Thursday, May 24, 2018

ಇಂದಿನ ಇತಿಹಾಸ History Today ಮೇ 23

ಇಂದಿನ ಇತಿಹಾಸ History Today ಮೇ 23
2018: ಬೆಂಗಳೂರು: ಕರ್ನಾಟಕದ ೨೫ನೇ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ೨ನೇ ಬಾರಿಗೆ ಹಾಗೂ ರಾಜ್ಯದ ಮೊದಲ ದಲಿತ ಉಪಮುಖ್ಯಮಂತ್ರಿಯಾಗಿ ಡಾ. ಜಿ. ಪರಮೇಶ್ವರ್ ಅವರು ವಿಧಾನಸೌಧದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ದೇಶಾದ್ಯಂತದಿಂದ ಆಗಮಿಸಿದ ವಿವಿಧ ರಾಜಕೀಯ ಪಕ್ಷಗಳ ಗಣ್ಯರು ಮತ್ತು ಸಹಸ್ರಾರು ಅಭಿಮಾನಿಗಳ ಎದುರು ಪ್ರಮಾಣವಚನ ಸ್ವೀಕರಿಸಿದರು. ಇದರೊಂದಿಗೆ ರಾಜ್ಯದಲ್ಲಿ ಕುಮಾರ ಸ್ವಾಮಿ ನೇತೃತ್ವದ ಜನತಾದಳ (ಎಸ್)- ಕಾಂಗ್ರೆಸ್ ಚುನಾವಣೋತ್ತರಮೈತ್ರಿ ಯುಗ ಆರಂಭವಾಯಿತು.  ಉಭಯ ನಾಯಕರಿಗೂ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂಜೆ .೩೦ ಗಂಟೆಗೆ ಪ್ರತಿಜ್ಞಾವಿಧಿ ಬೋಧಿಸಿದರು. ಹರದನಹಳ್ಳಿ ದೇವೇಗೌಡ ಕುಮಾರ ಸ್ವಾಮಿ ಅವರು ನೂತನ ಮುಖ್ಯಮಂತ್ರಿಯಾಗಿ ದೇವರು ಮತ್ತು ಕನ್ನಡ ನಾಡಿನ ಜನತೆಯ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದರೆ, ಕೊರಟಗೆರೆ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿ, ದಾಖಲೆಗೆ ಸಹಿಹಾಕಿದ ಬಳಿಕ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತಿಗೆ ರಾಜ್ಯಪಾಲರು ಹೂಗುಚ್ಛ ನೀಡಿ ಅಭಿನಂದಿಸಿದರು.  ಪಂಚೆ, ಶರ್ಟ್ನೊಂದಿಗೆ ಶ್ವೇತವರ್ಣದ ಉಡುಪಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಕುಮಾರಸ್ವಾಮಿ ಅವರು ಬಳಿಕ ತಾಯಿ ಚೆನ್ನಮ್ಮ ಅವರ ಪಾದಕ್ಕೆ ನಮಸ್ಕರಿಸಿ, ಆಶೀರ್ವಾದ ಪಡೆದುಕೊಂಡರು. ರಾಷ್ಟ್ರಗೀತೆಯೊಂದಿಗೆ ಆರಂಭವಾದ ಸಮಾರಂಭ ಕೆಲವೇ ನಿಮಿಷಗಳಲ್ಲಿ ರಾಷ್ಟ್ರಗೀತೆಯೊಂದಿಗೇ ಮುಕ್ತಾಯವಾಯಿತು. ಮೋದಿ ವಿರೋಧಿ ಒಗ್ಗಟ್ಟು: ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹೇಮಂತ್ ಸೊರೇನ್, ಬಿಎಸ್ಪಿ ನಾಯಕಿ ಮಾಯಾವತಿ, ಸಿಪಿಎಂನ ಸೀತಾರಾಮ್ ಯೆಚೂರಿ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪುದುಚೇರಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಆರ ಜೆಡಿಯ ತೇಜಸ್ವಿ ಯಾದವ್, ಶರದ್ ಯಾದವ್, ಗುಲಾಂ ನಬಿ ಆಜಾದ್, ಡಿ.ರಾಜಾ, ಸೇರಿದಂತೆ ಹಲವಾರು ಮಂದಿ ಬಿಜೆಪಿಯೇತರ ನಾಯಕರು ಪಾಲ್ಗೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ಒಗ್ಗಟ್ಟು ಪ್ರದರ್ಶಿಸಿದರು.  ಸಮಾರಂಭಕ್ಕೆ ಆಗಮಿಸಿದ ಸೋನಿಯಾ ಗಾಂಧಿ ಅವರ ಹೆಗಲ ಮೈಲೆ ಕೈಹಾಕಿ, ಹಣೆಹಣೆ ತಗುಲಿಸುವ ಮೂಲಕ ಮಾಯಾವತಿ ಅವರು ಖುಷಿ ವ್ಯಕ್ತ ಪಡಿಸಿದರೆ, ವೇದಿಕೆಗೆ ಬಂದ ಡಿ ಕೆ ಶಿವಕುಮಾರ್ ದೇವೇಗೌಡರ ಕುಶಲ ವಿಚಾರಿಸಿದರು. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರು ಜನರತ್ತ ಕೈ ಬೀಸಿದಾಗ ಜನ ಹರ್ಷೋದ್ಘಾರ ಮಾಡಿದರು.  ಹಿಂದಿನ ಬಾರಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಜೊತೆಗೂಡಿ ಜೆಡಿ(ಎಸ್) - ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಕುಮಾರ ಸ್ವಾಮಿ ಅವರು ರಚಿಸಿದ್ದಾಗ ಸಮಾರಂಭಕ್ಕೆ ಗೈರು ಹಾಜರಾಗಿದ್ದ ಮಾಜಿ ಪ್ರಧಾನಿ, ಜನತಾದಳ ಮುಖ್ಯಸ್ಥ ಎಚ್.ಡಿ. ದೇವೇಗೌಡ ಅವರು ಬಾರಿ ಮಗನ ಪಟ್ಟಾಭಿಷೇಕ ಸಮಾರಂಭದಲ್ಲಿ ಪತ್ನಿ ಚೆನ್ನಮ್ಮ ಸೇರಿದಂತೆ ಕುಟುಂಬ ಸದಸ್ಯರ ಜೊತೆಗೆ ಸಡಗರದೊಂದಿಗೆ ಪಾಲ್ಗೊಂಡಿದ್ದರು.  ಬಿಜೆಪಿ ಶಾಸಕರು ಗೈರು: ಕಾಂಗ್ರೆಸ್, ಜೆಡಿಎಸ್ ಮೈತ್ರಿಕೂಟದ ಮುಖ್ಯಮಂತ್ರಿಯಾಗಿ ಎಚ್ ಡಿ ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿಯಾಗಿ ಡಾ.ಜಿ.ಪರಮೇಶ್ವರ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬಿಜೆಪಿ ಶಾಸಕರು ಗೈರು ಹಾಜರಾಗಿದ್ದರು. ಮುಂಜಾನೆಯಿಂದಲೂ ಮಳೆ: ಮುಂಜಾನೆಯಿಂದಲೂ ನಗರದಲ್ಲಿ ಮಳೆ ಸುರಿಯುತ್ತಲೇ ಇತ್ತು. ನೆಚ್ಚಿನ ನಾಯಕನ ಅಧಿಕಾರ ಸ್ವೀಕಾರ ಸನ್ನಿವೇಶವನ್ನು ಕಣ್ತುಂಬಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಲಕ್ಷಾಂತರ ಜನರಿಗೆ ಮಳೆಹನಿಗಳ ಸಿಂಚನವೂ ಉತ್ಸಾಹ ಹೆಚ್ಚಿಸಿತು.  ಜೆ.ಪಿ.ನಗರದಿಂದ ವಿಧಾನಸೌಧದತ್ತ ಹೊರಟ ಕುಮಾರಸ್ವಾಮಿ ಮಳೆಯನ್ನು ಸ್ವಾಗತಿಸಿದರು.ದೇವರ ಆಶೀರ್ವಾದ ನಮಗಿದೆ. ನಾಡಿನಲ್ಲಿ ಮುಂದೆ ಒಳ್ಳೆಯದು ಆಗಲಿದೆ ಎಂಬುದರ ಸೂಚಕ ಇದು ಎಂದು ಖುಷಿ ವ್ಯಕ್ತಿ ಪಡಿಸುತ್ತಲೇ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಜೊತೆಗೂಡಿ ಕಾರು ಹತ್ತಿದರು. ದೇವೇಗೌಡರು ಪತ್ನಿ ಚೆನ್ನಮ್ಮ ಮತ್ತು ಕುಟುಂಬದ ಇತರ ಸದಸ್ಯರ ಜೊತೆಗೂಡಿ ವಿಧಾನಸೌಧಕ್ಕೆ ಬಂದರು. ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ನಗುನಗುತ್ತಾ ದೇವೇಗೌಡರನ್ನು ಎದುರುಗೊಂಡು ಮಾತನಾಡಿದರು.  ತಮ್ಮತಮ್ಮ ರಾಜ್ಯಗಳಲ್ಲಿ ಬದ್ಧ ವೈರಿಗಳಾಗಿರುವ ಅನೇಕ ನಾಯಕರು ವಿಧಾನಸೌಧದ ಎದುರು ಪರಸ್ಪರ ಕೈಕುಲುಕಿ ಬಿಜೆಪಿ ವಿರುದ್ಧದಮಹಾಮೈತ್ರಿಯ ಸೂಚನೆ ನೀಡಿದರು. ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಅಧಿಕಾರ ಸೂತ್ರ ಕೈಗೆತ್ತಿಗೊಳ್ಳುವ ಸಂಭ್ರಮಕ್ಕೆ ದೇಶದ ತೃತೀಯ ರಂಗ ಸಾಕ್ಷಿಯಾಯಿತು. ಮಧ್ಯಾಹ್ನದಿಂದಲೇ ಮೆಟ್ರೊ ರೈಲುಗಳು ತುಂಬಿ ತುಳುಕುತ್ತಿದ್ದವು. ಸಮಾರಂಭ ಮುಗಿದ ನಂತರ ಅಭಿಮಾನಿಗಳು ನೆಚ್ಚಿನ ನಾಯಕನ ಫ್ಲೆಕ್ಸ್ಗಳನ್ನು ಖುಷಿಯಿಂದ ಹೊತ್ತುಕೊಂಡು ಹೊರಟರು.  ಡಿಕೆಶಿ ಸಹೋದರರ ಆಕ್ರೋಶ:  ಇದಕ್ಕೆ ಮುನ್ನಕೆಲಸ ಮಾಡಲು ಮಾತ್ರ ನಾವು ಬೇಕು, ಅಧಿಕಾರ ಬೇರೆಯವರು ಅನುಭವಿಸಬೇಕಾ?’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಡಿಕೆ ಶಿವಕುಮಾರ್ ಸಹೋದರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಘಟಿಸಿ, ಅವರ ಮನವೊಲಿಕೆಗೆ ತೀವ್ರ ಕಸರತ್ತು ನಡೆಯಿತು ಎಂದು ಮಾಧ್ಯಮ ವರದಿಗಳೂ ತಿಳಿಸಿದ್ದವು.  ಆಕ್ರೋಶಗೊಂಡ ಡಿಕೆಶಿ  ಸಹೋದರರು ಹಿಲ್ಟನ್ ಹೋಟೆಲ್ ನಿಂದ ಜಾಗ ಖಾಲಿ ಮಾಡಿದ್ದಾರೆ, ಯಾರ ದೂರವಾಣಿ ಕರೆಯನ್ನೂ ಸ್ವೀಕರಿಸುತ್ತಿಲ್ಲ ಎಂದು ವರದಿ ತಿಳಿಸಿತ್ತು.  ಪರಮೇಶ್ವರ್ ಹಾಗೂ ಕೆಸಿ ವೇಣುಗೋಪಾಲ್ ಅವರು ಡಿಕೆ ಶಿವಕುಮಾರ್ ಅವರನ್ನು ಸಂಪರ್ಕಿಸಲು ಯತ್ನಿಸಿದರೂ, ಅದು ಸಾಧ್ಯವಾಗಿಲ್ಲ ಎಂದೂ, ತಮಗೆ ಉಪಮುಖ್ಯಮಂತ್ರಿ ಹುದ್ದೆ ಬೇಕೇ, ಬೇಕು ಎಂದೂ ಡಿಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ ಎಂದೂ ವರದಿ ಹೇಳಿತ್ತು.   ಹಿಲ್ಟನ್ ಹೋಟೆಲ್ ಬಳಿ ಆಗಮಿಸಿದ್ದ ಶಿವಕುಮಾರ್ ಅವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ನಾನು ಯಾವ ಹುದ್ದೆ ಬೇಕೆಂದು ಅರ್ಜಿ ಹಾಕಿಲ್ಲ. ಕೆಪಿಸಿಸಿ ಅಧ್ಯಕ್ಷಗಾದಿ ಆಕಾಂಕ್ಷಿಯೂ ಅಲ್ಲ. ನನಗೆ ಸದ್ಯ ಕ್ಷೇತ್ರದ ಶಾಸಕನಾಗಿರಲು ಹೇಳಿದ್ದಾರೆ. ನಾನು ನನ್ನ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದೇನೆ ಎಂದು ಹೇಳಿದ್ದರು. ’ಎಲ್ಲದಕ್ಕೂ ಹಣೆಯಲ್ಲಿ ಬರೆದಿರಬೇಕು, ಹಣೆಬರಹದ ಮುಂದೆ ಯಾರ್ ಏನ್ ಮಾಡಿದ್ರೂ ನಡೆಯಲ್ಲ. ನಾನು ಚೆಂಡು ಆಡಲ್ಲ, ಚೆಸ್ ಗೇಮ್ ಆಡುವವನು ಎಂದು ಪ್ರತಿಕ್ರಿಯೆ ನೀಡಿದ್ದರು ಎಂದೂ ವರದಿ ತಿಳಿಸಿತ್ತು.

