Friday, March 16, 2018

ಇಂದಿನ ಇತಿಹಾಸ History Today ಮಾರ್ಚ್ 15

ಇಂದಿನ ಇತಿಹಾಸ History Today ಮಾರ್ಚ್ 15
 2018: ಕೋಲ್ಕತ: ಕೆನರಾ ಬ್ಯಾಂಕ್ ನೇತೃತ್ವದ ಬ್ಯಾಂಕುಗಳ ಒಕ್ಕೂಟಕ್ಕೆ ಸುಮಾರು ೫೧೫ ಕೋಟಿ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಿಬ್ಬಂದಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ನಿಕಟವಾಗಿದ್ದಾರೆ ಎನ್ನಲಾದ ಒಬ್ಬ ವ್ಯಕ್ತಿ ಸೇರಿದಂತೆ ಕೋಲ್ಕತ ಮೂಲದ ಇಬ್ಬರು ಉದ್ಯಮಿಗಳನ್ನು ಬಂಧಿಸಿದರು. ಉದ್ಯಮಿಗಳಾದ ಶಿಬಾಜಿ ಪಂಜ ಮತ್ತು ಕೌಸ್ತವ ರೇ ಅವರನ್ನು ಅವರ ಕಂಪ್ಯೂಟರ್ ನಿರ್ಮಾಣ ಸಂಸ್ಥೆ ಆರ್ ಪಿ ಇನ್ಫೋ ಸಿಸ್ಟಮ್ಸ್ ನಡೆಸಿದ ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿತು.  ಇದಕ್ಕೆ ಮುನ್ನ ಸಿಬಿಐ ಆರೋಪಿಗಳ ನಿವಾಸ ಹಾಗೂ ಕೋಲ್ಕತದ ಕಾರ್ಪೋರೇಟ್ ಕಚೇರಿಯಲ್ಲಿ ಶೋಧ ನಡೆಸಿತ್ತು. ಕಂಪೆನಿಯ ನಿರ್ದೇಶಕರಾದ ಶಿಬಾಜಿ ಪಂಜ, ಕೌಸ್ತವ ರೇ ಹಾಗೂ ವಿನಯ್ ಬಾಫ್ಣಾ ಮತ್ತು ಸಂಸ್ಥೆಯ ಉಪಾಧ್ಯಕ್ಷರು ಕೆನರಾ ಬ್ಯಾಂಕ್ ಮತ್ತು ಅದರ ನೇತೃತ್ವದ ಬ್ಯಾಂಕುಗಳ ಒಕ್ಕೂಟದ ಇತರ ಸದಸ್ಯ ಬ್ಯಾಂಕುಗಳಿಗೆ ೫೧೫.೧೫ ಕೋಟಿ ರೂಪಾಯಿಗಳನ್ನು ವಂಚಿಸಿದ್ದರು ಎಂದು ಆಪಾದಿಸಲಾಯಿತು.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಅಲಹಾಬಾದ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಪಾಟಿಯಾಲ ಮತ್ತು ಫೆಡರಲ್ ಬ್ಯಾಂಕ್ ಈ ಹಗರಣದಲ್ಲಿ ವಂಚನೆಗೆ ಒಳಗಾದ ಬ್ಯಾಂಕುಗಳು. ನಕಲಿ ದಾಖಲೆಗಳನ್ನು ನೀಡಿ ಸಾಲ ಪಡೆಯುವ ಮೂಲಕ ಈ ಆಪಾದಿತರು ಬ್ಯಾಂಕುಗಳನ್ನು ವಂಚಿಸಿದ್ದಾರೆ ಎಂದು ಹೇಳಲಾಯಿತು. ಚಿರಾಗ್ ಬ್ರ್ಯಾಂಡ್ ಹೆಸರಿನಲ್ಲಿ ಕಂಪ್ಯೂಟರುಗಳನ್ನು ನಿರ್ಮಿಸುತ್ತಿದ್ದ ಕಂಪೆನಿಯು ೨೦೧೨ರಿಂದಲೇ ಬ್ಯಾಂಕುಗಳ ಒಕ್ಕೂಟದಿಂದ ಸಾಲಗಳನ್ನು ಕಾಲ ಕಾಲಕ್ಕೆ ಪಡೆಯುತ್ತ ಬಂದಿತ್ತು. ಈ ಸಾಲ ಮರುಪಾವತಿಯಾಗದೆ  ವಸೂಲಾಗದ ಸಾಲ (ಎನ್ ಪಿಎ) ವರ್ಗಕ್ಕೆ ಸೇರಿದ್ದವು ಎಂದು  ಫೆಬ್ರುವರಿ ೨೬ರಂದು ನೀಡಿದ ತನ್ನ ದೂರಿನಲ್ಲಿ ಬ್ಯಾಂಕ್ ತಿಳಿಸಿತ್ತು.  ಪಂಜ ಅವರನ್ನು ದೆಹಲಿ ಪೊಲೀಸರು ಮೊದಲೇ ಇತರ ಬ್ಯಾಂಕ್ ವಂಚನೆಗಳಿಗೆ ಸಂಬಂಧಿಸಿದಂತೆ ಬಂಧಿಸಿದ್ದರು.  ೨೦೧೫ರಲ್ಲಿ ಐಡಿಬಿಐ ಬ್ಯಾಂಕಿಗೆ ಮಾಡಿದ ವಂಚನೆಗೆ ಸಂಬಂಧಿಸಿದಂತೆಯೂ ಸಿಬಿಐ ಆರ್ ಪಿ ಇನ್‌ಫೋ ಸಿಸ್ಟಮ್ಸ್ ವಿರುದ್ಧ ಪ್ರಕರಣ ದಾಖಲಿಸಿತ್ತು.

2018: ಇಸ್ಲಾಮಾಬಾದ್:  ದೆಹಲಿಯಲ್ಲಿ ಪಾಕಿಸ್ತಾನಿ ರಾಜತಾಂತ್ರಿಕರಿಗೆ ಕಿರುಕುಳಗಳನ್ನು ನೀಡಲಾಗುತ್ತಿದೆ ಎಂಬ ಆಪಾದನೆಗಳ ಹಿನ್ನೆಲೆಯಲ್ಲಿ ಸಮಾಲೋಚನೆಗಾಗಿ ಪಾಕಿಸ್ತಾನವು ಭಾರತದಲ್ಲಿನ ತನ್ನ ಹೈ ಕಮೀಷನರ್ ಸೊಹೈಲ್ ಮಹಮೂದ್ ಅವರನ್ನು ಇಸ್ಲಾಮಾಬಾದಿಗೆ ಕರೆಸಿಕೊಂಡಿದತು.  ವಿದೇಶಾಂಗ ಕಚೇರಿ ವಕ್ತಾರ ಡಾ. ಮೊಹಮ್ಮದ್ ಫೈಸಲ್ ಅವರು ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲಿ ನವದೆಹಲಿಯಲ್ಲಿನ ಹೈಕಮೀಷನ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಳೆದ ಕೆಲವು ದಿನಗಳಿಂದ ವಿವಿಧ ರೀತಿಯ ಕಿರುಕುಳಗಳಿಗೆ ಗುರಿಮಾಡಲಾಗುತ್ತಿದೆ ಎಂದು ದೃಢ ಪಡಿಸಿದರು.  ಪಾಕಿಸ್ತಾನಿ ರಾಜತಾಂತ್ರಿಕರೊಬ್ಬರನ್ನು ದೆಹಲಿಯ ಚಾಣಕ್ಯಪುರಿ ಆಸುಪಾಸಿನಲ್ಲಿ ಕಾರನ್ನು ತಡೆದು ನಿಲ್ಲಿಸಿ ಕಿರುಕುಳ ನೀಡಲಾಯಿತು ಎಂದು ಅಧಿಕಾರಿಗಳು ಪ್ರತಿಪಾದಿಸಿದರು.  ಇನ್ನೊಂದು ಘಟನೆಯಲ್ಲಿ ಪಾಕಿಸ್ತಾನದ ಡೆಪ್ಯುಟಿ ಹೈಕಮೀಷನರ್ ಅವರ ಮಕ್ಕಳನ್ನು ಶಾಲೆಗೆ ಹೋಗುತ್ತಿದ್ದಾಗ ತಡೆದು ನಿಲ್ಲಿಸಿ ಅವರ ವಾಹನ ಚಾಲಕನಿಗೆ ಕಿರುಕುಳ ನೀಡಲಾಯಿತು ಎಂದು ಅವರು ನುಡಿದರು.  ಪಾಕಿಸ್ತಾನವು ಅಧಿಕೃತವಾಗಿ ವಿಷಯವನ್ನು ಭಾರತೀಯ ಅಧಿಕಾರಿಗಳಿಗೆ ತಿಳಿಸಿತು.  ಇತ್ತೀಚಿನ ಘಟನೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನಿ ರಾಜತಾಂತ್ರಿಕರಿಗೆ ನವದೆಹಲಿಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವುದು ಅತ್ಯಂತ ಕಷ್ಟವಾಗುತ್ತದೆ ಎಂದೂ ಅದು ಹೇಳಿತು. ಹೈಮೀಷನ್ ನಲ್ಲಿ ಪಾಕ್ ರಾಜತಾಂತ್ರಿಕರು ಅವರ ಕುಟುಂಬ ಸದಸ್ಯರು ಸೇರಿ ಸುಮಾರು ೫೦೦ಕ್ಕೂ ಹೆಚ್ಚು ಪಾಕಿಸ್ತಾನೀಯರು ಇದ್ದಾರೆ.  ಹೆಚ್ಚುತ್ತಿರುವ ಬೆದರಿಕೆ ಘಟನೆಗಳನ್ನು ಗಮನಕ್ಕೆ ತೆಗೆದುಕೊಳ್ಳುವಲ್ಲಿ ಭಾರತ ವಿಫಲವಾಗಿದೆ ಎಂದು ವಿದೇಶಾಂಗ ಕಚೇರಿ ವಕ್ತಾರ  ಫೈಸಲ್ ಹೇಳಿದರು.  ‘ನವದೆಹಲಿಯಲ್ಲಿನ ನಮ್ಮ ಹೈಮೀಷನರ್ ಅವರಿಗೆ ಸಮಾಲೋಚನೆಗಾಗಿ ಇಸ್ಲಾಮಾಬಾದಿಗೆ ಬರುವಂತೆ ಸೂಚಿಸಲಾಗಿದೆ ಎಂದು ಅವರು ನುಡಿದರು.  ರಾಜತಾಂತ್ರಿಕ ಕಚೇರಿ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರು ಭಾರತೀಯ ಸಂಸ್ಥೆಗಳಿಂದ ಇತ್ತೀಚೆಗೆ ಕಿರುಕುಳ, ಬೆದರಿಕೆ ಮತ್ತು ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾ.13ರ ಮಂಗಳವಾರ ಪ್ರತಿಪಾದಿಸಿತ್ತು.  ಇದಕ್ಕೆ ಒಂದು ದಿನ ಮೊದಲು ಪಾಕಿಸ್ತಾನವು ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರಿಗೆ ಕಿರುಕುಳ ನೀಡಲಾಗುತ್ತಿರುವ ಬಗ್ಗೆ ಭಾರತದ ಡೆಪ್ಯುಟಿ ಹೈ ಕಮೀಷನರ್ ಜೆ.ಪಿ. ಸಿಂಗ್ ಅವರಿಗೆ ಸಮನ್ಸ್ ನೀಡಿ ಕರೆಸಿಕೊಂಡಿತ್ತು.  ಇಂತಹ ತುಚ್ಛ ಘಟನೆಗಳು ವಿದೇಶೀ ರಾಜತಾಂತ್ರಕರಿಗೆ ರಕ್ಷಣೆ ಒದಗಿಸುವಲ್ಲಿ ಭಾರತ ಸರ್ಕಾರಕ್ಕೆ ಇಚ್ಛೆ ಇಲ್ಲದೇ ಇರುವುದರ ದ್ಯೋತಕ ಎಂದು ಪಾಕ್ ಹೈಕಮೀಷನ್ ಹೇಳಿತ್ತು. ಸಿಂಗ್ ಅವರನ್ನು ಕರೆಸಿಕೊಂಡ ದಕ್ಷಿಣ ಏಷ್ಯಾ ಮತ್ತು ಸಾರ್ಕ್ ಮಹಾ ನಿರ್ದೇಶಕ ಫೈಸಲ್ ಅವರು ಘಟನೆಗಳಿಗೆ ಸಂಬಂಧಿಸಿದಂತೆ ಪ್ರಬಲ ಪ್ರತಿಭಟನೆ ಸಲ್ಲಿಸಿದರು ಎಂದು ಪಾಕಿಸ್ತಾನಿ ವಿದೇಶಾಂಗ ಕಚೇರಿಗೆ ಹೇಳಿಕೆ ನೀಡಿತು.  ವಿಯೆನ್ನಾ ಸಮಾವೇಶ ನಿರ್ಣಯದ ಪ್ರಕಾರ ಪಾಕಿಸ್ತಾನಿ ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರ ಭದ್ರತೆ ಮತ್ತು ಸುರಕ್ಷತೆ ಭಾರತ ಸರ್ಕಾರದ ಹೊಣೆಗಾರಿಕೆ ಎಂದು ಫೈಸಲ್ ಹೇಳಿದರು.

