Tuesday, July 24, 2018

ಇಂದಿನ ಇತಿಹಾಸ History Today ಜುಲೈ 24

ಇಂದಿನ ಇತಿಹಾಸ History Today ಜುಲೈ 24
2019: ನವದೆಹಲಿ: ವ್ಯಕ್ತಿಗಳನ್ನುಭಯೋತ್ಪಾದಕರುಎಂಬುದಾಗಿ ಘೋಷಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಮೂಲಕ ರಾಷ್ಟ್ರದ ಭಯೋತ್ಪಾದನೆ ನಿಗ್ರಹ ಕಾಯ್ದೆಯನ್ನು ಇನ್ನಷ್ಟು ಬಿಗಿಗೊಳಿಸಲು ಅವಕಾಶ ಕಲ್ಪಿಸುವಅಕ್ರಮ ಚಟುವಟಿಕೆಗಳ (ನಿಗ್ರಹ) ತಿದ್ದುಪಡಿ ಮಸೂದೆ-೨೦೧೯ಕ್ಕೆ ಲೋಕಸಭೆ  ಈದಿನ  ಅನುಮೋದನೆ ನೀಡಿತು. ಸರ್ಕಾರದ ಪ್ರಸ್ತಾವವನ್ನು ಗೃಹ ಸಚಿವ ಅಮಿತ್ ಶಾ ಅವರು ಪ್ರಬಲವಾಗಿ ಸಮರ್ಥಿಸಿದ ಬಳಿಕ ಕೆಳಮನೆಯು ಮಸೂದೆಗೆ ಒಪ್ಪಿಗೆ ನೀಡಿತು.  ಸರ್ಕಾರದ ಹದ್ದುಗಣ್ಣಿನ ಅಡಿಯಲ್ಲಿ ಇದ್ದ ಇಂಡಿಯನ್ ಮುಜಾಹಿದೀನ್ ಸಂಘಟನೆಯು ಯಾಸೀನ್ ಭಟ್ಕಳನಂತಹ ಭಯೋತ್ಪಾದಕರನ್ನುಭಯೋತ್ಪಾದಕಎಂಬುದಾಗಿ ಘೋಷಿಸುವ ಕಾನೂನು ಮೊದಲೇ ಇದ್ದಿದ್ದರೆ ಎಂದೋ ಪತ್ತೆ ಹಚ್ಚಿ ಬಂಧಿಸಬಹುದಾಗಿತ್ತು ಎಂದು ಅಮಿತ್ ಶಾ ಪ್ರತಿಪಾದಿಸಿದರು. ಅಕ್ರಮ ಚಟುವಟಿಕೆಗಳ (ನಿಗ್ರಹ) ತಿದ್ದುಪಡಿ ಮಸೂದೆ, ೨೦೧೯ನ್ನು  ಬಲವಾಗಿ ಬೆಂಬಲಿಸಿದ ಸಚಿವರು ಭಯೋತ್ಪಾದನಾ ನಿಗ್ರಹ ಕಾಯ್ದೆಗಳ ವಿಧಿಗಳ ದುರುಪಯೋಗವಾಗುವ ಸಾಧ್ಯತೆ ಇದೆ ಎಂಬುದಾಗಿ ವಿರೋಧ ಪಕ್ಷಗಳ ಸದಸ್ಯರು ಮಾಡಿದ ವಾದಗಳನ್ನು ಪ್ರಶ್ನಿಸಿದರು. ’ಅಪರಾಧ ದಂಡ ಸಂಹಿತೆಯನ್ನು ಕೂಡಾ ದುರುಪಯೋಗ ಮಾಡಲಾಗಿದೆ... ಹಾಗೆಂದು ಅದನ್ನೂ ರದ್ದು ಪಡಿಸಬೇಕೆ?’ ಎಂದು ಶಾ ಪ್ರಶ್ನಿಸಿದರು. ಭಯೋತ್ಪಾದನೆಯ ಆರೋಪದಲ್ಲಿ ಶಿಕ್ಷೆಗೆ ಒಳಗಾದ ಹಲವರನ್ನು ಕೂಡಾ ಬಿಡುಗಡೆ ಮಾಡಲಾಗಿದೆಎಂಬುದಾಗಿ ವಿರೋಧಿ ಸದಸ್ಯರು ಮುಂದಿಟ್ಟ ವಾದಕ್ಕೂ ಶಾ ಅವರು ಇದೇ ಪ್ರತಿವಾದವನ್ನು ಮುಂದಿಟ್ಟರು. ’ಅಪರಾಧ ದಂಡ ಸಂಹಿತೆಯ ಸೆಕ್ಷನ್ ೩೦೨ರ ಅಡಿಯಲ್ಲಿ ಆರೋಪ ಹೊರಿಸಲ್ಪಟ್ಟವರೂ ಖುಲಾಸೆಯಾಗುತ್ತಾರೆ.. ಅಪರಾಧ ದಂಡ ಸಂಹಿತೆಯಿಂದ ಸೆಕ್ಷನ್ ೩೦೨ನ್ನು ಕಿತ್ತು ಹಾಕಬೇಕೇ? ಎಂದು ಅವರು ಪ್ರಶ್ನಿಸಿದರು. ’ವಾಸ್ತವಾಂಶ ಏನೆಂದರೆ ಭಯೋತ್ಪಾದನೆ ವಿರುದ್ಧ ಹೋರಾಡುತ್ತಿರುವ ಭದ್ರತಾ ಸಂಸ್ಥೆಗಳ ಸಲುವಾಗಿ ಅವರಿಗೆ ಅನುಕೂಲವಾಗುವಂತೆ ಕಾನೂನಿಗೆ ಹಲ್ಲು ಒದಗಿಸಬೇಕಾದ ಅಗತ್ಯವಿದೆ, ಅವರಿಗೆ ಬೇಕಾದ್ದು ಕಚ್ಚಲು ಆಗದಂತಹ ಹಲ್ಲು ಅಲ್ಲಎಂದು ಶಾ ಹೇಳಿದರು. ಭಾರತದಿಂದ ಭಯೋತ್ಪಾದನೆಯನ್ನು ನಿರ್ಮೂಲನಗೊಳಸುವ ಸಲುವಾಗಿ ಮಸೂದೆಯನ್ನು ತರಲಾಗಿದೆ, ಅದನ್ನು ದುರುಪಯೋಗ ಮಾಡಲಾಗುವುದಿಲ್ಲ ಎಂದು ನುಡಿದ ಗೃಹ ಸಚಿವರುನಗರ ನಕ್ಸಲ್ ಮಾವೋವಾದಿಗಳ ಬಗ್ಗೆ ನಾವು ಯಾವುದೇ ಅನುಕಂಪ ಹೊಂದಿರಬೇಕಾದ ಅಗತ್ಯ ಇಲ್ಲ. ನಾವು ಅವರ ವಿರುದ್ಧವೂ ಪ್ರಬಲವಾಗಿ ಕಾರ್‍ಯ ನಿರ್ವಹಿಸುತ್ತೇವೆ. ಮಸೂದೆಯ ಮೂಲಕ ನಾವು ತರುತ್ತಿರುವ ತಿದ್ದುಪಡಿಯು ಭದ್ರತಾ ಸಂಸ್ಥೆಗಳಿಗೆ ತಮ್ಮ ಕೆಲಸ ಮಾಡಲು ನೆರವಾಗುವಂತಹ  ಪ್ರಬಲ ಕಾನೂನನ್ನು ಒದಗಿಸುವುದುಎಂದು ಅಮಿತ್ ಶಾ ಹೇಳಿದರು. ಪ್ರಸ್ತಾಪಿತ ತಿದ್ದುಪಡಿಗಳನ್ನು ಸಮರ್ಥಿಸಿದ ಅಮಿತ್ ಶಾ ಅವರುವ್ಯಕ್ತಿಯನ್ನು ಭಯೋತ್ಪಾದಕ ಎಂಬುದಾಗಿ ಘೋಷಿಸಲು ಅವಕಾಶದ ಅಗತ್ಯ ಇದೆ. ವಿಶ್ವಸಂಸ್ಥೆಯಲ್ಲಿ ಇದಕ್ಕಾಗಿ ಒಂದು ವಿಧಾನ ಇದೆ, ಅಮೆರಿಕದಲ್ಲಿ ಇದಕ್ಕೆ ಅವಕಾಶ, ಪಾಕಿಸ್ತಾನದಲ್ಲಿ ಇದು ಇದೆ, ಚೀನಾದಲ್ಲಿ ಇದೆ, ಇಸ್ರೇಲ್ ಇಂತಹ ಅವಕಾಶ ಹೊಂದಿದೆ, ಐರೋಪ್ಯ ಒಕ್ಕೂಟದಲ್ಲಿ ಅವಕಾಶ ಇದೆ, ಎಲ್ಲರೂ ಇಂತಹ ಅವಕಾಶ ಹೊಂದಿದ್ದಾರೆಎಂದು ನುಡಿದರು. ಮಸೂದೆಯನ್ನು ಮಂಡಿಸಿದ ಗೃಹ ಸಚಿವರುನೀವು ನಮ್ಮನ್ನು ಪ್ರಶ್ನಿಸುವಾಗ, ಕಾನೂನನ್ನು ಮತ್ತು ತಿದ್ದುಪಡಿಗಳನ್ನು ತಂದವರು ಮತ್ತು ಬಿಗಿಗೊಳಿಸಿದವರು ಯಾರು ಎಂದು ನೀವು ನೋಡುವುದಿಲ್ಲ. ಇದನ್ನು ನೀವು (ಯುಪಿಎ) ಅಧಿಕಾರದಲ್ಲಿ ಇದ್ದಾಗ ತರಲಾಯಿತು. ಆವಾಗ ನೀವು ಮಾಡಿದ್ದು ಸರಿಯಾಗಿದ್ದರೆ, ಈಗ ನಾನು ಏನು ಮಾಡುತ್ತಿದ್ದೇನೋ ಅದು ಕೂಡಾ ಸರಿಎಂದು ಹೇಳಿದರು. ಆರ್ ಟಿಐ ತಿದ್ದುಪಡಿ ಮಸೂದೆ, ತ್ರಿವಳಿ ತಲಾಖ್ ಮಸೂದೆ, ಅಕ್ರಮ ಚಟುವಟಿಕೆಗಳ (ನಿಗ್ರಹ) ಕಾಯ್ದೆ ಮಸೂದೆಗಳನ್ನು ಜಂಟಿ ಆಯ್ಕೆ ಸಮಿತಿಗೆ ಕಳುಹಿಸಲು ರಾಜ್ಯಸಭೆಯಲ್ಲಿ ಒತ್ತಾಯಿಸುವ ನಿಧಾರವನ್ನು ವಿರೋಧ ಪಕ್ಷ ಕೈಗೊಂಡಿತು..
2019: ವಾಷಿಂಗ್ಟನ್: ’ಪಾಕಿಸ್ತಾನದ ಸರ್ಕಾರಗಳು ನಿರಂತರವಾಗಿ ಅಮೆರಿಕಕ್ಕೆ ಸತ್ಯ ಹೇಳಲಿಲ್ಲ... ಪಾಕಿಸ್ತಾನದ ನೆಲದಲ್ಲಿ ೪೦ ವಿವಿಧ ಭಯೋತ್ಪಾದಕ ಗುಂಪುಗಳು ಕಾರ್‍ಯಾಚರಿಸುತ್ತಿವೆ. ದೇಶದಲ್ಲಿ ಈಗಲೂ ತರಬೇತಿ ಪಡೆದ ಸುಮಾರು ೩೦,೦೦೦ದಿಂದ ೪೦,೦೦೦ ಉಗ್ರಗಾಮಿಗಳು ಇದ್ದು ಅವರು ಆಫ್ಘಾನಿಸ್ಥಾನ ಅಥವಾ ಕಾಶ್ಮೀರದಲ್ಲಿ ಹೋರಾಡುತ್ತಿದ್ದಾರೆ.. ಜೈಶ್ --ಮೊಹಮ್ಮದ್ ಭಾರತದಲ್ಲಿ ಕಾರ್‍ಯಾಚರಿಸುತ್ತಿತ್ತು...’ -ಇವುಗಳು, ಸುದ್ದಿ ಸಂಸ್ಥೆಗಳು ಮಾಡಿರುವ ವರದಿಗಳ ಪ್ರಕಾರ, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ಅಮೆರಿಕ ಭೇಟಿಯ ಕಾಲದಲ್ಲಿ ನಡೆದ ವಿವಿಧ ಸಮಾರಂಭಗಳಲ್ಲಿ ಈದಿನ  ಬಹಿರಂಗ ಪಡಿಸಿದ ಸತ್ಯಗಳು.  ಸಮಾರಂಭ ಒಂದರಲ್ಲಿ ಮಾತನಾಡಿದ ಪಾಕಿಸ್ತಾನದ ಪ್ರಧಾನಿಪಾಕಿಸ್ತಾನವು ನಿರ್ದಿಷ್ಟವಾಗಿ ಕಳೆದ ೧೫ ವರ್ಷಗಳಿಂದ ನಿರಂತರವಾಗಿ ಅಮೆರಿಕಕ್ಕೆ ಸತ್ಯವನ್ನು ಹೇಳಲಿಲ್ಲ. ನಮ್ಮ ದೇಶದಲ್ಲಿ ಈಗಲೂ ೪೦ ವಿವಿಧ ಉಗ್ರಗಾಮಿ ಗುಂಪುಗಳು ಕಾರ್‍ಯಾಚರಿಸುತ್ತಿವೆಎಂದು ಹೇಳಿದರು. ’ಭಯೋತ್ಪಾದನೆ ವಿರುದ್ಧದ ಅಮೆರಿಕದ ಸಮರದ ವಿರುದ್ಧ ನಾವು ಹೋರಾಡುತ್ತಿದ್ದೆವು. /೧೧ರ ಭಯೋತ್ಪಾದಕ ದಾಳಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧ ಇರಲಿಲ್ಲ. ಅಲ್ ಖೈದಾ ಆಫ್ಘಾನಿಸ್ಥಾನದಲ್ಲಿ ಇತ್ತು. ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರು ಇರಲಿಲ್ಲ. ಆದರೆ ನಾವು ಅಮೆರಿಕದ ಭಯೋತ್ಪಾದನೆ ವಿರೋಧಿ ಸಮರಕ್ಕೆ ಸೇರಿಕೊಂಡೆವು. ದುರದೃಷ್ಟವೇನೆಂದರೆ, ತಪ್ಪುಗಳಾದಾಗ ನಾವು ಅಮೆರಿಕಕ್ಕೆ ನಿರ್ದಿಷ್ಟವಾದ ಸತ್ಯಗಳನ್ನು ಹೇಳಲಿಲ್ಲ. ಇದಕ್ಕಾಗಿ ನಾನು ನಮ್ಮ ಸರ್ಕಾರವನ್ನೇ ದೂರುತ್ತೇನೆಎಂದು ಪಾಕ್ ಪ್ರಧಾನಿ ನುಡಿದರು. ಇಮ್ರಾನ್ ಖಾನ್ ಅವರು ಕಾಂಗ್ರೆಸ್ ಸದಸ್ಯೆ ಶೀಲಾ ಜ್ಯಾಕ್ಸನ್ ಲೀ ಅವರು ಏರ್ಪಡಿಸಿದ್ದ ಕ್ಯಾಪಿಟಲ್ ಹಿಲ್ ಸತ್ಕಾರದ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಲೀ ಅವರು ಕಾಂಗ್ರೆಸ್ಸನಲ್ ಪಾಕಿಸ್ತಾನ ಕ್ಯಾಕಸ್ ಅಧ್ಯಕ್ಷರೂ ಆಗಿದ್ದಾರೆ. ಪಾಕಿಸ್ತಾನದ ಒಳಗೆ ಕಾರ್‍ಯಾಚರಿಸುತ್ತಿರುವ ೪೦ ವಿವಿಧ ಉಗ್ರಗಾಮಿ ಗುಂಪುಗಳಿವೆ. ನಮ್ಮಂತಹ ಜನರು ನಾವು ಬದುಕುತ್ತೇವೆಯೇ ಎಂಬುದಾಗಿ ಚಿಂತಿತರಾದಂದಂತಹ ಕಾಲಘಟ್ಟವನ್ನೂ ಪಾಕಿಸ್ತಾನ ಎದುರಿಸಿದೆ. ಆದ್ದರಿಂದ ಭಯೋತ್ಪಾದನೆ ವಿರೋಧಿ ಸಮರವನ್ನು ಗೆಲ್ಲಲು ನಮ್ಮಿಂದ ಹೆಚ್ಚಿನ ನೆರವು ಬೇಕು ಎಂದು ಅಮೆರಿಕವು ನಿರೀಕ್ಷಿಸುತ್ತಿದ್ದಾಗ ಪಾಕಿಸ್ತಾನವು ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟದಲ್ಲಿ ನಿರತವಾಗಿತ್ತು ಎಂದು ಖಾನ್ ಹೇಳಿದರು. ಯುನೈಟೆಡ್ ಸ್ಟೇಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಪೀಸ್ ಸಂಸ್ಥೆಯಲ್ಲಿ ನಡೆದ ಇನ್ನೊಂದು ಸಮಾರಂಭದಲ್ಲಿ ಮಾತನಾಡಿದ ಪಾಕ್ ಪ್ರಧಾನಿ, ತಮ್ಮ ರಾಷ್ಟ್ರದಲ್ಲಿ ಈಗಲೂ ೩೦,೦೦೦ದಿಂದ ೪೦,೦೦೦ ಉಗ್ರಗಾಮಿಗಳು ಇದ್ದಾರೆ. ತರಬೇತಿ ಪಡೆದಿರುವ ಅವರು ಆಫ್ಘಾನಿಸ್ಥಾನದ ಕೆಲವು ಭಾಗ ಅಥವಾ ಕಾಶ್ಮೀರದಲ್ಲಿ ಹೋರಾಟ ನಿರತರಾಗಿದ್ದಾರೆಎಂದು ನುಡಿದರು. ’ಅದು ಪಾಕಿಸ್ತಾನಿ ರಾಜಕಾರಣದ ಸಂಧಿಕಾಲವಾಗಿತ್ತು. ೨೦೧೪ರಲ್ಲಿ, ಪಾಕಿಸ್ತಾನಿ ತಾಲಿಬಾನ್ ೧೫೦ ಮಂದಿ ಶಾಲಾ ಮಕ್ಕಳನ್ನು ಸೇನಾ ಸರ್ಕಾರಿ ಶಾಲೆಯಲ್ಲಿ ಮಾರಣಹೋಮಗೈದಿತು. ಎಲ್ಲ ರಾಜಕೀಯ ಪಕ್ಷಗಳು ರಾಷ್ಟ್ರೀಯ ಕಾರ್‍ಯ ಯೋಜನೆಗೆ ಸಹಿ ಹಾಕಿದವು. ಬಳಿಕ ನಾವೆಲ್ಲರೂ ಯಾವುದೇ ಉಗ್ರಗಾಮಿ ಗುಂಪಿಗೆ ಪಾಕಿಸ್ತಾನದ  ಒಳಗೆ ಕಾರ್‍ಯಾಚರಿಸಲು  ನಾವು ಬಿಡಬಾರದು ತೀರ್ಮಾನಿಸಿದೆವುಎಂದು ಇಮ್ರಾನ್ ಖಾನ್ ಹೇಳಿದರು. ’ನಾವು ಅಧಿಕಾರಕ್ಕೆ ಬರುವವರೆಗೆ, ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿಯನ್ನು ಹೊಂದಿರಲಿಲ್ಲ. ಏಕೆಂದರೆ ಉಗ್ರಗಾಮಿ ಗುಂಪುಗಳ ಬಗ್ಗೆ ನೀವು ಮಾತನಾಡುವಾಗ ಸುಮಾರು ೩೦,೦೦೦-೪೦,೦೦೦ ಮಂದಿ ತರಬೇತಿ ಪಡೆದ ಸಶಸ್ತ್ರ ಉಗ್ರಗಾಮಿಗಳು ಆಫ್ಘಾನಿಸ್ಥಾನ ಕೆಲವು ಭಾಗ ಅಥವಾ ಕಾಶ್ಮೀರದಲ್ಲಿ ಹೋರಾಡುತ್ತಿದ್ದಾರೆಎಂದು ಪಾಕ್ ಪ್ರಧಾನಿ ಬಹಿರಂಗ ಪಡಿಸಿದರು. ಪಾಕಿಸ್ತಾನ ಮೂಲದ ಜೈಶ್--ಮೊಹಮ್ಮದ್ ಭಾರತದಲ್ಲಿ ಕಾರ್‍ಯಾಚರಿಸುತ್ತಿತ್ತು ಎಂದು ಕೂಡಾ ಅವರು ಒಪ್ಪಿಕೊಂಡರು. ಭಾರತೀಯ ಭದ್ರತಾ ಪಡೆಗಳ ತುಕಡಿಯ ಮೇಲೆ ಕಾರು ಬಾಂಬ್ ಮೂಲಕ ಪುಲ್ವಾಮದಲ್ಲಿ ನಡೆದ ದಾಳಿಗೂ ಮುನ್ನ ಪಾಕಿಸ್ತಾನವು ಎಲ್ಲ ಭಯೋತ್ಪಾದಕ ಗುಂಪುಗಳನ್ನು  ನಿಶ್ಯಸ್ತ್ರೀಕರಣಗೊಳಿಸಲು ನಿರ್ಧರಿಸಿತ್ತು ಮತ್ತು ಎಲ್ಲ ರಾಜಕೀಯ ಶಕ್ತಿಗಳೂ ಅದನ್ನು ಬೆಂಬಲಿಸಿದ್ದವು ಎಂದು ಇಮ್ರಾನ್ ಖಾನ್ ನುಡಿದರು. ೨೦೧೯ರ ಫೆಬ್ರುವರಿ ೧೪ರಂದು ಭಾರತದ ಕೇಂದ್ರಿಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ತುಕಡಿ ಒಂದರ ಮೇಲೆ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿ ೪೦ ಯೋಧರನ್ನು ಬಲಿ ಪಡೆದಿತ್ತು. ಇದರ ಪರಿಣಾಮವಾಗಿ ಉಭಯ ದೇಶಗಳ ಬಾಂಧವ್ಯ ಇನ್ನಷ್ಟು ಉಲ್ಬಣಿಸಿ ಭಾರತದ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಜೈಶ್ ಭಯೋತ್ಪಾದನಾ ತರಬೇತಿ ಶಿಬಿರದ  ಮೇಲೆ ಸೇಡು ತೀರಿಸುವ ದಾಳಿ ನಡೆಸಿತ್ತು.  ಭಾರತದಲ್ಲಿ ಕಾರ್‍ಯಾಚರಿಸುತ್ತಿದ್ದ ಜೈಶ್ --ಮೊಹಮ್ಮದ್ ಸಂಘಟನೆಯು ಪುಲ್ವಾಮ ದಾಳಿಯ ಹೊಣೆ ಹೊತ್ತ ಪರಿಣಾಮವಾಗಿ ಪಾಕಿಸ್ತಾನವು ದಿಢೀರನೆ ಪ್ರಚಾರಕ್ಕೆ ಬಂದಿತು ಎಂದು ಇಮ್ರಾನ್ ಖಾನ್ ನುಡಿದರು. ಘಟನೆಗೆ ಮುನ್ನವೇ, ನಾವು ಪಾಕಿಸ್ತಾನದಲ್ಲಿನ ಎಲ್ಲ ಉಗ್ರಗಾಮಿ ಗುಂಪುಗಳನ್ನು ನಿಶ್ಯಸ್ತ್ರೀಕರಣಗೊಳಿಸಲು ತೀರ್ಮಾನಿಸಿದ್ದೆವು. ಪಾಕಿಸ್ತಾನದ ಹಿತಾಸಕ್ತಿ ದೃಷ್ಟಿಯಿಂದ, ಅದು ನಮ್ಮ ಹಿತಾಸಕ್ತಿ ದೃಷ್ಟಿಯಿಂದ  ಕೈಗೊಳ್ಳಲಾಗಿದ್ದ ನಿರ್ಧಾರ ಎಂದು ನಾನು ಪುನರುಚ್ಚರಿಸುತ್ತೇನೆ. ಏಕೆಂದರೆ ನಮಗೂ ಉಗ್ರಗಾಮಿ ಗುಂಪುಗಳ ಕಾಟ ಸಾಕಾಗಿಹೋಗಿದೆಎಂದು ಇಮ್ರಾನ್ ಖಾನ್ ಹೇಳಿದರು. ಭಾರತ ಮತ್ತು ಪಾಕಿಸ್ತಾನದ ಬಾಂಧವ್ಯ ಸುಧಾರಿಸುವ ಹಾದಿಯಲ್ಲಿ ಸಾಗಿದಾಗಲೆಲ್ಲ, ಅದನ್ನು ತಲೆಕೆಳಗಾಗಿಸುವ ಏನಾದರೂ ಘಟನೆ ಘಟಿಸುತ್ತಿರುವುದು ಹೌದು ಎಂದು ಖಾನ್ ಒಪ್ಪಿಕೊಂಡರು. ಆದರೆ ಶಾಂತಿ ಪ್ರಕ್ರಿಯೆಗೆ ಅಡ್ಡಿಯಾಗುತ್ತಿರುವ ಘಟನೆಗಳ ಹಿಂದಿರುವವರು ಯಾರು ಎಂಬುದಾಗಿ ಅವರು ಹೇಳಲಿಲ್ಲ.
2019: ನವದೆಹಲಿ: ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಸ್ಥಿಕೆ ಅಥವಾ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಸಭೆಯಲ್ಲಿ ಸ್ಪಷ್ಟ ಪಡಿಸಿದರು. ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೆರವನ್ನು ಕೋರಿಲ್ಲ ಎಂಬುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಸಂಸತ್ತಿನಲ್ಲಿ ಸ್ಪಷ್ಟ ಪಡಿಸಿದ ಒಂದು ದಿನದ ಬಳಿಕ ರಕ್ಷಣಾ ಸಚಿವರು ಸದನಕ್ಕೆ ಸ್ಪಷ್ಟನೆ ನೀಡಿದರು. ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರ ಗೈರು ಹಾಜರಿ ಮತ್ತು ನಿರಂತರ ಮೌನವನ್ನು ಪ್ರಶ್ನಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದ ಬಳಿಕ ಲೋಕಸಭೆಯಲ್ಲಿ ಹೇಳಿಕೆ ನೀಡಿದ ರಾಜನಾಥ್ ಸಿಂಗ್ ಅವರುಇತ್ತೀಚೆಗೆ ಜಪಾನಿನಲ್ಲಿ ಟ್ರಂಪ್ ಮತ್ತು ಮೋದಿ ಅವರ ಭೇಟಿ ವೇಳೆಯಲ್ಲಿ ಕಾಶ್ಮೀರದ ಕುರಿತು ಮಾತುಕತೆಯೇ ನಡೆದಿಲ್ಲ. ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಮಧ್ಯಸ್ಥಿಕೆಯ ಪ್ರಶ್ನೆ ಇಲ್ಲಎಂದು ಹೇಳಿದರು. ’ಕಾಶ್ಮೀರ ವಿಷಯವು ಭಾರತಕ್ಕೆ ರಾಷ್ಟ್ರೀಯ ಹೆಮ್ಮೆಯ ವಿಚಾರವಾದ್ದರಿಂದ ಅದರ ಬಗ್ಗೆ ಸಂಧಾನದ ಪ್ರಶ್ನೆ ಇಲ್ಲವೇ ಇಲ್ಲಎಂದೂ  ಸಚಿವರು ನುಡಿದರು. ’ಜೂನ್ ತಿಂಗಳಲ್ಲಿ ಪ್ರಧಾನಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ಅವರ ನಡುವಣ ಭೇಟಿ ಕಾಲದಲ್ಲಿ ಕಾಶ್ಮೀರ ಕುರಿತು ಮಾತುಕತೆಯೇ ನಡೆದಿಲ್ಲ. ಕಾಶ್ಮೀರದ ವಿಷಯವಾಗಿ ಯಾವುದೇ ಸಂಧಾನದ ಪ್ರಶ್ನೆಯೇ ಇಲ್ಲಎಂದು ರಾಜನಾಥ್ ಹೇಳಿದರು. ಟ್ರಂಪ್ ಅವರು  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗಿನ ಭೇಟಿ ಕಾಲದಲ್ಲಿ ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಸ್ಥಿಕೆ ವಹಿಸುವಂತೆ ಮೋದಿಯವರು ತಮ್ಮನ್ನು ಕೋರಿದ್ದರು ಎಂದು ಹೇಳಿದ್ದರು. ಟ್ರಂಪ್ ಹೇಳಿಕೆಯು ಭಾರತದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿತ್ತು. ಪರಿಣಾಮವಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರುಮೋದಿಯವರು ಅಂತಹ ಮನವಿ ಮಾಡಿಲ್ಲಎಂಬುದಾಗಿ ಲೋಕಸಭೆಯಲ್ಲಿ ಸ್ಪಷ್ಟನೆ ನೀಡಬೇಕಾಗಿ ಬಂದಿತ್ತು. ಏನಿದ್ದರೂ, ಕಾಂಗ್ರೆಸ್ ಜೈಶಂಕರ್ ಅವರ ಹೇಳಿಕೆಯನ್ನು ಬದಿಗೆ ತಳ್ಳಿ ಪ್ರಧಾನಿಯವರೇ ಅನುಮಾನ ಬಗೆಹರಿಸಬೇಕು ಎಂದು ಆಗ್ರಹಿಸಿತ್ತು. ಟ್ರಂಪ್ ಹೇಳಿಕೆಯು ಅಮೆರಿಕದಲ್ಲೂ ವ್ಯಾಪಕ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು. ಅಮೆರಿಕದ ಕಾಂಗ್ರೆಸ್ ಸದಸ್ಯ ಬ್ರಾಡ್ ಶೆರ್ಮನ್  ಅವರುಟ್ರಂಪ್ ಹೇಳಿಕೆಯು ಬಾಲಿಶ, ಭ್ರಮನಿರಸನದಾಯಕ ಮತ್ತು ಮುಜುಗರ ಉಂಟು ಮಾಡುವಂತಹುದುಎಂದು ಹೇಳಿದರು.  ಈದಿನ  ಪ್ರಕಟಿಸಿದ ಟ್ವೀಟಿನಲ್ಲಿ ಶೆರ್ಮನ್ ಅವರು ಪ್ರಧಾನಿ ಮೋದಿ ಅವರು ಕಾಶ್ಮೀರ ವಿಷಯದಲ್ಲಿ ಮೂರನೇ ಪಕ್ಷದ ಮಧ್ಯಸ್ಥಿಕೆಯನ್ನು ಎಂದಿಗೂ ಸಲಹೆ ಮಾಡಲಾರರು ಎಂದು ಹೇಳಿದರು.  ’ದಕ್ಷಿಣ ಏಷಾದಲ್ಲಿನ ವಿದೇಶಾಂಗ ನೀತಿಯನ್ನು ಅರಿತಿರುವ ಪ್ರತಿಯೊಬ್ಬರಿಗೂ ಭಾರತವು ಕಾಶ್ಮೀರದ ವಿಚಾರದಲ್ಲಿ ತೃತೀಯ ಪಕ್ಷದ ಯಾವುದೇ ಮಧ್ಯಸ್ಥಿಕೆಯನ್ನೂ ವಿರೋಧಿಸುತ್ತಲೇ ಬಂದಿದೆ ಎಂಬುದು ಗೊತ್ತಿದೆ..  ಪ್ರಧಾನಿ ಮೋದಿಯವರು ಎಂದೂ ಇಂತಹ ಸಲಹೆ ಮಾಡಲಾರರು ಎಂಬುದು ಕೂಡಾ ಪ್ರತಿಯೊಬ್ಬರಿಗೂ ಗೊತ್ತಿದೆ. ಟ್ರಂಪ್ ಅವರ ಹೇಳಿಕೆ ಬಾಲಿಶ, ಭ್ರಮನಿರಸನದಾಯಕ ಮತ್ತು ಮುಜುಗರ ಉಂಟು ಮಾಡುವಂತಹುದುಎಂದು ಶೆರ್ಮನ್ ಟ್ವೀಟ್ ಮಾಡಿದರು..

