ನಾನು ಮೆಚ್ಚಿದ ವಾಟ್ಸಪ್

Sunday, April 8, 2018

ಇಂದಿನ ಇತಿಹಾಸ History Today ಏಪ್ರಿಲ್ 07

ಇಂದಿನ ಇತಿಹಾಸ History Today ಏಪ್ರಿಲ್ 07
2018: ಗೋಲ್ಡ್ ಕೋಸ್ಟ್: 21ನೇ ಕಾಮನ್ ವೆಲ್ತ್ ಕೂಟದ 3ನೇ ದಿನವೂ ಭಾರತದ ಪದಕ ಬೇಟೆ ಮುಂದುವರಿದಿದ್ದು, 25 ಹರೆಯದ ತಮಿಳುನಾಡಿನ ವೇಟ್ ಲಿಫ್ಟರ್ ಸತೀಶ್ ಶಿವಲಿಂಗಂ ಪದಕ ಗೆದ್ದ ಬೆನ್ನಲ್ಲೇ, ತಮಿಳುನಾಡಿನ ರಾಗಾಲಾ ವೆಂಕಟ್ ರಾಹುಲ್ 85 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತ ನಾಲ್ಕು ಚಿನ್ನದ ಪದಕ ಪಡೆಯಿತು. ಕಾಮನ್ ವೆಲ್ತ್ ಕೂಟದಲ್ಲಿ ಭಾರತ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಒಟ್ಟು 4 ಚಿನ್ನ ಸೇರಿದಂತೆ ಆರು ಪದಕಗಳನ್ನು ಪಡೆದಂತಾಯಿತು.  ಕಾಮನ್ ವೆಲ್ತ್ ಕೂಟದ ಮೊದಲ ದಿನ ಚಿನ್ನ, ಒಂದು ಬೆಳ್ಳಿ ಭಾರತದ ಪಾಲಾಗಿತ್ತು. 2ನೇ ದಿನವಾದ ಶುಕ್ರವಾರ ಒಂದು ಚಿನ್ನ, ಒಂದು ಕಂಚು ಲಭಿಸಿತ್ತು.

2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳಕ್ಕೆ ಅಭಿವೃದ್ಧಿಗಾಗಿ ಸರ್ವ ನೆರವು ನೀಡುವುದಾಗಿ ಭರವಸೆ ನೀಡಿದರು.  ಭಾರತಕ್ಕೆ ಮೂರು ದಿನಗಳ ಪರಂಪರಾಗತ ಭೇಟಿಗಾಗಿ ಆಗಮಿಸಿದ ನೇಪಾಳದ ಪ್ರಧಾನಿ ಕೆ.ಪಿ. ಒಲಿ ಅವರ ಜೊತೆಗೆ ನವದೆಹಲಿಯ ಹೈದರಾಬಾದ್ ಭವನದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿವರು ಚುನಾವಣೆಯಲ್ಲಿ ಸಾಧಿಸಿದ ವಿಜಯಕ್ಕಾಗಿ ಅವರನ್ನು ಅಭಿನಂದಿಸಿದರು ಮತ್ತು ಪ್ರಜಾಪ್ರಭುತ್ವ ಪ್ರಕ್ರಿಂಯೆಯಲ್ಲಿ ತಮ್ಮ ನಂಬಿಕೆ ಇರಿಸಿದ್ದಕ್ಕಾಗಿ ನೇಪಾಳದ ಜನತೆಯನ್ನೂ ಅಭಿನಂದಿಸಿದರು. ’ನಮಗೆ, ಭಾರತಕ್ಕೆ ಇದು ಸಂತಸದ ವಿಷಯ ಎಂದು ಅವರು ನುಡಿದರು. ‘ಸಮೃದ್ಧ ನೇಪಾಳ ಮತ್ತು ಅಭಿವೃದ್ಧಿ ಹೊಂದಿದ ನೇಪಾಳ ದೃಷ್ಟಿಯನ್ನು ಪ್ರಧಾನಿ ಒಲಿ ಅವರು ಹೊಂದಿದ್ದು, ಇದು ಭಾರತದಸಬ್ಕಾ ಸಾತ್ ಸಬ್ಕಾ ವಿಕಾತ್ ಕಲ್ಪನೆಗೆ ಸರಿಹೊಂದುವಂತಹುದು ಎಂದು ಮೋದಿ ಹೇಳಿದರು.  ತಾವು ಎಲ್ಲ ಸಂಪರ್ಕ ಯೋಜನೆಗಳನ್ನು ಪರಿಶೀಲಿಸಿದುದಾಗಿ ನುಡಿದ ಮೋದಿ, ’ನೇಪಾಳವು ಒಳನಾಡು ಜಲಮಾರ್ಗಗಳ ಮೂಲಕ ನೇಪಾಳವು ಕರಾವಳಿ ಜೊತೆಗೆ ಸಂಪರ್ಕ ಸಾಧಿಸಲಿದೆ ಎಂದು ಹೇಳಿದರು. ’ಸಾಗರಮತವು (ಎವರೆಸ್ಟ್ ಪರ್ವತ) ಸಾಗರದ ಜೊತೆಗೆ ಸಂಪರ್ಕ ಪಡೆಯಲಿದೆ ಎಂದು ಹೇಳಿದರು.  ಉಭಯ ರಾಷ್ಟ್ರಗಳಿಗೂ ಕೃಷಿ ಮಹತ್ವದ್ದಾದ ಕಾರಣ, ಕೃಷಿ, ಶಿಕ್ಷಣ, ಸಾವಯವ ಕೃಷಿ, ಪಶುಸಂಗೋಪನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಅವರು ನುಡಿದರು.  ಅರುಣ್ , ಪಂಚೇಶ್ವರ ಮತ್ತು ಸಪ್ತ ಕೋಶಿ ಯೋಜನೆಗಳನ್ನು ತ್ವರಿತಗೊಳಿಸಲಾಗುವುದು ಎಂದು ಭರವಸೆ ನೀಡಿದ ಮೋದಿ, ಗಡಿಗಳು ಸುರಕ್ಷಿತವಾಗಿರಬೇಕು ಎಂದು ಅಪೇಕ್ಷಿಸಿದರು. ’ಮುಕ್ತ ಗಡಿಗಳ ದುರುಪಯೋಗ ತಡೆಯಲು ಉಭಯ ರಾಷ್ಟ್ರಗಳೂ ಬದ್ಧವಾಗಿವೆ ಎಂದು ಅವರು ಹೇಳಿದರು.  ಕೆ.ಪಿ. ಒಲಿ ಅವರು ತಮ್ಮ ಭಾಷಣದಲ್ಲಿ ಉಭಯ ನಾಯಕರು ಎರಡು ವರ್ಷಗಳ ಹಿಂದೆ ಭೇಟಿಯಾದಂದಿನಿಂದ ಇಲ್ಲಿಯವರೆಗೆ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದು ಹೇಳಿದರು.  ದ್ವಿಪಕ್ಷೀಯ ಬಾಂಧವ್ಯಗಳ ಮಹತ್ವಕ್ಕೆ ಸಂಬಂಧಿಸಿದಂತೆ ಮೋದಿ ಅವರ ಭಾವನೆಗಳಿಗೆ ತಮ್ಮ ಸಹಮತವಿದೆ ಎಂದು ನುಡಿದ ಒಲಿನೇಪಾಳವು ನಿರ್ಣಾಯಕ ಬದಲಾವಣೆಯನ್ನು ಕಾಣುತ್ತಿದೆ ಎಂದು ನುಡಿದರು. ’ನಮಗೆ ನಮ್ಮ ಮಿತ್ರರ ಬೆಂಬಲ ಬೇಕು. ನೆರೆಹೊರೆಯವರ ಬಾಂಧವ್ಯ ಇತರ ಬಾಂಧವ್ಯಗಳಿಗಿಂತ ಭಿನ್ನವಾದುದು. ಇದು ಪರಸ್ಪರ ಗೌರವವನ್ನು ಆಧರಿಸಿದ್ದು ಎಂದು ಅವರು ನುಡಿದರು.  ೨೦೧೬ರ ಫೆಬ್ರುವರಿಯಲ್ಲಿ ಒಲಿ ಅವರ ಭಾರತ ಭೇಟಿ ಕಾಲದಲ್ಲಿ ರಚಿಸಲಾಗಿದ್ದ ಗಣ್ಯ ವ್ಯಕ್ತಿಗಳ ಸಮೂಹವು ಉಪಯುಕ್ತ ಶಿಫಾರಸುಗಳನ್ನು ನೀಡಲಿದೆ ಎಂದು ತಾವು ಹಾರೈಸಿರುವುದಾಗಿ ನೇಪಾಳದ ಪ್ರಧಾನಿ ಹೇಳಿದರು. ವಾಣಿಜ್ಯ ಕೊರತೆ ಆತಂಕಕಾರಿ ಎಂದು ಒತ್ತಿ ಹೇಳಿದ ಅವರು, ಉಭಯ ರಾಷ್ಟ್ರಗಳ ನಡುವೆ ಗಡಿಯಲ್ಲಿ ಮೂಲ ಸವಲತ್ತುಗಳ ಅಭಿವೃದ್ಧಿಗೆ ಕರೆ ನೀಡಿದರು. ’ನೇಪಾಳವು ಭಾರತದ ಸರ್ಕಾರಿ ಮತ್ತು ಖಾಸಗಿ ರಂಗಗಳಿಂದ ಹೆಚ್ಚಿನ ಬೆಂಬಲವನ್ನು ಬಯಸುತ್ತಿದೆ ಎಂದು ನೇಪಾಳಿ ಪ್ರಧಾನಿ ನುಡಿದರು.  ವಿದ್ಯುತ್ ವ್ಯಾಪಾರ ಒಪ್ಪಂದಕ್ಕೆ ಧನ್ಯವಾದ: ಉಭಯ ದೇಶಗಳ ನಡುವೆ ವಿದ್ಯುತ್ ವಹಿವಾಟಿಗೆ ಸಂಬಂಧಿಸಿದಂತೆ ಮಾರ್ಗದರ್ಶನ ಮತ್ತು ನಿಯಂತ್ರಣಕ್ಕಾಗಿ ಮಾರ್ಗದಶಿ ಸೂತ್ರಗಳನ್ನು ರೂಪಿಸುವ ಭಾರತ ಸರ್ಕಾರದ ಯೋಜನೆಗೆ ಒಲಿ ಮೆಚ್ಚುಗೆ ವ್ಯಕ್ತ ಪಡಿಸಿದರು. ’೨೦೧೪ರಲ್ಲಿ ನಾವು ಅಂತಿಮಗೊಳಿಸಿದ್ದ ದ್ವಿಪಕ್ಷೀಯ ವಿದ್ಯುತ್ ವ್ಯಾಪಾರ ಒಪ್ಪಂದವನ್ನು ಆದಷ್ಟೂ ಶೀಘ್ರ ಜಾರಿಗೊಳಿಸಬೇಕು ಎಂದು ಬಯಸುತ್ತೇನೆ. ನಿಟ್ಟಿನಲ್ಲಿ ಧನಾತ್ಮಕ ನಿಲುವು ಹೊಂದಿರುವುದಕ್ಕಾಗಿ ನಾನು ಮೋದಿಜಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಒಲಿ ಹೇಳಿದರು.  ನಮ್ಮ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯ ಇದೆ. ಅದು ಜನರ ಪಾಲಿಗೆ ಉಪಯುಕ್ತವಾಗುವಂತೆ ನಾವು ಮಾಡಬೇಕಾಗಿದೆ. ನೇಪಾಳಕ್ಕೆ ಆದಷ್ಟು ಶೀಘ್ರ ಭೇಟಿ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ನೀಡಿದ್ದ ನನ್ನ ಆಮಂತ್ರಣವನ್ನು ನಾನು ನವೀಕರಿಸುತ್ತಿದ್ದೇನೆ ಎಂದು ಅವರು ನುಡಿದರು.  ಇದಕ್ಕೆ ಮುನ್ನ ಉಭಯ ನಾಯಕರೂ ದ್ವಿಪಕ್ಷೀಯ ಬಾಂಧವ್ಯಗಳನ್ನು ಇನ್ನಷ್ಟು ಗಾಢಗೊಳಿಸುವ ಬಗ್ಗೆ ಮಾತುಕತೆಗಳನ್ನು ನಡೆಸಿದರು. ದ್ವಿಪಕ್ಷೀಯ ಬಾಂಧವ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಉಭಯ ನಾಯಕರೂ ಸಮಗ್ರವಾಗಿ ಚರ್ಚಿಸಿದರು ಎಂದು ನಂಬಲಾಗಿದೆ.  ಶನಿವಾರದ ಔಪಚಾರಿಕ ಮಾತುಕತೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಮತ್ತು ಒಲಿ ಅವರು ಪ್ರಧಾನಿ ಮೋದಿಯವರ ಮನೆಯಲ್ಲಿ ಅಘೋಷಿತ ಮುಖಾಮುಖಿ ಮಾತುಕತೆ ನಡೆಸಿ ಅಭಿವೃದ್ಧಿ ಮತ್ತು ನೆರವು ಯೋಜನೆಗಳ ಬಗ್ಗೆ ಚರ್ಚಿಸಿದ್ದರು.

