Sunday, May 20, 2018

ಇಂದಿನ ಇತಿಹಾಸ History Today ಮೇ 19

ಇಂದಿನ ಇತಿಹಾಸ History Today ಮೇ 19
2018: ಬೆಂಗಳೂರು:  ಎರಡು ದಿನಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಮೂರನೇ ಅವಧಿಗೆ ಅಧಿಕಾರ ವಹಿಸಿಕೊಂಡ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು  ಈದಿನ ಸದನದಲ್ಲಿ ನಿರ್ಣಾಯಕ ಬಲಾಬಲ ಪರೀಕ್ಷೆಗೂ ಮುನ್ನ ಭಾವನಾತ್ಮಕ ಭಾಷಣ ಮಾಡಿ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಲ್ಲದೆ, ರಾಜ್ಯಪಾಲ ವಜುಭಾಯಿ ವಾಲಾ ಅವರ ಬಳಿಗೆ ತೆರಳಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದರು. ಇದರೊಂದಿಗೆ ಕರ್ನಾಟಕದ ೨೪ನೇ ಮುಖ್ಯಮಂತ್ರಿಯಾಗಿ ಮೇ ೧೭ರ ಬೆಳಗ್ಗೆ ಅಧಿಕಾರ ವಹಿಸಿಕೊಂಡ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಕೇವಲ ೫೫ ಗಂಟೆಗಳಲ್ಲಿ ಪತನಗೊಂಡಿದ್ದು, ಎಚ್. ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೋತ್ತರ ಜನತಾದಳ (ಎಸ್)- ಕಾಂಗ್ರೆಸ್ ಮೈತ್ರಿಕೂಟದ ಸರ್ಕಾರ ರಚನೆಗೆ ದಾರಿ ಸುಗಮಗೊಂಡಿತು. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಈದಿನ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಮಾಡಬೇಕಾಗಿದ್ದ ಯಡಿಯೂರಪ್ಪ ಅವರು ಹಂಗಾಮೀ ವಿಧಾನಸಭಾಧ್ಯಕ್ಷರ ನೇಮಕ ಕುರಿತ ಸುಪ್ರೀಂಕೋರ್ಟ್ ತೀರ್ಪು, ಬೆಳಗ್ಗೆ ೧೧ ಗಂಟೆಯಿಂದ ನಡೆದ ಇಡೀದಿನದ ವಿಧಾನಸಭಾ ಕಲಾಪ, ರಾಜಕೀಯ ಹೈಡ್ರಾಮಗಳ ಬಳಿಕ, ೧೯೯೬ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡು, ಕೇವಲ ೧೩ ದಿನಗಳಲ್ಲಿ ಬಹುಮತ ಸಾಬೀತು ಪಡಿಸುವ ಮುನ್ನವೇ ಸದನದಲ್ಲಿ ಭಾವನಾತ್ಮಕ ಭಾಷಣ ಮಾಡಿ ರಾಜೀನಾಮೆ ಸಲ್ಲಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ನಡೆ ಅನುಸರಿಸಿದರು. ಹೀಗಾಗಿ ಸದನದಲ್ಲಿ ವಿಶ್ವಾಸ ಮತಯಾಚನೆ, ಪಕ್ಷಗಳ ಬಲಾಬಲ ಪರೀಕ್ಷೆ ನಡೆಯಲಿಲ್ಲ. ಕಲಾಪ ಮುಕ್ತಾಯವಾಗುತ್ತಿದ್ದಂತೆಯೆ ದಳ ಮುಖಂಡ ಎಚ್. ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಮತ್ತಿತರರು ವಿಜಯದ ಸಂಕೇತ ತೋರಿಸಿದರು. ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಡಿಯೂರಪ್ಪ ಅವರು ರಾಜೀನಾಮೆ ಘೋಫಣೆಯ ಬಳಿಕ ಎಚ್.ಡಿ. ದೇವೇಗೌಡ ಮತ್ತು ಕಾಂಗ್ರೆಸ್ ನಾಯಕರ ಬಳಿಗೆ ತೆರಳಿ ಹಸ್ತಲಾಘವ ನೀಡಿ ಬಳಿಕ ರಾಜ್ಯಪಾಲರ ನಿವಾಸದತ್ತ ತೆರಳಿದರು.  ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಭಾಷಣ ಆರಂಭಿಸಿ, ವಿಪಕ್ಷಗಳ ಮೇಲೆ ದಾಳಿ ನಡೆಸಲು ಆರಂಭಿಸಿದಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಕ್ಷಿಪ್ತ ಹಸ್ತಕ್ಷೇಪ ನಡೆಸಿ ವಿಶ್ವಾಸ ಮತ ನಿರ್ಣಯ ಮಂಡಿಸುವಂತೆ ಆಗ್ರಹಿಸಿದರು.  ‘ನಾನು ಪಕ್ಷ ರಾಜಕೀಯ ಮಾಡುವುದಿಲ್ಲ. ನಾನು ಜನರ ರಾಜಕೀಯ ನಡೆಸುತ್ತೇನೆ. ಸರ್ಕಾರ ರಚಿಸಲು ನನಗಿದ್ದ ಏಕೈಕ ಗುರಿ ತೊಂದರೆಯಲ್ಲಿರುವ ರೈತರು ಮತ್ತು ದಲಿತರ ಸೇವೆ ಸಲ್ಲಿಸುವುದಾಗಿತ್ತು ಎಂದು ಯಡಿಯೂರಪ್ಪ ಹೇಳಿದರು.  ಇದಕ್ಕೆ ಮುನ್ನ ಮುಖ್ಯಮಂತ್ರಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆಯಲ್ಲಿ ಅವರು ಸದನದಲ್ಲಿ ಬಲಾಬಲ ಪರೀಕ್ಷೆಗೂ ಮುನ್ನ ರಾಜೀನಾಮೆ ನೀಡಬಹುದು ಎಂಬ ವದಂತಿ ಹರಡಿತ್ತು.  ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಧನ್ಯವಾದ ಹೇಳಿ ಮಾತು ಆರಂಭಿಸಿದರು. ’ಹಿಂದಿನ ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ನಮಗೆ ೧೦೪ ವಿಧಾನಸಭಾ ಕ್ಷೇತ್ರಗಳಲ್ಲಿ  ಜನರು ಆಶೀರ್ವಾದ ಮಾಡಿದರು. ನನ್ನ ಹಿಂದಿನ ಆಡಳಿತ ಮತ್ತು ಮೋದಿ ಅವರ ಮೇಲೆ ಜನರಿಗೆ ವಿಶ್ವಾssಸ ಇತ್ತು.  ಚುನಾವಣೆಯಲ್ಲಿ ಸೋತ ನಂತರ ಎರಡೂ ಪಕ್ಷಗಳೂ ಅವಕಾಶವಾದಿ ಹೊಂದಾಣಿಕೆ ರಾಜಕಾರಣ ಮಾಡಿದವು. ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿತ್ತು. ದೊಡ್ಡ ಪಕ್ಷ ಎಂಬ ವಿಚಾರ ಪರಿಗಣಿಸಿ ರಾಜ್ಯಪಾಲರು ನಮಗೆ ಆಮಂತ್ರಣ ಕೊಟ್ಟರು ಎಂದು ಯಡಿಯೂರಪ್ಪ ಹೇಳಿದರು.  ‘ಜನರಿಗೆ ಹಿಂದಿನ ಸರ್ಕಾರದ ಬಗ್ಗೆ ಆಕ್ರೋಶವಿತ್ತು. ಕಳೆದ ಐದು ವರ್ಷಗಳಿಂದ ಅನೇಕ ಏಳುಬೀಳು ಕಂಡಿದ್ದೇವೆ. ಅರಣ್ಯ ಭೂಮಿ ಒಕ್ಕಲು ಮಾಡಿದವರನ್ನು ಉಳಿಸಲು ನಾನು ಶ್ರಮಿಸಿದೆ, ಹೋರಾಡಿದೆ. ಇಲ್ಲಿ ನಮಗೆ ಏನೂ ಕೊರತೆಯಿಲ್ಲ. ಸಾಕಷ್ಟು ನೈಸರ್ಗಿಕ ಸಂಪನ್ಮೂಲವಿದೆ. ಆದರೆ ಪ್ರಾಮಾಣಿಕತೆಯ ಕೊರತೆ ಕಾಣಿಸಿಕೊಂಡಿತ್ತು. ಇಂತಹ ಸಂದರ್ಭದಲ್ಲಿ ಚುನಾವಣೆ ನಡೆಯಿತು ಎಂದು ಮುಖ್ಯಮಂತ್ರಿ ನುಡಿದರು.  ‘ಕಾಂಗ್ರೆಸ್ ರೈತರಿಗಾಗಿ ಏನನ್ನೂ ಮಾಡಲಿಲ್ಲ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಮಗೆ ನೀರಾವರಿ ಯೋಜನೆ ಪೂರ್ಣ ಮಾಡಲು ಆಗಲಿಲ್ಲ. ಕುಡಿಯುವ ನೀರು ಕೊಡಲು ಆಗಲಿಲ್ಲ. ಸಂಕಷ್ಟ ಪರಿಸ್ಥಿತಿ ನಾಡಿನ ಉದ್ದಗಲಕ್ಕೆ ಇದೆ. ನಾನು ನಿರಂತರ ಹೋರಾಟ, ಚಳವಳಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಜನರ ಸೇವೆ ಮಾಡಬೇಕು ಎನ್ನುವ ಹಂಬಲ ನನ್ನಲ್ಲಿದೆ. ನನ್ನ ಬದುಕಿನ ಕೊನೆಯ ಉಸಿರು ಇರುವವರೆಗೆ ನಾಡಿನ ರೈತರ ಸೇವೆಗೆ ಮುಡಿಪಾಗಿ ಇಡುತ್ತೇನೆ ಎಂದು ಅವರು ಹೇಳಿದರು.  ‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿರುವ ೧ ಲಕ್ಷ ರೂಪಾಯಿಗಳವರೆಗಿನ ರೈತರ ಸಾಲ,ನೇಕಾರರ ಸಮುದಾಯದ ಸಾಲ ಮನ್ನಾ ಮಾಡಬೇಕು ಅಂತ ಅಂದುಕೊಂಡಿದ್ದೆ. ನೀರಾವರಿಗೆ ಆದ್ಯತೆ ನೀಡಬೇಕು. ಆವರ್ತ ನಿಧಿಯ ಮೂಲಕ ಬೆಳೆಗಳಿಗೆ ಬೆಂಬಲ ಬೆಲೆ ಕೊಡಬೇಕು ಅಂತ ಆಲೋಚಿಸಿದ್ದೆ. ಈ ನಾಡಿನ ಪರಿಶಿಷ್ಟ ಜಾತಿ/ಪಂಗಡದವರ ಸಂಕಷ್ಟ ತಿಳಿದುಕೊಳ್ಳಲು ಅವರ ಮನೆಗಳಿಗೆ ಹೋದೆ. ಅವರೊಂದಿಗೆ ತಿಂಡಿ ತಿಂದೆ. ಅವರ ಕಷ್ಟ ಅರಿತೆ. ಐದು ವರ್ಷದ ಹಿಂದೆ ಆಲಮಟ್ಟಿ ಅಣೆಕಟ್ಟು ೫೨೪ ಮೀಟರ್ ಏರಿಸಲು ನಿಮ್ಮ ಸರ್ಕಾರ ಏನೂ ಮಾಡಲಿಲ್ಲ. ನಾನು ತತ್ ಕ್ಷಣ ಈ ಕೆಲಸ ಮಾಡಲು ನಿರ್ಧರಿಸಿದ್ದೆ ಎಂದು ಯಡಿಯೂರಪ್ಪ ಹೇಳಿದರು.  ‘ಇಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ಕೇಂದ್ರ ಅಗತ್ಯ ಹಣಕಾಸು ನೆರವು ಕೊಟ್ಟಿದೆ. ರೈಲು, ಮೆಟ್ರೊ ಯೋಜನೆಗಳಿಗೆ ಹಣ ಕೊಟ್ಟಿದೆ. ಮೋದಿ ಅವರು ಕರ್ನಾಟಕಕ್ಕೆ ಮಲತಾಯಿ ಧೋರಣೆ ಮಾಡಲಿಲ್ಲ. ಅಲ್ಲಿ ಪ್ರಧಾನಿ ಸರ್ಕಾರ, ಇಲ್ಲಿ ನನ್ನ ಸರ್ಕಾರ ಕೇಂದ್ರದಿಂದ ಹೆಚ್ಚುವರಿ ಹಣ ತಂದು ಕರ್ನಾಟಕವನ್ನು ಮಾದರಿ ರಾಜ್ಯ ಮಾಡಬೇಕು ಅಂದುಕೊಂಡಿದ್ದೆ. ರಾಜ್ಯದ ಜನ ೧೧೩ ಸ್ಥಾನ ನೀಡಿದ್ದರೆ ರಾಜ್ಯದ ಚಿತ್ರಣವೇ ಬೇರೆ ಇರುತ್ತಿತ್ತು ಎಂದು ಅವರು ನುಡಿದರು.  ‘ಇದೇ ಮೊದಲಲ್ಲ. ನನ್ನ ಜೀವನದ ಉದ್ದಗಲಕ್ಕೂ ಅಗ್ನಿಪರೀಕ್ಷೆ ಎದುರಿಸಿದ್ದೇನೆ. ಜೀವನದ ಕೊನೆಯ ಉಸಿರಿನವರೆಗೂ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಲಿದ್ದೇನೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ೨೮ಕ್ಕೆ ೨೮ ಲೋಕಸಭೆ ಕ್ಷೇತ್ರಗಳನ್ನೂ, ವಿಧಾನಸಭಾ ಚುನಾವಣೆಗಳಲ್ಲಿ ೧೫೦ ಸ್ಥಾನಗಳನ್ನು ಗೆಲ್ಲಿಸಿಕೊಡುತ್ತೇನೆ. ಆಶೀರ್ವಾದ ಮಾಡಿದ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅಧಿಕಾರ ಇರಲಿ, ಬಿಡಲಿ, ಜನರಿಗಾಗಿ ಜೀವ ಸವೆಸಲಿದ್ದೇನೆ ಎಂದು ಬಿಜೆಪಿ ನಾಯಕ ಹೇಳಿದರು.  ‘ಕಾಂಗ್ರೆಸ್ ನಾಯಕರ ಕುತಂತ್ರದಿಂದ ಜನಾದೇಶಕ್ಕೆ ಹಿನ್ನಡೆಯಾಗಿದೆ. ಅಧಿಕಾರ ಕೊಡದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಅಂತ ಕೆಲವರು ಹೇಳಿದ್ದರು. ನಾನು ಹಾಗಲ್ಲ. ಜನರಿಗಾಗಿ ಪ್ರಾಣ ಕೊಡುತ್ತೇನೆ ಎಂದು ಅವರು ಹೇಳಿದ ಅವರು ರಾಜೀನಾಮೆಯ ಘೋಷಣೆ ಮಾಡಿ, ವಿಧಾನಸಭಾಧ್ಯಕ್ಷರಿಗೂ ವಂದನೆ ಸಲ್ಲಿಸಿ ಸದನದಿಂದ ಹೊರನಡೆದರು. ಹಲವಾರು ಬಿಜೆಪಿ ಸದಸ್ಯರೂ ಅವರನ್ನು ಹಿಂಬಾಲಿಸಿದರು.  ಬೆಳಗ್ಗೆ ’ವಂದೇ ಮಾತರಂ ಜೊತೆಗೆ ಆರಂಭವಾಗಿದ್ದ ಕಲಾಪ, ಮುಖ್ಯಮಂತ್ರಿ ಹೊರನಡೆದ ಬಳಿಕ ’ಜನಗಣ ಮನದೊಂದಿಗೆ ಅಂತ್ಯಗೊಂಡಿತು.  ಸುಪ್ರೀಂಕೋರ್ಟ್ ತೀರ್ಪು ಬರುವುದಕ್ಕೂ ಮುನ್ನವೇ ಹಂಗಾಮೀ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರು ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಯನ್ನು ಹಂಗಾಮೀ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ತಮ್ಮ ವಿರುದ್ಧದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದ ಬಳಿಕ ನಿರಾತಂಕವಾಗಿ ತಮ್ಮ ಕರ್ತವ್ಯವನ್ನು ಮುಂದುವರೆಸಿದ್ದರು.   ಬಿಜೆಪಿಯ ಎಲ್ಲ ೧೦೪ ಸದಸ್ಯರು, ಕಾಂಗ್ರೆಸ್ಸಿನ ೭೮ ಸದಸ್ಯರ ಪೈಕಿ ೭೬ ಮಂದಿ ಮತ್ತು ಜನತಾದಳದ ೩೬ ಮತ್ತು ಇತರ ಇಬ್ಬರು ಸದಸ್ಯರು ಸದನದಲ್ಲಿ ಹಾಜರಿದ್ದರು. ಕಾಂಗ್ರೆಸ್ ಸದಸ್ಯರಾದ ಆನಂದ ಸಿಂಗ್ ಮತ್ತು ಪ್ರತಾಪ ಗೌಡ ಪಾಟೀಲ್ ಗೈರು ಹಾಜರಾಗಿದ್ದರು. ಮಧ್ಯಾಹ್ನದ ವೇಳೆಗೆ ಹೊಟೇಲಿನಲ್ಲಿ ಬಿಜೆಪಿ ನಾಯಕರ ಜೊತೆಗೆ ಪತ್ತೆಯಾದ ಈ ಇಬ್ಬರೂ ಶಾಸಕರು ಬಳಿಕ ಪೊಲೀಸ್ ಬಂದೋಬಸ್ತಿನಲ್ಲಿ ವಿಧಾನಸೌಧಕ್ಕೆ ಬರುತ್ತಿದ್ದಂತೆಯೇ ಹೈಡ್ರಾಮ ನಡೆದು ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಅವರನ್ನು ತಡೆದು ನೇರವಾಗಿ ಕಾಂಗ್ರೆಸ್ ಸದಸ್ಯರು ಇದ್ದ ಕಡೆಗೆ ಕರೆದೊಯ್ದರು.  ಈ ಮಧ್ಯೆ ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪ, ಅವರ ಪುತ್ರ ಮತ್ತು ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್ ನಾಯಕ ಉಗ್ರಪ್ಪ ಕೆಲವು ಆಡಿಯೋಗಳನ್ನೂ ಬಿಡುಗಡೆ ಮಾಡಿದರು.

2018: ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸದನದಲ್ಲಿ ಬಲಾಬಲ ಪರೀಕ್ಷೆಗೆ ಮುನ್ನವೇ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ’ಪ್ರಧಾನಿ ರಾಷ್ಟ್ರಕ್ಕಿಂತ ದೊಡ್ಡವರಲ್ಲ ಎಂಬುದು ಕರ್ನಾಟಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿರುವ ಸಂದೇಶ ಎಂದು ಹೇಳಿದರೆ, ಬಿಜೆಪಿಯು ’ಯಡಿಯೂರಪ್ಪ ಅವರು ಪ್ರಜಾತಂತ್ರವನ್ನು ಗೌರವಿಸಿದ್ದಾರೆ ಎಂದು ಪ್ರಶಂಸಿಸಿತು.  ‘ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ಮೋದಿ ಜನರ ಆಶಯ ಮತ್ತು ರಾಷ್ಟ್ರದ ಪ್ರಜಾತಾಂತ್ರಿಕ ಸಂಸ್ಥೆಗಳನ್ನು ಅಗೌರವಿಸಿದ್ದಾರೆ. ನೀವು ಗಮನಿಸಿದ್ದೀರಾ? ಕರ್ನಾಟಕದ ವಿಧಾನಸೌಧದಲ್ಲಿ ನಡೆದ ಇಡೀ ಕಸರತ್ತಿನಲ್ಲಿ ಬಿಜೆಪಿ ಶಾಸಕರು ಮತ್ತು ಸಭಾಧ್ಯಕ್ಷರು ರಾಷ್ಟ್ರಗೀತೆಗೂ ಮುನ್ನ ಎದ್ದು ಹೊರಹೋಗಲು ಸಜ್ಜಾಗಿದ್ದರು ಎಂದು ರಾಹುಲ್ ನುಡಿದರು. ’ನೀವು ಅಧಿಕಾರದಲ್ಲಿ ಇದ್ದೀರಿ ಎಂಬ ಏಕೈಕ ಕಾರಣಕ್ಕೆ ಈ ರಾಷ್ಟ್ರದಲ್ಲಿ ಹೀಗೆ ಪ್ರತಿಯೊಂದು ಸಂಸ್ಥೆಯನ್ನು ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನು ಅಗೌರವಿಸಲಾಗುತ್ತಿದೆ. ಇದು ಬಿಜೆಪಿ ಮತ್ತು ಆರೆಸ್ಸೆಸ್ ಮತ್ತೆ ಮತ್ತೆ ಮಾಡುತ್ತಿರುವ ಕೆಲಸ. ಸುಪ್ರೀಂಕೋರ್ಟ್, ವಿಧಾನಸೌದ ಅಥವಾ ಸಂಸತ್ತೇ ಇರಲಿ ಅವರು ಇದನ್ನೇ ಮಾಡುತ್ತಿದ್ದಾರೆ. ಗೋವಾ, ಮೇಘಾಲಯ, ಮಣಿಪುರದಲ್ಲಿ ಅವರು ಜನಾದೇಶವನ್ನು ಅಗೌರವದಿಂದ ಕಂಡಿದ್ದಾರೆ ಎಂದು ರಾಹುಲ್ ಹೇಳಿದರು.  ‘ಈ ರಾಷ್ಟ್ರದ ಸಂಸ್ಥೆಗಳು ಅವರಿಗಿಂತ, ಅವರ ಅಧಿಕಾರ ಮತ್ತು ಹಣಕಿಂತ ದೊಡ್ಡವು ಎಂಬುದನ್ನು ಈಗ ಅವರಿಗೆ ತೋರಿಸಲಾಗಿದೆ ಎಂಬುದಕ್ಕಾಗಿ ನನಗೆ ಸಂತಸವಿದೆ. ಅಷ್ಟೇ ಅಲ್ಲ, ಭಾರತ, ಜನರ ಇಚ್ಛೆ ಎಲ್ಲಕ್ಕಿಂತ ದೊಡ್ಡದು ಎಂಬುದನ್ನೂ ಅವರಿಗೆ ತೋರಿಸಲಾಗಿದೆ ಎಂಬುದು ನನಗೆ ಖುಷಿಯ ವಿಷಯ ಎಂದು ನುಡಿದ ರಾಹುಲ್,  ಕುಮಾರಸ್ವಾಮಿ, ಸಿದ್ದರಾಮಯ್ಯ ಮತ್ತು ದೇವೇಗೌಡ ಅವರಿಗೆ ಶುಭಾಶಯಗಳನ್ನು ಕೋರಿದರು.  ‘ಪ್ರಧಾನಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದಾರೆ ಎಂಬುದು ಅಪ್ಪಟ ಸುಳ್ಳು. ಅವರೇ ಭ್ರಷ್ಟಾಚಾರವಾಗಿದ್ದಾರೆ. ಈ ದೇಶದಲ್ಲಿನ ಪ್ರತಿಯೊಬ್ಬರಿಗೂ ಪ್ರಧಾನಿಯ ನಾಯಕತ್ವದ ಮಾದರಿ ಏನೆಂಬುದು ಗೊತ್ತಿದೆ. ಅದು ಪ್ರಜಾತಾಂತ್ರಿಕವಲ್ಲ, ಸರ್ವಾಧಿಕಾರದ ಮಾದರಿ ಎಂದು ರಾಹುಲ್ ನುಡಿದರು.  ಬಿಎಸ್ ವೈಗೆ ಬಿಜೆಪಿ ಶ್ಲಾಘನೆ: ’ಪ್ರಜಾಪ್ರಭುತ್ವವನ್ನು ಹೇಗೆ ಗೌರವಿಸಬೇಕು ಎಂಬುದನ್ನು ಯಡಿಯೂರಪ್ಪ ಅವರು ಇಂದು ಇಡೀ ವಿಶ್ವಕ್ಕೆ ಕಲಿಸಿಕೊಟ್ಟಿದ್ದಾರೆ. ಅವರು ಜನರ ಹೃದಯ ಹೊಕ್ಕಿದ್ದಾರೆ ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ರಾಹುಲ್ ಗಾಂಧಿಯವರು ಬಿಜೆಪಿಯನ್ನು ಕಾಂಗ್ರೆಸ್ ಪರಾಭವಗೊಳಿಸಿದೆ ಎಂದು ಹೇಳಿದ್ದಾರೆ. ನಾವು ಮೊದಲು ೪೦ ಸ್ಥಾನ ಹೊಂದಿದ್ದೆವು. ಈಗ ೧೦೪ ಸ್ಥಾನ ಹೊಂದಿದ್ದೇವೆ. ಕಾಂಗ್ರೆಸ್ ೧೨೨ ಸ್ಥಾನಗಳಿಂದ ೭೮ ಸ್ಥಾನಗಳಿಗೆ ಇಳಿದಿದೆ ಎಂದು ಅವರು ನುಡಿದರು.  ‘ಹಾಲಿ ಮುಖ್ಯಮಂತ್ರಿ ಸೋತರು, ೧೪ ಸಚಿವರು ಸೋತರು. ರಾಹುಲ್ ಗಾಂಧಿ ಅವರ ಹೇಳಿಕೆ ಹಾಸ್ಯಾಸ್ಪದ. ಕಾಂಗ್ರೆಸ್ ಉಗಿದು ಓಡುವ ನೀತಿಯನ್ನು ಅನುಸರಿಸುತ್ತಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಮತ್ತು ಜೆಡಿ(ಎಸ್) ಈಗ ಮೈತ್ರಿಕೂಟ ರಚಿಸಿವೆ. ಆದರೆ ಚುನಾವಣಾ ಪ್ರಚಾರ ಕಾಲದಲ್ಲಿ ಅವರು ಜೆಡಿ(ಎಸ್)ನ್ನು ಅವಮಾನಿಸಿದ್ದರು. ಇದೊಂದು ಅವಕಾಶವಾದಿ ಮೈತ್ರಿ. ಜೆಡಿ(ಎಸ್) ಕಾಂಗ್ರೆಸ್ಸಿನ ಬಿ ಟೀಮ್ ಎಂಬುದು ಈಗ ಸಾಬೀತಾಗಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಹೇಳಿದರು.  ಆಪರೇಷನ್ ಕಮಲ ವಿಫಲ: ಬೇರೆ ಪಕ್ಷಗಳಿಂದ ಶಾಸಕರನ್ನು ಸೆಳೆಯಲು ಬಿಜೆಪಿ ಹಮ್ಮಿಕೊಂಡ ’ಆಪರೇಷನ್ ಕಮಲ ವಿಫಲಗೊಂಡಿದೆ ಮತ್ತು ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ ಎಂದು ಕಾಂಗ್ರೆಸ್ಸಿನ ಮುಖ್ಯ ವಕ್ತಾರ ರಣ್ ದೀಪ್ ಸಿಂಗ್ ಸುರ್ಜಿವಾಲ ಹೇಳಿದರು.  ‘ಆಪರೇಷನ್ ಕಮಲ ವಿಫಲಗೊಂಡಿದೆ. ರಾಷ್ಟ್ರವೇ ಭವಿಷ್ಯ ಹೇಳಿದ್ದಂತೆ ಬಿಎಸ್ ಯಡಿಯೂರಪ್ಪ ಎರಡೇದಿನ ಮುಖ್ಯಮಂತ್ರಿಯಾಗುವ ಮೂಲಕ ಏಳು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಪ್ರಜಾಪ್ರಭುತ್ವ ಗೆದ್ದಿದೆ. ಸಂವಿಧಾನ ಗೆದ್ದಿದೆ ಎಂದು ಅವರು ಟ್ವೀಟ್ ಮಾಡಿದರು. ಪಿ. ಚಿದಂಬರಂ: ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಸದ್ಯಕ್ಕೆ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಉಳಿಯಿತು ಎಂದು ಹೇಳಿದ್ದಾರೆ. ’ಪಾಪ ಯಡಿಯೂರಪ್ಪ, ಸೂತ್ರಧಾರರು ವಿಫಲರಾದಾಗ ಕೈಗೊಂಬೆ ಕೆಳಕ್ಕೆ ಬಿದ್ದು ಒಡೆದುಹೋಗುತ್ತದೆ ಎಂದು ಬಿಜೆಪಿ ವರಿಷ್ಠ ನಾಯಕತ್ವವನ್ನು ಹೆಸರಿಸದೆಯೇ ಅವರು ಟ್ವಿಟ್ಟರಿನಲ್ಲಿ ಟೀಕಿಸಿದರು.  ಗುಲಾಂ ನಬಿ ಆಜಾದ್: ’ನಾವು ನ್ಯಾಯಾಂಗಕ್ಕೆ ಧನ್ಯವಾದ ಹೇಳಲು ಮತ್ತು ಅಭಿನಂದಿಸಲು ಬಯಸುತ್ತೇವೆ. ಸುಪ್ರೀಂಕೋರ್ಟ್ ಮತ್ತೊಮ್ಮೆ ಸಂದರ್ಭಕ್ಕೆ ಸರಿಯಗಿ ಎದ್ದು ನಿಂತಿದೆ ಎಂದು ಗುಲಾಂ ನಬಿ ಆಜಾದ್ ಅವರು ಬೆಂಗಳೂರಿನಲ್ಲಿ ವಿಧಾನಸೌಧದ ಹೊರಗೆ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ‘ರಾಜ್ಯಪಾಲರು ಬಿಜೆಪಿಗೆ ಬಹುಮತ ಸಾಬೀತಿಗಾಗಿ ಕುದುರೆ ವ್ಯಾಪಾರಕ್ಕೆ ೧೫ ದಿನಗಳ ಕಾಲಾವಕಾಶ ನೀಡಿದರು. ಆದರೆ ಸುಪ್ರೀಂಕೋರ್ಟ್ ಇದರಲ್ಲಿ ಔಚಿತ್ಯವನ್ನು ಕಾಣಲಿಲ್ಲ. ಬಿಜೆಪಿ ಬಳಿ ಅಷ್ಟೊಂದು ಸಂಖ್ಯೆಯಲ್ಲಿ ಶಾಸಕರಿಲ್ಲ ಎಂಬುದು ಗೊತ್ತಿದ್ದೇ ಗೌರವಾನ್ವಿತ ರಾಜ್ಯಪಾಲರು ಅವರಿಗೆ ಸಾಕಷ್ಟು ಕಾಲಾವಕಾಶ ನೀಡಬಯಸಿದ್ದರು ಎಂದು ಆಜಾದ್ ನುಡಿದರು. ಅಖಿಲೇಶ್ ಯಾದವ್:  ಕೇಂದ್ರದಲ್ಲಿನ ಬಿಜೆಪಿ ಸರ್ಕಾರವು ನೈತಿಕ ಆಧಾರದಲ್ಲಿ ರಾಜೀನಾಮೆ ನೀಡಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಟ್ವೀಟ್ ಮಾಡಿದರು. ‘ಧನಬಲದ ವಿರುದ್ಧ ವಿರೋಧ ಪಕ್ಷವು ಜಯಗಳಿಸಿದ ದಿನ ಇದು. ಪ್ರತಿಯೊಬ್ಬರನ್ನೂ ಕೊಂಡುಕೊಳ್ಳುತ್ತೇವೆ ಎಂದು ಪ್ರತಿಪಾದಿಸುವವರಿಗೆ ಭಾರತದ ರಾಜಕೀಯದಲ್ಲಿ ಇನ್ನೂ ರಾಜಕೀಯವನ್ನು ವ್ಯಾಪಾರವಾಗಿ ಪರಿಗಣಿಸದೇ ಇರುವವರು ಇದ್ದಾರೆ ಎಂಬುದರ ಸೂಚನೆ ಇದು. ಕೇಂದ್ರ ಸರ್ಕಾರವು ನೈತಿಕ ಆಧಾರದಲ್ಲಿ ರಾಜೀನಾಮೆ ನೀಡಬೇಕು ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ: ಯಡಿಯೂರಪ್ಪ ಅವರು ಸದನದಲ್ಲಿ ಬಲಾಬಲ ಪರೀಕ್ಷೆ ಎದುರಿಸದೆಯೇ ರಾಜೀನಾಮೆ ನೀಡಿದ್ದು ’ಭಾರತದ ಸಂವಿಧಾನ ಮತ್ತು ಕಾನೂನಿನ ಆಡಳಿತದ ವಿಜಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. ಬಿಜೆಪಿಯು ರಾಜ್ಯಪಾಲರಂತಹ ಸಾಂವಿಧಾನಿಕ ಕಚೇರಿಗಳನ್ನು ಮಾತ್ರವೇ ದುರುಪಯೋಗ ಮಾಡಿದ್ದಲ್ಲ, ನಮ್ಮ ಶಾಸಕರನ್ನು ಒಡೆಯಲು ಲಂಚದ ಆಮಿಷ ಸೇರಿದಂತೆ ಎಲ್ಲ ಬಗೆಯ ಕೊಳಕು ತಂತ್ರಗಳನ್ನೂ ಪ್ರಯೋಗಿಸಿತು. ಇದು ದಾಖಲೆ ಸಹಿತವಾಗಿಯೇ ಸಾಬೀತಾಗಿದೆ. ನಮ್ಮ ಶಾಸಕರು ಅದಕ್ಕೆ ಬಲಿಯಾಗಲಿಲ್ಲ ಮತ್ತು ಕೋಮುಶಕ್ತಿಗಳಿಗೆ ರಾಜ್ಯದಲ್ಲಿ ಅಧಿಕಾರ ವಶಪಡಿಸಿಕೊಳ್ಳಲು ಅವಕಾಶ ನೀಡಲಿಲ್ಲ ಎಂಬ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಅವರು ನುಡಿದರು. ಮಮತಾ ಬ್ಯಾನರ್ಜಿ: ಮೂರು ದಿನಗಳ ಬಿಜೆಪಿ ಸರ್ಕಾರದ ಪತನವು ಪ್ರಾದೇಶಿಕ ರಂಗದ ವಿಜಯ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ’ಪ್ರಜಾಪ್ರಭುತ್ವ ಗೆದ್ದಿದೆ. ಕರ್ನಾಟಕಕ್ಕೆ ಅಭಿನಂದನೆಗಳು. ದೇವೇಗೌಡಜಿ, ಕುಮಾರಸ್ವಾಮಿಜಿ, ಕಾಂಗ್ರೆಸ್ ಮತ್ತು ಇತರರಿಗೆ ಅಭಿನಂದನೆಗಳು, ಪ್ರಾದೇಶಿಕ ರಂಗದ ವಿಜಯ ಎಂದು ಅವರು ಟ್ವೀಟ್ ಮಾಡಿದ್ದಾರೆ.

