Thursday, July 12, 2018

ಇಂದಿನ ಇತಿಹಾಸ History Today ಜುಲೈ 12

ಇಂದಿನ ಇತಿಹಾಸ History Today ಜುಲೈ 12

2017: ನವದೆಹಲಿ: ಭಾರತೀಯ ವನಿತಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌  ವಿಶ್ವ ವನಿತಾ ಕ್ರಿಕೆಟ್‌ ರಂಗದ ಸಚಿನ್‌ ತೆಂಡುಲ್ಕರ್‌ ಎನಿಸಿಕೊಳ್ಳುವಂತಹ ಅದ್ಭುತ ಸಾಧನೆಯನ್ನು ಮಾಡಿದರು. ಮಹಿಳೆಯರ ವಿಶ್ವ ಏಕದಿನ ಕ್ರಿಕೆಟ್‌ನಲ್ಲಿ ಈ ವರೆಗಿನ ಗರಿಷ್ಠ ಸ್ಕೋರರ್‌ ಆಗಿದ್ದ ಇಂಗ್ಲಂಡ್‌ನ‌ ಮಾಜಿ ನಾಯಕಿ ಚಾರ್ಲಟ್‌ ಎಡ್‌ವರ್ಡ್ಸ್‌ ಅವರನ್ನು  ಮಿಥಾಲಿ ಹಿಂದಿಕ್ಕಿದರು. ಅದ್ಭುತವಾದ ಸಿಕ್ಸರ್‌ ಬಾರಿಸುವ ಮೂಲಕ ಮಿಥಾಲಿ ವನಿತೆಯರ ಏಕದಿನ ಕ್ರಿಕೆಟ್‌ನಲ್ಲಿ 6,000 ರನ್‌ ಗಳಿಕೆಯ ಟಾಪ್‌ ಸ್ಕೋರರ್‌ ಸಾಧನೆ ಮಾಡಿರುವ ಪ್ರಪ್ರಥಮ ಮಹಿಳೆ ಎನಿಸಿದರು. ಚಾರ್ಲಟ್‌ ಎಡ್ವರ್ಡ್ಸ್‌ ಅವರು 117 ಏಕದಿನ ಪಂದ್ಯಗಳಲ್ಲಿ ಇಂಗ್ಲಂಡ್‌ ತಂಡವನ್ನು ಮುನ್ನಡೆಸುವ ಮೂಲಕ ಗರಿಷ್ಠ ಪಂದ್ಯಗಳ ನಾಯಕಿ ಎಂಬ ವಿಶ್ವ  ದಾಖಲೆಯನ್ನು ಹೊಂದಿದ್ದು, ಮಿಥಾಲಿ ಅವರ 105 ಪಂದ್ಯಗಳನ್ನು ಭಾರತವನ್ನು ಮುನ್ನಡೆಸಿ ಎರಡನೇ ಸ್ಥಾನದಲ್ಲಿದ್ದು ಸದ್ಯದಲ್ಲೇ ಎಡ್ವರ್ಡ್ಸ್‌ ಅವರ ಈ ದಾಖಲೆಯನ್ನು ಕೂಡ ಅಳಿಸಿ ಹಾಕಲಿದ್ದಾರೆ. ಮಿಥಾಲಿ ಅವರು ಐಸಿಸಿ ವನಿತೆಯರ ವಿಶ್ವ ಕಪ್‌ ಕ್ರಿಕೆಟ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಆರು ಬಾರಿಯ ಚಾಂಪ್ಯನ್‌ ಆಸ್ಟ್ರೇಲಿಯವನ್ನು ಎದುರಿಸುವ ಮುನ್ನ 6,000 ರನ್‌ ಗಳಿಕೆ ವಿಶ್ವ ದಾಖಲೆಗೆ ಕೇವಲ 34 ರನ್‌ ಹಿಂದಿದ್ದರು. ಆಗ ಆಕೆಯ ಗಳಿಗೆ 5,959 ರನ್‌ ಆಗಿತ್ತು. ವಿಶ್ವ ವನಿತೆಯರ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ ಗಳಿಕೆಯ ದಾಖಲೆಯನ್ನು ಹೊಂದಿದ್ದ ಇಂಗ್ಲಂಡ್‌ನ‌ ಚಾರ್ಲಟ್‌ ಮಾಡಿರುವ ರನ್‌ 5,992. ಆಸೀಸ್‌ ಎದುರಿನ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ  ಭಾರತೀಯ ವನಿತಾ ತಂಡದ ನಾಯಕಿ ಮಿಥಾಲಿ ಕೇವಲ 11 ರನ್‌ ಗಳಿಸಿದ್ದಾಗಲೇ ಅಂಗಣದಲ್ಲಿದ್ದ ಅಂಪಾಯರ್‌ ಆಕೆ ಎಲ್‌ಬಿಡಬ್ಲ್ಯು ಎಂದು ತೀರ್ಪುಕೊಟಿದ್ದರು. ಆದರೆ ಡಿಆರ್‌ಎಸ್‌ ನಲ್ಲಿ ಆಕೆ ಔಟ್‌ ಅಲ್ಲವೆಂದು ಖಚಿತವಾದಾಗ ಮಿಥಾಲಿ ತನ್ನ ಇನ್ನಿಂಗ್ಸ್‌ ಮುಂದುವರಿಸಿ ಏಕದಿನ ಕ್ರಿಕೆಟ್‌ನಲ್ಲಿ  ಸಾರ್ವಕಾಲಿಕ ವನಿತಾ ಟಾಪ್‌ ಸ್ಕೋರರ್‌ ಎನಿಸಿಕೊಳ್ಳುವ ದಾಖಲೆಯನ್ನು ಮಾಡಿದರು.  1999ರಲ್ಲಿ ತನ್ನ ಹದಿನಾರರ ಹರೆಯದಲ್ಲೇ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಮಿಥಾಲಿ ಮಿಲ್ಟನ್‌ ಕೇನ್ಸ್‌ ನಲ್ಲಿ ನಡೆದಿದ್ದ  ಐರ್ಲೆಂಡ್ ಎದುರಿನ ತನ್ನ ಚೊಚ್ಚಲ ಪಂದ್ಯದಲ್ಲೇ ಚೊಚ್ಚಲ ಶತಕ ಬಾರಿಸಿದ್ದರು. ಅಲ್ಲಿಂದ ಇಲ್ಲಿಯ ತನಕವೂ ತನ್ನ ಬ್ಯಾಟಿಂಗ್‌ ನಿರ್ವಹಣೆಯಲ್ಲಿ ಏಕಪ್ರಕಾರತೆಯನ್ನು ಮಿಥಾಲಿ ಪ್ರದರ್ಶಿಸಿಕೊಂಡು ಬಂದಿದ್ದಾರೆ. 
