Saturday, May 19, 2018

ಇಂದಿನ ಇತಿಹಾಸ History Today ಮೇ 18

ಇಂದಿನ ಇತಿಹಾಸ History Today ಮೇ 18 
 2018: ನವದೆಹಲಿ/ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಬಿಜೆಪಿಯ ಬಿ.ಎಸ್. ಯಡಿಯೂರಪ್ಪ ಅವರು  ಮೇ 19ರ ಶನಿವಾರ ಸಂಜೆ ೪ ಗಂಟೆಗೆ ಸದನದಲ್ಲಿ ಬಹುಮತ ಸಾಬೀತು ಪಡಿಸಬೇಕು ಎಂಬುದಾಗಿ ಈದಿನ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಆದೇಶ ನೀಡಿದ್ದು, ಸುಪ್ರೀಂಕೋರ್ಟ್ ಆದೇಶ ಪಾಲಿಸುವುದಾಗಿ ಯಡಿಯೂರಪ್ಪ ಅವರು ಒಪ್ಪಿಕೊಳ್ಳುವುದರೊಂದಿಗೆ, ಇದೀಗ ವಿಧಾನಸಭೆಯಲ್ಲಿ ಬಲಾಬಲ ಪರೀಕ್ಷೆಗೆ ವೇದಿಕೆ ಸಜ್ಜುಗೊಂಡಿತು. ರಾಜ್ಯಪಾಲ ವಜುಭಾಯಿ ವಾಲಾ ಅವರ ಆಹ್ವಾನದ ಮೇರೆಗೆ ಏಕೈಕ ದೊಡ್ಡ ಪಕ್ಷ ಎಂಬ ನೆಲೆಯಲ್ಲಿ ಮೇ 17ರ ಗುರುವಾರ ರಾಜ್ಯದ ೨೪ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಅವರು ’ನಾಳೆ (ಮೇ 19)  ಸದನದಲ್ಲಿ ಬಹುಮತ ಸಾಬೀತು ಪಡಿಸುವೆ ಎಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ವಿಶ್ವಾಸ ವ್ಯಕ್ತ ಪಡಿಸಿದರು.  ‘ಸುಪ್ರೀಂಕೋರ್ಟ್ ತೀರ್ಪನ್ನು ಪಾಲಿಸುವೆ. ನಾಳೆ ವಿಶ್ವಾಸ ಮತ ಯಾಚನೆಗೆ ಎಲ್ಲ ವ್ಯವಸ್ಥೆ ಮಾಡಲು ಸಂಪುಟ ಸಭೆಯಲ್ಲಿ ಈದಿನವೇ ಚರ್ಚಿಸುವೆ ಎಂದು ಯಡಿಯೂರಪ್ಪ ನುಡಿದರು. ರಾಜ್ಯ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಮತ್ತು ಪಕ್ಷದ ರಾಷ್ಟ್ರೀಯ ನಾಯಕರು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿ ಮುಖ್ಯಮಂತ್ರಿಯವರು ಬಹುಮತ ಸಾಬೀತು ಪಡಿಸಲಿದ್ದಾರೆ ಎಂದು ಪ್ರತಿಪಾದಿಸಿದರು. ಸದನದಲ್ಲಿ ಬಹುಮತ ಸಾಬೀತು ಪಡಿಸುವ ಮುನ್ನ ಯಡಿಯೂರಪ್ಪ ಅವರು ಯಾವುದೇ ಪ್ರಮುಖ ನಿರ್ಣಯವನ್ನು ತೆಗೆದುಕೊಳ್ಳುವಂತಿಲ್ಲ. ಸದನ ಪರೀಕ್ಷೆಗೆ ಸಂಬಂಧಿಸಿದಂತೆ ಹಂಗಾಮೀ ಸಭಾಧ್ಯಕ್ಷರು ಕಾನೂನಿಗೆ ಅನುಗುಣವಾಗಿ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳುವರು ಎಂದು ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತು.

ಸದನ ಪರೀಕ್ಷೆಗೆ ಮುನ್ನ ವಿಧಾನಸಭೆಗೆ ಆಂಗ್ಲೋ-ಇಂಡಿಯನ್ ಸದಸ್ಯರ ನಾಮಕರಣವನ್ನೂ ಮಾಡುವಂತಿಲ್ಲ ಎಂದು ಸುಪ್ರೀಂಕೋರ್ಟ್  ಆದೇಶ ನೀಡಿತು.  ರಾಜ್ಯಪಾಲ ವಜುಭಾಯಿ ವಾಲಾ ಅವರು ಸರ್ಕಾರ ರಚಿಸಲು ಬಿಜೆಪಿಗೆ ಆಹ್ವಾನ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್- ಜನತಾದಳ (ಎಸ್) ಚುನಾವಣೋತ್ತರ ಮೈತ್ರಿಕೂಟ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿಧಾನಸಭೆಗೆ ಆಂಗ್ಲೋ-ಇಂಡಿಯನ್ ಸದಸ್ಯರ ನಾಮಕರಣ ಮಾಡುವುದನ್ನೂ ಪ್ರಶ್ನಿಸಿತ್ತು.  ವಿಶ್ವಾಸಮತ ಯಾಚನೆಗೂ ಮುನ್ನ ಎಲ್ಲಾ ಶಾಸಕರು ಪ್ರಮಾಣವಚನ ಸ್ವೀಕರಿಸಬೇಕು. ಸದನದ ಹಿರಿಯ ಸದಸ್ಯರೊಬ್ಬರನ್ನು ಹಂಗಾಮೀ ಸಭಾಧ್ಯಕ್ಷರಾಗಿ ಆಯ್ಕೆ ಮಾಡಬೇಕು ಎಂದು ಪೀಠ ಆದೇಶ ನೀಡಿತು.  ನಾಳೆಯೇ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕು. ನಾವು ಯಾರಿಗೂ ಸಮಯಾವಕಾಶ ಕೊಡೋದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತು.  ಅರ್ಜಿದಾರರಿಗೆ ಎರಡು ಆಯ್ಕೆಗಳನ್ನು ನೀಡಿದ ಸುಪ್ರೀಂಕೋರ್ಟ್, ರಾಜ್ಯಪಾಲರ ನಿರ್ಣಯದ ಬಗ್ಗೆ ವಿಸ್ತೃತ ವಿಚಾರಣೆ ಬೇಕೆ? ಅಥವಾ ನಾಳೆಯೇ ವಿಶ್ವಾಸ ಮತಯಾಚನೆಗೆ ಸೂಚಿಸಬೇಕೆ? ಎಂದು ಇದಕ್ಕೆ ಮುನ್ನ ಪ್ರಶ್ನಿಸಿತ್ತು.  ವಿಶ್ವಾಸಮತ ಯಾಚನೆ ವೇಳೆ ನಿರ್ಭಯವಾಗಿ ಮತ ಚಲಾಯಿಸಲು ಸೂಕ್ತ ವ್ಯವಸ್ಥೆ ಮಾಡುತ್ತೇವೆ. ಎಲ್ಲಾ ಶಾಸಕರಿಗೂ ಸೂಕ್ತ ರಕ್ಷಣೆ ಕೊಡುತ್ತೇವೆ. ಎಲ್ಲಾ ಶಾಸಕರೂ ಸದನದಲ್ಲಿ ಹಾಜರಿರುವಂತೆ ಡಿಜಿಪಿಗೆ ಆದೇಶ ನೀಡುತ್ತೇವೆ. ಸೂಕ್ತ ಭದ್ರತೆ ನೀಡಲು ಆದೇಶ ನೀಡುತ್ತೇವೆ ಎಂದು ತ್ರಿಸದಸ್ಯ ಪೀಠ ಹೇಳಿತು.   ನಾಳೆಯೇ ವಿಶ್ವಾಸಮತ ಯಾಚನೆಗೆ ಬಿಜೆಪಿ ಪರ ವಕೀಲರಾದ ರೋಹ್ಟಗಿ ಅಸಮ್ಮತಿ ಸೂಚಿಸಿದಾಗ, ಇನ್ನೂ ಹೆಚ್ಚಿನ ಸಮಯಾವಕಾಶ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ ಪೀಠ, ನಾಳೆ ಸಂಜೆ ೪ಗಂಟೆಗೆ ವಿಶ್ವಾಸ ಮತಯಾಚನೆ ಮಾಡಬೇಕು ಎಂದು ನಿರ್ದೇಶಿಸಿತು.  ವಿಶ್ವಾಸಮತ ಹೇಗೆ ನಡೆಸಬೇಕೆಂದು ಹಂಗಾಮಿ ಸಭಾಧ್ಯಕ್ಷರು ನಿರ್ಧರಿಸಲಿ. ಗೌಪ್ಯ ಮತದಾನದ ಮನವಿಯನ್ನೂ ತಿರಸ್ಕರಿಸಿದ ಸುಪ್ರೀಂಕೋರ್ಟ್‌ಈ ಬಗ್ಗೆ ಸಭಾಧ್ಯಕ್ಷರು ನಿರ್ಧರಿಸಲಿ ಎಂದು ಹೇಳಿತು.  ಕಾಂಗ್ರೆಸ್ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಜೆಡಿಎಸ್ ಪರ ಕಪಿಲ್ ಸಿಬಲ್ ಹಾಗೂ ಬಿಜೆಪಿ ಪರ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದರು. ಹಿಂದಿನ ರಾತ್ರಿ ದೆಹಲಿಯು ಕರ್ನಾಟಕ ರಾಜಕೀಯ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರಿಂದ ತುರ್ತಾಗಿ ರಚನೆಗೊಂಡ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಮೂರು ಕಾಲು ಗಂಟೆಗಳ ಕಾಲ ಬಾರೀ ವಾದ, ಪ್ರತಿವಾದ ಆಲಿಸಿತ್ತು. ಬಳಿಕ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಮ್ಮತಿ ಸೂಚಿಸಿ, ಶುಕ್ರವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ತಿಳಿಸಿತ್ತು. ಬಿಜೆಪಿ ವಾದ:  ಬಿಜೆಪಿ ಪರ ವಕೀಲರಾದ ಮುಕುಲ್ ರೋಹ್ಟಗಿ ಅವರು, ಬಿಜೆಪಿಗೆ ಬಹುಮತ ಇರುವ ಪತ್ರವನ್ನು ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠಕ್ಕೆ ಸಲ್ಲಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ರೆಸಾರ್ಟ್ ರಾಜಕೀಯದಲ್ಲಿ ತೊಡಗಿವೆ ಎಂದು ವಾದಿಸಿದರು.  ಮೇ ೧೫ರಂದು ರಾಜ್ಯಪಾಲರಿಗೆ ಸಲ್ಲಿಸಿದ್ದ ಬೆಂಬಲದ ಪ್ರತಿಯನ್ನು ಮುಕುಲ್ ರೋಹ್ಟಗಿ ತ್ರಿಸದಸ್ಯ ಪೀಠದ ಮುಂದಿಟ್ಟರು.  ಕಾಂಗ್ರೆಸ್, ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಹೀಗಾಗಿ ಚುನಾವಣೆಯಲ್ಲಿ ನಾವೇ ಅತೀ ಹೆಚ್ಚು (೧೦೪) ಸ್ಥಾನ ಗಳಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ರಚಿಸಿದೆ ಎಂದು ರೋಹ್ಟಗಿ ಪೀಠದ ಮುಂದೆ ವಾದ ಮಂಡಿಸಿದರು.  ನಾವು ಕರ್ನಾಟಕದಲ್ಲಿ ಬಹುಮತ ಸಾಬೀತಿಗೆ ಸಿದ್ಧರಿದ್ದೇವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದಾಗಿಯೂ ಅವರು ಹೇಳಿದರು.  ಬೆಂಬಲ ನೀಡಿರುವ ಶಾಸಕರ ಹೆಸರನ್ನು ಬಹಿರಂಗಪಡಿಸುವುದಿಲ್ಲ, ಅವರ ಜೀವಕ್ಕೆ ಬೆದರಿಕೆ ಇರುವುದರಿಂದ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ರೋಹ್ಟಗಿ ನುಡಿದರು.  ನೀವೂ ಬಹುಮತ ಇದೆ ಅಂತ ಹೇಳ್ತಿದ್ದೀರಿ, ಕಾಂಗ್ರೆಸ್ ಕೂಡಾ ಬಹುಮತ ಇದೆ ಅಂತ ವಾದಿಸುತ್ತಿದೆ ಎಂದು ನ್ಯಾಯಮೂರ್ತಿ ಪ್ರತಿಕ್ರಿಯಿಸಿದರು. ಬಿಜೆಪಿ ಸಲ್ಲಿಸಿರುವ ಪತ್ರದಲ್ಲಿ ಶಾಸಕರ ಹೆಸರೇ ಇಲ್ಲ ಎಂದೂ ಪೀಠ ಹೇಳಿತು.  ಕಾಂಗ್ರೆಸ್ ವಾದ:  ಕಾಂಗ್ರೆಸ್ ಪರ ವಾದಿಸಿದ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಅವರು ಯಾರು ಮೊದಲು ಸರ್ಕಾರ ರಚನೆಯ ಅವಕಾಶ ಪಡೆಯ ಬೇಕೆಂಬುದನ್ನು ಕೋರ್ಟ್ ತೀರ್ಮಾನಿಸಬೇಕು ಎಂದು ಹೇಳಿದರು. ನಾಳೆಯೇ ಸದನ ಪರೀಕ್ಷೆಗೆ ಕಾಂಗ್ರೆಸ್ ಒಪ್ಪಿದೆ. ಸುಪ್ರೀಂಕೋರ್ಟ್ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕು ಎಂದು ಸಿಂಘ್ವಿ ಹೇಳಿದರು.  ‘ನಾವು ತಯಾರಾಗಿದ್ದೇವೆ, ಆದರೆ ಬಿಜೆಪಿಯವರು ನಾಳೆಯೇ ಬಹುಮತ ಸಾಬೀತಿಗೆ ಸಿದ್ದರಿದ್ದಾರೆಯೇ ಎಂದು ಸಿಂಘ್ವಿ ಪ್ರಶ್ನಿಸಿದರು. ಬಿಜೆಪಿ ಪರ ವಕೀಲರಾದ ರೋಹ್ಟಗಿ ಅದನ್ನು ವಿರೋಧಿಸಿದರು.  ಜೆಡಿಎಸ್ ವಾದ:  ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಪರ ವಾದ ಮಂಡಿಸಿದ ಕಪಿಲ್ ಸಿಬಲ್ ಅವರು ರಾಜ್ಯಪಾಲರಿಗೆ ವಿವೇಚನಾಧಿಕಾರ ಇಲ್ಲ ಎಂದು ವಾದಿಸಿದರು. ಇವೆಲ್ಲವೂ ಚರ್ಚೆ ಮಾಡಬೇಕಾಗಿರುವ ವಿಚಾರಗಳು ಎಂದು ನ್ಯಾಯಮೂರ್ತಿ ಸಿಕ್ರಿ ಅಭಿಪ್ರಾಯ ವ್ಯಕ್ತಪಡಿಸಿದರು. ಆದರೆ ಇದೆಲ್ಲ ಬಗೆಹರಿದ ವಿಚಾರಗಳು ಮತ್ತೆ ಚರ್ಚಿಸಬೇಕಾಗಿಲ್ಲ ಎಂದು ಸಿಬಲ್ ಹೇಳಿದರು. ’ಒಂದು ಕಡೆ ಆಳ ಸಮುದ್ರ, ಮತ್ತೊಂದೆಡೆ ದೆವ್ವ ಇದೆ..ಇದರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು?’ ಎಂದು ಸಿಬಲ್ ಅವರು ವೇಳೆ ಉದಾಹರಣೆ ನೀಡಿದರು. ಅದಕ್ಕೆ ’ನಾವು ಈ ನೆಲದ ಕಾನೂನನ್ನು ಎತ್ತಿಹಿಡಿಯಲು ಇಲ್ಲಿ ಕುಳಿತಿದ್ದೇವೆ ಎಂದು ತ್ರಿಸದಸ್ಯ ಪೀಠ ಹೇಳಿತು.  ತೀರ್ಪಿಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧಕ್ಷ ರಾಹುಲ್ ಗಾಂಧಿ ’ರಾಜ್ಯಪಾಲರು ಸಂವಿಧಾನ ಬಾಹಿರವಾಗಿ ನಡೆದುಕೊಂಡಿದ್ದಾರೆ ಎಂಬ ನಮ್ಮ ನಿಲುವನ್ನು ಕರ್ನಾಟಕದಲ್ಲಿ ಸದನ ಪರೀಕ್ಷೆಗೆ ನೀಡಿರುವ ಸುಪ್ರೀಂಕೋರ್ಟ್ ಆದೇಶ ಎತ್ತಿ ಹಿಡಿದಿದೆ ಎಂದು ಹೇಳಿದರು. ಸುಪ್ರೀಂಕೋರ್ಟ್ ತೀರ್ಪು ಚಾರಿತ್ರಿಕ ಎಂದು ಸಿಂಗ್ವಿ ಹೇಳಿದರು.

