2019: ನವದೆಹಲಿ: ವಿರೋಧ ಪಕ್ಷಗಳ ಭಾರೀ ಪ್ರತಿಭಟನೆ, ಶಿವಸೇನೆಯ
ಸಭಾತ್ಯಾಗದ ಬಳಿಕ ರಾಜ್ಯಸಭೆಯು 2019 ಡಿಸೆಂಬರ್ 11ರ ಬುಧವಾರ ಬೆಳಗ್ಗೆ ಗೃಹ ಸಚಿವ ಅಮಿತ್ ಶಾ ಅವರು
ಮಂಡಿಸಿದ ಐತಿಹಾಸಿಕ ಪೌರತ್ವ (ತಿದ್ದುಪಡಿ) ಮಸೂದೆಗೆ ರಾತ್ರಿ ತನ್ನ ಅಂಗೀಕಾರವನ್ನು ನೀಡಿತು. ಸದನದಲ್ಲಿ
125 ಸದಸ್ಯರು ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 105 ಮಂದಿ ವಿರುದ್ಧವಾಗಿ ಮತ ಚಲಾಯಿಸಿದರು. ಶಿವಸೇನೆಯ
ಮೂವರು ಸದಸ್ಯರು ಸಭಾತ್ಯಾಗ ಮಾಡಿದರು. ಇದಕ್ಕೂ ಮುನ್ನ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸುವ ಪ್ರಸ್ತಾವವನ್ನು
ಸದನವು ತಿರಸ್ಕರಿಸಿತು. ಮಸೂದೆಯನ್ನು 2019 ಡಿಸೆಂಬರ್ 09ರ ಸೋಮವಾರ ಲೋಕಸಭೆಯು ಕೋಲಾಹಲಕಾರಿ ಪ್ರತಿಭಟನೆಯ
ಬಳಿಕ ಪ್ರಚಂಡ ಬಹುಮತದೊಂದಿಗೆ ಅಂಗೀಕರಿಸಿತ್ತು. ಉಭಯ ಸದನಗಳ ಅನುಮೋದನೆಯೊಂದಿಗೆ ಪೌರತ್ವ ತಿದ್ದುಪಡಿಯು
ಈಗ ರಾಷ್ಟ್ರಪತಿಯವರ ಒಪ್ಪಿಗೆ ಬಳಿಕ ಶಾಸನರೂಪ ಪಡೆಯಲಿದ್ದು,
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ಈ ಮೂರು ರಾಷ್ಟ್ರಗಳ ಸುಮಾರು ೧.೫ ಕೋಟಿಗೂ ಹೆಚ್ಚು
ಮಂದಿ ವಲಸಿಗರಿಗೆ ಭಾರತದ ಪೌರತ್ವವವನ್ನು ಒದಗಿಸಲಿದೆ. ಇವರ ಪೈಕಿ ಶೇಕಡಾ ೫೦ರಷ್ಟು ಮಂದಿ ಪರಿಶಿಷ್ಟ
ಜಾತಿ, ಪರಿಶಿಷ್ಟ ವರ್ಗಗಳಿಗೆ ಸೇರಿದವರು ಎಂದು ಹೇಳಲಾಯಿತು. ಸುಮಾರು ೬ ಗಂಟೆಗಳಿಗೂ ಹೆಚ್ಚಿನ ಕೋಲಾಹಲಕಾರೀ
ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಪ್ರಬಲವಾಗಿ ಸಮರ್ಥಿಸಿದ ಬಳಿಕ ಸದನವು
ಅಂಗೀಕರಿಸಿದ ಈ ಮಸೂದೆಯು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ ಈ ಮೂರು ದೇಶಗಳಿಂದ ಕಿರುಕುಳದ
ಹಿನ್ನೆಲೆಯಲ್ಲಿ ಭಾರತಕ್ಕೆ ವಲಸೆ ಬಂದಿರುವ ಹಿಂದುಗಳು, ಸಿಕ್ಖರು, ಬೌದ್ಧರು, ಜೈನರು, ಪಾರ್ಸಿಗಳು
ಮತ್ತು ಕ್ರೈಸ್ತರಿಗೆ ಭಾರತೀಯ ಪೌರರಾಗುವ ಅವಕಾಶವನ್ನು ಒದಗಿಸಿದ್ದು, ಇದಕ್ಕಾಗಿ ಅವರ ೧೧ ವರ್ಷಗಳ
ಕಾಯುವಿಕೆಯನ್ನು ಸಮಾಪ್ತಿಗೊಳಿಸಿತು. ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ, ಚರ್ಚೆಗೆ ಉತ್ತರ ನೀಡಿದ
ಅಮಿತ್ ಶಾ ಅವರು ’ಭಾರತವು ಎಂದಿಗೂ ಮುಸ್ಲಿಮ್ ಮುಕ್ತ ರಾಷ್ಟ್ರವಾಗದು, ಅವರು ಹಿಂದೆ, ಇಂದು ಮತ್ತು
