Wednesday, May 16, 2018

ಇಂದಿನ ಇತಿಹಾಸ History Today ಮೇ 15

ಇಂದಿನ ಇತಿಹಾಸ History Today ಮೇ 15
2018: ಬೆಂಗಳೂರು: ರಾಷ್ಟ್ರ ಮಟ್ಟದ ನಾಯಕರ ಭರಾಟೆಯ ಅಬ್ಬರದ ಪ್ರಚಾರದೊಂದಿಗೆ ರಾಷ್ಟ್ರದ ಎಲ್ಲ ಗಮನ ಸೆಳೆದಿದ್ದ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಶ ರಾಜ್ಯವನ್ನು ಅಸ್ಥಿರ ಸ್ಥಿತಿಗೆ ತಂದು ನಿಲ್ಲಿಸಿದ್ದು, ಅತ್ಯಂತ ದೊಡ್ಡ ಪಕ್ಷವಾಗಿ ಉದಯಿಸಿರುವ ಬಿಜೆಪಿ ಮತ್ತು ಫಲಿತಾಂಶದ ಬಳಿಕ ದಿಢೀರನೆ ಒಂದಾಗಿರುವ ಜನತಾದಳ (ಎಸ್) ಮತ್ತು ಕಾಂಗ್ರೆಸ್ ಎರಡೂ ರಾಜ್ಯದ ಅಧಿಕಾರ ಸೂತ್ರ ಹಿಡಿಯಲು ಪೈಪೋಟಿ ನಡೆಸಿದವು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ಅವರು ಅನಂತಕುಮಾರ್, ಸದಾನಂದ ಗೌಡ, ಶೋಭಾ ಕರಂದ್ಲಾಜೆ ಮತ್ತಿತರರ ಜೊತೆಗೆ  ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿ ಮಾಡಿ ಏಕೈಕ ದೊಡ್ಡ ಪಕ್ಷದ ನೆಲೆಯಲ್ಲಿ ತಮಗೆ ಸರ್ಕಾರ ರಚನೆಗೆ ಒಂದು ವಾರದ ಕಾಲವಕಾಶ ನೀಡುವಂತೆ ಕೋರಿದರು. ಇನ್ನೊಂದೆಡೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಭೇಷರತ್ ಬೆಂಬಲ ಪಡೆದ ಜನತಾದಳ (ಎಸ್) ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಪರಮೇಶ್ವರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ತಮಗೆ ಬಹುಮತ ಇರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿ ಪತ್ರ ಸಲ್ಲಿಸಿದರು.  ೨೨೪ ಬಲದ ವಿಧಾನಸಭೆಯಲ್ಲಿ ಚುನಾವಣೆ ನಡೆದಿರುವ ೨೨೨ ಕ್ಷೇತ್ರಗಳ ಫಲಿತಾಂಶ ಈದಿನ ಪ್ರಕಟಗೊಂಡಿದ್ದು ೧೦೮ ಸ್ಥಾನಗಳೊಂದಿಗೆ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿತು. ಆಡಳಿತಾರೂಢ ಕಾಂಗ್ರೆಸ್ ೭೮ ಸ್ಥಾನಗಳೊಂದಿಗೆ ಎರಡನೇ ಸ್ಥಾನಕ್ಕೆ ಇಳಿದು ಅಧಿಕಾರ ಕಳೆದುಕೊಂಡಿದ್ದು, ೩೮ ಸ್ಥಾನಗಳೊಂದಿಗೆ ಜನತಾದಳ (ಎಸ್) ಮೂರನೇ ಸ್ಥಾನ ಪಡೆಯಿತು.  ಎರಡು ಸ್ಥಾನಗಳು ಇತರರ ಪಾಲಾದವು.  ಅಧಿಕಾರ ಹಿಡಿಯಲು ಯಾವುದೇ ಪಕ್ಷಕ್ಕೆ ೧೧೨ ಸ್ಥಾನಗಳ ಅಗತ್ಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಹಲವಾರು ಸಚಿವರು ಪರಾಭವ ಅನುಭವಿಸುವುದರೊಂದಿಗೆ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದ್ದರೂ, ಸರಳ ಬಹುಮತ ಗಳಿಸಿಕೊಳ್ಳಲು ಬಿಜೆಪಿ ವಿಫಲವಾದುದರ ಲಾಭವನ್ನು ತತ್ ಕ್ಷಣವೇ ಬಳಸಿಕೊಂಡು ಅದನ್ನು ಅಧಿಕಾರಕ್ಕೆ ಏರದಂತೆ ತಡೆಯಲು ಜನತಾದಳಕ್ಕೆ ಭೇಷರತ್ ಬೆಂಬಲ ಘೋಷಿಸಿತು. ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತಿರುವುದು ಖಚಿತವಾದಂತೆಯೇ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನಿವಾಸ ಅಧಿಕಾರದ ಕೇಂದ್ರವಾಗಿ ಬದಲಾಯಿತು. ಬಹುತೇಕ ಸಮೀಕ್ಷೆಗಳ ಪ್ರಕಾರ ’ಕಿಂಗ್ ಮೇಕರ್ ಆಗುವುದಾಗಿ ಹೇಳಲಾಗಿದ್ದ ಜನತಾದಳ (ಎಸ್) ಸ್ವತಃ ’ಕಿಂಗ್ ಆಗುವತ್ತ ಸಾಗಿತು. ಕಾಂಗ್ರೆಸ್ಸಿನ ಧುರೀಣರ ಜೊತೆಗೆ ಬಿಜೆಪಿಯ ಆರ್. ಅಶೋಕ್ ಅವರೂ ದೇವೇಗೌಡರ ಮನೆಗೆ ದೌಡಾಯಿಸಿದರು. ಈ ಮಧ್ಯೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೂ ದೇವೇಗೌಡರ ಬಳಿ ದೂರವಾಣಿ ಮೂಲಕ ಮಾತನಾಡಿದರು. ದೇವೇಗೌಡರ ಮನೆಗೆ ತುರ್ತಾಗಿ ಧಾವಿಸಿದ ಕುಮಾರ ಸ್ವಾಮಿ ಅವರು ದೇವೇಗೌಡರ ಜೊತೆಗೆ ಸಮಾಲೋಚನೆ ನಡೆಸಿ ಕಾಂಗ್ರೆಸ್ ಬೆಂಬಲವನ್ನು ಸ್ವೀಕರಿಸುವುದಾಗಿ ಘೋಷಿಸಿ, ರಾಜ್ಯಪಾಲರಿಗೆ ನೀಡಲು ಪತ್ರ ಸಿದ್ಧ ಪಡಿಸಿದರು. ಈ ಮಧ್ಯೆ ದೆಹಲಿಯಿಂದ ಬಿಜೆಪಿ ವರಿಷ್ಠರು ತಮ್ಮ ಜೊತೆಗೂ ಮಾತುಕತೆ ನಡೆಸುವಂತೆ ದೇವೇಗೌಡ ಅವರಿಗೆ ಸಂದೇಶ ನೀಡಿದರೂ, ಜನತಾದಳ ಬಿಜೆಪಿ ಜೊತೆ ಸಂಧಾನದ ಬಾಗಿಲು ಮುಚ್ಚಿತು. ಕುಮಾರ ಸ್ವಾಮಿ ಅವರು ರಾಜಭವನದತ್ತ ಹೊರಡುತ್ತಿರುವ ಸುದ್ದಿ ಬರುತ್ತಿದ್ದಂತೆಯೇ ಅದಕ್ಕೂ ಮೊದಲೇ ರಾಜ್ಯಪಾಲರನ್ನು ಭೇಟಿ ಮಾಡಿದ ಯಡಿಯೂರಪ್ಪ ನೇತ್ವತದ ಬಿಜೆಪಿ ನಿಯೋಗ ತಮ್ಮ ಪಕ್ಷವು ಏಕೈದ ದೊಡ್ಡ ಪಕ್ಷವಾಗಿ ಮೂಡಿರುವ ಹಿನ್ನೆಲೆಯಲ್ಲಿ ಸರ್ಕಾರ ರಚನೆಗೆ ಒಂದು ವಾರದ ಕಾಲಾವಕಾಶ ನೀಡುವಂತೆಯೂ ಕೋರಿತು.

