Tuesday, December 31, 2019

ಇಂದಿನ ಇತಿಹಾಸ History Today ಡಿಸೆಂಬರ್ 31

2019: ನವದೆಹಲಿ: ೨೦೨೪-೨೫ರ ವೇಳೆಗೆ ೫ ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿ ಗುರಿ ಸಾಧನೆಗಾಗಿ ಮುಂದಿನ ಐದು ವರ್ಷಗಳಲ್ಲಿ ಮೂಲಸವಲತ್ತು ಕ್ಷೇತ್ರದಲ್ಲಿ ಹೂಡಿಕೆಯನ್ನು ದುಪ್ಪಟ್ಟುಗೊಳಿಸುವ ಯೋಜನೆಯನ್ನು 2019 ಡಿಸೆಂಬರ್ 31ರ ಮಂಗಳವಾರ ಇಲ್ಲಿ ಅನಾವರಣಗೊಳಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ’ಮೂಲಸವಲತ್ತು ಕ್ಷೇತ್ರದಲ್ಲಿ ೧೦೫ ಲಕ್ಷ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಾಗುವುದುಎಂದು ಪ್ರಕಟಿಸಿದರು. ಮೂಲಸವಲತ್ತು ನೀಲನಕ್ಷೆ ರೂಪಿಸಲು ರಚಿಸಲಾಗಿದ್ದ ಕಾರ್ಯಪಡೆ ವರದಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ ಸಚಿವೆ ಸೀತಾರಾಮನ್ ಅವರು ಮುಂದಿನ ೫ ವರ್ಷಗಳಲ್ಲಿ ಮೂಲ ಸವಲತ್ತು ಕ್ಷೇತ್ರಕ್ಕೆ ೧೦೦ ಲಕ್ಷ ಕೋಟಿ ರೂಪಾಯಿಗಳ ಹೂಡಿಕೆ ಮೂಲಕ ಒತ್ತು ನೀಡಬೇಕೆಂಬ ಪ್ರಧಾನಿ ನರೇಂದ್ರ ಮೋದಿ ಅವರ ಯೋಚನೆಗೆ ಅನುಗುಣವಾಗಿ ವಿಸ್ತೃತ ಯೋಜನೆಯನ್ನು ರೂಪಿಸಲಾಗಿದೆ ಎಂದು ಹೇಳಿದರು. ಯೋಜನೆಯ ಪ್ರಕಾರ ೨.೫ ಲಕ್ಷ ಕೋಟಿ ರೂಪಾಯಿಗಳ ಬಂದರು ಮತ್ತು ವಿಮಾನ ನಿಲ್ದಾಣ ಯೋಜನೆಗಳು, ೩.೨ ಲಕ್ಷ ಕೋಟಿ ರೂಪಾಯಿಗಳ ಡಿಜಿಟಲ್ ಮೂಲಸವಲತ್ತು ಯೋಜನೆಗಳು, ೧೬ ಲಕ್ಷ ಕೋಟಿ ರೂಪಾಯಿಗಳ ಗ್ರಾಮೀಣ, ಕೃಷಿ ಮತ್ತು ಆಹಾರ ಸಂಸ್ಕರಣೆ ಯೋಜನೆಗಳನ್ನು ಗುರುತಿಸಲಾಗಿದೆ. ಚಲನಶೀಲತಾ ಯೋಜನೆಗಳು ಸೇರಿದಂತೆ ೧೬ ಲಕ್ಷ ಕೋಟಿ ರೂಪಾಯಿಗಳ ಮೂಲ ಸವಲತ್ತು ಯೋಜನೆಗಳನ್ನು ಮೂಲಸವಲತ್ತು ರಾಷ್ಟ್ರೀಯ ಮೂಲಸವಲತ್ತು ಕೊಳವೆಮಾರ್ಗ (ನ್ಯಾಷನಲ್ ಇನ್‌ಫ್ರಾಸ್ಟ್ರಕ್ಚರ್ ಪೈಪ್‌ಲೈನ್- ಎನ್‌ಐಪಿ) ಯೋಜನೆಗಳಿಗೆ ಸೇರ್ಪಡೆ ಮಾಡಲಾಗುವುದು ಎಂದು ವಿತ್ತ ಸಚಿವೆ ತಿಳಿಸಿದರು. ರಾಷ್ಟ್ರೀಯ ಮೂಲಸವಲತ್ತು ಕೊಳವೆಮಾರ್ಗ ಹೂಡಿಕೆಯಲ್ಲಿ ಶೇಕಡಾ ೨೨-೨೫ರಷ್ಟನ್ನು ಖಾಸಗಿರಂಗವು ಹಂಚಿಕೊಳ್ಳಲಿದೆ. ಕೇಂದ್ರ ಮತ್ತು ರಾಜ್ಯಗಳು ಉಳಿದ ವೆಚ್ಚವನ್ನು ಸರಿಸಮವಾಗಿ ಹಂಚಿಕೊಳ್ಳಲಿವೆ ಎಂದು ವಿತ್ತ ಸಚಿವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ:
