ನಾನು ಮೆಚ್ಚಿದ ವಾಟ್ಸಪ್

Thursday, April 12, 2018

ಇಂದಿನ ಇತಿಹಾಸ History Today ಏಪ್ರಿಲ್ 11

ಇಂದಿನ ಇತಿಹಾಸ History Today ಏಪ್ರಿಲ್ 11
2018: ನವದೆಹಲಿ: ಅದೇ ನ್ಯಾಯಾಲಯದ ನ್ಯಾಯಮೂರ್ತಿಗಳೇ ಪ್ರಶ್ನೆಗಳನ್ನು ಎತ್ತಿರುವುದರ ನಡುವೆಯೇ ಭಾರತದ ಮುಖ್ಯ ನ್ಯಾಯಾಧೀಶರು (ಸಿಜೆಐ) ಪೀಠಗಳನ್ನು ರಚಿಸುವ ವಿಚಾರದಲ್ಲಿ ವಿಶೇಷಾಧಿಕಾರವನ್ನು ಹೊಂದಿದ್ದಾರೆ. ಸಂವಿಧಾನದ ಬಲದಿಂದ ಅವರು ಸಂಸ್ಥೆಯ ಉನ್ನತ ಹೊಂದಿದ್ದಾರೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು.  ಸಿಜೆಐ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು ಸಂವಿಧಾನದ ವಿಧಿಗಳು ಸಿಜೆಐ ಅವರನ್ನು ಸಂಸ್ಥೆಯ ಉನ್ನತ ಸ್ಥಾನದಲ್ಲಿ ಇರಿಸಿದ್ದು ಸುಪ್ರೀಂಕೋರ್ಟ್ ತನ್ನ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಖಚಿತ ಪಡಿಸುವ ಅಧಿಕಾರವು ಅವರಿಗೆ ಸಂವಿಧಾನದಿಂದಲೇ ಲಭ್ಯವಾಗಿದೆ ಎಂದು ಹೇಳಿತು.  ‘(ಸಿಜೆಐ ವಿರುದ್ಧ) ಅಪನಂಬಿಕೆಯ ಭಾವನೆ ಇರಬಾರದು. ವಿಷಯ ಇಲ್ಲಿಗೇ ಮುಕ್ತಾಯಗೊಳ್ಳಲಿ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ಪೀಠದ ಪರವಾಗಿ ಬರೆದ ತೀರ್ಪಿನಲ್ಲಿ ಹೇಳಿದರು.  ಸಿಜೆಐ ಅವರ ಕಚೇರಿಯು ಸಂವಿಧಾನದ ರೂಪುರೇಷೆಯ ಅಡಿಯಲ್ಲಿ ಸ್ವತಂತ್ರ ರಕ್ಷಣೆಯನ್ನು ಹೊಂದಿದ್ದು ಸಿಜೆಐ ಅವರಿಗೆ ನೀಡಲಾಗಿರುವ ಅಧಿಕಾರಿಗಳು ಸರ್ವೋಚ್ಛ ನ್ಯಾಯಾಲಯದ ಕರ್ತವ್ಯಗಳನ್ನು ನಿರ್ವಹಿಸುವಂತೆ ನೋಡುವ ಸಲುವಾಗಿ ನೀಡಿರುವಂತಹುದು ಎಂದೂ ಪೀಠವು ಹೇಳಿತು.  ಸಿಜೆಐ ಅವರು ನ್ಯಾಯಾಂಗ ಅಧಿಕಾರಗಳ ವಿಚಾರದಲ್ಲಿ ಸಮಾನದಲ್ಲಿ ಮೊದಲಿಗರು, ಆದರೆ ಆಡಳಿತಾತ್ಮಕ ವ್ಯವಹಾರಗಳ ವಿಷಯದಲ್ಲಿ ಸಿಜೆಐ ಅವರು ವಿಶಿಷ್ಠ ಸ್ಥಾನಮಾನವನ್ನು ಹೊಂದಿರುತ್ತಾರೆ ಎಂದು ಪೀಠ ಹೇಳಿತು.  ಪ್ರಕರಣಗಳನ್ನು ಪೀಠಗಳಿಗೆ ನಿಯೋಜಿಸುವಲ್ಲಿ ಮತ್ತು ಸುಪ್ರೀಂಕೋರ್ಟಿನ ಪೀಠಗಳನ್ನು ರಚಿಸುವಲ್ಲಿನ ಸಿಜೆಐ ಅವರ ವಿಶೇಷಾಧಿಕಾರವನ್ನು ಪ್ರಶ್ನಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾಗೊಳಿಸುತ್ತಾ ನ್ಯಾಯಾಲಯವು ತನ್ನ ತೀರ್ಪನ್ನು ನೀಡಿತು.  ಸಿಜೆಐ ಅವರು ಹಿರಿಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠಗಳನ್ನು ರಚಿಸುವಾಗ ಇತರ ಹಿರಿಯ ನ್ಯಾಯಮೂರ್ತಿಗಳ ಜೊತೆ ಕುಳಿತು ಆದೇಶಗಳನ್ನು ನೀಡಬೇಕು ಎಂದು ವಕೀಲ ಅಶೋಕ ಪಾಂಡೆ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಪೀಠವನ್ನು ಒತ್ತಾಯಿಸಿತು. ಪೀಠವು ಎಲ್ಲ ಪ್ರಾರ್ಥನೆಗಳನ್ನೂ ತಿರಸ್ಕರಿಸಿತು.  ಜನವರಿ ತಿಂಗಳಲ್ಲಿ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿ ಸಿಜೆಐ ಮಿಶ್ರ ಅವರು ರಾಜಕೀಯ ಮಹತ್ವದ ಪ್ರಕರಣಗಳನ್ನು ಕೆಲವು ಆಯ್ದ ಪೀಠಗಳಿಗೆ ನಿಯೋಜಿಸುತ್ತಿರುವ ರೀತಿ ಬಗ್ಗೆ ಪ್ರಶ್ನೆ ಮಾಡಿದ್ದರು.  ಪಂಚ ಸದಸ್ಯ ಸಂವಿಧಾನ ಪೀಠದ ನೇತೃತ್ವ ವಹಿಸಿ ನೀಡಿದ್ದ ತೀರ್ಪಿನಲ್ಲಿ ಸಿಜೆಐ ಮಿಶ್ರ ಅವರು ಸಿಜೆಐ ಅವರುಮಾಸ್ಟರ್ ಆಫ್ ದಿ ರೋಸ್ಟರ್ ಎಂಬುದಾಗಿ ಘೋಷಿಸಿದ ಕೆಲವೇ ದಿನಗಳ ಬಳಿಕ ಹಿರಿಯ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿ ನಡೆಸಿದ್ದರು.  ಇದಾದ ಒಂದು ತಿಂಗಳ ಬಳಿಕ ಸಿಜೆಐ ಅವರು ಸುಪ್ರೀಂಕೋರ್ಟ್ ಪ್ರಕರಣಗಳ ರೋಸ್ಟರ್ ನಿಯೋಜನೆಯನ್ನು ವೆಬ್ ಸೈಟಿನಲ್ಲಿ ಪ್ರಕಟಿಸುವ ವ್ಯವಸ್ಥೆಯನ್ನು ಜಾರಿಗೆ ತಂದರು. ರೋಸ್ಟರಿನಲ್ಲಿ ಸಿಜೆಐ ಅವರು ಎಲ್ಲ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್) ತಮ್ಮ ಪೀಠದಲ್ಲಿಯೇ ಇರಿಸಿಕೊಂಡರು.
ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರು ಕಳೆದ ವಾರ ಬಹಿರಂಗ ಸಭೆಯೊಂದರಲ್ಲಿ ಮಾತನಾಡುತ್ತಾ ಸುಪ್ರೀಂಕೋರ್ಟಿನಲ್ಲಿ ಸೂಕ್ಷ್ಮ ಪ್ರಕರಣಗಳನ್ನು ಪೀಠಗಳಿಗೆ ನಿಯೋಜಿಸುವ ವಿಚಾರದಲ್ಲಿ ಎಲ್ಲವೂ ಸರಿ ಇಲ್ಲ ಎಂದು ಹೇಳಿದ್ದರು.