2018: ಜೈಪುರ: ರಾಜಸ್ಥಾನದ ಜಾನುವಾರು ಕೃಷಿಕರಿಗೆ ಈಗ ದನದ ಹಾಲಿನ ಜೊತೆಗೆ ಗೋಮೂತ್ರದಿಂದಲೂ ಅಧಿಕ ಆದಾಯ ಬರುತ್ತಿದೆ ಎಂಬುದಾಗಿ ವರದಿಗಳು ತಿಳಿಸಿದವು. ದನದ ಹಾಲನ್ನು ಮಾರುವ ಹೈನು ಕೃಷಿಕರಿಗೆ ಲೀಟರಿಗೆ ೨೨ ರಿಂದ ೨೫ ರೂಪಾಯಿ ಸಿಗುತ್ತದೆ; ಆದರೆ ಗೋಮೂತ್ರವನ್ನು ಸಗಟು ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೆ ಲೀಟರಿಗೆ ೩೦ ರೂಪಾಯಿ ಸಿಗುತ್ತದೆ.  ಸಾವಯವ ಕೃಷಿಗೆ ಈಗ ಅತ್ಯಧಿಕ ಒತ್ತು ದೊರಕುತ್ತಿರುವುದು ಈ ಬದಲಾವಣೆಗೆ ಕಾರಣ ಎಂದು ವರದಿಗಳು ಹೇಳಿದವು.  ರೈತರು ತಮ್ಮ ಕೃಷಿಗೆ ಈಗ ರಾಸಾಯನಿಕ ಗೊಬ್ಬರಕ್ಕಿಂತ ಗೋಮೂತ್ರ ಮತ್ತು ಹಟ್ಟಿ ಗೊಬ್ಬರವನ್ನೇ ಹೆಚ್ಚಾಗಿ ಬಳಸುತ್ತಿದ್ದಾರೆ. ಹಾಗಾಗಿ ಗೋ ಮೂತ್ರ ಮಾರುವ ಹೈನು ಕೃಷಿಕರ ಆದಾಯ ರಾಜಸ್ಥಾನದಲ್ಲಿ ಈಗ ಶೇ. ೩೦ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿತು. ಹೈನು ಕೃಷಿಕರಿಗೆ ಉಚ್ಚ ತಳಿಯ ಗೋವುಗಳಿಂದ ಅಧಿಕ ಲಾಭ ಬರುತ್ತಿದೆ.  ಇವುಗಳಲ್ಲಿ ಗಿರ್ ಮತ್ತು ಥರ್‌ಪಾರ್‌ಕರ್ ತಳಿಗಳು ಮುಖ್ಯವಾಗಿವೆ. ಈ ತಳಿಗಳ ಗೋಮೂತ್ರಕ್ಕೆ ಲೀಟರಿಗೆ ೧೫ರಿಂದ ೩೦ ರೂಪಾಯಿ ಬೆಲೆ ಇದೆ.  ಗೋ ಮೂತ್ರಕ್ಕೆ ಬೇಡಿಕೆ ಹೆಚ್ಚಿರುವುದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ ಗೋ ಮೂತ್ರವನ್ನು ವೈದ್ಯಕೀಯ ಉದ್ದೇಶಗಳಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಜೊತೆಗೆ ಧಾರ್ಮಿಕ ಉದ್ದೇಶಗಳಿಗೂ, ಮುಖ್ಯವಾಗಿ ಯಾಗ, ಯಜ್ಞ, ಹೋಮ, ಹವನ, ಪಂಚಗವ್ಯಕ್ಕೆ ಗೋಮೂತ್ರ ಬಳಕೆಯಾಗುತ್ತದೆ. ಉಪವೀತ ಧಾರಣೆಯ ವಿಧಿಯಲ್ಲಿ ಗೋಮೂತ್ರಕ್ಕೆ ವಿಶೇಷ ಆದ್ಯತೆ ಇದೆ.  ಆದರೆ ಗೋ ಮೂತ್ರ ಸಂಗ್ರಹದ ಕೆಲಸ ಹೈನು ಕೃಷಿಕರಿಗೆ ಸುಲಭದ ಕೆಲಸವೇನಲ್ಲ. ಗೋಮೂತ್ರ ಸಂಗ್ರಹಿಸಲು ಅವರು  ರಾತ್ರಿ ಪೂರ್ತಿ ಜಾಗರಣೆ ಮಾಡಬೇಕಾಗುತ್ತದೆ. ಒಂದಿಷ್ಟೂ ಗೋಮೂತ್ರ ನಷ್ಟವಾಗದಂತೆ ಎಚ್ಚರವಹಿಸಬೇಕಾಗುತ್ತದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಕೂಡಾ ಗೋ ಮೂತ್ರಕ್ಕೆ ಒಳ್ಳೆಯ ಬೇಡಿಕೆ ಮತ್ತು ಬೆಲೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಗೋಮೂತ್ರಕ್ಕೆ  ಲೀಟರಿಗೆ ೩೦ರಿಂದ ೫೦ ರೂ. ಬೆಲೆ ಇದೆ.  ಕೃಷಿಕರು ರಾಸಾಯನಿಕ ಗೊಬ್ಬರಕ್ಕಿಂತ ಗೋ ಮೂತ್ರ, ಸೆಗಣಿಯನ್ನು ಒಳಗೊಂಡ ಹಟ್ಟಿಗೊಬ್ಬರಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಹಾಗಾಗಿ ಗೋಮೂತ್ರದಿಂದ ಹೈನು ಕೃಷಿಕರಿಗೆ ಉತ್ತಮ ಹೆಚ್ಚುವರಿ ಆದಾಯಕ ದೊರಕುವಂತಾಗಿದೆ ಎಂದು ಜೈಪುರದ ಹಾಲು ವ್ಯಾಪಾರಿ ಓಂ ಪ್ರಕಾಶ್ ಮೀನ ಹೇಳುತ್ತಾರೆ.  ಉದಯಪುರದ ಮಹಾರಾಣಾ ಪ್ರತಾಪ್ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯವು ಅತ್ಯಧಿಕ ಪ್ರಮಾಣದ ಗೋ ಮೂತ್ರ ಖರೀದಿದಾರ ಸಂಸ್ಥೆಯಾಗಿದ್ದು, ಈ ವಿಶ್ವವಿದ್ಯಾಲಯವು ಸಾವಯವ ಕೃಷಿಗಾಗಿ ಪ್ರತೀ ತಿಂಗಳೂ ೩೦೦ರಿಂದ ೫೦೦ ಲೀಟರ್ ಗೋ ಮೂತ್ರವನ್ನು ಹೈನು ಕೃಷಿಕರಿಂದ ಖರೀದಿಸುತ್ತದೆ. ಇದಕ್ಕಾಗಿ ವಿಶ್ವ ವಿದ್ಯಾಲಯಕ್ಕೆ ೧೫ ರಿಂದ ೨೦ ಸಾವಿರ ರೂ. ಖರ್ಚು ಬರುತ್ತದೆ.  ಸಾವಯವ ರೈತರಿಂದ ಗೋಮೂತ್ರಕ್ಕೆ ಅತ್ಯಧಿಕ ಬೇಡಿಕೆ ಬರುತ್ತಿದ್ದು ಅವರು ಕೀಟನಾಶಕಗಳಿಗೆ ಪರ್‍ಯಾಯವಾಗಿ ಗೋಮೂತ್ರವನ್ನು ಕೀಟದಾಳಿ ವಿರುದ್ಧ ಬಳಸುತ್ತಿದ್ದಾರೆ.  ಗುಜರಾತಿನ ಜುನಾಗಢ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಲೂ ಗೋಮೂತ್ರವನ್ನು ಬಳಸಿ ಕ್ಯಾನ್ಸರ್ ಕೋಶಗಳನ್ನು ಕೊಲ್ಲುವಲ್ಲಿ ತಾವು ಸಫಲರಾಗಿರುವುದಾಗಿ ಪ್ರತಿಪಾದಿಸಿದ ಬೆನ್ನಲ್ಲೇ ರಾಜಸ್ಥಾನದ ಗೋಮೂತ್ರ ಬೇಡಿಕೆ ಹೆಚ್ಚಳದ ವರದಿ ಬಂದಿದೆ. ಏನಿದ್ದರೂ ವೈದ್ಯರು ಜುನಾಗಢ ಕೃಷಿ ವಿವಿ ವಿಜ್ಞಾನಿಗಳ ಪ್ರತಿಪಾದನೆಯನ್ನು ನಿರಾಕರಿಸಿದ್ದಾರೆ.  ಆದರೆ ಹಲವಾರು ರಾಜ್ಯಗಳಲ್ಲಿ ಸರ್ಕಾರಗಳು ಗೋಮೂತ್ರವನ್ನು ಔಷಧವಾಗಿ ಬಳಸಲು ಸಾಧ್ಯವಿದೆ ಎಂದು ಪ್ರತಿಪಾದಿಸಿವೆ.  ಈ ವರ್ಷ ಫೆಬ್ರುವರಿಯಲ್ಲಿ ಉತ್ತರ ಪ್ರದೇಶ ಸರ್ಕಾರವು ಔಷಧಗಳಲ್ಲಿ ಗೋಮೂತ್ರ ಬಳಕೆಗೆ ಹೆಚ್ಚಿನ ಒತ್ತು ಕೊಡಲು ನಿರ್ಧರಿಸಿತ್ತು.  ಉತ್ತರ ಪ್ರದೇಶ ಆಯುರ್ವೇದ ಇಲಾಖೆಯ ನಿರ್ದೇಶಕ ಆರ್.ಆರ್. ಚೌಧರಿ ಅವರು ’ಆಯುರ್ವೇದ ಇಲಾಖೆಯು ಗೋಮೂತ್ರವನ್ನು ಬಳಸಿ ಎಂಟು ಔಷಧಗಳನ್ನು ಸಿದ್ಧ ಪಡಿಸಿದೆ. ಈ ಔಷಧಗಳು ಯಕೃತ್ತು (ಲಿವರ್) ಸಮಸ್ಯೆಗಳು, ಗಂಟು ನೋವು ಮತ್ತು ರೋಗ ಪ್ರತಿರೋಧ ಶಕ್ತಿಯ ಕೊರತೆ ನಿವಾರಣೆಗೆ ಉಪಯುಕ್ತ ಎಂಬುದು ಕಂಡು ಬಂದಿದೆ ಎಂದು ಹೇಳಿದ್ದರು.

2018: ನವದೆಹಲಿ: ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಆಡಳಿತದಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯ ವ್ಯಕ್ತಿಗಳು ಮತ್ತು ಕಾರ್ಪೋರೇಟ್ ಗಳು ಇಟ್ಟಿರುವ ಠೇವಣಿಗಳು ಹಣ ಶೇ ೮೦ರಷ್ಟು ಕುಸಿದಿವೆ ಎಂದು ಸರ್ಕಾರ ಪ್ರಕಟಿಸಿತು.  ಭಾರತೀಯರು ಹೊಂದಿರುವ ಠೇವಣಿಗಳ ಪರಿಶೀಲನೆಗೆ ಸಮರ್ಪಕ ಕ್ರಮವೆಂದರೆ ಬ್ಯಾಂಕ್ ಆಫ್ ಇಂಟರ್ ನ್ಯಾಷನಲ್ ಸೆಟ್ಲ್ ಮೆಂಟ್ ಸಂಗ್ರಹಿಸಿದ ಲೊಕೇಶನಲ್ ಬ್ಯಾಂಕಿಂಗ್ ಅಂಕಿಅಂಶಗಳಾಗಿವೆ ಎಂದು ಸರ್ಕಾರ ತಿಳಿಸಿದೆ. ಈ ಅಂಕಿಅಂಶಗಳ ಪ್ರಕಾರ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಠೇವಣಿಗಳು ೨೦೧೭ರಲ್ಲಿ ೫೨.೪೦ ಕೋಟಿ (೫೩೪ ಮಿಲಿಯನ್) ಡಾಲರುಗಳಿಗೆ ಇಳಿದಿದೆ ಎಂದು ಸರ್ಕಾರ ಹೇಳಿತು. ಅಂಕಿಅಂಶಗಳ ಪ್ರಕಾರ ೨೦೧೬ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ೮೦.೦೦ ಕೋಟಿ (೮೦೦ ಮಿಲಿಯನ್) ಡಾಲರ್ ಠೇವಣಿ ಇಟ್ಟಿದ್ದರು. ೨೦೧೩ರಲ್ಲಿ ಈ ಮೊತ್ತ ೨೬೦ ಕೋಟಿ (೨.೬ ಬಿಲಿಯನ್) ಡಾಲರುಗಳಾಗಿದ್ದವು.  ಕಾಳಧನವನ್ನು ದೇಶಕ್ಕೆ ವಾಪಸ್ ತರುವುದು ಎನ್ ಡಿಎ ಯ ಅತ್ಯಂತ ಪ್ರಮುಖ ಚುನಾವಣಾ ಭರವಸೆಯಾಗಿತ್ತು. ಸ್ವಿಸ್ ಬ್ಯಾಂಕಿನಿಂದ ಲಭಿಸಿರುವ ಈ ಅಂಕಿ ಅಂಶಗಳು ೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿಯೇ ಅದರ ಚುನಾವಣಾ ಭವಿಷ್ಯವನ್ನು ಉಜ್ಜಲಗೊಳಿಸುವ ಸಾಧ್ಯತೆಗಳಿವೆ.  ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಠೇವಣಿಗಳು ೨೦೧೭ರಲ್ಲಿ ಶೇಕಡಾ ೩೪.೫ರಷ್ಟು ಕುಸಿದಿವೆ ಎಂದು ಸರ್ಕಾರ ಪ್ರತಿಪಾದಿಸಿದೆ. ಇದು ಭಾರತೀಯರು ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರುವ ಠೇವಣಿಯ ಪ್ರಮಾಣ ಶೇಕಡಾ ೫೦ ರಷ್ಟು ಹೆಚ್ಚಿದೆ ಎಂಬ ಇತ್ತೀಚಿನ ವರದಿಗೆ ವ್ಯತಿರಿಕ್ತವಾಗಿದೆ. ಈ ಹಿಂದಿನ ವರದಿಗಳ ಬೆನ್ನಲ್ಲೇ ಸರ್ಕಾರವು ಕಾಳಧನ ನಿಯಂತ್ರಿಸಲು ಕೈಗೊಂಡ ಅಭಿಯಾನದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.  ಸ್ವಿಸ್ ಅಧಿಕಾರಿಗಳಿಂದ ಬಂದ ಪತ್ರವೊಂದನ್ನು ಉಲ್ಲೇಖಿಸಿದ ಮಧ್ಯಂತರ ಹಣಕಾಸು ಸಚಿವ ಪೀಯೂಶ್ ಗೋಯಲ್ ಅವರು ಭಾರತೀಯರ ಸ್ವಿಸ್ ಠೇವಣಿ ಶೇಕಡಾ ೫೦ರಷ್ಟು ಏರಿದೆ ಎಂಬುದು ತಪ್ಪಾಗಿ ಅರ್ಥೈಸಿದ ವರದಿಯಾಗಿದ್ದು ಇದರಲ್ಲಿ ಭಾರತದಲ್ಲಿರುವ ಸ್ವಿಸ್ ಬ್ಯಾಂಕ್ ಶಾಖೆಗಳ ಠೇವಣಿಯೇತರ ಹಣ, ಇಂಟರ್ ಬ್ಯಾಂಕ್ ವಹಿವಾಟು ಮತ್ತು ವಿಶ್ವಾಸಾರ್ಹ ಬಾಧ್ಯತೆಗಳೂ ಸೇರಿವೆ ಎಂದು ಹೇಳಿದರು. ಸ್ವಿಜರ್ಲೆಂಡಿನ ಭಾರತೀಯ ನಿವಾಸಿಗಳ ಠೇವಣಿಗಳ ಸರಿಯಾದ ಮಾಹಿತಿಯನ್ನು ಬ್ಯಾಂಕ್ ಆಫ್ ಇಂಟರ್ ನ್ಯಾಷನಲ್ ಸೆಟ್ಲ್‌ಮೆಂಟ್ (ಬಿಐಎಸ್) ಪ್ರಕಟಿಸುವ ಲೊಕೇಶನಲ್ ಬ್ಯಾಂಕಿಂಗ್ ಸ್ಟಾಟಿಸ್ಟಿಕ್ಸ್ (ಎಲ್ ಬಿ ಎಸ್) ನಿಂದ ಪಡೆಯಬಹುದು ಎಂದೂ ಪತ್ರ ತಿಳಿಸಿತು. ಬಿಐಎಸ್ ಒದಗಿಸಿರುವ ಮಾಹಿತಿಯು ಬ್ಯಾಂಕೇತರ ಸಾಲಗಳೂ ಮತ್ತು ಠೇವಣಿಗಳು ೨೦೧೬ ಕ್ಕೆ ಹೋಲಿಸಿದರೆ ೨೦೧೭ರಲ್ಲಿ ಶೇಕಡಾ ೩೪.೫ರಷ್ಟು ಕುಸಿದಿವೆ ಎಂದು ತಿಳಿಸಿದೆ. ೨೦೧೬ರಲ್ಲಿ ೮೦ ಕೋಟಿ ಇಲ್ಲವೇ ೮೦೦ ಮಿಲಿಯನ್ ಡಾಲರ್ ಇದ್ದುದು ೨೦೧೭ರಲ್ಲಿ ೫೨.೪೦ ಕೋಟಿ ಇಲ್ಲವೇ ೫೨೪ ಮಿಲಿಯನ್  ಡಾಲರ್ ಗಳಿಗೆ ಇಳಿದಿದೆ ಎಂದು ಪತ್ರ ತಿಳಿಸಿತು. ಸ್ವಿಸ್ ಬ್ಯಾಂಕೇತರ ಸಾಲಗಳು ಮತ್ತು ಠೇವಣಿಗಳು ಕೂಡಾ  ೨೦೧೩ ಮತ್ತು ೨೦೧೭ರ ಮಧ್ಯೆ ಎನ್ ಡಿಎ ಆಡಳಿತಾವಧಿಯಲ್ಲಿ ಗಮನಾರ್ಹವಾಗಿ ಶೇಕಡಾ ೮೦.೨ರಷ್ಟು ಇಳಿದಿದೆ ಎಂದೂ ಗೋಯಲ್ ಹೇಳಿದರು.  ಸ್ವಿಸ್ ನ್ಯಾಷನಲ್ ಬ್ಯಾಂಕ್ ಅಂಕಿಅಂಶವನ್ನು ಆಧರಿಸಿ ೨೦೧೭ರಲ್ಲಿ ಭಾರತೀಯರ ಸ್ವಿಸ್ ಬ್ಯಾಂಕ್ ಖಾತೆಗಳು ಶೇಕಡಾ ೫೦ರಷ್ಟು ಏರಿವೆ ಎಂಬ ಮಾಧ್ಯಮ ವರದಿಗಳಿಂದ ಎನ್ ಡಿಎ ರಕ್ಷಣಾತ್ಮಕ ನಿಲುವು ತಳೆಯಬೇಕಾಗಿ ಬಂದಿತ್ತು.  ಸರ್ಕಾರವು ಕೈಗೊಂಡ ಕಾಳಧನ ವಿರೋಧಿ ಕ್ರಮಗಳ ಬಗ್ಗೆ ಪ್ರಶ್ನೆಯೆದ್ದು, ವಿಪಕ್ಷಗಳು ಈ ಕ್ರಮಗಳ ಸಾರ್ಥಕತೆ ಬಗ್ಗೆ ಪ್ರಶ್ನಿಸಲಾರಂಭಿಸಿದ್ದವು.  ಸ್ವಿಸ್ ರಾಯಭಾರಿ ಆಂಡ್ರೆಯಾಸ್ ಬೌಮ್ ಅವರು ಹಣಕಾಸು ಸಚಿವ ಪೀಯೂಶ್ ಗೋಯಲ್ ಅವರಿಗೆ ಬರೆದಿರುವ ಪತ್ರದಲ್ಲಿ ಸ್ವಿಜರ್ಲೆಂಡಿನಲ್ಲಿ ಭಾರತೀರಯ ಇಟ್ಟಿರುವ ಎಲ್ಲ ಆಸ್ತಿಗಳೂ ಅಘೋಷಿತವಲ್ಲ ಎಂದೂ ಸ್ಪಷ್ಟ ಪಡಿಸಿದ್ದಾರೆ.  ಸ್ವಿಸ್ ನ್ಯಾಷನಲ್ ಬ್ಯಾಂಕ್ ಒದಗಿಸಿದ ಮಾಹಿತಿಯಲ್ಲಿ ಠೇವಣಿಯೇತರ ಬಾಧ್ಯತೆಗಳು, ಭಾರತದಲ್ಲಿನ ಸ್ವಿಸ್ ಬ್ಯಾಂಕ್ ಶಾಖೆಗಳ ವಹಿವಾಟು ಮತ್ತು ಅಂತರ್ ಬ್ಯಾಂಕ್ ವರ್ಗಾವಣೆ ಮತ್ತು ವಿಶ್ವಾಸಾರ್ಹ ಬಾಧ್ಯತೆಗಳೂ ಸೇರಿವೆ. ಆದ್ದರಿಂದ ಅದು ಲೆಕ್ಕಹಾಕಲು ಸೂಕ್ತವಾದ ಮಾನದಂಡವಾಗದು ಎಂದೂ ಪತ್ರ ಹೇಳಿತ್ತು.  ಕಳೆದ ಡಿಸೆಂಬರಿನಲ್ಲಿ ಮಾಹಿತಿ ವಿನಿಮಯ ಒಪ್ಪಂದಕ್ಕೆ ಸಹಿ ಹಾಕಿದ್ದಕ್ಕೆ ಅನುಗುಣವಾಗಿ ಭಾರತ ಮತ್ತು ಸಿಜರ್ಲೆಂಡ್ ೨೦೧೮ರ ಜನವರಿ ೧ರಿಂದ ಮಾಹಿತಿ ಸಂಗ್ರಹ ಆರಂಭಿಸಿದ್ದು, ೨೦೧೯ರ ಸೆಪ್ಟೆಂಬರಿನಿಂದ ಮಾಹಿತಿ ವಿನಿಮಯ ಆರಂಭಿಸಲಿವೆ.