2018: ಜೋಧಪುರ: ಎರಡು ದಶಕಗಳಷ್ಟು ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷಗಳ ಸೆರೆವಾಸದ ಶಿಕ್ಷೆಗೆ ಗುರಿಯಾದ ಚಿತ್ರನಟ ಸಲ್ಮಾನ್ ಖಾನ್ ಅವರಿಗೆ ಜೋಧಪುರ ಡಿಸ್ಟ್ರಿಕ್ಸ್ ಮತ್ತು ಸೆಷನ್ಸ್ ನ್ಯಾಯಾಲಯವು  ಷರತ್ತಿನ ಜಾಮೀನು ಮಂಜೂರು ಮಾಡಿತು. ಇದರೊಂದಿಗೆ ಖಾನ್ ಅವರಿಗೆ ಸಧ್ಯಕ್ಕೆ ನಿರಾಳತೆ ಲಭಿಸಿತು.  ೫೦,೦೦೦ ರೂಪಾಯಿಗಳ ಜಾಮೀನು ಭದ್ರತಾ ಖಾತರಿ ಮೇರೆಗೆ ಖಾನ್ ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆಜ್ಞಾಪಿಸಿತು. ಮೇಲ್ಮನವಿಯ ವಿಚಾರಣೆ ಅವಧಿಯಲ್ಲಿ ಶಿಕ್ಷೆಯನ್ನು ಅಮಾನತುಗೊಳಿಸಲೂ ನ್ಯಾಯಾಲಯ ಒಪ್ಪಿಗೆ ನೀಡಿತು. ಖಾನ್ ಅವರು ನ್ಯಾಯಾಲಯದ ಅನುಮತಿ ಇಲ್ಲದೆ ದೇಶಬಿಟ್ಟು ಹೊರಹೋಗುವಂತಿಲ್ಲ ಎಂಬ ಷರತ್ತನ್ನೂ ಕೋರ್ಟ್ ವಿಧಿಸಿತು.  ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ವಿಧಿಸಲಾಗಿರುವ ಸೆರೆವಾಸದ ಶಿಕ್ಷೆಯ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ಅರ್ಜಿ ಮೇ ೭ರಂದು ವಿಚಾರಣೆಗೆ ಬಂದಾಗ ನ್ಯಾಯಾಲಯದಲ್ಲಿ ಖುದ್ದು ಹಾಜರಾಗುವಂತೆಯೂ ಸೆಷನ್ಸ್ ನ್ಯಾಯಾಲಯ ಖಾನ್ ಅವರಿಗೆ ನಿರ್ದೇಶಿಸಿತು. ಸಲ್ಮಾನ್ ಅವರ ಪರ ಮಂಡಿಸಲಾದ ವಾದದ ನೆಲೆಯನ್ನು ನ್ಯಾಯಾಲಯವು ಅಂಗೀಕರಿಸಿತು ಎಂದು ಸಲ್ಮಾನ್ ಪರ ವಕೀಲ ಹಸ್ತಿಮಲ್ ಸಾರಸ್ವತ್ ಹೇಳಿದರು.  ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದ ಖಾನ್ ಅಭಿಮಾನಿಗಳು ಖಾನ್ ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಕೆಲವರುಭಜರಂಗಿ ಭಾಯಿಜಾನ್ ಎಂಬ ಘೋಷಣೆ ಮೊಳಗಿಸಿದರು. ಸೆರೆಮನೆಯ ಹೊರಭಾಗದಲ್ಲೂ ಜಮಾಯಿಸಿದ್ದ ಅಭಿಮಾನಿಗಳು ಜಾಮೀನು ಲಭಿಸಿದ ಸುದ್ದಿ ಬರುತ್ತಿದ್ದಂತೆಯೇ ಘೋಷಣೆಗಳನ್ನು ಕೂಗಿ ತಮ್ಮ ಹರ್ಷ ವ್ಯಕ್ತ ಪಡಿಸಿದರು.  ಜಾಮೀನು ಎಂದೂ ಉಲ್ಲಂಘಿಸಿಲ್ಲ: ಇದಕ್ಕೆ ಮುನ್ನ ಶನಿವಾರ ಬೆಳಗ್ಗೆ ಸಲ್ಮಾನ್ ಖಾನ್ ಪರ ವಕೀಲರು ಮತ್ತು ಪಬ್ಲಿಕ್ ಪ್ರಾಸೆಕ್ಯೂಟರ್ ತಮ್ಮ ಅಹವಾಲುಗಳನ್ನು ಪೂರ್ಣಗೊಳಿಸಿದರು. ಸಲ್ಮಾನ್ ಪರ ವಕೀಲ ಮಹೇಶ್ ಬೋರಾ ಅವರುಜಾಮೀನು ನೀಡಿದಲ್ಲಿ ಖಾನ್ ಅವರು ತಮ್ಮ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳುವುದಿಲ್ಲ. ಕಳೆದ ೧೯ ವರ್ಷಗಳಲ್ಲಿ ಅವರು ಎಂದೂ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ ಎಂದು ಅಹವಾಲು ಮಂಡಿಸಿದರು.  ಖಾನ್ ಪರ ವಕೀಲರ ವಾದವನ್ನು ಪಬ್ಲಿಕ್ ಪ್ರಾಸೆಕ್ಯೂಟರ್ ಪೋಕರ್ ರಾಮ್ ವಿರೋಧಿಸಿದರು. ಇತರ ಪ್ರಕರಣಗಳಲ್ಲಿ ಸಲ್ಮಾನ್ ಅವರನ್ನು ಖುಲಾಸೆಗೊಳಿಸಿದ್ದಕ್ಕೆ ಸಂಬಂಧಿಸಿದ ಪ್ರಕರಣಗಳು ಇನ್ನೂ ಸುಪ್ರೀಂಕೋರ್ಟಿನಲ್ಲಿ ಬಾಕಿ ಉಳಿದಿವೆ. ಅವು ಇನ್ನೂ ಅಂತಿಮತ್ವ ಪಡೆದಿಲ್ಲ ಎಂದು ಅವರು ವಾದಿಸಿದರು. ಕೃಷ್ಣ ಮೃಗಗಳ ಬೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರು ತಪ್ಪಿತಸ್ಥರೆಂದು ಗುರುವಾರ ತೀರ್ಪು ನೀಡಿರುವ ವಿಚಾರಣಾ ನ್ಯಾಯಾಲಯ ಅವರಿಗೆ ವರ್ಷಗಳ ಸೆರೆವಾಸದ ಜೊತೆಗೆ ೧೦,೦೦೦ ರೂಪಾಯಿಗಳ ದಂಡವನ್ನೂ ವಿಧಿಸಿತ್ತು.  ನ್ಯಾಯಾಧೀಶರ ವರ್ಗಾವಣೆ: ಚಿತ್ರನಟ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸುತ್ತಿದ್ದ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ (ಜೋಧಪುರ ಗ್ರಾಮೀಣ) ಅವರನ್ನು ಶುಕ್ರವಾರ ತಡರಾತ್ರಿಯಲ್ಲಿ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಸಲ್ಮಾನ್ ಖಾನ್ ಅವರ ಜಾಮೀನು ಅರ್ಜಿಯ ವಿಚಾರಣೆ ಈದಿನ ನಡೆಯುವುದೇ ಅಥವಾ ಇಲ್ಲವೇ ಎಂಬ ಬಗ್ಗೆ ಗುಮಾನಿ ಎದ್ದಿತ್ತು.  ಮಾರ್ಚ್- ಏಪ್ರಿಲ್ ತಿಂಗಳಲ್ಲಿ ನಡೆಯುವ ಮಾಮೂಲಿ ವರ್ಗಾವಣೆ ಪ್ರಕ್ರಿಯೆಯ ಅಡಿಯಲ್ಲಿ ವರ್ಗಾವಣೆಗೊಂಡ ೮೭ ಮಂದಿ ಡಿಸ್ಟ್ರಿಕ್ಟ್ ನ್ಯಾಯಾಧೀಶರ ಪೈಕಿ ರವೀಂದ್ರ ಜೋಶಿ ಅವರೂ ಒಬ್ಬರಾಗಿದ್ದರು. ಜೋಶಿ ಅವರನ್ನು ಸಿರೋಹಿಗೆ ವರ್ಗಾವಣೆ ಮಾಡಲಾಗಿದೆ. 

