Friday, September 13, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 13

2019: ಲಂಡನ್: ಅತ್ಯಂತ ಮಹತ್ವದ ಸಂಶೋಧನೆಯೊಂದರಲ್ಲಿ ನಮ್ಮ ಸೌರ ವ್ಯವಸ್ಥೆಯ ಹೊರಗಿನ ಕೆ2-18ಬಿ ಗ್ರಹದಲ್ಲಿ ನೀರು ಇರುವುದು ಕಂಡುಬಂದಿತು. ನೇಚರ್ ಆಸ್ಟ್ರಾನಮಿ ಎಂಬ ನಿಯತಕಾಲಿಕೆಯಲ್ಲಿ ಕುರಿತ ವರದಿ ಪ್ರಕಟವಾಗಿದ್ದು, ಭೂಮಿಯನ್ನು ಹೊರತುಪಡಿಸಿದರೆ ಇದೊಂದೇ ಗ್ರಹದಲ್ಲಿ ವಾಸಿಸಲು ಅನುಕೂಲವಾಗುವಂಥ ನೀರು ಮತ್ತು ವಾತಾವರಣ ಇದೆ ಎಂಬುದನ್ನು ಕಂಡುಕೊಳ್ಳಲಾಯಿತು. ಭೂಮಿಗಿಂತ 8 ಪಟ್ಟು ದೊಡ್ಡ ಗ್ರಹ: ಭೂಮಿಯಿಂದ 118 ಜ್ಯೋತಿರ್ವರ್ಷ ದೂರದಲ್ಲಿ ಇರುವ ಗ್ರಹ, ಭೂಮಿಗಿಂತ ಎಂಟು ಪಟ್ಟು ಹೆಚ್ಚು ದೊಡ್ಡದಾಗಿದೆ. ನಾಸಾದ ಹಬಲ್ ಸ್ಪೇಸ್ ಟೆಲಿಸ್ಕೋಪ್ ಬಳಸಿ ಅಧ್ಯಯನ ನಡೆಸಲಾಗಿದೆ ಎಂದು ಲಂಡನ್ ಯೂನಿವರ್ಸಿಟಿ ಕಾಲೇಜಿನ ಆಂಗೆಲೋಸ್ ಸಿಯಾರಾಸ್ ಹೇಳಿದರು.
ಕೆ2-18ಬಿ ಎಂಬುದು ಭೂಮಿ 2.0 ಅಲ್ಲ. ಭೂಮಿಗಿಂತ ದೊಡ್ಡದು ಹಾಗೂ ವಿಭಿನ್ನ ವಾತಾವರಣವನ್ನು ಹೊಂದಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಸಾಮಾಜಿಕ  ಮಾಧ್ಯಮ (ಸೋಶಿಯಲ್ ಮೀಡಿಯಾ)  ಖಾತೆಗಳನ್ನು ಆಧಾರ್ ಕಾರ್ಡಿನೊಂದಿಗೆ ಜೋಡಣೆ (ಲಿಂಕ್)  ಮಾಡುವ ಬಗ್ಗೆ ಕೇಂದ್ರದ ಔಪಚಾರಿಕ ಪ್ರತಿಕ್ರಿಯೆ ಕೋರಿದ ಸುಪ್ರೀಂಕೋರ್ಟ್, ಈ ವಿಷಯವನ್ನು ಶೀಘ್ರವಾಗಿ ತೀರ್ಮಾನಿಸುವ ಅಗತ್ಯವಿದೆ ಎಂದು  ಹೇಳಿತು. ಸಾಮಾಜಿಕ ಮಾಧ್ಯಮಕ್ಕೆ  ಸಂಬಂಧಿಸಿದಂತೆ ಸರ್ಕಾರ ಏನಾದರೂ ಕಾನೂನು ಅಥವಾ ನಿಬಂಧನೆಗಳನ್ನು ರೂಪಿಸುತ್ತಿದೆಯೇ ಎಂದು ನ್ಯಾಯಮೂರ್ತಿಗಳಾದ  ದೀಪಕ್ ಗುಪ್ತ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಸುಪ್ರೀಂಕೋರ್ಟ್ ಪೀಠವು ಕೇಂದ್ರ ಸರ್ಕಾರದ ಪರ ಹಾಜರಾದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರನ್ನು ಪ್ರಶ್ನಿಸಿತು.  "ಕೇಂದ್ರವು ಇಲ್ಲಿನ  ಸಮಸ್ಯೆಗಳ ಬಗ್ಗೆ ಏನನ್ನೂ ಮಾಡದಿದ್ದರೆ ನಾವು ಏನನ್ನಾದರೂ ಮಾಡಬೇಕಾಗುತ್ತದೆ. ಈ ಹಂತದಲ್ಲಿ ನಾವು ಏನಾದರೂ ನಿರ್ಧರಿಸಬೇಕೇ ಅಥವಾ ಹೈಕೋರ್ಟ್ ನಿರ್ಧರಿಸುತ್ತದೆಯೇ ಎಂಬುದು ನಮಗೆ ಗೊತ್ತಿಲ್ಲ ಎಂದು  ಸುಪ್ರೀಂಕೋರ್ಟ್ ಹೇಳಿತು.  ’ಪ್ರಕರಣದ ಅರ್ಹತೆ ವಿಚಾರವನ್ನು ನಾವು ಈಗ ಪರಿಶೀಲಿಸುವುದಿಲ್ಲ. ಮದ್ರಾಸ್, ಬಾಂಬೆ ಮತ್ತು ಮಧ್ಯಪ್ರದೇಶ ಹೈಕೋರ್ಟ್‌ಗಳಲ್ಲಿ ಇರುವ ಇಂತಹ ಪ್ರಕರಣಗಳನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆ ಕೋರಿ ಫೇಸ್ ಬುಕ್ ಸಲ್ಲಿಸಿದ ವರ್ಗಾವಣೆ ಕೋರಿಕೆ ಅರ್ಜಿಯ ಬಗ್ಗೆ ನಿರ್ಧರಿಸುತ್ತೇವೆ ಎಂದು ಪೀಠ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ).