2018: ಬೆಂಗಳೂರು: ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರು ಬಿಜೆಪಿ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ವಿಧಾನಸಭೆಯ ಹಂಗಾಮೀ ಸಭಾಧ್ಯಕ್ಷರಾಗಿ ನೇಮಕ ಮಾಡಿದರು. ಬೋಪಯ್ಯ ಅವರು ಮೇ 19ರ ಶನಿವಾರ ಸಂಜೆ ೪ ಗಂಟೆಗೆ ಸುಪ್ರಿಂಕೋರ್ಟ್ ಆದೇಶದಂತೆ ಸದನದಲ್ಲಿ ಪಕ್ಷ ಬಲಾಬಲ ಪರೀಕ್ಷೆಯನ್ನು ನಿರ್ವಹಿಸಲಿದ್ದಾರೆ.  ಬೋಪಯ್ಯ ಅವರು ೨೦೧೮ರ ವಿಧಾನಸಭೆಗೆ ವಿರಾಜಪೇಟೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆರೆಸ್ಸೆಸ್ ಕಾರ್ಯಕರ್ತರಾಗಿರುವ ಬೋಪಯ್ಯ ಬಿಜೆಪಿಯಿಂದ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ೨೦೦೯ರಿಂದ ೨೦೧೩ರ ನಡುವಣ ಅವಧಿಯಲ್ಲಿ ಅವರು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿದ್ದರು ಮತ್ತು ಆ ಸಮಯದಲ್ಲಿ ಬಹಳ ವಿವಾದಾಸ್ಪದ ವ್ಯಕ್ತಿಯಾಗಿದ್ದರು. ೨೦೧೦ರಲ್ಲಿ ಅವರು ನಡೆಸಿದ್ದ ಸದನ ಪರೀಕ್ಷೆಗೆ ಸುಪ್ರೀಂಕೋರ್ಟ್ ಕೂಡಾ ತೀವ್ರ ಆಕ್ಷೇಪ ವ್ಯಕ್ತ ಪಡಿಸಿತ್ತು.  ೨೦೧೦ರಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಶ್ವಾಸ ಮತ ಯಾಚಿಸಬೇಕಾದ ಸಂದರ್ಭ ಬಂದಿದ್ದಾಗ, ಸಭಾಧ್ಯಕ್ಷರಾಗಿದ್ದ ಬೋಪಯ್ಯ ಅವರು ಮುಖ್ಯಮಂತ್ರಿಯ ವಿರುದ್ಧ ಬಂಡಾಯ ಎದ್ದ ೧೧ ಮಂದಿ ಬಿಜೆಪಿ ಶಾಸಕರು ಮತ್ತು ಐವರು ಪಕ್ಷೇತರ ಸದಸ್ಯರನ್ನು ಅನರ್ಹಗೊಳಿಸಿದ್ದರು. ಅವರು ನಿರ್ವಹಿಸಿದ್ದ ವಿಶ್ವಾಸಮತಯಾಚನೆಯ ಪ್ರಕ್ರಿಯೆ ಕೂಡಾ ಅರಾಜಕವಾಗಿದ್ದು, ಅವರು ಧ್ವನಿಮತವನ್ನು ಆಯ್ಕೆ ಮಾಡಿಕೊಂಡದ್ದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಶಾಸಕರನ್ನು ಅನರ್ಹಗೊಳಿಸಿದ ಸಭಾಧ್ಯಕ್ಷರ ನಿರ್ಣಯವನ್ನು ಕರ್ನಾಟಕ ಹೈಕೋರ್ಟ್ ೨೦೧೧ರ ಫೆಬ್ರುವರಿಯಲ್ಲಿ ಎತ್ತಿಹಿಡಿದಿತ್ತು. ಆದರೆ ನಂತರ ಸುಪ್ರೀಂಕೋರ್ಟ್ ಶಾಸಕರ ಅನರ್ಹತೆಯನ್ನು ರದ್ದು ಪಡಿಸಿ ’ಸಭಾಧ್ಯಕ್ಷರು ಅತ್ಯವಸರದ ವರ್ತನೆ ತೋರಿದರು. ಯಡಿಯೂರಪ್ಪ ಅವರ ಅನರ್ಹತೆ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತ ಅವರ ವಿಚಾರಣೆ ಸಹಜ ನ್ಯಾಯ ಮತ್ತು ನ್ಯಾಯೋಚಿತ ಆಟದ ಅವಳಿ ಪರೀಕ್ಷೆಯಲ್ಲಿ  ಉತ್ತೀರ್ಣಗೊಂಡಿಲ್ಲ ಎಂದು ಟೀಕಿಸಿತ್ತು.  ೧೧ ಗಂಟೆಗೆ ಸಮಾವೇಶಕ್ಕೆ ಶಿಫಾರಸು: ಶುಕ್ರವಾರ ನಡೆಸಿದ ತುರ್ತು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಬೆಳಗ್ಗೆ ೧೧ ಗಂಟೆಗೆ ವಿಧಾನಸಭಾ ಅಧಿವೇಶನ ಸಮಾವೇಶಗೊಳಿಸುವಂತೆ ರಾಜ್ಯಪಾಲರಿಗೆ ಶಿಫಾರಸು ಮಾಡಲು ನಿರ್ಧರಿಸಿದರು. ಸಂಪುಟ ಸಭೆಯಲ್ಲಿ ಇತರ ಅಧಿಕಾರಿಗಳ ಜೊತೆಗೆ ವಿಧಾನಸಭೆಯ ಕಾರ್‍ಯದರ್ಶಿ ಎನ್. ಮೂರ್ತಿ ಅವರೂ ಪಾಲ್ಗೊಂಡಿದ್ದರು.  ಇದೇ ವೇಳೆಯಲ್ಲಿ ಹಂಗಾಮೀ ಸಭಾಧ್ಯಕ್ಷ ಸ್ಥಾನಕ್ಕೆ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ, ೭ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಬಿಜೆಪಿಯ ಉಮೇಶ ಕತ್ತಿ, ೬ ಬಾರಿ ಶಾಸಕರಾಗಿದ್ದ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಹೆಸರನ್ನು ಪ್ರಸ್ತಾಪಸಲಾಗಿದೆ ಎಂದು ಮೂಲಗಳೂ ತಿಳಿಸಿದ್ದವು.  ಮೇ 19ರ ಶನಿವಾರ ನಡೆಯುವ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಶಾಸಕರ ಪ್ರಮಾಣ ವಚನ ನಡೆಯಲಿದೆ. ಪ್ರಮಾಣ ವಚನದ ಬಳಿಕ ಬಿಜೆಪಿ ಮತ್ತು ಚುನಾವಣೋತ್ತರ ಕಾಂಗ್ರೆಸ್- ಜೆಡಿ(ಎಸ್) ಮೈತ್ರಿಕೂಟವು ಸಭಾಧ್ಯಕ್ಷರ ಆಯ್ಕೆಗೆ ಒತ್ತಾಯಿಸುವ ನಿರೀಕ್ಷೆ ಇದೆ. ಸಭಾಧ್ಯಕ್ಷರ ಆಯ್ಕೆಯು ಸದನದಲ್ಲಿ ಪಕ್ಷ ಬಲಾಬಲವನ್ನು ತೋರಿಸುವುದೆಂದು ನಿರೀಕ್ಷಿಸಲಾಗಿದೆ ಎಂದು ಮೂಲಗಳು ಹೇಳಿದವು. ಬೋಪಯ್ಯ ನೇಮಕಕ್ಕೆ ಕಾಂಗ್ರೆಸ್ ಆಕ್ಷೇಪ: ಈ ಮಧ್ಯೆ ಹಂಗಾಮೀ ಸಭಾಧ್ಯಕ್ಷರಾಗಿ ಬೋಪಯ್ಯ ಅವರನ್ನು ನೇಮಕ ಮಾಡಿದ ನಿರ್ಧಾರವನ್ನು ಕಾಂಗ್ರೆಸ್ ಮತ್ತು ಜೆಡಿ(ಎಸ್) ತೀವ್ರವಾಗಿ ಆಕ್ಷೇಪಿಸಿವೆ.  ’ಗೌರವಾನ್ವಿತ ರಾಜ್ಯಪಾಲರ ನಿರ್ಧಾರ ಆಘಾತಕರ. ಅತ್ಯಂತ ಹಿರಿಯ ಸದಸ್ಯರನ್ನು, ಈ ಪ್ರಕರಣದಲ್ಲಿ ಆರ್.ವಿ. ದೇಶಪಾಂಡೆ ಅವರನ್ನು ಸಂವಿಧಾನಬದ್ಧವಾಗಿ ನೇಮಕ ಮಾಡಬೇಕಾಗಿದ್ದು. ಕೆ.ಜಿ. ಬೋಪಯ್ಯ ಅವರು ಕಾರ್ಯ ನಿರ್ವಹಣೆ ಬಗ್ಗೆ ಸುಪ್ರೀಂಕೋರ್ಟ್ ಕೂಡಾ ಛೀಮಾರಿ ಹಾಕಿತ್ತು ಎಂದು ಕೆಪಿಸಿಸಿ ಕಾರ್‍ಯಾಧ್ಯಕ್ಷ ದಿನೇಶ ಗುಂಡೂರಾವ್ ಟ್ವೀಟ್ ಮಾಡಿದರು. ವಜುಭಾಯಿ ವಾಲಾಜಿ ಅವರು ಬಿಜೆಪಿ ಏಜೆಂಟರಂತೆ ವರ್ತಿಸುತ್ತಿರುವುದನ್ನು ನೋಡಲು ಬೇಸರವಾಗುತ್ತದೆ ಎಂದು ಜೆಡಿ(ಎಸ್) ಶಿಬಿರ ಟೀಕಿಸಿತು. ಬೋಪಯ್ಯ ಅವರ ಈ ಹಿಂದಿನ ವರ್ತನೆಗಳು ವಿಶ್ವಾಸಾರ್ಹವಾಗಿರಲಿಲ್ಲ, ಅವರು ’ಮೋದಿ ಕೈಗೊಂಬೆ ಎಂದು ಜೆಡಿ(ಎಸ್) ದೂರಿತು. ಕಾಂಗ್ರೆಸ್ -ಜನತಾದಳ (ಎಸ್) ಟೀಕೆಗಳಿಗೆ ಅಷ್ಟೇ ತ್ವರಿತವಾಗಿ ಬಿಜೆಪಿ ಎದಿರೇಟು ನೀಡಿತು.  ಕೇಂದ್ರ ಸಚಿವ ಹಾಗೂ ಕರ್ನಾಟಕದಲ್ಲಿ ಪಕ್ಷದ ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಪ್ರಕಾಶ ಜಾವಡೇಕರ್ ಅವರು ’ಕೆ ಜಿ ಬೋಪಯ್ಯ ಅವರನ್ನು ಹಂಗಾಮೀ ಸಭಾಧ್ಯಕ್ಷರಾಗಿ ೨೦೦೮ರಲ್ಲಿ ಆಗಿನ ರಾಜ್ಯಪಾಲರು ನೇಮಕ ಮಾಡಿದ್ದರು. ಆಗ ಬೋಪಯ್ಯ ಅವರು ಈಗಿಗಿಂತ ೧೦ ವರ್ಷ ಕಿರಿಯರಾಗಿದ್ದರು. ಕಾಂಗ್ರೆಸ್ ಚೇಷ್ಟೆಯ ಆಕ್ಷೇಪವನ್ನು ಮಾಡುತ್ತಿದೆ. ಬೋಪಯ್ಯ ಅವರನ್ನು ನಿಯಮಾವಳಿಗಳಿಗೆ ಅನುಗುಣವಾಗಿ ನೇಮಕ ಮಾಡಲಾಗಿದೆ ಎಂದು ಟ್ವೀಟ್ ಮಾಡಿದರು.