2018: ನವದೆಹಲಿ: ಸಂಸತ್ತಿನಲ್ಲಿ ಜುಲೈ ೨೦ರಂದು ಅವಿಶ್ವಾಸ ನಿರ್ಣಯದ ಚರ್ಚೆ ಕಾಲದಲ್ಲಿ ೨೦೦೮ರ ಭಾರತ-ಫ್ರೆಂಚ್ ಒಪ್ಪಂದ ರಹಸ್ಯ ವಿಧಿಗೆ ಸಂಬಂಧಿಸಿದಂತೆ ’ಸುಳ್ಳು ಹೇಳಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ವಿರುದ್ಧ ಕಾಂಗ್ರೆಸ್ ಮಂಗಳವಾರ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಿತು. ಲೋಕಸಭಾಧ್ಯಕ್ಷರಿಗೆ ಸಲ್ಲಿಸಿದ ತನ್ನ ಮನವಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ’ಸದನದಲ್ಲಿ ನಿರ್ಮಲಾ ಸೀತಾರಾಮನ್ ಅವರು ನೀಡಿದ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಹೇಳಿ ಸಚಿವರು ಕೇವಲ ಸದನದ ಸದಸ್ಯರು ಮಾತ್ರವೇ ಅಲ್ಲ ಇಡೀ ರಾಷ್ಟ್ರವನ್ನೇ ದಿಕ್ಕು ತಪ್ಪಿಸಿದ್ದಾರೆ ಎಂದು ಆಪಾದಿಸಿದರು.  ಪ್ರಧಾನಿ ಮೋದಿಯವರ ಬಗ್ಗೆ ಪ್ರಸ್ತಾಪಿಸಿದ ಅವರು ’ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಮಾಡಿರುವ ಪಾರದರ್ಶಕತೆಯ ಪ್ರತಿಪಾದನೆ ವಾಸ್ತವಿಕವಾಗಿ ತಪ್ಪು ಹಾಗೂ ಅಸತ್ಯವಾಗಿದ್ದು, ಸದನವನ್ನು ದಾರಿತಪ್ಪಿಸುವ ಉದ್ದೇಶದಿಂದ ನೀಡಿದ ಹೇಳಿಕೆ ಎಂದು ಖರ್ಗೆ ಹೇಳಿದರು.  ರಫೇಲ್ ಯುದ್ಧ ವಿಮಾನದ ಬೆಲೆಗೆ ಸಂಬಂಧಿಸಿದ ವಿವರಗಳ ಬಗ್ಗೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ವಾಕ್ಸಮರವನ್ನು ನಡೆಸಿದ್ದು. ಉಭಯ ಪಕ್ಷಗಳೂ ಪರಸ್ಪರರ ವಿರುದ್ಧ ಸಂಸತ್ತನ್ನು ದಾರಿ ತಪ್ಪಿಸಿದ ಆಪಾದನೆ ಮಾಡಿವೆ.  ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೆಲ ದಿನಗಳ ಬಳಿಕ ಪಕ್ಷವು ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ, ಆನಂದ ಶರ್ಮ ಮತ್ತು ರಣದೀಪ್ ಸುರ್ಜಿವಾಲ ಈ ಮೂವರು ಉನ್ನತ ನಾಯಕರಿಗೆ ವಿಷಯದ ಪರಿಶೀಲನೆಯ ಉಸ್ತುವಾರಿ ವಹಿಸಿತ್ತು. ಈ ಮೂವರೂ ಮೋದಿ ಆಡಳಿತವು ವಿಮಾನದ ಬೆಲೆಗೆ ಸಂಬಂಧಿಸಿದ ವಿವರಗಳನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದರು.  ಈ ನಾಯಕರು ರಫೇಲ್ ವ್ಯವಹಾರದ ಬೆಲೆ ವಿವರಗಳನ್ನು ಬಹಿರಂಗ ಪಡಿಸಲು ಸರ್ಕಾರವನ್ನು ನಿರ್ಬಂಧಿಸುವಂತಹ ಯಾವುದೇ ಅಂಶ ಒಪ್ಪಂದದಲ್ಲಿ ಇಲ್ಲ ಎಂಬುದನ್ನು ಪ್ರತಿಪಾದಿಸಲು ೨೦೦೮ರ ಜನವರಿಯಲ್ಲಿ ಯುಪಿಎ ಸರ್ಕಾರ ಸಹಿ ಹಾಕಿದ್ದ ರಹಸ್ಯ ಒಪ್ಪಂದ ಪ್ರತಿಯನ್ನು ಬಿಡುಗಡೆ ಮಾಡಿದ್ದಾರೆ.
ಇನ್ನೊಂದೆಡೆಯಲ್ಲಿ ಬಿಜೆಪಿಯು ಕಾಂಗ್ರೆಸ್ ಎತ್ತಿದ ಪ್ರಶ್ನೆಗಳನ್ನು ತಳ್ಳಿಹಾಕುವ ಹೊಣೆಗಾರಿಕೆಯನ್ನು ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರಿಗೆ ವಹಿಸಿತು.


ಕಾಂಗ್ರೆಸ್ ನಾಯಕರ ಸಾಮೂಹಿಕ ಪ್ರತಿಪಾದನೆ ಅಪ್ಪಟ ಸುಳ್ಳು ಎಂಬುದಾಗಿ ಹೇಳಿದ ರವಿ ಶಂಕರ ಪ್ರಸಾದ್ ಲೋಕಸಭೆಯನ್ನು ದಾರಿ ತಪ್ಪಿಸಿ ಮೇಲ್ನೋಟಕ್ಕೇ ಹಕ್ಕು ಚ್ಯುತಿ ಎಸಗಿರುವ ರಾಹುಲ್ ಗಾಂಧಿ ಅವರನ್ನು ರಕ್ಷಿಸಲು ಕಾಂಗ್ರೆಸ್ ನಾಯಕರು ಸಾಮೂಹಿಕ ಪ್ರತಿಪಾದನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ರಕ್ಷಣಾ ಖರೀದಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಆಗಿನ ಯುಪಿಎ ಸರ್ಕಾರವು ಸಂಸತ್ತಿನಲ್ಲಿ ನೀಡಿದ ಉತ್ತರಗಳನ್ನು ರವಿಶಂಕರ ಪ್ರಸಾದ್ ಉಲ್ಲೇಖಿಸಿದ್ದಾರೆ. ಮೊದಲಿಗೆ ಪ್ರಣಬ್ ಮುಖರ್ಜಿ ಮತ್ತು ಬಳಿಕ ಎ.ಕೆ. ಆಂಟನಿ ಅವರು ರಾಷ್ಟ್ರೀಯ ಭದ್ರತೆಯ ನೆಲೆಯಲ್ಲಿ ಬೆಲೆ ವಿವರ ಮತ್ತು ಇತರ ಮಾಹಿತಿ ಒದಗಿಸಲು ನಿರಾಕರಿಸಿದ್ದರು ಎಂದು ರವಿ ಶಂಕರ ಪ್ರಸಾದ್ ಹೇಳಿದರು.  ಮೋದಿ ಸರ್ಕಾರ ವಿರುದ್ಧದ ಅವಿಶ್ವಾಸ ನಿರ್ಣಯ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುವೆಲ್ ಮ್ಯಾಕ್ರೋನ್ ಅವರು ಈ ವರ್ಷದ ಆದಿಯಲ್ಲಿ ತಾವು ಭೇಟಿ ಮಾಡಿದ್ದಾಗ ರಫೇಲ್ ವಿಮಾನದ ಬೆಲೆ ವಿವರಗಳನ್ನು ಬಹಿರಂಗ ಪಡಿಸದಂತೆ ಭಾರತವನ್ನು ನಿರ್ಬಂಧಿಸುವ ಯಾವುದೇ ರಹಸ್ಯ ಒಪ್ಪಂದ ಇಲ್ಲ ಎಂಬುದಾಗಿ ತಿಳಿಸಿದ್ದರು ಎಂದು ಹೇಳಿದ್ದರು.



2017:  ಬೆಂಗಳೂರು: ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಉಡುಪಿ ರಾಮಚಂದ್ರ ರಾವ್ (85ವರ್ಷ) ಅವರು ಈದಿನ  ನಸುಕಿನ 2.55ರ ವೇಳೆಯಲ್ಲಿ ನಿಧನರಾದರು. ಹೃದಯ ಸಂಬಂಧಿ ಸಮಸ್ಯೆಯಿಂದ ನಗರದ ಇಂದಿರಾನಗರದ ತಮ್ಮ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು. ಯುಆರ್ ರಾವ್ ಮೂಲತಃ ಉಡುಪಿಯ ಅದಮಾರುವಿನಲ್ಲಿ 1932, ಮಾರ್ಚ್ 10ರಂದು ಜನಿಸಿದ್ದರು. ಕೃಷ್ಣವೇಣಿ, ಲಕ್ಷ್ಮಿನಾರಾಯಣ ದಂಪತಿಯ ಪುತ್ರರಾದ ಯುಆರ್ ರಾವ್ ಉಡುಪಿ, ಅನಂತಪುರ, ಮದ್ರಾಸ್, ಬನಾರಸ್ ನಲ್ಲಿ ಶಿಕ್ಷಣ ಪಡೆದಿದ್ದರು. ಯುಆರ್ ರಾವ್ ಅವರು ಬಾಹ್ಯಾಕಾಶ ವಿಜ್ಞಾನಿಗಳಾಗಿ ನೀಡಿರುವ ಕೊಡುಗೆ ಅಪಾರ. ಭಾರತದ ಮೊದಲ ಉಪಗ್ರಹ ಆರ್ಯಭಟದ ರೂವಾರಿ ಯುಆರ್ ರಾವ್. ತದನಂತರ ಭಾಸ್ಕರ, ಆಪಲ್, ರೋಹಿಣಿ, ಇನ್ಸಾಟ್ 1, ಇನ್ಸಾಟ್ 2, ಐಆರ್ ಎಸ್ 1 ಸೇರಿದಂತೆ ಒಟ್ಟು 18 ಉಪಗ್ರಹಗಳ ನಿರ್ಮಾಣದಲ್ಲಿ ಮುಖ್ಯ ಮಾರ್ಗದರ್ಶರಾಗಿದ್ದರು. 1985ರಲ್ಲಿ ಭಾರತೀಯ ಸ್ಪೇಸ್ ಕಮಿಷನ್ ನ ಅಧ್ಯಕ್ಷರಾಗಿ ನೇಮಕಗೊಂಡ ಪ್ರೊ.ರಾವ್ ಅವರು ರಾಕೆಟ್ ತಂತ್ರಜ್ಞಾನ ಬಳಕೆಗೆ ಆದ್ಯತೆ ನೀಡಿ 1992ರಲ್ಲಿ ಎಸ್ ಎಲ್ ವಿ ರಾಕೆಟ್ ಉಡಾವಣೆಯ ಪ್ರಮುಖ ರೂವಾರಿಯಾಗಿದ್ದರು. ರಾವ್ ಅವರು ಭಟ್ನಾಗರ್ ಪ್ರಶಸ್ತಿ, ರವೀಂದ್ರ ಪುರಸ್ಕಾರ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು. ಯು.ಆರ್‌.ರಾವ್‌ ಅವರಿಗೆ 1976ರಲ್ಲಿ ಭಾರತ ಸರಕಾರ ಪದ್ಮಭೂಷಣ ಮತ್ತು 2017ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.  ರಾವ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಶೋಕ ವ್ಯಕ್ತ ಪಡಿಸಿದರು.



2017:  ಶ್ರೀನಗರ : ಜಮ್ಮುಮತ್ತು ಕಾಶ್ಮೀರದಲ್ಲಿನ ಉಗ್ರ ಸಮೂಹಗಳಿಗೆ ಹಣ ಒದಗಿಸುತ್ತಿದ್ದ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯ ಅಧಿಕಾರಿಗಳು ಕಾಶ್ಮೀರ ಪ್ರತ್ಯೇಕತಾ ನಾಯಕ ಸೈಯದ್‌ ಅಲೀ ಶಾ ಗೀಲಾನಿ ಯ ಅಳಿಯನ ಸಹಿತ ಏಳು ಕಾಶ್ಮೀರೀ ಪ್ರತ್ಯೇಕತಾ ನಾಯಕರನ್ನು ಬಂಧಿಸಿದರು. ಕಾಶ್ಮೀರ ಕಣಿವೆಯಲ್ಲಿ ಉಗ್ರ ಚಟುವಟಿಕೆಗಳನ್ನು ಪ್ರವರ್ತಿಸಲು ಮತ್ತು ಕಲ್ಲೆಸೆವ ಪ್ರತಿಭಟನಕಾರರಿಗೆ ಹಣ ನೀಡಲು ಈ ಏಳು ಮಂದಿ ಬಂಧಿತರು ಪಾಕಿಸ್ಥಾನದಿಂದ ಹಣ ಪಡೆಯುತ್ತಿದ್ದರು ಎಂದು ಎನ್‌ಐಎ ಹೇಳಿತು. ಕೇಂದ್ರೀಯ ತನಿಖಾ ಸಂಸ್ಥೆಯಂದ ಬಂಧಿಸಲ್ಪಟ್ಟ  ಏಳು ಮಂದಿ ಕಾಶ್ಮೀರೀ ಪ್ರತ್ಯೇಕತಾ ನಾಯಕರೆಂದರೆ : ಹುರಿಯತ್‌ ಅಧ್ಯಕ್ಷ ಸೈಯದ್‌ ಅಲೀ ಶಾ ಗೀಲಾನಿ ಯ ಅಳಿಯ ಅಲ್‌ತಾಫ್ ಶಾ, ಬಿಟ್ಟಾ ಕರಾಟೆ, ಅಮಾನತುಗೊಂಡಿರುವ ಹುರಿಯತ್‌ ನಾಯಕ ನಯೀಮ್‌ ಖಾನ್‌, ಹುರಿಯತ್‌ ವಕ್ತಾರ ಅಯಾಜ್‌ ಅಕ್‌ಬರ್‌, ಪೀರ್‌ ಸೈಫ‌ುಲ್ಲಾ, ಮಿರಾಜುದ್ದೀನ್‌ ಕಲವಾಲ್‌, ಮತ್ತು ಮಂದಗಾಮಿ ಹುರಿಯತ್‌ ಅಧ್ಯಕ್ಷ ಮೀರ್‌ವೆàಜ್‌ ಉಮರ್‌ ಪಾರೂಕ್‌ನ ನಿಕಟ ಸಹವರ್ತಿ ಶಾಹಿದ್‌ ಉಲ್‌ ಇಸ್ಲಾಮ್‌.  ಇವರ ಪೈಕಿ ಅಲ್‌ತಾಫ್ ಅಹ್ಮದ್‌ ಶಾ "ಅಲ್‌ತಾಫ್ ಫ‌ಂತೂಷ್‌' ಎಂದೇ ಕುಖ್ಯಾತ. ಈ ಎಲ್ಲ ಏಳು ಮಂದಿ ಬಂಧಿತರನ್ನು ದಿಲ್ಲಿಗೆ ಕರೆತರಲಾಗುವುದು ಎಂದು ಅಧಿಕಾರಿ ತಿಳಿಸಿದರು. ಕಾಶ್ಮೀರದ ಉರಿ ಮತ್ತು ಜಮ್ಮುವಿನ ಚಕನ್‌  ದ-ಬಾದ್‌ ನಲ್ಲಿ ಎಲ್‌ಓಸಿ ಆಚೆಗಿನ ವ್ಯಾಪಾರ ವಹಿವಾಟು ವಿನಿಮಯದ ನೆಲೆಯಲ್ಲಿ ನಡೆಯುವುದರಿಂದ ಕೆಲವು ವ್ಯಾಪಾರಿಗಳು ತಮ್ಮ ಬಿಲ್‌ಗ‌ಳನ್ನು ಕಡಿಮೆ ಅಥವಾ ಜಾಸ್ತಿ ಪ್ರಮಾಣದಲ್ಲಿ ತೋರಿಸಿ ಅವುಗಳ ವ್ಯತ್ಯಾಸದ ಹಣವನ್ನು ಕಾಶ್ಮೀರ ಕಣಿವೆಯಲ್ಲಿನ ಉಗ್ರ ಚಟುವಟಿಕಗಳಿಗೆ ಪೂರೈಸುತ್ತಿದ್ದಾರೆ ಎಂದು ಎನ್‌ಐಎ ಆರೋಪಿಸಿತು.