2017: ಜಮ್ಮು-ಕಾಶ್ಮೀರ: ಅಮರನಾಥ ಯಾತ್ರಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸಿ 7 ಮಂದಿಯನ್ನು ಹತ್ಯೆಗೈದ ಬೆನ್ನಲ್ಲೇ ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಉಗ್ರರು ನಡೆಸಿದ ದಾಳಿಗೆ ಇಬ್ಬರು ಯೋಧರು ಹುತಾತ್ಮರಾದ ಘಟನೆ ಘಟಿಸಿತು. ಸೇನೆಯ ಯೋಧರನ್ನೇ ಗುರಿಯಾಗಿರಿಸಿಕೊಂಡು ಉಗ್ರರು ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿದವು. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹುತಾತ್ಮರಾದರು. ಮತ್ತೊಂದೆಡೆ ಜಮ್ಮು ಕಾಶ್ಮೀರದ ಬದ್ಗಾಮ್ ಪ್ರದೇಶದಲ್ಲಿ ಉಗ್ರರು ಠಿಕಾಣಿ ಹೂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಭದ್ರಾತಾಪಡೆಗಳ ಪ್ರತಿದಾಳಿಗೆ ಮೂವರು ಉಗ್ರರು ಬಲಿಯಾಗಿದ್ದರು.
2017: ಚೆನ್ನೈ: ಜಗತ್ತಿನ ಅತಿ ಹಗುರ ಉಪಗ್ರಹ ನಿರ್ಮಿಸಿದ ವಿದ್ಯಾರ್ಥಿ ರಿಫತ್‌ ಷರೂಕ್‌ ಹಾಗೂ
ಆತನ ತಂಡಕ್ಕೆ ರೂ.10 ಲಕ್ಷ ನಗದು ಬಹುಮಾನ ನೀಡಿ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಶ್ಲಾಘಿಸಿದರು. ತಮಿಳುನಾಡಿನ 18 ವರ್ಷದ ವಿದ್ಯಾರ್ಥಿ ರಿಫತ್‌ ಷರೂಕ್‌  ಹಾಗೂ ಆತನ ತಂಡ ವಿನ್ಯಾಸಗೊಳಿಸಿ ಸಿದ್ಧಪಡಿಸಿದ್ದ 64 ಗ್ರಾಂ ತೂಕದ ಪುಟ್ಟ ಉಪಗ್ರಹವನ್ನು ನಾಸಾ ತನ್ನ ಇತರೆ ಉಪಗ್ರಹಗಳೊಂದಿಗೆ ಜೂನ್‌ 22ರಂದು ಉಡಾವಣೆ ಮಾಡಿತ್ತು. ನಾಸಾ ಮತ್ತು ಐ ಡೂಡಲ್‌ ಲರ್ನಿಂಗ್‌ ಸಂಸ್ಥೆಗಳ ‘ಕ್ಯೂಬ್ಸ್‌ ಇನ್‌ ಸ್ಪೇಸ್‌’ ಸ್ಪರ್ಧೆಯಲ್ಲಿದ್ದ 80 ಸಾವಿರ ಮಾದರಿಗಳ ಪೈಕಿ ರಿಫತ್‌ ಅವರ ‘ಕಲಾಂ ಸ್ಯಾಟ್‌’ ಮೊದಲ ಸ್ಥಾನ ಪಡೆದಿತ್ತು. ರಿಫತ್‌ ಮತ್ತು ಆತನ ತಂಡ ಸಿದ್ಧಪಡಿಸಿದ್ದ 3.8 ಸೆಂ.ಮೀ. ಘನಾಕೃತಿಯ ‘ಕಲಾಂಸ್ಯಾಟ್‌’ ಉಡಾವಣೆಗೊಂಡಿರುವ ಜಗತ್ತಿನ ಅತಿ ಹಗುರ ಉಪಗ್ರಹವೆನಿಸಿದೆ. ತಮಿಳುನಾಡು ಸರ್ಕಾರ ತಂಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗದು ಬಹುಮಾನ ನೀಡಿತು. ಕಲಾಂಸ್ಯಾಟ್‌: 64 ಗ್ರಾಂ ತೂಕದ ಉಪಗ್ರಹವು ನಾಸಾ ಸಂಸ್ಥೆಯ ರಾಕೆಟ್‌ ಮೂಲಕ ಯಶಸ್ವಿಯಾಗಿ ಕಕ್ಷೆ ಸೇರಿತ್ತು. ಕಲಾಂಸ್ಯಾಟ್‌ ಮಿಷನ್‌ ಒಟ್ಟು ಅವಧಿ 240 ನಿಮಿಷಗಳದ್ದಾಗಿತ್ತು. ಉಪಗ್ರಹವು ಅತಿ ಕಡಿಮೆ ಗುರುತ್ವ ವಾತಾವರಣದ ಉಪ–ಕಕ್ಷೆಯಲ್ಲಿ 12 ನಿಮಿಷಗಳ ವರೆಗೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿತ್ತು. ಕಾರ್ಬನ್‌ ಫೈಬರ್‌ 3ಡಿ ಪ್ರಿಂಟ್‌ ಮೂಲಕ ರೂಪಿಸಲಾದ ಉಪಗ್ರಹದ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಪರೀಕ್ಷಿಸುವುದು ಇದರ ಮುಖ್ಯ ಉದ್ದೇಶ ಎಂದು ಪಲ್ಲಪಟ್ಟಿಯ ರಿಫತ್‌ ವಿವರಿಸಿರುವುದಾಗಿ ಟೈಮ್ಸ್‌ ಆಫ್‌ ಇಂಡಿಯಾ ಈ ಹಿಂದೆ ವರದಿ ಮಾಡಿತ್ತು.

