Saturday, March 10, 2018

ಇಂದಿನ ಇತಿಹಾಸ History Today ಮಾರ್ಚ್ 09

ಇಂದಿನ ಇತಿಹಾಸ History Today ಮಾರ್ಚ್ 09
 2018: ನವದೆಹಲಿ:  ಮರಣಶಯ್ಯೆಯಲ್ಲಿ ಇರುವ ವ್ಯಕ್ತಿಗೆ ಪರೋಕ್ಷ ದಯಾಮರಣ ಇಲ್ಲವೇ ಪರೋಕ್ಷ ಸುಖಮರಣ  ಕಲ್ಪಿಸುವ ಮತ್ತು ಚೇತರಿಸಲಾಗದಂತಹ ಕಾಯಿಲೆಗೆ ತುತ್ತಾದ ವ್ಯಕ್ತಿಗೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಲು ಮುಂಚಿತವಾಗಿಯೇ ವಿಲ್ ಬರೆದು ಸೂಚನೆ ನೀಡುವಂತಹ ಹಕ್ಕನ್ನು ಮಾನ್ಯ ಮಾಡಿ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತು.  ಮರಣಶಯ್ಯೆಯಲ್ಲಿರುವ ವ್ಯಕ್ತಿಗೆ ಯಾವಾಗ ಕೊನೆಯುಸಿರೆಳೆಯಬೇಕೆಂದು ನಿರ್ಧರಿಸುವ ಹಕ್ಕಿರುತ್ತದೆ. ಜನರಿಗೆ ಗೌರವದಿಂದ ಸಾವನ್ನಪ್ಪುವ ಸಂಪೂರ್ಣ ಹಕ್ಕಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿದೀಪಕ್ ಮಿಶ್ರಾ ನೇತೃತ್ವದ ಪಂಚಸದಸ್ಯ ಸಂವಿಧಾನ ಪೀಠವು ತನ್ನ ಚಾರಿತ್ರಿಕ ತೀರ್ಪಿನಲ್ಲಿ ತಿಳಿಸಿತು.  ನ್ಯಾಯಮೂರ್ತಿಗಳಾದ .ಕೆ.ಸಿಕ್ರಿ, .ಎಮ್.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಮತ್ತು ಅಶೋಕ್ ಭೂಷಣ್ ಅವರನ್ನೂ ಒಳಗೊಂಡ ಪೀಠ ಐತಿಹಾಸಿಕ ತೀರ್ಪು ಪ್ರಕಟಿಸಿತು.  ಮರಣಶಯ್ಯೆಯಲ್ಲಿರುವ ರೋಗಿಗೆ ಚಿಕಿತ್ಸೆ ನೀಡುವುದನ್ನು ನಿಲ್ಲಿಸುವ ಮೂಲಕ ದಯಾಮರಣಕ್ಕೆ ಅನುವು ಮಾಡಿಕೊಡಲು ಸುಪ್ರೀಕೋರ್ಟ್ ನಿರ್ಧರಿಸಿತು.  ಒಂದು ವೇಳೆ ತಾನು ಭವಿಷ್ಯದಲ್ಲಿ ಕೋಮಾ ಸ್ಥಿತಿಗೆ ತಲುಪಿದರೆ ಜೀವರಕ್ಷಕದ ಸಹಾಯದಿಂದ ಬದುಕಿಸಬೇಡಿ ಎಂದು ಯಾವುದೇ ವ್ಯಕ್ತಿ ಅಥವಾ ರೋಗಿಲಿವಿಂಗ್ ವಿಲ್ ಬರೆದಿಡಲು ಕೋರ್ಟ್ ಅನುಮತಿ ಕೊಟ್ಟಿತು. ನ್ಯಾಯಮೂರ್ತಿಗಳು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರೂ, ಪುನಶ್ಚೇತನಗೊಳ್ಳುವ ಯಾವುದೇ ಸಾಧ್ಯತೆಗಳು ಇಲ್ಲದ ಪರಿಸ್ಥಿಯಿದ್ದು, ಬದುಕಿರಲು ಇಚ್ಛಿಸದ ವ್ಯಕ್ತಿಗೆ ಸಂಕಷ್ಟದಲ್ಲಿ ಜೀವನ ಮುಂದುವರಿಸುವ ಸ್ಥಿತಿ ಇರಬಾರದು ಎಂದು ಪೀಠ ಹೇಳಿತು. ಯಾರು ಇಂತಹ ವಿಲ್ ನ್ನು ಅನುಷ್ಠಾನಗೊಳಿಸಬೇಕು ಮತ್ತು ಪರೋಕ್ಷ ದಯಾಮರಣ ಅಥವಾ ಪರೋಕ್ಷ ಸುಖಮರಣಕ್ಕೆ ವೈದ್ಯಕೀಯ ಮಂಡಳಿಯು ಹೇಗೆ ಅನುಮತಿ ನೀಡಬೇಕು ಎಂಬ ಬಗ್ಗೆ ಪಂಚಸದಸ್ಯ ಪೀಠವು ಮಾರ್ಗದರ್ಶಿ ಸೂತ್ರಗಳನ್ನೂ ನೀಡಿತು. ‘ಬದುಕಿನ ಕಾಮನಬಿಲ್ಲು ಬಣ್ಣ ಕಳೆದುಕೊಂಡಾಗ. . . ಬದುಕು ನಿಶ್ಚಲ ಮತ್ತು ನಿಷ್ಕ್ರಿಯವಾದಾಗ. . . ಬದುಕಿನ ಪಾವಿತ್ರ್ಯ ನಾಶವಾಗುತ್ತದೆ. ನಾವು ಅವರಿಗೆ ಬಾಗಿಲು ದಾಟಿ ಗೌರವಯುತವಾಗಿ ಸಾವನ್ನು ಅಪ್ಪಲು ಬಿಡಬಾರದೇ? ಕೆಲವರಿಗೆ ಅವರ ಮರಣ ಕೂಡಾ ಸಂಭ್ರಮದ ಕ್ಷಣವಾಗಿರುತ್ತದೆಎಂದು ಪೀಠ ಹೇಳಿತು. ಪುನಃಶ್ಚೇತನದ ಸಾಧ್ಯತೆಗಳೇ ಇಲ್ಲದ ರೋಗಿಗಳು ನೀಡುವ ಲಿವಿಂಗ್ ವಿಲ್‌ನ್ನು ಅವರ ಗೆಳೆಯರು ಅಥವಾ ಬಂಧುಗಳು ಜಾರಿಗೊಳಿಸಬಹುದಾಗಿದ್ದು, ಬಳಿಕ ವೈದ್ಯಕೀಯ ಮಂಡಳಿಯು ಅದನ್ನು ಪರಿಶೀಲಿಸಬಹುದು ಎಂದು ಸುಪ್ರೀಂಕೋರ್ಟ್ ಹೇಳಿತು.  ತಾನು ನೀಡಿರುವ ನಿರ್ದೇಶನಗಳು ಮತ್ತು ಮಾರ್ಗದರ್ಶನಗಳು ವಿಷಯಕ್ಕೆ ಸಂಬಂಧಿಸಿದಂತೆ ಶಾಸನ ರೂಪಿಸುವವರೆಗೆ ಜಾರಿಯಲ್ಲಿ ಇರುತ್ತವೆ ಎಂದು ಸುಪ್ರೀಂಕೋರ್ಟ್ ಹೇಳಿತು.  ೨೦೧೧ರಲ್ಲಿ ಸುಪ್ರೀಂಕೋರ್ಟ್ ಅರುಣಾ ಶಾನಬಾಗ್ ಪ್ರಕರಣದಲ್ಲಿ ಪರೋಕ್ಷ ದಯಾಮರಣವನ್ನು ಮಾನ್ಯ ಮಾಡಿತ್ತು. ಕಾಮನ್ ಕಾಸ್ ಸರ್ಕಾರೇತರ ಸಂಸ್ಥೆಯು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ಸುಪ್ರೀಂಕೋರ್ಟ್ ಪೀಠವು ಈದಿನ ತನ್ನ ತೀರ್ಪನ್ನು ಪ್ರಕಟಿಸಿತು.

2018: ಅಗರ್ತಲ : ಎರಡೂವರೆ ದಶಕಗಳಿಂದ ಎಡಪಕ್ಷದ ಆಡುಂಬೊಲವಾಗಿದ್ದ ತ್ರಿಪುರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಬಿಪ್ಲಬ್ ಕುಮಾರ್ ದೇಬ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಯುಗ ಆರಂಭವಾಯಿತು. ರಾಜ್ಯಪಾಲ ತಥಾಗತ ರಾಯ್ ಅವರು ಮುಖ್ಯಮಂತ್ರಿ ದೇಬ್, ಉಪಮುಖ್ಯಮಂತ್ರಿಯಾದ ಬಿಜೆಪಿ ಮುಖಂಡ ಜಿಷ್ಣು ದೇಬ್ ಬರ್ಮನ್ ಸೇರಿದಂತೆ ಸಚಿವರಾಗಿ ಆಯ್ಕೆಯಾದ ಏಳು ಮಂದಿಗೆ ಪ್ರಮಾಣ ವಚನ ಬೋಧಿಸಿದರು.ಗಣ್ಯರ ಉಪಸ್ಥಿತಿ: ಅಸ್ಸಾಂ ರೈಫಲ್ಸ್ ಮೈದಾನದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಭಾಗವಹಿಸಿದ್ದರು.ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳನ್ನು ಮುನ್ನಡೆಸುತ್ತಿರುವ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ, ಶಿವರಾಜ್ ಸಿಂಗ್ ಚೌಹಾಣ್ (ಮಧ್ಯ ಪ್ರದೇಶ), ಸರ್ಬಾನಂದ ಸೊನೊವಾಲಾ (ಅಸ್ಸಾಂ), ರಘುಬರ್ ದಾಸ್ (ಜಾರ್ಖಂಡ್) ಸಹ ಉಪಸ್ಥಿತರಿದ್ದರು. ಬಿಜೆಪಿ ಸರ್ಕಾರ ರಚನಾ ವೇದಿಕೆಯಲ್ಲಿ ಸಿಪಿಐ(ಎಂ) ಮಾಣಿಕ್ ಸರ್ಕಾರ್ : ತ್ರಿಪುರದ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಕೂಡ ಸಮಾರಂಭದ ವೇದಿಕೆಯಲ್ಲಿ ಹಾಜರಿದ್ದರು. ಪ್ರಧಾನಿ ಮೋದಿ ವೇದಿಕೆ ಮೇಲೆ ಬರುತ್ತಿದ್ದಂತೆ ಬಿಜೆಪಿ ಮುಖಂಡರು ಎದ್ದು ನಿಂತು ಕೈಮುಗಿದರು. ಮಾಣಿಕ್ ಸರ್ಕಾರ್ ಕೂಡ ಎದ್ದು, ಮಂದಸ್ಮಿತರಾಗಿ ಕೈಕುಲುಕಿ ಮೋದಿ ಅವರೊಂದಿಗೆ ಮಾತುಗಳ ವಿನಿಮಯ ಮಾಡಿಕೊಂಡರು.

