ಇಂದಿನ ಇತಿಹಾಸ History Today ಮೇ 21

2018: ನವದೆಹಲಿ: ಜನತಾದಳ (ಎಸ್) ನಾಯಕ ಹಾಗೂ ಕರ್ನಾಟಕದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ.
ಸದನದಲ್ಲಿ
ಹೆಚ್ಚು ಸದಸ್ಯ ಬಲವನ್ನು ಹೊಂದಿರುವ ಕಾಂಗ್ರೆಸ್ ಇಬ್ಬರು ಉಪಮುಖ್ಯಮಂತ್ರಿಗಳನ್ನು ಮಾಡುವಂತೆ ಮತ್ತು
ತನ್ನ ನಾಯಕರಿಗೆ ಕೆಲವು ಪ್ರಮುಖ ಖಾತೆಗಳನ್ನು ನೀಡುವಂತೆ ಕೋರುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿದವು. ಕಾಂಗ್ರೆಸ್
ಜೊತೆಗಿನ ಬಿಜೆಪಿ ವಿರೋಧಿ ಮೈತ್ರಿ ಎಷ್ಟು ಪ್ರಬಲವಾಗಿದೆ ಎಂದು ಮಾಧ್ಯಮವೊಂದು ಕೇಳಿದ ಪ್ರಶ್ನೆಗೆ
ಕುಮಾರ ಸ್ವಾಮಿ ಅವರು ’ಕಾಲವೇ ಹೇಳಲಿದೆ’ ಎಂದು ಉತ್ತರಿಸಿದರು. ಕಾಂಗ್ರೆಸ್ ನಾಯಕರ ಜೊತೆಗೆ ಚರ್ಚಿಸಿದ ಬಳಿಕ ಮಾಧ್ಯಮ ಮಂದಿಯ
ಜೊತೆಗೆ ಸಂಕ್ಷಿಪ್ತವಾಗಿ ಮಾತನಾಡಿದ ಕುಮಾರ ಸ್ವಾಮಿ ಇಬ್ಬರು ಉಪ ಮುಖ್ಯಮಂತ್ರಿಗಳ ಸಾಧ್ಯತೆ ಬಗ್ಗೆ
ಕೇಳಿದ ಪ್ರಶ್ನೆಗೆ ’ಮಂಗಳವಾರ ಪ್ರಕಟಣೆ ನೀಡಲಾಗುವುದು’ ಎಂದು ಉತ್ತರಿಸಿದರು.
ಬುಧವಾರ ಒಬ್ಬರಿಗಿಂತ ಹೆಚ್ಚು ಮಂದಿ ಪ್ರಮಾಣವಚನ ಸ್ವೀಕರಿಸುವರು ಎಂದು ಅವರು ಸುಳಿವು ನೀಡಿದರು. ಮುಖ್ಯಮಂತ್ರಿ ಹುದ್ದೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಜೊತೆಗೆ
ರೊಟೇಷನ್ ವ್ಯವಸ್ಥೆ ಇರುವುದಿಲ್ಲ ಎಂದು ಜೆಡಿಎಸ್ ನಾಯಕ ಹೇಳಿದರು. ಮೇ
೨೩ರಂದು ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ೨೪ ಗಂಟೆಗಳ ಒಳಗಾಗಿ
ಸದನದಲ್ಲಿ ಬಲಾಬಲ ಪರೀಕ್ಷೆ ನಡೆಯುವ ನಿರೀಕ್ಷೆ ಇದೆ. ಕಾಂಗ್ರೆಸ್ ಮತ್ತು ಜೆಡಿ(ಎಸ್) ಶಾಸಕರು ಅಲ್ಲಿಯವರೆಗೂ
ಹೊಟೇಲುಗಳಲ್ಲೇ ವಾಸ್ತವ್ಯ ಮುಂದುವರೆಸಲಿದ್ದಾರೆ.
ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ತಾವು ಸೋನಿಯಾ ಗಾಂಧಿ, ಮಾಯಾವತಿ, ಅಖಿಲೇಶ್
ಯಾದವ್, ಅರವಿಂದ ಕೇಜ್ರಿವಾಲ್, ಚಂದ್ರಬಾಬು ನಾಯ್ಡು, ಕೆಸಿಆರ್, ಮಮತಾ ಬ್ಯಾನರ್ಜಿ, ಫಾರೂಕ್ ಅಬ್ದುಲ್ಲ,
ಸೀತಾರಾಂ ಯೆಚೂರಿ, ಪಿನರಾಯಿ ವಿಜಯನ್ ಮತ್ತು ತೇಜಸ್ವಿ ಯಾದವ್ ಅವರಿಗೆ ಆಹ್ವಾನ ನೀಡಿರುವುದಾಗಿ ಕುಮಾರ
ಸ್ವಾಮಿ ನುಡಿದರು. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಅವರು
ಮುಂಚೂಣಿಯಲ್ಲಿದ್ದಾರೆ. ಕುಮಾರ ಸ್ವಾಮಿ ಅವರು ಕುಟುಂಬದ ಜ್ಯೋತಿಷಿಗಳ ಸಲಹೆ ಪ್ರಕಋ ಬುಧವಾರ ಮಧ್ಯಾಹ್ನ
೧.೩೦ಕ್ಕೆ ಪ್ರಮಾಣ ವಚನ ಸ್ವೀಕರಿಸುವರು ಎಂದು ಹೇಳಲಾಯಿತು. ದೆಹಲಿಯಲ್ಲಿ ಮಾಯಾವತಿ ಮನೆಗೆ ಮೊದಲು
ತೆರಳಿದ ಕುಮಾರ ಸ್ವಾಮಿ ಅವರು ಬಿಎಸ್ ಪಿಯ ಹಿರಿಯ ನಾಯಕರಾದ ಸತೀಶ್ ಚಂದ್ರ ಮಿಶ್ರ ಮತ್ತು ಡ್ಯಾನಿಶ್
ಅಲಿ ಅವರ ಜೊತೆಗೂ ಚರ್ಚಿಸಿದರು. ಉಭಯ ನಾಯಕರು ಕಾಂಗ್ರೆಸ್- ಜೆಡಿ(ಎಸ್)ಸಂಪುಟದ ರೂಪ, ಏಕೈಕ ಬಿಎಸ್ಪಿ
ಶಾಸಕ ಎನ್. ಮಹೇಶ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಸಿದರು ಎಂದು ಮೂಲಗಳು ಹೇಳಿದವು.