2018: ಶ್ರೀನಗರ: ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ  ಸತತ ಮೂರನೇ ದಿನ ಗಡಿಯಾಚೆಯಿಂದ ನಡೆದ ಗುಂಡಿನ ದಾಳಿ ಮತ್ತು ಶೆಲ್ ದಾಳಿಗೆ ವರ್ಷದ ಮಗು ಸೇರಿ ಮತ್ತು ಮಹಿಳೆ ಸೇರಿ ನಾಲ್ವರು ನಾಗರಿಕರು ಸಾವನ್ನಪ್ಪಿದ್ದು ಇತರ ೩೦ ಮಂದಿ ಗಾಯಗೊಂಡಿದ್ದಾರೆ. ಕಾಶ್ಮೀರ ಕಣಿವೆಯ ಅನಂತನಾಗ್ ಜಿಲ್ಲೆಯಲ್ಲಿ ಗ್ರೇನೇಡ್ ಸ್ಫೋಟದಿಂದ ಕೂಡಾ ೧೦ ನಾಗರಿಕರು ಗಾಯಗೊಂಡರು.   ‘ಜಮ್ಮು ಅಂತಾರಾಷ್ಟ್ರೀಯ ಗಡಿಯಲ್ಲಿ ಗಡಿಯಾಚೆಯಿಂದ ರಾತ್ರಿ ಸಣ್ಣ ಫಿರಂಗಿಗಳಿಂದ ನಡೆದ ಶೆಲ್ ಮತ್ತು ಗುಂಡಿನ ದಾಳಿಯಲ್ಲಿ ನಾಲ್ಕು ಸಾವುಗಳು ಸಂಭವಿಸಿದ್ದು ೩೦ ಮಂದಿ ಗಾಯಗೊಂಡಿದ್ದಾರೆ. ಕಥುವಾದಿಂದ ಅಖ್ನೂರ್ವರೆಗಿನ ಜಿಲ್ಲೆಗಳಲ್ಲಿ ದಾಳಿ ನಡೆದಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೈದ್ ಹೇಳಿದರು.  ಮೃತರಲ್ಲಿ ವರ್ಷದ ಬಾಲಕ ಮತ್ತು ಒಬ್ಬ ಮಹಿಳೆಯೂ ಸೇರಿದ್ದರು. ನಸುಕಿನ ಗಂಟೆ ಸುಮಾರಿಗೆ ಪಾಕ್ ಪಡೆಗಳಿಂದ ಶೆಲ್ ಮತ್ತು ಗುಂಡಿನ ದಾಳಿ ಆರಂಭವಾಯಿತು. ದಾಳಿ ಘಟನೆಯಲ್ಲಿ ಐವರು ಬಿಎಸ್ ಎಫ್ ಸಿಬ್ಬಂದಿ ಕೂಡಾ ಗಾಯಗೊಂಡರು.  ‘ಪಾಕಿಸ್ತಾನಿ ರೇಂಜರುಗಳು ಜಮ್ಮು, ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿನ ಆರ್ ಎಸ್ ಪುರ, ಅರ್ನಿಯಾ, ರಾಮಗಢ, ಸಾಂಬಾ ಮತ್ತು ಹೀರಾನಗರ ವಿಭಾಗಗಳಲ್ಲಿ ಭಾರಿ ಶೆಲ್ ದಾಳಿ ನಡೆಸಿದರು. ಬಿಎಸ್ ಎಫ್ ಪ್ರತಿದಾಳಿ ನಡೆಸಿ ಗಡಿಯಾಚೆಯ ಪಾಕಿಸ್ತಾನಿ ಪಡೆಗಳಿಗೆ ಭಾರಿ ಹಾನಿ ಉಂಟು ಮಾಡಿತು ಎಂದು ಅಧಿಕಾರಿಗಳು ಹೇಳಿದರು.  ಕಳೆದ ಒಂದು ವಾರದಲ್ಲಿ ಪಾಕಿಸ್ತಾನದಲ್ಲಿ ಹೊಸದಾಗಿ ಕದನ ವಿರಾಮ ಉಲ್ಲಂಘನೆಯಾದ ಬಳಿಕ ಇಬ್ಬರು ಬಿಎಸ್ ಎಫ್ ಸಿಬ್ಬಂದಿ ಸೇರಿದಂತೆ ಸಾವಿನ ಸಂಖ್ಯೆ ೧೦ಕ್ಕೆ ಏರಿದೆ. ಅನಂತನಾಗ್ ಜಿಲ್ಲೆಯ ಬಿಜ್ ಬೆಹರಾ ಪ್ರದೇಶದಲ್ಲಿ ಶಂಕಿತ ಉಗ್ರಗಾಮಿಗಳು ಗ್ರೆನೇಡ್ ಸ್ಫೋಟಿಸಿದ್ದರಿಂದ ಕನಿಷ್ಠ ೧೦ ನಾಗರಿಕರು ಗಾಯಗೊಂಡಿದ್ದಾರೆ ಎಂದು ಮೂಲಗಳು ಹೇಳಿದವು. ಬಿಜ್ ಬೆಹರಾದ ಗೋರಿವಾನ್ ಚೌಕದಲ್ಲಿ ಗ್ರೆನೇಡ್ ದಾಳಿ ನಡೆಯಿತು. ಪರಿಣಾಮವಾಗಿ ೧೦ ನಾಗರಿಕರು ಗಾಯಗೊಂಡರು. ಗಾಯಾಳುಗಳಲ್ಲಿ ೧೨ ವರ್ಷದ ಒಬ್ಬ ಬಾಲಕ ಕೂಡಾ ಸೇರಿದ್ದಾನೆ. ನಾಲ್ವರು ಗಾಯಾಳುಗಳನ್ನು ಶ್ರೀನಗರ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ವಕ್ತಾರರು ಹೇಳಿದರು. ಘಟನೆ ಬಳಿಕ ಪ್ರದೇಶದವನ್ನು ಭದ್ರತಾ ಪಡೆಗಳು ಸುತ್ತುವರಿದವು.
2018: ನವದೆಹಲಿ: ಭಾರತೀಯ ವಾಯು ಪಡೆಯ ಚೀತಾ ಹೆಲಿಕಾಪ್ಟರ್ ಜಮ್ಮು ಕಾಶ್ಮೀರದ ನಾಥಾ ತುದಿಯಲ್ಲಿ  ಪತನಗೊಂಡಿತು. ಐಎಎಫ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಸುದ್ದಿ ಸಂಸ್ಥೆಯು, ಹೆಲಿಕಾಪ್ಟರ್ ಒಳಗಿದ್ದ ಎಲ್ಲ ಚಾಲಕ ಸಿಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ; ಆದರೆ ದುರ್ಘಟನೆಯ ನಿಖರ ಕಾರಣ ಪತ್ತೆಯಾಗಿಲ್ಲ ಎಂದು ತಿಳಿಸಿತು. ಕಳೆದ ಏಪ್ರಿಲ್ ೩ರಂದು ಪ್ರಬಲ ಬಿರುಗಾಳಿಯ ಪ್ರತಿಕೂಲ ಸನ್ನಿವೇಶದಲ್ಲಿ ಇಳಿಯಲು ಯತ್ನಿಸಿದ್ದ ಐಎಎಫ್ ಸರಕು ಸಾಗಣೆ ಹೆಲಿಕಾಪ್ಟರ್ ಕೇದಾರನಾಥ ದೇವಾಲಯದ ಸಮೀಪ ಪತನಗೊಂಡಿತ್ತು. ಅದಾಗಿ ಎರಡೇ ತಿಂಗಳಲ್ಲಿ ದುರಂತ ಸಂಭವಿಸಿತು. ನಾಥಾ ತುದಿಯಲ್ಲಿ ಈದಿನ ಪತನಗೊಂಡ ಎಂಐ ೧೭ ಹೆಲಿಕಾಪ್ಟರ್ ಭಾರತೀಯ ಸೇನೆಗೆ ಆಹಾರ ಸಾಮಗ್ರಿಗಳನ್ನು ಒಯ್ಯುತ್ತಿತ್ತು. ಹೆಲಿಕಾಪ್ಟರ್ ಇಳಿಯುತ್ತಿದ್ದಂತೆಯೇ ಅದು ಕಬ್ಬಿಣದ ಗರ್ಡರ್ಗೆ ಢಿಕ್ಕಿ ಹೊಡೆಯಿತು. ಪರಿಣಾಮವಾಗಿ ಹೆಲಿಕಾಪ್ಟರ್ ಒಳಗಿದ್ದ ಆರು ಮಂದಿಗೆ ಗಾಯಗಳಾದವು ಎಂದು ವರದಿಗಳು ಹೇಳಿದವು.