2018: ಅಗರ್ತಲ: ಅನನುಭವಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಅವರಿಗೆ ಸರ್ಕಾರ ಮುನ್ನಡೆಸುವಲ್ಲಿನ ನಿಮ್ಮ ವರ್ಷಾನುಗಟ್ಟಲೆಯ ಅನುಭವವನ್ನು ಧಾರೆ ಎರೆದು ಸರ್ಕಾರ ನಡೆಸಲು ಮಾರ್ಗದರ್ಶನ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿಪುರಾದ ವಿರೋಧ ಪಕ್ಷಗಳಿವೆ ಮನವಿ ಮಾಡಿದರು. ಬಿಜೆಪಿಗೆ ಮತ ನೀಡದವರನ್ನೂ (೨೫ ವರ್ಷ ಆಡಳಿತ ನಡೆಸಿದ ಸಿಪಿಎಂ ಹೆಸರನ್ನು ಉಲ್ಲೇಖಿಸದೆಯೇ) ಒಳಗೊಂಡು ಆಡಳಿತ ನಡೆಸುವ ಭರವಸೆಯನ್ನು ಅವರು ನೀಡಿದರು. ತ್ರಿಪುರದಲ್ಲಿ ಮಿತ್ರ ಪಕ್ಷ ಇಂಡಿಜೀನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಮೈತ್ರಿಯೊಂದಿಗೆ ರಚಿಸಲಾದ  ಚೊಚ್ಚಲ ಬಿಜೆಪಿ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ದೇಬ್ ಅವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮಾತನಾಡುತ್ತಾ ಪ್ರಧಾನಿ ಮನವಿ ಮಾಡಿದರು. ಐತಿಹಾಸಿಕ ಚುನಾವಣೆ:  ಚುನಾವಣೆ ಚಾರಿತ್ರಿಕವಾದುದಾಗಿದ್ದು, ತ್ರಿಪುರದಂತಹ ಸಣ್ಣ ರಾಜ್ಯದ ರಾಜಕೀಯ ಮಹತ್ವವನ್ನು ಒತ್ತಿ ಹೇಳಿದೆ. ಜನರು ವಿಜಯವನ್ನು ಬರೆದಿದ್ದಾರೆ, ಇಂದು ಹಚ್ಚಿದ ಅಭಿವೃದ್ಧಿಯ ದೀಪವನ್ನು ಉಜ್ವಲವಾಗಿ ಬೆಳಗುವುದು ಈಗ ನಮ್ಮ ಜವಾಬ್ದಾರಿಯಾಗಿದೆ ಎಂದು ಮೋದಿ ನುಡಿದರು.’ (ಬಿಜೆಪಿ-ಐಪಿಎಫ್ಟಿ) ಸರ್ಕಾರವು ಎಲ್ಲರಿಗಾಗಿ, ನಮಗೆ ಮತ ನೀಡಿದವರು ಮತ್ತು ನೀಡದೇ ಇದ್ದವರಿಗೆ ಕೂಡಾ ಎಂದು ನಾನು ಭರವಸೆ ನೀಡುವೆಎಂದು ಪ್ರಧಾನಿ ಹೇಳಿದರು. ವೇದಿಕೆಯಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿ ಅವರ ಜೊತೆಗೆ ಆಸೀನರಾಗಿದ್ದ ಮಾಜಿ ಮುಖ್ಯಮಂತ್ರಿ ಮಣಿಕ್ ಸರ್ಕಾರ್ ಮತ್ತು ಸಿಪಿಐ(ಎಂ) ೧೬ ಮಂದಿ ಶಾಸಕರನ್ನು ಉದ್ದೇಶಿಸಿದ ಪ್ರಧಾನಿ ಮೋದಿಸರ್ಕಾರ ನಡೆಸುವಲ್ಲಿನ ನಿಮ್ಮ ಸುದೀರ್ಘ ಅನುಭವವನ್ನು ಬಳಸಿ ನೂತನ, ಯುವ ಅನನುಭವಿ ಮುಖ್ಯಮಂತ್ರಿ ದೇಬ್ ಮತ್ತು ಅವರ ತಂಡಕ್ಕೆ ಮಾರ್ಗದರ್ಶನ ಮಾಡಿಎಂದು ಮೋದಿ ಕೋರಿದರು. ಸ್ವಾತಂತ್ರ್ಯ ಲಭಿಸಿದಂದಿನಿಂದಲೇ ಈಶಾನ್ಯ ಭಾಗಕ್ಕೆ ಸಿಗಬೇಕಾಗಿದ್ದ ಸೂಕ್ತ ಗಮನವನ್ನು ಹಿಂದಿನವರು ಕೊಟ್ಟಿಲ್ಲ. ನಾನು ಈಶಾನ್ಯ ಭಾಗಕ್ಕೆ ಕನಿಷ್ಠ ೨೫ ಬಾರಿ, ನನಗಿಂತ ಹಿಂದಿನ ಎಲ್ಲ ಪ್ರಧಾನ ಮಂತ್ರಿಗಳಿಗಿಂತ ಹೆಚ್ಚು ಬಾರಿ ಬಂದಿದ್ದೇನೆ. ಇದು ಕೇವಲ ರಾಜಕೀಯ ಲಾಭ ಗಳಿಕೆಗಾಗಿ ಅಲ್ಲ, ಬದಲಿಗೆ ಅತ್ಯಂದ ದೂರದ ಪ್ರದೇಶದ ಜನರಿಗೆ ತಾವು ಇದೇ ರಾಷ್ಟ್ರಕ್ಕೆ ಸೇರಿದವರು ಎಂಬ ಭಾವನೆ ಬರಬೇಕು ಎಂಬುದು ನನ್ನ ಬಯಕೆಎಂದು ಪ್ರಧಾನಿ ನುಡಿದರು. ಮೋದಿ ಅವರು ಕೊಕ್ಬೊರೊಕ್ ಬುಡಕಟ್ಟು ಭಾಷೆಯಲ್ಲಿ ತಮ್ಮ ಭಾಷಣ ಆರಂಭಿಸಿ, ಬಂಗಾಳಿಯಲ್ಲಿ ಸಮಾಪ್ತಿಗೊಳಿಸಿದರು. ಪ್ರಧಾನಿಗಿಂತ ಮೊದಲು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎಂಟು ಈಶಾನ್ಯ ರಾಜ್ಯಗಳ ಪೈಕಿ ಏಳು ರಾಜ್ಯಗಳನ್ನು ಆಳುವ ಪಕ್ಷದ ಗುರಿಯನ್ನು ತ್ರಿಪುರವು ಬಲಪಡಿಸಿದೆ ಎಂದು ಹೇಳಿದರು. ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ ಮತ್ತು ನಾಗಾಲ್ಯಾಂಡಿನಲ್ಲಿ ಬಿಜೆಪಿ ಸ್ವತಃ ಅಥವಾ ಮಿತ್ರ ಪಕ್ಷಗಳ ಜೊತೆಗಿನ ಮೈತ್ರಿಕೂಟ ಸರ್ಕಾರವನ್ನು ಹೊಂದಿದೆ.  ಕಳೆದ ೧೦ ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ಕೈಯಲ್ಲಿ ಇರುವ ಮಿಜೊರಂನಲ್ಲಿ ವರ್ಷ ತಡವಾಗಿ ಚುನಾವಣೆ ನಡೆಯಲಿದೆ. ’ನಾವು ರಾಜ್ಯದಲ್ಲಿ ಅಭಿವೃದ್ಧಿ ಮತ್ತು ಶಾಂತಿ ಸ್ಥಾಪನೆಯ ಮೂಲಕ ತ್ರಿಪುರ ಜನರ ತೀರ್ಪನ್ನು ಗೌರವಿಸುತ್ತೇವೆಎಂದು ಅಮಿತ್ ಶಾ ನುಡಿದರು.ಭಾವೋದ್ರಿಕ್ತರಾದ ದೇಬ್ ಅವರು ಚುನಾವಣಾ ವಿಜಯಕ್ಕೆ ಪಕ್ಷದ ನೂರಾರು ಕಾರ್ಯಕರ್ತರ ಕಠಿಣ ಶ್ರಮ ಕಾರಣ ಎಂದು ಹೇಳಿದರು. ಚುನಾವಣೆಗೆ ಮುನ್ನ ಜನರ ಮುಂದಿಟ್ಟ ಬಿಜೆಪಿಯ ವಿಷನ್ ದಾಖಲೆಗೆ ಅನುಗುಣವಾಗಿ ಕೆಲಸ ಮಾಡುವ ಸವಾಲು ಎದುರಿಸುವಲ್ಲಿ ಸಹಕಾರ ನೀಡುವಂತೆ ಅವರು ಜನತೆಗೆ ಮನವಿ ಮಾಡಿದರು. ’ನನ್ನನ್ನು ನಿಮ್ಮ ಮಗ, ಸಹೋದರನಂತೆ ನೋಡಿಕೊಳ್ಳಿ, ಮುಖ್ಯಮಂತ್ರಿಯಾಗಿ ಅಲ್ಲ. ನಿಮ್ಮ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರಿಯಾದ ಮಾರ್ಗದಲ್ಲಿ ಸಾಗುವಂತೆ ನನ್ನ ಕಿವಿ ಹಿಂಡಲು ಹಿಂಜರಿಯಬೇಡಿಎಂದು ಅವರು ನುಡಿದರು.

2018: ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ದೆಹಲಿ ನ್ಯಾಯಾಲಯವು ಐಎನ್ ಎಕ್ಸ್ ಮೀಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ತನಿಖೆಗಾಗಿ ಇನ್ನೂ ಮೂರು ದಿನಗಳ ಅವಧಿಗೆ ಅಂದರೆ ಮಾರ್ಚ್ ೧೨ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿತು. ಮೂರು ದಿನಗಳ ಸಿಬಿಐ ಕಸ್ಟಡಿ ಮುಗಿದ ಹಿನ್ನೆಲೆಯಲ್ಲಿ ಕಾರ್ತಿ ಚಿದಂಬರಂ ಅವರನ್ನು ಈದಿನ ವಿಶೇಷ ನ್ಯಾಯಾಧೀಶ ಸುನಿಲ್ ರಾಣಾ ಅವರ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ನ್ಯಾಯಾಧೀಶರು ಸಿಬಿಐ ಕಸ್ಟಡಿಯನ್ನು 3 ದಿನಗಳ ಕಾಲ ವಿಸ್ತರಿಸಿದ ಬಳಿಕ ಪ್ರಕರಣದ ವಿಚಾರಣೆಯನ್ನು ಮಾರ್ಚ್ ೧೫ಕ್ಕೆ ಮುಂದೂಡಿದರು.  ಕಾರ್ತಿ ಚಿದಂಬರಂ ಅವರನ್ನು ಅವರ ಚಾರ್ಟರ್ಡ್ ಅಕೌಂಟೆಂಟ್ ಎಸ್. ಭಾಸ್ಕರರಾಮನ್ ಅವರಿಗೆ ಮುಖಾಮುಖಿಯಾಗಿ ನಿಲ್ಲಿಸಿ ತನಿಖೆ ಮುಂದುವರೆಸಲು ಸಿಬಿಐಗೆ ನ್ಯಾಯಾಲಯ ಅನುಮತಿ ನೀಡಿತು. ಸ್ಕರರಾಮನ್ ಅವರನ್ನು ಜಾರಿ ನಿರ್ದೇಶನಾಲಯವು ಫೆಬ್ರುವರಿ ೧೬ರಂದು ಬಂಧಿಸಿದ್ದು ಅವರನ್ನು ಮಾರ್ಚ್ ೨೨ರವರೆಗೆ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ನ್ಯಾಯಾಲಯದ ಈದಿನ ಆದೇಶದೊಂದಿಗೆ ಫೆಬ್ರುವರಿ ೨೮ರಂದು ಬಂಧಿರಾಗಿರುವ ಕಾರ್ತಿ ಚಿದಂಬರಂ ಅವರ ಸಿಬಿಐ ಕಸ್ಟಡಿ ನಿರಂತರವಾಗಿ ಮುಂದುವರೆದಂತಾಯಿತು.  ತನಿಖಾ ಸಂಸ್ಥೆಯು ಇನ್ನೂ ಮೂರು ದಿನಗಳ ಕಸ್ಟಡಿ ಕೋರುವ ಸಾಧ್ಯತೆ ಇದೆ. ಕಾನೂನು ಪ್ರಕಾರ ತನಿಖೆಗಾಗಿ ನ್ಯಾಯಾಲಯದ ಆದೇಶಕ್ಕೆ ಒಳಪಟ್ಟು ೧೫ ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿ ಇರಿಸಬಹುದು.ವಿಚಾರಣೆ ಕಾಲದಲ್ಲಿ ಸಿಬಿಐ ಪರವಾಗಿ ವಾದ ಮಂಡಿಸಿದ ಅಡಿಷನಲ್ ಸಾಲಿಸಿಟರ್ ಜನರಲ್ ತುಷಾರ ಮೆಹ್ತ ಅವರುಕಾರ್ತಿ ಚಿದಂಬರಂ ವಿರುದ್ಧ ಇನ್ನಷ್ಟು ದಾಖಲೆಗಳು ಲಭ್ಯವಾಗಿರುವುದರಿಂದ ಅವರನ್ನು ಇನ್ನಷ್ಟು ದಿನಗಳ ಕಾಲ ಸಿಬಿಐ ಕಸ್ಟಡಿಯಲ್ಲಿ ತನಿಖೆಗೆ ಗುರಿ ಪಡಿಸುವುದು ಅಗತ್ಯವಾಗಿದೆಎಂದು ಹೇಳಿದರು. ಚೆನ್ನೈಯ ಅಡ್ವಾಂಟೇಜ್ ಸ್ಟ್ರಾಟಜೀಸ್ ಪ್ರೈವೇಟ್ ಲಿಮಿಟೆಡ್ ಕಚೇರಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಸಿಡಿ ಒಂದು ಪತ್ತೆಯಾಗಿದೆ.  ಅದನ್ನು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಸಿಎಫ್ ಎಸ್ ಎಲ್) ಪರೀಕ್ಷೆಗಾಗಿ ಕಳುಹಿಸಲಾಗಿದೆ. ಈಗ ಲಭ್ಯವಾಗಿರುವ ದಾಖಲೆಗಳನ್ನು ಮುಂದಿಟ್ಟು ಕಾರ್ತಿ ಅವರನ್ನು ತನಿಖೆ ನಡೆಸಬೇಕಾಗಿದೆಎಂದು ಮೆಹ್ತ ವಾದಿಸಿದರು. ಪಿ. ಚಿದಂಬರಂ ಅವರ ಪಕ್ಷ ಸಹೋದ್ಯೋಗಿಯಾಗಿರುವ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಕಾರ್ತಿ ಅವರನ್ನು ಇನ್ನಷ್ಟು ಕಾಲ ಸಿಬಿಐ ಕಸ್ಟಡಿಯಲ್ಲಿ ತನಿಖೆಗೆ ಗುರಿ ಪಡಿಸುವುದನ್ನು ವಿರೋಧಿಸಿದರು. ’ಇದು ನನ್ನ (ಕಾರ್ತಿ) ಪಾಲಿನ ರುದ್ರನಾಟಕ. ನನ್ನ ರಿಮಾಂಡ್ ಮುಂದುವರೆಸಲು ಅವರ ಬಳಿ ಹೊಸ ಕಾರಣಗಳೇನೂ ಇಲ್ಲ. ಅವರು ಹೊಸ ಹೊಸ ದಾSಲೆಗಳ ಸಂಶೋಧನೆ ಮಾಡುತ್ತಿದ್ದಾರೆ. ಸಿಬಿಐ ರಿಮಾಂಡನ್ನು ಪ್ರತಿದಿನ, ಪ್ರತಿಕ್ಷಣ ಸಮರ್ಥಿಸಬೇಕುಎಂದು ಕಾರ್ತಿ ಪರ ಮಾತನಾಡುತ್ತಾ ಸಿಂಘ್ವಿ ಹೇಳಿದರು.  ಇದು ಹತ್ತು ವರ್ಷದಷ್ಟು ಹಳೆಯ ಪ್ರಕರಣ. ಎಲ್ಲ ದಾಖಲೆಗಳೂ ಅವರ ಬಳಿ ಲಭ್ಯ ಇವೆ ಮತ್ತು ಅವರಿಗೆ ನನಗೆ ಚಿತ್ರ ಹಿಂಸೆ ನೀಡುವ ಸಲುವಾಗಿ ಮಾತ್ರವೇ ನನ್ನ ಕಸ್ಟಡಿಯ ಅಗತ್ಯವಿದೆಎಂದು ಕಾರ್ತಿ ಅವರ ವಕೀಲರು ವಾದಿಸಿದರು. ಕಾರ್ತಿ ಅವರಿಗೆ ಸಂಬಂಧಿಸಿದ ಕಲಾಪಗಳು ಆರಂಭವಾಗುವುದಕ್ಕೆ ಮುನ್ನ ಅವರ ಚಾರ್ಟರ್ಡ್ ಅಕೌಂಟೆಂಟ್ ಭಾಸ್ಕರರಾಮನ್ ನ್ಯಾಯಾಂಗ ಬಂಧನವನ್ನು ನ್ಯಾಯಾಲಯ ಮಾರ್ಚ್ ೨೨ರವರೆಗೆ ವಿಸ್ತರಿಸಿತು.