2018: ಲಕ್ನೋ
: ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ತಂದೆಯ ಶವ ಸಂಸ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ತಡೆಯಾಜ್ಞೆ ನೀಡಿತು.  ಇದೇ ವೇಳೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿರುವ ಬಿಜೆಪಿ ಶಾಸಕನ ಪತ್ನಿ ತನ್ನ ಪತಿ ತಪ್ಪಿತಸ್ಥ ಎಂಬುದಾಗಿ ಸಾಬೀತಾದರೆ ತಾನು ಪ್ರಾಣ ತ್ಯಜಿಸುವುದಾಗಿ ಬೆದರಿಕೆ ಹಾಕಿದರು.  ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ತಂದೆ ಆಘಾತ ಮತ್ತು ರಕ್ತವಿಷದ ಪರಿಣಾಮವಾಗಿ ಸಾವನ್ನಪ್ಪಿದ ಎರಡು ದಿನಗಳ ಬಳಿಕ, ೧೮ರ ಹರೆಯದ ಬಾಲಕಿ ಬರೆದ ಪತ್ರ ಓದಿದ ಹೈಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಪತ್ರವನ್ನಾಧರಿಸಿ ಸ್ವ ಇಚ್ಛೆಯ ಪ್ರಕರಣ ದಾಖಲಿಸಿದ್ದಲ್ಲದೆ, ಬಾಲಕಿಯ ತಂದೆಯ ಶವದ ಅಂತ್ಯ ಸಂಸ್ಕಾರ ಇನ್ನೂ ನೆರವೇರಿಲ್ಲವಾದರೆ ಅದನ್ನು ತಡೆ ಹಿಡಿಯಬೇಕು ಎಂದು ಆದೇಶ ಹೊರಡಿಸಿದರು.   ಪ್ರಕರಣದ ವಿಚಾರಣೆಯನ್ನು ಅವರು ಏ.12ರ ಗುರುವಾರಕ್ಕೆ ನಿಗದಿ ಪಡಿಸಿದರು.   ಇನ್ನೊಂದೆಡೆಯಲ್ಲಿ ಬಂಗಾರಮಾವು ಬಿಜೆಪಿ ಶಾಸಕನ ಪತ್ನಿ ಸಂಗೀತಾ ಸೆಂಗರ್ ಅವರು ತಮ್ಮ ಪತಿ ನಿರಪರಾಧಿ ಎಂದು ಪ್ರತಿಪಾದಿಸಿದ್ದಾರೆ. ’ಅವರು ತಪ್ಪಿತಸ್ಥ ಎಂಬುದಾಗಿ ಸಾಬೀತಾದರೆ, ಕುಟುಂಬದ ಎಲ್ಲ ಸದಸ್ಯರೂ ತಮ್ಮ ಪ್ರಾಣತ್ಯಾಗ ಮಾಡುವರು. ಸಾಕ್ಷ್ಯಾಧಾರಗಳನ್ನು ಬಚ್ಚಿಡಲಾಗುತ್ತಿರುವ ರೀತಿ ಸರಿಯಲ್ಲ. ನಮಗೆ ನ್ಯಾಯಬೇಕು ಎಂದು ಆಕೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು.  ಇದಕ್ಕೆ ಮುನ್ನ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕರನ್ನು ಭೇಟಿ ಮಾಡಿದ ಸಂಗೀತಾ ಅವರು ಸಂತ್ರಸ್ಥೆಯನ್ನು ಮತ್ತು ತಮ್ಮ ಪತಿ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.   ನಮ್ಮ ಕುಟುಂಬಕ್ಕೆ ಕೆಟ್ಟ ಹೆಸರು ತರಲು ರಾಜಕೀಯ ಸಂಚು ನಡೆದಿದೆ. ಬಾಲಕಿ, ಆಕೆಯ ಚಿಕ್ಕಪ್ಪ ಮತ್ತು ನನ್ನ ಪತಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ನಾನು ಆಗ್ರಹಿಸಿದ್ದೇನೆ. ಇದರಿಂದ ಸತ್ಯ ಹೊರಬರುತ್ತದೆ. ನಮ್ಮ ಇಡೀ ಕುಟುಂಬ ಮಾನಸಿಕ ಯಾತನೆಯನ್ನು ಅನುಭವಿಸುತ್ತಿದೆ ಎಂದು ಸೆಂಗರ್ ಉತ್ತರ ಪ್ರದೇಶದ ಪೊಲೀಸ್ ಮಹಾ ನಿರ್ದೇಶಕ .ಪಿ. ಸಿಂಗ್ ಅವರನ್ನು ಭೇಟಿ ಮಾಡಿದ ಬಳಿಕ ಹೇಳಿದರು. ಬಿಜೆಪಿ ಶಾಸಕರು ಮತ್ತು ಅವರ ಸಹೋದರರಿಂದ ಅತ್ಯಾಚಾರಕ್ಕೆ ಈಡಾಗಿರುವುದಾಗಿ ಆಪಾದಿಸಿದ ಬಾಲಕಿ ಭಾನುವಾರ ಉತ್ತರ ಪ್ರದೇಶ ಮುಖ್ಯಮಂತ್ರಿಯ ಮನೆಯ ಮುಂದೆ ಬೆಂಕಿಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಏನಿದ್ದರೂ ಒಂದು ದಿನದ ಬಳಿಕ ಆಕೆಯ ತಂದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.  ಘಟನೆ ಸಂಭವಿಸಿದಾಗ ಬಾಲಕಿಯ ತಂದೆ ಉನ್ನಾವೋದಲ್ಲಿ ಪೊಲೀಸ್ ವಶದಲ್ಲಿ ಇದ್ದರು. ಬಿಜೆಪಿ ಪ್ರಚೋದನೆಯಿಂದ ತನ್ನ ತಂದೆಯನ್ನು ಜಿಲ್ಲಾ ಸೆರೆಮನೆಯಲ್ಲಿ ಕೊಲ್ಲಲಾಗಿದೆ ಎಂದೂ ಬಾಲಕಿ ಆಪಾದಿಸಿದ್ದಾಳೆ. ಆಘಾತ ಮತ್ತು ರಕ್ತವಿಷದ ಪರಿಣಾಮವಾಗಿ ಆತನ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಹೇಳಿತು. ಅತ್ಯಾಚಾರ ಸಂತ್ರಸ್ಥ ಬಾಲಕಿಯ ದೂರಿನ ಪ್ರಕಾರ ಸೆಂಗರ್ ಸಹೋದರ ಅತುಲ್ ಮತ್ತು ನಿಕಟವರ್ತಿಗಳು ಬಾಲಕಿಯ ತಂದೆಯನ್ನು ಬಂಧನಕ್ಕೆ ಈಡಾಗುವ ಮುನ್ನ ಅವರ ಉನ್ನಾವೋ ಮನೆಯಿಂದ ನಿಂದಿಸುತ್ತಾ ಹೊರಕ್ಕೆ ಎಳೆದು ತಂದು ಮರಕ್ಕೆ ಕಟ್ಟಿ ಹಲ್ಲೆ ನಡೆಸಿ, ಅತ್ಯಾಚಾರ ಪ್ರಕರಣವನ್ನು ಮುಂದಕ್ಕೆ ಒಯ್ಯದಂತೆ ಬೆದರಿಸಿದ್ದರು. ಘಟನೆಯ ಬೆನ್ನಲ್ಲೇ ಲಕ್ನೋ ಅಪರಾಧ ಶಾಖೆ ಅತುಲ್ ನನ್ನು ಆತನ ಮನೆಯಿಂದಲೇ ಬಂಧಿಸಿತ್ತು.  ಬಾಲಕಿಯು ನನ್ನ ಗಂಡನ ವಿರುದ್ಧ ಯಾವುದೇ ಸಾಕ್ಷ್ಯ ನೀಡಲು ಸಮರ್ಥಳಾಗಿಲ್ಲ. ಆದರೂ ತನ್ನ ಪತಿಯನ್ನು ಅತ್ಯಾಚಾರಿ ಎಂದು ಹೇಳಲಾಗುತ್ತಿದೆ. ಬಾಲಕಿಯು ಇಂತಹ ಅತ್ಯಾಚಾರದ ಆರೋಪಗಳನ್ನು ಹಿಂದೆಯೂ ತನ್ನ ಗ್ರಾಮದ ಬಾಲಕನೊಬ್ಬನ ವಿರುದ್ಧ ಮಾಡಿದ್ದಳು ಎಂದು ಸೆಂಗರ್ ಪತ್ನಿ ಹೇಳಿದರು.  ಅತ್ಯಾಚಾರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕ ತನಿಖೆ ನಡೆಸಬೇಕು. ಅತ್ಯಾಚಾರ ಆರೋಪ ತಪ್ಪೆಂದು ಕಂಡು ಬಂದಲ್ಲಿ ಬಾಲಕಿ ಮತ್ತು ಆಕೆಯ ಚಿಕ್ಕಪ್ಪನನ್ನು ಬಂಧಿಸಬೇಕು ಎಂದೂ ಅವರು ಆಗ್ರಹಿಸಿದರು.  ಅತ್ಯಾಚಾರ ಸಂತ್ರಸ್ಥೆಯ ಕುಟುಂಬ ಕೂಡಾ ಆಕೆಯ ತಂದೆಯ ಸಾವಿನ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿದೆ. ವಕೀಲ ಮನೋಹರ ಲಾಲ್ ಶರ್ಮ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ  ಅರ್ಜಿಯೊಂದರ ವಿಚಾರಣೆಯನ್ನು ಬುಧವಾರ ನಡೆಸಿದ ಸುಪ್ರೀಂಕೋರ್ಟ್ ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿರುವ ಮನವಿಯ ವಿಚಾರಣೆಯನ್ನು ಮುಂದಿನವಾರ ನಡೆಸುವುದಾಗಿ ಹೇಳಿತು.  ರಾಜಕೀಯ ಒತ್ತಡಕ್ಕೆ ಮಣಿದು ಶಾಸಕನ ಹೆಸರನ್ನು ದೂರಿನಲ್ಲಿ ಪ್ರಸ್ತಾಪಿಸಲಾಗಿಲ್ಲ. ರಾಜ್ಯ ಪೊಲೀಸರು ಪ್ರಕರಣದಲ್ಲಿ ಪ್ರಾಮಾಣಿಕ ತನಿಖೆಯನ್ನು ನಡೆಸಲು ಸಾಧ್ಯವಿಲ್ಲ. ಆದ್ದರಿಂದ ವಿಷಯವನ್ನು ಸ್ವತಂತ್ರ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಯಿತು. ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನೀಡಿದತೆ ಸಂತ್ರಸ್ಥೆಯ ಕುಟುಂಬಕ್ಕೆ ರಕ್ಷಣೆ ಮತ್ತು ಪರಿಹಾರವನ್ನು ಒದಗಿಸಬೇಕು ಎಂದೂ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೋರಿತು.  ಮಧ್ಯೆ ಬಾಲಕಿಯ ಕುಟುಂಬಕ್ಕೆ ಪೂರ್ಣ ಭದ್ರತೆ ನೀಡಲಾಗುವುದು ಎಂದು ಲಕ್ನೋ ಎಡಿಜಿ ರಾಜೀವ್ ಕೃಷ್ಣ ಹೇಳಿರುವುದಾಗಿ ಸುದ್ದಿ ಸಂಸ್ಥೆಗಳು ವರದಿ ಮಾಡಿದವು.  ‘ದೆಹಲಿಯಲ್ಲಿ ಅವರ ಬಂಧು ಇದ್ದಾರೆ. ಉನ್ನಾವೋದಲ್ಲಿ ಇರುತ್ತಾರೆಯೇ ಅಥವಾ ದೆಹಲಿಯಲ್ಲಿ ಇರುತ್ತಾರೆಯೇ ಎಂದು ನಿರ್ಧರಿಸುವುದು ಈಗ ಅವರಿಗೆ ಬಿಟ್ಟ ವಿಷಯ. ನಾವು ಇಲ್ಲಿ ತನಿಖೆಗೆ ಬಂದಿದ್ದೇವೆ. ನಾವು ರಾಜ್ಯ ಸರ್ಕಾರಕ್ಕ ಈದಿನ ಸಂಜೆ ವೇಳೆಗೆ ಮಧ್ಯಂತರ ವರದಿ ಕಳುಹಿಸುತ್ತೇವೆ. ಪ್ರಕರಣದ ಎಲ್ಲ ಆಯಾಮಗಳ ತನಿಖೆಯನ್ನೂ ಮಾಡಲಾಗುತ್ತಿದೆ. ಎಸ್ ಐಟಿ ಮೇಲೆ ಯಾವುದೇ ಒತ್ತಡಗಳಿಲ್ಲ, ಅದು ಸ್ವತಂತ್ರವಾಗಿ ತನಿಖೆ ನಡೆಸುತ್ತಿದೆ ಎಂದು ಎಸ್ ಐಟಿಯ ನೇತೃತ್ವ ವಹಿಸಿರು ರಾಜೀವ್ ಕೃಷ್ಣ ಹೇಳಿದರು.