2017: ನವದೆಹಲಿ:  ಕಾರ್ಗಿಲ್‌ ಯುದ್ಧದ ಸಂದರ್ಭ - 1999ರ ಜೂನ್‌ 24ರಂದು ಸೋಮವಾರ
ಬೆಳಗ್ಗೆ  8.45ರ ಹೊತ್ತು - ಗಡಿ ನಿಯಂತ್ರಣದಾಚೆಗಿನ ಪಾಕಿಸ್ಥಾನದ ಗುಲ್‌ತೇರಿ ಸೇನಾ ನೆಲೆಯ ಮೇಲೆ ಭಾರತೀಯ ವಾಯು ಪಡೆಯ ಫೈಟರ್‌ ಜೆಟ್‌ ಜಾಗ್ವಾರ್‌ ವಿಮಾನ ಬಾಂಬ್‌ ಹಾಕಲು ಸಜ್ಜಾಗಿತ್ತು. ರಾಡಾರ್‌ನಲ್ಲಿ ಗುರಿಯನ್ನೂ ನಿಗದಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ, ಗುಲ್‌ತೇರಿ  ಸೇನಾ ನೆಲೆಯಲ್ಲಿ ಪಾಕ್‌ ಅಧ್ಯಕ್ಷ ನವಾಜ್‌ ಷರೀಫ್ ಮತ್ತು ಸೇನಾ ಮುಖ್ಯಸ್ಥ ಪರ್ವೇಜ್‌ ಮುಶರ್ರಫ್ ಇದ್ದಾರೆನ್ನುವುದು ಗೊತ್ತಾಯಿತು. ಹಾಗಾಗಿ ವಿಮಾನದ ಪೈಲಟ್‌ಗೆ ಗುರಿಯನ್ನು ಕೊಂಚ ಬದಲಾಯಿಸಲು ಸೂಚಿಸಲಾಯಿತು. ಗುರಿ ಬದಲಿಸಲ್ಪಟ್ಟ ಬಾಂಬ್‌ ಎಲ್‌ಓಸಿಯ ಈಚೆ, ಭಾರತೀಯ ಗಡಿ ಭಾಗದಲ್ಲಿ  ಯಾವುದೇ ಹಾನಿ ಉಂಟು ಮಾಡದ ರೀತಿಯಲ್ಲಿ ಬಿತ್ತು. ಪರಿಣಾಮವಾಗಿ ನವಾಜ್‌ ಷರೀಫ್, ಪರ್ವೇಜ್‌ ಮುಶರ್ರಫ್ ಬದುಕುಳಿದರು. ಒಂದೊಮ್ಮೆ ಕೊನೇ ಕ್ಷಣದ ನಿರ್ಧಾರ ಬದಲಾಗದಿರುತ್ತಿದ್ದರೆ ಷರೀಫ್ ಮತ್ತು ಮುಶರ್ರಫ್ ಅಂದೇ ಇಹಲೋಕ ತ್ಯಜಿಸುತ್ತಿದ್ದರು. ಕಾರ್ಗಿಲ್‌ ಯುದ್ಧದ ಅಂದಿನ ಈ ಘಟನಾವಳಿ ಕುರಿತ ಅಧಿಕೃತ ದಾಖಲೆ ಪತ್ರ "ದಿ ಇಂಡಿಯನ್‌ ಎಕ್ಸ್‌ಪ್ರೆಸ್‌'ಗೆ ಸಿಕ್ಕಿದ್ದು  ಈ ನಿಗೂಢ ವಿಷಯವು ಈಗ ಬಹಿರಂಗವಾಗಿದೆ.  ''1999 ಜೂನ್‌ 24ರಂದು ಬೆಳಗ್ಗೆ 8.45ರ ಹೊತ್ತಿಗೆ ಎಲ್‌ಓಸಿ ಆಚೆಗಿನ ಪ್ರದೇಶದಲ್ಲಿ ಬಾಂಬ್‌ ಎಸೆಯಲು ನಿಯುಕ್ತವಾಗಿದ್ದ ಜಾಗ್ವಾರ್‌ ಫೈಟರ್‌ ಜೆಟ್‌ನ ಕಾಕ್‌ಪಿಟ್‌ ಲೇಸರ್‌ ಡೆಸಿಗ್ನೇಶನ್‌ ಸಿಸ್ಟಮ್‌ ನಲ್ಲಿ 4388 ಸಂಖ್ಯೆಯ ಗುರಿಯನ್ನು ಸಜ್ಜುಗೊಳಿಸಲಾಗಿತ್ತು. ಅದು ಪಾಕಿಸ್ಥಾನದ ಗುಲ್‌ತೇರಿ ಸೇನಾ ನೆಲೆಯಾಗಿತ್ತು. ಅದನ್ನು ಉಡಾಯಿಸಲು ನಿರ್ಧರಿಸಲಾಗಿತ್ತು. ಆದರೆ ಕೊನೇ ಕ್ಷಣದಲ್ಲಿ ಆ ಸೇನಾ ನೆಲೆಯಲ್ಲಿ ನವಾಜ್‌ ಷರೀಫ್ ಮತ್ತು ಪರ್ವೇಜ್‌ ಮುಶರ್ರಫ್ ಇರುವುದು ಗೊತ್ತಾಯಿತು. ಒಡನೆಯೇ ಗುರಿಯನ್ನು ಬದಲಿಸಲು ನಿರ್ಧರಿಸಲಾಯಿತು. ಅಂತಿಮವಾಗಿ ಬಾಂಬನ್ನು ಭಾರತದ ಎಲ್‌ಓಸಿ ಭಾಗದಲ್ಲಿ, ಯಾವುದೇ ಹಾನಿ ಇಲ್ಲದೇ, ಬೀಳುವಂತೆ ಮಾಡಲಾಯಿತು'' ಎಂದು ಪತ್ರಿಕಾ ವರದಿ ತಿಳಿಸಿತು.

2017: ನವದೆಹಲಿ: ಬೋಫೋರ್ಸ್ ಹಗರಣ, ಗೋ ರಕ್ಷಕರ ಕುರಿತು ಲೋಕಸಭೆಯ ಕಲಾಪದಲ್ಲಿ
ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಗದ್ದಲ ಎಬ್ಬಿಸಿ, ಸ್ಪೀಕರ್ ಕುರ್ಚಿಯತ್ತ ಕಾಗದ ತೂರಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಆರು ಮಂದಿ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು 5 ದಿನಗಳ ಕಾಲ ಅಮಾನತುಗೊಳಿಸಿದರು. ಲೋಕಸಭೆಯಲ್ಲಿ ತೀವ್ರ ಕೋಲಾಹಲ ನಡೆಸಿ, ಕಾಗದದ ಚೂರುಗಳನ್ನು ತೂರಿ, ಶೂನ್ಯವೇಳೆಯ ಕಲಾಪವನ್ನು ಹಾಳುಗೆಡವಿದ ಹಿನ್ನೆಲೆಯಲ್ಲಿ ಆರು ಮಂದಿ ಕಾಂಗ್ರೆಸ್ ಸಂಸದರ ವಿರುದ್ಧ ಕ್ರಮ ಕೈಗೊಳ್ಳಲಾಯಿತು. ಮುಂದಿನ ಐದು ದಿನಗಳ ಕಾಲ ನಡೆಯಲಿರುವ ಕಲಾಪದಿಂದ ಆರು ಮಂದಿ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಎಎನ್ ಐ ವರದಿ ಮಾಡಿತು.



2017: ನವದೆಹಲಿ: ದೇಶದ 13ನೇ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರ ಅಧಿಕಾರವಧಿ ಈದಿನ

ಕೊನೆಗೊಂಡಿದ್ದು ಸಂಜೆ ದೇಶದ ಜನರನ್ನುದ್ದೇಶಿಸಿ ಅವರು ಭಾಷಣ ಮಾಡಿದರು. ಸಂಸತ್ತಿನಲ್ಲಿ ಹಿಂದಿನ ದಿನ  ತಮ್ಮ ಕೊನೆಯ ಭಾಷಣ ಮಾಡಿದ ನಿರ್ಗಮಿತ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ  ಈದಿನ ಸಂಜೆ ಜನರನ್ನು ಉದ್ದೆಶಿಸಿ ವಿದಾಯ ಭಾಷಣ ಮಾಡಿದ್ದು, ನೂತನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಶುಭಕೋರಿದರು. ಪ್ರಣವ್ ಭಾಷಣದ ಮುಖ್ಯಾಂಶಗಳು: ಸಂಜೆ 7:45:  ನಾನು ನಾಳೆ ನಿಮ್ಮಲ್ಲಿ ಮಾತನಾಡುವಾಗ ಒಬ್ಬ ಸಾಮಾನ್ಯ ಪ್ರಜೆಯಾಗಿಯೇ ಮಾತನಾಡಲಿದ್ದೇನೆ. ನಿಮ್ಮಂತೆಯೇ ನಾನು ಒಬ್ಬ ಜನ ಸಾಮಾನ್ಯ. 7:44 :  ಈ ಅತ್ಯುನ್ನತ ಗೌರವ ನೀಡಿರುವುದಕ್ಕೆ ಜನರಿಗೆ ಕೃತಜ್ಞತೆ ಅರ್ಪಿಸುವುದಕ್ಕೆ ನನಗೆ ಪದಗಳು ಸಿಗುತ್ತಿಲ್ಲ. ಆದಾಗ್ಯೂ, ಒಬ್ಬ ಉತ್ತಮ ಪ್ರಜೆಯಾಗಿರುವುದೇ ಅತ್ಯುನ್ನತ ಗೌರವ ಎಂದು ನಾನು ಭಾವಿಸಿದ್ದೇನೆ. 7:42 : ಬಡತನ ನಿರ್ಮೂಲನೆಯಿಂದ ಸಂತಸ ಹೆಚ್ಚಾಗುತ್ತದೆ, ಎಲ್ಲರ ಅಭಿವೃದ್ಧಿಯೇ ಮುಖ್ಯ ಉದ್ದೇಶವಾಗಬೇಕು. 7:41 : ಆರ್ಥಿಕ ಸುದೃಢತೆಯೂ ಪ್ರಧಾನವಾದುದು. ನಮ್ಮ ದೇಶದ ನೀತಿಗಳು ದೇಶದಲ್ಲಿರುವ ಕಡು ಬಡವರಿಗೂ ತಲುಪಿ ಅವರನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಂತಿರಬೇಕು. 7:40 :  ನಾವು ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಬೇಕು. ನಮ್ಮ ಶೈಕ್ಷಣಿಕ ವ್ಯವಸ್ಥೆ ನಮ್ಮನ್ನು ಸುವರ್ಣ ಯುಗಕ್ಕೆ ಕೊಂಡೊಯ್ಯುತ್ತದೆ. ಸೃಜನಾತ್ಮಕ ಆಲೋಚನೆ, ಹೊಸ ಕಲ್ಪನೆ, ವೈಜ್ಞಾನಿಕ ಶೋಧನೆಗಳಿಗೆ ನಮ್ಮ ಶೈಕ್ಷಣಿಕ ಸಂಸ್ಥೆಗಳಲ್ಲಿ ಉತ್ತೇಜನ ನೀಡಬೇಕು. 7.38 : ಇಂದು ನಾವು ಅತೀ ಹೆಚ್ಚು ಹಿಂಸಾಚಾರಗಳನ್ನು ಕಾಣುತ್ತಿದ್ದೇವೆ. ನಮ್ಮ ಸಮಾಜ ಶಾರೀರಿಕ ಮತ್ತು ಮೌಖಿಕ ಹಿಂಸಾಚಾರಗಳಲ್ಲಿ  ತೊಡಗದಂತೆ ನಾವು ನೋಡಿಕೊಳ್ಳಬೇಕು. 7.37 : ದೇಶದ ಅಭಿವೃದ್ಧಿಗಾಗಿ ಇಲ್ಲಿರುವ ಪ್ರತಿಯೊಬ್ಬ ವ್ಯಕ್ತಿಗೂ ನಾನೂ ಈ ದೇಶದ ಅಂಗ ಎಂಬ ಅರಿವು ಇರಬೇಕು. 7.36 : ನಾನು ಈ ದೇಶಕ್ಕೆ ನೀಡಿದ್ದಕ್ಕಿಂತ ಹೆಚ್ಚಿನದ್ದನ್ನು ನಾನು ಪಡೆದುಕೊಂಡಿದ್ದೇನೆ. ಅದಕ್ಕಾಗಿ ನಾನು ದೇಶದ ಜನತೆಗೆ ಸದಾ ಋಣಿಯಾಗಿರುತ್ತೇನೆ. ನಾನು ನನ್ನ ಕರ್ತವ್ಯವನ್ನು ಹೇಗೆ ನಿರ್ವಹಿಸಿದೆ ಎಂಬುದರ ಬಗ್ಗೆ ಜನರೇ ತೀರ್ಮಾನಿಸಲಿದ್ದಾರೆ. 7.35 : ನಂಬಿಕೆ ಮತ್ತು ಸಂಸ್ಕೃತಿ ಅದೇ ನಮ್ಮ ದೇಶವನ್ನು ಶ್ರೇಷ್ಠವಾಗಿರಿಸಿದೆ. 7.33 : ಸಂಸತ್‍ನಲ್ಲಿ ನನ್ನ ಅಧಿಕಾರಾವಧಿಯಲ್ಲಿ ನಾನು ಬಹಳಷ್ಟು  ಕಲಿತಿದ್ದೇನೆ. 7.32 :  ಭಾರತದ ಸಂಸತ್ ನನ್ನ ದೇಗುಲ, ಜನರ ಸೇವೆಯೇ ನನ್ನ ಅಭಿರುಚಿ. 7.30 :  ರಾಮನಾಥ ಕೋವಿಂದ್ ಅವರಿಗೆ ಅಭಿನಂದನೆಗಳು.


2016: ನವದೆಹಲಿ: ಜ್ಯಾವೆಲಿನ್ ಎಸೆತದಲ್ಲಿ ಭಾರತದ ನೀರಜ್ ಚೋಪ್ರಾ ಅವರು ಇತಿಹಾಸ ನಿರ್ಮಿಸಿದ್ದು, ಅಥ್ಲೆಟಿಕ್ಸ್ನಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಪೋಲೆಂಡ್ ಬ್ಯಾಡ್ಗೊಸೆಜ್ನಲ್ಲಿ ನಡೆದ ಯು-20 ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ವರ್ಣ ಪದಕವನ್ನು ಗೆಲ್ಲುವ ಮೂಲಕ ಚೋಪ್ರಾ ಅವರು ಸಾಧನೆ ಮಾಡಿದರು. 86.48 ಮೀಟರ್ ದೂರಕ್ಕೆ ಜ್ಯಾವೆಲಿನ್ ಎಸೆಯುವ ಮೂಲಕ ಚೋಪ್ರಾ ಅವರು ಯು-20 ವಿಶ್ವದಾಖಲೆಯನ್ನು ನಿರ್ಮಿಸಿದರು. ಹರಿಯಾಣದ ಪಾಣಿಪತ್ ಜಿಲ್ಲೆಯ ಖಂಡ್ರಾ ಗ್ರಾಮದ ನಿವಾಸಿಯಾದ 18 ಹರೆಯದ ಚೋಪ್ರಾ ಲ್ಯಾಟಿವಿಯನ್ ಜಿಗಿಸಮುಂಡ್ಸ್ ಸಿರ್ಮಾಯಿಸ್ ಅವರು ನಿರ್ಮಿಸಿದ್ದ 84.69 ಮೀಟರ್ ದೂರಕ್ಕೆ ಜ್ಯಾವೆಲಿನ್ ಎಸೆದು ನಿರ್ಮಿಸಿದ್ದ ದಾಖಲೆಯನ್ನು ಮುರಿದರು.

2016: ಶಾಂಘಾಯ್: ವಿಶ್ವದಲ್ಲೇ ಅತ್ಯಾಧುನಿಕ ತಂತ್ರಜ್ಞಾನದ ಭೂ ಜಲಚರ ಯುದ್ಧ ವಿಮಾನವನ್ನು ಚೀನಾ ಸಿದ್ಧಪಡಿಸಿತು. ಜಗತ್ತಿನ ಅತಿ ದೊಡ್ಡ ವೈಮಾನಿಕ ಸಂಸ್ಥೆ ಏವಿಯೇಷನ್ ಇಂಡಸ್ಟ್ರಿ ಕಾಪೋರೇಷನ್ ಆಫ್ ಚೈನಾ (ಎವಿಐಸಿ) 7 ವರ್ಷಗಳ ಸತತ ಪರಿಶ್ರಮದಿಂದ ವಿಮಾನವನ್ನು ರೂಪಿಸಿದ ಕೀರ್ತಿಗೆ ಭಾಜನವಾಯಿತು. ಸಮುದ್ರದ ಮೇಲಿನಿಂದಲೂ ಟೇಕಾಫ್, ಲ್ಯಾಂಡಿಂಗ್ ಆಗಬಲ್ಲ ನೂತನ ಕಡಲ ವಿಮಾನಕ್ಕೆ ಎಜಿ600 ಎಂದು ನಾಮಕರಣ ಮಾಡಲಾಯಿತು. ವಿಶೇಷ ವಿಮಾನ 53.5 ಟನ್ ತೂಕದ ಯುದ್ಧ ಸಾಮಗ್ರಿ ಹೊತ್ತೊಯ್ಯುವ, 4,500 ಕಿ.ಮೀ. ಪ್ರದೇಶ ವ್ಯಾಪ್ತಿಯಲ್ಲಿ ಸೆಣಸುವ ಸಾಮರ್ಥ್ಯ ಹೊಂದಿದೆ20 ಸೆಕೆಂಡುಗಳಲ್ಲಿ 12 ಟನ್ ನೀರು ಸಂಗ್ರಹಿಸುವ ಅತ್ಯಾಧುನಿಕ ಯಂತ್ರಗಳನ್ನೂ ಹೊಂದಿದ ವಿಮಾನ, ತುರ್ತು ಸಂದರ್ಭದಲ್ಲಿ ಕಾಳ್ಗಿಚ್ಚು ಶಮನಕ್ಕೂ ಬಳಕೆಯಾಗಲಿದೆ ಎಂದು ಮೂಲಗಳು ತಿಳಿಸಿದವು. ಈದಿನ ನಡೆದ ಸಮಾರಂಭದಲ್ಲಿ ನೂತನ ಯುದ್ಧ ವಿಮಾನವನ್ನು ಸೇನಾ ಪಡೆಯ ಮುಖ್ಯಸ್ಥರ ಸಮ್ಮುಖದಲ್ಲಿ ಎವಿಐಸಿ ಅನಾವರಣಗೊಳಿಸಿತು.