 2018: ಚೆನ್ನೈ: ವೇದಾಂತ ಸಮೂಹದ ಸ್ಟೆರ್ಲೈಟ್ ತಾಮ್ರ ಘಟಕದ ವಿರುದ್ಧ ದಕ್ಷಿಣ ತಮಿಳುನಾಡಿನ ತೂತುಕುಡಿ ಬಂದರು ಪಟ್ಟಣದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ ವೇಳೆ ನಡೆದ ಪೊಲೀಸ್ ಗೋಲಿಬಾರಿಗೆ ಕಾಳಿಯಪ್ಪನ್ ಹೆಸರಿನ ಯುವಕನೊಬ್ಬ ಬಲಿಯಾಗಿ, ಇತರ ಇಬ್ಬರು ಗಾಯಗೊಂಡರು. ಹಿಂದಿನ ದಿನ ಸ್ಟೆರ್ ಲೈಟ್ ತಾಮ್ರ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರ, ಪೊಲೀಸ್ ಗೋಲಿಬಾರಿಗೆ ೧೭ ವರ್ಷದ ಬಾಲಕಿ ಸೇರಿ ೧೧ ಜನ ಬಲಿಯಾಗಿದ್ದರು. ಈದಿನ
ಅಣ್ಣಾನಗರದ ೬ನೇ ರಸ್ತೆಯಲ್ಲಿ ಕಲ್ಲುತೂರಾಟ ನಡೆಸುತ್ತಿದ್ದ ಉದ್ರಿಕ್ತ ಗುಂಪೊಂದನ್ನು ಪೊಲೀಸರು ಅಟ್ಟಿಸಿಕೊಂಡು ಹೋದರು. ಗುಂಪು ಪೊಲೀಸರ ಮೇಲಿನ ದಾಳಿಯನ್ನು ತೀವ್ರಗೊಳಿಸಿದಾಗ ಪೊಲೀಸರು ಗುಂಡು ಹಾರಿಸಿದರು. ನಾಲ್ವರು ಪ್ರತಿಭಟನಕಾರರಿಗೆ ಗುಂಡೇಟಿನ ಗಾಯಗಳಾದವು. ಗಾಯಗೊಂಡ ಕಾಳಿಯಪ್ಪನ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ವೈದ್ಯರು ಅಲ್ಲಿ ಅವರು ಮೃತರಾಗಿದ್ದಾರೆ ಎಂದು ದೃಢ ಪಡಿಸಿದರು. ಗಾಯಾಳುಗಳಿಗೆ ಚಿಕಿತ್ಸೆ ಒದಗಿಸಲಾಗಿದೆ ಎಂದು ಪೊಲೀಸರು ಹೇಳಿದರು. ಪೊಲೀಸ್ ವಾಹನಕ್ಕೆ ಬೆಂಕಿ: ಇದಕ್ಕೆ ಮುನ್ನ ಉದ್ರಿಕ್ತ ಗುಂಪು ಬ್ರೆಯಂಟ್ ನಗರದಲ್ಲಿ ಎರಡು ಪೊಲೀಸ್ ಬಸ್ಸುಗಳಿಗೆ ಬೆಂಕಿ ಹಚ್ಚಿತು. ಅವುಗಳಲ್ಲಿ ಒಂದು ಬಸ್ಸನ್ನು ರಕ್ಷಿಸಲಾಯಿತು ಆದರೆ, ಇನ್ನೊಂದು ಬಸ್ಸು ಸಂಂಪೂರ್ಣ ಭಸ್ಮವಾಯಿತು ಎಂದು ಅವರು ನುಡಿದರು. ಆಸ್ಪತ್ರೆಗೆ ಧುರೀಣರು: ಹಿಂಸೆ ಹಾಗೂ ಗೋಲಿಬಾರ್ ಸಂದರ್ಭದಲ್ಲಿ ಗಾಯಗೊಂಡಿದ್ದ ವ್ಯಕ್ತಿಗಳು ಚಿಕತ್ಸೆ ಪಡೆಯುತ್ತಿರುವ ಸರ್ಕಾರಿ ಆಸ್ಪತ್ರೆಗೆ ದ್ರಾಮಿಡ ಮುನ್ನೇತ್ರ ಕಳಗಂ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್, ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಎಸ್. ತಿರುನಾವುಕ್ಕರಸು, ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ ನಾಯಕ ವೈಕೋ, ವಿದ್ಯುತಲೈ ಸಿರುಥೈಗಲ್ ಕಚ್ಚಿ ಸ್ಥಾಪಕ ಥೊಲ್. ತಿರುಮಾವಲನ್ ಮತ್ತು ಮಕ್ಕಳ್ ನೀಧಿ ಮಯ್ಯಮ್  ಸ್ಥಾಪಕ ಕಮಲಹಾಸನ್ ಮತ್ತಿತರರು ಭೇಟಿ ನೀಡಿದರು. ಇದಕ್ಕೂ ಮುನ್ನ ಚಿದಂಬರಂ ನಗರದಲ್ಲಿನ ಸ್ಟೆರ್ಲೈಟ್ ಘಟಕವನ್ನು ಮುಚ್ಚಬೇಕು ಎಂದು ಒತ್ತಾಯಿಸಿ ಸರದಿ ನಿರಶನ ಆರಂಭಿಸಿದ್ದ ಮಾರ್ಕ್ಸ್ವಾದಿ ಕಮ್ಯೂನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕೆ. ಬಾಲಕೃಷ್ಣನ್ ಮತ್ತು ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ತೂತುಕುಡಿಯಲ್ಲಿನ ವೇದಾಂತ ಕಂಪೆನಿಯ ಸ್ಟರ್ಲೈಟ್ ಕೈಗಾರಿಕಾ ಘಟಕವನ್ನು ಪರಿಸರ ಸಂರಕ್ಷಣೆಗಾಗಿ ಮುಚ್ಚಬೇಕೆಂದು ಆಗ್ರಹಿಸಿದ ಕಳೆದ ಮೂರು ತಿಂಗಳಿಂದ ಪ್ರತಿಭಟನೆಗಳು ನಡೆಯುತ್ತಿದ್ದವು. ಹಿಂದಿನ ದಿನ ಪ್ರತಿಭಟನಕಾರರ ಮೇಲೆ ಸೆಲ್ಫ್ ಲೋಡಿಂಗ್ ಅಸಾಲ್ಟ್ ರೈಫಲ್ ಬಳಸಿಕೊಂಡು ಗುಂಡು ಹಾರಿಸಿ ೧೧ ಜೀವಗಳನ್ನು ಬಲಿ ಪಡೆದುದಕ್ಕೆ ವ್ಯಾಪಕ ಟೀಕೆ, ಖಂಡನೆ ವ್ಯಕ್ತವಾಗಿತ್ತು. ನಡುವೆ ಮಧುರೆಯಲ್ಲಿನ ಮದ್ರಾಸ್ ಹೈಕೋರ್ಟ್ ಪೀಠವು ತೂತುಕುಡಿಯಲ್ಲಿ ಸ್ಟರ್ಲೈಟ್ ತಾಮ್ರ ಘಟಕದ ವಿಸ್ತರಣೆಗೆ ತಡೆಯಾಜ್ಞೆ ನೀಡಿತು.