2017: ನ
ವದೆಹಲಿ:  ಜಮ್ಮು ಕಾಶ್ಮೀರದಲ್ಲಿ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿ ದಾಳಿ ನಡೆಸಲು ಪಾಕಿಸ್ತಾನ
ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಗೆ ನೆರವು ನೀಡಲು ಮುಂದಾಗಿರುವ ಅಂಶವನ್ನು ಭದ್ರತಾ ಸಂಸ್ಥೆ ಬಹಿರಂಗ ಪಡಿಸಿದೆ ಎಂದು ಸಿ ಎನ್ ಎನ್ ನ್ಯೂಸ್ 18 ವರದಿ ಮಾಡಿತು. ರಾಸಾಯನಿಕ ಯುದ್ಧಕ್ಕೆ (ಕೆಮಿಕಲ್ ವಾರ್)ಗೆ ಪಾಕಿಸ್ತಾನ ಸಿದ್ಧತೆ ನಡೆಸಿರುವ ಕುರಿತು ಹಿಜ್ಜುಲ್ ಮುಜಾಹಿದೀನ್ ಉಗ್ರಗಾಮಿಗಳು ನಡೆಸಿರುವ  ಮಾತುಕತೆಯ ಆಡಿಯೋ ಬಹಿರಂಗವಾಗುವ ಮೂಲಕ ಪಾಕಿಸ್ತಾನದ ಬಣ್ಣ ಮತ್ತೊಮ್ಮ ಬಯಲಾಯಿತು. ಮಾತುಕತೆಯ ಆಡಿಯೋವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿರುವ ನ್ಯೂಸ್ 18 ವರದಿ, ಪಾಕಿಸ್ತಾನ ಉಗ್ರರಿಗೆ ಹೇಗೆ ನೆರವು ನೀಡುತ್ತದೆ ಎಂಬ ಬಗ್ಗೆ ಮತ್ತು ಪಾಕಿಸ್ತಾನದಲ್ಲಿ ಉಗ್ರರ ಚಟುವಟಿಕೆ ಬಗ್ಗೆ ಈ ಆಡಿಯೋ ಬಲವಾದ ಸಾಕ್ಷ್ಯ ಒದಗಿಸಿದೆ ಎಂದು ತಿಳಿಸಿತು. ರಾಸಾಯನಿಕ (ಕೆಮಿಕಲ್) ಶಸ್ತ್ರಾಸ್ತ್ರದ ಮೂಲಕ ದಾಳಿ ನಡೆಸುವುದರಿಂದ ಹೆಚ್ಚಿನ ಸಾವು, ನೋವು ಸಂಭವಿಸಲಿದೆ. ಆದ್ಧರಿಂದ ಕಾಶ್ಮೀರದಲ್ಲಿ ಉಗ್ರರನ್ನು ಹತ್ಯೆಗೈದಿರುವ ಭಾರತೀಯ ಸೇನೆಗೆ ಪಾಠ ಕಲಿಸಲು ರಾಸಾಯನಿಕ ಯುದ್ಧ ನಡೆಸುವುದು ಹೆಚ್ಚು ಸೂಕ್ತ ಎಂಬುದು ಪಾಕಿಸ್ತಾನದ ಇರಾದೆ ಎಂದು ವರದಿ ಹೇಳಿತು. ಪೀರ್ ಸಾಹಿಬ್ (ಲಷ್ಕರ್ ಕಮಾಂಡರ್ ಹಫೀಜ್ ಮುಹಮ್ಮದ್ ಸಯೀದ್)ಗೆ ನಾನು ಬೇಕು. ಆದರೆ ನನ್ನ ಜನರು ನಾನು ವಾಪಸ್ ಬರಬೇಕು ಎನ್ನುತ್ತಿದ್ದಾರೆ. ನಮ್ಮ ಮುಂದಿನ ದಾಳಿ ಈದ್ ನಂತರ... ಎಂಬ ಹಿಜ್ಬುಲ್ ಉಗ್ರರ ಸಂಭಾಷಣೆಯ ತುಣುಕನ್ನು ನ್ಯೂಸ್ 18 ಉಲ್ಲೇಖಿಸಿತು.ಭಾರತೀಯ ಸೇನಾಪಡೆಗೆ ಆಘಾತ ನೀಡಲು ಹಿಜ್ಜುಲ್ ಸಂಘಟನೆಯ ಉಗ್ರರು ಕಾತರದಿಂದ ಕಾಯುತ್ತಿದ್ದಾರೆ.  ಪಾಕಿಸ್ತಾನದಿಂದ ನಮಗೆ ಭರ್ಜರಿ ಬೆಂಬಲವಿದೆ. ಗಡಿಯಲ್ಲಿ ಘಟನೆಗಳು ಸಂಭವಿಸುತ್ತಲೇ ಇದೆ. ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಭಾರತ ವಿರೋಧಿ ಆಟವನ್ನು ಆಡಲಿದೆ ಎಂಬ ಸಂಭಾಷಣೆ ಆಡಿಯೋದಲ್ಲಿ ದಾಖಲಾಗಿದೆ.