ಅರ್ಧ ಗಂಟೆಯ ಚರ್ಚೆ ವೇಳೆಯಲ್ಲಿ ಕುಮಾರ ಸ್ವಾಮಿ ಅವರು ನೂತನ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭದಲ್ಲಿ
ಹಾಜರಿರುವಂತೆ ಮಾಯಾವತಿ ಅವರಿಗೆ ಆಹ್ವಾನ ನೀಡಿದರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ
ಅಧಿಕಾರಕ್ಕೆ ಬಾರದಂತೆ ತಡೆಯಲು ಪ್ರಾದೇಶಿಕ ಪಕ್ಷಗಳು ವಹಿಸಬೇಕಾದ ಪಾತ್ರದ ಬಗ್ಗೆ ಬಿಎಸ್ಪಿ- ಜೆಡಿಎಸ್
ಪ್ರಮುಖರು ಚರ್ಚಿಸಿದರು ಎಂದು ಮೂಲಗಳು ತಿಳಿಸಿದವು.

2017: ಲಾಸ್ ಏಂಜಲಿಸ್: ಅಂತರಿಕ್ಷದಲ್ಲಿ ಪತ್ತೆಯಾಗಿರುವ ಹೊಸ ಪ್ರಭೇದದ ಬ್ಯಾಕ್ಟೀರಿಯಾಗೆ
ನಾಸಾದ ವಿಜ್ಞಾನಿಗಳು
ಮಾಜಿ ರಾಷ್ಟ್ರಪತಿ ಮತ್ತು ಖ್ಯಾತ ವಿಜ್ಞಾನಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ನಾಮಕರಣ
ಮಾಡಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ
ಭೂಮಿಗೆ ತಂದ ಫಿಲ್ಟರ್ನಲ್ಲಿ ಹೊಸ ಪ್ರಭೇದದ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಭೂಮಿಯಿಂದ 400 ಕಿ.ಮೀ.
ಎತ್ತರದಲ್ಲಿರುವ ಅಂತರಿಕ್ಷ ನಿಲ್ದಾಣದಲ್ಲಿ ಇವುಗಳು ಜೀವಿಸುತ್ತಿವೆ. ಈ ಹೊಸ ಬ್ಯಾಕ್ಟೀರಿಯಾ ಭೂಮಿಯಲ್ಲಿ
ಇದುವರೆಗೆ ಪತ್ತೆಯಾಗಿಲ್ಲ ಮತ್ತು ಇದು ಭೂಮಿಯಲ್ಲಿ ಕಂಡು ಬರುವ ಬ್ಯಾಕ್ಟೀರಿಯಾಗಳಿಗಿಂತಲೂ ಸಂಪೂರ್ಣವಾಗಿ
ಭಿನ್ನವಾಗಿದೆ. ಇದಕ್ಕೆ ಅಬ್ದುಲ್ ಕಲಾಂ ಅವರ ಗೌರವಾರ್ಥ ಸೋಲಿಬ್ಯಾಸಿಲಸ್ ಕಲಾಮೈ
(Solibacillus kalamii) ಎಂದು ನಾಮಕರಣ ಮಾಡಲಾಗಿದೆ ಎಂದು ನಾಸಾದ ವಿಜ್ಞಾನಿ ಕಸ್ತೂರಿ ವೆಂಕಟೇಶ್ವರನ್
ಅವರು ತಿಳಿಸಿದರು. 1963ರಲ್ಲಿ ಅಬ್ದುಲ್ ಕಲಾಂ ಅವರು ನಾಸಾದಲ್ಲಿ ತರಬೇತಿ ಪಡೆದಿದ್ದರು. ಆ ನಂತರ
ಅವರು ದೇಶದಲ್ಲಿ ರಾಕೆಟ್ ತಂತ್ರಜ್ಞಾನದ ಕುರಿತು ಸಂಶೋಧನೆ ಮುಂದುವರೆಸಿ, ರಾಕೆಟ್ ಮತ್ತು ಬಾಹ್ಯಾಕಾಶ
ತಂತ್ರಜ್ಞಾನ ದೇಶದಲ್ಲಿ ಅಭಿವೃದ್ಧಿ ಹೊಂದಲು ಭದ್ರ ಬುನಾದಿ ಒದಗಿಸಿದರು.
2017: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ
ನೌಗಾಮ್ ವಿಭಾಗದ ಗಡಿ ನಿಯಂತ್ರಣ ರೇಖೆ ಬಳಿ ಗಡಿ
ದಾಟಿ ಒಳನುಸುಳಲು ಯತ್ನಿಸಿದ ಉಗ್ರರೊಂದಿಗೆ ಶನಿವಾರ
ಮೇ 20ರಿಂದ ನಡೆದ ಗುಂಡಿನ ಚಕಮಕಿಯಲ್ಲಿ 3 ಯೋಧರು ಹುತಾತ್ಮರಾದರೆ, ನಾಲ್ವರು ಉಗ್ರರನ್ನು ಹೊಡೆದುರುಳಿಸಲಾಯಿತು.
ಹಿಂದಿನ ದಿನ ಉಗ್ರರ ಗುಂಪು ಗಡಿ ದಾಟಿ ಒಳನುಸುಳಲು
ಯತ್ನಿಸಿತ್ತು. ಈ ಸಂದರ್ಭದಲ್ಲಿ ಭದ್ರತಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಪ್ರಾರಂಭವಾಗಿತ್ತು.
ಶನಿವಾರ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದರೆ, ಇಬ್ಬರು ಯೋಧರು ಹುತಾತ್ಮರಾಗಿದ್ದರು. ಸತತ 36
ಗಂಟೆಗಳಿಂದ ನಡೆದ ಗುಂಡಿನ ಚಕಮಕಿ ಈದಿನ ಮುಕ್ತಾಯವಾಗಿದ್ದು,
ಇನ್ನಿಬ್ಬರು ಉಗ್ರರನ್ನು ಹೊಡೆದುರುಳುಸಲಾಗಿದೆ. ಆದರೆ ಮತ್ತೋರ್ವ ಯೋಧ ಭಾನುವಾರ ಹುತಾತ್ಮರಾಗಿದ್ದಾರೆ
ಎಂದು ಸೇನೆಯ ಅಧಿಕಾರಿಗಳು ತಿಳಿಸಿದರು. ಮೃತ ಉಗ್ರರಿಂದ
ನಾಲ್ಕು ಬಂದೂಕು, ಅಪಾರ ಪ್ರಮಾಣದ ಮದ್ದುಗುಂಡುಗಳು ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಗ್ರರಿಗಾಗಿ ಗಡಿ ನಿಯಂತ್ರಣ ರೇಖೆ ಬಳಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಸೇನಾಧಿಕಾರಿಗಳು
ತಿಳಿಸಿದರು.