2018: ನವದೆಹಲಿ: ತಾಜ್ ಮಹಲ್ ಮೇಲಿನ ತನ್ನ ಮಾಲೀಕತ್ವದ ಪ್ರತಿಪಾದನೆಯನ್ನು ಸಾಬೀತು ಪಡಿಸಲು ಮೊಘಲ್ ಚಕ್ರವರ್ತಿ ಶಹಜಹಾನನ ಸಹಿ ಇರುವಂತಹ ದಾಖಲೆಗಳನ್ನು ಹಾಜರು ಪಡಿಸುವಂತೆ ಸುಪ್ರೀಂಕೋರ್ಟ್ ಉತ್ತರ ಪ್ರದೇಶ ಸುನ್ನಿ ವಕ್ಫ್ ಮಂಡಳಿಗೆ ನಿರ್ದೇಶಿಸಿತು.  ಚಕ್ರವರ್ತಿ ಶಹಜಹಾನ್ ಸಹಿಯನ್ನು ಹಾಜರು ಪಡಿಸಲು ಸುಪ್ರೀಂಕೋರ್ಟ್ ಏ.10ರ ಮಂಗಳವಾರ ಒಂದು ವಾರದ ಗಡುವನ್ನು ವಕ್ಫ್ ಮಂಡಳಿಗೆ ನೀಡಿತು. ತನ್ನ ಪ್ರೀತಿಯ ಪತ್ನಿ ಮಮ್ತಾಜ್ ನೆನಪಿಗಾಗಿ ಕಟ್ಟಡ ಕಟ್ಟಿದ ೧೮ ವರ್ಷಗಳ ಬಳಿಕ ಶಹಜಹಾನ್ ಆಗ್ರಾ ಕೋಟೆಯಲ್ಲಿ ಗೃಹ ಬಂಧನದಲ್ಲಿ ಇದ್ದಾಗ ಸಾವನ್ನಪ್ಪಿದ್ದ.  ೨೦೧೦ರಲ್ಲಿ  ತಾಜ್ ಮಹಲ್ ನ್ನು ವಕ್ಫ್ ಆಸ್ತಿಯಾಗಿ ನೋಂದಾಯಿಸಬೇಕು ಎಂದು ವಕ್ಫ್ ಮಂಡಳಿಯು ೨೦೦೫ರ ಜುಲೈ ತಿಂಗಳಲ್ಲಿ ಮಾಡಿದ್ದ ಆದೇಶದ ವಿರುದ್ಧ ಭಾರತದ ಪುರಾತತ್ವ ಸಮೀಕ್ಷೆಯು (ಎಎಸ್) ಕೋರ್ಟಿಗೆ ೨೦೧೦ರಲ್ಲಿ ಅರ್ಜಿ ಸಲ್ಲಿಸಿತ್ತು. ವಕ್ಫ್ ಮಂಡಳಿಯ ಆದೇಶಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿತ್ತು. ಸ್ಮಾರಕದ ಇತಿಹಾಸದ ಬೆನ್ನತ್ತಿದ ಭಾರತದ ಮುಖ್ಯ ನ್ಯಾಯಮೂರ್ತಿಯವರುತಾಜ್ ಮಹಲ್ ವಕ್ಫ್ ಮಂಡಳಿಗೆ ಸೇರಿದೆ ಎಂದು ಭಾರತದಲ್ಲಿ ಯಾರು ನಂಬುತ್ತಾರೆ? ಶಹಜಹಾನ್ ವಕ್ಫ್ ನಾಮಾಕ್ಕೆ ಸಹಿ ಮಾಡಿದ್ದು ಹೇಗೆ? ಅದನ್ನು ನಿಮಗೆ ಯಾವಾಗ ನೀಡಲಾಯಿತು?’ ಎಂದು ಪ್ರಶ್ನಿಸಿದರು.  ಹಿರಿಯ ವಕೀಲ ವಿವಿ ಗಿರಿ ಅವರ ಮೂಲಕ ಮಂಡಳಿಯು ಸ್ಮಾರಕವು ಶಹಾಜಹಾನ್ ಕಾಲದಿಂದಲೇ ವಕ್ಫ್ಗೆ ಸೇರಿತ್ತು ಎಂದು ಪ್ರತಿಪಾದಿಸಿತ್ತು. ಅದು ವಕ್ಫ್ ನಾಮ ಅಡಿಯಲ್ಲಿನ ಆಸ್ತಿ ಎಂದೂ ಮಂಡಳಿ ಹೇಳಿತ್ತು. ಮಂಡಳಿಯ ಪ್ರತಿಪಾದನೆಯನ್ನು ಭಾರತದ ಪುರಾತತ್ವ ಸಮೀಕ್ಷೆ (ಎಎಸ್ ) ಪ್ರಶ್ನಿಸಿದೆ.  ಎಎಸ್ ಪರ ಹಾಜರಾದ ವಕೀಲ ಎಡಿಎನ್ ರಾವ್ ಅವರು ಸಮಯದಲ್ಲಿ ವಕ್ಫ್ ನಾಮ ಇರಲೇ ಇಲ್ಲ ಎಂದು ಹೇಳಿದರು.  ೧೮೫೮ರ ಘೋಫಣೆ ಪ್ರಕಾರ, ಕೊನೆಯ ಮೊಘಲ್ ಚಕ್ರವರ್ತಿ ಬಹಾದುರ್ ಶಹ ಜಾಫರ್ ಅವರಿಂದ ಬ್ರಿಟಿಷರು ವಶಕ್ಕೆ ತೆಗೆದುಕೊಂಡ ಸ್ವತ್ತುಗಳು ರಾಣಿಯ ವಶದಲ್ಲಿ ಇದ್ದವು. ೧೯೪೮ರ ಕಾಯ್ದೆಯ ಮೂಲಕ ಕಟ್ಟಡಗಳನ್ನು ಭಾರತ ಸರ್ಕಾರ ತನ್ನ ವಶಕ್ಕೆ ಪಡೆಯಿತು ಎಂದು ವಕೀಲ ರಾವ್ ನುಡಿದರು.  ಸಿಜೆಐ ಮತ್ತು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಹಾಗೂ ಡಿವೈ ಚಂದ್ರಚೂಡ್ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ೧೭ನೇ ಶತಮಾನದಲ್ಲಿ ಕಟ್ಟಿದ್ದ ಕಟ್ಟಡವು ಮೊಘಲ್ ವಂಶ ಪತನಗೊಂಡ ಕ್ಷಣದಿಂದ ಈಸ್ಟ್ ಇಂಡಿಯಾ ಕಂಪೆನಿಗೆ ವರ್ಗಾವಣೆಗೊಂಡು ಸ್ವಾತಂತ್ರ್ಯಾನಂತರ ಎಸ್ ವಶಕ್ಕೆ ಬಂದಿದೆ ಎಂಬುದನ್ನು ಮಂಡಳಿಗೆ ನೆನಪಿಸಿದರು. ‘ಶಹಜಹಾನ್ ತನ್ನ ಪುತ್ರ ಔರಂಗನೇಬನಿಂದ ಗೃಹ ಬಂಧನಕ್ಕೆ ಒಳಗಾದ ಬಳಿಕ ಆಗ್ರಾ ಕೋಟೆಯ ಒಳಗಿನ ತನ್ನ ಸೆಲ್ ನಿಂದ ತಾಜ್ ಮಹಲನ್ನು ವೀಕ್ಷಿಸುತ್ತಿದ್ದ. ಬಂಧನದಲ್ಲಿ ಇದ್ದಾಗ ಆತ ವಕ್ಫ್ ನಾಮಾಕ್ಕೆ ಹೇಗೆ ಸಹಿ ಮಾಡಿದ? ಚಕ್ರವರ್ತಿ ಸಹಿ ಮಾಡಿದ ದಾಖಲೆಗಳನ್ನು ನಮಗೆ ತೋರಿಸಿ ಎಂದು ಸಿಜೆಐ ಮಿಶ್ರ ಶಹಾಜಹಾನ್ ಕೈಬರಹದ ದಾಖಲೆ ತಂಡುವಂತೆ ಆಜ್ಞಾಪಿಸಿದರು.  ಮೊಘಲ್ ಉತ್ತರಾಧಿಕಾರಿ ತಾನು ಎಂದು ಹೇಳಿಕೊಂಡ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ, ತನ್ನನ್ನು ತಾಜ್ ಮಹಲಿನ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಯಾಗಿ ನೇಮಿಸಬೇಕು ಎಂದು ಅಲಹಾಬಾದ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ಲಾಗಾಯ್ತಿನಿಂದ ತಾಜ್ ಮಹಲ್ ಯಾರಿಗೆ ಸೇರಿದ್ದು ಎಂಬ ಪ್ರಶ್ನೆ ತಲೆಯೆತ್ತಿದೆ. ವಿಷಯದಲ್ಲಿ ಹಸ್ತಕ್ಷೇಪ ನಡೆಸಲು ನಿರಾಕರಿಸಿದ್ದ ಹೈಕೋರ್ಟ್ ಬದಲಿಗೆ ವಕ್ಫ್ ಮಂಡಳಿಗೆ ಮನವಿ ಸಲ್ಲಿಸುವಂತೆ ಆತನಿಗೆ ಸೂಚಿಸಿತ್ತು.  ವಕ್ಫ್ ಮಂಡಳಿಯು ಅಯೋಧ್ಯಾ ಭೂಮಿಯ ಮಾಲೀಕತ್ವದ ವಿಚಾರದಲ್ಲೂ ಸುಪ್ರೀಂಕೋರ್ಟಿನಲ್ಲಿ ಇನ್ನೊಂದು ನಿರ್ಣಾಯಕ ಸಮರವನ್ನು ನಡೆಸುತ್ತಿದೆ. ವಿವಾದಿತ ಭೂಮಿಯಲ್ಲಿ ಬಾಬರಿ ಮಸೀದಿ (ಈಗ ಧ್ವಂಸಗೊಂಡಿದೆ) ಇತ್ತು.
2018: ಅಲ್ಜೀರಿಸ್: ಅಲ್ಜೀರಿಯಾದ ರಾಜಧಾನಿ ಅಲ್ಜೀರಿಸ್ ಹೊರಭಾಗದಲ್ಲಿ  ಸೇನಾ ವಿಮಾನವೊಂದು ನೆಲಕ್ಕೆ ಅಪ್ಪಳಿಸಿ  ಸಂಭವಿಸಿದ ದುರಂತದಲ್ಲಿ ಪಶ್ಚಿಮ ಸಹಾರಾದ ಪೊಲಿಸಾರಿಯೊ ಸ್ವಾತಂತ್ರ್ಯ ಚಳವಳಿಯ ಸದಸ್ಯರು ಸೇರಿದಂತೆ ೨೫೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.  ಆಲ್ಜೀರಿಸ್ ನೈಋತ್ಯಕ್ಕೆ ಇರುವ ಬೌಫಾರಿಕ್ ವಿಮಾನ ನಿಲ್ದಾಣದ ಸಮೀಪ ಬೆಂಕಿ ಹಾಗೂ ಹೊಗೆ ಉಗುಳುತ್ತಿರುವ ವಿಮಾನದ ಅವಶೇಷಗಳ ಸುತ್ತ ಜನ ಭಾರಿ ಸಂಖ್ಯೆಯಲ್ಲಿ ಜಮಾಯಿಸಿರುವುದನ್ನು ಟೆಲಿವಿಷನ್ ವಿಡಿಯೋಗಳು ತೋರಿಸಿದವು.  ರಷ್ಯಾದ ಇಲ್ಯೂಶಿನ್ ಸಾರಿಗೆ ವಿಮಾನ ಇದಾಗಿದ್ದು, ದುರಂತದಲ್ಲಿ ೨೫೭ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಟೇಟ್ ಟಿವಿ ವರದಿ ಮಾಡಿತು.  ಸಾವನ್ನಪ್ಪಿದವರಲ್ಲಿ ೨೬ ಮಂದಿ ಪೊಲಿಸಾರಿಯೊ ಸದಸ್ಯರೂ ಸೇರಿದ್ದಾರೆ ಎಂದು ಅಲ್ಜೀರಿಯಾದ ಆಡಳಿತಾರೂಢ ಎಫ್ ಎಲ್ ಎನ್ ಪಕ್ಷದ ಸದಸ್ಯರೊಬ್ಬರು ತಿಳಿಸಿದರು. ಅಲ್ಜೀರಿಯಾ ಬೆಂಬಲಿತ ಗುಂಪು ನೆರೆಯ ಪಶ್ಚಿಮ ಸಹಾರಾದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದೆ. ದೀರ್ಘ ಕಾಲದ ವಿವಾದದಲ್ಲಿ ಮೊರಾಕ್ಕೋ ಕೂಡಾ ಪ್ರದೇಶ ತನ್ನದು ಎಂದು ಪ್ರತಿಪಾದಿಸುತ್ತಿದೆ.  ಅಲ್ಜೀರಿಯಾದ ಸೇನಾ ವಿಮಾನ  ಉತ್ತರ ಅಲ್ಜೀರಿಯಾದ ಫಾರ್ಮ್ ಫೀಲ್ಡ್ ಒಂದರಿಂದ ಗಗನಕ್ಕೆ ಏರಿದ ಕೆಲವೇ ಕ್ಷಣಗಳಲ್ಲಿ ನೆಲಕ್ಕೆ ಅಪ್ಪಳಿಸಿತ್ತು.  ವಿಮಾನ ಪತನಕ್ಕೆ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ತನಿಖೆ ಆರಂಭಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆ ತಿಳಿಸಿತು.  ವಿಮಾನ ಪತನದ ಬಳಿಕ ಬೌಫಾರಿಕ್ ಸೇನಾ ನೆಲೆಯ ಸಮೀಪ ತುರ್ತು ಸೇವೆಗಳನ್ನು ಆರಂಭಿಲಾಯಿತು.  ನೂರಕ್ಕಿಂತಲೂ ಹೆಚು ಸಾವು ಸಂಭವಿಸಿದೆ. ಹೊತ್ತಿನಲ್ಲಿ ಸತ್ತವರ ನಿರ್ದಿಷ್ಟ ಸಂಖ್ಯೆ ಎಷ್ಟು ಎಂದು ನಾನು ಹೇಳಲಾರೆ ಎಂದು ನಾಗರಿಕ ರಕ್ಷಣಾ ಸಂಸ್ಥೆಯ ಮುಖ್ಯ ವಕ್ತಾರ ಮೊಹಮ್ಮದ್ ಅಚೌರ್ ಇದಕೆ ಮುನ್ನ ಹೇಳಿದ್ದರು.  ಸೇನೆಯು ಯೋಧರನ್ನು ಕರೆದೊಯ್ಯುತ್ತಿತ್ತು. ರಕ್ಷಣಾ ಸಚಿವಾಲಯವು ತತ್ ಕ್ಷಣ ಸಾವಿನ ಖಚಿತ ಸಂಖ್ಯೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿ ಮೃತರ ಕುಟುಂಬಗಳಿಗೆ ತನ್ನ ಸಂತಾಪವನ್ನು ಸೂಚಿಸಿತು.  ರಾಜಧಾನಿ ಅಲ್ಜೀರಿಸ್ ನಿಂದ ೩೦ ಕಿಮೀ (೨೦ ಮೈಲು) ನೈಋತ್ಯಕ್ಕೆ ಇರುವ ಬೌಫಾರಿಕ್ ನಿಂದ ನೈರುತ್ಯ ಅಲ್ಜೀರಿಯಾದ ಬೆಚಾರ್ನಲ್ಲಿನ ಸೇನಾ ನೆಲೆಯತ್ತ ತೆರಳಲು ವಿಮಾನ ಆಗಷ್ಟೇ ವಿಮಾನ ಬಾನಿಗೇರಿತ್ತು.   ಮೊರಾಕ್ಕೋ ವಶಪಡಿಸಿಕೊಂಡ ವಿವಾದಿತ ಪಶ್ಚಿಮ ಸಹಾರಾದ ನಿರಾಶ್ರಿತರ ನೆಲೆಯಾದ ದಕ್ಷಿಣ ಆಲ್ಜೀರಿಯಾದ ಟಿಂಡೌಫ್ನಲ್ಲಿ  ಒಮ್ಮೆ ಇಳಿದು ಬಳಿಕ ವಿಮಾನ ಮುಂದುವರೆಯಬೇಕಿತ್ತು. ಸೋವಿಯತ್ ವಿನ್ಯಾಸದ ೧೧-೭೬ ಸೇನಾ ಸಾರಿಗೆ ವಿಮಾನವು ನಿವಾಸಿಗಳಿಲ್ಲದ ಕೃಷಿ ವಲಯದಲ್ಲಿ ಪತನಗೊಂಡಿತು ಎಂದು ಅಚೌರ್ ಹೇಳಿದರು.