2018: ಬೆಂಗಳೂರು: ರೈತರ ಸಾಲವನ್ನು ಯಾವ ರೀತಿ ಮನ್ನಾ ಮಾಡಬೇಕು ಎಂಬ ಬಗ್ಗೆ ಈಗಾಗಲೇ ಬ್ಲೂಪ್ರಿಂಟ್ ಸಿದ್ಧವಾಗಿದೆ. ಇದರ ಕ್ರೆಡಿಟ್ ಕಾಂಗ್ರೆಸ್ಸಿಗೂ ಸಿಗಲಿದೆ ಎಂದು ನೂತನ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಇಲ್ಲಿ ಹೇಳಿದರು. ವಿಧಾನಸೌಧದ ಮುಂಭಾಗದಲ್ಲಿ ರಾಜ್ಯದ ೨೫ನೇ ಮುಖ್ಯಮಂತ್ರಿಯಾಗಿ, ಮತ್ತು ಡಾ. ಜಿ. ಪರಮೇಶ್ವರ್ ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಸ್ವಾಮಿರಾಜ್ಯದ ಆರೂವರೆ ಕೋಟಿ ಜನರನ್ನು ರಕ್ಷಿಸುವ ಸ್ಥಾನದಲ್ಲಿ ನಾನಿದ್ದೇನೆ. ನಾನು ಈಗಸಾಂದರ್ಭಿಕ ಶಿಶು ಎಂದು ನುಡಿದರು. ‘ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ದೊರೆತು, ನಾನು ಅಧಿಕಾರಕ್ಕೆ ಬಂದ ೨೪ ಗಂಟೆಗಳಲ್ಲಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಜನರಿಗೆ ಭರವಸೆ ನೀಡಿದ್ದೆ. ಆದರೆ ಸಮಿಶ್ರ ಸರ್ಕಾರ ರಚಿಸಿರುವುದರಿಂದ ಎಲ್ಲರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಅವರು ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದ್ದಾರೆ ಎಂದು ಅವರು ಹೇಳಿದರು. ‘ನಾನು ಜಾತಿ ಹಿಡಿದುಕೊಂಡು ರಾಜಕಾರಣ ಮಾಡುವುದಿಲ್ಲ. ಎಲ್ಲಾ ಸಮಾಜದವರು ಶಾಂತಿಯಿಂದ ಸಮಾಜದಲ್ಲಿ ಬದುಕುವಂತಾಗಬೇಕು. ರಾಜ್ಯ ರಸಋಷಿ ಕುವೆಂಪು ಅವರ ಕವನವಾದ ಸರ್ವ ಜನಾಂಗದ ತೋಟವಾಗಬೇಕು ಎಂಬ ಆಶಯ ನಮ್ಮದು ಎಂದು ಅವರು ನುಡಿದರು. ತಮ್ಮ ನಾಯಕತ್ವದ ಸರ್ಕಾರದ ಈದಿನ ಅಸ್ತಿತ್ವಕ್ಕೆ ಬಂದಿದೆ. ಸರ್ಕಾರ ಉಳಿಯುತ್ತದೆಯೇ ಎಂಬ ಬಗ್ಗೆ ಅನುಮಾನ ಬೇಡ. ಇದು ಸುಭದ್ರ ಸರ್ಕಾರವಾಗಿ ಇರಲಿದೆ. ದೇಶದ ಹಿತ ಕಾಪಾಡುವ ಸಲುವಾಗಿ ಸಮ್ಮಿಶ್ರ ಸರ್ಕಾರ ರಚಿಸಬೇಕಾಗಿ ಬಂತು ಎಂದು ಅವರು ನುಡಿದರು. ಹಿತೈಷಿಗಳು, ನಾಡಿನ ಜನರ ಭರವಸೆಯನ್ನು ಹುಸಿಗೊಳಿಸುವುದಿಲ್ಲ, ಹಿಂದಿನ ಸರ್ಕಾರಗಳ ಉತ್ತಮ ಯೋಜನೆಗಳನ್ನು ಮುಂದುವರೆಸಲಾಗುವುದು ಎಂದು ಅವರು ಹೇಳಿದರು.  ಪರಸ್ಪರ ವಿಶ್ವಾಸಕ್ಕೆ ಕೊರತೆಯಾಗದಂತೆ ಆಡಳಿತ ನಡೆಯುವುದೇ ಎಂಬ ನಿಮ್ಮ ಅನುಮಾನವನ್ನು ನನ್ನ ನಡವಳಿಕೆ ಮೂಡಲಕ ಪರಿಸುವೆ ಎಂದು ಮುಖ್ಯಮಂತ್ರಿ ನುಡಿದರು.  ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಗ್ಗೆ ಬಿಜೆಪಿ ಮಿತ್ರರು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೈತಿಕತೆ, ಅನೈತಿಕತೆ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ. ಈಗ ಯಾರು ನೈತಿಕವಾಗಿ ಉಳಿದಿದ್ದಾರೆ ಎಂದು ನಾವು ಕೇಳಿಕೊಳ್ಳಬೇಕಾಗುತ್ತದೆ. ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಲು ಅವಕಾಶ ಮಾಡಿಕೊಟ್ಟಿದ್ದು ನಾನು. ಹಾಗೆಯೇ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಿದವನೂ ನಾನೇ ಎಂದು ನೆನಪಿಸಿದರು.  ಅವೆಲ್ಲ ನಡೆದು ೧೨ ವರ್ಷಗಳು ಕಳೆದು ಹೋಗಿದೆ. ಈದಿನದ ಸಮಾರಂಭಕ್ಕೆ ಘಟಾನುಘಟಿ ನಾಯಕರು ಆಗಮಿಸಿದ್ದಾರೆ. ಇದು ರಾಜ್ಯ ರಾಜಕೀಯದ ಇತಿಹಾಸದಲ್ಲಿಯೇ ಪ್ರಥಮ. ಹೀಗಾಗಿ ನಾನೀಗ ಬದಲಾದ ರಾಜಕೀಯ ಪರಿಸ್ಥಿತಿಯಸಾಂದರ್ಭಿಕ ಶಿಶು ಎಂದು ಕುಮಾರ ಸ್ವಾಮಿ ಹೇಳಿದರು.  ಚುನಾವಣೆಯಲ್ಲಿ ನಮಗೆ ಸ್ಪಷ್ಟ ಬಹುಮತ ಬರದೆ ಇದ್ದರೆ ನಾವು ವಿರೋಧ ಪಕ್ಷದ ಸ್ಥಾನದಲ್ಲಿ ಕೂರುವುದಾಗಿ ಹೇಳಿದೆ. ಆದರೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಾಗ ರಾಷ್ಟ್ರೀಯ ನಾಯಕರು ನನ್ನನ್ನು ಮುಖ್ಯಮಂತ್ರಿಯಾಗುವಂತೆ ಮನವೊಲಿಸಿದರು. ಆದ ಕಾರಣ ನನ್ನ ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಅಧಿಕಾರ ವಹಿಸಿಕೊಂಡೆ ಎಂದು ಅವರು ವಿವರಿಸಿದರು. ಮುಂದಿನ ದಿನಗಳಲ್ಲಿ  ಜೆಡಿಎಸ್- ಕಾಂಗ್ರೆಸ್ ಹೊಂದಾಣಿಕೆ ಸರಿಯಾದ ನಿರ್ಧಾರ ಎಂಬು ಸಾಬೀತುಪಡಿಸುವ ರೀತಿಯಲ್ಲಿ ಆಡಳಿತ ನಡೆಸುತ್ತೇನೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಬರುವುದಿಲ. ರಾಜ್ಯದ ಎಲ್ಲ ವರ್ಗದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಅವರು ನುಡಿದರು. ಮೇ ೨೫ರಂದು ವಿಶ್ವಾಸಮತ: ವಿಧಾನಸಭೆಯಲ್ಲಿ ಮೇ ೨೫ರಂದು ವಿಶ್ವಾಸಮತ ಯಾಚನೆ ನಡೆಯಲಿದೆ. ಬಳಿಕ ಮುಂದಿನ ನಡೆ ಬಗ್ಗೆ ವಿವರ ನೀಡುವೆ ಎಂದು ಮುಖ್ಯಮಂತ್ರಿ ನುಡಿದರು.

2018: ನವದೆಹಲಿ: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎಚ್.ಡಿ. ಕುಮಾರ ಸ್ವಾಮಿ ಮತ್ತು ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಡಾ. ಜಿ. ಪರಮೇಶ್ವರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದರು.  ‘ಕರ್ನಾಟಕದ ಮುಖ್ಯಮಂತ್ರಿಯಾಗಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಶ್ರೀ ಎಚ್.ಡಿ. ಕುಮಾರ ಸಾಮಿ ಜಿ ಮತ್ತು ಡಾ. ಪರಮೇಶ್ವರ್ ಜಿ ಅವರಿಗೆ ಅವರಿಗೆ ಮುಂದಿನ ಅವಧಿಗಾಗಿ ಶುಭಾಶಯಗಳನ್ನು ಹಾರೈಸುವೆ ಎಂದು ಮೋದಿ ಟ್ವೀಟ್ ಮಾಡಿದರು. ಬಳಿಕ ಕುಮಾರ ಸ್ವಾಮಿ ಅವರಿಗೆ ದೂರವಾಣಿ ಕರೆಯನ್ನು ಮಾಡಿ ಶುಭ ಹಾರೈಸಿದರು.