2019: ನವದೆಹಲಿ:  ಓಲಾ, ಊಬರ್ಗಳಿಂದಾಗಿ ಕಾರಿನ ಮಾರಾಟ ಕಡಿಮೆಯಾಗಿದೆ ಎಂಬ ಚರ್ಚೆಗಳ ಬೆನ್ನಲ್ಲೇ ದೇಶಾದ್ಯಂತ 150 ನಗರದಲ್ಲಿ ಬೈಕ್ ಬಾಡಿಗೆ ಸೇವೆಗೆ ಓಲಾ ಮುಂದಾಯಿತು. ಮೂಲಕ ಟ್ರಾಫಿಕ್ ಕಿರಿಕಿರಿ ಇರುವ ನಗರಗಳಲ್ಲಿ ಬಾಡಿಗೆ ಟ್ಯಾಕ್ಸಿಗಳ ಮಧ್ಯೆ ಇನ್ನೊಂದು ಸುತ್ತಿನ ಸ್ಪರ್ಧೆ ಏರ್ಪಡಿಸಲು ಓಲಾ ವೇದಿಕೆ ಸಿದ್ಧ ಪಡಿಸಿತು. ಮುಂದಿನ 1 ವರ್ಷದಲ್ಲಿ ತನ್ನ ಸೇವೆಯನ್ನು ವಿಸ್ತರಿಸಲೂ ಅದು ಯೋಜನೆ ರೂಪಿಸಿತು. ಸಣ್ಣ ಸಣ್ಣ ನಗರಗಳಲ್ಲೂ ಅದು ಸೇವೆ ನೀಡಲು ಉದ್ದೇಶಿಸಿತು. ಈಗಾಗಲೇ ದಿಲ್ಲಿ ಹೊರವಲಯ ಮತ್ತು ಗುರುಗ್ರಾಮದಂತಹ ಪ್ರದೇಶಗಳಲ್ಲಿ ಓಲಾ ಬೈಕ್ ಸೇವೆ ನೀಡುತ್ತಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಯುವಕರಿಗೆ ಕೆಲಸ ನೀಡುವುದು ಮತ್ತು ಗ್ರಾಹಕರನ್ನು ಮತ್ತಷ್ಟು ಸಂಪರ್ಕಿಸುವ ಉದ್ದೇಶ ಹೊಂದಿದ್ದೇವೆ ಎಂದು ಓಲಾ ಹೇಳಿತು. ಕಿ.ಮೀ.ಗೆ ಸುಮಾರು 5 ಕಿ.ಮೀ. ದರದಲ್ಲಿ ಬಾಡಿಗೆ ಬೈಕ್ ಸೇವೆ ಲಭಿಸುತ್ತದೆ.  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
.