2019 ಡಿಸೆಂಬರ್ 31ರ ಮಂಗಳವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ
ಪ್ರಯಾಣಿಕರ ಮೂಲದರವನ್ನು ಏರಿಸಲು ರೈಲ್ವೇ ಸಚಿವಾಲಯವು 2019 ಡಿಸೆಂಬರ್ 31ರ ಮಂಗಳವಾರ ತಡರಾತ್ರಿಯಲ್ಲಿ ಆದೇಶ ನೀಡಿತು. ‘ರೈಲ್ವೇ ಸಚಿವಾಲಯವು ಮೂಲ ಪ್ರಯಾಣಿಕ ದರವನ್ನು (ಪ್ಯಾಸೆಂಜರ್ ಫೇರ್) ಪರಿಷ್ಕರಿಸಲು ನಿರ್ಧರಿಸಿದೆ. ಪರಿಷ್ಕೃತ ದರವು ೨೦೨೦ ಜನವರಿ ೧ರಿಂದ ಜಾರಿಗೆ ಬರುತ್ತದೆ ಎಂದು ಮಂಗಳವಾರ ರಾತ್ರಿ ಜಾರಿಗೊಳಿಸಲಾದ ಆದೇಶ ತಿಳಿಸಿತು.  ನೂತನ ಪಯಣದರ ಜಾರಿಗೆ ಕೆಲವೇ ಗಂಟೆಗಳು ಇರುವಾಗ ಈ ಆದೇಶವನ್ನು ಹೊರಡಿಸಲಾಯಿತು. ಕಿಲೋ ಮೀಟರ್ ದೂರಕ್ಕೆ ಸಾಮಾನ್ಯ ಹವಾನಿಯಂತ್ರಿತವಲ್ಲದ (ನಾನ್ ಎಸಿ) ರೈಲುಗಳಲ್ಲಿ ೧ ಪೈಸೆ ಮತ್ತು ಮೆಯಿಲ್ ಮತ್ತು ಎಕ್ಸ್ ಪ್ರೆಸ್ ರೈಲುಗಳಲ್ಲಿ (ಹವಾನಿಯಂತ್ರಿತವಲ್ಲದ ಬೋಗಿಗಳು)೨ ಪೈಸೆ ಹಾಗೂ ಹವಾನಿಯಂತ್ರಿತ ವರ್ಗಗಳಲ್ಲಿ ಪಯಣದರವನ್ನು ಕಿಲೋಮೀಟರಿಗೆ ೪ ಪೈಸೆಯಷ್ಟು ಏರಿಸಲಾಗಿದೆ. ಕೇಂದ್ರ ಸರ್ಕಾರವು ಪ್ರಯಾಣಿಕರ ದರ ಮತ್ತು ಸಾಗಣೆದರವನ್ನು ಪರಿಷ್ಕರಿಸಲು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬುದಾಗಿ ರೈಲ್ವೇ ಮಂಡಳಿ  ಅಧ್ಯಕ್ಷ ವಿನೋದ ಕುಮಾರ್ ಯಾದವ್ ಅವರು ಹೇಳಿದ ಕೇವಲ ಒಂದು ದಿನದ ಬಳಿಕ ರೈಲ್ವೇ ಪಯಣದರಗಳ ಏರಿಕೆಯಾಗಿದೆ. ಏನಿದ್ದರೂ ಯಾದವ್ ಅವರು ದರವನ್ನು ಸುಧಾರಿಸುವ ಅಗತ್ಯವಿದೆ ಎಂದು ಹೇಳಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ:
೨೦೨೦ರಲ್ಲಿ ಭಾರತವು ಮೂರನೇ ಚಂದ್ರಯಾನವನ್ನು ನಡೆಸಲಿದೆ ಎಂದು