ರಾಜಭವನದಿಂದ ಹೊರಬಂದ ಯಡಿಯೂರಪ್ಪ ಅವರು ತಾವು ದೊಡ್ಡ ಪಕ್ಷದ ನೆಲೆಯಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವುದಾಗಿ ಹೇಳಿದರು. ಅದಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಜನರಿಂದ ತಿರಸ್ಕೃತವಾಗಿದೆ. ತಮ್ಮ ಪಕ್ಷವನ್ನು ಜನರು ಆಶೀರ್ವದಿಸಿದ್ದಾರೆ. ಆದರೂ ಸರ್ಕಾರ ರಚಿಸಲು ಕಾಂಗ್ರೆಸ್ ಹಿಂಬಾಗಿಲ ಯತ್ನ ನಡೆಸಿದೆ ಎಂದು ದೂರಿದರು.  ಯಡಿಯೂರಪ್ಪ ಮತ್ತಿತರ ಬಿಜೆಪಿ ಧುರೀಣರು ರಾಜಭವನದಿಂದ ವಾಪಸಾಗುವಷ್ಟರಲ್ಲೇ ಅಲ್ಲಿಗೆ ಕುಮಾರ ಸ್ವಾಮಿ, ಸಿದ್ದರಾಮಯ್ಯ, ಪರಮೇಶ್ವರ್ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಜೆಡಿಎಸ್- ಕಾಂಗ್ರೆಸ್ ಧುರೀಣರು ಆಗಮಿಸಿ ರಾಜ್ಯಪಾಲರಿಗೆ ಕಾಂಗ್ರೆಸ್ ಹಾಗೂ ಇಬ್ಬರು ಪಕ್ಷೇತರರ ಬೆಂಬಲ ಹಿನ್ನೆಲೆಯಲ್ಲಿ ತಮಗೆ ೧೧೮ ಸದಸ್ಯರ ಬೆಂಬಲ ಇರುವುದರಿಂದ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಕೋರಿ ಪತ್ರ ಸಲ್ಲಿಸಿದರು. ರಾಜಭವನದಿಂದ ಹೊರಬಂದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಸಿದ್ದರಾಮಯ್ಯ ಸಂಖ್ಯಾಬಲ ನಮ್ಮ ಕಡೆಗಿದೆ ಎಂದು ಪ್ರತಿಪಾದಿಸಿದರು.  ದಿಢೀರ್ ಬೆಳವಣಿಗೆಗಳು ಸಂಭವಿಸುವ ಮುನ್ನವೇ,  ರಾಜ್ಯ ರಾಜಕೀಯದಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೂಡಾ, ಕಾಂಗ್ರೆಸ್ ಮುಖಂಡರು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಗೆ ದೂರವಾಣಿ ಮೂಲಕ ಮೈತ್ರಿ ಸರ್ಕಾರ ರಚಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಅಲ್ಲದೇ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಿಎಂ ಹುದ್ದೆ, ಕಾಂಗ್ರೆಸ್ ನ ಜಿ.ಪರಮೇಶ್ವರ್ ಅವರಿಗೆ ಡಿಸಿಎಂ ಹುದ್ದೆ ನೀಡುವ ಕೊಡುಗೆಯನ್ನ್ನು ಕಾಂಗ್ರೆಸ್ ಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಹಾಗೂ ಕುಮಾರಸ್ವಾಮಿ ಮೈತ್ರಿಗೆ ಒಪ್ಪಿಗೆ ಸೂಚಿಸಿದರು ಎಂದು ಮೂಲಗಳು ಹೇಳಿದವು.  ಘಟಾನುಘಟಿ ಸಚಿವರ ಸೋಲು:  ಇದಕ್ಕೆ ಮುನ್ನ ಪ್ರಕಟವಾದ ಚುನಾವಣಾ ಫಲಿತಾಂಶದಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಘಟಾನುಘಟಿ ಸಚಿವರಿಗೆ ಮತದಾರರು ಸೋಲಿನ ರುಚಿ ತೋರಿಸಿದರು. ಸೋತ ಪ್ರಮುಖ ಸಚಿವರು:  ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಅವರನ್ನು ಹೊಳಲ್ಕೆರೆ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಚಂದ್ರಪ್ಪ ಪರಾಜಯಗೊಳಿಸಿದರು. ಕಾಂಗ್ರೆಸ್ ನ ಆಂಜನೇಯ ೬೯,೦೩೬ ಮತ ಗಳಿಸಿದ್ದರೆ, ಬಿಜೆಪಿಯ ಚಂದ್ರಪ್ಪ ೧,೦೭, ೯೭೬ ಮತ ಗಳಿಸಿದರು.  ಬಂಟ್ವಾಳದಲ್ಲಿ ಸಚಿವ ರಮಾನಾಥ್ ರೈ ಅವರನ್ನು ಬಿಜೆಪಿಯ ರಾಜೇಶ್ ನಾಯ್ಕ ಉಳೇಪಾಡಿ ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ರೈ ೮೧,೮೩೧ ಮತ ಗಳಿಸಿದ್ದು, ಬಿಜೆಪಿಯ ನಾಯ್ಕ್ ಅವರು ೯೭,೮೦೨ ಮತ ಪಡೆದರು. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿಯ ಕೆ.ರಘುಪತಿ ಭಟ್ ಸೋಲಿಸಿದರು. ಕಾಂಗ್ರೆಸ್ ನ ಮಧ್ವರಾಜ್ ಅವರು ೭೨,೯೦೨ ಮತ ಗಳಿಸಿದ್ದರೆ, ರಘುಪತಿ ಭಟ್ ೮೪,೯೪೬ ಮತ ಪಡೆದರು.  ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಸಚಿವೆ ಉಮಾಶ್ರೀ ಅವರನ್ನು ಬಿಜೆಪಿಯ ಸಿದ್ದು ಸವದಿ ಸೋಲಿಸಿದರು. ಸಿದ್ದು ಸವದಿ ಅವರು ೮೭,೨೧೩ ಮತ ಗಳಿಸಿದ್ದರೆ, ಉಮಾಶ್ರೀ ೬೬,೩೨೪ ಮತ ಗಳಿಸಿದರು.  ಟಿ ನರಸೀಪುರದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತ, ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಜೆಡಿಎಸ್ ನ ಅಶ್ವಿನ್ ಕುಮಾರ್ ಎಂ ಸೋಲಿಸಿದರು. ಮಹದೇವಪ್ಪ ೫೫,೪೫೧ ಮತ ಪಡೆದಿದ್ದು, ಅಶ್ವಿನ್ ಕುಮಾರ್ ೮೩,೯೨೯ ಮತ ಗಳಿಸಿದರು.  ಧಾರವಾಡದಲ್ಲಿ ಸಚಿವ ವಿನಯ್ ಕುಲಕರ್ಣಿಯನ್ನು ಬಿಜೆಪಿಯ ಅಮೃತ್ ಅಯ್ಯಪ್ಪ ದೇಸಾಯಿ ಸೋಲಿಸಿದರು. ದೇಸಾಯಿ ೮೫,೧೨೩ ಮತ ಪಡೆದಿದ್ದರೆ, ಕುಲಕರ್ಣಿ ೬೪,೭೮೩ ಮತ ಗಳಿಸಿದರು.  ಕಲಘಟಗಿಯಲ್ಲಿ ಕಾಂಗ್ರೆಸ್ಸಿನ  ಸಂತೋಷ್ ಲಾಡ್ ಪರಾಜಯಗೊಂಡಿದ್ದು,ಬಿಜೆಪಿಯ ಸಿಎಂ ನಿಂಬಣ್ಣನವರ್ ಗೆಲುವು ಸಾಧಿಸಿದರು. ಲಾಡ್ ೫೭,೨೭೦ ಮತ ಪಡೆದಿದ್ದು, ಬಿಜೆಪಿಯ ನಿಂಬಣ್ಣನವರ್ ೮೩,೨೬೭ ಮತ ಗಳಿಸಿದರು.  ಹಾವೇರಿಯಲ್ಲಿ ಕಾಂಗ್ರೆಸ್ ಪಕ್ಷದ ರುದ್ರಪ್ಪ ಲಮಾಣಿ ಅವರನ್ನು ಬಿಜೆಪಿಯ ನೆಹರೂ ಓಲೇಕಾರ್ ಪರಾಭವಗೊಳಿಸಿದರು. ಲಮಾಣಿ ಅವರು ೭೫,೨೬೧ ಮತಗಳಿಸಿದ್ದರೆ, ಓಲೇಕಾರ್ ೮೬,೫೬೫ ಮತ ಪಡೆದರು.  ಯಲಬುರ್ಗಾದಲ್ಲಿ ಸಚಿವ ಬಸವರಾಜ್ ರಾಯರೆಡ್ಡಿ ಸೋತಿದ್ದು, ಬಿಜೆಪಿಯ ಎಎಚ್ ಬಸಪ್ಪ ಗೆಲುವು ಸಾಧಿಸಿದರು. ರಾಯರೆಡ್ಡಿ ಅವರು ೬೫,೭೫೪ ಮತ ಗಳಿಸಿದ್ದರೆ, ಬಿಜೆಪಿಯ ಬಸಪ್ಪ ೭೯,೦೭೨ ಮತ ಪಡೆದರು.  ಜಗದೀಶ್ ಶೆಟ್ಟರ್ ಫಲಿತಾಂಶಕ್ಕೆ ಆಯೋಗ ತಡೆ: ಇವಿಎಂ, ವಿವಿಪ್ಯಾಟ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಫಲಿತಾಂಶಕ್ಕೆ ಚುನಾವಣಾ ಆಯೋಗ ತಡೆ ನೀಡಿದೆ ಎಂದು ಹುಬ್ಬಳ್ಳಿಯಿಂದ ಬಂದ ವರದಿ ತಿಳಿಸಿತು.  ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹಾಗೂ ಕಾಂಗ್ರೆಸ್ ನಿಂದ ಮಹೇಶ್ ನಾಲವಾಡ ಸ್ಪರ್ಧಿಸಿದ್ದರು. ಚಲಾವಣೆಯಾಗಿದ್ದಕ್ಕಿಂತ ೨೦೭ ಹೆಚ್ಚು ಮತವನ್ನು ಇವಿಎಂ ತೋರಿಸಿದ್ದು, ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಹೇಶ್ ನಾಲವಾಡ ಅವರು ಫಲಿತಾಂಶವನ್ನು ತಡೆ ಹಿಡಿಯುವಂತೆ ಮನವಿ ಮಾಡಿದ್ದರು.  ಇದರಿಂದಾಗಿ ಜಗದೀಶ್ ಶೆಟ್ಟರ್ ಅವರ ಚುನಾವಣಾ ಫಲಿತಾಂಶಕ್ಕೆ ಆಯೋಗದ ಅಧಿಕಾರಿಗಳು ತಡೆ ನೀಡಲು ಮೌಖಿಕವಾಗಿ ಒಪ್ಪಿಗೆ ಸೂಚಿಸಿರುವುದಾಗಿ ವರದಿ ತಿಳಿಸಿತು.  ದೆಹಲಿಯಲ್ಲಿ ಬಿಜೆಪಿ ಸಂಭ್ರಮಾಚರಣೆ: ಈ ಮಧ್ಯೆ ಕರ್ನಾಟಕದಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿರುವುದಕ್ಕೆ ದೆಹಲಿಯ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಸಲಾಯಿತು. ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಅವರು ಮಾತನಾಡಿ ಪಕ್ಷದ ಸಾಧನೆಯನ್ನು ಶ್ಲಾಘಿಸಿ ಜನತೆ ಹಾಗೂ ಕಾರ್‍ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.  ೨೦೧೯ರಲ್ಲಿ ನಾವು ಮೋದಿ ಅವರ ನೇತೃತ್ವದಲ್ಲಿ ಸರ್ಕಾರ ರಚಿಸುವುದು ಮಾತ್ರವಲ್ಲದೆ, ನವ ಭಾರತವನ್ನು ನಿರ್ಮಾಣ ಮಾಡಲಿದ್ದೇವೆ ಎಂದು ಅಮಿತ್ ಶಾ ಈ ಸಂದರ್ಭದಲ್ಲಿ ಹೇಳಿದರು.  ಬಿಜೆಪಿ ಈಗಾಗಲೇ ೧೪ ಚುನಾವಣೆಗಳನ್ನು ಗೆದ್ದಿದೆ. ಇದು ಬಿಜೆಪಿ ಸತತವಾಗಿ ಗೆಲ್ಲುತ್ತಿರುವ ೧೫ನೇ ಚುನಾವಣೆಯಾಗಿದೆ ಎಂದು ಶಾ ನುಡಿದರು.  ಬಿಜೆಪಿ ಅತಿ ಹೆಚ್ಚು ಸ್ಥಾನ ಗಳಿಸಲು ಮತ ನೀಡಿದ ಕರ್ನಾಟಕದ ಜನತೆಗೆ ಧನ್ಯವಾದಗಳು. ಕಾಂಗ್ರೆಸ್‌ನ ಭ್ರಷ್ಟಾಚಾರವನ್ನು, ಒಡೆದು ಆಳುವ ರಾಜಕೀಯವನ್ನು ಕರ್ನಾಟಕದ ಜನ ತಿರಸ್ಕರಿಸಿದ್ದಾರೆ ಎಂಬುದನ್ನು ಫಲಿತಾಂಶ ತೋರಿಸಿಕೊಟ್ಟಿz ಎಂದು ಶಾ ಪ್ರತ್ಯೇಕ ಟ್ವೀಟ್‌ನ್ನೂ  ಮಾಡಿದರು.  ೨೨೪ ಕ್ಷೇತ್ರಗಳ ಪೈಕಿ ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಚುನಾವಣೆಯನ್ನು ಚುನಾವಣಾ ಆಯೋಗವು ೯೦೦೦ ಮತದಾರರ ಗುರುತಿನ ಚೀಟಿ ವಶಪಡಿಸಿಕೊಳ್ಳಲಾದ ಹಿನ್ನೆಲೆಯಲ್ಲಿ ತಡೆ ಹಿಡಿದಿತ್ತು. ಜಯ ನಗರದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ವಿಜಯ ಕುಮಾರ್ ನಿಧನದ ಹಿನ್ನೆಲೆಯಲ್ಲಿ ಅಲ್ಲಿನ ಚುನಾವಣೆಯನ್ನೂ ತಡೆ ಹಿಡಿಯಲಾಗಿತ್ತು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು, ಬಾದಾಮಿಯಲ್ಲಿ ಜಯಗಳಿಸಿದ್ದರೆ, ಯಡಿಯೂರಪ್ಪ ಅವರು ಶಿಕಾರಿ ಪುರ ಕ್ಷೇತ್ರದಲ್ಲಿ ಜಯಗಳಿಸಿದರು. ಕುಮಾರ ಸ್ವಾಮಿ ಅವರು ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಜಯಗಳಿಸಿದರು. ಸಚಿವ ಕೃಷ್ಣ ಭೈರೇಗೌಡ ಅವರು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಜಯಗಳಿಸಿದರು.

2018: ವಾಷಿಂಗ್ಟನ್: ಖಾಸಗಿ ಬಳಕೆದಾರರ ಮಾಹಿತಿ ದುರುಪಯೋಗ ಕುರಿತ ತನಿಖೆಯ ಭಾಗವಾಗಿ ಸುಮಾರು ೨೦೦ ಆಪ್ ಗಳನ್ನು ತನ್ನ ವೇದಿಕೆಯಿಂದ ಮೇ 14ರ ಸೋಮವಾರ ಅಮಾನತು ಗೊಳಿಸಿರುವುದಾಗಿ ಫೇಸ್ ಬುಕ್ ತಿಳಿಸಿತು. ೨೦೧೬ರ ಅಮೆರಿಕದ ಚುನಾವಣಾ ಪ್ರಚಾರ ಕಾಲದಲ್ಲಿ ಡೊನಾಲ್ಡ್ ಟ್ರಂಪ್ ಅವರ ಪರವಾಗಿ ಕೆಲಸ ಮಾಡಿದ್ದ ರಾಜಕೀಯ ಸಮಾಲೋಚನಾ ಸಂಸ್ಥೆ ಕೇಂಬ್ರಿಜ್ ಅನಾಲಿಟಿಕಾ ಸುಮಾರು ೮೭೦ ಲಕ್ಷ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಕದ್ದ ವಿಚಾರ ಬಹಿರಂಗಕ್ಕೆ ಬಂದ ಬಳಿಕ ಫೇಸ್ ಬುಕ್ ತನಿಖೆ ನಡೆಸಿತ್ತು.  ‘ತನಿಖಾ ಪ್ರಕ್ರಿಯೆ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ಫೇಸ್ ಬುಕ್ ಪ್ರೊಡಕ್ಟ್ ಪಾರ್ಟ್ನರ್ ಶಿಪ್‌ಗಳ ಉಪಾಧ್ಯಕ್ಷ ಇಮೆ ಆರ್ಕಿಬೊಂಗ್ ಹೇಳಿದರು.  ‘ನಮ್ಮ ಬಳಿ ಆಂತರಿಕ ಮತ್ತು ಬಾಹ್ಯ ತಜ್ಞರ ದೊಡ್ಡ ತಂಡಗಳಿವೆ. ಇವು ಈ ಆಪ್ ಗಳ ಬಗ್ಗೆ ಆದಷ್ಟೂ ಶೀಘ್ರ ತಮ್ಮ ತನಿಖೆಯನ್ನು ಪೂರ್ಣಗೊಳಿಸಲಿವೆ. ಈವರೆಗೆ ಸಹಸ್ರಾರು ಆಪ್ ಗಳ ತನಿಖೆ ನಡೆಸಿದ್ದೇವೆ ಮತ್ತು ಸುಮಾರು ೨೦೦ ಆಪ್ ಗಳನ್ನು ಅವು ಯಾವುದಾದರೂ ಮಾಹಿತಿಯನ್ನು ದುರುಪಯೋಗ ಮಾಡಿವೆಯೇ ಎಂಬ ಬಗ್ಗೆ ತನಿಖೆ ಬಾಕಿ ಇರಿಸಿ ಅಮಾನತುಗೊಳಿಸಿದ್ದೇವೆ ಎಂದು ಇಮೆ ಹೇಳಿದರು.  ‘ಈ ಆಪ್‌ಗಳು ಅಥವಾ ಬೇರೆ ಆಪ್ ಗಳು ಮಾಹಿತಿ ದುರುಪಯೋಗ ಮಾಡಿದ ಬಗ್ಗೆ ನಮಗೆ ಮಾಹಿತಿ ಲಭಿಸಿದರೆ ನಾವು ಅವುಗಳನ್ನು ನಿಷೇಧಿಸುತ್ತೇವೆ ಮತ್ತು ಈ ವೆಬ್ ಸೈಟ್ ಮೂಲಕ ಅದನ್ನು ಜನರಿಗೆ ತಿಳಿಸುತ್ತೇವೆ ಎಂದು ಆರ್ಕಿಬೊಂಗ್ ನುಡಿದರು. ಕೇಂಬ್ರಿಜ್ ಅನಾಲಿಟಿಕಾ ಕುರಿತ ಮಾಹಿತಿ ಸ್ಫೋಟವು ಅಟ್ಲಾಂಟಿಕ್ ಮತ್ತು ಫೇಸ್ ಬುಕ್ ಸಂಸ್ಥೆಗಳಿಗೆ ತಮ್ಮ ಜೊತೆ ಹಂಚಿಕೊಳ್ಳಲಾದ ವೈಯಕಿಕ ಮಾಹಿತಿ ಕುರಿತಂತೆ ನೀತಿಗಳನ್ನು ಕಟ್ಟು ನಿಟ್ಟುಗೊಳಿಸುವಂತೆ ಮಾಡಿತು. ಫೇಸ್ ಬುಕ್ ೨೦೧೪ರಲ್ಲಿ ತನ್ನ ಮಾಹಿತಿಯನ್ನು ಬದಲಾಯಿಸಿ ಬಳಕೆದಾರರ ಮಾಹಿತಿ ಪಡೆಯುವಲ್ಲಿ ಮಿತಿಯನ್ನು ಹೇರಿದೆ. ಆದರೆ ಕೆಲವು ಅಪ್ಲಿಕೇಶನ್‌ಗಳು ಈಗಲೂ ಪುನರ್ ವಿಮರ್ಶೆಗೆ ಮೊದಲೇ ಮಾಹಿತಿಯನ್ನು ಪಡೆಯುತ್ತಿವೆ.  ’ಜನರ ಫೇಸ್ ಬುಕ್ ಮಾಹಿತಿಯನ್ನು ಎಲ್ಲ ಆಪ್ ಗಳು ದುರುಪಯೋಗವಾದಂತೆ ಮಾಡಲು ಇನ್ನೂ ಸಾಕಷ್ಟು ಕೆಲಸ ಮಾಡಬೇಕಾಗಿದ್ದು, ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಆರ್ಕಿಬೊಂಗ್ ನುಡಿದರು.  ಫೇಸ್ ಬುಕ್ ಚೀಫ್ ಎಕ್ಸಿಕ್ಯೂಟಿವ್ ಜುಕರ್‌ಬರ್ಗ್ ಅವರು ಕಳೆದ ಒಂದು ತಿಂಗಳ ಬಹುತೇಕ ಸಮಯವನ್ನು ಕೇಂಬ್ರಿಜ್ ಅನಾಲಿಟಿಕಾ ಮಾಹಿತಿ ಕಳವು ನಡೆಸಿದ ವಿಚಾರ ಬೆಳಕಿಗೆ ಬಂದದ್ದರಿಂದ ಆಗಿರುವ ಪರಿಣಾಮಗಳ ಬಗ್ಗೆ ಪರಿಶೀಲಿಸಲು ತೆಗೆದುಕೊಂಡಿದ್ದರು ಮತ್ತು ತನ್ನ ಬಳಕೆದಾರರ ಖಾಸಗಿತನವನ್ನು ಸಂಸ್ಥೆಯು ರಕ್ಷಿಸಬಲ್ಲುದೇ ಎಂಬ ಬಗೆಗಿನ ಭೀತಿಯನ್ನು ನಿವಾರಿಸುವ ಬಗ್ಗೆ ಚಿಂತಿಸಿದ್ದರು. ಬಹುದೊಡ್ಡ ಪ್ರಮಾಣದ ಬಳಕೆದಾರ ಮಾಹಿತಿಯನ್ನು ಪಡೆಯುವ ಎಲ್ಲ ಅಪ್ಲಿಕೇಶನ್ ಗಳ ಮರುವಿಮರ್ಶೆ ಸೇರಿದಂತೆ ಫೇಸ್ ಬುಕ್ ಮೇಲಿನ ವಿಶ್ವಾಸ ಪುನಸ್ಥಾಪನೆ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕಾಗಿದೆ.  ಫೇಸ್ ಬುಕ್ ಅಮಾನತುಗೊಳಿಸಿರುವ ೨೦೦ ಅಪ್ಲಿಕೇಶನ್‌ಗಳಲ್ಲಿ ಮೈ ಪರ್ಸನಾಲಿಟಿ ಎಂಬ ಆಪ್ ಕೂಡಾ ಸೇರಿದೆ. ಈ ಆಪ್ ಲಕ್ಷಾಂತರ ಸದಸ್ಯರಿಂದ ಮನೋವೈಜ್ಞಾನಿಕ ಮಾಹಿತಿಯನ್ನು ಸಂಗ್ರಹಿಸಿದೆ. ಸದಸ್ಯರು ಆಪ್ ನಡೆಸಿದ ಸೈಕೋಮೆಟ್ರಿಕ್ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಈ ಮಾಹಿತಿಯನ್ನು ಆಪ್ ಜೊತೆಗೆ ಹಂಚಿಕೊಂಡಿದ್ದಾರೆ.  ’ನಾವು ಮೈಪರ್ಸನಾಲಿಟಿ ಆಪ್‌ನ್ನು ತಿಂಗಳ ಹಿಂದೆಯೇ ಅಮಾನತುಗೊಳಿಸಿದ್ದೇವೆ. ಏಕೆಂದರೆ ಅದು ಫೇಸ್ ಬುಕ್ ನೀತಿಗಳನ್ನು ಉಲ್ಲಂಘಿಸಿದೆ ಎಂದು ನಾವು ನಂಬಿದ್ದೇವೆ ಎಂದು ಆರ್ಕಿಬೊಂಗ್ ಹೇಳಿದರು.   ನಾವು ಈಗ ಆಪ್ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮೈ ಪರ್ಸನಾಲಿಟಿಯು ಸಹಕರಿಸಲು ನಿರಾಕರಿಸಿದರೆ ಅಥವಾ ನಮ್ಮ ಆಡಿಟ್ ನಲ್ಲಿ ವಿಫಲವಾದರೆ ನಾವು ಅದನ್ನು ನಿಷೇಧಿಸಲಿದ್ದೇವೆ ಎಂದು ಅವರು ನುಡಿದರು.  ಪರೀಕ್ಷೆಗಳನ್ನು ತೆಗೆದುಕೊಂಡ ಶೇಕಡಾ ೪೦ರಷ್ಟು ಜನರು ಫೇಸ್ ಬುಕ್ ಪ್ರೊಫೈಲ್ ಮಾಹಿತಿಯನ್ನೂ ಹಂಚಿಕೊಳ್ಳುವ ಅವಕಾಶವನ್ನು ಒಪ್ಪಿಕೊಂಡಿದ್ದರು. ಪರಿಣಾಮವಾಗಿ ಅದು ವೈಜ್ಞಾನಿಕ ಸಂಶೋಧನೆಯ ದೊಡ್ಡ ಮಾಹಿತಿ ಮೂಲವಾಯಿತು ಎಂದು ಕೇಂಬ್ರಿಜ್ ವಿಶ್ವ ವಿದ್ಯಾಲಯದ ಸೈಕೊಮೆಟ್ರಿಕ್ಸ್ ಸೆಂಟರ್ ತನ್ನ ವೆಬ್ ಸೈಟಿನಲ್ಲಿ ಹೇಳಿದೆ.


 
2017: ಬೆಂಗಳೂರು: 2016ರ ಸಾಲಿನ ‘ಟಿಯೆಸ್ಸಾರ್‌ ಸ್ಮಾರಕ ಪ್ರಶಸ್ತಿ’ಗೆ  ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಮತ್ತು ‘ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ’ಗೆ ಗಂಗಾಧರ ಹಿರೇಗುತ್ತಿ ಆಯ್ಕೆಯಾದರು. ನಾಗೇಶ್ ಹೆಗಡೆ ಅವರು ‘ಪ್ರಜಾವಾಣಿ’ಯಲ್ಲಿ ಸಹಾಯಕ ಸಂಪಾದಕರಾಗಿದ್ದರು.

ಗಂಗಾದರ ಹಿರೇಗುತ್ತಿ ಅವರು ಕಾರವಾರದ ‘ಕರಾವಳಿ ಮುಂಜಾವು’ ಪತ್ರಿಕೆಯ ಸಂಪಾದಕರು. ನಿವೃತ್ತ ನ್ಯಾಯಾಧೀಶರಾದ ಇಂದ್ರಕಲಾ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ಈ ಹಿರಿಯ ಪತ್ರಕರ್ತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.