2018: ನವದೆಹಲಿ: ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ವಿಧಾನಸಭೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಿದ ನಡವಳಿಕೆ ಗೋವಾ, ಬಿಹಾರ ಮತ್ತು ನ್ಯಾಗಾಲ್ಯಾಂಡಿನಲ್ಲಿ ಪ್ರತಿಧ್ವನಿಸಿತು. ಗೋವಾ, ಬಿಹಾರ ಮತ್ತು ನಾಗಾಲ್ಯಾಂಡಿನಲ್ಲಿ ಏಕೈಕ ದೊಡ್ಡ ಪಕ್ಷಗಳಾಗಿ ಉದಯಿಸಿದ್ದ ಕಾಂಗ್ರೆಸ್, ಆರ್ ಜೆಡಿ ಮತ್ತು ನಾಗಾ ಪೀಪಲ್ಸ್ ಫ್ರಂಟ್ ಕ್ರಮವಾಗಿ ತಮಗೆ ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಆಗ್ರಹಿಸಿದವು. ಗೋವಾ ಕಾಂಗ್ರೆಸ್ ಶಾಸಕರು ಶಾಸಕಾಂಗ ಪಕ್ಷದ ನಾಯಕ ಚಂದ್ರಕಾಂತ ಕವಳೇಕರ ನೇತೃತ್ವದಲ್ಲಿ ರಾಜ್ಯಪಾಲರಾದ ಮೃದುಲಾ ಸಿನ್ಹ ಅವರನ್ನು ಶುಕ್ರವಾರ ರಾಜಭವನದಲ್ಲಿ ಭೇಟಿ ಮಾಡಿ, ೧೬ ಶಾಸಕರೊಂದಿಗೆ ಅತ್ಯಂತ ದೊಡ್ಡ ಪಕ್ಷವಾಗಿರುವ ತಮಗೆ ಸರ್ಕಾರ ರಚನೆಗೆ ಆಹ್ವಾನ ನೀಡಬೇಕು ಎಂದು ಆಗ್ರಹಿಸಿದರು.  ಬಿಹಾರದಲ್ಲಿ ತೇಜಸ್ವಿ ಯಾದವ್ ಅವರು ಆರ್ ಜೆಡಿ, ಕಾಂಗ್ರೆಸ್, ಎಚ್ ಎಎಂ(ಎಸ್) ಮತ್ತು ಸಿಪಿಐ -ಎಂ ಎಲ್ ಶಾಸಕರ ಜೊತೆಗೆ ರಾಜಭವನಕ್ಕೆ ತೆರಳಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಬಳಿ ಏಕೈಕ ದೊಡ್ಡ ಪಕ್ಷವಾಗಿ ಮೂಡಿ ಬಂದ ಹಿನ್ನೆಲೆಯಲ್ಲಿ ತಮಗೆ ರಾಜ್ಯದಲ್ಲಿ ಸರ್ಕಾರ ರಚನೆಗೆ ಆಹ್ವಾನ ನೀಡಬೇಕು ಎಂದು ಆಗ್ರಹಿಸಿದರು.  ಇತರ ಮೂವರು ಶಾಸಕರ ಜೊತೆಗೆ ರಾಜ್ಯಪಾಲರನ್ನು ಭೇಟಿ ಮಾಡಿದ ಯಾದವ್ ಅವರು ಬಳಿಕ ’ರಾಜ್ಯಪಾಲರು ಗಂಭೀರವಾಗಿ ನಮ್ಮ ಅಹವಾಲನ್ನು ಆಲಿಸಿದರು. ನಮಗೆ ಏಕೈಕ ದೊಡ್ಡ ಪಕ್ಷವಾಗಿ ಮತ್ತು ಒಂದೇ ಗುಂಪಾಗಿ ೧೧೧ ಶಾಸಕರ ಬೆಂಬಲ ಇರುವುದಾಗಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದು ನುಡಿದರು. ತಾವು ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದ ರಾಜ್ಯಪಾಲರು ತಮ್ಮ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದಾರೆ ಎಂದು ತೇಜಸ್ವಿ ಹೇಳಿದರು. ಸಾಕಷ್ಟು ಮಂದಿ ಜೆಡಿ(ಯು) ಶಾಸಕರು ನನ್ನ ಜೊತೆಗೆ ಸಂಪರ್ಕದಲ್ಲಿದ್ದಾರೆ. ನಮಗೆ ಅತ್ಯಂತ ಸುಲಭವಾಗಿಯೇ ಸರ್ಕಾರ ರಚಿಸಲು ಬೇಕಾದ ೧೨೨ ’ಮ್ಯಾಜಿಕ್ ಸಂಖ್ಯೆಯ ಶಾಸಕರ ಬೆಂಬಲ ಲಭಿಸುವುದು ಎಂದು ಅವರು ಹೇಳಿದರು. ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಈಗ ಬಿಜೆಪಿ ಬಟಾಬಯಲಾಗಿದೆ ಎಂದು ಅವರು ನುಡಿದರು. ಕಳೆದ ವರ್ಷ ಗೋವಾ ವಿಧಾನಸಭೆಗೆ ಚುನಾವಣೆ ನಡೆದಿತ್ತು. ಬಿಜೆಪಿಯು ೧೩ ಸ್ಥಾನಗಳೊಂದಿಗೆ ಎರಡನೇ ಸ್ಥಾನದಲ್ಲಿತ್ತು. ೧೭ ಸ್ಥಾನಗಳೊಂದಿಗೆ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಉದಯಿಸಿತ್ತು. ಏನಿದ್ದರೂ, ತುರ್ತು ರಾಜಕೀಯ ಕಾರ್‍ಯಾಚರಣೆ ಮೂಲಕ ಬಿಜೆಪಿಯು ಚುನಾವಣೋತ್ತರ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು.  ೨೦೧೫ರ ಬಿಹಾರ ವಿಧಾನಸಭಾ ಚುನಾವಣೆ ಕಾಲದಲ್ಲಿ ಆರ್ ಜೆಡಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ -ಸಂಯುಕ್ತ (ಜೆಡಿ-ಯು) ಮತ್ತು ಕಾಂಗ್ರೆಸ್ ಜೊತೆಗಿನ ’ಮಹಾಮೈತ್ರಿಯ ಅಂಗಪಕ್ಷವಾಗಿತ್ತು. ನಿತೀಶ್ ಕುಮಾರ್ ಅವರ ಪಕ್ಷಕ್ಕಿಂತ ೯ ಮಂದಿ ಹೆಚ್ಚು ಸದಸ್ಯರು ಅಂದರೆ ೮೦ ಸದಸ್ಯರನ್ನು ಹೊಂದಿದ್ದರೂ, ಚುನಾವಣಾ ಪೂರ್ವ ಹೊಂದಾಣಿಕೆಯಂತೆ ಅದು ಮುಖ್ಯಮಂತ್ರಿ ಸ್ಥಾನವನ್ನು ಜೆಡಿ(ಯು) ಗೆ ಬಿಟ್ಟುಕೊಟ್ಟಿತ್ತು. ಏನಿದ್ದರೂ, ಕಳೆದ ಜುಲೈ ತಿಂಗಳಲ್ಲಿ ಶಿಬಿರ ಬದಲಾಯಿಸಿದ ನಿತೀಶ್ ಕುಮಾರ್ ಬಿಜೆಪಿಯ ೫೩ ಶಾಸಕರ ನೆರವಿನೊಂದಿಗೆ ಸರ್ಕಾರ ರಚಿಸಿದ್ದರು.  ನಾಗಾಲ್ಯಾಂಡಿನಲ್ಲಿ:   ನಾಗಾಲ್ಯಾಂಡಿನಲ್ಲಿ ಹಿಂದೆ ಬಿಜೆಪಿಯ ಮಿತ್ರ ಪಕ್ಷವಾಗಿದ್ದ ಮಾಜಿ ಮುಖ್ಯಮಂತ್ರಿ ಟಿ.ಆರ್. ಝೆಲಿಯಾಂಗ್ ಅವರ ನಾಗಾ ಪೀಪಲ್ಸ್ ಫ್ರಂಟ್ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಮುಂದಾಯಿತು.  ‘ಒಂದೇ ವಿಷಯಕ್ಕೆ ಸಂಬಂಧ ಪಟ್ಟಂತೆ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಕಾನೂನುಗಳನ್ನು ಏಕೆ ಅನ್ವಯಿಸಲಾಗುತ್ತಿದೆ? ಎಂದು ಅವರು ಪ್ರಶ್ನಿಸಿದರು.  ಬಿಜೆಪಿಯು ನಾಗಾಲ್ಯಾಂಡಿನಲ್ಲಿ ನಾಗಾ ಪೀಪಲ್ಸ್ ಫ್ರಂಟ್ ಬದಲಿಗೆ ಹೊಸ ಪಕ್ಷ ಎನ್ ಡಿಪಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು.