2018: ಬೆಂಗಳೂರು: ಕರ್ನಾಟಕದಲ್ಲಿ ಇದೀಗ ಕುಮಾರ ಪರ್ವ ಆರಂಭವಾಗಿದ್ದು, ಮೇ 23ರ ಬುಧವಾರ ಎಚ್ ಡಿ ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭ ವಿಧಾನಸೌಧದ ಎದುರು ನಡೆಯಲಿದೆ. ಜೆಡಿಎಸ್ ನಾಯಕ ಕುಮಾರ ಸ್ವಾಮಿ ಅವರು ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದ ಬಳಿಕ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು. ಕಳೆದ ಮೇ ೧೫ರಂದೇ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟ  ಸರ್ಕಾರ ರಚಿಸುವ ಬಗ್ಗೆ ರಾಜ್ಯಪಾಲರನ್ನು ಕಂಡು ಮನವಿ ಸಲ್ಲಿಸಿತ್ತು.  ಈದಿನ  ಬಿ.ಎಸ್. ಯಡಿಯೂರಪ್ಪ ಅವರ ರಾಜೀನಾಮೆಯ ಬಳಿಕ, ತಮ್ಮ ಮೈತ್ರಿಕೂಟಕ್ಕೆ ಸರ್ಕಾರ ರಚಿಸುವಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಆಹ್ವಾನ ನೀಡಿದ್ದು,  ಸದನದಲ್ಲಿ ಬಹುಮತ ಸಾಬೀತುಪಡಿಸಲು ೧೫ ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದರು.  ತಮ್ಮ ಭಾವೀ ಸಂಪುಟದಲ್ಲಿ ಯಾವ ಪಕ್ಷದ ಯಾರು ಯಾರು ಯಾವ ಯಾವ ಸಚಿವ ಪದ ಹೊಂದಲಿದ್ದಾರೆ ಎಂಬುದನ್ನು ಈದಿನ ರಾತ್ರಿ ನಡೆಸಲು ಉದ್ದೇಶಿಸಲಾಗಿರುವ ಉಭಯ ಪಕ್ಷಗಳ ಹಿರಿಯ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಕುಮಾರ ಸ್ವಾಮಿ ನುಡಿದರು. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ, ಮಾಯಾವತಿ, ಚಂದ್ರಶೇಖರ ರಾವ್, ಚಂದ್ರಬಾಬು ನಾಯ್ಡು ಮೊದಲಾದವರನ್ನು ಆಹ್ವಾನಿಸಲಾಗುವುದು. ಸದನದಲ್ಲಿ ಬಹುಮತ ಸಾಬೀತು ಪಡಿಸುವ ದಿನಾಂಕವನ್ನು ಆದಷ್ಟು ಬೇಗನೆ ನಿರ್ಧರಿಸಲಾಗುವುದು ಎಂದು ಕುಮಾರ ಸ್ವಾಮಿ ಹೇಳಿದರು.