2017: ಹೇಗ್, ನೆದರ್ ಲ್ಯಾಂಡ್​: ಭಾರತದ ಮಾಜಿ ನೌಕಾಧಿಕಾರಿ ಕುಲಭೂಷಣ್‌ ಜಾಧವ್‌ ಗಲ್ಲು
ಶಿಕ್ಷೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಹೇಗ್ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಭಾರತ-ಪಾಕಿಸ್ತಾನ ವಾದ ಪ್ರತಿವಾದ ಮಂಡಿಸಿದ್ದು, ಆರಂಭದಲ್ಲೇ ಪಾಕ್​ ಗೆ ಹಿನ್ನಡೆಯಾಯಿತು. 18 ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಮುಖಾಮುಖಿಯಾದ್ದವು. ಈ ವೇಳೆ ಪಾಕಿಸ್ತಾನದ ನಿಜ ಬಣ್ಣವನ್ನು ಭಾರತ ತೆರೆದಿಟ್ಟಿದೆ. ಉಭಯ ರಾಷ್ಟ್ರಗಳ ಪರ ವಕೀಲರು ತಲಾ90 ನಿಮಿಷಗಳ ಕಾಲ ವಾದ ಮಂಡಿಸಿದರು. ಭಾರತ ಪರ ಹಿರಿಯ ವಕೀಲ ಹರೀಶ್​ ಸಾಳ್ವೆ, ನ್ಯಾಯಾಧೀಶ ಜಸ್ಟಿನ್​ ರೋನಿ ಅಬ್ರಾಹಾಂ ಸಹಿತ 11 ನ್ಯಾಯಾಧೀಶರ ಪೀಠದ ಎದುರು ಹಲವು ಸಾಕ್ಷ್ಯಗಳನ್ನು ಸಲ್ಲಿಸಿದರು. 2016ರ ಮಾರ್ಚ್​ನಲ್ಲಿ ಇರಾನ್​ನಿಂದ ಕುಲಭೂಷಣ್​ರನ್ನ ಅಪಹರಿಸಿದ್ದ ಪಾಕಿಸ್ತಾನ, ಅವರನ್ನು ಗುಪ್ತಚರ ಇಲಾಖೆ ಅಧಿಕಾರಿ ಎಂದು ಬಿಂಬಿಸಿತ್ತು. ಈ ಕುರಿತು ಸಾಕ್ಷ್ಯ ನೀಡಲು ಮನವಿ ಮಾಡಿದ್ದರೂ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ವಿವರಿಸಿದರು. ಭಾರತದ ವಾದ ಮುಗಿಯುತ್ತಿದ್ದಂತೆ ಪಾಕಿಸ್ತಾನ ತನ್ನ ಪ್ರತಿವಾದ ಮಂಡಿಸಿತು. ಕೇವಲ ಕುಲಭೂಷಣ್​ ತಪ್ಪೊಪ್ಪಿಕೊಂಡಿದ್ದ ವಿಡಿಯೋವನ್ನೇ ಪ್ರಮುಖ ಸಾಕ್ಷ್ಯವನ್ನಾಗಿ ಪಾಕ್‌ ಸಲ್ಲಿಸಿತು. ಆದರೆ ಈ ವಿಡಿಯೋವನ್ನು ನ್ಯಾಯಾಲಯ ಅಂಗೀಕರಿಸಲಿಲ್ಲ. ಹೀಗಾಗಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಯಿತು.  ಅಲ್ಲದೇ ತನ್ನ ವಾದದಲ್ಲಿ ಬರಿ ಸುಳ್ಳು, ಕಪೋಲಕಲ್ಪಿತ ವಿಚಾರಗಳು, ಸಾಕ್ಷ್ಯಗಳನ್ನ ತಿರುಚಿ, ಅದನ್ನೇ ಸತ್ಯ ಎಂದು ಬಿಂಬಿಸಲು ಪಾಕಿಸ್ತಾನ ಪರ ವಕೀಲರು ಕಸರತ್ತು ನಡೆಸಿದರು. ಅಂತರರರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ವಿಚಾರಣೆ ಪೂರ್ಣಗೊಳ್ಳುವ ಮೊದಲೇ ಪಾಕಿಸ್ತಾನವು ಕುಲಭೂಷಣ್‌ ಜಾದವ್‌ ಅವರನ್ನು ಗಲ್ಲಿಗೇರಿಸಬಹುದು ಎಂದು ಭಾರತ ಆತಂಕ ವ್ಯಕ್ತಪಡಿಸಿತು. ಕುಲಭೂಷಣ್‌ ಜಾದವ್‌ ಅವರಿಗೆ ಪಾಕಿಸ್ತಾನದ ಸೇನಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿರುವುದನ್ನು ಪ್ರಶ್ನಿಸಿ ಭಾರತವು ಹೇಗ್‌ನಲ್ಲಿರುವ ಅಂತರರರಾಷ್ಟ್ರೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಯಿತು. ಭಾರತದ ಹಿರಿಯ ವಕೀಲ ಹರೀಶ್‌ ಸಾಳ್ವೆ ಅವರು ಜಾದವ್‌ ಪರವಾಗಿ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದ ಮಂಡಿಸಿದರು. ಪಾಕಿಸ್ತಾನವು ಜಾದವ್‌ ಅವರನ್ನು ಇರಾನ್‌ನಿಂದ ಅಪಹರಿಸಿ ಅವರ ವಿರುದ್ಧ ಆಧಾರ ರಹಿತ ಆಪಾದನೆಗಳನ್ನು ಮಾಡಿದೆ ಎಂದು ಸಾಳ್ವೆ ವಾದಿಸಿದರು. ಜಾದವ್‌ ಅವರಿಗೆ ಗಲ್ಲು ಶಿಕ್ಷೆ ವಿಧಿಸಿರುವುದು ವಿಯೆನ್ನಾ ಒಪ್ಪಂದ ಹಾಗೂ ಅಂತರರಾಷ್ಟ್ರೀಯ ಕಾನೂನುನಿನ ಉಲ್ಲಂಘನೆಯಾಗಿದೆ.  ಜಾದವ್‌ ಸೇನೆಯ ವಶದಲ್ಲಿದ್ದ ಸಮಯದಲ್ಲಿ ಒತ್ತಾಯಪೂರ್ವಕವಾಗಿ ಅವರಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆಯಲಾಗಿದೆ. ಜಾದವ್‌ ವಿರುದ್ಧ ಪಾಕಿಸ್ತಾನದ ಸೇನಾ ನ್ಯಾಯಾಲಯ ಏಕಪಕ್ಷೀಯವಾಗಿ ತೀರ್ಪು ನೀಡಿದೆ. ಜಾದವ್‌ ಅವರಿಗೆ ಗಲ್ಲು ಶಿಕ್ಷೆಯಾಗದಂತೆ ಅಂತರರಾಷ್ಟ್ರೀಯ ನ್ಯಾಯಾಲಯ ತಡೆಯಬೇಕು’ ಎಂದು ಹರೀಶ್‌ ಸಾಳ್ವೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಭಾರತದ ವಾದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಶಾಂತಿಯುತವಾಗಿ ಪರಸ್ಪರ ಸಮಸ್ಯೆಗೆ ಪರಿಹಾರ ಬಯಸುತ್ತದೆ, ನೆರೆ ರಾಷ್ಟ್ರಗಳ ಜೊತೆಗೆ ಶಾಂತಿ ಬಯಸುತ್ತದೆ, ಕುಲಭೂಷಣ್​​ ಜಾಧವ್​​ ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿದ್ದರು, ಭಾರತದಿಂದ ಅಂತಾರಾಷ್ಟ್ರೀಯ ನ್ಯಾಯಾಲಯದ ದುರ್ಬಳಕೆಯಾಗುತ್ತಿದೆ, ಜಾಧವ್​ ಬಳಿ ಮುಸ್ಲಿಂ ಹೆಸರಿನ ಭಾರತದ ಪಾಸ್​ಪೋರ್ಟ್​ ಲಭಿಸಿದೆ, ತಾನು ಗುಪ್ತಚರ ಇಲಾಖೆ ಅಧಿಕಾರಿ ಅಂತ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ, ಬಲೂಚಿಸ್ತಾನದಲ್ಲಿ ಇರಾನ್​ನಿಂದ ಬಂದಿದ್ದ ಜಾಧವ್​  ಅವರನ್ನು ಬಂಧಿಸಲಾಗಿತ್ತು, ಗುಪ್ತಚರರಿಗೆ ಶಿಕ್ಷೆ ನೀಡಿದರೆ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಲ್ಲಎಂದು ವಾದಿಸಿ, ಜಾಧವ್​ ತಪ್ಪೊಪ್ಪಿಕೊಂಡಿರೋ ವಿಡಿಯೋವನ್ನು ಸಲ್ಲಿಸಿತು. ​ವಿಚಾರಣೆ ಬಳಿಕ ನ್ಯಾಯಾಲಯ ತೀರ್ಪನ್ನು ಕಾಯ್ದರಿಸಿತು.

2017: ಪೊಚೆಫಸ್ಟ್ರೂಮ್: ಅಂತರ ರಾಷ್ಟ್ರೀಯ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಮೊದಲ
ವಿಕೆಟ್‌ಗೆ(ದೀಪ್ತಿ ಶರ್ಮಾ 188, ಪೂನಮ್ ರೌತ್ 109) ಹೆಚ್ಚು ರನ್‌ ಗಳಿಸಿದ ಹೊಸ ದಾಖಲೆ ಸೃಷ್ಟಿಸಿದರು.  ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಮಹಿಳಾ ಚತುಷ್ಪಥ ಸರಣಿಯ 8ನೇ ಪಂದ್ಯದಲ್ಲಿ ಭಾರತ– ಐರ್ಲೆಂಡ್ ತಂಡಗಳ ಮುಖಾಮುಖಿಯಾಗಿದವು. ಇಲ್ಲಿನ ಸೆನ್ವೆಸ್ ಪಾರ್ಕ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಮೊದಲು ಟಾಸ್‌ ಗೆದ್ದ ಭಾರತ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿತ್ತು.
ಭಾರತ 50 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 358 ರನ್‌ ಕಲೆಹಾಕಿತ್ತು(ದೀಪ್ತಿ ಶರ್ಮಾ 188, ಪೂನಮ್ ರೌತ್ 109, ಶಿಖಾ ಪಾಂಡೆ 27, ವೇದ ಕೃಷ್ಣಮೂರ್ತಿ ಬ್ಯಾಟಿಂಗ್‌ 08, ಎಕ್ತಾ ಬಿಶ್ತ್ ಬ್ಯಾಟಿಂಗ್‌ 00). ಬೃಹತ್‌ ಮೊತ್ತ ಬೆನ್ನತಿದ ಐರ್ಲೆಂಡ್ 40 ಓವರ್‌ಗಳಲ್ಲಿ 109ರನ್‌ ಗಳಿಸಿ ಆಲೌಟ್‌ ಆಯಿತ್ತು. ಇದರಿಂದ ಐರ್ಲೆಂಡ್ ವಿರುದ್ಧ ಭಾರತ 249 ರನ್‌ ಅಂತರದ ಗೆಲುವು ಸಾಧಿಸಿತು. ಈ ಸರಣಿಯಲ್ಲಿ ಭಾರತದ ವನಿತೆಯರ ತಂಡ ಆಡಿರುವ 4 ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ ಪಾಯಿಂಟ್‌ ಪಟ್ಟಿಯಲ್ಲಿ 18 ಅಂಕ ಗಳಿಸಿ ಆಗ್ರ ಸ್ಥಾನ ಗಳಿಸಿತು.  ದೀಪ್ತಿ ಶರ್ಮಾ 188 ರನ್‌ ದಾಖಲೆಯು ವೈಯಾಕ್ತಿಕವಾಗಿ ಮಹಿಳಾ ಕ್ರಿಕೆಟ್‌ನಲ್ಲಿ ಗಳಿಸಿದ ಎರಡನೇ ಗರಿಷ್ಠ ಸ್ಕೋರ್‌.  1997ರಲ್ಲಿ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಡೆನ್ಮಾರ್ಕ್ ವಿರುದ್ಧ 229 ರನ್‌ ಗಳಿಸಿ ಆಗ್ರ ಸ್ಥಾನದಲಿದ್ದಾರೆ.  ಇತ್ತೀಚಿಗಷ್ಟೆ ಭಾರತ ವನಿತೆಯರ ತಂಡದ ಮಧ್ಯಮವೇಗಿ ಜೂಲನ್ ಗೋಸ್ವಾಮಿ ಅವರು ಅಂತರರಾಷ್ಟ್ರೀಯ ಏಕದಿನ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ(181) ವಿಶ್ವದಾಖಲೆ ನಿರ್ಮಿಸಿದ್ದರು. ಹತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಆಟಗಾರ್ತಿ ಕ್ಯಾಥರಿನ್ ಫಿಟ್‌ಪ್ಯಾಟ್ರಿಕ್ ಅವರು 103 ಪಂದ್ಯಗಳಲ್ಲಿ 180 ವಿಕೆಟ್‌ಗಳನ್ನು ಗಳಿಸಿದ್ದ ದಾಖಲೆಯನ್ನು  ಜೂಲನ್ ಅಳಿಸಿಹಾಕಿದರು. ಅವರು 153 ಪಂದ್ಯಗಳಲ್ಲಿ ಈ ಸಾಧನೆ ಮಾಡಿದರು.

