ನಾನು ಮೆಚ್ಚಿದ ವಾಟ್ಸಪ್

Friday, April 13, 2018

ಇಂದಿನ ಇತಿಹಾಸ History Today ಏಪ್ರಿಲ್ 12

ಇಂದಿನ ಇತಿಹಾಸ History Today ಏಪ್ರಿಲ್ 12
2018: ಶ್ರೀಹರಿಕೋಟ:  ‘ನ್ಯಾವ್‌ಐಸಿ ದಿಕ್ಸೂಚಿ (ನ್ಯಾವಿಗೇಷನ್) ಉಪಗ್ರಹ ಸಮೂಹದ ಭಾಗವಾಗಿ ಉಡಾವಣೆ ಮಾಡಿದ ಎಂಟನೇ ಉಪಗ್ರಹ ಐಆರ್‌ಎನ್‌ಎಸ್‌ಎಸ್-೧ಐ ಉಪಗ್ರಹವನ್ನು ಬಾಹ್ಯಾಕಾಶ ಕಕ್ಷೆಗೆ ಸೇರಿಸುವಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ) ಯಶಸ್ವಿಯಾಯಿತು.  ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ ೪ ಗಂಟೆಗೆ ಪಿಎಸ್‌ಎಲ್ವಿ-ಸಿ೪೧ ಮೂಲಕ  ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಉಡಾವಣೆ ಸಂಪೂರ್ಣವಾಗಿ ಯಶಸ್ವಿಯಾಗಿದೆ ಎಂದು ಇಸ್ರೊ ವಿಜ್ಞಾನಿಗಳು ತಿಳಿಸಿದರು. ಐಆರ್‌ಎನ್‌ಎಸ್‌ಎಸ್-೧ಎ ಈವರೆಗೆ ಉಡಾವಣೆ ಮಾಡಲಾದ ಏಳು ಉಪಗ್ರಹಗಳ ಪೈಕಿ ಮೊದಲನೆಯದು. ರೂಬಿಡಿಯಂ ಪರಮಾಣು ಗಡಿಯಾರ ನಿಷ್ಕ್ರಿಯಗೊಂಡ ಕಾರಣ ಆ ಉಪಗ್ರಹ ಕಾರ್ಯನಿರ್ವಹಿಸಲು ವಿಫಲವಾಗಿತ್ತು.  ಈಗ ಪರ್ಯಾಯ ಉಪಗ್ರಹ ಉಡಾವಣೆಯ ಎರಡನೇ ಪ್ರಯತ್ನ ಯಶಸ್ವಿಯಾಯಿತು.  ೧೪೨೫ ಕಿ,ಗ್ರಾಂ ತೂಕದ ಈ ಉಪಗ್ರಹವು  ಈ ಉಪಗ್ರಹ ಸರಣಿಯಲ್ಲಿ ಎಂಟನೆಯದು.  ಕಳೆದ ಆಗಸ್ಟ್ ತಿಂಗಳಲ್ಲಿ ಉಡಾವಣೆ ಮಾಡಲಾಗಿದ್ದ ಮೊದಲ ಪರ್ಯಾಯ ಉಪಗ್ರಹ ‘ಐಆರ್‌ಎನ್‌ಎಸ್‌ಎಸ್-೧ಎಚ್ದಿಂದ ಉಷ್ಣ ನಿರೋಧಕ ಕವಚವು ಕಳಚಿಕೊಳ್ಳದ ಕಾರಣ ಆ ಪ್ರಯತ್ನ ಸಫಲವಾಗಿರಲಿಲ್ಲ.

2018: ತಿರುವಿದಂದಾಯಿ (ಚೆನ್ನೈ ಹೊರವಲಯ): ರಕ್ಷಣಾ ಉಪಕರಣಗಳ ದಾಸ್ತಾನು ಶಿಥಿಲತೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿನ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡರು ಮತ್ತು ಇಂತಹ ’ಸೋಮಾರಿತನವು ರಾಷ್ಟ್ರಕ್ಕೆ ಹಾನಿ ಉಂಟು ಮಾಡಿದೆ ಎಂದು ಹೇಳಿದರು.  ‘ಸರ್ಕಾರಿ ಆಡಳಿತದ ಇತರ ಹಲವಾರು ಅಂಶಗಳಂತೆ ರಕ್ಷಣಾ ಸಿದ್ಧತೆಯಂತಹ ನಿರ್ಣಾಯಕ ನೀತಿ ವಿಚಾರಕ್ಕೂ ಲಕ್ವ ಹೊಡೆದಿತ್ತು. ಇಂತಹ ಸೋಮಾರಿತನ, ಅಸಾಮರ್ಥ್ಯ ಅಥವಾ ಕೆಲವು ರಹಸ್ಯ ಉದ್ದೇಶಗಳು ರಾಷ್ಟ್ರಕ್ಕೆ ಹಾನಿ ಮಾಡಿದ್ದನ್ನು ನಾವು ಕಂಡಿದ್ದೇವೆ ಎಂದು ಪ್ರಧಾನಿ ಇಲ್ಲಿ ರಕ್ಷಣಾ ಪ್ರದರ್ಶನ ೨೦೧೮ನ್ನು ಉದ್ಘಾಟಿಸುತ್ತಾ ನುಡಿದರು.  ಈ ವಿಷಯಗಳನ್ನು ತುಂಬಾ ಹಿಂದೆಯೇ ಗಮನಿಸಬೇಕಾಗಿತ್ತು. ಆದರೆ ಈಗ ನಮ್ಮ ಸರ್ಕಾರ ಇದನ್ನು ಕೈಗೆತ್ತಿಕೊಂಡಿದೆ ಎಂದು ಅವರು ಹೇಳಿದರು.  ಭಾರತೀಯ ಸೇನಾ ಯೋಧರಿಗೆ ಗುಂಡು ನಿರೋಧಕ ಜಾಕೆಟ್ ಕೊಡುವ ವಿಚಾರವನ್ನು ಹಲವಾರು ವರ್ಷಗಳವರೆಗೆ ಹೇಗೆ ನನೆಗುದಿಯಲ್ಲಿ ಇಡಲಾಗಿತ್ತು ಎಂಬುದನ್ನು ನೀವು ನೋಡಿದ್ದೀರಿ. ಭಾರತದಲ್ಲಿಯೇ ರಕ್ಷಣಾ ಉತ್ಪಾದನೆಗೆ ಒತ್ತು ಕೊಡುವ ಒಪ್ಪಂದದ ಮೂಲಕ ನಾವು ಈ ಪ್ರಕ್ರಿಯೆಗೆ ಯಶಸ್ವೀ ಕೊನೆ ತಂದಿರುವುದನ್ನೂ ನೀವು ನೋಡಿದ್ದೀರಿ ಎಂದು ಅವರು ನುಡಿದರು.  ‘ಎಂದೂ ಕೊನೆಯನ್ನೇ ಕಾಣದ ಸುದೀರ್ಘ ಪ್ರಕ್ರಿಯೆ ಎಂಬುದಾಗಿ ಯುದ್ಧ ವಿಮಾನ ಖರೀದಿಯ ಹಿಂದಿನ ಪ್ರಕ್ರಿಯೆಯನ್ನು ಕಾಂಗ್ರೆಸ್ ಹೆಸರನ್ನು ಪ್ರಸ್ತಾಪಿಸದೆಯೇ ಅವರು ಟೀಕಿಸಿದರು.  ದಿಟ್ಟ ಕ್ರಮ: ನಮ್ಮ ತತ್ ಕ್ಷಣದ ಅಗತ್ಯಗಳನ್ನು ಪೂರೈಸುವ ’ದಿಟ್ಟ ಕ್ರಮವನ್ನು ತಮ್ಮ ಸರ್ಕಾರ ಕೈಗೊಂಡಿತು ಎಂದು ಹೇಳಿದ ಮೋದಿ, ೧೧೦ ಯುದ್ಧ ವಿಮಾನಗಳನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಉದಾಹರಿಸಿದರು. ಇದಕ್ಕಾಗಿ ಇತ್ತೀಚೆಗೆ ಟೆಂಡರುಗಳನ್ನೂ ಕರೆಯಲಾಗಿದೆ ಎಂದು ಪ್ರಧಾನಿ ನುಡಿದರು. ’ಕಣ್ಣಿಗೆ ಕಾಣುವಂತಹ ಫಲಿತಾಂಶಗಳಿಲ್ಲದ ಮಾತುಕತೆಗಳಲ್ಲಿ ೧೦ ವರ್ಷಗಳನ್ನು ಕಳೆಯಲು ನಾವು ಇಚ್ಛಿಸುವುದಿಲ್ಲ ಎಂದು ಪ್ರಧಾನಿ ನುಡಿದರು.   ‘ನಾವು ನಿಮ್ಮೊಂದಿಗೆ (ರಕ್ಷಣಾ ಉತ್ಪಾದನೆಗಾರರು) ನಮ್ಮ ರಕ್ಷಣಾ ಪಡೆಗಳು ಸಮಯಕ್ಕೆ ಅನುಗುಣವಾದ ಸಿದ್ಧತೆ ಹೊಂದಿರಬೇಕು ಎಂಬ ಗುರಿಯೊಂದಿಗೆ ಕೆಲಸ ಮಾಡುತ್ತೇವೆ ಮತ್ತು ಇದನ್ನು ಸಾಧಿಸಲು ಅಗತ್ಯ ದೇಶೀ ಉತ್ಪಾದನಾ ಪರಿಸರ ಸೃಷ್ಟಿಸಲು ಯತ್ನಿಸುತ್ತಿದ್ದೇವೆ ಎಂದು ಮೋದಿ ಹೇಳಿದರು.   ‘ದೇಶಾದ್ಯಂತ ರಕ್ಷಣಾ ಆವಿಷ್ಕಾರ ಕೇಂದ್ರಗಳನ್ನು ಸ್ಥಾಪಿಸುವ ಸಲುವಾಗಿ ’ರಕ್ಷಣಾ ಶ್ರೇಷ್ಠತೆಗಾಗಿ ಆವಿಷ್ಕಾರ (ಐಡಿಇಕ್ಸ್) ಯೋಜನೆಯನ್ನು ಕೂಡಾ ಪ್ರಧಾನಿ ಉದ್ಘಾಟಿಸಿದರು. ಇವುಗಳ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಸ್ಟಾರ್ಟಪ್‌ಗಳಿಗೆ ಬೆಂಬಲ ನೀಡಲು ಅಗತ್ಯ ಮೂಲ ಸವಲತ್ತು ಒದಗಿಸಲಾಗುವುದು ಎಂದು ಅವರು ನುಡಿದರು.
ರಕ್ಷಣಾ ಅಂಕುರ ನೀತಿಯನ್ನು (ಡಿಫೆನ್ಸ್ ಆಫ್ಸೆಟ್ ಪಾಲಿಸಿ) ಸರಳಗೊಳಿಸಲಾಗುತ್ತದೆ ಎಂದು ರಕ್ಷಣಾ ಸಚಿವ ನಿರ್ಮಲಾ ಸೀತಾರಾಮನ್ ನುಡಿದರು. ’ಅಂಕುರ ಬದ್ಧತೆಯ ಈಡೇರಿಸುವಿಕೆ ಇನ್ನಷ್ಟು ಸರಳವಾಗದಲಿದೆ. ನೀವು ಭಾರತೀಯ ಆಪ್ಸೆಟ್ ಪಾಲುದಾರರು ಅಥವಾ ಉತ್ಪನ್ನಗಳನು ಆಯ್ಕೆ ಮಾಡುವ ಅವಕಾಶ ನಿಮಗೆ ಸಿಗಲಿದೆ ಎಂದು ಅವರು ಹೇಳಿದರು.  ಸೇಲಂನಲ್ಲಿ ಹಗುರ ಯುದ್ಧ ವಿಮಾನ ತಯಾರಿಸುವ ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್)ನ ಉತ್ಪಾದನಾ ಘಟಕವನ್ನು ಮತ್ತು ರಕ್ಷಣಾ ಎಂಆರ್‌ಒವನ್ನು ಕೊಯಮತ್ತೂರಿನಲ್ಲಿ ಸ್ಥಾಪಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಡಪಾಡಿ ಕೆ. ಪಳನಿಸ್ವಾಮಿ ಆಗ್ರಹಿಸಿದರು.  ರಕ್ಷಣಾ ಕಾರಿಡಾರ್ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುತ್ತಿವೆ ಎಂದು ಉಪ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ನುಡಿದರು.

