ನಾನು ಮೆಚ್ಚಿದ ವಾಟ್ಸಪ್

Saturday, October 12, 2019

ಇಂದಿನ ಇತಿಹಾಸ History Today ಅಕ್ಟೋಬರ್ 12

2019: ಮಹಾಬಲಿಪುರಂ (ಮಾಮಲ್ಲಪುರಂ):ಚೆನ್ನೈ ಸೇತುವಿನೊಂದಿಗೆ (ಚೆನ್ನೈ ಕನೆಕ್ಟ್) ಭಾರತ ಮತ್ತು ಚೀನಾ ಮಧ್ಯೆ ಸಹಕಾರದ ಹೊಸ ಯುಗ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಚೀನ ಕರಾವಳಿ ಪಟ್ಟಣದಲ್ಲಿ ಚೀನೀ ಅಧ್ಯಕ್ಷ ಕ್ಸಿ -ಜಿನ್ಪಿಂಗ್ ಜೊತೆಗಿನ ಎರಡು ದಿನಗಳ ಅವಧಿಯಲ್ಲಿನ ಐದೂವರೆ ಗಂಟೆಗಳ ಮುಖಾಮುಖಿ ಮಾತುಕತೆಗಳ ಬಳಿಕ  2019 ಅಕ್ಟೋಬರ್ 12ರ ಶನಿವಾರ ಇಲ್ಲಿ ಹೇಳಿದರುಭಾರತ- ಚೀನಾ ನಡುವಣ ಎರಡನೇ ಅನೌಪಚಾರಿಕ ಶೃಂಗಸಭೆಯ ಅಂಗವಾಗಿ ನಡೆದ ಮಾತುಕತೆಗಳು ದ್ವಿಪಕ್ಷೀಯ ಬಾಂಧವ್ಯಗಳ ಬಗೆಗಿನಬಿಚ್ಚು ಮನಸ್ಸಿನಹಾಗೂ ಮನಃಪೂರ್ವಕವಾದ ಉತ್ತಮ ಮಾತುಕತೆಗಳಾಗಿದ್ದವು ಎಂದು ಹೇಳಿದ ಕ್ಸಿ, ’ಭಾರತ-ಚೀನಾ ಬಾಂಧವ್ಯವು ತಮ್ಮ ಸರ್ಕಾರದ ದೃಢ ನೀತಿಯಾಗಿದೆಎಂದು ನುಡಿದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನವನ್ನು ರದ್ದು ಪಡಿಸಿದ ಭಾರತದ ನಿರ್ಧಾರದ ಹಿನ್ನೆಲೆಯಲ್ಲಿ ಬಿಗಡಾಯಿಸಿದ ಬಾಂಧವ್ಯಗಳನ್ನು ಮರುಸ್ಥಾಪನೆ ಮಾಡುವ ಯತ್ನ ನಿಯೋಗ ಮಟ್ಟದ ಮಾತುಕತೆಗಳಲ್ಲಿ ಉಭಯ ನಾಯಕರು ಆಡಿದ ಪ್ರಾಸ್ತಾವಿಕ ಮಾತುಗಳಲ್ಲಿ ಪ್ರತಿಫಲಿಸಿತು. ‘ವುಹಾನ್ ಸ್ಫೂರ್ತಿಯು ನಮ್ಮ ಬಾಂಧವ್ಯಗಳಿಗೆ ಹೊಸ ವೇಗವನ್ನು ಮತ್ತು ಒತ್ತನ್ನು ನೀಡಿತು. ಈಗ ನಮ್ಮ ಚೆನ್ನೈ ಸೇತು (ಚೆನ್ನೈ ಕನಿಕ್ಟ್) ಉಭಯ ರಾಷ್ಟ್ರಗಳ ನಡುವೆ ಸಹಕಾರದ ಹೊಸ ಯುಗಕ್ಕೆ ನಾಂದಿ ಹಾಡಿದೆಎಂದು ಮೋದಿಯವರು ಮೊದಲ ಅನೌಪಚಾರಿಕ ಶೃಂಗದ ಬಗ್ಗೆ ಉಲ್ಲೇಖಿಸುತ್ತಾ ನುಡಿದರು. ಉಭಯ ನಾಯಕರ ಮೊದಲ ಅನೌಪಚಾರಿಕ ಶೃಂಗಸಭೆಯು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಚೀನಾದ ವುಹಾನ್ ನಗರದಲ್ಲಿ ನಡೆದಿತ್ತು. ವುಹಾನ್ ಶೃಂಗಸಭೆಯು ಭಾರತ - ಚೀನಾ ಬಾಂಧವ್ಯದ ಸ್ಥಿರತೆಯನ್ನು ಹೆಚ್ಚಿಸಿ, ಆಯಕಟ್ಟಿನ ಸಂಪರ್ಕ ಹೆಚ್ಚಳದ ಮೂಲಕ ಹೊಸ ವೇಗವನ್ನು