ನ್ಯಾಯಾಲಯದ ಮುಂದಿಟ್ಟ ಪ್ರತಿಪಾದನೆಗೆ ಪ್ರತಿಕ್ರಿಯೆಯಾಗಿ ಮುಖ್ಯ ನ್ಯಾಯಮೂರ್ತಿಯವರು ಮಾತುಗಳನ್ನು ಆಡಿದ ಅಪರೂಪದ ವಿದ್ಯಮಾನ ಘಟಿಸಿತು. ಅಗತ್ಯ ಬಿದ್ದರೆ ಜಮ್ಮು - ಕಾಶ್ಮೀರಕ್ಕೆ ಭೇಟಿ ನೀಡಿ ವಸ್ತುಸ್ಥಿತಿ ಅವಲೋಕನ ಮಾಡುವೆ ಎಂದು ನುಡಿದ ಅವರು ನ್ಯಾಯಾಲಯದಲ್ಲಿ ದಾವೆ ಹೂಡಲೂ ಸಾಧ್ಯವಾಗದ ಪರಿಸ್ಥಿತಿ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೆಯೇ ಎಂಬುದಾಗಿ ಪ್ರಶ್ನಿಸಿದರು. ಪರಿಸ್ಥಿತಿ ಹೀಗೆ ಇರುವುದೇ ಆಗಿದ್ದಲ್ಲಿ ಅದು ಅತ್ಯಂತ ಗಂಭೀರ ವಿಚಾರ ಎಂದು ನುಡಿದ ಸಿಜೆಐ ಗೊಗೋಯಿ,  ಬಗ್ಗೆ ವರದಿಯೊಂದನ್ನು ಕಳುಹಿಸಿಕೊಡುವಂತೆ ಜಮ್ಮು ಮತ್ತು ಕಾಶ್ಮೀರದ ಮುಖ್ಯ ನ್ಯಾಯಮೂರ್ತಿಯವರಿಗೆ ನಿರ್ದೇಶನವನ್ನೂ ನೀಡಿದರು.ಅನುರಾಧಾ ಭಾಸಿನ್ ಅವರ ವಕೀಲರಾದ ವೃಂದಾ ಗ್ರೋವರ್ ಅವರು ತಮ್ಮ ವಾದವನ್ನು ಆರಂಭಿಸಿದಾಗ ನ್ಯಾಯಮೂರ್ತಿ ಬೊಬ್ಡೆ ಅವರು ಕಾಶ್ಮೀರ ಕಣಿವೆಯಲ್ಲಿ ಅಂತಹ ನಿರ್ಬಂಧ, ಜನಜೀವನ ಸ್ಥಗಿತತೆ ಇದ್ದರೆ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಬಗ್ಗೆ ವ್ಯವಹರಿಸಬಹುದು ಎಂದು ಹೇಳಿದರು.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)