2018: ಚೆನ್ನೈ: ಚೆನ್ನೈಯ ಕೆ.ಕೆ. ನಗರದಲ್ಲಿನ ಕಾಲೇಜು ವಿದ್ಯಾರ್ಥಿನಿ ಒಬ್ಬಳನ್ನು ಆಕೆ ಅಧ್ಯಯನ ನಡೆಸುತ್ತಿದ್ದ ಕಾಲೇಜಿನ ಹೊರಭಾಗದಲ್ಲೇ ಇರಿದು ಕೊಂದ ದಾರುಣ ಘಟನೆ ಘಟಿಸಿತು. ದಾಳಿಕೋರನನ್ನು ತತ್ ಕ್ಷಣವೇ ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು.  ಬಿ.ಕಾಂ ವಿದ್ಯಾರ್ಥಿನಿಯಾದ ಅಶ್ವಿನಿ ಅವರನ್ನು ತತ್ ಕ್ಷಣವೇ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ, ತೀವ್ರ ಗಾಯಗಳ ಪರಿಣಾಮವಾಗಿ ಆಕೆ ಸಾವನ್ನಪ್ಪಿದರು. ವಿದ್ಯಾರ್ಥಿನಿಯ ಪಾಲಕರಿಗೆ ಘಟನೆ ಬಗ್ಗೆ ತಿಳಿಸಲಾಗಿದೆ. ಇದು ಸೇಡಿನ ಉದ್ದೇಶವನ್ನಿಟ್ಟುಕೊಂಡು ನಡೆಸಲಾಗಿರುವ ಕೊಲೆಯೇ ಎಂಬುದಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ಹೇಳಿದವು. ವರದಿಗಳ ಪ್ರಕಾರ ದಾಳಿಕೋರನ ಕಿರುಕುಳ ವಿರುದ್ಧ ಅಶ್ವಿನಿ ದೂರು ನೀಡಿದ್ದರು ಎನ್ನಲಾಯಿತು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿದವು. ಪೊಲೀಸರಿಗೆ ಒಪ್ಪಿಸುವ ಮುನ್ನ ಆಸು ಪಾಸಿನ ಮಂದಿ ದಾಳಿಕೋರನನ್ನು ಹಿಡಿದು ಕಟ್ಟಿಹಾಕಿ ಥಳಿಸಿದರು ಎನ್ನಲಾಗಿದ್ದು ಘಟನಾವಳಿಗಳು ವಿಡಿಯೋಗಳಲ್ಲಿ ದಾಖಲಾಗಿವೆ ಎಂದು ವರದಿಗಳು ಹೇಳಿದವು.

2018: ವಾಷಿಂಗ್ಟನ್: ಅಮೆರಿಕದ ಸುಂಕ ದರಗಳಿಗೆ ಹೊಂದಾಣಿಕೆ ಆಗದೇ ಇದ್ದಲ್ಲಿ ಭಾರತ ಮತ್ತು ಚೀನಾ ವಿರುದ್ಧಪ್ರತಿ ತೆರಿಗೆಹೊರಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದರು. ಅಮೆರಿಕದ ಹಾರ್ಲೆ-ಡೇವಿಡ್ಸನ್ ಕಂಪೆನಿಯು ಭಾರತದಲ್ಲಿ ಮಾರುವ ಹೈ ಎಂಡ್ ಮೋಟಾರ್ ಬೈಕುಗಳಿಗೆ ಭಾರತವು ಶೇಕಡಾ ೫೦ರಷ್ಟು ಸುಂಕ ವಿಧಿಸುತ್ತಿರುವ ಬಗ್ಗೆ ಇತ್ತೀಚಿನ ದಿನಗಳಲ್ಲಿ ಟ್ರಂಪ್ ಅವರು ಹಲವಾರು ಬಾರಿ ಮಾತನಾಡಿದ್ದರು. ಅಮೆರಿಕವು ಭಾರತದಿಂದ ಆಮದು ಮಾಡಿಕೊಳ್ಳುವ ಮೋಟಾರು ಬೈಕುಗಳಿಗೆಶೂನ್ಯಸುಂಕ ವಿಧಿಸುತ್ತದೆ ಎಂದು ಟ್ರಂಪ್ ಪದೇ ಪದೇ ಹೇಳಿದ್ದರು. ‘ಚೀನಾವು ಶೇಕಡಾ ೨೫ರಷ್ಟು ಮತ್ತು ಭಾರತವು ಶೇಕಡಾ ೭೫ರಷ್ಟು ಸುಂಕವನ್ನು ನಮ್ಮ ಮೇಲೆ ವಿಧಿಸುವುದಾದರೆ ಮತ್ತು ಇದೇ ವೇಳೆಗೆ ನಾವು ಶೂನ್ಯ ಸುಂಕ ವಿಧಿಸುವುದಾದರೆ ಯಾವುದೋ ಒಂದು ಹಂತದಲ್ಲಿ ನಾವುಪ್ರತಿ ತೆರಿಗೆಕಾರ್ಯಕ್ರಮ ಹಮ್ಮಿಕೊಳ್ಳಬೇಕಾಗುತ್ತದೆ. ಕೆನಡಾ ಮತ್ತು ಮೆಕ್ಸಿಕೊ ಹೊರತು ಪಡಿಸಿ ಉಳಿದ ಎಲ್ಲ ರಾಷ್ಟ್ರಗಳಿಂದ ಆಮದಾಗುವ ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ನಾವು ಕ್ರಮವಾಗಿ ಶೇಕಡಾ ೨೫ ಮತ್ತು ಶೇಕಡಾ ಶೇಕಡಾ ೧೦ ಸುಂಕ ವಿಧಿಸುತ್ತೇವೆಎಂದು ಅವರು ಹೇಳಿದ್ದರು. ನಮ್ಮ ಮೇಲೆ ಶೇ.೫೦ ಸುಂಕ ವಿಧಿಸಿದರೆ ಅವರಿಗೂ ಶೇ.೫೦ ಸುಂಕ: ಅವರು ಶೇಕಡಾ ೫೦, ಶೇಕಡಾ ೭೫ ಅಥವಾ ಶೇಕಡಾ ೨೫ ಸುಂಕ ವಿಧಿಸಬಹುದಾದರೆ ನಾವೂ ಅವರ ಮೇಲೆ ಅಷ್ಟೇ ಪ್ರಮಾಣದ ಸುಂಕ ವಿಧಿಸಲಿದ್ದೇವೆ. ಇದನ್ನುಪ್ರತಿ ತೆರಿಗೆಎಂದು ಕರೆಯಲಾಗುತ್ತದೆ. ಇದು ತೆರಿಗೆಗಳ ಪ್ರತಿಫಲನ. ಅವರು ಶೇಕಡಾ ೫೦ ತೆರಿಗೆ ವಿಧಿಸಿದರೆ, ನಾವೂ ಅವರಿಗೆ ಶೇಕಡಾ ೫೦ ತೆರಿಗೆ ವಿಧಿಸುತ್ತೇವೆ ಎಂದು ಟ್ರಂಪ್ ಹೇಳಿದರು.  ಪ್ರತಿ ತೆರಿಗೆ ಹೇರಿಕೆಗೆ ತಮ್ಮ ಆಡಳಿತದ ಪ್ರಥಮ ವರ್ಷವೇ ವೇದಿಕೆ ಸಿದ್ಧವಾಗಿದೆ ಎಂದು ಟ್ರಂಪ್ ತಿಳಿಸಿದರು. ಅಮೆರಿಕದ ಕಂಪೆನಿಗಳನ್ನು ಇತರ ರಾಷ್ಟ್ರಗಳು ನ್ಯಾಯೋಚಿತವಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು. ಟೆಸ್ಲಾ ಮುಖ್ಯಸ್ಥರಾದ ಎಲನ್ ಮಸ್ಕ್ ಅವರ ಟ್ವೀಟ್‌ನ್ನು ಉಲ್ಲೇಖಿಸಿದ ಟ್ರಂಪ್, ಚೀನಾವು ಅಮೆರಿಕನ್ ಕಾರುಗಳ ಮೇಲೆ ಶೇಕಡಾ ೨೫ರಷ್ಟು ಸುಂಕವನ್ನು ವಿಧಿಸಿದೆ. ಆದರೆ ನಾವು ಅಮೆರಿಕಕ್ಕೆ ಆಮದಾಗುವ ಚೀನೀ ಕಾರುಗಳಿಗೆ ಕೇವಲ ಶೇಕಡಾ .೫ರಷ್ಟು ಸುಂಕ ವಿಧಿಸುತ್ತೇವೆ ಎಂದು ನುಡಿದರು. ’ಪ್ರತಿ ತೆರಿಗೆಕಾರ್ಯಕ್ರಮವು ಅಮೆರಿಕಕ್ಕೆನ್ಯಾಯೋಚಿತ ವ್ಯಾಪಾರ ವ್ಯವಹಾರದಖಾತರಿ ನೀಡುತ್ತದೆ ಎಂದು ಟ್ರಂಪ್ ಹೇಳಿದರು. ಉಕ್ಕು ಮತ್ತು ಅಲ್ಯುಮಿನಿಯಂ ಮೇಲೆ ಆಮದು ಸುಂಕ ಹೊರಿಸುವುದಕ್ಕೆ ಸಂಬಂಧಿಸಿದ ಎರಡು ಘೋಷಣೆಗಳಿಗೆ ಸಹಿ ಹಾಕಿದ ಅಮೆರಿಕ ಅಧ್ಯಕ್ಷ ಹಲವಾರು ಬಾರಿ ಚೀನಾ ಹೆಸರನ್ನು ಪ್ರಸ್ತಾಪಿಸಿದರು. ’ತನಗೆ ಶೇಕಡಾ ಮಾತ್ರ ಲಭಿಸಿರುವುದಾಗಿ ಚೀನಾ ಹೇಳುತ್ತದೆ, ಆದರೆ ಅವರು ಅತ್ಯಂತ ಹೆಚ್ಚು ಕಳುಹಿಸುತ್ತಾರೆ. ನಾವು ಚೀನಾದ ಜೊತೆಗೆ ಮಹಾನ್ ಬಾಂಧವ್ಯ ಹೊಂದಲಿದ್ದೇವೆ ಎಂಬ ಆಶಯ ಇದೆ. ಆದರೆ ನಾವೇನಾದರೂ ಮಾಡಲೇಬೇಕುಎಂದು ಟ್ರಂಪ್ ಅವರು ಸಹಿ ಸಮಾರಂಭದ ವೇಳೆಗೆ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಅಮೆರಿಕವು ಟ್ರಾನ್ಸ್-ಶಿಪ್ಪಿಂಗ್ ನ್ನು ಸ್ಥಗಿತಗೊಳಿಸಲಿದೆ. ’ಒಳ್ಳೆಯದು. ಆದು ಆಗಿಬಿಡಲಿ, ಆದರೆ ಅವರು ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಟ್ರಾನ್ಸ್ -ಶಿಪ್ಪಿಂಗ್ , ಪ್ರಾಮಾಣಿಕವಾಗಿ ಹೇಳಬೇಕೆಂದರೆ ದೊಡ್ಡ ವ್ಯವಹಾರಎಂದು ಟ್ರಂಪ್ ನುಡಿದರು.’ಅವರು ಟ್ರಾನ್ಸ್ -ಶಿಪ್ ಮಾಡಲಿ, ನಾವು ಅವರ ಉತ್ಪನ್ನವನ್ನು ಸ್ವೀಕರಿಸಲಿದ್ದೇವೆ, ಆದರೆ ಅದು ಟ್ರಾನ್ಸ್ ಶಿಪ್ಪರ್‌ಗೆ ಬಹಳಷ್ಟು ವೆಚ್ಚದಾಯಕವಾಗಲಿದೆಎಂದು ಅವರು ಹೇಳಿದರು. ಅಮೆರಿಕ ಈಗ ಚೀನ ಜೊತೆಗೆ ಮಾತುಕತೆ ನಡೆಸುತ್ತಿದೆ. ಬೃಹತ್ ಮಾತುಕತೆಯ ಮಧ್ಯದಲ್ಲಿ ಇದ್ದೇವೆ. ಏನಾದರೂ ಫಲಿತಾಂಶ ಬರಲಿದೆಯೇ ನನಗೆ ಗೊತ್ತಿಲ್ಲ. ಅವರು ತುಂಬಾ ಸಹಕಾರಿಗಳಾಗಿದ್ದಾರೆ. ಅಧ್ಯಕ್ಷ ಕ್ಷಿ (ಜಿನ್ ಪಿಂಗ್). ಅವರ ಬಗ್ಗೆ ನನಗೆ ಅಪಾರ ಗೌರವ ಇದೆ, ಬಹಳಷ್ಟು ಗೌರವಎಂದು ಟ್ರಂಪ್ ನುಡಿದರು.’ಆದರೆ ನಾವು ಕೊರತೆಗಳನ್ನು ಒಂದಲ್ಲ ಒಂದು ಮಾರ್ಗದಿಂದ ಇಳಿಸಲಿದ್ದೇವೆ. ಚೀನಾದ ಜೊತೆ ನಾವು ಕನಿಷ್ಠ ೫೦೦ ಬಿಲಿಯನ್ (೫೦೦ ಶತಕೋಟಿ) ಅಮೆರಿಕನ್ ಡಾಲರ್ ಕೊರತೆ ಹೊಂದಿದ್ದೇವೆ. ಬೌದ್ಧಿಕ ಆಸ್ತಿಯನ್ನೂ ಸೇರಿಸಿದರೆ ಇದು ಇನ್ನೂ ಹೆಚ್ಚಾಗುತ್ತದೆಎಂದು ಟ್ರಂಪ್ ನುಡಿದರು.