2018: ಬೆಂಗಳೂರು: ಏಪ್ರಿಲ್ ೪ರಂದು ಕಣ್ಮರೆಯಾಗಿದ್ದ ಮೂವತೈದು ವರ್ಷದ ಮಾನವ ಶಾಸ್ತ್ರಜ್ಞೆ ಆತ್ರೇಯೀ ಮಜುಂದಾರ್ ಅವರು ಬೆಳಗ್ಗೆ ಬೆಂಗಳೂರಿನ ಪಂಚತಾರಾ ಹೋಟೆಲ್ ಒಂದರಲ್ಲಿ ಪತ್ತೆಯಾದರು.  ‘ನಮ್ಮ ಶೋಧಕರ ತಂಡಗಳು ಆಕೆ ಹೋಟೇಲುಗಳಲ್ಲಿ ಸುತ್ತಾಡುತ್ತಿರುವ ಸುಳಿವು ಲಭಿಸಿದ ಹಿನ್ನೆಲೆಂಯಲ್ಲಿ ಆಕೆಗಾಗಿ ಬೆಂಗಳೂರು ನಗರದ ವಿವಿಧ ಹೋಟೆಲುಗಳಲ್ಲಿ ಶೋಧ ಕಾರ್ ಕೈಗೊಂಡಿದ್ದವು. ನಾವೀಗ ಅವರನ್ನು ನಗರದ ಪಂಚತಾರಾ ಹೋಟೆಲ್ ಒಂದರಲ್ಲಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಹಂತದಲ್ಲಿ ಅವರ ಮಾನಸಿಕ ಸ್ಥಿತಿ ಬಗ್ಗೆ ನಾನು ಏನೂ ಹೇಳಲಾರೆ ಎಂದು ಶೋಧ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದ ವೈಟ್ ಫೀಲ್ಟ್ ಡಿಸಿಪಿ ಅಬ್ದುಲ್ ಅಹದ್ ಹೇಳಿದರು.  ಮಜುಂದಾರ್ ಅವರು ಆಂಡ್ರ್ಯೂ ಡಬ್ಲ್ಯೂ ಮೆಲ್ಲೋನ್ ಫೌಂಡೇಷನ್ ಜೊತೆಗೆ ತಾವು ಸಂಶೋಧನಾ ಅಧ್ಯಯನ ಕೈಗೊಂಡಿದ್ದ ಟೊರೊಂಟೋದಿಂದ ಹಿಂದಿರುಗಿದ್ದರು. ಏಪ್ರಿಲ್ ೪ರಂದು ಸಂಜೆ .೩೦ಕ್ಕೆ ಅವರು ನಗರಕ್ಕೆ ವಾಪಸಾಗಿದ್ದರು ಮತ್ತು ಅದೇ ದಿನ ರಾತ್ರಿ ಗಂಟೆ ಸುಮಾರಿಗೆ ಕೈಯಲ್ಲಿ ಕೇವಲ ಪರ್ಸ್ ಒಂದನ್ನು ಹಿಡಿದುಕೊಂಡು ಮನೆ ಬಿಟ್ಟಿದ್ದರು. ದಿನದಿಂದ ಅವರು ಕಣ್ಮರೆಯಾಗಿದ್ದರು.  ಆತ್ರೇಯೀ ಮಜುಂದಾರ್ ತಂದೆ ಬಿಲಾಪ್ ಮಜುಂದಾರ್ ಅವರು ಮರಾಠಾಹಳ್ಳಿ ಪೊಲೀಸ್ ಠಾಣೆಯನ್ನು ಏಪ್ರಿಲ್ ೫ರಂದು ಸಂಪರ್ಕಿಸಿ ದೂರು ನೀಡಿದ ಬಳಿಕ ಪೊಲೀಸರು ಕಣ್ಮರೆ ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ನಡೆಸಿದ ಶೋಧ ಕಾರ್ಯಾಚರಣೆಯಿಂದ ಪಿಎಚ್ ಡಿ ಪದವೀಧರೆ ಹಿಂದಿನ ದಿನ ನೊವೊಟೆಲ್ ಹೋಟೆಲಿನಲ್ಲಿ ಕಾಣಿಸಿಕೊಂಡದ್ದು ಗೊತ್ತಾಯಿತು. ಮತ್ತು ಏಪ್ರಿಲ್ ೬ರಂದು ಅವರು ಮಾರಿಯೋಟ್ ಹೊಟೇಲಿನಿಂದ ಹೊರಬರುತ್ತಿದ್ದುದು ಸಿಸಿಟಿವಿ ವಿಡಿಯೋಗಳಲ್ಲಿ ದಾಖಲಾಗಿದ್ದುದು ಪತ್ತೆಯಾಯಿತು.  ಮಜುಂದಾರ್ ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಪೊಲೀಸರು ಹೆಚ್ಚೇನನ್ನೂ ಬಹಿರಂಗ ಪಡಿಸಲಿಲ್ಲ. ಆದರೆ ಆಕೆಯ ಮಾನಸಿಕ ಸ್ಥಿತಿ ಸುಸ್ಥಿತಿಯಲ್ಲಿ ಇರುವಂತೆ ಕಾಣುತ್ತಿಲ್ಲವಾದ್ದರಿಂದ ಸಮಾಲೋಚಕರು (ಕೌನ್ಸೆಲರ್ ಗಳು) ಆಕೆಯ ಬಳಿ ಮಾತನಾಡಲಿದ್ದಾರೆ ಎಂದು ಪೊಲೀಸರು ತಿಳಿಸಿದರು.  ಸುತ್ತಾಟದಂತಹ ಸೂಚನೆಗಳು ಬುದ್ಧಿ ಮಾಂದ್ಯತೆ (ಡೆಮೆನ್ಷಿಯಾ), ಛಿದ್ರ ಮನಸ್ಕತೆ (ಸ್ಕಿಜೋಫ್ರೇನಿಯಾ) ಅಥವಾ ಖಿನ್ನತೆ (ಡಿಪ್ರೆಷ್ಷನ್) ಸಮಸ್ಯೆಗಳ ಲಕ್ಷಣವಾಗಿರಬಹುದು. ಕೆಲವೊಮ್ಮೆ ಮನೋವ್ಯಾಧಿಯಿಂದಲೂ ಆಗುವುದುಂಟು ಎಂದು ಬೆಂಗಳೂರಿನ ನಿಮ್ಹಾನ್ಸ್ (ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಪ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ- ಸೈನ್ಸಸ್)ನಲ್ಲಿ ನಿರ್ದೇಶಕರಾಗಿರುವ ಪ್ರೊ.ಬಿಎನ್ ಗಂಗಾಧರ್ ಹೇಳುತ್ತಾರೆ.   ಖಿನ್ನತೆಗೆ ಒಳಗಾದವರು ವಿಪರೀತ ಕ್ರಮಗಳಿಗೆ ಕೈಹಾಕುತ್ತಾರೆ. ಆದರೆ ಸಮರ್ಪಕ ಚಿಕಿತ್ಸೆಯಿಂದ ಸುಧಾರಿಸಬಲ್ಲರು. ಮಹಿಳೆ ಇಂತಹ ಹೆಜ್ಜೆಯನ್ನು ಏಕೆ ಇಟ್ಟಳು ಎಂದು ನಾನು ಊಹೆ ಮಾಡಲು ಸಾಧ್ಯವಿಲ್ಲ. ಮೊದಲು ವೈದ್ಯಕೀಯ ತಪಾಸಣೆ ಆಗಲಿ, ಬಳಿಕ ಕುಟುಂಬವು ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ಅವರು ನುಡಿದರು.