ಕೇಂದ್ರದ ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು 2019 ಡಿಸೆಂಬರ್ 31ರ ಮಂಗಳವಾರ ಇಲ್ಲಿ  ದೃಢ ಪಡಿಸಿದರು. ಕೇವಲ ಲ್ಯಾಂಡರ್ ಮತ್ತು ರೋವರ್ ಜೊತೆಗೆ ಚಂದ್ರಯಾನ -೩ ಮತ್ತೊಮ್ಮೆ ಚಂದ್ರನ ಅಂಗಳದಲ್ಲಿ ನಿಧಾನವಾಗಿ ಇಳಿಯುವ (ಸಾಫ್ಟ್ ಲ್ಯಾಂಡಿಂಗ್) ಪ್ರಯತ್ನ ಮಾಡಲಿದೆ ಎಂದು ಕೇಂದ್ರ ಸಚಿವರು ನುಡಿದರು. ‘ಹೌದು, ಭಾರತವು ತನ್ನ ಮೂರನೇ ಚಂದ್ರಯಾನವನ್ನು ೨೦೨೦ನೇ ಇಸವಿಯಲ್ಲಿ ನಡೆಸಲಿದೆ. ಆದಾಗ್ಯೂ, ನಾನು ಈ ಹಿಂದೆಯೇ ಹೇಳಿರುವಂತೆ ಚಂದ್ರಯಾನ-೨ನ್ನು ವಿಫಲವೆಂದು ಕರೆಯಲು ಸಾಧ್ಯವಿಲ್ಲ. ನಾವು ಅದರಿಂದ ಹಲವಾರು ವಿಷಯಗಳನ್ನು ಕಲಿತಿದ್ದೇವೆ. ವಿಶ್ವದಲ್ಲಿ ತನ್ನ ಮೊದಲನೇ ಯತ್ನದಲ್ಲೇ ಚಂದ್ರನ ಮೇಲೆ ಇಳಿದ ಯಾವುದೇ ರಾಷ್ಟ್ರವೂ ಇಲ್ಲ, ಅಮೆರಿಕವು ಇದಕ್ಕಾಗಿ ಹಲವಾರು ಪ್ರಯತ್ನಗಳನ್ನು ನಡೆಸಿತ್ತು. ಆದರೆ ನಮಗೆ ಅಂತಹ ಹಲವಾರು ಯತ್ನಗಳು ಬೇಕಾಗಲಾರದು ಎಂದು ಜಿತೇಂದ್ರ ಸಿಂಗ್ ಹೇಳಿದರು. ಚಂದ್ರಯಾನ-೨ ಯೋಜನೆಯು ಚಂದ್ರನ ಅಂಗಳವನ್ನು ತಲುಪಲು ಭಾರತ ನಡೆಸಿದ್ದ ಚೊಚ್ಚಲ ಯತ್ನವಾಗಿತ್ತು. ಸೆಪ್ಟೆಂಬರ್ ೭ರಂದು ಕೊನೆಯ ೨.೧ ಕಿಮೀ ಪಯಣ ಬಾಕಿ ಉಳಿದಿದ್ದಾಗ ಭೂ ಕೇಂದ್ರದ ಜೊತೆಗಿನ ವ್ಯೋಮನೌಕೆಯ ಸಂಪರ್ಕ ಕಡಿದುಹೋಗಿತ್ತು. ಇಳಿಯಬೇಕಿದ್ದ ತಾಣದಿಂದ ಕೇವಲ ೫೦೦ ಮೀಟರ್ ದೂರದಲ್ಲಿ ವಿಕ್ರಮ್ ಲ್ಯಾಂಡರ್ ಅಪ್ಪಳಿಸಿತ್ತು. ವಿಕ್ರಮ್ ಲ್ಯಾಂಡರ್ ಅಪ್ಪಳಿಸಿದ್ದನ್ನು ಜಿತೇಂದ್ರ ಸಿಂಗ್ ಅವರು ಸಂಸತ್ತಿನಲ್ಲಿ ಅಧಿಕೃತವಾಗಿ ದೃಢಪಡಿಸಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)


ನವದೆಹಲಿ: ಭಾರತದ ಮೂರು ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್- ಸಿಡಿಎಸ್)  ಜನರಲ್ ಬಿಪಿನ್ ರಾವತ್ ಅವರು 2020 ಜನವರಿ 01ರ ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದೇ ವೇಳಗೆ ಕೇಂದ್ರ ಸರ್ಕಾರವು ಸೇನಾ ವ್ಯವಹಾರಗಳ ಇಲಾಖೆಯನ್ನು ಸೃಷ್ಟಿಸಿದ್ದು, ಇದರ ಮುಖ್ಯಸ್ಥರನ್ನಾಗಿಯೂ ಜನರಲ್ ರಾವತ್ ಅವರನ್ನೆ ನೇಮಕ ಮಾಡಿತು. ರಕ್ಷಣಾ ಪಡೆಗಳ ಮುಖ್ಯಸ್ಥರೇ (ಸಿಡಿಎಸ್) ಸೇನಾ ವ್ಯವಹಾರಗಳ ಇಲಾಖೆಗೂ ಮುಖ್ಯಸ್ಥರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರದ ಆದೇಶ ತಿಳಿಸಿತು. ಸರ್ಕಾರದ ಆದೇಶದಂತೆ ಸಿಡಿಎಸ್ ಮುಖ್ಯಸ್ಥರಾಗಿರುವ ವಹಿಸಿಕೊಂಡಿರುವ ಜನರಲ್ ಬಿಪಿನ್ ರಾವತ್ ಸೇನಾ ವ್ಯವಹಾರಗಳ ಇಲಾಖೆಯ ಇಲಾಖೆಯ ನೇತೃತ್ವ ವಹಿಸಲಿದ್ದಾರೆ. ಹೊಸ ಇಲಾಖೆಯ ವ್ಯಾಪ್ತಿಯಲ್ಲಿ ಭೂ ಸೇನೆ, ವಾಯು ಮತ್ತು ನೌಕಾಪಡೆಯ ನೀತಿ, ಯೋಜನೆ ಮತ್ತು ಖರೀದಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಜನವರಿ 01ರ ಬುಧವಾರದಂದು ಜನರಲ್ ಬಿಪಿನ್ ರಾವತ್ ಅವರು ಭಾರತದ ಮೂರೂ ರಕ್ಷಣಾ ಪಡೆಗಳ ಪ್ರಪ್ರಥಮ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವರು. ಕೆಲ ದಿನಗಳ ಹಿಂದಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಭಾರತದ ರಕ್ಷಣಾ ಪಡೆಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ಮೂರೂ ವಿಭಾಗಗಳಲ್ಲಿ ಸಹಕಾರ- ಸಮನ್ವಯ ಸಾಧನೆಯ ಜವಾಬ್ದಾರಿ ಸಿಡಿಎಸ್ ಆವರದಾಗಿರುತ್ತದೆ. ಮೂರೂ ಇಲಾಖೆಗಳಿಗೆ ಸಂಬಂಧಿಸಿದಂತೆ ರಕ್ಷಣಾ ಸಚಿವರಿಗೆ ಸಿಡಿಎಸ್ ಅವರೇ ಏಕಗವಾಕ್ಷಿ ಸಲಹೆಗಾರರಾಗಿರುತ್ತಾರೆ. ಮೂರೂ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿರುವ ಜನರಲ್ ರಾವತ್ ಅವರು ೨೦೧೭ರಲ್ಲಿ ಭೂ ಸೇನಾ ಮುಖ್ಯಸ್ಥರಾಗಿ ನೇಮಕಗೊಂಡು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಅವರ ಸೇವಾವಧಿ ಈದಿನಕ್ಕೆ  ಮುಕ್ತಾಯಗೊಂಡಿತ್ತು. ಜನರಲ್ ಬಿಪಿನ್ ರಾವತ್ ಅವರ ಸ್ಥಾನಕ್ಕೆ, ಭೂಸೇನಾ ದಂಡನಾಯಕರಾಗಿ ನೇಮಕಗೊಂಡಿರುವ ಲೆಫ್ಟಿನೆಂಟ್ ಜನರಲ್ ಮನೋಜ್ ಮುಕುಂದ್ ನರವಣೆ ಅವರೂ ಮಂಗಳವಾರ ಭೂ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. (ವಿವರಗಳಿಗೆ ಇಲ್ಲಿಕ್ಲಿಕ್ ಮಾಡಿರಿ)




No comments:

Post a Comment