2018: ಮಾಸ್ಕೋ: ರಷ್ಯಾದ ಮಾಜಿ ಗುಪ್ತಚರನ ಮೇಲೆ ನಡೆದಿದೆ ಎನ್ನಲಾಗಿರುವ ’ನರವಿಷ ದಾಳಿ ಹಿನ್ನೆಲೆಯಲ್ಲಿ ರಷ್ಯಾದ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ಪ್ರಕಟಿಸಿದ್ದಕ್ಕಾಗಿ ಬಿಟನ್ ವಿರುದ್ಧ ಹರಿಹಾಯ್ದ ರಷ್ಯಾ ’ಬ್ರಿಟನ್ ವರ್ತನೆ ಬೇಜವಾಬ್ದಾರಿಯದು ಎಂದು ಛೀಮಾರಿ ಹಾಕಿತು. ‘ಬ್ರಿಟಿಷ್ ವರ್ತನೆ ಅತ್ಯಂತ ಬೇಜವಾಬ್ದಾರಿಯ ವರ್ತನೆಯಂತೆ ನಮಗೆ ಕಾಣುತ್ತಿದೆ ಎಂದು ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಅವರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಪತ್ರಕರ್ತರ ಜೊತೆಗೆ ಮಾತನಾಡುತ್ತಾ ಹೇಳಿದರು.  ಪುಟಿನ್ ಅವರ ಸೇಡಿನ ಕ್ರಮಗಳು ಶೀಘ್ರದಲ್ಲೇ ಅನಾವರಣಗೊಳ್ಳಲಿವೆ. ರಷ್ಯಾದ ಹಿತಾಸಕ್ತಿಗಳಿಗೆ ಅನುಕೂಲಕರವಾದ ಕ್ರಮಗಳನ್ನು ಅವರು ಕೈಗೊಳ್ಳಲಿದ್ದಾರೆ ಎಂದು ಡಿಮಿಟ್ರಿ ನುಡಿದರು.  ಮಾ.7ರ ಬುಧವಾರ ರಷ್ಯಾದ ೨೩ ಮಂದಿ ರಾಜತಾಂತ್ರಿಕರನ್ನು ಉಚ್ಚಾಟಿಸುವುದಾಗಿಯೂ, ರಷ್ಯಾ ಜೊತೆಗಿನ ಉನ್ನತ ಮಟ್ಟದ ಸಂಪರ್ಕಗಳನ್ನು ಅಮಾನತು ಗೊಳಿಸುವುದಾಗಿಯೂ ಹೇಳಿದ ಬ್ರಿಟನ್ ಇನ್ನಷ್ಟು ಕ್ರಮಗಳನ್ನು ಶೀಘ್ರದಲ್ಲೇ ಕೈಗೊಳ್ಳುವುದಾಗಿ ಹೇಳಿತ್ತು. ರಷ್ಯಾದ ಮಾಜಿ ಗುಪ್ತಚರ ಸೆರ್ಗೀ ಸ್ಕಿಪಾಲ್ ಮತ್ತು ಅವರ ಪುತ್ರಿಯ ಮೇಲೆ ನಡೆದ ’ನರವಿಷ ದಾಳಿಯಲ್ಲಿ ರಷ್ಯಾ ದೋಷಿಯಾಗಿದೆ ಎಂದು ಅಧಿಕಾರಿಗಳು ಮಾರ್ಚ್ ೪ರಂದು ಹೇಳಿದ ಬಳಿಕ ಬ್ರಿಟನ್ ಪ್ರಧಾನಿ ಥೆರೇಸಾ ಮೇ ರಷಾದ ವಿರುದ್ಧ ದಂಡನಾ ಕ್ರಮಗಳನ್ನು ಪ್ರಕಟಿಸಿದ್ದರು. ಬ್ರಿಟನ್ ಆರೋಪಗಳು ಬುಡರಹಿತ ಎಂದು ಪುನರುಚ್ಚರಿಸಿದ ಪೆಸ್ಕೋವ್, ’ಸ್ಕ್ರಿಪಾಲ್ ಮೇಲಿನ ದಾಳಿ ಪ್ರಚೋದನೆಯ ಎಲ್ಲ ಸಂಕೇತಗಳನ್ನೂ ಹೊಂದಿದೆ ಎಂದು ಹೇಳಿದರು.  ಆಪಾದನೆಗಳನ್ನು ಬ್ರಿಟನ್ ಯಾವುದೇ ಪೂರಕ ಸಾಕ್ಷ್ಯಾಧಾರಗಳೊಂದಿಗೆ ಸಮರ್ಥಿಸಿಲ್ಲ ಮತ್ತು ದಾಳಿಗೆ ಬಳಸಿದ ವಸ್ತು ಯಾವುದು ಎಂಬ ಸ್ಪಷ್ಟ ಮಾಹಿತಿ ಬರುವುದಕ್ಕೆ ಮುನ್ನವೇ ರಷ್ಯಾ ವಿರುದ್ಧ ಧ್ವನಿ ಎತ್ತಿದೆ ಎಂದು ನುಡಿದರು.

