ನಾನು ಮೆಚ್ಚಿದ ವಾಟ್ಸಪ್

Tuesday, October 8, 2019

ಪಿಲುಂಗುಳಿ ಶಾರದ ಟೀಚರ್ ದೈವಾಧೀನ

ಬೆಂಗಳೂರು:  ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ  ಪಿಲುಂಗುಳಿಯ ಶಾರದ ಟೀಚರ್ ಅವರು ಬೆಂಗಳೂರಿನ ಗಿರಿನಗರದಲ್ಲಿ 2019 ಅಕ್ಟೋಬರ್ 08ರ ಮಂಗಳವಾರ  ಬೆಳಗ್ಗೆ ದೈವಾಧೀನರಾದರು. ಅವರಿಗೆ 79ವರ್ಷ ವಯಸ್ಸಾಗಿತ್ತು.

ಕನ್ಯಾನ, ವಿಟ್ಲ ಆಸುಪಾಸಿನಲ್ಲಿ ಶಾರದಕ್ಕ, ಶಾರದಾ ಟೀಚರ್  ಎಂದೇ ಪರಿಚಿತರಾಗಿದ್ದ ಪಿಲುಂಗುಳಿ  ಶಾರದ  ಅವರು ದಿವಂಗತ ನಾರಾಯಣ ಭಟ್ ಮತ್ತು ಸರಸ್ವತಿ ಅಮ್ಮ ಅವರ ಪುತ್ರಿಯಾಗಿದ್ದು ಅವಿವಾಹಿತರಾಗಿದ್ದರು. ವಿಟ್ಲದ ನೆತ್ರಕೆರೆಯ ದಿವಂಗತ ಕೃಷ್ಣಭಟ್ ಅವರ  ಧರ್ಮಪತ್ನಿ ದಿವಂಗತ ಗೌರಮ್ಮ ಶಾರದಾ ಅವರ ತಾಯಿಯ ತಂಗಿ. ತಂಗಿಯರಾದ ಲಲಿತಾ,ಜಯಂತಿ ಹಾಗೂ ಅಪಾರ ಅಭಿಮಾನಿಗಳು,ಬಂಧು ಮಿತ್ರರನ್ನು ಶಾರದಾ ಅವರು ಅಗಲಿದ್ದಾರೆ.

ಕನ್ಯಾನದ ಬಾಲವಾಡಿ/ ಅಂಗನವಾಡಿ ಶಿಕ್ಷಿಕಿಯಾಗಿ ನಿವೃತ್ತರಾಗಿದ್ದ ಶಾರದ ಅವರು ಅಪಾರ  ದೈವಭಕ್ತೆಯಾಗಿದ್ದರು. ನೂರಾರು ಶೋಭಾನೆಗಳನ್ನು ಹಾಡುವುದಲ್ಲದೆ, ಸ್ವತಃ ಶೋಭಾನೆಗಳನ್ನು ರಚಿಸಿದ್ದರು.

1940ರ ಡಿಸೆಂಬರ್  8ರಂದು ಜನಿಸಿದ್ದ ಶಾರದ ಅವರು  ತಮ್ಮ  ಇಳಿವಯಸ್ಸಿನಲ್ಲಿ ಯಕ್ಷಗಾನ ಕಲಿತು,  ವೇಷ ಹಾಕಿ ಯಕ್ಷ ರಂಗಭೂಮಿಯನ್ನು ಏರಿದ್ದ ರು. ಅವರು ಹಾಸ್ಯ ಪಾತ್ರಗಳನ್ನು ಇಷ್ಟ ಪಟ್ಟು  ಆ ವೇಷಗಳನ್ನು ಹಾಕುತ್ತಿದ್ದರು.  ಹೆಣ್ಮಕ್ಕಳ  ಯಕ್ಷಗಾನ ತಂಡ ಕಟ್ಟಿ, ಹಲವಾರು ಕಡೆ ಪ್ರದರ್ಶನಗಳನ್ನೂ ಕೂಡಾ ಕೊಟ್ಟ ಧೀಮಂತೆ ಅವರಾಗಿದ್ದರು.

ಇಳಿವಯಸ್ಸಿನಲ್ಲಿ ಯಕ್ಷ ರಂಗ ಭೂಮಿಯನ್ನು ಏರಿ ಪ್ರದರ್ಶನ ನೀಡಿದ್ದಕ್ಕಾಗಿ ಯಕ್ಷಗಾನದ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರು ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು.

ಬೆಂಗಳೂರಿನ ವಿಲ್ಸನ್ ಗಾರ್ಡನ್ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತು.

No comments:

Post a Comment