2017: ಇಸ್ಲಾಮಾಬಾದ್: ಸೂಕ್ತ ಪ್ರಯಾಣ ದಾಖಲೆಗಳನ್ನು ಹೊಂದಿಲ್ಲ ಎಂಬ ಆರೋಪದ ಮೇಲೆ
ಇಸ್ಲಾಮಾಬಾದ್ನಲ್ಲಿ
ಭಾರತೀಯ ಪ್ರಜೆಯೊಬ್ಬರನ್ನು ಬಂಧಿಸಲಾಗಿದೆ ಎಂದು ಪಾಕ್ ಮಾಧ್ಯಮ ವರದಿ ಮಾಡಿತು. ಇಸ್ಲಾಮಾಬಾದ್ನ
ಎಫ್-8 ಪ್ರದೇಶದಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಲಾಗಿದೆ. ಅವರ ಬಳಿ ಸೂಕ್ತ ಪ್ರಯಾಣ ದಾಖಲೆಗಳು
ಇರಲಿಲ್ಲ. ಬಂಧಿತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆತನ ವಿರುದ್ಧ ವಿದೇಶಾಂಗ ಕಾಯ್ದೆಯ
ಕಲಂ 14ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಬಂಧಿತ ವ್ಯಕ್ತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು
ತನಿಖೆ ನಡೆಸಲಾಗುತ್ತಿದೆ ಎಂದು ಪಾಕಿಸ್ತಾನದ ಸಾಮ್ನಾ ಟಿವಿ ವರದಿ ಮಾಡಿತು.
2009: ಸಚಿವ ಸ್ಥಾನ ಹಂಚಿಕೆಯಿಂದ ಅಸಮಾಧಾನಗೊಂಡ ಡಿಎಂಕೆ ಸಂಪುಟದಲ್ಲಿ ಪಾಲ್ಗೊಳ್ಳದೆ ಬಾಹ್ಯ ಬೆಂಬಲವಷ್ಟೇ ನೀಡುವ ಬೆದರಿಕೆಯೊಡ್ಡುವುದರೊಂದಿಗೆ ಸರ್ಕಾರ ರಚನೆಯ ಮೊದಲೇ ಯುಪಿಎ ಸಂಕಷ್ಟಕ್ಕೆ ಸಿಲುಕಿತು. 2004ರಲ್ಲಿ ಈ ರೀತಿಯ ಚೌಕಾಸಿಯಿಂದಲೇ ಏಳು ಸಚಿವ ಸ್ಥಾನಗಳನ್ನು ಮಾತ್ರವಲ್ಲ ತಾನು ಬಯಸಿದ್ದ ನೌಕಾ ಮತ್ತು ರಸ್ತೆಸಾರಿಗೆ ಖಾತೆಯನ್ನು ಡಿಎಂಕೆ ಪಡೆದಿತ್ತು. ಅಸಮಾಧಾನಗೊಂಡಿದ್ದ ಡಿಎಂಕೆ ನಾಯಕ ಕರುಣಾನಿಧಿ ತಂಗಿದ್ದ ಹೋಟೆಲ್ ಕೋಣೆಗೆ ಖುದ್ದಾಗಿ ಹೋಗಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮನವೊಲಿಸಿದ್ದರು. ಅದೇ ಹಳೆಯ ನಾಟಕದ ದೃಶ್ಯಗಳು ಈದಿನ ಸಂಜೆ ಪುನರಾವರ್ತನೆಯಾದವು.
2009: ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಸಂಭವಿಸಿದ ಎರಡು ಅಪಘಾತಗಳಲ್ಲಿ ಎಂಟು ಜನರು ಸಾವನ್ನಪ್ಪಿ, 19 ಮಂದಿ ಗಾಯಗೊಂಡರು. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕು ಸಂಕೇಶ್ವರ ಸಮೀಪದ ಶಿಪ್ಪೂರ ಕ್ರಾಸ್ ಬಳಿ ಬೆಳಗಿನ ಜಾವ 6 ಗಂಟೆಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 'ಐರಾವತ' ಬಸ್ ಪಲ್ಟಿಯಾಗಿ ಇನ್ಫೋಸಿಸ್ ಕಂಪೆನಿಯ ಐವರು ಉದ್ಯೋಗಿಗಳು ಸಾವನ್ನಪ್ಪಿದರು. ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಬೈಲಹೊಂಗಲ ತಾಲ್ಲೂಕಿನ ನೇಸರಗಿ ಬಳಿ ಮೋಟರ್ ಸೈಕಲ್ ಹಾಗೂ ಟೆಂಪೊ ನಡುವೆ ನಡೆದ ಅಪಘಾತದಲ್ಲಿ ಮೂವರು ಅಸು ನೀಗಿದರು.
2009: ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮುರು ತಾಲ್ಲೂಕಿನ ಮಾಚೇನಹಳ್ಳಿ ಬಳಿಯ ಚಿನ್ನ ಹಗರಿಯಲ್ಲಿ ಎತ್ತಿನ ಗಾಡಿ ಉರುಳಿ ಬಿದ್ದ ಘಟನೆಯಲ್ಲಿ ಮೃತರಾದವರ ಸಂಖ್ಯೆ 21ಕ್ಕೆ ಏರಿತು.
2009: ಸಮರಾಂಗಣವಾಗಿದ್ದ ಶ್ರೀಲಂಕಾ ಉತ್ತರ ಭಾಗದಿಂದ ಹೊರ ಬಿದ್ದ ಯುದ್ಧ ಸಂತ್ರಸ್ತರ ಸಂಖ್ಯೆ 2.80 ಲಕ್ಷ ಮುಟ್ಟಿತು. ಮೂರು ದಿನಗಳಲ್ಲೇ ಸುಮಾರು 80 ಸಾವಿರ ಮಂದಿ ಸಂಘರ್ಷ ವಲಯದಿಂದ ಪಾರಾಗಿ ಬಂದರು.