2018: ನವದೆಹಲಿ: ಹಂಗಾಮಿ ಸಭಾಧ್ಯಕ್ಷರಾಗಿ ಕೆಜಿ ಬೋಪಯ್ಯ ಅವರನ್ನು ನೇಮಕ ಮಾಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ವಜಾಗೊಳಿಸಿ ಈದಿನ  ಬೆಳಗ್ಗೆ ಆದೇಶ ನೀಡಿದ್ದು, ಬೋಪಯ್ಯ ಅವರು ಹಂಗಾಮಿ ಸ್ಪೀಕರ್ ಆಗಿ ಮುಂದುವರಿಯುವ ಹಾದಿ ಸುಗಮಗೊಂಡಿತು. ಆದರೆ ಪಾರದರ್ಶಕತೆ ಸಲುವಾಗಿ ವಿಶ್ವಾಸಮತ ಯಾಚನೆ ಕಲಾಪದ ನೇರ ಪ್ರಸಾರ ನಡೆಸುವಂತೆ ಪೀಠ ನಿರ್ದೇಶಿಸಿತು.
ಈ ನಿಟ್ಟಿನಲ್ಲಿ ಕಾಂಗ್ರೆಸ್ ಕಾನೂನು ಸಮರಕ್ಕೆ ಹಿನ್ನಡೆ ಉಂಟಾಯಿತು. ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಮಂಡಿಸಿದ್ದ ವಾದಕ್ಕೆ ಮನ್ನಣೆ ನೀಡದ ಸುಪ್ರೀಂಕೋರ್ಟ್ ಪೀಠ, ಹಿಂದಿನ ದಿನ ತಾನು ನೀಡಿದ್ದ ಮಾರ್ಗಸೂಚಿಯಂತೆ ಹಂಗಾಮಿ ಸ್ಪೀಕರ್ ಕಾರ್ಯನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಿತು.  ಕಪಿಲ್ ಸಿಬಲ್ ವಾದ: ಹಿರಿಯ ಶಾಸಕರನ್ನೇ ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡುವುದು ಸಂಪ್ರದಾಯ, ಆದರೆ ಹಿರಿತನ ಕಡೆಗಣಿಸಿ ರಾಜ್ಯಪಾಲರು ಕೆಜಿ ಬೋಪಯ್ಯ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿದ್ದಾರೆ. ಹೀಗಾಗಿ ವಿಶ್ವಾಸಮತ ಯಾಚನೆ ವೇಳೆ ಕೆಜಿ ಬೋಪಯ್ಯ ಹಂಗಾಮಿ ಸ್ಪೀಕರ್ ಆಗಿರುವುದು ಬೇಡ. ಬೋಪಯ್ಯ ಅವರ ಟ್ರ್ಯಾಕ್ ರೆಕಾರ್ಡ್ ಕೂಡಾ ಸರಿಯಿಲ್ಲ, ಅವರ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿಯೇ ವಿಚಾರಣೆ ನಡೆದಿತ್ತು ಎಂದು ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.  ಸುಪ್ರೀಂ ತ್ರಿಸದಸ್ಯ ಪೀಠದ ಅಭಿಪ್ರಾಯ:  ಹಿರಿತನ ಎಂದರೆ ವಯಸ್ಸಿನಲ್ಲಿ ಅಲ್ಲ, ಹೆಚ್ಚು ಬಾರಿ ಆಯ್ಕೆಯಾದವರು ಎಂದರ್ಥ ಎಂಬುದಾಗಿ ನ್ಯಾ. ಎಸ್ ಎ ಬೋಬಡೆ ಅಭಿಪ್ರಾಯ ವ್ಯಕ್ತಪಡಿಸಿದರು. ಬಳಿಕ ಬೋಪಯ್ಯ ನೇಮಕ ಮೊದಲು ಪರಿಶೀಲನೆ ಮಾಡಬೇಕಾದರೆ ವಿಶ್ವಾಸಮತ ಯಾಚನೆ ಮುಂದೂಡಬೇಕಾಗುತ್ತದೆ. ಹಂಗಾಮಿ ಸಭಾಧ್ಯಕ್ಷರಿಗೆ ನೋಟಿಸ್ ನೀಡಬೇಕಾಗುತ್ತದೆ ಎಂದು ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳು ಹೇಳಿದರು. ಇದಕ್ಕೆ ಬಿಜೆಪಿ ಪರ ವಕೀಲ ಮುಕುಲ್ ರೋಹ್ಟಗಿ ಕೂಡಾ ಸಹಮತ ವ್ಯಕ್ತ ಪಡಿಸಿದರು.  ಇದಕ್ಕೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಕೂಡಾ ಸಮ್ಮತಿಸಿದರು. ಆದರೆ ಕಾಂಗ್ರೆಸ್ ಪರ ವಕೀಲ ಕಪಿಲ್ ಸಿಬಲ್ ಆಕ್ಷೇಪ ವ್ಯಕ್ತಪಡಿಸಿದರು. ವಿಶ್ವಾಸ ಮತಯಾಚನೆ ಇಂದೇ ನಡೆಯಬೇಕು, ಆದರೆ ಬೋಪಯ್ಯ ಅವರು ವಿಶ್ವಾಸ ಮತ ಯಾಚನೆಯನ್ನು ನಿರ್ವಹಿದಂತೆ ನಿರ್ಬಂಧಿಸಬೇಕು ಎಂದು ಸಿಬಲ್ ಕೋರಿದರು.  ಈ ಹಂತದಲ್ಲಿ ನಿಮ್ಮ ವಾದದಲ್ಲೇ ಗೊಂದಲವಿದೆ. ಹಂಗಾಮಿ ಸ್ಪೀಕರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕೋರ್ಟ್ ರಾಜ್ಯಪಾಲರಿಗೆ ನಿರ್ದೇಶಿಸಲು ಸಾಧ್ಯವಿಲ ಎಂದು ಹೇಳಿದ ಪೀಠ, ಅರ್ಜಿಯನ್ನು ತಿರಸ್ಕರಿಸಿತು. ಇದೇ ವೇಳೆಗೆ ವಿಶ್ವಾಸ ಮತ ಯಾಚನೆಯ ಪೂರ್ತಿ ಕಲಾಪವನ್ನು ವಿಡಿಯೋದಲ್ಲಿ ದಾಖಲಿಸಬೇಕು ಮತ್ತು ನೇರಪ್ರಸಾರ ನಡೆಯಬೇಕು ಎಂದು ಮುಖ್ಯ ಕಾರ್ಯದರ್ಶಿಯವರಿಗೆ ನ್ಯಾಯಮೂರ್ತಿ ಎಸ್.ಎ. ಖೋಬಡೆ ಅವರು ನಿರ್ದೇಶಿಸಿದರು.
ಸಂವಿಧಾನದ ನಿಯಮಾವಳಿ ಬದಿಗೆ ತೂರಿ ರಾಜ್ಯಪಾಲರು ಬೋಪಯ್ಯ ಅವರನ್ನು ನೇಮಕ ಮಾಡಿದ್ದಾರೆ. ಅಲ್ಲದೆ ೨೦೦೯ರಿಂದ ೨೦೧೩ರವರೆಗೆ ಸಭಾಧ್ಯಕ್ಷರಾಗಿದ್ದ್ದ ಬೋಪಯ್ಯ ಕೆಲವು ವಿವಾದಾತ್ಮಕ ನಿರ್ಧಾರ ತೆಗೆದುಕೊಂಡಿದ್ದರು. ಈ ನಿರ್ಧಾರಗಳನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ಹೀಗಾಗಿ ಕಳಂಕಿತ ಬೋಪಯ್ಯ ಅವರನ್ನು ಸಭಾಧ್ಯಕ್ಷರಾಗಿ ಮುಂದುವರೆಸಬಾರದು. ಇದು ನಮ್ಮ ಅಳಿವು, ಉಳಿವಿನ ಪ್ರಶ್ನೆಯಾಗಿದ್ದು, ಈ ಕೂಡಲೇ ವಿಚಾರಣೆಗೆ ತೆಗೆದುಕೊಳ್ಳಬೇಕು ಎಂದು ಮೇ 18ರ ಶುಕ್ರವಾರ ರಾತ್ರಿ ೮ಗಂಟೆ ಸುಮಾರಿಗೆ ಕಾಂಗ್ರೆಸ್ ನ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಗೆ ಮನವಿ ಸಲ್ಲಿಸಿದ್ದರು. ಮೇ 18ರ ಶುಕ್ರವಾರ ಸಂಜೆ, ರಾಜ್ಯಪಾಲ ವಜೂಭಾಯಿ ವಾಲಾ ಅವರು ಹಂಗಾಮಿ ಸಭಾಧ್ಯಕ್ಷರಾಗಿ ಬೋಪಯ್ಯ ಅವರನ್ನು ನೇಮಕ ಮಾಡಿ, ರಾಜಭವನದಲ್ಲಿ ಪ್ರಮಾಣವಚನ ಬೋಧಿಸಿದ್ದರು. ಬೋಪಯ್ಯ ನೇಮಕವನ್ನು ಪ್ರಶ್ನಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸುಪ್ರೀಂ ಕೋರ್ಟಿಗೆ ತಕರಾರು ಅರ್ಜಿ ಸಲ್ಲಿಸಿದ್ದರು. ತುರ್ತು ಹಾಗೂ ಜರೂರು ವಿಚಾರ ಎಂದು ಪರಿಗಣಿಸಿದ ಕೋರ್ಟ್, ಶನಿವಾರ ಬೆಳಗ್ಗೆ ವಿಚಾರಣೆಗೆ ವೇಳೆ ನಿಗದಿಗೊಳಿಸಿತ್ತು.

2018: ಹವಾನಾ: ಕ್ಯೂಬಾದ ಹವಾನಾ ವಿಮಾನ ನಿಲ್ದಾಣದಿಂದ ಗಗನಕ್ಕೆ ಏರಿದ ಬೋಯಿಂಗ್ ೭೩೭ ವಿಮಾನವೊಂದು ಈದಿನ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದ್ದು, ೧೦೦ಕ್ಕೂ ಅಧಿಕ ಪ್ರಯಾಣಿಕರು ಸಾವನ್ನಪ್ಪಿದರು. ಪತನಗೊಂಡ ವಿಮಾನದಲ್ಲಿ ೧೧೦ ಪ್ರಯಾಣಿಕರು ಪ್ರಯಾಣ ಹೊರಟಿದ್ದರು. ಈ ಘೋರ ದುರಂತದಲ್ಲಿ ಅದೃಷ್ಟವಶಾತ್ ಮೂವರು ಮಹಿಳೆಯರು ಪ್ರಾಣಾಪಾಯದಿಂದ ಪಾರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹವಾನಾದ ಜೋಸ್ಮಾರ್ಟಿ ವಿಮಾನ ನಿಲ್ದಾಣದಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿ ನೆಲಕ್ಕೆ ಅಪ್ಪಳಿಸಿದ ವಿಮಾನದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು, ವಿಮಾನ ಸುಟ್ಟು ಭಸ್ಮವಾಯಿತು. ವಿಮಾನ ನಿಲ್ದಾಣದ ಸುತ್ತಲೂ ದಟ್ಟ ಹೊಗೆ ಆವರಿಸಿರುವ ದೃಶ್ಯಗಳನ್ನು ಕ್ಯೂಬಾದ ಟಿವಿ ವಾಹಿನಿಗಳು ಬಿತ್ತರಿಸಿದವು. ಮಧ್ಯಾಹ್ನ ೧೨.೦೮ ಗಂಟೆಗೆ ಈ ದುರಂತ ಸಂಭವಿಸಿತು.  ವಿಮಾನವು ಕ್ಯೂಬಾದ ’ಕ್ಯೂಬಾನಾ ಡಿ ಏವಿಯೇಷನ್ ಸಂಸ್ಥೆಗೆ ಸೇರಿದ್ದು, ಹೊಲ್ಗ್ಯುಯಿನ್ ನಗರಕ್ಕೆ ಪ್ರಯಾಣ ಹೊರಟಿತ್ತು  ಎಂದು ತಿಳಿದುಬಂದಿದೆ. ಕ್ಯೂಬಾ ಇತಿಹಾಸದಲ್ಲೇ ಕಳೆದ ೩೦ ವರ್ಷಗಳಲ್ಲಿ ಸಂಭವಿಸಿದ ಅತಿ ಭೀಕರ ವಿಮಾನ ದುರಂತ ಇದು.
ಪ್ರಯಾಣಿಕರು ಮತ್ತು ಸಿಬ್ಬಂದಿಯಲ್ಲಿ ಐವರು ವಿದೇಶೀಯರು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇಬ್ಬರು ಅರ್ಜೆಂಟೈನಾ ನಾಗರಿಕರು ಮತ್ತು ಹಲವಾರು ಮಂದಿ ಮೆಕ್ಸಿಕನ್ ಪ್ರಜೆಗಳು ಎಂದು ವರದಿಗಳು ಹೇಳಿದವು. ಅಧ್ಯಕ್ಷ ಮಿಗ್ಯುಯೆಲ್ ಡಿಯಾಜ್-ಕೆನೆಲ್ ಅವರು ದುರಂತದಲ್ಲಿ ದೊಡ್ಡ ಸಂಖ್ಯೆಯ ಜನ ಸಾವನ್ನಪ್ಪಿದ ವರದಿ ಬಂದಿದೆ. ವಿಮಾನದ ಬೆಂಕಿಯನ್ನು ಅರಿಸಲಾಗಿದೆ. ಅಧಿಕಾರಿಗಳು ದುರಂತದ ಕಾರಣ ಪತ್ತೆಗೆ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು. ದುರಂತದ ಹಿನ್ನೆಲೆಯಲ್ಲಿ ಮೇ ೧೯ ಮತ್ತು ೨೦ರಂದು ಎರಡು ದಿನ ಶೋಕಾಚರಣೆಯನ್ನು ಕ್ಯಬಾ ಸರ್ಕಾರ ಘೋಷಿಸಿತು.