2018: ನವದೆಹಲಿ: ’ಮಾಸ್ಟರ್ ಆಫ್ ರೋಸ್ಟರ್ ಆಗಿ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರ ಅಧಿಕಾರವನ್ನು ನಿರಂಕುಶ, ಬೇರಿಲ್ಲದ, ಅನಿಯಂತ್ರಿತ ಅಧಿಕಾರಕ್ಕೆ ಇಳಿಸಬಾರದು ಎಂಬುದಾಗಿ ಘೋಷಿಸುವಂತೆ ಕೋರಿ ಮಾಜಿ ಕೇಂದ್ರ ಕಾನೂನು ಸಚಿವ ಶಾಂತಿಭೂಷಣ್ ಅವರು ಸಲ್ಲಿಸಿದ ಅರ್ಜಿಯೊಂದನ್ನು ತುರ್ತು ವಿಚಾರಣೆಗಾಗಿ ಪ್ರಸ್ತಾಪಿಸಲು ನ್ಯಾಯಮೂರ್ತಿ ಜೆಸ್ಟಿ ಚೆಲಮೇಶ್ವರ್ ನೇತೃತ್ವದ ಸುಪ್ರೀಂಕೋರ್ಟ್ ಪೀಠವು  ನಿರಾಕರಿಸಿತು.  ‘ಎರಡೇ ತಿಂಗಳುಗಳು ಉಳಿದಿರುವಾಗ, ಯಾವುದೋ ಕಚೇರಿಯನ್ನು ದೋಚಲು ಯತ್ನಿಸುತ್ತಿದ್ದೇನೆ ಎಂಬ ಮಾತುಗಳನ್ನು ಕೇಳಲು ನಾನು ಬಯಸುವುದಿಲ್ಲ. ನನ್ನ ಆದೇಶವನ್ನು ೨೪ ಗಂಟೆಗಳ ಒಳಗಾಗಿ ಬದಲಾಯಿಸುವ ಇನ್ನೊಂದು ಆದೇಶ ಹೊರಬೀಳುವುದನ್ನೂ ನಾನು ಬಯಸುವುದಿಲ್ಲ. ರಾಷ್ಟ್ರವು ಕಾಲಕ್ರಮದಲ್ಲಿ ಇದನ್ನು ನಿರ್ಧರಿಸಲಿ ಎಂದು ಚೆಲಮೇಶ್ವರ್ ನುಡಿದರು.  ಆಗ ನ್ಯಾಯಮೂರ್ತಿ ಚೆಲಮೇಶ್ವರ್ ಅವರ ಜೊತೆಗೆ ಪೀಠದಲ್ಲಿದ್ದ ಇನ್ನೊಬ್ಬ ನ್ಯಾಯಮೂರ್ತಿ ಸಂಜಯ್ ಕೃಷ್ಣ ಕೌಲ್ ಅವರು ಅರ್ಜಿ ಸಲ್ಲಿಸಿದ್ದ ವಕೀಲ ಪ್ರಶಾಂತ ಭೂಷಣ್ ಅವರಿಗೆ ’ತಮ್ಮ ಹಿರಿಯ ಸಹೋದರ ನ್ಯಾಯಮೂರ್ತಿ ಚೆಲಮೇಶ್ವರ್ ಅವರು ನಿವೃತ್ತಿಯ ಅಂಚಿನಲ್ಲಿದ್ದಾರೆ, ಅವರನ್ನು ವಿವಾದಕ್ಕೆ ಎಳೆತರಬಾರದು ಎಂದು ಕೋರಿದರು.   ಪ್ರಶಾಂತ ಭೂಷಣ್ ಅವರು ಸುಪ್ರೀಂಕೋರ್ಟ್ ರಿಜಿಸ್ಟ್ರಿಗೆ ತಮ್ಮ ಅರ್ಜಿಯನ್ನು ಅದು ನೇರವಾಗಿ ಸಿಜೆಐ ಆಗಿ ಅವರ ಅಧಿಕಾರಗಳಿಗೆ ಸಂಬಂಧಿಸಿದ್ದಾದ್ದರಿಂದ ಸಿಜೆಐ ದೀಪಕ್ ಮಿಶ್ರ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಇರಿಸಬಾರದು ಎಂದು ಪತ್ರ ಬರೆದಿದ್ದರು.  ಏಪ್ರಿಲ್ ೧೧ರಂದು ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ನೀಡಿದ ತೀರ್ಪಿನ ಪರಿಣಾಮವಾಗಿ ತಮ್ಮ ಅರ್ಜಿಯ ಹಣೆಬರಹ ಬಗ್ಗೆ ತಮಗೆ ಚಿಂತೆಯಾಗಿದೆ. ಆದ್ದರಿಂದ ಅದನ್ನು ತುರ್ತು ವಿಚಾರಣೆಗೆ ಪ್ರಸ್ತಾಪಿಸಬೇಕು ಎಂದು ನ್ಯಾಯಮೂರ್ತಿ ಚೆಲಮೇಶ್ವರ್ ಪೀಠಕ್ಕೆ ಪ್ರಶಾಂತ ಭೂಷಣ್ ಅವರು ಅರಿಕೆ ಮಾಡಿಕೊಂಡಿದ್ದರು. ಸಿಜೆಐ ದೀಪಕ್ ಮಿಶ್ರ ಅವರ ಪೀಠವು ಏಪ್ರಿಲ್ ೧೧ರಂದು ಮಾಸ್ಟರ್ ಆಫ್ ರೋಸ್ಟರ್ ಆಗಿ ಪೀಠಗಳನ್ನು ರಚಿಸುವ ಮತ್ತು ನ್ಯಾಯಮೂರ್ತಿಗಳಿಗೆ ಪ್ರಕರಣಗಳನ್ನು ನಿಯೋಜಿಸುವ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿ ಅವರು ಪಾರಮ್ಯ ಹೊಂದಿದ್ದಾರೆ ಎಂದು ಬುಧವಾರ ತೀರ್ಪು ನೀಡಿತ್ತು.  ಸಿಜೆಐ ಅವರು ಅರ್ಜಿಯನ್ನು ಪೀಠಕ್ಕೆ ನಿಯೋಜಿಸುವ ಬದಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನಿರ್ಧರಿಸುವ ಮೂವರು ಹಿರಿಯ ನ್ಯಾಯಮೂರ್ತಿಗಳ ಮುಂದೆ ತಮ್ಮ ಅರ್ಜಿಯನ್ನು ಇರಿಸಬೇಕು ಎಂದು ಶಾಂತಿಭೂಷಣ್ ಕೋರಿದ್ದರು.  ಸುಪ್ರೀಂಕೋರ್ಟ್ ನಿಯಮಗಳು ವಿವಿಧ ಪೀಠಗಳಿಗೆ ಪ್ರಕರಣಗಳನ್ನು ನಿಯೋಜಿಸುವ ಸಿಜೆಐ ಅವರ ಆಡಳಿತಾತ್ಮಕ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಗೆ ಮಹತ್ವ ನೀಡುತ್ತವೆ ಎಂದು ಶಾಂತಿ ಭೂಷಣ್ ಹೇಳಿದ್ದರು. ಪ್ರಶಾಂತ ಭೂಷಣ್ ಅವರು ಬಳಿಕ ವಿಷಯವನ್ನು ಸಿಜೆಐ ಅವರ ನ್ಯಾಯಾಲಯದಲ್ಲಿ ಪ್ರಸ್ತಾಪಿಸಿದರು. ಅರ್ಜಿಯನ್ನು ಏಪ್ರಿಲ್ ೨ರಂದು ಸಲ್ಲಿಸಲಾಗಿದೆ ಎಂದು ಅವರು ಗಮನ ಸೆಳೆದರು. ತಮ್ಮ ಅರ್ಜಿಯನ್ನು ರಿಜಿಸ್ಟ್ರಿಯು ನೋಂದಾಯಿಸದ ಕಾರಣ ಬಳಿಕ, ಸುಪ್ರೀಂಕೋರ್ಟ್ ಸೆಕ್ರೆಟರಿ ಜನರಲ್ ಅವರಿಗೆ ಸಿಜೆಐ ನಂತರದ ಮೂವರು ಅತಿ ಹಿರಿಯ ನ್ಯಾಯಮೂರ್ತಿಗಳ ಮುಂದೆ ಅರ್ಜಿ ಮಂಡಿಸುವಂತೆ ಕೋರಿ ಬರೆದಿದ್ದ ಪತ್ರಗಳನ್ನೂ ಸಿಜೆಐ ಪೀಠಕ್ಕೆ ಅವರು ಒಪ್ಪಿಸಿದರು. ಸಿಜೆಐ ಅವರು ವಿಷಯವನ್ನು ಪರಿಶೀಲಿಸುವುದಾಗಿ ಹೇಳಿದರು.   ‘ಈ ಸಂದರ್ಭದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಪದವನ್ನು ಹಿರಿಯ ನ್ಯಾಯಮೂರ್ತಿಗಳ ಕೊಲಿಜಿಯಂ ಎಂಬುದಾಗಿ ಅರ್ಥೈಸಬೇಕು. ಪ್ರಕರಣಗಳ ನಿಯೋಜನೆ ಸಿಜೆಐ ಅವರಿಂದ ಏಕಪಕ್ಷೀಯವಾಗಿ ನಡೆಯಬಾರದು, ಬದಲಿಗೆ ಕೊಲಿಜಿಯಂನಿಂದ ಸಾಮೂಹಿಕವಾಗಿ ನಡೆಯಬೇಕು ಎಂದು ಅರ್ಜಿ ಕೋರಿತು.  ‘ಮಾಸ್ಟರ್ ಆಫ್ ರೋಸ್ಟರ್ ಆಗಿ ಮುಖ್ಯ ನ್ಯಾಯಮೂರ್ತಿ ಅವರ ಆಡಳಿತಾತ್ಮಕ ಅಧಿಕಾರವನ್ನು ಸ್ಪಷ್ಟ ಪಡಿಸಬೇಕು ಮತ್ತು ಪ್ರಕರಣಗಳ ನಿಯೋಜನೆಗೆ ರೋಸ್ಟರ್ ತಯಾರಿಸಲು ಅನುಸರಿಸಬೇಕಾದ ನಿಯಮಾವಳಿಗಳು ಮತ್ತು ತತ್ವಗಳನ್ನು ತಿಳಿಸಬೇಕು ಎಂದೂ ಅರ್ಜಿ ಕೋರಿತು. ಮಾಸ್ಟರ್ ಆಫ್ ರೋಸ್ಟರ್ ಮಾರ್ಗದರ್ಶನವಿಲ್ಲದ, ಕಡಿವಾಣವಿಲ್ಲದ ವಿವೇಚನೆರಹಿತ ಅಧಿಕಾರವಾಗಬಾರದು ಮತ್ತು ಆಯ್ದ ನ್ಯಾಯಮೂರ್ತಿಗಳ ಪೀಠಕ್ಕೆ ಅಥವಾ ನಿರ್ದಿಷ್ಟ ನ್ಯಾಯಮೂರ್ತಿಗಳಿಗೆ ನಿಯೋಜಿಸುವ ಮೂಲಕ ಭಾರತದ ಮುಖ್ಯ ನ್ಯಾಯಮೂರ್ತಿ ಅವರಿಂದ ನಿರಂಕುಶವಾಗಿ ಚಲಾವಣೆಯಾಗಬಾರದು ಎಂದೂ ಅರ್ಜಿ ಕೋರಿತು. ‘ಮುಖ್ಯ ನ್ಯಾಯಮೂರ್ತಿ ಒಬ್ಬರ ಅಭಿಪ್ರಾಯಕ್ಕಿಂತ ಹಿರಿಯ ನ್ಯಾಯಮೂರ್ತಿಗಳ ಕೊಲಿಜಿಯಂನ ಸಾಮೂಹಿಕ ಅಭಿಪ್ರಾಯ ಹೆಚ್ಚು ಕ್ಷೇಮಕರ ಎಂದೂ ಅರ್ಜಿ ಹೇಳಿತು.  ಇದಕ್ಕೆ ಅಂತಾರಾಷ್ಟ್ರೀಯ ನಿದರ್ಶನಗಳನ್ನೂ ಅವರು ಅರ್ಜಿಯಲ್ಲಿ ನೀಡಿದರು. ಶಾಂತಿ ಭೂಷಣ್ ಅವರ ಅರ್ಜಿಯು ಅಲ್ಪಾವಧಿಯಲ್ಲಿ ರಚನೆಗೊಂಡ ಸಿಜೆಐ ಮಿಶ್ರ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠವು ಸಿಜೆಐ ಅವರನ್ನು ಮಾಸ್ಟರ್ ಆಫ್ ರೋಸ್ಟರ್ ಎಂಬುದಾಗಿ ಘೋಷಿಸಿದ ಬಳಿಕದ ಸುಪ್ರೀಂಕೋರ್ಟ್ ಇತಿಹಾಸದ ಹೊಸ ಅಧ್ಯಾಯದ ಮುಚ್ಚಳವನ್ನು ತೆರೆಯಲಿದೆ. ಆ ಸಮಯದಲ್ಲಿ ಸುಪ್ರೀಂಕೋರ್ಟಿನ ಪಂಚಸದಸ್ಯ ಪೀಠವು ಕೇವಲ ಹಿಂದಿನ ದಿನವಷ್ಟೇ ನ್ಯಾಯಮೂರ್ತಿ ಚೆಲಮೇಶ್ವರ ಪೀಠವು ಈ ಸಂಬಂಧ ನೀಡಿದ್ದ ಆದೇಶವನ್ನು ವಜಾಗೊಳಿಸಿತ್ತು.