2009: ಜಾಗತಿಕ ಆರ್ಥಿಕ ಹಿಂಜರಿತ ಎಲ್ಲರ ವೇತನದ ಮೇಲೆ ಪರಿಣಾಮ ಬೀರಿದರೆ, ಭಾರತೀಯ ಐಟಿ ದೈತ್ಯ ಕಂಪೆನಿ ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್ಜಿ ತಮ್ಮ ವಾರ್ಷಿಕ ವೇತನದಲ್ಲಿ ಸುಮಾರು ಶೇ.10ರಷ್ಟು ಕಡಿತ ಮಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾದರು. 2008-09ರ ಹಣಕಾಸು ವರ್ಷದಲ್ಲಿ ಪ್ರೇಮ್ಜಿ ಅವರಿಗೆ ನೀಡಲಾದ ಒಟ್ಟು ವೇತನ 32,414 ಡಾಲರ್ಗಳಷ್ಟು ಎಂದರೆ ಸುಮಾರು ರೂ.14 ಲಕ್ಷದಷ್ಟು ಕಡಿಮೆಯಾಯಿತು.
2009: ಪಾಕಿಸ್ತಾನಕ್ಕೆ ನೀಡುವ ಸೇನೇತರ ನೆರವನ್ನು ತ್ರಿಗುಣಗೊಳಿಸುವ ವಿವಾದಾತ್ಮಕ ಒಪ್ಪಂದಕ್ಕೆ ಅಮೆರಿಕ ಕಾಂಗ್ರೆಸ್ ಸಮಿತಿ ಅನುಮೋದನೆ ನೀಡಿತು. ಆದರೆ ಇದಕ್ಕಾಗಿ ನೆರೆಹೊರೆಯ ದೇಶಗಳೊಂದಿಗಿನ ಗಡಿ ದಾಳಿಗಳಿಗೆ ತಡೆ ಒಡ್ಡುವುದೂ ಸೇರಿದಂತೆ ಕಠಿಣ ಷರತ್ತುಗಳನ್ನು ಪಾಕ್ ಮೇಲೆ ವಿಧಿಸಿತು.
2009: ಎಲ್ಟಿಟಿಇ ನಾಯಕ ವಿ.ಪ್ರಭಾಕರನ್ ಹತನಾಗಿರುವುದಾಗಿ ಶ್ರೀಲಂಕಾ ಸೇನೆ ಘೋಷಿಸಿದ ಹಿನ್ನೆಲೆಯಲ್ಲಿ ತಮಿಳುನಾಡಿನಾದ್ಯಂತ ಪ್ರತಿಭಟನೆ ಹಿಂಸಾಸ್ವರೂಪ ಪಡೆಯಿತು., ಕಡಲೂರು ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಲಾಯಿತು.
2009: ದಕ್ಷಿಣ ಕೊರಿಯಾದ ಸುಪ್ರೀಂಕೋರ್ಟ್ ಮೊತ್ತ ಮೊದಲ ಬಾರಿಗೆ 'ದಯಾ ಮರಣ'ಕ್ಕೆ ಅನುಮತಿ ನೀಡಿತು. ಕೋಮಾ ಸ್ಥಿತಿಯಲ್ಲಿ ದೀರ್ಘಕಾಲದವರೆಗೆ 'ಜೀವನ್ಮರಣ ಹೋರಾಟ' ನಡೆಸುವ ರೋಗಿಗಳು 'ಗೌರವದಿಂದ ಸಾವನ್ನಪ್ಪಲು' ಬಯಸಿದರೆ, ವೈದ್ಯರು 'ದಯಾ ಮರಣ' ನೀಡಬಹುದು ಎಂದು ಕೋರ್ಟ್ ಹೇಳಿತು. 76 ವರ್ಷದ ಮಹಿಳೆಯೊಬ್ಬರು 'ದಯಾ ಮರಣ'ಕ್ಕೆ ಅನುಮತಿ ನೀಡಬೇಕೆಂದು ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕರಿಸಿದ ನ್ಯಾಯಾಲಯ, ಆಕೆಯ 'ಪರ' ತೀರ್ಪು ನೀಡಿತು. ಕೆಳ ನ್ಯಾಯಾಲಯದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದು 'ದಯಾ ಮರಣ'ಕ್ಕೆ ಅನುಮತಿ ನೀಡಿತು. ಪ್ರಸ್ತುತ ದಕ್ಷಿಣ ಕೋರಿಯಾದ ಕಾನೂನಿನ ಪ್ರಕಾರ, ಮಿದುಳು ಕೋಶಗಳು ನಿಷ್ಕ್ರಿಯಗೊಂಡ ರೋಗಿಯ 'ಉಸಿರು ನಿಲ್ಲಿಸುವುದು' ಆತನನ್ನು ಕೊಲೆ ಮಾಡಿದಂತೆ.
2009: ಜಾರ್ಖಂಡ್ ಮುಕ್ತಿ ಮೋರ್ಚಾ ಮುಖ್ಯಸ್ಥ ಹಾಗೂ ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಅವರ ಹಿರಿಯ ಪುತ್ರ ದುರ್ಗಾ ಸೊರೇನ್ ಬೊಕಾರೊದ ತಮ್ಮ ನಿವಾಸದಲ್ಲಿ ನಿಧನರಾದರು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಈದಿನ ಬೆಳಗ್ಗೆ ಏಳಲೇ ಇಲ್ಲ. ಜೆಎಂಎಂನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದ ದುರ್ಗಾ 1995 ಹಾಗೂ 2000ದಲ್ಲಿ ಜಾಮಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೊದ್ದಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಬಿಜೆಪಿ ಅಭ್ಯರ್ಥಿ ಎದುರು ಸೋಲು ಅನುಭವಿಸಿದ್ದರು.