2016: ಮುಂಬೈ: ಮುಂಬೈ ದಾಳಿ ಭೇದಿಸುವಲ್ಲಿ ಪ್ರಮುಖ ಸುಳಿವು ನೀಡಿದ ನಾಲ್ಕು ಪೊಲೀಸ್ ಶ್ವಾನಗಳಲ್ಲಿ ಒಂದಾದ ಟೈಗರ್ ಎಂಬ ನಾಯಿ ಸಾವನ್ನಪ್ಪಿತು. ಸಕಲ ಪೊಲೀಸ್ ಗೌರವದೊಂದಿಗೆ ಅದರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 26/11 ಉಗ್ರರ ಕರಿನೆರಳು ಪತ್ತೆ ಮಾಡಲು ಪೊಲೀಸರು ನಾಲ್ಕು ಪೊಲೀಸ್ ನಾಯಿಗಳ ಮೊರೆಹೋಗಿದ್ದರು. ಸುಲ್ತಾನ್, ಮ್ಯಾಕ್ಸ್, ಟೈಗರ್ ಹಾಗೂ ಸೀಸರ್ ನಾಲ್ಕು ನಾಯಿಗಳು ಅಂದು ನೀಡಿದ ಮಹತ್ವದ ಕುರುಹುಗಳಿಂದ ಉಗ್ರರ ಜಾಡನ್ನು ಪತ್ತೆ ಮಾಡಲು ಸಾಧ್ಯವಾಗಿತ್ತು. ಕೆಲ ದಿನಗಳ ಹಿಂದೆ ಸುಲ್ತಾನ್ ಹಾಗೂ ಮ್ಯಾಕ್ಸ್ ಸಾವನ್ನಪ್ಪಿದ್ದವು. ಇದೀಗ ಟೈಗರ್ ಕೂಡ ಸಾವನ್ನಪ್ಪಿದ್ದು, ಸೀಸರ್ ಮಾತ್ರ ಬದುಕುಳಿದಿದೆ. ನಾಲ್ಕು ನಾಯಿಗಳು ವೃತ್ತಿಯಿಂದ ನಿವೃತ್ತಿಯಾದ ನಂತರ ಪ್ರಾಣಿ ಪ್ರೇಮಿ ಫಿಜ್ ಷಾ ಪೋಷಣೆ ಮಾಡುತ್ತಿದ್ದರು. ಕುರಿತು ಫಿಜ್ ಪ್ರತಿಕ್ರಿಯಿಸಿ, ಸುಲ್ತಾನ್ ಸಾವನ್ನಪ್ಪಿದ ದಿನದಿಂದ ಟೈಗರ್ ಖಿನ್ನತೆಗೆ ಒಳಗಾಗಿತ್ತು. ಇದೀಗ ಸೀಸರ್ ಆರೋಗ್ಯದಲ್ಲಿ ಕೂಡ ವ್ಯತ್ಯಯವಾಗಿದ್ದು, ಎದ್ದು ನಿಲ್ಲುವ ಸ್ಥಿತಿಯಲ್ಲಿಲ್ಲ. ನಾಲ್ಕು ನಾಯಿಗಳು ನನ್ನ ಜೀವನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿವೆ ಎಂದು ಹೇಳಿದರು.
 2016: ಚೆನ್ನೈ: ದೇಶದಲ್ಲೇ ಮೊದಲ ಬಾರಿಗೆ ರಾಮೇಶ್ವರಂ-ಮನಮಧುರೈ ನಿಲ್ದಾಣಗಳ ನಡುವಿನ 114 ದೂರದ ಹಸಿರು ರೈಲು ಮಾರ್ಗವನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಉದ್ಘಾಟಿಸಿದರು. ಮಾರ್ಗದಲ್ಲಿ ಸಂಚರಿಸುವ ರೈಲುಗಳಿಂದ ಶೌಚಗೃಹದ ಕಲ್ಮಶಗಳು ರೈಲ್ವೆ ಹಳಿಯ ಮೇಲೆ ಬೀಳದಂತೆ ತಡೆಯಲಾಗುವುದು. ಇದಕ್ಕಾಗಿ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ರೈಲುಗಳಿಗೆ ಜೈವಿಕ ಶೌಚಗೃಹವಿರಲಿದ್ದು, ಮಾನವ ಮಲ ಮೂತ್ರಗಳು ರೈಲ್ವೆ ಬೋಗಿಯಲ್ಲೇ ಸಂಗ್ರಹವಾಗಲಿದ್ದು, ನಂತರ ಅದನ್ನು ಸಂಸ್ಕರಣೆ ಮಾಡಲಾಗುವುದು. ಇದೇ ಮಾದರಿಯಲ್ಲಿ ದೇಶದ ಎಲ್ಲಾ ರೈಲುಗಳ ಶೌಚಗೃಹಗಳನ್ನು ಜೈವಿಕ ಶೌಚಗೃಹವಾಗಿ ಬದಲಿಸಲಾಗುವುದು. 2016 ಮಾರ್ಚ್ನಿಂದ ಒಟ್ಟು 35,104 ಜೈವಿಕ ಶೌಚಗೃಹಗಳನ್ನು ರೈಲಿಗೆ ಅಳವಡಿಸಲಾಗಿದೆ ಎಂದು ಸುರೇಶ್ ಪ್ರಭು ತಿಳಿಸಿದರು. ಜೊತೆಗೆ ಚೆನ್ನೈನ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಗೂಗಲ್ ಕಂಪನಿಯ ವತಿಯಿಂದ ಅಳವಡಿಸಿರುವ ವೈಫೈ ಸೌಲಭ್ಯವನ್ನು ಸುರೇಶ್ ಪ್ರಭು ಉದ್ಘಾಟಿಸಿದರು. ಜತೆಗೆ ತಿರುಚಿನಾಪಲ್ಲಿ ರೈಲು ನಿಲ್ದಾಣದಲ್ಲಿ ವೈಫೈ ಸೌಲಭ್ಯವನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿದರು.

2016: ಹರಿದ್ವಾರ: ದೇಶದ ಅತಿದೊಡ್ಡ ಭದ್ರತಾ ಪಡೆ ಬಿಎಸ್ಎಫ್ ಸುಮಾರು 1900 ಯೋಧರಿಗೆ ಯೋಗ ಗುರು ಬಾಬಾ ರಾಮದೇವ ಮಾರ್ಗದರ್ಶನದಡಿ ಯೋಗ ತರಬೇತಿ ಕಾರ್ಯಕ್ರಮವನ್ನು ಉತ್ತರಾಖಂಡದ ಹರಿದ್ವಾರದಲ್ಲಿ ಆಯೋಜಿಸಲಾಯಿತು. ಹತ್ತು ದಿನಗಳ ಶಿಬಿರಕ್ಕೆ ಬಿಎಸ್ಎಫ್ ಜಂಟಿ ಮಹಾ ನಿರ್ದೇಶಕ . ಪಿ. ಮಹೇಶ್ವರಿ ನೇತೃತ್ವ ವಹಿಸಿದರು. ಬಿಎಸ್ಎಫ್ ನಿರ್ದೇಶಕ ಕೆ ಕೆ ಶರ್ಮಾ ಇತ್ತೀಚೆಗೆ ಯೋಧರಿಗೆ ಯೋಗ ತರಬೇತಿ ನಡೆಸಲಾಗುವುದು ಎಂದು ನವದೆಹಲಿಯಲ್ಲಿ ಪ್ರಕಟಿಸಿದ್ದರು. ನಂತರದ ದಿನಗಳಲ್ಲಿ ಗುಂಪಿನಲ್ಲಿ ಒಬ್ಬ ಯೋಧನನ್ನು ನಾಯಕನನ್ನಾಗಿಸಿ ಸೇನಾ ತುಕಡಿಗಳಿಗೆ ಯೋಗ ತರಬೇತಿ ಮುಂದುವರೆಸಲಾಗುವುದು. ಯೋಗದಿಂದ ಗಡಿ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಯೋಧರ ಕಾರ್ಯ ಕ್ಷಮತೆ ಹೆಚ್ಚಿಸಲು ಮತ್ತು ಖಿನ್ನತೆ ದೂರವಿರಿಸಲು ಸಹಾಯಕವಾಗುವ ಹಿನ್ನೆಲೆಯಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ಶರ್ಮಾ ಹೇಳಿದರು.

2016: ಕಾಠ್ಮಂಡು: ನೇಪಾಳದಲ್ಲಿ ಮತ್ತೊಮ್ಮೆ ರಾಜಕೀಯ ಅಸ್ಥಿರತೆ ಉಂಟಾಗಿ, ಮಾವೋಮಾದಿಗಳು ಅವಿಶ್ವಾಸ ನಿರ್ಣಯ ಮಂಡಿಸಿದ ಕಾರಣ ಬಹುಮತ ಕಳೆದುಕೊಂಡ ನೇಪಾಳ ಪ್ರಧಾನಿ ಕೆ.ಪಿ.ಓಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಳೆದ 10 ವರ್ಷಗಳಲ್ಲಿ 8 ಸರ್ಕಾರಗಳನ್ನು ಕಂಡಿರುವ ನೇಪಾಳದಲ್ಲಿ ಸ್ಥಿರ ಸರ್ಕಾರ ರಚಿಸಲು ಯಾವ ಪಕ್ಷಗಳಿಗೂ ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ಅಕ್ಟೋಬರ್ನಲ್ಲಿ ಓಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ ಸಂಸತ್ತಿನಲ್ಲಿ ನೇಪಾಳಿ ಕಾಂಗ್ರೆಸ್ ಮತ್ತು ಪ್ರಚಂಡ ನೇತೃತ್ವದ ಸಿಪಿಎನ್ ಮಾವೋವಾದಿ ಪಕ್ಷ ಮಂಡಿಸಿದ ಅವಿಸ್ವಾಸ ಗೊತ್ತುವಳಿಗೆ ಆಡಳಿತಾರೂಢ ಪಕ್ಷದ ಪ್ರಮುಖ ಅಂಗಪಕ್ಷಗಳಾದ ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಮತ್ತು ಮಧೇಶಿ ಪೀಪಲ್ಸ್ ರೈಟ್ಸ್ ಫೋರಂ-ಡೆಮಾಕ್ರೆಟಿಕ್ ಪಕ್ಷಗಳು ಬೆಂಬಲ ಸೂಚಿಸಿದವು. ಹಿನ್ನೆಲೆಯಲ್ಲಿ ಸರ್ಕಾರ ಬಹುಮತ ಕಳೆದುಕೊಂಡಿತು. ಸರ್ಕಾರ ಬದಲಾವಣೆಗೆ ಬಯಸುತ್ತಿರುವ ಬೆಳವಣಿಗೆಯ ಕುರಿತು ನನಗೆ ಆಶ್ಚರ್ಯವಾಗುತ್ತಿದೆ. ನಾನು ಮಾಡಿದ ಒಳ್ಳೆಯ ಕೆಲಸಗಳಿಗೆ ನನಗೆ ತಕ್ಕ ಪ್ರತಿಫಲ ದೊರೆತಿದೆ. ನಾನು ಅಧಿಕಾರಕ್ಕೆ ಬಂದಾಗ ಭಾರತ ಮತ್ತು ನೇಪಾಳದ ನಡುವಿನ ಸಂಬಂಧ ಸಾಕಷ್ಟು ಹದಗೆಟ್ಟಿತ್ತು, ಆದರೆ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ ಎಂದು 64 ವರ್ಷದ ಸಿಪಿಎನ್-ಯುಎಂಎಲ್ ಪಕ್ಷದ ನಾಯಕ ಓಲಿ ತಮ್ಮ ವಿದಾಯದ ಭಾಷಣದಲ್ಲಿ ತಿಳಿಸಿದರು.

2016: ಶ್ರೀನಗರ/ ಜಮ್ಮು: ಪೆಲ್ಲೆಟ್ ಗನ್ ಬಳಕೆಯಿಂದ ಸಾಧ್ಯವಿದ್ದಷ್ಟೂ ದೂರವಿರಿ ಎಂಬುದಾಗಿ ಭದ್ರತಾ ಪಡೆಗಳಿಗೆ ಇಲ್ಲಿ ಸಲಹೆ ಮಾಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಲ್ಲೆಸೆತದಲ್ಲಿ ನಿರತರಾಗಬೇಡಿ ಎಂದು ಯುವ ಜನತೆಗೆ ಮನವಿ ಮಾಡಿದರು. ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಭಯೋತ್ಪಾದಕ ಬುರ್ಹಾನ್ ವನಿ ಸಾವಿನ ಬಳಿಕ ಕಾಶ್ಮೀರ ಕಣಿವೆಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ 2228 ಮಂದಿ ಪೊಲೀಸರು, 1100 ಸಿಆರ್ಪಿಎಫ್ ಯೋಧರು ಮತ್ತು 2259 ಮಂದಿ ನಾಗರಿಕರು ಸೇರಿ 5500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಇದೇ ಮೊದಲ ಬಾರಿಗೆ ಬಹಿರಂಗಗೊಳಿಸಿದ ರಾಜನಾಥ್ ಅವರು, ಹಿಂಸಾಚಾರ ನಿಗ್ರಹಿಸುವ ನಿಟ್ಟಿನಲ್ಲಿ ಮಾರಕವಲ್ಲದ ವಿಧಾನ ಬಳಕೆ ಮಾರ್ಗಗಳನ್ನು ಕಂಡು ಹಿಡಿಯಲು ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಜಮ್ಮು ಮತ್ತು ಕಾಶ್ಮೀರ ಪರಿಸ್ಥಿತಿಯ ಖುದ್ದು ಅವಲೋಕನಕ್ಕಾಗಿ ಕಾಶ್ಮೀರ ಕಣಿವೆಗೆ ಭೇಟಿ ನೀಡಿ ವಿರೋಧ ಪಕ್ಷಗಳು ಸೇರಿದಂತೆ ಬಹುತೇಕ ಪ್ರಮುಖರ ಸಲಹೆ ಆಲಿಸಿದ ಗೃಹ ಸಚಿವರು ಜಮ್ಮು ಮತ್ತು ಕಾಶ್ಮೀರದಲ್ಲಿ ಒಮ್ಮೆ ಶಾಂತಿ ನೆಲೆಗೊಂಡ ಬಳಿಕ ಚಿದಂಬರಂ ಸಹಿತ ಪ್ರಮುಖರು ನೀಡಿದ ಸಲಹೆಗಳ ಬಗ್ಗೆ ಪರಿಶೀಲಿಸಲಾಗುವುದು ಎಂದು ನುಡಿದರು. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸುಧಾರಣೆಗೆ ಮೂರನೇಯವರ ಮಧ್ಯಸ್ಥಿಕೆಯ ಅಗತ್ಯ ಇಲ್ಲ. ಯಾರಿಗಾದರೂ ಸಮಸ್ಯೆ ಇದ್ದಲ್ಲಿ ಅದನ್ನು ಶಾಂತಿ ನೆಲೆಸಿದ ಬಳಿಕ ಮಾತುಕತೆ ಮೂಲಕ ಮಾತ್ರವೇ ಬಗೆ ಹರಿಸಲಾಗುವುದು. ಪಾಕಿಸ್ತಾನ ಸ್ವತಃ ಭಯೋತ್ಪಾದನೆಯಿಂದ ನಲುಗುತ್ತಿದ್ದು, ಅದು ಕಾಶ್ಮೀರದಲ್ಲಿ ಹಿಂಸೆಗೆ ಕುಮ್ಮಕ್ಕು ನೀಡಬಾರದು. ಅದು ತನ್ನ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು. ಭಾರತದ ಆಂತರಿಕ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡಬೇಡಿ ಎಂದು ಪಾಕಿಸ್ತಾನಕ್ಕೆ ಹೇಳಿದ್ದರಲ್ಲಿ ತಪ್ಪೇನೂ ಇಲ್ಲ ಎಂದು ಗೃಹ ಸಚಿವರು ಪ್ರತಿಪಾದಿಸಿದರು. ಯಾವುದೇ ರೂಪದ ಭಯೋತ್ಪಾದನೆಯನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದ ಅವರು ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ನೆಲೆಸಲು ಸಹಕರಿಸುವಂತೆ ಎಲ್ಲರಿಗೂ ಮನವಿ ಮಾಡಿದರು. ಗಾಯಾಳುಗಳಿಗೆ ಅಗತ್ಯ ಬಿದ್ದಲ್ಲಿ ದೆಹಲಿಯ ಏಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಒದಗಿಸಲಾಗುವುದು. ಅಂತಹವರನ್ನು ದೆಹಲಿಗೆ ಕಳುಹಿಸಿಕೊಡಿ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗೆ ಹೇಳಿದ್ದೇನೆ ಎಂದು ರಾಜನಾಥ್ ನುಡಿದರು.

2016: ನವದೆಹಲಿ: ಚೀನಾದ ಸರ್ಕಾರಿ ಸ್ವಾಮ್ಯದ ಕ್ಷಿನ್ಹುವಾ ಸುದ್ದಿ ಸಂಸ್ಥೆಯ ಮೂವರು ಪತ್ರಕರ್ತರಿಗೆ ಭಾರತ ಸರ್ಕಾರ ಜುಲೈ 31ರೊಳಗೆ ದೇಶ ತೊರೆಯುವಂತೆ ಸೂಚನೆ ನೀಡಿತು. ಈ ಪತ್ರಕರ್ತರಿಗೆ ಕೇಂದ್ರ ಸರ್ಕಾರ ಅವರ ವೀಸಾ ಅವಧಿ ವಿಸ್ತರಿಸಲು ನಿರಾಕರಿಸಿತ್ತು. ಆದರೆ ಪತ್ರಕರ್ತರಿಗೆ ವೀಸಾ ಅವಧಿ ವಿಸ್ತರಣೆಯನ್ನು ನಿರಾಕರಿಸಲು ಸ್ಪಷ್ಟವಾದ ಕಾರಣಗಳನ್ನು ಸರ್ಕಾರ ಬಹಿರಂಗ ಪಡಿಸಲಿಲ್ಲ. ಆದರೆ ಇವರ ಬದಲಾಗಿ ಬೇರೆ ಪತ್ರಕರ್ತರನ್ನು ಸುದ್ದಿ ಸಂಸ್ಥೆ ಭಾರತಕ್ಕೆ ಕಳುಹಿಸಬಹುದು ಎಂದು ತಿಳಿಸಿತು. ವು ಕ್ವಿಯಾಂಗ್ ದೆಹಲಿ ಬ್ಯೂರೋ, ಲು ತಾಂಗ್ ಮುಂಬೈ ಬ್ಯೂರೋದಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಶೀ ಯೋಂಗಾಗ್ ಮುಂಬೈನಲ್ಲಿ ವರದಿಗಾರನಾಗಿ ಕಾರ್ಯ  ನಿರ್ವಹಿಸುತ್ತಿದ್ದರು. ಇವರ ಚಲನ ವಲನಗಳ ಮೇಲೆ ಭದ್ರತಾ ಸಂಸ್ಥೆಗಳು ನಿಗಾ ವಹಿಸಿದ್ದವು, ಜತೆಗೆ ಇತ್ತೀಚೆಗೆ ಬೆಂಗಳೂರಿಗೆ ತೆರಳಿ ಗಡಿಪಾರಾಗಿರುವ ಟಿಬೆಟ್ ಹೋರಾಟಗಾರನನ್ನು ಭೇಟಿ ಮಾಡಿದ್ದರು. ಹಿನ್ನೆಲೆಯಲ್ಲಿ ಅವರ ವೀಸಾ ಅವಧಿ ವಿಸ್ತರಣೆಗೆ ನಿರಾಕರಿಸಲಾಗಿದೆ. ಜತೆಗೆ ಇವರಲ್ಲಿ ಒಬ್ಬ ಪತ್ರಕರ್ತ ಕಳೆದ 7 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

2016: ಚೆನ್ನೈ/ವಿಶಾಖಪಟ್ಟಣ:  ಬಂಗಾಳ ಕೊಲ್ಲಿಯಲ್ಲಿ ಕಣ್ಮರೆಯಾಗಿದ್ದ ವಾಯುಪಡೆಯ ಎನ್-32 ವಿಮಾನಕ್ಕಾಗಿ ಈದಿನವೂ ಶೋಧ ಕಾರ್ಯಾಚರಣೆ ಮುಂದುವರೆಯಿತು. ಇದುವರೆಗೂ ವಿಮಾನದ ಕುರಿತು ಯಾವುದೇ ಸುಳಿವು ಲಭ್ಯವಾಗಲಿಲ್ಲ. ನೌಕಾಪಡೆಯ 18 ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆ ಸೇರಿದಂತೆ 8 ವಿಮಾನಗಳು ಶೋಧ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಆದರೆ ಇದುವರೆಗೂ ವಿಮಾನದ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಹಾಗಾಗಿ ವಿಮಾನ ಕಣ್ಮರೆಯಾದ ಸ್ಥಳವನ್ನು ಉಪಗ್ರಹದ ಮೂಲಕ ಚಿತ್ರ ತೆಗೆದು ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದರು. ಪ್ರತಿಕೂಲ ಹವಾಮಾನದಿಂದಾಗಿ ಶೋಧ ಕಾರ್ಯಾಚರಣೆ ನಡೆಸಲು ತೊಂದರೆಯಾಗುತ್ತಿದೆ. ಉಪಗ್ರಹದ ಮೂಲಕ ಶೋಧ ಕಾರ್ಯಾಚರಣೆಗೆ ನೆರವು ಪಡೆಯಲಾಗುವುದು. ಶೋಧ ಕಾರ್ಯಾಚರಣೆ ನಿರಂತರವಾಗಿ ನಡೆಯುತ್ತಿದೆ. ವಿಮಾನ ಕಣ್ಮರೆಯಾಗಿರುವ ಪ್ರದೇಶದಲ್ಲಿ ನೀರಿನ ಆಳ ಸುಮಾರು 3500 ಮೀಟರ್ ಇದ್ದು, ಇದೂ ಸಹ ಶೋಧ ಕಾರ್ಯಾಚರಣೆಗೆ ತೊಂದರೆ ಉಂಟು ಮಾಡುತ್ತಿದೆ. ಶೋಧ ಕಾರ್ಯಾಚರಣೆಯ ಪ್ರಗತಿಯ ಕುರಿತು ಕಣ್ಮರೆಯಾಗಿರುವವರ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗುತ್ತಿದೆ ಎಂದು ನೌಕಾಪಡೆಯ ಹಿರಿಯ ಅಧಿಕಾರಿಗಳು ತಿಳಿಸಿದರು.