2018: ನವದೆಹಲಿ: ಮದುವೆಗೆ ವಧುವಿನ ಒಪ್ಪಿಗೆ ಹಿಂದೂ ವಿವಾಹ ಕಾನೂನಿನಲ್ಲಿ ಅಂತರ್ಗತ ಭಾಗವಾಗಿದೆ ಎಂದು ಅಭಿಪ್ರಾಯ ಪಟ್ಟ ಸುಪ್ರೀಂಕೋರ್ಟ್ ವಧುವಿನ ಸ್ವಯಂ ಒಪ್ಪಿಗೆ ಇಲ್ಲದ ಮದುವೆ ಅಥವಾ ವಂಚನೆಯಿಂದ ನಡೆಸಲಾಗುವ ಆಕೆಯ ಮದುವೆಯನ್ನು ಅಸಿಂಧು ಎಂಬುದಾಗಿ ನ್ಯಾಯಾಂಗ ಘೋಷಣೆ ಮಾಡಲು ನಿರಾಕರಿಸಿತು.  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವುಹಿಂದು ವಿವಾಹ ಕಾಯ್ದೆಯಲ್ಲಿ ಬಲಾತ್ಕಾರದ ಮದುವೆ ಅಥವಾ ಮಹಿಳೆಯ ಒಪ್ಪಿಗೆ ಇಲ್ಲದೆ ವಂಚನೆಯಿಂದ ನಡೆಸುವ ಮದುವೆ ಅಮಾನ್ಯ ಎಂಬುದು ಅಂತರ್ಗತವಾಗಿಯೇ ಇದೆ ಎಂದು ಹೇಳಿತು. ಕಾನೂನು ಸ್ವತಃ ಸುಸ್ಪಷ್ಟವಾಗಿರುವಾಗ ನ್ಯಾಯಾಂಗದ ಘೋಷಣೆಯ ಅಗತ್ಯವಿಲ್ಲ. ವಧುವಿನ ಒಪ್ಪಿಗೆಯಿಲ್ಲದೆ ನಡೆಯುವ ಮದುವೆ, ಅಮಾನ್ಯಗೊಳ್ಳಲು ಅರ್ಹ. ಒಪ್ಪಿಗೆ ಇಲ್ಲದೆ ವಂಚನೆಯಿಂದ ನಡೆಯುವ ಮದುವೆಯೂ ಇದೇ ಮಾನದಂಡ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ನ್ಯಾಯಮೂರ್ತಿ .ಎಂ. ಖಾನ್ವಿಲ್ಕರ್ ಅವರು ಪೀಠದ ಇನ್ನೊಬ್ಬ ಸದಸ್ಯರಾಗಿದ್ದರು.  ಕರ್ನಾಟಕದ ಪ್ರಭಾವೀ ರಾಜಕಾರಣಿಯೊಬ್ಬರ ಪುತ್ರಿ ಸಲ್ಲಿಸಿದ್ದ ಅರ್ಜಿಯೊಂದರ ತುರ್ತು ವಿಚಾರಣೆಯನ್ನು ಪೀಠ ನಡೆಸಿತ್ತು. ತನ್ನ ಮದುವೆಯನ್ನು ತನ್ನ ಇಚ್ಛೆಗೆ ವಿರುದ್ಧವಾಗಿ ಮಾಡಲಾಗಿದೆ ಎಂದು ಆಕೆ ಆಪಾದಿಸಿದ್ದರು.
ಆಕೆ ದೆಹಲಿಗೆಪರಾರಿಯಾಗಿದ್ದು ಪ್ರಸ್ತುತ ದೆಹಲಿ ಮಹಿಳಾ ಆಯೋಗದ ಆಶ್ರಯದಲ್ಲಿದ್ದಾರೆ. ಅವರು ರಕ್ಷಣೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು ತಮ್ಮ ಆಶಯಕ್ಕೆ ವಿರುದ್ಧವಾಗಿ ಬಲವಂತದಿಂದ ಮದುವೆಯಾಗುವ ಮಹಿಳೆಯರ ಸ್ಥಿತಿಯನ್ನು ತಮ್ಮ ಅರ್ಜಿಯಲ್ಲಿ ವಿವರಿಸಿದ್ದರು.  ಮಹಿಳೆಯನ್ನು ಪ್ರತಿನಿಧಿಸಿದ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಸುನಿಲ್ ಫರ್ನಾಂಡಿಸ್ ಅವರುಮಹಿಳೆಯರು ಒಪ್ಪಿಗೆ ನೀಡಬೇಕು ಎಂಬುದಾಗಿ ಹೇಳುವ ಸ್ಪಷ್ಟ ವಿಧಿ ಹಿಂದೂ ವಿವಾಹ ಕಾಯ್ದೆಯಲ್ಲಿ ಇಲ್ಲ ಎಂದು ವಾದಿಸಿದರು.  ವಧುವಿನ ಒಪ್ಪಿಗೆಯು ಸಕ್ರಮ ಮದುವೆಯ ಭಾಗ ಎಂಬುದಾಗಿ ಸುಪ್ರೀಂಕೋರ್ಟ್ ಘೋಷಿಸಬೇಕು ಎಂದು ಜೈಸಿಂಗ್ ಅವರು ವಾದಿಸಿದರು. ಸಕ್ರಮ ಮದುವೆಗೆ ವಧುವಿನ ಒಪ್ಪಿಗೆ ಪೂರ್ವ ಷರತ್ತು ಎಂಬುದಾಗಿ ಹಿಂದು ವಿವಾಹ ಕಾಯ್ದೆಯ ಸೆಕ್ಷನ್ , ೧೧ ಮತ್ತು ೧೨(ಸಿ) ಹೇಳುವ ಬಗ್ಗೆ ನ್ಯಾಯಮೂರ್ತಿ ಚಂದ್ರ ಚೂಡ್ ಅವರು ಬೊಟ್ಟು ಮಾಡಿದರು.   ಬಲಾತ್ಕಾರದ ಅಥವಾ ವಂಚನೆಯ ಮದುವೆಗೆ ಗುರಿಯಾದ ಯಾರೇ ಮಹಿಳೆಗೆ ಸೂಕ್ತ ನ್ಯಾಯಾಲಯದಲ್ಲಿ ಕ್ರಮ ಕೋರಿ ಸಿವಿಲ್ ಖಟ್ಲೆ ಹೂಡಲು ಸ್ವಾತಂತ್ರ್ಯ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ನುಡಿದರು. ಇತ್ತೀಚೆಗಷ್ಟೇ ಏಪ್ರಿಲ್ ೯ರಂದು ಹಾದಿಯಾ ಪ್ರಕರಣದಲ್ಲಿ ನೀಡಿದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಮದುವೆಯನ್ನು ಪರಿಚ್ಛೇದ ೩೨ರ ಅಡಿಯಲ್ಲಿ ಸಲ್ಲಿಸಿದ ರಿಟ್ ಅರ್ಜಿಯ ಅಡಿಯಲ್ಲಿ ಅಮಾನ್ಯಗೊಳಿಸಿದ ಕೇರಳ ಹೈಕೋರ್ಟ್ ಆದೇಶವನ್ನು ತರಾಟೆಗೆ ತೆಗೆದುಕೊಂಡಿತ್ತು ಎಂದು ಮುಖ್ಯ ನ್ಯಾಯಮೂರ್ತಿ ಉಲ್ಲೇಖಿಸಿದರು.  ಈಗ ಸುಪ್ರೀಂಕೋರ್ಟ್ ರಿಟ್ ಅರ್ಜಿಯ ಮೇಲೆ ಮದುವೆಯನ್ನು ಅಮಾನ್ಯಗೊಳಿಸಬೇಕು ಎಂದು ನಿರೀಕ್ಷಿಸಲಾಗದು ಎಂದು ಅವರು ಹೇಳಿದರು.  ವಾಸ್ತವಾಂಶಗಳನ್ನು ಪರಿಶೀಲಿಸಿ ಮದುವೆಯ ಸಂಬಂಧವನ್ನು ಅಮಾನ್ಯಗೊಳಿಸಬೇಕೆ ಅಥವಾ ಬೇಡವೇ ಎಂಬುದಾಗಿ ನಿರ್ಧಾರ ಕೈಗೊಳ್ಳುವುದು ಈಗ ಸಿವಿಲ್ ನ್ಯಾಯಾಲಯಕ್ಕೆ ಬಿಟ್ಟ ವಿಷಯ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಹೇಳಿದರು.  ಸಿವಿಲ್ ನ್ಯಾಯಾಲಯಗಳಿಗೆ ತಮ್ಮ ಕಾನೂನುಗಳು ಗೊತ್ತಿರುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ನುಡಿದರು. ನ್ಯಾಯಾಲವು ಪ್ರಕರಣದಲ್ಲಿ ಮಹಿಳೆಯನ್ನು ರಕ್ಷಿಸುತ್ತದೆ, ಬೇರೆ ಯಾವುದೇ ಪ್ರಾರ್ಥನೆಯನ್ನೂ ಅದು ಅರ್ಜಿಯಲ್ಲಿ ಪರಿಗಣಿಸದು ಎಂದು ಕೋರ್ಟ್ ಹೇಳಿತು.  ಮಹಿಳೆಯು ತಾನು ಮದುವೆಯಾದ ಮನೆಗೆ ಹೋಗಲು ಇಚ್ಛಿಸದೇ ಇದ್ದರೆ ಯಾರು ಕೂಡಾ ಆಕೆಯನ್ನು ಬಲವಂತ ಪಡಿಸಲಾಗದು. ಏನಿದ್ದರೂ ಆಕೆ ಬೆಂಗಳೂರಿಗೆ ಹಿಂದಿರುಗಬಯಸಿದರೆ, ನ್ಯಾಯಾಲಯವು ಅದಕ್ಕೆ ಅವಕಾಶ ಮಾಡಿಕೊಡುವುದು ಎಂದು ಸುಪ್ರೀಂಕೋರ್ಟ್ ಹೇಳಿತು.  ಕರ್ನಾಟಕರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ ಕೋರ್ಟ್, ದೆಹಲಿ ವಾಸ್ತವ್ಯ ಕಾಲಪೂರ್ತಿ ಮಹಿಳೆಗೆ ರಕ್ಷಣೆ ಒದಗಿಸುವಂತೆ ದೆಹಲಿ ಪೊಲೀಸರಿಗೆ ಆದೇಶ ನೀಡಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ ಮೊದಲ ವಾರಕ್ಕೆ ಮುಂದೂಡಲಾಯಿತು.


2009: 'ನಡೆದಾಡುವ ರಾಯರು' ಎಂದೇ ಭಕ್ತ ಸಮೂಹದಿಂದ ಪ್ರೀತಿಯಿಂದ ಕರೆಯಲ್ಪಡುತ್ತಿದ್ದ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಸುಶಮೀಂದ್ರ ತೀರ್ಥ ಶ್ರೀಪಾದಂಗಳವರು (86) ಬೆಂಗಳೂರಿನಲ್ಲಿ ನಿಧನರಾದರು. ಅವರು ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಸಂಖ್ಯಾತ ಭಕ್ತರು, ಶಿಷ್ಯವೃಂದವನ್ನು ಅಗಲಿದರು. ಮೂರು ತಿಂಗಳುಗಳಿಂದ ಅಸ್ವಸ್ಥರಾಗಿದ್ದ ಶ್ರೀಪಾದಂಗಳವರು ಬೆಂಗಳೂರಿನ ಯಶವಂತಪುರ ಗೇಟ್ ಬಳಿಯ ಕೊಲಂಬಿಯಾ ಮಾಸಿನ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಶ್ರೀ ಸುಶಮೀಂದ್ರತೀರ್ಥರ ಪೂರ್ವಾಶ್ರಮದ ಹೆಸರು ಸುಪ್ರಜ್ಞೇಂದ್ರಾಚಾರ್ಯ. ಮೂಲತಃ ನಂಜನಗೂಡಿನವರು. ತುಂಗಭದ್ರಾ ನದಿ ತಟದಲ್ಲಿರುವ ಬಿಚ್ಚಾಲಿ ಗ್ರಾಮದಲ್ಲಿ 1985 ರಲ್ಲಿ ಸನ್ಯಾಸ ಸ್ವೀಕರಿಸಿದರು. 1986ರಲ್ಲಿ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿಗಳಾದರು. ಶ್ರೀಪಾದಂಗಳವರು, ಶ್ರೀ ಹಂಸನಾಮಕ ಪರಮಾತ್ಮನ ಸಾಕ್ಷಾತ್ ಪರಂಪರೆಯಾದ ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನವೆಂದು ಪ್ರಸಿದ್ಧವಾದ ಶ್ರೀ ರಾಘವೇಂದ್ರಸ್ವಾಮಿ ಮಠದ ಗುರುಪರಂಪರಾ ಪಟ್ಟಿಯ ಪ್ರಕಾರ 53ನೇ ಪೀಠಾಧಿಪತಿಗಳು. ಕಳೆದ 25 ವರ್ಷದ ಅವಧಿಯಲ್ಲಿ ಶ್ರೀಪಾದಂಗಳು ಮಂತ್ರಾಲಯ ಮಠದ ಪೀಠಾಧಿಪತಿಗಳಾಗಿ ಮಾಡಿದ ಕಾರ್ಯಗಳು ಮಂತ್ರಾಯಲಕ್ಕಷ್ಟೇ ಸೀಮಿತವಾಗಿರಲಿಲ್ಲ. ಸುನಾಮಿ ಸಂತ್ರಸ್ತರಿಗೆ, ಆತ್ಮಹತ್ಯೆ ಮಾಡಿಕೊಂಡ ರೈತ ಸಮೂಹಕ್ಕೆ, ಸಂಕಷ್ಟದಲ್ಲಿರುವ ರೈತರಿಗೆ ಹಾಗೂ ಸಮಾಜಕ್ಕೆ ವಿವಿಧ ರೀತಿಯಿಂದ ನೆರವಾಗಿದ್ದರು.

2009: ಉದ್ಯೋಗ ಕಡಿತ ದೇಶದ ಅತಿ ದೊಡ್ಡ ಐ.ಟಿ ಕಂಪೆನಿ ಬೆಂಗಳೂರು ಮೂಲದ ಇನ್ಛೋಸಿಸ್‌ನಲ್ಲೂ ಶುರುವಾಯಿತು. ಸುಮಾರು 2,100 ಉದ್ಯೋಗಿಗಳು ಕಂಪೆನಿಯಿಂದ ಹೊರಬಿದ್ದಿರುವುದಾಗಿ ಇನ್ಫೋಸಿಸ್ ಹೇಳಿತು. ಕಳಪೆ ಸಾಮರ್ಥ್ಯ ತೋರಿದ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾದರೆ, ಇನ್ನು ಕೆಲವರು ಬೇರೆ ಕಡೆ ಅವಕಾಶ ಅರಸಿ ಸ್ವಇಚ್ಚೆಯಿಂದ ಕಂಪೆನಿ ತ್ಯಜಿಸಿದ್ದಾರೆ ಎಂದು ಕಂಪೆನಿ ಹೇಳಿತು.