2009: ಒರಿಸ್ಸಾದ ನೂತನ ಮುಖ್ಯಮಂತ್ರಿಯಾಗಿ ಬಿಜು ಜನತಾದಳದ ಮುಖ್ಯಸ್ಥ ನವೀನ್ ಪಟ್ನಾಯಕ್ ಸತತ ಮೂರನೇ ಬಾರಿ ಅಧಿಕಾರ ಸ್ವೀಕರಿಸಿದರು. ಭುವನೇಶ್ವರದ ರಾಜಭವನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ರಾಜ್ಯಪಾಲ ಎಂ.ಸಿ.ಭಂಡಾರೆ ಮುಖ್ಯಮುಂತ್ರಿ ಸೇರಿ ಇತರ 21 ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು.
2009: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳು ಜಂಟಿಯಾಗಿ ದಿನನಿತ್ಯ ಪ್ರಯಾಣಿಸುವವರಿಗಾಗಿ ಸಂಯುಕ್ತ ದೈನಿಕ ಬಸ್ಪಾಸ್ ವ್ಯವಸ್ಥೆಯನ್ನು ಜಾರಿಗೊಳಿಸಿತು. ರಾಷ್ಟ್ರದಲ್ಲಿಯೇ ಪ್ರಥಮವಾದ ಈ ವ್ಯವಸ್ಥೆಯಲ್ಲಿ ವಿಶಿಷ್ಟ ಹಾಗೂ ಬಹುಪಯೋಗಿ ರೀತಿಯಲ್ಲಿ ಗ್ರಾಮಾಂತರ ಮತ್ತು ಬೆಂಗಳೂರು ನಗರ ಸಾರಿಗೆ ಬಸ್ಸುಗಳಲ್ಲಿ ಸಂಚರಿಸಲು ಅನುಕೂಲ ಕಲ್ಪಿಸಲಾಯಿತು. ಬೆಂಗಳೂರು ಮಹಾನಗರದ ಸುತ್ತಲಿನ 11 ಪಟ್ಟಣಗಳಿಂದ ಪ್ರಯಾಣಿಸುವವರಿಗೆ ಈ ಯೋಜನೆ ಲಭ್ಯ. ಗೌರಿಬಿದನೂರು, ಕೋಲಾರ, ತುಮಕೂರು, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ, ಚನ್ನಪಟ್ಟಣ, ಕನಕಪುರ, ಮಾಲೂರು, ವಿಜಯಪುರ, ರಾಮನಗರ ಮತ್ತು ಹಾರೋಹಳ್ಳಿ ಯೋಜನೆಯ ಪ್ರಯೋಜನ ಪಡೆದವು.
2008: ಕಳ್ಳಬಟ್ಟಿ ದುರಂತದ ಸಾವಿನ ಸಂಖ್ಯೆ ಇನ್ನಷ್ಟು ಏರಿದ್ದು ಈದಿನ ಬೆಂಗಳೂರು, ಕೋಲಾರ, ಕೃಷ್ಣಗಿರಿ, ಆನೇಕಲ್, ಹೊಸಕೋಟೆಯಲ್ಲಿ 35 ಮಂದಿ ಸಾವನ್ನಪ್ಪುವುದರೊಂದಿಗೆ ಪ್ರಾಣ ತೆತ್ತವರ ಸಂಖ್ಯೆ 189 ತಲುಪಿತು.
2008: ಹುಜಿ ಉಗ್ರಗಾಮಿ ಸಂಘಟನೆಗೆ ಸೇರಿದ ಉಗ್ರಗಾಮಿ ಅಬ್ದುಲ್ ರೆಹಮಾನ್ ಎಂಬಾತನನ್ನು ನವದೆಹಲಿಯ ಪೊಲೀಸರು ಕನಾಟ್ ಪ್ರದೇಶದಲ್ಲಿ ಬಂಧಿಸಿದರು. ಆತನಿಂದ ಜನಕ ಪುರಿ ಪ್ರದೇಶದಲ್ಲಿ ದಾಸ್ತಾನು ಮಾಡಿದ್ದ 3.1 ಕಿ.ಲೋ ಆರ್ ಡಿ ಎಕ್ಸ್ ಸ್ಫೋಟಕ, ಮತ್ತು ಸ್ಫೋಟ ಸಂಬಂಧಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.
2008: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಬಿಐಎಎಲ್) ನಾಡಪ್ರಭು ಕೆಂಪೇಗೌಡರ ಹೆಸರು ಇಡುವುದು ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಿದರು.
2008: ಹಿಂದಿನ ದಿನ ನಡೆದ ಬೀದಿ ಕಾಳಗದ ಹಿನ್ನೆಲೆಯಲ್ಲಿ ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯ ಉಪಾಧ್ಯಕ್ಷ ಆರ್. ಕೆ. ಗೋಪಾಲಕೃಷ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ವಿಶ್ವ ಅಥ್ಲೆಟಿಕ್ ದಿನಾಚರಣೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಉಪಾಧ್ಯಕ್ಷ ಗೋಪಾಲಕೃಷ್ಣ ಹಾಗೂ ಕಾರ್ಯದರ್ಶಿ ಸತ್ಯನಾರಾಯಣ ಕೈಕೈ ಮಿಲಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಅಥ್ಲೆಟಿಕ್ ಸಂಸ್ಥೆ ಕಾರ್ಯಕಾರಿ ಸಮಿತಿಯ ತುರ್ತು ಸಭೆ ನಡೆಸಿ ಗೋಪಾಲಕೃಷ್ಣ ಅವರ ರಾಜೀನಾಮೆಯನ್ನು ಕೋರಿತು.
2008: ಜೈಪುರ ನಗರದಲ್ಲಿ 2008ರ ಮೇ 13ರಂದು ನಡೆದ ಸರಣಿ ಸ್ಫೋಟ ಘಟನೆಯಲ್ಲಿ ಸಂತ್ರಸ್ತರಾದವರಿಗೆ ಸರ್ಕಾರವು ಪರಿಹಾರ ಹಾಗೂ ಪುನರ್ ವಸತಿ ಪ್ಯಾಕೇಜ್ ಪ್ರಕಟಿಸಿತು. ವಿಶೇಷವಾಗಿ ಮಕ್ಕಳ ಶಿಕ್ಷಣ, ಹೆಣ್ಣುಮಕ್ಕಳ ಮದುವೆ ಹಾಗೂ ಘಟನೆಯಲ್ಲಿ ಮೃತರಾದವರ ಮಕ್ಕಳಿಗೆ ನಗದು ಹಣ ನೀಡುವುದು ಈ ಪ್ಯಾಕೇಜಿನಲ್ಲಿ ಒಳಗೊಂಡಿದೆ ಎಂದು ರಾಜ್ಯ ಸಂಸದೀಯ ಸಚಿವ ಆರ್.ಎಸ್. ರಾಠೋಡ್ ತಿಳಿಸಿದರು.