2018: ನವದೆಹಲಿ:  ಸಲ್ಮಾನ್ ಖಾನ್ ಅವರಿಗೆ ೧೯೯೮ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸೆರೆವಾಸದ ಶಿಕ್ಷೆ ವಿಧಿಸಿದ್ದನ್ನು ಅನುಸರಿಸಿ ಟ್ವಿಟ್ಟರ್ ನಲ್ಲಿ ನ್ಯಾಯಾಂಗವನ್ನು ನಿಂದಿಸಿದ್ದು ತಾನಲ್ಲ ಹ್ಯಾಕರುಗಳು ಎಂದು ಪ್ರತಿಪಾದಿಸಿದ್ದ ಹಾಸ್ಯನಟ ಕಪಿಲ್ ಶರ್ಮ ಅವರುಮಾಧ್ಯಮ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ನಿಂದಿಸಿದ್ದು ನಾನೇ ಎಂದು ಒಪ್ಪಿಕೊಂಡರು.  ‘ಫ್ಯಾಮಿಲಿ ಟೈಮ್ ವಿದ್ ಕಪಿಲ್ ಸರಣಿಯ ಮೂಲಕ ಕಿರುಪರದೆಗೆ ವಾಪಸಾಗಿದ್ದ ಕಪಿಲ್ ಶರ್ಮ ಅವರು ಸಲ್ಮಾನ್ ಖಾನ್ ಅವರನ್ನು ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ತಪ್ಪಿತಸ್ಥ ಎಂಬುದಾಗಿ ಹೇಳಿ ಶಿಕ್ಷೆ ವಿಧಿಸಿದ್ದಕ್ಕೆ ಭಾರತದ ನ್ಯಾಯಾಂಗವನ್ನೂ ನಿಂದಿಸಿದ್ದಲ್ಲದೆ, ತಮ್ಮ ಬಗ್ಗೆ ಋಣಾತ್ಮಕ ಸುದ್ದಿ ಪ್ರಸಾರ ಮಾಡುತ್ತಿರುವುದಕ್ಕಾಗಿ ಮಾಧ್ಯಮಗಳನ್ನೂ ಟೀಕಿಸಿದ್ದರು. ’ನಾನೇನಾದರೂ ಪ್ರಧಾನಿಯಾಗಿದ್ದರೆ ಸುಳ್ಳು ಸುದ್ದಿಗಳನ್ನು ಹರಡಿದ ಜನರನ್ನು ಗಲ್ಲಿಗೆ ಏರಿಸುತ್ತಿದ್ದೆ ಎಂದೂ ಕಪಿಲ್ ಹೇಳಿದ್ದರು.
ಕಪಿಲ್ ಅವರ ಟ್ವಿಟ್ಟರ್ ಸಂದೇಶಗಳನ್ನು ಸ್ವತಃ ಅಭಿಮಾನಿಗಳೇ ತರಾಟೆಗೆ ತೆಗೆದುಕೊಂಡು, ಇಂತಹ ದೂಷಣೆಗಳಿಂದ ದೂರ ಇರುವಂತೆ ಸೂಚಿಸಿದಾಗ ಅವರ ವಿರುದ್ಧವೂ ಕಪಿಲ್ ಹರಿಹಾಯ್ದಿದ್ದರು. ಆದರೆ ಬಳಿಕ ತಮ್ಮ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು, ಅದರಲ್ಲಿ ಬಂದಿದ್ದ ಸಂದೇಶಗಳಾವುವೂ ತಮ್ಮದಲ್ಲ, ತಾವು ಅಂತಹ ಭಾಷೆಯನ್ನು ಬಳಸುವುದಿಲ್ಲ ಎಂದು ಕಪಿಲ್ ಶರ್ಮಾ ಟ್ವಿಟ್ಟರಿನಲ್ಲೇ ಸಮಜಾಯಿಷಿ ನೀಡಿದ್ದರು.  ಆದರೆ ಎಲ್ಲ ಟ್ವೀಟ್ ಸಂದೇಶಗಳನ್ನೂ ತಾನೇ ಬರೆದಿದ್ದುದಾಗಿ ಕಪಿಲ್ ಶರ್ಮ ಒಪ್ಪಿಕೊಂಡರು.. ’ಮೈನೆ ಜೊ ಬಿ ಲಿಖಾ ಥಾ ಅಪ್ನೆ ದಿಲ್ ಸೆ ಲಿಖಾ ಥಾ.. ಇಟ್ ವಾಸ್ ಮೈ ಟೀಮ್ ಹೂ ಡಿಲಿಟೆಡ್ ಮೈ ಟ್ವೀಟ್ಸ್.. ಬಟ್ ಮೈನ್ ಈಸ ಕುತ್ತೆ ಬಿಕಾಯು ರಿಪೋರ್ಟರ್ ಸೆ ಡರ್ನೆವಾಲಾ ನಹಿ ಹೂ.. ಹಿ ಕ್ಯಾನ್ ರೈಟ್ ಎನಿಥಿಂಗ್ ಫಾರ್ ಎನಿಬಡಿ ಜಸ್ಟ್ ಫಾರ್ ಫ್ಯೂ ಬಕ್ಸ್, ಶೇಮ್ ಲೆಸ್ ಎಂದು ಶರ್ಮ ಈದಿನ ಟ್ವಿಟ್ಟರಿನಲ್ಲಿ ಬರೆದರು. ಮನರಂಜನಾ ಸುದ್ದಿ ಪೋರ್ಟಲ್ ಒಂದರ ವರದಿ ಪ್ರಕಾರ ಕಪಿಲ್ ಅವರು ಪೋರ್ಟಲ್ ಸಂಪಾದಕರಿಗೆ ಫೋನ್ ಮಾಡಿ ನಿಂದಿಸಿ ಬೆದರಿಸಿರುವುದಾಗಿಯೂ ಹೇಳಲಾಯಿತು.  ತಮ್ಮ ಬಗ್ಗೆ ಋಣಾತ್ಮಕ ಸುದ್ದಿಗಳನ್ನು ಸದರಿ ಪತ್ರಕರ್ತ ಹರಡುತ್ತಿರುವುದಾಗಿ ಆಪಾದಿಸಿದ ಕಪಿಲ್, ಇದರಿಂದ ತಮ್ಮ ಮನಸ್ಥಿತಿ ಕೆಟ್ಟಿದೆ ಎಂದು ಹೇಳಿದ್ದಾರೆನ್ನಲಾಯಿತು.  ತಮ್ಮ ವಿರುದ್ಧದ ನಕಾರಾತ್ಮಕ ವರದಿಗಳಿಂದಾಗಿ ಹಾಸ್ಯ ನಟ ಭ್ರಮ ನಿರಸನಗೊಂಡಿದ್ದು, ತಮಗೆ ಫೋನ್ ಮಾಡಿ ತಮ್ಮ ಜೊತೆಗೆ ತಮ್ಮ ಮಗಳ ಬಗೆಗೂ ನಿಂದನೀಯ ಮಾತುಗಳನ್ನು ಆಡಿರುವುದಾಗಿ ಪತ್ರಕರ್ತನನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.