2009: ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಸತಿಪತಿಗಳಿಬ್ಬರು ನ್ಯಾಯಮೂರ್ತಿಗಳಾಗಿ ದೆಹಲಿ ಹೈಕೋರ್ಟಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಇಂದರ್‌ಮೀತ್ ಕೌರ್ ಕೊಚ್ಚರ್ ಮತ್ತು ಅವರ ಪತಿ ಎ.ಕೆ.ಪಾಠಕ್ ಅವರಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನೇಮಕ ಆದೇಶವನ್ನು ವಾರದ ಆರಂಭದಲ್ಲಿ ನೀಡಿದ್ದರು. ದೆಹಲಿ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದ ಇವರಿಬ್ಬರು ನ್ಯಾಯಾಂಗ ಸೇವೆಗೆ ಸೇರಿದ ನಂತರ ವಿವಾಹವಾಗಿದ್ದರು. ಇವರ ಜೊತೆಗೆ ಅಜಿತ್ ಬರಿಹೋಕ್‌ಮತ್ತು ವಿ.ಕೆ. ಜೈನ್ ಅವರೂ ನ್ಯಾಯಮೂರ್ತಿಗಳಾಗಿ ಪ್ರಮಾಣ ಸ್ವೀಕರಿಸಿದರು. ಈ ನಾಲ್ವರು ನ್ಯಾಯಮೂರ್ತಿಗಳ ನೇಮಕದೊಂದಿಗೆ ದೆಹಲಿ ಹೈಕೋರ್ಟಿನ ನ್ಯಾಯಮೂರ್ತಿಗಳ ಸಂಖ್ಯೆ 44ಕ್ಕೆ ಏರಿತು.

2009: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನಲ್ಲಿ ವೇದಾವತಿ ನದಿಯ ಪಕ್ಕ ಯಾದಲಗಟ್ಟೆ, ದೊಡ್ಡೇರಿ, ಹಿರಿಯೂರು ಹಾಗೂ ಹರ್ತಿಕೋಟೆ ನೆಲೆಗಳಲ್ಲಿ ಅಪರೂಪದ ಹವಳ ಮಣಿಗಳು ದೊರೆತವು. ಮೈಸೂರಿನ ಕುವೆಂಪು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ರಾಮದಾಸ ರೆಡ್ಡಿ ನೇತೃತ್ವದ ತಂಡ ಕ್ಷೇತ್ರ ಕಾರ್ಯ ಮಾಡುವಾಗ ಈ ಅಪರೂಪದ ಹವಳ ಮಣಿಗಳು ಪತ್ತೆಯಾದವು. ಇವು ಶಾತವಾಹನರ ಕಾಲದಲ್ಲಿ ಅಲಂಕಾರಕ್ಕಾಗಿ ಬಳಸುತ್ತಿದ್ದ ಬಹು ಉಪಯೋಗಿ ಹವಳ ಮಣಿಗಳು ಎಂದು ಹೇಳಲಾಯಿತು.

2009: 'ರಾಗಿ, ಜೋಳ, ಸಜ್ಜೆ, ನವಣೆ ಬೆಳೆಯಿರಿ. ಜಾಗತಿಕ ತಾಪಮಾನ ಕಡಿಮೆ ಮಾಡಿ'. ಏಕೆಂದರೆ ಕಿರುಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಜಾಗತಿಕ ತಾಪಮಾನ, ಹವಾಮಾನ ವೈಪರಿತ್ಯ ಕಡಿಮೆ ಮಾಡಬಹುದು ಎಂಬ ಅಂಶವನ್ನು ಹೈದರಾಬಾದಿನ ಡೆಕ್ಕನ್ ಡೆವಲಪ್‌ಮೆಂಟ್ ಸೊಸೈಟಿಯ ವಿಜ್ಞಾನಿ ಡಾ.ಸತೀಶ್ ಪೆರಿಯಾಪಟ್ಟಣ ಬಹಿರಂಗ ಪಡಿಸಿದರು. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆದಿದೆ. ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಮಾತೆಂದರೆ ಜಾಗತಿಕ ತಾಪಮಾನ. ವಿಶ್ವವೆಲ್ಲ ಕಾದ ದೋಸೆ ಕಾವಲಿಯಂತಾಗಿದ್ದು, ಜೀವ ಸಂಕುಲ ತತ್ತರಿಸಿ ಹೋಗುತ್ತಿದೆ. ಇದರ ಪರಿಹಾರಕ್ಕಾಗಿ ಹಲವಾರು ತಜ್ಞರು ಸಂಶೋಧನೆ ನಡೆಸಿ, ಜಾಗತಿಕ ತಾಪಮಾನ ಕಡಿಮೆ ಮಾಡಲು ಸರ್ಕಸ್ ನಡೆಸುತ್ತಲೇ ಇದ್ದಾರೆ. ಕಿರುಧಾನ್ಯಗಳನ್ನು ಬೆಳೆಯುವ ಮೂಲಕ ತಾಪಮಾನವನ್ನು ತಡೆಗಟ್ಟಬಹುದು ಎಂಬ ಸಂಶೋಧನೆಯೂ ಈಗ ಹೊರಬಿದ್ದಿತು. ಡಾ.ಸತೀಶ್ ಪೆರಿಯಾಪಟ್ಟಣ ಅವರು ಆಂಧ್ರಪ್ರದೇಶದ ಮೇಡಕ್ ಜಿಲ್ಲೆಯ ಅರೆ ಮರುಭೂಮಿ ಪ್ರದೇಶದ 5 ಸಾವಿರ ಎಕರೆ ಪಾಳು ಬಿದ್ದ ಪ್ರದೇಶದಲ್ಲಿ 1996ರಿಂದ ಈ ಪ್ರಯೋಗ ಮಾಡಿದ್ದರು. ಇದರಿಂದ 20 ಲಕ್ಷ ಕೆಜಿಯಷ್ಟು ಹೆಚ್ಚುವರಿ ಆಹಾರಧಾನ್ಯ ಉತ್ಪಾದನೆಯಾಯಿತು. ಕಿರುಧಾನ್ಯ ಬೆಳೆಗಳು ಒಣಭೂಮಿ ಮತ್ತು ಮರುಭೂಮಿ ಪ್ರದೇಶಗಳ ಕಠಿಣ ಹವಾಮಾನವನ್ನು ಎದುರಿಸುತ್ತವೆ ಎನ್ನುವುದನ್ನು ಅವರು ಸಾಬೀತು ಪಡಿಸಿದರು. ಭಾರತದಲ್ಲಿ ಹಲವಾರು ಭಾಗದಲ್ಲಿ ಖುಷ್ಕಿ ಭೂಮಿಯ ವ್ಯವಸಾಯವೇ ಹೆಚ್ಚು. ಆದರೂ ನೀರಾವರಿ ಪ್ರದೇಶದ ಬೆಳೆಗಳಾದ ಭತ್ತ, ಗೋಧಿ ಬೆಳೆಯುವುದೇ ಕೃಷಿಯೆಂದು ಪರಿಗಣಿತವಾಗಿ ಬಿಟ್ಟಿದೆ. ಎಲ್ಲರೂ ಭತ್ತ-ಗೋಧಿಯನ್ನೇ ಬೆಳೆಯುತ್ತಾರೆ. ಇದರಿಂದ ಅಧಿಕ ಪ್ರಮಾಣದ ನೀರು ವ್ಯಯವಾಗುತ್ತದೆ. ನೀರಿಲ್ಲದೆ ಭತ್ತದ ಬೆಳೆ ಉಳಿಯುವುದಿಲ್ಲ. ಆದರೆ ಭತ್ತದ ಗದ್ದೆಯಲ್ಲಿ ನಿಂತ ನೀರಿನಿಂದ ಮಿಥೇನ್‌ನಂತಹ ಅನಿಲ ಉತ್ಪಾದನೆಯಾಗುತ್ತದೆ. ಈ ಅನಿಲ ವಾತಾವರಣದಲ್ಲಿ ಹರಡಿ ಸುತ್ತಮುತ್ತಲ ಪರಿಸರವನ್ನು ಕವಚದಂತೆ ಮುಚ್ಚಿಕೊಳ್ಳುತ್ತದೆ. ಇದರಿಂದಾಗಿ ಹವಾಮಾನ ವೈಪರಿತ್ಯ ಹಾಗೂ ತಾಪಮಾನ ಹೆಚ್ಚಾಗುವ ಪ್ರಕ್ರಿಯೆ ಜಾಸ್ತಿಯಾಗುತ್ತದೆ ಎಂಬುದು ಪೆರಿಯಾಪಟ್ಟಣ ವಿಶ್ಲೇಷಣೆ. ಇದೇ ಸ್ಥಿತಿ ಮುಂದುವರಿದರೆ ಐದಾರು ವರ್ಷದಲ್ಲಿ ಉಷ್ಣಾಂಶ 2ರಿಂದ3 ಡಿಗ್ರಿ ಸೆಲ್ಷಿಯಸ್ ಏರಲಿದೆ. ಇದು ಭತ್ತ ಮತ್ತು ಗೋಧಿ ಬೆಳೆಗೆ ಪೂರಕವಲ್ಲ. ಇದರ ಪ್ರಭಾವದಿಂದ ಆಹಾರ ಉತ್ಪಾದನೆಯಲ್ಲಿ ಶೇ.20ರಷ್ಟು ಕಡಿಮೆಯಾದರೂ ಗಂಭೀರ ಪರಿಣಾಮ ಉಂಟಾಗುತ್ತದೆ ಎನ್ನುವುದು ಅವರ ಆತಂಕ. ಇದಕ್ಕೆ ಒಂದೇ ಅತ್ಯುತ್ತಮ ಪರಿಹಾರ: ದೇಶದಲ್ಲಿ ಆಹಾರ ಭದ್ರತೆ ಸಾಧಿಸಲು ಹಾಗೂ ತಾಪಮಾನ ತಡೆಗಟ್ಟಲು ಕಿರುಧಾನ್ಯ ಬೆಳೆಯುವುದು ಪರಿಹಾರ ಎನ್ನುತ್ತಾರೆ ಡಾ.ಸತೀಶ್. ಕಿರುಧಾನ್ಯಗಳಿಗೆ ಹೆಚ್ಚು ನೀರು ಬೇಕಾಗಿಲ್ಲ. ಸ್ಥಳೀಯವಾಗಿ ಬಿತ್ತನೆ ಬೀಜಗಳು ದೊರೆಯುತ್ತವೆ. ಪೌಷ್ಟಿಕಾಂಶವೂ ಅಧಿಕವಾಗಿರುತ್ತದೆ. ಅಲ್ಲದೆ ಸಾಮಾನ್ಯವಾಗಿ ಕಿರುಧಾನ್ಯಗಳನ್ನು ಮಿಶ್ರಬೆಳೆ ಪದ್ಧತಿಯಲ್ಲಿ ಬೆಳೆಯುತ್ತಾರೆ. ಇವುಗಳ ಮಧ್ಯದಲ್ಲಿ ದ್ವಿದಳ ಧಾನ್ಯಗಳನ್ನು ಎಡೆ ಬೆಳೆಯಾಗಿ ಬೆಳೆಯುತ್ತಾರೆ. ಈ ದ್ವಿದಳ ಧಾನ್ಯಗಳು ಸಾಕಷ್ಟು ಎಲೆಗಳನ್ನು ಉದುರಿಸುವುದರಿಂದ ಹೊಲದಲ್ಲಿ ಇಂಗಾಲದ ಅಂಶ ಸ್ಥಿರವಾಗಿರುತ್ತದೆ. ಇದರಿಂದ ಹವಾಮಾನ ವೈಪರಿತ್ಯ ಸ್ವಲ್ಪವಾದರೂ ಕಡಿಮೆಯಾಗುತ್ತದೆ ಎನ್ನುವುದು ಅವರ ಪ್ರತಿಪಾದನೆ.