2017: ಕೋಲ್ಕತ: ಕೋಮು ಪ್ರಚೋದನೆ ನೀಡುವ ನಕಲಿ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ ಆರೋಪದಲ್ಲಿ ಪಶ್ಚಿಮ ಬಂಗಾಳದ ಬಿಜೆಪಿ ಮಾಹಿತಿ ತಂತ್ರಜ್ಞಾನ (ಐಟಿ) ವಿಭಾಗದ ಕಾರ್ಯದರ್ಶಿ ತರುಣ್‌ ಸೇನ್‌ಗುಪ್ತಾ ಅವರನ್ನು ಅಲ್ಲಿನ ಸಿಐಡಿ ಅಧಿಕಾರಿಗಳು ಬುಧವಾರ ಬಂಧಿಸಿದರು. ಬಂಧಿತರು ಅಸನ್ಸಲ್–ದುರ್ಗಾಪುರ ಕಮಿಷನರೇಟ್‌ನ ಹಿರಾಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ನಿವಾಸಿ ಎಂದು ಸಿಐಡಿ ಮೂಲಗಳು ತಿಳಿಸಿದವು. ಕೋಮು ಪ್ರಚೋದನೆ ನೀಡುವಂಥ ವಿಡಿಯೊವನ್ನು ಕೆಲವು ವಾರಗಳ ಹಿಂದೆಯೇ ತರುಣ್‌ ಸೇನ್‌ಗುಪ್ತಾ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದರು. ‘ನಾರ್ತ್ 24 ಪರಗಣ’ ಜಿಲ್ಲೆಯ ಬಷಿರತ್‌ನ ಬದುರಿಯಾದಲ್ಲಿ ಇತ್ತೀಚೆಗೆ ಸಂಭವಿಸಿದ ಕೋಮು ಗಲಭೆ ವೇಳೆ ಅನೇಕರು ಆ ವಿಡಿಯೊವನ್ನು ಶೇರ್ ಮಾಡಿದ್ದರು. ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿತು ಎನ್ನಲಾಯಿತು.
2008: ಸೌರಶಕ್ತಿ ಬಳಕೆಯಿಂದ ಭಾರತದ 18 ಸಾವಿರ ಹಳ್ಳಿಗಳ ಒಂದು ಲಕ್ಷ ಜನರ ಮನೆಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಿದ್ದ ವಿಶ್ವಸಂಸ್ಥೆಯ ಕಾರ್ಯಕ್ರಮಕ್ಕೆ ಪ್ರತಿಷ್ಠಿತ ವಿಶ್ವಸಂಸ್ಥೆ- 21 ಪ್ರಶಸ್ತಿ ದೊರಕಿತು. ಕಾರ್ಯಕ್ರಮದ ಸಮರ್ಥ ಹಾಗೂ ಪರಿಣಾಮಕಾರಿ ಜಾರಿಯನ್ನು ಪ್ರಶಸ್ತಿಗೆ ಪರಿಗಣಿಸಲಾಯಿತು. ಭಾರತದ ಬ್ಯಾಂಕುಗಳ ಸಹಕಾರದೊಂದಿಗೆ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (ಯುಎನ್ಇಪಿ) 2003ರಲ್ಲಿ ಅನುಷ್ಠಾನಗೊಳಿಸಿದ್ದ ಈ ಯೋಜನೆ ಗ್ರಾಮೀಣ ಪ್ರದೇಶಗಳಲ್ಲಿ ಸೌರಶಕ್ತಿಯ ಗೃಹ ಬಳಕೆಗಾಗಿ ಸಾಲ ವಿತರಿಸುವ ಗುರಿ ಹೊಂದಿತ್ತು.