2018: ಕೋಲ್ಕತ: ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಯ ಪ್ರಕ್ರಿಯೆಗಳನ್ನು ತನ್ನ ಮುಂದಿನ ಆದೇಶದವರೆಗೆ ಕಲ್ಕತ್ತ ಹೈಕೋರ್ಟ್ ತಡೆ ಹಿಡಿಯಿತು.  ನ್ಯಾಯಮೂರ್ತಿ ಸುಬ್ರತ ತಲುಕ್ದರ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ (ಎಸ್ ಇ ಸಿ) ಪಂಚಾಯತ್ ಚುನಾವಣೆ ಕುರಿತು ಸುಪ್ರೀಂಕೋರ್ಟ್ ಮತ್ತು ಕಲ್ಕತ್ತ ಹೈಕೋರ್ಟ್ ನೀಡಿದ್ದ ಆದೇಶಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ವಿವರ ನೀಡುವಂತೆ ನಿರ್ದೇಶಿಸಿದರು.  ಗ್ರಾಮೀಣ ಚುನಾವಣೆಗಳಲ್ಲಿ ನಾಮಪತ್ರಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂಬುದಾಗಿ ದೂರು ನೀಡಿದವರ ಸಮಸ್ಯೆಗಳನ್ನು ಪರಿಹರಿಸಲು ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಕೋರ್ಟ್ ರಾಜ್ಯ ಚುನಾವಣಾ ಆಯೋಗವನ್ನು ಪ್ರಶ್ನಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ ೧೬ಕ್ಕೆ ನಿಗದಿ ಪಡಿಸಲಾಗಿದ್ದು, ಅಲ್ಲಿಯವರೆಗೆ ನಾಮಪತ್ರಗಳ ಪರಿಶೀಲನಾ ಕಾರ್ಯವನ್ನು ಅಮಾನತುಗೊಳಿಸಲಾಯಿತು.  ಏಪ್ರಿಲ್ ೯ರಿಂದ ೧೧ರ ನಡುವಣ ಅವಧಿಯಲ್ಲಿ ಸುಪ್ರೀಂಕೋರ್ಟ್ ಮತ್ತು ಕಲ್ಕತ್ತ ಹೈಕೋರ್ಟ್ ರಾಜ್ಯದ ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಹಲವಾರು ಆದೇಶಗಳನ್ನು ನೀಡಿದ್ದವು.  ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಏಪ್ರಿಲ್ ೨ರಂದು ಆರಂಭವಾಗಿತ್ತು. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ ೯ ಕೊನೆಯ ದಿನವಾಗಿತ್ತು. ಆಡಳಿತ ಪಕ್ಷವು ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸದಂತೆ ಭೀತಿ ಹುಟ್ಟು ಹಾಕುವ ಮೂಲಕ ತಡೆಯುತ್ತಿದೆ ಎಂದು ವಿರೋಧ ಪಕ್ಷಗಳು ಆಪಾದಿಸಿದ್ದವು.  ಏಪ್ರಿಲ್ ೯ರ ಸಂಜೆ ರಾಜ್ಯ ಚುನಾವಣಾ ಆಯೋಗವು ನಾಮಪತ್ರ ಸಲ್ಲಿಕೆ ಗಡುವನ್ನು ಒಂದು ದಿನ ವಿಸ್ತರಿಸಿ ಅಧಿಸೂಚನೆ ಹೊರಡಿಸಿತ್ತು. ತೃಣಮೂಲ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರ ಇದರ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ರಾಜ್ಯ ಚುನಾವಣಾ ಆಯೋಗ ಏಪ್ರಿಲ್ ೧೦ರಂದು ತನ್ನ ನಿರ್ಧಾರವನ್ನು ಹಿಂತೆಗೆದಕೊಂಡಿತ್ತು.  ಚುನಾವಣಾ ಆಯೋಗದ ಈ ನಿರ್ಧಾರಗಳ ವಿರುದ್ಧ ಬಿಜೆಪಿ   ಸುಪ್ರೀಂಕೋರ್ಟ್ ಮತ್ತು ಹೈಕೋರ್ಟಿಗೆ ಅರ್ಜಿಗಳನ್ನು ಸಲ್ಲಿಸಿತ್ತು.  ಪಶ್ಚಿಮ ಬಂಗಾಳದ ೨೦ ಜಿಲ್ಲೆಗಳಲ್ಲಿ ಮೂರು ಹಂತದ ಪಂಚಾಯತ್ ಚುನಾವಣೆಗೆ ಮೇ ೧, ೩ ಮತ್ತು ೫ನೇ ದಿನಾಂಕಗಳನ್ನು ನಿಗದಿಪಡಿಸಲಾಗಿತ್ತು.