2018: ನವದೆಹಲಿ: ಜಾರಿ ನಿರ್ದೇಶನಾಲಯವು ದಾಖಲು ಮಾಡಿದ ಐಎನ್ ಎಕ್ಸ್ ಮೀಡಿಯಾ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ನೀಡಿದ ಮಧ್ಯಂತರ ಪರಿಹಾರವನ್ನು ಕಡೆಗೂ ವಿಸ್ತರಿಸಿದ ಸುಪ್ರೀಂಕೋರ್ಟ್ ಮಾರ್ಚ್ ೨೬ವರೆಗೆ ಕಾರ್ತಿ ಚಿದಂಬರಂ ಅವರನ್ನು ಬಂಧಿಸದಂತೆ ತಡೆಯಾಜ್ಞೆ ನೀಡಿತು.  ಇದಕ್ಕೆ ಮುನ್ನ ಮಾರ್ಚ್ ೬ರಂದು ಬಂಧಿಸದಂತೆ ಮಧ್ಯಂತರ ರಕ್ಷಣೆ ಒದಗಿಸಲು ಸುಪ್ರೀಂಕೋರ್ಟ್ ನಿರಾಕರಿಸಿತ್ತು. ಇಂತಹ ರಕ್ಷಣೆಯಿಂದ ವಿಚಾರಣೆ ಪ್ರಕ್ರಿಯೆ ಮೇಲೆ ಪರಿಣಾಮವಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.  ಏನಿದ್ದರೂ ದೆಹಲಿ ಹೈಕೋರ್ಟ್ ಕಾರ್ತಿ ಚಿದಂಬರಂ ಅವರಿಗೆ ಇಡಿ ಪ್ರಕರಣದಲ್ಲಿ ಬಂಧಿಸದಂತೆ ಒದಗಿಸಿದ ರಕ್ಷಣೆಯನ್ನು ಮಾರ್ಚ್ ೨೦ರಿಂದ ೨೨ರವರೆಗೆ ವಿಸ್ತರಿಸಿದ ಬಳಿಕ ಈದಿನ ಸುಪ್ರೀಂಕೋರ್ಟ್ ಕೂಡಾ ಕಾರ್ತಿ ಅವರಿಗೆ ಮಧ್ಯಂತರ ಪರಿಹಾರವನ್ನು ಒದಗಿಸಿತು.  ಆರೋಪಿಯನ್ನು ಬಂಧಿಸುವಲ್ಲಿ ಜಾರಿ ನಿರ್ದೇಶನಾಲಯಕ್ಕೆ ಇರುವ ಅಧಿಕಾರಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ ಎ) ಸೆಕ್ಷನ್ ೧೯ನ್ನು ಅರ್ಥೈಸಿಕೊಳ್ಳುವಲ್ಲಿ ರಾಷ್ಟದ ವಿವಿಧ ಹೈಕೋರ್ಟ್‌ಗಳು ಭಿನ್ನ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಮುಂದಿರುವ ಪ್ರಕರಣವನ್ನು ಸುಪ್ರೀಂಕೋರ್ಟಿಗೆ ವರ್ಗಾಯಿಸುವಂತೆಯೂ ಸುಪ್ರೀಂಕೋರ್ಟ್ ಪೀಠ ನಿರ್ದೇಶನ ನೀಡಿತು.  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು, ಪ್ರಕರಣದ ವಿಚಾರಣೆಯನ್ನು ಮಾರ್ಚ್ ೨೬ರಂದು ಆಲಿಸುವುದಾಗಿಯೂ, ಪಿಎಂಎಲ್ ಎ ಯ ಸೆಕ್ಷನ್ ೧೯ನ್ನು ಅರ್ಥೈಸಿಕೊಳ್ಳುವ ವಿಚಾರದ ಪ್ರಶ್ನೆಗೆ ಉತ್ತರ ನೀಡುವುದಾಗಿಯೂ ಹೇಳಿತು.  ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರು ಸಿಬಿಐ ದಾಖಲಿಸಿರುವ ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ಇದೀಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.  ಜಾರಿ ನಿರ್ದೇಶನಾಲಯವು ತಮ್ಮ ತಂದೆಯ ವರ್ಚಸ್ಸಿಗೆ ಮಸಿ ಬಳಿಯುವ ಸಲುವಾಗಿ ’ತನಿಖೆಯ ಹೆಸರಿನಲಿ ಗಾಳ ಹಾಕುತ್ತಿದೆ ಎಂದು ಕಾರ್ತಿ ಆಪಾದಿಸಿದ್ದರು. ಸಿಬಿಐ ತನ್ನ ತನಿಖೆಯನ್ನು ಪೂರ್ಣಗೊಳಿಸುವವರೆಗೆ ಜಾರಿ ನಿರ್ದೇಶನಾಲಯವು ಕ್ರಮ ಕೈಗೊಳ್ಳುವಂತಿಲ್ಲ ಎಂದು ಅವರು ಪ್ರತಿಪಾದಿಸಿದ್ದರು. ವಿಚಾರಣಾ ನ್ಯಾಯಾಲಯವೊಂದು ಕಾರ್ತಿ ಅವರನ್ನು ಸೋಮವಾರ ೧೨ ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಅವರನ್ನು ಇದೀಗ ಮಾರ್ಚ್ ೨೪ರವರೆಗೆ ತಿಹಾರ್ ಸೆರೆಮನೆಯಲ್ಲಿ ಇರಿಸಲಾಗಿದೆ. ಪ್ರತೇಕ್ ಸೆಲ್ ಮತ್ತು ಮನೆ ಆಹಾರ ಒದಗಿಸುವಂತೆ ಕಾರ್ತಿ ಮಾಡಿದ್ದ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿತ್ತು.

2018: ನವದೆಹಲಿ: ವಾಟ್ಸ್ ಅಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಮಾ.7ರ ಬುಧವಾರ ಸಂಜೆ ೧೨ನೇ ತರಗತಿಯ ಅಕೌಂಟ್ಸ್ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದೆ ಎಂಬ ಸುದ್ದಿ ಸಿಬಿಎಸ್ ಇ ಗೆ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್) ತೀವ್ರ ಮುಜುಗರ ಉಂಟು ಮಾಡಿತು. ಆದರೆ ಈದಿನ  ಪ್ರಶ್ನೆ ಪತ್ರಿಕೆ ಸೋರಿಕೆ ಸುದ್ದಿಯನ್ನು ನಿರಾಕರಿಸಿದ ಸಿಬಿಎಸ್ ಇ ’ಮೊಹರಾಗಿರುವ ಪ್ರಶ್ನೆ ಪತ್ರಿಕೆಗಳು ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಭದ್ರವಾಗಿವೆ ಎಂದು ಪ್ರತಿಪಾದಿಸಿತು.  ಸ್ಥಳೀಯ ಮಟ್ಟದಲ್ಲಿ ಕೆಲವು ದುಷ್ಕರ್ಮಿಗಳು ಪರೀಕ್ಷೆಗಳ ಪಾವಿತ್ರ್ಯವನ್ನು ಹಾಳುಗೆಡವಲು ವಾಟ್ಸ್ ಆಪ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಕಿಡಿಗೇಡಿತನದ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದ ಸಿಬಿಎಸ್ ಇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಎಫ್ ಐ ಆರ್ ದಾಖಲಿಸುವುದಾಗಿಯೂ, ಇಂತಹ ಚಟುವಟಿಕೆಗಳ ವಿರುದ್ಧ ಬಿಗಿ ಕ್ರಮ ಕೈಗೊಳ್ಳುವುದಾಗಿಯೂ ಹೇಳಿಕೆಯಲ್ಲಿ ತಿಳಿಸಿತು. ಬೆಳಗ್ಗೆ ೧೦.೩೦ ಗಂಟೆಯ ವೇಳೆಗೆ ಪರೀಕ್ಷೆ ಆರಂಭವಾಗುವುದಕ್ಕೆ ಕೆಲವೇ ನಿಮಿಷಗಳಿದ್ದಾಗ ದೆಹಲಿಯ ಶಿಕ್ಷಣ ಸಚಿವ ಮನಿಶ್ ಸಿಸೋಡಿಯಾ ಅವರಿಗೆ ವಾಟ್ಸ್ ಆಪ್ ನಲ್ಲಿ ಸಿಬಿ ಎಸ್ ಇ ಯ ’ಸೋರಿಕೆಯಾದ ಪ್ರಶ್ನೆ ಪತ್ರಿಕೆ ಬರುವುದರೊಂದಿಗೆ ಈ ವಿಚಾರ ಬೆಳಕಿಗೆ ಬಂದಿತು. ಅವರು ತತ್ ಕ್ಷಣವೇ ಸಿಬಿಎಸ್ ಇ ಮುಖ್ಯಸ್ಥರು ಮತ್ತು ಶಿಕ್ಷಣ ಕಾರ್ಯದರ್ಶಿವರನ್ನು ಸಂಪರ್ಕಿಸಿದರು. ಅವರು ಪರಿಶೀಲಿಸಿದಾಗ ಅಕೌಂಟ್ಸ್ ಪ್ರಶ್ನೆ ಪತ್ರಿಕೆಯ ಸೆಟ್ ೨ ಅದಕ್ಕೆ ತಾಳೆಯಾಯಿತು. ವರದಿಗಳ ಪ್ರಕಾರ ಬುಧವಾರ ಸಂಜೆ ರೋಹಿಣಿಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು ಬಳಿಕ ರಾಜಧಾನಿಯಲ್ಲಿ ವಾಟ್ಸ್ ಅಪ್ ಮೂಲಕ ಎಲ್ಲೆಡೆಗೂ ರವಾನೆಯಾಯಿತು ಎನ್ನಲಾಯಿತು.  ಸಿಬಿಎಸ್ ಇ ೧೨ನೇ ತರಗತಿಯ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ದೂರುಗಳು ಬಂದಿವೆ. ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಮತ್ತು ಸಿಬಿಎಸ್ ಇ ಬಳಿ ದೂರು ದಾಖಲಿಸುವಂತೆ ಸೂಚಿಸಲಾಗಿದೆ. ಕಷ್ಟಪಟ್ಟು ಓದುವ ವಿದ್ಯಾರ್ಥಿಗಳಿಗೆ ಸಿಬಿಎಸ್ ಇ ನಿರ್ಲಕ್ಷ್ಯದಿಂದ ಅನ್ಯಾಯವಾದಂತೆ ತುರ್ತು ಕ್ರಮ ಕೈಗೊಳ್ಳುವ ಅಗತ್ಯ ಇದೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದರು.  ಮಾಧ್ಯಮಗಳು ವಿಚಾರಿಸಿದಾಗ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೂ ವಿಷಯ ಗಮನಕ್ಕೆ ಬಂದಿದೆ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು. ಏನಿದ್ದರೂ ಸಿಬಿಎಸ್ ಇ ಔಪಚಾರಿಕ ವರದಿ ಸಲ್ಲಿಸಿದ ಬಳಿಕವಷ್ಟೇ ಸಚಿವಾಲಯ ಮಧ್ಯ ಪ್ರವೇಶ ಮಾಡಬಹುದು ಎಂದು ಅವರು ನುಡಿದರು.  ‘ಬೋರ್ಡ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು, ಅದೂ ಸಾಮಾಜಿಕ ಮಾಧ್ಯಮಗಳಲ್ಲಿ ಸೋರಿಕೆಯಾಗಿರುವುದು ಆಘಾತಕರ. ಇದು ಪ್ರಾಮಾಣಿಕ ಮತ್ತು ಕಠಿಣ ಶ್ರಮವಹಿಸಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಪಾಲಿನ ದುರಂತ ಎಂದು ಅವರು ಹೇಳಿದರು.  ವಿಷಯದ ಇತ್ಯರ್ಥಕ್ಕೆ ಸ್ವಲ್ಪ ಕಾಲಾವಕಾಶ ನೀಡುವಂತೆ ಸಿಬಿಎಸ್ ಇ ಕೋರಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮೂಲವೊಂದು ತಿಳಿಸಿತು.  ’ಸಭೆ ನಡೆಯುತ್ತಿದೆ. ವಿಷಯವನ್ನು ಅಗ್ರ ಪ್ರಾಶಸ್ತ್ಯ ನೀಡಿ ಪರಿಶೀಲಿಸಲು ಸೂಚಿಸಲಾಗಿದೆ. ಉನ್ನತ ಸಮಿತಿ ವರದಿ ಕೊಟ್ಟ ಬಳಿಕ ಅಗತ್ಯ ಕ್ರಮ ಕೈಗಳ್ಳಲಾಗುವುದು ಎಂದು ಮೂಲ ಹೇಳಿತು.  ಸೋರಿಕೆಯಲ್ಲಿ ಮಂಡಳಿಯ ಒಳಗಿನವರ ಕೈವಾಡ ಇರುವ ಬಗ್ಗೆ ಸಿಬಿಎಸ್‌ಇ ಮೂಲವೊಂದು ಶಂಕಿಸಿತು.  ’ಒಳಗಿನವರ ಸಹಕಾರ ಇಲ್ಲದೆ ವಿದ್ಯಾರ್ಥಿಗಳಿಗೆ ಮಂಡಳಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವುದು ಅಸಾಧ್ಯದ ಕೆಲಸ. ಉನ್ನತ ಅಧಿಕಾರಿಗಳು ಮತ್ತು ಶಿಕ್ಷಕರಿಗೆ ಮಾತ್ರವೇ ಅದರ ಬಗ್ಗೆ ಅರಿವಿರುತ್ತದೆ ಎಂದು ಅವರು ನುಡಿದರು.  ದೊಡ್ಡ ಸಂಖ್ಯೆಯಲ್ಲಿ ದೆಹಲಿಯ ಶಾಲಾ ಮಕ್ಕಳು ಈ ಪರೀಕ್ಷೆಗೆ ಹಾಜರಾಗುವ ಕಾರಣ, ಸಿಬಿಎಸ್ ಇ ಪರೀಕ್ಷೆಯನ್ನು ರದ್ದು ಪಡಿಸುವುದು ಉತ್ತಮ ಎಂದು ದೆಹಲಿ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದರು.