2008: ಲಂಡನ್ನಿನ ಭಾರತೀಯ ಮೂಲದ ಹೀನಲ್ ರಾಯಚೂರ ಎಂಬ ಯುವತಿ ತನ್ನ 22ನೇ ವಯಸ್ಸಿನಲ್ಲಿಯೇ ವೈದ್ಯಕೀಯ ಪದವಿ ಪಡೆಯುವ ಮೂಲಕ `ಬ್ರಿಟನ್ನಿನ ಅತ್ಯಂತ ಕಿರಿಯ ವೈದ್ಯೆ' ಎಂಬ ಹೆಗ್ಗಳಿಕೆಗೆ ಪಾತ್ರರಾದರು. ನಳಿನ್ ಮತ್ತು ಶೋಭನಾ ರಾಯಚೂರ ದಂಪತಿಯ ಪುತ್ರಿಯಾದ ಈಕೆ ತನ್ನ 16ನೇ ವಯಸ್ಸಿನಲ್ಲೇ ಅಂದರೆ 2002ರಲ್ಲಿ ವೈದ್ಯಕೀಯ ಪದವಿಗೆ ಸೇರಿದ್ದಳು. 6 ವರ್ಷಗಳ ನಂತರ ಲಂಡನ್ನಿನ ಸೇಂಟ್ ಜಾರ್ಜ್ ವಿವಿಯಿಂದ ವೈದಕೀಯ ಪದವಿ ಪಡೆದು ಹೌಸ್ ಸರ್ಜನ್ ಆಗುವತ್ತ ಹೆಜ್ಜೆ ಹಾಕಿದಳು.