2009: ಗಾಂಧಿವಾದಿ, ಮಾಜಿ ಶಾಸಕ, ಹಿರಿಯ ಸಾಹಿತಿ ಬಿ.ಎಂ.ಇದಿನಬ್ಬ (90) ಅವರು ಉಳ್ಳಾಲದ ಸ್ವಗೃಹದಲ್ಲಿ ನಿಧನರಾದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಆಡಳಿತದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಪ್ರಯತ್ನ ನಡೆಸಿದ್ದರು.. ಚೊಚ್ಚಲ ಅಖಿಲ ಭಾರತ ಬ್ಯಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ ಗೌರವ ಅವರದಾಗಿತ್ತು. 12 ವರ್ಷ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮತ್ತು ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಿ, ಐದು ವರ್ಷ ಮಂಗಳೂರು ಕನ್ನಡ ಸಂಘದ ಅಧ್ಯಕ್ಷರಾಗಿ, ಒಂಬತ್ತು ವರ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಇದಿನಬ್ಬ ಅವರು, ರಾಜ್ಯೋತ್ಸವ ಪ್ರಶಸ್ತಿ (1987), ಸಂದೇಶ ಪ್ರಶಸ್ತಿ (2000), ಏಕೀಕರಣ ಪ್ರಶಸ್ತಿ, ಗೊರೂರು ರಾಮಸ್ವಾಮಿ ಅಯ್ಯಂಗಾರ್ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ ಪಡೆದಿದ್ದರು. ಶಿವಮೊಗ್ಗ ಕನ್ನಡ ಸಂಘದ ಸನ್ಮಾನ, ದಿ.ಗೋಪಾಲಗೌಡ ಅಭಿಮಾನಿಗಳ ಸಂಘದಿಂದ ಸನ್ಮಾನ, ಮೈಸೂರು ಸೌಹಾರ್ದ ಸಂಘದ ಸನ್ಮಾನಕ್ಕೆ ಅವರು ಪಾತ್ರರಾಗಿದ್ದರು. ಸಾಹಿತ್ಯ ರತ್ನ, ಕಾವ್ಯ ಜ್ಯೋತಿ, ದಕ್ಷ ಸಹಕಾರಿ ಕಾವ್ಯ ವಾಚನ ಭೂಷಣ ಬಿರುದು ಪಡೆದಿದ್ದರು. 'ಮಾನವತಾ ಸಾಹಿತ್ಯ ಮಾಲೆ' ಪ್ರಕಾಶನ ಸಂಸ್ಥೆ ಸ್ಥಾಪಿಸಿ, ಅನೇಕ ಕೃತಿಗಳನ್ನು ಪ್ರಕಟಿಸಿದ್ದರು. ಬಾಳಿನ ಚಿತ್ರಗಳು, ಹರಿದ ಕೋಟು, ಒಂದು ಗೊನೆ ರಸಬಾಳೆ, ರತ್ನರಾಶಿ, ಹೃದಯ ಪರಿವರ್ತನೆ, ಕಥಾ ಗೊಂಚಲು ಇದಿನಬ್ಬ ಅವರ ಕಥಾ ಸಂಕಲನಗಳು. ಹೃದಯಗೀತೆಗಳು, ಜೇನುಗೂಡು, ವಿರಹಗೀತೆಗಳು, ಕಿಡಿಗಳು, ಹನಿಗವನಗಳು, ಕಾವ್ಯ ಕುಂಜ ಅವರ ಕವನ ಸಂಕಲನಗಳು. ಉದಯ ಚಂದ್ರ ವಾರಪತ್ರಿಕೆಯ ಪ್ರಧಾನ ಉಪ ಸಂಪಾದಕರಾಗಿ, ನವಕೀರ್ತಿ ಪತ್ರಿಕೆ ಉಪ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. 1957ರಿಂದ 1965ರವರೆಗೆ 'ಪ್ರಜಾವಾಣಿ' ಮಂಗಳೂರು ಪ್ರತಿನಿಧಿಯಾಗಿ ಹಾಗೂ ವಿಶಾಲ ಕರ್ನಾಟಕ ಪತ್ರಿಕೆ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದರು. 1938ರಿಂದ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಇದಿನಬ್ಬ ಬದುಕಿನುದ್ದಕ್ಕೂ ಖಾದಿಧಾರಿಯಾಗಿ ಗಾಂಧಿ ಮಾರ್ಗ ರೂಢಿಸಿಕೊಂಡಿದ್ದರು. ಉಳ್ಳಾಲ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರ ಪತ್ನಿ ಅಲಿಮಮ್ಮ ಆರು ತಿಂಗಳ ಹಿಂದೆಯಷ್ಟೇ ನಿಧನರಾಗಿದ್ದರು.

2009: ಎಲ್‌ಟಿಟಿಇ ಬಂಡುಕೋರರನ್ನು ಹತ್ತಿಕ್ಕುವ ಕೊನೆಯ ಹಂತ ತಲುಪಿದ ಶ್ರೀಲಂಕಾ ಸೇನೆ, ಈ ಹೋರಾಟದ ನಡುವೆ ಸಂತ್ರಸ್ತರಾದ ನಾಗರಿಕರನ್ನು ರಕ್ಷಿಸಲು ನಡೆಸಿದ ಕಾರ್ಯಾಚರಣೆಯಲ್ಲಿ ಕನಿಷ್ಠ 47 ಬಂಡುಕೋರರು ಹತರಾದರು. ಅಂಪಲವನ್ ಪೊಕ್ಕನೈ ಪ್ರದೇಶದಲ್ಲಿದ್ದ ಬಂಡುಕೋರರ ಹಲವು ತಾಣಗಳ ಮೇಲೆ ಸೇನೆ ತೀವ್ರ ದಾಳಿ ನಡೆಸಿತು.

2009: ಸಂಗೀತ ಹಲವು ರೋಗಗಳಿಗೆ ಮದ್ದು ಎಂಬುದು ಈ ಮೊದಲೇ ಸಾಬೀತಾಗಿದ್ದರೆ, ಅದು ಹೃದಯಕ್ಕೂ ಹತ್ತಿರ ಎಂದು ಸಂಶೋಧನೆಯೊಂದು ಬಹಿರಂಗ ಪಡಿಸಿತು. ಹೃದಯ ಬೇನೆಗೆ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳ ಮೇಲೆ ಸಂಗೀತ ಬೀರುವ ಪರಿಣಾಮವನ್ನು ಅಧ್ಯಯನ ಮಾಡುವ ಮೂಲಕ ಸಂಶೋಧಕರು ಈ ವಿಚಾರವನ್ನು ಪತ್ತೆ ಹಚ್ಚಿದರು. ಫಿಲಡೆಲ್ಫಿಯಾದ ಟೆಂಪಲ್ ವಿಶ್ವವಿದ್ಯಾನಿಲಯದ ಜೀವನ ಕಲೆ ಮತ್ತು ಗುಣಮಟ್ಟ ಸಂಶೋಧನಾ ಕೇಂದ್ರ ನಡೆಸಿದ ಸಂಶೋಧನೆ ಹೃದ್ರೋಗಿಗಳ ರಕ್ತದೊತ್ತಡ ಹಾಗೂ ತಳಮಳವನ್ನು ಸಂಗೀತ ಶಮನಗೊಳಿಸುತ್ತದೆ ಎಂದು ಬಹಿರಂಗ ಪಡಿಸಿತು. 'ಅನಿಶ್ಚಿತತೆ, ಆತಂಕದಿಂದ ಸುತ್ತುವರಿದ ಚಿಕಿತ್ಸೆ ಫಲಕಾರಿಯಾಗದು. ಉದಾಹರಣೆಗೆ ಕ್ಷೋಭೆಯಿಂದ ರಕ್ತದೊತ್ತಡ ಏರುತ್ತದೆ. ಇದು ಹಲವು ತೊಂದರೆಗಳಿಗೆ ಆಹ್ವಾನ ಒಡ್ಡುತ್ತದೆ. ಆದರೆ ಸಂಗೀತ ಆಲಿಕೆ ಒತ್ತಡವನ್ನು ಕಡಿಮೆ ಮಾಡುವುದರಿಂದ ಸಹಜವಾಗಿಯೇ ಇತರ ತೊಂದರೆಗಳೂ ದೂರಾಗುತ್ತವೆ. ಆದ್ದರಿಂದ ಹೃದ್ರೋಗಿಗಳು ಸಂಗೀತ ಕೇಳುವಂತೆ ನಮ್ಮ ಸಂಶೋಧನೆ ಸಲಹೆ ನೀಡುತ್ತದೆ' ಎಂದು ಕೇಂದ್ರದ ಜೋಕ್ ಬ್ರಾಟ್ ಹೇಳಿದರು. 1461 ರೋಗಿಗಳ ಮೇಲಿನ ಪ್ರಯೋಗದಿಂದ 23 ಅಧ್ಯಯನಗಳು ಕಂಡುಕೊಂಡ ದತ್ತಾಂಶಗಳನ್ನು ಸಂಶೋಧನೆಗೆ ಒಳಪಡಿಸಲಾಗಿತ್ತು. ಕೆಲವು ರೋಗಿಗಳಿಗೆ ಸಂಗೀತ ಚಿಕಿತ್ಸಕರಿಂದ ಚಿಕಿತ್ಸೆ ಕೊಡಿಸಲಾಗಿತ್ತು. ಇನ್ನು ಕೆಲವರಿಗೆ ಆರೋಗ್ಯ ಸುರಕ್ಷಾ ವೃತ್ತಿಪರರು ಸಿದ್ಧಪಡಿಸಿದ್ದ ಧ್ವನಿಮುದ್ರಿತ ಸಂಗೀತವನ್ನು ಕೇಳಿಸಲಾಗಿತ್ತು ಎಂದು ಅವರು ಹೇಳಿದರು.

2009: ಆರ್ಟ್ ಆಫ್ ಲಿವಿಂಗ್ ಪ್ರತಿಷ್ಠಾನದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಆದಿ ಚುಂಚನಗಿರಿಮಠದ ಬಾಲ ಗಂಗಾಧರನಾಥ ಸ್ವಾಮೀಜಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ ಸೇರಿದಂತೆ ಎಂಟು ಮಂದಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ನೀಡಲು ಕುಲಾಧಿಪತಿಯೂ ಆದ ರಾಜ್ಯಪಾಲ ರಾಮೇಶ್ವರ ಠಾಕೂರ್ ಒಪ್ಪಿಗೆ ಸೂಚಿಸಿದರು. ಬೆಂ.ವಿ.ವಿಯ ಸೆಂಟ್ರಲ್ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥ ಹಾಗೂ ಎಸ್.ಜೆ.ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಷಡಕ್ಷರ ಸ್ವಾಮಿ, ಪರಿಸರ ತಜ್ಞ ಎ.ಎನ್.ಯಲ್ಲಪ್ಪ ರೆಡ್ಡಿ, ಪ್ರಸಿದ್ಧ ಗಾಯಕ ಸಿ.ಆಶ್ವತ್ಥ್, ಉದ್ಯಮಿ ಆರ್.ಎನ್.ಶೆಟ್ಟಿ, ದಾನಿ ಬಿ.ಎಲ್.ಎಸ್. ಮೂರ್ತಿ ಅವರು ಗೌರವ ಡಾಕ್ಟರೇಟ್‌ಗೆ ಆಯ್ಕೆಯಾದ ಇತರ ಮಹನೀಯರು.