2018: ಜೈಪುರ : ಹನ್ನೆರಡರ ಕೆಳ ಹರೆಯದ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆಯನ್ನು  ರಾಜಸ್ಥಾನ ವಿಧಾನಸಭೆ ಅಂಗೀಕರಿಸಿತು. ಇದೇ ರೀತಿಯ ಮಸೂದೆಯನ್ನು ಮೊದಲೇ ಪಾಸು ಮಾಡಿರುವ ಮಧ್ಯ ಪ್ರದೇಶವು ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆ ನೀಡುವ ದೇಶದ ಮೊದಲ ರಾಜ್ಯವಾಗಿದ್ದು ಇದೀಗ ರಾಜಸ್ಥಾನ ಎರಡನೇ ರಾಜ್ಯ ಎನಿಸಿತು. 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರನ್ನು ರೇಪ್ ಮಾಡುವ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಮಸೂದೆಯನ್ನು ರಾಜಸ್ಥಾನ ಸರಕಾರ ಕಳೆದ ಮಾರ್ಚ್ 6ರ ಮಂಗಳವಾರ ಮಂಡಿಸಿತ್ತು. ಮಸೂದೆಯನ್ನು ಜಾರಿಗೆ ತರುವಲ್ಲಿನ ಕಾರಣಗಳು ಮತ್ತು ಉದ್ದೇಶಗಳನ್ನು ಸ್ಪಷ್ಟಪಡಿಸುವ ಆರಂಭಿಕ ಭಾಗದಲ್ಲಿ ರಾಜಸ್ಥಾನ ಸರಕಾರ ಹೀಗೆ ಹೇಳಿದೆ : ಸಮಾಜದಲ್ಲೀಗ ಆಗೀಗ ಎಂಬಂತೆ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ, ಗ್ಯಾಂಗ್ ರೇಪ್ ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ.   ರೀತಿಯ ಅಪರಾಧಗಳು ಅತ್ಯಂತ ಕ್ರೂರವಾಗಿದ್ದು ಇದಕ್ಕೆ ಬಲಿಪಶುವಾಗುವ ಮಕ್ಕಳ ಬದುಕು ನರಕಪ್ರಾಯವಾಗಿರುತ್ತದೆ. ಆದುದರಿಂದ ಹನ್ನೆರಡಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ರಕ್ಷಿಸುವ ಸಲುವಾಗಿ, ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಯೋಗ್ಯವಾದ ವಾತಾವರಣವನ್ನು ಸೃಷ್ಟಿಸುವ ಸಲುವಾಗಿ ಇಂತಹ ಅಪರಾಧಗಳನ್ನು ಉಕ್ಕಿನ ಕೈಗಳಿಂದ ದಂಡಿಸಬೇಕಾದ ಅಗತ್ಯವಿದೆ.ಅಂತೆಯೇ 12 ಕೆಳಹರೆಯದ ಬಾಲಕಿಯರ ಮೇಲೆ ಅತ್ಯಾಚಾರ, ಗ್ಯಾಂಗ್ ರೇಪ್ ನಡೆಸುವ ಅಪರಾಧಿಗಳಿಗೆ ಮರಣ ದಂಡನೆ, ಇಲ್ಲವೇ ಜೀವಾವಧಿ ಶಿಕ್ಷೆ ಅಥವಾ ಜೀವನ ಪೂರ್ತಿ ಜೈಲು ಶಿಕ್ಷೆ ನೀಡುವುದನ್ನು ಮಸೂದೆಯು ಉದ್ದೇಶಿಸುತ್ತದೆ.
2018: ವಾಷಿಂಗ್ಟನ್: ಆಫ್ಗಾನಿಸ್ತಾನ ಮೂಲದ, ಪಾಕಿಸ್ತಾನದ ತೆಹ್ರೀಕ್--ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಉಗ್ರ ಸಂಘಟನೆ ಮುಖಂಡ ಮೌಲಾನಾ ಫಾಜ್ಲುಲ್ಲಾ ಬಗ್ಗೆ ಮಾಹಿತಿ ನೀಡಿದವರಿಗೆ  32. 59 ಕೋಟಿ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿತು. ಅಲ್ಲದೇ ಜಮತ್ಉಲ್ಅಹ್ರರ್ (ಜೆಯುಎ) ಸಂಘಟನೆ ನಾಯಕ ಅಬ್ದುಲ್ ವಾಲಿ ಹಾಗೂ ಲಷ್ಕರ್ಇಸ್ಲಾಮ್ ಸಂಘಟನೆ ಮುಖಂಡ ಮಂಗಲ್ ಬಾಗ್ ಬಗ್ಗೆ ಮಾಹಿತಿ ನೀಡಿದ್ದಲ್ಲಿ 19.55 ಕೋಟಿ ಬಹುಮಾನ ಕೊಡುವುದಾಗಿ ಹೇಳಿತು.  ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಾಧಿಕಾರಿಗಳು, ರಾಜ್ಯ ಇಲಾಖೆ ಅಧಿಕಾರಿಗಳ ಜತೆ ಸಭೆ ಕೈಗೊಂಡಿದ್ದ ವೇಳೆ ಅಮೆರಿಕ ಘೋಷಣೆ ಹೊರಡಿಸಿತು. ಟಿಟಿಪಿ ಸಂಘಟನೆಯು ಅಫ್ಗಾನಿಸ್ತಾನದ ಬುಡಕಟ್ಟು ಪ್ರದೇಶದಲ್ಲಿ ಕಂಡ ಬಂದ ಒಂದು ಉಗ್ರ ಸಂಘಟನೆ. ಇದು ಅಲ್ಕೈದಾ ಉಗ್ರ ಸಂಘಟನೆಯೊಂದಿಗೆ ನಿಕಟ ಸಂಪರ್ಕ ಹೊಂದಿದೆ.
2018: ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಮದ್ದೂರಿನ ಕೆ.ಟಿ.ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು, ‘ಹತ್ಯೆಗೆ ಒಳಸಂಚುರೂಪಿಸಿದ್ದ ಆರೋಪದಡಿ ಈದಿನ ಬಂಧಿಸಲಾಯಿತು. ಫೆ. 16ರಂದು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನವೀನ್ನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ನಾಡ ಪಿಸ್ತೂಲ್ ಹಾಗೂಪಾಯಿಂಟ್ 32’ ರಿವಾಲ್ವರ್ ಐದು ಗುಂಡುಗಳನ್ನು ಜಪ್ತಿ ಮಾಡಿದ್ದರು. ಗೌರಿ ಹತ್ಯೆಯಲ್ಲೂ ಕೈವಾಡವಿರಬಹುದು ಎಂಬ ಅನುಮಾನದಡಿ ಎಸ್ಐಟಿ ಅಧಿಕಾರಿಗಳು ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಕಸ್ಟಡಿ ಅವಧಿ ಮುಕ್ತಾಯವಾಗಿದ್ದರಿಂದ ನಗರದ 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಈದಿನ ಹಾಜರುಪಡಿಸಲಾಯಿತು. ಆರೋಪಿಯ ಬಂಧನದ ವಿಷಯವನ್ನು ನ್ಯಾಯಾಲಯಕ್ಕೆ ತಿಳಿಸಿದ ತನಿಖಾಧಿಕಾರಿ, 'ವಶದಲ್ಲಿದ್ದ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಆತನನ್ನು ಬಂಧಿಸಿದ್ದೇವೆ. ಸದ್ಯ ಆತ, ಗೌರಿ ಲಂಕೇಶ್ ಹತ್ಯೆ ಪ್ರಕರಣದ ಮೊದಲ ಆರೋಪಿ' ಎಂದರು. ತನಿಖೆ ಪ್ರಗತಿ ಕುರಿತ ವಿವರವುಳ್ಳ ಸಿ.ಡಿ ಹಾಗೂ ಆರೋಪಿಯ ಹೇಳಿಕೆಯನ್ನು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ನೀಡಿದ ಪಬ್ಲಿಕ್ ಪ್ರಾಸಿಕ್ಯೂಟರ್ ನಿರ್ಮಲಾ ರಾಣಿ, ‘ಆರೋಪಿ ನೀಡಿರುವ ಮಾಹಿತಿ ಆಧರಿಸಿ ತನಿಖೆ ಮುಂದುವರಿಸಬೇಕಿದೆ. ಹೀಗಾಗಿ, ಆತನನ್ನು ಪುನಃ ಎಸ್ಐಟಿ ಕಸ್ಟಡಿಗೆ ನೀಡಬೇಕುಎಂದು ಮನವಿ ಮಾಡಿದರು. ನವೀನ್ ಪರ ವಕೀಲ .ವೇದಮೂರ್ತಿ, ‘ಪೊಲೀಸರು ಈಗಾಗಲೇ 20 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಯಾವುದೇ ಮಾಹಿತಿ ಸಿಗದಿದ್ದರಿಂದ, ಬಲವಂತವಾಗಿ ಹೇಳಿಕೆ ಪಡೆದುಕೊಳ್ಳುತ್ತಿದ್ದಾರೆ. ನನ್ನ ಕಕ್ಷಿದಾರನನ್ನು ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆದಿದೆ. ಮತ್ತೆ ಕಸ್ಟಡಿಗೆ ನೀಡಬಾರದುಎಂದು ಆಕ್ಷೇಪ ವ್ಯಕ್ತಪಡಿಸಿದರು. ವಾದಪ್ರತಿವಾದ ಆಲಿಸಿದ ನ್ಯಾಯಾಲಯ, ನವೀನ್ನನ್ನು 5 ದಿನಗಳವರೆಗೆ ಎಸ್ಐಟಿ ಕಸ್ಟಡಿಗೆ ನೀಡಿತು.