2007: ವಿವಾದಾತ್ಮಕ ನಂದಗುಡಿ ಬಹು ಉತ್ಪನ್ನ ವಿಶೇಷ ಆರ್ಥಿಕ ವಲಯಕ್ಕೆ (ಎಸ್ಇಝಡ್) ಕೇಂದ್ರ ವಾಣಿಜ್ಯ ಇಲಾಖೆಯ ಮಂಜೂರಾತಿ ಮಂಡಳಿಯು ತಾತ್ವಿಕ ಒಪ್ಪಿಗೆ ನೀಡಿತು. ಇದರೊಂದಿಗೆ ನಂದಗುಡಿ ಎಸ್ಇಝಡ್ಗೆ ಹಸಿರು ನಿಶಾನೆ ಲಭಿಸಿತು. ಈ ವಿಶೇಷ ಆರ್ಥಿಕ ವಲಯ (ಎಸ್ಇಝಡ್) ಸ್ಥಾಪಿಸಲಿರುವ `ಸ್ಕಿಲ್ ಇನ್ ಫ್ರಾಸ್ಟ್ರಕ್ಚರ್ ಕಂಪೆನಿ'ಯ ಆರ್ಥಿಕ ಕ್ಷಮತೆಯ ಬಗ್ಗೆ ವಿವರಣೆ ಪಡೆದ ನಂತರ ವಾಣಿಜ್ಯ ಇಲಾಖೆ ಕಾರ್ಯದರ್ಶಿ ಜಿ.ಕೆ.ಪಿಳ್ಳೆ ಅಧ್ಯಕ್ಷತೆಯ ಮಂಡಳಿ ಯೋಜನೆಗೆ ತನ್ನ ಒಪ್ಪಿಗೆ ನೀಡಿತು. ಹೊಸಕೋಟೆ ತಾಲ್ಲೂಕಿನ ನಂದಗುಡಿ ಹೋಬಳಿಯ ಸುಮಾರು 5000 ಹೆಕ್ಟೇರ್ ಪ್ರದೇಶದಲ್ಲಿ ಈ ಎಸ್ಇಝಡ್ ತಲೆ ಎತ್ತಲಿದೆ. ರಾಜ್ಯ ಸರ್ಕಾರದ ಜೊತೆಗೂಡಿ ತೈಲ ಮತ್ತು ನೈಸರ್ಗಿಕ ಅನಿಲ ಸಂಸ್ಥೆ (ಒಎನ್ಜಿಸಿ) ಸ್ಥಾಪಿಸುವ ಪೆಟ್ರೋಲ್ ಮತ್ತು ಪೆಟ್ರೋಕೆಮಿಕಲ್ಸ್ ವಿಶೇಷ ಆರ್ಥಿಕ ವಲಯಕ್ಕೂ ಮಂಜೂರಾತಿ ಮಂಡಳಿ ಔಪಚಾರಿಕ ಒಪ್ಪಿಗೆ ನೀಡಿತು. ಮಂಗಳೂರಿನ 588 ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 25 ಸಾವಿರ ಕೋಟಿ ರೂಪಾಯಿ ವೆಚ್ಚದ ಈ ಎಸ್ಇಝಡ್ ನಿರ್ಮಾಣಗೊಳ್ಳುವುದು. ಮಂಗಳೂರಿನ ಗಂಜಿಮಠದಲ್ಲಿ ಕರ್ನಾಟಕ ಕೈಗಾರಿಕಾಭಿವೃದ್ಧಿ ಪ್ರದೇಶದ ಹತ್ತು ಎಕರೆ ಪ್ರದೇಶದಲ್ಲಿ ಕಿನ್ಫೋಟೆಕ್ ಸಂಸ್ಥೆ ಸ್ಥಾಪಿಸಲು ಉದ್ದೇಶಿಸಿದ ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧರಿತ ವಿಶೇಷ ಆರ್ಥಿಕವಲಯ ಸೇರಿದಂತೆ ರಾಜ್ಯದ ಒಟ್ಟು 49 ವಿಶೇಷ ಆರ್ಥಿಕ ವಲಯ ಪ್ರಸ್ತಾವಗಳಲ್ಲಿ 21ಕ್ಕೆ ಔಪಚಾರಿಕ ಮತ್ತು 6ಕ್ಕೆ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿತು.

2007: ಭಾರತ ತಂಡದವರು ಐರ್ಲೆಂಡ್ನ ಬೆಲ್ಫಾಸ್ಟಿನಲ್ಲಿ ಇತ್ತೀಚೆಗೆ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದಿದ್ದ `ಫ್ಯೂಚರ್ಸ್ ಟ್ರೋಫಿ' ನಾಪತ್ತೆಯಾದುದು ಬೆಳಕಿಗೆ ಬಂತು. ಜೊತೆಗೆ ಸಚಿನ್ ತೆಂಡೂಲ್ಕರ್ಗೆ ಲಭಿಸಿದ್ದ `ಪಂದ್ಯ ಶ್ರೇಷ್ಠ' ಟ್ರೋಫಿ, ಯುವರಾಜ್ ಸಿಂಗ್, ಗೌತಮ್ ಗಂಭೀರ್ಗೆ ಸಿಕ್ಕಿದ್ದ `ಪಂದ್ಯ ಪುರುಷೋತ್ತಮ' ಟ್ರೋಫಿಗಳೂ ಕಣ್ಮರೆಯಾದವು. ಗ್ಲಾಸ್ಗೋ-ಲಂಡನ್-ಮುಂಬೈ ಮಾರ್ಗದ ಬ್ರಿಟಿಷ್ ಏರ್ ವೇಸ್ ನಲ್ಲಿ ವಾರದ ಹಿಂದೆಯೇ ಬರಬೇಕಿದ್ದ ಈ ಟ್ರೋಫಿಗಳು ಭಾರತಕ್ಕೆ ಬಾರದೇ ಕಾಣೆಯಾದವು.