2018: ಬೆಂಗಳೂರು: ಬಿಜೆಪಿಯ ಗಣಿದೊರೆ ಜಿ. ಜನಾರ್ದನ ರೆಡ್ಡಿ ಮತ್ತು ರಾಯಚೂರು ಗ್ರಾಮೀಣ ಕಾಂಗ್ರೆಸ್ ಶಾಸಕ ಬಸನಗೌಡ ದಡ್ಡಾಲ ನಡುವೆ ನಡೆದದ್ದು ಎಂದು ಆಪಾದಿಸಲಾದ ದೂರವಾಣಿ ಸಂಭಾಷಣೆಯ ಧ್ವನಿ ಸುರುಳಿ (ಆಡಿಯೋ) ಒಂದನ್ನು ಕಾಂಗ್ರೆಸ್ ನಾಯಕರು ಈದಿನ ಬಿಡುಗಡೆ ಮಾಡಿದರು. ರೆಡ್ಡಿಯವರು ಕಾಂಗ್ರೆಸ್ ಶಾಸಕನ ಬಳಿ ತಾನು ಶಾಸಕನನ್ನು ನೇರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬಳಿಗೆ ಕರೆದೊಯ್ಯುವುದಾಗಿಯೂ, ಶಾಸಕನು ಕಳೆದುಕೊಂಡದ್ದಕ್ಕಿಂತ ನೂರು ಪಟ್ಟು ಗಳಿಸಲು ಸಾಧ್ಯವಾಗುವುದೆಂದೂ ಭರವಸೆ ನೀಡಿದ್ದು ಸಂಭಾಷಣೆಯ ಧ್ವನಿಸುರುಳಿಯಲ್ಲಿ ದಾಖಲಾಗಿದೆ ಎಂದು ಹೇಳಲಾಯಿತು. ಇದಕ್ಕೆ ಉತ್ತರವಾಗಿ ಕಾಂಗ್ರೆಸ್ ಶಾಸಕರದ್ದು ಎಂದು ಹೇಳಲಾದ ಧ್ವನಿಯು ’ಕಾಂಗ್ರೆಸ್ ನನ್ನನ್ನು, ಹಲವಾರು ಬಾರಿ ಸೋತಿದ್ದರೂ ಟಿಕೆಟ್ ನೀಡಿ ಶಾಸಕನನ್ನಾಗಿ ಮಾಡಿದೆ ಎಂದು ಹೇಳುವ ಮೂಲಕ ಕೊಡುಗೆಯನ್ನು ತಿರಸ್ಕರಿಸಿದ್ದು ಆಡಿಯೋದಲ್ಲಿ ವ್ಯಕ್ತವಾಯಿತು. ಆಡಿಯೋವನ್ನು ಬಿಡುಗಡೆ ಮಾಡಿದ ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ಅವರು ’ಬಿಜೆಪಿಯು ಕಾಂಗ್ರೆಸ್ ಮತ್ತು ಜೆಡಿ(ಎಸ್) ಶಾಸಕರನ್ನು ಪಕ್ಷಾಂತರ ಮಾಡಿಸಲು ಎಂತಹ ಕೊಳಕು ತಂತ್ರಗಳನ್ನು ಹೂಡುತ್ತಿದೆ ಮತ್ತು ರೆಡ್ಡಿಯಿಂದ ’ದೂರ ಸರಿದಿದ್ದಾರೆ ಎನ್ನಲಾಗಿರುವ ಬಿಜೆಪಿ ರಾಷ್ಟಾಧ್ಯಕ್ಷ ಅಮಿತ್ ಶಾ ಅವರ ಜೊತೆಗೆ ಭೇಟಿ ಮಾಡಿಸುವ ಆಮಿಷವನ್ನು ಹೇಗೆ ಒಡ್ಡಲಾಗುತ್ತದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ಉಗ್ರಪ್ಪ ನುಡಿದರು. ಜನಾರ್ದನ ರೆಡ್ಡಿ ಅವರ ನಿಕಟ ಗೆಳೆಯ ಹಾಗೂ ಬಿಜೆಪಿ ಹಿರಿಯ ನಾಯಕರಾದ ಬಿ. ಶ್ರೀರಾಮುಲು ಅವರದ್ದೇ ಆದ ನಾಯಕ ಸಮುದಾಯಕ್ಕೇ ಸೇರಿದ ದಡ್ಡಾಲ ೨೦೦೮ರಲ್ಲಿ ಬಿಜೆಪಿ ಟಿಕೆಟಿನಿಂದ ರಾಯಚೂರು ಗ್ರಾಮಿಣ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ೨೦೧೩ರಲ್ಲಿ ಶ್ರೀರಾಮುಲು ಅವರ ಬಿಎಸ್ ಆರ್ ಕಾಂಗ್ರೆಸ್ ಪಕ್ಷದ ಟಿಕೆಟ್ ಮೂಲಕ ಮಾನ್ವಿಯಲ್ಲೂ ಸ್ಪರ್ಧಿಸಿದ್ದರು. ಎರಡೂ ಬಾರಿ ಅವರು ಸೋತಿದ್ದರು. ಬಳಿಕ ಅವರು ಕಾಂಗ್ರೆಸ್ ಸೇರಿದ್ದರು.  ಸಿದ್ದರಾಮಯ್ಯ ತಂತ್ರಗಾರಿಕಾ ಸಭೆ: ಈ ಮಧ್ಯೆ ಸಿದ್ದರಾಮಯ್ಯ ಅವರು  ಬಿಜೆಪಿಯು ವಿಶ್ವಾಸ ಮತ ಯಾಚನೆ ಮಾಡುವ ಸಂದರ್ಭದಲ್ಲಿ ಅನುಸರಿಸಬೇಕಾದ ತಂತ್ರದ ಬಗ್ಗೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈದಿನ ಕಾಂಗ್ರೆಸ್ ಶಾಸಕರ ಜೊತೆ ನಿರ್ಣಾಯಕ ಸಭೆ ನಡೆಸಿದರು. ಸದನ ಪರೀಕ್ಷೆಗಿಂತ ಮುಂಚಿತವಾಗಿ ಬಿಜೆಪಿಯ ಬೇಟೆಗೆ ತಮ್ಮ ಶಾಸಕರು ಬಲಿಯಾಗದಂತೆ ಕಾಂಗ್ರೆಸ್ ಮತ್ತು ಜೆಡಿ(ಎಸ್) ತಮ್ಮ ಶಾಸಕರನ್ನು ಹೈದರಾಬಾದಿಗೆ ಕಳುಹಿಸಿದ್ದು, ಇಂದು ವಿಮಾನ ಮೂಲಕ ವಾಪಸಾಗಲಿದ್ದಾರೆ ಎಂದು ಮೂಲಗಳು ಹೇಳಿದವು. ಇದಕ್ಕೆ ಮುನ್ನ ಸಿದ್ದರಾಮಯ್ಯ ಹೈದರಾಬಾದಿಗೆ ಸಮಾಲೋಚನೆ ಸಲುವಾಗಿ ವಿಮಾನ ಮೂಲಕ ಹೈದರಾಬಾದಿಗೆ ತೆರಳಿದ್ದರು. ಅಲ್ಲಿ ಹೊಟೇಲ್ ತಾಜ್ ಕೃಷ್ಣಕ್ಕೆ ತೆರಳಿದ ಸಿದ್ದರಾಮಯ್ಯ ಅವರು ಅಲ್ಲಿಯೇ ಪಕ್ಷದ ನಾಯಕರ ಜೊತೆ ’ತಂತ್ರಗಾರಿಕಾ ಸಮಾಲೋಚನೆ ನಡೆಸಿದರು.  ವಿಶ್ವಾಸ ಮತವನ್ನು ಪರಾಭವಗೊಳಿಸುವಲ್ಲಿ ಹೇಗೆ ಸಮನ್ವಯ ಸಾಧಿಸಬೇಕು ಎಂಬ ಬಗ್ಗೆ ಹಿರಿಯ ನಾಯಕರು ಶಾಸಕರಿಗೆ ನಿರ್ದೇಶನಗಳನ್ನು ನೀಡಿದರು ಎಂದು ಹೇಳಲಾಗಿದೆ. ಸಭೆಯಲ್ಲಿ ಪಕ್ಷದ ಎಲ್ಲ ೭೬ ಶಾಸಕರೂ ಹಾಜರಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿದವು. ಇದಕ್ಕೆ ಮುನ್ನ ರಾಜ್ಯಪಾಲರ ನಡೆ ವಿರುದ್ಧ ಪಕ್ಷ ಸಂಘಟಿಸಿದ್ದ ಪ್ರತಿಭಟನಾ ಪ್ರದರ್ಶನದಲ್ಲಿ ಪಾಲ್ಗೊಂಡ ಬಳಿಕ ವರದಿಗಾರರ ಜೊತೆ ಮಾತನಾಡಿದ ಸಿದ್ದರಾಮಯ್ಯ ಬಿಜೆಪಿಯ ಶಾಸಕ ಆನಂದ ಸಿಂಗ್ ಅವರನ್ನು ಬಿಜೆಪಿಯು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ನೆರವಿನೊಂದಿಗೆ ಅಪಹರಿಸಿ ದಿಗ್ಬಂಧನದಲ್ಲಿ ಇಟ್ಟಿದೆ ಎಂದು ಆಪಾದಿಸಿದರು.
ರಾಜ್ಯಪಾಲರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಿರ್ದೇಶನ ಪ್ರಕಾರ ವರ್ತಿಸುತ್ತಿದಾರೆ ಎಂಬುದು ಅವರ ನಡವಳಿಕೆಗಳಿಂದಲೇ ಸ್ಪಷ್ಟವಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.

2018: ನವದೆಹಲಿ: ರಾಜ್ಯ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಂದ ನಡೆಯಲಿರುವ ನಿರ್ಣಾಯಕ ವಿಶ್ವಾಸ ಮತ ಯಾಚನೆಯ ಪ್ರಕ್ರಿಯೆಯನ್ನು ನೆರವೇರಿಸಲು ರಾಜ್ಯಪಾಲ ವಜುಭಾಯಿ ವಾಲಾ ಅವರು ಹಂಗಾಮಿ ಸಭಾಧ್ಯಕ್ಷರಾಗಿ ಕೆ ಜಿ ಬೋಪಯ್ಯ ಅವರ ನೇಮಕ ಮಾಡಿರುವುದನ್ನು ಕಾಂಗ್ರೆಸ್ ಪಕ್ಷವು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿತು. ಈ ಸಂಬಂಧ ಕಾಂಗ್ರೆಸ್ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಅಭಿಷೇಕ್ ಮನು ಸಿಂಘ್ವಿ  ಅವರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ಪ್ರಕರಣದ ತುರ್ತು ವಿಚಾರಣೆಗೆ ಮನವಿ ಮಾಡಿದರು. ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಅವರು ಕಾಂಗ್ರೆಸ್ ಅರ್ಜಿಯನ್ನು ಸ್ವೀಕರಿಸಿದರು. ಈ ಮಧ್ಯೆ ಬೋಪಯ್ಯ ಅವರು ರಾಜ್ಯಪಾಲರಿಂದ ಹಂಗಾಮಿ ಸಭಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.