2018: ಮುಂಬೈ:  ಪಾಲಕರು ವಿಚ್ಛೇದಿತರಾಗಿದ್ದರೆ ಅಥವಾ ಪ್ರತ್ಯೇಕಿತರಾಗಿದ್ದರೆ ಅವರ ಅವಿವಾಹಿತ ಪುತ್ರಿ ೧೮ ವರ್ಷ ಪೂರೈಸಿದ ಬಳಿಕವೂ ಅಪ್ಪನಿಂದ ಜೀವನಾಶ ಕೇಳಬಹುದು ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿತು. ಮಹಿಳೆಯು ತನ್ನ ಪ್ರಾಪ್ತ ವಯಸ್ಕ ಪುತ್ರಿಯ ಪರವಾಗಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಬಹುದು ಎಂದೂ ನ್ಯಾಯಮೂರ್ತಿ ಭಾರತಿ ಡಾಂಗ್ರೆ ಶುಕ್ರವಾರ ತೀರ್ಪು ನೀಡಿದರು.  ತನ್ನಿಂದ ಪ್ರತ್ಯೇಕಗೊಂಡಿರುವ ಪತಿಯಿಂದ ತಮ್ಮ ೧೯ರ ಹರೆಯದ ಪುತ್ರಿಯ ಜೀವನಾಂಶ ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ನಗರದ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಬಳಿಕ ಹೈಕೋರ್ಟ್ ತೀರ್ಪು ನೀಡಿತು.  ೧೯೮೮ರಲ್ಲಿ ಮದುವೆಯಾಗಿದ್ದ ದಂಪತಿ, ೧೯೯೭ರಲ್ಲಿ ಪ್ರತ್ಯೇಕಗೊಂಡಿದ್ದರು. ಅವರ ಮೂವರು ಮಕ್ಕಳು - ಇಬ್ಬರು ಹುಡುಗರು ಮತ್ತು ಒಬ್ಬ ಹುಡುಗಿ- ತಾಯಿಯ ಜೊತೆಗೆ ವಾಸವಾಗಿದ್ದರು.  ಮಕ್ಕಳು ಅಪ್ರಾಪ್ತ ವಯಸ್ಕರಾಗಿರುವವರೆಗೆ ಅವರ ತಂದೆ ಪ್ರತಿ ತಿಂಗಳೂ ಪ್ರತಿ ಮಗುವಿಗೂ ಜೀವನಾಂಶವನ್ನು ಅವರ ತಾಯಿಗೆ ಪಾವತಿ ಮಾಡಿದ್ದರು.  ಆದರೆ ಪುತ್ರಿಗೆ ೧೮ ವರ್ಷವಾದ ಬಳಿಕ ತಂದೆ ಆಕೆಗೆ ಜೀವನಾಂಶ ನೀಡಲು ನಿರಾಕರಿಸಿದ್ದರು.  ಆಕೆಯ ತಾಯಿ, ಹೈಕೋರ್ಟಿಗೆ ಸಲ್ಲಿಸಿದ ತನ್ನ ಅರ್ಜಿಯಲ್ಲಿ ಪುತ್ರಿ ಪ್ರಾಪ್ತ ವಯಸ್ಸಿಗೆ ಬಂದಿದ್ದರೂ, ಉನ್ನತ ಶಿಕ್ಷಣ ಪಡೆಯುತ್ತಿರುವುದರಿಂದ ಆಕೆ ಇನ್ನೂ ಆರ್ಥಿಕವಾಗಿ ಸ್ವಾವಲಂಬಿಯಾಗಿಲ್ಲ ಎಂದು ಪ್ರತಿಪಾದಿಸಿದ್ದರು.  ಒಬ್ಬ ಪುತ್ರ ಶಿಕ್ಷಣ ಸಾಲವನ್ನು ಮರುಪಾವತಿ ಮಾಡಬೇಕಾಗಿರುವುದರಿಂದ ಮತ್ತು ಇನ್ನೊಬ್ಬ ಪುತ್ರ ಇನ್ನೂ ನಿರುದ್ಯೋಗಿಯಾಗಿರುವುದರಿಂದ ಅವರು ನೆರವು ನೀಡುವ ಸ್ಥಿತಿಯಲ್ಲಿ ಇಲ್ಲ ಎಂದು ಮಹಿಳೆ ತಿಳಿಸಿದ್ದರು.  ಪತಿಯಿಂದ ಮಾಸಿಕ ೨೫,೦೦೦ ರೂಪಾಯಿ ಜೀವನಾಂಶ ಪಡೆಯುತ್ತಿರುವ ಮಹಿಳೆ ಪುತ್ರಿಗೆ ೧೫,೦೦೦ ರೂಪಾಯಿಗಳ ಹೆಚ್ಚುವರಿ ಜೀವನಾಂಶ ನೀಡಬೇಕು ಎಂದು ಕೋರಿದ್ದರು.  ಅಪರಾಧ ದಂಡ ಸಂಹಿತೆಯ (ಸಿಆರ್ ಪಿಸಿ) ಸೆಕ್ಷನ್ ೧೨೫()(ಬಿ) ಪ್ರಕಾರ ಅಪ್ರಾಪ್ತ ಮಕ್ಕಳಿಗೆ ಮಾತ್ರವೇ ಜೀವನಾಂಶ ನೀಡಬಹುದು ಎಂಬ ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯ ಆಕೆಯ ಅರ್ಜಿಯನ್ನು ತಿರಸ್ಕರಿಸಿತ್ತು.  ಅಪರಾಧ ದಂಡ ಸಂಹಿತೆಯ ಪ್ರಕಾರ ಪ್ರಾಪ್ತ ವಯಸ್ಸಿಗೆ ಬಂದ ಮಗು ತನ್ನ ಸ್ವ ನಿರ್ವಹಣೆಯನ್ನು ಮಾಡಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಅಥವಾ ಯಾವುದೇ ದೈಹಿಕ ಅಥವಾ ಮಾನಸಿಕ ತೊಂದರೆಯ ಕಾರಣದಿಂದ ತನ್ನನ್ನು ತಾನೇ ನಿರ್ವಹಿಸಿಕೊಳ್ಳಲು ಆಗದೇ ಇದ್ದರೆ ಆತ/ ಆಕೆ ಜೀವನಾಂಶಕ್ಕೆ ಅರ್ಹ ಎಂದು ನ್ಯಾಯಮೂರ್ತಿ ಡಾಂಗ್ರೆ ತಮ್ಮ ತೀರ್ಪಿನಲ್ಲಿ ಹೇಳಿದರು.  ಆದರೆ, ಪಾಪ್ತ ವಯಸ್ಸಿಗೆ ಬಂದ ಅವಿವಾಹಿತ ಪುತ್ರಿ ಕೂಡಾ ಆಕೆ ಆರ್ಥಿಕವಾಗಿ ಸ್ವಾವಲಂಬಿಯಾಗಿ ಇಲ್ಲದೇ ಇದ್ದರೆ (ಆಕೆ ಯಾವುದೇ ನ್ಯೂನತೆಯಿಂದ ನರಳದೇ ಇದ್ದರೂ) ಜೀವನಾಂಶ ಕೋರಬಹುದು ಎಂದು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ಗಳ ಹಿಂದಿನ ಹಲವಾರು ತೀರ್ಪುಗಳು ಹೇಳಿವೆ ಎಂದು ನ್ಯಾಯಮೂರ್ತಿ ಹೇಳಿದರು.  ಅರ್ಜಿದಾರ ಮಹಿಳೆಯ ಪ್ರತಿಪಾದನೆಯನ್ನು ಹೊಸದಾಗಿ ಪರಿಗಣಿಸುವಂತೆ ಕೌಟುಂಬಿಕ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ನ್ಯಾಯಮೂರ್ತಿ ಡಾಂಗ್ರೆ ನಿರ್ದೇಶಿಸಿದರು. 

2018: ನವದೆಹಲಿ:  ೧೫೦೦ ಕೋಟಿ (೧೫ ಬಿಲಿಯನ್) ಡಾಲರ್ ಮೊತ್ತದ ಸಮರ ವಿಮಾನ ವ್ಯವಹಾರಕ್ಕಾಗಿ ಸರ್ಕಾರವು ಮರು ಟೆಂಡರ್ ಕರೆದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಗೆಳೆಯರು ವ್ಯೂಹಾತ್ಮಕ ಪಾಲುದಾರರನ್ನು ಪಡೆಯಲು ಓಟ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು  ಪ್ರಧಾನಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದರು.  ವಿಶ್ವದಲ್ಲೇ ಅತ್ಯಂತ ಬೃಹತ್ತಾದ ವ್ಯವಹಾರದಲ್ಲಿ ೧೦೦ಕ್ಕೂ ಹೆಚ್ಚು ಹೊಸ ಸಮರ ವಿಮಾನಗಳ ಖರೀದಿಗಾಗಿ ಭಾರತ ಎದುರುನೋಡುತ್ತಿದೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದನ್ನು ರಾಹುಲ್ ಉಲ್ಲೇಖಿಸಿದರು.  ಮೋದಿ ಸ್ಕ್ಯಾಮ್ ಅಲರ್ಟ್! ಡಾಲರ್ ೧೫ ಬಿಲಿಯನ್ ಫೈಟರ್ ಜೆಟ್ ಡೀಲ್ ರಿ ಟೆಂಡರ್ಡ್. ಪಿಎಮ್ಸ್ ಫ್ರೆಂಡ್ಸ್ ರೇಸ್ ಟು ಟೈ ಅಪ್ ಸ್ಟ್ರಾಟಜಿಕ್ ಪಾಟ್ನರ್ಸ್. ರಫೇಲ್, ೪೦,೦೦೦ ಕ್ರೋರ್ ಲಾಸ್ ಟು ಎಕ್ಸ್ಚೆಕರ್  ವಾಸ್ಸಯೋನಾರಾ ಮನಿ ಟು ಫ್ರೆಂಚ್, ಸೊ ಪಿಎಂ ಕುಡ್ ರಿ ಟೆಂಡರ್ ಕಾಂಟ್ರಾಕ್ಟ್ ಅಂಡ್ ಫೇವರ್ ಫ್ರೆಂಡ್ಸ್ (ಮೋದಿ ಹಗರಣ ಎಚ್ಚರ! ೧೫೦೦ ಕೋಟಿ ಡಾಲರ್ ಸಮರ ವಿಮಾನ ವ್ಯವಹಾರಕ್ಕಾಗಿ ಮರುಟೆಂಡರ್ ಕರೆಯಲಾಗಿದೆ. ಪ್ರಧಾನಿಯವರ ಗೆಳೆಯರು ವ್ಯೂಹಾತ್ಮಕ ಪಾಲುದಾರರಿಗಾಗಿ ಓಟ ನಡೆಸಲಿದ್ದಾರೆ. ರಫೇಲ್ ವ್ಯವಹಾರದಲ್ಲಿ ಬೊಕ್ಕಸಕ್ಕೆ ಆದ ೪೦,೦೦೦ ಕೋಟಿ ರೂಪಾಯಿ ನಷ್ಟ ಫ್ರೆಂಚರಿಗೆಸಯೋನಾರಾ ಕೊಡುಗೆಯಾಗಿದೆ. ಆದ್ದರಿಂದ ಪ್ರಧಾನಿಯವರು ಗುತ್ತಿಗೆಯ ಮರು ಟೆಂಡರ್ ಕರೆಯಬಹುದು ಮತ್ತು ಗೆಳೆಯರಿಗೆ ಅನುಕೂಲ ಮಾಡಿಕೊಡಬಹುದು ಎಂದು ರಾಹುಲ್ ಟ್ವಟ್ಟರ್ ನಲ್ಲಿ ಆಪಾದಿಸಿದರು. ರಾಹುಲ್ ಗಾಂಧಿಯವರು ಮುನ್ನ ರಫೇಲ್ ವ್ಯವಹಾರಕ್ಕಾಗಿ ಪ್ರಧಾನಿ ಮತ್ತು ಅವರ ಸರ್ಕಾರದ ಮೇಲೆ ದಾಳಿ ನಡೆಸಿದ್ದರು. ಇದೊಂದು ಭಾರಿ ಹಗರಣ ಎಂದು ಹೇಳಿದ್ದ ರಾಹುಲ್ ಪ್ರಧಾನಿಯವರು ವ್ಯವಹಾರದ ವಿವರಗಳನ್ನು ಬಹಿರಂಗ ಗೊಳಿಸುತ್ತಿಲ್ಲ ಮತ್ತು ವಿಮಾನದ ದರ ಎಷ್ಟು ಎಂಬುದನ್ನೂ ಹೇಳುತ್ತಿಲ್ಲ ಎಂದು ಅವರು ದೂರಿದ್ದರು.  ದೇಶೀಯವಾಗಿ ರಫೇಲ್ ವಿಮಾನಗಳನ್ನು ನಿರ್ಮಿಸುತ್ತಿದ್ದ ಸರ್ಕಾರಿ ರಂಗದ ಎಚ್ ಎಎಲ್ ನ್ನು ನಿರ್ಲಕ್ಷಿದ ಬಳಿಕ ಯಾವುದೇ ಅನುಭವವೂ ಇಲ್ಲದ ತಮ್ಮ ಗೆಳೆಯರಿಗೆ ಕಾಂಟ್ರಾಕ್ಟ್ ಪಡೆಯಲು ಮೋದಿ ನೆರವಾಗುತ್ತಿದ್ದಾರೆ ಎಂದೂ ರಾಹುಲ್ ಆಪಾದಿಸಿದ್ದರು.  ಯುಪಿಎ ಆಡಳಿತವು ಫ್ರೆಂಚ್ ಕಂಪೆನಿಯ ಜೊತೆಗೆ ಮಾತುಕತೆ ನಡೆಸಿದ್ದ ದರದ ಮೂರು ಪಟ್ಟು ಹಣವನ್ನು ನೀಡಿ ಸರ್ಕಾರವು ವಿಮಾನವನ್ನು ತಂದಿದೆ ಎಂದು ಕಾಂಗ್ರೆಸ್ ಪಕ್ಷವೂ ಆಪಾದಿಸಿತ್ತು. 