2017: ಬೆಂಗಳೂರು:  ಹಿರಿಯ ಪರಿಸರವಾದಿ , ಸಾಮಾಜಿಕ ಕಾರ್ಯಕರ್ತ , ಗಿರಿನಗರ ನಿರ್ಮಾತೃ ಬಿ. ಕೃಷ್ಣ ಭಟ್ ಅವರು ರಾತ್ರಿ 10 ಗಂಟೆ ಸುಮಾರಿಗೆ ಗಿರಿನಗರದ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.  ಅವರಿಗೆ 86 ವರ್ಷ ವಯಸ್ಸಾಗಿತ್ತು. ಮೂಲತಃ  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ವಿಟ್ಲ ಸಮೀಪದ ಬೋಳುಬೈಲಿನವರಾದ ಕೃಷ್ಣಭಟ್ ಅವರು ಉಡುಪಿಯಲ್ಲಿ ತಮ್ಮ ವ್ಯಾಸಂಗ ಮುಗಿಸಿದ ಬಳಿಕ ಬೆಂಗಳೂರಿಗೆ ಬಂದು ನೆಲೆಸಿದ್ದರು. ದಿವಂಗತ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಲಹೆಯಂತೆ ಬೆಂಗಳೂರಿನಲ್ಲಿ ಸಹಕಾರ ಸಂಘದ ಮೂಲಕ ವಸತಿ ಒದಗಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಕೃಷ್ಣಭಟ್, ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಾದ ಗಿರಿನಗರ  ಮತ್ತು ರಾಜರಾಜೇಶ್ವರಿ ನಗರದ ಸಚ್ಚಿದಾನಂದ ನಗರ ಬಡಾವಣೆಯನ್ನು ಸುಸಜ್ಜಿತವಾಗಿ ನಿರ್ಮಿಸಿದ್ದರು.  ಗಿರಿನಗರ ಬಡಾವಣೆಯ ಶಂಕುಸ್ಥಾಪನೆಗೆ ಆಗಿನ ರಾಷ್ಟ್ರಪತಿ ವರಾಹ ವೆಂಕಟ ಗಿರಿ ಅವರನ್ನು ಕರೆಸಿ, ಅವರ ಹೆಸರನ್ನೇ ಬಡಾವಣೆಗೆ ಇಟ್ಟಿದ್ದರು. ಬಡಾವಣೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜೊತೆಗೆ ಸುದೀರ್ಘ ನ್ಯಾಯಾಂಗ ಸಮರ ನಡೆಸಿದ್ದ ಕೃಷ್ಣಭಟ್ ಅವರು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆಯೂ ಸಾರ್ವಜನಿಕ ಹಿತಾಸಕ್ತಿ ಖಟ್ಲೆಗಳನ್ನು ಹೂಡುವ ಮೂಲಕ ನ್ಯಾಯಾಂಗ ಹೋರಾಟ ನಡೆಸಿದ್ದರು. ಸಮಾಜ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಬೆಂಗಳೂರಿನಲ್ಲಿ ವಸತಿ ಬಡಾವಣೆ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದ್ದ ವಿಶ್ವಭಾರತಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರುಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ಭಟ್ ಅವರು ತುರ್ತು ಪರಿಸ್ಥಿತಿ ಕಾಲದಲ್ಲಿ ಎಲ್.ಕೆ. ಅಡ್ವಾಣಿ ಮತ್ತಿತರ ನಾಯಕರ ಜೊತೆಗೆ  ಬೆಂಗಳೂರಿನಲ್ಲಿ  ಸೆರೆವಾಸವನ್ನೂ ಅನುಭವಿಸಿದ್ದರು.

2009: ಒರಿಸ್ಸಾ ಸರ್ಕಾರದ ವಿಶ್ವಾಸಮತಕ್ಕೆ ಎರಡು ದಿನ ಇರುವಂತೆಯೇ ಬಿಜು ಜನತಾ ದಳವು (ಬಿಜೆಡಿ) ಈದಿನ ಎನ್‌ಡಿಎ ಸಂಬಂಧವನ್ನು ಔಪಚಾರಿಕವಾಗಿ ಕಡಿದುಹಾಕಿ, ಬಿಜೆಪಿ ತನಗೆ 'ವಿಶ್ವಾಸದ್ರೋಹ' ಮಾಡಿದೆ ಎಂದು ಆರೋಪಿಸಿತು. ಸೀಟು ಹಂಚಿಕೆ ಮಾತುಕತೆ ಮುರಿದು ಬಿದ್ದ ಬಳಿಕ ನವೀನ್ ಪಟ್ನಾಯಕ್ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂದೆಗೆದುಕೊಂಡಿತ್ತು. ಅಲ್ಪಮತಕ್ಕೆ ಜಾರಿದ ಸರ್ಕಾರ ಎಡಪಕ್ಷಗಳು, ಜೆಎಂಎಂ ಮತ್ತು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಬಹುಮತ ಗಳಿಸುವ ನಿರೀಕ್ಷೆ ಇಟ್ಟುಕೊಂಡು ಎನ್‌ಡಿಎ ಜತೆಗಿನ ತನ್ನ 11 ವರ್ಷಗಳ ಸಖ್ಯ ಕಡಿದುಹಾಕುವ ಪ್ರಕಟಣೆ ನೀಡಿತು.

2009: ಕುಡುಕರು ಮತ್ತು ಧೂಮಪಾನಿಗಳಿಗೆ ದುಃಸ್ವಪ್ನವಾಗಿ ಕಾಡಿದ ಕೇಂದ್ರದ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಹುಕ್ಕಾ ಸೇದುವವರತ್ತಲೂ ಕೆಂಗಣ್ಣು ಬೀರಿದರು. ಹುಕ್ಕಾ ಬಾರ್‌ಗಳಲ್ಲಿ ಸಾಮಾನ್ಯವಾಗಿ ತಂಬಾಕು ಮತ್ತು ನಿಕೊಟಿನ್ ಆಧಾರಿತ ಉತ್ಪನ್ನಗಳನ್ನು ನೀಡಲಾಗುತ್ತದೆ. ಇಂತಹ ಹುಕ್ಕಾ ಬಾರ್‌ಗಳನ್ನು ಬಂದ್ ಮಾಡಿಸಬೇಕು ಎಂದು ಹೇಳಿ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಮುಂಬೈಯಲ್ಲಿ ತಿಳಿಸಿದರು. 'ರಾಜ್ಯಗಳು ಈ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು' ಎಂದು ಅವರು ಇಲ್ಲಿ ನಡೆದ ವಿಶ್ವ ಆರೋಗ್ಯ ಸಮ್ಮೇಳನದಲ್ಲಿ ಪತ್ರಕರ್ತರಿಗೆ ತಿಳಿಸಿದರು. ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಯಂತ್ರಗಳನ್ನು ಇಟ್ಟುಕೊಂಡಿರುವುದೂ ಅಕ್ರಮವಾಗುತ್ತದೆ ಎಂದೂ ಅವರು ಹೇಳಿದರು.

2009: ಢಾಕಾಕ್ಕೆ 72 ಕಿ. ಮೀ. ದೂರದಲ್ಲಿನ ಕೇಂದ್ರ ತಂಗೈ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್ ಒಂದು ಅಪಘಾತಕ್ಕೀಡಾದದ್ದರಿಂದ ಅದರಲ್ಲಿ ಪ್ರಯಾಣಿಸುತ್ತಿದ್ದ ಮೇಜರ್ ಜನರಲ್ ರಫಿಕ್ ಇಸ್ಲಾಂ ಮತ್ತು ಪೈಲಟ್ ಲೆಫ್ಟಿನೆಂಟ್ ಕರ್ನಲ್ ಶಹಿದ್ ಮೃತರಾದರು. ಹೆಲಿಕಾಪ್ಟರ್ ಅಪಘಾತಕ್ಕೆ ಒಳಗಾದ ಕೂಡಲೇ ಇಬ್ಬರೂ ಸ್ಥಳದಲ್ಲಿಯೇ ಮೃತರಾದರು.. ಇವರ ಜತೆಗಿದ್ದ ಮೇಜರ್ ಸೈಫ್ ಅವರು ತೀವ್ರವಾಗಿ ಗಾಯಗೊಂಡರು. ಅವರನ್ನು ಕೂಡಲೇ ಇನ್ನೊಂದು ಹೆಲಿಕಾಪ್ಟರಿನಲ್ಲಿ ಢಾಕಾ ಸೇನಾ ಆಸ್ಪತ್ರೆಗೆ ಸಾಗಿಸಲಾಯಿತು. ಹೆಲಿಕಾಪ್ಟರ್ ಢಾಕಾದಿಂದ ತಂಗೈಲ್ ಪಟ್ಟಣದ ಸೇನಾ ನೆಲೆಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿತು.