2017: ಹೇಗ್, ನೆದರ್‌ಲೆಂಡ್‌: ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾದವ್‌ ಅವರಿಗೆ ಪಾಕಿಸ್ತಾನ ಸೇನಾ ನ್ಯಾಯಾಲಯವು ವಿಧಿಸಿದ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ತಡೆ ನೀಡಿತು. ನಿಗದಿಯಂತೆ ಈದಿನ ಮಧ್ಯಾಹ್ನ 3.30ಕ್ಕೆ ಐಸಿಜೆ ನ್ಯಾಯಮೂರ್ತಿ ರೋನಿ ಅಬ್ರಹಾಂ ಅವರು ತೀರ್ಪು ಪ್ರಕಟಿಸಿದರು. ನ್ಯಾಯಾಲಯವು ಒಟ್ಟಾರೆಯಾಗಿ, ಗಲ್ಲು ಶಿಕ್ಷೆಗೆ ತಡೆ ನೀಡಿತು. ಗಲ್ಲು ಶಿಕ್ಷೆ ವಿಧಿಸುವುದಕ್ಕೆ ಇನ್ನೂ ಕಾಲಾವಕಾಶ ಇದೆ ಎನ್ನುತ್ತಿರುವ ಪಾಕಿಸ್ತಾನದ ಪ್ರತಿವಾದ ಸಮರ್ಥನೀಯವಲ್ಲ. ಒಂದು ವೇಳೆ ಅಷ್ಟರೊಳಗೆ ಐಸಿಜೆ ತೀರ್ಪು ನೀಡದಿದ್ದರೆ ತಾನು ಗಲ್ಲು ಶಿಕ್ಷೆ ವಿಧಿಸಬಹುದು ಎನ್ನುವಂತಿದೆ ಪಾಕಿಸ್ತಾನದ ವಾದ. ಇದು ಸರಿಯಲ್ಲ. ಐಸಿಜೆ ಅಂತಿಮ ತೀರ್ಪು ಹೊರಬೀಳುವವರೆಗೂ ಪಾಕಿಸ್ತಾನ ಗಲ್ಲುಶಿಕ್ಷೆ ವಿಧಿಸುವಂತಿಲ್ಲ.  ಭಾರತ ಮತ್ತು ಕುಲಭೂಷಣ್ ಜಾಧವ್ ಅವರ ನ್ಯಾಯಯುತ ಹಕ್ಕನ್ನು ಪಾಕಿಸ್ತಾನ ಕಿತ್ತುಕೊಳ್ಳುವಂತಿಲ್ಲ.  ಹಾಗಾಗಿ ಐಸಿಜೆ ತೀರ್ಪನ್ನು ಭಾರತ ಮತ್ತು ಪಾಕಿಸ್ತಾನ ಗೌರವಿಸಬೇಕಾಗುತ್ತದೆ ಎಂಬುದು ನ್ಯಾಯಾಧೀಶರು ಸ್ಪಷ್ಟವಾಗಿ ಹೇಳಿದರು.  ಮುಖ್ಯವಾಗಿ ನ್ಯಾಯಾಧೀಶರು ಭಾರತದ ಮೇಲ್ಮನವಿ ಐಸಿಜೆ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಮನನ ಮಾಡಿಕೊಟ್ಟರು. ಅಂತಾರಾಷ್ಟ್ರೀಯ ನ್ಯಾಯಲಯದ ನ್ಯಾಯಮೂರ್ತಿ ರೋನಿ ಅಬ್ರಹಾಂ ನೇತೃತ್ವದ 16 ನ್ಯಾಯಮೂರ್ತಿಗಳ ಪೀಠ ಈ ಮಹತ್ವದ ತೀರ್ಪು ನೀಡಿತು. ಭಾರತದ ಪರ ಹರೀಶ್ ಸಾಳ್ವೆ ಹಾಗೂ ದೀಪಕ್ ಮಿತ್ತಲ್​ ವಾದ ಮಂಡಿಸಿದ್ದರು. ಕುಲಭೂಷಣ್ ಜಾಧವ್ ವಿರುದ್ಧ ಪಾಕಿಸ್ತಾನ ಗೂಢಚರ್ಯೆ ಆರೋಪ ಮಾಡಿತ್ತು. ಕುಲಭೂಷಣ್‌ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪಾಕ್‌ನಿಂದ ಹೇಳಿಕೆ ನೀಡಿತ್ತು. ಪಾಕ್‌ ಸೇನಾ ನ್ಯಾಯಾಲಯದಿಂದ ಕುಲಭೂಷಣ್‌ಗೆ ಗಲ್ಲುಶಿಕ್ಷೆ ಪ್ರಕಟವಾಗಿತ್ತು. ಪಾಕಿಸ್ತಾನದ ಕ್ರಮ ಖಂಡಿಸಿ ಭಾರತ ಐಸಿಜೆ ಮೊರೆ ಹೋಗಿತ್ತು. ‘ಜಾದವ್‌ ಅವರನ್ನು ಇರಾನ್‌ನಿಂದ ಅಪಹರಿಸಿರುವ ಪಾಕಿಸ್ತಾನ ಅವರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸಿ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಪಾಕಿಸ್ತಾನ ಸೇನಾ ನ್ಯಾಯಾಲಯದ ಈ ತೀರ್ಪು ವಿಯೆನ್ನಾ ಒಪ್ಪಂದ ಹಾಗೂ ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ’ ಎಂದು ಭಾರತ ಪರ ವಕೀಲ ಹರೀಶ್‌ ಸಾಳ್ವೆ ಅವರು ವಾದಿಸಿದ್ದರು. ಪಾಕಿಸ್ತಾನದ ಪರ ವಾದ ಮಂಡಿಸಿದ್ದ ಕ್ಯೂ.ಸಿ. ಖಾವರ್‌ ಖುರೇಶಿ, ‘ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸುವ ಅಗತ್ಯವೇ ಇರಲಿಲ್ಲ. ಇದು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಪ್ರಕರಣ. ರಾಷ್ಟ್ರೀಯ ಭದ್ರತೆ ವಿಚಾರವನ್ನು ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಮಾನಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ‘ಜಾದವ್‌ ಅಪರಾಧಿ ಎಂಬುದನ್ನು ಸಾಬೀತುಪಡಿಸಲು ಪಾಕಿಸ್ತಾನದ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಜಾದವ್‌ ತಪ್ಪೊಪ್ಪಿಗೆ ವಿಡಿಯೊ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯ’ ಎಂದು ಖುರೇಶಿ ವಾದಿಸಿದ್ದರು. ಕುಲಭೂಷಣ್‌ ಜಾದವ್‌ ಪ್ರಕರಣದ ವಿಚಾರಣೆಯ ಮಾಹಿತಿಯನ್ನು ಭಾರತದೊಂದಿಗೆ ಹಂಚಿಕೊಂಡಿದ್ದಾಗಿ ಪಾಕಿಸ್ತಾನವು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ವಾದಿಸಿತ್ತು. ಐಸಿಜೆ ತೀರ್ಪಿಗೆ ಪ್ರತಿಕ್ರಿಯಿಸಿದ ಪಾಕಿಸ್ತಾನ ವಿದೇಶಾಂಗ ಇಲಾಖೆಯ ವಕ್ತಾರರು, ‘ಜಾದವ್‌ ಪ್ರಕರಣದಲ್ಲಿ ಭಾರತವು ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಸತ್ಯವನ್ನು ಮರೆಮಾಚಲು ಯತ್ನಿಸುತ್ತಿದೆ. ಜಾದವ್‌ ವಿರುದ್ಧ ಇರುವ ಪ್ರಮುಖ ಸಾಕ್ಷ್ಯಾಧಾರಗಳನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು’ ಎಂದು ಹೇಳಿದರು. ‘ಐಸಿಜೆ ಆದೇಶವು ಕುಲಭೂಷಣ್‌ ಜಾದವ್‌ ಅವರ ಕುಟುಂಬ ಸದಸ್ಯರಿಗೆ ಹಾಗೂ ಭಾರತದ ಜನತೆಗೆ ನೆಮ್ಮದಿ ತಂದಿದೆ’ ಎಂದು ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿದರು.
2017: ನವದೆಹಲಿ: ತ್ರಿವಳಿ ತಲಾಖ್‌ನ ಸಾಂವಿಧಾನಿಕ ಮಾನ್ಯತೆ ಕುರಿತಂತೆ  ಅರ್ಜಿಗಳ ವಿಚಾರಣೆ
ಸುಪ್ರೀಂಕೋರ್ಟ್‌ನಲ್ಲಿ ಮುಕ್ತಾಯವಾಗಿದ್ದು ತೀರ್ಪನ್ನು ಕಾಯ್ದಿರಿಸಲಾಯಿತು. ಮುಖ್ಯನ್ಯಾಯಮೂರ್ತಿ ಜೆ.ಎಸ್‌.ಖೇಹರ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠದಲ್ಲಿ ತ್ರಿವಳಿ ತಲಾಖ್‌  ಕುರಿತಂತೆ 6 ದಿನಗಳ ಕಾಲ ವಿಚಾರಣೆ ನಡೆಯಿತು. ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ವಿವಿಧ ಅರ್ಜಿಗಳನ್ನು  ವಿಚಾರಣೆ ನಡೆಸಿದ ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತು.


2017: ನವದೆಹಲಿ: 2014ನೇ ಸಾಲಿನ ಇಂದಿರಾ ಗಾಂಧಿ ಶಾಂತಿ ಪಾರಿತೋಷಕ ಪ್ರಶಸ್ತಿಯನ್ನು
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಗೆ ಪ್ರದಾನ ಮಾಡಲಾಯಿತು. ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಇಸ್ರೋದ ಮುಖ್ಯಸ್ಥ ಕಿರಣ್ ಕುಮಾರ್ ಅವರು ತಮ್ಮ ತಂಡದ ಜೊತೆ ಪ್ರಶಸ್ತಿ ಸ್ವೀಕರಿಸಿದರು. 2014ರಲ್ಲಿ ಜ್ಯೂರಿಯಾಗಿದ್ದ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಇಂದಿರಾ ಗಾಂಧಿ ಶಾಂತಿ ಪಾರಿತೋಷಕ  ಪ್ರಶಸ್ತಿ  ಘೋಷಿಸಿದ್ದು, ಪ್ರಶಸ್ತಿಯು ಸ್ಮರಣಿಕೆ ಹಾಗೂ 1 ಕೋಟಿ ರೂಪಾಯಿ ನಗದನ್ನು ಒಳಗೊಂಡಿದೆ.  ಇಸ್ರೋ 2014ರಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿ ಸಮಾರಂಭದಲ್ಲಿ ಅಮೆರಿಕದ ಮಾಜಿ ರಾಷ್ಟ್ರಧ್ಯಕ್ಷ ಜಿಮ್ಮಿ ಕಾರ್ಟರ್, ಜರ್ಮನ್ ಚಾನ್ಸಲರ್ ಏಂಜೆಲಾ ಮರ್ಕೆಲಾ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು. 

2017: ನವದೆಹಲಿ: ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ (60) ಅವರು ಈದಿನ
ನವದೆಹಲಿಯಲ್ಲಿ  ನಿಧನರಾದರು. 2009ರಿಂದ ರಾಜ್ಯಸಭಾ ಸದಸ್ಯರಾಗಿದ್ದ ಅವರು ಪರಿಸರ ಮತ್ತು ಅರಣ್ಯ ಖಾತೆಯ ಸಚಿವರಾಗಿ ಕಳೆದ ವರ್ಷ ಅಧಿಕಾರ ಸ್ವೀಕರಿಸಿದ್ದರು. ಅವರು ಮಧ್ಯಪ್ರದೇಶದ ಬರ್‌ನಗರ್‌ನಲ್ಲಿ ಜನಿಸಿದ್ದರು. ‘ಗೌರವಾನ್ವಿತ ಸಹೋದ್ಯೋಗಿ, ಸ್ನೇಹಿತ, ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರ ನಿಧನದಿಂದ ಆಘಾತವಾಗಿದೆ. ಸಂತಾಪಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದರು.  ‘ದವೆ ಅವರೊಬ್ಬ ಉತ್ತಮ ಸಾರ್ವಜನಿಕ ಸೇವಕ. ಪರಿಸರ ರಕ್ಷಣೆಯ ಬಗ್ಗೆ ಅವರಿಗೆ ಅತೀವ ಕಾಳಜಿ ಇತ್ತು. ನಿನ್ನೆ ಸಂಜೆಯವರೆಗೂ ಅವರ ಜತೆ ಇದ್ದೆ. ಪ್ರಮುಖ ವಿಷಯಗಳ ಬಗ್ಗೆ ಅವರ ಜತೆ ಚರ್ಚಿಸಿದ್ದೆ. ಅವರ ನಿಧನದಿಂದ ನನಗೆ ವೈಯಕ್ತಿಕವಾಗಿಯೂ ನಷ್ಟವಾಗಿದೆ’ ಎಂದು ಮೋದಿ ಹೇಳಿದರು.
2009: ಕೊನೆಗೂ ಶ್ರೀಲಂಕಾದಲ್ಲಿ ಎಲ್‌ಟಿಟಿಇ ರಕ್ತಸಿಕ್ತ ಅಧ್ಯಾಯಕ್ಕೆ ತೆರೆಬಿದ್ದಿತು. ಮೂರು ದಶಕಗಳ
ಕಾಲ ಈ ಪುಟ್ಟ ದ್ವೀಪದಲ್ಲಿ ಅಶಾಂತಿಯ ಉರಿಗೆ ತಿದಿಯೊತ್ತುತ್ತಿದ್ದ ವೇಲುಪಿಳ್ಳೈ ಪ್ರಭಾಕರನ್ (54) ಸೇನೆಯ ಗುಂಡಿಗೆ ಬಲಿಯಾದ. ಈವರೆಗೆ 70ಸಾವಿರ ಮಂದಿಯ ಸಾವಿಗೆ ಕಾರಣವಾದ ಜಗತ್ತಿನ ಕುಖ್ಯಾತ ಭಯೋತ್ಪಾದಕ ಸಂಘಟನೆಯ ಮುಖಂಡ ಪ್ರಭಾಕರನ್ ಸತ್ತಿರುವುದನ್ನು ಶ್ರೀಲಂಕಾ ಸೇನೆ ಖಚಿತ ಪಡಿಸಿತು. 'ಎಲ್‌ಟಿಟಿಇಯ ಮುಖ್ಯಸ್ಥ ಪ್ರಭಾಕರನ್ ಸೇರಿದಂತೆ ಆತನ ಜತೆಗಿದ್ದ ಎಲ್ಲಾ ಪ್ರಮುಖ ಕಮಾಂಡರ್‌ಗಳೂ ಸೇನೆಯ ಗುಂಡಿಗೆ ಬಲಿಯಾಗಿದ್ದಾರೆ' ಎಂದು ಸೇನೆ ಪ್ರಕಟಿಸಿತು. ಸಂಪೂರ್ಣವಾಗಿ ಎಲ್‌ಟಿಟಿಇ ನಾಯಕತ್ವವನ್ನು ಅಂತ್ಯಗೊಳಿಸಿದ ಶ್ರೀಲಂಕಾ ಸೇನಾಪಡೆಯ ಮೂರು ವಿಭಾಗಗಳ ಮುಖ್ಯಸ್ಥರಿಗೆ ಸರ್ಕಾರ ವಿಶೇಷ ಬಡ್ತಿಗಳನ್ನು ಪ್ರಕಟಿಸಿತು. ಜಾಫ್ನಾದ ಹಿಂದೂ ಕುಟುಂಬದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರ ಪುತ್ರನಾಗಿ 1954ರಲ್ಲಿ ಜನಿಸಿದ ಪ್ರಭಾಕರನ್ ಶಾಲೆಯಲ್ಲಿ ಕಲಿತದ್ದು ಕಡಿಮೆಯೇ. 1972ರಲ್ಲಿ ತಮಿಳ್ ನ್ಯೂ ಟೈಗರ್ಸ್‌ ಸಂಘಟನೆ ಕಟ್ಟಿದ. ಅದೇ 1976ರಲ್ಲಿ ಎಲ್‌ಟಿಟಿಇ ಆಗಿ ರೂಪಾಂತರಗೊಂಡಿತು. ಆ ನಂತರ ನಡೆದ ಘಟನೆಗಳೆಲ್ಲವೂ ಈಗ ಇತಿಹಾಸ.
ಲಂಕಾ ನೆಲದಲ್ಲಿ ಎಲ್‌ಟಿಟಿಇ ಹೋರಾಟದ ಹೆಜ್ಜೆಗಳು...
ಮೂರೂವರೆ ದಶಕಗಳಿಂದ ಶ್ರೀಲಂಕಾದ ನೆಲದಲ್ಲಿ ನಡೆದ 'ತಮಿಳು ರಾಷ್ಟ್ರೀಯವಾದಿ' ಹೋರಾಟದ ಕೆಲವು ಪ್ರಮುಖ ಘಟನೆಗಳು ಇಲ್ಲಿವೆ.

1972 : ಶ್ರೀಲಂಕಾ ಆಗಿ ಬದಲಾದ ಸಿಲೋನ್. ರಾಷ್ಟ್ರದ ಧಾರ್ಮಿಕ ಆಚರಣೆಯಲ್ಲಿ ಬೌದ್ಧ ಧರ್ಮಕ್ಕೆ ಪ್ರಮುಖ ಸ್ಥಾನ. ಪರಿಣಾಮ ಲಂಕಾದಲ್ಲಿ ತಮಿಳರಿಗೆ ಅಲ್ಪಸಂಖ್ಯಾತರ ಪಟ್ಟ. ನಂತರ ತಮಿಳರಿಗೆ 'ತಾವು ಅಳಿವಿನಂಚಿನಲ್ಲಿದ್ದೇವೆ' ಎಂಬ ಭಯ ಉದ್ಭವ.