2018: ಹೈದರಾಬಾದ್: ಕೇಂದ್ರ ಸಚಿವ ಸಂಪುಟದಿಂದ ತನ್ನ ಸಚಿವರನ್ನು ಹಿಂದಕ್ಕೆ ಕರೆಸಿಕೊಂಡ ಕೆಲವೇ ಕೆಲವು ದಿನಗಳ ಬಳಿಕ ತೆಲುಗುದೇಶಂ ಪಕ್ಷವು ಇದೀಗ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದಿಂದ (ಎನ್ ಡಿಎ) ಹೊರಬರಲು ಸಜ್ಜಾಗಿದ್ದು, ನರೇಂದ್ರ ಮೋದಿ ಸರ್ಕಾರದ ವಿರುದ್ಧ ವೈಎಸ್ ಆರ್ ಕಾಂಗ್ರೆಸ್ ಮಂಡಿಸಲಿರುವ ಅವಿಶ್ವಾಸ ನಿರ್ಣಯಕ್ಕೆ ಬೆಂಬಲ ಸೂಚಿಸಲಿದೆ ಎಂದು ಪಕ್ಷ ಮೂಲಗಳು ತಿಳಿಸಿದವು. ಟಿಡಿಪಿ ಅಧ್ಯಕ್ಷ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮಾರ್ಚ್ ೧೬ರ ಶುಕ್ರವಾರ ಅಮರಾವತಿಯಲ್ಲಿ ಪಕ್ಷದ ಪಾಲಿಟ್ ಬ್ಯೂರೋ ಸಭೆ ಕರೆದಿದ್ದು ಸಭೆಯಲ್ಲಿ ಎನ್‌ಡಿಎಯಿಂದ ಹೊರಬರುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಯಿತು.  ಮೂಲಗಳ ಪ್ರಕಾರ ನಾಯ್ಡು ಅವರು ಹೊಸ ಮೈತ್ರಿಕೂಟ ರಚಿಸುವ ಸಲುವಾಗಿ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಮತ್ತು ಎಸ್ ಪಿ ಪಿತಾಮಹ ಮುಲಾಯಂ ಸಿಂಗ್ ಯಾದವ್ ಅವರನ್ನು ಸಂಪರ್ಕಿಸುವ ಸಾಧ್ಯತೆಗಳಿವೆ ಎಂದೂ ಮೂಲಗಳು ಹೇಳಿದವು.  ಪಕ್ಷದ ಬಹುತೇಕ ಸಂಸತ್ ಸದಸ್ಯರು ಮತ್ತು ಶಾಸಕರು ಈ ನಿರ್ಣಯವನ್ನು ಬೆಂಬಲಿಸಿದ್ದಾರೆ ಎಂದು ಮೂಲಗಳು ಹೇಳಿದವು.  ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯ ತಮ್ಮ ನಿಲುವಿಗೆ ಪೂರಕವಾದ ಮುಂದಿನ ಹೆಜ್ಜೆ ಇದಾಗಬೇಕು ಎಂಬುದು ತರ್ಕಬದ್ಧ ವಿಚಾರ ಎಂದು ಅವರು ಭಾವಿಸಿದ್ದಾರೆ. ಪಕ್ಷವು ಜನರ ಹಿತಾಸಕ್ತಿ ದೃಷ್ಟಿಯಿಂದ ಎಲ್ಲ ನಿರ್ಣಯಗಳನ್ನೂ ಕೈಗೊಳ್ಳಬೇಕು ಎಂದು ಪಕ್ಷ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.
ಆಂಧ್ರಪ್ರದೇಶದ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಇತ್ಯರ್ಥ ಪಡಿಸುವುದಕ್ಕೆ ಬದಲಾಗಿ ಬಿಜೆಪಿ ’ಕೊಳಕು ರಾಜಕೀಯದಲ್ಲಿ ನಿರತವಾಗಿದೆ ಎಂದು ನಾಯ್ಡು ಅವರು ಕೋಪೋದ್ರಿಕ್ತರಾಗಿದ್ದಾರೆ ಎಂದು ಟಿಡಿಪಿ ನಾಯಕರು ಹೇಳಿದರು.  ಈದಿನ ಪಕ್ಷ ನಾಯಕರೊಂದಿಗೆ ಟೆಲಿಕಾನ್ಫರೆನ್ಸಿನಲ್ಲಿ ಮಾತನಾಡಿದ ಆಂಧ್ರ ಮುಖ್ಯಮಂತ್ರಿ ತಮ್ಮ ವಿರುದ್ಧ ಇತರರನ್ನು ಎತ್ತಿ ಕಟ್ಟುತ್ತಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಕಿಡಿ ಕಾರಿದ್ದರು. ‘ಆಂಧ್ರಪ್ರದೇಶದ ಜನರು ಏನನ್ನು ನ್ಯಾಯೋಚಿತವಾಗಿ ಕೇಳುತ್ತಿದ್ದಾರೋ ಅದನ್ನು ಕೊಡುವುದಕ್ಕೆ ಬದಲಾಗಿ, ಬಿಜೆಪಿಯ ಜಗನ್ ಮೋಹನ್ ರೆಡ್ಡಿ ಮತ್ತು ಪವನ್ ಕಲ್ಯಾಣ್ ಅವರನ್ನು ನಮ್ಮ ವಿರುದ್ಧ ಬಳಸುತ್ತಿದೆ ಎಂದು ನಾಯ್ಡು ಆಪಾದಿಸಿದ್ದರು.  ತೆಲುಗು ಸ್ವಾಭಿಮಾನದ ಭಾವಾತ್ಮಕತೆಯನ್ನು ಒತ್ತಿ ಹೇಳಿದ ನಾಯ್ಡು ’ನಾವು ಆತ್ಮ ಗೌರವ, ತೆಲುಗು ಜನರ ಹಕ್ಕುಗಳು ಮತ್ತು ನಮಗೆ ನೀಡಿದ ಭರವಸೆಗಳನ್ನು ಈಡೇರಿಸುವಂತೆ ಹೋರಾಟ ನಡೆಸುತ್ತಿದ್ದೇವೆ. ಅವುಗಳನ್ನು ಗೌರವಿಸುವ ಬದಲಿಗೆ ನರೇಂದ್ರ ಮೋದಿ ಮತ್ತು ಬಿಜೆಪಿ ಘರ್ಷಣೆಯ ರಾಜಕೀಯ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದರು.  ಜನ ಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಚಂದ್ರಬಾಬು ನಾಯ್ಡು ಮತ್ತು ಅವರ ಪುತ ನಾರಾ ಲೋಕೇಶ್ ಅವರ ವಿರುದ್ಧ ಗುಂಟೂರಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಭ್ರಷ್ಟಾಚಾರದ ಗಂಭೀರ ಆಪಾದನೆಗಳನ್ನು ಮಾಡಿದ ಬಳಿಕ ನಾಯ್ಡು ಅವರು ಬಿಜೆಪಿ ವಿರುದ್ಧ ಕೋಪಾವಿಷ್ಟ ಮಾತುಗಳನ್ನು ಆಡಿದ್ದಾರೆ. ‘ಇದು ಅಂತಿಮ ಆಯ್ಕೆ. ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವ ಬದಲಿಗೆ ಬಿಜೆಪಿಯು ತಮಿಳುನಾಡಿನಲ್ಲಿ ತಾನು ಆಡಿದಂತಹ ಕೊಳಕು ರಾಜಕೀಯವನ್ನು ಇಲ್ಲೂ ನಡೆಸುತ್ತಿದೆ ಎಂದು ಟಿಡಿಪಿ ನಾಯಕ ಕಂಭಂಪಟಿ ರಾಮಮೋಹನ ರಾವ್ ಹೇಳಿದರು.  ವೈಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ರೆಡ್ಡಿ ಅವರು ಎನ್ ಡಿಎ ಮೈತ್ರಿಕೂಟದಿಂದ ಹೊರಬರುವಂತೆ ಚಂದ್ರ ಬಾಬು ನಾಯ್ಡು ಅವರಿಗೆ ಸವಾಲು ಹಾಕಿದ್ದರು. ’ಮೋದಿ ಮತ್ತು ಅಮಿತ್ ಶಾ ಅವರ ಮಾಟಬೇಟೆಗೆ ಹೆದರಿ ನಾಯ್ಡು ರಾಜ್ಯಕ್ಕೆ ವಿಶೇಷ ಸ್ಥಾನಮಾನ ಒದಗಿಸಿಕೊಡುವ ನಿಟ್ಟಿನಲ್ಲಿ ಎನ್ ಡಿಎಯನ್ನು ಜಗ್ಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಆಪಾದಿಸಿದ್ದರು.  ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಎಳೆಯನ್ನೇ ಹಿಡಿದು ವೈಎಸ್ ಆರ್ ಕಾಂಗ್ರೆಸ್ ಪಕ್ಷವು ಎನ್ ಡಿಎ ಸರ್ಕಾರದ ವಿರುದ್ಧ ಸಂಸತ್ತಿನಲ್ಲಿ ಮಾ.16ರ ಶುಕ್ರವಾರ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದೆ. ತಮ್ಮ ನಿಲುವನ್ನು ಬೆಂಬಲಿಸುವಂತೆ ರೆಡ್ಡಿ ಅವರು ಎಲ್ಲ ಪಕ್ಷಗಳಿಗೂ ಮನವಿ ಮಾಡಿದ್ದಾರೆ. ಲೋಕಸಭೆಯಲ್ಲಿ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದ ಸುಬ್ಬಾ ರೆಡ್ಡಿ ಅವರು ಅವಿಶ್ವಾಸ ನಿರ್ಣಯ ಮಂಡಿಸಲಿದ್ದಾರೆ ಎಂದು ಪಕ್ಷದ ಇನ್ನೊಬ್ಬ ಸಂಸದ ವಿಜಯ ಸಾಯಿ ರೆಡ್ಡಿ ಹೇಳಿದರು.  ತೆಲುಗು ಸ್ವಾಭಿಮಾನದ ವಿಷಯವು ಮುಂಬರುವ ಚುನಾವಣೆಯಲ್ಲಿ ಮಹತ್ವ ಪಡೆಯಬಹುದಾದ ಹಿನ್ನೆಲೆಯಲ್ಲಿ ಈ ವಿಚಾರವಾಗಿ ಮುಂಚೂಣಿಯ ಪಾತ್ರ ವಹಿಸಲು ವೈಎಸ್ ಆರ್ ಕಾಂಗ್ರೆಸ್ ನಿರ್ಧರಿಸಿದೆ. ಹೀಗಾಗಿ ಈಗ ಚಂದ್ರಬಾಬು ನಾಯ್ಡು ಅವರ ಮೇಲೂ ಈ ವಿಚಾರ ಅತಿಯಾದ ಒತ್ತಡವನ್ನು ಉಂಟು ಮಾಡಿದೆ. ಹೀಗಾಗಿಯೇ ನಾಯ್ಡು ಅವರು ಕೇಂದ್ರ ಸಂಪುಟದಿಂದ ತಮ್ಮ ಇಬ್ಬರು ಸಚಿವರನ್ನು ಹಿಂದಕ್ಕೆ ಕರೆಸಿಕೊಂಡಿದ್ದಾರೆ.