2018: ನವದೆಹಲಿ: ೩೪೫ ಮಂದಿ ಪ್ರಯಾಣಿಕರೊಂದಿಗೆ ವಿಯೆಟ್ನಾಮಿನಿಂದ ರಷ್ಯಾಕ್ಕೆ ಹೊರಟಿದ್ದ ವಿಮಾನವೊಂದು ಸಂಜೆ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ - ಟರ್ಮಿನಲ್ ನಲ್ಲಿ ತುರ್ತು ಭೂಸ್ಪರ್ಶ ಮಾಡಿತು.  ವಿಮಾನದಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ದೆಹಲಿ ಇಂದಿರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಡಿಐಎಎಲ್) ತುರ್ತಾಗಿ ಇಳಿಸಲಾಯಿತು ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ವಕ್ತಾರರು ತಿಳಿಸಿದರು.  ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರೂ ಸುರಕ್ಷಿತರಾಗಿದ್ದಾರೆ. ಸಂಜೆ .೧೦ ಗಂಟೆಗೆ ವಿಮಾನವನ್ನು ತುರ್ತಾಗಿ ಇಳಿಸುವಾಗ ಎಲ್ಲ ಎಚ್ಚರಿಕೆಗಳನ್ನೂ ವಹಿಸಲಾಗಿತ್ತು ಎಂದು ಅವರು ನುಡಿದರು.  ಇದು ನಿಗದಿತವಲ್ಲದ ವಿಮಾನ ಹಾರಾಟವಾಗಿತ್ತು. ಆರ್ ಎಲ್ -೭೭೨ ನಂಬರಿನ ವಿಮಾನ ವಿಯೆಟ್ನಾಮಿನ ಫು-ಖ್ಯೂ ನಿಂದ ರಷಾದ ಯೆಕಟರೀನ್ ಬರ್ಗ್ಗೆ ಹೊರಟಿತ್ತು ಎಂದು ವಕ್ತಾರರು ಹೇಳಿದರು.  ಎಂಜಿನ್ ವೈಫಲ್ಯ ವಿಮಾನ ತುರ್ತಾಗಿ ದೆಹಲಿಯಲಿ ಇಳಿಯಲು ಕಾರಣ ಎಂದು ಹೇಳಲಾಯಿತು.  ಸಂಜೆ .೨೨ರ ವೇಳೆಗೆ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪೊಲೀಸ್ ಠಾಣೆಗೆ ಸಿಐಎಸ್ ಎಫ್ ನಿಯಂತ್ರಣ ಕೊಠಡಿಯಿಂದ ಎಬಿಜಿ೮೭೭೨ ವಿಮಾನವು ತುರ್ತು ಭೂ ಸ್ಪರ್ಶ ಮಾಡುವ ನಿರೀಕ್ಷೆ ಇದೆ ಎಂಬ ಮಾಹಿತಿ ಬಂತು. ಪೊಲೀಸರಿಗೆ ತತ್ ಕ್ಷಣವೇ  ತತ್ ಕ್ಷಣವೇ ಮಾಹಿತಿಯನ್ನು ನೀಡಲಾಯಿತು.
ಸಂಜೆ .೦೫ರ ಸುಮಾರಿಗೆ ವಿಮಾನವು ರನ್ ವೇ ನಂ.೧೧೨೯ರಲ್ಲಿ ಭೂ ಸ್ಪರ್ಶ ಮಾಡಿತು ಎಂದು ವಕ್ತಾರರು ಹೇಳಿದರು. ‘ಆರು ಅಗ್ನಿಶಾಮಕ ಯಂತ್ರಗಳನ್ನು ತತ್ ಕ್ಷಣವೇ ರನ್ ವೇ ಕಡೆಗೆ ಒಯ್ಯಲಾಯಿತು. ವಿಮಾನದ ತುರ್ತು ಭೂಸ್ಪರ್ಶ ಸಂದರ್ಭದಲ್ಲಿ ವಿಧಾನವನ್ನು ಪಾಲಿಸಲಾಗುತ್ತದೆ. ವಿಮಾನದಲ್ಲಿ ಯಾವುದೇ ಹೊಗೆ ಕಾಣಿಸಲಿಲ್ಲ. ವಿಮಾನದೊಳಗಿನ ಪ್ರತಿಯೊಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

1948: ಇಂದು ವಿಶ್ವ ಆರೋಗ್ಯ ದಿನ. ಈದಿನ ಸ್ಥಾಪನೆಯಾದ ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿವರ್ಶ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳುತ್ತದೆ. ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶ. 1948ರಲ್ಲಿ ನಡೆದ ಮೊದಲ ವಿಶ್ವ ಆರೋಗ್ಯ ಸಭೆಯಲ್ಲಿ ಏಪ್ರಿಲ್ 7ನ್ನು ವಿಶ್ವ ಆರೋಗ್ಯ ದಿನವಾಗಿ ಆಚರಿಸಲು ನಿರ್ಧರಿಸಲಾಯಿತು. 1950ರಿಂದ ವಿಶ್ವ ಆರೋಗ್ಯ ದಿನದ ಆಚರಣೆ ಜಾರಿಗೆ ಬಂತು.

2009: ಗೃಹ ಸಚಿವ ಪಿ. ಚಿದಂಬರಮ್ ಅವರತ್ತ ಸಿಖ್ ಸಮುದಾಯಕ್ಕೆ ಸೇರಿದ ಪತ್ರಕರ್ತ ಜರ್ನೈಲ್ ಸಿಂಗ್ ಎಂಬವರು ಬೂಟು ಎಸೆದ ಪ್ರಸಂಗ ನವದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ನಡೆಯಿತು. ಸಚಿವರು ಪತ್ರಕರ್ತನನ್ನು ಕ್ಷಮಿಸಿದ್ದರಿಂದ ಆತನನ್ನು ಬಂಧಿಸದೆ ಬಿಡುಗಡೆ ಮಾಡಲಾಯಿತು. ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಗೃಹ ಸಚಿವರಿಗೆ 1984ರ ಸಿಖ್ ಗಲಭೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಅವರು ದೋಷಮುಕ್ತ ಎಂದು ಸಿಬಿಐ ವರದಿ ನೀಡಿದ್ದರ ಬಗ್ಗೆ 'ದೈನಿಕ್ ಜಾಗರಣ್' ಪತ್ರಿಕೆಯ ವಿಶೇಷ ವರದಿಗಾರ ಜರ್ನೈಲ್ ಸಿಂಗ್ ಪ್ರಶ್ನೆ ಕೇಳಿದರು. ಸಚಿವರ ಉತ್ತರದಿಂದ ಮತ್ತು ಇನ್ನಷ್ಟು ವಾದಕ್ಕೆ ಅವಕಾಶ ಇಲ್ಲ ಎಂಬ ವರ್ತನೆಗೆ ಬೇಸತ್ತು ಜರ್ನೈಲ್‌ಸಿಂಗ್ ಸಚಿವರತ್ತ ಬೂಟು ಎಸೆದರು. 'ನಿಮ್ಮ ಉತ್ತರಕ್ಕೆ ನನ್ನ ಪ್ರತಿಭಟನೆ ಇದೆ' ಎನ್ನುತ್ತಲೇ ಮುಂದಿನ ಸಾಲಿನಲ್ಲೇ ಕುಳಿತ ಜರ್ನೈಲ್ ಸಿಂಗ್ ಎಸೆದ ಬಿಳಿ ಬಣ್ಣದ ಸ್ಪೋರ್ಟ್ಸ್ ಬೂಟು ಗುರಿ ತಪ್ಪಿ ಚಿದಂಬರಮ್ ಮುಖದ ಮುಂಭಾಗದಲ್ಲೇ ಹಾದು ಹೋಗಿ ಬಲ ಪಕ್ಕದಲ್ಲಿ ಬಿತ್ತು.

2009: ಗೃಹ ಸಚಿವ ಪಿ. ಚಿದಂಬರಮ್ ಅವರತ್ತ ನವದೆಹಲಿಯಲ್ಲಿ ಬೂಟು ಎಸೆದ ಪತ್ರಕರ್ತನ 'ಧೈರ್ಯ ಮತ್ತು ಶೌರ್ಯ'ಕ್ಕಾಗಿ ಸಿಖ್ ರಾಜಕೀಯ ಪಕ್ಷ ಶಿರೋಮಣಿ ಅಕಾಲಿ ದಳವು (ಎಸ್‌ಎಡಿ) ಪತ್ರಕರ್ತ ಜರ್ನೈಲ್ ಸಿಂಗ್‌ಗೆ 2 ಲಕ್ಷ ರೂಪಾಯಿಗಳ ಪುರಸ್ಕಾರ ಘೋಷಿಸಿತು. 'ಬೂಟು ಎಸೆದುದಕ್ಕೆ ಈ ನಿರ್ಧಾರ ಕೈಗೊಂಡಿಲ್ಲ. ಬದಲಿಗೆ ಈ ಘಟನೆ ಸಿಖ್ಖರ ನೋವು ಮತ್ತು ಸಂಕಷ್ಟವನ್ನು ಪ್ರತಿಬಿಂಬಿಸಿದೆ. ಭಗತ್ ಸಿಂಗ್ ಸಹ ಅಸೆಂಬಿಯಲ್ಲಿ ಬಾಂಬ್ ಎಸೆದಿದ್ದರು. ಹೀಗಾಗಿ ನಾವು ಅವರಿಗೆ ಅವರು ತೋರಿದ ಧೈರ್ಯಕ್ಕಾಗಿ 2 ಲಕ್ಷ ರೂಪಾಯಿಗಳ ಬಹುಮಾನ ಕೊಡುತ್ತಿದ್ದೇವೆ' ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅವತಾರ್ ಸಿಂಗ್ ಹಿಟ್ ಪ್ರಕಟಿಸಿದರು.