2018: ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಶ್ವಮೇಧದ ಕುದುರೆಯನ್ನು ನಾವು ಕಟ್ಟಿ ಹಾಕಿದ್ದೇವೆ. ಇನ್ನು ಜೀವ ಇಲ್ಲದ ಕುದುರೆಯನ್ನು ಹಿಡಿದುಕೊಂಡು ಅಮಿತ್ ಶಾ ಅವರು ಮೋದಿ ಅವರ ಬಳಿಗೆ ಹೋಗಬೇಕಷ್ಟೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಇಲ್ಲಿ ಛೇಡಿಸಿದರು. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಸಿದ ತಮ್ಮ ಚೊಚ್ಚಲ ಪತ್ರಿಕಾಗೋಷ್ಠಿಯಲ್ಲಿ ಮಾತು ಹೇಳಿದ ಕುಮಾರ ಸ್ವಾಮಿ ಅವರು೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜನತಾದಳ (ಎಸ್) ಮತ್ತು ಕಾಂಗ್ರೆಸ್ ಜೊತೆಯಾಗಿಯೇ ಬಿಜೆಪಿ ವಿರುದ್ಧ ಹೋರಾಡಲಿವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುವ ಬಿಜೆಪಿಯವರು ಐದು ವರ್ಷ ಆಡಳಿತದಲ್ಲಿದ್ದಾಗ ಏನು ಕೊಟ್ಟಿದ್ದರು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಉತ್ತಮವಾದ ಲೋಕಾಯುಕ್ತರನ್ನು ನೇಮಕ ಮಾಡುವ ಕೆಲಸ ಆಗಿದ್ದು ಹಿಂದೆ ನನ್ನ ಸರ್ಕಾರ ಇದ್ದಾಗ ಎಂದು ನುಡಿದರು. ಮಹದಾಯಿ ವಿಚಾರದಲ್ಲಿ ಪ್ರಧಾನಿ ಮೋದಿ ಅವರು ಸುಳ್ಳು ಹೇಳುತ್ತಾರೆ. ಚುನಾವಣೆ ಬಳಿಕ ಮೂರು ತಿಂಗಳಲ್ಲಿ ಸಮಸ್ಯೆ ಬಗೆ ಹರಿಸುತ್ತೇನೆ ಅಂದಿದ್ದರು. ಸದ್ಯ ನ್ಯಾಯಾಧಿಕರಣ ಮೂರೂ ರಾಜ್ಯಗಳ ವಾದ ಆಲಿಸಿದೆ. ತೀರ್ಪು ಬರುವುದು ಬಾಕಿ ಇದೆ. ತೀರ್ಪು ಬಂದ ಬಳಿಕ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿ ನುಡಿದರು.

2009: ಸಚಿವ ಸ್ಥಾನ ಮತ್ತು ಖಾತೆಗಳ ವಿಚಾರದಲ್ಲಿ ಮಿತ್ರ ಪಕ್ಷ ಡಿಎಂಕೆಯೊಂದಿಗಿನ ಬಿಕ್ಕಟ್ಟು ಮುಂದುವರಿದ ಕಾರಣ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಚಿವರಿಗೂ ಖಾತೆಗಳ ಹಂಚಿಕೆಯಾಗಲಿಲ್ಲ. ಆರು ಮಂದಿ ಪ್ರಮುಖರಿಗೆ ಮಾತ್ರ ಪ್ರಧಾನಿ ಮನಮೋಹನ್ ಸಿಂಗ್ ಅವರು ಖಾತೆಗಳನ್ನು ಹಂಚಿದರು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭಾ ಸದಸ್ಯ ಎಸ್.ಎಂ.ಕೃಷ್ಣ ಅವರಿಗೆ ಮಹತ್ವದ ವಿದೇಶಾಂಗ ಖಾತೆಯ ಜವಾಬ್ದಾರಿ ನೀಡಲಾಯಿತು. ಹಣಕಾಸು ಸಚಿವರಾಗಿ ಪ್ರಣವ್ ಮುಖರ್ಜಿ ಹಾಗೂ ಚಿದಂಬರಂ ಗೃಹ ಇಲಾಖೆ ಹೊಣೆಯನ್ನು ಮತ್ತೆ ಹೊತ್ತುಕೊಂಡರು. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ರೈಲ್ವೆ ಖಾತೆಯನ್ನು, ಶರದ್ ಪವಾರ್ ಕೃಷಿ, ಆಹಾರ, ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳ ಖಾತೆ ಮತ್ತು ಎ.ಕೆ.ಆಂಟನಿ ಅವರು ರಕ್ಷಣಾ ಖಾತೆ ಪಡೆದರು.

2009: ಮಳೆಯಾಶ್ರಿತ ಜಮೀನಿನ ಫಲವತ್ತತೆ ಅರಿಯದೆ ರೈತರು ನಿರೀಕ್ಷಿತ ಉತ್ಪಾದನೆ ಪಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರವು ಈ ಸಮಸ್ಯೆಗೆ ಪರಿಹಾರವಾಗಿ ದೇಶಕ್ಕೆ ಮಾದರಿಯಾಗಬಲ್ಲ 'ಭೂ-ಚೇತನ' ಯೋಜನೆಯನ್ನು ಜಾರಿಗೆ ತಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾವೇರಿಯಲ್ಲಿ ಹೇಳಿದರು. ಒಣ ಬೇಸಾಯದಲ್ಲಿ ತಾಂತ್ರಿಕತೆ ಅಳವಡಿಕೆ ಹಾಗೂ ಉತ್ಪಾದನೆ ಹೆಚ್ಚಿಸುವ 'ಭೂ-ಚೇತನ' ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

2009: ನೇಪಾಳದ ನೂತನ ಪ್ರಧಾನಿಯಾಗಿ ಕಮ್ಯುನಿಸ್ಟ್ ನಾಯಕ ಮಾಧವ ಕುಮಾರ್ ನೇಪಾಳ್ (56) ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ದೇಶದ ಮೂರು ವಾರಗಳ ರಾಜಕೀಯ ಅನಿಶ್ಚಿತತೆ ಕೊನೆಗೊಂಡಿತು. ಮಾವೋವಾದಿ ಪಕ್ಷದ ನಾಯಕ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ, 22 ಪಕ್ಷಗಳ ಬೆಂಬಲ ಹೊಂದಿರುವ ಸಿಪಿಎನ್- ಯುಎಂಎಲ್ ಮುಖಂಡ ನೇಪಾಳ್ ಅವರು ಬೆಳಿಗ್ಗೆ ನಾಮಪತ್ರ ಸಲ್ಲಿಸಿದ್ದರು. ಪ್ರತಿಯಾಗಿ ಯಾರೊಬ್ಬರೂ ನಾಮಪತ್ರ ಸಲ್ಲಿಸದೇ ಇದ್ದುದು ಅವರ ಅವಿರೋಧ ಆಯ್ಕೆಗೆ ಕಾರಣವಾಯಿತು. ಸದನದಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಮಾವೋವಾದಿಗಳು ಸಭೆಯನ್ನು ಬಹಿಷ್ಕರಿಸಿ, ಸರ್ಕಾರದಲ್ಲಿ ಪಾಲ್ಗೊಳ್ಳದೆ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳುವುದಾಗಿ ಸ್ಪಷ್ಟಪಡಿಸಿದರು.

2009: ಬಹು ದೊಡ್ಡ ಲಂಚ ಹಗರಣದ ಸುಳಿಯಲ್ಲಿ ಸಿಲುಕಿದ್ದ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಮೂ ಹ್ಯೂನ್ (62) ಅವರು ಸೋಲ್‌ನಲ್ಲಿ ತಮ್ಮ ಮನೆಯ ಸಮೀಪದ ಬೆಟ್ಟದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ಮುನ್ನ ತಮ್ಮ ಕುಟುಂಬದವರಿಗಾಗಿ ಪತ್ರ ಬರೆದಿಟ್ಟ ಅವರು ಅದರಲ್ಲಿ, 'ಬದುಕು ತುಂಬಾ ಕಷ್ಟ ಎನಿಸುತ್ತಿದೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಈ ಕೆಲಸದಿಂದ ಬಹಳ ಮಂದಿಗೆ ತೊಂದರೆಯಾಗುತ್ತಿದೆ. ದಯವಿಟ್ಟು ಕ್ಷಮಿಸಿ' ಎಂದು ತಿಳಿಸಿದರು. ರೋಹ್ ಮತ್ತು ಅವರ ಕುಟುಂಬ ಲಂಚ ಪಡೆದಿದ್ದುದು ಕೆಲ ದಿನಗಳ ಹಿಂದೆ ಬೆಳಕಿಗೆ ಬಂದಿತ್ತು. 13 ಗಂಟೆಗಳ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ದಕ್ಷಿಣ ಕೊರಿಯಾದ ಬಂಧಿತ ವ್ಯಾಪಾರಿಯೊಬ್ಬನಿಂದ 6 ದಶಲಕ್ಷ ಡಾಲರ್ ಹಣವನ್ನು ಲಂಚದ ರೂಪದಲ್ಲಿ ಪಡೆದಿರುವುದಾಗಿ ರೋಹ್ ಒಪ್ಪಿಕೊಂಡಿದ್ದರು..

2009: ವಿವಿಧ ಸ್ವಾದಗಳಲ್ಲಿ ಎಳನೀರನ್ನು ಪರಿಚಯಿಸುವ ಉದ್ದೇಶದಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಹಮ್ಮಿಕೊಂಡ ಎರಡು ದಿನಗಳ 'ಎಳನೀರು ಜಾತ್ರೆ'ಯು ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ಬಿಳಿಗೆರೆ ಗ್ರಾಮದ ಹೊನ್ನಮ್ಮನ ತೋಪಿನಲ್ಲಿ ಆರಂಭವಾಯಿತು. ರಾಜ್ಯ ರೈತ ಸಂಘ, ಕಾಮಧೇನು ಯುವಕ ರೈತ ಸಂಘ ಸೇರಿದಂತೆ 20ಕ್ಕೂ ಹೆಚ್ಚು ಸಂಘಟನೆಗಳು ಒಟ್ಟಾಗಿ ಹಮ್ಮಿಕೊಂಡ ಈ ಜಾತ್ರೆಯಲ್ಲಿ ಮೊದಲ ದಿನವೇ ಎಂಟು ಸಾವಿರಕ್ಕೂ ಹೆಚ್ಚು ಎಳನೀರು ಮಾರಾಟವಾಯಿತು. ಮೇಳದಲ್ಲಿ ಕಲ್ಲುಸಕ್ಕರೆ, ನಿಂಬೆ ಮತ್ತು ಒಂದು ಚಿಟಿಕೆ ಉಪ್ಪು ಬೆರೆಸಿದ ಎಳನೀರು, ಜೇನುತುಪ್ಪ ಬೆರೆಸಿದ ಎಳನೀರು, ಪೆಪ್ಪರ್ ಬೆರೆಸಿದ ಎಳನೀರು. ಎಳನೀರು ಲಸ್ಸಿ ಲಭ್ಯವಿದ್ದವು. ಶಾಸಕರು, ರೈತಸಂಘದ ಮುಖಂಡರು, ಪ್ರಗತಿಪರ ರೈತ ಪ್ರಮುಖರು ಎಳನೀರು ಕುಡಿಯುವ ಮೂಲಕ ಪರಿಷೆಗೆ ಚಾಲನೆ ನೀಡಿದರು.