2017: ಇಂಫಾ‌: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದ ಮಣಿಪುರ ಮುಖ್ಯಮಂತ್ರಿಯಾಗಿ ಬಿಜೆಪಿಯ ಎನ್‌. ಬಿರೇನ್ಸಿಂಗ್ಅವರು ಪ್ರಮಾಣ ವಚನ ಸ್ವೀಕರಿಸಿದರು. ಅವರ ಜೊತೆಗೆ ಬಿಜೆಪಿ ಮತ್ತು ಮಿತ್ರ ಪಕ್ಷಗಳ ಎಂಟು ಮಂದಿ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಬಿಜೆಪಿಗೆ ಈಗ ಬೆಂಬಲ ಸೂಚಿಸಿರುವ ಶಾಸಕರು ವಿಶ್ವಾಸಮತ ಸಂದರ್ಭದಲ್ಲಿ ಮನಸ್ಸು ಬದಲಿಸದಂತೆ ಸಚಿವ ಸ್ಥಾನಗಳನ್ನು ಹಂಚಲಾಯಿತು. ಎನ್ಪಿಪಿಯ ವೈ. ಜಾಯ್ಕುಮಾರ್ಅವರನ್ನು ಉಪ ಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ನಾಲ್ವರು ಸದಸ್ಯರನ್ನು ಹೊಂದಿರುವ ಎನ್ಪಿಪಿಯ ಎನ್‌. ಕಯಿಸಿ ಅವರನ್ನೂ ಸಚಿವರನ್ನಾಗಿ ಮಾಡಲಾಯಿತು. ನಾಲ್ವರು ಶಾಸಕರನ್ನು ಹೊಂದಿರುವ ನಾಗಾ ಪೀಪಲ್ಸ್ಫ್ರಂಟ್ ಮೂವರಿಗೆ ಸಚಿವ ಸ್ಥಾನ ನೀಡಲಾಯಿತು.  ಎಲ್ಜೆಪಿಯ ಏಕೈಕ ಶಾಸಕ ಕರಮ್ಶ್ಯಾಮ್ಅವರಿಗೂಸಚಿವ ಸ್ಥಾನ ಸಿಕ್ಕಿತು. ಕಾಂಗ್ರೆಸ್ಸಿನಿಂದ  ಪಕ್ಷಾಂತರ ಮಾಡಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿರುವ ಟಿ. ಶ್ಯಾಮಕುಮಾರ್ಅವರೂ ಸಚಿವರಾದರು. 28 ಶಾಸಕರನ್ನು ಹೊಂದಿರುವ ಕಾಂಗ್ರೆಸ್ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ 21 ಶಾಸಕರನ್ನು ಹೊಂದಿರುವ ಬಿಜೆಪಿಯನ್ನು ಸರ್ಕಾರ ರಚಿಸಲು ರಾಜ್ಯಪಾಲರಾದ ನಜ್ಮಾ ಹೆಫ್ತುಲ್ಲಾ ಆಹ್ವಾನಿಸಿದ್ದರು.

2017: ನವದೆಹಲಿ: ಐಸಿಸಿಯ (ಅಂತಾರಾಷ್ಟ್ರೀಯ ಕ್ರಿಕೆಟ್ಮಂಡಳಿ) ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ಮನೋಹರ್ರಾಜೀನಾಮೆ ನೀಡಿದರು. ಐಸಿಸಿಯ ಉನ್ನತ ಸ್ಥಾನ ಅಲಂಕರಿಸಿದ್ದ ಮನೋಹರ್ಅವರು ವೈಯಕ್ತಿಕ ಕಾರಣ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಎಲ್ಲ ಬೆಳವಣಿಗೆಗಳಿಗೆ ಬೆಂಗಳೂರಿನಲ್ಲಿ ನಡೆದ ಭಾರತಆಸ್ಟ್ರೇಲಿಯಾ ಎರಡನೇ ಟೆಸ್ಟ್ಪಂದ್ಯದಲ್ಲಿ ಡಿಆರ್ಎಸ್ನಿಯಮ ಉಲ್ಲಂಘಿಸಿದ ಘಟನೆ ಕಾರಣ ಎನ್ನಲಾಯಿತು. ಆಸ್ಟ್ರೇಲಿಯಾ ನಾಯಕ ಸ್ಟೀವ್ಸ್ಮಿತ್ವಿರುದ್ಧ ಬಿಸಿಸಿಐ (ಭಾರತ ಕ್ರಿಕೆಟ್ನಿಯಂತ್ರಣ ಪ್ರಾಧಿಕಾರ) ಸಲ್ಲಿಸಿದ್ದ ದೂರಿಗೆ ಐಸಿಸಿ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಕಾರಣವಾಗಿದೆ ಎಂದು ಎನ್ನಲಾಯಿತು.  ಮುಂಬರುವ ಕೆಲದಿನಗಳಲ್ಲಿ ಐಸಿಸಿ ಸಭೆ ನಡೆಯಲಿದ್ದು, ಅದರಲ್ಲಿ ಬಿಸಿಸಿಐ ಆರ್ಥಿಕ ಸುಧಾರಣೆ ತರಲು ಮತ್ತು ತನ್ನ ಹಿಡಿತ ಬಲಪಡಿಸಿಕೊಳ್ಳಲು ಸರ್ವ ಪ್ರಯತ್ನ ನಡೆಸುವ ಸುಳಿವು ಅರಿತು  ಮನೋಹರ್ಅವರು ಬಿಸಿಸಿಐಗೆ ಎದುರಾಳಿ ಆಗಲು ಇಷ್ಟವಿಲ್ಲದೆ ರಾಜೀನಾಮೆ ಸಲ್ಲಿಸಿದರು ಎಂದು ಮೂಲಗಳು ವರದಿ ಮಾಡಿದವು. ಶಶಾಂಕ್ಅವರ ರಾಜೀನಾಮೆ ಅಂಗೀಕರಿಸಲಾಗಿದೆ ಎಂದು ಐಸಿಸಿ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿತು. ಲೋಧಾ ಸಮಿತಿ ಶಿಫಾರಸ್ಸುಗಳನ್ನು ಜಾರಿಗೆ ತರುವಂತೆ ಆದೇಶಿಸಿದ್ದ ಸುಪ್ರೀಂ ಕೋರ್ಟ್ನಿಲುವಿಗೆ ಅಸಮ್ಮತಿ ಸೂಚಿಸಿದ್ದ ಮನೋಹರ್ಬಿಸಿಸಿಐ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇಂದು ವಿಶ್ವ ಬಳಕೆದಾರರ ದಿನ

2009: ಪ್ರಸಕ್ತ 15ನೇ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಕ್ಷವು ಇತರೆ ಪಕ್ಷಗಳೊಂದಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳದೆ ತನ್ನ ಸ್ವಂತ ಬಲದ ಮೇಲೆಯೇ ಏಕಾಂಗಿಯಾಗಿ ಸೆಣಸಲಿದೆ ಎಂದು ಹೇಳುವ ಮೂಲಕ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ತೃತೀಯ ರಂಗವನ್ನು ದೂರಸರಿಸಿದರು.

2009: ಹಲವಾರು ದಿನಗಳಿಂದ ಚಳವಳಿ ನಡೆಸುತ್ತಿದ್ದ ವಕೀಲರು ಮತ್ತು ವಿರೋಧ ಪಕ್ಷಗಳ ಕಾರ್ಯಕರ್ತರು ಸಂಸತ್ ಭವನದ ಎದುರು ಧರಣಿ ನಡೆಸಲು ಉದ್ದೇಶಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿರೋಧ ಪಕ್ಷದ ಪ್ರಮುಖ ನಾಯಕ ಮತ್ತು ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಸಹೋದರ ಶಹಬಾಜ್ ಅವರನ್ನು ಗೃಹ ಬಂಧನದಲ್ಲಿ ಇಡಲಾಯಿತು. ಈ ಬೆಳವಣಿಗೆಯಿಂದ ಪಾಕ್ ಬಿಕ್ಕಟ್ಟು ಉಲ್ಬಣಗೊಂಡಿತು.