2009: ವೈದ್ಯಕೀಯ ನಿರ್ಲಕ್ಷ್ಯದಿಂದ ಶಾಶ್ವತವಾಗಿ ಅಂಗವೈಕಲ್ಯ ಹೊಂದಿದ ಬೆಂಗಳೂರು ಇನ್‌ಫೋಸಿಸ್ ಸಂಸ್ಥೆಯ ಸಾಫ್ಟ್‌ವೇರ್ ಎಂಜಿನಿಯರ್ ಪ್ರಶಾಂತ್ ಎಸ್. ಧನಂಕ (39) ಅವರಿಗೆ ಒಂದು ಕೋಟಿ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಹೈದರಾಬಾದಿನ ನಿಜಾಮ್ ವೈದ್ಯ ವಿಜ್ಞಾನ ಸಂಸ್ಥೆಗೆ ಆದೇಶ ನೀಡಿತು. ದೇಶದಲ್ಲಿ ಇಂತಹ ಪ್ರಸಂಗದಲ್ಲಿ ಒದಗಿಸಲಾದ ಅತ್ಯಂತ ಗರಿಷ್ಠ ಮೊತ್ತದ ಪರಿಹಾರ ಇದು. ನ್ಯಾಯಮೂರ್ತಿಗಳಾದ ಬಿ. ಎನ್. ಅಗರ್‌ವಾಲ್, ಜಿ. ಎಸ್. ಸಿಂಘ್ವಿ ಮತ್ತು ಎಚ್. ಎಸ್. ಬೇಡಿ ಅವರನ್ನು ಒಳಗೊಂಡ ಪೀಠವು ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ 15 ಲಕ್ಷ ಪರಿಹಾರ ಮೊತ್ತವನ್ನು ಒಂದು ಕೋಟಿ ರೂಪಾಯಿಗೆ ಹೆಚ್ಚಿಸಿತು. ಪ್ರಶಾಂತ್ ಅವರು ನಿಜಾಮ್ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ 1990ರ ಅಕ್ಟೋಬರ್ 23ರಂದು ಹೃದಯದಲ್ಲಿನ ಗಡ್ಡೆಯೊಂದನ್ನು ತೆಗೆಸುವುದಕ್ಕಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ಸೂಕ್ತವಾಗಿ ನಡೆಯದೆ ಅವರು ಪಕ್ಷವಾತ ಮತ್ತು ಇತರ ಹಲವು ತೊಂದರೆಗೆಸಿಲುಕಿ ಶಾಶ್ವತ ಅಂಗವೈಕಲ್ಯ ಅನುಭವಿಸುವಂತಾಯಿತು. 1993ರಲ್ಲಿ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯವು ಧನಂಕ ಅವರಿಗೆ 15.5 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಿತ್ತು. ಆದರೆ ಇದನ್ನು ಪ್ರಶ್ನಿಸಿ ಆಸ್ಪತ್ರೆ ಕೋರ್ಟ್ ಮೆಟ್ಟಿಲು ಏರಿತ್ತು. ಸುಪ್ರೀಂ ಕೋರ್ಟ್ ಈಗ ಪ್ರಕಟಿಸಿದ 1 ಕೋಟಿ ರೂಪಾಯಿ ಪರಿಹಾರಕ್ಕೆ 1999ರ ಮಾರ್ಚ್ 1ರಿಂದ ಅನ್ವಯವಾಗುವಂತೆ ಶೇ 6ರ ಬಡ್ಡಿದರದೊಂದಿಗೆ ಪರಿಹಾರ ಮೊತ್ತ ನೀಡಬೇಕಾಗುತ್ತದೆ. ಹೀಗಾಗಿ ಪರಿಹಾರದ ಒಟ್ಟು ಮೊತ್ತ 1.60 ಕೋಟಿ ರೂಪಾಯಿಗೆ ಹೆಚ್ಚುತ್ತದೆ. ಇದರ ಜತೆಗೆ ನತದೃಷ್ಟನ ಹೆತ್ತವರಿಗೆ 1.5 ಲಕ್ಷ ರೂ.ಪರಿಹಾರ ನೀಡಬೇಕೆಂದೂ ನ್ಯಾಯಪೀಠ ಹೇಳಿತು. ಕಳೆದ 14 ವರ್ಷಳ ಕಾಲ ನ್ಯಾಯಾಲಯದಲ್ಲಿ ಸೆಣಸಾಡಿದ ಧನಂಕ ಅವರಿಗೆ ಕೋರ್ಟ್ ವೆಚ್ಚದ ರೂಪದಲ್ಲಿ 50 ಸಾವಿರ ರೂಪಾಯಿ ನೀಡಲು ಸಹ ಆದೇಶ ನೀಡಲಾಯಿತು.

2009: ಈದಿನ ಬಿಡುಗಡೆಯಾಗಬೇಕಾಗಿದ್ದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬರೆದಿರುವರು ಎನ್ನಲಾದ ಪುಸ್ತಕವು ತಮ್ಮ ಸಂಶೋಧನಾ ಪ್ರಬಂಧದಿಂದ ಯಥಾವತ್ ನಕಲು ಪಟ್ನಾದ ಸಂಶೋಧಕರೊಬ್ಬರು ದೂರುವುದರೊಂದಿಗೆ ಇಲ್ಲಿನ ರಾಜಕೀಯ ವಲಯದಲ್ಲಿ ತಲ್ಲಣ ಉಂಟಾಯಿತು. ನವದೆಹಲಿಯಲ್ಲಿನ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಹಿರಿಯ ಸಂಶೋಧಕ ಅತುಲ್ ಕುಮಾರ್ ಸಿಂಗ್ ಅವರು, ಜೆಡಿಯು ಅಧ್ಯಕ್ಷರೂ ಆಗಿರುವ ಬಿಹಾದ ಮುಖ್ಯಮಂತ್ರಿ  ನಿತೀಶ್ ಕುಮಾರ್ ಅವರು ತಮ್ಮ ಕೃತಿಯನ್ನು ಕದ್ದು ತಮ್ಮ ಹೆಸರಲ್ಲಿ ಪ್ರಕಟಿಸುತ್ತಿರುವುದನ್ನು ಸಾಬೀತುಪಡಿಸಲು ತಮ್ಮ ಮೂಲ ಸಂಶೋಧನ ಪ್ರಬಂಧವನ್ನು ಪ್ರಕಟಿಸಿದರು. 'ಸ್ಟೇಷಲ್ ಕೆಟಗರಿ ಸ್ಟೇಟಸ್ - ಎ ಕೇಸ್ ಫಾರ್ ಬಿಹಾರ' ಹೆಸರಿನಲ್ಲಿ ನಿತೀಶ್ ಕುಮಾರ್ ಅವರು 80 ಪುಟಗಳ ಪುಸ್ತಕ ಬರೆದಿರುವುದಾಗಿ ದಿನಗಳಿಂದ ಸ್ಥಳೀಯ ಪತ್ರಿಕೆಗಳಲ್ಲಿ ಸುದ್ದಿಗಳು ಪ್ರಕಟವಾಗಿದ್ದವು. ಸರ್ಕಾರ ಈ ಸುದ್ದಿಗಳನ್ನು ಅಲ್ಲಗಳೆದಿರಲಿಲ್ಲ.

2009: ಹಲವಾರು ಚಲನಚಿತ್ರ, ಕಿರುತೆರೆಗಳಲ್ಲಿ ಅಭಿನಯಿಸಿರುವ ನಟಿ ಅಭಿನಯ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟರು. ಕಿರುತೆರೆ ಛಾಯಾಗ್ರಾಹಕ ಉಮಾಕಾಂತ್ ಮತ್ತು ಅಭಿನಯ ಅವರ ವಿವಾಹ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. 15ನೇ ವಯಸ್ಸಿನಲ್ಲಿ ನಿರ್ದೇಶಕ ಕಾಶೀನಾಥ್ ಅವರ 'ಅನುಭವ' ಚಿತ್ರದ ಮೂಲಕ ಅಭಿನಯ ಪ್ರಪಂಚಕ್ಕೆ ಕಾಲಿಟ್ಟ ಇವರು ಎಲ್ಲ ಪಾತ್ರಗಳಲ್ಲೂ ಸೈ ಎನಿಸಿಕೊಂಡವರು. ಕಿರುತೆರೆಯಲ್ಲಿ ಬಹು ಬೇಡಿಕೆಯ ನಟಿ. ಚಿತ್ರರಂಗದ ಅನೇಕ ಗಣ್ಯರು ಇವರ ವಿವಾಹಕ್ಕೆ ಸಾಕ್ಷಿಯಾದರು.

2008: ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಸೀತಾನದಿಯ ಶಿಕ್ಷಕ ಭೋಜ ಶೆಟ್ಟಿ ಮತ್ತಹ ಸುರೇಶ ಶೆಟ್ಟಿ ಎಂಬ ಇಬ್ಬರನ್ನು ವಿಧಾನಸಭೆಯ ಎರಡನೇ ಹಂತದ ಚುನಾವಣೆಯ ಮುನ್ನಾದಿನ ನಕ್ಸಲೀಯರು ಸೋಮೇಶ್ವರದಲ್ಲಿ ಗುಂಡಿನ ಮಳೆಗರೆದು ಕೊಂದು ಹಾಕಿದರು.

2008: ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅವರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಯನ್ನು ಜುಲೈ 14 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಕೇಂದ್ರ ತನಿಖಾ ಘಟಕ (ಸಿಬಿಐ) ಸುಪ್ರೀಂ ಕೋರ್ಟಿಗೆ ಭರವಸೆ ನೀಡಿತು. ತನಿಖೆಯನ್ನು ಪ್ರಶ್ನಿಸಿ ಮಾಯಾವತಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ಎಂ.ಕೆ.ಶರ್ಮ ಅವರನ್ನು ಒಳಗೊಂಡ ಪೀಠವು ಸಿಬಿಐಗೆ ನೋಟಿಸ್ ಜಾರಿಗೊಳಿಸಿತು.

2008: ಚೀನಾ ಭೂಕಂಪದಲ್ಲಿ ಮಡಿದವರ ಸಂಖ್ಯೆ 50 ಸಾವಿರಕ್ಕೆ ಏರಿದೆ ಎಂದು ಬೀಜಿಂಗ್ ಮಾಧ್ಯಮಗಳು ವರದಿ ಮಾಡಿದವು.

2008: `ಹೊಗೇನಕಲ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ವಿಷಯಕ್ಕೆ ಸಂಬಂಧಿಸಿದಂತೆ ನನ್ನಿಂದ ಏನೂ ತಪ್ಪಾಗಿಲ್ಲ. ಆದಾಗ್ಯೂ ಕ್ಷಮೆ ಯಾಚಿಸುತ್ತೇನೆ. ಹೊಗೇನಕಲ್ ವಿಚಾರವಾಗಿ ಕನ್ನಡ ಪರ ಸಂಘಟನೆಗಳು ಇನ್ನು ಮೈಸೂರಿನಿಂದಲೇ ಪ್ರತಿಭಟನೆಯನ್ನು ಆರಂಭಿಸಲಿದ್ದು ನಾನೂ ಸಕ್ರಿಯವಾಗಿ ಭಾಗವಹಿಸುತ್ತೇನೆ' ಎಂದು ಹಿರಿಯ ನಟ ಡಾ. ವಿಷ್ಣುವರ್ಧನ್ ಮೈಸೂರಿನಲ್ಲಿ ಪ್ರಕಟಿಸಿದರು.