2008: ನೈಋತ್ಯ ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಸಿಲುಕಿದ್ದ 60 ವರ್ಷದ ವಾಂಗ್ ಯುಕುನ್ ಎಂಬ ಮಹಿಳೆಯೊಬ್ಬರು ಮಳೆ ನೀರನ್ನೇ ಕುಡಿದು 196 (8 ದಿನ 4ಗಂಟೆ) ಗಂಟೆಗಳ ಕಾಲ ತಮ್ಮ ಜೀವವನ್ನು ಉಳಿಸಿಕೊಂಡ ಆಶ್ಚರ್ಯಕರ ಘಟನೆ ಬೆಳಕಿಗೆ ಬಂತು. ರಕ್ಷಣಾ ಕಾರ್ಯಕರ್ತರು ಆಕೆಯನ್ನು ಸುರಕ್ಷಿತವಾಗಿ ಹೊರಗೆ ತೆಗೆದರು. ಚೆಂಗ್ಡುವಿನ ಪರ್ವತ ಪ್ರದೇಶದಲ್ಲಿ ದೇವಸ್ಥಾನ ವೊಂದರಲ್ಲಿ ವಾಂಗ್ ಪ್ರಾರ್ಥನೆ ಸಲ್ಲಿಸುತ್ತಿದ್ದಾಗ ಭೂಕಂಪ ಸಂಭವಿಸಿ ಅವಶೇಷಗಳಡಿ ಸಿಲುಕಿದ್ದರು.
ಇದೇ ರೀತಿ ಯಾನ್ ಜಿ ಯಾಂಗ್ ಎಂಬಾತನೊಬ್ಬ ಭೂಕಂಪ ಅವಶೇಷಗಳಡಿ 179ಗಂಟೆಗಳ ಕಾಲ ಇದ್ದರೂ ಸುರಕ್ಷಿತವಾಗಿ ಹೊರಗೆ ಬಂದ.
2008: ದೆಹಲಿ ವಿಶ್ವವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇಕಡಾ 18ರ ಮೀಸಲಾತಿ ಸೌಲಭ್ಯ ಕಲ್ಪಿಸಲು ನಿರ್ಧರಿಸಿತು.
2008: ಮುಂಗಾರು ದೆಹಲಿ ತಲುಪಲು ಇನ್ನೂ ಕೆಲದಿನಗಳು ಬಾಕಿಯಿರುವಂತೆಯೇ ಈದಿನ ಸುರಿದ ದಾಖಲೆಯ ಮಳೆ ಪೂರ್ಣ ದೆಹಲಿಯನ್ನು ತೊಯ್ಯಿಸಿ ತಂಪಾಗಿಸಿತು. ಹಿಂದಿನ 5 ವರ್ಷಗಳಲ್ಲಿ ಮೇ ತಿಂಗಳಿನಲ್ಲಿ ಇಷ್ಟೊಂದು ಮಳೆ ಸುರಿದ ದಾಖಲೆಯೇ ಇರಲಿಲ್ಲ.
2008: ಇಂತಿಷ್ಟೇ ಗಂಟೆ ಅಥವಾ ದಿನ ಅಥವಾ ತಿಂಗಳಲ್ಲಿ ಪೂರ್ಣಗೊಳಿಸುವುದಾಗಿ ಪ್ರಕಟಿಸದೇ ಆರಂಭವಾದ ಬಿಡಿಎ ಜಂಕ್ಷನ್ ಬಳಿಯ ಸರ್ಫೇಸ್ ಪಾಸ್ ಕಾಮಗಾರಿ ಕೊನೆಗೂ ಪೂರ್ಣಗೊಂಡು, ಈದಿನ ಸಂಜೆ 5.15ಕ್ಕೆ ಅಧಿಕೃತವಾಗಿ ಈ ರಸ್ತೆಯನ್ನು ಯಾವುದೇ ಉದ್ಘಾಟನಾ ಸಮಾರಂಭವೂ ಇಲ್ಲದೆಯೇ ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
2008: ಕರ್ನಾಟಕ ರಾಜ್ಯದಲ್ಲಿಯೇ `ಮತದಾರರ ಮಿನಿಯೇಚರ್ ಷೀಟ್' ತಯಾರಿಸಿದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ಬೀದರ್ ಪಾತ್ರವಾಯಿತು. ವಿಧಾನಸಭಾ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಬರುವ ಬೀದರ್ ಜಿಲ್ಲೆಯ ಮತದಾರರ ಮಿನಿಯೇಚರ್ ಷೀಟ್ ತಯಾರಿಸುವ ಮೂಲಕ ಜಿಲ್ಲಾಡಳಿತವು ವಿನೂತನ ಮಾದರಿ ಅಳವಡಿಸಿತು. ಚುನಾವಣಾ ಆಯೋಗವು ವಿತರಿಸುವ ಮತದಾರರ ಗುರುತಿನ ಚೀಟಿಯಲ್ಲಿನ ವಿವರಗಳನ್ನೇ ಚಿಕ್ಕಗಾತ್ರದಲ್ಲಿ ಅಡಕಗೊಳಿಸಿ ಅಳವಡಿಸುವ ಮೂಲಕ ಈ ಮಿನಿಯೇಚರ್ ಷೀಟ್ ತಯಾರಿಸಲಾಗಿತ್ತು. ಒಂದು ಷೀಟಿನಲ್ಲಿ ಭಾವಚಿತ್ರ ಸಮೇತ 50 ಮತದಾರರ ವಿವರಗಳು ಇರುತ್ತವೆ. ಹೆಸರು, ವಯಸ್ಸು, ಲಿಂಗ, ವಿಳಾಸ ಸೇರಿದಂತೆ ಎಂಟು ಮಾಹಿತಿಗಳು ಷೀಟಿನಲ್ಲಿ ಲಭ್ಯವಿರುತ್ತವೆ. ನಕಲಿ ಮತದಾನ ತಡೆಯುವ ನಿಟ್ಟಿನಲ್ಲಿ `ಮಿನಿಯೇಚರ್ ಷೀಟ್'ಗಳ ಮೂಲಕ ಒಂದು ಪ್ರಮುಖ ಹೆಜ್ಜೆ ಇರಿಸಿದಂತಾಯಿತು.