2018: ಬಾಗಲಕೋಟೆ: ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ  ಇಳಕಲ್-ಚಿತ್ತರಗಿ ವಿಜಯಮಹಾಂತೇಶ್ವರ ಸಂಸ್ಥಾನ ಮಠದ ೧೯ ನೇ ಪೀಠಾಧ್ಯಕ್ಷ ಡಾ.ಮಹಾಂತ ಶಿವಯೋಗಿಗಳು (೮೯) ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಯಲ್ಲಿ ಬೆಳಗ್ಗೆ ಲಿಂಗೈಕ್ಯರಾದರು.ವ್ಯಸನಮುಕ್ತ ಸಮಾಜ ನಿರ್ಮಾಣದ ಹರಿಕಾರರು ಎಂದೇ ಖ್ಯಾತರಾಗಿದ್ದ ಅವರು, ಪ್ರತಿ ಗ್ರಾಮ, ನಗರಗಳಲ್ಲಿ ಪಾದಯಾತ್ರೆ ನಡೆಸಿ, ಜನರ ವ್ಯಸನಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡು ಚಟಗಳನ್ನು ಬಿಡುವಂತೆ ಬೋಧನೆ ಮಾಡಿದ್ದರು.  ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದ್ದ ಶ್ರೀಗಳ  ಸಾಮಾಜಿಕ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಶ್ರೀಗಳ ಜನ್ಮ ದಿನವಾಗಿರುವ  ಆಗಸ್ಟ್ ೧ನೇ ದಿನಾಂಕವನ್ನು ಕಳೆದ ವರ್ಷ ಸರ್ಕಾರ ವ್ಯಸನಮುಕ್ತ ದಿನಾಚರಣೆಯನ್ನಾಗಿ ಘೋಷಣೆ ಮಾಡಿತ್ತು

2009: ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಕೂಟ ಸರ್ಕಾರ ರಚಿಸುವುದು ಖಾತರಿಯಾಗುತ್ತಿದ್ದಂತೆ ನಾ ಮುಂದು ತಾ ಮುಂದು ಎಂದು ಹಲವು ಪಕ್ಷಗಳು ಬೆಂಬಲ ನೀಡಲು ಮುಂದೆ ಬಂದವು. ಚುನಾವಣಾಪೂರ್ವದಲ್ಲಿ ಕಾಂಗ್ರೆಸ್ ಜೊತೆ ಕಚ್ಚಾಡಿದ್ದ 23 ಸಂಸದರನ್ನು ಹೊಂದಿರುವ ಸಮಾಜವಾದಿ ಪಕ್ಷ (ಎಸ್ಪಿ), 4 ಸದಸ್ಯರ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಸೇರಿದಂತೆ 21 ಸಂಸದರಿರುವ ಬಹುಜನ ಸಮಾಜ ಪಕ್ಷ (ಬಿಎಸ್ಪಿ), 1 ಸ್ಥಾನ ಗಳಿಸಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್), 3 ಸಂಸದರ ಜೆಡಿಎಸ್ ಬೆಂಬಲ ಸೂಚಿಸಿದವು. ಇದರೊಂದಿಗೆ ಯುಪಿಎ ಸಂಖ್ಯಾಬಲ 300ರ ಗಡಿ ದಾಟಿತು. ಬೆಳಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ, ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಅವರು ಯುಪಿಎಗೆ ಬಾಹ್ಯ ಬೆಂಬಲ ನೀಡುವುದಾಗಿ ಲಖನೌದಲ್ಲಿ ಘೋಷಿಸುತ್ತಿದ್ದಂತೆಯೇ, ಅಮರ್ ಸಿಂಗ್ ಅವರು ದೆಹಲಿಯಲ್ಲಿ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ತಮ್ಮ ಪಕ್ಷದ ಬೆಂಬಲ ಪತ್ರವನ್ನು ಸಲ್ಲಿಸಿಬಿಟ್ಟರು.

2009: ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾ ಗಾಂಧಿ ಅವರು ಮರು ಆಯ್ಕೆಗೊಂಡರು. ಚುನಾವಣಾ ಪೂರ್ವ ಮಿತ್ರರು, ಮಿತ್ರರಲ್ಲದವರಿಂದಲೂ ಪೈಪೋಟಿ ಮೇಲೆ ಬೋನಸ್ ರೂಪದಲ್ಲಿ ಬೆಂಬಲದ ಮಹಾಪೂರ ಹರಿದು ಬಂದ ಸಂಭ್ರಮದ ಮಧ್ಯೆಯೇ, ಮನಮೋಹನ್ ಸಿಂಗ್ (76) ಅವರ ಪ್ರಧಾನಿ ಪಟ್ಟದ ಎರಡನೇ ಇನಿಂಗ್ಸ್ ಆರಂಭಕ್ಕೆ ಶ್ರೀಕಾರ ಹಾಕಲಾಯಿತು.

2009: ವಿಶ್ವದ ಅತ್ಯಂತ ಬಲಿಷ್ಠ ಉಗ್ರ ಕಾರ್ಯಜಾಲದ ರೂವಾರಿ, ವ್ಯಾಘ್ರ ಪಡೆ ಎಲ್‌ಟಿಟಿಇಯ ಅಧಿನಾಯಕ ವೇಲುಪಿಳ್ಳೈ ಪ್ರಭಾಕರನ್ ಸಾವನ್ನು ಶ್ರೀಲಂಕಾದ ರಕ್ಷಣಾ ಸಚಿವಾಲಯ ದೃಢ ಪಡಿಸಿತು. ಇದಕ್ಕೆ ಪೂರಕವೆಂಬಂತೆ ಗುಂಡೇಟಿನಿಂದ ಗಾಯ ಗೊಂಡ ಆತನ ಮೃತದೇಹದ ಚಿತ್ರಗಳನ್ನು ಸರ್ಕಾರಿ ಸ್ವಾಮ್ಯದ ಟಿವಿಗೆ ಬಿಡುಗಡೆ ಮಾಡಿತು. 'ಪ್ರಭಾಕರನ್ ಶವ ನಂದಿಕಡಲ್ ಲಗೂನ್‌ನಲ್ಲಿ ಪತ್ತೆಯಾಗಿದೆ. ಎಲ್‌ಟಿಟಿಇಯ ಸಮವಸ್ತ್ರದಲ್ಲಿದ್ದ ಆತನ ತಲೆಗೆ ಗುಂಡಿನ ಗಾಯಗಳಾಗಿವೆ' ಎಂದು ಸೇನಾ ವಕ್ತಾರ ಬ್ರಿಗೇಡಿಯರ್ ಉದಯ ನನಯಕ್ಕಾರ ತಿಳಿಸಿದರು. ಇದಕ್ಕೆ ಮುನ್ನ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರು ಸಂಸತ್ತನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ, ಬಂಡು ಕೋರ ಸಂಘಟನೆಯ ವಿರುದ್ಧ ಸೇನೆಯ ದಿಗ್ವಿಜಯವನ್ನು ಘೋಷಿಸಿದ್ದರೂ, ಒಮ್ಮೆಯೂ ಪ್ರಭಾಕರನ್ ಸಾವಿನ ಪ್ರಸ್ತಾಪ ಮಾಡಿರಲಿಲ್ಲ. ಜತೆಗೆ ಎಲ್‌ಟಿಟಿಇ ಪರ ವೆಬ್‌ಸೈಟ್ ಸಹ ತನ್ನ ನಾಯಕ ಇನ್ನೂ ಬದುಕುಳಿದಿದ್ದಾನೆ ಎಂದೇ ಪ್ರತಿಪಾದಿಸಿತ್ತು. ಇದು ಪ್ರಭಾಕರನ್ ಸಾವಿನ ಸುತ್ತ ಸಂಶಯದ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಆದರೆ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿದ ವಿಡಿಯೊ ದೃಶ್ಯಗಳಲ್ಲಿ, ಮುತ್ತುತ್ತಿದ್ದ ನೊಣಗಳ ನಡುವೆ ಬಿಟ್ಟ ಕಣ್ಣು ಬಿಟ್ಟಂತೆಯೇ ಸೇನೆಯ ಸ್ಟ್ರೆಚರ್ ಮೇಲೆ ನಿಶ್ಚೇಷ್ಟಿತವಾಗಿದ್ದ ಆತನ ದೇಹ ಈ ಎಲ್ಲಾ ಸಂದೇಹಗಳಿಗೂ ಒಂದೇ ಕ್ಷಣದಲ್ಲಿ ಅಂತ್ಯ ಹಾಡಿತು. ಇದರೊಂದಿಗೆ ಪ್ರತ್ಯೇಕ ತಮಿಳು ರಾಷ್ಟ್ರಕ್ಕಾಗಿ ತನ್ನ ಜೀವವನ್ನೇ ಮುಡುಪಾಗಿಟ್ಟ ಪ್ರಭಾಕರನ್‌ನ ಬದ್ಧತೆ ಸಹ ಜಗಜ್ಜಾಹೀರಾಯಿತು. ಗುಂಡೇಟು ತಗುಲಿದ್ದ ಆತನ ನೆತ್ತಿಗೆ ಕರವಸ್ತ್ರ ಸುತ್ತಿ ಮುಖ ಸ್ಪಷ್ಟವಾಗಿ ಕಾಣುವಂತೆ ಕೊಂಚ ಎತ್ತಿ ಹಿಡಿದ ಭಂಗಿಯಲ್ಲಿ, ಸೈನಿಕರು ದೇಹವನ್ನು ಟಿವಿ ಕ್ಯಾಮೆರಾಗೆ ಪ್ರದರ್ಶಿಸುತ್ತಿದ್ದಂತೆಯೇ ಕುಖ್ಯಾತ ನಾಯಕನ ದುರಂತ ಅಂತ್ಯಕ್ಕೆ ಬೇರೆ ಯಾವುದೇ ಸಾಕ್ಷಿ ಬೇಕಾಗಲಿಲ್ಲ. ಆದರೂ ಡಿಎನ್‌ಎ ಪರೀಕ್ಷೆ ನಡೆಸಿ ಆತನ ಸಾವನ್ನು ನಿಖರಪಡಿಸುವುದಾಗಿ ಸೇನೆಯ ವಕ್ತಾರರು ಹೇಳಿದರು. ಅತ್ತ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ರೂವಾರಿ ಮತ್ತು ಆ ಕಾರಣಕ್ಕಾಗೇ ವಿಶ್ವದಲ್ಲೇ ಮೊದಲ ಬಾರಿ ಮಹಿಳಾ ಆತ್ಮಹತ್ಯಾ ದಳ ಬಳಸಿದ ಅಪಖ್ಯಾತಿಗೆ ಗುರಿಯಾಗಿದ್ದ ವ್ಯಕ್ತಿ ಅರಣ್ಯ ಮಧ್ಯದ ಕೆಸರಿನಲ್ಲಿ ಇಹದ ಗೊಡವೆ ಇಲ್ಲದೆ ಮಲಗಿದ್ದರೆ, ಇತ್ತ ಭಾರತದಲ್ಲಿ ರಾಜೀವ್ ಅವರ ಪತ್ನಿ ಸೋನಿಯಾ ಮತ್ತು ಪುತ್ರ ರಾಹುಲ್ ಗಾಂಧಿ ಹೊಸ ಸರ್ಕಾರ ರಚನೆಯ ಗುಂಗಿನಲ್ಲಿ ಮುಳುಗಿಹೋಗಿದ್ದರು. ಕಾಕತಾಳೀಯವೆಂಬಂತೆ ಭಾರತದ ಟಿವಿ ವಾಹಿನಿಗಳು ಇಡೀ ದಿನ ಈ ಎರಡೂ ಸುದ್ದಿಗಳನ್ನು ಒಂದರ ನಂತರ ಒಂದು ಬಿತ್ತರಿಸುತ್ತಲೇ ಇದ್ದವು.