2009: ಇಂಗ್ಲೆಂಡಿನ ಸ್ಟಾಫೋರ್ಡ್ ಪಟ್ಟಣದಲ್ಲಿರುವ ಷೇಕ್ಸ್‌ಪಿಯರ್ ವಸ್ತು ಸಂಗ್ರಹಾಲಯಕ್ಕೆ ಮಹಾರಾಷ್ಟ್ರದಿಂದ ಅಪರೂಪವಾದ ಮೂರು ಕಾಣಿಕೆಗಳು ಬಂದವು. ಮರಾಠಿಯ ಖ್ಯಾತ ಕವಿ ಮಂಗೇಶ್ ಪಡಗಾಂವ್‌ಕರ್ ಅವರು ತಾವು ಇಂಗ್ಲಿಷಿಗೆ ಭಾಷಾಂತರಿಸಿದ 'ದಿ ಟೆಂಪೆಸ್ಟ್', ರೋಮಿಯೋ ಮತ್ತು ಜೂಲಿಯಟ್ ಹಾಗೂ 'ಜೂಲಿಯಸ್ ಸೀಸರ್' ಕೃತಿಗಳನ್ನು ವಸ್ತು ಸಂಗ್ರಹಾಲಯಕ್ಕೆ ನೀಡಿದರು. ಪಡಗಾಂವ್‌ಕರ್ ಅವರು ಗಾಲಿಕುರ್ಚಿಯ ಮೇಲೆ ಲಂಡನ್‌ನಿಂದ ಸ್ಟಾಫೋರ್ಡ್ ಪಟ್ಟಣಕ್ಕೆ ತೆರಳಿ ಪುಸ್ತಕ ಗಳನ್ನು ಕಾಣಿಕೆಯಾಗಿ ನೀಡಿದರು.

2009: ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಮೃಗಾಲಯದ 44 ವರ್ಷದ ಹೆಣ್ಣಾನೆ 'ಜಾಂಬಿ' ಈದಿನ ಮೃತವಾಯಿತು. ಪ್ರಾಣಿ ವಿನಿಮಯದಡಿ 1976ರಲ್ಲಿ ಆಫ್ರಿಕಾ ಮೂಲದ ಜಾಂಬಿ ಮತ್ತು ಟಿಂಬೊ ಎಂಬ ಆನೆಗಳನ್ನು ಪಶ್ಚಿಮ ಜರ್ಮನಿಯಿಂದ ಮೈಸೂರು ಮೃಗಾಲಯಕ್ಕೆ ಕರೆತರಲಾಗಿತ್ತು. ಆನೆಗಳ ಕಾದಾಟ ಸಂದರ್ಭದಲ್ಲಿ ಕಂದಕದ ಒಳಗೆ ಬಿದ್ದ ಪರಿಣಾಮ ಜಾಂಬಿಯ ತೊಡೆಯ ಭಾಗಕ್ಕೆ ಪೆಟ್ಟು ಬಿದ್ದಿತ್ತು. ನಂತರ ಅದು ಸಂದಿವಾತಕ್ಕೆ ತಿರುಗಿತು. ಆರು ವರ್ಷಗಳಿಂದ ಜಾಂಬಿ ನೆಮ್ಮದಿಯಿಂದ ನಿದ್ರಿಸಲಿಲ್ಲ.

2008: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2007ನೇ ಸಾಲಿನ ಸನ್ ಫೀಸ್ಟ್ ಉದಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಚೆಲುವಿನ ಚಿತ್ತಾರ ಚಿತ್ರದ ಅಭಿನಯಕ್ಕಾಗಿ ಗಣೇಶ್ ಮತ್ತು ಅಮೂಲ್ಯ ಕ್ರಮವಾಗಿ ಅತ್ಯುತ್ತಮ ನಟ- ನಟಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ವರ್ಷದ ಯಶಸ್ವಿ ನಾಯಕ ನಟ ಪ್ರಶಸ್ತಿಯನ್ನು ಪುನೀತ್ ರಾಜ್ ಕುಮಾರ್ ಪಡೆದರೆ, ಅತ್ಯುತ್ತಮ ಚಿತ್ರ ಪ್ರಶಸ್ತಿ `ದುನಿಯಾ'ದ ಪಾಲಾಯಿತು. ನಟ ಅಂಬರೀಶ್ ಮತ್ತು ನಟಿ ಜಯಂತಿ ಜೀವಮಾನದ ಸರ್ವಶ್ರೇಷ್ಠ ಸಾಧನೆಯ ಪ್ರಶಸ್ತಿ ಹಾಗೂ ಕನ್ನಡ ಚಿತ್ರರಂಗಕ್ಕೆ 25 ವರ್ಷ ಸೇವೆ ಸಲ್ಲಿಸಿದ ನಟರಾದ ರವಿಚಂದ್ರನ್ ಮತ್ತು ಜಗ್ಗೇಶ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಾ. ರಾಜ್ ಕುಮಾರ್ ವಿಶೇಷ ಪ್ರಶಸ್ತಿಗೆ ಹಿರಿಯ ನಟ ಶನಿಮಹದೇವಪ್ಪ ಮತ್ತು ನಟಿ ಶಾಂತಮ್ಮ ಭಾಜನರಾದರು. ಸ್ನೇಹಾಂಜಲಿ ಚಿತ್ರದ ನಾಯಕ ನಟ ಧ್ರುವ ವಿಶೇಷ ಪ್ರಶಸ್ತಿ ಪಡೆದುಕೊಂಡರು. ಪ್ರಶಸ್ತಿ-ಚಿತ್ರ: ಅತ್ಯುತ್ತಮ ನಿರ್ದೇಶಕ ಪ್ರಕಾಶ್- ಮಿಲನ, ಖಳನಟ ಶರತ್ ಲೋಹಿತಾಶ್ವ- ಆ ದಿನಗಳು, ಹಾಸ್ಯನಟ ಕೋಮಲ್- ಸತ್ಯವಾನ್ ಸಾವಿತ್ರಿ, ಗಾಯಕ ಗುರುಕಿರಣ್- ಪಲ್ಲಕ್ಕಿ, ಗಾಯಕಿ ನಂದಿತಾ- ದುನಿಯಾ, ಸಾಹಿತ್ಯ ನಾಗೇಂದ್ರ ಪ್ರಸಾದ್- ದುನಿಯಾ, ಚಿತ್ರಕಥೆ ಸೂರಿ- ದುನಿಯಾ, ಸಂಭಾಷಣೆ ಅಗ್ನಿ ಶ್ರೀಧರ್- ಆ ದಿನಗಳು, ಸಂಕಲನಕಾರ ದೀಪು ಎನ್ ಕುಮಾರ್- ದುನಿಯಾ, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ- ದುನಿಯಾ, ಛಾಯಾಗ್ರಹಣ ಕೃಷ್ಣಕುಮಾರ್- ಮಾತಾಡ್ ಮಾತಾಡ್ ಮಲ್ಲಿಗೆ, ನೃತ್ಯ ನಿರ್ದೇಶಕ ಇಮ್ರಾನ್- ಕೃಷ್ಣ.

2008: ಕೇರಳದ ಕಣ್ಣೂರಿನಲ್ಲಿ ನಡೆದ ಏಳು ಮಂದಿ ಆರೆಸ್ಸೆಸ್ಸ್ ಕಾರ್ಯಕರ್ತರ ಹತ್ಯೆಗೆ ಪ್ರತೀಕಾರವಾಗಿ ನವದೆಹಲಿಯ ಸಿಪಿಎಂ ಪ್ರಧಾನ ಕಚೇರಿ ಮೇಲೆ ಶಂಕಿತ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದರು. ಘಟನೆಯಲ್ಲಿ ಕನಿಷ್ಠ ಐವರು ಗಾಯಗೊಂಡರು. ಆದರೆ ಹಿಂದೂಗಳು ಹಿಂಸಾಚಾರ ಉತ್ತೇಜಿಸಿಲ್ಲ, ಅವರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು ಎಂದು ಬಿಜೆಪಿ ಹೇಳಿತು.

2008: ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ ಅವರು ಭರ್ಜರಿ ಆಟದ ಪ್ರದರ್ಶನ ತೋರಿ `ಕೆನರಾ ಬ್ಯಾಂಕ್ ಬೆಂಗಳೂರು ಓಪನ್' ಡಬ್ಲ್ಯುಟಿಎ ಚಾಂಪಿಯನ್ ಶಿಪ್ಪನ್ನು ತಮ್ಮದಾಗಿಸಿಕೊಂಡರು. ಕಬ್ಬನ್ ಪಾರ್ಕಿನ ಕೆ ಎಸ್ ಎಲ್ ಟಿ ಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು 7-5, 6-4ರಲ್ಲಿ ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ಸ್ವಿಟ್ಜರ್ ಲೆಂಡಿನ ಪ್ಯಾಟಿ ಸ್ನೈಡರ್ ಅವರನ್ನು ಸೋಲಿಸಿದರು.

2008: ಬಹುಕೋಟಿ ರೂಪಾಯಿ ಮೌಲ್ಯದ ಬಾರಕ್ ಕ್ಷಿಪಣಿ ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ವ್ಯಾಪಾರಿ ಸುರೇಶ್ ನಂದಾ ಹಾಗೂ ಪುತ್ರ ಸಂಜೀವ್ ನಂದಾ ಅವರನ್ನು ಸಿಬಿಐ ತಂಡ ಮುಂಬೈಯಲ್ಲಿ ಬಂಧಿಸಿತು. ಜೊತೆಗೆ ನಂದಾ ಕುಟುಂಬದ ಚಾರ್ಟರ್ಡ್ ಅಕೌಂಟೆಂಟ್ ಬಿಪಿನ್ ಷಾ ಮತ್ತು 1999ರ ತಂಡದ ಭಾರತೀಯ ಕಂದಾಯ ಸೇವೆ ಅಧಿಕಾರಿ ಆಶುತೋಷ್ ವರ್ಮಾ ಅವರನ್ನೂ ಬಂಧಿಸಲಾಯಿತು.

2008: ಎಲ್ ಟಿ ಟಿ ಇ ನಾಯಕ ವಿ.ಪ್ರಭಾಕರನ್ ಅವರು ಮೂರು ತಿಂಗಳ ಹಿಂದೆ ಕಾರ್ಯಾಚರಣೆಯಲ್ಲಿ ಗಾಯಗೊಂಡ ಬಳಿಕ ಇದೇ ಮೊದಲ ಬಾರಿ ಮೃತ ಟಿ ಎನ್ ಎ ಸಂಸದ ಕೆ.ಸಿವನೆಸನ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡರು. ವನ್ನಿಯಲ್ಲಿ ನಡೆದ ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಭಾಕರನ್ ಸುತ್ತ ಸಣ್ಣ ಗುಂಪು ಸುತ್ತುವರೆದಿತ್ತು. ಎಲ್ ಟಿ ಟಿ ಇ ಬೆಂಬಲಿಗ ಸಿವನೆಸನ್ ಅವರು ವನ್ನಿಯಲ್ಲಿ ಬಾಂಬ್ ದಾಳಿಗೆ ಬಲಿಯಾಗಿದ್ದರು.

2008: ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ತಮ್ಮ ತಂದೆ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನ ಉದ್ಯಾನವನ ಹಾಗೂ ರಾಜೀವ್ ಅವರ ಕಂಚಿನ ಪ್ರತಿಮೆಯನ್ನು ಅಂಗುಲ್ನ ಬನಾರ್ ಪಾಲಿನಲ್ಲಿ ಅನಾವರಣಗೊಳಿಸಿದರು. ರಾಜೀವ್ ಪ್ರತಿಮೆಯನ್ನು ಹತ್ತು ವರ್ಷಗಳ ಹಿಂದೆ ತಯಾರಿಸಲಾಗಿದ್ದು, ಗಾಂಧಿ ಕುಟುಂಬದ ಸದಸ್ಯರಿಂದಲೇ ಅನಾವರಣಗೊಳ್ಳಬೇಕೆಂಬ ಆಶಯದಿಂದ ಇಲ್ಲಿಯವರೆಗೂ ಪ್ರತಿಮೆಯನ್ನು ಅನಾವರಣಗೊಳಿಸಿರಲಿಲ್ಲ. ತಮಿಳುನಾಡಿನಲ್ಲಿ ಹತ್ಯೆಯಾಗುವುದಕ್ಕಿಂತ ಮುಂಚೆ ಮೇ 21, 1991ರಂದು ರಾಜೀವ್ ಗಾಂಧಿ ಇದೇ ಸ್ಥಳದಲ್ಲಿ ತಮ್ಮ ಕೊನೆಯ ಸಾರ್ವಜನಿಕ ಸಭೆ ನಡೆಸಿದ್ದರು.