2009: ಮೊದಲ ಸೂಪರ್‌ಮನ್ ಕಾಮಿಕ್ ಪುಸ್ತಕ ವೊಂದು ಹರಾಜಿನಲ್ಲಿ 3,17,200 ಡಾಲರುಗಳಿಗೆ ಮಾರಾಟವಾಯಿತು. ಇದಕ್ಕಾಗಿ ಟೆಂಡರನ್ನು ಆನ್‌ಲೈನಿನಲ್ಲಿ ಎರಡು ವಾರಗಳ ಹಿಂದೆ ಆರಂಭಿಸಲಾಗಿತ್ತು. ಮೊದಲಿಗೆ ಇದು 2ಲಕ್ಷ ಡಾಲರುಗಳಿಗೆ ಬಿಕರಿಯಾಗಿತ್ತು ಕೊನೆ ಕ್ಷಣದಲ್ಲಿ ಇದರ ಬೆಲೆ 3 ಲಕ್ಷ ಡಾಲರಿಗೆ ಏರಿತು. ಆದರೆ ಇದರ ಮಾರಾಟಗಾರರಾಗಲಿ ಖರೀದಿ ಮಾಡಿದವರಾಗಲಿ ಯಾರು ಎಂಬುದು ಗೊತ್ತಾಗಲಿಲ್ಲ.

2009: ಪಾಕಿಸ್ಥಾನದ ಖಾಲಿದ್ ಲತೀಫ್ ಅವರು ಪ್ರಥಮ ದರ್ಜೆ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ದ್ವಿಶತಕ ಗಳಿಸಿದ ವಿಶ್ವದ ಒಂಬತ್ತನೇ ಆಟಗಾರ ಎನಿಸಿದರು. ಪಾಕ್ ದೇಸಿ ಏಕದಿನ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಕರಾಚಿ ತಂಡದ ಪರ ಆಡಿದ ಲತೀಫ್ ಕರಾಚಿಯ ನ್ಯಾಷನಲ್ ಬ್ಯಾಂಕ್ ಕಾಂಪ್ಲೆಕ್ಸಿನಲ್ಲಿ ಕ್ವೆಟ್ಟಾ ತಂಡದ ವಿರುದ್ಧದ ಪಂದ್ಯದಲ್ಲಿ 163 ಎಸೆತಗಳಲ್ಲಿ 204 ರನ್ ಗಳಿಸಿದರು. ಈ ಸಾಧನೆ ಮಾಡಿದ ಪಾಕಿಸ್ಥಾನದ ಎರಡನೇ ಆಟಗಾರ ಎಂಬ ಗೌರವವನ್ನೂ ಲತೀಫ್ ತಮ್ಮದಾಗಿಸಿಕೊಂಡರು. ಈ ಮೊದಲು ಮೊಹಮ್ಮದ್ ಅಲಿ ಅವರು 2004-05 ರಲ್ಲಿ ಸಿಯಾಲ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಡಿಫೆನ್ಸ್ ತಂಡದ ಪರ 207 ರನ್ ಗಳಿಸಿದ್ದರು.

2008: ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗ ನಿರ್ಮಾಣ ಯೋಜನೆಯನ್ನು ಶಾಶ್ವತವಾಗಿ ರದ್ದು ಮಾಡುವಂತೆ ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಭಿಜಿತ್ ದಾಸ್ ಗುಪ್ತ ಶಿಫಾರಸು ಮಾಡಿದ್ದು ಬೆಳಕಿಗೆ ಬಂತು. ಚುನಾಯಿತ ಸರ್ಕಾರ ಇಲ್ಲದಾಗ ಐಎಎಸ್ ಅಧಿಕಾರಿಗಳು ಈ ಬಗ್ಗೆ ಏಕಪಕ್ಷೀಯ ನಿರ್ಧಾರ ಕೈಗೊಂಡು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿ.ಪಿ.ಬಳಿಗಾರ ಅವರಿಗೆ ಪತ್ರ ಬರೆಯುವ ಮೂಲಕ ಈ ಭಾಗದ ಜನತೆಗೆ ದ್ರೋಹ ಎಸಗಿದ್ದು, ರಾಜ್ಯಪಾಲರು ಕೂಡಾ ಸಾರ್ವಜನಿಕ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

2008: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್ ಅವರನ್ನು ಜನರೇ ನೇರವಾಗಿ ಆಯ್ಕೆ ಮಾಡಬೇಕು ಹಾಗೂ ಅವರ ಅಧಿಕಾರಾವಧಿ ಐದು ವರ್ಷ ಇರಬೇಕು ಎಂದು ವಿಜ್ಞಾನಿ ಡಾ.ಕೆ.ಕಸ್ತೂರಿರಂಗನ್ ನೇತೃತ್ವದ ಸಮಿತಿ ಶಿಫಾರಸು ಮಾಡಿತು. ಬೆಂಗಳೂರು ಮಹಾನಗರದ ವಲಯ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಡಳಿತ ಸುಧಾರಣೆಯ ಉದ್ದೇಶದಿಂದ ರಚಿಸಿದ್ದ ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಈ ಸಮಿತಿ ರಾಜ್ಯಪಾಲರಿಗೆ ತನ್ನ ವರದಿ ಸಲ್ಲಿಸಿತು.

2008: ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಹಿರಿಯ ನೇತಾರ ಹು ಜಿಂಟಾವೊ ಚೀನಾದ ಅಧ್ಯಕ್ಷರಾಗಿ 2ನೇ ಅವಧಿಗೆ ಮರು ಆಯ್ಕೆಯಾದರು. ಉಪಾಧ್ಯಕ್ಷರಾಗಿ ಝಿ ಜಿಂಗ್ ಪಿಂಗ್ ಚುನಾಯಿತರಾದರು. ಚೀನಾದ ಸಂಸತ್ತು ರಾಷ್ಟ್ರೀಯ ಪ್ರಜಾ ಕಾಂಗ್ರೆಸ್ಸಿನಲ್ಲಿ (ಎನ್ ಪಿ ಸಿ) ಹು ಜಿಂಟಾವೊ ಅವರ ಆಯ್ಕೆಯನ್ನು ಸಂಭ್ರಮದಿಂದ ಘೋಷಿಸಲಾಯಿತು.

2008: ನವದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಎಐಐಎಂಎಸ್- ಏಮ್ಸ್) ದಾಖಲಾದ ಸನ್ಯಾಸಿಯೊಬ್ಬರು ತನ್ನ ವಯಸ್ಸು 130 ವರ್ಷ ಎಂದು ಹೇಳಿ, ಆಸ್ಪತ್ರೆಯ ವೈದ್ಯರನ್ನು ಫಜೀತಿಗೆ ತಳ್ಳಿದರು. ಮೂತ್ರಕೋಶದಲ್ಲಿ ಬೆಳೆದ ದುರ್ಮಾಂಸವನ್ನು ತೆಗೆದುಹಾಕಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬಳಿಕ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆದ ಉತ್ತರ ಪ್ರದೇಶದ ಶಹಜಾನಪುರ ಸಮೀಪದ ಬೆಹ್ತಾ ಅರಣ್ಯ ಪ್ರದೇಶದಿಂದ ಬಂದ ಸಂತ ಸ್ವಾಮಿ ರಮಾನಂದ ಅವರು ತನ್ನ ವಯಸ್ಸು 130 ವರ್ಷಗಳು ಎಂದು ವೈದ್ಯರಿಗೆ ತಿಳಿಸಿದರು. 'ಅವರ ವಯಸ್ಸು 100ಕ್ಕಿಂತ ಹೆಚ್ಚಾಗಿರುವುದು ಮಾತ್ರ ಹೌದು. ಆದರೆ 130 ವರ್ಷ ಆಗಿರಬಹುದೇ ಇಲ್ಲವೇ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ' ಎಂದು ಏಮ್ಸ್ ನ ಮೂತ್ರಕೋಶ ವಿಭಾಗದ ಮುಖ್ಯಸ್ಥ ಡಾ. ಎನ್. ಪಿ. ಗುಪ್ತ ಹೇಳಿದರು. ರಮಾನಂದ ಅವರ ವಯಸ್ಸು 100 ವರ್ಷಗಳಿಗಿಂತ ಹೆಚ್ಚಾಗಿದ್ದರೂ ಏಮ್ಸ್ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ದಾಖಲೆಯೊಂದನ್ನು ನಿರ್ಮಿಸಿದಂತಾಗಿದ್ದು, 100 ವರ್ಷ ಮೀರಿದ ವ್ಯಕ್ತಿಯೊಬ್ಬರು ಶಸ್ತ್ರಚಿಕಿತ್ಸೆಗೆ ಒಳಗಾಗಿರುವುದು ಈ ಸಂಸೆಯಲ್ಲಿ ಇದೇ ಮೊದಲ ಸಲ ಎಂದು ಡಾ. ಗುಪ್ತ ಹೇಳಿದರು. 'ಅವರ ಮೂತ್ರಕೋಶದಲ್ಲಿ ದುರ್ಮಾಂಸ ಬೆಳೆದಿತ್ತು. ಅದನ್ನು ಯಾವುದೇ ಗಾಯವೂ ಇಲ್ಲದಂತೆ ತೆಗೆದುಹಾಕಲಾಯಿತು' ಎಂದು ಡಾ. ಗುಪ್ತ ಹೇಳಿದರು. ಪ್ರಸ್ತುತ ಗಿನ್ನೆಸ್ ವಿಶ್ವದಾಖಲೆಗಳ ಪುಸ್ತಕದ ದಾಖಲೆಯ ಪ್ರಕಾರ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ 122 ವರ್ಷಗಳ ಒಬ್ಬ ಫ್ರೆಂಚ್ ಮಹಿಳೆ.

2009: ಕೇಂದ್ರ ಮುಂಬೈಯ ಸಿಯೋನ್ ನಿಲ್ದಾಣದಲ್ಲಿ ನಿಂತಿದ್ದ ಹೊರವಲಯ ರೈಲುಗಾಡಿಯೊಂದರಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿ ಐವರು ಗಾಯಗೊಂಡರು. ರೈಲುಗಾಡಿಯ ಪ್ರಯಾಣಿಕರೊಬ್ಬರ ಬಳಿ ಇದ್ದ ಅನಿಲ ಬಾಟಲಿ ಅನಿರೀಕ್ಷಿತವಾಗಿ ಸ್ಫೋಟಗೊಂಡು ಈ ದುರಂತ ಸಂಭವಿಸಿತು.