2009: 2008ರ ಕೊಂಕಣಿ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಆರು ಜನರಿಗೆ ನೀಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷ ಕೆ. ನಾರಾಯಣ ಖಾರ್ವಿ ಮಂಗಳೂರಿನಲ್ಲಿ ಪ್ರಕಟಿಸಿದರು. ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ (ಸಾಹಿತ್ಯ) ಲೇಖಕ ಜೆ.ಬಿ. ಮೊರಾಯಿಸ್, ಕೊಂಕಣಿ ಜಾನಪದ ಪ್ರಶಸ್ತಿಗೆ ವಾಸುದೇವ ನಾಯಕ್, ಕೊಂಕಣಿ ಸಂಘಟಕ ಪ್ರಶಸ್ತಿಗೆ ಬಸ್ತಿ ವಾಮನ ಶೆಣೈ ಅವರನ್ನು ಆಯ್ಕೆ ಮಾಡಲಾಗಿದೆ. ಕೊಂಕಣಿ ಪುಸ್ತಕ ಪುರಸ್ಕಾರಕ್ಕೆ ಪಾಲ್ ಮೊರಾಸ್ ಹಾಗೂ ಎಡ್ವರ್ಡ್ ಸೆರಾವೊ ಅವರು ಪಾತ್ರರಾಗಿದ್ದಾರೆ. ಮಾಲತಿ ಕಾಮತ್ ಅವರಿಗೆ ಕೊಂಕಣಿ ವಿಶೇಷ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಖಾರ್ವಿ ಹೇಳಿದರು.

2008: ಹಸಿರು ಮನೆ ಅನಿಲಗಳಾದ ಇಂಗಾಲದ ಡೈಆಕ್ಸೈಡ್ ಹಾಗೂ ಮಿಥೇನ್ ಹೊರಸೂಸುವಿಕೆ ಪ್ರಮಾಣ ಇತ್ತೀಚೆಗೆ ಅತಿ ಹೆಚ್ಚಾಗಿದೆ ಎಂಬುದು ದಕ್ಷಿಣ ಧ್ರುವ ಅಂಟಾರ್ಟಿಕಾದ ಹಿಮಪದರಗಳಲ್ಲಿ ಅಡಗಿರುವ ಅನಿಲಗಳ ಅಧ್ಯಯನದಿಂದ ಸಾಬೀತಾಯಿತು. ಹಿಮಪದರಗಳ ನಡುವಿನ ಅನಿಲಗಳ ಅಧ್ಯಯನ ನಡೆಸಿದ ವಿಜ್ಞಾನಿಗಳು ಕಳೆದ 8 ಲಕ್ಷ ವರ್ಷಗಳಿಗೆ ಹೋಲಿಸಿದಾಗ ಈ ಅನಿಲ ಹೊರಸೂಸುವಿಕೆ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮಾಲಿನ್ಯಕಾರಕ ಹಸಿರು ಮನೆ ಅನಿಲಗಳ ಪ್ರಮಾಣಕ್ಕೂ ಜಾಗತಿಕ ತಾಪಮಾನ ಹೆಚ್ಚಳಕ್ಕೂ ನೇರ ಸಂಬಂಧವಿದೆ ಎಂಬುದನ್ನು ಈ ಅಧ್ಯಯನ ಇನ್ನಷ್ಟು ದೃಢಗೊಳಿಸಿತು. ಹಿಮಪದರಗಳ ನಡುವೆ ಲಕ್ಷಗಟ್ಟಲೆ ವರ್ಷಗಳಿಂದ ಸಿಲುಕಿಕೊಂಡಿರುವ ಅನಿಲ ಕಣಗಳಲ್ಲಿ ಇಂಗಾಲದ ಡೈಆಕ್ಸೈಡ್ ಪ್ರಮಾಣ ಹತ್ತು ಲಕ್ಷ ವಾಯು ಕಣಗಳಲ್ಲಿ 200-300ರಷ್ಟು ಇದ್ದರೆ, ಇತ್ತೀಚಿನ ವರ್ಷಗಳಲ್ಲಿ ವಾತಾವರಣದಲ್ಲಿ ಹತ್ತು ಲಕ್ಷ ವಾಯು ಕಣಗಳಲ್ಲಿ 380ರಷ್ಟು ಇಂಗಾಲದ ಡೈಆಕ್ಸೈಡ್ ಅಣುಗಳು ಕಾಣಿಸುತ್ತಿವೆ. ಲಕ್ಷ ವರ್ಷ ಹಿಂದೆ ಮಿಥೇನ್ ಪ್ರಮಾಣ ಒಂದು ಶತಕೋಟಿ ವಾಯು ಕಣಗಳಲ್ಲಿ 400-700ರಷ್ಟು ಇದ್ದರೆ, ಈಗ ವಾತಾವರಣದಲ್ಲಿ ಒಂದು ಶತಕೋಟಿ ವಾಯು ಕಣಗಳಲ್ಲಿ 1,800ರಷ್ಟು ಮಿಥೇನ್ ಅಣುಗಳು ಇವೆ ಎಂಬುದು ವಿಜ್ಞಾನಿಗಳ ವಿವರಣೆ.

2008: ಖ್ಯಾತ ಗೀತ ರಚನೆಕಾರ ಆರ್. ಎನ್. ಜಯಗೋಪಾಲ್ (73) ಅವರು ಈದಿನ ಬೆಳಗ್ಗೆ ಚೆನ್ನೈಯ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಕನ್ನಡ ಚಲನಚಿತ್ರೋದ್ಯಮದಲ್ಲಿ ಅರ್ಧ ಶತಮಾನದಷ್ಟು ಕಾಲ ಚಿತ್ರಗೀತೆಗಳನ್ನು ನೀಡಿ ರಂಜಿಸಿದ ಜಯಗೋಪಾಲ್ ಅವರು ಖ್ಯಾತ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ನಾಗೇಂದ್ರರಾವ್ ಅವರ ಪುತ್ರ. ತಂದೆಯ ಚಿತ್ರ `ಪ್ರೇಮದ ಪುತ್ರಿ' ಚಿತ್ರಕ್ಕಾಗಿ 1957ರಲ್ಲಿ ತಮ್ಮ ಚೊಚ್ಚಲ `ತ್ರಿಭುವನ ಜನನಿ ಜಗನ್ಮೋಹಿನಿ' ಗೀತೆಯನ್ನು ರಚಿಸಿದ್ದ ಜಯಗೋಪಾಲ್ ಅವರು `ಕರ್ಪೂರದ ಗೊಂಬೆ ನಾನು, ಮಿಂಚಂತೆ ಬಳಿ ಬಂದೆ ನೀನು', `ಹೂವು ಚೆಲುವೆಲ್ಲಾ ನಂದೆಂದಿತು', `ನೀರಿನಲ್ಲಿ ಅಲೆಯ ಉಂಗುರ', `ಹಾಡೊಂದ ಹಾಡುವೆ ನೀ ಕೇಳು ಮಗುವೇ'. `ಗಗನವು ಎಲ್ಲೋ ಭೂಮಿಯು ಎಲ್ಲೋ' ಇತ್ಯಾದಿ ಜನಪ್ರಿಯ ಗೀತೆಗಳು ಸೇರಿದಂತೆ 1650ಕ್ಕೂ ಅಧಿಕ ಚಿತ್ರಗೀತೆಗಳನ್ನು ರಚಿಸಿದವರು. ಚಿ. ಉದಯಶಂಕರ್, ಪುಟ್ಟಣ್ಣ ಕಣಗಾಲ್, ಡಾ. ರಾಜಕುಮಾರ್ ಸಮಕಾಲೀನರಾಗಿ ಮಿಂಚಿದ ಜಯಗೋಪಾಲ್ ಅವರು ಸರಳವಾಗಿ ಜನರಿಗೆ ಅರ್ಥವಾಗುವಂತೆ ಚಿತ್ರಗೀತೆ ಬರೆಯುವ ಕಲೆಯನ್ನು ಅದ್ಭುತವಾಗಿ ರೂಢಿಸಿಕೊಂಡಿದ್ದರು. ಜಯಗೋಪಾಲ್ ಅವರ ಸಹೋದರ ಆರ್.ಎನ್. ಸುದರ್ಶನ್ ಹಾಗೂ ಆರ್.ಎನ್.ಕೆ ಪ್ರಸಾದ್ ಸಹ ಚಿತ್ರರಂಗದಲ್ಲಿ ದುಡಿದವರು. ಕನ್ನಡ ಚಲನಚಿತ್ರಗಳ ಗೀತರಚನೆಕಾರರಾಗಿ ಹೆಸರು ಮಾಡಿದ ಜಯಗೋಪಾಲ್ ನಿರ್ದೇಶಕರಾಗಿಯೂ ಕೆಲಸ ಮಾಡಿದವರು. `ಜನನಿ' ಮೆಗಾ ಧಾರಾವಾಹಿ ನಿರ್ಮಿಸುವ ಮೂಲಕ ಕಿರುತೆರೆಯ ಮಾಧ್ಯಮವನ್ನು ಕೂಡ ದುಡಿಸಿಕೊಂಡ ಜಯಗೋಪಾಲ್ ಅವರ ನಿರ್ಮಾಣ ನಿರ್ದೇಶನದ `ರಾಮಾಯಣ' ಧಾರಾವಾಹಿಯು ಉದಯ ವಾಹಿನಿಯಲ್ಲಿ ವಾರಕ್ಕೊಮ್ಮೆ ಬೆಳಕು ಕಂಡಿತು. `ತ್ರಿಭುವನ ಜನನಿ' (ಪ್ರೇಮದ ಪುತ್ರಿ), `ದೋಣಿಯೊಳಗೆ ನೀನು' (ಉಯ್ಯಾಲೆ), `ಹಾಡೊಂದ ಹಾಡುವೆ ನೀ ಕೇಳು ಮಗುವೇ' (ನಾಂದಿ), `ಗಗನವು ಎಲ್ಲೋ ಭೂಮಿಯು ಎಲ್ಲೋ' (ಗೆಜ್ಜೆಪೂಜೆ), `ಹೂವು ಚೆಲುವೆಲ್ಲ ತಂದೆಂದಿತು' (ಹಣ್ಣೆಲೆ ಚಿಗುರಿದಾಗ), `ನಗುವ ನಯನ ಮಧುರ ಮೌನ' (ಪಲ್ಲವಿ ಅನುಪಲ್ಲವಿ) ಹಾಡುಗಳು ಅವರ ನೂರಾರು ಹಾಡುಗಳ ಪೈಕಿ ಸದಾ ನೆನಪಿನಲ್ಲಿ ಉಳಿಯುವಂತಹವು. ತಂದೆ ಎರ್.ಎನ್. ನಾಗೇಂದ್ರ ರಾಯರ ಮಾರ್ಗದರ್ಶನದಲ್ಲಿ ಬೆಳೆದ ಜಯಗೋಪಾಲ್, ಬೆಂಗಳೂರಿನ ಪೀಣ್ಯದಲ್ಲಿ ಅಪ್ಪನ ಹೆಸರಿನಲ್ಲೇ ಸ್ಟುಡಿಯೋ ಒಂದನ್ನು ಕಷ್ಟಪಟ್ಟು ನಿರ್ಮಿಸಿ ಬಹುಕಾಲದ ಕನಸನ್ನು ನನಸಾಗಿಸಿಕೊಂಡಿದ್ದರು. ರಾಜ್ ಕುಮಾರ್ ಅಭಿನಯದ `ಧೂಮಕೇತು', `ನಾ ಮೆಚ್ಚಿದ ಹುಡುಗ' ಸೇರಿದಂತೆ ಎಂಟು ಚಿತ್ರಗಳನ್ನು ಜಯಗೋಪಾಲ್ ನಿರ್ದೇಶಿಸಿದ್ದರು. ರಾಜ್ಯ ಚಲನಚಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಹಾಗೂ ತಮಿಳುನಾಡು ಸರ್ಕಾರ ಜೀವಮಾನದ ಸಾಧನೆಗೆ ನೀಡುವ ಕಲೈಮಾಮಣಿ ಪುರಸ್ಕಾರ ಸೇರಿದಂತೆ ಅನೇಕ ಸಮ್ಮಾನಗಳು ಜಯಗೋಪಾಲ್ ಅವರಿಗೆ ಸಂದಿದ್ದವು.