2018: ಕರಾಚಿ: ೨೪ರ ಹರೆಯದ ಗರ್ಭಿಣಿ ಮಹಿಳೆಯೊಬ್ಬಳು ಹಾಡುವಾಗ ಎದ್ದು ನಿಲ್ಲಲಿಲ್ಲ ಎಂದು ಸಿಟ್ಟಿಗೆದ್ದ ವ್ಯಕ್ತಿಯೊಬ್ಬ ಆಕೆಯನ್ನು ಗುಂಡಿಟ್ಟು ಕೊಂದ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ಘಟಿಸಿತು.  ಹಾಡುವಾಗ ಎದ್ದು ನಿಂತು ಹಾಡುವಂತೆ ತಾರಿಖ್ ಜತೋಯಿ ಎಂಬ ವ್ಯಕ್ತಿ ಗಾಯಕಿ ಸಮೀನಾ ಸಮೂನ್ ಅವರನ್ನು ಆಗ್ರಹಿಸಿದ. ಗರ್ಭಿಣಿಯಾಗಿದ್ದ ಕಾರಣ ತತ್ ಕ್ಷಣ ಎದ್ದು ನಿಂತು ಹಾಡಲು ಆಕೆಗೆ ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದರು.   ಬಳಿಕ ಆಕೆ ಕಷ್ಟ ಪಟ್ಟು ಎದ್ದು ನಿಂತಳು. ತತ್ ಕ್ಷಣವೇ ತಾರಿಖ್ ಜತೋಯಿ ಆಕೆಯ ಮೇಲೆ ಗುಂಡು ಹಾರಿಸಿದ. ಆಕೆಯನ್ನು ಸಮೀಪದ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಗಾಯಗಳ ಪರಿಣಾಮವಾಗಿ ಆಕೆ ಅಸು ನೀಗಿದಳು ಎಂದು ಪೊಲೀಸರು ಹೇಳಿದರು.  ಮಾನವ ಹಕ್ಕುಗಳ ಕಾರ್ಯಕರ್ತ ಕಪಿಲ್ ದೇವ್ ಅವರು ಗರ್ಭಿಣಿ ಗಾಯಕಿಗೆ ಗುಂಡು ಹಾರಿಸಿದ ಘಟನೆಯ ವಿಡಿಯೊ ದೃಶ್ಯಾವಳಿಯನ್ನು ಟ್ವಿಟ್ಟರಿನಲ್ಲಿ ಶೇರ್ ಮಾಡಿದರು.  ‘ಆರು ತಿಂಗಳ ಗರ್ಭಿಣಿ ಸಿಂಧಿ ಗಾಯಕಿ ಸಮೀನಾ ಸಿಂಧು ಅವರನ್ನು ಲಾರ್ಖಾನದಲ್ಲಿ ತಾರಿಕ್ ಜತೋಯಿ ಎಂಬ ವ್ಯಕ್ತಿ ಗುಂಡು ಹಾರಿಸಿ ಕೊಂದಿದ್ದಾನೆ. ಆತ ಆಕೆಯನ್ನು ಎದ್ದು ನಿಂತು ಹಾಡುವಂತೆ ಆಗ್ರಹಿಸಿದ. ಆಕೆ ನಿರಾಕರಿಸಿದಾಗ ಬೆದರಿಕೆ ಹಾಕಿದ. ಕಡೆಗೆ ಆಕೆ ಎದ್ದು ನಿಂತಾಗ ಆಕೆಯ ಮೇಲೆ ಗುಂಡು ಹಾರಿಸಿದ. ಬಳಿಕ ಜಂತೋಯಿಗಳು ಪ್ರಕರಣ ಹಿಂತೆಗೆದುಕೊಳ್ಳುವಂತೆ ಗಂಡನನ್ನು ಆಗ್ರಹಿಸುತ್ತಿದ್ದಾರೆ ಎಂದು ಕಪಿಲ್ ದೇವ್ ಟ್ವೀಟ್ ಮಾಡಿದರು.  ಪೊಲೀಸರು ತಾರಿಕ್ ಜತೋಯಿಯ ಇಬ್ಬರು ಸಹಚರರನ್ನು ಬಂಧಿಸಿದರು.  ಗಾಯಕಿಯ ಗಂಡ ತನ್ನ ಪತ್ನಿ ಗರ್ಭಿಣಿಯಾಗಿದ್ದುದರಿಂದ ಅವಳಿ ಕೊಲೆ ಪ್ರಕರಣ ದಾಖಲಿಸಿದರು.

2018: ನವದೆಹಲಿ: ಮುಖ್ಯ ಚುನಾವಣಾ ಕಮೀಷನರ್ ಶಿಫಾರಸು ಆಣತಿ ಮೇರೆಗೆ ಚುನಾವಣಾ ಕಮೀಷನರ್ ಗಳನ್ನು ಕಿತ್ತು ಹಾಕದಂತೆ ರಕ್ಷಣೆ ಒದಗಿಸಲು ಮತ್ತು ’ರಾಜಕೀಯ ಒತ್ತಡದಿಂದ ಮುಕ್ತವಾಗಲು ಚುನಾವಣಾ ಆಯೋಗಕ್ಕೆ ನಿಯಮ ರೂಪಿಸುವ ಅಧಿಕಾರ ನೀಡಲು ಸಂವಿಧಾನ ತಿದ್ದುಪಡಿ ಮಾಡಬೇಕು ಎಂದು ಭಾರತದ ಚುನಾವಣಾ ಆಯೋಗವು ಸುಪ್ರೀಂಕೋಟಿಗೆ ಮನವಿ ಮಾಡಿತು. ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಅವರು ಕಳೆದ ವರ್ಷ ಚುನಾವಣಾ ಕಮೀಷನರ್‌ಗಳಿಗೆ ಹೆಚ್ಚಿನ ರಕ್ಷಣೆ ನೀಡುವಂತೆ ಕೋರಿ ಸಲ್ಲಿಸಿದ್ದ ಮನವಿ ಸಂಬಂಧ ನೀಡಲಾದ ನೋಟಿಸಿಗೆ ನೀಡಿರುವ ಉತ್ತರದಲ್ಲಿ ಚುನಾವಣಾ ಆಯೋಗವು ಈ ಮನವಿ ಮಾಡಿತು.  ಮುಖ್ಯ ಚುನಾವಣಾ ಕಮೀಷನರ್ ಗೆ (ಸಿಇಸಿ) ಒದಗಿಸಲಾಗಿರುವಂತಹುದೇ ರಕ್ಷಣೆಯನ್ನು ಇತರ ಚುನಾವಣಾ ಕಮೀಷನರ್ ಗಳಿಗೂ ನೀಡಲು ಸಂವಿಧಾನದ ೩೨೪(೫) ಪರಿಚ್ಛೇದಕ್ಕೆ ತಿದ್ದುಪಡಿ ಮಾಡಬೇಕು ಎಂದು ಚುನಾವಣಾ ಆಯೋಗ ತನ್ನ ಉತ್ತರದಲ್ಲಿ ತಿಳಿಸಿತು. ಪ್ರಸ್ತುತ ಮುಖ್ಯ ಚುನಾವಣಾ ಕಮೀಷನರ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯನ್ನು ಕಿತ್ತು ಹಾಕುವ ರೀತಿಯಲ್ಲಿ ಮಾತ್ರವೇ ಕಿತ್ತು ಹಾಕಬಹುದು.  ಉಪಾಧ್ಯಾಯ ಅವರು ತಮ್ಮ ಅರ್ಜಿಯಲ್ಲಿ ಚುನಾವಣಾ ಆಯೋಗದ ಎಲ್ಲ ಕಮೀಷನರ್ ಗಳಿಗೂ ಸಮಾನ ರಕ್ಷಣೆ ಒದಗಿಸಬೇಕು ಮತ್ತು ಚುನಾವಣಾ ಆಯೋಗಕ್ಕೆ ಸ್ವತಂತ್ರ ಸಚಿವಾಲಯದ ಮತ್ತು ಚುನಾವಣಾ ಆಯೋಗಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವ ಅಧಿಕಾರ ನೀಡಬೇಕು ಎಂದು ಕೋರಿದ್ದರು.  ಚುನಾವಣಾ ಆಯೋಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಸಂಬಂಧ ಸಂವಿಧಾನ ತಿದ್ದುಪಡಿ ತರುವ ವಿಚಾರಕ್ಕೆ ತನ್ನ ಬೆಂಬಲ ಇದೆ ಎಂದು ಹೇಳಿದ ಚುನಾವಣಾ ಆಯೋಗ, ಚುನಾವಣಾ ಕಮೀಷನರ್ ಗಳನ್ನು ಕಿತ್ತು ಹಾಕುವ ಪ್ರಕ್ರಿಯೆಯನ್ನು ಬದಲಾಯಿಸಿ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಯನ್ನು ಕಿತ್ತು ಹಾಕುವ ಕ್ರಮವನ್ನು ಅನುಸರಿಸಬೇಕು ಎಂದು ತಾನು ೧೯೯೮ರಿಂದಲೇ ಕೇಳುತ್ತಿರುವುದಾಗಿ ಆಯೋಗ ತನ್ನ ಉತ್ತರದಲ್ಲಿ ತಿಳಿಸಿತು.  ‘ಪ್ರಸ್ತುತ ಇರುವ ಸಾಂವಿಧಾನಿಕ ಖಾತರಿ ಸಾಲದು. ಚುನಾವಣಾ ಕಮೀಷನರ್ ಗಳನ್ನು ಕಿತ್ತು ಹಾಕುವ ವಿಚಾರದಲ್ಲಿ ಮುಖ್ಯ ಚುನಾವಣಾ ಕಮೀಷನರ್ ಗೆ ಇರುವ ಭದ್ರತೆ ಇತರ ಕಮೀಷನರ್ ಗಳಿಗೂ ಲಭಿಸುವಂತಾಗಲು ಸಂವಿಧಾನ ತಿದ್ದುಪಡಿಯ ಅಗತ್ಯ ಇದೆ ಎಂದು ಚುನಾವಣಾ ಆಯೋಗ ಸಲ್ಲಿಸಿದ ಅಫಿಡವಿಟ್ ಹೇಳಿತು. ಸಂವಿಧಾನದ ೩೨೪(೫) ಪರಿಚ್ಛೇದ ಪ್ರಕಾರ ಮುಖ್ಯ ಚುನಾವಣಾ ಕಮೀಷನರ್ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ಇರುವಂತಹುದೇ ರಕ್ಷಣೆ ಇದೆ. ಅವರನ್ನು ಕಿತ್ತು ಹಾಕಲು ಸಂಸತ್ತಿನ ಉಭಯ ಸದನಗಳಲ್ಲಿ ಯಾವುದಾದರೂ ಒಂದು ಸದನವು ನಿರ್ಣಯ ಅಂಗೀಕರಿಸಬೇಕು ಮತ್ತು ರಾಷ್ಟ್ರಪತಿಯವರು ಅದಕ್ಕೆ ಒಪ್ಪಿಗೆ ನೀಡಬೇಕು. ಆದರೆ ಉಳಿದ ಇಬ್ಬರೂ ಚುನಾವಣಾ ಕಮೀಷನರ್ ಗಳಿಗೆ ಈ ರಕ್ಷಣೆ ಇಲ್ಲ. ಮುಖ್ಯ ಚುನಾವಣಾ ಕಮೀಷನರ್ ಅವರ ಶಿಫಾರಸಿನ ಮೇಲೆ ಚುನಾವಣಾ ಕಮೀಷನರ್ ಗಳನ್ನು ಕಿತ್ತು ಹಾಕಬಹುದು.  ಸಂವಿಧಾನ ತಿದ್ದುಪಡಿಗಾಗಿ ೧೯೮೮ರಿಂದಲೇ  ಕೋರುತ್ತಿದ್ದೇವೆ. ೨೦೦೪ರ ಜುಲೈಯಲ್ಲಿ ಪುನಃ ಪ್ರಸ್ತಾಪವನ್ನು ಸರ್ಕಾರಕ್ಕೆ ೨೨ ಚುನಾವಣಾ ಸುಧಾರಣೆ ಪ್ರಸ್ತಾಪಗಳನ್ನು ಕಳುಹಿಸಿದಾಗಲೂ ಸಲ್ಲಿಸಲಾಗಿತ್ತು. ಅದನ್ನು ರಾಜ್ಯಸಭೆಯ ಸಿಬ್ಬಂದಿ, ಸಾರ್ವಜನಿಕ ಕುಂದು ಕೊರತೆ, ಕಾನೂನು ಮತ್ತು ನ್ಯಾಯ ಸಂಬಂಧಿತ ಸಂಸದೀಯ ಸ್ಥಾಯಿ ಸಮಿತಿಗೆ ಪರಿಶೀಲನೆಗಾಗಿ ರಾಜ್ಯಸಭೆಯ ಅಧ್ಯಕ್ಷರು ೨೦೦೫ರಲ್ಲಿ ಕಳುಹಿಸಿದ್ದರು ಎಂದು ಅಫಿಡವಿತ್ ಹೇಳಿತು.  ೨೦೧೦g ಜನವರಿಯಲ್ಲಿ ಆಯೋಗವು ಅದನ್ನೇ ಪುನಃ ಪ್ರಧಾನಿಯವರಿಗೆ ಕಳುಹಿಸಿತು. ೨೦೧೨ರಲ್ಲಿ ಇನ್ನೊಂದು ಮನವಿ ಮಾಡಲಾಗಿತ್ತು. ೨೦೧೬ರ ಡಿಸೆಂಬರಿನಲ್ಲಿ ಮತ್ತೆ ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ೪೭ ಪ್ರಸ್ತಾಪಗಳ ಪಟ್ಟಿ ಕಳುಹಿಸಲಾಗಿತ್ತು ಎಂದು ಆಯೋಗ ತಿಳಿಸಿತು. ಉಪಾಧ್ಯಾಯ ಅವರು ಆಯೋಗಕ್ಕೆ ಸ್ವತಂತ್ರ ಸಚಿವಾಲಯ ಒದಗಿಸಲು ಮತ್ತು ವೆಚ್ಚಕ್ಕೆ ಸಂಬಂಧಿಸಿದಂತೆ ಲೊಕಸಭಾ / ರಾಜ್ಯಸಭಾ ಸಚಿವಾಲಯದ ಮಾದರಿಯಲ್ಲಿ ಸಂಚಿತ ನಿಧಿ ಸ್ಥಾಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದೂ ಕೋರಿದ್ದರು.  ಈ ಪ್ರಸ್ತಾಪವನ್ನೂ ಚುನಾವಣಾ ಆಯೋಗ ಬೆಂಬಲಿಸಿತು.  ಚುನಾವಣೆಗಳ ಪಾವಿತ್ರ್ಯ ಕಾಪಾಡುವುದು ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಅಂತರ್ಗತವಾಗಿರುವಂತೆ ಮಾಡಲು ಚುನಾವಣಾ ಆಯೋಗವನ್ನು ರಾಜಕೀಯ ಒತ್ತಡ ಅಥವಾ ಎಕ್ಸಿಕ್ಯೂಟಿವ್ ಹಸ್ತಕ್ಷೇಪದಿಂದ ಮುಕ್ತವಾಗಿ ಇರಿಸಬೇಕು ಎಂದೂ ಆಯೋಗ ಹೇಳಿತು.