ಮುಂದೆ ಕೂಡಾ ಭಾರತೀಯರಾಗಿಯೇ ಇರುತ್ತಾರೆ ಎಂದು ರಾಜ್ಯಸಭೆಯಲ್ಲಿ ಘೋಷಿಸಿ, ’ಪೌರತ್ವ (ತಿದ್ದುಪಡಿ) ಮಸೂದೆಯು ’ ಚಾರಿತ್ರಿಕ ತಪ್ಪನ್ನು
ಸರಿಪಡಿಸುತ್ತಿದೆ ಎಂದು ಪ್ರತಿಪಾದಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ವಿರುದ್ಧ ಈಶಾನ್ಯ
ರಾಜ್ಯಗಳಾದ ತ್ರಿಪುರಾ ಮತ್ತು ಅಸ್ಸಾಮಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಿಂಸೆಗೆ ತಿರುಗಿದ್ದನ್ನು
ಅನುಸರಿಸಿ ನಾಗರಿಕ ಆಡಳಿತವು ಮೂರು ಸೇನಾ ಕಾಲಂಗಳನ್ನು ಕರೆಸಿಕೊಂಡಿದ್ದು, ಹಲವಡೆ ಕರ್ಫ್ಯೂ ಜಾರಿ
ಮಾಡಿತು. ಅಸ್ಸಾಮಿನ ೧೦ ಜಿಲ್ಲೆಗಳಲ್ಲಿ 2019 ಡಿಸೆಂಬರ್ 11ರ ಬುಧವಾರ ರಾತ್ರಿ ೭ ಗಂಟೆಯಿಂದ ೨೪ ಗಂಟೆಗಳ ಕಾಲ ಮೊಬೈಲ್ ಇಂಟರ್ ನೆಟ್
ಸ್ಥಗಿತಗೊಳಿಸಲಾಯಿತು. ಸೇನೆಯ ಎರಡು ಕಾಲಂಗಳನ್ನು ತ್ರಿಪುರಾದ ಕಂಚನಪುರ ಮತ್ತು ಮನ ಸಾಮಾನ್ಯ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದು, ಮೂರನೇ ಕಾಲಂನ್ನು ಅಸ್ಸಾಮಿನ
ಬೊಂಗಾಯಿಗಾಂವ್ನಲ್ಲಿ ನಿಯೋಜನೆಗಾಗಿ ಕಾಯ್ದಿರಿಸಿದೆ ಎಂದು ಸೇನೆ ತಿಳಿಸಿದೆ. ಪೌರತ್ವ (ತಿದ್ದುಪಡಿ)
ಮಸೂದೆಯು ೨೦೧೪ರ ಡಿಸೆಂಬರ್ ೩೧ಕ್ಕೆರಂದು ಅಥವಾ ಅದಕ್ನೆ ಮುನ್ನ ಭಾರತಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ
ಮತ್ತು ಆಫ್ಘಾನಿಸ್ಥಾನದಿಂದ ಬಂದ ಮುಸ್ಲಿಮೇತರ ನಿರಾಶ್ರಿತರಿಗೆ ಭಾರತದ ಪೌರತ್ವವನ್ನು ನೀಡಲು ಉದ್ದೇಶಿಸಿದೆ.
ಅಸ್ಸಾಮಿನಲ್ಲಿ ಸಹಸ್ರಾರು ಪ್ರತಿಭಟನೆಕಾರರು ವಿವಿಧ ಸ್ಥಳಗಳಲ್ಲಿ ಬೀದಿಗಳಿಗೆ ಇಳಿದಿದ್ದು, ಪೊಲೀಸರ
ಜೊತೆಗೆ ಘರ್ಷಣೆಗೆ ನಡೆಸಿದರು. ಅಸ್ಸಾಮ್ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮುಕ್ತಾಯಗೊಂಡಿದ್ದ ೬ ವರ್ಷಗಳ
ವಿದ್ಯಾರ್ಥಿಗಳ ಅಕ್ರಮ ವಲಸೆ ವಿರೋಧಿ ಚಳವಳಿ ಕಾಲಕ್ಕಿಂತಲೂ ವ್ಯಾಪಕ ಸ್ವರೂಪವನ್ನು ಪ್ರತಿಭಟನೆ ಪಡೆದಿದ್ದು,
ಪರಿಣಾಮವಾಗಿ ರಾಜ್ಯದಲ್ಲಿ ಒಂದು ರೀತಿಯ ಅರಾಜಕ ಸ್ಥಿತಿ ಉದ್ಭವಿಸಿತು. ಯಾವುದೇ ಪಕ್ಷ
ಅಥವಾ ವಿದ್ಯಾರ್ಥಿ ಸಂಘಟನೆ ಹರತಾಳಕ್ಕೆ ಕರೆ ನೀಡಿರದಿದ್ದರೂ, ಸಚಿವಾಲಯದ ಮುಂಭಾಗ ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನಕಾರರು ಪೊಲೀಸರ ಜೊತೆಗೆ ಘರ್ಷಣೆಗೆ ಇಳಿದರು. ಸಂಜೆಯ
ವೇಳೆಗೆ ಸರ್ಕಾರವು ಲಖೀಂಪುರ, ಧೇಮಜಿ, ತೀನ್ ಸುಕಿಯಾ, ದೀಬ್ರುಗಢ, ಛರಾಯಿದೇವ್, ಶಿವನಗರ, ಜೊರ್ಹಾತ್,