2009: ಎ.ಆರ್. ರಹಮಾನ್ ಅವರ ಆಸ್ಕರ್ ಪ್ರಶಸ್ತಿ ವಿಜೇತ ಹಾಡು 'ಜಯ್ ಹೋ' ಗೀತೆಯನ್ನು ಇಡೀ ಜಗತ್ತೇ ಗುನು ಗುನಿಸುತ್ತಿರಬಹುದು. ಆದರೆ 'ಜಯ್ ಹೋ' ಗೀತೆಗೆ, ಅರ್ಹತೆಗಿಂತ ಹೆಚ್ಚಿನ ಮನ್ನಣೆ ನೀಡಲಾಗಿದೆ ಎಂಬುದು ದಂತಕತೆಯಾಗಿರುವ ಘಜಲ್ ಹಾಡುಗಾರ ಜಗಜಿತ್ ಸಿಂಗ್ ಅಭಿಪ್ರಾಯ. ಅಕಾಡೆಮಿ ಪ್ರಶಸ್ತಿ ಪಡೆಯುವುದು ಭಾರತೀಯ ಇತಿಹಾಸದಲ್ಲಿ ಒಂದು ಸ್ವರ್ಣ ಘಳಿಗೆ, ಆದರೆ ಈ ಗೌರವಕ್ಕೆ ಪಾತ್ರವಾದ ಗೀತೆ ಮಾತ್ರ ಅಂತಹ ಗೌರವಕ್ಕೆ ಯೋಗ್ಯವಲ್ಲ ಎಂಬುದು ಬಿಚ್ಚು ನುಡಿಯ ಸ್ವಭಾವಕ್ಕೆ ಹೆಸರಾಗಿರುವ 68 ವರ್ಷ ವಯಸ್ಸಿನ ಖ್ಯಾತ ಘಜಲ್ ಹಾಡುಗಾರ ಜಗಜಿತ್ ಸಿಂಗ್ ದೃಢ ನಂಬಿಕೆ. 'ಆಸ್ಕರ್ ಪ್ರಶಸ್ತಿ ಪಡೆಯುವುದು ದಿಟವಾಗಿಯೂ ಮಹಾನ್ ಸಾಧನೆಯೇ. ಆದರೆ ಈ ಪ್ರಶಸ್ತಿ ಪಡೆದಿರುವ ಹಾಡು ಅಂತಹ ವಿಶೇಷ ಹಾಡೇನೂ ಅಲ್ಲ. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಯಾವ ಆಧಾರದಲ್ಲಿ ಅದಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದೇ ನನಗೆ ಅರ್ಥವಾಗಿಲ್ಲ' ಎಂದು ಸಿಂಗ್ ಹೇಳಿದರು. ತಮ್ಮ ಹೊಸ ಆಲ್ಪಂ 'ಇಂತೆಹಾ' ಬಿಡುಗಡೆ ಸಮಾರಂಭದ ಸಂದರ್ಭದಲ್ಲಿ ಅವರು ಪಿಟಿಐ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತ ಪಡಿಸಿದರು. 'ಹಾಡಿನ ಭಾವ ಏನೆಂದೇ ನನಗೆ ಅರ್ಥವಾಗಿಲ್ಲ. ಭಾರತದ ರಾಜಕೀಯ ಪಕ್ಷಗಳಿಂದ ಹಿಡಿದು ಅಂತಾರಾಷ್ಟ್ರೀಯ ಪಾಪ್ ಗಾಯಕರವರೆಗೆ ಎಲ್ಲರೂ ಬಳಸುವಷ್ಟು ಅದು ಜನಪ್ರಿಯ ಏಕಾಯಿತು ಎಂದೂ ನನಗೆ ಅರ್ಥವಾಗಿಲ್ಲ' ಎಂದು ಘಜಲ್ ಗಾಯಕ ಹೇಳಿದರು.

2009: ಬಹುಕೋಟಿ ಮೊತ್ತದ ಸತ್ಯಂ ಹಗರಣದ ಪ್ರಮುಖ ಆರೋಪಿಗಳಾದ ಕಂಪೆನಿಯ ಸಂಸ್ಥಾಪಕ ಬಿ.ರಾಮಲಿಂಗ ರಾಜು ಸೇರಿದಂತೆ ಇತರ ಎಂಟು ಆರೋಪಿಗಳ ವಿರುದ್ಧ 76 ಪುಟಗಳ ಆರೋಪಪಟ್ಟಿಯನ್ನು ಸಿಬಿಐ ಹೈದರಾಬಾದಿನಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಸಲ್ಲಿಸಿತು. ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿಗೆ ಸಂಬಂಧ ಪಟ್ಟಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಅಪರಾಧ ಎಸಗಲಾಗಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತು. ರಾಜು ಅವರಲ್ಲದೇ, ಅವರ ಸಹೋದರ ರಾಮ ರಾಜು, ಮಾಜಿ ಮುಖ್ಯ ಹಣಕಾಸು ಅಧಿಕಾರಿ ವದಮ್ಲಣಿ ಶ್ರೀನಿವಾಸ್, ಕಂಪೆನಿಯ ಉದ್ಯೋಗಿಗಳಾದ ಜಿ. ರಾಮಕೃಷ್ಣ (ಹಣಕಾಸು ವಿಭಾಗದ ಉಪಾಧ್ಯಕ್ಷ), ಡಿ. ವೆಂಕಟಪತಿ ರಾಜು, ಶ್ರೀಶೈಲಂ ಮತ್ತು ಪ್ರೈಸ್‌ವಾಟರ್ ಹೌಸಿನ ಇಬ್ಬರು ಅಧಿಕಾರಿಗಳಾದ ಎಸ್. ಗೋಪಾಲಕೃಷ್ಣನ್ ಹಾಗೂ ತಲ್ಲೂರಿ ಶ್ರೀನಿವಾಸ್ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಯಿತು.

2009: 41 ವರ್ಷಗಳಿಂದ ಕಿವೀಸ್ ನಾಡಿನಲ್ಲಿ ಕಾಡಿದ್ದ ಟೆಸ್ಟ್ ಸರಣಿ ವೆಲಿಂಗ್ಟನ್‌ನಲ್ಲಿ ಈದಿನ ಭಾರತದ ವಿಜಯದ ಬರ ನೀಗಿತು. 1967-68ರಲ್ಲಿ ಮನ್ಸೂರ್ ಅಲಿ ಖಾನ್ ಪಟೌಡಿ ನಾಯಕತ್ವದಲ್ಲಿ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿದ್ದಾಗ ಟೆಸ್ಟ್ ಸರಣಿ ಜಯಿಸಿದ್ದ ಭಾರತವು ದೀರ್ಘ ಕಾಲದ ನಂತರ ಅಂತಹ ಸಿಹಿಯನ್ನು ಸವಿಯಿತು. ಮಹೇಂದ್ರ ಸಿಂಗ್ ದೋನಿ ಮುಂದಾಳುತ್ವದ ಯುವ ಹಾಗೂ ಅನುಭವಿ ಆಟಗಾರರ ಪಡೆಯು ಯಶಸ್ಸಿನ ಹೊಸ ಅಧ್ಯಾಯ ಬರೆಯಿತು. ಕಿವೀಸ್ ಪಡೆಯ ಮುಂದೆ 617 ರನ್‌ಗಳ ಗುರಿಯನ್ನು ಇಟ್ಟು ಪಂದ್ಯವನ್ನು ಗೆದ್ದುಕೊಂಡಿತು.

2009: ಅಪಘಾತಕ್ಕೀಡಾಗಿ ಮುಖ ಮತ್ತು ಕೈ ವಿಕಾರವಾಗಿದ್ದ ವ್ಯಕ್ತಿಗೆ ಪ್ಯಾರಿಸ್ ವೈದ್ಯರು ವಿಶ್ವದಲ್ಲೇ ಪ್ರಥಮ ಬಾರಿಗೆ 'ಅಂಗಾಂಶ ಸ್ಥಳಾಂತರ' ಶಸ್ತ್ರಚಿಕಿತ್ಸೆ ನಡೆಸಿ, ಸಹಜ ಆಕಾರ ನೀಡುವಲ್ಲಿ ಯಶಸ್ವಿಯಾದರು. ಸುಮಾರು 30ರ ಹರೆಯದ ವ್ಯಕ್ತಿಗೆ ಈ 'ಸ್ವರೂಪ ಪುನಃಸ್ಥಾಪಿಸುವ' ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಯಿತು. 2004ರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತೀವ್ರ ಸುಟ್ಟಗಾಯಗಳಿಂದ ಈತ ಗಂಭೀರ ಅಂಗವಿಕಲನಾಗಿದ್ದ. ಮುಖದ ಆಕಾರ ಕೆಟ್ಟುಹೋಗಿತ್ತು. ಅದೇ ರೀತಿ ಕೈಯಲ್ಲಿ ಹಸ್ತದ ಭಾಗ ಜಖಂ ಆಗಿ ಬೆರಳುಗಳನ್ನೂ ಕಳೆದುಕೊಂಡಿದ್ದ. ಇಲ್ಲಿನ ಹೆನ್ರಿ ಮೆಂಡರ್ ಆಸ್ಪತ್ರೆಯಲ್ಲಿ ತಜ್ಞ ಲಾರೆಂಟ್ ಲಾಂಟೀರಿ, ಕ್ರಿಶ್ಚನ್ದೂಮಂಟೀರ್, ಜೀನ್‌ಪೋಲ್ ಮೆನಿನ್‌ಗಾಡ್ ನೇತೃತ್ವದಲ್ಲಿ ಈತನಿಗೆ ಚಿಕಿತ್ಸೆ ನೀಡಲಾಯಿತು. 40 ತಜ್ಞರ ತಂಡ ಸುಮಾರು 30 ತಾಸುಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿತು. ಪ್ಲಾಸ್ಟಿಕ್ ಸರ್ಜರಿ ಮಾದರಿಯ ಈ ಶಸ್ತ್ರಚಿಕಿತ್ಸೆಯಲ್ಲಿ ದೇಹದ ಒಂದೆಡೆಯ ಮಾಂಸ ಮಜ್ಜೆಗಳನ್ನು ತೆಗೆದು ಮುಖದ ಆಕಾರವನ್ನು ಮರುನಿರ್ಮಿಸಲಾಗಿದ್ದು ತುಟಿಗಳನ್ನಷ್ಟೇ ನಿರ್ಮಿಸಲಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು.

2009: ಪ್ರಮುಖ ಎಲ್‌ಟಿಟಿಇ ನಾಯಕರಿಗಾಗಿ ಹುಡುಕಾಟ ನಡೆಸುತ್ತಾ, ಅವರ ಅಡಗು ತಾಣಗಳನ್ನು ಸಮೀಪಿಸಿರುವ ಲಂಕಾ ಪಡೆಗಳು, ಮುಲ್ಲೈತ್ತೀವು ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ 73 ತಮಿಳು ಉಗ್ರರನ್ನು ಹತ್ಯೆಗೈದವು. ಇದರೊಂದಿಗೆ ಪ್ರತಿದಿನ ಲಂಕಾ ಪಡೆಗಳಿಗೆ ಬಲಿಯಾಗುತ್ತಿರುವ ಎಲ್‌ಟಿಟಿಇ ಉಗ್ರರ ಸಂಖ್ಯೆ 550ನ್ನು ದಾಟಿತು ಎಂದು ಸೇನಾ ಮೂಲಗಳು ತಿಳಿಸಿದವು. ಅಲ್ಪ ಸ್ವಲ್ಪ ಉಳಿದಿರುವ ತಮಿಳು ಉಗ್ರರ ಅಡಗು ತಾಣಗಳನ್ನು ವಶಪಡಿಸಿಕೊಂಡಿರುವ ಲಂಕಾ ಪಡೆಗಳು, ಪ್ರಮುಖ ನಾಯಕರನ್ನು ಸದೆ ಬಡಿಯುವ ಮೂಲಕ 'ಮ್ಯಾನ್ ಹಂಟಿಂಗ್ ಯುದ್ಧ'ಕ್ಕೆ ಇಳಿದವು. ದ್ವೀಪ ರಾಷ್ಟ್ರದಲ್ಲಿ ಇನ್ನೆಂದೂ ಭಯೋತ್ಪಾದನೆ ತಲೆ ಎತ್ತಲು ಅವಕಾಶ ನೀಡುವುದಿಲ್ಲ ಎಂದು ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ ಹೇಳಿದರು.