2018: ಮುಂಬೈ: ಕೇಂದ್ರ ಹಣಕಾಸು ಸಚಿವಾಲಯವು ಬ್ಯಾಂಕುಗಳ ಬೋರ್ಡ್ ಬ್ಯೂರೋವನ್ನು (ಬಿಬಿಬಿ) ಪುನರ್ರಚಿಸಿದ್ದು ಭಾನು ಪ್ರತಾಪ್ ಶರ್ಮ (ಬಿ.ಪಿ.ಶರ್ಮ) ಅವರನ್ನು ಅಧ್ಯಕ್ಷರನ್ನಾಗಿ ಮಾಜಿ ಕಂಟ್ರೋಲರ್ ಅಂಡ್ ಅಡಿಟರ್ ಜನರಲ್ ವಿನೋದ ರೈ ಅವರ ಸ್ಥಾನಕ್ಕೆ ನೇಮಿಸಿತು. ಶರ್ಮ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ ಡಿಒ) ನೇಮಕಾತಿ ಮತ್ತು ಅಂದಾಜು ಕೇಮದ್ರದ ಮಾಜಿ ಅಧ್ಯಕ್ಷರೂ, ಬಿಹಾರ ಸರ್ಕಾರದ ಮಾಜಿ ಪ್ರಿನ್ಸಿಪಲ್ ಕಾರ್ಯದರ್ಶಿಯೂ ಆಗಿದ್ದಾರೆ.  ಮಂಡಳಿಯ ಕೆಲವು ಸದಸ್ಯರು: ವೇದಿಕಾ ಭಂಡಾರ್ಕಾರ್ (ಕೆಡಿಟ್ ಸೂಸ್ಸೆ, ಇಂಡಿಯಾದ ಮಾಜಿ ಉಪಾಧ್ಯಕ್ಷರು ಹಾಗೂ ಆಡಳಿತ ನಿರ್ದೇಶಕರು), ಪಿ. ಪ್ರದೀಪ್ ಕುಮಾರ್ (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಆಡಳಿತ ನಿರ್ದೇಶಕರು), ಪ್ರದೀಪ್ ಶಾ (ಕ್ರಿಸಿಲ್ ನ ಮಾಜಿ ಆಡಳಿತ ನಿರ್ದೇಶಕರು).

2009: ಮಹತ್ವದ ಬೆಳವಣೆಗೆಯೊಂದರಲ್ಲಿ ತಮಿಳು ಮತ್ತು ಸಿಂಹಳೀಯ ಜನಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಎಲ್‌ಟಿಟಿಇ ವಿರುದ್ಧದ ಕಾರ್ಯಾಚರಣೆಯನ್ನು 48 ಗಂಟೆಗಳ ಕಾಲ ಸ್ಥಗಿತಗೊಳಿಸಲು ಶ್ರೀಲಂಕಾ ಅಧ್ಯಕ್ಷ ಮಹೀಂದ್ರ ರಾಜಪಕ್ಸ ನಿರ್ಧರಿಸಿದರು. ಎಲ್‌ಟಿಟಿಇ ಒತ್ತೆಯಾಳುಗಳಾಗಿ ಉಳಿದ ಸಾವಿರಾರು ತಮಿಳು ನಾಗರಿಕರ ಬಗ್ಗೆ ಕಳವಳ ವ್ಯಕ್ತಪಡಿಸಿದ ರಾಜಪಕ್ಸೆ ಅವರು ಗುಂಡು ನಿರೋಧಕ ವಲಯದಲ್ಲಿ ಹೊಸ ವರ್ಷ ಆಚರಣೆಗೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಅಧ್ಯಕ್ಷರ ಕಾರ್ಯಾಲಯ ಹೊರಡಿಸಿದ ಪ್ರಕಟಣೆ ತಿಳಿಸಿತು.

2009: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಶಮೀಂದ್ರತೀರ್ಥ ಶ್ರೀಪಾದಂಗಳವರ ಪಾರ್ಥಿವ ಶರೀರವನ್ನು ವೃಂದಾವನಸ್ಥಗೊಳಿಸುವ ಕಾರ್ಯ ಮಂತ್ರಾಲಯ ಮಠದ ಆವರಣದಲ್ಲಿನ ಬನ್ನಿ ವೃಕ್ಷದ ಬಳಿ ಈದಿನ ಬೆಳಿಗ್ಗೆ ನಡೆಯಿತು. ಮಧ್ವಾಚಾರ್ಯರು ಬರೆದ ಗ್ರಂಥ 'ಯತಿ ಪ್ರಣವ ಕಲ್ಪ'ದ ಪ್ರಕಾರ ಸನ್ಯಾಸಿಗಳಿಗೆ ನೆರವೇರಿಸಬೇಕಾದ ವಿಧಿ ವಿಧಾನಗಳು ಶ್ರೀಮಠದ ಸಂಪ್ರದಾಯದ ಪ್ರಕಾರ ನೆರವೇರಿದವು. ಕುಂಭಾಭಿಷೇಕ, ವೇದಘೋಷ, ಪುರುಷ ಸೂಕ್ತ, ಹಸ್ತೋದಕ ನೆರವೇರಿಸಲಾಯಿತು. ನಂತರ ಶ್ರೀಮಠದ ಆವರಣದಲ್ಲಿರುವ ಬನ್ನಿ ವೃಕ್ಷದ ಪಕ್ಕದ ವೃಂದಾವನಸ್ಥ ಸ್ಥಳಕ್ಕೆ ಶ್ರೀಮಠದ ಬಳಗವು ಶ್ರೀಪಾದಂಗಳವರ ಪಾರ್ಥಿವ ಶರೀರವನ್ನು ಕರೆತಂದು ಶ್ರೀಮಠದ ಸಂಪ್ರದಾಯದ ಪ್ರಕಾರ ವೃಂದಾವನಸ್ಥ ಕಾರ್ಯ ನೆರವೇರಿಸಿದರು. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಸೇರಿದಂತೆ ಅನೇಕ ಕಡೆಯಿಂದ ಸಾವಿರಾರು ಭಕ್ತರು ಪಾಲ್ಗೊಂಡು ಅಂತಿಮ ದರ್ಶನ ಪಡೆದರು. ಶ್ರೀಪಾದಂಗಳವರ ಆಪ್ತ ಕಾರ್ಯದರ್ಶಿ ಹಾಗೂ ಅವರ ಪೂರ್ವಾಶ್ರಮದ ಹಿರಿಯ ಪುತ್ರರಾದ ರಾಜಾ ಎಸ್ ರಾಜಗೋಪಾಲಾಚಾರ್, ಶ್ರೀಮಠದ ಆಡಳಿತಾಧಿಕಾರಿ ಡಿ ಪ್ರಭಾಕರರಾವ್ ಅವರ ನೇತೃತ್ವದಲ್ಲಿ ವೃಂದಾವನಸ್ಥ ಕಾರ್ಯವನ್ನು ಶ್ರೀಮಠದ ಬಳಗವು ನೆರವೇರಿಸಿತು.

2009: ಕಾರ್ಕಳ ತಾಲ್ಲೂಕಿನಾದ್ಯಂತ ಸಿಡಿಲು ಮಿಂಚು ಸಹಿತ ಬಿದ್ದ ಮಳೆಯ ಆರ್ಭಟಕ್ಕೆ ಮೂವರು ಬಲಿಯಾದರು. ಸುಮಾರು ಒಂದು ಗಂಟೆ ಎಡೆಬಿಡದೆ ಸುರಿದ ಮಳೆ ದುರಂತಮಯವಾಗಿ ಪರಿಣಮಿಸಿತು.