2008: ಬೇಲೂರು ತಾಲ್ಲೂಕಿನ ಹೆಬ್ಬಾಳು ಗ್ರಾಮದ ಒಂದೇ ಮನೆಯ ಐವರು ಅಣ್ಣತಮ್ಮಂದಿರು ಈದಿನ ಒಂದೇ ಮಂಟಪದಲ್ಲಿ ವಿವಾಹವಾದರು. ಗ್ರಾಮದ ಅವಿಭಕ್ತ ಕುಟುಂಬದ ಮುಖ್ಯಸ್ಥ ಮಲ್ಲೇಗೌಡರ ಐವರು ಸಹೋದರರು ಒಂದೇ ಮನೆಯಲ್ಲಿ ವಾಸವಾಗಿದ್ದು ಅವರು, ಗ್ರಾಮದ ಹೆಬ್ಬಾಳು ಮಂಜಯ್ಯ ಅವರ ನಾಲ್ವರು ಗಂಡುಮಕ್ಕಳು 2007ರ ನವೆಂಬರಿನಲ್ಲಿ ಒಂದೇ ಮನೆಯ ನಾಲ್ವರು ಸಹೋದರಿಯರನ್ನು ಮದುವೆಯಾದ ಘಟನೆಯಿಂದ ಸ್ಫೂರ್ತಿ ಪಡೆದು ಈದಿನ ಒಂದೇ ಮಂಟಪದಲ್ಲಿ ತಮ್ಮ ಐವರು ಮಕ್ಕಳಿಗೂ ಮದುವೆ ಮಾಡಿಸಿದರು. ಮಲ್ಲೇಗೌಡರ ಮಕ್ಕಳಾದ ಚಂದ್ರಶೇಖರ್ ಹಾಗೂ ಕುಮಾರ್, ನಂಜೇಗೌಡರ ಮಕ್ಕಳಾದ ಗಿರೀಶ್ ಹಾಗೂ ಹಾಲಪ್ಪ ಮತ್ತು ಪುಪ್ಪೇಗೌಡರ ಮಗ ದಿನೇಶ್ ಅವರು ಕ್ರಮವಾಗಿ ಶಕುಂತಲ, ಚಂದ್ರಕಲಾ, ಗುಣ, ರೇಖಾ ಮತ್ತು ದೊಡ್ಡ ಪವಿತ್ರರಿಗೆ ಒಂದೇ ಮಂಪಟದಲ್ಲಿ 10.20 ರಿಂದ 11.50ರವರೆಗೆ ಕುಳೀರ ಲಗ್ನದಲ್ಲಿ ತಾಳಿ ಕಟ್ಟುವುದರ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

2008: ಅಸ್ಸಾಮಿನ ಉತ್ತರ ಕಾಚಾರ್ ಹಿಲ್ಸ್ ಜಿಲ್ಲೆಯಲ್ಲಿ ದಿಮಾ ಹಾಲಮ್ ಡೌಗಹ್ (ಜೆವೆಲ್) ಗುಂಪಿನ ಉಗ್ರರು ಇಬ್ಬರು ರೈಲ್ವೆ ನೌಕರರು ಸೇರಿದಂತೆ 12 ಮಂದಿಯನ್ನು ಗುಂಡಿಟ್ಟು ಕೊಂದು ರೈಲಿಗೆ ಬೆಂಕಿ ಹಚ್ಚಿದರು. ಲುಂಡಿಂಗ್ ಮತ್ತು ಹಫ್ಲೊಂಗ್ ಬಳಿ ಈ ಘಟನೆ ನಡೆಯಿತು.

2008: ಹಿರಿಯ ವೈದ್ಯ ಡಾ. ಟಿ.ಎಲ್.ದೇವರಾಜ್ ಅವರಿಗೆ ಪ್ರಸಕ್ತ ವರ್ಷದ ಶ್ರೀರಾಮ ನಾರಾಯಣ ವೈದ್ಯಶ್ರೀ ಪ್ರಶಸ್ತಿ ಲಭಿಸಿತು. ಆಯುರ್ವೇದ ಇಲಾಖೆಯ ನಿವೃತ್ತ ಉಪನಿರ್ದೇಶಕ ದೇವರಾಜ್ ಅವರು ಈ ಪ್ರಶಸ್ತಿಗೆ ಆಯ್ಕೆಯಾದ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯ ಸದಸ್ಯ ಡಾ. ಕೆ.ಸಿ.ಬಲ್ಲಾಳ ತಿಳಿಸಿದರು. ದೇವರಾಜ್ ಅವರು 36ಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದು, ಅದರಲ್ಲಿ ಕೆಲ ಕೃತಿಗಳು ಇಂಗ್ಲಿಷ್, ಹಿಂದಿ ಮತ್ತು ರಷ್ಯನ್ ಭಾಷೆಗಳಿಗೆ ಅನುವಾದಗೊಂಡಿವೆ. `ಆಯುರ್ವೇದದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ' ಎಂಬ ಕೃತಿಗೆ ನಾರಾಯಣ ವೈದ್ಯ ಆಯುರ್ವೇದ ಸಂಶೋಧನಾ ಟ್ರಸ್ಟ್ ಈ ಪ್ರಶಸ್ತಿ ಲಭಿಸಿದೆ.

2008: ಕರ್ನಾಟಕ ಲೇಖಕಿಯರ ಸಂಘವು ಲೇಖಕಿ ಮಾಲತಿ ಪಟ್ಟಣಶೆಟ್ಟಿ ಅವರನ್ನು 2008ನೇ ಸಾಲಿನ `ಅನುಪಮಾ ಪ್ರಶಸ್ತಿ'ಗೆ ಆಯ್ಕೆ ಮಾಡಿತು. ಮಾಲತಿ ಪಟ್ಟಣಶೆಟ್ಟಿ ಅವರ ಒಟ್ಟು ಸಾಹಿತ್ಯ ಸಾಧನೆ ಮತ್ತು ಮಹಿಳಾ ಸಾಹಿತ್ಯಕ್ಕೆ ಅವರ ಕೊಡುಗೆ, ಸಂಸ್ಕೃತಿ ಕ್ಷೇತ್ರದಲ್ಲಿ ಅವರು ಗಳಿಸಿದ ಮನ್ನಣೆ ಮತ್ತು ಕ್ರಿಯಾಶೀಲತೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದಿರುವ ಅಂಶಗಳನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷೆ ಡಾ. ಕೆ.ಆರ್.ಸಂಧ್ಯಾರೆಡ್ಡಿ ಪ್ರಕಟಿಸಿದರು.

2007: ಸೈನಿಕರಿಗೆ ಗುಣಮಟ್ಟದ ತರಬೇತಿ ನೀಡುವ ಮೂಲಕ ದೇಶಕ್ಕೆ ಉತ್ತಮ ಸೇನಾಧಿಕಾರಿಗಳು ಮತ್ತು ಯೋಧರನ್ನು ಕೊಡುಗೆಯಾಗಿ ನೀಡಿ ಖ್ಯಾತಿ ಪಡೆದಿರುವ ಬೆಳಗಾವಿಯ ಮರಾಠಾ ಲಘು ಪದಾತಿ ದಳದ (ಎಂಎಲ್ ಐ ಆರ್ ಸಿ) ಯೋಧರು ಸೇರಿದಂತೆ 12 ಜನರಿದ್ದ ಭಾರತೀಯ ಯೋಧರ ತಂಡ ಹಾಗೂ 13 ಶೆರ್ಪಾಗಳ ತಂಡ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದವು. ಭಾರತೀಯ ಭೂಸೇನೆಯ ಮುಖ್ಯಸ್ಥ ಹಾಗೂ ಮರಾಠಾ ಲಘು ಪದಾತಿದಳದ ಕರ್ನಲ್ ಜನರಲ್ ಜೋಗೀಂದರ್ ಜಸ್ವಂತ್ಸಿಂಗ್ (ಜೆ.ಜೆ.ಸಿಂಗ್) ಮಾರ್ಗದರ್ಶನದಲ್ಲಿ ಲೆಫ್ಟಿನೆಂಟ್ ಕ್ಯಾಪ್ಟನ್ ಥಾಪಾ ಈ ಸಾಹಸ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಎರಡು ತಂಡಗಳಾಗಿ ಈ ಸಾಹಸ ನಡೆಸಲಾಯಿತು. ಒಂದು ತಂಡ ಈದಿನ ಹಾಗೂ ಇನ್ನೊಂದು ತಂಡ ಮರುದಿನ (ಮೇ 16) ಮೌಂಟ್ ಎವರೆಸ್ಟ್ ಶಿಖರ ಏರಿತು. ಶೆರ್ಪಾಗಳ ತಂಡದ ನೇತೃತ್ವವನ್ನು ಸಿರ್ಧರ್ ಚಿರೀಂಗ್ ದೋರ್ಜಿ ವಹಿಸಿದ್ದರು.

2007: ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ಮಿಲೆನಿಯಂ ಅಭಿವೃದ್ಧಿ ಗುರಿಗಳಿಗೆ ಹೆಚ್ಚಿನ ಕೊಡುಗೆ ನೀಡಿದ್ದಕ್ಕಾಗಿ ನ್ಯೂಯಾರ್ಕ್ ವಿಶ್ವಸಂಸ್ಥೆ ಕೇಂದ್ರ ಕಚೇರಿಯಲ್ಲಿ ಮೂರನೇ `ಯುಎನ್ ವಿಮೆನ್ ಟುಗೆದರ್ ಅವಾರ್ಡ್' ವಿಶ್ವಸಂಸ್ಥೆ ಮಹಿಳಾ ಪ್ರಶಸ್ತಿ ಪಡೆದರು. ಖಾದಿ ಅಭಿವೃದ್ಧಿ, ನೇಕಾರರ ಅಭಿವೃದ್ಧಿ ಮತ್ತು ಕುಶಲಕರ್ಮಿಗಳ ಅಭಿವೃದ್ಧಿಗಾಗಿ ನೀಡಿದ ಕೊಡುಗೆಗಾಗಿ ವಸುಂಧರಾ ರಾಜೆ ಅವರಿಗೆ ಈ ಪ್ರಶಸ್ತಿ ಲಭಿಸಿತು. ಇದರೊಂದಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ ಭಾರತದ ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ವಸುಂಧರಾ ಪಾತ್ರರಾದರು.

2007: ದಯಾನಿಧಿ ಮಾರನ್ ರಾಜೀನಾಮೆಯ ಬಳಿಕ ಪರಿಸರ ಖಾತೆಯ ಸಚಿವರಾಗಿದ್ದ ಎ. ರಾಜ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆಯ ಸಚಿವರನ್ನಾಗಿ ಪ್ರಧಾನಿ ಮನಮೋಹನ್ ಸಿಂಗ್ ನೇಮಕ ಮಾಡಿದರು.

2007: ನ್ಯಾಟೋ ನೇತೃತ್ವದ ಸೇನಾಪಡೆ ಹಿಂದಿನ ರಾತ್ರಿ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 60 ತಾಲಿಬಾನ್ ಉಗ್ರಗಾಮಿಗಳು ಹತರಾದರು.

2007: ಮೇ 9ರಂದು ಮದುರೈಯಲ್ಲಿ `ದಿನಕರನ್' ದೈನಿಕ ಕಚೇರಿಯ ಮೇಲೆ ನಡೆದ ದಾಳಿಯ ಪ್ರಮುಖ ಆರೋಪಿ `ಅಟ್ಯಾಕ್ ಪಾಂಡಿ' ಮದುರೈ ಗ್ರಾಮಾಂತರ ಪೊಲೀಸರಿಗೆ ಶರಣಾಗತನಾದ.

2007: ಅನಿಲ್ ಶರ್ಮಾ ಅವರ `ಅಪ್ನೆ' ಚಿತ್ರವು ಜೂನ್ 29ರಂದು ದೇಶ - ವಿದೇಶಗಳಲ್ಲಿ 900 ಕಡೆ ಏಕಕಾಲದಲ್ಲಿ ಬಿಡುಗಡೆಯಾಗುವುದು ಎಂದು ಪ್ರಕಟಿಸಲಾಯಿತು. 8 ತಿಂಗಳಲ್ಲಿ ಪೂರ್ಣಗೊಂಡ ಈ ಚಿತ್ರದಲ್ಲಿ ಧರ್ಮೇಂದ್ರ ಅವರ ಮಕ್ಕಳಾದ ಸನ್ನಿ ಡಿಯೋಲ್, ಕತ್ರಿನಾ ಕೈಫ್, ಶಿಲ್ಪಾಶೆಟ್ಟಿ ಅಭಿನಯಿಸಿದ್ದು ಬ್ಯಾಂಕಾಕ್, ನ್ಯೂಯಾರ್ಕ್ ಮತ್ತು ಕೆನಡಾದಲ್ಲಿ ಚಿತ್ರೀಕರಣ ನಡೆಸಲಾಗಿತ್ತು.