2008: 2012ರ ವೇಳೆಗೆ `ಭಾರತದ ಪ್ರಪ್ರಥಮ ಸೌರ ನಗರಿ'ಯಾಗಲು ಚಂಡೀಗಢವು ಸಜ್ಜಾಗುತ್ತಿದೆ ಎಂದು 2008ರ ವಿಶ್ವ ಆರೋಗ್ಯ ದಿನದ ಸಂದರ್ಭದಲ್ಲಿ ಯುಟಿ ಆಡಳಿತಾಧಿಕಾರಿಯ ಸಲಹೆಗಾರ ಪ್ರದೀಪ್ ಮೆಹ್ತಾ ಚಂಡೀಗಢದಲ್ಲಿ ಪ್ರಕಟಿಸಿದರು. ಸುಂದರ ಸೌರ ನಗರಿಯನ್ನಾಗಿ ಮಾಡಲು ಅಗತ್ಯ ಸಿದ್ಧತೆಗಳನ್ನು ತತ್ ಕ್ಷಣದಿಂದ ಆರಂಭಿಸುವಂತೆ ಎಲ್ಲ ಅಧಿಕಾರಿಗಳಿಗೂ ನಿರ್ದೇಶನ ನೀಡಲಾಗಿದೆ ಎಂದು ಅವರು ಬಹಿರಂಗ ಪಡಿಸಿದರು. `ಪರಿಸರ ಬದಲಾವಣೆಯಿಂದ ಆರೋಗ್ಯ ರಕ್ಷಣೆ' ಕುರಿತು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಈ ವಿಷಯವನ್ನು ಪ್ರಕಟಿಸಿದರು.

2008: `ಟೆಬೆಟ್' ಮಂತ್ರಪಠಣದೊಂದಿಗೆ ನಡೆದ ಚೀನಾ ವಿರೋಧಿ ಪ್ರತಿಭಟನೆಗಳ ಪರಿಣಾಮವಾಗಿ, ಬೀಜಿಂಗ್ ಒಲಿಂಪಿಕ್ ಜ್ಯೋತಿಯು ಪ್ಯಾರಿಸ್ಸಿನ್ಲಲಿ ನಾಲ್ಕು ಬಾರಿ ನಂದಿತು. ಇದರಿಂದಾಗಿ ಅಧಿಕಾರಿಗಳು ಜ್ಯೋತಿಯನ್ನು ಬಸ್ಸಿನಲ್ಲಿ ಒಯ್ಯಬೇಕಾಯಿತು. ಟಿಬೆಟಿನಲ್ಲಿ ಚೀನಾ ಸರ್ಕಾರವು ನಡೆಸುತ್ತಿರುವ ದಮನವನ್ನು ಪ್ರತಿಭಟಿಸಿದ ಪ್ರದರ್ಶನಕಾರರು ಫ್ರೆಂಚ್ ಪೊಲೀಸರ ಜೊತೆಗೆ ಘರ್ಷಿಸಿ, ಪ್ಯಾರಿಸ್ ಮೂಲಕವಾಗಿ ಜ್ಯೋತಿಯ ಮುನ್ನಡೆಗೆ ಅಡ್ಡಿ ಉಂಟು ಮಾಡಲು ಯತ್ನಿಸಿದಾಗ ಕನಿಷ್ಟ 4 ಮಂದಿಯನ್ನು ಬಂಧಿಸಲಾಯಿತು.

2007: ಖ್ಯಾತ ಜಾನಪದ ತಜ್ಞ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಡಾ. ದೇವೇಂದ್ರ ಕುಮಾರ ಸಿ. ಹಕಾರಿ (78) ಅವರು ಧಾರವಾಡದ ಶ್ರೀನಗರದ ತಮ್ಮ ಸ್ವಗೃಹ `ಕರುಣಾಂಜಲಿ'ಯಲ್ಲಿ ನಿಧನರಾದರು. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಚಿಕ್ಕೇನಕೊಪ್ಪದಲ್ಲಿ 1931ರಲ್ಲಿ ಜನಿಸಿದ ದೇವೇಂದ್ರ ಕುಮಾರ ಅವರು ಗುಲ್ಬರ್ಗದ ಶರಣ ಬಸವೇಶ್ವರ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. 1970ರಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯ ಸೇರಿದ ಹಕಾರಿ 1991ರಲ್ಲಿ ನಿವೃತ್ತರಾಗುವ ವೇಳೆಗೆ ಜಾನಪದ ಕ್ಷೇತದಲ್ಲಿ ಆಳ ಅಧ್ಯಯನ ಮತ್ತು ಬರಹಗಳಿಂದ ಖ್ಯಾತರಾಗಿದ್ದರು. ಕಾಲೇಜಿನ ದಿನಗಳಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅವರು ಹೈದರಾಬಾದ್ ರಜಾಕಾರರ ವಿರುದ್ಧ ಸಮರ ಸಾರಿದ್ದರು. ಕಾದಂಬರಿ, ಕವನ ಸಂಕಲನ, ವಿಮರ್ಶೆ, ನಾಟಕ, ಜೀವನ ಚರಿತ್ರೆ, ಸಂಪಾದಿತ ಕೃತಿ, ಅನುವಾದ ಕೃತಿ ಸೇರಿ 37 ಪುಸ್ತಕಗಳನ್ನು ಅವರು ಪ್ರಕಟಿಸಿದ್ದರು.

2007: ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಜಯಭೇರಿ ಬಾರಿಸಿತು. ಆಡಳಿತಾರೂಢ ಕಾಂಗ್ರೆಸ್ ಮುಖಭಂಗಕ್ಕೆ ಗುರಿಯಾಯಿತು. 272 ಸದಸ್ಯ ಬಲದ ಎಂಸಿಡಿಯಲ್ಲಿ ಬಿಜೆಪಿ 164, ಕಾಂಗ್ರೆಸ್ 69, ಪಕ್ಷೇತರರು 16, ಬಿ ಎಸ್ ಪಿ 15, ಎನ್ ಸಿ ಪಿ, ಜೆಎಂಎಂ, ಎಲ್ ಜೆ ಪಿ ಮತ್ತು ಐ ಎನ್ ಎಲ್ ಡಿ ತಲಾ ಎರಡು ಸ್ಥಾನ ಗಳಿಸಿದವು.

2007: ಕಾಂಚೀಪುರಂಗೆ ಸಮೀಪದ ಮಾಮಲ್ಲಾಪುರಂನಲ್ಲಿ 1800 ವರ್ಷಗಳಷ್ಟು ಹಳೆಯದಾದ ಮುರುಗನ್ ದೇವಾಲಯ ಒಂದರ ಅವಶೇಷಗಳನ್ನು ಪ್ರಾಕ್ತನ ತಜ್ಞರು ಪತ್ತೆ ಹಚ್ಚಿದರು.

2007: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ ಅರಂಭವಾದ ಕದಂಬೋತ್ಸವದಲ್ಲಿ 2006ನೇ ಸಾಲಿನ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಮಹಾದೇವ ಪ್ರಸಾದ್ ಅವರು ಖ್ಯಾತ ವಿಮರ್ಶಕ ಡಾ. ಜಿ.ಎಸ್. ಆಮೂರ ಅವರಿಗೆ ಪ್ರದಾನ ಮಾಡಿದರು.

2007: ಲಖನೌದಲ್ಲಿ 2004 ಏಪ್ರಿಲ್ 12ರಂದು ಸಂಭವಿಸಿದ ಸೀರೆ (ವಿತರಣೆ ) ಕಾಲ್ತುಳಿತ ಪ್ರಕರಣದಲ್ಲಿ ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿ ಧುರೀಣ ಲಾಲ್ ಜಿ ಟಂಡನ್ ಆರೋಪಮುಕ್ತರು ಎಂದು ಲಖನೌ ವಿಶೇಷ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಬಾಲ ಮುಕುಂದ ತೀರ್ಪು ನೀಡಿದರು. ಟಂಡನ್ ಅವರ ಜನ್ಮದಿನಾಚರಣೆ ಅಂಗವಾಗಿ ಮಹಾನಗರದ ಚಂದ್ರಶೇಖರ ಆಜಾದ್ ಪಾರ್ಕಿನಲ್ಲಿ ನಡೆದ ಸಮಾರಂಭದಲ್ಲಿ ಈ ಕಾಲ್ತುಳಿತದ ಘಟನೆ ಸಂಭವಿಸಿ 21 ಮಂದಿ ಮಹಿಳೆಯರು ಅಸು ನೀಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ ಅಂತಿಮ ವರದಿಯನ್ನು ಪರಿಗಣಿಸಿದ ಮ್ಯಾಜಿಸ್ಟ್ರೇಟರು ಹಿರಿಯ ಬಿಜೆಪಿ ನಾಯಕನ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ವಜಾ ಮಾಡಿದರು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ 2004ರ ಏಪ್ರಿಲ್ 17ರಂದು ಮಹಾನಗರ ಪೊಲೀಸ್ ಠಾಣೆಯಲ್ಲಿ ಟಂಡನ್ ಮತ್ತು ಸಂಘಟಕ ಬ್ರಿಜೇಂದ್ರ ಮುರಾರಿ ಯಾದವ್ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ಸಲ್ಲಿಸಿದ್ದರು.. 2005ರ ಮೇ 28ರಂದು ಪೊಲೀಸರು ಅಂತಿಮ ವರದಿ ಸಲ್ಲಿಸಿದ್ದರು.. ಆದರೆ 2007ರ ಫೆಬ್ರುವರಿ 5ರಂದು ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಪೊಲೀಸ್ ತನಿಖೆ ಬಗ್ಗೆ ತನಗೆ ತೃಪ್ತಿ ಇಲ್ಲ ಎಂದು ತಿಳಿಸಿತ್ತು. ಚೇತ್ ರಾಮ್ ಎಂಬ ಇನ್ನೊಬ್ಬ ವ್ಯಕ್ತಿ ಕೂಡಾ 2006ರ ಮಾರ್ಚ್ 13ರಂದು ಇನ್ನೊಂದು ಅರ್ಜಿ ಸಲ್ಲಿಸಿ ಟಂಡನ್ ಮತ್ತು ಯಾದವ್ ಅವರ ಕಾರಣದಿಂದಾಗಿಯೇ ತನ್ನ ಪತ್ನಿ ಮೃತಳಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.. 2004ರ ಮಹಾಚುನಾವಣೆಗೆ ಕೆಲವೇ ದಿನಗಳು ಇರುವಾಗ ಈ ಕಾಲ್ತುಳಿತ ಘಟನೆ ಸಂಭವಿಸಿತ್ತು. ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಅಧಿಕಾರ ಕಳೆದುಕೊಂಡಿತ್ತು.