ಗೋಲಘಾಟ್, ಕಾಮರೂಪ್ (ಮೆಟ್ರೋ) ಮತ್ತು ಕಾಮರೂಪ್ ಜಿಲ್ಲೆಗಳಲ್ಲಿ ಗುರುವಾರ ೭ ಗಂಟೆಯವರೆಗೆ ೨೪ ಗಂಟೆಗಳ
ಕಾಲ ಮೊಬೈಲ್ ಇಂಟರ್ ನೆಟ್ ಸೇವೆ ಅಮಾನತುಗೊಳಿಸುತ್ತಿರುವುದಾಗಿ ಪ್ರಕಟಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಇಸ್ಲಾಮಾಬಾದ್: ಮುಂಬೈ ಮೇಲಿನ ೨೦೦೮ರ ಮಾರಕ ದಾಳಿಯ ಸೂತ್ರಧಾರಿ, ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಭಯೋತ್ಪಾದಕ ಹಫೀಜ್ ಸಯೀದ್ ಉಗ್ರ ಕೃತ್ಯಕ್ಕೆ ಹಣಕಾಸು ನೆರವು ನೀಡಿದ್ದಾನೆ ಎಂದು ಪಾಕಿಸ್ತಾನದ ಭಯೋತ್ಪಾದನಾ ನಿಗ್ರಹ ಕೋರ್ಟ್ 2019 ಡಿಸೆಂಬರ್ 11ರ ಬುಧವಾರ ದೋಷಾರೋಪ
ಹೊರಿಸಿತು. ಪಾಕಿಸ್ತಾನಿ ನ್ಯಾಯಾಲಯದ ಈ ಕ್ರಮವು ಪಾಕಿಸ್ತಾನಕ್ಕೆ
ಜಾಗತಿಕ ವೇದಿಕೆಯಲ್ಲಿ ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಈಡಾಗುವ ಪರಿಸ್ಥಿತಿಯನ್ನು ತಂದೊಡ್ಡಿತು. ಪಂಜಾಬಿನ
ಭಯೋತ್ಪಾದನಾ ಇಲಾಖಾ (ಸಿಟಿಡಿ) ಪೊಲೀಸರು ಜುಲೈ ೧೭ರಂದು ಹಫೀಜ್ ಹಾಗೂ ಆತನ ನಿಕಟವರ್ತಿಗಳ ವಿರುದ್ಧ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ ೨೩ ಎಫ್ ಐಆರ್
ಗಳನ್ನು ದಾಖಲಿಸಿದ್ದರು. ಪಂಜಾಬ್ ಪ್ರಾಂತ್ಯ ಸೇರಿದಂತೆ ವಿವಿಧ ನಗರದಲ್ಲಿ ಉಗ್ರ ಕೃತ್ಯಕ್ಕೆ ಹಣಕಾಸು ನೀಡಿರುವುದಾಗಿ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್ ಐಆರ್) ಪೊಲೀಸರು ತಿಳಿಸಿದ್ದರು. ನಂತರ ಪಂಜಾಬ್ ಪೊಲೀಸರು ಜಮಾತ್-ಉದ್-ದವಾದ ಮಾಜಿ ಮುಖ್ಯಸ್ಥ, ಭಯೋತ್ಪಾದಕ ಹಫೀಜ್ ಸಯೀದನನ್ನು ಬಂಧಿಸಿದ್ದರು.
ಭಯೋತ್ಪಾದನೆಗೆ
ನೆರವು ನೀಡಲು ಸಯೀದ್ ಲಾಹೋರ್, ಗುಜ್ರಾನ್ ವಾಲಾ ಮತ್ತು ಮುಲ್ತಾನ್ ನಗರಗಳಲ್ಲಿ ಅಲ್ ಅನ್ಫಾಲ್ ಟ್ರಸ್ಟ್, ದಾವಾತುಲ್ ಇರ್ಷಾದ್ ಟ್ರಸ್ಟ್ ಹಾಗೂ ಮೌಆಝ್ ಬಿನ್ ಜಬಾಲ್ ಟ್ರಸ್ಟ್ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸಿರುವುದಾಗಿ ವರದಿ ವಿವರಿಸಿತು. ಭಯೋತ್ಪಾದಕ ಹಫೀಜ್ ಸಯೀದ್ ವಿಚಾರದಲ್ಲಿ ಮೃದು ಧೋರಣೆ ತಳೆದಿದ್ದ ಪಾಕಿಸ್ತಾನ, ಅಂತಾರಾಷ್ಟ್ರೀಯ ಸಮುದಾಯದ ಒತ್ತಡದ ನಂತರ ಲಷ್ಕರ್-ಇ- ತೊಯ್ಬಾದ ವಿರುದ್ಧ
ತನಿಖೆ ಆರಂಭಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
No comments:
Post a Comment