1976: ವೇಲುಪಿಳ್ಳೈ ಪ್ರಭಾಕರನ್ ಅವರಿಂದ ಎಲ್‌ಟಿಟಿಇ ಸ್ಥಾಪನೆ

1977: ಚುನಾವಣೆಯಲ್ಲಿ ಉತ್ತರ ಲಂಕಾದ ತಮಿಳು ಬಹುಸಂಖ್ಯಾತರಿರುವ ಎಲ್ಲ ಕ್ಷೇತ್ರಗಳಲ್ಲೂ ತಮಿಳು ಪ್ರಜಾಸತ್ತಾತ್ಮಕ ಸ್ವತಂತ್ರ ರಂಗದ(ಪ್ರತ್ಯೇಕತಾ ಪಕ್ಷ) ಅಭ್ಯರ್ಥಿಗಳಿಗೆ ಜಯ. ತಮಿಳು ವಿರೋಧಿಗಳ ಪ್ರತಿಭಟನೆ. ನೂರಾರು ತಮಿಳರ ಸಾವು.

1981: ಲಂಕಾ ತಮಿಳರ ಸಾಂಸ್ಕೃತಿಕ ರಾಜಧಾನಿ, ಜಾಫ್ನಾದ ಸಾರ್ವಜನಿಕ ಗ್ರಂಥಾಲಯಕ್ಕೆ ಬೆಂಕಿ, ಪರಿಣಾಮ ತಮಿಳು ಸಮುದಾಯದಲ್ಲಿ ಅಸಮಾಧಾನದ ಹೊಗೆ.

1983: ಎಲ್‌ಟಿಟಿಇಯವರ ಹಠಾತ್ ದಾಳಿಗೆ 13 ಲಂಕಾ ಸೈನಿಕರು ಬಲಿ. ಉತ್ತರ ಶ್ರೀಲಂಕಾದಾದ್ಯಂತ ತಮಿಳು ವಿರೋಧಿ ಸೇನಾ ಕಾರ್ಯಾಚರಣೆ ಆರಂಭ. ತಮಿಳು ಸಮುದಾಯದ ನೂರಾರು ನಾಗರಿಕರ ಬಲಿ.

1985: ಶ್ರೀಲಂಕಾ ಸರ್ಕಾರ ಹಾಗೂ ಎಲ್‌ಟಿಟಿಇ ನಡುವೆ ವಿಫಲಗೊಂಡ ಪ್ರಥಮ ಶಾಂತಿ ಮಾತುಕತೆ.

1987: ಎಲ್‌ಟಿಟಿಇಯವರನ್ನು ಉತ್ತರದ ಜಾಫ್ನಾ ನಗರಕ್ಕೆ ಹಿಮ್ಮೆಟ್ಟಿಸಿದ ಲಂಕಾ ಪಡೆಗಳು. ಉತ್ತರ ಮತ್ತು ಪಶ್ಚಿಮ ಭಾಗದಲ್ಲಿನ ತಮಿಳು ಬಹುಸಂಖ್ಯಾತಪ್ರದೇಶಗಳಲ್ಲಿ 'ಹೊಸ ಮಂಡಳಿ' ಸ್ಥಾಪನೆ ಒಪ್ಪಂದಕ್ಕೆ ಸಹಿ. ಭಾರತದ ಶಾಂತಿಪಾಲನಾ ಪಡೆ ಸ್ಥಾಪನೆ.

1990: ಶ್ರೀಲಂಕಾ ತೊರೆದ ಭಾರತದ ಶಾಂತಿಪಾಲನಾ ಪಡೆ. ಶ್ರೀಲಂಕಾ ಸೇನಾಪಡೆ ಹಾಗೂ ತಮಿಳು ಉಗ್ರರ ನಡುವೆ ಘರ್ಷಣೆ, ಹಿಂಸಾಚಾರ.

1991: ಚೆನ್ನೈ ಸಮೀಪದ ಪೆರಂಬದೂರಿನಲ್ಲಿ ಆತ್ಮಾಹುತಿ ದಾಳಿ ನಡೆಸಿ ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ. ಹತ್ಯೆಗೆ ಎಲ್‌ಟಿಟಿಇ ಕಾರಣ.

1993: ಎಲ್‌ಟಿಟಿಇಯ ಆತ್ಮಾಹುತಿದಳದ ಸದಸ್ಯರಿಂದ ಶ್ರೀಲಂಕಾ ಅಧ್ಯಕ್ಷ ಪ್ರೇಮದಾಸ ಅವರ ಹತ್ಯೆ.

1994: ಲಂಕಾ ಅಧ್ಯಕ್ಷೆಯಾಗಿ ಚಂದ್ರಿಕಾ ಕುಮಾರತುಂಗಾ ಅಧಿಕಾರ ಸ್ವೀಕಾರ. ಎಲ್‌ಟಿಟಿಇ ಜೊತೆ ಮಾತುಕತೆ ಪುನರಾರಂಭ.

2002: ನಾರ್ವೆಯ ಮದ್ಯಸ್ಥಿಕೆಯಲ್ಲಿ ಶ್ರೀಲಂಕಾ- ಎಲ್‌ಟಿಟಿಇ ನಡುವೆ ಕದನ ವಿರಾಮಕ್ಕೆ ಚಾಲನೆ.

2004: ಬಂಡುಕೋರ ಚಳವಳಿಯಲ್ಲಿ ಒಡಕು. ಒಡೆದ ಪಾಳೆಯಕ್ಕೆ ತಮಿಳು ಉಗ್ರರ ಕಮಾಂಡರ್ ಕರುಣಾ ನಾಯಕತ್ವ. ತನ್ನ ಬೆಂಬಲಿಗರ ಜೊತೆ ಭೂಗತ ಸ್ಥಳಕ್ಕೆ ಪಯಣ.

2005: ಎಲ್‌ಟಿಟಿಇ ಉಗ್ರರಿಂದ ವಿದೇಶಾಂಗ ಸಚಿವ ಲಕ್ಷ್ಮಣ್ ಕದಿರ್‌ಗಮರ್ ಅವರ ಹತ್ಯೆ.

2008, ಜನವರಿ : ಕದನ ವಿರಾಮ ಹಿಂತೆಗೆದುಕೊಂಡ ಶ್ರೀಲಂಕಾ ಸರ್ಕಾರ.

2008, ಜುಲೈ: ಉತ್ತರದ ವಿಡತ್ತಲ್‌ತ್ತಿವು ಭಾಗದಲ್ಲಿನ ತಮಿಳು ಉಗ್ರರ ಪ್ರಮುಖ ನೌಕಾ ನೆಲೆಯನ್ನು ವಶಪಡಿಸಿಕೊಂಡಿರುವುದಾಗಿ ಲಂಕಾ ಪಡೆಗಳ ಘೋಷಣೆ.

2009, ಜನವರಿ: ಎಲ್‌ಟಿಟಿಇ ಉಗ್ರರ ರಾಜಧಾನಿ ಕಿಲಿನೋಚ್ಚಿ ವಶಪಡಿಸಿಕೊಂಡ ಲಂಕಾಪಡೆಗಳು.

2009, ಏಪ್ರಿಲ್: ಎಲ್‌ಟಿಟಿಇಯವರ ಹಿಡಿತದಲ್ಲಿದ್ದ ಮುಲ್ಲೈತ್ತಿವು ಜಿಲ್ಲೆ ಲಂಕಾಪಡೆಗಳ ವಶಕ್ಕೆ.

2009, ಮೇ 16: ಎಲ್‌ಟಿಟಿಯವರನ್ನು ಲಂಕಾಪಡೆಗಳು ಮಣಿಸಿರುವುದಾಗಿ ಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಘೋಷಣೆ.

2009, ಮೇ 17: ಸೋಲೊಪ್ಪಿಕೊಂಡ ಎಲ್‌ಟಿಟಿಇ ಉಗ್ರರು.

2009, ಮೇ 18: ಪ್ರಭಾಕರನ್, ಪೊಟ್ಟು ಅಮ್ಮನ್, ಸೂಸೈ, ಪ್ರಭಾಕರನ್ ಪುತ್ರ ಚಾರ್ಲ್ಸ್ ಆಂಟನಿ ಸೇರಿದಂತೆ ಪ್ರಮುಖ ಎಲ್‌ಟಿಟಿ ನಾಯಕರ ಹತ್ಯೆ. ಶ್ರೀಲಂಕಾದಾದ್ಯಂತ ಸಂಭ್ರಮಾಚರಣೆ
2009: ಪಕ್ಷದ ಸಂಸದೀಯ ಮಂಡಲಿಯ ಹಾಗೂ ಇತರ ಮುಖಂಡರ ಕೋರಿಕೆಯಂತೆ ಬಿಜೆಪಿಯ ಹಿರಿಯ ಮುಖಂಡ ಎಲ್. ಕೆ. ಅಡ್ವಾಣಿ ಅವರು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಕಾರ್ಯ ನಿರ್ವಹಿಸಲು ಒಪ್ಪಿಕೊಂಡರು. ಪಕ್ಷದ ಸಂಸದೀಯ ಮಂಡಲಿಯ ಮುಖ್ಯಸ್ಥರಾಗಿ ಮುಂದುವರಿಯಲು ಅಡ್ವಾಣಿ ಅವರು ಒಪ್ಪಿಕೊಂಡಿರುವುದರಿಂದ ಅವರೇ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯುತ್ತಾರೆ ಎಂದು ಅಧ್ಯಕ್ಷ ರಾಜನಾಥ್ ಸಿಂಗ್ ತಿಳಿಸಿದರು.

2009: ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಹಾಗೂ ಮೈಸೂರು ಅರಸರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಷ್ಟಾಂಗ ಯೋಗ ಗುರು ಕೃಷ್ಣ ಪಟ್ಟಾಭಿ ಜೋಯಿಸ್ (94) ಈದಿನ ಮಧ್ಯಾಹ್ನ 2.30ಕ್ಕೆ ಮೈಸೂರಿನಲ್ಲಿ ನಿಧನರಾದರು. 'ಯೋಗ ಗುರು' ಎಂದೇ ಹೆಸರಾಗಿದ್ದ ಕೃಷ್ಣ ಪಟ್ಟಾಭಿ ಜೋಯಿಸರು ಭಾರತೀಯರು ಸೇರಿದಂತೆ ಸಾವಿರಾರು ವಿದೇಶಿಗರಿಗೆ ಅಷ್ಟಾಂಗ ಯೋಗವನ್ನು ಕಲಿಸುವ ಮೂಲಕ ಕೀರ್ತಿ ಗಳಿಸಿದ್ದರು. ಜೋಯಿಸರು ಮೂಲತಃ ಹಾಸನ ಸಮೀಪದ ಕೌಶಿಕ ಗ್ರಾಮದಲ್ಲಿ 1915ರ ಬುದ್ಧ ಪೂರ್ಣಿಮಾ ದಿನ ಜನಿಸಿದ್ದರು. ತಮ್ಮ 14 ನೇ ವಯಸ್ಸಿಗೆ ಯೋಗ ಗುರು ಕೃಷ್ಣಮಾಚಾರ್ ಅವರಿಂದ ಯೋಗ ಕಲಿಯಲು ಆರಂಭಿಸಿದರು. ಅಂತರ ಗುರುಗಳ ಆಸೆಯಂತೆ ಸಂಪ್ರದಾಯಬದ್ಧವಾಗಿಯೇ ಅಷ್ಟಾಂಗ ಯೋಗವನ್ನು ಜಗತ್ತಿನಾದ್ಯಂತ ಪ್ರಚುರಪಡಿಸಿದರು.

2009: ಎತ್ತರವಿದ್ದಷ್ಟೂ ಹೆಚ್ಚು ಗಳಿಸುತ್ತೀರಿ; ದಪ್ಪವ್ದಿದರೆ ಚಿಂತೆ ಬೇಡ ನಿಮ್ಮ ಪರ್ಸಿನ ಮೇಲೇನೂ ಅದು ಪರಿಣಾಮ ಬೀರದು!-ಹೀಗೆಂದು ಆಸ್ಟ್ರೇಲಿಯಾದ ಸಂಶೋಧಕರು ಸಿಡ್ನಿಯಲ್ಲಿ ಬಹಿರಂಗಪಡಿಸಿದರು. ಸರಾಸರಿಗಿಂತ ಐದು ಸೆಂಟಿಮೀಟರ್ ಹೆಚ್ಚಿದ್ದರೆ ನೌಕರರ ಸಂಬಳವೂ ಸರಾಸರಿ ಶೇ 1.5ರಷ್ಟು ಹೆಚ್ಚಬಹುದು ಎಂದು ತಾವು ಕಂಡು ಹಿಡಿದಿರುವುದಾಗಿ ಆಸ್ಟ್ರೇಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯದ ಆಂಡ್ರ್ಯೂ ಲೇ ಮತ್ತು ಸಿಡ್ನಿ ವಿಶ್ವವಿದ್ಯಾಲಯದ ಮೈಕೆಲ್ ಕಾರ್ಟ್ ಹೇಳಿದರು. 'ಈ ಪರಿಣಾಮವು ಮಹಿಳೆ ಮತ್ತು ಪುರುಷ ಇಬ್ಬರಲ್ಲಿಯೂ ಕಂಡುಬರುತ್ತದೆಯಾದರೂ ಪುರುಷರಲ್ಲಿ ಹೆಚ್ಚು ಪರಿಣಾಮಕಾರಿ' ಎಂದು ಲೇ ಅಭಿಪ್ರಾಯ.