2007: ಮಹಾರಾಷ್ಟ್ರ, ಉತ್ತರ ಪ್ರದೇಶದ ಮಾದರಿಯಲ್ಲಿ ರಾಜ್ಯದಲ್ಲೂ ಖಾಸಗಿ ಕೃಷಿ ಕಾಲೇಜು ಸ್ಥಾಪನೆ ಕುರಿತು ತೀರ್ಮಾನ ತೆಗೆದುಕೊಳ್ಳಲು ಗೃಹ ಸಚಿವ ಎಂ.ಪಿ.ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಗೆ ಕರ್ನಾಟಕ ಸಚಿವ ಸಂಪುಟ ಒಪ್ಪಿಗೆ ನೀಡಿತು. ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಖಾಸಗಿ ಕೃಷಿ, ತೋಟಗಾರಿಕೆ, ಪಶುಸಂಗೋಪನಾ ಕಾಲೇಜುಗಳಿವೆ.

2007: ಕೊಲಂಬಸನ 1492ರ ಸಮುದ್ರಯಾನಕ್ಕೂ ಮುನ್ನ 14,000 ವರ್ಷಗಳಷ್ಟು ಹಿಂದೆಯೇ ಅಮೆರಿಕ ಖಂಡದೊಂದಿಗೆ ಐರೋಪ್ಯ ಹಾಗೂ ಪೌರಾತ್ಯ ದೇಶಗಳು ಸಂಬಂಧ ಹೊಂದಿದ್ದವು ಮತ್ತು ವಾಣಿಜ್ಯ ವಹಿವಾಟು ನಡೆಸುತ್ತಿದ್ದವು ಎಂಬುದನ್ನು ಸಾಬೀತು ಪಡಿಸುವ ಉದ್ದೇಶದ ವಿಶಿಷ್ಟ ಸಮುದ್ರಯಾನವೊಂದಕ್ಕೆ ಜರ್ಮನಿಯ ಜೀವವಿಜ್ಞಾನಿ ಡೊಮಿನಿಕ್ ಗೊರ್ಲಿಟಿಜ್ ನೇತೃತ್ವದ ವಿಜ್ಞಾನಿಗಳ ತಂಡವು ಚಾಲನೆ ನೀಡಿತು. ಪುರಾತನ ಈಜಿಪ್ತ್ ಜನ ಸಮುದ್ರಯಾನಕ್ಕೆ ಬಳಸುತ್ತಿದ್ದ ರೀಡ್ ಮರದಿಂದ ಮಾಡಲಾದ ಪ್ರಾಚೀನ ವಿನ್ಯಾಸದ ಹಡಗನ್ನು ಈ ಯಾನಕ್ಕಾಗಿ ಸಿದ್ಧಪಡಿಸಲಾಗಿದ್ದು, ದಕ್ಷಿಣ ಅಮೆರಿಕಾ ಖಂಡದ ಬೊಲಿವಿಯಾದ ಮೂಲ ನಿವಾಸಿಗಳಾದ ಅಯ್ಮಾರಾ ಬುಡಕಟ್ಟು ಜನ ಈ ವಿಶಿಷ್ಟ ಹಡಗನ್ನು ನಿರ್ಮಿಸಿದ್ದಾರೆ. 15 ವರ್ಷಗಳ ಹಿಂದೆ ಈಜಿಪ್ಟಿನ ಫರೋ `ರಾಮ್ಸೆಸ್-2'ನ ಮಮ್ಮಿಯನ್ನು ಶೋಧಕ್ಕೆ ಒಳಪಡಿಸಿದಾಗ ಕೊಕೇನ್ ಹಾಗೂ ನಿಕೋಟಿನ್ ಪತ್ತೆಯಾಗಿತ್ತು. ಈ ಮಾದಕ ದ್ರವ್ಯಗಳು ಹಾಗೂ ಇವುಗಳನ್ನು ಉತ್ಪಾದಿಸುವ ಗಿಡಗಳು ಅಮೆರಿಕ ಖಂಡದಲ್ಲೇ ಹುಟ್ಟಿರುವುದರಿಂದ ಈಜಿಪ್ತ್ತ್ ಹಾಗೂ ಅಮೆರಿಕ ಖಂಡಗಳ ನಡುವೆ 14,000 ವರ್ಷಗಳಷ್ಟು ಹಿಂದೆಯೇ ಸಂಪರ್ಕ ಇರಬೇಕು ಎಂದು ಊಹಿಸಲಾಗಿತ್ತು. ಈ ಅಂಶ ಸಾಬೀತುಪಡಿಸುವುದು ಡೊಮಿನಿಕ್ ಗೊರ್ಲಿಟಿಜ್ ತಂಡದ ವಿಶಿಷ್ಟ ಸಮುದ್ರ ಪರ್ಯಟನೆಯ ಉದ್ದೇಶ.