2008: ಬಹುತೇಕ ಭಾರತೀಯ ಭಾಷೆಗಳಿಗೆ ಅನುವಾದಗೊಂಡ `ಘಾಸೀರಾಂ ಕೊತ್ವಾಲ್' ಜನಪ್ರಿಯ ನಾಟಕ ಸೇರಿದಂತೆ 33 ನಾಟಕಗಳನ್ನು ರಚಿಸಿ ಮರಾಠಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಹೆಸರಾಂತ ಸಾಹಿತಿ ವಿಜಯ್ ದೊಂಡೋಪಂತ್ ತೆಂಡೂಲ್ಕರ್ ಈದಿನ ಪುಣೆಯಲ್ಲಿ ನಿಧನರಾದರು. ಮೂಳೆ ರೋಗದಿಂದ ಬಳಲುತ್ತಿದ್ದ ಅವರನ್ನು ಕೆಲವು ವಾರಗಳ ಹಿಂದೆ ಪುಣೆಯ ಪ್ರಯಾಗ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಹಿಂದಿನ ದಿನ ಅವರು ಕೋಮಾಕ್ಕೆ ಜಾರಿದರು. ಆಮೇಲೆ ಅವರಿಗೆ ಪ್ರಜ್ಞೆ ಬರಲೇ ಇಲ್ಲ. ಈದಿನ ಬೆಳಿಗ್ಗೆ 8 ಗಂಟೆಗೆ ತೀರಿಕೊಂಡರು. 1928ರ ಜನವರಿ 6ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ವಿಜಯ್ ಜನಿಸಿದ್ದರು. ಗುಮಾಸ್ತರಾಗಿದ್ದ ಅವರ ತಂದೆ ಸಣ್ಣಮಟ್ಟದ ಪ್ರಕಾಶಕರೂ ಆಗಿದ್ದರು. ಸಾಹಿತ್ಯದ ವಾತಾವರಣದಲ್ಲಿ ಬೆಳೆದ ವಿಜಯ್ ತಮ್ಮ 6ನೇ ವಯಸ್ಸಿನಲ್ಲೇ ಮೊದಲ ಕತೆ ಬರೆದರು. `ಮರಾಠ' ದಿನಪತ್ರಿಕೆಯಲ್ಲಿ ಪತ್ರಕರ್ತರಾಗಿ ವೃತ್ತಿ ಆರಂಭಿಸಿದ ಅವರು ಆಮೇಲೆ ನಾಟಕಗಳ ರಚನೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡರು. ಫ್ರೆಂಚ್ ಸಣ್ಣಕತೆಯೊಂದರ ಪ್ರಭಾವದಿಂದ ಅವರು ಬರೆದ ನಾಟಕ `ಶಾಂತತಾ! ಕೋರ್ಟ್ ಚಾಲೂ ಆಹೇ' ಭಾರೀ ಹೆಸರು ಮಾಡಿತ್ತು. 1967ರಲ್ಲಿ ಮೊದಲ ಪ್ರಯೋಗ ಕಂಡ ಈ ನಾಟಕವನ್ನು ಆಮೇಲೆ ಸತ್ಯದೇವ್ ದುಬೆ ಸಿನಿಮಾ ಮಾಡಿದರು. ಈ ನಾಟಕವನ್ನು `ಸದ್ದು! ವಿಚಾರಣೆ ನಡೀತಾ ಇದೆ' ಎಂಬ ಹೆಸರಿನಲ್ಲಿ ಚಂದ್ರಕಾಂತ ಕುಸುನೂರ, ಘಾಸೀರಾಂ ಕೊತ್ವಾಲ್ ನಾಟಕವನ್ನು ಮುದೇನೂರು ಸಂಗಣ್ಣ, ಕನ್ಯಾದಾನ ನಾಟಕವನ್ನು ವೀಣಾ ಕುಲಕರ್ಣಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮತ್ತೊಂದು ಹೆಸರಾಂತ ನಾಟಕ ಸಖಾರಾಂ ಬೈಂಡರ್ ಕೂಡ ಕನ್ನಡದಲ್ಲಿ ಪ್ರಕಟವಾಗಿ ಪ್ರಯೋಗಗೊಂಡಿದೆ. ಇವರ ಬಹುತೇಕ ನಾಟಕಗಳು ವಿವಿಧ ಭಾರತೀಯ ಭಾಷೆಗೆ ಅನುವಾದಗೊಂಡಿವೆ. ಶ್ರೀರಾಮ್ ಲಾಗೂ, ಮೋಹನ್ ಅಗಾಶೆ ಮತ್ತು ಸುಲಭಾ ದೇಶಪಾಂಡೆ ಅವರಂತಹ ಹೆಸರಾಂತ ಕಲಾವಿದರು ತೆಂಡೂಲ್ಕರ್ ನಾಟಕಗಳನ್ನು ಭಾರಿ ಜನಪ್ರಿಯಗೊಳಿಸಿದರು. ತಮಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದಾಗ `ಇದು ವಿಜಯ್ ತೆಂಡೂಲ್ಕರ್ ಗೆ ಸಿಗಬೇಕಿತ್ತು' ಎಂದು ಗಿರೀಶ ಕಾರ್ನಾಡ್ ಪ್ರತಿಕ್ರಿಯಿಸಿದ್ದರು.

2008: ಮುಂಬೈಯಲ್ಲಿ ನೆಲೆಸಿದ್ದ ಕನ್ನಡದ ಪ್ರಖ್ಯಾತ ಕವಿ ಅರವಿಂದ ನಾಡಕರ್ಣಿ (77) ನಿಧನರಾದರು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಬಂಕಿಕೊಡ್ಲ ಗ್ರಾಮದವರಾದ ಅವರು ಕೊಲ್ಲಾಪುರ ಹಾಗೂ ಮುಂಬೈಯಲ್ಲಿ ಶಿಕ್ಷಣ ಮುಗಿಸಿ ಆಮೇಲೆ ಮುಂಬೈಯಲ್ಲಿ ತೆರಿಗೆ ತಜ್ಞರಾಗಿದ್ದರು. ಅವರು ವೈದ್ಯ ಪತ್ನಿ ಗಾಯತ್ರಿ ಅವರನ್ನು ಅಗಲಿದರು. ಕನ್ನಡ ಸಾರಸ್ವತ ಲೋಕಕ್ಕೆ 14ಕ್ಕೂ ಹೆಚ್ಚು ಕವನ ಸಂಕಲನಗಳನ್ನು ಅವರು ಕೊಡುಗೆಯಾಗಿ ನೀಡಿದ್ದರು. `ಕಾವ್ಯಾರ್ಪಣ', `ಮಾಯಾವಿ', `ನಗರಾಯಣ', `ಆತ್ಮ ಭಾರತ', `ಸಲೂನಿನಲ್ಲಿ ಹುಡುಗ' ಈ ಸಂಕಲನಗಳಲ್ಲಿ ಸೇರಿವೆ. `ಆಹತ' ಎಂಬ ವಿಮರ್ಶಾ ಸಂಕಲನವನ್ನೂ ಅವರು ಪ್ರಕಟಿಸಿದ್ದರು. ಕಾವ್ಯಕ್ಕೆ ಮಾತ್ರ ಮೀಸಲಾಗಿದ್ದ `ಸೃಜನದೇವಿ' ಎಂಬ ತ್ರೈಮಾಸಿಕ ಪತ್ರಿಕೆಯನ್ನು ನಾಲ್ಕು ವರ್ಷಗಳ ಕಾಲ ಅವರು ಸಂಪಾದಕರಾಗಿ ಮುಂಬೈಯಿಂದ ಹೊರತಂದಿದ್ದರು. ಪುರಾಣ ಪ್ರತಿಮೆಗಳನ್ನು ಬಳಸಿ ನಗರ ಜೀವನದ `ಮನುಜ ವಿನ್ಯಾಸ'ಗಳನ್ನು ಅನ್ವೇಷಿಸುವುದು ಅವರ ಕಾವ್ಯದ ಮುಖ್ಯ ಲಕ್ಷಣವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವಗಳು ಅವರಿಗೆ ಲಭಿಸಿದ್ದವು.

2008: ಕೋಲಾರ ತಾಲ್ಲೂಕಿನ ನರಸಾಪುರ, ಮಾಲೂರು ತಾಲ್ಲೂಕಿನ ಟೇಕಲ್, ಆನೇಕಲ್, ಬೆಂಗಳೂರಿನ ದೇವರಜೀವನ ಹಳ್ಳಿ, ಬೆಂಗಳೂರಿಗೆ ಸಮೀಪದ ಹೊಸೂರು ಹಾಗೂ ಕೃಷ್ಣಗಿರಿಯಲ್ಲಿ ಕಳ್ಳಬಟ್ಟಿ ದುರಂತದಲ್ಲಿ ಮೃತರಾದವರ ಸಂಖ್ಯೆ 72ಕ್ಕೆ ಏರಿತು. ದೇವರಜೀವನಹಳ್ಳಿಯ (ಡಿ.ಜೆ ಹಳ್ಳಿ) ರೋಷನ್ ನಗರದಲ್ಲಿ ಹಿಂದಿನ ದಿನ ಕಳ್ಳಬಟ್ಟಿ ಸೇವಿಸಿ ಎಂಟು ಮಂದಿ ಮೃತರಾಗಿ 40 ಮಂದಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರ್ಲಲಿ 22 ಜನರು ಚಿಕಿತ್ಸೆ ಫಲಕಾರಿಯಾಗದೆ ಈದಿನ ಮೃತರಾದರು.

2008: ಅಪರೂಪದ ಬಿಳಿ ಜಿಂಕೆ ದರ್ಶನವೇ ತೀರಾ ವಿರಳ. ಮೈಮೇಲೆ ಚುಕ್ಕೆಗಳುಳ್ಳ ಇಂತಹ ಬಿಳಿ ಜಿಂಕೆಯೊಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡದ್ದು ಬೆಳಕಿಗೆ ಬಂತು.
ರಾಜ್ಯದ ಯಾವುದೇ ಅರಣ್ಯ ಪ್ರದೇಶದಲ್ಲಿ ಈ ಅಪರೂಪದ ಬಿಳಿ ಜಿಂಕೆ ಕಂಡ ಉದಾಹರಣೆಯಿಲ್ಲ. ಆದರೆ ನಿವೃತ್ತ ಅರಣ್ಯ ಅಧಿಕಾರಿ ಎಸ್. ಜಿ. ನೇಗಿನಹಾಳ್ ಅವರು ಈ ವಾರ ನಾಗರಹೊಳೆಗೆ ಭೇಟಿ ನೀಡಿದ್ದಾಗ ಈ ಅಪರೂಪದ ಜಿಂಕೆ ಕಾಣಿಸಿಕೊಂಡಿತು.

2008: ಕೇರಳದ ಪಿರವೊಮ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸಿಪಿಎಂ ಶಾಸಕ ಎಂ.ಜೆ. ಜೇಕಬ್ ಅವರ ಅರ್ಹತೆಯನ್ನು ರದ್ದುಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ನ್ಯಾಯಮೂರ್ತಿ ಸಿ.ಕೆ.ಠಕ್ಕರ್ ಹಾಗೂ ಎಲ್. ಎಸ್. ಪಂತ್ ಅವರನ್ನೊಳಗೊಂಡ ರಜಾಕಾಲದ ಪೀಠವು ಈ ಆದೇಶ ನೀಡಿತು. ಏಪ್ರಿಲ್ 29, 2006ರಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಎಂ.ಜೆ. ಜೇಕಬ್ ಭ್ರಷ್ಟಾಚಾರ ಎಸಗಿ ಗೆಲುವು ಸಾಧಿಸಿದ್ದಾರೆ, ಇದು ಪ್ರಜಾ ಪ್ರಾತಿನಿಧ್ಯ ಕಾಯ್ದೆಯ (1956) ಕಲಂ 123(4)ಕ್ಕೆ ವಿರುದ್ಧವಾದ ನಡವಳಿಕೆ. ಆದ್ದರಿಂದ ಜೇಕಬ್ ಅವರ ಶಾಸಕತ್ವವನ್ನು ಅನೂರ್ಜಿತಗೊಳಿಸಬೇಕು ಎಂದು ಮತದಾರ ನಾರಾಯಣನ್ ಎಂಬುವವರು ಕೋರ್ಟ್ ಮೇಟ್ಟಿಲೇರಿದ್ದರು.

2008: ನೈಋತ್ಯ ಚೀನಾದಲ್ಲಿ ಎರಡು ದಿನಗಳ ಹಿಂದೆ ಉಂಟಾದ ಭೂಕುಸಿತದಲ್ಲಿ ಸುಮಾರು 200ಕ್ಕೂ ಹೆಚ್ಚು ಪರಿಹಾರ ಕಾರ್ಯಕರ್ತರು ಸಿಲುಕಿ ಜೀವಂತ ಸಮಾಧಿಯಾದರು ಎಂದು ಚೀನಾದ ಸಾರಿಗೆ ಸಚಿವಾಲಯ ತಿಳಿಸಿತು.

2008: ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಅವರ ಸಂಬಳವು ಶೇ 45ರಷ್ಟು ಹೆಚ್ಚಳಗೊಂಡಿದ್ದು, ಕಳೆದ ಸಾಲಿನಲ್ಲಿ ಅವರು ಕಂಪೆನಿಯಿಂದ ಒಟ್ಟು ರೂ 44 ಕೋಟಿಗಳಷ್ಟು ವಾರ್ಷಿಕ ಸಂಬಳ ಪಡೆದುಕೊಂಡಿದ್ದಾರೆ ಎಂದು ಷೇರು ಹೂಡಿಕೆದಾರರಿಗೆ ಕಂಪೆನಿಯು ನೀಡಿದ ವಾರ್ಷಿಕ ವರದಿ ತಿಳಿಸಿತು. 2006-07ನೇ ಹಣಕಾಸು ವರ್ಷದಲ್ಲಿ ಅತ್ಯಂತ ಗರಿಷ್ಠ ಸಂಬಳದ ಮಾಲೀಕ ಎಂದೂ ಮುಖೇಶ್ ಗುರುತಿಸಿಕೊಂಡಿದ್ದರು. ನಂತರದ ಸ್ಥಾನದಲ್ಲಿ ಮದ್ರಾಸ್ ಸಿಮೆಂಟ್ಸ್ ಕಂಪೆನಿ ಮಾಲೀಕ ಪಿ.ಆರ್.ಆರ್ ರಾಜಾ ಅವರಿದ್ದರು.