2008: ಬಿಹಾರದಲ್ಲಿ ಮರಗಳನ್ನು ಕಡಿಯುವುದು ನಿಷಿದ್ಧ. ಅಂತ್ಯ ಸಂಸ್ಕಾರಕ್ಕಾಗಿ ಬಡವರು ಏನು ಮಾಡಬೇಕು? ಅದಕ್ಕೆ ದನ ಕರುಗಳ ಸಗಣಿಯಿಂದ ಮಾಡಿದ ಒಣ ಬೆರಣಿ (ಕುಳ್ಳು) ಬಳಸಿ ದೇಹಕ್ಕೆ ಚಿತೆ ಹತ್ತಿಸುವ ಉಪಾಯವನ್ನು ಬಿಹಾರಿನ ಬಡವರು ಕಂಡುಕೊಂಡದ್ದು ಬೆಳಕಿಗೆ ಬಂತು. ಐದಡಿ ಆಳ ನೆಲ ಅಗಿದು ಅದರಲ್ಲಿ ಸುತ್ತಲೂ ಒಣಗಿದ ಬೆರಣಿಗಳನ್ನು ಜೋಡಿಸಲಾಗುತ್ತದೆ. ಕೆಳಗೊಂದು ಪದರು ಬೆರಣಿ ಜೋಡಿಸಿ ಅದರ ಮೇಲೆ ಮೃತದೇಹ ಮಲಗಿಸಲಾಗುತ್ತದೆ. ಮೇಲೆ ಮತ್ತೆರಡು ಪದರು ಬೆರಣಿಗಳನ್ನು ಜೋಡಿಸಿ ಬುಡಕ್ಕೆ ಚಿತೆ ಇಡಲಾಗುತ್ತದೆ. ಸಾಮಾನ್ಯವಾಗಿ ದೇಹಕ್ಕೆ ಚಿತೆ ಹತ್ತಿಸುವ ಅಂತ್ಯಸಂಸ್ಕಾರ ಪದ್ಧತಿಯಲ್ಲಿ ಒಂದು ದೇಹಕ್ಕೆ ಕನಿಷ್ಠ 290 ಕೆ.ಜಿ ಕಟ್ಟಿಗೆ ಬೇಕು. ಆದರೆ ನೆರೆಹಾವಳಿಯಿಂದ ತತ್ತರಿಸಿದ ಬಿಹಾರಿನ ಜನತೆಗೆ ಅದರಲ್ಲೂ ಕಡುಬಡವರಿಗೆ ಅಷ್ಟೊಂದು ಕಟ್ಟಿಗೆ ವ್ಯಯಿಸುವುದು ಮತ್ತು ಅದಕ್ಕೆ ದುಡ್ಡು ಹೊಂದಿಸುವುದು ಕಷ್ಟ. ಅದರ ಬದಲು ತಮ್ಮದೇ ದನಕರುಗಳ ಸಗಣಿ ಬಳಸಿ ಬೆರಣಿ ಮಾಡಿ ಅದನ್ನು ಅಂತ್ಯಸಂಸ್ಕಾರಕ್ಕೆ ಬಳಸುವುದು ಸುಲಭ ಎಂಬುದನ್ನು ಇಲ್ಲಿನ ಜನ ಲೆಕ್ಕ ಹಾಕಿ ಕಂಡುಕೊಂಡರು. ಉತ್ತರ ಕರ್ನಾಟಕದಲ್ಲೂ ಅಂತ್ಯಸಂಸ್ಕಾರ ಮಾಡುವಾಗ ಚಿತೆಗೆ ಕುಳ್ಳು (ಬೆರಣಿ) ಬಳಸುವ ಪದ್ಧತಿ ಚಾಲ್ತಿಯಲ್ಲಿದೆ.

2008: ಬೆಂಗಳೂರು ನಗರದ ದೇವರಜೀವನಹಳ್ಳಿ, ಕೋಲಾರ ಜಿಲ್ಲೆಯ ನರಸಾಪುರ, ಟೇಕಲ್, ಬೆಳ್ಳೂರು, ತಮಿಳುನಾಡಿನ ಹೊಸೂರಿನಲ್ಲಿ ಸಂಭವಿಸಿದ ಪ್ರತ್ಯೇಕ ಕಳ್ಳಬಟ್ಟಿ ಸಾರಾಯಿ ದುರಂತಗಳು 30 ಜೀವಗಳನ್ನು ಬಲಿ ತೆಗೆದುಕೊಂಡವು. 33 ಮಂದಿ ಅಸ್ವಸ್ಥರಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಾದರು.

2008: ಚಿತ್ರದುರ್ಗಕ್ಕೆ 15 ಕಿ.ಮೀ. ದೂರದ ಕುರುಮರಡಿಕೆರೆ ಬಳಿ ಕ್ರಿ.ಪೂ. 2,500 ವರ್ಷಗಳಷ್ಟು ಹಿಂದೆ, ನವಶಿಲಾಯುಗದ ಕಾಲದಲ್ಲಿ ಬಾಳಿ ಬದುಕಿದ್ದ ಮಾನವ ಬಳಸಿದ ಕಲ್ಲಿನ ಕೊಡಲಿ ಪತ್ತೆಯಾಯಿತು. ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಾಪಕ ಡಾ.ಎಸ್.ವೈ. ಸೋಮಶೇಖರ್ ಹಾಗೂ ಅದೇ ವಿಭಾಗದ ಸಂಶೋಧಕರಾದ ಎಸ್. ನಾಗರಾಜಪ್ಪ ಮತ್ತು ಬಿ.ಟಿ. ಚಾರುಲತಾ ಕುರುಮರಡಿಕೆರೆ ಸುತ್ತಮತ್ತ ನಡೆಸಿದ ಕ್ಷೇತ್ರಕಾರ್ಯದಲ್ಲಿ ಕೊಡಲಿ ದೊರಕಿತು. ಇದರಿಂದ ಇಲ್ಲಿ ಸುಮಾರು 5,000 ವರ್ಷಗಳ ಹಿಂದೆ ಮಾನವ ವಾಸಿಸುತಿದ್ದುದು ಬೆಳಕಿಗೆ ಬಂತು.

2008: ಪಶ್ಚಿಮ ಬಂಗಾಳದಲ್ಲಿ ಪಂಚಾಯ್ತಿ ಚುನಾವಣೆಯ ಮೂರನೇ ಹಾಗೂ ಅಂತಿಮ ಹಂತದ ಮತದಾನ ಸಂದರ್ಭದಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಎಂಟು ಜನರ ಹತ್ಯೆಯಾಗಿ 25ಕ್ಕೂ ಹೆಚ್ಚು ಜನರು ಗಾಯಗೊಂಡರು.

2008: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದ ಪರಿಣಾಮ 12 ಕೂಲಿ ಕಾರ್ಮಿಕರು ಸಾವನ್ನಪ್ಪಿ ಇತರ 20ಕ್ಕೂ ಹೆಚ್ಚು ಕಾರ್ಮಿಕರು ಗಾಯಗೊಂಡ ಘಟನೆ ಗುಡಗಾಂವದ ಫರೂಕ್ ನಗರ ತಾಲ್ಲೂಕಿನ ಖೇಡಕ್ ಗ್ರಾಮದಲ್ಲಿ ನಡೆಯಿತು.

2008: ಪಾಕಿಸ್ಥಾನದ ಕರಾಚಿ ನಗರದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಮತ್ತೆ ಇಬ್ಬರು ದರೋಡೆಕೋರರು ಜೀವ ತೆತ್ತರು. ಒಂದೇ ವಾರದಲ್ಲಿ ಇಂತಹ ಘಟನೆ ನಡೆದದ್ದು ಇದು ಎರಡನೇ ಬಾರಿ. ಈ ವಾರದ ಆರಂಭದಲ್ಲಿ ಮೂವರು ದರೋಡೆಕೋರರನ್ನು ಸಾರ್ವಜನಿಕರು ಬೆಂಕಿ ಹಚ್ಚಿ ದಹಿಸಿದ ಘಟನೆ ನಡೆದಿತ್ತು. ಈದಿನ ಸುಮಾರು 20 ಶಸ್ತ್ರಧಾರಿ ದರೋಡೆಕೋರರು ಬಸ್ ಪ್ರಯಾಣಿಕರನ್ನು ಲೂಟಿ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದರು. ಅವರನ್ನು ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಇವರಲ್ಲಿ ತೀವ್ರವಾಗಿ ಸುಟ್ಟುಹೋಗಿದ್ದ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

2008: ರಾನ್ ಬ್ಯಾಕ್ಸಿ ಮುಖ್ಯಸ್ಥ ಮಾಲ್ವಿಂದರ್ ಮೋಹನ್ ಸಿಂಗ್ ಸೇರಿದಂತೆ ಐವರು ಭಾರತೀಯರು ವಿಶ್ವ ಔಷಧ ಕ್ಷೇತ್ರದಲ್ಲಿ ಪ್ರಭಾವಿಗಳಾಗಿದ್ದಾರೆ ಎಂದು ಇಂಗ್ಲೆಂಡಿನ ನಿಯತಕಾಲಿಕ ವರದಿ ಮಾಡಿತು. ಒಟ್ಟು 40 ಜನ ಪ್ರಭಾವಿಗಳ ಪೈಕಿ ಎಂ. ವೆಂಕಟೇಶ್ವರಲು (ಮಾಜಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) 16ನೇ ಸ್ಥಾನದಲ್ಲಿ, ರಾನ್ ಬಾಕ್ಸಿ ಮುಖ್ಯಸ್ಥ ಮಾಲ್ವಿಂದರ್ ಮೋಹನ್ ಸಿಂಗ್ (21ನೇ ಸ್ಥಾನ), ಭಾರತೀಯ ಔಷಧಿ ಉತ್ಪಾದಕರ ಸಂಘದ ಅಧ್ಯಕ್ಷ ರಂಜಿತ್ ಶಹಾನಿ (24ನೇ ಸ್ಥಾನ), ಅರವಿಂದ ಫಾರ್ಮ್ ಅಧ್ಯಕ್ಷ ರಾಮ ಪ್ರಸಾದ್ ರೆಡ್ಡಿ (35ನೇ ಸ್ಥಾನ) ಹಾಗೂ ಪನೇಶಿಯಾ ಬಯೋಟೆಕ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಜೈನ್ (40ನೇ ಸ್ಥಾನ) ಸ್ಥಾನ ಗಿಟ್ಟಿಸಿಕೊಂಡರು. ಪಟ್ಟಿಯ ಮೊದಲನೇ ಸ್ಥಾನದಲ್ಲಿ ನೋಬೆಲ್ ಪುರಸ್ಕೃತ ಮಾರ್ಲೊ ಆರ್ ಕೇಪಚ್ಚಿ, ಸರ್ ಮಾರ್ಟಿನ್ ಜೆ ಇವಾನ್ಸ್ ಹಾಗೂ ಒಲಿವರ್ ಸ್ಮಿತ್ ಇದ್ದರು.

2008: ಮೂತ್ರಪಿಂಡ ತಜ್ಞ ಹಾಗೂ ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ನೆಫ್ರೊಲಾಜಿ ನಿರ್ದೇಶಕ ಡಾ. ರಾಜನ್ ರವಿಚಂದ್ರನ್ ಅವರಿಗೆ ಅಮೆರಿಕದ ಪ್ರತಿಷ್ಠಿತ ಕಾಲೇಜ್ ಆಫ್ ಫಿಜಿಸಿಯನ್ಸ್ (ಎಫ್ ಎ ಸಿ ಪಿ) ಫೆಲೋಷಿಪ್ ದೊರಕಿತು.

2008: ಎರಡನೇ ಜಾಗತಿಕ ಮಹಾಯುದ್ಧದಲ್ಲಿ ಅಮೆರಿಕ ಸೇನೆ ಹಾಕಿದ್ದ ಸ್ಫೋಟವಾಗದ ಬೃಹತ್ ಬಾಂಬ್ ಒಂದನ್ನು ಪರಿಣತರು ಟೋಕಿಯೊ ಬಳಿ ನಿಷ್ಕ್ರಿಯಗೊಳಿಸಿದರು. ಈ ಹಿನ್ನೆಲೆಯಲ್ಲಿ ಇಲ್ಲಿನ ಸುಮಾರು 16,490 ನಿವಾಸಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ತುಕ್ಕು ಹಿಡಿದಿದ್ದ ಈ ಬಾಂಬನ್ನು ಜಪಾನಿನ ಸ್ವಯಂ-ರಕ್ಷಣಾ ಪಡೆಯ ಸಿಬ್ಬಂದಿ ನಿಷ್ಕ್ರಿಯಗೊಳಿದರು.