2007: ಅಸ್ಸಾಮಿನ ಕಾಮರೂಪ ಜಿಲ್ಲೆಯಲ್ಲಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ಅಪಹೃತ ಭಾರತೀಯ ಆಹಾರ ನಿಗಮದ (ಎಫ್ಸಿಐ) ಕಾರ್ಯ ನಿರ್ವಾಹಕ ನಿರ್ದೇಶಕ ಪಿ.ಸಿ. ರಾಮ್ ಮತ್ತು ಇಬ್ಬರು ಉಲ್ಫಾ ಉಗ್ರಗಾಮಿಗಳು ಹತರಾದರು.

2006: ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಐವರು ಆರೋಪಿಗಳನ್ನು ಪಾಕಿಸ್ಥಾನದ ಪೂರ್ವ ಪಂಜಾಬ್ ಪ್ರಾಂತ್ಯದ ಸಿಯಾಲ್ ಕೋಟ್ ಪಟ್ಟಣದ ಜಿಲ್ಲಾ ಕಾರಾಗೃಹದಲ್ಲಿ ನೇಣುಗಂಬಕ್ಕೆ ಏರಿಸಲಾಯಿತು. ಇಲ್ಲಿ ಇಷ್ಟೊಂದು ಆರೋಪಿಗಳನ್ನು ಗಲ್ಲಿಗೇರಿಸಿದ್ದು ಇದೇ ಪ್ರಥಮ. ಅಪರಾಧಿಗಳಾದ ಮುಷ್ತಾಕ್ ಪಾಪು, ಷೆಹಜಾದ್ ಮಸೀಹ್, ಮೊಹಮ್ಮದ್ ಯೂಸುಫ್, ಅಬ್ದುಲ್ ಜಬ್ಬಾರ್ ಹಾಗೂ ಇಫ್ತಿಕಾರ್ ಅಹ್ಮದ್ ಅವರು 1999ರ ಸೆಪ್ಟೆಂಬರಿನಲ್ಲಿ ಸುರೆಯಾ ಬೇಬಿ ಎಂಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಕ್ಕೆ ಒಳಗಾಗಿದ್ದರು.

1946: ಸಾಹಿತಿ ಶ್ರೀಧರರಾಯರು ಹುಟ್ಟಿದ ದಿನ.

1944: ಬಸು ಬೇವಿನ ಗಿಡದ ಜನನ.

1943: ಮೀನಾಕ್ಷಿ ರಾವ್ ಜನನ.

1937: ಸೀತಾಸುತ ಜನನ.

1912: ಜಾನಪದ, ನಾಟಕ, ಕಥೆ, ಕಾದಂಬರಿ ಸೇರಿದಂತೆ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟಗಾರ ಮತಿಘಟ್ಟ ಕೃಷ್ಣಮೂರ್ತಿ ಅವರು ಹಾಸನ ಜಿಲ್ಲೆಯ ಮತಿಘಟ್ಟದಲ್ಲಿ ಈದಿನ ಜನಿಸಿದರು.

1896: ಹೈದರಾಬಾದ್ ವಿಮೋಚನಾ ಪಕ್ಷದ ಜನಕ, ರಾಜಕಾರಣಿ ಡಿ.ಜಿ. ಬಿಂದು ಜನನ.

1864: ಇತಿಹಾಸಕಾರ ವಿಶ್ವನಾಥ ಕಾಶೀನಾಥ ರಾಜವಾಡೆ ಜನನ.

1880: ಕರ್ನಾಟಕ ಕುಲ ಪುರೋಹಿತ ಎಂಬ ಅಭಿದಾನಕ್ಕೆ ಪಾತ್ರರಾಗಿದ್ದ ಸಾಹಿತಿ, ಪತ್ರಿಕೋದ್ಯಮಿ ಆಲೂರು ವೆಂಕಟರಾವ್ ವಿಜಾಪುರದಲ್ಲಿ ಈದಿನ ಜನಿಸಿದರು. ಇವರ ವಂಶದ ಪೂರ್ವಜರು ಧಾರವಾಡದ ಆಲೂರಿಗೆ ಬಂದು ನೆಲೆಸಿದ್ದರಿಂದ ಇವರ ಮನೆತನಕ್ಕೆ ಆಲೂರು ಹೆಸರು ಅಂಟಿಕೊಂಡಿತು. ವಾಗ್ಭೂಷಣ, ಜಯ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಆಲೂರು ಧಾರವಾಡದ ಗ್ರಂಥ ಪ್ರಕಟಣಾ ಮಂದಿರ, ಕರ್ನಾಟಕ ಇತಿಹಾಸ ಮಂಡಳ, ಕರ್ನಾಟಕ ಸಾಹಿತ್ಯ ಪರಿಷತ್ತು, ಕರ್ನಾಟಕ ವಿಶ್ವವಿದ್ಯಾಲಯ ಮುಂತಾದವುಗಳ ಸ್ಥಾಪನೆಗೆ ಶ್ರಮಿಸಿದವರು

No comments:

Post a Comment