2008: ಉತ್ತರಖಂಡದ ಪಿಥೋರಗಢ ಜಿಲ್ಲೆಯಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮವಾಗಿ ಅದರಲ್ಲಿ ಪ್ರಯಾಣ ಮಾಡುತ್ತಿದ್ದ 18 ಮಂದಿ ಮೃತರಾಗಿ ಇತರ 12 ಮಂದಿ ಗಾಯಗೊಂಡರು. ಬಸ್ಸು ಪಿಥೋರಗಢದಿಂದ ಬಾಗೇಶ್ವರಕ್ಕೆ ಹೋಗುತ್ತಿದ್ದಾಗ ಈ ದುರಂತ ಸಂಭವಿಸಿತು.
2007: ಕಲಾನಿಧಿ ಮಾರನ್ ಮಾಲೀಕತ್ವದ `ಸನ್ ಟಿವಿ ನೆಟ್ ವರ್ಕ್' ಪ್ರತಿಸ್ಪರ್ಧಿ `ರಾಜ್ ಟಿವಿ'ಯು `ಕಳೈಗನಾರ್ ಟಿವಿ' ಎಂಬ ಹೊಸ ಚಾನೆಲನ್ನು ಶೀಘ್ರವೇ ಆರಂಭಿಸುವುದಾಗಿ ಪ್ರಕಟಿಸಿತು.
2007: ಕಾರ್ಯನಿರತ ಪತ್ರಕರ್ತರು ಮತ್ತು ಸುದ್ದಿ ಸಂಸ್ಥೆಗಳ ನೌಕರರ ವೇತನ ಪರಿಷ್ಕರಣೆಗೆ ಕೇಂದ್ರ ಸರ್ಕಾರವು ಎರಡು ಪ್ರತ್ಯೇಕ ಹೊಸ ವೇತನ ಮಂಡಳಿಗಳನ್ನು ನ್ಯಾಯಮೂರ್ತಿ ಕೆ. ನಾರಾಯಣ ಕುರುಪ್ ಅಧ್ಯಕ್ಷತೆಯಲ್ಲಿ ರಚಿಸಿತು.
2007: ನಟ ಸಂಜಯದತ್ ನಿವಾಸದಿಂದ ಎಕೆ 47 ಬಂದೂಕು ಹಾಗೂ ಮದ್ದು ಗುಂಡುಗಳನ್ನು ಹೊರಗೆ ಸಾಗಿಸಿದ್ದ ಆರೋಪಿ ಮನ್ಸೂರ್ ಅಹಮದ್ ಎಂಬಾತನಿಗೆ ವಿಶೇಷ ಟಾಡಾ ನ್ಯಾಯಾಲಯವು 10 ವರ್ಷಗಳ ಕಠಿಣ ಶಿಕ್ಷೆ ಮತ್ತು 50,000 ರೂಪಾಯಿಗಳ ದಂಡ ವಿಧಿಸಿತು.
2007: ವಿದೇಶಕ್ಕೆ ಅಕ್ರಮವಾಗಿ ಭಾರಿ ಮೊತ್ತದ ಹಣವನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ನೈಜೀರಿಯಾದ ರಾಜತಾಂತ್ರಿಕನೊಬ್ಬನನ್ನು ಆದಾಯ ತೆರಿಗೆ ಅಧಿಕಾರಿಗಳು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ ಆತನಿಂದ 2.27 ದಶಲಕ್ಷ (22.7 ಕೋಟಿ) ಅಮೆರಿಕನ್ ಡಾಲರುಗಳನ್ನು (ಅಂದಾಜು 10 ಕೋಟಿ ರೂಪಾಯಿ) ವಶ ಪಡಿಸಿಕೊಂಡರು.
2006: ಯುರೋಪಿನಲ್ಲಿ ತನ್ನ ಪ್ರತಿಸ್ಪರ್ಧಿಯಾಗಿರುವ ಆರ್ಸೆಲರ್ ಸಂಸ್ಥೆಯನ್ನು ಸ್ವಾಧೀನಕ್ಕೆ ತೆಗೆದುಕೊಂಡು ವಿಶ್ವದಲ್ಲಿಯೇ ಅತಿ ದೊಡ್ಡದಾದ ಉಕ್ಕು ತಯಾರಿಕೆಯ ಪ್ರಶ್ನಾತೀತ ಸಂಸ್ಥೆಯಾಗುವ ನಿರ್ಧಾರವನ್ನು ಮಿತ್ತಲ್ ಸ್ಟೀಲ್ ಸಂಸ್ಥೆ ಪ್ರಕಟಿಸಿತು.
2006: ಭಾರತದ ತಾರಾಪುರ ಪರಮಾಣು ವಿದ್ಯುತ್ ಯೋಜನೆಯ ಎರಡನೆಯ ಅತಿದೊಡ್ಡ ರಿಯಾಕ್ಟರ್ ಘಟಕವು ಮಹಾರಾಷ್ಟ್ರದ ತಾರಾಪುರದಲ್ಲಿ ಈದಿನ ಬೆಳಗ್ಗೆ 10.44 ಗಂಟೆಗೆ ಕಾರ್ಯಾರಂಭ ಮಾಡಿತು. ತಾರಾಪುರ ಪರಮಾಣು ವಿದ್ಯುತ್ ಯೋಜನೆಯ ಆವರಣವು ಒಟ್ಟು 4 ಪರಮಾಣು ರಿಯಾಕ್ಟರ್ ಘಟಕಗಳನ್ನು ಹೊಂದಿದೆ.
1994: ಮನಿಲಾದಲ್ಲಿ `ಮಿಸ್ ಯುನಿವರ್ಸ್' (ಭುವನ ಸುಂದರಿ) ಕಿರೀಟ ಧರಿಸಿದ ಸುಶ್ಮಿತಾ ಸೇನ್ ಈ ಸಾಧನೆ ಮಾಡಿದ ಪ್ರಥಮ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾದರು.