2009: ಒಂದೆಡೆ ಚೀನಾ ಗಿಡಮೂಲಿಕೆಗಳ ಉತ್ಪನ್ನಗಳನ್ನು ತಯಾರಿಸಿ ವಿದೇಶಿಗರ ಆರೋಗ್ಯ ಕಾಪಾಡಲು ಮುಂದಾಗಿದ್ದರೆ, ಇನ್ನೊಂದೆಡೆ ತಮ್ಮ ದೇಶದಲ್ಲೇ ಬೆಳೆಯುತ್ತಿರುವ ತರಕಾರಿ ಹಣ್ಣುಗಳಲ್ಲಿ ಅಧಿಕ ಕೀಟನಾಶಕ ಬೆರೆಸಿಕೊಂಡು ಜನರ ಜೀವಕ್ಕೇ ಸಂಚಕಾರ ತಂದುಕೊಂಡಿರುವುದು ಬೆಳಕಿಗೆ ಬಂತು. ಅಂತಾರಾಷ್ಟ್ರೀಯ ಪರಿಸರ ಸಂಸ್ಥೆ ಗ್ರೀನ್‌ಪೀಸ್ ಈ ಆಘಾತಕಾರಿ ಅಂಶವನ್ನು ಬಹಿರಂಗಗೊಳಿಸಿತು.. ಪ್ರಸ್ತುತ ಚೀನಾದಲ್ಲಿ ಅತಿ ಹೆಚ್ಚು ಕೀಟನಾಶಕಗಳನ್ನು ಬಳಸಿ ಕೃಷಿ ಮಾಡಲಾಗುತ್ತಿದೆ. ಯಾವುದು ಸರ್ಕಾರದಿಂದ ನಿಷೇಧಕ್ಕೆ ಒಳಪಟ್ಟಿದೆಯೋ ಅಂತಹವುಗಳನ್ನೇ ಬಳಸಿ ಕೃಷಿಮಾಡಲಾಗುತ್ತಿದೆ ಎಂದು ಗ್ರೀನ್ ಪೀಸ್ ಹೇಳಿತು. ಸಂಸ್ಥೆಯು ಕಳೆದ ಕೆಲವು ತಿಂಗಳುಗಳಿಂದ ಬೀಜಿಂಗ್, ಶಾಂಘೈ ಹಾಗೂ ಗುವಾಂಗ್ಜು ನಗರಗಳ ಸೂಪರ್ ಮಾರ್ಕೆಟ್‌ಗಳಿಂದ 45 ತರಹದ ಹಣ್ಣು-ತರಕಾರಿಗಳನ್ನು ಪರೀಕ್ಷೆಗಾಗಿ ಆಯ್ಕೆ ಮಾಡಿಕೊಂಡಿತ್ತು. ಇದರಲ್ಲಿ 40 ಉತ್ಪನ್ನಗಳಲ್ಲಿ ಕೀಟನಾಶಕಗಳ ಉಳಿಕೆ ಇರುವುದು ಪತ್ತೆಯಾಗಿದೆ. ಅತಿ ಹೆಚ್ಚು ವಿಷಕಾರಕ ಅಂಶಗಳಿರುವ ಮೆಟಾಮಿಡೊಫಸ್ ಮತ್ತು ಕಾರ್ಬೊಪ್ಯೂರಾನ್ ಸೇರಿದಂತೆ 50 ತರಹದ ಕೀಟನಾಶಕಗಳಿರುವುದು ಈ ಪರೀಕ್ಷೆಯಿಂದ ಬೆಳಕಿಗೆ ಬಂದಿರುವುದಾಗಿ ಗ್ರೀನ್‌ಪೀಸ್ ತಿಳಿಸಿತು. ಪರೀಕ್ಷೆಗೆ ಒಳಪಡಿಸಿದ 45 ಉತ್ಪನ್ನಗಳ ಐದು ಮಾದರಿಗಳಲ್ಲಿ 10 ತರಹದ ಕೀಟನಾಶಕ ತ್ಯಾಜ್ಯಗಳಿರುವುದು ಪತ್ತೆಯಾಗಿದೆ. ಹೀಗೆ ಕೀಟನಾಶಕಗಳನ್ನು ಹೇರಳವಾಗಿ ಬಳಸುವ ಮೂಲಕ ಚೀನಾದ ರೈತರು ಆಹಾರವನ್ನು ವಿಷವಾಗಿಸುವ ಜೊತೆಗೆ ಪರಿಸರವನ್ನು ಮಲಿನಗೊಳಿಸುತ್ತಿದ್ದಾರೆ ಎಂದು ಚೀನಾದ ಗ್ರೀನ್ ಪೀಸ್ ವಕ್ತಾರರು ತಿಳಿಸಿದರು.

2009: ಭಾರತ ತಂಡದವರು ಹದಿಮೂರು ವರ್ಷಗಳ ನಂತರ ಮಲೇಷ್ಯಾದ ಇಪೋ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಫೈನಲ್ ಹಾಕಿ ಪಂದ್ಯದಲ್ಲಿ ಸುಲ್ತಾನ್ ಆಜ್ಲನ್ ಷಾ ಕಪ್‌ನ ಒಡೆಯರಾದರು. ಮುಕ್ತಾಯವಾದ ಐದು ರಾಷ್ಟ್ರಗಳ ಹಾಕಿ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯದಲ್ಲಿ ಭಾರತ ತಂಡದವರು ಆತಿಥೇಯ ಮಲೇಷ್ಯಾ ತಂಡವನ್ನು ಸೋಲಿಸಿದರು. ಫೈನಲ್ ಪಂದ್ಯದಲ್ಲಿ ಭಾರತ ತಂಡದವರು 3-1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಪರಾಭವಗೊಳಿಸಿದರು. ಪಂದ್ಯದ ಆರಂಭದಿಂದಲೇ ದಾಳಿಗೆ ಒತ್ತು ನೀಡಿ ಆಡಿದ ಭಾರತ ತಂಡದ ಅರ್ಜುನ್ ಹಾಲಪ್ಪ (8ನೇ ನಿಮಿಷ), ಪ್ರಭ್ಜೋತ್ ಸಿಂಗ್ (20ನೇ ನಿ.), ಶಿವೇಂದ್ರ ಸಿಂಗ್ (41ನೇ ನಿ.) ಹಾಗೂ ಮಲೇಷ್ಯಾ ತಂಡದ ಮಿಸ್ರೊನ್ (11ನೇ ನಿ.) ಗೋಲು ಗಳಿಸಿದರು. ಭಾರತ ತಂಡದವರು 1995ರಲ್ಲಿ ಇಲ್ಲಿ ಕೊನೆಯ ಬಾರಿ ಈ ಪ್ರಶಸ್ತಿ ಗೆದ್ದು ಕೊಂಡಿದ್ದರು.

2009: ಭಾರತ ಅಥ್ಲೆಟಿಕ್ ಫೆಡರೇಷನ್‌ ಅಧ್ಯಕ್ಷ ಪದ್ಮಭೂಷಣ ಸರ್ದಾರ್ ಉಮ್ರಾವೊ ಸಿಂಗ್ (89) ಅವರು ಜಲಂಧರದ ತಮ್ಮ ನಿವಾಸದಲ್ಲಿ ನಿಧನರಾದರು. ಕಾಂಗ್ರೆಸ್‌ನ ಮಾಜಿ ಸಂಸದರೂ, ಮಾಜಿ ಸಚಿವರೂ ಆದ ಸಿಂಗ್ ಅವರು ಪತ್ನಿ, ಒರ್ವ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದರು. ಐಎಎಎಫ್ ಕೌನ್ಸಿಲ್ ಸದಸ್ಯರು, ಏಷ್ಯನ್ ಅಥೆಟ್ಲಿಕ್ ಫೆಡರೇಷನ್‌ನ ಸಂಸ್ಥಾಪಕ ಅಧ್ಯಕ್ಷ, ಭಾರತ ಒಲಿಂಪಿಕ್ ಸಂಸ್ಥೆಯ ಹಿರಿಯ ಸದಸ್ಯರೂ ಆಗಿದ್ದ ಸಿಂಗ್ ಅವರಿಗೆ 1982ರಲ್ಲಿ ನವದೆಹಲಿಯಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ತೋರಿದ ಸಾಧನೆಗಾಗಿ ಭಾರತ ಸರ್ಕಾರ ಪದ್ಮಭೂಷಣ ಗೌರವ ನೀಡಿತ್ತು. ಸುಮಾರು 50 ವರ್ಷಗಳ ಕಾಲ ಭಾರತ ಅಥ್ಲೆಟಿಕ್ ಫೆಡರೇಷನ್‌ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಸಿಂಗ್ ಎರಡು ಬಾರಿ ಫೆಡರೇಷನ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

2008: ಸಾಲಬಾಧೆಯಿಂದ ರೈತನೊಬ್ಬ ಉರಿಯುವ ಹುಲ್ಲಿನ ಬಣವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ವಾರ್ಖೇಡ್ ಪ್ರಾಂತ್ಯದಲ್ಲಿ ಘಟಿಸಿತು. ಬಾಬನರಾವ್ ಉತ್ತಮರಾವ್ ಜೌಗಲೆ (48) 11-04-2008ರಂದು ಹೊಲಕ್ಕೆ ಹೋಗಿದ್ದವರು ಮರಳಿ ಮನೆಗೆ ಬರಲಿಲ್ಲ. ಕುಟುಂಬ ವರ್ಗ ಎಲ್ಲೆಡೆ ಹುಡುಕಿದರೂ ಜೌಗಲೆ ಕಾಣಲಿಲ್ಲ. ಕಡೆಗೆ ಬಣವೆಯಲ್ಲಿ ಈತನ ಸುಟ್ಟು ಕರಕಲಾದ ಶವ 12-04-2008ರಂದು ಪತ್ತೆಯಾಯಿತು.ಜೌಗಲೆ 4 ಎಕರೆ ಜಮೀನು ಹೊಂದಿದ್ದರು. ಎರಡು ವರ್ಷಗಳ ಹಿಂದೆ ಅವರು ಬ್ಯಾಂಕಿನಿಂದ 50 ಸಾವಿರ ರೂ ಸಾಲ ಪಡೆದಿದ್ದರು. ಇವರ ಮಗಳಿಗೆ ಹಣದ ಕೊರತೆಯಿಂದಾಗಿ ಶಿಕ್ಷಣ ಮುಂದುವರೆಸಲಾಗಿರಲಿಲ್ಲ.