ನೀಡಿದೆ ಎಂದು ಮೋದಿ ಹೇಳಿದರು. ‘ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಪ್ರೌಢತೆಯೊಂದಿಗೆ ನಿಭಾಯಿಸಬೇಕು ಮತ್ತು ಅವು ಘರ್ಷಣೆಗಳಾಗಲು ಬಿಡಬಾರದು ಎಂದು ನಾವು ತೀರ್ಮಾನಿಸಿದ್ದೆವು. ಪರಸ್ಪರರ ಕಾಳಜಿಗಳ ಬಗ್ಗೆ ನಾವು ಸೂಕ್ಷ್ಮವಾಗಿರೇಕು ಮತ್ತು ನಮ್ಮ ಬಾಂಧವ್ಯಗಳು ವಿಶ್ವಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ದಾರಿ ಮಾಡಬೇಕು ಎಂದು ನಾವು ನಿರ್ಧರಿಸಿದ್ದೆವು ಎಂದು ಮೋದಿ ಹೇಳಿದರು.‘ಇವು ನಮ್ಮ ದೊಡ್ಡ ಸಾಧನೆಗಳಾಗಿದ್ದು, ಭವಿಷ್ಯದಲ್ಲಿ ನಿಟ್ಟಿನಲ್ಲಿ ಇನ್ನಷ್ಟು ಸಾಧನೆಗೆ ನಮಗೆ ಪ್ರೇರಣೆ ನೀಡಲಿವೆಎಂದು ಮೋದಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ತಮಿಳುನಾಡಿನ ಚಾರಿತ್ರಿಕ ತಾಣ ಮಹಾಬಲಿಪುರಂ (ಮಾಮಲ್ಲಪುರಂ) ಪಟ್ಟಣದಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗ ಸಭೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಗೊಳ್ಳಲಿಲ್ಲ, ಚೀನೀ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭೇಟಿ ಬಗ್ಗೆ ಉಸುರಿದರು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮ್ಮನೇ ಕೇಳಿಸಿಕೊಂಡರು ಅಷ್ಟೆ. ಎರಡು ದಿನಗಳ ಶೃಂಗಸಭೆ ಸಮಾಪ್ತಿಯ ಬಳಿಕ  2019 ಅಕ್ಟೋಬರ್ 12ರ ಶನಿವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ವಿಷಯವನ್ನು ತಿಳಿಸಿದರು. ‘ (ಕಾಶ್ಮೀರ) ವಿಷಯದ ಪ್ರಸ್ತಾಪವಾಗಲಿಲ್ಲ, ಅಥವಾ ಚರ್ಚೆ ನಡೆಯಲಿಲ್ಲ. ಏನಿದ್ದರೂ, ಇದು ಭಾರತದ ಆಂತರಿಕ ವಿಷಯ ಎಂಬ ನಮ್ಮ ನಿಲುವಂತೂ ಸ್ಪಷ್ಟವಾಗಿದೆಎಂದು ಹೇಳಿದರು. ಆದಾಗ್ಯೂ ಕ್ಸಿ ಅವರು ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರು ವಾರಾರಂಭದಲ್ಲಿ ಬೀಜಿಂಗ್ಗೆ ನೀಡಿದ್ದ ಭೇಟಿಯ ಬಗ್ಗೆ ವಿವರಿಸಿದರು. ಪ್ರಧಾನಿ ಮೋದಿಯವರು ಅದನ್ನು ಸುಮ್ಮನೇ ಕೇಳಿಸಿಕೊಂಡರು, ಆದರೆ ಪ್ರತಿಕ್ರಿಯಿಸಲಿಲ್ಲ ಎಂದು ಗೋಖಲೆ ನುಡಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಬಳಿಕ ಕಳೆದ ಕೆಲವು ತಿಂಗಳುಗಳಲ್ಲಿ ಭಾರತ-ಚೀನಾ ಬಾಂಧವ್ಯ ಪ್ರಕ್ಷುಬ್ಧಗೊಂಡಿತ್ತು. ಹಿನ್ನೆಲೆಯಲ್ಲಿ ಭಾರತ -ಚೀನಾ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮವನ್ನು ವಿರೋಧಿಸಿದ ಪಾಕಿಸ್ತಾನವನ್ನು ಚೀನಾ ಬೆಂಬಲಿಸಿದ್ದರಿಂದ ದೇಶದ ಜೊತೆಗಿನ ಭಾರತದ ಬಾಂಧವ್ಯ ಬಿಗಡಾಯಿಸಿತ್ತು.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಟೋಕಿಯೋ:ಪ್ರಬಲ ಹಗಿಬೀಸ್ ಚಂಡಮಾರುತವು 2019 ಅಕ್ಟೋಬರ್ 12ರ ಶನಿವಾರ ಜಪಾನ್ ಟೋಕಿಯೋವನ್ನು ಅಪ್ಪಳಿಸಿದ್ದು, ಇದನ್ನು 60 ವರ್ಷಗಳಲ್ಲೇ ಅತ್ಯಂತ ಭೀಕರ ಚಂಡಮಾರುತ ಎಂದು ಬಣ್ಣಿಸಲಾಯಿತು.  ಇದು ಅಪ್ಪಳಿಸುವುದಕ್ಕೂ ಮುನ್ನ ಟೋಕಿಯೋ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಭಾರೀ ಮಳೆ, ಬಿರುಗಾಳಿ ಸಂಭವಿಸಿ, ಅಪಾರ ಪ್ರಮಾಣದ ಹಾನಿಯೂ ಆಯಿತು.  ಹಗಿಬೀಸ್ ಎಂದರೆ ಫಿಲಿಪಿನೋ ಭಾಷೆಯಲ್ಲಿವೇಗಎಂದು ಅರ್ಥ. ಇದು ಉತ್ತರ-ವಾಯವ್ಯದತ್ತ ಮುನ್ನುಗ್ಗಿ, ಗಂಟೆಗೆ 162  ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿತು. ಚಂಡಮಾರುತದ ಹಿನ್ನೆಲೆಯಲ್ಲಿ ಎಲ್ಲ ನಿಪ್ಪನ್ ಏರ್ವೆàಸ್ ಹಾಗೂ ಜಪಾನ್ ಏರ್ಲೈನ್ಸ್ ವಿಮಾನಗಳ ಸಂಚಾರ ರದ್ದಾಗಿವೆ. ಟೋಕಿಯೋ ಮತ್ತು ಒಸಾಕಾ ನಡುವಿನ ಬುಲೆಟ್ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಟೋಕಿಯೋ ಡಿಸ್ನಿಲ್ಯಾಂಡ್ ಅನ್ನೂ ಶನಿವಾರ ಮುಚ್ಚಲಾಗಿತ್ತು.ಸುಮಾರು 17 ಸಾವಿರ ಪೊಲೀಸರು ಹಾಗೂ ಸೇನಾ ಸಿಬ್ಬಂದಿಯನ್ನು ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 60 ವರ್ಷಗಳ ಹಿಂದೆ ಅಂದರೆ 1958ರಲ್ಲಿ ಟೋಕಿಯೋಗೆ ಅಪ್ಪಳಿಸಿದ್ದ ಚಂಡಮಾರುತವು 1,200ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿತ್ತು. ದುರಂತದಲ್ಲಿ 5 ಲಕ್ಷದಷ್ಟು ಮನೆಗಳು ಜಲಾವೃತವಾಗಿದ್ದವು.