1991: ಭಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿ ಅವರನ್ನು ಎಲ್ ಟಿ ಟಿ ಇ ಆತ್ಮಾಹುತಿ ದಳದ ಸದಸ್ಯೆಯೊಬ್ಬಳು ಚೆನ್ನೈ ಸಮೀಪದ ಶ್ರೀಪೆರಂಬದೂರಿನಲ್ಲಿ ಬಾಂಬ್ ಸ್ಫೋಟಿಸಿ ಹತ್ಯೆಗೈದಳು. ಲೋಕಸಭಾ ಚುನಾವಣಾ ಪ್ರಚಾರ ಕಾಲದಲ್ಲಿ ಈ ಘಟನೆ ನಡೆಯಿತು.
1964: ಅತಿ ಕಿರಿಯ ವಯಸಿನಲ್ಲೇ ಸುಗಮ ಸಂಗೀತ ಕ್ಷೇತ್ರವನ್ನು ಶ್ರೀಮಂತಗೊಳಿಸಲು ಶ್ರಮಿಸಿದ ವಿಜಯ ಕುಮಾರ ಅತ್ರಿ (21-5-1964ರಿಂದ 30-5-2000) ಅವರು ಎನ್. ಗಣೇಶ್- ಬಿ.ಎನ್. ನಾಗರತ್ನಮ್ಮ ದಂಪತಿಯ ಮಗನಾಗಿ ಕನಕಪುರದಲ್ಲಿ ಜನಿಸಿದರು. ರಾಮಕೃಷ್ಣಾಶ್ರಮದ ಕಾರ್ಯಕ್ರಮಗಳಿಂದ ಹಾಡುಗಾರಿಕೆ ಆರಂಭಿಸಿದ ಅವರು 300ಕ್ಕೂ ಹೆಚ್ಚು ಕ್ಯಾಸೆಟ್ಟುಗಳಲ್ಲಿ ಹಾಡಿದ್ದಾರೆ. ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಹೆಂಡತಿಯ ಊರಾದ ಶೃಂಗೇರಿಯ ಬಳಿ `ಉಳುಮೆ ಬೈಲು' ಜೈ ಶಂಕರ್ ಯುವಕ ಸಂಘದ ಕಾರ್ಯಕ್ರಮದಲ್ಲಿ ಹಾಡಿದ ಮರುದಿನ ತುಂಗಾನದಿಯಲ್ಲಿ ಆಕಸ್ಮಿಕಕ್ಕೆ ಒಳಗಾಗಿ ಕುಟುಂಬದ ಐವರು ಸದಸ್ಯರೊಂದಿಗೆ ಅಸು ನೀಗಿದ್ದು ಒಂದು ದೊಡ್ಡ ದುರಂತ.
1963: ಕಲಾವಿದ ಶೇಖನ ಗೌಡ ಕೆ.ಪಿ. ಜನನ.
1954: ಕಲಾವಿದ ಚಂದ್ರಕಾಂತ್ ಎಂ. ಜನನ.
1943: ಕಲಾವಿದ ವಿ.ಎಂ. ನಾಗರಾಜ್ ಜನನ.
1932: ಕಾದಂಬರಿಗಾರ್ತಿ ಸುನೀತಾ ಕೃಷ್ಣಸ್ವಾಮಿ (21-5-1932ರಿಂದ 14-8-2000) ಅವರು ಮೈಸೂರಿನಲ್ಲಿ ಸುಬ್ಬರಾವ್- ಪಾರ್ವತಮ್ಮ ದಂಪತಿಯ ಮಗಳಾಗಿ ಈದಿನ ಜನಿಸಿದರು.
1928: ಕಲಾವಿದ ಶ್ರೀನಿವಾಸಯ್ಯ ಕೆ.ಟಿ. ಜನನ.
1927: ಅಟ್ಲಾಂಟಿಕ್ ಸಾಗರದ ಮೇಲಿನಿಂದ ಮೂವತ್ತಮೂರುವರೆ ತಾಸುಗಳಲ್ಲಿ ಏಕವ್ಯಕ್ತಿ ವಿಮಾನ ಹಾರಾಟವನ್ನು ಪೂರ್ಣಗೊಳಿಸಿದ ಚಾರ್ಲ್ಸ್ ಎ ಲಿಂಡ್ ಬರ್ಗ್ ತಮ್ಮ `ಸ್ಪಿರಿಟ್ ಆಫ್ ಸೇಂಟ್ ಲೂಯಿ' ವಿಮಾನವನ್ನು ಲೆ ಬರ್ಗರ್ ವಿಮಾನ ನಿಲ್ದಾಣದಲ್ಲಿ ಇಳಿಸಿದರು.
1921: ಸೋವಿಯತ್ ಒಕ್ಕೂಟದ ವಿಜ್ಞಾನಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಆಂದ್ರೇಯಿ ಸಖರೋವ್ (1921-89) ಜನ್ಮದಿನ. ಇವರು ಸೋವಿಯತ್ ಒಕ್ಕೂಟದ ಕಮ್ಯೂನಿಸ್ಟ್ ಸರ್ಕಾರದ ಜೊತೆಗಿನ ತಮ್ಮ ಭಿನ್ನಮತದಿಂದಾಗಿ ಜಾಗತಿಕ ಖ್ಯಾತಿ ಗಳಿಸಿದ್ದರು.
1960: ರಷ್ಯದ ಈಜುಗಾರ್ತಿ ವ್ಲಾಡಿಮೀರ್ ಸಾಲ್ನಿಕೋವ್ ಜನ್ಮದಿನ. ನಾಲ್ಕು ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದ ಈಕೆ 1500 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ 15 ನಿಮಿಷಗಳ ಒಳಗೆ ಕ್ರಮಿಸಿದ ಮೊದಲಿಗರೆನಿಸಿದರು.
1787: ಲಾರ್ಡ್ಸ್ಸ್ ಕ್ರಿಕೆಟ್ ಮೈದಾನದಲ್ಲಿ ಮೊತ್ತ ಮೊದಲ ಕ್ರಿಕೆಟ್ ಪಂದ್ಯ ನಡೆಯಿತು. ಈ ಪಂದ್ಯ ವೈಟ್ ಕಂಡ್ಯೂಟ್ ಕ್ಲಬ್ ಹಾಗೂ ಮಿಡ್ಲ್ ಸೆಕ್ಸ್ ಮಧ್ಯೆ ನಡೆಯಿತು.
No comments:
Post a Comment