2008: ಬೆಂಗಳೂರು ನಗರದ ಶಿವ ಮ್ಯೂಸಿಕಲ್ಸಿನ ಮಾಲೀಕ ಸಿ. ನಟರಾಜ್ ಹಾಗೂ ಪುತ್ರ ವಿನೋದ್ ಬರೊಬ್ಬರಿ 11 ಅಡಿಗಳ ತಂಬೂರಿ ನಿರ್ಮಿಸಿ ಸಂಗೀತ ಇತಿಹಾಸದಲ್ಲಿ ಗಮನಾರ್ಹ ಸಾಧನೆ ಮಾಡಿದರು. ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಉಭಯಗಾನ ವಿಧುಷಿ ಶ್ಯಾಮಲಾ ಜಿ.ಭಾವೆ ಈ ತಂಬೂರಿಯನ್ನು ಅನಾವರಣಗೊಳಿಸಿದರು. ಸಾಧಾರಣ ತಂಬೂರಿಗಿಂತ ಮೂರು ಪಟ್ಟು ಉದ್ದವಿದ್ದ ಈ ತಂಬೂರಿಯನ್ನು ಬಿಲುವಾರ (ರೇನ್ ಟ್ರಿ) ಮರದಿಂದ ತಯಾರಿಸಲಾಗಿದ್ದು, 10 ಅಡಿ ಸುತ್ತಳತೆ ಮತ್ತು 3 ಅಡಿ ಎತ್ತರವಿದೆ. ಎದೆ ಹಲಗೆಯ ಮೇಲೆ ಲಕ್ಷ್ಮೀ, ಸರಸ್ವತಿ, ಗಣಪತಿ ಚಿತ್ರ ಕೆತ್ತಲಾಗಿದೆ. ತಂತಿಗಳ ಶ್ರುತಿ ಏರಿಳಿಸುವ ಮಣಿಯ ಜಾಗದಲ್ಲಿ ಹುಲಿ ಚಿತ್ರವನ್ನು ರಚಿಸಲಾಗಿದೆ. ಸುಮಾರು ಒಂದು ವರ್ಷದ ಅವಧಿಯಲ್ಲಿ ಇದನ್ನು ತಯಾರು ಮಾಡಲಾಗಿದೆ. ಒಟ್ಟು 150 ಕೆ.ಜಿ. ತೂಕವಿರುವ ಈ ತಂಬೂರಿಯ ಮೇಲೆ ಮೈಸೂರು ದಸರಾ ಬಿಂಬಿಸುವ ಚಿತ್ರಗಳ ಕೆತ್ತನೆ ಇದೆ. ಕೊನೆ ಭಾಗದಲ್ಲಿ ಅಶೋಕ ಚಕ್ರದ ಚೆಂದದ ಕೆತ್ತನೆ ಇದೆ. ಬುರುಡೆಯಲ್ಲಿ ಸಂಗೀತ ತ್ರಿಮೂರ್ತಿಗಳಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು ಹಾಗೂ ಶ್ಯಾಮಾ ಶಾಸ್ತ್ರಿಗಳ ಸುಂದರ ಚಿತ್ರಗಳಿವೆ. ಸಂಗೀತ ಪ್ರೇಮಿಗಳಿಗೆ ವಿಶಿಷ್ಟವಾದುದನ್ನು ನೀಡಬೇಕು ಎಂಬ ಉದ್ದೇಶದಿಂದ ಈ ರೀತಿಯ ಪ್ರಯತ್ನ ಮಾಡಲಾಗಿದೆ ಎಂಬುದು ನಟರಾಜ್ ಹೇಳಿಕೆ.

2008: ರಾಷ್ಟ್ರೀಯ ಪ್ರಾಯೋಗಿಕ ಅರ್ಥಶಾಸ್ತ್ರ ಸಂಶೋಧನಾ ಸಮಿತಿಯ (ಎನ್ ಸಿ ಎ ಇ ಆರ್) ಎಂಟನೇ ಅಧ್ಯಕ್ಷರಾಗಿ ಇನ್ಫೊಸಿಸ್ ಸಹ-ಅಧ್ಯಕ್ಷ ನಂದನ್ ನಿಲೇಕಣಿ ಆಯ್ಕೆಯಾದರು. ಹಾಲಿ ಅಧ್ಯಕ್ಷ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಮಾಜಿ ಗವರ್ನರ್ ಬಿಮಲ್ ಜಲನ್ ಸ್ಥಾನಕ್ಕೆ ನಿಲೇಕಣಿ ಆಯ್ಕೆಯಾದರು.

2008: ಆಪ್ಘಾನಿಸ್ಥಾನದ ದಕ್ಷಿಣ ಪ್ರಾಂತ್ಯದ ನಿಮ್ರೋಜಿಯಲ್ಲಿ ಈದಿನ ಬೆಳಗ್ಗೆ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಗಡಿ ಪ್ರದೇಶದ ರಸ್ತೆ ನಿರ್ಮಾಣ ಸಂಸ್ಥೆಯ ಮೂವರು ಭಾರತೀಯ ಉದ್ಯೋಗಿಗಳು ಮೃತರಾಗಿ ಐವರು ಗಾಯಗೊಂಡರು.

2008: ನೇಪಾಳದಲ್ಲಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಸಂಬಂಧಿಸಿದಂತೆ ನಡೆದಿರುವ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಕಟಿತ 42 ಸ್ಥಾನಗಳಲ್ಲಿ ಸಿಪಿಎನ್ ಮಾವೋವಾದಿಗಳು ಈಗಾಗಲೇ 26 ಸ್ಥಾನಗಳನ್ನು ಗೆದ್ದು, 60ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆಯನ್ನು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯುವ ನಿರೀಕ್ಷೆ ಮೂಡಿಸಿದರು. ಎರಡೂವರೆ ಶತಮಾನಗಳಷ್ಟು ಹಳೆಯದಾದ ಅರಸೊತ್ತಿಗೆಯ ವಿರುದ್ಧ ದಶಕದ ಕಾಲ ಹೋರಾಟ ನಡೆಸಿರುವ ಮಾವೋವಾದಿಗಳು, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಸಂವಿಧಾನಾತ್ಮಕ ಚುನಾವಣಾ ಹೋರಾಟದಲ್ಲಿ ಭಾಗವಹಿಸಿದ್ದು ಜಗತ್ತಿನಾದ್ಯಂತ ಕುತೂಹಲ ಮೂಡಿಸಿತ್ತು. ದಶಕದ ಕಾಲ ಮಾವೋವಾದಿಗಳ ಸಶಸ್ತ್ರ ಹೋರಾಟದ ಸಂದರ್ಭದಲ್ಲಿ ಸುಮಾರು 14,000 ಮಂದಿ ಸಾವನ್ನಪ್ಪಿದ್ದರು.

2007: ಸ್ವದೇಶೀ ನಿರ್ಮಿತ `ಅಗ್ನಿ- 3' ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಒರಿಸ್ಸಾ ಕರಾವಳಿಯ ವ್ಹೀಲರ್ ದ್ವೀಪದಲ್ಲಿ ಯಶಸ್ವಿಯಾಗಿ ನೆರವೇರಿತು. `ಅಗ್ನಿ' ಸರಣಿಯಲ್ಲೇ ಅತ್ಯಂತ ಶಕ್ತಿಶಾಲಿಯಾಗಿರುವ ಈ ಅಣ್ವಸ್ತ್ರ ವಾಹಕ ಕ್ಷಿಪಣಿಯು 3500 ಕಿ.ಮೀ. ದೂರದಲ್ಲಿರುವ ವೈರಿ ನೆಲೆಗಳನ್ನು ನಾಶ ಪಡಿಸುವ ಸಾಮರ್ಥ್ಯ ಹೊಂದಿದೆ.

2007: ಅಪರೂಪದ ದೊಡ್ಡ ಕೊಕ್ಕಿನ ಇಂಪಾಗಿ ಕೂಗುವ ಇಂಚರ ಹಕ್ಕಿಯನ್ನು 140 ವರ್ಷಗಳ ನಂತರ ಕೋಲ್ಕತಾದ ಪಕ್ಷಿ ವೀಕ್ಷಕರ ತಂಡವೊಂದು ಕೋಲ್ಕತಾದಿಂದ 10 ಕಿ.ಮೀ. ದೂರದ ನರೇಂದ್ರಪುರ ಬಳಿ ಪತ್ತೆ ಹಚ್ಚಿತು. ಈ ಹಿಂದೆ 1867ರಲ್ಲಿ ಹಿಮಾಚಲ ಪ್ರದೇಶದ ಸಟ್ಲೆಜ್ ಕಣಿವೆಯಲ್ಲಿ ಈ ಪಕ್ಷಿ ಕಾಣಿಸಿಕೊಂಡಿತ್ತು. ನಂತರ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ತುಂಬ ಈ ವಿರಳವಾದ ಈ ಪಕ್ಷಿ ಕಳೆದುಹೋಗಿದೆ ಎಂದೇ ಭಾವಿಸಲಾಗಿತ್ತು ಎಂದು ಮುಂಬೈಯ ಬಾಂಬೆ ನೈಸರ್ಗಿಕ ಇತಿಹಾಸ ಸಂಸ್ಥೆಯ ಸಂಶೋಧಕರ ತಂಡ ತಿಳಿಸಿತ್ತು.

2007: ಡಾ. ರಾಜ್ ಕುಮಾರ್ ನೆನಪಿನಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಿ ಕಾರ್ಯಗತಗೊಳಿಸುವುದಕ್ಕಾಗಿ ಕುಟುಂಬದ ಸದಸ್ಯರನ್ನು ಒಳಗೊಂಡ ಟ್ರಸ್ಟ್ ಸ್ಥಾಪಿಸಲಾಗುವುದು ಎಂದು ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ರಾಜಕುಮಾರ್ ಅವರು ರಾಜ್ ಕುಮಾರ್ ಅವರ ಪ್ರಥಮ ಪುಣ್ಯ ತಿಥಿ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಪ್ರಕಟಿಸಿದರು.

2006: ಕನ್ನಡ ಚಿತ್ರರಂಗದ ಧ್ರುವತಾರೆ, ಕನ್ನಡಿಗರ ಆರಾಧ್ಯದೈವ ಡಾ. ರಾಜ್ ಕುಮಾರ್ (77) ಅವರು ಈದಿನ ಮಧ್ಯಾಹ್ನ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರು 45 ಪೌರಾಣಿಕ, 15 ಐತಿಹಾಸಿಕ, 4 ಬಾಂಡ್ ಚಿತ್ರಗಳು ಮತ್ತು 143 ಸಾಮಾಜಿಕ ಚಿತ್ರಗಳು ಸೇರಿದಂತೆ ಒಟ್ಟು 207 ಚಿತ್ರಗಳಲ್ಲಿ ನಟಿಸಿದ್ದರು.

2006: ಭಾರತ ಪ್ರವಾಸದಲ್ಲಿದ್ದ ಜರ್ಮನಿಯ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಗುರಿಯಾಗಿದ್ದ ರಾಜಸ್ಥಾನದ ಬಿ.ಎಚ್. ಮೊಹಂತಿ ಎಂಬ ಆರೋಪಿಗೆ, ಅಪರಾಧ ಸಂಭವಿಸಿದ ಕೇವಲ 22 ದಿನಗಳಲ್ಲಿ ಕ್ಷಿಪ್ರ ವಿಚಾರಣೆ ನಡೆಸಿದ ರಾಜಸ್ಥಾನದ ಅಲ್ವಾರಿನ ತ್ವರಿತ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಆರ್. ಕೆ. ಮಹೇಶ್ವರಿ ಅವರು ಏಳು ವರ್ಷಗಳ ಕಠಿಣ ಶಿಕ್ಷೆ ಮತ್ತು 10,000 ರೂಪಾಯಿಗಳ ದಂಡ ವಿಧಿಸಿ ಮಹತ್ವದ ಸಾಧನೆ ಮಾಡಿದರು.