2008: ಹಿಂದಿನವಾರ ಸಂಭವಿಸಿದ ಜೈಪುರ ಸ್ಫೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಹಿಂದಿನ ದಿನ ಮೃತರಾಗುವುದರ ಜೊತೆಗೆ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 65ಕ್ಕೆ ಏರಿತು.

2007: ಖ್ಯಾತ ಪಿಟೀಲುವಾದಕ ಮತ್ತು ಹಿರಿಯ ಹಿರಿಯ ನಿರ್ದೇಶಕ ಎಲ್. ವೈದ್ಯನಾಥನ್ (61) ಅವರು ಹೃದಯಾಘಾತದಿಂದ ಚೆನ್ನೈಯಲ್ಲಿ ನಿಧನರಾದರು. ವೈದ್ಯನಾಥನ್ ಅವರು ಕನ್ನಡ ಮತ್ತು ತಮಿಳು ಚಿತ್ರಗಳಿಗೆ ಗೀತೆಗಳನ್ನು ರಚಿಸಿದ್ದಲ್ಲದೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ತಮಿಳು ಚಿತ್ರ `ಎಜಾವತು ಮಣಿತನ್' ಚಿತ್ರಕ್ಕೆ ನೀಡಿದ್ದ ಸಂಗೀತದಿಂದ ಅವರು ಖ್ಯಾತಿ ಪಡೆದಿದ್ದರು. ನಮ್ಮೂರ ಮಂದಾರ ಹೂವೇ, ಇದು ಎಂಥಾ ಲೋಕವಯ್ಯಾ, ಒಲುಮೆ ಪೂಜೆಗೆಂದೇ, ಸಂತಸ ಅರಳುವ ಸಮಯ, ಅಂತರಂಗದ ಹೂ ಬನಕೆ, ಏನೋ ಮಾಡಲು ಹೋಗಿ ಮತ್ತಿತರ ಜನಪ್ರಿಯ ಗೀತೆಗಳಿಗೆ ಅವರು ಸಂಗೀತ ನೀಡಿದ್ದರು.

2007: ಏಷ್ಯಾದಲ್ಲೇ ಪ್ರಪ್ರಥಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ `ಮಿರರ್ ಡೋಂ ಪ್ಲಸ್' ತಾರಾ ಮಂಡಲ ವೀಕ್ಷಣೆಯ ಪ್ರೊಜೆಕ್ಟರಿಗೆ ಬೆಂಗಳೂರಿನ ಜವಾಹರ ಲಾಲ್ ನೆಹರೂ ತಾರಾಲಯದಲ್ಲಿ ರಾಜ್ಯಪಾಲ ಟಿ.ಎಸ್. ಚತುರ್ವೇದಿ ಚಾಲನೆ ನೀಡಿದರು. ಕಂಪ್ಯೂಟರ್, ಡಿ ಎಲ್ ಪಿ ಪ್ರೊಜೆಕ್ಟರ್ ಮತ್ತು ಅತಿ ಹೆಚ್ಚು ಪ್ರತಿಫಲನ ಶಕ್ತಿಯ ಉನ್ನತ ದರ್ಪಣವನ್ನು ಪ್ರೊಜೆಕ್ಟರ್ ಹೊಂದಿದೆ. ಆಸ್ಟ್ರೇಲಿಯಾದ ಸ್ವಿನ್ ಬರ್ನ್ ತಾಂತ್ರಿಕ ವಿಶ್ವ ವಿದ್ಯಾಲಯ ಸಿದ್ಧ ಪಡಿಸಿದ ಈ ಪ್ರತಿಫಲನ ಸಂಬಂಧಿತ ಸಾಫ್ಟ್ ವೇರನ್ನು ಕೂಡಾ ಈ ಪ್ರೊಜೆಕ್ಟರಿಗೆ ಅಳವಡಿಸಲಾಗಿದೆ.

2007: ದಕ್ಷಿಣ ನೈಜೀರಿಯಾದ ಬಂದರು ನಗರ ಹಾರ್ ಕೋರ್ಟಿನಲ್ಲಿ ತೈಲ ಕಂಪೆನಿಯೊಂದರ ಮೂವರು ಭಾರತೀಯ ಉದ್ಯೋಗಿಗಳನ್ನು ಬಂದೂಕುಧಾರಿ ಭಯೋತ್ಪಾದಕರು ಅಪಹರಿಸಿದರು.

2007: ಹುಕ್ಕೇರಿ ತಾಲ್ಲೂಕಿನ ರಕ್ಷಿ ಗ್ರಾಮದ 94 ವರ್ಷಗಳ ಹಿರಿಯಜ್ಜಿ ಗೌರವ್ವ ಚನ್ನಪ್ಪ ಕುರಬೇಟ ಅವರು ಈದಿನ ಬೆಳಗ್ಗೆ ಮೃತಳಾಗಿ ಸಂಜೆ ವೇಳೆಗೆ ಮತ್ತೆ ಬದುಕಿ ಬಂದಳು. ಬೆಳಗ್ಗೆ 11.30ರ ವೇಳೆಗೆ ಆಕೆ ಕಣ್ಮುಚ್ಚಿದಾಗ ವೈದ್ಯರು ತಪಾಸಿಸಿ ಆಕೆ ಮೃತಳಾಗಿರುವುದಾಗಿ ಘೋಷಿಸಿದ್ದರು. ಎಲ್ಲ ಬಂಧುಗಳಿಗೂ ಕರೆ ಹೋಯಿತು. ಸಂಜೆ 4.30ರ ವೇಳೆಗೆ ಅಂತ್ಯ ಸಂಸ್ಕಾರ ವಿಧಿಗಳನ್ನು ನಡೆಸುತ್ತಿದ್ದಾಗ ಅಜ್ಜಿಯ ಮೂಗಿನ ಹೊಳ್ಳೆ, ಭುಜ ಅಲುಗಿತು. ಇದನ್ನು ಗಮನಿಸಿದ ಕುಟುಂಬ ಸದಸ್ಯರು ಆಕೆಗೆ ಪ್ರಥಮ ಚಿಕಿತ್ಸೆ ನೀಡಿ ವೈದ್ಯರನ್ನು ಕರೆಸಿದರು. ನಂತರ ಅಜ್ಜಿ ಎದ್ದು ಕುಳಿತಳು.

2006: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಅಜಾದ್ ಹಿಂದ್ ಫೌಜ್ ನಲ್ಲಿ ಚಾಲಕ ಹಾಗೂ ಅಂಗರಕ್ಷಕರಾಗಿದ್ದರೆನ್ನಲಾದ ಉತ್ತರ ಪ್ರದೇಶದ ಅಜಂಗಢದ 102 ವರ್ಷ ವಯಸ್ಸಿನ ನಿಜಾಮುದ್ದೀನ್ ಎಂಬ ವ್ಯಕ್ತಿ, 1945ರಲ್ಲಿ ತೈಪೆಯಲ್ಲಿ ಅಪಘಾತಕ್ಕೆ ಈಡಾದ ವಿಮಾನದಲ್ಲಿ ನೇತಾಜಿ ಇರಲೇ ಇಲ್ಲ, ಅವರು ಕೆಲವು ವರ್ಷಗಳ ಹಿಂದೆ ಫೈಜಾಬಾದಿನಲ್ಲಿ ಗುಮ್ನಾಮಿ ಬಾಬಾ ಹೆಸರಿನಲ್ಲಿ ಮೃತರಾದರು ಎಂದು ಈದಿನ ಅಜಂಗಢದಲ್ಲಿ ಹೇಳಿದರು. 1946ರಲ್ಲಿ ಥಾಯ್ಲೆಂಡಿನ ನದಿಯ ಸೇತುವೆಯೊಂದರ ಮೇಲೆ ತಾನು ನೇತಾಜಿ ಮತ್ತು ಅವರ ಸಹೋದರ ಶರತ್ ಚಂದ್ರ ಬೋಸ್ ಅವರನ್ನು ಭೇಟಿ ಮಾಡಿದ್ದುದಾಗಿ ನಿಜಾಮುದ್ದೀನ್ ನುಡಿದರು.

1947: ವೃತ್ತಿ ರಂಗಭೂಮಿ, ಹವ್ಯಾಸಿ ರಂಗಭೂಮಿ ಮತ್ತು ಚಲನಚಿತ್ರ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಖ್ಯಾತರಾಗಿದ್ದ ಲೋಕೇಶ್ (19-03-1947ರಿಂದ 14-10-2004) ಅವರು ಎಂ.ವಿ. ಸುಬ್ಬಯ್ಯನಾಯ್ಡು- ವೆಂಕಟಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1938: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ನಟ, ಸಾಹಿತಿ ಗಿರೀಶ್ ಕಾರ್ನಾಡ್ ಜನ್ಮದಿನ. ಗಿರೀಶ್ ಕಾರ್ನಾಡ್ ಅವರು ಈ ದಿನ ಮಹಾರಾಷ್ಟ್ರದ ಮ್ಯಾಥೆರಾನಿನಲ್ಲಿ ಡಾ. ರಘುನಾಥ ಕಾರ್ನಾಡ್ - ಕೃಷ್ಣಾಬಾಯಿ ಮಗನಾಗಿ ಜನಿಸಿದರು.

1919: ಕಲಾವಿದ ಭಾಗವತ ನೀಲಾವರ ರಾಮಕೃಷ್ಣಯ್ಯ ಜನನ.

1911: ಮಹಾತ್ಮ ಗಾಂಧೀಜಿಯವರ ಹಂತಕ ನಾಥೂರಾಮ್ ಗೋಡ್ಸೆ ಹುಟ್ಟಿದ ದಿನ. ಗಾಂಧೀಜಿಯವರು ನವದೆಹಲಿಯ ಬಿರ್ಲಾ ಮಂದಿರದಲ್ಲಿ ಪ್ರಾರ್ಥನಾ ಸಭೆಯಲ್ಲಿದ್ದಾಗ ಅವರನ್ನು ಗೋಡ್ಸೆ ಗುಂಡು ಹೊಡೆದು ಕೊಂದ.

1890: ವಿಯೆಟ್ನಾಮಿನ ಧುರೀಣ ಹೊ.ಚಿ. ಮಿನ್ಹ್ (1890-1969) ಜನ್ಮದಿನ. ಮೂರು ದಶಕಗಳ ಕಾಲ ವಿಯೆಟ್ನಾಂ ರಾಷ್ಟ್ರೀಯ ಚಳವಳಿಯ ನೇತೃತ್ವ ವಹಿಸಿದ್ದ ಇವರು 1945ರಿಂದ 1969ರವರೆಗೆ ಉತ್ತರ ವಿಯೆಟ್ನಾಮಿನ ಅಧ್ಯಕ್ಷರಾಗಿದ್ದರು.

1795: ಜಾನ್ಸ್ ಹಾಪ್ ಕಿನ್ಸ್ (1795-1873) ಜನ್ಮದಿನ. ಅಮೆರಿಕದ ದಾನಿಗಳಲ್ಲೊಬ್ಬರಾದ ಇವರು ನೀಡಿದ 7 ದಶಲಕ್ಷ ಡಾಲರ್ ಹಣದಿಂದ ಜಾನ್ಸ್ ಹಾಪ್ ಕಿನ್ಸ್ ಆಸ್ಪತ್ರೆ ಹಾಗೂ ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಯಿತು.

1536: ಇಂಗ್ಲೆಂಡಿನ ದೊರೆ ಎಂಟನೇ ಹೆನ್ರಿಯ ದ್ವಿತೀಯ ಪತ್ನಿ, ರಾಣಿ ಮೊದಲನೇ ಎಲಿಜಬೆತ್ ಳ ತಾಯಿಯ ತಲೆಯನ್ನು ಎಂಟನೇ ಹೆನ್ರಿಯ ವಿವಾಹದ ಹಿಂದಿನ ದಿನ ಕಡಿಯಲಾಯಿತು. ಆಕೆ ವ್ಯಭಿಚಾರ ನಡೆಸಿದ ಆರೋಪಕ್ಕಾಗಿ ಈ ಶಿಕ್ಷೆ ವಿಧಿಸಲಾಯಿತು.

No comments:

Post a Comment