2006: ಇಪ್ಪತ್ನಾಲ್ಕು ವರ್ಷಗಳ ಹಿಂದೆ ಪರ್ವತಾರೋಹಣ ಕಾಲದಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡ ನ್ಯೂಜಿಲ್ಯಾಂಡಿನ ಪರ್ವತಾರೋಹಿ ಮಾರ್ಕ್ ಇಂಗ್ಲಿಸ್ ಈದಿನ `ಎವರೆಸ್ಟ್ ಶಿಖರಾರೋಹಣ' ಮಾಡುವ ಮೂಲಕ ವಿಶ್ವದ ಅತ್ಯುನ್ನತ ಪರ್ವತ ಶಿಖರವನ್ನು ಏರಿದ ಮೊತ್ತ ಮೊದಲ `ಕಾಲುಗಳಿಲ್ಲದ ವ್ಯಕ್ತಿ' ಎಂಬ ಹೆಗ್ಗಳಿಕೆಗೆ ಪಾತ್ರರಾದರು. 47 ವರ್ಷದ ಈ ಸಾಧಕ 1982ರಲ್ಲಿ ಫಿಲ್ ಧೂಲೆ ಜೊತೆಗೆ ನ್ಯೂಜಿಲೆಂಡಿನ ಅತ್ಯುನ್ನತ ಶಿಖರ ಮೌಂಟ್ ಕುಕ್ ಏರುತ್ತಿದ್ದಾಗ ಮಂಜುಗಡ್ಡೆಯ ಗುಹೆಯೊಳಗೆ 14 ದಿನಗಳ ಕಾಲ ಸಿಕ್ಕಿಹಾಕಿಕೊಂಡಿದ್ದರು. ಆಗ ಕಾಲುಗಳಲ್ಲಿ ಹಿಮ ಹುಣ್ಣಾಗಿ ತೊಡೆಯಿಂದ ಕೆಳಗಿನ ಎರಡೂ ಕಾಲುಗಳನ್ನು ಕತ್ತರಿಸಿ ಹಾಕಲಾಗಿತ್ತು. ಆ ಬಳಿಕ ಬದುಕನ್ನು ಸವಾಲಾಗಿ ಸ್ವೀಕರಿಸಿದ ಇಗ್ಲಿಸ್ ಕಾಲು ರಹಿತರ ಪರ್ವತಾರೋಹಣ ಸೇರಿದಂತೆ ಹಲವಾರು ಸಾಹಸ ಕೃತ್ಯಗಳಲ್ಲಿ ಪಾಲ್ಗೊಂಡಿದ್ದರು.

2006: ಸಂಗ್ರಹಾಲಯವಾಗಿ ಪರಿವರ್ತನೆಗೊಳ್ಳಲಿರುವ ಐ ಎನ್ ಎಸ್ ಚಪಲ್ ಸಮರನೌಕೆಯು ಆಗ್ರಾ ಐ ಎನ್ ಎಸ್ ಕದಂಬ ನೌಕಾ ನೆಲೆಯಿಂದ ಈದಿನ ಕಾರವಾರದ ರಬೀಂದ್ರನಾಥ ಟ್ಯಾಗೋರ್ ಕರಾವಳಿಗೆ ಆಗಮಿಸಿತು. ಕ್ಷಿಪಣಿ ಉಡಾವಣಾ ವಾಹನವಾಗಿ 28 ವರ್ಷಗಳ ಸೇವೆ ಸಲ್ಲಿಸಿದ್ದ ಈ ಸಮರನೌಕೆ 2005ರ ನವೆಂಬರಿನಲ್ಲಿ ಸೇವೆಯಿಂದ ನಿವೃತ್ತಿ ಪಡೆದಿತ್ತು. 275 ಟನ್ ತೂಕ, 38.5 ಮೀಟರ್ ಎತ್ತರ, 7.2 ಮೀಟರ್ ಅಗಲ ಇರುವ ಈ ನೌಕೆಯು ಈಗ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವನ್ನು ಕಳೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾರವಾರ ನೌಕಾನೆಲೆಯಲ್ಲಿ ಇದನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಿ ಇರಿಸಲು ನಿರ್ಧರಿಸಲಾಗಿದೆ.

2006: ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ ವಿರುದ್ಧ ತನಿಖೆ ನಡೆಸುತ್ತಿರುವ ನ್ಯಾಯಾಲಯದಲ್ಲಿ ಗ್ರಾಮಸ್ಥರ ಕೊಲೆ, ಮಕ್ಕಳು ಮಹಿಳೆಯರಿಗೆ ಚಿತ್ರಹಿಂಸೆ ಮತ್ತು 399 ಜನರನ್ನು ಅಕ್ರಮವಾಗಿ ಬಂಧಿಸಿ ದೌರ್ಜನ್ಯ ನಡೆಸಿದ ಆರೋಪಗಳನ್ನು ಹೊರಿಸಲಾಯಿತು. 1982ರಲ್ಲಿ ದುಜೈಲ್ನಲ್ಲಿ ಸದ್ದಾಂ ಹತ್ಯೆಗೆ ದಾಳಿ ನಡೆದ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತಾ ಪಡೆಗಳು ನೂರಾರು ಮಂದಿಯನ್ನು ಬಂಧಿಸಿ ಹಿಂಸೆಗೆ ಗುರಿಪಡಿಸಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆರೋಪ ಪಟ್ಟಿ ಸಲ್ಲಿಸಲಾಯಿತು.

2006: ರಾಯ್ ಬರೇಲಿ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಲೋಕಸಭೆಯಲ್ಲಿ ಈದಿನ ಪ್ರಮಾಣವಚನ ಸ್ವೀಕರಿಸಿದರು. ತಿರುವನಂತಪುರದಲ್ಲಿ ಸಿಪಿಎಂ ಹಿರಿಯ ಮುಖಂಡ ವಿ.ಎಸ್. ಅಚ್ಯುತಾನಂದನ್ (82) ಕೇರಳದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದರು.

1993: ಭಾರತದ ನಿವೃತ್ತ ಸೇನಾ ಪ್ರಮುಖ ಕೆ.ಎಂ. ಕಾರ್ಯಪ್ಪ ಅವರು ಈದಿನ ನಿಧನರಾದರು. 1899ರ ಜನವರಿ 28ರಂದು ಮಡಿಕೇರಿಯಲ್ಲಿ ಜನಿಸಿದ ಕಾರ್ಯಪ್ಪ 1918ರಲ್ಲಿ ಮೊದಲ ಮಹಾಯುದ್ಧ ಮುಗಿದ ಸಮಯಲ್ಲಿ ಕಿಂಗ್ಸ್ ಕಮಿಷನ್ ಸೈನಿಕರಿಗಾಗಿ ಭಾರತದಲ್ಲಿ ಆಯ್ಕೆ ನಡೆಸಿದಾಗ ಆಯ್ಕೆಯಾದ ಕಾರ್ಯಪ್ಪ ಕಿಂಗ್ಸ್ ಕಮಿಷನ್ಡ್ ಇಂಡಿಯನ್ ಆಫೀಸರ್ಸ್ (ಕೆಸಿಐಒ) ಮೊದಲ ತಂಡದ ತರಬೇತಿ ಪಡೆದರು. ಕ್ರೀಡೆ ಮತ್ತು ಸಂಗೀತದಲ್ಲಿ ಇವರಿಗೆ ಅಪಾರ ಆಸಕ್ತಿ ಇತ್ತು.

1966: ಕಲಾವಿದೆ ರಾಧಿ ರಂಜಿನಿ ಜನನ.

1952: ಕಲಾವಿದ ಶಿವರುದ್ರಯ್ಯ ಕೆ. ಜನನ.

1951: ಕಲೆಯ ಹಲವು ಪ್ರಕಾರಗಳಾದ ಕಲಾ ಇತಿಹಾಸ, ಕಲಾ ಬರಹ, ಕಲಾ ಸಂಘಟನೆ ಮುಂತಾದುವುಗಳಲ್ಲಿ ತೊಡಗಿಸಿಕೊಂಡ ಕಲಾವಿದ ಎನ್. ಮರಿಶಾಮಾಚಾರ್ ಅವರು ಸಿ.ಎಂ. ನಂಜುಂಡಾಚಾರ್- ಲಿಂಗಮ್ಮ ದಂಪತಿಯ ಮಗನಾಗಿ ದೇವನಹಳ್ಳಿ ಬಳಿಯ ವಿಜಯಪುರದಲ್ಲಿ ಜನಿಸಿದರು.

1941: ಕಲಾವಿದ ಟಿ.ಎ.ಎಸ್. ಮಣಿ ಜನನ.

1918: ಅಮೆರಿಕವು ನ್ಯೂಯಾರ್ಕ್ ನಗರ ಮತ್ತು ವಾಷಿಂಗ್ಟನ್ ಡಿ.ಸಿ. ಮಧ್ಯೆ ನಿಯಮಿತ ಏರ್ ಮೇಲ್ ಸೇವೆಯನ್ನು ಆರಂಭಿಸಿತು. ಇದು ಜಗತ್ತಿನಲ್ಲೇ ಪ್ರಪ್ರಥಮ ನಿಯಮಿತ ಏರ್ ಮೇಲ್ ಸೇವೆಯಾಗಿತ್ತು.

1914: ತೇನ್ ಸಿಂಗ್ ನೋರ್ಗೆ (1914-84) ಜನ್ಮದಿನ. ಇವರು ನ್ಯೂಜಿಲೆಂಡಿನ ಸರ್ ಎಡ್ಮಂಡ್ ಹಿಲರಿ ಜೊತೆಗೆ ಮೊತ್ತ ಮೊದಲ ಬಾರಿಗೆ ಜಗತ್ತಿನ ಅತಿ ಎತ್ತರದ ಎವರೆಸ್ಟ್ ಪರ್ವತವನ್ನು ಏರಿದರು.

1859: ಪಿಯರ್ ಕ್ಯೂರಿ (1859-1906) ಹುಟ್ಟಿದ ದಿನ. ಫ್ರೆಂಚ್ ಭೌತ ರಸಾಯನ ತಜ್ಞನಾದ ಈತ ತನ್ನ ಪತ್ನಿ ಮೇಡಂ ಕ್ಯೂರಿ ನೆರವಿನೊಂದಿಗೆ ರೇಡಿಯಂ ಮತ್ತು ಪೊಲೋನಿಯಂನ್ನು ಸಂಶೋಧಿಸಿದ.

1845: ಮುಂಬೈಯ ಜೆಮ್ ಸೆಟ್ ಜಿ ಜೀಜೆಭಾಯ್ ಆಸ್ಪತ್ರೆಯು ಗವರ್ಮರ್ ಸರ್ ಜಾರ್ಜ್ ಆರ್ಥರ್ ಬಾರ್ಟ್ ಅವರಿಂದ ಉದ್ಘಾಟನೆಗೊಂಡಿತು.

1817: ಮಹರ್ಷಿ ದೇಬೇಂದ್ರನಾಥ ಟ್ಯಾಗೋರ್ (1817-1905) ಜನ್ಮದಿನ. ಹಿಂದೂ ತತ್ವಜ್ಞಾನಿ ಹಾಗೂ ಧಾರ್ಮಿಕ ಸುಧಾರಕರಾಗಿದ್ದ ಇವರು 1863ರಲ್ಲಿ `ಶಾಂತಿ ನಿಕೇತನ'ವನ್ನು ಸ್ಥಾಪಿಸಿದರು. ಇವರ ಪುತ್ರ ರಬೀಂದ್ರನಾಥ ಟ್ಯಾಗೋರ್ ಅವರು ಶಾಂತಿನಿಕೇತನಕ್ಕೆ ಖ್ಯಾತಿಯನ್ನು ತಂದುಕೊಟ್ಟರು.

No comments:

Post a Comment