2009: ಪ್ರಕೃತಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬ ಆತಂಕದಿಂದ ಗುಂಡ್ಯ ಜಲ ವಿದ್ಯುತ್ ಯೋಜನೆಗೆ ಪರಿಸರವಾದಿಗಳು, ಸಾರ್ವಜನಿಕರು ಮತ್ತು ಸ್ಥಳೀಯ ರೈತರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಯೋಜನೆಗೆ ಅಡಿಗಲ್ಲನ್ನಿಟ್ಟರು. ಹಾಸನದ ಎತ್ತಿನಹಳ್ಳದಲ್ಲಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಾಸನದಿಂದ 78 ಕಿಮೀ ದೂರದ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಯೋಜನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಘಟ್ಟದ ಪ್ರಕೃತಿಯ ಮಡಿಲಿನ ನಡುವೆ ನಾಲ್ಕು ಘಟಕಗಳಿಂದ ಎರಡು ಹಂತದಲ್ಲಿ 400 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ, ವಾರ್ಷಿಕ 1002 ದಶಲಕ್ಷ ಯೂನಿಟ್ ವಿದ್ಯುತ್ತನ್ನು ನಾಡಿಗೆ ಸರಬರಾಜು ಮಾಡುವ ಉದ್ದೇಶವಿದೆ. ಪ್ರಸ್ತುತ ಯೋಜನೆಗೆ ಒಟ್ಟು 1119.56 ಕೋಟಿ ರೂಪಾಯಿ ವೆಚ್ಚವಾಗುವ ನಿರೀಕ್ಷೆ ಇದೆ ಎಂದು ಹೇಳಿದರು.

2009: ಅಮೆರಿಕದ ಅತ್ಯಂತ ದೊಡ್ಡ ವಿಫಲ ಬ್ಯಾಂಕುಗಳಲ್ಲಿ ಒಂದಾದ ಫ್ಲೋರಿಡಾ ಮೂಲದ ಬ್ಯಾಂಕ್ ಯುನೈಟೆಡ್ ಕೂಡ ಅಂಗಾತ ಮಲಗಿತು. ಇದರೊಂದಿಗೆ 2009ರಲ್ಲಿ ಇಲ್ಲಿಯವರೆಗೆ ಮುಚ್ಚಿದ ಅಮೆರಿಕದ ಬ್ಯಾಂಕುಗಳ ಸಂಖ್ಯೆ 34ಕ್ಕೆ ಏರಿತು. ಬ್ಯಾಂಕನ್ನು ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (ಎಫ್‌ಡಿಐಸಿ) ಮುಟ್ಟುಗೋಲು ಹಾಕಿಕೊಂಡಿತು. ಬ್ಯಾಂಕಿನ ಆಸ್ತಿ ಮೌಲ್ಯ 12.80 ದಶಲಕ್ಷ ಅಮೆರಿಕ ಡಾಲರ್ ಇದ್ದು ಠೇವಣಿ ಮೊತ್ತ 8.6ದಶಲಕ್ಷ ಅಮೆರಿಕ ಡಾಲರ್. ಆರ್ಥಿಕ ಕುಸಿತದ ಹೊಡೆತಕ್ಕೆ ಸಿಲುಕಿದ ಅಮೆರಿಕದ ಸುಮಾರು 48 ಬ್ಯಾಂಕುಗಳ ವಹಿವಾಟಿನಲ್ಲಿ ತೀವ್ರ ಕುಸಿತ ಕಂಡುಬಂದು, ಇವುಗಳ ಭವಿಷ್ಯವೂ ಅತಂತ್ರವಾಗಿದೆ ಎಂದು ಶಂಕಿಸಲಾಯಿತು.

2008: ಸರಿಯಾಗಿ ಮಧ್ಯರಾತ್ರಿ 12.05ಕ್ಕೆ ಏರ್ ಇಂಡಿಯಾ ವಿಮಾನವು ಬೆಂಗಳೂರಿನಿಂದ ಸಿಂಗಾಪುರಕ್ಕೆ ಪ್ರಯಾಣ ಬೆಳೆಸುವುದರೊಂದಿಗೆ ದೇವನಹಳ್ಳಿ ಸಮೀಪ ನಿರ್ಮಿಸಿದ ನೂತನ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಅಧಿಕೃತವಾಗಿ ಕಾರ್ಯಾರಂಭ ಮಾಡಿತು. ಮುಂಬೈಯಿಂದ ಏರ್ ಇಂಡಿಯಾದ (ಐಸಿ 609) ಮೊದಲ ವಿಮಾನವು ಇದಕ್ಕೆ ಮುನ್ನ ರಾತ್ರಿ 10ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದು ಇಳಿಯುತ್ತಿದ್ದಂತೆಯೇ ಪ್ರಯಾಣಿಕರನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ನೂತನ ವಿಮಾನ ನಿಲ್ದಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಯಾಣಿಕರು ಎಚ್ ಎ ಎಲ್ ವಿಮಾನ ನಿಲ್ದಾಣಕ್ಕಿಂತ ಇದು ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಮಾನ ನಿಲ್ದಾಣ ಕಾರ್ಯಾರಂಭದ ಕ್ಷಣಗಳು: ರಾತ್ರಿ 10ಕ್ಕೆ ಮುಂಬೈನಿಂದ ಏರ್ ಇಂಡಿಯಾದ ಮೊದಲ ವಿಮಾನ ಆಗಮನ. 12.05ಕ್ಕೆ ಏರ್ ಇಂಡಿಯಾ ವಿಮಾನ ಸಿಂಗಪುರಕ್ಕೆ ನಿರ್ಗಮನ. ರಾತ್ರಿ 11.30ಕ್ಕೆ ಎಚ್ಎಎಲ್ ವಿಮಾನನಿಲ್ದಾಣದಿಂದ ಸಿಂಗಪುರ ಏರ್ಲೈನ್ಸ್ ವಿಮಾನದ ಕೊನೆಯ ಪ್ರಯಾಣ. ಇದರೊಂದಿಗೆ ಎಚ್ಎ ಎಲ್ ವಿಮಾನ ನಿಲ್ದಾಣ ಸ್ಥಗಿತಗೊಂಡಿತು. ದೇವನಹಳ್ಳಿ ನಿಲ್ದಾಣದ ಕಾರ್ಯಾರಂಭ ಸಮಾರಂಭಕ್ಕಾಗಿ ವಿಮಾನ ನಿಲ್ದಾಣವನ್ನು ನವ ವಧುವಿನಂತೆ ಸಿಂಗರಿಸಲಾಗಿತ್ತು. ಇದಕ್ಕೆ ಮೊದಲು ಈ ಸಮಾರಂಭ ಮೂರು ಬಾರಿ ಮುಂದೂಡಿಕೆಯಾಗಿತ್ತು.

2008: ಸ್ಥಗಿತಗೊಂಡ ವಿವಾದಿತ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಆರಂಭದ ಇಂಗಿತವನ್ನು ನೀಡಿದ ತಮಿಳನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಅವರು, ಕಾಮಗಾರಿಯನ್ನು ನಿಗದಿತ ಸಮುಯ 2011ರ ಹೊತ್ತಿಗೆ ಮುಗಿಸಬೇಕೆಂದು ಈದಿನ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಮಿಳುನಾಡು ವ್ಯಾಪ್ತಿಯಲ್ಲಿ ಹರಿಯುವ ಕಾವೇರಿನದಿಗೆ ಕಟ್ಟೆ ಕಟ್ಟಿ ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ 1,334 ಕೋಟಿ ರೂಪಾಯಿಯ ಯೋಜನೆಯನ್ನು ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು.
ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿ ಕೈಗೆತ್ತಿಕೊಂಡ ಈ ಯೋಜನೆ, ಕರುಣಾನಿಧಿ ಮತ್ತು ಯೋಜನೆ ವಿರೋಧಿಸುವ ಕರ್ನಾಟಕದ ರಾಜಕಾರಣಿಗಳ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು. ಕನ್ನಡಪರ ಸಂಘಟನೆಗಳೂ ಈ ಯೋಜನೆ ಜಾರಿಗೆ ಆಕ್ಷೇಪ ವ್ಯಕ್ತಪಡಿಸಿದ್ದವು.

2008: ರಾಷ್ಟ್ರದ ರಾಜಧಾನಿ ದೆಹಲಿ ಸುತ್ತಮುತ್ತ ತಲ್ಲಣ ಎಬ್ಬಿಸಿದ್ದ ಬಾಲಕಿ ಮತ್ತು ಮನೆ ಕೆಲಸಗಾರನ ಕೊಲೆ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಾಲಕಿಯ ತಂದೆ, ಹೆಸರಾಂತ ದಂತವೈದ್ಯ ರಾಜೇಶ್ ತಲ್ವಾರ್ ಅವರನ್ನು ಬಂಧಿಸಿದರು. ಘಟನೆ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿ ತಲ್ವಾರ್ ಅವರನ್ನು ಬಂಧಿಸಲಾಗಿದೆ ಎಂದು ಮೀರತ್ ವಲಯದ ಐಜಿಪಿ ಗುರುದರ್ಶನ್ ಸಿಂಗ್ ತಿಳಿಸಿದರು. 2008ರ ಮೇ 15-16ರ ನಡುವಿನ ರಾತ್ರಿ ನೋಯ್ಡಾದಲ್ಲಿ ನಡೆದ ಘಟನೆಯಲ್ಲಿ ದೆಹಲಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಆಋಷಿಯನ್ನು (14) ಮಲಗುವ ಕೊಠಡಿಯಲ್ಲಿ ಗಂಟಲು ಸೀಳಿ ಕೊಲೆ ಮಾಡಲಾಗಿತ್ತು. ಆರಂಭದಲ್ಲಿ ಈ ದುಷ್ಕೃತ್ಯವನ್ನು ನಾಪತ್ತೆಯಾಗಿದ್ದ ಮನೆ ಕೆಲಸಗಾರ ಹೇಮರಾಜ್ (45) ಎಸಗಿರಬೇಕೆಂದು ಶಂಕಿಸಲಾಗಿತ್ತು. ಆದರೆ ಮರುದಿನವೇ ಹೇಮರಾಜನ ಶವ ಅದೇ ಮನೆಯ ಛಾವಣಿ ಮೇಲೆ ಪತ್ತೆಯಾದ ನಂತರ ಪ್ರಕರಣ ತಿರುವು ಪಡೆದುಕೊಂಡಿತ್ತು.