2008: ಟಿಬೆಟ್ ರಾಜಧಾನಿ ಲ್ಹಾಸಾದಲ್ಲಿ ಬೌದ್ಧ ಭಿಕ್ಷುಗಳ ಪ್ರದರ್ಶನದ ಮೇಲೆ ನಡೆದ `ಹಿಂಸಾತ್ಮಕ ದಮನ'ವನ್ನು ಪ್ರತಿಭಟಿಸಿ ರಾಜಧಾನಿಯಲ್ಲಿ ಚೀನೀ ರಾಯಭಾರ ಕಚೇರಿ ಕಟ್ಟಡಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಸುಮಾರು 50 ಮಂದಿ ಟಿಬೆಟಿಯನ್ನರನ್ನು ಬಂಧಿಲಾಯಿತು. ಹಿಂದಿನ ದಿನ ಲ್ಹಾಸಾದಲ್ಲಿ ಸಂಭವಿಸಿದ ಚೀನಾ ವಿರೋಧಿ ಪ್ರತಿಭಟನೆ ಕಾಲದಲ್ಲಿ 10 ಮಂದಿ ಮೃತರಾದರು ಎಂದು ಚೀನಾ ತಿಳಿಸಿತು. ಈ ಮಧ್ಯೆ ಟಿಬೆಟನ್ನರು ಮತ್ತು ಅವರ ಪ್ರತಿಭಟನೆ ಹತ್ತಿಕ್ಕಲು ಪ್ರಯತ್ನಿಸುತ್ತಿರುವ ಚೀನಾ ಸರ್ಕಾರದ ನಡುವಣ ಹಿಂಸಾತ್ಮಕ ಸಂಘರ್ಷದಲ್ಲಿ ಕನಿಷ್ಠ 100 ಟಿಬೆಟನ್ನರು ಸಾವನ್ನಪ್ಪಿ, ನೂರಾರು ಟಿಬೆಟ್ ನಾಗರಿಕರು ತೀವ್ರವಾಗಿ ಗಾಯಗೊಂಡರು ಎಂದು ಅನಧಿಕೃತ ವರದಿಗಳು ಹೇಳಿದವು.

2008: ಶಾಂತಿನಿಕೇತನದ ವಿಶ್ವಭಾರತಿ ವಿಶ್ವವಿದ್ಯಾಲಯದ ನೂತನ ಕುಲಪತಿಗಳನ್ನಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ನೇಮಕ ಮಾಡಿದರು.

2008: ರಾಜ್ಯ ಲಲಿತಕಲಾ ಅಕಾಡೆಮಿಯ ಧೋರಣೆಯನ್ನು ಖಂಡಿಸಿ ಉಡುಪಿಯ ಹಿರಿಯ ಕಲಾವಿದ ರಮೇಶರಾವ್ ಅವರು ಸುವರ್ಣ ಕರ್ನಾಟಕ ವಿಶೇಷ ಪ್ರಶಸ್ತಿಯನ್ನು ತಿರಸ್ಕರಿಸಲು ನಿರ್ಧರಿಸಿದರು. ಸುವರ್ಣ ಕರ್ನಾಟಕ ಆಚರಣೆ ಸಂದರ್ಭದಲ್ಲಿ ಲಲಿತಕಲಾ ಆಕಾಡೆಮಿಯು ರಾಜ್ಯದ 28 ಕಲಾವಿದರನ್ನು ಗುರುತಿಸಿ ವಿಶೇಷ ಪುರಸ್ಕಾರ ನೀಡಲು ನಿರ್ಧರಿಸಿತ್ತು. ಆದರೆ ಈ ತನಕ ಪುರಸ್ಕಾರ ನೀಡದೇ ಇರುವುದು ಹಾಗೂ ಪ್ರಸ್ತುತ ಒತ್ತಡದ ಹಿನ್ನೆಲೆಯಲ್ಲಿ 55 ಕಲಾವಿದರಿಗೆ ಪ್ರಶಸ್ತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ತಾವು ಈ ನಿರ್ಧಾರಕ್ಕೆ ಬಂದುದಾಗಿ ರಮೇಶ ರಾವ್ ತಿಳಿಸಿದರು.

2007: ಛತ್ತೀಸ್ ಗಢದ ದಂಟೆವಾಡ ಜಿಲ್ಲೆಯ ರಾಣಿಬೊದ್ಲಿಯಲ್ಲಿನ ಪೊಲೀಸ್ ಚೌಕಿ ಮೇಲೆ ಬೆಳಗಿನ ಜಾವ ದಾಳಿ ನಡೆಸಿದ ಮಾವೋವಾದಿ ನಕ್ಸಲೀಯರು ಗ್ರೆನೇಡ್ ಹಾಗೂ ಪೆಟ್ರೋಲ್ ಬಾಂಬ್ ಎಸೆದು, ಮನಸೋ ಇಚ್ಛೆ ಗುಂಡು ಹಾರಿಸಿದ್ದರಿಂದ 55 ಮಂದಿ ಭದ್ರತಾ ಸಿಬ್ಬಂದಿ ಹತರಾದರು. ಸತ್ತವರಲ್ಲಿ ಛತ್ತೀಸ್ ಗಢ ವಿಶೇಷ ಸಶಸ್ತ್ರ ಪಡೆಯ 16 ಮಂದಿ ಹಾಗೂ 38 ಮಂದಿ ವಿಶೇಷ ಪೊಲೀಸ್ ಅಧಿಕಾರಿಗಳೂ ಸೇರಿದ್ದರು. ಗಾಯಾಳುಗಳ ಪೈಕಿ 10 ಮಂದಿ ತೀವ್ರ ಸುಟ್ಟಗಾಯಗಳಿಗೆ ಒಳಗಾದರು.

2007: ರಾಷ್ಟ್ರೀಯ ಜಲ ನೀತಿ ರೂಪಿಸುವವರೆಗೆ ಕಾವೇರಿ ನ್ಯಾಯಮಂಡಳಿ ಐತೀರ್ಪು ಜಾರಿಗೆ ಅಧಿಸೂಚನೆ ಹೊರಡಿಸದಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸುವ ಸರ್ವಾನುಮತದ ನಿರ್ಣಯವನ್ನು ಕರ್ನಾಟಕ ವಿಧಾನಸಭೆ ಕೈಗೊಂಡಿತು. ಸುದೀರ್ಘ ಚರ್ಚೆಯ ಬಳಿಕ ಪ್ರತಿಪಕ್ಷದ ನಾಯಕ ಧರ್ಮಸಿಂಗ್ ಮಂಡಿಸಿದ ಈ ನಿರ್ಣಯಕ್ಕೆ ಸದನ ಒಕ್ಕೊರಲ ಅನುಮೋದನೆ ನೀಡಿತು.

2007: ಅಲ್ ಖೈದಾ ಸಂಘಟನೆಯ ಮೂರನೇ ನಂಬರ್ ನಾಯಕನ ಸ್ಥಾನದಲ್ಲಿರುವ ಖಲೀದ್ ಶೇಖ್ ಮೊಹಮ್ಮದ್, 2001ರ ಸೆಪ್ಟೆಂಬರ್ 11ರಂದು ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ನಿನಲ್ಲಿ ನಡೆದ ದಾಳಿಕೃತ್ಯಗಳ ಯೋಜನೆ ರೂಪಿಸಿದ್ದಾಗಿ ಒಪ್ಪಿಕೊಂಡನು. ಪಾಕಿಸ್ಥಾನೀಯನಾದ ಶೇಕ್ ಮೊಹಮ್ಮದ್ ಗ್ವಾಂಟೆನಾಮೋದಲ್ಲಿ ರಹಸ್ಯ ಸೇನಾ ಟ್ರಿಬ್ಯೂನಲ್ ಮುಂದೆ ಈ ತಪ್ಪೊಪ್ಪಿಗೆ ನೀಡಿ, ಈ ಕೃತ್ಯಕ್ಕಾಗಿ ವಿಷಾದ ವ್ಯಕ್ತಪಡಿಸಿದ.

2007: ಮುಂಬೈಯಲ್ಲಿ ನಡೆದ ಮಾಮಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಚಿತ್ರವೂ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಪಡೆಯಿತು.

2007: ಬಹುಕೋಟಿ ಖೋಟಾ ಛಾಪಾಕಾಗದ ಹಗರಣದ ರೂವಾರಿ ಅಬ್ದುಲ್ ಕರೀಂ ತೆಲಗಿ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಹೂಡಲಾಗಿದ್ದ ಮೊತ್ತ ಮೊದಲ ಪ್ರಕರಣದ ವಿಚಾರಣೆ ಪರಪ್ಪನ ಅಗ್ರಹಾರದ ವಿಶೇಷ ಸೆರೆಮನೆಯಲ್ಲಿ ಆರಂಭಗೊಂಡಿತು.

2007: ಬೆಂಗಳೂರಿನ ವೈದ್ಯ ಡಾ. ಬಿ. ರಮಣರಾವ್ ಅವರು ದೀರ್ಘಕಾಲದಿಂದ ಉಚಿತವಾಗಿ ಪ್ರತಿವಾರ ವೈದ್ಯಕೀಯ ಶಿಬಿರಗಳನ್ನು ನಡೆಸಿದ್ದಕ್ಕಾಗಿ `ಲಿಮ್ಕಾ ದಾಖಲೆಗಳ ಪುಸ್ತಕ'ಕ್ಕೆ ಸೇರ್ಪಡೆಯಾದರು.

2006: ಹಳೆಯ ಮಲಯಾಳಂ, ಕನ್ನಡ ಹಾಗೂ ತಮಿಳು ಚಿತ್ರಗಳಲ್ಲಿ ಸಂಗೀತ ನಿರ್ದೇಶಕರಾಗಿ ಖ್ಯಾತರಾಗಿದ್ದ ಜಿ. ದೇವರಾಜನ್ (78) ಚೆನ್ನೈಯಲ್ಲಿ ತಮ್ಮ ನಿವಾಸದಲ್ಲಿ ನಿಧನರಾದರು. ಕೆಲವು ಕನ್ನಡ ಮತ್ತು ತಮಿಳು ಚಿತ್ರಗಳೊಂದಿಗೆ ಸುಮಾರು 350 ಮಲಯಾಳಂ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿದ್ದ ಅವರಿಗೆ ಐದು ಬಾರಿ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು.

2006: ಮೆಲ್ಬೋರ್ನಿನಲ್ಲಿ ಕಾಮನ್ವೆಲ್ತ್ ಕ್ರೀಡೆಗಳು ಸಂಭ್ರಮೋತ್ಸಾಹದ ಮಧ್ಯೆ ಉದ್ಘಾಟನೆಗೊಂಡಿತು.