2019: ಕೋಲ್ಕತ:ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತದ ಮಾಜಿ ಪೊಲೀಸ್ ಕಮೀಷನರ್ ರಾಜೀವ ಕುಮಾರ್ ಅವರನ್ನು ಬಂಧಿಸದಂತೆ ತಡೆ ನೀಡಿದ್ದ ಆದೇಶವನ್ನು ಕಲ್ಕತ್ತ ಹೈಕೋರ್ಟ್ ತೆರವುಗೊಳಿಸಿತು. ಇದರಿಂದ ರಾಜೀವ್ ಕುಮಾರ್ ಬಂಧನ ಭೀತಿಗೊಳಗಾದರು. ತಮ್ಮನ್ನು ವಿಚಾರಣೆಗೊಳಪಡಿಸಲು ಸಿಬಿಐ ಹಾಜರಾಗುವಂತೆ ನೀಡಿರುವ ನೋಟಿಸ್ ಅನ್ನು ಪ್ರಶ್ನಿಸಿ ರಾಜೀವ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದ್ದು, ಅರ್ಜಿದಾರರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ. ತಮ್ಮನ್ನೇ ಟಾರ್ಗೆಟ್ ಮಾಡಿದ್ದಾರೆ ಎಂಬ ದೂರು ಸತ್ಯವಲ್ಲ. ಸಿಬಿಐ ನೋಟಿಸ್ ಜಾರಿಗೊಳಿಸುವುದನ್ನು ದುರುದ್ದೇಶ ಎಂದು ಅರ್ಥೈಸಿಕೊಳ್ಳಬಾರದು ಎಂದು ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ:  ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧದ ತಮ್ಮ ದಾಳಿಯನ್ನು ಮುಂದುವರೆಸಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಾನು ’ಕಾಶ್ಮೀರ್ ಕಾ ಸಫೀರ್ (ರಾಯಭಾರಿ) ಆಗಿ ವಿಶ್ವವನ್ನು ಸುತ್ತುವುದಾಗಿ  ಘೋಷಿಸಿದರು. ‘ಕಾಶ್ಮೀರ ಕಾ ಸಫೀರ್ (ರಾಯಭಾರಿ) ಆಗಿ ಜಗತ್ತನ್ನು ಸುತ್ತುವೆ ಎಂಬುದಾಗಿ ಮೋದಿ ಮತ್ತು ಹಿಂದುಸ್ಥಾನಕ್ಕೆ (ಭಾರತ) ಹೇಳಲು ನಾನು ಬಯಸುತ್ತೇನೆ. ಆರ್‌ಎಸ್‌ಎಸ್ ಯಾವುದಕ್ಕಾಗಿ ನಿಂತಿದೆ ಎಂಬುದನ್ನು ನಾನು ಜಗತ್ತಿಗೆ ಹೇಳುತ್ತೇನೆ ಎಂದು ಖಾನ್ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಮುಜಾಫ್ಫರಾಬಾದಿನಲ್ಲಿ ಬಹಿರಂಗ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ‘೫೦ ವರ್ಷಗಳ ಬಳಿಕ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಮತ್ತೆ ತರುವ ಮೂಲಕ ಕಾಶ್ಮೀರ ವಿಷಯವನ್ನು ’ಅಂತಾರಾಷ್ಟ್ರೀಯಗೊಳಿಸಲಾಗಿದೆ ಎಂದು ಇಮ್ರಾನ್ ಖಾನ್ ಬೆನ್ನು ತಟ್ಟಿಕೊಂಡರು. (ವಿವರಗಳಿಗೆ ಇಲ್ಲಿಕ್ಲಿಕ್ಕಿಸಿ)

2019: ನವದೆಹಲಿ:  ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾದ ಕರ್ನಾಟಕದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾರಿ ನಿರ್ದೇಶನಾಲಯ ಕಸ್ಟಡಿಯನ್ನು 2019  ಸೆಪ್ಟೆಂಬರ್ ೧೭ರವರೆಗೆ ವಿಸ್ತರಿಸಿ ದೆಹಲಿಯ ವಿಶೇಷ ನ್ಯಾಯಾಲಯವು  ಈದಿನ  ಆದೇಶ ನೀಡಿತು. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯವು ಸೆಪ್ಟೆಂಬರ್ ೩ರ ರಾತ್ರಿ ಬಂಧಿಸಿತ್ತು. ಅವರ ಒಂಬತ್ತು ದಿನಗಳ ಜಾರಿ ನಿರ್ದೇಶನಾಲಯ ವಶದಲ್ಲಿನ ತನಿಖೆಯ ಅವಧಿ  ಈದಿನಕ್ಕೆ ಮುಕ್ತಾಯಗೊಂಡಿತ್ತು. ನ್ಯಾಯಾಲಯವು 2019 ಸೆಪ್ಟೆಂಬರ್ ೪ರಂದು ಶಿವಕುಮಾರ್ ಅವರನ್ನು ಸೆಪ್ಟೆಂಬರ್ ೧೩ರವರೆಗೆ ಜಾರಿ ನಿರ್ದೇಶನಾಲಯ ವಶಕ್ಕೆ ಒಪ್ಪಿಸಿತ್ತು. ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರ ಮುಂದೆ ಕಾಂಗ್ರೆಸ್ ನಾಯಕನನ್ನು ಹಾಜರು ಪಡಿಸಿದ ಜಾರಿ ನಿರ್ದೇಶನಾಲಯವು, ಕಸ್ಟಡಿ ತನಿಖಾ ಅವಧಿಯನ್ನು ೫ ದಿನಗಳವರೆಗೆ ವಿಸ್ತರಿಸಬೇಕು ಎಂದು ಕೋರಿಕೆ ಮಂಡಿಸಿತು. ಶಿವಕುಮಾರ್ ಅವರು ತನಿಖೆಯ ವೇಳೆಯಲ್ಲಿ ಹಾರಿಕೆಯ, ಅಸಂಬದ್ಧ  ಉತ್ತರಗಳನ್ನು ನೀಡುತ್ತಿದ್ದಾರೆ, ಅವರ ಬಹುತೇಕ ಆಸ್ತಿಗಳು ಬೇನಾಮಿಯಾಗಿವೆ ಎಂದು ತನಿಖಾ ಸಂಸ್ಥೆಯು ನ್ಯಾಯಾಲಯಕ್ಕೆ ತಿಳಿಸಿತು. ‘ಶಿವಕುಮಾರ್ ಅವರ ವಿರುದ್ಧದ ತನಿಖೆಯ ಕಳಂಕಿತ ಹಣದ ಮೊತ್ತ ೨೦೦ ಕೋಟಿ ರೂಪಾಯಿಗಳಿಗೂ ಹೆಚ್ಚಾಗಿದ್ದು, ಅವರ ಬಳಿ ೮೦೦ ಕೋಟಿ ರೂಪಾಯಿ ಮೌಲ್ಯದ ’ಬೇನಾಮಿ ಆಸ್ತಿಯೂ ಇದೆ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ನ್ಯಾಯಾಲಯಕ್ಕೆ ತಿಳಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಗ್ರಹಿಸಲಾಗಿರುವ ಭಾರೀ ಪ್ರಮಾಣದ ದಾಖಲೆಗಳೊಂದಿಗೆ ಕಾಂಗ್ರೆಸ್ ನಾಯಕನನ್ನು ಜಾರಿ ನಿರ್ದೇಶನಾಲಯವು ಪ್ರಶ್ನಿಸಬೇಕಾಗಿದೆ ಎಂದು ಅಡಿಷನಲ್ ಸಾಲಿಸಿಟರ್ ಹೇಳಿದರು. ಸಂಪೂರ್ಣವಾಗಿ ತಮ್ಮ ಅರಿವಿನಲ್ಲಿ ಇರುವ ಮಾಹಿತಿಯನ್ನು ಶಿವಕುಮಾರ್ ಅವರು ತಡೆಹಿಡಿದಿದ್ದಾರೆ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ತಿಳಿಸಿತು. (ವಿವರಗಳಿಗೆ ಇಲ್ಲಿಕ್ಲಿಕ್ಕಿಸಿ)

2019: ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಮುಂದೆ ಶರಣಾಗಲು ಅನುಮತಿ ಕೋರಿ ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಸಲ್ಲಿಸಿದ ಮನವಿಯನ್ನು ದೆಹಲಿಯ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರ ನ್ಯಾಯಾಲಯವು 2019 ಸೆಪ್ಟೆಂಬರ್ 13ರ ಶುಕ್ರವಾರ ವಜಾಗೊಳಿಸಿತು. ಪರಿಣಾಮವಾಗಿ ಚಿದಂಬರಂ ಅವರು 2019 ಸೆಪ್ಟೆಂಬರ್ ೧೯ರವರೆಗೂ ತಿಹಾರ್ ಸೆರೆಮನೆಯಲ್ಲಿಯೇ ಕಾಲ ಕಳೆಯಬೇಕಾಗಿ ಬಂದಿತು. ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐಯಿಂದ ಬಂಧನಕ್ಕೆ ಒಳಗಾದ ಚಿದಂಬರಂ ಅವರು ಸೆಪ್ಟೆಂಬರ್ ೫ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸಿಬಿಐ ಅವರನ್ನು ಆಗಸ್ಟ್ ೨೧ರಂದು ಬಂಧಿಸಿತ್ತು. ಬಂಧನದ ಬಳಿಕ ೧೪ ದಿನಗಳನ್ನು ಅವರು ಸಿಬಿಐ ವಶದಲ್ಲೇ ಕಳೆದಿದ್ದರು. .ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿಯನ್ನು ೭ ದಿನಗಳ ಒಳಗಾಗಿ ಸಲ್ಲಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಗುರುವಾರ ಆಜ್ಞಾಪಿಸಿತ್ತು. ಐಎನ್‌ಎಕ್ಸ್ ಮೀಡಿಯಾ ಪ್ರಕರಣದಲ್ಲಿ ತಮಗೆ ನಿಯಮಿತ ಜಾಮೀನು ನೀಡುವಂತೆ ಚಿದಂಬರಂ ಅವರು ಮನವಿ ಮಾಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



No comments:

Post a Comment