2008: `ಪೃಥ್ವಿ' ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಒರಿಸ್ಸಾದ ಬಾಲಸೋರಿನ ಚಂಡೀಪುರದಲ್ಲಿ ಯಶಸ್ವಿಯಾಗಿ ನಡೆಯಿತು. ಒಂದು ಭೂಪ್ರದೇಶದಿಂದ ಸುಮಾರು 150ರಿಂದ 250 ಕಿ.ಮೀ. ದೂರದವರೆಗೆ ನೆಗೆಯಬಲ್ಲ `ಪೃಥ್ವಿ' ಕ್ಷಿಪಣಿಯು ಒಂದು ಸಾವಿರ ಕೆಜಿ ಸ್ಫೋಟಕಗಳನ್ನು ಸಾಗಿಸಬಲ್ಲುದು. ಈಗಾಗಲೇ ಈ ಕ್ಷಿಪಣಿ ದೇಶದ ಸೇನಾ ಬತ್ತಳಿಕೆ ಸೇರಿದೆ. ದೇಶೀಯವಾಗಿ ನಿರ್ಮಾಣವಾದ ಪೃಥ್ವಿ ಕ್ಷಿಪಣಿಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿ ಪಡಿಸಿದೆ.

2008: ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಹಿರಿಯ ಕಾರ್ಮಿಕ ನಾಯಕ ಹಾಗೂ ಮಾಜಿ ಲೋಕಸಭಾ ಸದಸ್ಯ ಗೋಪೇಶ್ವರ (88) ಅವರು ಹಿಂದಿನ ದಿನ ರಾತ್ರಿ ಜಮ್ಷೆಡ್ ಪುರದಲ್ಲಿ ನಿಧನರಾದರು. ಟೆಲ್ಕೊ ಕಾರ್ಮಿಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಗೋಪೇಶ್ವರ ಅಂತಾರಾಷ್ಟ್ರೀಯ ಕಾರ್ಮಿಕ ಸಮಾವೇಶ ಸೇರಿದಂತೆ ಹಲವು ದೇಶಗಳಲ್ಲಿ ನಡೆದ ಕಾರ್ಮಿಕ ಸಮಾವೇಶಗಳಲ್ಲಿ ಭಾರತದ ಕಾರ್ಮಿಕರನ್ನು ಪ್ರತಿನಿಧಿಸಿದ್ದರು. 1984ರಲ್ಲಿ ಕಾಂಗ್ರೆಸ್ ಸದಸ್ಯರಾಗಿ ಲೋಕಸಭೆಗೆ ಆಯ್ಕೆಯಾಗಿದ್ದರು.

2008: ಉಭಯ ದೇಶಗಳ ದ್ವಿಪಕ್ಷೀಯ ಮಾತುಕತೆಗೆ ಮುನ್ನ ತಿಳಿಸಿದ್ದಂತೆ ಪಾಕಿಸ್ಥಾನ ಸರ್ಕಾರ ಭಾರತದ 96 ಮೀನುಗಾರರು ಮತ್ತು ಮೂವರು ನಾಗರಿಕರನ್ನು ಬಿಡುಗಡೆ ಮಾಡಿತು.

2008: ಒಂದು ವಾರದ ಹಿಂದೆ ಅಪಹರಿಸಲಾಗಿದ್ದ 10 ಜನ ಭಾರತೀಯ ಸಿಬ್ಬಂದಿ ಇದ್ದ ಜೋರ್ಡಾನ್ ಹಡಗನ್ನು ಅಪಹರಣಕಾರರು ಬಿಡುಗಡೆ ಮಾಡಿದರು. ಒತ್ತೆಯಲ್ಲಿದ್ದ `ಎಂವಿ- ವಿಕ್ಟೋರಿಯಾ' ಹಡಗನ್ನು ಅಪಹರಣಕಾರರು ಸ್ಥಳೀಯ ಸಮಯ ಮಧ್ಯಾಹ್ನ 12.50ಕ್ಕೆ ಬಿಡುಗಡೆ ಮಾಡಿದರು ಎಂದು ನೈರೋಬಿಯ ಸಮುದ್ರ ವಹಿವಾಟು ಅಧಿಕಾರಿ ಆಂಡ್ರ್ಯೂ ತಿಳಿಸಿದರು. 4200 ಟನ್ ಸಕ್ಕರೆ ಹೊತ್ತೊಯ್ಯುತ್ತಿದ್ದ ಈ ಹಡಗನ್ನು ಮೊಗದಿಶು ಬಳಿ ಸೊಮಾಲಿಯಾ ಅಪಹರಣಕಾರರು ಅಪಹರಿಸಿದ್ದರು. ಇದರಲ್ಲಿ 10 ಜನ ಭಾರತೀಯ ಸಿಬ್ಬಂದಿಯಲ್ಲದೆ ಬಾಂಗ್ಲಾದೇಶ, ಪಾಕಿಸ್ಥಾನ, ತಾಂಜಾನಿಯಾಕ್ಕೆ ಸೇರಿದ ಸಿಬ್ಬಂದಿಯೂ ಇದ್ದರು.

2008: ಮಂಗಳ ಗ್ರಹದಲ್ಲಿ ಹಿಂದೊಮ್ಮೆ ಬಿಸಿನೀರ ಚಿಲುಮೆಗಳು, ಬುಗ್ಗೆಗಳು ಇದ್ದಿರುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ನ್ಯೂಯಾರ್ಕಿನಲ್ಲಿ ತಿಳಿಸಿದರು. ಮಂಗಳ ಗ್ರಹ ಅನ್ವೇಷಣೆಗಾಗಿ `ನಾಸಾ' ಕಳುಹಿಸಿದ್ದ ಸ್ಪಿರಿಟ್ ರೋವರ್ ನೌಕೆ ಅಗೆದು ತೆಗೆದಿರುವ ಸಿಲಿಕಾ ಪದರಗಳನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ವಿಶ್ಲೇಷಣೆಗೆ ಒಳಪಡಿಸಿ ಈ ತೀರ್ಮಾನಕ್ಕೆ ಬಂದಿತು. ಜ್ವಾಲಾಮುಖಿಯಿಂದ ಚಿಮ್ಮಿದ ಹಬೆ ಅಥವಾ ಬಿಸಿ ನೀರು ಮಂಗಳ ಗ್ರಹದ ಗರ್ಭಕ್ಕೆ ಇಳಿದು ಇಂಗುವಾಗ ಈ ಸಿಲಿಕಾ ಪದರಗಳು ಉಂಟಾಗಿವೆ. ಅಲ್ಲದೆ `ಸಿಲಿಕಾ'ದ ಪದರಗಳು ಕೋಟ್ಯಂತರ ವರ್ಷಗಳ ಹಿಂದೆ ಮಂಗಳನಲ್ಲಿ ಜೀವಿ ಇದ್ದಿರಬಹುದಾದ ಸಾಧ್ಯತೆಗೆ ಪುರಾವೆ ಒದಗಿಸಿವೆ ಎಂದು ವಿಜ್ಞಾನಿಗಳು ಹೇಳಿದರು. ಭೂಮಿಯ ಮೇಲೆ ಈ ರೀತಿ ಬಿಸಿನೀರ ಚಿಲುಮೆಗಳು ಕಾಣಿಸಿದಲ್ಲೆಲ್ಲ ಸಿಲಿಕಾ ಪದರಗಳು ಉಂಟಾಗಿದ್ದು, ಈ ಪದರಗಳಲ್ಲಿ ಪುರಾತನ ಜೀವಿಗಳ ಅವಶೇಷಗಳು ಪತ್ತೆಯಾಗಿವೆ.

2008: ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯವು 2007-08ನೇ ಸಾಲಿನಲ್ಲಿ ಮೊದಲ ಸ್ಥಾನ ಗಳಿಸಿತು. ನಂತರದ ಸ್ಥಾನಗಳನ್ನು ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಹಾಗೂ ತಮಿಳುನಾಡು ರಾಜ್ಯಗಳು ಗಳಿಸಿದವು ಎಂದು ತೋಟಗಾರಿಕೆ ಇಲಾಖೆಯ ಕಾರ್ಯದರ್ಶಿ ಪಿ.ಗಣೇಶನ್ ತಿಳಿಸಿದರು.

2007: ಎಂಭತ್ತೇಳರ ಹರೆಯದ ಅಜ್ಜ ಅಬ್ದುಲ್ ಅಜೀಜ್ ಹಾರಿ ಘರತಕ್ಕರ್ ಗೆ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಕರಣಗಳ ವಿಚಾರಣೆ ನಡೆಸಿರುವ ವಿಶೇಷ ಟಾಡಾ ನ್ಯಾಯಾಲಯವು 6 ವರ್ಷಗಳ ಕಠಿಣಶಿಕ್ಷೆ ಹಾಗೂ 50,000 ರೂಪಾಯಿಗಳ ದಂಡವನ್ನು ವಿಧಿಸಿತು.