2008: ಸರ್ಕಾರಿ ಅಧಿಕಾರಿಗಳ ಕಿರುಕುಳ ತಾಳಲಾರದೆ ಬಿಜನೋರ್ ಸಚಿವಾಲಯದ ಕಚೇರಿ ಹೊರಗೆ ರೈತ ಅಶೋಕ ಕುಮಾರ್ (42) ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಅಶೋಕ ಕುಮಾರ್ ಮತ್ತು ನೆರೆಯವನೊಂದಿಗಿನ ಭೂ ವಿವಾದವನ್ನು ಅಧಿಕಾರಿಗಳು ದೀರ್ಘಕಾಲದಿಂದ ಇತ್ಯರ್ಥಗೊಳಿಸಿರಲಿಲ್ಲ. ವಿವಾದವನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

2008: ಫ್ರಾನ್ಸ್ ಅಧ್ಯಕ್ಷ ನಿಕೋಲಸ್ ಸರ್ಕೋಜಿ ಅವರ ಪತ್ನಿ, ರೂಪದರ್ಶಿ ಕಾರ್ಲಾ ಬ್ರೂನಿ ಅವರ ನಗ್ನ ಛಾಯಾಚಿತ್ರ ನ್ಯೂಯಾರ್ಕಿನಲ್ಲಿ 45,000 ಪೌಂಡುಗಳಿಗೆ ಮಾರಾಟವಾಯಿತು. ಅಂದಾಜಿಗಿಂತಲೂ 20 ಪಟ್ಟು ಹೆಚ್ಚು ಹಣಕ್ಕೆ ಈ ಚಿತ್ರ ಮಾರಾಟವಾಯಿತು. 15 ವರ್ಷಗಳ ಹಿಂದೆ ಛಾಯಾಚಿತ್ರಗ್ರಾಹಕ ಮೈಕೆಲ್ ಕೋಮ್ಟೆ ಅವರು ಫ್ರೆಂಚ್ ಪ್ರಥಮ ಮಹಿಳೆಯ ಅಕರ್ಷಕ ಚಿತ್ರವನ್ನು ಸೆರೆಹಿಡಿದಿದ್ದರು.

2008: 2007ರ ಜೂನ್ ತಿಂಗಳಲ್ಲಿ ಲಂಡನ್ನಿನ ಗ್ಲಾಸ್ಗೊ ವಿಮಾನನಿಲ್ದಾಣದಲ್ಲಿ ನಡೆದ ಭಯೋತ್ಪಾದಕ ದಾಳಿಯ ಪೂರ್ವಭಾವಿ ಮಾಹಿತಿ ತನಗಿದ್ದದ್ದು ನಿಜ ಎಂದು ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಬೆಂಗಳೂರಿನ ವೈದ್ಯ ಸಬೀಲ್ ಅಹ್ಮದ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ಲಂಡನ್ನಿನ ಕೇಂದ್ರೀಯ ಕ್ರಿಮಿನಲ್ ಕೋರ್ಟ್ ಸಬೀಲ್ ಗೆ 18 ತಿಂಗಳ ಜೈಲು ಶಿಕ್ಷೆ ವಿಧಿಸಿತು. ವಿಮಾನನಿಲ್ದಾಣಕ್ಕೆ ಹೊತ್ತಿ ಉರಿಯುತ್ತಿದ್ದ ಜೀಪನ್ನು ನುಗ್ಗಿಸಿ ಭಾರಿ ಹಾನಿ ಉಂಟುಮಾಡಲು ಬಯಸಿದ್ದ ಕಫೀಲ್ ಅಹ್ಮದನ ಸಹೋದರನಾದ ಸಬೀಲ್, ನ್ಯಾಯಾಲಯದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡು ತಾನು ಮೊದಲಾಗಿ ಪೊಲೀಸರಿಗೆ ದಾಳಿಯ ಯೋಜನೆ ತಿಳಿಸಿದ್ದರೆ ಅಪಾಯ ತಪ್ಪಿಸಬಹುದಿತ್ತು ಎಂದು ಹೇಳಿದ. ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದ ಸಬೀಲ್ ಅಹ್ಮದನನ್ನು (26) ವಿಫಲ ಭಯೋತ್ಪಾದಕ ಕೃತ್ಯ ನಡೆದ ಕಳೆದ ಜೂನ್ 30ರಂದೇ ಲಿವರ್ ಪೂಲ್ನಲ್ಲಿ ಬಂಧಿಸಲಾಗಿತ್ತು. ದಾಳಿಯ ಬಗ್ಗೆ ಮೊದಲೇ ಮಾಹಿತಿ ಇತ್ತು ಎಂಬ ನೆಲೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

2008: ನೇಪಾಳದ 'ಸಂವಿಧಾನ ಸಭೆ'ಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮೊದಲ ಆಯ್ಕೆ ನಡೆದಿದ್ದು, ನೇಪಾಳ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಮಾನ್ ಸಿಂಗ್ ಗೆಲುವಿನ ನಗೆ ಚೆಲ್ಲಿದರು. ಸಂವಿಧಾನಾತ್ಮಕ ಜನಪ್ರತಿನಿಧಿಗಳ ಸಭೆಗೆ ಆಯ್ಕೆಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು. 1990ರ ಪ್ರಜಾತಂತ್ರ ಚಳವಳಿ ಪೂರ್ವದ ನಾಯಕ ಗಣೇಶ ಮಾನ್ ಸಿಂಗ್ ಅವರ ಮಗನಾದ ಪ್ರಕಾಶ ಮಾನ್ ಸಿಂಗ್ ಅವರು ಪ್ರತಿಷ್ಠಿತ ಕಠ್ಮಂಡು 1 ಕ್ಷೇತ್ರದಲ್ಲಿ ನಡೆದ ನೇರ ಮತದಾನದಲ್ಲಿ 11,515 ಮತಗಳೊಂದಿಗೆ ತಮ್ಮ ಸಮೀಪ ಸ್ಪರ್ಧಿ ನೇಪಾಳ ಕಮ್ಯೂನಿಸ್ಟ್ ಪಕ್ಷದ (ಯುಎಂಎಲ್) ಪ್ರದೀಪ ನೇಪಾಳ ಅವರನ್ನು ಪರಾಭವಗೊಳಿಸಿದರು. ಪ್ರದೀಪ ನೇಪಾಳ ಅವರಿಗೆ 6000 ಮತಗಳು ಮಾತ್ರ ಲಭಿಸಿದವು. ಸಂವಿಧಾನ ಪುನರ್ರಚನೆಗಾಗಿ 'ಸಂವಿಧಾನ ಸಭೆ'ಯ ರಚನೆ ಸಲುವಾಗಿ ಈ ಚುನಾವಣೆ ನಡೆಯಿತು. ಈ ಸಂವಿಧಾನ ಸಭೆಯು 240 ವರ್ಷಗಳ ಇತಿಹಾಸ ಇರುವ ಹಿಂದೂ ದೊರೆಯ ಏಕಚಕ್ರಾಧಿಪತ್ಯಕ್ಕೆ ಮುಂದೆ ಕೊನೆ ಹಾಡಿತು.

2008: ಬೆಂಗಳೂರು ನಗರದ ಬೈಯಪ್ಪನಹಳ್ಳಿಯ ಬಳಿ ಇರುವ ಎನ್ ಜಿ ಇ ಎಫ್ ಜಮೀನನ್ನು ಮೆಟ್ರೋ ರೈಲು ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಹೈಕೋರ್ಟ್ ಅನುಮತಿ ನೀಡಿತು. ಇದರಿಂದಾಗಿ ಎನ್ ಜಿ ಇ ಎಫ್ ಗೆ ಸೇರಿರುವ 53.10 ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲು ಮೆಟ್ರೊ ರೈಲು ನಿಗಮಕ್ಕೆ ಅನುಮತಿ ದೊರೆತಂತಾಯಿತು. ಈ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲು ಹೈಕೋರ್ಟಿನ ಅನುಮತಿ ಕೋರಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರ ಅರ್ಜಿ ಸಲ್ಲಿಸಿತ್ತು. ಆದರೆ ಸಾರ್ವಜನಿಕ ಉದ್ದೇಶಕ್ಕಾಗಿ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವಾಗ ಈ ರೀತಿ ಕೋರ್ಟಿನ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅಡ್ವೊಕೇಟ್ ಜನರಲ್ ಬಿ.ವಿ.ಆಚಾರ್ಯ ಅವರು, ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರ ಅನುಮತಿ ಪಡೆದು ಅರ್ಜಿಯನ್ನು ಹಿಂದಕ್ಕೆ ಪಡೆದರು. ಇದೇ ವೇಳೆಯಲ್ಲಿ ಫಲಾನುಭವಿಗಳಿಗೆ ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ನ್ಯಾಯಮೂರ್ತಿಗಳು ತಾಕೀತು ಮಾಡಿದರು.

2008: ಪ್ರೇಮದ ಸಂಕೇತ ಎನಿಸಿಕೊಂಡಿರುವ ತಾಜಮಹಲಿನ ರೂವಾರಿ ಶಹಜಹಾನ್ ಬಳಸುತ್ತಿದ್ದ ಚಿನ್ನದ ಲೇಪವಿರುವ ಕಠಾರಿಯನ್ನು ಲಂಡನ್ನಿನಲ್ಲಿ ಹರಾಜು ಹಾಕಿದಾಗ ನಿರೀಕ್ಷೆಗಿಂತಲೂ ಮೂರು ಪಟ್ಟು ಹೆಚ್ಚು ಬೆಲೆ ದೊರಕಿತು. 17 ನೇ ಶತಮಾನದ ಆದಿಯಲ್ಲಿ ತಯಾರಿಸಲಾಗಿದ್ದ ಈ ಕಠಾರಿಗೆ 5 ಲಕ್ಷ ಪೌಂಡ್ ದೊರೆಯಬಹುದೆಂದು ಅಂದಾಜು ಮಾಡಲಾಗಿತ್ತು. ಆದರೆ ಅದು 15ಲಕ್ಷ ಪೌಂಡುಗಳಿಗೆ ಹರಾಜಾಯಿತು.

2007: ಖ್ಯಾತ ಹೃದಯರೋಗ ತಜ್ಞ ಕನ್ನಡಿಗ, ಡಾ. ಅರಕಲಗೂಡು ಸಂಪತ್ ಕುಮಾರ್ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಹೃದಯ ಮತ್ತು ರಕ್ತನಾಳ ಶಸ್ತ್ರಚಿಕಿತ್ಸೆ ವಿಭಾಗ (ಸಿಟಿ ವಿ ಎಸ್) ಹಾಗೂ ಹೃದಯ ಮತ್ತು ನರಶಾಸ್ತ್ರ ಕೇಂದ್ರದ ಮುಖ್ಯಸ್ಥರನ್ನಾಗಿ ನೇಮಿಸಲಾಯಿತು.

2007: `ರಾಷ್ಟ್ರಗೀತೆಗೆ ಅವಮಾನ ಮಾಡಿದ' ಇನ್ ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಮೈಸೂರು ನಗರದ ವಕೀಲ ಅ.ಮ. ಭಾಸ್ಕರ್ ಅವರು ಮೈಸೂರಿನ ವಿಜಯನಗರದ ಪೊಲೀಸ್ ಠಾಣೆಗೆ ದೂರು ನೀಡಿದರು. ರಾಷ್ಟ್ರಗೀತೆ ಹಾಡುವುದರಿಂದ ಇನ್ ಫೋಸಿಸ್ ಕಂಪೆನಿಯಲ್ಲಿರುವ ವಿದೇಶಿ ನೌಕರರಿಗೆ ಮುಜುಗರವಾಗುತ್ತದೆ ಎಂದು ನಾರಾಯಣಮೂರ್ತಿ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು ಸಂವಿಧಾನದ ಮೂಲಭೂತ ಕರ್ತವ್ಯಗಳ ಸ್ಪಷ್ಟ ಉಲ್ಲಂಘನೆ ಆಗುತ್ತದೆ ಎಂದು ಅರ್ಜಿದಾರರು ದೂರಿನಲ್ಲಿ ಪ್ರತಿಪಾದಿಸಿದರು.