2016: ಮುಂಬೈ: 70 ವರ್ಷ ಮೇಲ್ಪಟ್ಟವರು ಕ್ರಿಕೆಟ್ ಆಡಳಿತದಲ್ಲಿ ಇರಬಾರದು ಎಂಬುದು ಸೇರಿದಂತೆ ಲೋಧಾ ಸಮಿತಿಯ ಮಾಡಿರುವ ಶಿಫಾರಸ್ಸುಗಳಿಗೆ ಸುಪ್ರೀಂ ಕೋರ್ಟ್ ಸಮ್ಮಿತಿ ಸೂಚಿಸಿದ ಹಿನ್ನೆಲೆಯಲ್ಲಿ ಮುಂಬೈ ಕ್ರಿಕೆಟ್ ಮಂಡಳಿ ಸಭೆ ನಡೆಸಿ ತೀರ್ಪಿಗೆ ಬದ್ಧವಾಗುವುದಾಗಿ ತಿಳಿಸಿತು. ಹೀಗಾಗಿ 75 ಹರೆಯದ ಶರದ್ ಪವಾರ್ ಮುಂಬೈ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತವಾಯಿತು. ಹೌದು, ಸುಪ್ರೀಂ ತೀರ್ಪಿಗೆ ಶರದ್ ಪವಾರ್ ಸಮ್ಮತಿ ಸೂಚಿಸಿ, ರಾಜೀನಾಮೆ ನೀಡುವುದಾಗಿ ತಿಳಿಸಿದರು. ಇದರಿಂದಾಗಿ ಬಿಸಿಸಿಐ ಹಾಗೂ ಐಸಿಸಿ ಅಧ್ಯಕ್ಷರಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ಶರದ್ ಪವಾರ್ ಅವರ ಕ್ರಿಕೆಟ್ ನಂಟು ಕಳಚಿಕೊಳ್ಳಲಿದೆ. ಸುಪ್ರೀಂ ತೀರ್ಪನ್ನು ಆರು ತಿಂಗಳ ಒಳಗಾಗಿ ಸಂಪೂರ್ಣವಾಗಿ ಜಾರಿ ಮಾಡಲು ಮಂಡಳಿ ನಿರ್ಧರಿಸಿತು. ಸುಪ್ರೀಂ ತೀರ್ಪಿನ ಜಾರಿ ಕುರಿತು ಪ್ರತಿಕ್ರಿಯಿಸಿದ ಪವಾರ್, ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕ್ರಿಕೆಟ್ ಆಡಳಿತ ವ್ಯವಸ್ಥೆಯಿಂದ ಹಿಂದೆ ಸರಿಯುವೆ. ಬಿಸಿಸಿಐ ಹಾಗೂ ಎಮ್ ಅಧ್ಯಕ್ಷರಾಗಿರುವ ಸಂದರ್ಭದಲ್ಲಿ ಕ್ರಿಕೆಟ್ ಆಡಳಿತ ವ್ಯವಸ್ಥೆಯಲ್ಲಿ ಹಲವು ರೀತಿಯ ಸುಧಾರಣಾ ಕ್ರಮವನ್ನು ಜಾರಿಮಾಡಿರುವೆ. ನನ್ನ ಕೆಲಸಕ್ಕೆ ಸಾಥ್ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಸುದ್ದಿಗಾರರಿಗೆ ತಿಳಿಸಿದರು. 70 ವರ್ಷ ವಯಸ್ಸಿನ ಮೇಲ್ಪಟ್ಟವರು ಕ್ರಿಕೆಟ್ ಆಡಳಿತದಲ್ಲಿ ಇರಬಾರದು ಎಂದು ನ್ಯಾಯಮೂರ್ತಿ ಲೋಧಾ ಸಮಿತಿ ಸುಪ್ರೀಂ ಕೋರ್ಟ್ಗೆ ಶಿಫಾರಸು ಮಾಡಿತ್ತು. ಜೊತೆಗೆ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎನ್ನುವುದು ಕೂಡ ತಿಳಿಸಿತ್ತು. ನಿವೃತ್ತ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಸಮಿತಿ ಮಾಡಿರುವ ಶಿಫಾರಸುಗಳನ್ನು ಸುಪ್ರೀಂಕೋರ್ಟ್ ಕಳೆದ ಸೋಮವಾರ ಅಂಗೀಕರಿಸಿತ್ತು.

2016: ಢಾಕಾ: ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ (ಜೆಎಂಬಿ) ಉಗ್ರ ಸಂಘಟನೆಗೆ ಸೇರಿದ ನಾಲ್ವರು ಮಹಿಳಾ ಭಯೋತ್ಪಾದಕರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದರು. ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ 22 ಜನರನ್ನು ಹತ್ಯೆ ಮಾಡಿದ ಆರೋಪ ಜಮಾತುಲ್ ಮುಜಾಹಿದೀನ್ ಬಾಂಗ್ಲಾದೇಶ ಸಂಘಟನೆ ಮೇಲಿತ್ತು. ಮಹಿಳಾ ಭಯೋತ್ಪಾದಕರನ್ನು ವಾಯವ್ಯ ಬಾಂಗ್ಲಾದೇಶದ ಶೀರಜ್ಗಂಜ್ ಜಿಲ್ಲೆಯಲ್ಲಿ ಬಂಧಿಸಲಾಯಿತು. ಬಂಧಿತರಿಂದ ಗ್ರೆನೇಡ್ ಮಾಡುವ ವಸ್ತುಗಳು, 6 ಕಚ್ಚಾ ಬಾಂಬ್ಗಳು ಮತ್ತು ಜಿಹಾದಿ ವಿಚಾರಧಾರೆಗೆ ಸಂಬಂಧಿಸಿದ ಹಲವು ಪುಸ್ತಕಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು. ಜುಲೈ 1 ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಶಂಕಿತ ಭಯೋತ್ಪಾದಕರ ವಿಡಿಯೋ ಬಿಡುಗಡೆ ಮಾಡಿದ ಕೆಲವೇ ದಿನಗಳಲ್ಲಿ ರ್ಯಾಪಿಡ್ ಆಕ್ಷನ್ ಬೆಟಾಲಿಯನ್ ಪಡೆಯ ಯೋಧರು ಮಹಿಳಾ ಭಯೋತ್ಪಾದಕರನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಢಾಕಾ ದಾಳಿಯ ಹೊಣೆಯನ್ನು ಐಸಿಸ್ ಸಂಘಟನೆ ಹೊತ್ತುಕೊಂಡಿತ್ತು. ಆದರೆ ಇದನ್ನು ನಿರಾಕರಿಸಿರುವ ಬಾಂಗ್ಲಾ ಸರ್ಕಾರ ಜೆಎಂಬಿ ಉಗ್ರ ಸಂಘಟನೆಗೆ ಸೇರಿದ ಉಗ್ರರು ದಾಳಿ ನಡೆಸಿದ್ದಾರೆ ಎಂದು ಪ್ರತಿಪಾದಿಸಿತ್ತು.

2016: ನವದೆಹಲಿ: ರಿಯೋ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಬೇಕಾಗಿದ್ದ ಭಾರತದ ಕುಸ್ತಿಪಟು (74 ಕೆಜಿ ವಿಭಾಗ) ನರಸಿಂಗ್ ಯಾದವ್ ಅವರು ಡೋಪ್ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ ಎಂದು ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಸಂಸ್ಥೆಯ ಮಹಾ ನಿರ್ದೇಶಕ ನವೀನ್ ಅಗರವಾಲ್ ಹೇಳಿದರು.  2015 ವಿಶ್ವ ಚಾಂಪಿಯನ್ಶಿಪ್ನಲ್ಲಿ ನರಸಿಂಗ್ ಕಂಚಿನ ಪದಕ ಗೆದ್ದಿದ್ದರು. 2016 ರಿಯೋ ಒಲಿಂಪಿಕ್ಸ್ನಲ್ಲಿ ನರಸಿಂಗ್ ಯಾದವ್ ಅವರು 74 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಗೆ ಅಭ್ಯರ್ಥಿಯಾಗಿದ್ದರು. ಡೋಪ್ ಪರೀಕ್ಷೆಯಲ್ಲಿ ಅವರು ವಿಫಲರಾಗಿರುವುದು ಭಾರತಕ್ಕೆ ಹಿನ್ನಡೆಯಾಯಿತು. ಡೋಪ್ ಪರೀಕ್ಷೆಯಲ್ಲಿ ಯಾದವ್ ಅವರು ನಿಷೇಧಿತ ಸ್ಟೀರಾಯ್ಡ್ ಸೇವಿಸಿರುವುದು ದೃಢಪಟ್ಟಿದೆ. ಹೀಗಾಗಿ ಅವರ ಒಲಿಂಪಿಕ್ಸ್ ಮಾನ್ಯತೆಯನ್ನು ತಡೆ ಹಿಡಿಯಲಾಯಿತು. ರಾಷ್ಟ್ರೀಯ ಮಾದಕ ದ್ರವ್ಯ ನಿಗ್ರಹ ಸಂಸ್ಥೆಯು ಜುಲೈ 5ರಂದು ಭಾರತೀಯ ಕ್ರೀಡಾ ಪ್ರಾಧಿಕಾರದ (ಎಸ್ಎಐ) ಸೋನೆಪತ್ ಪ್ರಾದೇಶಿಕ ಕೇಂದ್ರದಲ್ಲಿ ಯಾದವ್ ಅವರ ಡೋಪ್ ಪರೀಕ್ಷೆಯನ್ನು ನಡೆಸಿತ್ತು. ಮತ್ತು ಬಿ ಸ್ಯಾಂಪಲ್ ಪರೀಕ್ಷೆಗಳ ವರದಿ ಪಾಸಿಟವ್ ಆಗಿ ಕಂಡು ಬಂದುದನ್ನು ನಾಡಾ ಮಹಾನಿರ್ದೇಶಕ ನವೀನ್ ಅಗರ್ವಾಲ್ ಅವರು ನಾಡಾ ಶಿಸ್ತು ಸಮಿತಿ ಮುಂದೆ ಹಾಜರಾಗಿದ್ದ ಯಾದವ್ ಅವರಿಗೆ ದೃಢ ಪಡಿಸಿದರು.

2008: ದೇಶ ಉದಯಿಸುವ ಮೊದಲು ಪಾಕಿಸ್ಥಾನದವರಾಗಿದ್ದ ಸುಮಾರು 1.60 ಲಕ್ಷ ಉರ್ದು ಮಾತನಾಡುವ ನಾಗರಿಕರಿಗೆ ಬಾಂಗ್ಲಾದೇಶದ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅನುಮತಿ ನೀಡಿತು. ಭಾರತ ವಿಭಜನೆಯಾದಾಗ ಬಿಹಾರದಿಂದ ವಲಸೆ ಹೋಗಿದ್ದ ಇವರಿಗೆ 1971ರಲ್ಲಿ ಬಾಂಗ್ಲಾದೇಶ ಉದಯವಾದಾಗಿನಿಂದ ಮತದಾನದ ಹಕ್ಕು ದೊರೆತಿರಲಿಲ್ಲ. ಕಳೆದ ಮೇ ತಿಂಗಳಲ್ಲಿ ಹೈಕೋರ್ಟ್ ತೀರ್ಪು ನೀಡಿ ಈ ಬಿಹಾರಿ ವಲಸಿಗರಿಗೆ ಪೌರತ್ವ ನೀಡಲು ಆದೇಶಿಸಿತ್ತು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಈದಿನ ಮತ್ತೆ ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ ಇನ್ನೊಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತು. 1993ರ ಮಾರ್ಚ್ 12ರಂದು ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ ಸಮಯದಲ್ಲಿ ನಗರದ ಮಾಹಿಮ್ ಪ್ರದೇಶದಲ್ಲಿ ಮೀನುಗಾರರ ಕಾಲೋನಿ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿ ಆರು ಜನ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪಿ.ಡಿ. ಕೋಡೆ ಅವರು ಆರೋಪಿಗಳಾದ ಜಾಕೀರ್ ಹುಸೇನ್ ಶೇಖ್, ಫಿರೋಜ್ ಮಲ್ಲಿಕ್ ಮತ್ತು ಅಬ್ದುಲ್ ಅಕ್ತರ್ ಖಾನ್ಗೆ ಗಲ್ಲು ಶಿಕ್ಷೆ ಮತ್ತು ಇನ್ನೊಬ್ಬ ಆರೋಪಿ ಮೋಹಿನ್ ಖುರೇಷಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಈ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಮೊದಲೇ ಆರೋಪಿ ಬಷೀರ್ ಕಹಿರುಲ್ಲಾಗೆ ಸಹ ಜೀವಾವಧಿ ಶಿಕ್ಷೆ ವಿಧಿಸಿತ್ತು. 257 ಜನರನ್ನು ಬಲಿ ತೆಗೆದುಕೊಂಡ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇದುವರೆಗೆ 100 ಆರೋಪಿಗಳಲ್ಲಿ 91 ಆರೋಪಿಗಳಿಗೆ ಶಿಕ್ಷೆ ವಿಧಿಸಿದಂತಾಯಿತು.