2007: ನೈಜೀರಿಯಾದ ಅತಿದೊಡ್ಡ ತೈಲ ಸಂಸ್ಕರಣಾ ಘಟಕ ಪೋರ್ಟ್ ಹಾಕೋರ್ಟ್ ರಿಫೈನರಿಯನ್ನು ಸ್ವಾಧೀನಪಡಿಸಿಕೊಳ್ಳುವ ಯತ್ನದಲ್ಲಿ ಉಕ್ಕು ಉದ್ಯಮದ ಸಾಮ್ರಾಟ ಭಾರತೀಯ ಮೂಲದ ಲಕ್ಷ್ಮೀ ನಿವಾಸ್ ಮಿತ್ತಲ್ ಅವರಿಗೆ ಸೋಲಾಯಿತು.

2007: ಕರ್ನಾಟಕ ನಗರ ಹಾಗೂ ಗ್ರಾಮಾಂತರ ಪ್ರದೇಶ ಯೋಜನೆ (ಅಕ್ರಮ ನಿವೇಶನ ಹಾಗೂ ಕಟ್ಟಡಗಳ ಸಕ್ರಮೀಕರಣ) ನಿಯಮವನ್ನು (2007) ರಾಜ್ಯಪತ್ರದಲ್ಲಿ ಪ್ರಕಟಿಸುವ ಮೂಲಕ ರಾಜ್ಯ ಸರ್ಕಾರವು ಸಕ್ರಮೀಕರಣಕ್ಕೆ ವಿಧ್ಯುಕ್ತ ಚಾಲನೆ ನೀಡಿತು. ಕಂದಾಯ ಭೂಮಿಯಲ್ಲಿನ ಅಕ್ರಮ ಕಟ್ಟಡ ಹಾಗೂ ನಿವೇಶನಗಳನ್ನು ಸಕ್ರಮಗೊಳಿಸುವ ಸಂಬಂಧಿ ಸರ್ಕಾರ ಈ ಅಧಿಸೂಚನೆ ಹೊರಡಿಸಿತು.

2007: ನಿಯಮಗಳನ್ನು ಗಾಳಿಗೆ ತೂರಿ ಪ್ರೇಯಸಿ ಶಹಾ ರಿಜಾ ಅವರಿಗೆ ಉದಾರವಾಗಿ ಬಡ್ತಿ ನೀಡಿ ಸಂಬಳ ಹೆಚ್ಚಿಸಿದ ಆರೋಪ ಎದುರಿಸುತ್ತಿರುವ ವಿಶ್ವಬ್ಯಾಂಕ್ ಅಧ್ಯಕ್ಷ ಪೌಲ್ ವುಲ್ಫೋವಿಜ್ ಅವರು ಕೊನೆಗೂ ಒತ್ತಡಕ್ಕೆ ಮಣಿದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಐವರಿಗೆ ಸ್ಫೋಟಕಗಳು, ಮದ್ದುಗುಂಡುಗಳು ಹಾಗೂ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಯಲ್ಲಿ ನೆರವು ನೀಡಿದ್ದಕ್ಕಾಗಿ ಹಾಗೂ ಶಸ್ತ್ರಾಸ್ತ್ರ ಕಳ್ಳ ಸಾಗಾಣಿಕೆಯಲ್ಲಿ ನೆರವು ನೀಡಿದ್ದಕ್ಕಾಗಿ ವಿಶೇಷ ಟಾಡಾ ನ್ಯಾಯಾಲಯವು ದೀರ್ಘಕಾಲದ ವಿಚಾರಣೆಯ ಬಳಿಕ ಕಸ್ಟಮ್ಸ್ ಕಾಯ್ದೆಯ ಅಡಿಯಲ್ಲಿ ಮೂರು ವರ್ಷಗಳ ಕಠಿಣ ಶಿಕ್ಷೆ ವಿಧಿಸಿತು. ಈ ಮೂಲಕ, 14 ವರ್ಷಗಳ ಹಿಂದೆ ನಡೆದ ಈ ಕ್ರಿಮಿನಲ್ ಪ್ರಕರಣದ 100 ಮಂದಿ ಅಪರಾಧಿಗಳಿಗೆ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಪ್ರಕಟಿಸಲು ಆರಂಭಿಸಿತು. 1993ರ ಮಾರ್ಚ್ 12ರಂದು ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 257 ಜನ ಮೃತರಾಗಿ 700 ಮಂದಿ ಗಾಯಗೊಂಡಿದ್ದರು.

2007: ಕೇಂದ್ರ ಸಚಿವ ಸಂಪುಟದಲ್ಲಿ ರಾಜ್ಯ ಸಚಿವೆಯಾಗಿ ಡಿಎಂಕೆ ಸಂಸದೆ ವಿ. ರಾಧಿಕಾ ಸೆಲ್ವಿ ಪ್ರಮಾಣ ವಚನ ಸ್ವೀಕರಿಸಿದರು. ತಮಿಳುನಾಡಿನ ತಿರುಚೆಂದೂರಿನಿಂದ ಇದೇ ಪ್ರಥಮ ಬಾರಿಗೆ ಸಂಸದೆಯಾಗಿ ಆವರು ಆಯ್ಕೆಯಾಗಿದ್ದರು.

2007: ಆಂಧ್ರ ಪ್ರದೇಶದ ರಾಜಧಾನಿ ಹೈದರಾಬಾದಿನ ಚಾರಿತ್ರಿಕ ಮೆಕ್ಕಾ ಮಸೀದಿಯಲ್ಲಿ ಪಾರ್ಥನೆ ವೇಳೆಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 16 ಜನ ಮೃತರಾಗಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2007: ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕಾನಾಹೊಸಳ್ಳಿ ಸಮೀಪ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುಮಗಳು ಸೇರಿ ಮದುವೆ ದಿಬ್ಬಣದ 19 ಮಂದಿ ಮೃತರಾಗಿ 26 ಮಂದಿ ಗಾಯಗೊಂಡರು.

2007: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ ಕುಲಪತಿಯಾಗಿ ಭಾರತೀಯ ವಿಜ್ಞಾನ ಸಂಸ್ಥೆಯ (ಐ ಐ ಎಸ್ ಸಿ) ಎಲೆಕ್ಟ್ರಿಕಲ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಎಚ್.ವಿ. ಖಿಂಚ ನೇಮಕಗೊಂಡರು.

2006: ನೇತಾಜಿ ಅವರಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎ.ಕೆ. ಮುಖರ್ಜಿ ಆಯೋಗವು ಸಲ್ಲಿಸಿದ ವರದಿಯನ್ನು ತಿರಸ್ಕರಿಸಿದ ಯುಪಿಎ ಸರ್ಕಾರದ ಕ್ರಮವನ್ನು ಲೋಕಸಭಾ ಸದಸ್ಯರು ಪಕ್ಷಭೇದ ಮರೆತು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವರದಿ ಬಗ್ಗೆ ಸದನದಲ್ಲಿ ಚರ್ಚೆಗೆ ಆಗ್ರಹಿಸಿದರು.

2006: ನೇಪಾಳದ ದೊರೆಯ ರಾಜಕೀಯ ಹಾಗೂ ಸೇನಾ ಅಧಿಕಾರವನ್ನು ಮೊಟಕುಗೊಳಿಸುವ ಪ್ರಸ್ತಾವವನ್ನು ನೇಪಾಳ ಸಂಸತ್ತು ಅಂಗೀಕರಿಸಿತು. ಜೊತೆಗೇ ನೇಪಾಳವು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿತು.

2006: ಉಪಗ್ರಹವನ್ನು ಹೊತ್ತ ಎಚ್-2ಎ ಹೆಸರಿನ ರಾಕೆಟನ್ನು ಜಪಾನ್ ದಕ್ಷಿಣ ಕಾಗೊಶಿಮಾದ ತಾನೆಗಶಿಮಾ ಬಾಹ್ಯಕಾಶ ಕೇಂದ್ರದಿಂದ ಗಗನಕ್ಕೆ ಹಾರಿಸಿತು. ಒಂದು ತಿಂಗಳಿಗೂ ಕಡಿಮೆ ಅವಧಿಯಲ್ಲಿ ಜಪಾನ್ ಮಾಡಿದ ಎರಡನೇ ಸಾಹಸ ಇದಾಗಿದ್ದು, ಹಲವು ದುರಂತಗಳ ಬಳಿಕ ರಾಷ್ಟ್ರದ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಅಗತ್ಯ ಉತ್ತೇಜನ ನೀಡಿತು. ರಾಕೆಟ್ 4.7 ಟನ್ ತೂಕದ ಉಪಗ್ರಹವನ್ನು ಗಗನಕ್ಕೆ ಒಯ್ದು ಸಮರ್ಪಕವಾಗಿ ಕಕ್ಷೆಗೆ ಸೇರಿಸಿತು.

1974: ಭಾರತವು ರಾಜಸ್ಥಾನದ ಪೋಖ್ರಾನಿನಲ್ಲಿ ತನ್ನ ಮೊತ್ತ ಮೊದಲ ಅಣ್ವಸ್ತ್ರ ಪರೀಕ್ಷಾ ಸ್ಫೋಟ ನಡೆಸಿತು.

1969: ಚಂದ್ರನಲ್ಲಿ ಮಾನವನನ್ನು ಇಳಿಸಲು ಸಿದ್ಧತೆಗಳನ್ನು ನಡೆಸುವ ಸಲುವಾಗಿ ಅಮೆರಿಕವು ಬಾಹ್ಯಾಕಾಶ ನೌಕೆ ಅಪೋಲೋ 10ನ್ನು ಗಗನಕ್ಕೆ ಹಾರಿಸಿತು.

1965: ಕಲಾವಿದೆ ಮಾಲಾ ರಾಣಿ ಜನನ.

1952: ಕಲಾವಿದ ಶ್ರೀಧರ್ ಜೆ.ಕೆ. ಜನನ.

1945: ತೈಲವರ್ಣ ಚಿತ್ರಕಲೆಯಲ್ಲಿ ಅಗಾಧ ಸಾಧನೆ ಮಾಡಿರುವ ಎಸ್. ಕೃಷ್ಣಪ್ಪ ಅವರು ನೇಕಾರ ಕುಟುಂಬದ ಸಂಪಂಗಿರಾಮಯ್ಯ- ನಾರಾಯಣಮ್ಮ ದಂಪತಿಯ ಮಗನಾಗಿ ಬೆಂಗಳೂರು ಜಿಲ್ಲೆಯ ಸರ್ಜಾಪುರದಲ್ಲಿ ಜನಿಸಿದರು.

1915: ಕಲಾವಿದ ಶೆಲ್ವ ಪಿಳ್ಳೈ ಅಯ್ಯಂಗಾರ್ ಜನನ.

1912: ಮೂಕಿ ಚಿತ್ರಗಳ ದಿನಗಳಲ್ಲಿ ಬ್ರಿಟಿಷ್ ಸಹಯೋಗದೊಂದಿಗೆ ನಿರ್ಮಿಸಲಾದ ಮೊತ್ತ ಮೊದಲ ಭಾರತೀಯ ಚಿತ್ರ `ಪುಂಡಲೀಕ' ಮುಂಬೈಯ ಕೊರೋನೇಷನ್ ಸಿನೆಮಾಟೋಗ್ರಾಫಿನಲ್ಲಿ ಬಿಡುಗಡೆಯಾಯಿತು. ಎನ್. ಜಿ. ಚಿತ್ರೆ ಮತ್ತು ಪಿ.ಆರ್. ಟಿಪ್ನಿಸ್ ಇದನ್ನು ಜಂಟಿಯಾಗಿ ನಿರ್ದೇಶಿಸಿದ್ದರು. (ದಾದಾಸಾಹೇಬ್ ಫಾಲ್ಕೆ ಅವರ `ರಾಜಾ ಹರಿಶ್ಚಂದ್ರ' ಚಿತ್ರ ಒಂದು ವರ್ಷ ತಡವಾಗಿ ಬಿಡುಗಡೆಗೊಂಡರೂ ಅದು ಸಂಪೂರ್ಣ ದೇಶೀಯವಾಗಿ ನಿರ್ಮಾಣಗೊಂಡದ್ದರಿಂದ ಅದೇ ಮೊತ್ತ ಮೊದಲ ಭಾರತೀಯ ಚಿತ್ರ ಎಂದು ದಾಖಲಾಗಿದೆ.)

1836: ಆಸ್ಟ್ರಿಯಾದ ಚೆಸ್ ಮಾಸ್ಟರ್ ವಿಲ್ಹೆಮ್ ಸ್ಟೀನಿಜ್ (1836-1900) ಹುಟ್ಟಿದ ದಿನ. ಅತ್ಯಂತ ಹೆಚ್ಚು ಕಾಲ (1866ರಿಂದ 1894ರವರೆಗೆ) ಜಾಗತಿಕ ಚೆಸ್ ಚಾಂಪಿಯನ್ ಆಗಿದ್ದ ವಿಲ್ಹೆಮ್ 1894ರಲ್ಲಿ ಎಮ್ಯಾನುವೆಲ್ ಲಸ್ಕರ್ ಅವರ ಎದುರು ಸೋತು ಜಾಗತಿಕ ಚೆಸ್ ಚಾಂಪಿಯನ್ ಶಿಪ್ ಕಳೆದುಕೊಂಡರು.

1048: ಪರ್ಷಿಯಾದ ಕವಿ, ಗಣಿತತಜ್ಞ, ಖಗೋಳತಜ್ಞ ಉಮರ್ ಖಯ್ಯಾಂ (1048-1131) ಜನ್ಮದಿನ.

No comments:

Post a Comment