2007: ನಷ್ಟಕ್ಕೆ ಒಳಗಾದ ಕಂಪೆನಿಗಳ ವಕ್ತಾರ ಎಂದೇ ಖ್ಯಾತಿ ಪಡೆದಿರುವ ಮೆಕ್ಸಿಕೊದ ಟೆಲಿಕಾಂ ದೊರೆ ಕಾರ್ಲೋಸ್ ಸ್ಲಿಮ್ ಜಗತ್ತಿನ ಎರಡನೇ ಅತಿ ಶ್ರೀಮಂತ ವ್ಯಕ್ತಿಯ ಪಟ್ಟಕ್ಕೆ ಏರಿದರು. ಮೈಕ್ರೋಸಾಫ್ಟ್ ನ ಮುಖ್ಯಸ್ಥ ಬಿಲ್ ಗೇಟ್ಸ್ ನಂತರದ ಸ್ಥಾನ ಕಾರ್ಲೋಸ್ ಸ್ಲಿಮ್ ಅವರಿಗೆ ಲಭಿಸಿತು. `ಫೋಬ್ಸ್' ನಿಯತಕಾಲಿಕ ಪ್ರಕಟಿಸಿರುವ ವಿಶ್ವದ ಅತಿ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದ ವಾರೆನ್ ಬಫೆಟ್ ಅವರನ್ನು ಕೆಳಕ್ಕೆ ತಳ್ಳುವ ಮೂಲಕ ಕಾರ್ಲೋಸ್ ಸ್ಲಿಮ್ ಆ ಸ್ಥಾನಕ್ಕೆ ಬಂದರು. ಕಾರ್ಲೋಸ್ ಅವರ ಈಗಿನ ಆಸ್ತಿ 5300 ಕೋಟಿ ಡಾಲರುಗಳು. ಸ್ಲಿಮ್ ಅವರ ಕಂಪೆನಿಗಳ ಅದರಲ್ಲೂ ಅಮೆರಿಕ ಮೋವಿಲ್ ಸೆಲ್ ಫೋನ್ ಸಂಸ್ಥೆಯ ಷೇರುಬೆಲೆ ಇತ್ತೀಚಿನ ತಿಂಗಳಗಳಲ್ಲಿ ಏರಿದ ಹಿನ್ನೆಲೆಯಲ್ಲಿ ಸ್ಲಿಮ್ ಅವರಿಗೆ ಅದೃಷ್ಟ ಒಲಿಯಿತು.

2007: ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡವರಿಗೆ ಹಾಗೂ ಈ ಕೃತ್ಯವನ್ನು ವರದಿ ಮಾಡದ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ಹತ್ತು ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲು ಅವಕಾಶ ಇರುವ ಕರ್ನಾಟಕ ಭೂ ಕಂದಾಯ (ತಿದ್ದುಪಡಿ) ಮಸೂದೆಗೆ ವಿಧಾನ ಸಭೆ ಒಪ್ಪಿಗೆ ನೀಡಿತು.

2007: ಚಿತ್ರದುರ್ಗದ ಅಗಸನಕಲ್ಲು ಪ್ರದೇಶದ ಸಾದಿಕ್ ಎಂಬವರ ಪತ್ನಿ ಆರೀಫಾಭಾನು ಎಂಬ ಮಹಿಳೆ ಕೃಷ್ಣ ನರ್ಸಿಂಗ್ ಹೋಮಿನಲ್ಲಿ ಐದು ಮಕ್ಕಳಿಗೆ ಜನ್ಮನೀಡಿದರು. ಐದು ಮಕ್ಕಳಲ್ಲಿ ಒಂದು ಗಂಡು, ಒಂದು ಹೆಣ್ಣು ಮೃತಪಟ್ಟವು.

2007: ಕ್ರಿಕೆಟ್ ಜಗತ್ತು ಕಂಡ ಶ್ರೇಷ್ಠ ಬ್ಯಾಟ್ಸ್ಮನ್ ವೆಸ್ಟ್ ಇಂಡೀಸ್ ನ ಬ್ರಯನ್ ಲಾರಾ ಅವರು. ವಿಶ್ವಕಪ್ ಚಾಂಪಿಯನ್ ಶಿಪ್ ಬಳಿಕ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಟಿಗೆ ವಿದಾಯ ಹೇಳುವುದಾಗಿ ಪ್ರಕಟಿಸಿದರು.

2006: ಇಸ್ರೇಲಿನ ಸೇನೆ ಮತ್ತು ರಾಜಕೀಯ ಕ್ಷಿತಿಜದಲ್ಲಿ ದಶಕಗಳ ಕಾಲ ಮೆರೆದ ಪ್ರಧಾನಿ ಏರಿಯಲ್ ಶೆರಾನ್ ಯುಗ ಸಾಂಕೇತಿಕವಾಗಿ ಸಮಾಪನಗೊಂಡಿತು. ಮೂರು ತಿಂಗಳುಗಳಿಂದ ಪ್ರಜ್ಞಾಹೀನರಾದ ಶೆರಾನ್ ಸ್ಥಾನಕ್ಕೆ ಯಹೂದಿ ಒಲ್ಮೆರ್ಟ್ (60) ಅವರನ್ನು ನೇಮಕ ಮಾಡುವ ಅಧಿಕೃತ ನಿರ್ಧಾರವನ್ನು ಸಚಿವ ಸಂಪುಟ ಕೈಗೊಂಡಿತು.

2006: ಕೊಡಗಿನ ವಿರಾಜಪೇಟೆಯ ನಿವಾಸಿ ಅಹಮದಾಬಾದಿನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ (ಐಐಎಂಎ) ವಿದ್ಯಾರ್ಥಿ ಶರತ್ ಕೊಡಗು ಕ್ಯಾಂಪಸ್ ಆಯ್ಕೆಯಲ್ಲಿ ತಮಗೆ ಬಂದ ವಾರ್ಷಿಕ 60 ಲಕ್ಷ ರೂಪಾಯಿಗಳ ನೌಕರಿ ಆಹ್ವಾನವನ್ನು ತಿರಸ್ಕರಿಸಿದರು. ಕ್ಯಾಂಪಸ್ ಸಂದರ್ಶನ ಕಾಲದಲ್ಲಿ ಲಂಡನ್ ಇನ್ವೆಸ್ಟ್ ಮೆಂಟ್ ಬ್ಯಾಂಕ್ ಮುಂದಿಟ್ಟ ವಾರ್ಷಿಕ 60 ಲಕ್ಷ ರೂಪಾಯಿಗಳ ವೇತನದ ಆಹ್ವಾನ ಸಹಿತ ಹಲವಾರು ಬಹುರಾಷ್ಟೀಯ ಕಂಪೆನಿಗಳು ಮುಂದಿಟ್ಟ ಆಕರ್ಷಕ ಸಂಬಳದ ನೌಕರಿಗಳನ್ನು ತಿರಸ್ಕರಿಸಿ, ಸ್ವಂತ ಸಂಸ್ಥೆ ಆರಂಭಿಸಲು ಅವರು ನಿರ್ಧರಿಸಿದರು.

2006: ಪಟ್ನಾದಲ್ಲಿ ಕೊನೆಯ ಕ್ಷಣದಲ್ಲಿ ಚುನಾವಣಾ ಅಧಿಕಾರಿಯನ್ನು ಕಿತ್ತು ಹಾಕಿದ ಘಟನೆ ಹಾಗೂ ಹಾಲಿ ಅಧ್ಯಕ್ಷ ಹಾಗೂ ಅಧ್ಯಕ್ಷೀಯ ಆಭ್ಯರ್ಥಿ ಜಾರ್ಜ್ ಫರ್ನಾಂಡಿಸ್ ಮತ್ತು ಅವರಿಗೆ ನಿಷ್ಠವಾದ ರಾಜ್ಯ ಘಟಕಗಳ ಬಹಿಷ್ಕಾರದ ಮಧ್ಯೆ ನಡೆದ ವಿವಾದಾತ್ಮಕ ಚುನಾವಣೆಯಲ್ಲಿ ಶರದ್ ಯಾದವ್ ಅವರು ಜನತಾದಳ (ಯು) ಅಧ್ಯಕ್ಷರಾಗಿ ಆಯ್ಕೆಯಾದರು. ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಅಧ್ಯಕ್ಷ ಶರದ್ ಯಾದವ್ ಅವರು 413 ಮತಗಳನ್ನು ಪಡೆದರೆ, ಫರ್ನಾಂಡಿಸ್ ಅವರಿಗೆ 25 ಮತಗಳು ಮಾತ್ರ ಬಂದವು. 10 ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು.

1982: ಪಂಜಾಬಿನ ಖ್ಯಾತ ಕವಯಿತ್ರಿ ಅಮೃತಾ ಪ್ರೀತಂ ಅವರು 1981ರ ಸಾಲಿನ ಭಾರತೀಯ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದರು. ಪ್ರೀತಂ ಅವರ `ಕಾಗಜ್ ತ ಕನ್ವಾಸ್' ಕವನ ಸಂಕಲನಕ್ಕೆ ಈ ಪ್ರಶಸ್ತಿ ಬಂತು.

1937: ಭಾರತದ ಖ್ಯಾತ ಟೆನಿಸ್ ಆಟಗಾರ ರಾಮನಾಥನ್ ಕೃಷ್ಣನ್ ಹುಟ್ಟಿದ ದಿನ. ವಿಂಬಲ್ಡನ್ನಿನಲ್ಲಿ ಸೆಮಿಫೈನಲ್ಸ್ ಪ್ರವೇಶಿಸಿದ ಮೊತ್ತ ಮೊದಲ ಭಾರತೀಯ ಇವರು. ಇವರು ಟೆನಿಸ್ ಆಟಗಾರ ರಮೇಶ ಕೃಷ್ಣನ್ ಅವರ ತಂದೆ.

1908: ಜಪಾನಿನ ಎಲೆಕ್ಟ್ರಾನಿಕ್ ಉದ್ಯಮಿ ಮಸಾರು ಐಬುಕ (1908-1998) ಹುಟ್ಟಿದ ದಿನ. ಈತ ಸ್ಥಾಪಿಸಿದ `ಅಕಿಯೋ ಮೊರಿಟಾ' ಎಂಬ ಚಿಕ್ಕ ರೆಕಾರ್ಡಿಂಗ್ ಕಂಪೆನಿ ಮುಂದೆ `ಸೋನಿ ಕಾರ್ಪೊರೇಷನ್' ಆಗಿ ಬೆಳೆಯಿತು. ಜಪಾನಿಗೆ ಟ್ರಾನ್ಸಿಸ್ಟರ್ ತಂತ್ರಜ್ಞಾನವನ್ನು ತಂದವನು ಕೂಡಾ ಈತನೇ.

1887: ಜೆಮಿನಿ ರಾಯ್ (1887-1972) ಹುಟ್ಟಿದ ದಿನ. ಇವರು ಭಾರತದ ಖ್ಯಾತ ಕಲಾವಿದರು.

1850: ಜೋಸೆಫ್ ಚಾರ್ಲ್ಸ್ ಆರ್ಥರ್ (1850-1942) ಜನ್ಮದಿನ. ಸಸ್ಯಗಳಿಗೆ ತಗಲುವ ಬೂಸ್ಟುರೋಗಕ್ಕೆ ಸೂಕ್ಷ್ಮ ಅಣಬೆಗಳೇ ಕಾರಣ ಎಂದು ಈತ ಕಂಡು ಹಿಡಿದ.

1755: ಇಂಗ್ಲಿಷ್ ವೈದ್ಯ ಜೇಮ್ಸ್ ಪಾರ್ಕಿನ್ಸನ್ (1755-1824) ಜನ್ಮದಿನ. ಈತ ಕೈ ನಡುಕದ ರೋಗವನ್ನು ಮೊತ್ತ ಮೊದಲಿಗೆ ವಿವರಿಸಿದ. ಈತನ ಹೆಸರನ್ನೇ ಈ ರೋಗಕ್ಕೆ (ಪಾರ್ಕಿನ್ಸನ್ ಕಾಯಿಲೆ) ಇಡಲಾಯಿತು.

1770: ಜಾರ್ಜ್ ಕ್ಯಾನಿಂಗ್ (1770-1827) ಹುಟ್ಟಿದ ದಿನ. ಈತ ರಾಜತಾಂತ್ರಿಕ ಹಾಗೂ ಬ್ರಿಟನ್ ಪ್ರಧಾನಿಯಾಗಿದ್ದ ವ್ಯಕ್ತಿ. ಮುಂದೆ ಭಾರತದ ಗವರ್ನರ್ ಜನರಲ್ ಆದ ಲಾರ್ಡ್ ಕ್ಯಾನಿಂಗ್ ಈತನ ಪುತ್ರ.

1689: ಮೂರನೆಯ ವಿಲಿಯಂ ಮತ್ತು ಎರಡನೆಯ ಮೇರಿ ಅವರಿಗೆ ಜಂಟಿ ಸಾರ್ವಭೌಮರಾಗಿ ಕಿರೀಟಧಾರಣೆ ಮಾಡಲಾಯಿತು.

No comments:

Post a Comment