2007: ಐದು ವರ್ಷ ಭಾರತದ ಯಶಸ್ವಿ ರಾಷ್ಟ್ರಪತಿಯಾಗಿ ಹುದ್ದೆಗೆ ಶೋಭೆ ತಂದುಕೊಟ್ಟ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಅಧಿಕಾರಾವಧಿಯ ಕೊನೆಯ ದಿನವಿದು. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದರೂ ಕಲಾಂ ಅವರು ಒಬ್ಬ ಮಾನವಪ್ರೇಮಿಯಾಗಿ ಜನಮಾನಸದಲ್ಲಿ ಯಾವತ್ತಿಗೂ `ಜನರ ರಾಷ್ಟ್ರಪತಿ.' ಭಾರತ ರತ್ನ (1997), ಪದ್ಮಭೂಷಣ (1981), ಪದ್ಮ ವಿಭೂಷಣ (1991), ರಾಷ್ಟ್ರೀಯ ಭಾವೈಕ್ಯಕ್ಕಾಗಿ ಇಂದಿರಾಗಾಂಧಿ ಪ್ರಶಸ್ತಿ (1998) ಈ ಪ್ರಶಸ್ತಿಗಳು ಕಲಾಂ ಅವರ ಕಿರೀಟ ಸೇರುವ ಮೂಲಕ ತಮ್ಮ ಘನತೆ ಹೆಚ್ಚಿಸಿಕೊಂಡವು. `ಕನಸು ಕಾಣಿ, ಕಾಣುತ್ತಿರಿ, ಕಾಣುತ್ತಲೇ ಇರಿ. ಉದಾತ್ತವಾದುದನ್ನು ಯೋಚಿಸಿ' -ಎನ್ನುತ್ತಾ ಅಪ್ಪಟ ಕನಸುಗಾರನಾಗಿ ಕಲಾಂ ಮಕ್ಕಳಲ್ಲಿ ಉದಾತ್ತ ಚಿಂತನೆಯ ಬೆಳಕು ಮೂಡಿಸುತ್ತಿದ್ದ ಕಲಾಂ ದೇಶದ ಪ್ರಗತಿಗಾಗಿ ತಂತ್ರಜ್ಞಾನದ ಬಳಕೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಮಕ್ಕಳೊಂದಿಗೆ ಮಗುವಾಗುತ್ತಿದ್ದ ಕಲಾಂ ವಿಶ್ವದ ಅತ್ಯಂತ ಎತ್ತರದ ನೀರ್ಗಲ್ಲ ಪ್ರದೇಶ ಸಿಯಾಚಿನ್ ನಲ್ಲಿ ಕಾಲಿಟ್ಟ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಜಲಾಂತರ್ಗಾಮಿ ನೌಕೆ ಹಾಗೂ ಸೂಪರ್ಸಾನಿಕ್ `ಸುಖೋಯ್ 30' ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ ಪ್ರಥಮ ರಾಷ್ಟ್ರಪತಿ ಎಂಬ ಕೀರ್ತಿ ಕೂಡಾ ಕಲಾಂ ಅವರದೇ. ದೇಶದ ಮೊಟ್ಟಮೊದಲ ದೇಶೀಯ ತಂತ್ರಜ್ಞಾನದ ಉಪಗ್ರಹ ಉಡಾವಣಾ ವಾಹನ (ಎಸ್ಎಲ್ವಿ -3) ತಯಾರಿಕೆಯಲ್ಲಿ ಯೋಜನಾ ನಿರ್ದೇಶಕರಾಗಿ ಕಲಾಂ ಕೊಡುಗೆ ಅನನ್ಯ. 1980ರಲ್ಲಿ `ರೋಹಿಣಿ' ಉಪಗ್ರಹವನ್ನು ಇದೇ ಉಡಾವಣಾ ವಾಹನದ ಮೂಲಕ ಕಕ್ಷೆಗೆ ಹಾರಿಬಿಟ್ಟದ್ದು ಈಗ ಇತಿಹಾಸ. ಇಸ್ರೋದ ಉಪಗ್ರಹ ಉಡಾವಣಾ ಯೋಜನೆಯಲ್ಲಿ ಕಲಾಂ ಅವರದ್ದು ಸಿಂಹಪಾಲು. ಕಲಾಂ 1992ರಿಂದ 1999ರವರೆಗೆ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಸಲಹೆಗಾರರಾಗಿ ಹಾಗೂ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಓ)ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ದೇಶ ಪ್ರೋಖ್ರಾನಿನಲ್ಲಿ ಪರಮಾಣು ಬಾಂಬನ್ನು ಪ್ರಯೋಗಾರ್ಥ ಪ್ರಯೋಗಿಸಿದ್ದು ಎಂಬುದು ಗಮನಾರ್ಹ. ಕಲಾಂ ಅವರು ಮದ್ರಾಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಪದವಿ ಪಡೆದವರು. 1931 ಅಕ್ಟೋಬರ್ 15 ಕಲಾಂ ಜನ್ಮದಿನ. ರಾಮೇಶ್ವರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಸಾಮಾನ್ಯ ಅಬ್ದುಲ್ ಕಲಾಂ ಅವರು ಬೆಳೆದುಬಂದ ರೀತಿ ಮಾತ್ರ ಬೆರಗುಹುಟ್ಟಿಸುವಂತಹದು. ಅವರ ಬದುಕು ಎಲ್ಲರಿಗೂ ಆದರ್ಶಪ್ರಾಯ.

2007: ಆಫ್ಘಾನಿಸ್ಥಾನ ಗಡಿಯಲ್ಲಿರುವ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ತಾಲಿಬಾನ್ ಪ್ರಮುಖ ನಾಯಕ ಅಬ್ದುಲ್ಲಾ ಮೆಹ್ಸುದ್ ಎಂಬಾತ ಸೇನಾ ದಾಳಿಯ ಸಂದರ್ಭದಲ್ಲಿ ಬಂಧನವನ್ನು ತಪ್ಪಿಸಿಕೊಳ್ಳಲು ಸ್ವತಃ ಕೈ ಬಾಂಬ್ ಸ್ಫೋಟಿಸಿ ಆತ್ಮಹತ್ಯೆ ಮಾಡಿಕೊಂಡ. ತಾಲಿಬಾನ್ ಪರವಾಗಿ ಹೋರಾಡುತ್ತಿದ್ದ 32 ವರ್ಷದ ಅಬ್ದುಲ್ಲಾ 2003ರಲ್ಲಿ ಗ್ವಾಂಟೆನಾಮೋ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದ. ಈತನನ್ನು 2004 ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ದಕ್ಷಿಣ ವಜೀರಿಸ್ಥಾನದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಈತ, ಚೀನಾದ ಇಬ್ಬರು ಎಂಜಿನಿಯರುಗಳ ಅಪಹರಣಕ್ಕೆ ಕಾರಣನಾಗಿದ್ದ. ಇದಲ್ಲದೆ, ಇತ್ತೀಚೆಗೆ ಪಾಕಿಸ್ಥಾನದ ಪೇಶಾವರ ಮತ್ತು ಹಬ್ ಪಟ್ಟಣಗಳಲ್ಲಿ ಚೀನಿಯರ ಮೇಲೆ ನಡೆದ ದಾಳಿಯಲ್ಲಿ ಈತನ ಕೈವಾಡವಿತ್ತು. ಹೀಗಾಗಿ ಈತನನ್ನು ಹಿಡಿಯಲು ಪಾಕಿಸ್ಥಾನ ಸೇನೆ ಬಲೆ ಬೀಸಿತ್ತು. ಅಬ್ದುಲ್ಲಾ ತಾಲಿಬಾನ್ ಪರ ಅನುಕಂಪ ಹೊಂದಿದ ಜಮಾತ್ ಉಲೆಮಾ ಇಸ್ಲಾಮಿನ ಉನ್ನತ ನಾಯಕ ಶೇಖ್ ಅಯೂಬ್ ಮುತ್ತಖೇಲ್ನನ್ನು ಭೇಟಿಯಾಗಲು ಬಂದಾಗ ಸೇನೆ ಈತನ ಸೆರೆಗಾಗಿ ಬಲೆ ಬೀಸಿತು.

2007: ಭಿಕ್ಷುಕನನ್ನು ಕೊಲೆ ಮಾಡಿ ಆತನ ಅಂಗಾಂಗಗಳನ್ನು ಆಸ್ಪತ್ರೆಯೊಂದಕ್ಕೆ ಮಾರಾಟ ಮಾಡಿದ ಆರೋಪ ಸಾಬೀತಾದ ಕಾರಣ ಚೀನಾದ ಹೈಬೆ ಪ್ರಾಂತ್ಯದ ಉತ್ತರ ಭಾಗದ ಗ್ರಾಮದ ನಿವಾಸಿ ವಾಂಗ್ ಚಾವೊಯಂಗ್ ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಈತ ಕಳೆದ ವರ್ಷ ತಾಂಗ್ ಗೆಫಾಯ್ ಎಂಬ ಭಿಕ್ಷುಕನನ್ನು ಅಪಹರಿಸಿ ಕೊಲೆ ಮಾಡಿದ್ದ ಎಂದು `ಬೀಜಿಂಗ್ ಟೈಮ್ಸ್' ವರದಿ ಮಾಡಿದೆ. 2006ರ ನವೆಂಬರ್ ತಿಂಗಳಲ್ಲಿ ಚಾವೊಯಂಗ್ ನನ್ನು ಬಂಧಿಸಲಾಗಿತ್ತು. ಚಾವೊ ವೈದ್ಯರಿಗೆ ಸುಳ್ಳು ಹೇಳಿ ಭಿಕ್ಷುಕನ ಅಂಗಾಂಗ ಮಾರಾಟ ಮಾಡಿ 2,000 ಡಾಲರ್ ಸಂಪಾದಿಸಿದ್ದ.

2007: ಚೀನಾದ ವೈದ್ಯರು ರೋಗಿಯೊಬ್ಬರ ತಲೆಯಲ್ಲಿ ಬೆಳೆದಿದ್ದ 15 ಕೆಜಿ ತೂಕದ ದುರ್ಮಾಂಸದ ಗಡ್ಡೆಯನ್ನು ಹೊರ ತೆಗೆದು ನೂತನ ದಾಖಲೆ ನಿರ್ಮಿಸಿದರು. 31ರ ವಯಸ್ಸಿನ ಹುಂಗ್ ಚುಂಚಿ ತಲೆಯ ಎಡ ಭಾಗದಲ್ಲಿ ದುರ್ಮಾಂಸ ಬೆಳದ ಪರಿಣಾಮ ಆತನ ಎಡಗಣ್ಣು ಸಂಪೂರ್ಣ ಕಾಣದಂತಾಗಿತ್ತು. ಕೆಳ ದವಡೆಯಿಂದ ಕಿವಿಯ ಭಾಗ ಊದಿಕೊಂಡು ಭುಜದ ಕಡೆ ವಾಲಿಕೊಂಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಚೀನಾ ವೈದ್ಯರು ಸುಮಾರು ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ತಲೆ ಹಾಗೂ ಮುಖದ ಭಾಗದಲ್ಲಿದ್ದ ಗಡ್ಡೆಯನ್ನು ಹೊರ ತೆಗೆದರು. ಸುಮಾರು 30 ವರ್ಷಗಳಿಂದ ಈತ ಈ ಬಾಧೆ ಅನುಭವಿಸುತ್ತಿದ್ದ.

2007: ಬ್ರಿಟಿಷ್ ನ್ಯಾಯಾಲಯವೊಂದು ಹಿಂದೂ ಸಮುದಾಯದ ಪ್ರತಿಭಟನೆಯ ನಡುವೆಯೂ ಕ್ಷಯರೋಗ ತಗುಲಿದ ವೇಲ್ಸ್ನ ಸ್ಕಂದ ವೇಲ್ ದೇವಾಲಯದ ಪವಿತ್ರ `ಶಂಬೊ' ಹೋರಿಯನ್ನು ವಧಿಸಲು ಆದೇಶ ನೀಡಿತು. `ಹೋರಿಯನ್ನು ಸಂಹರಿಸದೆ ಬೇರೆ ಮಾರ್ಗವಿಲ್ಲ' ಎಂದು ನ್ಯಾಯಾಧೀಶ ಮಾಲ್ಕಂ ಪಿಲ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಅಭಿಪ್ರಾಯ ಪಟ್ಟಿತು. ಆದರೆ ನ್ಯಾಯಾಲಯದ ತೀರ್ಪಿನಿಂದ ಪಶುಗಳನ್ನು ಪೂಜಿಸುವ ಹಿಂದೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಸ್ಕಂದ ವೇಲ್ ದೇವಾಲಯದ ಸ್ವಾಮಿ ಸೂರ್ಯಾನಂದ ಪ್ರತಿಕ್ರಿಯಿಸಿದರು.

2006: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಡೆಹ್ರಾಡೂನ್ನ ಆಶ್ರಮದಲ್ಲಿ `ಸ್ವಾಮೀಜಿ' ವೇಷದಲ್ಲಿ ಜೀವಿಸಿ, 1977ರ ಏಪ್ರಿಲ್ 10ರಂದು ನಿಧನರಾದರು ಎಂದು ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿತು. ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಸಂಭಾಷಣೆ, ಛಾಯಾಚಿತ್ರಗಳು ಮತ್ತು ಪತ್ರಗಳ ದಾಖಲೆಯನ್ನು 4 ಮಂದಿ ಸ್ವತಂತ್ರ ಸಂಶೋಧಕರ ಈ ತಂಡ ಡೆಹ್ರಾಡೂನಿನಲ್ಲಿ ಬಿಡುಗಡೆ ಮಾಡಿತು. ಮಾಜಿ ಸಿಬಿಐ ಇನ್ಸ್ಪೆಕ್ಟರ್ ಓಂ ಪ್ರಕಾಶ್ ಶರ್ಮಾ, ಡಿಎವಿ ಕಾಲೇಜು ಪ್ರೊಫೆಸರ್ ದೇವೇಂದ್ರ ಭಾಸಿನ್ ಮತ್ತು ಇತರ ಇಬ್ಬರು ಈ ತಂಡದ ಸದಸ್ಯರು. ಪಶ್ಚಿಮ ಬಂಗಾಳದ ಜಲಪಾಯಿಗುರಿಯಿಂದ 1973ರಲ್ಲಿ ಡೆಹ್ರಾಡೂನ್ಗೆ ಬಂದಿದ್ದ ಈ ಸ್ವಾಮೀಜಿಯ ಚಿತ್ರಗಳಲ್ಲಿ ನೇತಾಜಿ ಹೋಲಿಕೆ ಇದೆ. ಇಂತಹ ಸ್ವಾಮೀಜಿ ಒಬ್ಬರ ಬಗ್ಗೆ ನೇತಾಜಿ ಕಣ್ಮರೆ ಬಗ್ಗೆ ತನಿಖೆ ನಡೆಸಿರುವ ಮುಖರ್ಜಿ ಆಯೋಗವೂ ಪ್ರಸ್ತಾಪಿಸಿದೆ. ಡೆಹ್ರಾಡೂನಿಗೆ ಬರುವ ಮುನ್ನ ಈ ಸ್ವಾಮೀಜಿ ಜಲಪಾಯಿಗುರಿಯ ಶೌಲ್ಮರಿ ಆಶ್ರಮದಲ್ಲಿ ಇದ್ದರು ಎಂದು ಮುಖರ್ಜಿ ಆಯೋಗ ಹೇಳಿತ್ತು. ಈ ಸ್ವಾಮೀಜಿಯ ಅಂತ್ಯಕ್ರಿಯೆ 1977ರ ಏಪ್ರಿಲ್ 13ರಂದು ಹೃಷಿಕೇಶದಲ್ಲಿ ನಡೆದಿತ್ತು. ಸ್ವಾಮೀಜಿಯ ಆಪ್ತ ಕಾರ್ಯದರ್ಶಿಯಾಗಿದ್ದ ರಮಣಿ ರಂಜನ್ ದಾಸ್ ಅವರು ಸ್ವಾಮೀಜಿ ಭಸ್ಮದ ವಿಸರ್ಜನೆ ಕಾಲದಲ್ಲಿ `ನೇತಾಜಿ ನೀವು ನನಗೆ ವಹಿಸಿದ ಕಾರ್ಯ ಪೂರ್ಣಗೊಂಡಿತು' ಎಂದು ಉದ್ಘರಿಸಿದ್ದರು ಎಂದು ಸ್ವಾಮೀಜಿಯ ಅಂತ್ಯಕ್ರಿಯೆ ಕಾಲದಲ್ಲಿ ಹಾಜರಿದ್ದ ಪೊಲೀಸ್ ಇನ್ಸ್ಪೆಕ್ಟರ್ ಇಂದರ್ಪಾಲ್ಸಿಂಗ್ ನೆನಪು ಮಾಡಿಕೊಂಡದ್ದನ್ನೂ ತಂಡ ಉಲ್ಲೇಖಿಸಿದೆ. ಈಗ ಲಭಿಸಿರುವ ಸಾಕ್ಷ್ಯಾಧಾರಗಳ ಬಗ್ಗೆ ಸರ್ಕಾರ ಸಿಬಿಐ ತನಿಖೆ ನಡೆಸಬೇಕು ಎಂದು ಸಂಶೋಧಕರ ತಂಡ ಆಗ್ರಹಿಸಿತು.

2006: ಪೋರ್ಟೊರಿಕೊದ 18ರ ಹರೆಯದ ಜಲೈಕಾ ರಿವೆರಾ ಮೆಂಡೋಜಾ 2006ನೇ ಸಾಲಿನ ಭುವನ ಸುಂದರಿಯಾಗಿ ಆಯ್ಕೆಯಾದರು. ಜಪಾನಿನ ಕುರಾರಾ ಚಿಬಾನಾ ಎರಡನೇ ಸ್ಥಾನ ಗಳಿಸಿದರು.

2006: ಕರ್ನಾಟಕ ವಿಧಾನ ಮಂಡಲವು ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿ ಅಂಕಿತಕ್ಕಾಗಿ ಕಳುಹಿಸಿದ್ದ `ಲಾಭದಾಯಕ ಹುದ್ದೆ'ಗೆ ಸಂಬಂಧಿಸಿದ ಮಸೂದೆಯನ್ನು ರಾಜ್ಯಪಾಲರು ಈ ದಿನ ವಾಪಸ್ ಕಳುಹಿಸಿದರು.

1997: ಮಾಜಿ ಹಂಗಾಮಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಮತ್ತು ಮರಣೋತ್ತರವಾಗಿ ಸ್ವಾತಂತ್ರ್ಯ ಹೋರಾಟಗಾರ್ತಿ ಅರುಣಾ ಅಸಫ್ ಅಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪ್ರಶಸ್ತಿಯನ್ನು ನೀಡಲಾಯಿತು.

1993: ಲೋಕಸಭೆಯ ವಿರೋಧ ಪಕ್ಷ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಆಯ್ಕೆಯಾದರು.

1969: ಗಗನನೌಕೆ ಅಪೋಲೊ-11 ಭೂಮಿಗೆ ವಾಪಸಾಯಿತು.

1932: ರೋಗಿಗಳ ಶುಶ್ರೂಷೆ ಮತ್ತು ಮಾನವೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿತು.

1874: ರಂಗಭೂಮಿ ನಟ, ಪತ್ರಿಕೋದ್ಯಮಿ, ಕರ್ನಾಟಕ ಏಕೀಕರಣಕ್ಕಾಗಿ ದುಡಿದವರಲ್ಲಿ ಪ್ರಮುಖರಾಗಿದ್ದ ಲೇಖಕ ಮುದವೀಡು ಕೃಷ್ಣರಾಯ (24-7-1874ರಿಂದ 7-9-1947) ಅವರು ಹನುಮಂತರಾವ್- ಗಂಗಾಬಾಯಿ ದಂಪತಿಯ ಮಗನಾಗಿ ಬಾಗಲಕೋಟೆಯಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತ, ಸಾಹಿತಿ, ನಾಟಕಕಾರ ರಂಗಭೂಮಿ ನಿರ್ದೇಶಕರಾಗಿ ನಾಡಿಗೆ ಅಪಾರ ಸೇವೆ ಸಲ್ಲಿಸಿದ ಮುದವೀಡು ಅವರನ್ನು 1939ರಲ್ಲಿ ಬೆಳಗಾವಿಯಲ್ಲಿ ನಡೆದ 24ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಜನತೆ ಗೌರವಿಸಿತು. ಆಂಧ್ರಪ್ರದೇಶಕ್ಕೆ ಸೇರಿದ ಮುದವೀಡು ಗ್ರಾಮದಿಂದ ಇವರ ಹಿರಿಯರು ಬಂದದ್ದರಿಂದ ಈ ಕುಟುಂಬಕ್ಕೆ ಮುದವೀಡು ಹೆಸರು ಅಂಟಿಕೊಂಡಿತು.

No comments:

Post a Comment