2006: ಕರ್ನಾಟಕ ಸರ್ಕಾರವು 2006ನೇ ಸಾಲಿನ ಪ್ರತಿಷ್ಠಿತ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರನ್ನು ಆಯ್ಕೆ ಮಾಡಿತು.

2006: ಮುಂಬೈಯಲ್ಲಿ ಮಹಾರಾಷ್ಟ್ರ ವಿಧಾನಸಭೆಯು ಬಾರ್ ಮಾಲೀಕರ ಸಂಘದ ಅಧ್ಯಕ್ಷ ಮನ್ಜಿತ್ ಸಿಂಗ್ ಸೇಥಿ ಅವರಿಗೆ ಕೆಳಮನೆಯ ವಿಶೇಷ ಹಕ್ಕುಗಳ ಚ್ಯುತಿಗಾಗಿ 90 ದಿನಗಳ ಸೆರೆವಾಸವನ್ನು ವಿಧಿಸಿತು. ರಾಜ್ಯ ಸರ್ಕಾರವು 2005ರಲ್ಲಿ ಡ್ಯಾನ್ಸ್ ಬಾರುಗಳನ್ನು ನಿಷೇಧಿಸಲು ಕೈಗೊಂಡ ನಿರ್ಧಾರವನ್ನು ವಿರೋಧಿಸುವುದಾಗಿ ಬೆದರಿಕೆ ಹಾಕುವ ಮೂಲಕ ಮನ್ಜಿತ್ ಸಿಂಗ್ ಅವರು ವಿಧಾನಸಭೆಯ ಸದಸ್ಯರ ವಿಶೇಷ ಹಕ್ಕುಗಳಿಗೆ ಚ್ಯುತಿ ತರುವ ಅಪರಾಧ ಎಸಗಿದ್ದರು. ಈ ಹಕ್ಕುಚ್ಯುತಿಗೆ ಸಂಬಂಧಿಸಿದಂತೆ ಬಿಜೆಪಿ ಸದಸ್ಯ ಸುಧೀರ್ ಕಳುಹಿಸಿದ್ದ ಹಕ್ಕುಚ್ಯುತಿ ನೋಟಿಸನ್ನು ಅಂಗೀಕರಿಸಿದ ಸದನವು ಅದನ್ನು ಹಕ್ಕುಚ್ಯುತಿ ಸಮಿತಿಗೆ ಕಳುಹಿಸಿತ್ತು.

2006: ನವದೆಹಲಿಯಲ್ಲಿ ರಾಜ್ಯಸಭೆಗೆ ನೇಮಕಗೊಂಡ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಸೇರಿದಂತೆ ನಾಲ್ಕು ಮಂದಿ ರಾಜ್ಯಸಭಾ ಸದಸ್ಯರು ಸದನದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷ ಭೈರೋನ್ ಸಿಂಗ್ ಶೆಖಾವತ್ ಅವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಜೇಠ್ಮಲಾನಿ ಅವರು ಈ ಮೊದಲು 1988, 1994 ಮತ್ತು 2000ದಲ್ಲಿ ಮೂರು ಬಾರಿ ಮೇಲ್ಮನೆಗೆ ಆಯ್ಕೆಯಾಗಿದ್ದರು. ಬನ್ವಾರಿ ಲಾಲ್ ಕಂಚಲ್, ವೀರಪಾಲ್ ಸಿಂಗ್ (ಸಮಾಜವಾದಿ ಪಕ್ಷ), ರುದ್ರನಾರಾಯಣ ಪಾಣಿ ಅವರು ಪ್ರಮಾಣ ವಚನ ಸ್ವೀಕರಿಸಿದ ಇತರ ಮೂವರು ಸದಸ್ಯರು.

1961: ಭೂಮಿಯಿಂದ ವೊಸ್ತೋಕ್ -1 ಗಗನನೌಕೆಯ ಉಡ್ಡಯನ. ಇದರ ಮೂಲಕ ಬಾಹ್ಯಾಕಾಶಕ್ಕೆ ನೆಗೆದ ರಷ್ಯದ ಗಗನಯಾನಿ ಯೂರಿ ಗಗಾರಿನ್ ಪ್ರಪ್ರಥಮ ಗಗನಯಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇವರು ಬಾಹ್ಯಾಕಾಶದಲ್ಲಿ 108 ನಿಮಿಷಗಳ ಕಾಲ ತೇಲಾಡಿದರು.

1948: ಪಂಡಿತ್ ಜವಾಹರಲಾಲ್ ನೆಹರೂ ಅವರು ಒರಿಸ್ಸಾದ ನೂತನ ರಾಜಧಾನಿ ಭುವನೇಶ್ವರದಲ್ಲಿ ಹಿರಾಕುಡ್ ಅಣೆಕಟ್ಟಿಗೆ ಶಂಕುಸ್ಥಾಪನೆ ಮಾಡಿದರು.

1945: ಅಮೆರಿಕಾದ 32ನೇ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ ವೆಲ್ಟ್ 63ನೇ ವಯಸ್ಸಿನಲ್ಲಿ ಮೃತರಾದರು. ಉಪಾಧ್ಯಕ್ಷ ಹ್ಯಾರಿ ಎಸ್. ಟ್ರೂಮನ್ ಅಧ್ಯಕ್ಷರಾದರು.

1926: ಕಲಾವಿದ ಮುನಿವೆಂಕಟಪ್ಪ ಜನನ.

1922: ನಾಟಕರಂಗದ ಆತ್ಮೀಯರಲ್ಲಿ `ಐನೋರು' ಎಂದೇ ಪ್ರಸಿದ್ಧರಾಗಿದ್ದ ಖ್ಯಾತ ರಂಗಭೂಮಿ ನಟ ಎಸ್. ಎಂ. ವೀರಭದ್ರಪ್ಪ (12-4-1922ರಿಂದ 27-2-1966) ಅವರು ಚಿತ್ರದುರ್ಗದಲ್ಲಿ ಜನಿಸಿದರು.

1917: ಮುಲವಂತರಾಯ್ ಹಿಮ್ಮತ್ ಲಾಲ್ `ವಿನೂ' ಮಂಕಡ್ (1917-1978) ಹುಟ್ಟಿದ ದಿನ. ಭಾರತೀಯ ಕ್ರಿಕೆಟ್ ಆಟಗಾರರಾದ ಇವರು ಒಂದೇ ಟೆಸ್ಟ್ ಪಂದ್ಯದಲ್ಲಿ ಐದು ವಿಕೆಟ್ ಗಳಿಕೆಯೊಂದಿಗೆ ಶತಕವನ್ನೂ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ವ್ಯಕ್ತಿ.

1913: ಕಲಾವಿದ ಜಿ. ಆರ್. ದಾಸಪ್ಪ ಜನನ.

1903: ಜಾನ್ ಟಿಂಬರ್ ಜೆನ್ (1903-1994) ಹುಟ್ಟಿದ ದಿನ. ಡಚ್ ಆರ್ಥಿಕ ತಜ್ಞರಾದ ಇವರು `ಇಕೊನೋಮೆಟ್ರಿಕ್ ಮಾಡೆಲ್' ಗಳನ್ನು ಅಭಿವೃದ್ಧಿ ಪಡಿಸಿದರು. 1969ರಲ್ಲಿ ಅರ್ಥಶಾಸ್ತ್ರಕ್ಕಾಗಿ ನೀಡಲಾದ ಮೊತ್ತ ಮೊದಲ ನೊಬೆಲ್ ಪ್ರಶಸ್ತಿ ರಾಗ್ನರ್ ಪ್ರಿಶ್ ಜೊತೆಗೆ ಜಂಟಿಯಾಗಿ ಇವರಿಗೂ ಲಭಿಸಿತು.

1888: ಫ್ರೆಂಚ್ ವೃತ್ತಪತ್ರಿಕೆಯೊಂದು ಡೈನಮೈಟ್ ಸಂಶೋಧಕ ಆಲ್ಫ್ರೆಡ್ ನೊಬೆಲ್ ಮೃತನಾದ ಸುದ್ದಿ ಪ್ರಕಟಿಸಿತು. ಜನರ ಜೀವ ತೆಗೆಯುವ ಸ್ಫೋಟಕಗಳನ್ನು ಶೋಧಿಸಿದ್ದಕ್ಕೆ ಆತನನ್ನು ಪತ್ರಿಕೆ `ಸಾವಿನ ವರ್ತಕನ ನಿಧನ' ಎಂದು ವರ್ಣಿಸಿ ಈ ಸುದ್ದಿ ಪ್ರಕಟಿಸಿತ್ತು. ಆದರೆ ನಿಜವಾಗಿ ಸತ್ತದ್ದು ಆಲ್ ಫ್ರೆಡ್ ಸಹೋದರ ಲುಡ್ ವಿಗ್ ನೊಬೆಲ್. ಪತ್ರಿಕೆ ತನ್ನ ಬಗ್ಗೆ ಬರೆದ ವರದಿಯಿಂದ ವಿಚಲಿತನಾದ ಆಲ್ಫ್ರೆಡ್ ತನ್ನ ಬಗ್ಗೆ ಉಂಟಾದ ಸಾರ್ವಜನಿಕ ಅಭಿಪ್ರಾಯ ಬದಲಿಸಲು ಇಚ್ಛಿಸಿದ. ಇದರ ಪರಿಣಾಮವಾಗಿಯೇ ಹುಟ್ಟಿತು `ನೊಬೆಲ್ ಪ್ರಶಸ್ತಿ'.

1801: ರಣಜಿತ್ ಸಿಂಗ್ ತನ್ನನ್ನು ಪಂಜಾಬಿನ ಮಹಾರಾಜ ಎಂಬುದಾಗಿ ಘೋಷಿಸಿಕೊಂಡ. ಆತ ಸಿಖ್ ಗುರುಗಳ ಹೆಸರಿನಲ್ಲಿ ನಾಣ್ಯಗಳನ್ನು ಟಂಕಿಸಿದ್ದಲ್ಲದೆ ಸಿಖ್ ಕಾಮನ್ ವೆಲ್ತ್ ಎಂಬ ಹೆಸರಿನಲ್ಲಿ ತನ್ನ ಆಡಳಿತವನ್ನು ಮುಂದುವರೆಸಿದ.

1606: ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ ಲ್ಯಾಂಡ್ ಧ್ವಜವಾಗಿ `ಯೂನಿಯನ್ ಜ್ಯಾಕ್'ನ್ನು ಅಂಗೀಕರಿಸಲಾಯಿತು.

No comments:

Post a Comment