2001: ವಿ.ವಿ.ಎಸ್. ಲಕ್ಷ್ಮಣ್ ಅವರು ತಮ್ಮ 281ನೇ ರನ್ ಗಳಿಸಿ ಟೆಸ್ಟ್ ಪಂದ್ಯಗಳಲ್ಲಿ ಅತ್ಯಂತ ಹೆಚ್ಚು ರನ್ ಗಳಿಸಿದ ಭಾರತದ ಆಟಗಾರ ಎನಿಸಿದರು. ಕೋಲ್ಕತ್ತಾದಲ್ಲಿ ಆಸ್ಟ್ರೇಲಿಯಾ ಜೊತೆಗೆ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸುನಿಲ್ ಗಾವಸ್ಕರ್ ಗಳಿಸಿದ್ದ 236 ರನ್ನುಗಳ ದಾಖಲೆಯನ್ನು ಇದು ಮುರಿಯಿತು.

1999: ಢಾಕಾದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಒಂದು ಇನ್ನಿಂಗ್ಸ್ ಹಾಗೂ 175 ರನ್ನುಗಳ ಅಂತರದಲ್ಲಿ ಪರಾಭವಗೊಳಿಸುವ ಮೂಲಕ ಪಾಕಿಸ್ಥಾನವು ಉದ್ಘಾಟನಾ ಏಷ್ಯನ್ ಟೆಸ್ಟ್ ಚಾಂಪಿಯನ್ ಶಿಪ್ಪನ್ನು ಗೆದ್ದುಕೊಂಡಿತು.

1996: ಡಚ್ ಸರ್ಕಾರವು ಇನ್ನಷ್ಟು ಸಾಲ ಕೊಡಲು ನಿರಾಕರಿಸಿದ ಪರಿಣಾಮವಾಗಿ 77 ವರ್ಷಗಳ ಫಾಕ್ಕರ್ ವಿಮಾನಯಾನ ಕಂಪೆನಿಯು ದಿವಾಳಿ ಎದ್ದಿತು. ದಚ್ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಹೆಚ್ಚು ತರಬೇತಿ ಪಡೆದ 5000ಕ್ಕೂ ಹೆಚ್ಚು ನೌಕರರು ತಮ್ಮ ಕೆಲಸ ಕಳೆದುಕೊಂಡರು. ಫಾಕ್ಕರ್ ಕಂಪೆನಿಯ ವಿವಿಧ ಭಾಗಗಳನ್ನು ಹೊಸದಾಗಿ ನಿರ್ಮಿಸಲಾದ ಕಂಪೆನಿಯೊಂದಕ್ಕೆ ವರ್ಗಾಯಿಸಲಾಯಿತು.

1975: ಕ್ವಾಲಾಲಂಪುರದಲ್ಲಿ ನಡೆದ ವಿಶ್ವಕಪ್ ಹಾಕಿ ಪಂದ್ಯದಲ್ಲಿ ಪಾಕಿಸ್ಥಾನವನ್ನು 2-1 ಗೋಲುಗಳೊಂದಿಗೆ ಪರಾಭವಗೊಳಿಸುವ ಮೂಲಕ ಭಾರತದ ಹಾಕಿ ತಂಡ ತನ್ನ ಅಪರೂಪದ ಸಾಧನೆಗಳಲ್ಲಿ ಒಂದನ್ನು ದಾಖಲು ಮಾಡಿತು.

1965: ಕಲಾವಿದೆ ರಾದಿಕಾ ದಯಾನಂದ ಜನನ.

1964: ನಟಿ ಎಲಿಜಬೆತ್ ಟೇಲರ್ ಮಾಂಟ್ರಿಯಲ್ನಲ್ಲಿ ನಟ ರಿಚರ್ಡ್ ಬರ್ಟನ್ ಅವರನ್ನು ಮದುವೆಯಾದರು. (ಇದು ಆಕೆಯ ಐದನೇ ಮದುವೆ ಮತ್ತು ಆತನ ಎರಡನೇ ಮದುವೆ. ಮುಂದೆ ಎಲಿಜಬೆತ್ ತನ್ನ 8ನೇ ಮದುವೆಯನ್ನೂ ಈತನ ಜೊತೆಗೇ ಮಾಡಿಕೊಂಡರು).

1960: ಕಲಾವಿದ ಗಂಗಪ್ಪ ಗುಡಾರದ ಜನನ.

1944: ಕಲಾವಿದ ಎಂ.ವಿ. ಕೃಷ್ಣಮೂರ್ತಿ ಜನನ.

1941: ಕಲಾವಿದ ಎನ್. ವೆಂಕಟಶ್ಯಾಮಾಚಾರಿ ಜನನ.

1933: ಕಲಾವಿದ ಕೃಷ್ಣಮೂರ್ತಿದಾಸ್ ಜನನ.

1931: ವೀಣಾ ವಾದಕ, ಸಂಗೀತ ಶಾಸ್ತ್ರಜ್ಞ, ಗಾಯಕ ಹಾಗೂ ಅತ್ಯುತ್ತಮ ವಾಗ್ಮಿಯಾಗಿ ಖ್ಯಾತರಾದ ರಾ. ವಿಶ್ವೇಶ್ವರನ್ ಅವರು ಹೆಸರಾಂತ ಸಂಗೀತ ಕುಟುಂಬದ ರಾಮಯ್ಯ- ವರಲಕ್ಷ್ಮಿ ದಂಪತಿಯ ಮಗನಾಗಿ ಈದಿನ ಜನಿಸಿದರು.

1917: ರಷ್ಯದ ತ್ಸಾರ್ 2ನೇ ನಿಕೋಲಸ್ ತನ್ನ ಸಹೋದರ ಮೈಕೆಲ್ ಪರವಾಗಿ ಸಿಂಹಾಸನ ತ್ಯಜಿಸಿದ. ಆದರೆ ಮೈಕೆಲ್ ಸಿಂಹಾಸನ ನಿರಾಕರಿಸಿದ. 1918ರ ಏಪ್ರಿಲಿನಲ್ಲಿ 2ನೇ ನಿಕೋಲಸ್ ಮತ್ತು ಕುಟುಂಬ ಸದಸ್ಯರನ್ನು ಯೆಕೆಟರಿನ್ ಬರ್ಗಿಗೆ ಕರೆದೊಯ್ದು ಅದೇ ವರ್ಷದ ಜುಲೈಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು.

1892: ಅಮೆರಿಕನ್ ಸಂಶೋಧಕ ಜೆಸ್ಸೆ ರೆನೊ ಅವರಿಗೆ ಮೊತ್ತ ಮೊದಲ ರೆನೊ ಇನ್ ಕ್ಲೈನ್ಡ್ ಎಲೆವೇಟರ್ ಹೆಸರಿನ ಎಸ್ಕಲೇಟರಿಗೆ ಪೇಟೆಂಟ್ ಲಭಿಸಿತು. ಅದನ್ನು ಕೋನಿ ದ್ವೀಪದ ಓಲ್ಡ್ ಪೈಯರಿನಲ್ಲಿ 1896ರಲ್ಲಿ ಅಳವಡಿಸಲಾಯಿತು.

1877: ಮೆಲ್ಬೋರ್ನಿನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಪಂದ್ಯ ಆಡಿದವು. ಆಸ್ಟ್ರೇಲಿಯಾ 45 ರನ್ನುಗಳ ವಿಜಯ ಸಾಧಿಸಿತು. ಚಾರ್ಲ್ಸ್ ಬೆನ್ನರ್ ಮ್ಯಾನ್ 165 ರನ್ನುಗಳೊಂದಿಗೆ ಮೊತ್ತ ಮೊದಲ ಟೆಸ್ಟ್ ಸೆಂಚುರಿ ಸಿಡಿಸಿದರು.

1854: ಎಮಿಲ್ (ಅಡಾಲ್ಫ್) ವೊನ್ ಬೆಹ್ರಿಂಗ್ (1854-1917) ಹುಟ್ಟಿದ ದಿನ. ಬ್ಯಾಕ್ಟೀರಿಯಾ ತಜ್ಞನಾದ ಈತ ವೈದ್ಯಕೀಯಕ್ಕಾಗಿ ನೀಡಲಾಗುವ ಮೊತ್ತ ಮೊದಲ ನೊಬೆಲ್ ಪ್ರಶಸ್ತಿ ವಿಜೇತ ವ್ಯಕ್ತಿ.

1848: ಜೋಸೆಫ್ ಜೆಂಕಿನ್ಸ್ ರಾಬರ್ಟ್ಸ್ (1848-1856) ಹುಟ್ಟಿದ ದಿನ. ಈತ ಲೈಬೀರಿಯಾದ ಮೊದಲ ಅಧ್ಯಕ್ಷ.

1767: ಆಂಡ್ರ್ಯೂ `ಓಲ್ಡ್ ಹಿಕೊರಿ' ಜಾಕ್ಸನ್ (1767-1845) ಹುಟ್ಟಿದ. ಅಮೆರಿಕಾದ ಸೇನಾ ನಾಯಕನಾದ ಈತ 1829-37ರ ಅವದಿಯಲ್ಲಿ ಅಮೆರಿಕಾದ ಅಧ್ಯಕ್ಷನೂ ಆಗಿ ಸೇವೆ ಸಲ್ಲಿಸಿದ. ಮತದಾರರ ಸಾಮೂಹಿಕ ಮನವಿ ಮೂಲಕ ಅಧಿಕಾರಕ್ಕೆ ಏರಿದ ಪ್ರಥಮ ವ್ಯಕ್ತಿ ಈತ. ಈತನ ರಾಜಕೀಯ ಚಳವಳಿ `ಜಾಕ್ಸೋನಿಯನ್ ಡೆಮಾಕ್ರಸಿ' ಎಂದೇ ಹೆಸರಾಗಿದೆ.

ಕ್ರಿ.ಪೂ.44: ಬ್ರೂಟಸ್ ಮತ್ತು ಕ್ಯಾಸಿಯಸ್ ಅವರೂ ಇದ್ದ ಒಳಸಂಚುಗಾರರ ಕೂಟವೊಂದು ಜ್ಯೂಲಿಯಸ್ ಸೀಸರ್ನನ್ನು ಕೊಲೆಗೈದಿತು.

No comments:

Post a Comment