2006: ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ ನಗರಗಳಲ್ಲಿ ಮೆಟ್ರೊ ರೈಲು ಯೋಜನೆ ಆರಂಭಿಸಲು ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದ್ದು, ಆಯಾ ರಾಜ್ಯ ಸರ್ಕಾರಗಳು ತತ್ ಕ್ಷಣದಿಂದಲೇ ಕಾಮಗಾರಿ ಆರಂಭಿಸಬಹುದು ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ ಪ್ರಕಟಿಸಿದರು.

2006: ಸುಮಾರು 1700 ವರ್ಷಗಳಿಂದ ಕಾಣೆಯಾಗಿತ್ತು ಎನ್ನಲಾದ ಗಾಸ್ಪೆಲ್ ಆಫ್ ಜುದಾಸನ ಹಸ್ತಪ್ರತಿ ವಾಷಿಂಗ್ಟನ್ನಲ್ಲಿ ಪತ್ತೆಯಾಯಿತು. ಮೂರು ಅಥವಾ ನಾಲ್ಕನೇ ಶತಮಾನಕ್ಕೆ ಸೇರಿದ ಈ ಹಸ್ತಪ್ರತಿಯ ಅಧಿಕೃತ, ಅನುವಾದಿತ ಪ್ರತಿಯನ್ನು ವಾಷಿಂಗ್ಟನ್ನಿನಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ಏಸು ಕ್ರಿಸ್ತ ಹಾಗೂ ಜುದಾಸ್ ಬಗ್ಗೆ ಈ ಕೃತಿ ಹೊಸ ಭಾಷ್ಯ ಬರೆದಿದೆ. ಬೈಬಲ್ಲಿನಲ್ಲಿ ಕೆಟ್ಟ ವ್ಯಕ್ತಿ ಎಂಬುದಾಗಿ ಬಿಂಬಿತನಾಗಿರುವ ಜುದಾಸ್, ಕ್ರಿಸ್ತನಿಗೆ ದ್ರೋಹ ಎಸಗಿಲ್ಲ, ಆದರೆ ಕ್ರಿಸ್ತ ಖುದ್ದಾಗಿ ತನ್ನನ್ನು ಶಿಲುಬೆಗೆ ಏರಿಸುವವರಿಗೆ ಒಪ್ಪಿಸುವಂತೆ ತನ್ನ ಶಿಷ್ಯ ಜುದಾಸನಿಗೆ ಸೂಚಿಸಿದ್ದುದಾಗಿಯೂ ಇದರಿಂದ ಜುದಾಸನಿಗೆ ಬಹಳ ವ್ಯಥೆಯಾಯಿತು ಎಂದೂ ಈ ಕೃತಿ ಹೇಳಿದೆ.

2000: ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಪ್ರಕರಣ ಜಗತ್ತನ್ನು ದಂಗು ಬಡಿಸಿತು. ದೆಹಲಿ ಪೊಲೀಸರು ದಕ್ಷಿಣ ಆಫ್ರಿಕದ ಕ್ರಿಕೆಟ್ ಆಟಗಾರರಾದ ಹ್ಯಾನ್ಸಿ ಕ್ರೋನ್ಯೆ, ನಿಕಿ ಬೋಯೆ ಮತ್ತು ಹರ್ಶೆಲ್ ಗಿಬ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗಿಗೆ ಸಂಬಂಧಿಸಿದಂತೆ ವಂಚನೆ ಹಾಗೂ ಕ್ರಿಮಿನಲ್ ಸಂಚಿನ ಆರೋಪ ಹೊರಿಸಿ ಪ್ರಕರಣಗಳನ್ನು ದಾಖಲಿಸಿದರು.

1964: ಕಾಶ್ಮೀರದ ನಾಯಕ ಷೇಕ್ ಅಬ್ದುಲ್ಲ ಅವರನ್ನು ಸೆರೆಮನೆಯಿಂದ ಬಿಡುಗಡೆ ಮಾಡಲಾಯಿತು ಹಾಗೂ ಅವರ ವಿರುದ್ಧ ಹೂಡಲಾಗಿದ್ದ ಕಾಶ್ಮೀರ ಸಂಚು ಪ್ರಕರಣವನ್ನು ಹಿಂದಕ್ಕೆ ಪಡೆಯಲಾಯಿತು.

1954: ಕಲಾವಿದ ಟಿ. ರಾಧಾಕೃಷ್ಣ ಜನನ.

1953: ಡ್ಯಾಗ್ ಹ್ಯಾಮ್ಮರ್ ಷೀಲ್ಡ್ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದರು.

1948: ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಘಟನೆ (ವರ್ಲ್ಡ್ ಹೆಲ್ತ್ ಆರ್ಗನೈಸೇಷನ್) ಸ್ಥಾಪನೆಯಾಯಿತು.

1947: ಮಿಷಿಗನ್ನಿನ ಡೀಯರ್ ಬಾರ್ನ್ ಸಮೀಪ ಆಟೋಮೊಬೈಲ್ ಉದ್ಯಮಿ ಹೆನ್ರಿಫೋರ್ಡ್ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

1942: ರವಿ ಕಪೂರ್ ಹುಟ್ಟಿದ ದಿನ. ಭಾರತೀಯ ಚಿತ್ರನಟರಾದ ಇವರು `ಜಿತೇಂದ್ರ' ಎಂಬ ಹೆಸರಿನಲ್ಲಿ ಖ್ಯಾತಿ ಪಡೆದರು.

1920: ಭಾರತದ ಖ್ಯಾತ ಸಿತಾರವಾದಕ ರವಿ ಶಂಕರ್ ಹುಟ್ಟಿದ ದಿನ.

1918: ಯಕ್ಷಗಾನದ ಮಾತಿನ ಮಾಂತ್ರಿಕ, ವೇಷಧಾರಿ, ಪ್ರಸಂಗ ಕರ್ತೃ, ಮೇಳದ ಯಜಮಾನ- ಹೀಗೆ ಹತ್ತು ಹಲವು ಪ್ರತಿಭೆಗಳ ಸಂಗಮವಾಗಿದ್ದ ಶೇಣಿ ಗೋಪಾಲಕೃಷ್ಣ ಭಟ್ (7-4-1918ರಿಂದ 18-7-2006) ಅವರು ನಾರಾಯಣ ಭಟ್ಟ- ಲಕ್ಷ್ಮೀ ಅಮ್ಮ ದಂಪತಿಯ ಮಗನಾಗಿ ಕಾಸರಗೋಡು ತಾಲ್ಲೂಕು ಕುಂಬಳೆಯ ಎಡನಾಡು ಗ್ರಾಮದಲ್ಲಿ ಜನಿಸಿದರು. ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯಗಳಿಂದ ರಾಜ್ಯ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ ಎಂಬ ಹೆಗ್ಗಳಿಕೆಗೆ ಪಾತ್ರರಾದ ಶೇಣಿ ಚಿಕ್ಕಂದಿನಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಬೆಳೆಸಿಕೊಂಡವರು. ಯಕ್ಷಗಾನದಲ್ಲಿ ಅರ್ಥ ಹೇಳುವುದರ ಜೊತೆಗೆ ಮದ್ದಲೆ ವಾದನ, ಹಾಡುಗಾರಿಕೆ- ಸಾಹಿತ್ಯದಲ್ಲಿ ಒಲವು ಮೂಡಿಸಿಕೊಂಡ ಶೇಣಿ, ಮೇಘನಾದ, ರಾಮಾಂಜನೇಯ, ಮಾತೃಭಕ್ತಿ ಇತ್ಯಾದಿ ಯಕ್ಷಗಾನ ಪ್ರಸಂಗಗಳ ಕರ್ತೃ. ಇವರ ಕ್ಯಾಸೆಟ್ಟುಗಳೂ ಮಾರಾಟದ ದಾಖಲೆ ಸ್ಥಾಪಿಸಿವೆ.

1893: ರಾಮಕೃಷ್ಣ ದಾಲ್ಮಿಯಾ (1893-1978) ಹುಟ್ಟಿದ ದಿನ. ಇವರು ಭಾರತದ ಖ್ಯಾತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರು.

1827: ಜಾನ್ ವಾಕರ್ ಎಂಬಾತ ಸಲ್ಫರ್ ಪೆರಾಕ್ಸೈಡ್ ಬಳಿದ ಒಂದು ಯಾರ್ಡ್ ಉದ್ದದ ಕಡ್ಡಿಯನ್ನು ನಿರ್ಮಿಸಿದ. ಬಳಕೆದಾರರಿಗೆ ಅನುಕೂಲಕರವಾಗಿ ಇಲ್ಲದೇ ಹೋದರೂ ಇದು ವಿಶ್ವದ ಪ್ರಥಮ ಗೀರುಕಡ್ಡಿ (ಮ್ಯಾಚ್ ಸ್ಟಿಕ್) ಎನಿಸಿಕೊಂಡಿತು.

1770: ವಿಲಿಯಂ ವರ್ಡ್ಸ್ ವರ್ತ್ (1770-1850) ಹುಟ್ಟಿದ ದಿನ. ಈತ ಇಂಗ್ಲೆಂಡಿನ ಖ್ಯಾತ ರೊಮ್ಯಾಂಟಿಕ್ ಕವಿ.

1506: ಸೇಂಟ್ ಫ್ರಾನ್ಸಿಸ್ ಝೇವಿಯರ್ (1506-1552) ಜನ್ಮದಿನ. ಈತ ಆಧುನಿಕ ಕಾಲದ ಖ್ಯಾತ ರೋಮನ್ ಕ್ಯಾಥೋಲಿಕ್ ಪ್ರಚಾರಕ. ಭಾರತ, ಜಪಾನ್ ಮತ್ತಿತರ ರಾಷ್ಟಗಳಲ್ಲಿ ಕ್ರೈಸ್ತಧರ್ಮ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ.

No comments:

Post a Comment