2007: ಮೊಬೈಲ್ ಫೋನಿನಲ್ಲಿ ದೂರದರ್ಶನ ಕಾರ್ಯಕ್ರಮ ವೀಕ್ಷಣೆ ಸೌಲಭ್ಯವು ಈದಿನ ನವದೆಹಲಿಯಲ್ಲಿ ಚಾಲನೆಗೊಂಡಿತು. ಇದರೊಂದಿಗೆ ದೂರದರ್ಶನವು ತನ್ನ ಸಾಧನೆಗೆ ಮತೊಂದು ಗರಿ ಸೇರಿಸಿಕೊಂಡಿತು.

2007: ತಮಿಳುನಾಡಿನ ತಿರುಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಾರ್ಖಾನೆಯೊಂದರ ಗೋಡೆಯು ಪಕ್ಕದ ಸಾರಾಯಿ ಅಂಗಡಿ ಮೇಲೆ ಕುಸಿದು ಬಿದ್ದು 27 ಜನ ಮೃತರಾಗಿ ಇತರ ಐವರು ಗಾಯಗೊಂಡರು.

2007: ಮಾಹಿತಿ ಹಕ್ಕು ಅಧಿನಿಯಮವನ್ನು ಕಟ್ಟು ನಿಟ್ಟಾಗಿ ಅನುಷ್ಠಾನಗೊಳಿಸುವ ಸಲುವಾಗಿ ಕರ್ನಾಟಕ ಶಿಕ್ಷಣ ಇಲಾಖೆಯು `ಇ- ಆಡಳಿತ ವಿಭಾಗ'ದ ವತಿಯಿಂದ `ಕೇಂದ್ರೀಕೃತ ಶಿಕ್ಷಣ ಇಲಾಖೆ'ಯ ಮಾಹಿತಿ ಕೇಂದ್ರವನ್ನು ಆರಂಭಿಸಿತು.

2007: ಪ್ರೊಬೆಬಿಲಿಟಿ ಸಿದ್ಧಾಂತದ ಮೇಲೆ ಸಂಶೋಧನೆ ನಡೆಸಿದ ಓಸ್ಲೋದ ಭಾರತೀಯ ಮೂಲದ ಅಧ್ಯಾಪಕ 67 ವರ್ಷದ ಶ್ರೀನಿವಾಸ ವರದನ್ ಅವರಿಗೆ ಒಂದು ದಶಲಕ್ಷ ಡಾಲರ್ ಮೊತ್ತದ ಬಹುಮಾನ ದೊರಕಿತು. ಈ ಬಹುಮಾನದ ಬಹುತೇಕ ಹಣವನ್ನು ಅವರು ಚೆನ್ನೈ ಬಳಿಯಲ್ಲಿರುವ ತಮ್ಮ ತವರೂರು ತಂಬರಂನಲ್ಲಿ ಶೈಕ್ಷಣಿಕ ಅಭಿವೃದ್ಧಿಗೆ ಬಳಸುವುದಾಗಿ ಪ್ರಕಟಿಸಿದರು. ವರದನ್ ಅವರು ಮುಂದೆ ನಡೆಯಬಹುದಾದ ಅಪಘಾತಗಳ ಸಂಖ್ಯೆಯನ್ನು ಅಂದಾಜು ಮಾಡಲು ಕಾರು ವಿಮಾ ಕಂಪೆನಿಗಳಿಗೆ ನೆರವಾಗುವುದರಿಂದ ಹಿಡಿದು, ನೂರು ವರ್ಷಗಳ ಕಾಲ ಸಮುದ್ರದ ಅಲೆಗಳ ಹೊಡೆತವನ್ನು ಸಹಿಸಿಕೊಳ್ಳುವ ತೈಲ ಘಟಕ ಸ್ಥಾಪನೆಯವರೆಗೆ ಬಳಸಲು ಸಾಧ್ಯವಾಗುವಂತೆ ಪ್ರೊಬೆಬಿಲಿಟಿ ಸಿದ್ಧಾಂತವನ್ನು ರೂಪಿಸಿದ್ದರು.

2006: ವೈದ್ಯ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳ ಮೀಸಲು ವಿರೋಧಿ ಮುಷ್ಕರವನ್ನು ನಿರ್ಲಕ್ಷಿಸಿ, 2007ರ ಜೂನ್ ತಿಂಗಳಿನಿಂದ ಉನ್ನತ ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 27ರಷ್ಟು ಮೀಸಲಾತಿ ಜಾರಿಗೊಳಿಸಲು ಕೇಂದ್ರದ ಯುಪಿಎ ಸರ್ಕಾರ ನಿರ್ಧರಿಸಿತು. ಸಾಮಾನ್ಯ ವರ್ಗಕ್ಕೆ ತೊಂದರೆಯಾಗದಂತೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲೂ ಅದು ತೀರ್ಮಾನಿಸಿತು. ಯುಪಿಎ ಸಮನ್ವಯ ಸಮಿತಿ ಸಭೆಯಲ್ಲಿ ಎಡಪಕ್ಷಗಳು ಸರ್ಕಾರದ ಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸಿದ ಹಿನ್ನೆಲೆಯಲ್ಲಿ ಆಳುವ ಮೈತ್ರಿಕೂಟ ಈ ನಿರ್ಧಾರಕ್ಕೆ ಬಂದಿತು.

2006: ಭಾರತೀಯ ಗಡಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿ ಎಸ್.ಸಿ. ನೇಗಿ (56) ಅವರು ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ವಿಶ್ವದ ಅತಿ ಎತ್ತರದ ಎವರೆಸ್ಟ್ ಪರ್ವತ ಶಿಖರವನ್ನು ಏರಿದ ವಯೋವೃದ್ಧ 70 ವರ್ಷದ ಜಪಾನಿ ಪರ್ವತಾರೋಹಿ ಟಕೊವ್ ಅರಯಾಮ ಅವರಿಗೆ ಕಠ್ಮಂಡುವಿನಲ್ಲಿ ಟಿಬೆಟ್ ಸ್ವಾಯತ್ತ ಪ್ರಾಂತ್ಯದ ಚೀನಾ ಪರ್ವತಾರೋಹಣ ಸಂಘ ಈ ಸಂಬಂಧ ಪ್ರಮಾಣಪತ್ರ ನೀಡಿತು.

1999: `ಸ್ಟಾರ್ ವಾರ್ ಎಪಿಸೋಡ್ 1: ದಿ ಫ್ಯಾಂಟಮ್ ಮೆನೇಸ್' ಚಲನಚಿತ್ರವು ಐದು ದಿನಗಳಲ್ಲಿ 100 ಮಿಲಿಯನ್ ಡಾಲರುಗಳಿಗೂ ಹೆಚ್ಚು ಆದಾಯ ಗಳಿಸಿದ ಪ್ರಥಮ ಚಲನ ಚಿತ್ರವಾಯಿತು.

1984: ಬಚೇಂದ್ರಿಪಾಲ್ ಅವರು ಎವರೆಸ್ಟ್ ಶಿಖರವನ್ನು ಏರುವ ಮೂಲಕ ಜಗತ್ತಿನ ಅತ್ಯುನ್ನತ ಶಿಖರವನ್ನು ಏರಿದ ಪ್ರಥಮ ಭಾರತೀಯ ಮಹಿಳೆ ಎಂಬ ಕೀರ್ತಿಗೆ ಭಾಜನರಾದರು.

1952: ಸಿ.ಡಿ. ದೇಶಮುಖ್ ಅವರು ತಮ್ಮ ಆರು ಮುಂಗಡಪತ್ರಗಳ ಪೈಕಿ ಮೊದಲನೆಯ ಮುಂಗಡಪತ್ರವನ್ನು ಭಾರತದ ಸಂಸತ್ತಿನಲ್ಲಿ ಮಂಡಿಸಿದರು. ಇದು ಭಾರತದ ಸಂಸತಿನಲ್ಲಿ ಮಂಡನೆಯಾದ ಮೊತ್ತ ಮೊದಲನೆಯ ಮುಂಗಡಪತ್ರ.

1934: `ಬೋನಿ' ಮತ್ತು `ಗ್ಲೈಡ್' ಎಂದೇ ಪರಿಚಿತರಾಗಿದ್ದ ಅಮೆರಿಕದ ಕುಖ್ಯಾತ ಅಪರಾಧಿಗಳಾದ ಬೋನಿ ಪಾರ್ಕರ್ ಮತ್ತು ಗ್ಲೈಡ್ ಬ್ಯಾರೋ ಲೌಸಿಯಾನಾ ಸಮೀಪದ ಗಿಬ್ ಲ್ಯಾಂಡಿನಲ್ಲಿ ನಡೆದ ಘರ್ಷಣೆಯೊಂದರಲ್ಲಿ ಮೃತರಾದರು.

1926: ಮೃದಂಗ ಹಾಗೂ ಘಟಂ ವಾದನದಲ್ಲಿ ಖ್ಯಾತರಾಗಿರುವ ಕೆ.ಎನ್. ಕೃಷ್ಣಮೂರ್ತಿ ಅವರು ಕೆ.ಕೆ. ನಾರಾಯಣನ್ ಅಯ್ಯರ್- ಪಾರ್ವತಿ ಅಮ್ಮಾಳ್ ದಂಪತಿಯ ಮಗನಾಗಿ ಪಾಲ್ಘಾಟಿನ ಕೊಯಲ್ ಮನ್ನಂ ಗ್ರಾಮದಲ್ಲಿ ಜನಿಸಿದರು.

1734: ಫ್ರಾಂಜ್ ಆಂಟನ್ ಮೆಸ್ಮರ್ (1734-1815) ಜನ್ಮದಿನ. ಈಗ `ಹಿಪ್ನಾಟಿಸಂ' ಹೆಸರಿನಲ್ಲಿ ಜನಪ್ರಿಯವಾಗಿರುವ ಸಮ್ಮೋಹಿನಿಯನ್ನು `ಮೆಸ್ಮರಿಸಂ' ಹೆಸರಿನಲ್ಲಿ ಖ್ಯಾತಿಗೆ ತಂದಿದ್ದ ಜರ್ಮನಿಯ ವೈದ್ಯನೀತ.

No comments:

Post a Comment