2019: ಹೈದರಾಬಾದ್:  ಆಂಧ್ರ ಪ್ರದೇಶದ ಮಾಜಿ ವಿಧಾನಸಭಾಧ್ಯಕ್ಷ  ಹಾಗೂ ತೆಲುಗುದೇಶಂ
ಪಕ್ಷದ (ಟಿಡಿಪಿ) ಮುಖಂಡ ಕೋಡೇಲ ಶಿವಪ್ರಸಾದ ರಾವ್ ಅವರು ತಮ್ಮ ನಿವಾಸದಲ್ಲಿ ಈದಿನ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿತು.  72 ವರ್ಷದ ಶಿವ ಪ್ರಸಾದ ರಾವ್ ಅವರನ್ನು ಹೈದರಾಬಾದಿನ  ಬಸವತಾರಕಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಟಿಡಿಪಿ ಮುಖಂಡ ಸಾವನ್ನಪ್ಪಿರುವುದನ್ನು ವೈದ್ಯರು ಖಚಿತಪಡಿಸಿದರು. ಶಿವಪ್ರಸಾದ ರಾವ್ ಅವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದರು.  ಇತ್ತೀಚೆಗಷ್ಟೇ ಕೋಡೇಲ ಶಿವಪ್ರಸಾದ ರಾವ್ ಅವರು ಹೃದಯಾಘಾತಗೊಂಡು ಆಸ್ಪತ್ರೆಗೆ ದಾಖಲಾಗಿ ಬಿಡುಗಡೆಗೊಂಡಿದ್ದರು. ಈಗ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ. ಅವರ ಕುಟುಂಬದ ಮೂಲಗಳ ಪ್ರಕಾರ ಕೆಲವಾರು ದಿನಗಳಿಂದ ಅವರು ಮಾನಸಿಕವಾಗಿ ಖಿನ್ನರಾಗಿದ್ದರೆಂದು ಹೇಳಲಾಯಿತು..ರೈತರ ಕುಟುಂಬದಿಂದ ಬಂದಿದ್ದ ಶಿವ ಪ್ರಸಾದ ರಾವ್ ಅವರು ವೃತ್ತಿಯಲ್ಲಿ ವೈದ್ಯರು. 1983ರಲ್ಲಿ ಎನ್ಟಿ ರಾಮರಾವ್ ಸ್ಥಾಪಿಸಿದ ತೆಲುಗು ದೇಶಂ ಪಕ್ಷದ ಮೂಲಕ ರಾಜಕೀಯಕ್ಕೆ ಬಂದವರು. ಆದರೆ, ಇತ್ತೀಚೆಗೆ ಜಗನ್ ಮೋಹನ ರೆಡ್ಡಿ ಸರ್ಕಾರ ತಮ್ಮ ಕುಟುಂಬದ ಮೇಲೆ ರಾಜಕೀಯ ಹಗೆತನ ಸಾಧಿಸುತ್ತಿದೆ. ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಸಾಕಷ್ಟು ನೊಂದಿದ್ದರು ಎಂದು ಹೇಳಲಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ  ಮಾಜಿ ಮುಖ್ಯಮಂತ್ರಿ ಫರೂಕ್ ಅಬ್ದುಲ್ಲ
ಅವರನ್ನು ನಾಗರಿಕ ಸುರಕ್ಷತಾ ಕಾಯ್ದೆಯಡಿಯಲ್ಲಿ (ಪಿಎಸ್ ಬಂಧಿಸಲಾಯಿತು. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯುಂಟು ಮಾಡಿದ್ದಾರೆ ಎಂಬ ಆರೋಪದಲ್ಲಿ  81 ಹರೆಯದ ರಾಜಕಾರಣಿ, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಫರೂಕ್ ಅಬ್ದುಲ್ಲಾ ಅವರನ್ನು ಬಂಧಿಸಿದ್ದು, ಮೂರು ತಿಂಗಳ ಕಾಲ ಇವರನ್ನು ಬಂಧನದಲ್ಲಿಡಲಾಗುವುದು ಎಂದು ಮೂಲಗಳು ಹೇಳಿದವು. ಇಲ್ಲಿಯವರೆಗೆ ಫರೂಕ್ ಅವರನ್ನು ಶ್ರೀನರಗದಲ್ಲಿರುವ ಮನೆಯಲ್ಲಿ ಗೃಹ ಬಂಧನದಲ್ಲಿರಿಸಲಾಗಿತ್ತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದು ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಹೊತ್ತಲ್ಲಿ ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಸೇರಿದಂತೆ ಹಲವಾರು ರಾಜಕಾರಣಿಗಳನ್ನು ಬಂಧಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ಲಂಡನ್: ಜಮ್ಮು-ಕಾಶ್ಮೀರದ ವಿಚಾರವನ್ನು ಪದೇ ಪದೇ ವಿಶ್ವಸಂಸ್ಥೆಯ ಅಂಗಳಕ್ಕೆ
ಒಯ್ಯುತ್ತಿರುವ ಪಾಕಿಸ್ಥಾನದ ನಡೆಯನ್ನು ತರಾಟೆಗೆ ತೆಗೆದುಕೊಂಡ  ಬ್ರಿಟನ್ ಸಂಸದ ಬಾಬ್ ಬ್ಲ್ಯಾಕ್ ಮನ್ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಆ ದೇಶವು (ಪಾಕಿಸ್ತಾನ) ತೆರವುಗೊಳಿಸಬೇಕು ಎಂದೂ ತಾಕೀತು ಮಾಡಿದರು. ಜಮ್ಮು ಕಾಶ್ಮೀರದ ಪೂರ್ತಿ ಭೂಪ್ರದೇಶವು ಭಾರತದ ಸಾರ್ವಭೌಮತ್ವಕ್ಕೆ ಸೇರಿದ್ದಾಗಿದೆ. ವಿಶ್ವಸಂಸ್ಥೆಯ ನಿಲುವಳಿ ಅನುಷ್ಠಾನಗೊಳ್ಳಬೇಕು ಎಂದು ಆಗ್ರಹಿಸುವವರು, ಪಾಕಿಸ್ಥಾನೀ ಸೇನೆ ಕಾಶ್ಮೀರದಿಂದ ಹೊರಬರುವ ಮೂಲಕ ಪೂರ್ತಿ ಭೂಪ್ರದೇಶ ಏಕೀಕೃತಗೊಳ್ಳುವಂತಾಗಲು ಸಾಧ್ಯವಾಗಬೇಕೆಂಬುದನ್ನು ಆಗ್ರಹಿಸುವುದಕ್ಕೆ ಮರೆಯುತ್ತಾರೆಎಂದು ಬಾಬ್ ನುಡಿದರು. ಜಮ್ಮು ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದ ಮುಂದೆ ಪ್ರಸ್ತಾಪಿಸುವುದಾಗಿ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿರುವುದನ್ನು .ಸಿ.ಜೆ.ಯಲ್ಲಿ ಪ್ರಶ್ನಿಸುವುದಾಗಿ ಪಾಕಿಸ್ಥಾನದ ಶಾ ಮಹಮ್ಮದ್ ಖುರೇಷಿ ಅವರು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ವಾಷಿಂಗ್ಟನ್: ಅಮೆರಿಕಾದ ಹ್ಯೂಸ್ಟನ್ ನಲ್ಲಿ 2019ರ ಸೆಪ್ಟೆಂಬರ್ 22ರಂದು
ನಡೆಯಲಿರುವ ಬಹುನಿರೀಕ್ಷಿತ ʼಹೌಡಿ ಮೋದಿʼ ಕಾರ್ಯಕ್ರಮಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅತಿಥಿಯಾಗಿ ಆಗಮಿಸಲಿದ್ದಾರೆ. ಮಾಹಿತಿಯನ್ನು ಶ್ವೇತಭವನ ಅಧಿಕಾರಿಗಳು ದೃಢಪಡಿಸಿದರು. ಭಾರತೀಯ ಅಮೇರಿಕನ್ನರು ಆಯೋಜಿಸಿರುವ ಈಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ , ಅಮೇರಿಕದಲ್ಲಿ ನೆಲೆಸಿರುವ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.ಡೊನಾಲ್ಡ್ ಟ್ರಂಪ್ ಅಮೆರಿಕ ಮತ್ತು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಮುಖ ಸಹಭಾಗಿತ್ವದ ಮಾತುಕತೆಗೆ ಟೆಕ್ಸಾಸ್ ಮತ್ತು ಓಹಿಯೋದ ವಾಪಕೊನೆಟಾಕ್ಕೆ ಪ್ರಯಾಣಿಸಲಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)





No comments:

Post a Comment