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ಸಂಪರ್ಕ ಇಲ್ಲದೇ ಇರುವ ಬಾಕಿ ಸ್ಥಳಗಳಲ್ಲೂ ಸೋಮವಾರದಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಪುನಾರಂಭಗೊಳ್ಳಲಿವೆ ಎಂದು ಸರ್ಕಾರವು 2019 ಅಕ್ಟೋಬರ್ 12ರ ಶನಿವಾರ ಪ್ರಕಟಿಸಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನಿರ್ಬಂಧಗಳನ್ನು ವಿಧಿಸಿದ ಬಳಿಕ ಮೊಬೈಲ್ ಸೇವೆ ಸೇರಿದಂತೆ ಎಲ್ಲ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದಾಗಿ ಎರಡಕ್ಕೂ ಹೆಚ್ಚು ತಿಂಗಳುಗಳ ಬಳಿಕ ಎಲ್ಲ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳನ್ನು ಸೋಮವಾರ ಪುನಾರಂಭಿಸಾಗುವುದು ಎಂದು ಸರ್ಕಾರ ಹೇಳಿತು. ವಿಶೇಷ ಸ್ಥಾನಮಾನ ರದ್ದು ಪಡಿಸಿ ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಜನರ ಸಂಚಾರ, ದೂರವಾಣಿ ಮತ್ತು ಇಂಟರ್ ನೆಟ್ ಸೇವೆಗಳನ್ನು ಅಮಾನತುಗೊಳಿಸಿ ಜನರ ಚಲನವಲನಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆಗಸ್ಟ್ ೫ರಿಂದ ರಾಜ್ಯದ ನೂರಾರು ನಾಯಕರನ್ನೂ ಬಂಧಿಸಲಾಗಿತ್ತು. ಭಯೋತ್ಪಾದನೆ ನಿಗ್ರಹ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. ‘ಪರಿಸ್ಥಿತಿಯ ಪುನರ್ ಪರಿಶೀಲನೆಯ ಬಳಿಕ, ಜಮ್ಮು ಮತ್ತು ಕಾಶ್ಮೀರದ ಉಳಿದ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸೇವೆಗಳನ್ನು ಪುನಾರಂಭಿಸುವ ನಿರ್ಧಾರವನ್ನು ಈಗ ಕೈಗೊಳಲಾಗಿದೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ರೋಹಿತ್ ಕಂಸಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ಚೆನ್ನೈ: ಪ್ರಧಾನಿ ಮೋದಿ 2019 ಅಕ್ಟೋಬರ್ 12ರ ಶನಿವಾರ ಬೆಳ್ಳಂಬೆಳಗ್ಗೆ ಮಹಾಬಲಿಪುರಂನಲ್ಲಿರುವ ಸಮುದ್ರ ದಂಡೆಯಲ್ಲಿ ಕಸ ತೆಗೆಯುವ (ಪ್ಲಾಗಿಂಗ್ = ಪ್ಲಾಸ್ಟಿಕ್ ಹೆಕ್ಕುತ್ತಾ ಜಾಗಿಂಗ್ ಮಾಡುವುದು) ಕೆಲಸ ಮಾಡುವ ಮೂಲಕ ಜನರಿಗೆ ಸ್ವಚ್ಛತೆಯ ಸಂದೇಶ ಸಾರಿದರು. ಸದ್ಯ ವಿಡಿಯೋ ಎಲ್ಲೆಡೆ ಭಾರೀ ವೈರಲ್ ಆಯಿತು. ದೇಶದ ಪ್ರಧಾನಿ ಇಂತಹ ಸ್ವಚ್ಛತಾ ಕಾರ್ಯ ಮಾಡಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.  ಪ್ರಧಾನಿ ಮೋದಿ ಸುಮಾರು 30 ನಿಮಿಷಕ್ಕೂ ಹೆಚ್ಚು ಕಾಲ ಸಮುದ್ರದ ತೀರದಲ್ಲಿ ವಾಕಿಂಗ್ ಮಾಡಿದರು. ಇದೇ ವೇಳೆ ಅಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ತ್ಯಾಜ್ಯಗಳು, ಮತ್ತಿತರ ಕಸವನ್ನು ಬ್ಯಾಗ್ವೊಂದಕ್ಕೆ ತುಂಬಿಸಿದರು. ವಿಡಿಯೋವನ್ನು ಮೋದಿ ಟ್ವಿಟರ್ನಲ್ಲಿ ಹಂಚಿಕೊಂಡರು.  "ಇಂದು ಬೆಳಗ್ಗೆ ಮಹಾಬಲಿಪುರಂನ ಸಮುದ್ರ ತೀರವೊಂದರಲ್ಲಿ ಪ್ಲಾಗಿಂಗ್  ಮಾಡಿದೆ. ವೇಳೆ ಸಮುದ್ರದ ದಡದಲ್ಲಿ ಬಿದ್ದಿದ್ದ ಕಸವನ್ನು ಬ್ಯಾಗ್ಗೆ ತುಂಬಿಸಿದೆ. ಬಳಿಕ ಬ್ಯಾಗನ್ನು ಹೋಟೆಲ್ ಸಿಬ್ಬಂದಿ ಜಯರಾಜ್ಗೆ ಕೊಟ್ಟೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳೋಣ. ಜೊತೆಗೆ ನಾವು ಸಹ ಸದೃಢ ಹಾಗೂ ಆರೋಗ್ಯವಾಗಿರಬೇಕು," ಎಂದು ಮೋದಿ ಟ್ವೀಟ್ ಮಾಡಿದರು. ಪ್ಲಾಗಿಂಗ್ ಎಂದರೆ ವಾಕ್ ಮಾಡುತ್ತಾ ಅಥವಾ ಜಾಗಿಂಗ್ ಮಾಡುತ್ತಾ ರಸ್ತೆಯಲ್ಲಿ ಬಿದ್ದ ಕಸವನ್ನು ಆಯ್ದು ಸ್ವಚ್ಛಗೊಳಿಸುವುದು. ಮಹಾಬಲಿಪುರಂ ಸಮುದ್ರ ತೀರದಲ್ಲಿ ಮನಸ್ಸಿಗೆ ಆಹ್ಲಾದ ಉಂಟು ಮಾಡುವ ನಡಿಗೆ ಎಂದು ಮೋದಿ ಮತ್ತೊಂದು ಟ್ವೀಟ್ನಲ್ಲಿ ಬರೆದುಕೊಂಡರು. ಪ್ರಧಾನಿ ಮೋದಿ ಚೀನಾ ಅಧ್ಯಕ್ಷ ಕ್ಷಿ ಜಿನ್ಪಿಂಗ್ ಜೊತೆ ಅನೌಪಚಾರಿಕ ಸಭೆ ನಡೆಸಲು ತಮಿಳುನಾಡಿನ ಮಹಾಬಲಿಪುರಂಗೆ ಬಂದಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ಶ್ರಿನಗರ:  ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ 2019 ಅಕ್ಟೋಬರ್ 12ರ ಶನಿವಾರ ಶಂಕಿತ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ ಮಂದಿ ಗಾಯಗೊಂಡರು  ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಜನ ಸಂಚಾರದ ಮೇಲೆ ನಿರ್ಬಂಧಗಳನ್ನು ವಿಧಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದ ಮಾದರಿಯ ಮೂರನೇ ಘಟನೆ ಇದಾಯಿತು. ಶಂಕಿತ ಭಯೋತ್ಪಾದಕರು ಹರಿ ಸಿಂಗ್ ಹೈ ಸ್ಟ್ರೀಟಿನಲ್ಲಿ ಗ್ರೆನೇಡ್ ಎಸೆದಿದ್ದು, ಅದು ಲಾಲ್ ಚೌಕದಿಂದ ಕೆಲವು ನೂರು ಮೀಟರ್ ದೂರ ರಸ್ತೆ ಬದಿಯಲ್ಲಿ ಸ್ಫೋಟಗೊಂಡಿದೆ. ಸ್ಥಳವು ನಾಗರಿಕ ಸಚಿವಾಲಯ ಮತ್ತು ರಾಜ್ಯ ವಿಧಾನಸಭೆಗೆ ಸಮೀಪವಿರುವ ಸ್ಥಳವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.  ನಿರ್ಬಂಧಗಳ ಹಿನ್ನೆಲೆಯಲ್ಲಿ ಅಂಗಡಿಗಳು ಮುಚ್ಚಿದ್ದು, ಪ್ರದೇಶದಲ್ಲಿ ಹಣ್ಣು ಮತ್ತು ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಮಾರುವ ವ್ಯಾಪಾರಿಗಳ ಕೈಗಾಡಿಗಳು ಇದ್ದವು ಎಂದು ಅವರು ಹೇಳಿದರು.  (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment