Thursday, March 15, 2018

ಇಂದಿನ ಇತಿಹಾಸ History Today ಮಾರ್ಚ್ 14

ಇಂದಿನ ಇತಿಹಾಸ History Today ಮಾರ್ಚ್ 14
2018: ಕೇಂಬ್ರಿಜ್ (ಇಂಗ್ಲೆಂಡ್): ಖ್ಯಾತ ಭೌತ ವಿಜ್ಞಾನಿ ಪ್ರೊ. ಸ್ಟೀಫನ್ ಹಾಕಿಂಗ್ (೭೬) ಅವರು ಬೆಳಗ್ಗೆ ಕೇಂಬ್ರಿಜ್‌ನಲ್ಲಿ ಇರುವ ತಮ್ಮ ನಿವಾಸದಲ್ಲಿ ನಿಧನರಾದರು. ಹಾಕಿಂಗ್ ಅವರ ಮಕ್ಕಳಾದ ಲೂಸಿ, ರಾಬರ್ಟ್ ಮತ್ತು ಟಿಮ್ ಅವರು, ‘ನಮ್ಮ ಪ್ರೀತಿಯ ತಂದೆಯವರ ನಿಧನದಿಂದ ದುಃಖವಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದರು. ಹಾಕಿಂಗ್ ಅವರು ಸ್ನಾಯುವಿಗೆ ಸಂಬಂಧಿಸಿದ ಅಪರೂಪದ ತೀವ್ರ ರೀತಿಯ ನರಕೋಶದ ಕಾಯಿಲೆಗೆ ತುತ್ತಾಗಿದ್ದರು. (ಸಂಪೂರ್ಣವಾಗಿ ಪಾರ್ಶ್ವವಾಯುವಿನಂತಹ ಸ್ಥಿತಿಯಾದ ಅಮಿಯೊಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ ಗೆ ಸಂಬಂಧಿಸಿದ ನರ-ಸ್ನಾಯು ಕ್ಷಯ ರೋಗ) ಅಲ್ಲದೆ, ಬೆನ್ನು ಹುರಿಯ ಸ್ನಾಯು ಕ್ಷೀಣತೆಯಿಂದಲೂ ಬಳಲುತ್ತಿದ್ದರು. ದಶಕಗಳ ಕಾಲ ಈ ಕಾಯಿಲೆಯಿಂದ ನರಳಿದ ಅವರು ಕ್ರಮೇಣ ಪಾರ್ಶ್ವವಾಯುವಿಗೆ ತುತ್ತಾದರು. ಹಾಕಿಂಗ್ ಅವರಿಗೆ ೨೧ ವರ್ಷ ವಯಸ್ಸಿನಲ್ಲೇ (೧೯೬೩) ಈ ಕಾಯಿಲೆ ಇರುವುದು ಪತ್ತೆಯಾಗಿತ್ತು. ಪರಿಣಾಮವಾಗಿ ಅವರು ಜೀವನಪೂರ್ತಿ ಗಾಲಿಕುರ್ಚಿಗೆ ಅಂಟಿಕೊಂಡೇ ಬದುಕನ್ನು ಕಳೆದರು.  ೧೯೪೨ರ ಜನವರಿ ೮ರಂದು ಆಕ್ಸ್ ಫರ್ಡ್‌ನಲ್ಲಿ ಜನಿಸಿದ ಸ್ಟೀಫನ್ ಹಾಕಿಂಗ್ ಅವರು ಭೌತಶಾಸ್ತ್ರ ವಿಷಯದಲ್ಲಿ ಮಹತ್ವದ ಸಂಶೋಧನೆಗಳನ್ನು ನಡೆಸಿದ್ದರು. ವಿಶ್ವವಿಜ್ಞಾನ ಹಾಗೂ ಕ್ವಾಂಟಮ್ ಗುರುತ್ವಾಕರ್ಷಣೆ, ಅದರಲ್ಲಿಯೂ ಮುಖ್ಯವಾಗಿ ಕಪ್ಪು ರಂಧ್ರದ ವಿವರಗಳನ್ನು ಕುರಿತ ಅಧ್ಯಯನ ಮತ್ತು ಸಂಶೋಧನಾ ಕೊಡುಗೆಗಳಿಗಾಗಿ ಖ್ಯಾತಿ ಪಡೆದಿದ್ದರು.  ೪೦ ವರ್ಷಗಳ ಕಾಲ ವಿಜ್ಞಾನ ಕ್ಷೇತ್ರಕ್ಕೆ ಸೇವೆ ಸಲ್ಲಿಸಿರುವ ಹಾಕಿಂಗ್, ಗಾನ್ವಿಲ್ಲೆ ಆಂಡ್ ಕಾಯಸ್ ವಿದ್ಯಾಲಯದಲ್ಲಿ ಫೆಲೋ ಆಗಿ, ಕೇಂಬ್ರಿಜ್ ಮತ್ತು ಒಂಟಾರಿಯೊದ ವಾಟರ್ಲೂನ, ಪೆರಿಮೀಟರ್ ಇನ್ಸ್ಟಿಟ್ಯೂಟ್ ಫಾರ್ ಥಿಯೊರೆಟಿಕಲ್ ಫಿಸಿಕ್ಸ್ ಸಂಸ್ಥೆಯಲ್ಲಿ ಪ್ರತ್ಯೇಕ ಸಂಶೋಧಕ ಪ್ರಾಧ್ಯಾಪಕ ಸ್ಥಾನವನ್ನು ಹೊಂದಿದ್ದರು.  ೨೦೦೮ನೇ ಇಸವಿಯಲ್ಲಿ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ೫೦ನೇ ವರ್ಷಾಚರಣೆಯ ಸಂದರ್ಭದಲ್ಲಿ, ಮಾನವ ಜನಾಂಗ ಆಕಾಶದ ಅನ್ವೇಷಣೆಗೆ ಯಾಕೆ ಮುಂದಾಗುತ್ತದೆ ಎಂಬುದರ ಕುರಿತು ಆಸಕ್ತಿದಾಯಕ ಭಾಷಣ ನೀಡಿ ಹಾಕಿಂಗ್ ವಿಶ್ವದ ಗಮನ ಸೆಳೆದಿದ್ದರು. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯಗಳಲ್ಲಿ ಹಾಕಿಂಗ್ ಉನ್ನತ ಅಧ್ಯಯನ ನಡೆಸಿದ್ದರು.  ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಹಾಕಿಂಗ್ ಅವರನ್ನು ಅರಸಿಕೊಂಡು ಬಂದಿದ್ದವು.  ಆಸಕ್ತಿ ಗಣಿತ, ಆದದ್ದು ಭೌತ ವಿಜ್ಞಾನಿ: ಹಾಕಿಂಗ್ ಅವರ ಕುಟುಂಬವೂ ವೈಜ್ಞಾನಿಕ ಕ್ಷೇತ್ರ ಹಿನ್ನೆಲೆಯುಳ್ಳದ್ದೇ ಆಗಿತ್ತು. ಅವರ ತಂದೆ ಡಾ. ಫ್ರಾಂಕ್ ಹಾಕಿಂಗ್ ಖ್ಯಾತ ಜೀವಶಾಸ್ತ್ರಜ್ಞರಾಗಿದ್ದರು. ಹಾಕಿಂಗ್ ಅವರಿಗೆ ಎಳವೆಯಲ್ಲೇ ವಿಜ್ಞಾನ ಬಗ್ಗೆ ಅಪಾರ ಆಸಕ್ತಿ ಇತ್ತು. ಆರಂಭದಲ್ಲಿ ಗಣಿತಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು, ಅದನ್ನೇ ಅಧ್ಯಯನ ಮಾಡಬೇಕು ಎಂದುಕೊಂಡಿದ್ದರು. ಅವರ ತಂದೆ ತಾವು ವ್ಯಾಸಂಗ ಮಾಡಿದ ಆಕ್ಸ್ ಫರ್ಡ್ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲು ಸೂಚಿಸಿದ್ದರು. ಆದರೆ, ಆ ಸಂದರ್ಭ ಆಕ್ಸ್ ಫರ್ಡ್  ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರ ವಿಷಯಕ್ಕೆ ಪ್ರಾಧ್ಯಾಪಕರೇ ಇಲ್ಲದಿದ್ದುದರಿಂದ ಹಾಕಿಂಗ್ ಅವರ್ರ ಅರ್ಜಿಯನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತ್ತು. ಪರಿಣಾಮವಾಗಿ ಆರೋಗ್ಯ ಸುಧಾರಿಸಿದ ಬಳಿಕ ಅವರು ಭೌತವಿಜ್ಞಾನ ಅಧ್ಯಯನದಲ್ಲಿ ತೊಡಗಿಸಿಕೊಂಡರು.
ಪ್ರಶಸ್ತಿ- ಗೌರವ: ಸೈದ್ಧಾಂತಿಕ ಭೌತಶಾಸ್ತ್ರಜ್ಞರಾಗಿದ್ದ ಅವರಿಗೆ ೧೩ ಗೌರವ ಪದವಿಗಳು ದೊರೆತಿದ್ದವು. ಸಿಬಿಇ (೧೯೮೨), ಕಂಪ್ಯಾನಿಯನ್ ಆಫ್ ಆನರ್ (೧೯೮೯) ಮತ್ತು ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ (೨೦೦೯) ಪ್ರಶಸ್ತಿಗಳು ಅವರಿಗೆ ದೊರಕಿದ್ದವು. ಅಲ್ಲದೆ, ಫಂಡಮೆಂಟಲ್ ಫಿಸಿಕ್ಸ್ ಪ್ರೈಜ್ (೨೦೧೩), ಕಾಪ್ಲೆ ಮೆಡಲ್ (೨೦೦೬) ಮತ್ತು ವೂಲ್ಫ್ ಫೌಂಡೇಶನ್ ಪ್ರೈಜ್ (೧೯೮೮) ಸೇರಿದಂತೆ ಇನ್ನೂ ಹಲವಾರು ಪದಕ ಪಾರಿತೋಷಕಗಳನ್ನು ಅವರು ಗಳಿಸಿದ್ದರು.  ಪ್ರತಿಷ್ಠಿತ ರಾಯಲ್ ಸೊಸೈಟಿಯ ಫೆಲೋ ಆಗಿದ್ದ ಅವರು, ಅಮೆರಿಕದ ರಾಷ್ಟ್ರೀಯ ವಿಜ್ಞಾನ ಅಕಾಡೆಮಿ ಮತ್ತು ಪೋಂಟಿಫಿಶಿಯಲ್ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯರೂ ಆಗಿದ್ದರು.  ೧೯೮೮ರಲ್ಲಿ ಅವರು ಬರೆದಿದ್ದ ’ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ವಿಶ್ವಾದ್ಯಂತ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿ ’ಬೆಸ್ಟ್ ಸೆಲ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.  ಅಪ್ರತಿಮ ವಿಜ್ಞಾನಿ ಎಂಬುದಾಗಿ ಪರಿಗಣಿತರಾದ ಹಾಕಿಂಗ್ ಆಲ್ಬರ್ಟ್ ಐನ್ ಸ್ಟೀನ್ ಮತ್ತು ಸರ್ ಐಸಾಕ್ ನ್ಯೂಟನ್ ಅವರಂತೆಯೇ ಪ್ರಸಿದ್ಧಿ ಗಳಿಸಿದ್ದರು.  ವಿಶ್ವದ ಸೃಷ್ಟಿ ಮತ್ತು ಮತ್ತು ಅದು ಹೇಗೆ ನಡೆಲ್ಪಡುತ್ತದೆ ಎಂಬುದನ್ನು ವಿವರಿಸಲು ವಿಶ್ವದ ಅತ್ಯಂತ ಸಣ್ಣ ಕಣಗಳು ಹೇಗೆ ವರ್ತಿಸುತ್ತವೆ ಎಂಬುದನ್ನು ವಿವರಿಸುವ ನೇಚರ್ ಆಫ್ ಸ್ಪೇಸ್ ಅಂಡ್ ಟೈಮ್- ಅಂಡ್ ಕ್ವಾಂಟಮ್ ಸಿದ್ಧಾಂತದ ಮೇಲೆ ಅವರು ಬೆಳಕು ಚೆಲ್ಲಿದರು.  ೧೯೭೪ರಲ್ಲಿ ಬ್ರಿಟನ್ನಿನ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾದ ರಾಯಲ್ ಸೊಸೈಟಿಯ ಅತ್ಯಂತ ಕಿರಿಯ ಫೆಲೋ ಆದ ಹಾಕಿಂಗ್ ೧೯೭೯ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ಲುಕಾಸಿಯನ್ ಪ್ರೊಫೆಸರ್ ಆಫ್ ಮ್ಯಾತ್ಮೆಟಿಕ್ಸ್ ಆಗಿ ನೇಮಕಗೊಂಡಿದ್ದರು. ಹಿಂದೆ ನ್ಯೂಟನ್ ಅವರು ಈ ಪ್ರತಿಷ್ಠಿತ ಹುದ್ದೆಯನ್ನು ಹೊಂದಿದ್ದರು.  ವಿಶ್ವದ ಸ್ವರೂಪ, ಅದು ಹುಟ್ಟಿದ್ದು ಹೇಗೆ ಮತ್ತು ಹೇಗೆ ಕೊನೆಯಾಗಬಹುದು ಎಂಬ ಬಗ್ಗೆ ಅತೀವ ಕುತೂಹಲ ಹೊಂದಿದ್ದ ಹಾಕಿಂಗ್ ’ನನ್ನ ಗುರಿ ಸರಳ. ವಿಶ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು, ಅದು ಏಕಿದೆ ಮತ್ತು ಅದು ಅಸ್ತಿತ್ವದಲ್ಲಿ ಇರುವುದಾದರೂ ಏಕೆ ಎಂದು ತಿಳಿದುಕೊಳ್ಳುವುದು ಎಂದು ಹಾಕಿಂಗ್ ಒಮ್ಮೆ ಹೇಳಿದ್ದರು. ‘ದೇವಕಣದ ಸಂಶೋಧನೆ ಯತ್ನದ ಸಂದರ್ಭದಲ್ಲಿ ಹಾಕಿಂಗ್ ಈ ಯತ್ನದಿಂದ ವಿಶ್ವವೇ ನಾಶವಾಗಬಹುದು ಎಂದೂ ಎಚ್ಚರಿಸಿದ್ದರು.

2018: ನವದೆಹಲಿ: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ ಅಯೋಧ್ಯಾ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಶ್ಯಾಮ್ ಬೆನಗಲ್, ಅಪರ್ಣಾ ಸೆನ್ ಮತ್ತು ತೀಸ್ತಾ ಸೆಟಲ್ವಾಡ್ ಮತ್ತಿತರರು ಸಲ್ಲಿಸಿದ್ದ ೩೨ ಮಧ್ಯಂತರ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ಬಾಬರಿ ಮಸೀದಿ- ರಾಮಜನ್ಮಭೂಮಿ ಭೂಮಿಯ ಹಕ್ಕು ವಿವಾದ ಪ್ರಕರಣದಲ್ಲಿ ಮೂಲ ಕಕ್ಷಿದಾರರ ಮನವಿಗಳನ್ನು ಮಾತ್ರವೇ ಸುಪ್ರೀಂಕೋರ್ಟ್ ಅಂಗೀಕರಿಸಿ, ಸಂಬಂಧ ಇಲ್ಲದ ಇತರ ಎಲ್ಲರ ಅರ್ಜಿಗಳನ್ನೂ ತಳ್ಳಿಹಾಕಿತು.  ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ಸುಪ್ರೀಂಕೋರ್ಟ್ ತಿರಸ್ಕರಿಸಿತು. ಆದರೆ ಅಯೋಧ್ಯೆಯ ರಾಮಮಂದಿರದಲ್ಲಿ ಆರಾಧನೆ ನಡೆಸುವ ತಮ್ಮ ಮೂಲಭೂತ ಹಕ್ಕಿನ ಜಾರಿಯನ್ನು ಕೋರಿ ಸ್ವಾಮಿ ಅವರ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂಕೋರ್ಟ್ ಮರುಜೀವ ನೀಡಲು ಸುಪ್ರೀಂಕೋರ್ಟ್ ಆಜ್ಞಾಪಿಸಿತು.  ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಹಲವಾರು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೊರ್ಟ್ ಈದಿನ ಮತ್ತೆ ಕೈಗೆತ್ತಿಕೊಂಡಿತು.  ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ಇತರ ಇಬ್ಬರು ನ್ಯಾಯಮೂರ್ತಿಗಳಾದ ಅಶೋಕ ಭೂಷಣ್ ಮತ್ತು ಎಸ್. ಅಬ್ದುಲ್ ನಜೀರ್ ಅವರನ್ನು ಒಳಗೊಂಡ ಪೀಠವು ಅಯೋಧ್ಯಾ ನಿವೇಶನ ವಿವಾದಕ್ಕೆ ಸಂಬಂಧಿಸಿದ ಒಟ್ಟು ೧೩ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.  ಇದಕ್ಕೆ ಮುನ್ನ ಸಿಜೆಐ ಮಿಶ್ರ ನೇತೃತ್ವದ ವಿಶೇಷ ಪೀಠವು ಅಲಹಾಬಾದ್ ಹೈಕೋರ್ಟಿನಲ್ಲಿದ್ದ ಉಭಯ ಕಕ್ಷಿದಾರರಿಗೂ ತಾವು ಸಲ್ಲಿಸಿದ್ದ ದಾಖಲೆಗಳ ಇಂಗ್ಲಿಷ್ ಭಾಷಾಂತರವನ್ನು ಸಲ್ಲಿಸುವಂತೆ ಆಜ್ಞಾಪಿಸಿತ್ತು.  ಹೈಕೋರ್ಟ್ ದಾಖಲೆಗಳ ಭಾಗವಾಗಿದ್ದ ವಿಡಿಯೋ ಕ್ಯಾಸೆಟ್ ಗಳ ಪ್ರತಿಗಳನ್ನು ಅವುಗಳ ನೈಜ ದರದಲ್ಲಿ ಕಕ್ಷಿದಾರರಿಗೆ ಒದಗಿಸುವಂತೆಯೂ ರಿಜಿಸ್ಟ್ರಿಗೆ ನಿರ್ದೇಶಿಸಿತ್ತು. ೨೦೧೮ರ ಮಾರ್ಚ್ ೧೪ರಿಂದ ಮೇಲ್ಮನವಿಗಳ ವಿಚಾರಣೆಯನ್ನು ತಾನು ನಡೆಸುವುದಾಗಿ ಪೀಠವು ಹೇಳಿತ್ತು. ಅನುದಿನವೂ ಪ್ರಕರಣದ ವಿಚಾರಣೆ ನಡೆಸಲು ತಾನು ಉದ್ದೇಶಿಸಿರುವುದಾಗಿ ಪೀಠ ಸ್ಪಷ್ಟ ಪಡಿಸಿತ್ತು.  ಪ್ರಕರಣವನ್ನು ಶುದ್ಧ ಭೂ ವಿವಾದದಂತೆ ಪರಿಗಣಿಸಿ ವಿಚಾರಣೆ ನಡೆಸುವುದಾಗಿಯೂ ಪೀಠ ಹೇಳಿತ್ತು. ನಾಲ್ಕು ಸಿವಿಲ್ ಖಟ್ಲೆಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಸಲ್ಲಿಸಲಾದ ಒಟ್ಟು ೧೪ ಮೇಲ್ಮನವಿಗಳ ವಿಚಾರಣೆಯನ್ನು ವಿಶೇಷ ಪೀಠ ಎತ್ತಿಕೊಂಡಿತು. ಅಲಹಾಬಾದ್ ಹೈಕೋರ್ಟಿನ ತ್ರಿಸದಸ್ಯ ಪೀಠವು ೨೦೧೦ರಲ್ಲಿ ನೀಡಿದ ತನ್ನ ೨:೧ ಬಹುಮತದ ತೀರ್ಪಿನಲ್ಲಿ ಭೂಮಿಯನ್ನು ಮೂರು ಕಕ್ಷಿದಾರರಾದ ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರ ಮತ್ತು ರಾಮಲಲ್ಲಾ  ಮಧ್ಯೆ ಸಮಾನವಾಗಿ ಹಂಚಿತ್ತು.  ೨.೭ ಎಕರೆ ಭೂಮಿಯ ವಿವಾದಕ್ಕೆ ಸಂಬಂಧಿಸಿದ ೧೩ ಅರ್ಜಿಗಳ ಅಂತಿಮ ವಿಚಾರಣೆಯನ್ನು ಸುಪ್ರೀಂಕೋರ್ಟ್ ಫೆಬ್ರುವರಿ ೯ರಂದು ಆರಂಭಿಸುವ ಸಾಧ್ಯತೆ ಇತ್ತು. ಆದರೆ ಕೆಲವು ದಾಖಲೆಗಳ ಇಂಗ್ಲಿಷ್ ಭಾಷಾಂತರ ಆಗದೇ ಇದ್ದುದರಿಂದ ವಿಚಾರಣೆಯನ್ನು ಮುಂದೂಡಲಾಗಿತ್ತು.  ತನ್ನ ಮುಂದೆ ಸುಮಾರು ೬ ದಶಕಗಳಿಂದ ಇತ್ಯರ್ಥವಾಗದೇ ಉಳಿದಿದ್ದ ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ ತೀರ್ಪು, ಮೂರೂ ಕಕ್ಷಿದಾರರಿಗೆ ಅಸಮಾಧಾನ ಉಂಟು ಮಾಡಿತ್ತು. ಬಾಬರಿ ಮಸೀದಿ ನಿರ್ಮಿಸಲಾಗಿದ್ದ ವಿವಾದಿದ ಭೂಮಿ ತಮಗೆ ಸೇರಿದ್ದು ಎಂದು ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್, ಶ್ರೀರಾಮನ ಜನ್ಮಭೂಮಿಯಾಗಿದ್ದ ಈ ಜಾಗ ತನಗೆ ಸೇರಿದ್ದು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಪ್ರತಿಪಾದಿಸಿದ್ದವು.  ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಈದಿನ  ಮುಸ್ಲಿಮರು ಶಿಯಾ ವಕ್ಫ್ ಬೋರ್ಡ್ ಹೆಜ್ಜೆಗಳನ್ನು ಅನುಸರಿಸಬೇಕು ಮತ್ತು ವಿವಾದಿತ ನಿವೇಶನದಲ್ಲಿ ರಾಮಮಂದಿರ ನಿರ್ಮಿಸಲು ಬೆಂಬಲ ನೀಡಬೇಕು ಎಂದು ಮನವಿ ಮಾಡಿದ್ದರು.  ‘ನಮ್ಮ ವಾದ ಪ್ರಬಲವಾಗಿದೆ ಎಂದು ನಾನು ನಂಬಿದ್ದೇನೆ. ನಾವು ಕೋರ್ಟ್ ತೀರ್ಮಾನವನ್ನು ಗೌರವಿಸುತ್ತೇವೆ. ಆದರೆ ಶಿಯಾ ಸಹೋದರರು ಬೆಂಬಲ ನೀಡಿದ ರೀತಿಯಲ್ಲೇ ಇತರ ಮುಸ್ಲಿಮ್ ಸಹೋದರರು ಸಾಗಬೇಕು ಮತ್ತು ಮಂದಿರ ನಿರ್ಮಾಣಕ್ಕೆ ಬೆಂಬಲ ನೀಡಬೇಕು ಎಂದು ನಾನು ಬಯಸುತ್ತೇನೆ ಎಂದು ಸಿಂಗ್ ಹೇಳಿದರು.
೧೯೯೨ರ ಡಿಸೆಂಬರ್ ೬ರಂದು ಅಯೋಧ್ಯೆಗೆ ಬಂದಿದ್ದ ಸಹಸ್ರಾರು ಮಂದಿ ಕರಸೇವಕರು ವಿವಾದಿತ ಮಸೀದಿಯನ್ನು ಉರುಳಿಸಿದ್ದರು. ಈ ಹಿನ್ನೆಲೆಯಲ್ಲಿ ಭುಗಿಲೆದ್ದ ಗಲಭೆಗಳಲ್ಲಿ ಸುಮಾರು ೨೦೦೦ ಮಂದಿ ಸಾವನ್ನಪ್ಪಿದ್ದರು.

2018: ಚೆನ್ನೈ: ಅಕ್ರಮ ದೂರವಾಣಿ ವಿನಿಮಯ ಪ್ರಕರಣದಲ್ಲಿ ಕೇಂದ್ರದ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಮತ್ತು ಅವರ ಸಹೋದರ ಕಲಾನಿಧಿ ಮಾರನ್ ಅವರನ್ನು ಚೆನ್ನೈಯಲ್ಲಿನ ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿತು. ಮಾರನ್ ಸಹೋದರರು ಮತ್ತು ಇತರ ಆರೋಪಿಗಳಾದ ಮಾಜಿ ಸಚಿವರ ಆಪ್ತ ಕಾರ್ಯದರ್ಶಿ ವಿ. ಗೌತಮನ್, ಬಿಎಸ್ ಎನ್ ಎಲ್ ನ ಮಾಜಿ ಮುಖ್ಯ ಜನರಲ್ ಮ್ಯಾನೇಜರ್ ಕೆ. ಬ್ರಹ್ಮನಾಥನ್, ಬಿಎಸ್ ಎನ್ ಎಲ್ ನ ಮಾಜಿ ಡೆಪ್ಯುಟಿ ಜನರಲ್ ಮ್ಯಾನೇಜರ್  ಎಂ. ವೇಲುಸ್ವಾಮಿ, ಸನ್ ಟಿವಿ ನೆಟ್ ವರ್ಕ್ ಉಪಾಧ್ಯಕ್ಷ (ತಾಂತ್ರಿಕ) ಎಸ್. ಕಣ್ಣನ್ ಮತ್ತು ತಂತ್ರಜ್ಞ ಕೆ.ಎಸ್. ರವಿ ನ್ಯಾಯಾಲಯದಲ್ಲಿ ಹಾಜರಾಗಿದ್ದರು.  ‘ನಿಮ್ಮ ವಿರುದ್ಧ ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯಧಾರ ಇಲ್ಲ. ಆದ್ದರಿಂದ ನಿಮ್ಮನ್ನು ಪ್ರಕರಣದಲ್ಲಿ ಖುಲಾಸೆ ಮಾಡಲಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಧೀಶ ನಟರಾಜನ್ ನುಡಿದರು.  ಬೊಕ್ಕಸಕ್ಕೆ ೧.೭೮ ಕೋಟಿ ರೂಪಾಯಿಗಳ ನಷ್ಟವನ್ನು ಉಂಟು ಮಾಡಿರುವ ಈ ಪ್ರಕರಣವು ಭಾರತೀಯ ದಂಡ ಸಂಹಿತೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಅಪರಾಧಗಳಾಗಿವೆ ಎಂದು ಸಿಬಿಐ ಹೇಳಿತ್ತು.
ಆಗಿನ ಕೇಂದ್ರ ದೂರಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ದಯಾನಿಧಿ ಮಾರನ್  ಮತ್ತು ಇತರರಿಗೆ ಸಂಬಂಧಿದ ಅಕ್ರಮ ದೂರವಾಣಿ ವಿನಿಮಯ ಪ್ರಕರಣದಲ್ಲಿ ನ್ಯಾಯಾಲಯವು ನೀಡಿರುವ ತೀರ್ಪಿನ ಪ್ರತಿ ನಮಗೆ ಲಭಿಸಿಲ್ಲ. ನಾವು ತೀರ್ಪನ್ನು ಪರಿಶೀಲಿಸಿ ಸೂಕ್ತ ಕಾನೂನು ಪರಿಹಾರದ ನಿಟ್ಟಿನಲ್ಲಿ ಸಾಗುತ್ತೇವೆ ಎಂದು ಸಿಬಿಐ ವಕ್ತಾರರು ನುಡಿದರು.

2018: ನವದೆಹಲಿ:  ದೇಶದ ವಿವಿಧೆಡೆಗಳಲ್ಲಿ ನಿರಂತರ ವಿಜಯದ ನಾಗಾಲೋಟ ನಡೆಸುತ್ತಿದ್ದ ಆಡಳಿತಾರೂಢ ಬಿಜೆಪಿಗೆ ಉತ್ತರ ಪ್ರದೇಶ (೨) ಮತ್ತು ಬಿಹಾರದಲ್ಲಿ (೧) ನಡೆದ ಮೂರು ಲೋಕಸಭಾ ಉಪಚುನಾವಣಾ ಫಲಿತಾಂಶಗಳು ಮರ್ಮಾಘಾತವನ್ನೇ ನೀಡಿದವು. ಈದಿನ ಪ್ರಕಟವಾಗಿರುವ ಫಲಿತಾಂಶದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುತ್ತಿದ್ದ ಗೋರಖ್‌ಪುರ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಪ್ರತಿನಿಧಿಸುತ್ತಿದ್ದ ಫುಲ್ಪುರ್  ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಪರಾಭವಗೊಂಡಿದ್ದು, ಬಿಹಾರಿನಲ್ಲೂ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಸೋಲು ಉಂಡಿತು.  ಬಿಜೆಪಿಯ ಭದ್ರಕೋಟೆಯಾಗಿದ್ದ ಗೋರಖ್ ಪುರ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ (ಎಸ್ಪಿ) ಪ್ರವೀಣ್ ನಿಷದ್ ಅವರ ಪ್ರಚಂಡ ಮುನ್ನಡೆಯಲ್ಲಿ ಇರುವಾಗಲೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೋಲೊಪ್ಪಿಕೊಂಡರು.  ಗೋರಖ್‌ಪುರ್ ಕ್ಷೇತ್ರ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿತ್ತು, ಇಲ್ಲಿ  ಬಿಜೆಪಿ ಅಭ್ಯರ್ಥಿ ಉಪೇಂದ್ರ ದತ್ ಶುಕ್ಲಾ ಅವರಿಗೆ  ಎಸ್‌ಪಿ ಅಭ್ಯರ್ಥಿ ಪ್ರವೀಣ್ ನಿಷದ್ ಅವರು ಭಾರಿ ಪೆಟ್ಟು ನೀಡಿ ಪ್ರಚಂಡ ಮುನ್ನಡೆ ಸಾಧಿಸಿದರು.  ಗೋರಖ್‌ಪುರ ಕ್ಷೇತ್ರ ಬಿಜೆಪಿಯ ಭದ್ರ ಕೋಟೆಯಾಗಿದ್ದು  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಕ್ಷೇತ್ರದಲ್ಲಿ ಐದು ಬಾರಿ ಜಯಗಳಿಸಿದ್ದರು. ಅದಕ್ಕೂ ಮುನ್ನ ಅವರ ಗುರು ಮಹಂತ ಅವೈದ್ಯನಾತ್ ಅವರು ಈ ಕ್ಷೇತ್ರವನ್ನು  ಮೂರು ಬಾರಿ ಪ್ರತಿನಿಧಿಸಿದ್ದರು. ಆ ಕ್ಷೇತ್ರದಲ್ಲಿ ೧೯೯೮ ರಲ್ಲಿ ಆದಿತ್ಯನಾಥ್ ಅವರು ಗೆಲುವು ಸಾಧಿಸಿದ ಬಳಿಕ ಇದುವರೆಗೆ ಬೇರೆ ಪಕ್ಷಗಳಿಗೆ ಬಿಟ್ಟು ಕೊಟ್ಟಿರಲಿಲ್ಲ. ಇದೀಗ ಸೋಲು ಅವರಿಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ  ಮಾಡಿತು.  ಫುಲ್ಪುರ ಲೋಕಸಭಾ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ನಾಗೇಂದ್ರ ಪ್ರತಾಪ್ ಸಿಂಗ್ ಪಟೇಲ್ ಅವರು ಬಿಜೆಪಿಯ ಕೌಶ್ಲೇಂದ್ರ ಸಿಂಗ್ ಪಟೇಲ್ ಅವರನ್ನು ೫೯,೪೬೦ ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದರು.  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಪ್ರತಿನಿಧಿಸುತ್ತಿದ್ದ ಫುಲ್ಪುರ್ ಲೋಕಸಭಾ ಕ್ಷೇತ್ರದಲ್ಲಿ ೨೦೧೪ರ ಚುನಾವಣೆಯಲ್ಲಿ ಕೇಸರಿ ಪಕ್ಷದ ಪ್ರಚಂಡ ವಿಜಯ ಸಾಧಿಸಿತ್ತು. ಉತ್ತರ ಪ್ರದೇಶದ ಹಾಲಿ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಈ ಸ್ಥಾನವನ್ನು ಗೆದ್ದಿದ್ದರು. ಮೌರ್‍ಯ ರಾಜೀನಾಮೆಯಿಂದ ತೆರವಾಗಿದ್ದ ಈ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಇದನ್ನು ಬಿಜೆಪಿಯಿಂದ ಕಿತ್ತುಕೊಂಡಿದೆ. ಸೋಲು ಅಂಗೀಕರಿಸಿದ ಯೋಗಿ: ಸಂಜೆ ೫.೪೦ರ ವೇಳೆಗೆ ಸೋಲು ಅಂಗೀಕರಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ’ಜನರ ತೀರ್ಪನ್ನು ಅಂಗೀರಿಸಿರುವುದಾಗಿ ಹೇಳಿದರು.  ’ಈ ಫಲಿತಾಂಶ ಅನಿರೀಕ್ಷಿತ, ನಮ್ಮ ತಪ್ಪುಗಳ ಬಗ್ಗೆ ಆತ್ಮಾವಲೋಕನ ಮಾಡುತ್ತೇವೆ. ವಿಜೇತ ಅಭ್ಯರ್ಥಿಗಳನ್ನು ನಾನು ಅಭಿನಂದಿಸುವೆ ಎಂದು ಯೋಗಿ ಹೇಳಿದರು.  ಬಿಎಸ್‌ಪಿ ಮಹತ್ವದ ಪಾತ್ರ: ಗೋರಖ್‌ಪುರ್ ಮತ್ತು ಫುಲ್ಪುರ್ ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳು ಗೆಲುವು ಸಾಧಿಸುವಲ್ಲಿ ಬಿಎಸ್‌ಪಿ ಪಾತ್ರವೂ ದೊಡ್ಡದಾಗಿತ್ತು. ಬಿಎಸ್‌ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಎಸ್‌ಪಿ ಅಭ್ಯರ್ಥಿಗಳಿಗೆ ಬಾಹ್ಯ ಬೆಂಬಲ ನೀಡಿತ್ತು, ಇದು ಮತ ವಿಭಜನೆಗಳನ್ನು ತಡೆದುದು ಬಿಜೆಪಿಯ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಆರ್‌ಜೆಡಿ ಗೆಲುವು: ಬಿಹಾರದ ಅರಾರಿಯಾ ಲೋಕಸಭಾ ಕ್ಷೇತ್ರದಲ್ಲೂ ರಾಷ್ಟ್ರೀಯ ಜನತಾದಳದ (ಆರ್ ಜೆಡಿ) ಸರ್‍ಫಾರಾಜ್ ಆಲಂ ಜಯಗಳಿಸಿದರು.  ಬಿಜೆಪಿ-ಜೆಡಿಯು ಮೈತ್ರಿ ಅಭ್ಯರ್ಥಿ ಸೋಲಿನತ್ತ ಮುಖ ಮಾಡಿದ್ದು, ವಿಪಕ್ಷ ಆರ್‌ಜೆಡಿ ಅಭ್ಯರ್ಥಿ ಗೆಲುವಿನತ್ತ ಮುಖ ಮಾಡಿದರು.  ಸರ್‍ಫಾರಾಜ್ ಆಲಂ ಅವರು ಬಿಜೆಪಿ ಅಭ್ಯರ್ಥಿ ಪ್ರದೀಪ್ ಕುಮಾರ್ ಸಿಂಗ್ ಅವರನ್ನು ೫೭೩೫೮ ಮತಗಳ ಅಂತರದಿಂದ ಪರಾಭವಗೊಳಿಸಿದರು.  ಬಿಹಾರದ ವಿಧಾನಸಭೆಯ ೨ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ  ಒಂದು ಕ್ಷೇತ್ರವನ್ನು ಅನುಕಂಪದ ಆಧಾರದಲ್ಲಿ ಬಿಜೆಪಿ ಉಳಿಸಿಕೊಂಡಿದ್ದು, ಇನ್ನೊಂದರಲ್ಲಿ ಆರ್‌ಜೆಡಿ -ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಗೆಲುವು ಸಾಧಿಸಿದರು.  ರಾಷ್ಟ್ರೀಯ ಜನತಾದಳವು ಜೆಹಾನಾಬಾದ್ ಉಪಚುನಾವಣೆಯಲ್ಲಿ ಈ ಮುನ್ನವೇ ಜಯಗಳಿಸಿತ್ತು.  ಅರಾರಿಯಾ ಲೋಕಸಭಾ ಕ್ಷೇತ್ರ ಮತ್ತು ಜೆಹಾನಾಬಾದ್ ವಿಧಾನಸಭಾ ಕ್ಷೇತ್ರವನ್ನು ಆರ್ ಜೆಡಿ ಪ್ರತಿನಿಧಿಸಿತ್ತು. ಬಿಹಾರ ವಿಧಾನಸಭೆಗೆ ನಡೆದ ಬಬುವಾ ಕ್ಷೇತ್ರವನ್ನು ಮಾತ್ರ ಬಿಜೆಪಿ ಉಳಿಸಿಕೊಂಡಿತು.  ಇಲ್ಲಿ ಬಿಜೆಪಿಯ ರಿಂಕಿ ರಾಣಿ ಪಾಂಡೆ ಜಯಗಳಿಸಿದರು. ಬಿಹಾರದ ಈ ಉಪಚುನಾವಣೆಗಳು ಸಂಖ್ಯೆಯ ದೃಷ್ಟಿಯಿಂದ ಗೌಣವಾಗಿದ್ದರೂ, ಈ ಫಲಿತಾಂಶಗಳು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಲಿಟ್ಮಸ್ ಪರೀಕ್ಷೆ ಎಂದೇ ಬಣ್ಣಿಸಲ್ಪಟ್ಟಿತ್ತು. ಆರ್ ಜೆಡಿ - ಕಾಂಗ್ರೆಸ್ ಮೈತ್ರಿಕೂಟದಿಂದ ಹೊರನಡೆದು ಬಿಜೆಪಿ ನೇತೃತ್ವದ ಎನ್ ಡಿಎ ಬೆಂಬಲದೊಂದಿಗೆ ಸರ್ಕಾರ ರಚಿಸಿದ ಬಳಿಕ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎದುರಿಸಿದ ಮೊತ್ತ ಮೊದಲ ಚುನಾವಣೆ ಇದಾಗಿತ್ತು.  ಈ ಚುನಾವಣೆ ಎನ್ ಡಿಎ ಏಕತೆ ಮತ್ತು ಮಾಜಿ ಮುಖ್ಯಮಂತ್ರಿ ಹಾಗೂ ಹಿಂದುಸ್ಥಾನಿ ಆವಾಮ್ ಮೋರ್ಚಾ (ಎಚ್ ಎಎಂ) ನಾಯಕ ಜಿತನ್ ರಾಮ್ ಮಾಂಜ್ಹಿ ಅವರ ಶಕ್ತಿಗೂ ಪರೀಕ್ಷೆಯಾಗಿತ್ತು. ಜಿತನ್ ರಾಮ್ ಮಾಂಜಿ ಅವರು ಎನ್ ಡಿಎ ಬಿಟ್ಟು ಆರ್ ಜೆಡಿ ಮತ್ತು ಕಾಂಗ್ರೆಸ್ ನೇತೃತ್ವದ ’ಮಹಾಮೈತ್ರಿಯನ್ನು ಚುನಾವಣೆಗೆ ಸ್ವಲ್ಪ ಮುಂಚೆಯಷ್ಟೇ ಸೇರಿದ್ದರು.  ಶ್ರೀರಾಮನ ಸಿಟ್ಟು:  ಈಮಧ್ಯೆ, ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರ್ ವಾಲ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡದ್ದು ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ತುಟ್ಟಿಯಾಯಿತು ಎಂದು ಶಿವಸೇನಾ ಸಂಸತ್ ಸದಸ್ಯರ ಸಂಜಯ್ ರೌತ್ ಅವರು ಬಣ್ಣಿಸಿದರು.  ‘ಎಸ್ ಪಿ- ಬಿಎಸ್ ಪಿ ಮೈತ್ರಿ ಕೆಲಸ ಮಾಡಿದೆ ಎಂದು ನನಗೆ ಅನ್ನಿಸುವುದಿಲ್ಲ. ಶ್ರೀರಾಮನನ್ನು ಟೀಕಿಸಿದ್ದ ಎಸ್ ಪಿ ನಾಯಕನಿಗೆ ಕೆಂಪುಹಾಸಿನ ಸ್ವಾಗತ ನೀಡಿದ ದಿನ ಶ್ರೀರಾಮನಿಗೆ ನಿಮ್ಮ ಮೇಲೆ (ಬಿಜೆಪಿ) ಸಿಟ್ಟು ಬಂದಿದೆ ಎಂದು ನಾನು ನಂಬಿದ್ದೇನೆ ಎಂದು ಸಂಜಯ್ ರೌತ್ ಹೇಳಿದರು.  ಮಾಯಾವತಿಗೆ ಅಖಿಲೇಶ್ ಧನ್ಯವಾದ: ಚುನಾವಣಾ ಫಲಿತಾಂಶಗಳು ಬರುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬಿಎಸ್‌ಪಿ ನಾಯಕಿ ಮಾಯಾವತಿ ಅವರಿಗೆ ಉಪಚುನಾವಣೆಗಳಲ್ಲಿ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು.  ರಾಹುಲ್ ಅಭಿನಂದನೆ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಉತ್ತರ ಪ್ರದೇಶ ಉಪಚುನಾವಣೆಗಳಲ್ಲಿ ವಿಜೇತರಾದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ’ಈದಿನದ ಉಪಚುನಾವಣೆಗಳಲ್ಲಿ ಜಯಗಳಿಸಿದವರಿಗೆ ಅಭಿನಂದನೆಗಳು. ಮತದಾರರಿಗೆ ಬಿಜೆಪಿ ಬಗ್ಗೆ ಸಾಕಷ್ಟು ಸಿಟ್ಟಿದೆ ಮತ್ತು ಗೆಲ್ಲಬಲ್ಲ ಯಾರೇ ಬಿಜೆಪಿಯೇತರ ಅಭ್ಯರ್ಥಿಗೆ ಮತ ನೀಡಲು ಸಿದ್ಧರಿದ್ದಾರೆ ಎಂಬುದು ಫಲಿತಾಂಶಗಳಿಂದ ಸ್ಪಷ್ಟವಾಗಿದೆ ಎಂದು ರಾಹುಲ್ ಗಾಂಧಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದರು. ‘ಕಾಂಗ್ರೆಸ್ ಪಕ್ಷವು ಉತ್ತರಪ್ರದೇಶದಲ್ಲಿ ಪಕ್ಷವನ್ನು ಮರುನಿರ್ಮಾಣ ಮಾಡುವಲ್ಲಿ ತೀವ್ರ ಆಸಕ್ತಿ ವಹಿಸಿದೆ. ಅದರೆ ಅದು ರಾತ್ರಿ ಬೆಳಗಾಗುವುದರ ಒಳಗೆ ಆಗುವಂತಹುದಲ್ಲ ಎಂದು ಅವರು ಹೇಳಿದರು.

2018: ಲಂಡನ್: ದಕ್ಷಿಣ ಇಂಗ್ಲೆಂಡಿನಲ್ಲಿನ ರಷ್ಯಾದ ಮಾಜಿ ಗುಪ್ತಚರ (ಡಬಲ್ ಏಜೆಂಟ್) ಮೇಲೆ ’ನರ ವಿಷ ದಾಳಿ (ನರ್‍ವ್ ಟಾಕ್ಸಿನ್ ಅಟ್ಯಾಕ್) ಹಿನ್ನೆಲೆಯಲ್ಲಿ ಬ್ರಿಟನ್ ರಷ್ಯಾದ ೨೩ ರಾಜತಾಂತ್ರಿಕರನ್ನು ಉಚ್ಚಾಟಿಸಲಿದೆ ಎಂದು ಪ್ರಧಾನಿ ಥೆರೇಸಾ ಮೇ ಪ್ರಕಟಿಸಿದರು.  ವೈರಿ ರಾಷ್ಟ್ರದ ದ್ವೇಷ ಚಟುವಟಿಕೆಗಳ ವಿರುದ್ಧ ಇನ್ನಷ್ಟು ರಕ್ಷಣಾತ್ಮಕ ಕ್ರಮಗಳು, ರಷ್ಯಾ ದೇಶದ ಆಸ್ತಿಪಾಸ್ತಿ ಮುಟ್ಟುಗೋಲು ಇತ್ಯಾದಿ ಕ್ರಮಗಳನ್ನೂ ಬ್ರಿಟನ್ ಕೈಗೊಳ್ಳಲಿದೆ ಎಂದು ಹೇಳಿದ ಥೆರೇಸಾ ಮೇ, ಈ ಬೇಸಿಗೆಯಲ್ಲಿ ರಷ್ಯಾದಲ್ಲಿ ನಡೆಯಲಿರುವ ಸಾಕರ್ ವಿಶ್ವಕಪ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ವಿಚಾರವನ್ನೂ ಗೌಣಗೊಳಿಸಿದರು.  ರಷ್ಯಾದ ಮಾಜಿ ಗುಪ್ತಚರನ ಮೇಲೆ ನಡೆದ ’ನರವಿಷ ದಾಳಿಯಲ್ಲಿ ತಾನು ಶಾಮೀಲಾಗಿರುವ ಆಪಾದನೆಯನ್ನು ಪದೇ ಪದೇ ನಿರಾಕರಿಸಿದ ರಷ್ಯಾ, ತನ್ನ ಕ್ರಮಗಳಿಗೆ ಸೇಡಿನ ಕ್ರಮಗಳನ್ನು ಬ್ರಿಟನ್ ನಿರೀಕ್ಷಿಸಿಕೊಳ್ಳಲಿ ಎಂದು ಹೇಳಿತು. ಮಾಜಿ ಗುಪ್ತಚರ ಸೆರ್ಗೀ ಸ್ಕ್ರಿಪಾಲ್ (೬೬) ಮತ್ತು ಅವರ ಪುತ್ರಿ ಯುಲಿಯಾ (೩೩) ಮಾರ್ಚ್ ೪ರಂದು ಸಾಲಿಶ್‌ಬರಿ ನಗರದಲ್ಲಿ ಬೆಂಚೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರೂ ತೊಂದರೆಗೀಡಾಗಿದ್ದು ಅವರ ಸ್ಥಿತಿಯೂ ಗಂಭೀರವಾಗಿದೆ.  ಸ್ಕ್ರಿಪಾಲ್ ಗಳ ಮೇಲೆ ನೊವಿಚೊಕ್ ಎಂಬ ಸೋವಿಯತ್ ಯುಗದ ಸೇನೆ ಬಳಸುತ್ತಿದ್ದ ನರವಿಷದಿಂದ ದಾಳಿ ನಡೆಸಲಾಗಿದೆ ಎಂದು ಹೇಳಿರುವ ಥೆರೇಸಾ, ದಾಳಿಗೆ ರಷ್ಯಾ ಕಾರಣವೇ ಎಂಬುದಾಗಿ ವಿವರಣೆ ನೀಡುವಂತೆ ರಷ್ಯಾಕ್ಕೆ ಸೂಚಿಸಿದರು.  ‘ರಷ್ಯಾದ ಪ್ರತಿಕ್ರಿಯೆ ಈ ಘಟನೆಯ ಗಂಭೀರತೆ ಬಗೆಗಿನ ಅವರ ಸಂಪೂರ್ಣ ನಿರ್ಲಕ್ಷ್ಯವನ್ನು ತೋರಿಸಿದೆ ಎಂದು ಥೆರೇಸಾ ಅವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಯಲ್ಲಿ ತಿಳಿಸಿದರು.  ‘ಅವರು ಯುರೋಪಿನಲ್ಲಿ ವ್ಯಂಗ್ಯೋಕ್ತಿಗಳೊಂದಿಗೆ ಸೇನಾ ದರ್ಜೆಯ ನರ ವಿಷದ ಬಳಕೆಯನ್ನು ಮಾಡಿದ್ದಾರೆ. ಸ್ಕ್ರಿಪಾಲ್ ಮತ್ತು ಅವರ ಪುತ್ರಿಯ ಕೊಲೆಗೆ ಯತ್ನಿಸಿದೆ ಮತ್ತು ಗುಪ್ತಚರ ಸಾಜೆಂಟ್ ನಿಕ್ ಬೈಲೀ ಸೇರಿದಂತೆ ಸಾಲಿಶ್‌ಬರಿಯ ಇತರ ಬ್ರಿಟಿಷ್ ನಾಗರಿಕರ ಪ್ರಾಣಕ್ಕೆ  ರಷ್ಯಾವು ಬೆದರಿಕೆ ಒಡ್ಡಿದೆ ಎಂಬ ತೀರ್ಮಾನಕ್ಕೆ ಬರದೆ ಬೇರೆ ವಿಧಿಯಿಲ್ಲ. ಇದು ರಷ್ಯಾವು ಇಂಗ್ಲೆಂಡಿನ ವಿರುದ್ಧ ಅಕ್ರಮ ಬಲಪ್ರಯೋಗದಲ್ಲಿ ತೊಡಗಿರುವುದನ್ನು ತೋರಿಸುತ್ತದೆ ಎಂದು ಅವರು ನುಡಿದರು.  ಅಘೋಷಿತ ಗುಪ್ತಚರ ಅಧಿಕಾರಿಗಳು ಎಂಬುದಾಗಿ ಗುರುತಿಸಲಾದ ೨೩ ರಾಜತಾಂತ್ರಿಕರ ಉಚ್ಚಾಟನೆ ಕ್ರಮವು ಕಳೆದ ೩೦ ವರ್ಷಗಳ ಅವಧಿಯಲ್ಲಿ ಒಂದೇ ಸಲದ ಉಚ್ಚಾಟನೆಗಳಲ್ಲಿ ಅತಿ ದೊಡ್ಡ ಉಚ್ಚಾಟನೆಯಾಗಿದೆ ಮತ್ತು ಮುಂಬರುವ ವರ್ಷಗಳಲ್ಲಿ ಬ್ರಿಟನ್ನಿನಲ್ಲಿ ರಷ್ಯಾದ ಗುಪ್ತಚರ ಚಟುವಟಿಕೆಗಳು ಕುಸಿಯುವಂತೆ ಮಾಡಲಿದೆ ಎಂದು ಅವರು ಹೇಳಿದರು. ಇಂಗ್ಲೆಂಡಿನ ನಾಗರಿಕರು ಅಥವಾ ನಿವಾಸಿಗಳ ಜೀವ ಅಥವಾ ಆಸ್ತಿಗಳಿಗೆ ಬೆದರಿಕೆ ಒಡ್ಡಲು ಬಳಸಿದ್ದಕ್ಕೆ ಎಲ್ಲೆಲ್ಲಿ ಸಾಕ್ಷ್ಯಾಧಾರ ದೊರಕುವುದೋ ಅಂತಹ ಎಲ್ಲ ರಷ್ಯನ್ ಆಸ್ತಿಗಳನ್ನು ನಾವು ಮುಟ್ಟುಗೋಲು ಹಾಕುತ್ತೇವೆ ಎಂದೂ ಥೆರೇಸಾ ಮೇ ನುಡಿದರು.  ವೈರಿ ರಾಷ್ಟ್ರದಿಂದ ಎದುರಾಗಬಹುದಾದ ಯಾವುದೇ ಬೆದರಿಕೆಯ ಜೊತೆ ವ್ಯವಹರಿಸಲು ನೂತನ ಶಾಸಕಾಂಗ ಪ್ರಸ್ತಾಪಗಳನ್ನು ತುರ್ತಾಗಿ ರೂಪಿಸಲಾಗುವುದು. ಇಂಗ್ಲಂಡಿನ ಗಡಿಯಲ್ಲಿ ವೈರಿ ರಾಷ್ಟ್ರ ನಡೆಸಬಹುದಾದ ಶಂಕಿತ ಚಟುವಟಿಕೆಗಳನ್ನು ನಡೆಸುವವರ ವಿರುದ್ಧ ಕ್ರಮಕೈಗೊಳ್ಳಲು ಹೆಚ್ಚಿನ ಅಧಿಕಾರ ನೀಡುವ ಪ್ರಸ್ತಾಪವೂ ಇದರಲ್ಲಿ ಸೇರಿದೆ ಎಂದು ಅವರು ಹೇಳಿದರು.   ಇಂಗ್ಲೆಂಡಿನಲ್ಲಿ ಪ್ರವಾಸ ಮಾಡುವವರ ಉದ್ದೇಶಗಳನ್ನು ಗಮನಿಸಿಲು ಹಾಲಿ ಅಧಿಕಾರಗಳನ್ನೇ ಅಧಿಕಾರಿಗಳು ಬಳಸುವರು. ಖಾಸಗಿ ವಿಮಾನಗಳು, ಕಸ್ಟಮ್ಸ್ ಮತ್ತು ಸರಕು ತಪಾಸಣೆಯನ್ನು ನಾವು ಹೆಚ್ಚಿಸಲಿದ್ದೇವೆ ಎಂದೂ ಅವರು ನುಡಿದರು.  ಗಂಭೀರ ಅಪರಾಧಿಗಳು ಮತ್ತು ಭ್ರಷ್ಟ ಗಣ್ಯರ ವಿರುದ್ಧವೂ ಕ್ರಮದ ಎಚ್ಚರಿಕೆ ನೀಡಿದ ಥೆರೇಸಾ ಮೇ, ’ಇಂತಹ ವ್ಯಕ್ತಿಗಳ ಹಣಕ್ಕೆ ನಮ್ಮ ದೇಶದಲ್ಲಿ ಜಾಗವಿಲ್ಲ ಎಂದು ಹೇಳಿದರು. ಇಂಗ್ಲೆಂಡಿಗೆ ಭೇಟಿ ನೀಡುವಂತೆ ರಷ್ಯಾದ ವಿದೇಶಾಂಗ ಸಚಿವ ಸೆರ್ಗೀ ಲವ್ರೋವ್ ಅವರಿಗೆ ನೀಡಿದ ಆಹ್ವಾನವನ್ನು ಬ್ರಿಟನ್ ಹಿಂತೆಗೆದುಕೊಳ್ಳುವುದು ಮತ್ತು ಆ ದೇಶದ ಜೊತೆಗಿನ ಎಲ್ಲ ಉನ್ನತ ಮಟ್ಟದ ದ್ವೀಪಕ್ಷೀಯ ಸಂಪರ್ಕಗಳನ್ನು ಅಮಾನತು ಗೊಳಿಸುವುದು ಎಂದೂ ಮೇ ಹೇಳಿದರು.  ಸಾಕರ್ ವಿಶ್ವ ಕಪ್ ಬಗ್ಗೆ ಪ್ರಸ್ತಾಪಿಸಿದ ಅವರು ಯಾರೇ ಸಚಿವರು ಅಥವಾ ಬ್ರಿಟಿಷ್ ರಾಜಕುಟುಂಬದ ಸದಸ್ಯರು ಇದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದೂ ನುಡಿದರು.

2009: ರಾಜ್ಯ ಬಿಜೆಪಿಯಲ್ಲಿ ಎದ್ದಿದ್ದ ಬಿರುಗಾಳಿ ಬಂದ ವೇಗದಲ್ಲೇ ತಣ್ಣಗಾಗಿದೆಯೇನೋ ಎಂಬಂತೆ ಬಿಜೆಪಿಯ ಎಲ್ಲ ಮುಖಂಡರೂ ಬೆಂಗಳೂರಿನಲ್ಲಿ ಒಂದೇ ವೇದಿಕೆಯ ಮೇಲೆ ನಿಂತು ಮತದಾರರತ್ತ ಕೈಬೀಸುವುದರೊಂದಿಗೆ ಬಿಜೆಪಿ, ಲೋಕಸಭಾ ಚುನಾವಣೆಯ ಮತಯಾಚನೆಗೆ ಚಾಲನೆ ನೀಡಿತು. ಎಲ್.ಕೆ.ಅಡ್ವಾಣಿ ಅವರ ಸಮರ್ಥ ನಾಯಕತ್ವ, ಸುರಕ್ಷತೆ ಮತ್ತು ಸ್ಪಷ್ಟ ನೀತಿಯನ್ನು ಒಳಗೊಂಡ ನಿರ್ಣಾಯಕ ಸರ್ಕಾರ ನೀಡುವುದಾಗಿ ಬಿಜೆಪಿ ಭರವಸೆ ನೀಡಿತು. ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಡಲು ಸಹ ನಿರ್ಧರಿಸಿತು.

2009: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ನವದೆಹಲಿಯಲ್ಲಿ ಅಧಿಕೃತವಾಗಿ ಆ ಪಕ್ಷ ಸೇರಿದರು. ಇದರಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಗ ಬಿ.ವೈ.ರಾಘವೇಂದ್ರ ವಿರುದ್ಧ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷಕ್ಕೆ ಅನಾಯಾಸವಾಗಿ ಒಬ್ಬ ಅಭ್ಯರ್ಥಿ ಸಿಕ್ಕಿದಂತಾಯಿತು.. 2004ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಮುನ್ನ ಬಂಗಾರಪ್ಪ ಕಾಂಗ್ರೆಸ್ ತ್ಯಜಿಸಿ ಬಿಜೆಪಿ ಸೇರಿದ್ದರು. ಆದರೆ ಒಂದೇ ವರ್ಷದ ಅವಧಿಯಲ್ಲಿ ಆ ಪಕ್ಷವನ್ನೂ ತೊರೆದು ಸಮಾಜವಾದಿ ಪಕ್ಷ ಸೇರಿದ್ದರು.

2009: ಈಶಾನ್ಯ ಸಿರಿಯಾದ ವಸಾಹತು ಪ್ರದೇಶವೊಂದರಲ್ಲಿ ಸುಮಾರು 9000 ವರ್ಷಗಳಷ್ಟು ಪುರಾತನವಾದದ್ದು ಎಂದು ನಂಬಲಾದ ಬಾವಿಯೊಂದರ ಅವಶೇಷಗಳನ್ನು ಪುರಾತತ್ವ ಸಂಶೋಧಕರು ಪತ್ತೆ ಹಚ್ಚಿದರು. ಈ ಬಾವಿಯನ್ನು ಆ ಕಾಲದಲ್ಲಿ ನೀರು ಶುದ್ಧಿಕರಣಕ್ಕಾಗಿ ಬಳಸುತ್ತಿದ್ದಿರಬಹುದು ಎಂದು ನಂಬಲಾಯಿತು. ಬಹುಶ: ನೀರು ಶುದ್ಧಿಕರಣದ ಉದ್ದೇಶಕ್ಕಾಗಿಯೇ ಬಳಸುತ್ತಿದ್ದ ಅತ್ಯಂತ ಪುರಾತನ ಬಾವಿ ಇದು ಎಂದು ಟೋಕಿಯೋ ವಿಶ್ವ ವಿದ್ಯಾಲಯದ ವಸ್ತುಸಂಗ್ರಹಾಲಯದ ಪ್ರೊಫೆಸರ್ ಯೊಶಿಹಿರೊ ನಿಶಿಯಾಕಿ ಹೇಳಿದರು. ಜನರಲ್ಲಿ ನೀರು ಶುದ್ಧೀಕರಣದ ವಿಚಾರಗಳು ಹೇಗೆ ಬೆಳೆದು ಬಂದವು ಎಂಬುದನ್ನು ಈ ಬಾವಿ ತೋರಿಸುತ್ತದೆ ಎಂದು ಅವರು ನುಡಿದರು. ಇಸ್ರೇಲಿನಲ್ಲಿ ಪತ್ತೆಯಾಗಿದ್ದ 6000 ವರ್ಷಗಳಷ್ಟು ಪುರಾತನವಾದ ಬಾವಿಯೇ ನೀರು ಶುದ್ಧಿಕರಣ ಸಲುವಾಗಿ ನಿರ್ಮಿಸಲಾಗಿದ್ದ ಅತ್ಯಂತ ಪುರಾತನ ಬಾವಿ ಎಂಬುದಾಗಿ ನಂಬಲಾಗಿತ್ತು ಎಂದು ಪುರಾತತ್ವ ಸಂಶೋಧಕರ ತಂಡ ಹೇಳಿತು. ಕಳೆದ ಆಗಸ್ಟ್ ತಿಂಗಳಲ್ಲಿ ಪತ್ತೆಯಾದ ಸಿರಿಯಾದ ಈ ಪುರಾತನ ಬಾವಿ ಸುಮಾರು 2.5 ಮೀಟರ್ ಸುತ್ತಳತೆ ಹೊಂದಿದ್ದು, ಅಂದಾಜು 4 ಮೀಟರ್ ಆಳವಿದೆ. ಜನಸಂಖ್ಯೆ ಹೆಚ್ಚಿದಾಗ ಕಲುಷಿತ ನೀರಿನ ಬಳಕೆಯಿಂದ ಸಾಂಕ್ರಾಮಿಕ ರೋಗಗಳು ಹರಡಬಹುದು ಎಂಬ ಭೀತಿಯಿಂದ ಈ ವಸತಿ ಪ್ರದೇಶದ ಜನ ಶುದ್ಧ ನೀರು ಪಡೆಯ ಬಯಸಿದ್ದಿರಬಹುದು ಎಂದು ನಿಶಿಯಾಕಿ ನುಡಿದರು. ಯೂಪ್ರೆಟಿಸ್ ನದಿಯ ಉಪನದಿಯೊಂದು ಈ ಬಾವಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಹರಿಯುತ್ತದೆ. ಇದರರ್ಥ ಇಲ್ಲಿನ ನಿವಾಸಿಗಳು ನೀರು ಪಡೆಯುವ ಉದ್ದೇಶವನ್ನಷ್ಟೇ ಹೊಂದಿರಲಿಲ್ಲ, ಬದಲಾಗಿ ಶುದ್ಧ ನೀರು ಪಡೆಯುವ ಉದ್ದೇಶ ಹೊಂದಿದ್ದರು ಎಂಬುದನ್ನು ಈ ಬಾವಿ ತೋರಿಸುತ್ತದೆ ಎಂಬುದು ಪುರಾತತ್ವ ತಜ್ಞರ ತಂಡದ ಅಭಿಪ್ರಾಯ.

2009: ಬಿಂಬಗಳು ಅಥವಾ ವಿಡಿಯೋಗಳನ್ನು ಹಿಡಿದು ಇರಿಸಿಕೊಳ್ಳಬಲ್ಲಷ್ಟು ಸಾಮರ್ಥ್ಯದ ಹೊಸ 'ಬಾರ್ ಕೋಡ್'ಗಳನ್ನು ತಾವು ಅಭಿವೃದ್ಧಿ ಪಡಿಸಿರುವುದಾಗಿ ವಾಷಿಂಗ್ಟನ್ ವಿಜ್ಞಾನಿಗಳು ಪ್ರತಿಪಾದಿಸಿದರು. ಈ ಹೊಸ ಬಾರ್ ಕೋಡ್‌ಗಳಲ್ಲಿನ ಬಿಂಬ ಅಥವಾ ವಿಡಿಯೋಗಳನ್ನು ನಂತರ ಕ್ಯಾಮರಾ ಫೋನ್‌ಗಳ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಬಹುಮಾಧ್ಯಮ ಮಾಹಿತಿಯನ್ನು ಬಾರ್ ಕೋಡ್‌ಗಳಲ್ಲಿ ಶೇಖರಿಸಿ ಇಡಬಹುದಾದಂತಹ ಮಾರ್ಗವನ್ನು ತಾವು ಪರಿಶೀಲಿಸುತ್ತಿರುವುದಾಗಿ ಎಡಿತ್ ಕೊವಾನ ವಿಶ್ವ ವಿದ್ಯಾಲಯದ ವಿಜ್ಞಾನಿಗಳ ತಂಡವೊಂದು ಹೇಳಿತು. ಮೊಬೈಲ್ ಫೋನ್ ಕ್ಯಾಮರಾದ ಮೂಲಕ ಭಾವಚಿತ್ರ ತೆಗೆಯುವಂತೆ ಮ್ಯಾಗಜಿನ್‌ಗಳಂತಹ ಮಾಧ್ಯಮಗಳಿಂದ ರಿಂಗ್ ಟೋನ್‌ನ್ನು ಡೌನ್‌ಲೋಡ್ ಮಾಡಲು ಅನುವು ಮಾಡಿಕೊಡುವಂತಹ ಮಾದರಿಯ ಸಾಫ್ಟ್‌ವೇರ್‌ನ್ನು ಒಳಗೊಂಡ ಯಾವುದಾದರೂ ವಿಧಾನದ ಮೂಲಕ ಬಹುಮಾಧ್ಯಮ ಮಾಹಿತಿಯನ್ನು ಬಾರ್ ಕೋಡ್‌ಗಳಲ್ಲಿ ಶೇಖರಿಸಿ ಇಡುವ ಬಗ್ಗೆ ತಂಡ ಪರಿಶೀಲನೆ ನಡೆಸಿದೆ ಎಂದು ವಿಜ್ಞಾನಿಗಳು ಹೇಳಿದರು. ಈ ಹೊಸ ಬಾರ್ ಕೋಡ್‌ಗೆ 'ಮೊಬೈಲ್ ಮಲ್ಟಿ ಕಲರ್ ಕಂಪೋಸಿಟ್ (ಎಂಎಂಸಿಸಿ) 2ಡಿ - ಬಾರ್‌ಕೋಡ್' ಎಂದು ವಿಜ್ಞಾನಿಗಳು ಹೆಸರಿಟ್ಟರು. 'ಎಂಎಂಸಿಸಿಯು ಎರಡು ಆಯಾಮದ ವರ್ಣ ಬಾರ್‌ಕೋಡ್. ಇದನ್ನು ಮುದ್ರಣ ಮಾಧ್ಯಮದಲ್ಲಿ ಮುದ್ರಿಸಬಹುದಾಗಿದ್ದು ಮಾಹಿತಿ ಶೇಖರಣೆಯ ಅತ್ಯುನ್ನತ ಸಾಮರ್ಥ್ಯ ಹೊಂದಿರುತ್ತದೆ ಮತ್ತು ಮೊಬೈಲ್ ಫೋನ್‌ಗೆ ತತ್ ಕ್ಷಣ ಅನ್ವಯಿಸುವಂತಿರುತ್ತದೆ' ಎಂದು ಮುಂಚೂಣಿಯ ವಿಜ್ಞಾನಿ ಡಾ. ಅಲ್ಫ್ರೆಡ್ ಟಾನ್ ನುಡಿದರು. ಎಂಎಂಸಿಸಿ ಬಳಸುವ ಮೂಲಕ ಬಳಕೆದಾರನು ಡಿಜಿಟಲ್ ಮಾಹಿತಿಯನ್ನು ತನ್ನ ಕ್ಯಾಮರಾ ಮೊಬೈಲ್ ಫೋನ್ ಮೂಲಕ ಬಾರ ಕೋಡ್ ಬಿಂಬವನ್ನು ಸೆರೆ ಹಿಡಿದು ಮೊಬೈಲ್ ಮೂಲಕ ನೇರವಾಗಿ ಅದರೊಳಗಿರುವ ವಿಡಿಯೋವನ್ನು ನೋಡಬಹುದು ಎಂದು ಅವರು ಹೇಳಿದರು.

2009: ಸರ್ಕಾರದ ಮಾಧ್ಯಮ ನೀತಿ ಕುರಿತಂತೆ ಹಿರಿಯ ನಾಯಕರೊಂದಿಗೆ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದ ಹಿನ್ನೆಲೆಯಲ್ಲಿ ಪಾಕಿಸ್ಥಾನದ ವಾರ್ತಾ ಸಚಿವೆ ಶೆರ್ರಿ ರಹಮಾನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿದ್ದಾರೆ ಎಂದು ಜಿಯೋ ಟಿವಿ ವರದಿ ಮಾಡಿತು.

2008: ಕರ್ನಾಟಕ ಹೈಕೋರ್ಟಿನಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ತೀರ್ಪು ನೀಡುವ ಮೂಲಕ ನ್ಯಾಯಮೂರ್ತಿ ಅರಳಿ ನಾಗರಾಜ್ ಚಾರಿತ್ರಿಕ ದಾಖಲೆ ನಿರ್ಮಿಸಿದರು. ಸುವರ್ಣ ವರ್ಷಾಚರಣೆ ಸಂತಸದ ಮಧ್ಯೆ ಹೈಕೋರ್ಟ್ ಈ ಐತಿಹಾಸಿಕ ದಾಖಲೆ ನಿರ್ಮಿಸಿ ಈ ದಿನವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿ ಮಾರ್ಪಡಿಸಿತು. ಭೂ ನ್ಯಾಯಮಂಡಳಿಯ ವಿವಾದವೊಂದಕ್ಕೆ ಸಂಬಂಧಿಸಿದಂತೆ ಸುಮಾರು ಎಂಟು ಪುಟಗಳ ತೀರ್ಪನ್ನು ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಕನ್ನಡದಲ್ಲಿಯೇ ನೀಡಿ ಕೋರ್ಟ್ ಆವರಣದಲ್ಲಿ ನೆರೆದಿದ್ದ ವಕೀಲ ಸಮೂಹವನ್ನು ನಿಬ್ಬೆರಗಾಗಿಸಿದರು. ಬಳ್ಳಾರಿ ಜಿಲ್ಲೆ ಸಿರಗುಪ್ಪದ ಎಲ್. ಗೋವಿಂದರಾಜು ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು. `ಉಳುವವನೆ ಭೂಮಿಯ ಒಡೆಯ' ಎಂಬ ಸರ್ಕಾರದ ಆದೇಶದಂತೆ ಸಿರಗುಪ್ಪದಲ್ಲಿರುವ 3.25 ಎಕರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಸುವಂತೆ ಅವರು ಮಾಡಿಕೊಂಡ ಕೋರಿಕೆಯನ್ನು 1986ರಲ್ಲಿ ಭೂ ನ್ಯಾಯಮಂಡಳಿ ತಿರಸ್ಕರಿಸಿತ್ತು. ಈ ಆದೇಶವನ್ನು ಅವರು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು. ವಿಚಾರಣೆಯನ್ನು ಭೂ ನ್ಯಾಯಮಂಡಳಿಗೆ ಹಿಂದಿರುಗಿಸಿದ ನ್ಯಾಯಮೂರ್ತಿಗಳು ಈ ಕುರಿತು ಹೊಸದಾಗಿ ಪರಿಶೀಲಿಸುವಂತೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿದರು. ಕೋಲಾರ ಮೂಲದ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರು ಈ ಹಿಂದೆ ಬೆಳಗಾವಿ, ಮಂಗಳೂರು, ವಿಜಾಪುರ ಹಾಗೂ ಬೆಂಗಳೂರಿನಲ್ಲಿ ಸೆಷನ್ಸ್ ಕೋರ್ಟುಗಳಲ್ಲಿ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ ಅನೇಕ ಆದೇಶಗಳನ್ನು ಕನ್ನಡದಲ್ಲಿಯೇ ನೀಡಿದ್ದರು. ಕಾನೂನಿಗೆ ಸಂಬಂಧಿಸಿದ ಅನೇಕ ಪುಸ್ತಕಗಳನ್ನು ಕೂಡಾ ಅವರು ಕನ್ನಡದಲ್ಲಿ ಬರೆದಿದ್ದಾರೆ. 2007ರ ಜುಲೈ 7ರಂದು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲೂ ಇವರು ಕನ್ನಡದಲ್ಲಿಯೇ ಭಾಷಣ ಮಾಡಿ ಕನ್ನಡ ಪ್ರೇಮ ಮೆರೆದಿದ್ದರು.

2008: ಒಲ್ಲದ ಮನಸ್ಸಿನಿಂದಲೇ ರಾಜಕಾರಣಕ್ಕೆ ಬಂದು, ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಹತ್ತು ವರ್ಷ ಕಾಲ ಯಶಸ್ವಿಯಾಗಿ ನಿಭಾಯಿಸಿ ಸಕ್ರಿಯ ರಾಜಕಾರಣದಲ್ಲಿ ದಶಮಾನೋತ್ಸವ ಆಚರಿಸಿದ ಸೋನಿಯಾ ಗಾಂಧಿ ಅವರನ್ನು ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ ಕಾಂಗ್ರೆಸ್ಸಿನ ಹಲವು ಗಣ್ಯರು ಅಭಿನಂದಿಸಿದರು. ಪ್ರಧಾನಿ ಮನಮೋಹನ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ವಿಶೇಷ ಸಭೆಯಲ್ಲಿ ಸೋನಿಯಾ ಗಾಂಧಿ ಅವರನ್ನು ಪ್ರಶಂಸಿಸುವ ನಿರ್ಣಯವನ್ನು ಸ್ವೀಕರಿಸಲಾಯಿತು. `ಕಾಂಗೆಸ್ಸಿನ 122 ವರ್ಷಗಳ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು. ಪಕ್ಷಕ್ಕೆ ಬೆನ್ನೆಲುಬಿನಂತೆ ನಿಂತ ನಿಮಗೆ ನಾವು ಕೃತಜ್ಞರು' ಎಂಬ ನಿರ್ಣಯವನ್ನು ಅಂಗೀಕರಿಸಲಾಯಿತು.

2008: ಚಲನಚಿತ್ರ ರಂಗಕ್ಕೆ ನೀಡಿದ ಶ್ರೇಷ್ಠ ಕೊಡುಗೆಗಾಗಿ ಹಿರಿಯ ನಟ ಧರ್ಮೇಂದ್ರ ಅವರಿಗೆ ಮುಂಬೈಯಲ್ಲಿ ಮುಕ್ತಾಯಗೊಂಡ ಮಾಮಿ (ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್) ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವರ್ಣರಂಜಿತ ಕಾರ್ಯಕ್ರಮದಲ್ಲಿ 35 ವರ್ಷಗಳಿಂದ ಬೆಳ್ಳಿಪರದೆಯ ಮೇಲೆ ಜನರನ್ನು ರಂಜಿಸಿದ ರಿಷಿ ಕಪೂರ್ ಅವರಿಗೆ ವಿಶೇಷ ಪ್ರಶಸ್ತಿಯನ್ನು ನೀಡಲಾಯಿತು. ಸ್ಪೇನಿನ ಚಲನಚಿತ್ರ ನಿರ್ದೇಶಕ ಕಾರ್ಲೋಸ್ ಸಾರಾ ಅವರಿಗೂ ಜೀವಮಾನದ ಸಾಧನೆಗಾಗಿ ಮೊದಲ ಜಾಗತಿಕ ಪ್ರಶಸ್ತಿ, ಸಾಹಿತಿ ಗುಲ್ಜಾರ್ ಅವರಿಗೆ ಭಾರತ ಸಿನೆಮಾ ಸಂಗೀತಕ್ಕೆ ನೀಡಿದ ಕೊಡುಗೆಗಾಗಿ ವಿಶೇಷ ಪ್ರಶಸ್ತಿ ನೀಡಲಾಯಿತು. ಚಿತ್ರರಂಗದ ದಿಗ್ಗಜರಾದ ದೇವ್ ಆನಂದ್, ಯಶ್ ಚೋಪ್ರಾ, ಐಶ್ವರ್ಯ ರೈ ಪ್ರಶಸ್ತಿ ಪ್ರದಾನ ಮಾಡಿದರು. ಭಾರತೀಯ ಸಿನೆಮಾ ವಿಭಾಗದಲ್ಲಿ ತಾರೆ ಜಮೀನ್ ಪರ್ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ದರ್ಶೀಲ್ ಸಫಾರಿ ಉತ್ತಮ ನಟ ಮತ್ತು `ಅಂತರ್ ದ್ವಂದ್ವ' ಚಿತ್ರದಲ್ಲಿನ ಅಭಿನಯಕ್ಕಾಗಿ ಸ್ವಾತಿ ಸೇನ್ ಉತ್ತಮ ನಟಿ ಪ್ರಶಸ್ತಿ ಪಡೆದರು. ವಿಮರ್ಶಕರ ಪ್ರಶಸ್ತಿಯನ್ನು ಮರಾಠಿ ಚಿತ್ರ `ಟಿಂಗ್ಯಾ' ಚಿತ್ರವು ಪಡೆದುಕೊಂಡಿತು. ಮಾರ್ಚ್ 6ರಿಂದ 13ರವರೆಗೆ ನಡೆದ ಚಲನಚಿತ್ರೋತ್ಸವದಲ್ಲಿ 45 ರಾಷ್ಟ್ರಗಳ 140 ಸಿನಿಮಾಗಳನ್ನು ಪ್ರದರ್ಶಿಸಲಾಯಿತು ಎಂದು `ಮಾಮಿ' ಚಲನಚಿತ್ರೋತ್ಸವದ ಅಧ್ಯಕ್ಷ ಶ್ಯಾಮ್ ಬೆನೆಗಲ್ ಹೇಳಿದರು.

2008: ಇಂಗ್ಲೆಂಡಿನಲ್ಲಿ ಇತ್ತೀಚೆಗೆ ವಲಸೆ ನಿಯಮಗಳಿಗೆ ತರಲಾದ ಬದಲಾವಣೆಗಳನ್ನು ಪ್ರತಿಭಟಿಸಿ ಲಂಡನ್ನಿನ ಭಾರತೀಯ ರೆಸ್ಟೋರೆಂಟುಗಳ ಮಾಲೀಕರು ಎಡಿನ್ ಬರೋದ ಸ್ಕಾಟಿಷ್ ಪಾರ್ಲಿಮೆಂಟ್ ಹೊರಭಾಗದಲ್ಲಿ ಪ್ರದರ್ಶನ ನಡೆಸಿದರು. ಇಂಗ್ಲೆಂಡಿನಲ್ಲಿ ವಲಸೆ ನಿಯಮಾವಳಿಗಳಿಗೆ ಮಾಡಲಾಗಿರುವ ಬದಲಾವಣೆಗಳು ಇಲ್ಲಿನ ಭಾರತೀಯ ಆಹಾರ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಎಂದು ಅವರು ಆಪಾದಿಸಿದರು. ಹೊಸ ನಿಯಮಾವಳಿಗಳು ಭಾರತೀಯ ರೆಸ್ಟೋರೆಂಟುಗಳು ಭಾರತ ಉಪಖಂಡದಿಂದ ಚೆಫ್ಗಳ ನೇಮಕ ಮಾಡುವುದನ್ನು ನಿರ್ಬಂಧಿಸುತ್ತವೆ. ಇದು ಇಂಗ್ಲೆಂಡಿನಲ್ಲಿ ಇರುವ ಸಹಸ್ರಾರು ಭಾರತೀಯ ರೆಸ್ಟೋರೆಂಟುಗಳ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡುತ್ತದೆ. ಚೆಫ್ಗಳ ಅಭಾವ ಕಾರಣ ಹಲವಾರು ರೆಸ್ಟೋರೆಂಟುಗಳು ಈಗಾಗಲೇ ಬಾಗಿಲು ಎಳೆದುಕೊಂಡಿವೆ.

2008: ಲಿಮ್ಕಾ ದಾಖಲೆಗಳ ಪುಸ್ತಕದಲ್ಲಿ ಏಷ್ಯಾದ ಅತಿ ಎತ್ತರದ ಮಹಿಳೆ ಎಂಬುದಾಗಿ ಹೆಸರು ದಾಖಲಿಸಿರುವ ಮೀರತ್ತಿನ ಮಹಿಳೆಯೊಬ್ಬರ ಮಗ ಒಂಬತ್ತು ತಿಂಗಳಿಗೇ ಮೂರಡಿ ಎತ್ತರ ಎಳೆದು ಅಮ್ಮನ ದಾರಿಯಲ್ಲೇ `ಲಿಮ್ಕಾ' ದಾಖಲೆ ಸೇರಲು ಹೊರಟ. ಒಂಬತ್ತು ತಿಂಗಳ ಮಗು ಮೂರು ಅಡಿ ಒಂದು ಅಂಗುಲ ಎತ್ತರ ಹಾಗೂ 22.5 ಕಿ.ಗ್ರಾಂ. ತೂಕ ಹೊಂದಿರುವುದು ಸಾಮಾನ್ಯವಲ್ಲ ಎಂಬುದು ಮೀರತ್ತಿನ ಜಿಂದಾಲ್ ಆಸ್ಪತ್ರೆಯ ವೈದ್ಯ ಮಧು ಹೇಳಿಕೆ. ಮಕ್ಕಳು ತಮ್ಮ ಪಾಲಕರಂತೆಯೇ ಎತ್ತರ ಬೆಳೆಯಬೇಕು ಎಂದೇನೂ ಇಲ್ಲ. ಆದರೆ ಈ ಬಾಲಕ (ಕರಣ್) ತನ್ನ ತಂದೆ ತಾಯಿಯರನ್ನು ಈ ವಿಚಾರದಲ್ಲಿ ಅನುಸರಿಸುವ ಎಲ್ಲ ಲಕ್ಷಣಗಳನ್ನೂ ತೋರುತ್ತಿದ್ದಾನೆ ಎಂಬುದು ಅವರ ಅಭಿಪ್ರಾಯ. ಸ್ವೆಲ್ತಾನ ಸಿಂಗ್ ಮತ್ತು ಸಂಜಯ ಸಿಂಗ್ ಪುತ್ರನಾಗಿ ಕರಣ್ 2007ರ ಜೂನ್ ತಿಂಗಳಲ್ಲಿ ಹುಟ್ಟಿದ್ದಾನೆ. ಹುಟ್ಟಿದಾಗ ಬಾಲಕನ ಎತ್ತರ 63 ಸೆಂಟಿಮೀಟರ್ ಮತ್ತು ತೂಕ 5.5 ಕಿ.ಗ್ರಾಂ. ಇತ್ತು. ಏಳು ಅಡಿ ಆರು ಅಂಗುಲ ಎತ್ತರ ಇರುವ ಸ್ವೆಲ್ತಾನ ಸಿಂಗ್ ಏಷ್ಯಾದ ಅತ್ಯಂತ ಎತ್ತರದ ಮಹಿಳೆ ಎಂಬುದಾಗಿ `ಲಿಮ್ಕಾ' ದಾಖಲೆಗಳ ಪುಸ್ತಕದಲ್ಲಿ ದಾಖಲಾಗಿದ್ದಾರೆ. ಪ್ರಕೃತಿ ಚಿಕಿತ್ಸಕ ಸಂಜಯ್ ಸಿಂಗ್ ಕೂಡಾ ಆರು ಅಡಿ ಆರು ಅಂಗುಲ ಎತ್ತರವಿದ್ದಾರೆ. ಸಿಂಗ್ ದಂಪತಿಗಳು ಮೀರತ್ತಿನ ಡಿಫೆನ್ಸ್ ಕಾಲೋನಿಯ ನಿವಾಸಿಗಳು.

2008: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಚುಂಬಿಸಿದ ಪ್ರಕರಣದಲ್ಲಿ ಬಂಧನ ವಾರೆಂಟ್ ಪಡೆದ ಹಾಲಿವುಡ್ ನಟ ರಿಚರ್ಡ್ ಗೇರ್ ವಿರುದ್ಧ ಇದ್ದ ಕ್ರಿಮಿನಲ್ ಅಪರಾಧ ಪ್ರಕರಣವನ್ನು ಸುಪ್ರೀಂಕೋರ್ಟ್ ಅಕ್ಷರಶಃ ಕೈಬಿಟ್ಟಿತು.
ರಿಚರ್ಡ್ ಗೇರ್ ಯಾವುದೇ ಭಯವಿಲ್ಲದೇ ಭಾರತಕ್ಕೆ ಬರಬಹುದು, ಇಲ್ಲಿಂದ ವಾಪಸಾಗಬಹುದು ಎಂದು ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರನ್ನು ಒಳಗೊಂಡ ಪೀಠ ಗೇರ್ ಅವರಿಗೆ ಅನುಮತಿ ನೀಡಿತು. ಅಲ್ಲದೇ ಗೇರ್ ವಿರುದ್ಧ ಜೈಪುರ ಹೈಕೋರ್ಟ್ ಹೊರಡಿಸಿದ ಬಂಧನ ವಾರಂಟನ್ನು ಸುಪ್ರೀಂಕೋರ್ಟ್ ಪೀಠ ರದ್ದುಪಡಿಸಿತು. ಗೇರ್ ವಿರುದ್ಧ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯ ಪರ ವಾದಿಸಿದ ವಕೀಲರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪೀಠ `ಇಂಥ ಕೃತ್ಯಗಳು ಅಗ್ಗದ ಜನಪ್ರಿಯತೆ ಪಡೆಯಲು ವಿನಃ ಬೇರೇನೂ ಸದುದ್ದೇಶಗಳು ಇರುವುದಿಲ್ಲ. ನೀವು ದೇಶಕ್ಕೆ ಕೆಟ್ಟ ಹೆಸರು ತರುತ್ತಿದ್ದೀರಿ. ಯಾರನ್ನಾದರೂ ತಬ್ಬಿಕೊಂಡರೂ ನೀವು ದೂರು ನೀಡುವಿರಾ?' ಎಂದು ಪ್ರಶ್ನಿಸಿತು.

2008: ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಸಹ-ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ದಿವಂಗತ ಬೆನಜೀರ್ ಭುಟ್ಟೊ ಅವರ ಪತಿ ಅಸೀಫ್ ಅಲಿ ಜರ್ದಾರಿ ಅವರು ತಮ್ಮ ವಿರುದ್ಧ ಹೊರಿಸಲಾಗಿದ್ದ ಭ್ರಷ್ಟಾಚಾರ ಆರೋಪಗಳ ಕೊನೆಯ ಪ್ರಕರಣದಿಂದ ಮುಕ್ತಿ ಪಡೆದರು. ಅವರನ್ನು `ನಿರ್ದೋಷಿ' ಎಂಬುದಾಗಿ ಪ್ರಕರಣದ ವಿಚಾರಣೆ ನಡೆಸಿದ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ತೀರ್ಪು ನೀಡಿತು.

2008: ಕಮಲಾ ಗೋಯೆಂಕಾ ಪ್ರತಿಷ್ಠಾನ ನೀಡುವ ಹಿಂದಿ- ಕನ್ನಡ ಶ್ರೇಷ್ಠ ಅನುವಾದ ಪ್ರಶಸ್ತಿಗಾಗಿ ಡಾ.
ತಿಪ್ಪೇಸ್ವಾಮಿ ಮತ್ತು ಡಾ. ವಿ.ವೆಂಕಟೇಶ್ ಅವರನ್ನು ಆಯ್ಕೆ ಮಾಡಲಾಯಿತು. ಅಮೃತಲಾಲ್ ನಗರ್ ಅವರ ಹಿಂದಿ ಉಪನ್ಯಾಸದ ಕನ್ನಡ ಅನುವಾದ ಮಾಡಿರುವ ಡಾ.ತಿಪ್ಪೇಸ್ವಾಮಿ ಅವರು `ಪಿತಾಶ್ರೀ ಗೋಪಿರಾಂ ಗೋಯೆಂಕಾ ಹಿಂದಿ- ಕನ್ನಡ ಅನುವಾದ ಪುರಸ್ಕಾರ'ಕ್ಕೆ ಆಯ್ಕೆಯಾದರು. ಸಾಹಿತಿ ಡಾ.ವಿ.ವೆಂಕಟೇಶ್ ಅವರು `ಗೋಯೆಂಕಾ ಹಿಂದಿ ಸಾಹಿತ್ಯ ಸರಸ್ವತ್ ಸನ್ಮಾನ' ಪುರಸ್ಕಾರಕ್ಕೆ ಆಯ್ಕೆಯಾದರು ಎಂದು ಕಮಲಾ ಗೋಯೆಂಕಾ ಪ್ರತಿಷ್ಠಾನದ ಧರ್ಮದರ್ಶಿ ಶ್ಯಾಮ್ ಸುಂದರ್ ಗೋಯೆಂಕಾ ತಿಳಿಸಿದರು.

2007: ಸಾಹಿತ್ಯ ಸೇವೆಗಾಗಿ ಕರ್ನಾಟಕ ಸರ್ಕಾರವು ನೀಡುವ ಪ್ರತಿಷ್ಠಿತ ಪಂಪ ಪ್ರಶಸ್ತಿಗೆ ಈ ಸಾಲಿಗಾಗಿ ಹಿರಿಯ ವಿಮರ್ಶಕ ಜಿ.ಎಸ್. ಆಮೂರ, ಲೇಖಕಿಯರಿಗೆ ನೀಡಲಾಗುವ `ದಾನ ಚಿಂತಾಮಣಿ ಅತ್ತಿಮಬ್ಬೆ' ಪ್ರಶಸ್ತಿಗೆ ಹಿರಿಯ ಬರಹಗಾರ್ತಿ, ಮಾಜಿ ಸಚಿವೆ ಬಿ.ಟಿ. ಲಲಿತಾನಾಯಕ್ ಆಯ್ಕೆಯಾದರು.

2007: ಇಂಡೋನೇಷ್ಯಾದ ಸಲೀಂ ಸಮೂಹದ ವಿಶೇಷ ಆರ್ಥಿಕ ವಲಯಕ್ಕೆ ಭೂಮಿ ಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಪೂರ್ವ ಮಿಡ್ನಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದ ರೈತರ ಮೇಲೆ ಪೊಲೀಸರು ಗುಂಡು ಹಾರಿಸಿದಾಗ 18 ಜನ ಮೃತರಾಗಿ, 75ಕ್ಕೂ ಹೆಚ್ಚು ಜನ ಗಾಯಗೊಂಡರು.

2007: ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯು ಶನಿ ಗ್ರಹದ ಒಂದು ದೊಡ್ಡ ಚಂದ್ರ `ಟೈಟನ್' ನಲ್ಲಿ ಬೃಹತ್ ಸಮುದ್ರಗಳ ಕುರುಹನ್ನು ಪತ್ತೆ ಹಚ್ಚಿತು. ಈ ಸಮುದ್ರಗಳ ಪೈಕಿ ಒಂದು ಉತ್ತರ ಅಮೆರಿಕದ `ಗ್ರೇಟ್ ಲೇಕ್ಸ್'ಗಿಂತಲೂ ದೊಡ್ಡದಾಗಿದೆ. ಈ ಸಮುದ್ರಗಳಲ್ಲಿ ದ್ರವರೂಪದ ಮಿಥೇನ್ ಅಥವಾ ಇಥೇನ್ ಇರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಪ್ರಕಟಿಸಿದರು.

2007: ಹೊಸ ನಗರ ಸಮೀಪದ ಚಕ್ರಾನಗರದಲ್ಲಿ ಗೋ ಪುರ ಪ್ರವೇಶ ಮತ್ತು ವಿಶ್ವ ಗೋ ಸಮ್ಮೇಳನದ ಪೂರ್ವ ಸಿದ್ಧತಾ ಸಮಾವೇಶವನ್ನು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಉದ್ಘಾಟಿಸಿದರು.

2006: ರಾಸಾಯನಿಕಗಳನ್ನು ಬಳಸದೆ ನೈಸರ್ಗಿಕವಾಗಿ ಸಿಗುವ ಜಾಯಿಕಾಯಿ, ಲವಂಗ, ಏಲಕ್ಕಿ ಮತ್ತು ನೀಲಗಿರಿ ತೈಲದಿಂದ ತಯಾರಿಸಲಾದ ಹೊಸ `ಎಫರ್ ಮೆಂಟ್' ಹೆಸರಿನ ಟ್ರೂ ದೇಸಿ (ಟೂತ್) ಪೇಸ್ಟನ್ನು ಕ್ಯಾಂಪ್ಕೊ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು.

2006: ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಸಪ್ತ ಸದಸ್ಯ ಸಮಿತಿಯು ಯೋಜನೆಯ ಅನುಷ್ಠಾನದಲ್ಲಿ `ಅನುಚಿತ ವರ್ತನೆಗಾಗಿ'ಗಾಗಿ ನಾಲ್ವರು ಸಂಸದರನ್ನು 2005 ಡಿಸೆಂಬರ್ 20ರಿಂದ 2006 ಮಾರ್ಚ್ 22ರವರೆಗೆ ಮೂರು ತಿಂಗಳ ಅವಧಿಗೆ ಅಮಾನತುಗೊಳಿಸಲು ಶಿಫಾರಸು ಮಾಡಿತು. `ಚರ್ಚಿಲ್ ಅಲೆಮಾವೊ (ಕಾಂಗ್ರೆಸ್), ಪಾರಸ್ ನಾಥ್ ಯಾದವ್ (ಎಸ್ ಪಿ), ಫಗನ್ ಸಿಂಗ್ ಕುಲಸ್ತೆ ಹಾಗೂ ರಾಮಸ್ವರೂಪ್ ಕೋಲಿ (ಇಬ್ಬರೂ ಬಿಜೆಪಿ) ಈ ನಾಲ್ಕೂ ಮಂದಿಗೆ ವಾಗ್ದಂಡನೆ ವಿಧಿಸುವಂತೆಯೂ ವಿ. ಕಿಶೋರ ಚಂದ್ರ ಎಸ್. ದೇವ್ ನೇತೃತ್ವದ ಸಂಸದೀಯ ಸಮಿತಿಯು ತನ್ನ 51 ಪುಟಗಳ ಸರ್ವಾನುಮತದ ವರದಿಯಲ್ಲಿ ಸೂಚಿಸಿತು. ಟೆಲಿವಿಷನ್ನಿನಲ್ಲಿ ತೋರಿಸಲಾದ `ಆಪರೇಷನ್ ಚಕ್ರವ್ಯೂಹ' (ಕುಟುಕು ಕಾರ್ಯಾಚರಣೆ) ಹಿನ್ನೆಲೆಯಲ್ಲಿ ತನಿಖೆ ಪೂರ್ಣಗೊಳ್ಳುವವರೆಗೆ ಸದನಕ್ಕೆ ಹಾಜರಾಗಬೇಡಿ ಎಂದು ಸಭಾಧ್ಯಕ್ಷರು ಈ ನಾಲ್ಕೂ ಮಂದಿ ಸಂಸದರಿಗೆ ಸೂಚಿಸಿದ್ದರು.

1990: ಸೋವಿಯತ್ ಕಾಂಗ್ರೆಸ್ ಮಿಖಾಯಿಲ್ ಗೊರ್ಬಚೆವ್ ಅವರನ್ನು ರಾಷ್ಟ್ರದ ಹೊಸ ಶಕ್ತಿಶಾಲಿ `ಆಧ್ಯಕ್ಷ' ಹುದ್ದೆಗೆ ಆಯ್ಕೆ ಮಾಡಿತು. ಹುದ್ದೆಯನ್ನು ಸೃಷ್ಟಿಸಿದ ಮರುದಿನ ಈ ಆಯ್ಕೆ ನಡೆಯಿತು.

1965: ಹಿಂದಿ ಚಿತ್ರನಟ ಅಮೀರ್ ಖಾನ್ ಹುಟ್ಟಿದ ದಿನ.

1959: ಕಲಾವಿದ ಡಾ. ಹನುಮಂತ ಬುರ್ಲಿ ಜನನ.

1949: ಕಲಾವಿದ ಎಂ.ಎಸ್. ಕೇಶವನ್ ಜನನ.

1948: ಈದಿನ ಜವಾಹರಲಾಲ್ ನೆಹರೂ ಅವರು ಸಿಂಧಿಯಾ ನೆವಿಗೇಷನ್ ಕಂಪೆನಿಯ ಎಸ್. ಎಸ್. ಜಲ ಉಷಾ ಹಡಗಿಗೆ ಚಾಲನೆ ನೀಡಿದರು. ಭಾರತದಲ್ಲೇ ನಿರ್ಮಿಸಲಾದ ಮೊತ್ತ ಮೊದಲ ಹಡಗು (ಸ್ಟೀಮರ್) ಇದು. ಇದನ್ನು ವಿಶಾಖಪಟ್ಟಣದಲ್ಲಿ ನಿರ್ಮಿಸಲಾಯಿತು.

1944: ಕಲಾವಿದ ಕೆ.ಪಿ. ಉಪಾಧ್ಯಾಯ ಜನನ.

1941: ಉಭಯಗಾನ ವಿದುಷಿ ಎಂದೇ ಹೆಸರು ಪಡೆದಿರುವ ಶ್ಯಾಮಲಾ ಜಿ. ಭಾವೆ ಅವರು ಗ್ವಾಲಿಯರ್ ಘರಾನಾ ಗಾಯಕ ಗೋವಿಂದ ವಿಠ್ಠಲ ಭಾವೆ ಮತ್ತು ಗಾಯಕಿ ಲಕ್ಷ್ಮೀ ಗೋವಿಂದ ಭಾವೆ ದಂಪತಿಯ ಮಗಳಾಗಿ ಬೆಂಗಳೂರಿನಲ್ಲಿ ಜನಿಸಿದರು. ತಂದೆಯಿಂದಲೇ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ಜೊತೆಗೆ ಕರ್ನಾಟಕ ಸಂಗೀತವನ್ನೂ ಕಲಿತ ಇವರು ಮುಂಬೈ ಕರ್ನಾಟಕ ಸಂಘದಿಂದ ಗಾನಕೋಗಿಲೆ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ, ಸುರ್ ಸಿಂಗಾರ್ನ ಸುರಮಣಿ ಪ್ರಶಸ್ತಿ, ನ್ಯೂಯಾರ್ಕಿನ ಕೊಲಂಬಿಯಾ ವಿವಿಯ ನೈಟಿಂಗೇಲ್ ಆಫ್ ಇಂಡಿಯಾ ಪ್ರಶಸ್ತಿ, ಹೂಸ್ಟನ್ ವಿವಿಯ ಗೌರವ ಡಾಕ್ಟರೇಟ್ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾದವರು.

1938: ಕಲಾವಿದೆ ಇಂದಿರಾ ಆರ್. ಜನನ.

1935: ಕಲಾವಿದ ಬಸವರಾಜ ಸಿ. ಅಕ್ಕಿ ಜನನ.

1934: ಈಜೆನ್ ಸೆರ್ನಾನ್ ಹುಟ್ಟಿದ ದಿನ. ಅಮೆರಿಕಾದ ಗಗನಯಾನಿಯಾದ ಇವರು 1972ರಲ್ಲಿ ಚಂದ್ರನ ಮೇಲೆ ಇಳಿದ ಕೊನೆಯ ಮಾನವ. ಭೂಗರ್ಭತಜ್ಞ ಹ್ಯಾರಿಸನ್ ಸ್ಮಿಟ್ ಜೊತೆಗೆ ಚಂದ್ರನ ಮೇಲೆ ಇಳಿದ ಇವರು ಚಂದ್ರನ ನೆಲದ ಮೇಲೆ ಹೆಚ್ಚು ಸಮಯ ಕಳೆದ ಗಗನಯಾನಿ.

1932: ಕೊಡಕ್ ಕ್ಯಾಮರಾದ ಸಂಶೋಧಕ ಜಾರ್ಜ್ ಈಸ್ಟ್ ಮನ್ ಆತ್ಮಹತ್ಯೆ ಮಾಡಿಕೊಂಡ.

1931: ಭಾರತದ ಮೊದಲ ಟಾಕಿ ಚಿತ್ರ `ಆಲಂ ಅರಾ' ಬಾಂಬೆಯ (ಈಗಿನ ಮುಂಬೈ) ಮೆಜೆಸ್ಟಿಕ್ ಥಿಯೇಟರಿನಲ್ಲಿ ಬಿಡುಗಡೆಗೊಂಡಿತು. ಅರ್ಡೆಶಿರ್ ಎಂ. ಇರಾನಿ ನಿರ್ದೇಶನದ ಈ ಚಿತ್ರವನ್ನು ಇಂಪೀರಿಯಲ್ ಕಂಪೆನಿ ನಿರ್ಮಿಸಿತು. (ಅಂದು ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ತೆರೆಯ ಮೇಲೆ ಚಲನಚಿತ್ರ ಮಾತಾಡಿತು. ಅದು `ಆಲಂ ಆರಾ'. ಮೂಕಿಯಿಂದ ಟಾಕಿಗೆ ಜಿಗಿದ ಮಹತ್ತರ ಗಳಿಗೆ. ಭಾರತೀಯ ಸಿನಿಮಾ ಜಗತಿನಲ್ಲಿ ಹೊಸದೊಂದು ಅಲೆಯನ್ನೇ ಎಬ್ಬಿಸಿದ `ಆಲಂ..'ನಿಂದ ಜನ ನಿಜಕ್ಕೂ ನಿಬ್ಬೆರಗಾದರು. `ಚಿತ್ರಗಳು ಮಾತನಾಡುತ್ತವೆ ಎಂದರೆ ಏನು?' ಎಂದು ಮುಂಬೈನ ಗಲ್ಲಿಗಲ್ಲಿಗಳಲ್ಲಿ ಜನ ನಿಂತು ಮಾತನಾಡತೊಡಗಿದರು. ಅದೊಂದು ಅದ್ಭುತವಾಗಿತ್ತು. ಆಶ್ಚರ್ಯವಾಗಿತ್ತು. ಸಿನೆಮಾ ಮಂದಿರಕ್ಕೆ ಜನತೆ ಮುಗಿಬಿತ್ತು. ತೆರೆಯ ಮೇಲೆ ತಮ್ಮ ಭಾಷೆಯನ್ನೇ ಮಾತನಾಡುವ ಮಾಸ್ಟರ್ ವಿಠಲ್, ಜುಬೇದಾ, ಪೃಥ್ವಿರಾಜ್ ಕಪೂರ್ ಅವರನ್ನು ನೋಡಲು ದೊಡ್ಡ ಗಲಾಟೆಯೇ ನಡೆಯಿತು. ಆ ಪರಿಯ ಜನಪ್ರವಾಹದಿಂದ ಬಾಕ್ಸ್ ಆಫೀಸೇ ಕಕ್ಕಾಬಿಕ್ಕಿಯಾಗುವ ಪರಿಸ್ಥಿತಿ. ಆ ದಿನದಲ್ಲೂ ಬ್ಲ್ಯಾಕ್ ಟಿಕೆಟ್ 50 ರೂಪಾಯಿಗೆ ಮಾರಾಟವಾದವು . ಅಂದು ಬಾಂಬೆ ರೋಮಾಂಚನಗೊಂಡಿತ್ತು.)

1928: ಫ್ರಾಂಕ್ ಬೋರ್ಮನ್ ಹುಟ್ಟಿದ ದಿನ. ಅಮೆರಿಕದ ಗಗನಯಾನಿಯಾದ ಇವರು ಜೇಮ್ಸ್ ಎ ಲೋವೆಲ್ ಮತ್ತು ವಿಲಿಯಂ ಅವರ ಜೊತೆಗೆ ಅಪೋಲೊ 8 ರ ಮೂಲಕ 1968ರಲ್ಲಿ ಚಂದ್ರನಿಗೆ ಸುತ್ತು ಹಾಕಿದರು. ಮಾನವ ಸಹಿತವಾಗಿ ಬಾಹ್ಯಾಕಾಶ ನೌಕೆ ಮೂಲಕ ಚಂದ್ರನಿಗೆ ಪ್ರದಕ್ಷಿಣೆ ಹಾಕಿದ ಮೊದಲ ಗಗನಯಾನ ಇದು.

1920: ಹ್ಯಾಂಕ್ ಕೆಚಮ್ (Hank Ketcham) (1920-2001) ಹುಟ್ಟಿದರು. ಅಮೆರಿಕಾದ ವ್ಯಂಗ್ಯಚಿತ್ರಕಾರರಾದ ಇವರು `ಡೆನ್ಸಿಸ್ ದಿ ಮಿನೇಸ್' ಸೃಷ್ಟಿ ಮೂಲಕ ಖ್ಯಾತರಾದರು.

1883 ಜರ್ಮನ್ ತತ್ವಜ್ಞಾನಿ ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ.

1879: ಆಲ್ಬರ್ಟ್ ಐನ್ ಸ್ಟೀನ್ ಹುಟ್ಟಿದ ದಿನ. ಜರ್ಮನ್- ಅಮೆರಿಕನ್ ವಿಜ್ಞಾನಿಯಾದ ಇವರು `ಟೈಮ್' ಮ್ಯಾಗಜಿನ್ನಿನ `ಶತಮಾನದ ವ್ಯಕ್ತಿ' ಎನಿಸಿಕೊಂಡರು.

No comments:

Post a Comment