2008: ನೂತನ ಸರ್ಕಾರ ರಚನೆ ಸಂಬಂಧ ಪಿಪಿಪಿ ಪಕ್ಷದ ನಾಯಕ ಆಸಿಫ್ ಆಲಿ ಜರ್ದಾರಿ ಅವರು ಪಿಎಂ ಎಲ್-ಎನ್ ನಾಯಕ ನವಾಜ್ ಷರೀಫ್ ಜತೆಗೆ ಮಹತ್ವದ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಪ್ರಧಾನಿ ಸ್ಥಾನದ ಕೊಡುಗೆಯನ್ನು ನವಾಜ್ ಷರೀಫ್ ಅವರು ಸ್ಪಷ್ಟವಾಗಿ ತಿರಸ್ಕರಿಸಿದರು.

2008: ಮಲೇಷ್ಯಾದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ಅಬ್ದುಲ್ಲಾ ಅಹ್ಮದ್ ಬದಾವಿ ನೇತೃತ್ವದ ಆಡಳಿತಾರೂಢ ಸಮ್ಮಿಶ್ರ ಪಕ್ಷ ಭಾರಿ ಹಿನ್ನಡೆ ಅನುಭವಿಸಿತು. 4 ರಾಜ್ಯಗಳನ್ನು ಕಳೆದುಕೊಂಡ ಅದು, ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಗಳಿಸಲು ವಿಫಲವಾಯಿತು.

2008: ಕೆನಡಾದಲ್ಲಿರುವ ಭಾರತೀಯ ಮೂಲದ ನಾಲ್ವರು ಟೊರಾಂಟೋದ ಅಲ್ಬೆರ್ಟಾದಲ್ಲಿ ನಡೆದ ಪ್ರಾಂತೀಯ ಚುನಾವಣೆಯಲ್ಲಿ ಜಯ ಗಳಿಸಿದರು. ವಿಂಡ್ಸರ್ ವಿವಿ ಕಾನೂನು ವಿದ್ಯಾರ್ಥಿ ಮನ್ಮೀತ್ ಭುಲ್ಲರ್, ನರೇಶ್ ಭಾರದ್ವಾಜ್, ಪೀಟರ್ ಸಂಧು ಹಾಗೂ ರಾಜ್ ಶೆರ್ಮಾನ್ ವಿಜೇತ ಅಭ್ಯರ್ಥಿಗಳು.

2008: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬಳ್ಳಾರಿ ರಸ್ತೆಯ ಆನಂದನಗರ ಜಂಕ್ಷನ್ ಬಳಿ ಬೆಳಗ್ಗೆ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದ 52 ಎಲಿಮೆಂಟ್ ಅಳವಡಿಸಿ ನಿರ್ಮಿಸಲಾಗುವ ನೂತನ ಅಂಡರ್ ಪಾಸ್ ಕಾಮಗಾರಿಯನ್ನು ಆರಂಭಿಸಿತು.

2008: ಹೆಸರಾಂತ ಮಾಜಿ ರಾಜ್ಯ ಆಟಗಾರ ಹಾಗೂ ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಜಂಟಿ ಕಾರ್ಯದರ್ಶಿ ಟಿ. ಷಣ್ಮುಗಂ (64) ಅವರು ತಮಿಳುನಾಡಿನ ವೇಲೂರು ಬಳಿಯ ಅರಾನಿಯಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದರು. `ಷಣ್ಣಿ' ಎಂದೇ ಖ್ಯಾತರಾಗಿದ್ದ ಷಣ್ಮುಗಂ ಕರ್ನಾಟಕ ರಾಜ್ಯದಲ್ಲಿ ಹಾಕಿ ಆಟದ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸಿದ್ದವರು. 4 ದಶಕಕ್ಕೂ ಹೆಚ್ಚು ಕಾಲ ತಮ್ಮನ್ನು ಹಾಕಿ ಕ್ರೀಡೆಗೆ ಸಮರ್ಪಿಸಿಕೊಂಡಿದ್ದ ಅವರು, ಆಟಗಾರರಾಗಿ, ತಾಂತ್ರಿಕ ಅಧಿಕಾರಿಯಾಗಿ, ಅಂಪೈರ್ ಆಗಿ, ಕ್ರೀಡಾ ಆಡಳಿತಗಾರರಾಗಿ ಕಾರ್ಯನಿರ್ವಹಿಸಿದ್ದರು. ಅಥ್ಲೆಟಿಕ್ಸ್ ಮೂಲಕ ತಮ್ಮ ಕ್ರೀಡಾ ಜೀವನ ಆರಂಭಿಸಿದ್ದ ಷಣ್ಮುಗಂ ಬಳಿಕ ಎಂಇಜಿ ಆಟಗಾರರಾದ ವಿ.ಜೆ.ಪೀಟರ್, ಮ್ಯಾನ್ಯೂಯೆಲ್ ಅವರ ಮೂಲಕ ಹಾಕಿ ಆಟದತ್ತ ಆಕರ್ಷಿತರಾದರು. ಆರಂಭದ ದಿನಗಳಲ್ಲಿ ಪ್ರಿಮ್ ರೋಸ್, ಬೆಂಗಳೂರು ಯೂಥ್ಸ್, ವಾಂಡರರ್ಸ್ ಕ್ಲಬ್ ಪರ ಆಡಿದ್ದ ಅವರು, ನಂತರ ತಮ್ಮ ಜೀವನ ಪೂರ್ತಿ ಸಿಐಎಲ್ ತಂಡಕ್ಕೆ ಆಡಿದರು. ವೃತ್ತಿಯಲ್ಲಿ ಟೆಲಿಕಾಂ ಎಂಜಿನಿಯರ್ ಆಗಿದ್ದ ಷಣ್ಮುಗಂ ಸಿಐಎಲ್ನಲ್ಲಿ ಜೂನಿಯರ್ ಸೈಂಟಿಫಿಕ್ ಅಧಿಕಾರಿಯಾಗಿ ನಿವೃತ್ತರಾಗಿದ್ದರು. 1964ರಿಂದ ಸುಮಾರು 36 ವರ್ಷಗಳ ಕಾಲ ಹಾಕಿ ಆಡಿದ ಷಣ್ಮುಗಂ ರಾಜ್ಯ ತಂಡದ ಪರವಾಗಿ ಹದಿನಾಲ್ಕು ವರ್ಷಗಳ (1967-1981) ಕಾಲ ಆಡಿದ್ದರು. 1985 ರಿಂದ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದ ಷಣ್ಮುಗಂ ಅನೇಕ ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಹ್ವಾನ ಟೂರ್ನಿಗಳಲ್ಲಿ ತಾಂತ್ರಿಕ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

2007: ಭಾರತೀಯ ಮೂಲದ ಸಂಗೀತಗಾರ ಜುಬಿನ್ ಮೆಹ್ತಾ ಅವರಿಗೆ 2007ನೇ ಸಾಲಿನ ಡಾನ್ ಡೇವಿಡ್ ಪ್ರಶಸ್ತಿ ಲಭಿಸಿತು. ಸಂಗೀತ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಜುಬಿನ್ ಅವರನ್ನು ಈ ಪ್ರಶಸ್ತಿಗೆ ಆರಿಸಲಾಯಿತು. 2005ರಲ್ಲಿ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಈ ಪ್ರಶಸ್ತಿ ಲಭಿಸಿತ್ತು. ಜುಬಿನ್ ಅವರು ಈ ಪ್ರಶಸ್ತಿಗೆ ಆಯ್ಕೆಯಾಗಿರುವ ಎರಡನೇ ಭಾರತೀಯ.

2007: ಭಾರತೀಯ ಮೂಲದ ಲೇಖಕಿ ಕಿರಣ್ ದೇಸಾಯಿ ಅವರ `ದಿ ಇನ್ ಹೆರಿಟೆನ್ಸ್ ಆಫ್ ಲಾಸ್' ಪುಸ್ತಕವು ಮತ್ತೊಂದು ಸಾಹಿತ್ಯ ಪ್ರಶಸ್ತಿಗೆ ಭಾಜನವಾಯಿತು. ಈ ಸಾಲಿನ ದಿ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಫಿಕ್ಷನ್ ಪ್ರಶಸ್ತಿಗೆ ಈ ಪ್ರಸ್ತಕ ಆಯ್ಕೆಯಾಯಿತು. ಈ ಮೊದಲೇ ದಿ ಇನ್ ಹೆರಿಟೆನ್ಸ್ ಆಫ್ ಲಾಸ್ ಪುಸ್ತಕಕ್ಕೆ ಬೂಕರ್ ಪ್ರಶಸ್ತಿ ಲಭಿಸಿತ್ತು.

2007: ರಾಷ್ಟ್ರೀಯ ಮಹತ್ವದ ಕ್ರೀಡಾ ಕಾರ್ಯಕ್ರಮಗಳ ನೇರ ಪ್ರಸಾರವನ್ನು ಸಾರ್ವಜನಿಕ ಪ್ರಸಾರ ಸಂಸ್ಥೆಯಾದ `ಪ್ರಸಾರ ಭಾರತಿ' ಜೊತೆಗೆ ಹಂಚಿಕೊಳ್ಳುವುದನ್ನು ಖಾಸಗಿ ಟಿವಿ ಚಾನೆಲ್ಲುಗಳಿಗೆ ಕಡ್ಡಾಯಗೊಳಿಸುವ 2007ರ ಕ್ರೀಡಾ ಪ್ರಸಾರ ಸಂಕೇತಗಳ (ಪ್ರಸಾರ ಭಾರತಿ ಜೊತೆಗೆ ಹಂಚಿಕೆ ಕಡ್ಡಾಯ) ಮಸೂದೆಯನ್ನು ಸಂಸತ್ತು ಅಂಗೀಕರಿಸಿತು. ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರವನ್ನು ದೂರದರ್ಶನದ ಜೊತೆಗೆ ಹಂಚಿಕೊಳ್ಳಲು ಖಾಸಗಿ ಚಾನೆಲ್ ಒಂದು ನಿರಾಕರಿಸಿದ್ದಲ್ಲದೆ, ಸರ್ಕಾರದ ಪ್ರಸಾರ ನಿಯಮಗಳನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋದ ಹಿನ್ನೆಲೆಯಲ್ಲಿ ಹೊರಡಿಸಲಾದ ಸುಗ್ರೀವಾಜ್ಞೆಯನ್ನು ಈ ಮಸೂದೆ ಕಾನೂನುಬದ್ಧಗೊಳಿಸಿತು.

2007: ಭಾರತೀಯ ಸಾಹಿತ್ಯಕ್ಕೆ ನೀಡಿದ ಅಪ್ರತಿಮ ಕೊಡುಗೆಗಾಗಿ ಖ್ಯಾತ ಕಾಶ್ಮೀರಿ ಕವಿ, ವಿಮರ್ಶಕ ರೆಹಮಾನ್ ರಾಹಿ ಅವರನ್ನು ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಡಾ. ಎಲ್.ಎಂ. ಸಿಂಘ್ವಿ ಅಧ್ಯಕ್ಷತೆಯ ಆಯ್ಕೆ ಸಮಿತಿಯು 40ನೇ ಜ್ಞಾನಪೀಠ ಪ್ರಶಸ್ತಿಯಾದ 2004-05ರ ಸಾಲಿನ ಪ್ರಶಸ್ತಿಗೆ ರೆಹಮಾನ್ ರಾಹಿ ಅವರನ್ನು ಆಯ್ಕೆ ಮಾಡಿತು. ಜ್ಞಾನಪೀಠವು ಭಾರತೀಯ ಸಾಹಿತ್ಯ ಕ್ಷೇತ್ರದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, 5 ಲಕ್ಷ ರೂಪಾಯಿ ಗೌರವ ಧನ, ಪ್ರಶಸ್ತಿ ಫಲಕ ಮತ್ತು ವಾಗ್ದೇವಿಯ ಮೂರ್ತಿಯನ್ನು ಒಳಗೊಂಡಿರುತ್ತದೆ. ರಾಹಿ ಅವರು ಈ ಪ್ರಶಸ್ತಿಯನ್ನು ಪಡೆದ ಮೊತ್ತ ಮೊದಲ ಕಾಶ್ಮೀರಿ ಬರಹಗಾರರಾಗಿದ್ದು, ಈ ಹಿಂದೆ 1961ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು. 1925ರಲ್ಲಿ ಜನಿಸಿದ ರಾಹಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದ್ದು, ಅವರು ಸಾಹಿತ್ಯ ಅಕಾಡೆಮಿ ಫೆಲೋ ಕೂಡಾ. ಅವರ ಕವನಗಳು, ಪ್ರಬಂಧಗಳ ಸಂಕಲನಗಳು ಅವರಿಗೆ ಹಲವಾರು ಪ್ರಶಸ್ತಿಗಳನ್ನು ತಂದು ಕೊಟ್ಟಿವೆ. ಮಹಾಶ್ವೇತಾ ದೇವಿ, ರಾಮಕಾಂತ ರಥ್ ಮತ್ತು ಗೋಪಿಚಂದ್ ನಾರಂಗ್ ಅವರೂ ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಲ್ಲಿ ಸೇರಿದ್ದರು.

2007: ಬ್ರಿಟನ್ನಿನಲ್ಲಿರುವ ಭಾರತೀಯ ವೈದ್ಯರು ವೀಸಾ ಸಂಬಂಧಿತ ಕಾನೂನು ಸಮರದಲ್ಲಿ ವಿಜಯಗಳಿಸಿದರು. 2007ರ ಆಗಸ್ಟ್ 1ರ ನಂತರದ ವಾಸಕ್ಕೆ ವೀಸಾ ಹೊಂದಿಲ್ಲದ ಭಾರತೀಯ ವೈದ್ಯರು ನೇಮಕ ಪ್ರಕ್ರಿಯೆಗೆ ಅರ್ಹರಾಗುವುದಿಲ್ಲ ಎಂದು ಘೋಷಿಸಿದ ಕಾನೂನನ್ನು ಸರ್ಕಾರವೇ ಹಿಂತೆಗೆದುಕೊಂಡಿತು. ಈ ಕಾನೂನು ವಿರುದ್ಧ ಭಾರತೀಯ ವೈದ್ಯರು ಕಾನೂನು ಸಮರ ಸಾರಿದ್ದರು.

2007: ಸಿಂಗೂರಿನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯ ಸಣ್ಣ ಕಾರು ಯೋಜನೆಯ ಮಹತ್ವದ ಹೆಜ್ಜೆಯಾಗಿ ಜಮೀನು ಭೋಗ್ಯಕ್ಕೆ ನೀಡುವ ಒಪ್ಪಂದಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಸಹಿ ಹಾಕಿತು. ಇದರಿಂದಾಗಿ ಟಾಟಾ ಮೋಟಾರ್ಸ್ ಸಂಸ್ಥೆಗೆ 997 ಎಕರೆ ಮೇಲೆ ಪೂರ್ಣ ಸ್ವಾಮ್ಯ ಲಭಿಸಿತು.

2006: ಭಾರತದ ಪರ ಮೊಹಾಲಿಯಲ್ಲಿ 131ನೇ ಟೆಸ್ಟ್ ಪಂದ್ಯವನ್ನು ಆಡುವ ಮೂಲಕ ಸಚಿನ್ ತೆಂಡೂಲ್ಕರ್ ಹೊಸ ಮೈಲಿಗಲ್ಲು ಸ್ಥಾಪಿಸಿದರು. ಭಾರತದ ಪರ ಕಪಿಲ್ ದೇವ್ ಅತ್ಯಂತ ಹೆಚ್ಚು ಟೆಸ್ಟುಗಳಲ್ಲಿ ಅಂದರೆ 131 ಪಂದ್ಯಗಳಲ್ಲಿ ಆಡಿದ ದಾಖಲೆ ಹೊಂದಿದ್ದರು.

2006: ಗೂಢಚರ್ಯೆ ಹಾಗೂ 14 ಮಂದಿಯ ಸಾವಿಗೆ ಕಾರಣವಾದ 4 ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪದಲ್ಲಿ 1991ರಲ್ಲಿ ಪಾಕಿಸ್ಥಾನಿ ಸುಪ್ರೀಂ ಕೋರ್ಟಿನಿಂದ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ಸರಬ್ ಜಿತ್ ಸಿಂಗ್ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಪಾಕ್ ಸುಪ್ರೀಂಕೋರ್ಟ್ ವಜಾ ಮಾಡಿತು.

2006: ಮ್ಯಾನ್ಮಾರ್ (ಹಿಂದಿನ ಬರ್ಮಾ) ಭೇಟಿ ಕಾಲದಲ್ಲಿ ಭಾರತದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೊನೆಯ ಮೊಘಲ್ ದೊರೆ ಬಹ್ದದೂರ್ ಷಾ ಅವರ ಯಾಂಗನ್ನಿನಲ್ಲಿ ಇರುವ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿಕ್ಕಿದ ಬ್ರಿಟಿಷ್ ಆಡಳಿತ ಬಹದ್ದೂರ್ ಷಾ ಅವರನ್ನು ಯಾಂಗನ್ಗೆ ಗಡೀಪಾರು ಮಾಡಿತ್ತು. ಅಲ್ಲೇ ಮೃತರಾದ ಷಾ ಅವರ ಸಮಾಧಿಗೆ ಭೇಟಿ ನೀಡಿದ ಭಾರತದ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಕಲಾಂ ಅವರು ಈ ಭೇಟಿ ಮೂಲಕ ಪಾತ್ರರಾದರು. ನೇತಾಜಿ ಸುಭಾಶ ಚಂದ್ರ ಬೋಸ್ ಅವರು ಈ ಸಮಾಧಿಗೆ ಬೇಟಿ ನೀಡಿದ್ದರು.

1951: ಝಾಕೀರ್ ಹುಸೇನ್ ಹುಟ್ಟಿದ ದಿನ. ಭಾರತೀಯ ತಬಲಾ ವಾದಕರಾದ ಇವರು ಸಾಂಪ್ರದಾಯಿಕ ತಬಲಾವಾದನ ಕಲೆಯನ್ನು ಕ್ರಾಂತಿಕಾರಕಗೊಳಿಸಿದರು.

1934: ಯೂರಿ ಅಲೆಕ್ಸೆಯಿವಿಚ್ ಗಗಾರಿನ್ (1934-1968) ಹುಟ್ಟಿದ ದಿನ. ಸೋವಿಯತ್ ಗಗನಯಾನಿಯಾದ ಇವರು 1961ರಲ್ಲಿ ಬಾಹ್ಯಾಕಾಶಕ್ಕೆ ಪಯಣಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು.

1907: ಮಿರ್ಸಿಯಾ ಎಲಿಯಾಡ್ (1907-86) ಹುಟ್ಟಿದರು. ರೊಮೇನಿಯಾ ಸಂಜಾತ ಧಾರ್ಮಿಕ ಇತಿಹಾಸಕಾರರಾದ ಇವರು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಸುರೇಂದ್ರನಾಥ ದಾಸ್ ಗುಪ್ತ ಅವರ ಕೈಕೆಳಗೆ ಧಾರ್ಮಿಕ ಇತಿಹಾಸದ ಅಧ್ಯಯನ ನಡೆಸಿದ್ದರು. ಆರು ಸಂಪುಟಗಳ `ಎನ್ಸೈಕ್ಲೋಪಿಡಿಯಾ ಆಫ್ ರಿಲಿಜನ್ಸ್'ನ ಮುಖ್ಯ ಸಂಪಾದಕರೂ ಆಗಿದ್ದರು.

1900: ಹೊವರ್ಡ್ ಹಾಥವೇ ಐಕಿನ್ (1900-1973) ಹುಟ್ಟಿದ ದಿನ. ಅಮೆರಿಕದ ಗಣಿತ ತಜ್ಞನಾದ ಈತ ಮುಂಚೂಣಿಯ `ಹಾರ್ವರ್ಡ್ ಮಾರ್ಕ್ 1' ಆಧುನಿಕ ಎಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರಿನ ಸಂಶೋಧಕ.

1862: ಫರ್ನಾಂಡ್ ಇಸಿಡೋರ್ ವೈಡಲ್ (1862-1929) ಹುಟ್ಟಿದ ದಿನ. ಫೆಂಚ್ ವೈದ್ಯ ಹಾಗೂ ಬ್ಯಾಕ್ಟೀರಿಯಾ ತಜ್ಞನಾದ ಈತ ಟೈಫಾಯಿಡ್ ಜ್ವರಕ್ಕೆ ಚಿಕಿತ್ಸೆ ನೀಡುವ ತನ್ನದೇ ವಿಧಾನ ರೂಪಿಸಿದ. ಈ ವಿಧಾನ `ವೈಡಾಲ್ ರಿಯಾಕ್ಷನ್' ಎಂದು ಖ್ಯಾತಿ ಪಡೆದಿದೆ.

1846: ಸಿಖ್ ಸಮರ ಕೊನೆಗೊಂಡಿತು. ಸಿಖ್ ಸರ್ಕಾರವು ಲಾಹೋರ್ ಒಪ್ಪಂದ ಪ್ರಕಾರ ಜಲಂಧರ್ ದೋಆಬ್ ಮತ್ತು ಕಾಶ್ಮೀರವನ್ನು ಬ್ರಿಟಿಷರಿಗೆ ಒಪ್ಪಿಸಿತು.

1831: ದೊರೆ ಲೂಯಿ ಫಿಲಿಪ್ ಆಫ್ರಿಕಾದಲ್ಲಿನ ಫ್ರೆಂಚ್ ವಸಾಹತುಗಳ ನಿಯಂತ್ರಣಕ್ಕೆ ನೆರವಾಗುವ ಸಲುವಾಗಿ ವಿದೇಶೀ ಪಡೆ ಸ್ಥಾಪಿಸಿದ. ಅಲ್ಜೀರಿಯಾದ ಸಿಡಿ ಬೆಲ್ ಅಬ್ಬೆಸ ಈ ಪಡೆಯ ಕೇಂದ್ರಸ್ಥಾನವಾಗಿತ್ತು. ಪ್ರಾರಂಭದಲ್ಲಿ ಪ್ರಾನ್ಸಿನಿಂದ ವೇತನ ಪಡೆದು ಕೆಲಸ ಮಾಡುವ ವಿದೇಶೀ ಸ್ವಯಂಸೇವಕರು ಈ ಪಡೆಯಲ್ಲಿ ಇದ್ದರು. ಆದರೆ ಈಗ ಈ ಪಡೆಯಲ್ಲಿ ಫ್ರೆಂಚರೇ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. 1962ರಲ್ಲಿ ಅಲ್ಜೀರಿಯಾ ಸ್ವತಂತ್ರವಾದ ಬಳಿಕ ಈ ಪಡೆಯ ಕೇಂದ್ರ ಕಚೇರಿಯನ್ನು ಮಾರ್ಸೆಲ್ ಸಮೀಪದ ಅಬನೆ (Aubagne) ಎಂಬಲ್ಲಿಗೆ ಸ್ಥಳಾಂತರಿಸಲಾಯಿತು.

1824: ಅಮೆರಿಕಾದ ಲೀಲ್ಯಾಂಡ್ ಸ್ಟಾನ್ ಫೋರ್ಡ್ (1824-1893) ಹುಟ್ಟಿದ ದಿನ. ಅಮೆರಿಕದ ಸೆನೆಟರ್ ಆಗಿದ್ದ ಈತ 1885ರಲ್ಲಿ ಸ್ಟಾನ್ ಫೋರ್ಡ್ ಯುನಿವರ್ಸಿಟಿಯನ್ನು ಸ್ಥಾಪಿಸಿ ಅದನ್ನು ತನ್ನ ಏಕೈಕ ಮೃತ ಪುತ್ರ ಲೀಲ್ಯಾಂಡ್ ಜ್ಯೂನಿಯರ್ ಸ್ಮರಣೆಗಾಗಿ ಅರ್ಪಿಸಿದ.

1796: ಫ್ರಾನ್ಸಿನ ಭಾವಿ ಚಕ್ರವರ್ತಿ ನೆಪೋಲಿಯನ್ ಬೋನಪಾರ್ಟೆ ಜೋಸೆಫಿನ್ ಡೆ ಬಿಯುಹರ್ನಯಿಸಳನ್ನು ಮದುವೆಯಾದ. 1809ರಲ್ಲಿ ಈ ದಂಪತಿ ವಿಚ್ಛೇದನ ಪಡೆಯಿತು.

No comments:

Post a Comment